೮೫

[ಏಂಭತ್ತೈದನೇಯ ಅಧ್ಯಾಯ]

ಭಾಗಸೂಚನಾ

ಭಗವಂತನು ವಸುದೇವನಿಗೆ ಬ್ರಹ್ಮಜ್ಞಾನವನ್ನು ಉಪದೇಶಿಸಿದುದು - ಗತಿಸಿಹೋದ ದೇವಕಿಯ ಆರು ಮಕ್ಕಳನ್ನು ಶ್ರೀಕೃಷ್ಣನು ಹಿಂದಕ್ಕೆ ತಂದುದು

ಮೂಲಮ್

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಬಾದರಾಯಣಿರುವಾಚ

ಮೂಲಮ್

ಅಥೈಕದಾತ್ಮಜೌ ಪ್ರಾಪ್ತೌ ಕೃತಪಾದಾಭಿವಂದನೌ ।
ವಸುದೇವೋಭಿನಂದ್ಯಾಹ ಪ್ರೀತ್ಯಾ ಸಂಕರ್ಷಣಾಚ್ಯುತೌ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ದೈನಂದಿನ ಪದ್ಧತಿಯಂತೆ ಶ್ರೀಕೃಷ್ಣ-ಬಲರಾಮರು ಒಂದುದಿನ ಪ್ರಾತಃಕಾಲದಲ್ಲಿ ನಮಸ್ಕರಿಸಲು ತಂದೆ-ತಾಯಿಗಳ ಬಳಿಗೆ ಬಂದರು. ಅಭಿವಂದಿಸಿದ ಬಳಿಕ ವಸುದೇವ-ದೇವಕಿಯರು ಪುತ್ರರಿಬ್ಬರನ್ನು ಅತ್ಯಂತ ಪ್ರೇಮದಿಂದ ಪ್ರಶಂಸಿಸುತ್ತಾ ಹೇಳತೊಡಗಿದರು. ॥1॥

ಮೂಲಮ್

(ಶ್ಲೋಕ-2)
ಮುನೀನಾಂ ಸ ವಚಃ ಶ್ರುತ್ವಾ ಪುತ್ರಯೋರ್ಧಾಮಸೂಚಕಮ್ ।
ತದ್ವೀರ್ಯೈರ್ಜಾತವಿಶ್ರಂಭಃ ಪರಿಭಾಷ್ಯಾಭ್ಯಭಾಷತ ॥

ಅನುವಾದ

ವಸುದೇವನು ಮಹಾ-ಮಹಾಋಷಿಗಳ ಮುಖದಿಂದ ಭಗವಂತನ ಮಹಿಮೆಯನ್ನು ಕೇಳಿದ್ದನು ಮತ್ತು ಐಶ್ವರ್ಯ ಪೂರ್ಣವಾದ ಅವನ ಚರಿತ್ರೆಗಳನ್ನು ಕಣ್ಣಾರೆಕಂಡಿದ್ದನು. ಇವನು ಸಾಧಾರಣವಲ್ಲವೆಂದೂ ಸಾಕ್ಷಾತ್ ಭಗವಂತನೇ ಆಗಿರುವನೆಂಬ ಮಾತಿನಲ್ಲಿ ದೃಢವಿಶ್ವಾಸವಿತ್ತು. ಇದರಿಂದ ಅವನು ತನ್ನ ಪುತ್ರರನ್ನು ಪ್ರೇಮಪೂರ್ವಕವಾಗಿ ಸಂಬೋಧಿಸಿ ಹೀಗೆ ಹೇಳಿದನು. ॥2॥

ಮೂಲಮ್

(ಶ್ಲೋಕ-3)
ಕೃಷ್ಣ ಕೃಷ್ಣ ಮಹಾಯೋಗಿನ್ ಸಂಕರ್ಷಣ ಸನಾತನ ।
ಜಾನೇ ವಾಮಸ್ಯ ಯತ್ಸಾಕ್ಷಾತ್ ಪ್ರಧಾನಪುರುಷೌ ಪರೌ ॥

ಅನುವಾದ

ಸಚ್ಚಿದಾನಂದ ಸ್ವರೂಪನಾದ ಶ್ರೀಕೃಷ್ಣನೇ! ಮಹಾಯೋಗೀಶ್ವರ ಸಂಕರ್ಷಣನೇ! ನೀವಿಬ್ಬರೂ ಸನಾತನರಾಗಿರುವಿರಿ. ನೀವಿಬ್ಬರೂ ಪ್ರಕೃತಿ-ಪುರುಷ ಸ್ವರೂಪರೆಂದೂ ಸಾಕ್ಷಾತ್ ಈಶ್ವರರೆಂದೂ ನಾನು ತಿಳಿದಿರುತ್ತೇನೆ. ॥3॥

ಮೂಲಮ್

(ಶ್ಲೋಕ-4)
ಯತ್ರ ಯೇನ ಯತೋ ಯಸ್ಯ ಯಸ್ಮೈ ಯದ್ಯದ್ಯಥಾ ಯದಾ ।
ಸ್ಯಾದಿದಂ ಭಗವಾನ್ ಸಾಕ್ಷಾತ್ಪ್ರಧಾನಪುರುಷೇಶ್ವರಃ ॥

ಅನುವಾದ

ಈ ಜಗತ್ತಿನ ಆಧಾರರೂ, ನಿರ್ಮಾತೃಗಳೂ, ನಿರ್ಮಾಣ ಸಾಮಗ್ರಿಯೂ ನೀವೇ ಆಗಿದ್ದೀರಿ. ಈ ಸಮಸ್ತ ಜಗತ್ತಿನ ಸ್ವಾಮಿಯೂ ನೀವಿಬ್ಬರು ಆಗಿರುವಿರಿ. ಮತ್ತು ನಿಮ್ಮ ಕ್ರೀಡೆಗಾಗಿಯೇ ಇದರ ನಿರ್ಮಾಣವಾಗಿದೆ. ಇದು ಯಾವಾಗ, ಯಾವ ರೂಪದಿಂದ, ಏನೆಲ್ಲ ಇರುತ್ತದೋ, ಆಗುತ್ತಿದೆಯೋ ಅದೆಲ್ಲವೂ ನೀವೇ ಆಗಿದ್ದೀರಿ. ಈ ಜಗತ್ತಿನಲ್ಲಿ ಪ್ರಕೃತಿರೂಪದಿಂದ ಭೋಗ್ಯನೂ ಮತ್ತು ಪುರುಷರೂಪದಿಂದ ಭೋಕ್ತಾನು ಹಾಗೂ ಎರಡರಿಂದಲೂ ಅತೀತನೂ, ಎರಡರ ನಿಯಾಮಕರೂ ಆದ ಸಾಕ್ಷಾತ್ ಭಗವಂತನೇ ನೀವಾಗಿರುವಿರಿ. ॥4॥

ಮೂಲಮ್

(ಶ್ಲೋಕ-5)
ಏತನ್ನಾನಾವಿಧಂ ವಿಶ್ವಮಾತ್ಮಸೃಷ್ಟಮಧೋಕ್ಷಜ ।
ಆತ್ಮನಾನುಪ್ರವಿಶ್ಯಾತ್ಮನ್ ಪ್ರಾಣೋ ಜೀವೋ ಬಿಭರ್ಷ್ಯಜಃ ॥

ಅನುವಾದ

ಇಂದ್ರಿಯಾತೀತನೇ! ಜನ್ಮ-ಸ್ಥಿತಿಯೇ ಮೊದಲಾದ ಭಾವವಿಕಾರದಿಂದ ರಹಿತರಾದ ಪರಮಾತ್ಮನೇ! ಈ ಚಿತ್ರ-ವಿಚಿತ್ರವಾದ ಜಗತ್ತನ್ನು ನೀವೇ ನಿರ್ಮಿಸಿರುವಿರಿ. ಇದರಲ್ಲಿ ನೀವೇ ಆತ್ಮರೂಪದಿಂದ ಪ್ರವೇಶಿಸಿಯೂ ಇದ್ದಿರಿ. ನೀವು ಪ್ರಾಣ(ಕ್ರಿಯಾಶಕ್ತಿ) ಮತ್ತು ಜೀವ (ಜ್ಞಾನಶಕ್ತಿ) ರೂಪದಿಂದ ಇದನ್ನು ಪಾಲಿಸುತ್ತಾ-ಪೋಷಿಸುತ್ತಾ ಇರುವಿರಿ. ॥5॥

(ಶ್ಲೋಕ-6)

ಮೂಲಮ್

ಪ್ರಾಣಾದೀನಾಂ ವಿಶ್ವಸೃಜಾಂ ಶಕ್ತಯೋ ಯಾಃ ಪರಸ್ಯ ತಾಃ ।
ಪಾರತಂತ್ರ್ಯಾದ್ ವೈಸಾದೃಶ್ಯಾದ್ ದ್ವಯೋಶ್ಚೇಷ್ಟೈವ ಚೇಷ್ಟತಾಮ್ ॥

ಅನುವಾದ

ಕ್ರಿಯಾಶಕ್ತಿ ಪ್ರಧಾನವಾದ ಪ್ರಾಣವೇ ಮೊದಲಾದುವುಗಳಿಗೆ ಜಗತ್ತಿನ ವಸ್ತುಗಳನ್ನು ಸೃಷ್ಟಿಸುವ ಸಾಮರ್ಥ್ಯವಿದೆಯೋ ಅದು ಅವುಗಳ ಸಾಮರ್ಥ್ಯವಾಗಿರದೆ ನಿನ್ನದೇ ಆಗಿದೆ. ಏಕೆಂದರೆ, ಅವು ನಿನ್ನಂತೆ ಚೇತನರಲ್ಲ ಅಚೇತನರಾಗಿರುವರು. ಸ್ವತಂತ್ರರಲ್ಲ ಪರತಂತ್ರರಾಗಿದ್ದಾರೆ. ಆದ್ದರಿಂದ ಆ ಚೇಷ್ಟಾಶೀಲ ಪ್ರಾಣವೇ ಮೊದಲಾದುವುಗಳಲ್ಲಿ ಕೇವಲ ಚೇಷ್ಟಾಮಾತ್ರವಿರುತ್ತದೆ, ಶಕ್ತಿಯಲ್ಲ. ಶಕ್ತಿಯಾದರೋ ನಿನ್ನದೇ ಆಗಿದೆ. ॥6॥

(ಶ್ಲೋಕ-7)

ಮೂಲಮ್

ಕಾಂತಿಸ್ತೇಜಃ ಪ್ರಭಾ ಸತ್ತಾ ಚಂದ್ರಾಗ್ನ್ಯರ್ಕರ್ಕ್ಷವಿದ್ಯುತಾಮ್ ।
ಯತ್ ಸ್ಥೈರ್ಯಂ ಭೂಭೃತಾಂ ಭೂಮೇ-
ರ್ವೃತ್ತಿರ್ಗಂಧೋರ್ಥತೋ ಭವಾನ್ ॥

ಅನುವಾದ

ಪ್ರಭೋ! ಚಂದ್ರನಕಾಂತಿ, ಅಗ್ನಿಯತೇಜ, ಸೂರ್ಯನಪ್ರಭೆ, ನಕ್ಷತ್ರ ಮತ್ತು ವಿದ್ಯುತ್ತಿನ ಸ್ಫುರಣರೂಪದ ಸತ್ತೆ, ಪರ್ವತಗಳ ಸ್ಥಿರತೆ, ಪೃಥಿವಿಯ ಆಧಾರ ಶಕ್ತಿರೂಪವಾದ ವೃತ್ತಿ ಮತ್ತು ಗಂಧರೂಪ ಗುಣ-ಇವೆಲ್ಲವೂ ವಾಸ್ತವವಾಗಿ ನೀನೇ ಆಗಿರುವೆ. ॥7॥

(ಶ್ಲೋಕ-8)

ಮೂಲಮ್

ತರ್ಪಣಂ ಪ್ರಾಣನಮಪಾಂ ದೇವ ತ್ವಂ ತಾಶ್ಚ ತದ್ರಸಃ ।
ಓಜಃ ಸಹೋ ಬಲಂ ಚೇಷ್ಟಾ ಗತಿರ್ವಾಯೋಸ್ತವೇಶ್ವರ ॥

ಅನುವಾದ

ಪರಮೇಶ್ವರನೇ! ನೀರಿನಲ್ಲಿರುವ ತೃಪ್ತಿಪಡಿಸುವ, ಜೀವನ ನೀಡುವ, ಶುದ್ಧಿಗೊಳಿಸುವ ಶಕ್ತಿಗಳು ನಿನ್ನದೇ ಸ್ವರೂಪವಾಗಿದೆ. ಜಲ ಮತ್ತು ಅದರ ರಸ ನೀನೇ ಆಗಿರುವೆ. ಪ್ರಭೋ ವಾಯುವಿನಲ್ಲಿರುವ ಇಂದ್ರಿಯ ಶಕ್ತಿ ಅಂತಃಕರಣದ ಶಕ್ತಿ, ಶರೀರದ ಶಕ್ತಿ, ಚೇಷ್ಟೆ, ಗಮನ ಶಕ್ತಿ-ಈ ಶಕ್ತಿಗಳೆಲ್ಲವೂ ನಿನ್ನವುಗಳೇ ಆಗಿವೆ. ॥8॥

(ಶ್ಲೋಕ-9)

ಮೂಲಮ್

ದಿಶಾಂ ತ್ವಮವಕಾಶೋಸಿ ದಿಶಃ ಖಂ ಸ್ಫೋಟ ಆಶ್ರಯಃ ।
ನಾದೋ ವರ್ಣಸ್ತ್ವಮೋಂಕಾರ ಆಕೃತೀನಾಂ ಪೃಥಕ್ಕೃತಿಃ ॥

ಅನುವಾದ

ದಿಕ್ಕುಗಳಲ್ಲಿರುವ ಅವಕಾಶವು ನೀನೇ ಆಗಿರುವೆ. ಆಕಾಶ ಮತ್ತು ಅದರ ಆಶ್ರಯಭೂತವಾಗಿರುವ ಸ್ಫೋಟ, ಶಬ್ದ ತನ್ಮಾತ್ರೆ ಅಥವಾ ಪರಾವಾಣಿ, ನಾದ-ಪಶ್ಯಂತಿ, ಓಂಕಾರ-ಮಧ್ಯಮಾ ಮತ್ತು ವರ್ಣ(ಅಕ್ಷರ) ಹಾಗೂ ಪದಾರ್ಥಗಳನ್ನು ಬೇರೆ-ಬೇರೆಯಾಗಿ ನಿರ್ದೇಶಿಸುವ ಪದ, ರೂಪ ವೈಖರಿ ವಾಣಿಯೂ ನೀನೇ ಆಗಿರುವೆ. ॥9॥

(ಶ್ಲೋಕ-10)

ಮೂಲಮ್

ಇಂದ್ರಿಯಂ ತ್ವಿಂದ್ರಿಯಾಣಾಂ ತ್ವಂ ದೇವಾಶ್ಚ ತದನುಗ್ರಹಃ ।
ಅವಬೋಧೋ ಭವಾನ್ ಬುದ್ಧೇರ್ಜೀವಸ್ಯಾನುಸ್ಮೃತಿಃ ಸತೀ ॥

ಅನುವಾದ

ಇಂದ್ರಿಯಗಳು, ಅವುಗಳ ವಿಷಯ ಪ್ರಕಾಶಿನಿ ಶಕ್ತಿ ಮತ್ತು ಅಧಿಷ್ಠಾತೃದೇವತೆಗಳು ನೀನೆ ಆಗಿರುವೆ. ಬುದ್ಧಿಯ ನಿಶ್ಚಯಾತ್ಮಿಕಾಶಕ್ತಿ ಮತ್ತು ಜೀವಿಯ ವಿಶುದ್ಧ ಸ್ಮರಣಶಕ್ತಿಯೂ ನೀನೇ ಆಗಿರುವೆ. ॥10॥

(ಶ್ಲೋಕ-11)

ಮೂಲಮ್

ಭೂತಾನಾಮಸಿ ಭೂತಾದಿರಿಂದ್ರಿಯಾಣಾಂ ಚ ತೈಜಸಃ ।
ವೈಕಾರಿಕೋ ವಿಕಲ್ಪಾನಾಂ ಪ್ರಧಾನಮನುಶಾಯಿನಾಮ್ ॥

ಅನುವಾದ

ಭೂತಮಾತ್ರರಲ್ಲಿ ಅವುಗಳ ಕಾರಣವಾದ ತಾಮಸಾಹಂಕಾರ ಮತ್ತು ಇಂದ್ರಿಯಗಳಿಗೆ ಕಾರಣವಾದ ತೈಜಸಾಹಂಕಾರ ಹಾಗೂ ಇಂದ್ರಿಯಗಳ ಅಧಿಷ್ಠಾತೃ-ದೇವತೆಗಳಲ್ಲಿ ಅವರ ಕಾರಣವಾದ ಸಾತ್ವಿಕ ಅಹಂಕಾರ ಜೀವನ ಹುಟ್ಟು-ಸಾವಿಗೆ ಕಾರಣವಾದ ಮಾಯೆಯು ನೀನೇ ಆಗಿರುವೆ. ॥11॥

(ಶ್ಲೋಕ-12)

ಮೂಲಮ್

ನಶ್ವರೇಷ್ವಿಹ ಭಾವೇಷು ತದಸಿ ತ್ವಮನಶ್ವರಮ್ ।
ಯಥಾ ದ್ರವ್ಯವಿಕಾರೇಷು ದ್ರವ್ಯಮಾತ್ರಂ ನಿರೂಪಿತಮ್ ॥

ಅನುವಾದ

ಭಗವಂತಾ! ಮಣ್ಣಿನ ವಸ್ತುಗಳ ವಿಕಾರವಾದ ಗಡಿಗೆ, ಮರ ಮುಂತಾದವುಗಳಲ್ಲಿ ಮಣ್ಣೇ ನಿರಂತರವಾಗಿರುತ್ತದೆ ಮತ್ತು ವಾಸ್ತವವಾಗಿ ಅವು ಕಾರಣ (ಮಣ್ಣು) ರೂಪವೇ ಆಗಿವೆ. ಹಾಗೆಯೇ ನಾಶಹೊಂದುವ ಎಲ್ಲ ಪದಾರ್ಥಗಳಲ್ಲಿಯೂ ನೀನೇ ಕಾರಣರೂಪದಿಂದ ಅವಿನಾಶೀ ತತ್ತ್ವನಾಗಿರುವೆ. ವಾಸ್ತವವಾಗಿ ಅವೆಲ್ಲವೂ ನಿನ್ನ ಸ್ವರೂಪವೇ ಆಗಿವೆ. ॥12॥

(ಶ್ಲೋಕ-13)

ಮೂಲಮ್

ಸತ್ತ್ವಂ ರಜಸ್ತಮ ಇತಿ ಗುಣಾಸ್ತದ್ವ ತ್ತಯಶ್ಚ ಯಾಃ ।
ತ್ವಯ್ಯದ್ಧಾ ಬ್ರಹ್ಮಣಿ ಪರೇ ಕಲ್ಪಿತಾ ಯೋಗಮಾಯಯಾ ॥

ಅನುವಾದ

ಪ್ರಭೋ! ಸತ್ತ್ವ, ರಜ, ತಮ - ಈ ತ್ರಿಗುಣಗಳು ಮತ್ತು ಅವುಗಳ ವೃತ್ತಿಗಳು (ಪರಿಣಾಮ) - ಮಹತ್ತತ್ತ್ವಾದಿಗಳು ಪರಬ್ರಹ್ಮ ಪರಮಾತ್ಮನಾದ ನಿನ್ನಲ್ಲೇ ಯೋಗಮಾಯೆಯಿಂದ ಕಲ್ಪಿತವಾಗಿವೆ. ॥13॥

(ಶ್ಲೋಕ-14)

ಮೂಲಮ್

ತಸ್ಮಾನ್ನ ಸಂತ್ಯಮೀ ಭಾವಾ ಯರ್ಹಿ ತ್ವಯಿ ವಿಕಲ್ಪಿತಾಃ ।
ತ್ವಂ ಚಾಮೀಷು ವಿಕಾರೇಷು ಹ್ಯನ್ಯದಾ ವ್ಯಾವಹಾರಿಕಃ ॥

ಅನುವಾದ

ಅದಕ್ಕಾಗಿ ಜನ್ಮ-ಸ್ಥಿತಿ ಮೊದಲಾದ ಈ ಭಾವವಿಕಾರಗಳು ನಿನ್ನಲ್ಲಿ ಖಂಡಿತವಾಗಿಯೂ ಇಲ್ಲ. ನಿನ್ನಲ್ಲಿ ಇವುಗಳನ್ನು ಕಲ್ಪಿಸಿಕೊಂಡಾಗ ನೀನು ಈ ವಿಕಾರಗಳಲ್ಲಿ ಅನುಗತನಾದವನಂತೆ ಕಂಡುಬರುವೆ. ಕಲ್ಪನೆಯ ನಿವೃತ್ತಿ ಉಂಟಾದಾಗ ನಿರ್ವಿಕಲ್ಪ ಪರಮಾರ್ಥ ಸ್ವರೂಪನಾದ ನೀನೇ ಉಳಿದುಬಿಡುವೆ. ॥14॥

(ಶ್ಲೋಕ-15)

ಮೂಲಮ್

ಗುಣಪ್ರವಾಹ ಏತಸ್ಮಿನ್ನಬುಧಾಸ್ತ್ವಖಿಲಾತ್ಮನಃ ।
ಗತಿಂ ಸೂಕ್ಷ್ಮಾಮಬೋಧೇನ ಸಂಸರಂತೀಹ ಕರ್ಮಭಿಃ ॥

ಅನುವಾದ

ಈ ಜಗತ್ತು ಸತ್ತ್ವ, ರಜ, ತಮ - ಈ ತ್ರಿಗುಣಗಳ ಪ್ರವಾಹವಾಗಿದೆ. ದೇಹ, ಇಂದ್ರಿಯಗಳು, ಅಂತಃಕರಣ, ಸುಖ, ದುಃಖ, ರಾಗ-ಲೋಭಾದಿಗಳು ಅವುಗಳ ಕಾರ್ಯವಾಗಿದೆ. ಇದರಲ್ಲಿ ಅಜ್ಞಾನಿಗಳಾದವರು ನಿನ್ನ ಸರ್ವಾತ್ಮಕವಾದ ಸೂಕ್ಷ್ಮಸ್ವರೂಪವನ್ನು ತಿಳಿಯುತ್ತಿಲ್ಲ. ಅವರು ತಮ್ಮ ದೇಹಾಭಿಮಾನರೂಪವಾದ ಅಜ್ಞಾನದಿಂದಲೇ ಕರ್ಮಗಳಲ್ಲಿ ಸಿಕ್ಕುಹಾಕಿಕೊಂಡು ಪದೇ-ಪದೇ ಹುಟ್ಟು-ಸಾವಿನ ಉರುಳಾಟದಲ್ಲಿ ಅಲೆಯುತ್ತಾ ಇರುತ್ತಾರೆ. ॥15॥

(ಶ್ಲೋಕ-16)

ಮೂಲಮ್

ಯದೃಚ್ಛಯಾ ನೃತಾಂ ಪ್ರಾಪ್ಯ ಸುಕಲ್ಪಾಮಿಹ ದುರ್ಲಭಾನ್ ।
ಸ್ವಾರ್ಥೇ ಪ್ರಮತ್ತಸ್ಯ ವಯೋ ಗತಂ ತ್ವನ್ಮಾಯಯೇಶ್ವರ ॥

ಅನುವಾದ

ಪರಮೇಶ್ವರನೇ! ನನಗೆ ಶುಭ ಪ್ರಾರಬ್ಧಕ್ಕನುಸಾರವಾಗಿ ಸಶಕ್ತ ಇಂದ್ರಿಯಗಳಿಂದ ಕೂಡಿದ ಅತ್ಯಂತ ದುರ್ಲಭವಾದ ಮನುಷ್ಯ ಶರೀರವು ದೊರೆತಿದೆ. ಆದರೆ ನಿನ್ನ ಮಾಯೆಗೆ ವಶನಾಗಿ ಪ್ರಮತ್ತನಾಗಿರುವ ನನ್ನ ಆಯುಷ್ಯವೂ ನಿಜವಾದ ಪರಮಾರ್ಥ ಸಾಧನೆಯಲ್ಲಿ ವ್ಯರ್ಥವಾಗಿ ಕಳೆದು ಹೋಯಿತು. ॥16॥

(ಶ್ಲೋಕ-17)

ಮೂಲಮ್

ಅಸಾವಹಂ ಮಮೈವೈತೇ ದೇಹೇ ಚಾಸ್ಯಾನ್ವಯಾದಿಷು ।
ಸ್ನೇಹಪಾಶೈರ್ನಿಬಧ್ನಾತಿ ಭವಾನ್ ಸರ್ವಮಿದಂ ಜಗತ್ ॥

ಅನುವಾದ

ಪ್ರಭೋ! ಈ ಶರೀರವು ನನ್ನದು ಮತ್ತು ಈ ಶರೀರದ ಸಂಬಂಧಿಗಳು ನನ್ನವರಾಗಿದ್ದಾರೆ ಎಂಬ ಅಹಂತೆ-ಮಮತೆಯ ರೂಪವಾದ ಸ್ನೇಹದ ಬಲೆಯಲ್ಲಿ ನೀನೇ ಈ ಸಮಸ್ತ ಜಗತ್ತನ್ನು ಕಟ್ಟಿ ಹಾಕಿರುವೆ. ॥17॥

(ಶ್ಲೋಕ-18)

ಮೂಲಮ್

ಯುವಾಂ ನ ನಃ ಸುತೌ ಸಾಕ್ಷಾತ್ಪ್ರಧಾನಪುರುಷೇಶ್ವರೌ ।
ಭೂಭಾರಕ್ಷತ್ರಕ್ಷಪಣ ಅವತೀರ್ಣೌ ತಥಾತ್ಥ ಹ ॥

ಅನುವಾದ

ನೀವಿಬ್ಬರೂ ನನ್ನ ಪುತ್ರರಾಗಿರದೇ ಸಂಪೂರ್ಣ ಪ್ರಕೃತಿ ಮತ್ತು ಜೀವರ ಸ್ವಾಮಿಯಾಗಿರುವಿರಿ ಎಂಬುದು ನಾನು ತಿಳಿದಿರುತ್ತೇನೆ. ಭೂಮಿಗೆ ಭಾರವಾಗಿದ್ದ ರಾಜರನ್ನು ವಿನಾಶಗೊಳಿಸಲೆಂದೇ ನೀವು ಅವತರಿಸಿರುವಿರಿ. ಈ ಮಾತನ್ನು ನೀವು ಹಿಂದೆ ನನಗೆ ಹೇಳಿಯೂ ಇದ್ದೀರಿ. ॥18॥

(ಶ್ಲೋಕ-19)

ಮೂಲಮ್

ತತ್ತೇ ಗತೋಸ್ಮ್ಯರಣಮದ್ಯ ಪದಾರವಿಂದ-
ಮಾಪನ್ನಸಂಸೃತಿಭಯಾಪಹಮಾರ್ತಬಂಧೋ ।
ಏತಾವತಾಲಮಲಮಿಂದ್ರಿಯಲಾಲಸೇನ
ಮರ್ತ್ಯಾತ್ಮದೃಕ್ ತ್ವಯಿ ಪರೇ ಯದಪತ್ಯಬುದ್ಧಿಃ ॥

ಅನುವಾದ

ಅದಕ್ಕಾಗಿ ದೀನ ಜನರ ಹಿತೈಷಿಯೇ! ಶರಣಾಗತ ವತ್ಸಲನೇ! ಶರಣಾಗತರ ಸಂಸಾರಭಯವನ್ನು ದೂರಮಾಡುವಂತಹ ನಿನ್ನ ಚರಣಕಮಲಗಳಲ್ಲಿ ಶರಣಾಗತನಾಗಿದ್ದೇನೆ. ನನಗಿನ್ನು ಈ ಪ್ರಾಪಂಚಿಕ ವಿಷಯಗಳಲ್ಲಿ ಭೋಗಲಾಲಸೆಯು ಉಂಟಾಗದಂತೆ ಕೃಪೆಮಾಡು. ನಶ್ವರವಾದ ಈ ಶರೀರದಲ್ಲಿ ಆತ್ಮಬುದ್ಧಿಯನ್ನು ಹೊಂದಿ, ಸರ್ವೇಶ್ವರನಾದ ನಿನ್ನಲ್ಲಿ ಪುತ್ರನೆಂಬ ಬುದ್ಧಿಯನ್ನು ಹೊಂದಿದೆನು. ॥19॥

(ಶ್ಲೋಕ-20)

ಮೂಲಮ್

ಸೂತೀಗೃಹೇ ನನು ಜಗಾದ ಭವಾನಜೋ ನೌ
ಸಂಜಜ್ಞ ಇತ್ಯನುಯುಗಂ ನಿಜಧರ್ಮಗುಪ್ತ್ಯೈ ।
ನಾನಾತನೂರ್ಗಗನವದ್ವಿದಧಜ್ಜಹಾಸಿ
ಕೋ ವೇದ ಭೂಮ್ನ ಉರುಗಾಯ ವಿಭೂತಿಮಾಯಾಮ್ ॥

ಅನುವಾದ

ಶ್ರೀಹರಿಯೇ! ಹುಟ್ಟು ಸಾವುಗಳಿಲ್ಲದ ನೀನು ಧರ್ಮವನ್ನು ಪರಿಪಾಲಿಸಲಿಕ್ಕಾಗಿ ಪ್ರತಿಯುಗದಲ್ಲಿಯೂ ನಮ್ಮಿಬ್ಬರಿಗೂ ಮಗನಾಗಿ ಹುಟ್ಟುವೆನು ಎಂದು ನೀನು ಹುಟ್ಟಿದೊಡನೆಯೇ ಪ್ರಸೂತಿ ಗೃಹದಲ್ಲಿ ನಮಗೆ ಹೇಳಿದೆಯಲ್ಲವೇ? ಆಕಾಶದಂತೆ ನಿರ್ಲಿಪ್ತನಾಗಿರುವ ನೀನು ನಾನಾ ಅವತಾರಗಳನ್ನು ಧರಿಸುವೆ ಮತ್ತು ಪರಿತ್ಯಜಿಸುವೆ. ವ್ಯಾಪಕವಾದ ನಿನ್ನ ಲೀಲೈಶ್ವರ್ಯಗಳನ್ನು ಯಾರು ತಾನೇ ತಿಳಿಯಬಲ್ಲರು? ಎಲ್ಲ ಜನರೂ ನಿನ್ನ ಕೀರ್ತಿಯನ್ನೇ ಕೊಂಡಾಡುತ್ತಿರುವರು. ॥20॥

(ಶ್ಲೋಕ-21)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಆಕರ್ಣ್ಯೇತ್ಥಂ ಪಿತುರ್ವಾಕ್ಯಂ ಭಗವಾನ್ ಸಾತ್ವತರ್ಷಭಃ ।
ಪ್ರತ್ಯಾಹ ಪ್ರಶ್ರಯಾನಮ್ರಃ ಪ್ರಹಸನ್ಶ್ಲಕ್ಷ್ಣಯಾ ಗಿರಾ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ವಸುದೇವನ ಈ ವಚನಗಳನ್ನು ಕೇಳಿ ಯದುವಂಶ ಕುಲತಿಲಕ ಭಕ್ತವತ್ಸಲ ಭಗವಾನ್ ಶ್ರೀಕೃಷ್ಣನು ಮುಗುಳ್ನಕ್ಕನು. ಅವನು ವಿನಯದಿಂದ ತಲೆತಗ್ಗಿಸಿಕೊಂಡು ಮಧುರವಾಗಿ ಇಂತೆಂದನು. ॥21॥

(ಶ್ಲೋಕ-22)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ವಚೋ ವಃ ಸಮವೇತಾರ್ಥಂ ತಾತೈತದುಪಮನ್ಮಹೇ ।
ಯನ್ನಃ ಪುತ್ರಾನ್ಸಮುದ್ದಿಶ್ಯ ತತ್ತ್ವಗ್ರಾಮ ಉದಾಹೃತಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು - ಅಪ್ಪಾ! ನಾವು ನಿನ್ನ ಮಕ್ಕಳೇ ಆಗಿದ್ದೇವೆ. ನಮ್ಮನ್ನು ಕುರಿತೇ ನೀನು ಈ ತತ್ತ್ವಜ್ಞಾನದ ಉಪದೇಶವನ್ನು ಮಾಡಿರುವೆ. ನಿನ್ನ ಒಂದೊಂದು ಮಾತೂ ಕೂಡ ಯುಕ್ತಿಯುಕ್ತವೆಂದು ನಾವು ಭಾವಿಸುತ್ತೇವೆ. ॥22॥

(ಶ್ಲೋಕ-23)

ಮೂಲಮ್

ಅಹಂ ಯೂಯಮಸಾವಾರ್ಯ ಇಮೇ ಚ ದ್ವಾರಕೌಕಸಃ ।
ಸರ್ವೇಪ್ಯೇವಂ ಯದುಶ್ರೇಷ್ಠ ವಿಮೃಶ್ಯಾಃ ಸಚರಾಚರಮ್ ॥

ಅನುವಾದ

ತಂದೆಯೇ! ನಾನು, ನೀವು, ನಮ್ಮಣ್ಣ ಬಲರಾಮ, ದ್ವಾರಕೆಯ ಈ ಪ್ರಜೆಗಳೆಲ್ಲರೂ, ಸಂಪೂರ್ಣ ಚರಾಚರ ಜಗತ್ತು-ಸಮಸ್ತವೂ ನೀವು ಹೇಳಿದಂತೆ ಬ್ರಹ್ಮವಸ್ತುವೆಂದೇ ವಿಮರ್ಶಿಸಿ ತಿಳಿಯಬೇಕು. ॥23॥

(ಶ್ಲೋಕ-24)

ಮೂಲಮ್

ಆತ್ಮಾ ಹ್ಯೇಕಃ ಸ್ವಯಂಜ್ಯೋತಿರ್ನಿತ್ಯೋನ್ಯೋ ನಿರ್ಗುಣೋ ಗುಣೈಃ ।
ಆತ್ಮಸೃಷ್ಟೈಸ್ತತ್ಕೃತೇಷು ಭೂತೇಷು ಬಹುಧೇಯತೇ ॥

ಅನುವಾದ

ತಂದೆಯೇ! ಆತ್ಮನಾದರೋ ಒಂದೇ ಆಗಿದೆ. ಆದರೆ ಅವನು ತನ್ನಲ್ಲೇ ಗುಣಗಳನ್ನು ಸೃಷ್ಟಿಸಿಕೊಳ್ಳುತ್ತಾನೆ. ಗುಣಗಳ ಮೂಲಕ ಉಂಟಾದ ಪಂಚಭೂತಗಳಲ್ಲಿ ಒಂದೇ ಆಗಿದ್ದರೂ ಅನೇಕ, ಸ್ವಯಂಪ್ರಕಾಶನಾಗಿದ್ದರೂ ದೃಶ್ಯ, ತನ್ನ ಸ್ವರೂಪವೇ ಆಗಿದ್ದರೂ ತನ್ನಿಂದ ಭಿನ್ನ, ನಿತ್ಯನಾಗಿದ್ದರೂ ಅನಿತ್ಯ, ನಿರ್ಗುಣನಾಗಿದ್ದರೂ ಸಗುಣರೂಪದಿಂದ ಕಂಡುಬರುತ್ತಾನೆ. ॥24॥

(ಶ್ಲೋಕ-25)

ಮೂಲಮ್

ಖಂ ವಾಯುರ್ಜ್ಯೋತಿರಾಪೋ ಭೂಸ್ತತ್ಕೃತೇಷು ಯಥಾಶಯಮ್ ।
ಆವಿಸ್ತಿರೋಲ್ಪಭೂರ್ಯೇಕೋ ನಾನಾತ್ವಂ ಯಾತ್ಯಸಾವಪಿ ॥

ಅನುವಾದ

ಆಕಾಶ, ವಾಯು, ಅಗ್ನಿ, ಜಲ, ಪೃಥಿವಿ, - ಈ ಪಂಚಭೂತಗಳು ತಮ್ಮ ಕಾರ್ಯವಾದ ಘಟ-ಪಟಾದಿಗಳಲ್ಲಿ ಪ್ರಕಟ-ಅಪ್ರಕಟ, ದೊಡ್ಡದು-ಸಣ್ಣದು, ಹೆಚ್ಚು-ಕಡಿಮೆ, ಏಕ ಅನೇಕ ಹೀಗೆ ಕಂಡುಬರುತ್ತವೆ. ಆದರೆ ವಾಸ್ತವವಾಗಿ ಸತ್ತಾರೂಪದಿಂದ ಅವು ಒಂದೇ ಆಗಿರುವಂತೆಯೇ ಆತ್ಮನಲ್ಲಿಯೂ ಉಪಾಧಿಗಳ ಭೇದದಿಂದಲೇ ನಾನಾತ್ವದ ಪ್ರತೀತಿ ಆಗುತ್ತದೆ. ಅದಕ್ಕಾಗಿ ‘ನಾನೇ ಎಲ್ಲವೂ ಆಗಿದ್ದೇನೆ’ ಎಂಬ ನಿನ್ನ ಮಾತು ಸಮುಚಿತವೇ ಆಗಿದೆ. ॥25॥

(ಶ್ಲೋಕ-26)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಂ ಭಗವತಾ ರಾಜನ್ ವಸುದೇವ ಉದಾಹೃತಮ್ ।
ಶ್ರುತ್ವಾ ವಿನಷ್ಟನಾನಾಧೀಸ್ತೂಷ್ಣೀಂ ಪ್ರೀತಮನಾ ಅಭೂತ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಭಗವಾನ್ ಶ್ರೀಕೃಷ್ಣನ ಈ ಮಾತುಗಳನ್ನು ಕೇಳಿ ವಸುದೇವನ ನಾನಾತ್ವ ಬುದ್ಧಿಯು ಹೊರಟುಹೋಯಿತು. ಆನಂದ ಮಗ್ನನಾಗಿ ಅವನ ಮಾತು ನಿಂತುಹೋಯಿತು. ಮನಸ್ಸು ನಿರ್ವಿಷಯವಾಯಿತು. ॥26॥

(ಶ್ಲೋಕ-27)

ಮೂಲಮ್

ಅಥ ತತ್ರ ಕುರುಶ್ರೇಷ್ಠ ದೇವಕೀ ಸರ್ವದೇವತಾ ।
ಶ್ರುತ್ವಾನೀತಂ ಗುರೋಃ ಪುತ್ರಮಾತ್ಮಜಾಭ್ಯಾಂ ಸುವಿಸ್ಮಿತಾ ॥

ಅನುವಾದ

ಕುರುಶ್ರೇಷ್ಠನೇ! ಆ ಸಮಯದಲ್ಲಿ ಅಲ್ಲಿ ಸಮಸ್ತ ದೇವತಾ ಸ್ವರೂಪಳಾದ ದೇವಕಿಯೂ ಕುಳಿತಿದ್ದಳು. ಬಹಳ ಹಿಂದೆ ಸತ್ತುಹೋದ ಗುರುಪುತ್ರನನ್ನು ಶ್ರೀಕೃಷ್ಣ-ಬಲರಾಮರು ಯಮಲೋಕದಿಂದ ಮರಳಿತಂದಿದ್ದರೆಂದು ಕೇಳಿದ್ದ ಆಕೆಯು ಅತ್ಯಂತ ವಿಸ್ಮಿತಳಾಗಿದ್ದಳು. ॥27॥

(ಶ್ಲೋಕ-28)

ಮೂಲಮ್

ಕೃಷ್ಣರಾವೌ ಸಮಾಶ್ರಾವ್ಯ ಪುತ್ರಾನ್ ಕಂಸವಿಹಿಂಸಿತಾನ್ ।
ಸ್ಮರಂತೀ ಕೃಪಣಂ ಪ್ರಾಹ ವೈಕ್ಲವ್ಯಾದಶ್ರುಲೋಚನಾ ॥

ಅನುವಾದ

ಆಗ ಅವಳಿಗೆ ಕಂಸನು ಕೊಂದುಹಾಕಿದ ತನ್ನ ಆರು ಹಸುಳೆಗಳ ನೆನಪಾಯಿತು. ಒಡನೆಯೇ ಮನಸ್ಸು ಕಳವಳಗೊಂಡಿತು. ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ಕರುಣಾಜನಕ ಮಾತುಗಳಿಂದ ಆಕೆಯು ಬಲರಾಮ-ಶ್ರೀಕೃಷ್ಣರನ್ನು ಸಂಬೋಧಿಸಿ ಇಂತೆಂದಳು - ॥28॥

(ಶ್ಲೋಕ-29)

ಮೂಲಮ್ (ವಾಚನಮ್)

ದೇವಕ್ಯುವಾಚ

ಮೂಲಮ್

ರಾಮ ರಾಮಾಪ್ರಮೇಯಾತ್ಮಾನ್ ಕೃಷ್ಣ ಯೋಗೇಶ್ವರೇಶ್ವರ ।
ವೇದಾಹಂ ವಾಂ ವಿಶ್ವಸೃಜಾಮೀಶ್ವರಾವಾದಿಪೂರುಷೌ ॥

ಅನುವಾದ

ದೇವಕಿಯು ಹೇಳಿದಳು — ಅಪ್ರಮೇಯಾತ್ಮನಾದ ಲೋಕಾಭಿರಾಮನಾದ ಬಲರಾಮನೇ! ಯೋಗೇಶ್ವರರಿಗೂ ಈಶ್ವರನಾದ ಶ್ರೀಕೃಷ್ಣನೇ! ನೀವಿಬ್ಬರೂ ಪ್ರಜಾಪತಿಗಳೂ ಈಶ್ವರರಾದ ಆದಿ ಪುರುಷರೆಂಬುದನ್ನು ನಾನು ತಿಳಿದಿರುತ್ತೇನೆ. ॥29॥

(ಶ್ಲೋಕ-30)

ಮೂಲಮ್

ಕಾಲವಿಧ್ವಸ್ತಸತ್ತ್ವಾನಾಂ ರಾಜ್ಞಾಮುಚ್ಛಾಸ ವರ್ತಿನಾಮ್ ।
ಭೂಮೇರ್ಭಾರಾಯಮಾಣಾನಾಮವತೀರ್ಣೌ ಕಿಲಾದ್ಯ ಮೇ ॥

ಅನುವಾದ

ಕಾಲದ ಮಹಿಮೆಯಿಂದ ಸತ್ತ್ವಗುಣವನ್ನು ಕಳೆದುಕೊಂಡು (ತಾಮಸಿಗಳು), ಈ ಕಾರಣದಿಂದಲೇ ಶಾಸ್ತ್ರನಿರ್ದೇಶಗಳನ್ನು ಉಲ್ಲಂಘಿಸುತ್ತಿರುವ ಸ್ವೇಚ್ಛಾಚಾರಿಗಳಾದ, ಭೂಮಿಗೆ ಭಾರವಾದ ರಾಜರನ್ನು ಸಂಹರಿಸುವ ಸಲುವಾಗಿಯೇ ನೀವಿಬ್ಬರೂ ನನ್ನ ಗರ್ಭದಲ್ಲಿ ಅವತರಿಸಿರುವಿರೆಂಬುದನ್ನೂ ನಾನು ತಿಳಿದಿರುವೆನು. ॥30॥

(ಶ್ಲೋಕ-31)

ಮೂಲಮ್

ಯಸ್ಯಾಂಶಾಂಶಾಂಶಭಾಗೇನ ವಿಶ್ವೋತ್ಪತ್ತಿಲಯೋದಯಾಃ ।
ಭವಂತಿ ಕಿಲ ವಿಶ್ವಾತ್ಮಂಸ್ತಂ ತ್ವಾದ್ಯಾಹಂ ಗತಿಂ ಗತಾ ॥

ಅನುವಾದ

ವಿಶ್ವಾತ್ಮನೇ! ನಿನ್ನ ಪುರುಷರೂಪದ ಅಂಶದಿಂದ ಉತ್ಪನ್ನವಾದ ಮಾಯೆಯಿಂದ ಗುಣಗಳು ಹುಟ್ಟುತ್ತವೆ ಮತ್ತು ಅವುಗಳ ಲೇಶಮಾತ್ರ ಅಂಶದಿಂದ ಜಗತ್ತಿನ ಉತ್ಪತ್ತಿ, ವಿಕಾಸ, ಲಯಗಳಾಗುತ್ತವೆ. ಈಗ ನಾನು ಅಂತಃಕರಣಪೂರ್ವಕವಾಗಿ ನಿನಗೆ ಶರಣಾಗತಳಾಗಿದ್ದೇನೆ. ॥31॥

(ಶ್ಲೋಕ-32)

ಮೂಲಮ್

ಚಿರಾನ್ಮೃತಸುತಾದಾನೇ ಗುರುಣಾ ಕಾಲಚೋದಿತೌ ।
ಆನಿನ್ಯಥುಃ ಪಿತೃಸ್ಥಾನಾದ್ಗುರವೇ ಗುರುದಕ್ಷಿಣಾಮ್ ॥

ಅನುವಾದ

ನಿಮ್ಮ ಗುರುಗಳಾದ ಸಾಂದೀಪನಿಮುನಿಗಳ ಪುತ್ರನು ತೀರಿಹೋಗಿ ಬಹಳ ದಿನಗಳಾಗಿದ್ದವು. ಗುರುದಕ್ಷಿಣೆಯನ್ನು ಕೊಡುವುದಕ್ಕಾಗಿ ಗುರುಗಳ ಆಜ್ಞೆಯಂತೆ ಹಾಗೂ ಕಾಲದ ಪ್ರೇರಣೆಯಂತೆ ನೀವಿಬ್ಬರೂ ಅವರ ಸತ್ತುಹೋದ ಪುತ್ರನನ್ನು ಯಮಲೋಕದಿಂದ ಮರಳಿತಂದು ಕೊಟ್ಟಿರಿ ಎಂದೂ ನಾನು ಕೇಳಿದ್ದೇನೆ. ॥32॥

(ಶ್ಲೋಕ-33)

ಮೂಲಮ್

ತಥಾ ಮೇ ಕುರುತಂ ಕಾಮಂ ಯುವಾಂ ಯೋಗೇಶ್ವರೇಶ್ವರೌ ।
ಭೋಜರಾಜಹತಾನ್ಪುತ್ರಾನ್ ಕಾಮಯೇ ದ್ರಷ್ಟುಮಾಹೃತಾನ್ ॥

ಅನುವಾದ

ನೀವಿಬ್ಬರೂ ಯೋಗೇಶ್ವರರಿಗೂ ಈಶ್ವರರಾಗಿರುವಿರಿ. ಅದರಿಂದಾಗಿ ಇಂದು ನನ್ನ ಅಭಿಲಾಷೆಯನ್ನು ಪೂರ್ಣಗೊಳಿಸಿರಿ. ನೀವಿಬ್ಬರೂ ಕಂಸನು ಅಂದುಕೊಂದು ಹಾಕಿದ ನನ್ನ ಪುತ್ರರನ್ನು ತಂದುಕೊಡಿರಿ. ಅವರನ್ನು ಕಣ್ತುಂಬಾ ನೋಡಬೇಕೆಂದು ನಾನು ಬಯಸುತ್ತೇನೆ. ॥33॥

(ಶ್ಲೋಕ-34)

ಮೂಲಮ್ (ವಾಚನಮ್)

ಋಷಿರುವಾಚ

ಮೂಲಮ್

ಏವಂ ಸಂಚೋದಿತೌ ಮಾತ್ರಾ ರಾಮಃ ಕೃಷ್ಣಶ್ಚ ಭಾರತ ।
ಸುತಲಂ ಸಂವಿವಿಶತುರ್ಯೋಗಮಾಯಾಮುಪಾಶ್ರಿತೌ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪ್ರಿಯಪರೀಕ್ಷಿತನೇ! ತಾಯಿಯಾದ ದೇವಕಿಯ ಈ ಮಾತನ್ನು ಕೇಳಿ ಭಗವಾನ್ ಶ್ರೀಕೃಷ್ಣ ಮತ್ತು ಬಲರಾಮರಿಬ್ಬರೂ ಯೋಗ ಮಾಯೆಯನ್ನು ಆಶ್ರಯಿಸಿ ಸುತಲಲೋಕವನ್ನು ಪ್ರವೇಶಿಸಿದರು. ॥34॥

(ಶ್ಲೋಕ-35)

ಮೂಲಮ್

ತಸ್ಮಿನ್ಪ್ರವಿಷ್ಟಾವುಪಲಭ್ಯ ದೈತ್ಯರಾಡ್
ವಿಶ್ವಾತ್ಮದೈವಂ ಸುತರಾಂ ತಥಾತ್ಮನಃ ।
ತದ್ದರ್ಶನಾಹ್ಲಾದಪರಿಪ್ಲುತಾಶಯಃ
ಸದ್ಯಃ ಸಮುತ್ಥಾಯ ನನಾಮ ಸಾನ್ವಯಃ ॥

ಅನುವಾದ

ಜಗದಾತ್ಮನೂ, ಇಷ್ಟದೇವನೂ, ತನ್ನ ಪರಮಸ್ವಾಮಿಯೂ ಆದ ಭಗವಾನ್ ಶ್ರೀಕೃಷ್ಣನು ಬಲರಾಮನೊಂದಿಗೆ ತನ್ನ ಸುತಲಲೋಕಕ್ಕೆ ಆಗಮಿಸಿರುವರು ಎಂದು ನೋಡಿದ ಬಲಿಚಕ್ರವರ್ತಿಯ ಮನಸ್ಸು ಆನಂದ ಸಾಗರದಲ್ಲಿ ಮುಳುಗಿ ಹೋಯಿತು. ಅವನು ಒಡನೆಯೇ ಆಸನದಿಂದೆದ್ದು ಪರಿವಾರ ಸಹಿತನಾಗಿ ಭಗವಂತನ ಚರಣಗಳಲ್ಲಿ ಸಾಷ್ಟಾಂಗ ನಮಸ್ಕಾರ ಮಾಡಿದನು. ॥35॥

(ಶ್ಲೋಕ-36)

ಮೂಲಮ್

ತಯೋಃ ಸಮಾನೀಯ ವರಾಸನಂ ಮುದಾ
ನಿವಿಷ್ಟಯೋಸ್ತತ್ರ ಮಹಾತ್ಮನೋಸ್ತಯೋಃ ।
ದಧಾರ ಪಾದಾವವನಿಜ್ಯ ತಜ್ಜಲಂ
ಸವೃಂದ ಆಬ್ರಹ್ಮ ಪುನದ್ಯದಂಬು ಹ ॥

ಅನುವಾದ

ಆನಂದತುಂದಿಲನಾದ ದೈತ್ಯರಾಜ ಬಲಿಯು ಶ್ರೀಕೃಷ್ಣ-ಬಲರಾಮರನ್ನು ಶ್ರೇಷ್ಠವಾದ ಸಿಂಹಾಸನಗಳಲ್ಲಿ ಕುಳ್ಳಿರಿಸಿದನು. ಅವರು ಸುಖಾಸೀನರಾದ ಬಳಿಕ ಅವರಿಬ್ಬರ ದಿವ್ಯಪಾದಗಳನ್ನು ತೊಳೆದು ಆ ಚರಣೋದಕವನ್ನು ಪರಿವಾರಸಹಿತ ತನ್ನ ತಲೆಯಲ್ಲಿ ಧರಿಸಿಕೊಂಡನು. ಪರೀಕ್ಷಿತನೇ! ಭಗವಂತನ ಚರಣೋದಕವು ಬ್ರಹ್ಮಪರ್ಯಂತವಾಗಿ ಸಮಸ್ತ ಜಗತ್ತನ್ನು ಪವಿತ್ರಗೊಳಿಸುತ್ತದೆ. ॥36॥

(ಶ್ಲೋಕ-37)

ಮೂಲಮ್

ಸಮರ್ಹಯಾಮಾಸ ಸ ತೌ ವಿಭೂತಿಭಿ-
ರ್ಮಹಾರ್ಹವಸಾಭರಣಾನುಲೇಪನೈಃ ।
ತಾಂಬೂಲದೀಪಾಮೃತಭಕ್ಷಣಾದಿಭಿಃ
ಸ್ವಗೋತ್ರವಿತ್ತಾತ್ಮ ಸಮರ್ಪಣೇನ ಚ ॥

ಅನುವಾದ

ಅನಂತರ ದೈತ್ಯರಾಜನಾದ ಬಲಿಯು ಬಹುಮೂಲ್ಯವಾದ ವಸ್ತ್ರ, ಆಭೂಷಣ, ಚಂದನ, ತಾಂಬೂಲ, ಧೂಪ, ದೀಪ, ಅಮೃತೋಪಮವಾದ ಭೋಜನ ಹಾಗೂ ಇತರ ಸಾಮಗ್ರಿಗಳಿಂದ ಭಗವಂತನನ್ನು ಪೂಜಿಸಿ, ತನ್ನ ಸಮಸ್ತ ಪರಿವಾರ, ಧನ, ಶರೀರಾದಿಗಳನ್ನು ಅವನ ಚರಣಗಳಲ್ಲಿ ಸಮರ್ಪಿಸಿದನು. ॥37॥

(ಶ್ಲೋಕ-38)

ಮೂಲಮ್

ಸ ಇಂದ್ರಸೇನೋ ಭಗವತ್ಪದಾಂಬುಜಂ
ಬಿಭ್ರನ್ಮುಹುಃ ಪ್ರೇಮವಿಭಿನ್ನಯಾ ಧಿಯಾ ।
ಉವಾಚ ಹಾನಂದಜಲಾಕುಲೇಕ್ಷಣಃ
ಪ್ರಹೃಷ್ಟರೋಮಾ ನೃಪ ಗದ್ಗದಾಕ್ಷರಮ್ ॥

ಅನುವಾದ

ಪರೀಕ್ಷಿತನೇ! ಬಲಿಚಕ್ರವರ್ತಿಯು ಪದೇ-ಪದೇ ಭಗವಂತನ ಚರಣಕಮಲಗಳನ್ನು ತನ್ನ ವಕ್ಷಃಸ್ಥಳದಲ್ಲಿ ಶಿರದಲ್ಲಿರಿಸಿಕೊಂಡು ಪ್ರೇಮಾನಂದದಿಂದ ವಿಹ್ವಲನಾದನು. ಕಣ್ಣುಗಳಿಂದ ಆನಂದಾಶ್ರುಗಳು ಹರಿಯತೊಡಗಿದವು. ರೋಮಕೋಟಿಗಳು ನಿಮಿರಿನಿಂತವು. ಗದ್ಗದಕಂಠದಿಂದ ಭಗವಂತನನ್ನು ಸ್ತುತಿಸತೊಡಗಿದನು. ॥38॥

(ಶ್ಲೋಕ-39)

ಮೂಲಮ್ (ವಾಚನಮ್)

ಬಲಿರುವಾಚ

ಮೂಲಮ್

ನಮೋನಂತಾಯ ಬೃಹತೇ ನಮಃ ಕೃಷ್ಣಾಯ ವೇಧಸೇ ।
ಸಾಂಖ್ಯಯೋಗವಿತಾನಾಯ ಬ್ರಹ್ಮಣೇ ಪರಮಾತ್ಮನೇ ॥

ಅನುವಾದ

ದ್ಯೆತ್ಯರಾಜ ಬಲಿಯು ಹೇಳಿದನು — ಬಲರಾಮನೇ! ನೀನು ಅನಂತನಾಗಿರುವೆ. ಮಹಾಮಹಿಮನಾದ ನಿನ್ನೊಳಗೆ ಶೇಷನೇ ಮೊದಲಾದ ಸಮಸ್ತ ವಿಗ್ರಹಗಳು ಅಂತರ್ಭೂತವಾಗಿವೆ. ಸಚ್ಚಿದಾನಂದ ಸ್ವರೂಪನಾದ ಶ್ರೀಕೃಷ್ಣನೇ! ಸಮಸ್ತ ಜಗತ್ತನ್ನು ನೀನೇ ಸೃಷ್ಟಿಸಿರುವೆ. ಜ್ಞಾನಯೋಗ-ಭಕ್ತಿಯೋಗಗಳ ಪ್ರವರ್ತಕನೂ ನೀನೇ ಆಗಿದ್ದೀಯೆ. ನೀನೆ ಸಾಕ್ಷಾತ್ ಪರಬ್ರಹ್ಮ ಪರಮಾತ್ಮನು. ನಾನು ನಿಮ್ಮಿಬ್ಬರಿಗೂ ನಮಸ್ಕರಿಸುತ್ತೇನೆ. ॥39॥

(ಶ್ಲೋಕ-40)

ಮೂಲಮ್

ದರ್ಶನಂ ವಾಂ ಹಿ ಭೂತಾನಾಂ ದುಷ್ಪ್ರಾಪಂ ಚಾಪ್ಯದುರ್ಲಭಮ್ ।
ರಜಸ್ತಮಃಸ್ವಭಾವಾನಾಂ ಯನ್ನಃ ಪ್ರಾಪ್ತೌ ಯದೃಚ್ಛಯಾ ॥

ಅನುವಾದ

ಭಗವಂತಾ! ನಿಮ್ಮಿಬ್ಬರ ದರ್ಶನವು ಪ್ರಾಣಿಗಳಿಗೆ ಅತ್ಯಂತ ದುರ್ಲಭವಾದುದು. ಹೀಗಿದ್ದರೂ ನಿನ್ನ ಕೃಪೆಯಿಂದ ಅದು ಸುಲಭವಾಗುತ್ತದೆ. ಏಕೆಂದರೆ, ಇಂದು ನೀನು ದಯೆಗೈದು ರಜೋಗುಣೀ ಹಾಗೂ ತಮೋಗುಣಿಗಳಾದ ನಮ್ಮಂತಹ ದೈತ್ಯರಿಗೂ ದರ್ಶನವಿತ್ತಿಹೆ. ॥40॥

(ಶ್ಲೋಕ-41)

ಮೂಲಮ್

ದೈತ್ಯದಾನವಗಂಧರ್ವಾಃ ಸಿದ್ಧವಿದ್ಯಾಧ್ರಚಾರಣಾಃ ।
ಯಕ್ಷರಕ್ಷಃಪಿಶಾಚಾಶ್ಚ ಭೂತಪ್ರಮಥನಾಯಕಾಃ ॥

(ಶ್ಲೋಕ-42)

ಮೂಲಮ್

ವಿಶುದ್ಧಸತ್ತ್ವಧಾಮ್ನ್ಯದ್ಧಾ ತ್ವಯಿ ಶಾಸಶರೀರಿಣಿ ।
ನಿತ್ಯಂ ನಿಬದ್ಧವೈರಾಸ್ತೇ ವಯಂ ಚಾನ್ಯೇ ಚ ತಾದೃಶಾಃ ॥

(ಶ್ಲೋಕ-43)

ಮೂಲಮ್

ಕೇಚನೋದ್ಬದ್ಧವೈರೇಣ ಭಕ್ತ್ಯಾ ಕೇಚನ ಕಾಮತಃ ।
ನ ತಥಾ ಸತ್ತ್ವಸಂರಬ್ಧಾಃ ಸಂನಿಕೃಷ್ಟಾಃ ಸುರಾದಯಃ ॥

ಅನುವಾದ

ಪ್ರಭುವೇ! ಸಾಕ್ಷಾತ್ ವೇದಮಯವೂ, ವಿಶುದ್ಧಸತ್ತ್ವಮಯವೂ ಆದ ನಿನ್ನ ಶ್ರೀವಿಗ್ರಹವನ್ನು ನಾವು ಮತ್ತು ನಮ್ಮಂತೆಯೇ ಇರುವ ಇತರ ದೈತ್ಯರು ದ್ವೇಷಿಸುತ್ತೇವೆ. ಹಾಗೆಯೇ ದಾನವರೂ, ಗಂಧರ್ವರೂ, ಸಿದ್ಧರೂ, ವಿದ್ಯಾಧರರೂ ಚಾರಣರೂ, ಯಕ್ಷರೂ, ರಾಕ್ಷಸರೂ, ಪಿಶಾಚಿಗಳೂ ಭೂತ-ಪ್ರಮಥಾದಿಗಳು ನಿನ್ನನ್ನು ಭಜಿಸುವುದಿರಲಿ ನಿನ್ನಲ್ಲಿ ಸದಾಕಾಲ ದೃಢವಾದ ವೈರವನ್ನೇ ಇರಿಸುತ್ತಾರೆ. ಅದರಿಂದಲೇ ನಮ್ಮಲ್ಲಿ ಅನೇಕರು ದೃಢವಾದ ವೈರಭಾವದಿಂದ, ಕೆಲವರು ಭಕ್ತಿಯಿಂದ, ಕೆಲವರು ಕಾಮನೆಯಿಂದ ನಿನ್ನನ್ನು ಸ್ಮರಿಸಿ-ನಿನ್ನ ಸನಿಹದಲ್ಲೇ ಇರುವ ಸತ್ತ್ವ ಪ್ರಧಾನರಾದ ದೇವತೆಗಳಿಗೂ ಪ್ರಾಪ್ತವಾಗದಿರುವ ಆ ಪರಮಪದವನ್ನು ಪಡೆದುಕೊಂಡಿರುವರು. ॥41-43॥

(ಶ್ಲೋಕ-44)

ಮೂಲಮ್

ಇದಮಿತ್ಥಮಿತಿ ಪ್ರಾಯ ಸ್ತವ ಯೋಗೇಶ್ವರೇಶ್ವರ ।
ನ ವಿದಂತ್ಯಪಿ ಯೋಗೇಶಾ ಯೋಗಮಾಯಾಂ ಕುತೋ ವಯಮ್ ॥

ಅನುವಾದ

ಯೋಗೇಶ್ವರರ ಅಧೀಶ್ವರನೇ! ನಿನ್ನ ಯೋಗಮಾಯೆಯು ಹೀಗೆಯೇ ಇದೆ ಎಂಬುದನ್ನು ದೊಡ್ಡ-ದೊಡ್ಡ ಯೋಗೇಶ್ವರರೂ ಪ್ರಾಯಶಃ ತಿಳಿಯಲಾರರು. ಅಂತಿರುವಾಗ ನಮ್ಮಂತಹವರ ಮಾತೇನು? ॥44॥

(ಶ್ಲೋಕ-45)

ಮೂಲಮ್

ತನ್ನಃ ಪ್ರಸೀದ ನಿರಪೇಕ್ಷವಿಮೃಗ್ಯಯುಷ್ಮತ್-
ಪಾದಾರವಿಂದಧಿಷಣಾನ್ಯಗೃಹಾಂಧಕೂಪಾತ್ ।
ನಿಷ್ಕ್ರಮ್ಯ ವಿಶ್ವಶರಣಾಂಘ್ರ್ಯುಪಲಬ್ಧವೃತ್ತಿಃ
ಶಾಂತೋ ಯಥೈಕ ಉತ ಸರ್ವಸಖೈಶ್ಚರಾಮಿ ॥

ಅನುವಾದ

ಅದಕ್ಕಾಗಿ ಸ್ವಾಮಿ! ಯಾವುದರ ಅಪೇಕ್ಷೆಯೂ ಇಲ್ಲದಿರುವ ಪರಮಹಂಸರು ಸದಾ ಹುಡುಕುತ್ತಿರುವ ನಿನ್ನ ಚರಣಕಮಲಗಳಲ್ಲಿ ನನ್ನ ಚಿತ್ತವೃತ್ತಿಯು ನೆಲೆಗೊಳ್ಳುವಂತೆ ನನ್ನ ಮೇಲೆ ಕೃಪೆಮಾಡು. ಅದನ್ನು ಆಶ್ರಯಿಸಿದ ನಾನು ಅದಕ್ಕಿಂತ ಭಿನ್ನವಾದ ಈ ಅಂಧಕಾರಮಯ ಸಂಸಾರ ಕೂಪದಿಂದ ಪಾರಾಗಿ ಹೋಗುವೆನು. ಪ್ರಭೋ! ಹೀಗೆ ಸಮಸ್ತ ಜಗತ್ತಿಗೆ ಏಕಮಾತ್ರ ಆಶ್ರಯವಾದ ನಿನ್ನ ಚರಣಕಮಲಗಳಲ್ಲಿ ಶರಣಾಗಿ ಶಾಂತನಾಗುವೆನು. ಒಬ್ಬಂಟಿಗನಾಗಿ ಸಂಚರಿಸುವೆನು. ಯಾರದಾದರೂ ಸಂಗವನ್ನು ಮಾಡಲೇಬೇಕೆಂದಾಗ ಸಮಸ್ತರ ಪರಮ ಹಿತೈಷಿಗಳಾದ ಸಂತರ ಸಂಗವೇ ಮಾಡುವೆನು. ॥45॥

(ಶ್ಲೋಕ-46)

ಮೂಲಮ್

ಶಾಧ್ಯಸ್ಮಾನೀಶಿತವ್ಯೇಶ ನಿಷ್ಪಾಪಾನ್ಕುರು ನಃ ಪ್ರಭೋ ।
ಪುಮಾನ್ಯಚ್ಛ್ರದ್ಧಯಾತಿಷ್ಠಂಶ್ಚೋದನಾಯಾ ವಿಮುಚ್ಯತೇ ॥

ಅನುವಾದ

ಪ್ರಭೋ! ನೀನು ಸಮಸ್ತ ಚರಾಚರ ಜಗತ್ತಿನ ನಿಯಾಮಕನೂ, ಒಡೆಯನೂ ಆಗಿರುವೆ. ನೀನು ನಮಗೆ ಆಜ್ಞಾಪಿಸಿ ನಿಷ್ಪಾಪರನ್ನಾಗಿ ಮಾಡು. ನಮ್ಮ ಪಾಪಗಳನ್ನು ನಾಶ ಮಾಡಿಬಿಡು. ಏಕೆಂದರೆ, ಶ್ರದ್ಧೆಯಿಂದ ನಿನ್ನ ಆಜ್ಞೆಯನ್ನು ಪಾಲಿಸುವವನು ವಿಧಿ-ನಿಷೇಧಗಳ ಬಂಧನಗಳಿಂದ ಬಿಡುಗಡೆ ಹೊಂದುವನು. ॥46॥

(ಶ್ಲೋಕ-47)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಆಸನ್ ಮರೀಚೇಃ ಷಟ್ ಪುತ್ರಾ
ಊರ್ಣಾಯಾಂ ಪ್ರಥಮೇಂತರೇ ।
ದೇವಾಃ ಕಂ ಜಹಸುರ್ವೀಕ್ಷ್ಯ
ಸುತಾಂ ಯಭಿತುಮುದ್ಯತಮ್ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ರಾಜನೇ! ಸ್ವಾಯಂಭುವ ಮನ್ವಂತರಗಳಲ್ಲಿ ಪ್ರಜಾಪತಿಯಾದ ಮರೀಚಿಯ ಪತ್ನೀ ಊರ್ಣಾಳ ಗರ್ಭದಿಂದ ಆರುಮಂದಿ ಪುತ್ರರು ಹುಟ್ಟಿದ್ದರು. ಅವರೆಲ್ಲರೂ ದೇವತೆಗಳೇ ಆಗಿದ್ದರು. ಒಮ್ಮೆ ಬ್ರಹ್ಮನು ತನ್ನ ಪುತ್ರಿಯರೊಂದಿಗೆ ಸಮಾಗಮ ಮಾಡಲಿದ್ದುದನ್ನು ಕಂಡು ಅವರು ನಕ್ಕುಬಿಟ್ಟರು. ॥47॥

(ಶ್ಲೋಕ-48)

ಮೂಲಮ್

ತೇನಾಸುರೀಮಗನ್ಯೋನಿಮಧುನಾವದ್ಯಕರ್ಮಣಾ ।
ಹಿರಣ್ಯಕಶಿಪೋರ್ಜಾತಾ ನೀತಾಸ್ತೇ ಯೋಗಮಾಯಯಾ ॥

(ಶ್ಲೋಕ-49)

ಮೂಲಮ್

ದೇವಕ್ಯಾ ಉದರೇ ಜಾತಾ ರಾಜನ್ ಕಂಸವಿಹಿಂಸಿತಾಃ ।
ಸಾ ತಾನ್ ಶೋಚತ್ಯಾತ್ಮಜಾನ್ಸ್ವಾಂಸ್ತ ಇಮೇಧ್ಯಾಸತೇಂತಿಕೇ ॥

ಅನುವಾದ

ಇಂತಹ ಉಪಹಾಸರೂಪವಾದ ಅಪರಾಧದಿಂದ ಅವರಿಗೆ ಬ್ರಹ್ಮದೇವರು ಶಾಪವನ್ನಿತ್ತರು ಹಾಗೂ ಅವರು ಅಸುರ ಯೋನಿಯಲ್ಲಿ ಹಿರಣ್ಯಕಶಿಪುವಿನ ಪುತ್ರರಾಗಿ ಹುಟ್ಟಿದರು. ಆಗ ಯೋಗಮಾಯೆಯು ಅವರನ್ನು ಅಲ್ಲಿಂದ ತಂದು ದೇವಕಿಯ ಗರ್ಭದಲ್ಲಿರಿಸಿದಳು. ಅವರು ಹುಟ್ಟುತ್ತಲೇ ಕಂಸನು ಕೊಂದುಹಾಕಿದನು. ದೈತ್ಯರಾಜನೇ! ನನ್ನ ತಾಯಿಯಾದ ದೇವಕಿಯು ಆ ಪುತ್ರರಿಗಾಗಿ ಅತ್ಯಂತ ಶೋಕಾತುರಳಾಗಿರುವಳು. ಆ ಮಕ್ಕಳು ನಿನ್ನ ಬಳಿಯಲ್ಲೇ ಇದ್ದಾರೆ. ॥48-49॥

(ಶ್ಲೋಕ-50)

ಮೂಲಮ್

ಇತ ಏತಾನ್ಪ್ರಣೇಷ್ಯಾಮೋ ಮಾತೃಶೋಕಾಪನುತ್ತಯೇ ।
ತತಃ ಶಾಪಾದ್ವಿನಿರ್ಮುಕ್ತಾ ಲೋಕಂ ಯಾಸ್ಯಂತಿ ವಿಜ್ವರಾಃ ॥

ಅನುವಾದ

ಆದ್ದರಿಂದ ನಾವು ನಮ್ಮ ತಾಯಿಯ ಶೋಕವನ್ನು ದೂರಗೊಳಿಸಲಿಕ್ಕಾಗಿ ಇವರನ್ನು ಇಲ್ಲಿಂದ ಕೊಂಡುಹೋಗುವೆವು. ಅನಂತರ ಇವರು ಶಾಪದಿಂದ ಮುಕ್ತರಾಗಿ ಆನಂದಭರಿತರಾಗಿ ತಮ್ಮ ಲೋಕಗಳಿಗೆ ಹೊರಟು ಹೋಗುವರು. ॥50॥

(ಶ್ಲೋಕ-51)

ಮೂಲಮ್

ಸ್ಮರೋದ್ಗೀಥಃ ಪರಿಷ್ವಂಗಃ ಪತಂಗಃ ಕ್ಷುದ್ರಭೃದ್ಘಣೀ ।
ಷಡಿಮೇ ಮತ್ಪ್ರಸಾದೇನ ಪುನರ್ಯಾಸ್ಯಂತಿ ಸದ್ಗತಿಮ್ ॥

ಅನುವಾದ

ಈಗ ನಿನ್ನ ಬಳಿಯಲ್ಲಿರುವ ಸ್ಮರ, ಉದ್ಗೀಥ, ಪರಿಷ್ವಂಗ, ಪತಂಗ, ಕ್ಷುದ್ರಭೃತ್ ಮತ್ತು ಘೃಣಿ - ಎಂಬ ಈ ಮಕ್ಕಳು. ನನ್ನ ಕೃಪೆಯಿಂದಾಗಿ ಪುನಃ ಅವರಿಗೆ ಸದ್ಗತಿಯು ದೊರೆಯುತ್ತದೆ. ॥51॥

(ಶ್ಲೋಕ-52)

ಮೂಲಮ್

ಇತ್ಯುಕ್ತ್ವಾ ತಾನ್ಸಮಾದಾಯ ಇಂದ್ರಸೇನೇನ ಪೂಜಿತೌ ।
ಪುನರ್ದ್ವಾರವತೀಮೇತ್ಯ ಮಾತುಃ ಪುತ್ರಾನಯಚ್ಛತಾಮ್ ॥

ಅನುವಾದ

ಪರೀಕ್ಷಿತನೇ! ಇಷ್ಟು ಹೇಳಿ ಭಗವಾನ್ ಶ್ರೀಕೃಷ್ಣನು ಸುಮ್ಮನಾದನು. ದೈತ್ಯರಾಜ ಬಲಿಚಕ್ರವರ್ತಿಯು ಪುನಃ ಅವರನ್ನು ಪೂಜಿಸಿದನು. ಅನಂತರ ಶ್ರೀಕೃಷ್ಣ ಬಲರಾಮರು ಆ ಮಕ್ಕಳನ್ನು ಕರೆದುಕೊಂಡು ದ್ವಾರಕೆಗೆ ಬಂದು ತಾಯಿ ದೇವಕಿಗೆ ಒಪ್ಪಿಸಿದರು. ॥52॥

(ಶ್ಲೋಕ-53)

ಮೂಲಮ್

ತಾನ್ದೃಷ್ಟ್ವಾ ಬಾಲಕಾನ್ ದೇವೀ ಪುತ್ರಸ್ನೇಹಸ್ನುತಸ್ತನೀ ।
ಪರಿಷ್ವಜ್ಯಾಂಕಮಾರೋಪ್ಯ ಮೂರ್ಧ್ನ್ಯಜಿಘ್ರದಭೀಕ್ಷ್ಣಶಃ ॥

ಅನುವಾದ

ಆ ಬಾಲಕರನ್ನು ನೋಡಿ ದೇವಕೀದೇವಿಯ ಹೃದಯ ವಾತ್ಸಲ್ಯದಿಂದ ತುಂಬಿಹೋಗಿ ಸ್ತನಗಳಿಂದ ಹಾಲು ಒಸರತೊಡಗಿತು. ಆಕೆಯು ಮತ್ತೆ-ಮತ್ತೆ ಅವರನ್ನು ಆಲಿಂಗಿಸಿ ತೊಡೆಯಲ್ಲಿ ಕುಳ್ಳಿರಿಸಿಕೊಂಡು ನೆತ್ತಿಯನ್ನು ಆಘ್ರಾಣಿಸಿದಳು. ॥53॥

(ಶ್ಲೋಕ-54)

ಮೂಲಮ್

ಅಪಾಯಯತ್ ಸ್ತನಂ ಪ್ರೀತಾ ಸುತಸ್ಪರ್ಶಪರಿಪ್ಲುತಾ ।
ಮೋಹಿತಾ ಮಾಯಯಾ ವಿಷ್ಣೋರ್ಯಯಾ ಸೃಷ್ಟಿಃ ಪ್ರವರ್ತತೇ ॥

ಅನುವಾದ

ಪುತ್ರರ ಸ್ಪರ್ಶದಿಂದ ಆನಂದಸಾಗರದಲ್ಲಿ ಮುಳುಗಿ ಹೋಗಿದ್ದ ದೇವಕಿಯು ಅವರೆಲ್ಲರಿಗೂ ಸ್ತನ್ಯಪಾನ ಮಾಡಿಸಿದಳು. ಆ ಸಮಯದಲ್ಲಿ ಆಕೆಯು ಸೃಷ್ಟಿಗೆ ಮೂಲ ಕಾರಣನಾದ ಭಗವಾನ್ ಶ್ರೀವಿಷ್ಣುವಿನ ಯೋಗಮಾಯೆಯಿಂದ ಮೋಹಿತಳಾಗಿದ್ದಳು. ॥54॥

(ಶ್ಲೋಕ-55)

ಮೂಲಮ್

ಪೀತ್ವಾಮೃತಂ ಪಯಸ್ತಸ್ಯಾಃ ಪೀತಶೇಷಂ ಗದಾಭೃತಃ ।
ನಾರಾಯಣಾಂಗಸಂಸ್ಪರ್ಶಪ್ರತಿಲಬ್ಧಾತ್ಮದರ್ಶನಾಃ ॥

ಅನುವಾದ

ಪರೀಕ್ಷಿತನೇ! ದೇವಕಿಯ ಎದೆ ಹಾಲು ಶ್ರೀಕೃಷ್ಣನು ಉಂಡು ಮಿಕ್ಕಿದ್ದರಿಂದ ಅದು ಅಮೃತಮಯವೇ ಆಗಿತ್ತು. ಆ ಬಾಲಕರೂ ಆ ಅಮೃತಮಯ ಎದೆಹಾಲನ್ನು ಕುಡಿದುದರಿಂದಲೂ, ಶ್ರೀಕೃಷ್ಣನ ಅಂಗಸ್ಪರ್ಶದಿಂದಲೂ ಯೋಗಿಗಳಿಗೂ ದುರ್ಲಭವಾದ ಆತ್ಮ ಸಾಕ್ಷಾತ್ಕಾರವನ್ನೇ ಪಡೆದುಕೊಂಡರು. ॥55॥

(ಶ್ಲೋಕ-56)

ಮೂಲಮ್

ತೇ ನಮಸ್ಕೃತ್ಯ ಗೋವಿಂದಂ ದೇವಕೀಂ ಪಿತರಂ ಬಲಮ್ ।
ಮಿಷತಾಂ ಸರ್ವಭೂತಾನಾಂ ಯಯುರ್ಧಾಮ ದಿವೌಕಸಾಮ್ ॥

ಅನುವಾದ

ಅನಂತರ ಆ ಬಾಲಕರು ಭಗವಾನ್ ಶ್ರೀಕೃಷ್ಣನಿಗೆ, ತಾಯಿ ದೇವಕಿಗೆ, ತಂದೆ ವಸುದೇವನಿಗೆ ಮತ್ತು ಬಲರಾಮನಿಗೆ ನಮಸ್ಕಾರ ಮಾಡಿ ಎಲ್ಲರೂ ನೋಡುತ್ತಿರುವಂತೆಯೇ ದೇವಲೋಕಕ್ಕೆ ಹೊರಟುಹೋದರು. ॥56॥

(ಶ್ಲೋಕ-57)

ಮೂಲಮ್

ತಂ ದೃಷ್ಟ್ವಾ ದೇವಕೀ ದೇವೀ ಮೃತಾಗಮನನಿರ್ಗಮಮ್ ।
ಮೇನೇ ಸುವಿಸ್ಮಿತಾ ಮಾಯಾಂ ಕೃಷ್ಣಸ್ಯ ರಚಿತಾಂ ನೃಪ ॥

ಅನುವಾದ

ಪರೀಕ್ಷಿತನೇ! ದೇವಕೀದೇವಿಯು ತನ್ನ ಸತ್ತು ಹೋಗಿರುವ ಮಕ್ಕಳು ಮರಳಿ ಬಂದರು ಮತ್ತು ಪುನಃ ಹೊರಟುಹೋದರು ಇದನ್ನು ಕಂಡು ಅತ್ಯಂತ ವಿಸ್ಮಿತಳಾದಳು. ಇದು ಶ್ರೀಕೃಷ್ಣನ ಯಾವುದೋ ಲೀಲಾ ಕೌಶಲ್ಯವೇ ಆಗಿರಬೇಕೆಂದು ಆಕೆಯು ನಿಶ್ಚಯಿಸಿಕೊಂಡಳು. ॥57॥

(ಶ್ಲೋಕ-58)

ಮೂಲಮ್

ಏವಂವಿಧಾನ್ಯದ್ಭುತಾನಿ ಕೃಷ್ಣಸ್ಯ ಪರಮಾತ್ಮನಃ ।
ವೀರ್ಯಾಣ್ಯನಂತವೀರ್ಯಸ್ಯ ಸಂತ್ಯನಂತಾನಿ ಭಾರತ ॥

ಅನುವಾದ

ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಸಾಕ್ಷಾತ್ ಪರಮಾತ್ಮನಾಗಿದ್ದು, ಅವನ ಶಕ್ತಿ ಅನಂತವಾಗಿದೆ. ಅವನ ಇಂತಹ ಅದ್ಭುತ ಚರಿತ್ರೆಗಳು ಅಪಾರವಾಗಿವೆ. ಎಷ್ಟು ಹೇಳಿದರೂ ಮುಗಿಯದಷ್ಟು ಅವನ ಲೀಲಾಪ್ರಸಂಗಗಳಿವೆ. ॥58॥

ಮೂಲಮ್

(ಶ್ಲೋಕ-59)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಯ ಇದಮನುಶೃಣೋತಿ ಶ್ರಾವಯೇದ್ವಾ ಮುರಾರೇ-
ಶ್ಚರಿತಮಮೃತಕೀರ್ತೇರ್ವರ್ಣಿತಂ ವ್ಯಾಸಪುತ್ರೈಃ ।
ಜಗದಘಭಿದಲಂ ತದ್ ಭಕ್ತಸತ್ಕರ್ಣಪೂರಂ
ಭಗವತಿ ಕೃತಚಿತ್ತೋ ಯಾತಿ ತತ್ ಕ್ಷೇಮಧಾಮ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಶೌನಕಾದಿ ಮಹರ್ಷಿಗಳೇ! ಭಗವಾನ್ ಶ್ರೀಕೃಷ್ಣನ ಕೀರ್ತಿಯು ಅಮರವೂ, ಅಮೃತಮಯವೂ ಆಗಿದೆ. ವ್ಯಾಸನಂದನರಾದ ಭಗವಾನ್ ಶ್ರೀಶುಕಮುನಿಯಿಂದ ಹೇಳಲ್ಪಟ್ಟ ಅವನ ಚರಿತಾಮೃತವು ಭಕ್ತಜನರ ಪಾಪ ನಿವಾರಕವೂ, ಶ್ರೋತ್ರಾನಂದಕರವೂ ಆಗಿದೆ. ಇದನ್ನು ಶ್ರವಣಿಸುವವನ, ಇತರರಿಗೆ ಹೇಳುವವನ, ಚಿತ್ತ ವೃತ್ತಿಗಳು ಭಗವಂತನಲ್ಲಿ ನೆಲೆಸಿ ಪರಮಾತ್ಮನ ಪರಮಪದವನ್ನು ಪಡೆಯುವನು. ॥59॥

ಅನುವಾದ (ಸಮಾಪ್ತಿಃ)

ಎಂಭತ್ತೈದನೆಯ ಅಧ್ಯಾಯವು ಮುಗಿಯಿತು. ॥85॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ
ಮೃತಾಗ್ರಜಾನಯನಂ ನಾಮ ಪಂಚಾಶೀತಿತಮೋಽಧ್ಯಾಯಃ ॥85॥