೮೪

[ಏಂಭತ್ತನಾಲ್ಕನೇಯ ಅಧ್ಯಾಯ]

ಭಾಗಸೂಚನಾ

ವಸುದೇವನ ಯಜ್ಞೋತ್ಸವವು

ಮೂಲಮ್

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಶ್ರುತ್ವಾ ಪೃಥಾ ಸುಬಲಪುತ್ರ್ಯಥ ಯಾಜ್ಞಸೇನೀ
ಮಾಧವ್ಯಥ ಕ್ಷಿತಿಪಪತ್ನ್ಯ ಉತ ಸ್ವಗೋಪ್ಯಃ ।
ಕೃಷ್ಣೇಖಿಲಾತ್ಮನಿ ಹರೌ ಪ್ರಣಯಾನುಬಂಧಂ
ಸರ್ವಾ ವಿಸಿಸ್ಮ್ಯುರಲಮಶ್ರುಕಲಾಕುಲಾಕ್ಷ್ಯಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಸರ್ವಾತ್ಮನಾದ ಭಕ್ತಜನ ಭಯಾಪಹಾರಿಯಾದ ಭಗವಾನ್ ಶ್ರೀಕೃಷ್ಣನ ಕುರಿತು ಅವರ ಪತ್ನಿಯರಿಗೆ ಇರುವ ಪ್ರೇಮಾನುಬಂಧವನ್ನು ಅವರ ಬಾಯಿಯಿಂದಲೇ ಕೇಳಿದ ಕುಂತೀ, ಗಾಂಧಾರಿ, ದ್ರೌಪದಿ, ಸುಭದ್ರೆ, ಇತರ ರಾಜಪತ್ನಿಯರು ಮತ್ತು ಭಗವಂತನ ಪ್ರಿಯತಮೆಯರಾದ ಗೋಪಿಯರು - ಅವರ ಅಲೌಕಿಕ ಪ್ರೇಮವನ್ನು ನೋಡಿ ಅತ್ಯಂತ ಮುಗ್ಧರಾಗಿ ಅಚ್ಚರಿಗೊಂಡರು. ಎಲ್ಲರ ಕಣ್ಣುಗಳಲ್ಲಿಯೂ ಪ್ರೇಮಾಶ್ರುಗಳು ಸುರಿದವು. ॥1॥

ಮೂಲಮ್

(ಶ್ಲೋಕ-2)
ಇತಿ ಸಂಭಾಷಮಾಣಾಸು ಸೀಭಿಃ ಸೀಷು ನೃಭಿರ್ನೃಷು ।
ಆಯಯುರ್ಮುನಯಸ್ತತ್ರ ಕೃಷ್ಣರಾಮದಿದೃಕ್ಷಯಾ ॥

ಅನುವಾದ

ಈ ಪ್ರಕಾರವಾಗಿ ಸ್ತ್ರೀಯರೊಂದಿಗೆ ಸ್ತ್ರೀಯರೂ, ಪುರುಷರೊಂದಿಗೆ ಪುರುಷರೂ ಮಾತನಾಡಿಕೊಂಡಿರುವಾಗಲೇ ಅನೇಕ ಋಷಿ-ಮುನಿಗಳು ಭಗವಾನ್ ಶ್ರೀಕೃಷ್ಣನನ್ನು ಮತ್ತು ಬಲರಾಮನನ್ನು ದರ್ಶನ ಮಾಡಲು ಅಲ್ಲಿಗೆ ಬಂದರು. ॥2॥

ಮೂಲಮ್

(ಶ್ಲೋಕ-3)
ದ್ವೈಪಾಯನೋ ನಾರದಶ್ಚ ಚ್ಯವನೋ ದೇವಲೋಸಿತಃ ।
ವಿಶ್ವಾಮಿತ್ರಃ ಶತಾನಂದೋ ಭರದ್ವಾಜೋಥ ಗೌತಮಃ ॥
(ಶ್ಲೋಕ-4)
ರಾಮಃ ಸಶಿಷ್ಯೋ ಭಗವಾನ್ ವಸಿಷ್ಠೋ ಗಾಲವೋ ಭೃಗುಃ ।
ಪುಲಸ್ತ್ಯಃ ಕಶ್ಯಪೋತ್ರಿಶ್ಚ ಮಾರ್ಕಂಡೇಯೋ ಬೃಹಸ್ಪತಿಃ ॥
(ಶ್ಲೋಕ-5)
ದ್ವಿತಸಿತಶ್ಚೈಕತಶ್ಚ ಬ್ರಹ್ಮಪುತ್ರಾಸ್ತಥಾಂಗಿರಾಃ ।
ಅಗಸ್ತ್ಯೋ ಯಾಜ್ಞವಲ್ಕ್ಯಶ್ಚ ವಾಮದೇವಾದಯೋಪರೇ ॥

ಅನುವಾದ

ಅವರಲ್ಲಿ ಶ್ರೀಕೃಷ್ಣ ದ್ವೈಪಾಯನ ವ್ಯಾಸರು, ದೇವರ್ಷಿನಾರದರು, ಚ್ಯವನ, ದೇವಲ, ಅಸಿತ, ವಿಶ್ವಾಮಿತ್ರ, ಶತಾನಂದ, ಭರದ್ವಾಜ, ಗೌತಮ, ತನ್ನ ಶಿಷ್ಯನೊಂದಿಗೆ ಭಗವಾನ್ ಪರಶುರಾಮ, ವಸಿಷ್ಠ, ಗಾಲವ, ಭೃಗು, ಪುಲಸ್ತ್ಯ, ಕಶ್ಯಪ, ಅತ್ರಿ, ಮಾರ್ಕಂಡೇಯ, ಬೃಹಸ್ಪತಿ, ದ್ವಿತ, ತ್ರಿತ, ಏಕತ, ಸನಕ, ಸನಂದನ, ಸನಾತನ, ಸನತ್ಕುಮಾರ, ಅಂಗಿರಸ್ಸು, ಅಗಸ್ತ್ಯ, ಯಾಜ್ಞವಲ್ಕ್ಯ ಮತ್ತು ವಾಮದೇವ - ಇವರು ಪ್ರಧಾನರಾಗಿದ್ದರು. ॥3-5॥

ಮೂಲಮ್

(ಶ್ಲೋಕ-6)
ತಾನ್ ದೃಷ್ಟ್ವಾ ಸಹಸೋತ್ಥಾಯ ಪ್ರಾಗಾಸೀನಾ ನೃಪಾದಯಃ ।
ಪಾಂಡವಾಃ ಕೃಷ್ಣರಾವೌ ಚ ಪ್ರಣೇಮುರ್ವಿಶ್ವವಂದಿತಾನ್ ॥

ಅನುವಾದ

ಋಷಿಗಳನ್ನು ನೋಡುತ್ತಲೇ ಮೊದಲಿನಿಂದ ಕುಳಿತಿದ್ದ ರಾಜರುಗಳೂ, ಯುಧಿಷ್ಠಿರಾದಿ ಪಾಂಡವರೂ, ಭಗವಾನ್ ಶ್ರೀಕೃಷ್ಣ ಮತ್ತು ಬಲರಾಮರೂ ಎದ್ದು ನಿಂತು ವಿಶ್ವವಂದಿತರಾದ ಋಷಿಗಳಿಗೆ ನಮಸ್ಕರಿಸಿದರು. ॥6॥

ಮೂಲಮ್

(ಶ್ಲೋಕ-7)
ತಾನಾನರ್ಚುರ್ಯಥಾ ಸರ್ವೇ ಸಹರಾಮೋಚ್ಯುತೋರ್ಚಯತ್ ।
ಸ್ವಾಗತಾಸನಪಾದ್ಯಾರ್ಘ್ಯಮಾಲ್ಯಧೂಪಾನುಲೇಪನೈಃ ॥

ಅನುವಾದ

ಅನಂತರ ಸಮಸ್ತ ರಾಜರೂ, ಬಲರಾಮನೊಂದಿಗೆ ಭಗವಾನ್ ಶ್ರೀಕೃಷ್ಣನೂ ಆ ಋಷಿಗಳಿಗೆಲ್ಲರಿಗೂ ಸ್ವಾಗತ, ಆಸನ, ಅರ್ಘ್ಯ, ಪಾದ್ಯ, ಹೂವಿನ ಹಾರ, ಧೂಪ, ಚಂದನಾದಿಗಳಿಂದ ವಿಧಿವತ್ತಾಗಿ ಪೂಜಿಸಿದರು. ॥7॥

ಮೂಲಮ್

(ಶ್ಲೋಕ-8)
ಉವಾಚ ಸುಖಮಾಸೀನಾನ್ ಭಗವಾನ್ ಧರ್ಮಗುಪ್ತನುಃ ।
ಸದಸಸ್ತಸ್ಯ ಮಹತೋ ಯತವಾಚೋನುಶೃಣ್ವತಃ ॥

ಅನುವಾದ

ಋಷಿ-ಮುನಿಗಳು ಸುಖಾಸನದಲ್ಲಿ ಕುಳಿತನಂತರ, ಸಭಾಸದರೂ ಮೌನದಿಂದ ಕುಳಿತಿರಲಾಗಿ, ಸಮಸ್ತರೂ ಕೇಳುವಂತೆ ಧರ್ಮದ ರಕ್ಷಣೆಗಾಗಿಯೇ ಅವತರಿಸಿದ್ದ ಭಗವಾನ್ ಶ್ರೀಕೃಷ್ಣನು ಇಂತೆಂದನು - ॥8॥

ಮೂಲಮ್

(ಶ್ಲೋಕ-9)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಅಹೋ ವಯಂ ಜನ್ಮಭೃತೋ ಲಬ್ಧಂ ಕಾರ್ತ್ಸ್ನ್ಯೇನ ತತ್ಫಲಮ್ ।
ದೇವಾನಾಮಪಿ ದುಷ್ಪ್ರಾಪಂ ಯದ್ಯೋಗೇಶ್ವರದರ್ಶನಮ್ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ಪೂಜ್ಯರಾದ ಋಷಿ ಶ್ರೇಷ್ಠರೇ! ನಾವಿಂದು ಧನ್ಯರಾದೆವು. ನಮ್ಮ ಜನ್ಮವು ಸಾರ್ಥಕ್ಯವನ್ನು ಹೊಂದಿತು. ಹುಟ್ಟಿನ ಪೂರ್ಣಲವನ್ನು ಇಂದು ಪಡೆದಂತಾಯಿತು. ದೊಡ್ಡ-ದೊಡ್ಡ ದೇವತೆಗಳಿಗೂ ಅತ್ಯಂತ ದುರ್ಲಭವಾದ ಮಹಾಯೋಗೇಶ್ವರರ ದರ್ಶನವು ನಮಗೆ ನಿರಾಯಾಸವಾಗಿ ಪ್ರಾಪ್ತವಾಯಿತು.॥9॥

ಮೂಲಮ್

(ಶ್ಲೋಕ-10)
ಕಿಂ ಸ್ವಲ್ಪತಪಸಾಂ ನೃಣಾಮರ್ಚಾಯಾಂ ದೇವಚಕ್ಷುಷಾಮ್ ।
ದರ್ಶನಸ್ಪರ್ಶನಪ್ರಶ್ನಪ್ರಹ್ವಪಾದಾರ್ಚನಾದಿಕಮ್ ॥

ಅನುವಾದ

ಸ್ವಲ್ಪವೇ ತಪಸ್ಸು ಮಾಡುವವರಿಗೆ ಮತ್ತು ಇಷ್ಟದೇವತೆಯನ್ನು ಸಮಸ್ತ ಪ್ರಾಣಿಗಳ ಹೃದಯದಲ್ಲಿ ನೋಡದೆ ಕೇವಲ ವಿಗ್ರಹಗಳಲ್ಲೇ ದೇವರನ್ನು ಕಾಣುವವರಿಗೆ ತಮ್ಮಂತಹ ಮಹಾತ್ಮರ ದರ್ಶನ, ಸ್ಪರ್ಶನ, ಕುಶಲಪ್ರಶ್ನೆ, ಪ್ರಣಾಮ, ಪಾದಪೂಜೆ ಮೊದಲಾದವುಗಳ ಸದಾವಕಾಶ ಹೇಗೆ ತಾನೇ ದೊರೆಯಬಲ್ಲದು? ॥10॥

ಮೂಲಮ್

(ಶ್ಲೋಕ-11)
ನ ಹ್ಯಮ್ಮಯಾನಿ ತೀರ್ಥಾನಿ ನ ದೇವಾ ಮೃಚ್ಛಿಲಾಮಯಾಃ ।
ತೇ ಪುನಂತ್ಯುರುಕಾಲೇನ ದರ್ಶನಾದೇವ ಸಾಧವಃ ॥

ಅನುವಾದ

ಕೇವಲ ನೀರು ತೀರ್ಥ ವೆನಿಸುವುದಿಲ್ಲ. ಕೇವಲ ಮಣ್ಣಿನ ಅಥವಾ ಕಲ್ಲಿನ ವಿಗ್ರಹಗಳು ದೇವತೆಗಳಾಗುವುದಿಲ್ಲ. ಸಂತ-ಸತ್ಪುರಷರೇ ನಿಜವಾಗಿ ತೀರ್ಥರೂಪರು ಮತ್ತು ದೇವತೆಗಳಾಗಿದ್ದಾರೆ. ಏಕೆಂದರೆ, ತೀರ್ಥಗಳು, ದೇವತೆಗಳು ಬಹಳ ಸಮಯದವರೆಗೆ ಸೇವಿಸಿದಾಗಲೇ ಅವು ಪವಿತ್ರವಾಗಿಸಬಲ್ಲವು. ಆದರೆ ಸತ್ಪುರುಷರು ದರ್ಶನಮಾತ್ರದಿಂದಲೇ ಕೃತಾರ್ಥರಾಗಿಸುತ್ತಾರೆ. ॥11॥

ಮೂಲಮ್

(ಶ್ಲೋಕ-12)
ನಾಗ್ನಿರ್ನ ಸೂರ್ಯೋ ನ ಚ ಚಂದ್ರತಾರಕಾ
ನ ಭೂರ್ಜಲಂ ಖಂ ಶ್ವಸನೋಥ ವಾಙ್ಮನಃ ।
ಉಪಾಸಿತಾ ಭೇದಕೃತೋ ಹರಂತ್ಯಘಂ
ವಿಪಶ್ಚಿತೋ ಘ್ನಂತಿ ಮುಹೂರ್ತಸೇವಯಾ ॥

ಅನುವಾದ

ಅಗ್ನಿ, ಸೂರ್ಯ, ಚಂದ್ರ, ತಾರೆಗಳು, ಪೃಥಿವಿ, ಜಲ, ಆಕಾಶ, ವಾಯು, ವಾಣಿ ಮತ್ತು ಮನಸ್ಸಿನ ಅಧಿಷ್ಠಾತೃ ದೇವತೆಗಳು - ಇವುಗಳ ಉಪಾಸನೆ ಮಾಡಿದರೂ ಪಾಪವೂ ಪೂರ್ಣವಾಗಿ ನಾಶವಾಗಲಾರದು. ಏಕೆಂದರೆ, ಅವರ ಉಪಾಸನೆಯಿಂದ ಭೇದಬುದ್ಧಿಯು ನಾಶವಾಗದೇ ಇನ್ನೂ ಬೆಳೆಯುತ್ತದೆ. ಆದರೆ ಎರಡುಗಳಿಗೆಯಾದರೂ ಜ್ಞಾನೀಮಹಾಪುರುಷರ ಸೇವೆ ಮಾಡಿದರೂ ಸಕಲ ಪಾಪಗಳು ಅಳಿದು ಹೋಗುತ್ತವೆ. ಏಕೆಂದರೆ, ಅವರು ಭೇದ-ಬುದ್ಧಿಯ ವಿನಾಶಕರಾಗಿದ್ದಾರೆ. ॥12॥

ಮೂಲಮ್

(ಶ್ಲೋಕ-13)
ಯಸ್ಯಾತ್ಮಬುದ್ಧಿಃ ಕುಣಪೇ ತ್ರಿಧಾತುಕೇ
ಸ್ವಧೀಃ ಕಲತ್ರಾದಿಷು ಭೌಮ ಇಜ್ಯಧೀಃ ।
ಯತ್ತೀರ್ಥಬುದ್ಧಿಃ ಸಲಿಲೇ ನ ಕರ್ಹಿಚಿ-
ಜ್ಜನೇಷ್ವಭಿಜ್ಞೇಷು ಸ ಏವ ಗೋಖರಃ ॥

ಅನುವಾದ

ಮಹಾತ್ಮರೇ ಮತ್ತು ಸಭಾಸದರೇ! ಯಾವ ಮನುಷ್ಯರಿಗೆ ವಾತ, ಪಿತ್ತ, ಕಫ - ಈ ಮೂರು ಧಾತುಗಳಿಂದ ಉಂಟಾದ ಶವದಂತಿರುವ ಶರೀರದಲ್ಲೇ ತಾನೆಂಬ ಅಭಿಮಾನವಿರುತ್ತದೋ, ಹೆಂಡತಿ ಮಕ್ಕಳು ಇವರನ್ನೇ ತನ್ನವರೆಂದು ತಿಳಿಯುತ್ತಾರೋ, ಕಲ್ಲು, ಮಣ್ಣು, ಕಟ್ಟಿಗೆ ಮೊದಲಾದ ಪಾರ್ಥಿವ ವಿಕಾರಗಳನ್ನೇ ಇಷ್ಟದೇವರೆಂದು ತಿಳಿಯುತ್ತಾರೋ ಜ್ಞಾನೀಪುರುಷರಲ್ಲದೆ ಕೇವಲ ನೀರನ್ನೇ ತೀರ್ಥವೆಂದು ತಿಳಿಯುತ್ತಾರೋ, ಅಂತಹವರು ಮನುಷ್ಯರಾಗಿದ್ದರೂ ಪಶುಗಳಲ್ಲಿಯೂ ನಿಮ್ನ ಕೋಟಿಯವರೇ ಆಗಿದ್ದಾರೆ. ॥13॥

ಮೂಲಮ್

(ಶ್ಲೋಕ-14)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ನಿಶಮ್ಯೇತ್ಥಂ ಭಗವತಃ ಕೃಷ್ಣಸ್ಯಾಕುಂಠಮೇಧಸಃ ।
ವಚೋ ದುರನ್ವಯಂ ವಿಪ್ರಾಸ್ತೂಷ್ಣೀಮಾಸನ್ಭ್ರಮದ್ಧಿಯಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಅಖಂಡ ಜ್ಞಾನಸಂಪನ್ನನಾಗಿರುವನು. ಅವನ ಈ ಗೂಢವಾದ ಮಾತುಗಳನ್ನು ಕೇಳಿ ಎಲ್ಲ ಋಷಿಮುನಿಗಳು ಸಮ್ಮನಾಗಿಬಿಟ್ಟರು. ಭಗವಂತನು ಹೀಗೆ ಏಕೆ ಹೇಳುತ್ತಿರುವನೆಂದು ಅರಿಯದೆ ಅವರ ಬುದ್ಧಿಗೆ ಮಂಕುಕವಿದಂತಾಯಿತು. ॥14॥

ಮೂಲಮ್

(ಶ್ಲೋಕ-15)
ಚಿರಂ ವಿಮೃಶ್ಯ ಮುನಯ ಈಶ್ವರಸ್ಯೇಶಿತವ್ಯತಾಮ್ ।
ಜನಸಂಗ್ರಹ ಇತ್ಯೂಚುಃ ಸ್ಮಯಂತಸ್ತಂ ಜಗದ್ಗುರುಮ್ ॥

ಅನುವಾದ

ಅವರು ಬಹಳ ಹೊತ್ತು ವಿಚಾರಮಾಡಿದ ಬಳಿಕ ಭಗವಂತನು ಸರ್ವೇಶ್ವರನಾಗಿದ್ದರೂ ಈ ರೀತಿಯ ಸಾಮಾನ್ಯ ಕರ್ಮಪರತಂತ್ರ ಜೀವರಂತೆ ವ್ಯವಹರಿಸುವುದು ಕೇವಲ ಲೋಕಸಂಗ್ರಹಕ್ಕಾಗಿಯೇ ಇದೆ ಎಂದು ನಿಶ್ಚಯಿಸಿ, ಅವರೆಲ್ಲರೂ ಮುಗುಳ್ನಗುತ್ತಾ ಜಗದ್ಗುರು ಭಗವಾನ್ ಶ್ರೀಕೃಷ್ಣನಲ್ಲಿ ಹೇಳ ತೊಡಗಿದರು. ॥15॥

ಮೂಲಮ್

(ಶ್ಲೋಕ-16)

ಮೂಲಮ್ (ವಾಚನಮ್)

ಮುನಯ ಊಚುಃ

ಮೂಲಮ್

ಯನ್ಮಾಯಯಾ ತತ್ತ್ವವಿದುತ್ತಮಾ ವಯಂ
ವಿಮೋಹಿತಾ ವಿಶ್ವಸೃಜಾಮಧೀಶ್ವರಾಃ ।
ಯದೀಶಿತವ್ಯಾಯತಿ ಗೂಢ ಈಹಯಾ
ಅಹೋ ವಿಚಿತ್ರಂ ಭಗವದ್ವಿಚೇಷ್ಟಿತಮ್ ॥

ಅನುವಾದ

ಮುನಿಗಳು ಹೇಳುತ್ತಾರೆ — ಭಗವಂತಾ! ನಿನ್ನ ಮಾಯೆಯಿಂದ ಪ್ರಜಾಪತಿಗಳು, ಅಧೀಶ್ವರರಾದ ಮರೀಚಿಯೇ ಮೊದಲಾದವರು ಹಾಗೂ ದೊಡ್ಡ-ದೊಡ್ಡ ತತ್ತ್ವಜ್ಞಾನಿಗಳಾದ ನಾವುಗಳು ಮೋಹಿತರಾಗಿಬಿಟ್ಟಿದ್ದೇವೆ. ನೀನು ಸಾಕ್ಷಾತ್ ಭಗವಂತನೇ ಆಗಿದ್ದರೂ ಮನುಷ್ಯರಂತಹ ಚೇಷ್ಟೆಗಳಿಂದ ನಿನ್ನನ್ನು ಅಡಿಗಿಸಿಟ್ಟುಕೊಂಡು ಜೀವಿಗಳಂತೆ ಆಚರಿಸುತ್ತಿರುವೆಯಲ್ಲ! ಭಗವಂತಾ! ನಿಜವಾಗಿಯೂ ನಿನ್ನ ಲೀಲೆಯು ವಿಚಿತ್ರವೂ ಆಶ್ಚರ್ಯಮಯವೂ ಆಗಿದೆ. ॥16॥

ಮೂಲಮ್

(ಶ್ಲೋಕ-17)
ಅನೀಹ ಏತದ್ಬಹುಧೈಕ ಆತ್ಮನಾ
ಸೃಜತ್ಯವತ್ಯತ್ತಿ ನ ಬಧ್ಯತೇ ಯಥಾ ।
ಭೌಮೈರ್ಹಿ ಭೂಮಿರ್ಬಹುನಾಮರೂಪಿಣೀ
ಅಹೋ ವಿಭೂಮ್ನಶ್ಚರಿತಂ ವಿಡಂಬನಮ್ ॥

ಅನುವಾದ

ಪೃಥಿವಿಯು ತನ್ನ ವಿಕಾರಗಳಾದ ವೃಕ್ಷ, ಕಲ್ಲು, ಘಟ ಮೊದಲಾದವುಗಳ ಮೂಲಕ ಅನೇಕ ನಾಮ-ರೂಪಗಳನ್ನು ಪಡೆಯುತ್ತದೆ, ವಾಸ್ತವವಾಗಿ ಅದು ಒಂದೇ ಆಗಿದೆ. ಹಾಗೆಯೇ ನೀನು ಏಕನೂ, ಚೇಷ್ಟಾರಹಿತನೂ ಆಗಿದ್ದರೂ ಅನೇಕ ರೂಪಗಳನ್ನು ಧರಿಸುತ್ತೀಯೆ. ನೀನು-ನಿನ್ನಿಂದಲೇ ಈ ಜಗತ್ತಿನ ರಚನೆ, ರಕ್ಷಣೆ ಮತ್ತು ಸಂಹಾರ ಮಾಡುತ್ತಿರುವೆ. ಆದರೆ ಇದೆಲ್ಲವನ್ನು ಮಾಡುತ್ತಿದ್ದರೂ ಈ ಕರ್ಮಗಳಿಂದ ಲಿಪ್ತನಾಗುವುದಿಲ್ಲ. ಸಜಾತೀಯ, ವಿಜಾತೀಯ ಮತ್ತು ಸ್ವಗತಭೇದ ಶೂನ್ಯನೂ, ಏಕರಸನೂ, ಅನಂತನೂ ಆದ ನಿನ್ನ ಈ ವಿಚಿತ್ರ ಚರಿತ್ರವು ಲೀಲೆಯಲ್ಲದೆ ಮತ್ತೇನು? ॥17॥

ಮೂಲಮ್

(ಶ್ಲೋಕ-18)
ಅಥಾಪಿ ಕಾಲೇ ಸ್ವಜನಾಭಿಗುಪ್ತಯೇ
ಬಿಭರ್ಷಿ ಸತ್ತ್ವಂ ಖಲನಿಗ್ರಹಾಯ ಚ ।
ಸ್ವಲೀಲಯಾ ವೇದಪಥಂ ಸನಾತನಂ
ವರ್ಣಾಶ್ರಮಾತ್ಮಾ ಪುರುಷಃ ಪರೋ ಭವಾನ್ ॥

ಅನುವಾದ

ಭಗವಂತ! ನೀನು ಪ್ರಕೃತಿಗೆ ಅತೀತನಾದ ಸಾಕ್ಷಾತ್ ಪರಬ್ರಹ್ಮ ಪರಮಾತ್ಮನೇ ಆಗಿದ್ದರೂ ಆಗಾಗ ಭಕ್ತ ಜನರನ್ನು ರಕ್ಷಿಸಲು ಹಾಗೂ ದುಷ್ಟರ ದಮನಕ್ಕಾಗಿ ವಿಶುದ್ಧ ಸತ್ತ್ವಮಯ ಶ್ರೀವಿಗ್ರಹವನ್ನು ಪ್ರಕಟಿಸುತ್ತಿರುವೆ. ನಿನ್ನ ಲೀಲೆಗಳ ಮೂಲಕ ಸನಾತನ ವೈದಿಕ ಧರ್ಮವನ್ನು ರಕ್ಷಿಸುತ್ತಿರುವೆ. ಏಕೆಂದರೆ, ಎಲ್ಲ ವರ್ಣ ಮತ್ತು ಆಶ್ರಮಗಳ ರೂಪದಲ್ಲಿ ನೀನೇ ಸ್ವಯಂ ಪ್ರಕಟನಾಗಿರುವೆ. ॥18॥

ಮೂಲಮ್

(ಶ್ಲೋಕ-19)
ಬ್ರಹ್ಮ ತೇ ಹೃದಯಂ ಶುಕ್ಲಂ ತಪಃಸ್ವಾಧ್ಯಾಯಸಂಯಮೈಃ ।
ಯತ್ರೋಪಲಬ್ಧಂ ಸದ್ವ್ಯಕ್ತಮವ್ಯಕ್ತಂ ಚ ತತಃ ಪರಮ್ ॥

ಅನುವಾದ

ಭಗವಂತ! ವೇದವೇ ನಿನ್ನ ವಿಶುದ್ಧ ಹೃದಯವಾಗಿದೆ. ತಪಸ್ಸು, ಸ್ವಾಧ್ಯಾಯ, ಧಾರಣೆ, ಧ್ಯಾನ ಮತ್ತು ಸಮಾಧಿಯ ಮೂಲಕ ಅದರಲ್ಲೇ ನಿನ್ನ ಸಾಕಾರ-ನಿರಾಕಾರ ಎರಡೂ ರೂಪಗಳ ಅಧಿಷ್ಠಾನ ಸ್ವರೂಪವಾದ ಪರಬ್ರಹ್ಮ ಪರಮಾತ್ಮನ ಸಾಕ್ಷಾತ್ಕಾರವಾಗುತ್ತದೆ. ॥19॥

ಮೂಲಮ್

(ಶ್ಲೋಕ-20)
ತಸ್ಮಾದ್ ಬ್ರಹ್ಮಕುಲಂ ಬ್ರಹ್ಮನ್ ಶಾಸಯೋನೇಸ್ತ್ವಮಾತ್ಮನಃ ।
ಸಭಾಜಯಸಿ ಸದ್ಧಾಮ ತದ್ ಬ್ರಹ್ಮಣ್ಯಾಗ್ರಣೀರ್ಭವಾನ್ ॥

ಅನುವಾದ

ಪರಮಾತ್ಮ! ಬ್ರಾಹ್ಮಣರೇ ವೇದಗಳ ಆಧಾರಭೂತ ನಿನ್ನ ಸ್ವರೂಪದ ಉಪಲಬ್ಧಿಯ ಸ್ಥಾನರಾಗಿದ್ದಾರೆ. ಇದರಿಂದಲೇ ನೀನು ಬ್ರಾಹ್ಮಣರಿಗೆ ಸಮ್ಮಾನ ಕೊಡುವೆ. ಇದರಿಂದಲೆ ನೀನು ಬ್ರಾಹ್ಮಣ ಭಕ್ತರಲ್ಲಿ ಅಗ್ರಗಣ್ಯನಾಗಿರುವೆ. ॥20॥

ಮೂಲಮ್

(ಶ್ಲೋಕ-21)
ಅದ್ಯ ನೋ ಜನ್ಮಸಾಲ್ಯಂ ವಿದ್ಯಾಯಾಸ್ತಪಸೋ ದೃಶಃ ।
ತ್ವಯಾ ಸಂಗಮ್ಯ ಸದ್ಗತ್ಯಾ ಯದಂತಃ ಶ್ರೇಯಸಾಂ ಪರಃ ॥

ಅನುವಾದ

ನೀನು ಸಮಸ್ತವಾದ ಶ್ರೇಯಸ್ಸುಗಳಿಗೂ ಚರಮ ಸ್ಥಾನನಾಗಿರುವೆ. ಸತ್ಪುರುಷರಿಗೆ ಏಕಮಾತ್ರ ಆಶ್ರಯನಾಗಿರುವೆ. ನಿನ್ನನ್ನು ಸೇರಿ ಇಂದು ನಮ್ಮ ಜನ್ಮ, ವಿದ್ಯೆ, ತಪಸ್ಸು ಮತ್ತು ಜ್ಞಾನ-ಇವೆಲ್ಲವೂ ಸಲವಾದುವು. ವಾಸ್ತವವಾಗಿ ಎಲ್ಲದರ ಪರಮ ಫಲವು ನೀನೇ ಆಗಿರುವೆ. ॥21॥

ಮೂಲಮ್

(ಶ್ಲೋಕ-22)
ನಮಸ್ತಸ್ಮೈ ಭಗವತೇ ಕೃಷ್ಣಾಯಾಕುಂಠಮೇಧಸೇ ।
ಸ್ವಯೋಗಮಾಯಯಾಚ್ಛನ್ನಮಹಿಮ್ನೇ ಪರಮಾತ್ಮನೇ ॥

ಅನುವಾದ

ಪ್ರಭುವೇ! ನಿನ್ನ ಜ್ಞಾನವು ಅನಂತವಾಗಿದೆ. ನೀನು ಸಾಕ್ಷಾತ್ ಸಚ್ಚಿದಾನಂದ ಸ್ವರೂಪನಾದ ಪರಬ್ರಹ್ಮ ಪರಮಾತ್ಮ ಭಗವಂತನೇ ಆಗಿರುವೆ. ನೀನು ನಿನ್ನ ಅಚಿಂತ್ಯ ಶಕ್ತಿಯಾದ ಯೋಗಮಾಯೆಯ ಮೂಲಕ ನಿನ್ನ ಮಹಿಮೆಯನ್ನು ಅಡಗಿಸಿಕೊಂಡಿರುವೆ. ಅಂತಹ ನಿನಗೆ ನಾವು ನಮಸ್ಕರಿಸುತ್ತೇವೆ. ॥22॥

ಮೂಲಮ್

(ಶ್ಲೋಕ-23)
ನ ಯಂ ವಿದಂತ್ಯಮೀ ಭೂಪಾ ಏಕಾರಾಮಾಶ್ಚ ವೃಷ್ಣಯಃ ।
ಮಾಯಾಜವನಿಕಾಚ್ಛನ್ನಮಾತ್ಮಾನಂ ಕಾಲಮೀಶ್ವರಮ್ ॥

ಅನುವಾದ

ಈ ಸಭೆಯಲ್ಲಿ ಕುಳಿತಿರುವ ರಾಜರಾಗಲೀ, ನಿನ್ನ ಒಡನಾಡಿಗಳಾಗಿ ನಿನ್ನೊಡನೆ ಆಹಾರ-ವಿಹಾರ ಮಾಡುವ ಯದುವಂಶೀಯರಾಗಲೀ ನಿನ್ನನ್ನು ವಾಸ್ತವವಾಗಿ ತಿಳಿದವರಲ್ಲ. ಏಕೆಂದರೆ, ನೀನು ಸರ್ವಾಂತರ್ಯಾಮಿಯೂ, ಜಗತ್ತಿಗೆ ನಿಯಾಮಕನೂ, ಆದಿ ಕಾರಣನೂ ಆಗಿದ್ದರೂ ಮಾಯೆಯೆಂಬ ತೆರೆಯಿಂದ ಮುಚ್ಚಲ್ಪಟ್ಟಿರುವೆ. ॥23॥

ಮೂಲಮ್

(ಶ್ಲೋಕ-24)
ಯಥಾ ಶಯಾನಃ ಪುರುಷಃ ಆತ್ಮಾನಂ ಗುಣತತ್ತ್ವದೃಕ್ ।
ನಾಮಮಾತ್ರೇಂದ್ರಿಯಾಭಾತಂ ನ ವೇದ ರಹಿತಂ ಪರಮ್ ॥

ಅನುವಾದ

ಕನಸ್ಸನ್ನು ಕಾಣುತ್ತಿರುವಾಗ ಮನುಷ್ಯನು ಸ್ವಪ್ನದಲ್ಲಿ ಮಿಥ್ಯೆಯಾದ ಪದಾರ್ಥಗಳನ್ನು ಸತ್ಯವೆಂದೇ ತಿಳಿಯುತ್ತಾನೆ. ಹೆಸರಿಗೆ ಮಾತ್ರ ಸತ್ಯವೆಂದು ತೋರುವ ತನ್ನ ಸ್ವಪ್ನ ಶರೀರವನ್ನೇ ನಿಜವೆಂದು ಭಾವಿಸುತ್ತಾನೆ. ಸ್ವಪ್ನವಿರುವತನಕ ಅವನಿಗೆ ಈ ಸ್ವಪ್ನ ಶರೀರವಲ್ಲದೆ ಇನ್ನೊಂದು ಜಾಗ್ರದವಸ್ಥೆಯ ಶರೀರವಿದೆ ಎಂಬುದೂ ತಿಳಿದಿರುವುದಿಲ್ಲ. ॥24॥

ಮೂಲಮ್

(ಶ್ಲೋಕ-25)
ಏವಂ ತ್ವಾ ನಾಮಮಾತ್ರೇಷು ವಿಷಯೇಷ್ವಿಂದ್ರಿಯೇಹಯಾ ।
ಮಾಯಯಾ ವಿಭ್ರಮಚ್ಚಿತ್ತೋ ನ ವೇದ ಸ್ಮೃತ್ಯುಪಪ್ಲವಾತ್ ॥

ಅನುವಾದ

ಹೀಗೆಯೇ ಜಾಗ್ರದವಸ್ಥೆಯಲ್ಲಿಯೂ ಇಂದ್ರಿಯಗಳ ಪ್ರವೃತ್ತಿರೂಪವಾದ ಮಾಯೆಯಿಂದ ಚಿತ್ತವು ವಿಮೋಹಿತವಾಗಿ ಹೆಸರಿಗಷ್ಟೇ ಇರುವ ವಿಷಯಗಳಲ್ಲಿ ಅಲೆಯುತ್ತಿರುತ್ತದೆ. ಆ ಸಮಯದಲ್ಲಿಯೂ ಚಿತ್ತದ ಭ್ರಾಂತಿಯಿಂದ ವಿವೇಕಶಕ್ತಿಯು ಮುಚ್ಚಲ್ಪಟ್ಟಿರುತ್ತದೆ. ಇದರಿಂದ ತಾನು ಈ ಜಗತ್ತು - ಸಂಸಾರದಿಂದ ಅತೀತನಾಗಿರುವವನು ಎಂಬುದೂ ಜೀವಿಗೆ ತಿಳಿದಿರುವುದಿಲ್ಲ. ॥25॥

ಮೂಲಮ್

(ಶ್ಲೋಕ-26)
ತಸ್ಯಾದ್ಯ ತೇ ದದೃಶಿಮಾಂಘ್ರಿಮಘೌಘಮರ್ಷ-
ತೀರ್ಥಾಸ್ಪದಂ ಹೃದಿ ಕೃತಂ ಸುವಿಪಕ್ವಯೋಗೈಃ ।
ಉತ್ಸಿಕ್ತಭಕ್ತ್ಯುಪಹತಾಶಯಜೀವಕೋಶಾ
ಆಪುರ್ಭವದ್ಗತಿಮಥೋನುಗೃಹಾಣ ಭಕ್ತಾನ್ ॥

ಅನುವಾದ

ಪ್ರಭೋ! ದೊಡ್ಡ-ದೊಡ್ಡ ಋಷಿ-ಮುನಿಗಳು ಅತ್ಯಂತ ಪರಿಪಕ್ವ ಯೋಗಸಾಧನೆಯ ಮೂಲಕ ಸಮಸ್ತ ಪಾಪರಾಶಿಯನ್ನೂ ನಾಶಮಾಡುವಂತಹ, ಗಂಗೆಗೆ ಆಶ್ರಯಸ್ಥಾನವಾದ ನಿನ್ನ ಚರಣಕಮಲಗಳನ್ನು ಹೃದಯದಲ್ಲಿ ಧರಿಸಿಕೊಂಡಿರುತ್ತಾರೆ. ಇಂದು ನಮಗೆ ಅಂತಹ ಚರಣ ಕಮಲಗಳ ದರ್ಶನವಾದುದು ನಮ್ಮ ಸೌಭಾಗ್ಯವೇ ಆಗಿದೆ. ಪ್ರಭೋ! ನಾವು ನಿನ್ನ ಭಕ್ತರಾಗಿದ್ದೇವೆ. ನೀನು ನಮ್ಮ ಮೇಲೆ ದಯೆದೋರು. ಏಕೆಂದರೆ, ಯಾರ ಲಿಂಗಶರೀರರೂಪವಾದ ಜೀವಕೋಶವು ನಿನ್ನ ಅತ್ಯುಚ್ಚ ಭಕ್ತಿಯ ಮೂಲಕ ನಾಶವಾಗಿದೆಯೋ ಅವರಿಗೆ ನಿನ್ನ ಪರಮ ಪದದ ಪ್ರಾಪ್ತಿಯಾಗುತ್ತದೆ. ॥26॥

ಮೂಲಮ್

(ಶ್ಲೋಕ-27)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಯನುಜ್ಞಾಪ್ಯ ದಾಶಾರ್ಹಂ ಧೃತರಾಷ್ಟ್ರಂ ಯುಧಿಷ್ಠಿರಮ್ ।
ರಾಜರ್ಷೇ ಸ್ವಾಶ್ರಮಾನ್ಗಂತುಂ ಮುನಯೋ ದಧಿರೇ ಮನಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ರಾಜರ್ಷಿ ಪರೀಕ್ಷಿತನೇ! ಭಗವಂತನನ್ನು ಈ ಪ್ರಕಾರವಾಗಿ ಸ್ತುತಿಗೈದು, ಅವನಿಂದ, ಧೃತರಾಷ್ಟ್ರನಿಂದ, ಧರ್ಮರಾಜ ಯುಧಿಷ್ಠಿರನಿಂದ ಅನುಮತಿಯನ್ನು ಪಡೆದು ಅವರೆಲ್ಲರೂ ತಮ್ಮ-ತಮ್ಮ ಆಶ್ರಮಗಳಿಗೆ ಹೋಗಲು ವಿಚಾರಮಾಡಿದರು. ॥27॥

ಮೂಲಮ್

(ಶ್ಲೋಕ-28)
ತದ್ವೀಕ್ಷ್ಯ ತಾನುಪವ್ರಜ್ಯ ವಸುದೇವೋ ಮಹಾಯಶಾಃ ।
ಪ್ರಣಮ್ಯ ಚೋಪಸಂಗೃಹ್ಯ ಬಭಾಷೇದಂ ಸುಯಂತ್ರಿತಃ ॥

ಅನುವಾದ

ಮಹಾಯಶೋವಂತನಾದ ವಸುದೇವನು ಋಷಿ-ಮುನಿಗಳು ಹೊರಟು ಹೋಗುವ ವಿಚಾರವನ್ನು ತಿಳಿದು ಅವರ ಬಳಿಗೆ ಹೋಗಿ ಅವರ ಕಾಲುಗಳನ್ನು ಹಿಡಿದು ವಂದಿಸಿಕೊಂಡು ವಿನಮ್ರನಾಗಿ ನಿವೇದಿಸಿಕೊಂಡನು. ॥28॥

ಮೂಲಮ್

(ಶ್ಲೋಕ-29)

ಮೂಲಮ್ (ವಾಚನಮ್)

ವಸುದೇವ ಉವಾಚ

ಮೂಲಮ್

ನಮೋ ವಃ ಸರ್ವದೇವೇಭ್ಯ ಋಷಯಃ ಶ್ರೋತುಮರ್ಹಥ ।
ಕರ್ಮಣಾ ಕರ್ಮನಿರ್ಹಾರೋ ಯಥಾ ಸ್ಯಾನ್ನಸ್ತದುಚ್ಯತಾಮ್ ॥

ಅನುವಾದ

ವಸುದೇವನು ಹೇಳಿದನು — ಋಷಿ ಮುನಿಗಳೇ! ನೀವು ಸಮಸ್ತ ದೇವತಾ ಸ್ವರೂಪರಾಗಿದ್ದೀರಿ. ನಾನು ನಿಮಗೆ ವಂದಿಸುತ್ತಿದ್ದೇನೆ. ತಾವುಗಳು ನನ್ನದೊಂದು ಪ್ರಾರ್ಥನೆಯನ್ನು ಆಲಿಸಬೇಕು. ಯಾವ ಕರ್ಮಗಳ ಅನುಷ್ಠಾನದಿಂದ ಕರ್ಮಗಳು ಮತ್ತು ಕರ್ಮವಾಸನೆಗಳ ಆತ್ಯಂತಿಕ ನಾಶವಾಗಿ ಮೋಕ್ಷವುಂಟಾಗುವುದೋ ಅದನ್ನು ನೀವುಗಳು ನನಗೆ ಉಪದೇಶಿಸಿರಿ. ॥29॥

ಮೂಲಮ್

(ಶ್ಲೋಕ-30)

ಮೂಲಮ್ (ವಾಚನಮ್)

ನಾರದ ಉವಾಚ

ಮೂಲಮ್

ನಾತಿಚಿತ್ರಮಿದಂ ವಿಪ್ರಾ ವಸುದೇವೋ ಬುಭುತ್ಸಯಾ ।
ಕೃಷ್ಣಂ ಮತ್ವಾರ್ಭಕಂ ಯನ್ನಃ ಪೃಚ್ಛತಿ ಶ್ರೇಯ ಆತ್ಮನಃ ॥

ಅನುವಾದ

ನಾರದರು ಹೇಳಿದರು — ಋಷಿವರ್ಯರೇ! ವಸುದೇವನು ಶ್ರೀಕೃಷ್ಣನನ್ನು ತನ್ನ ಮಗನೆಂದು ತಿಳಿದು ಶುದ್ಧ ಜಿಜ್ಞಾಸೆಯ ಭಾವದಿಂದ ತನ್ನ ಶ್ರೇಯಸ್ಸಿನ ಸಾಧನೆಯನ್ನು ನಮ್ಮ ಬಳಿ ಕೇಳುತ್ತಿರುವನು. ಇದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ॥30॥

ಮೂಲಮ್

(ಶ್ಲೋಕ-31)
ಸನ್ನಿಕರ್ಷೋ ಹಿ ಮರ್ತ್ಯಾನಾಮನಾದರಣಕಾರಣಮ್ ।
ಗಾಂಗಂ ಹಿತ್ವಾ ಯಥಾನ್ಯಾಂಭಸ್ತತ್ರತ್ಯೋ ಯಾತಿ ಶುದ್ಧಯೇ ॥

ಅನುವಾದ

ಪ್ರಪಂಚದಲ್ಲಿ ಬಹಳ ಹತ್ತಿರ ವಿರುವುದು ಅನಾದರಕ್ಕೆ ಕಾರಣವಾಗುತ್ತದೆ. ಗಂಗಾತೀರದಲ್ಲಿರುವವರು ಗಂಗೆಯನ್ನು ಬಿಟ್ಟು ತಮ್ಮ ಪಾಪಶುದ್ಧಿಗಾಗಿ ಬೇರೆ ತೀರ್ಥಕ್ಕೆ ಹೋಗುತ್ತಿರುವುದನ್ನು ನೋಡುತ್ತೇವಲ್ಲ! ॥31॥

ಮೂಲಮ್

(ಶ್ಲೋಕ-32)
ಯಸ್ಯಾನುಭೂತಿಃ ಕಾಲೇನ ಲಯೋತ್ಪತ್ತ್ಯಾದಿನಾಸ್ಯ ವೈ ।
ಸ್ವತೋನ್ಯಸ್ಮಾಚ್ಚ ಗುಣತೋ ನ ಕುತಶ್ಚನ ರಿಷ್ಯತಿ ॥

ಅನುವಾದ

ಶ್ರೀಕೃಷ್ಣನ ಅನುಭೂತಿಯು ಕಾಲಾನುಕ್ರಮವಾಗಿ ನಡೆಯುವ ಜಗತ್ತಿನ ಸೃಷ್ಟಿ, ಸ್ಥಿತಿ, ಪ್ರಳಯಗಳಿಂದ ಅಳಿದು ಹೋಗುವಂತಹುದಲ್ಲ. ಅದು ಸ್ವತಃ ಯಾವುದೇ ಬೇರೆ ನಿಮಿತ್ತದಿಂದ, ಗುಣಗಳಿಂದ ಮತ್ತು ಯಾವುದರಿಂದಲೂ ಕ್ಷೀಣಿಸುವಂತಹುದಲ್ಲ. ॥32॥

ಮೂಲಮ್

(ಶ್ಲೋಕ-33)
ತಂ ಕ್ಲೇಶಕರ್ಮಪರಿಪಾಕಗುಣಪ್ರವಾಹೈ-
ರವ್ಯಾಹತಾನುಭವಮೀಶ್ವರಮದ್ವಿತೀಯಮ್ ।
ಪ್ರಾಣಾದಿಭಿಃ ಸ್ವವಿಭವೈರುಪಗೂಢಮನ್ಯೋ
ಮನ್ಯೇತ ಸೂರ್ಯಮಿವ ಮೇಘಹಿಮೋಪರಾಗೈಃ ॥

ಅನುವಾದ

ಅವನ ಜ್ಞಾನಮಯ ಸ್ವರೂಪವು ಅವಿದ್ಯೆಯಿಂದಾಗಲೀ, ರಾಗ-ದ್ವೇಷಾದಿ ಕ್ಲೇಶಗಳಿಂದಾಗಲೀ, ಪುಣ್ಯ-ಪಾಪಮಯ ಕರ್ಮಗಳಿಂದಾಗಲೀ, ಸುಖ-ದುಃಖಾದಿ ಕರ್ಮಲಗಳಿಂದಾಗಲೀ, ಸತ್ತ್ವಾದಿ ಗುಣ ಪ್ರವಾಹದಿಂದಾಗಲೀ ನಾಶಹೊಂದುವುದಿಲ್ಲ. ಅವನು ಸಾಕ್ಷಾತ್ ಅದ್ವಿತೀಯ ಪರಮಾತ್ಮನಾಗಿದ್ದಾನೆ. ಅವನು ತನ್ನನ್ನು ತನ್ನದೇ ಶಕ್ತಿಗಳಿಂದ ಪ್ರಾಣಾದಿಗಳಿಂದ ಮುಚ್ಚಿಕೊಳ್ಳುವನು; ಆಗ ಮೂರ್ಖಜನರು - ಮೋಡ, ಮಂಜು ಅಥವಾ ಗ್ರಹಣದಿಂದ ಮರೆಯಾದ ಸೂರ್ಯನು ಮುಚ್ಚಿ ಹೋಗಿರುವನು ಎಂದು ತಿಳಿಯುವಂತೆಯೇ ಶ್ರೀಕೃಷ್ಣನನ್ನು ತಿಳಿಯುತ್ತಾರೆ. ॥33॥

ಮೂಲಮ್

(ಶ್ಲೋಕ-34)
ಅಥೋಚುರ್ಮುನಯೋ ರಾಜನ್ನಾಭಾಷ್ಯಾನಕದುಂದುಭಿಮ್ ।
ಸರ್ವೇಷಾಂ ಶೃಣ್ವತಾಂ ರಾಜ್ಞಾಂ ತಥೈವಾಚ್ಯುತರಾಮಯೋಃ ॥

ಅನುವಾದ

ಪರೀಕ್ಷಿತನೇ! ಅನಂತರ ಋಷಿ-ಮುನಿಗಳು ಭಗವಾನ್ ಶ್ರೀಕೃಷ್ಣ-ಬಲರಾಮರು, ಯುಧಿಷ್ಠಿರನೇ ಮೊದಲಾದ ರಾಜರ ಸಮ್ಮುಖದಲ್ಲಿ ವಸುದೇವನನ್ನು ಸಂಬೋಧಿಸುತ್ತಾ ಹೇಳಿದರು. ॥34॥

ಮೂಲಮ್

(ಶ್ಲೋಕ-35)
ಕರ್ಮಣಾ ಕರ್ಮನಿರ್ಹಾರ ಏಷ ಸಾಧು ನಿರೂಪಿತಃ ।
ಯಚ್ಛ್ರದ್ಧಯಾ ಯಜೇದ್ವಿಷ್ಣುಂ ಸರ್ವಯಜ್ಞೇಶ್ವರಂ ಮಖೈಃ ॥

ಅನುವಾದ

ವಸುದೇವನೇ! ಯಜ್ಞಾದಿಗಳ ಮೂಲಕ ಸಮಸ್ತ ಯಜ್ಞಗಳ ಅಧಿಪತಿಯಾದ ಭಗವಾನ್ ವಿಷ್ಣುವನ್ನು ಶ್ರದ್ಧಾಪೂರ್ವಕ ಆರಾಧಿಸುವುದೇ ಕರ್ಮಗಳ ಮೂಲಕ ಕರ್ಮವಾಸನೆ ಮತ್ತು ಕರ್ಮಲಗಳನ್ನು ಆತ್ಯಂತಿಕವಾಗಿ ನಾಶಮಾಡುವ ಒಳ್ಳೆಯ ಉಪಾಯವಾಗಿದೆ. ॥35॥

ಮೂಲಮ್

(ಶ್ಲೋಕ-36)
ಚಿತ್ತಸ್ಯೋಪಶಮೋಯಂ ವೈ ಕವಿಭಿಃ ಶಾಸಚಕ್ಷುಷಾ ।
ದರ್ಶಿತಃ ಸುಗಮೋ ಯೋಗೋ ಧರ್ಮಶ್ಚಾತ್ಮಮುದಾವಹಃ ॥

ಅನುವಾದ

ತ್ರಿಕಾಲದರ್ಶಿಗಳಾದ ಜ್ಞಾನಿಗಳು ಶಾಸದೃಷ್ಟಿಯಿಂದ ಚಿತ್ತದ ಶಾಂತಿಗೆ ಇದೇ ಉಪಾಯವೆಂದೂ, ಸುಲಭವಾದ ಮೋಕ್ಷ ಸಾಧನವೆಂದೂ, ಚಿತ್ತದಲ್ಲಿ ಆನಂದೋಲ್ಲಾಸವನ್ನು ಉಂಟು ಮಾಡುವ ಧರ್ಮವೆಂದೂ ತಿಳಿಸಿರುವರು. ॥36॥

ಮೂಲಮ್

(ಶ್ಲೋಕ-37)
ಅಯಂ ಸ್ವಸ್ತ್ಯಯನಃ ಪಂಥಾ ದ್ವಿಜಾತೇರ್ಗೃಹಮೇಧಿನಃ ।
ಯಚ್ಛ್ರದ್ಧಯಾಪ್ತವಿತ್ತೇನ ಶುಕ್ಲೇನೇಜ್ಯೇತ ಪೂರುಷಃ ॥

ಅನುವಾದ

ತನ್ನ ನ್ಯಾಯೋಪಾರ್ಜಿತ ಧನದಿಂದ ಶ್ರದ್ಧಾಪೂರ್ವಕವಾಗಿ ಭಗವಾನ್ ಪುರುಷೋತ್ತನನ್ನು ಆರಾಧಿಸುವುದೇ ದ್ವಿಜರಾದ ಗೃಹಸ್ಥರಿಗೆ ಪರಮ ಶ್ರೇಯಸ್ಸಿನ ಮಾರ್ಗವಾಗಿದೆ. ॥37॥

ಮೂಲಮ್

(ಶ್ಲೋಕ-38)
ವಿತ್ತೈಷಣಾಂ ಯಜ್ಞದಾನೈರ್ಗೃಹೈರ್ದಾರಸುತೈಷಣಾಮ್ ।
ಆತ್ಮಲೋಕೈಷಣಾಂ ದೇವ ಕಾಲೇನ ವಿಸೃಜೇದ್ಬುಧಃ ।
ಗ್ರಾಮೇ ತ್ಯಕ್ತೈಷಣಾಃ ಸರ್ವೇ ಯಯುರ್ಧೀರಾಸ್ತಪೋವನಮ್ ॥

ಅನುವಾದ

ವಸುದೇವನೇ! ವಿದ್ವಾಂಸನಾದವನು ಯಜ್ಞ, ದಾನಾದಿಗಳಿಂದ ಧನದ ಆಸೆಯನ್ನೂ, ಗೃಹಸ್ಥೋ ಚಿತ ಭೋಗಗಳಿಂದ ಪತ್ನೀ-ಪುತ್ರರ ಇಚ್ಛೆಯನ್ನೂ, ಕಾಲಾನುಕ್ರಮವಾಗಿ ಸ್ವರ್ಗಾದಿಭೋಗಗಳು ನಾಶವಾಗುವವು ಎಂಬ ಅರಿವಿನಿಂದ ಲೋಕೈಷಣವನ್ನು ತ್ಯಾಗ ಮಾಡಬೇಕು. ಹೀಗೆ ಈಷಣ ತ್ರಯಗಳನ್ನು ತ್ಯಾಗಮಾಡಿದ ವಿಚಾರವಂತ ಮನುಷ್ಯನು ಗ್ರಾಮವನ್ನು ಬಿಟ್ಟು ಅರಣ್ಯದ ದಾರಿಯನ್ನು ಹಿಡಿಯುತ್ತಾನೆ. ॥38॥

ಮೂಲಮ್

(ಶ್ಲೋಕ-39)
ಋಣೈಸಿಭಿರ್ದ್ವಿಜೋ ಜಾತೋ ದೇವರ್ಷಿಪಿತೃಣಾಂ ಪ್ರಭೋ ।
ಯಜ್ಞಾಧ್ಯಯನಪುತ್ರೈಸ್ತಾನ್ಯನಿಸ್ತೀರ್ಯ ತ್ಯಜನ್ಪತೇತ್ ॥

ಅನುವಾದ

ಸಮರ್ಥನಾದ ವಸುದೇವನೇ! ಬ್ರಾಹ್ಮಣ, ಕ್ಷತ್ರಿಯ, ವೈಶ್ಯ - ಇವರು ದೇವ-ಋಷಿ-ಪಿತೃ ಎಂಬ ಮೂರು ಋಣವನ್ನು ಪಡೆದುಕೊಂಡೇ ಹುಟ್ಟುತ್ತಾರೆ. ಯಜ್ಞ, ಅಧ್ಯಯನ, ಸಂತಾನೋತ್ಪತ್ತಿ ಇವುಗಳಿಂದ ಈ ಮೂರು ಋಣದಿಂದ ಬಿಡುಗಡೆ ಹೊಂದುತ್ತಾನೆ. ಆ ಋಣವನ್ನು ತೀರಿಸದೆಯೇ ಸಂಸಾರವನ್ನು ತ್ಯಾಗ ಮಾಡುವವರಿಗೆ ಅಧಃಪತನವಾಗುತ್ತದೆ. ॥39॥

ಮೂಲಮ್

(ಶ್ಲೋಕ-40)
ತ್ವಂ ತ್ವದ್ಯ ಮುಕ್ತೋ ದ್ವಾಭ್ಯಾಂ ವೈ ಋಷಿಪಿತ್ರೋರ್ಮಹಾಮತೇ ।
ಯಜ್ಞೈರ್ದೇವರ್ಣಮುನ್ಮುಚ್ಯ ನಿರ್ಋಣೋಶರಣೋ ಭವ ॥

ಅನುವಾದ

ಮಹಾಮತಿಯಾದ ವಸುದೇವ! ನೀನೀಗ ಋಷಿ ಮತ್ತು ಪಿತೃಗಳ ಋಣಗಳಿಂದ ಮುಕ್ತನಾಗಿರುವೆ. ಇನ್ನು ಯಜ್ಞಗಳ ಮೂಲಕ ದೇವತೆಗಳ ಋಣವನ್ನು ತೀರಿಸಿಬಿಡು. ಹೀಗೆ ಎಲ್ಲ ಋಣಗಳಿಂದ ಬಿಡುಗಡೆ ಹೊಂದಿ ಗೃಹತ್ಯಾಗಮಾಡಿ ಭಗವಂತನಿಗೆ ಶರಣಾಗು. ॥40॥

ಮೂಲಮ್

(ಶ್ಲೋಕ-41)
ವಸುದೇವ ಭವಾನ್ ನೂನಂ ಭಕ್ತ್ಯಾ ಪರಮಯಾ ಹರಿಮ್ ।
ಜಗತಾಮೀಶ್ವರಂ ಪ್ರಾರ್ಚಃ ಸ ಯದ್ವಾಂ ಪುತ್ರತಾಂ ಗತಃ ॥

ಅನುವಾದ

ವಸುದೇವನೇ! ನೀನು ಅವಶ್ಯವಾಗಿ ಪರಮಭಕ್ತಿಯಿಂದ ಜಗದೀಶ್ವರನಾದ ಶ್ರೀಹರಿಯನ್ನು ಉಪಾಸನೆ ಮಾಡಿರುವೆ. ಅದರಿಂದಲೇ ಜಗದೊಡೆಯರಾದ ಇಬ್ಬರು ಪುತ್ರರನ್ನು ಪಡೆದಿರುವೆ. ॥41॥

ಮೂಲಮ್

(ಶ್ಲೋಕ-42)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತಿ ತದ್ವಚನಂ ಶ್ರುತ್ವಾ ವಸುದೇವೋ ಮಹಾಮನಾಃ ।
ತಾನೃಷೀನೃತ್ವಿಜೋ ವವ್ರೇ ಮೂರ್ಧ್ನಾನಮ್ಯ ಪ್ರಸಾದ್ಯ ಚ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಮನನಶೀಲನಾದ ವಸುದೇವನು ಋಷಿಗಳ ಈ ಮಾತನ್ನು ಕೇಳಿ, ಅವರ ಚರಣಗಳಲ್ಲಿ ಶಿರಸ್ಸನ್ನಿಟ್ಟು ಪ್ರಣಾಮಮಾಡಿ ಅವರನ್ನು ಪ್ರಸನ್ನಗೊಳಿಸಿ, ಯಜ್ಞಕ್ಕಾಗಿ ಅವರನ್ನು ಋತ್ವಿಜರಾಗಿ ವರಣಮಾಡಿಕೊಂಡನು. ॥42॥

ಮೂಲಮ್

(ಶ್ಲೋಕ-43)
ತ ಏನಮೃಷಯೋ ರಾಜನ್ ವೃತಾ ಧರ್ಮೇಣ ಧಾರ್ಮಿಕಮ್ ।
ತಸ್ಮಿನ್ನಯಾಜಯನ್ ಕ್ಷೇತ್ರೇ ಮಖೈರುತ್ತಮಕಲ್ಪಕೈಃ ॥

ಅನುವಾದ

ಪರೀಕ್ಷಿತನೇ! ಹೀಗೆ ವಸುದೇವನಿಂದ ಧರ್ಮಪೂರ್ವಕವಾಗಿ ವರಣಮಾಡಲ್ಪಟ್ಟ ಋಷಿ ಮುನಿಗಳು ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಪರಮ ಧಾರ್ಮಿಕನಾದ ವಸುದೇವನಿಂದ ಉತ್ತಮೋತ್ತಮ ಸಾಮಗ್ರಿಗಳಿಂದ ಕೂಡಿದ ಹಲವಾರು ಯಜ್ಞಗಳನ್ನು ಮಾಡಿಸಿದರು. ॥43॥

ಮೂಲಮ್

(ಶ್ಲೋಕ-44)
ತದ್ದೀಕ್ಷಾಯಾಂ ಪ್ರವೃತ್ತಾಯಾಂ ವೃಷ್ಣಯಃ ಪುಷ್ಕರಸ್ರಜಃ ।
ಸ್ನಾತಾಃ ಸುವಾಸಸೋ ರಾಜನ್ ರಾಜಾನಃ ಸುಷ್ಠ್ವಲಂಕೃತಾಃ ॥

ಅನುವಾದ

ಪರೀಕ್ಷಿತ! ವಸುದೇವನು ಯಜ್ಞದೀಕ್ಷಿತನಾದಾಗ ಯಾದವರು ಸ್ನಾನಾದಿಗಳನ್ನು ಮಾಡಿ ಸುಂದರ ವಸ್ತ್ರಾಭೂಷಣಗಳನ್ನು ಕಮಲಪುಷ್ಪಗಳ ಮಾಲೆಗಳನ್ನು ಧರಿಸಿದರು. ಸಮಸ್ತ ರಾಜರೂ ವಸಾಭರಣಗಳಿಂದ ಸಜ್ಜಾದರು. ॥44॥

ಮೂಲಮ್

(ಶ್ಲೋಕ-45)
ತನ್ಮಹಿಷ್ಯಶ್ಚ ಮುದಿತಾ ನಿಷ್ಕಕಂಠ್ಯಃ ಸುವಾಸಸಃ ।
ದೀಕ್ಷಾಶಾಲಾಮುಪಾಜಗ್ಮುರಾಲಿಪ್ತಾ ವಸ್ತುಪಾಣಯಃ ॥

ಅನುವಾದ

ವಸುದೇವನ ಪತ್ನಿಯರೂ ಸುಂದರವಸ, ಅಂಗರಾಗ, ಸ್ವರ್ಣಹಾರಗಳಿಂದ ಅಲಂಕರಿಸಿಕೊಂಡು, ಪರಮಾನಂದ ಭರಿತರಾಗಿ ಕೈಗಳಲ್ಲಿ ಮಂಗಳ ದ್ರವ್ಯಗಳನ್ನು ಹಿಡಿದುಕೊಂಡು ಯಜ್ಞಶಾಲೆಯನ್ನು ಪ್ರವೇಶಿಸಿದರು. ॥45॥

ಮೂಲಮ್

(ಶ್ಲೋಕ-46)
ನೇದುರ್ಮೃದಂಗಪಟಹಶಂಖಭೇರ್ಯಾನಕಾದಯಃ ।
ನನೃತುರ್ನಟನರ್ತಕ್ಯಸ್ತುಷ್ಟುವುಃ ಸೂತಮಾಗಧಾಃ ।
ಜಗುಃ ಸುಕಂಠ್ಯೋ ಗಂಧರ್ವ್ಯಃ ಸಂಗೀತಂ ಸಹಭರ್ತೃಕಾಃ ॥

ಅನುವಾದ

ಆ ಸಮಯದಲ್ಲಿ ಮೃದಂಗ, ಪಟಹ, ಶಂಖ, ಭೇರಿ, ನಗಾರಿಗಳು ಮುಂತಾದ ಮಂಗಳ ವಾದ್ಯಗಳು ಮೊಳಗುತ್ತಿದ್ದವು. ಸೂತ-ಮಾಗಧರೂ ಸ್ತುತಿಸತೊಡಗಿದರು. ಗಂಧರ್ವ ಸ್ತ್ರೀಯರು ತಮ್ಮ ಗಂಡಂದಿರೊಡನೆ ಸುಶ್ರಾವ್ಯವಾಗಿ ಹಾಡತೊಡಗಿದರು. ॥46॥

ಮೂಲಮ್

(ಶ್ಲೋಕ-47)
ತಮಭ್ಯಷಿಂಚನ್ ವಿಧಿವದಕ್ತಮಭ್ಯಕ್ತಮೃತ್ವಿಜಃ ।
ಪತ್ನೀಭಿರಷ್ಟಾದಶಭಿಃ ಸೋಮರಾಜಮಿವೋಡುಭಿಃ ॥

ಅನುವಾದ

ವಸುದೇವನು ಮೊದಲಿಗೆ ಕಣ್ಣುಗಳಿಗೆ ಕಾಡಿಗೆ ಹಚ್ಚಿಕೊಂಡು, ಮೈಗೆ ಬೆಣ್ಣೆಯನ್ನು ಲೇಪಿಸಿಕೊಂಡನು. ದೇವಕಿಯೇ ಮೊದಲಾದ ಅವನ ಹದಿನೆಂಟು ಮಂದಿ ಪತ್ನಿಯರೊಂದಿಗೆ ಹಿಂದೆ ನಕ್ಷತ್ರಗಳೊಂದಿಗೆ ಚಂದ್ರನ ಅಭಿಷೇಕವಾದಂತೆ ಋತ್ವಿಜರು ವಸುದೇವನಿಗೆ ಮಹಾಭಿಷೇಕ ಮಾಡಿದರು. ॥47॥

ಮೂಲಮ್

(ಶ್ಲೋಕ-48)
ತಾಭಿರ್ದುಕೂಲವಲಯೈರ್ಹಾರನೂಪುರಕುಂಡಲೈಃ ।
ಸ್ವಲಂಕೃತಾಭಿರ್ವಿಬಭೌ ದೀಕ್ಷಿತೋಜಿನಸಂವೃತಃ ॥

ಅನುವಾದ

ಆಗ ಯಜ್ಞದೀಕ್ಷಿತನಾದ್ದರಿಂದ ವಸುದೇವನು ಮೃಗಚರ್ಮವನ್ನು ಹೊದ್ದುಕೊಂಡಿದ್ದನು. ಅವನ ಪತ್ನಿಯರು ಸುಂದರವಾದ ಸೀರೆಗಳಿಂದಲೂ, ಚಿನ್ನದ ಬಳೆ, ಹಾರಗಳಿಂದಲೂ, ಕಾಲಂದುಗೆಗಳಿಂದಲೂ, ಹೊಳೆಯುತ್ತಿದ್ದ ಕರ್ಣಾಭರಣಗಳಿಂದಲೂ ಅಲಂಕರಿಸಿಕೊಂಡಿದ್ದರು. ಪತ್ನಿಯರೊಡನೆ ವಸುದೇವನು ಬಹಳವಾಗಿ ಸುಶೋಭಿತನಾಗಿದ್ದನು. ॥48॥

ಮೂಲಮ್

(ಶ್ಲೋಕ-49)
ತಸ್ಯರ್ತ್ವಿಜೋ ಮಹಾರಾಜ ರತ್ನಕೌಶೇಯವಾಸಸಃ ।
ಸಸದಸ್ಯಾ ವಿರೇಜುಸ್ತೇ ಯಥಾ ವೃತ್ರಹಣೋಧ್ವರೇ ॥

ಅನುವಾದ

ವಸುದೇವನ ಋತ್ವಿಜರೂ, ಸದಸ್ಯರೂ ಹಿಂದೆ ಇಂದ್ರನ ಯಜ್ಞದಲ್ಲಿ ಶೋಭಿಸುತ್ತಿದ್ದ ಋತ್ವಿಜರಂತೆಯೇ ರೇಷ್ಮೆಯ ವಸ್ತ್ರಗಳಿಂದ, ರತ್ನಜಡಿತ ಆಭರಣಗಳಿಂದ ಸಮಲಂಕೃತರಾಗಿ ಶೋಭಿಸುತ್ತಿದ್ದರು. ॥49॥

ಮೂಲಮ್

(ಶ್ಲೋಕ-50)
ತದಾ ರಾಮಶ್ಚ ಕೃಷ್ಣಶ್ಚ ಸ್ವೈಃ ಸ್ವೈರ್ಬಂಧುಭಿರನ್ವಿತೌ ।
ರೇಜತುಃ ಸ್ವಸುತೈರ್ದಾರೈರ್ಜೀವೇಶೌ ಸ್ವವಿಭೂತಿಭಿಃ ॥

ಅನುವಾದ

ಸಮಸ್ತ ಜೀವಕೋಟಿಗೂ ಪ್ರಭುಗಳಾದ ಬಲರಾಮ-ಶ್ರೀಕೃಷ್ಣರು ತಮ್ಮ-ತಮ್ಮ ಬಂಧುಗಳಿಂದಲೂ, ಪತ್ನೀ-ಪುತ್ರರೊಂದಿಗೂ ಪರಿವೃತರಾಗಿ ತಮ್ಮದೇ ಆದ ವೈಭವದಿಂದ ರಾರಾಜಿಸಿದರು. ॥50॥

ಮೂಲಮ್

(ಶ್ಲೋಕ-51)
ಈಜೇನುಯಜ್ಞಂ ವಿಧಿನಾ ಅಗ್ನಿಹೋತ್ರಾದಿಲಕ್ಷಣೈಃ ।
ಪ್ರಾಕೃತೈರ್ವೈಕೃತೈರ್ಯಜ್ಞೈರ್ದ್ರವ್ಯಜ್ಞಾನಕ್ರಿಯೇಶ್ವರಮ್ ॥

ಅನುವಾದ

ವಸುದೇವನು ಪ್ರತಿಯೊಂದು ಯಜ್ಞದಲ್ಲಿಯೂ ಗಾರ್ಹಪತ್ಯವೇ ಮೊದಲಾದ ಅಗ್ನಿತ್ರಯಗಳ ಉಪಾಸನೆಯೇ ಮುಖ್ಯಲಕ್ಷ್ಯವಾಗಿರುವ ಅಗ್ನಿಷ್ಟೋಮ, ದರ್ಶ, ಪುರ್ಣ ಮಾಸ ಮುಂತಾದ ಪ್ರಕೃತಿಯಾಗಗಳಿಂದಲೂ, ಸೂರ್ಯ ಸತ್ರವೇ ಮೊದಲಾದ ವಿಕೃತಿ ಯಾಗಗಳಿಂದಲೂ, ಅಗ್ನಿ ಹೋತ್ರಾದಿ ಇತರ ಯಜ್ಞಗಳ ಮೂಲಕ ದ್ರವ್ಯ, ಜ್ಞಾನ, ಕ್ರಿಯೆ ಇವುಗಳಿಗೆ ಈಶ್ವರನಾದ ಯಜ್ಞಪುರುಷ ವಿಷ್ಣುವನ್ನು ಆರಾಧಿಸಿದನು. ॥51॥

ಮೂಲಮ್

(ಶ್ಲೋಕ-52)
ಅಥರ್ತ್ವಿಗ್ಭ್ಯೋದದಾತ್ಕಾಲೇ ಯಥಾಮ್ನಾತಂ ಸ ದಕ್ಷಿಣಾಃ ।
ಸ್ವಲಂಕೃತೇಭ್ಯೋಲಂಕೃತ್ಯ ಗೋಭೂಕನ್ಯಾ ಮಹಾಧನಾಃ ॥

ಅನುವಾದ

ಅನಂತರ ವಸುದೇವನು ಸಮುಚಿತ ಕಾಲದಲ್ಲಿ ಋತ್ವಿಜರನ್ನು ವಸ್ತ್ರಾಲಂಕಾರಗಳಿಂದ ಪೂಜಿಸಿ ಶಾಸ್ತ್ರಕ್ಕನುಸಾರವಾಗಿ ಅವರಿಗೆ ಹೇರಳವಾದ ದಕ್ಷಿಣೆಯೊಂದಿಗೆ ಸಾಲಂಕೃತ ಗೋವುಗಳನ್ನು, ಭೂಮಿಯನ್ನು ಸುಂದರ ಕನ್ಯೆಯರನ್ನು ದಾನಮಾಡಿದನು. ॥52॥

ಮೂಲಮ್

(ಶ್ಲೋಕ-53)
ಪತ್ನೀಸಂಯಾಜಾವಭೃಥ್ಯೈಶ್ಚರಿತ್ವಾ ತೇ ಮಹರ್ಷಯಃ ।
ಸಸ್ನೂ ರಾಮಹ್ರದೇ ವಿಪ್ರಾ ಯಜಮಾನಪುರಸ್ಸರಾಃ ॥

ಅನುವಾದ

ಬಳಿಕ ಮಹರ್ಷಿಗಳು ಪತ್ನೀಸಂಯಾಜ ಮತ್ತು ಅವಭೃಥ್ಯಗಳೆಂಬ ಯಜ್ಞಾಂಗಕರ್ಮಗಳನ್ನು ವಸುದೇವನಿಂದಲೂ ಪತ್ನಿಯರಿಂದಲೂ ಮಾಡಿಸಿ, ಆತನನ್ನು ಮುಂದೆ ಮಾಡಿಕೊಂಡು ಪರಶುರಾಮನು ನಿರ್ಮಿಸಿದ ಸಮಂತಪಂಚಕ ಸರೋವರದಲ್ಲಿ ಅವಭೃತಸ್ನಾನ ಮಾಡಿಸಿದರು. ॥53॥

ಮೂಲಮ್

(ಶ್ಲೋಕ-54)
ಸ್ನಾತೋಲಂಕಾರವಾಸಾಂಸಿ ವಂದಿಭ್ಯೋದಾತ್ತಥಾ ಸಿಯಃ ।
ತತಃ ಸ್ವಲಂಕೃತೋ ವರ್ಣಾನಾಶ್ವಭ್ಯೋನ್ನೇನ ಪೂಜಯತ್ ॥

ಅನುವಾದ

ಸ್ನಾನಮಾಡಿದನಂತರ ವಸುದೇವನು ಮತ್ತು ಆತನ ಪತ್ನಿಯರು ತಾವು ಉಟ್ಟಿದ್ದ ವಸ್ತ್ರಾಭರಣಗಳನ್ನು ವಂದಿ ಮಾಗಧರಿಗೆ ಕೊಟ್ಟುಬಿಟ್ಟರು. ಬಳಿಕ ವಸುದೇವನು ನೂತನ ವಸ್ತ್ರಾಭರಣಗಳಿಂದ ಸಮಲಂಕೃತನಾಗಿ ಬ್ರಾಹ್ಮಣರಿಂದ ಹಿಡಿದು ನಾಯಿಯವರೆಗಿನ ಸಮಸ್ತ ಪ್ರಾಣಿಗಳಿಗೂ ಮೃಷ್ಟಾನ್ನ ಭೋಜನ ಮಾಡಿಸಿದನು. ॥54॥

ಮೂಲಮ್

(ಶ್ಲೋಕ-55)
ಬಂಧೂನ್ ಸದಾರಾನ್ ಸಸುತಾನ್ ಪಾರಿಬರ್ಹೇಣ ಭೂಯಸಾ ।
ವಿದರ್ಭಕೋಸಲಕುರೂನ್ ಕಾಶಿಕೇಕಯಸೃಂಜಯಾನ್ ॥
(ಶ್ಲೋಕ-56)
ಸದಸ್ಯರ್ತ್ವಿಕ್ ಸುರಗಣಾನ್ ನೃಭೂತಪಿತೃಚಾರಣಾನ್ ।
ಶ್ರೀನಿಕೇತಮನುಜ್ಞಾಪ್ಯ ಶಂಸಂತಃ ಪ್ರಯಯುಃ ಕ್ರತುಮ್ ॥

ಅನುವಾದ

ಮತ್ತೆ ವಸುದೇವನು ತನ್ನ ಬಂಧು ಬಾಂಧವರಿಗೆ, ಅವರ ಪತ್ನೀ-ಪುತ್ರರಿಗೆ ಹಾಗೂ ವಿದರ್ಭ, ಕೋಸಲ, ಕುರು, ಕಾಶಿ, ಕೇಕಯ, ಸೃಂಜಯ ಮೊದಲಾದ ರಾಜರುಗಳಿಗೆ, ಸದಸ್ಯರಿಗೆ, ಋತ್ವಿಜರಿಗೆ, ದೇವತೆಗಳಿಗೆ, ಮನುಷ್ಯರಿಗೆ, ಭೂತಗಳಿಗೆ, ಪಿತೃಗಳಿಗೆ, ಚಾರಣರಿಗೆ ಹಲವಾರು ವಿಧದ ಪಾರಿತೋಷಕಗಳನ್ನು ಕೊಟ್ಟು ಸನ್ಮಾನಿಸಿದನು. ಅವರೆಲ್ಲರೂ ಶ್ರೀನಿಕೇತನನಾದ ಶ್ರೀಕೃಷ್ಣನ ಅನುಮತಿಯನ್ನು ಪಡೆದು ಯಜ್ಞವನ್ನು ಪ್ರಶಂಸಿಸುತ್ತಾ ತಮ್ಮ-ತಮ್ಮ ನಿವಾಸಗಳಿಗೆ ತೆರಳಿದರು. ॥55-56॥

ಮೂಲಮ್

(ಶ್ಲೋಕ-57)
ಧೃತರಾಷ್ಟ್ರೋನುಜಃ ಪಾರ್ಥಾ ಭೀಷ್ಮೋ ದ್ರೋಣಃ ಪೃಥಾ ಯವೌ ।
ನಾರದೋ ಭಗವಾನ್ ವ್ಯಾಸಃಸುಹೃತ್ಸಂಬಂಧಿಬಾಂಧವಾಃ ॥
(ಶ್ಲೋಕ-58)
ಬಂಧೂನ್ ಪರಿಷ್ವಜ್ಯ ಯದೂನ್ ಸೌಹೃದಾತ್ ಕ್ಲಿನ್ನಚೇತಸಃ ।
ಯಯುರ್ವಿರಹಕೃಚ್ಛ್ರೇಣ ಸ್ವದೇಶಾಂಶ್ಚಾಪರೇ ಜನಾಃ ॥

ಅನುವಾದ

ಆ ಸಮಯದಲ್ಲಿ ಧೃತರಾಷ್ಟ್ರ-ವಿದುರ-ಯುಧಿಷ್ಠಿರ, ಭೀಮಾರ್ಜುನ-ನಕುಲ-ಸಹದೇವರೂ, ಭೀಷ್ಮ-ದ್ರೋಣಾದಿಗಳೂ, ಕುಂತೀ, ನಾರದರೂ, ಭಗವಾನ್ ವೇದವ್ಯಾಸರೂ ಹಾಗೂ ಇತರ ಸ್ವಜನ ಸಂಬಂಧಿಗಳೂ ಹಿತೈಷಿಗಳಾದ ಯಾದವರನ್ನು ಬಿಟ್ಟು ಹೋಗಲು ಸಾಧ್ಯವಾಗದೆ ವಿರಹ ವ್ಯಥೆಯನ್ನು ಅನುಭವಿಸುತ್ತಿದ್ದರು. ಅವರು ಅತ್ಯಂತ ಸ್ನೇಹಾರ್ದ್ರರಾಗಿ ಯುದುವೀರರನ್ನು ಗಾಢವಾಗಿ ಆಲಿಂಗಿಸಿಕೊಂಡು, ಅವರಿಂದ ಅನುಮತಿಯನ್ನು ಪಡೆದು ಬಹಳ ಕಷ್ಟದಿಂದ ತಮ್ಮ-ತಮ್ಮ ದೇಶಗಳಿಗೆ ಹಿಂದಿರುಗಿದರು. ಹಾಗೆಯೇ ಯಜ್ಞವನ್ನು ನೋಡಲು ಬಂದಿದ್ದ ಇತರರೂ ತಮ್ಮ-ತಮ್ಮ ನಿವಾಸಗಳಿಗೆ ತೆರಳಿದರು. ॥57-58॥

ಮೂಲಮ್

(ಶ್ಲೋಕ-59)
ನಂದಸ್ತು ಸಹ ಗೋಪಾಲೈರ್ಬೃಹತ್ಯಾ ಪೂಜಯಾರ್ಚಿತಃ ।
ಕೃಷ್ಣರಾಮೋಗ್ರಸೇನಾದ್ಯೈರ್ನ್ಯವಾತ್ಸೀದ್ಬಂಧುವತ್ಸಲಃ ॥

ಅನುವಾದ

ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣ-ಬಲರಾಮರು ಹಾಗೂ ಉಗ್ರಸೇನರೇ ಮೊದಲಾದವರು ನಂದಗೋಪನನ್ನು ಮತ್ತು ಇತರ ಎಲ್ಲ ಗೋಪಾಲಕರನ್ನು ಅಮೂಲ್ಯ ವಸ್ತುಗಳಿಂದ ಪೂಜಿಸಿ ಸತ್ಕರಿಸಿದನು. ಅವರೂ ಪ್ರೇಮ ಪರವಶರಾಗಿ ಅನೇಕ ದಿನಗಳವರೆಗೆ ಅಲ್ಲಿಯೇ ಇದ್ದರು. ॥59॥

ಮೂಲಮ್

(ಶ್ಲೋಕ-60)
ವಸುದೇವೋಂಜಸೋತ್ತೀರ್ಯ ಮನೋರಥಮಹಾರ್ಣವಮ್ ।
ಸುಹೃದ್ವ ತಃ ಪ್ರೀತಮನಾ ನಂದಮಾಹ ಕರೇ ಸ್ಪೃಶನ್ ॥

ಅನುವಾದ

ವಸುದೇವನು ಮನೋರಥವೆಂಬ ಮಹಾಸಾಗರವನ್ನು ಅನಾಯಾಸವಾಗಿ ದಾಟಿಬಿಟ್ಟನು. ಅವನ ಆನಂದಕ್ಕೆ ಪಾರವೇ ಇರಲಿಲ್ಲ. ಸುಹೃದರಿಂದ ಸುತ್ತುವರಿಯಲ್ಪಟ್ಟ ಪ್ರಸನ್ನಚಿತ್ತನಾದ ವಸುದೇವನು ನಂದಗೋಪನ ಕೈಹಿಡಿದುಕೊಂಡು ಇಂತೆಂದನು. ॥60॥

ಮೂಲಮ್

(ಶ್ಲೋಕ-61)

ಮೂಲಮ್ (ವಾಚನಮ್)

ವಸುದೇವ ಉವಾಚ

ಮೂಲಮ್

ಭ್ರಾತರೀಶಕೃತಃ ಪಾಶೋ ನೃಣಾಂ ಯಃ ಸ್ನೇಹಸಂಜ್ಞಿತಃ ।
ತಂ ದುಸ್ತ್ಯಜಮಹಂ ಮನ್ಯೇ ಶೂರಾಣಾಮಪಿ ಯೋಗಿನಾಮ್ ॥

ಅನುವಾದ

ವಸುದೇವನು ಹೇಳಿದನು — ಸಹೋದರ! ಭಗವಂತನು ಮನುಷ್ಯರಿಗೆ ಸ್ನೇಹ, ಪ್ರೇಮಪಾಶವೆಂಬ ಬಂಧನವನ್ನು ಕಲ್ಪಿಸಿಬಿಟ್ಟಿದ್ದಾನೆ. ಈ ಸ್ನೇಹ ಸಂಬಂಧವನ್ನು ತ್ಯಜಿಸಲು ದೊಡ್ಡ-ದೊಡ್ಡ ಶೂರರಿಗೂ, ಯೋಗಿ-ಯತಿಗಳಿಗೂ ಸಾಧ್ಯವಾಗದೆಂದು ನಾನು ಭಾವಿಸುತ್ತೇನೆ. ॥61॥

ಮೂಲಮ್

(ಶ್ಲೋಕ-62)
ಅಸ್ಮಾಸ್ವಪ್ರತಿಕಲ್ಪೇಯಂ ಯತ್ಕೃತಾಜ್ಞೇಷು ಸತ್ತಮೈಃ ।
ಮೈತ್ರ್ಯರ್ಪಿತಾಲಾ ವಾಪಿ ನ ನಿವರ್ತೇತ ಕರ್ಹಿಚಿತ್ ॥

ಅನುವಾದ

ನಮ್ಮಂತಹ ಅಕೃತಜ್ಞರೊಂದಿಗೆ ನೀವು ಅಸದೃಶವಾದ ಸ್ನೇಹದ ವ್ಯವಹಾರಮಾಡಿರುವಿರಿ. ನಿಮ್ಮಂತಹ ಸಂತಶಿರೋಮಣಿಗಳಿಗೆ ಇಂತಹ ವ್ಯವಹಾರವು ಸ್ವಭಾವಸಿದ್ಧವೇ ಆಗಿರುತ್ತದೆ. ನಾವು ಇದನ್ನು ಎಂದೂ ತೀರಿಸಲಾರೆವು. ನಿಮಗೆ ಇದರ ಪ್ರತಿಫಲವನ್ನು ಕೊಡಲು ಸಮರ್ಥರಲ್ಲ. ಹೀಗಿದ್ದರೂ ನಮ್ಮಗಳ ಈ ನಿರ್ವ್ಯಾಜವಾದ ಮಿತ್ರತೆಯ ಸಂಬಂಧವು ಅಚಲವಾಗಿಯೇ ಉಳಿಯಲಿ. ॥62॥

ಮೂಲಮ್

(ಶ್ಲೋಕ-63)
ಪ್ರಾಗಕಲ್ಪಾಚ್ಚ ಕುಶಲಂ ಭ್ರಾತರ್ವೋ ನಾಚರಾಮ ಹಿ ।
ಅಧುನಾ ಶ್ರೀಮದಾಂಧಾಕ್ಷಾ ನ ಪಶ್ಯಾಮಃ ಪುರಃ ಸತಃ ॥

ಅನುವಾದ

ಹಿಂದೆ ನಾವು ಕಾರಾಗೃಹದಲ್ಲಿ ಬಂಧಿತರಾಗಿದ್ದರಿಂದ ನಿಮಗೆ ಯಾವುದೇ ಉಪಕಾರವನ್ನು ಮಾಡಲೂ ಅಶಕ್ಯವಾಗಿತ್ತು. ಈಗಲಾದರೋ ಧನಮದದಿಂದ ಕುರುಡರಾಗಿ ನೀವು ನಮ್ಮ ಮುಂದೆಯೇ ಇದ್ದರೂ ಕಣ್ಣೆತ್ತಿಯೂ ನೋಡುತ್ತಿಲ್ಲ. ॥63॥

ಮೂಲಮ್

(ಶ್ಲೋಕ-64)
ಮಾ ರಾಜ್ಯಶ್ರೀರಭೂತ್ ಪುಂಸಃ ಶ್ರೇಯಸ್ಕಾಮಸ್ಯ ಮಾನದ ।
ಸ್ವಜನಾನುತ ಬಂಧೂನ್ ವಾ ನ ಪಶ್ಯತಿ ಯಯಾಂಧದೃಕ್ ॥

ಅನುವಾದ

ಮಾನದನಾದ ನಂದಗೋಪನೇ! ಶ್ರೇಯಸ್ಕಾಮನಾದವನಿಗೆ ರಾಜ್ಯಲಕ್ಷ್ಮಿಯು ದೊರಕದಿರುವುದೇ ಒಳಿತಿದೆ. ಏಕೆಂದರೆ, ಮನುಷ್ಯನು ರಾಜ್ಯಲಕ್ಷ್ಮಿಯಿಂದ ಕುರುಡನಾಗುತ್ತಾನೆ ಮತ್ತು ತನ್ನ ಸ್ವಜನರನ್ನಾಗಲೀ, ಬಂಧುಗಳನ್ನೂ ನೋಡಲಾರನು.॥64॥

ಮೂಲಮ್

(ಶ್ಲೋಕ-65)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಂ ಸೌಹೃದಶೈಥಿಲ್ಯಚಿತ್ತ ಆನಕದುಂದುಭಿಃ ।
ರುರೋದ ತತ್ಕೃತಾಂ ಮೈತ್ರೀಂ ಸ್ಮರನ್ನಶ್ರುವಿಲೋಚನಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಹೀಗೆ ಹೇಳುತ್ತಿದ್ದಂತೆಯೇ ವಸುದೇವನ ಹೃದಯವು ಪ್ರೇಮದಿಂದ ಗದ್ಗದವಾಯಿತು. ನಂದಗೋಪನ ಮೈತ್ರಿಯೂ ಹಿಂದೆ ಮಾಡಿದ ಉಪಕಾರಗಳೂ ಸ್ಮರಣೆಗೆ ಬಂದು ಅವನ ಕಣ್ಣುಗಳಲ್ಲಿ ನೀರು ತುಂಬಿಬಂದು ಗಳಗಳನೆ ಅತ್ತು ಬಿಟ್ಟನು. ॥65॥

ಮೂಲಮ್

(ಶ್ಲೋಕ-66)
ನಂದಸ್ತು ಸಖ್ಯುಃ ಪ್ರಿಯಕೃತ್ ಪ್ರೇಮ್ಣಾ ಗೋವಿಂದರಾಮಯೋಃ ।
ಅದ್ಯ ಶ್ವ ಇತಿ ಮಾಸಾಂಸೀನ್ ಯದುಭಿರ್ಮಾನಿತೋವಸತ್ ॥

ಅನುವಾದ

ನಂದಗೋಪನು ತನ್ನ ಮಿತ್ರನಾದ ವಸುದೇವನಿಗೆ ಹಾಗೂ ಶ್ರೀಕೃಷ್ಣ-ಬಲರಾಮರಿಗೆ ಸಂತೋಷಪಡಿಸಲು, ಅವರ ಪ್ರೇಮಪಾಶದಲ್ಲಿ ಬಂಧಿತನಾಗಿ ಇಂದು-ನಾಳೆ ಎಂದೆನ್ನುತ್ತಾ ಮೂರು ತಿಂಗಳು ಅಲ್ಲೇ ಇದ್ದುಬಿಟ್ಟನು. ॥66॥

ಮೂಲಮ್

(ಶ್ಲೋಕ-67)
ತತಃ ಕಾಮೈಃ ಪೂರ್ಯಮಾಣಃ ಸವ್ರಜಃ ಸಹಬಾಂಧವಃ ।
ಪರಾರ್ಧ್ಯಾಭರಣಕ್ಷೌಮನಾನಾನರ್ಘ್ಯಪರಿಚ್ಛದೈಃ ॥

ಅನುವಾದ

ಬಳಿಕ ಬಹುಮೂಲ್ಯವಾದ ಆಭೂಷಣಗಳಿಂದ, ರೇಷ್ಮೆ ವಸ್ತ್ರಗಳಿಂದ, ನಾನಾವಿಧದ ಉತ್ತಮೋತ್ತಮ ವಸ್ತುಗಳಾದ ಮತ್ತು ಭೋಗಸಾಮಗ್ರಿಗಳಿಂದ ನಂದಗೋಪನನ್ನು, ಅವನ ವ್ರಜವಾಸಿಗಳಾದ ಸಂಗಡಿಗರನ್ನೂ, ಬಂಧು ಬಾಂಧವರನ್ನು ಉದಾರ ಮನಸ್ಸಿನಿಂದ ತೃಪ್ತಿಪಡಿಸಿದನು. ॥67॥

ಮೂಲಮ್

(ಶ್ಲೋಕ-68)
ವಸುದೇವೋಗ್ರಸೇನಾಭ್ಯಾಂ ಕೃಷ್ಣೋದ್ಧವಬಲಾದಿಭಿಃ ।
ದತ್ತಮಾದಾಯ ಪಾರಿಬರ್ಹಂ ಯಾಪಿತೋ ಯದುಭಿರ್ಯಯೌ ॥

ಅನುವಾದ

ವಸುದೇವ, ಉಗ್ರಸೇನ, ಶ್ರೀಕೃಷ್ಣ-ಬಲರಾಮರು, ಉದ್ಧವರೇ ಮೊದಲಾದ ಯದುವಂಶೀಯರು ಬೇರೆ-ಬೇರೆಯಾಗಿ ಅವನಿಗೆ ಅನೇಕ ಉಡುಗೊರೆಗಳನ್ನು ಕೊಟ್ಟರು. ಅವರಿಂದ ಬೀಳ್ಕೊಂಡು, ಅವರಿತ್ತ ಸಾಮಗ್ರಿಗಳಿಂದೊಡಗೂಡಿ ನಂದಗೋಪನು ತನ್ನ ವ್ರಜಮಂಡಲಕ್ಕೆ ಪ್ರಯಾಣ ಮಾಡಿದನು. ॥68॥

ಮೂಲಮ್

(ಶ್ಲೋಕ-69)
ನಂದೋ ಗೋಪಾಶ್ಚ ಗೋಪ್ಯಶ್ಚ ಗೋವಿಂದಚರಣಾಂಬುಜೇ ।
ಮನಃ ಕ್ಷಿಪ್ತಂ ಪುನರ್ಹರ್ತುಮನೀಶಾ ಮಥುರಾಂ ಯಯುಃ ॥

ಅನುವಾದ

ನಂದಗೋಪ, ಗೋಪಾಲರು ಮತ್ತು ಗೋಪಿಯರ ಚಿತ್ತವು ಭಗವಾನ್ ಶ್ರೀಕೃಷ್ಣನ ಚರಣಕಮಲಗಳಲ್ಲಿ ಎಷ್ಟು ನೆಟ್ಟುಹೋಗಿತ್ತೆಂದರೆ ಅದನ್ನು ಪ್ರಯತ್ನ ಮಾಡಿದರೂ ಹಿಂದಿರುಗಿಸದಾದರು. ಕೊನೆಗೆ ಮನಸ್ಸಿಲ್ಲದೆಯೇ ಅವರು ಮಥುರೆಗೆ ಹೊರಟು ಹೋದರು. ॥69॥

ಮೂಲಮ್

(ಶ್ಲೋಕ-70)
ಬಂಧುಷು ಪ್ರತಿಯಾತೇಷು ವೃಷ್ಣಯಃ ಕೃಷ್ಣದೇವತಾಃ ।
ವೀಕ್ಷ್ಯ ಪ್ರಾವೃಷಮಾಸನ್ನಾಂ ಯಯುರ್ದ್ವಾರವತೀಂ ಪುನಃ ॥

ಅನುವಾದ

ಬಂಧು-ಮಿತ್ರರು ಹೋದನಂತರ ಶ್ರೀಕೃಷ್ಣನನ್ನೇ ಏಕಮಾತ್ರ ಇಷ್ಟದೇವನೆಂದು ಭಾವಿಸಿದ್ದ ಯಾದವರು ವರ್ಷಾ ಕಾಲವು ಸನ್ನಿಹಿತವಾದುದನ್ನು ಕಂಡು ದ್ವಾರಕೆಗೆ ಪ್ರಯಾಣಮಾಡಿದರು. ॥70॥

ಮೂಲಮ್

(ಶ್ಲೋಕ-71)
ಜನೇಭ್ಯಃ ಕಥಯಾಂಚಕ್ರುರ್ಯದುದೇವಮಹೋತ್ಸವಮ್ ।
ಯದಾಸೀತ್ತೀರ್ಥಯಾತ್ರಾಯಾಂ ಸುಹೃತ್ಸಂದರ್ಶನಾದಿಕಮ್ ॥

ಅನುವಾದ

ದ್ವಾರಾವತಿಯನ್ನು ಸೇರಿದ ಬಳಿಕ ಅವರೆಲ್ಲರೂ ಅಲ್ಲಿದ್ದ ಪ್ರಜೆಗಳಿಗೆ ವಸುದೇವನ ಯಜ್ಞೋತ್ಸವವನ್ನು, ತೀರ್ಥಯಾತ್ರೆಯ ಪ್ರಸಂಗದಲ್ಲಿ ಸ್ವಜನ-ಸಂಬಂಧಿಗಳ ದರ್ಶನ-ಭೇಟಿ, ವಾರ್ತಾಲಾಪ ಮೊದಲಾದುವನ್ನು ವಿವರಿಸಿ ಹೇಳಿದರು. ॥71॥

ಅನುವಾದ (ಸಮಾಪ್ತಿಃ)

ಎಂಭತ್ತನಾಲ್ಕನೆಯ ಅಧ್ಯಾಯವು ಮುಗಿಯಿತು. ॥84॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ
ತೀರ್ಥಯಾತ್ರಾನುವರ್ಣನಂ ನಾಮ ಚತುರಶೀತಿತಮೋಧ್ಯಾಯಃ ॥84॥