೮೩

[ಏಂಭತ್ತಮೂರನೇಯ ಅಧ್ಯಾಯ]

ಭಾಗಸೂಚನಾ

ಶ್ರೀಕೃಷ್ಣನ ಪಟ್ಟದರಸಿಯರೊಡನೆ ದ್ರೌಪದಿಯ ಮಾತುಕತೆ

ಮೂಲಮ್

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ತಥಾನುಗೃಹ್ಯ ಭಗವಾನ್ ಗೋಪೀನಾಂ ಸ ಗುರುರ್ಗತಿಃ ।
ಯುಧಿಷ್ಠಿರಮಥಾಪೃಚ್ಛತ್ಸರ್ವಾಂಶ್ಚ ಸುಹೃದೋವ್ಯಯಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತ ಮಹಾರಾಜ! ಗೋಪಿಯರಿಗೆ ಪರಮಗುರುವೂ, ಪರಮಾಶ್ರಯನೂ ಆದ ಶ್ರೀಕೃಷ್ಣನು ನಾನು ಹಿಂದೆ ಹೇಳಿದ ಪ್ರಕಾರ ಗೋಪಿಯರಿಗೆ ಅಧ್ಯಾತ್ಮ ಶಿಕ್ಷಣವನ್ನು ಕೊಟ್ಟು ಆನುಗ್ರಹಿಸಿ, ಯುಧಿಷ್ಠಿರನ ಮತ್ತು ಇತರ ಸಮಸ್ತ ಸುಹೃದರ ಕುಶಲಗಳನ್ನು ಕೇಳಿದನು. ॥1॥

ಮೂಲಮ್

(ಶ್ಲೋಕ-2)
ತ ಏವಂ ಲೋಕನಾಥೇನ ಪರಿಪೃಷ್ಟಾಃ ಸುಸತ್ಕೃತಾಃ ।
ಪ್ರತ್ಯೂಚುರ್ಹೃಷ್ಟಮನಸಸ್ತತ್ಪಾದೇಕ್ಷಾಹತಾಂಹಸಃ ॥

ಅನುವಾದ

ಲೋಕನಾಥನಾದ ಶ್ರೀಕೃಷ್ಣನಿಂದ ಸತ್ಕೃತರಾಗಿ ಕುಶಲಪ್ರಶ್ನೆ ಮಾಡಲ್ಪಟ್ಟು ಹಾಗೂ ಆ ಭಗವಂತನ ದಿವ್ಯಪಾದಾರವಿಂದಗಳ ದರ್ಶನಮಾತ್ರದಿಂದಲೇ ಸಮಸ್ತ ಪಾಪಗಳಿಂದ ವಿಮುಕ್ತರಾದ ಯುಧಿಷ್ಠಿರನೇ ಮೊದಲಾದವರು ಪರಮಸಂತುಷ್ಟರಾಗಿ ವಾಸುದೇವನಲ್ಲಿ ಹೇಳಿದರು. ॥2॥

ಮೂಲಮ್

(ಶ್ಲೋಕ-3)
ಕುತೋಶಿವಂ ತ್ವಚ್ಚರಣಾಂಬುಜಾಸವಂ
ಮಹನ್ಮನಸ್ತೋ ಮುಖನಿಃಸೃತಂ ಕ್ವಚಿತ್ ।
ಪಿಬಂತಿ ಯೇ ಕರ್ಣಪುಟೈರಲಂ ಪ್ರಭೋ
ದೇಹಂಭೃತಾಂ ದೇಹಕೃದಸ್ಮೃತಿಚ್ಛಿದಮ್ ॥

ಅನುವಾದ

ಭಗವಂತಾ! ಮಹಾಪುರಷರು ಸದಾಕಾಲ ತಮ್ಮ ಮನಸ್ಸಿನಲ್ಲೇ ನಿನ್ನ ಪಾದಾರವಿಂದಗಳ ಮಕರಂದವನ್ನು ಪಾನಮಾಡುತ್ತಾ ಇರುತ್ತಾರೆ. ಕೆಲವೊಮ್ಮೆ ಅವರ ಮುಖಕಮಲದಿಂದ ಲೀಲಾ-ಕಥೆಯ ರೂಪದಲ್ಲಿ ಆ ರಸವು ಹೊರಹೊಮ್ಮುವುದು. ಪ್ರಭೋ! ಅಂತಹ ದಿವ್ಯರಸವನ್ನು ಯಾವುದೇ ಪ್ರಾಣಿಯು ಪಾನಮಾಡಿದರೆ ಅವನ ಜನ್ಮ-ಮೃತ್ಯುವಿನ ಚಕ್ರದಲ್ಲಿ ಕೆಡಹುವ ಅವಿದ್ಯೆಯನ್ನು ನಾಶಮಾಡಿಬಿಡುತ್ತದೆ. ಅಂತಹ ರಸವನ್ನು ಕಿವಿಗಳೆಂಬ ದೊನ್ನೆಯಿಂದ ಪಾನಮಾಡುವವರಿಗೆ ಅಮಂಗಳದ ಆಶಂಕೆಯು ಎಲ್ಲಿಯದು? ॥3॥

ಮೂಲಮ್

(ಶ್ಲೋಕ-4)
ಹಿತ್ವಾತ್ಮಧಾಮ ವಿಧುತಾತ್ಮಕೃತತ್ರ್ಯವಸ್ಥ-
ಮಾನಂದಸಂಪ್ಲವಮಖಂಡಮಕುಂಠಬೋಧಮ್ ।
ಕಾಲೋಪಸೃಷ್ಟನಿಗಮಾವನ ಆತ್ತಯೋಗ-
ಮಾಯಾಕೃತಿಂ ಪರಮಹಂಸಗತಿಂ ನತಾಃ ಸ್ಮ ॥

ಅನುವಾದ

ಭಗವಂತನೇ! ನೀನು ಏಕರಸನೂ, ಜ್ಞಾನಸ್ವರೂಪನೂ, ಅಖಂಡ ಆನಂದದ ಸಮುದ್ರನೂ ಆಗಿರುವೆ. ಬುದ್ಧಿ-ವೃತ್ತಿಗಳಿಂದ ಉಂಟಾಗುವ ಜಾಗ್ರತ್, ಸ್ವಪ್ನ, ಸುಷುಪ್ತಿ-ಈ ಮೂರು ಅವಸ್ಥೆಗಳೂ ನಿನ್ನ ಸ್ವಯಂಪ್ರಕಾಶ ಸ್ವರೂಪದವರೆಗೆ ತಲುಪಲಾರವು; ದೂರದಿಂದಲೇ ನಾಶವಾಗಿ ಹೋಗುವುದು. ನೀನು ಪರಮಹಂಸರಿಗೆ ಏಕಮಾತ್ರ ಗತಿ ಸ್ವರೂಪನು. ಕಾಲಕ್ರಮದಲ್ಲಿ ವೇದಗಳು ಹ್ರಾಸಗೊಂಡಿರು ವುದನ್ನು ನೋಡಿ, ಅವನ್ನು ರಕ್ಷಿಸಲಿಕ್ಕಾಗಿ ನೀನೇ ಅಚಿಂತ್ಯ ಯೋಗಮಾಯೆಯ ಮೂಲಕ ಮನುಷ್ಯರಂತೆ ಶರೀರವನ್ನು ಗ್ರಹಿಸುತ್ತೀಯೆ. ಅಂತಹ ನಿನ್ನ ಚರಣಗಳಲ್ಲಿ ನಾವು ಪದೇ- ಪದೇ ನಮಸ್ಕರಿಸುತ್ತೇವೆ. ॥4॥

ಮೂಲಮ್

(ಶ್ಲೋಕ-5)

ಮೂಲಮ್ (ವಾಚನಮ್)

ಋಷಿರುವಾಚ

ಮೂಲಮ್

ಇತ್ಯುತ್ತಮಶ್ಲೋಕಶಿಖಾಮಣಿಂ ಜನೇ-
ಷ್ವಭಿಷ್ಟುವತ್ಸ್ವಂಧಕಕೌರವಸಿಯಃ ।
ಸಮೇತ್ಯ ಗೋವಿಂದ ಕಥಾ ಮಿಥೋಗೃಣಂ-
ಸಿಲೋಕಗೀತಾಃ ಶೃಣು ವರ್ಣಯಾಮಿ ತೇ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಹೀಗೆ ಯುಧಿಷ್ಠಿರಾದಿಗಳು ಶ್ರೀಕೃಷ್ಣನನ್ನು ಸ್ತುತಿಸುತ್ತಿದ್ದಾಗ ಯಾದವ ಸ್ತ್ರೀಯರು ಮತ್ತು ಕೌರವ ಕುಲದ ಸ್ತ್ರೀಯರು ಒಟ್ಟಾಗಿ ಕುಳಿತು ಪರಸ್ಪರವಾಗಿ ಭಗವಂತನ ತ್ರಿಭುವನ ವಿಖ್ಯಾತವಾದ ಲೀಲೆಗಳನ್ನು ಮಾತನಾಡಿಕೊಳ್ಳುತ್ತಿದ್ದರು. ಈಗ ನಾನು ನಿನಗೆ ಅವರ ಮಾತುಗಳನ್ನು ವರ್ಣಿಸುವೆನು. ಏಕಾಗ್ರಚಿತ್ತನಾಗಿ ಕೇಳು. ॥5॥

ಮೂಲಮ್

(ಶ್ಲೋಕ-6)

ಮೂಲಮ್ (ವಾಚನಮ್)

ದ್ರೌಪದ್ಯುವಾಚ

ಮೂಲಮ್

ಹೇ ವೈದರ್ಭ್ಯಚ್ಯುತೋ ಭದ್ರೇ ಹೇ ಜಾಂಬವತಿ ಕೌಸಲೇ ।
ಹೇ ಸತ್ಯಭಾಮೇ ಕಾಲಿಂದಿ ಶೈಬ್ಯೇ ರೋಹಿಣಿ ಲಕ್ಷ್ಮಣೇ ॥
(ಶ್ಲೋಕ-7)
ಹೇ ಕೃಷ್ಣಪತ್ನ್ಯ ಏತನ್ನೋ ಬ್ರೂತವೋ ಭಗವಾನ್ ಸ್ವಯಮ್ ।
ಉಪಯೇಮೇ ಯಥಾ ಲೋಕಮನುಕುರ್ವನ್ಸ್ವಮಾಯಯಾ ॥

ಅನುವಾದ

ದ್ರೌಪದಿಯು ಹೇಳಿದಳು — ಎಲೌ ರುಕ್ಮಿಣಿಯೇ! ಭದ್ರೆ! ಜಾಂಬವತಿ! ಸತ್ಯೆ! ಸತ್ಯಭಾಮೆ! ಕಾಲಿಂದಿ! ಶೈಬ್ಯೆ! ಮಿತ್ರವಿಂದೆ! ಲಕ್ಷ್ಮಣೇ! ರೋಹಿಣಿಯೇ! ಮತ್ತು ಶ್ರೀಕೃಷ್ಣನ ಇತರ ಪತ್ನಿಯರೇ! ಸಾಕ್ಷಾತ್ ಭಗವಾನ್ ಶ್ರೀಕೃಷ್ಣನು ತನ್ನ ಮಾಯೆಯಿಂದ ಲೋಕಾಚಾರವನ್ನು ಅನುಸರಿಸುತ್ತಾ ಯಾವ ರೀತಿಯಿಂದ ನಿಮ್ಮೆಲ್ಲರನ್ನು ಮದುವೆಯಾದನು? ಇದನ್ನು ಕೇಳುವ ಉತ್ಸುಕತೆ ನಮಗಿದೆ. ನಿಮ್ಮ-ನಿಮ್ಮ ವಿವಾಹ ಪ್ರಸಂಗವನ್ನು ವಿವರಿಸಿ ಹೇಳಿರಿ. ॥6-7॥

ಮೂಲಮ್

(ಶ್ಲೋಕ-8)

ಮೂಲಮ್ (ವಾಚನಮ್)

ರುಕ್ಮಿಣ್ಯುವಾಚ

ಮೂಲಮ್

ಚೈದ್ಯಾಯ ಮಾರ್ಪಯಿತುಮುದ್ಯತಕಾರ್ಮುಕೇಷು
ರಾಜಸ್ವಜೇಯಭಟಶೇಖರಿತಾಂಘ್ರಿರೇಣುಃ ।
ನಿನ್ಯೇ ಮೃಗೇಂದ್ರ ಇವ ಭಾಗಮಜಾವಿಯೂಥಾತ್
ತಚ್ಛ್ರೀನಿಕೇತ ಚರಣೋಸ್ತು ಮಮಾರ್ಚನಾಯ ॥

ಅನುವಾದ

ರುಕ್ಮಿಣಿಯು ಹೇಳುತ್ತಾಳೆ — ದ್ರೌಪದಾದೇವೀ! ಜರಾಸಂಧನೇ ಮೊದಲಾದ ಸಮಸ್ತರಾಜರು ನನ್ನ ವಿವಾಹವು ಶಿಶುಪಾಲನೊಂದಿಗೆ ಆಗಬೇಕೆಂದು ಬಯಸುತ್ತಿದ್ದರು. ಅದಕ್ಕಾಗಿ ಅವರೆಲ್ಲರೂ ಶಸ್ತ್ರಾಸ್ತ್ರಗಳಿಂದ ಸಜ್ಜಾಗಿ ಯುದ್ಧಮಾಡಲು ಸಿದ್ಧರಾಗಿದ್ದರು. ಆದರೆ ಭಗವಂತನು - ಸಿಂಹವು ಕುರಿಯ ಮಂದೆಗೆ ನುಗ್ಗಿ ತನ್ನ ಭಾಗವನ್ನು ಕೊಂಡೊಯ್ಯುವಂತೆ ಆ ರಾಜರ ಮಧ್ಯದಿಂದ ನನ್ನನ್ನು ಕೊಂಡೊಯ್ದನು. ಸಮಸ್ತ ಸಂಪತ್ತಿಗೂ, ಸೌಂದರ್ಯಕ್ಕೂ ಆಶ್ರಯವಾದ ಆ ಭಗವಂತನ ಚರಣಕಮಲಗಳೇ ಜನ್ಮ-ಜನ್ಮಗಳಲ್ಲಿ ನನ್ನ ಆರಾಧನೆಗೆ ಲಭಿಸುವಂತಾಗಲಿ. ॥8॥

ಮೂಲಮ್

(ಶ್ಲೋಕ-9)

ಮೂಲಮ್ (ವಾಚನಮ್)

ಸತ್ಯಭಾಮೋವಾಚ

ಮೂಲಮ್

ಯೋ ಮೇ ಸನಾಭಿವಧತಪ್ತಹೃದಾ ತತೇನ
ಲಿಪ್ತಾಭಿಶಾಪಮಪಮಾರ್ಷ್ಟುಮುಪಾಜಹಾರ ।
ಜಿತ್ವರ್ಕ್ಷರಾಜಮಥ ರತ್ನಮದಾತ್ಸತೇನ
ಭೀತಃ ಪಿತಾದಿಶತ ಮಾಂ ಪ್ರಭವೇಪಿ ದತ್ತಾಮ್ ॥

ಅನುವಾದ

ಸತ್ಯಭಾಮೆಯು ಹೇಳುತ್ತಾಳೆ — ದ್ರೌಪದಿಯೇ! ನನ್ನ ತಂದೆಯು ತಮ್ಮನಾದ ಪ್ರಸೇನನ ಮೃತ್ಯುವಿನಿಂದಾಗಿ ಬಹಳ ದುಃಖಿತನಾಗಿದ್ದನು. ಆದ್ದರಿಂದ ಅವನು ತಮ್ಮನ ವಧೆಯ ಕಲಂಕವನ್ನು ಭಗವಂತನಿಗೆ ಹಚ್ಚಿದನು. ಆ ಕಲಂಕವನ್ನು ದೂರ ಮಾಡಲಿಕ್ಕಾಗಿ ಭಗವಂತನು ಋಕ್ಷರಾಜ ಜಾಂಬವಂತನನ್ನು ಜಯಿಸಿ ಆ ಸ್ಯಮಂತಕ ರತ್ನವನ್ನು ತಂದು ನನ್ನ ತಂದೆಗೆ ಕೊಟ್ಟನು. ಮಿಥ್ಯಾಪವಾದ ಹೊರಿಸಿದ ಕಾರಣದಿಂದ ಹೆದರಿಹೋಗಿದ್ದ ನನ್ನ ತಂದೆಯು ಬೇರೆಯವರಿಗೆ ವಾಗ್ದಾನಮಾಡಿದ್ದರೂ, ಅವರು ನನ್ನನ್ನು ಸ್ಯಮಂತಕ ಮಣಿಯೊಂದಿಗೆ ಭಗವಂತನ ಚರಣಗಳಲ್ಲಿ ಅರ್ಪಿಸಿದನು. ॥9॥

ಮೂಲಮ್

(ಶ್ಲೋಕ-10)

ಮೂಲಮ್ (ವಾಚನಮ್)

ಜಾಂಬವತ್ಯುವಾಚ

ಮೂಲಮ್

ಪ್ರಾಜ್ಞಾಯ ದೇಹಕೃದಮುಂ ನಿಜನಾಥದೇವಂ
ಸೀತಾಪತಿಂ ತ್ರಿಣವಹಾನ್ಯಮುನಾಭ್ಯಯುಧ್ಯತ್ ।
ಜ್ಞಾತ್ವಾ ಪರೀಕ್ಷಿತ ಉಪಾಹರದರ್ಹಣಂ ಮಾಂ
ಪಾದೌ ಪ್ರಗೃಹ್ಯ ಮಣಿನಾಹಮಮುಷ್ಯ ದಾಸೀ ॥

ಅನುವಾದ

ಜಾಂಬವತಿಯು ಹೇಳುತ್ತಾಳೆ — ಪಾಂಚಾಲಿಯೇ! ಋಕ್ಷರಾಜನಾದ ನನ್ನ ತಂದೆ ಜಾಂಬವಂತನಿಗೆ ಶ್ರೀಕೃಷ್ಣನು ತನ್ನ ಸ್ವಾಮಿಯಾದ ಸೀತಾಪತಿ ಶ್ರೀರಾಮನೇ ಎಂಬುದು ಮೊದಲು ತಿಳಿದಿರಲಿಲ್ಲ. ಇದರಿಂದ ನನ್ನ ತಂದೆಯು ಇವರೊಂದಿಗೆ ಇಪ್ಪತ್ತೇಳು ದಿನಗಳವರೆಗೆ ಯುದ್ಧಮಾಡಿದನು. ಆದರೆ ಪರೀಕ್ಷೆಯು ಪೂರ್ಣಗೊಂಡಾಗ ಇವನು ಭಗವಾನ್ ಶ್ರೀರಾಮನೇ ಆಗಿರುವನು ಎಂದು ತಿಳಿದಾಗ ಶ್ರೀಕೃಷ್ಣನ ಚರಣಕಮಲಗಳನ್ನು ಹಿಡಿದುಕೊಂಡು ಸ್ಯಮಂತಕ ಮಣಿಯೊಂದಿಗೆ ಕಾಣಿಕೆಯಾಗಿ ನನ್ನನ್ನೂ ಸಮರ್ಪಿಸಿದನು. ಜನ್ಮ-ಜನ್ಮಗಳಲ್ಲಿಯೂ ಇವರ ದಾಸಿಯಾಗಿಯೇ ಇರಬೇಕೆಂದು ನಾನೂ ಬಯಸಿದ್ದೆ. ॥10॥

ಮೂಲಮ್

(ಶ್ಲೋಕ-11)

ಮೂಲಮ್ (ವಾಚನಮ್)

ಕಾಲಿಂದ್ಯುವಾಚ

ಮೂಲಮ್

ತಪಶ್ಚರಂತೀಮಾಜ್ಞಾಯ ಸ್ವಪಾದಸ್ಪರ್ಶನಾಶಯಾ ।
ಸಖ್ಯೋಪೇತ್ಯಾಗ್ರಹೀತ್ಪಾಣಿಂ ಯೋಹಂ ತದ್ಗೃಹಮಾರ್ಜನೀ ॥

ಅನುವಾದ

ಕಾಲಿಂದಿಯು ಹೇಳುತ್ತಾಳೆ — ದ್ರೌಪದೀದೇವಿ! ನಾನು ಭಗವಂತನ ಚರಣಗಳನ್ನು ಸ್ಪರ್ಶಿಸಬೇಕೆಂಬ ಅಭಿಲಾಷೆಯಿಂದ ತಪಸ್ಸು ಮಾಡುತ್ತಿದ್ದೇನೆ ಎಂದು ತಿಳಿದ ಶ್ರೀಕೃಷ್ಣನು ತನ್ನ ಮಿತ್ರನಾದ ಅರ್ಜುನನೊಂದಿಗೆ ಯುಮುನಾತೀರಕ್ಕೆ ಬಂದು ನನ್ನನ್ನು ಪರಿಗ್ರಹಿಸಿದನು. ನಾನು ಅವನ ಮನೆಯ ಕಸಗುಡಿಸುವ ದಾಸಿಯಾಗಿದ್ದೇನೆ. ॥11॥

ಮೂಲಮ್

(ಶ್ಲೋಕ-12)

ಮೂಲಮ್ (ವಾಚನಮ್)

ಮಿತ್ರವಿಂದೋವಾಚ

ಮೂಲಮ್

ಯೋ ಮಾಂ ಸ್ವಯಂವರ ಉಪೇತ್ಯ ವಿಜಿತ್ಯ ಭೂಪಾನ್
ನಿನ್ಯೇ ಶ್ವಯೂಥಗಮಿವಾತ್ಮಬಲಿಂ ದ್ವಿಪಾರಿಃ ।
ಭ್ರಾತೃಂಶ್ಚ ಮೇಪಕುರುತಃ ಸ್ವಪುರಂ ಶ್ರಿಯೌಕ-
ಸ್ತಸ್ಯಾಸ್ತು ಮೇನುಭವಮಂಘ್ರ್ಯವನೇಜನತ್ವಮ್ ॥

ಅನುವಾದ

ಮಿತ್ರವಿಂದೆಯು ಹೇಳಿದಳು — ಪಾಂಚಾಲರಾಜ ಕುಮಾರಿ! ನನ್ನ ಸ್ವಯಂವರವನ್ನು ಏರ್ಪಡಿಸಿದ್ದರು. ಅಲ್ಲಿಗೆ ಬಂದು ಭಗವಂತನು - ಸಿಂಹವು ನಾಯಿಗಳ ಮಧ್ಯದಲ್ಲಿರುವ ತನ್ನ ಭಾಗವನ್ನು ಎತ್ತಿಕೊಂಡು ಹೋಗುವಂತೆಯೇ ಅಲ್ಲಿ ನೆರೆದಿದ್ದ ಸಮಸ್ತ ರಾಜರನ್ನು ಗೆದ್ದು ನನ್ನನ್ನು ತನ್ನ ಶೋಭಾ ಸಂಪನ್ನ ದ್ವಾರಕೆಗೆ ಕರೆತಂದನು. ನನ್ನ ಸಹೋದರನೂ ಕೂಡ ಭಗವಂತನಿಂದ ಬಿಡಿಸಿ ನನಗೆ ಅಪಕಾರವನ್ನು ಮಾಡಲೆಳಸಿದನು; ಆದರೆ ಅವನೂ ಸೋತು ಹಿಂದಿರುಗಿದನು. ನನಗೆ ಜನ್ಮ-ಜನ್ಮಾಂತರಗಳಲ್ಲಿಯೂ ಭಗವಂತನ ಪಾದಸೇವೆ ಮಾಡುವ ಸೌಭಾಗ್ಯವು ಪ್ರಾಪ್ತವಾಗಲೆಂದೇ ನಾನು ಬಯಸುತ್ತೇನೆ. ॥12॥

ಮೂಲಮ್

(ಶ್ಲೋಕ-13)

ಮೂಲಮ್ (ವಾಚನಮ್)

ಸತ್ಯೋವಾಚ

ಮೂಲಮ್

ಸಪ್ತೋಕ್ಷಣೋತಿಬಲವೀರ್ಯಸುತೀಕ್ಷ್ಣಶೃಂಗಾನ್
ಪಿತ್ರಾಕೃತಾನ್ಕ್ಷಿತಿಪವೀರ್ಯ ಪರೀಕ್ಷಣಾಯ ।
ತಾನ್ವೀರದುರ್ಮದಹನಸ್ತರಸಾ ನಿಗೃಹ್ಯ
ಕ್ರೀಡನ್ಬಬಂಧ ಹ ಯಥಾ ಶಿಶವೋಜತೋಕಾನ್ ॥

ಅನುವಾದ

ಸತ್ಯೆಯು ಹೇಳಿದಳು — ದ್ರೌಪದಿ! ನನ್ನ ತಂದೆಯು ಸ್ವಯಂವರಕ್ಕೆ ಆಗಮಿಸುವ ರಾಜಕುಮಾರರ ಬಲ-ಪೌರುಷಗಳನ್ನು ಪರೀಕ್ಷಿಸುವ ಸಲುವಾಗಿ ಬಲಿಷ್ಠವಾಗಿದ್ದ, ಪರಾಕ್ರಮಿಗಳಾದ ಮತ್ತು ತೀಕ್ಷ್ಣವಾದ ಕೊಂಬುಗಳಿಂದ ಭಯಂಕರವಾಗಿ ಕಾಣುತ್ತಿದ್ದ ಏಳು ಹೋರಿಗಳನ್ನು ಸಿದ್ಧಗೊಳಿಸಿದ್ದನು. ಆ ಹೋರಿಗಳನ್ನು ಪಳಗಿಸಿದವನಿಗೆ ನನ್ನನ್ನು ಕೊಡುವುದಾಗಿ ನನ್ನ ತಂದೆಯ ಆಶಯವಾಗಿತ್ತು. ನನ್ನ ಕೈಹಿಡಿಯಲು ಬಂದಿದ್ದ ಹಲವಾರು ರಾಜಕುಮಾರರನ್ನು ಆ ಹೋರಿಗಳು ಛಿನ್ನ-ಭಿನ್ನಗೊಳಿಸಿದ್ದವು. ಆದರೆ ನನ್ನ ಪ್ರಭುವಾದ ಶ್ರೀಕೃಷ್ಣನು ಆ ಏಳು ಹೋರಿಗಳನ್ನು - ಬಾಲಕರು ಮೇಕೆಯ ಮರಿಗಳನ್ನು ಹಿಡಿದು ಕಟ್ಟಿಹಾಕುವಂತೆ ಆಟವಾಡುತ್ತಲೇ ಬಂದಿಸಿಬಿಟ್ಟನು. ॥13॥

ಮೂಲಮ್

(ಶ್ಲೋಕ-14)
ಯ ಇತ್ಥಂ ವೀರ್ಯಶುಲ್ಕಾಂ ಮಾಂ ದಾಸೀಭಿಶ್ಚತುರಂಗಿಣೀಮ್ ।
ಪಥಿ ನಿರ್ಜಿತ್ಯ ರಾಜನ್ಯಾನ್ನಿನ್ಯೇ ತದ್ದಾಸ್ಯಮಸ್ತು ಮೇ ॥

ಅನುವಾದ

ಹೀಗೆ ಭಗವಂತನು ಬಲ-ಪೌರುಷಗಳಿಂದ ನನ್ನನ್ನು ಪಡೆದುಕೊಂಡು ಚತುರಂಗ ಸೈನ್ಯದೊಂದಿಗೆ ಮತ್ತು ಹಲವಾರು ದಾಸಿಯರೊಂದಿಗೆ ದ್ವಾರಕೆಗೆ ಕರೆ ತಂದನು. ದಾರಿಯಲ್ಲಿ ವಿಘ್ನವನ್ನೊಡ್ಡಿದ ರಾಜರನ್ನು ಸೋಲಿಸಿ ಬಿಟ್ಟನು. ನನಗೆ ಅವನ ಸೇವೆಯ ಸೌಭಾಗ್ಯವು ಸದಾ-ಸರ್ವಕಾಲಗಳಲ್ಲಿ ದೊರೆಯುತ್ತಿರಬೇಕೆಂಬುದೇ ನನ್ನ ಬಯಕೆಯಾಗಿದೆ. ॥14॥

ಮೂಲಮ್

(ಶ್ಲೋಕ-15)

ಮೂಲಮ್ (ವಾಚನಮ್)

ಭದ್ರೋವಾಚ

ಮೂಲಮ್

ಪಿತಾ ಮೇ ಮಾತುಲೇಯಾಯ ಸ್ವಯಮಾಹೂಯ ದತ್ತವಾನ್ ।
ಕೃಷ್ಣೇ ಕೃಷ್ಣಾಯ ತಚ್ಚಿತ್ತಾಮಕ್ಷೌಹಿಣ್ಯಾ ಸಖೀಜನೈಃ ॥

ಅನುವಾದ

ಭದ್ರೆಯು ಹೇಳಿದಳು — ದ್ರುಪದನಂದಿನಿ! ಭಗವಾನ್ ಶ್ರೀಕೃಷ್ಣನು ನನ್ನ ಸಹೋದರಮಾವನ ಮಗನು, ನನ್ನ ಚಿತ್ತವು ಅವರ ಚರಣಗಳಲ್ಲೇ ಅನುರಕ್ತವಾಗಿ ಹೋಗಿತ್ತು. ನನ್ನ ತಂದೆಯವರಿಗೆ ಈ ವಿಷಯ ತಿಳಿದಾಗ ಅವರು ಸ್ವತಃ ಭಗವಂತನನ್ನು ಕರೆಸಿ ಅನೇಕ ಅಕ್ಷೌಹಿಣೀ ಸೈನ್ಯ ಮತ್ತು ಬಹಳಷ್ಟು ದಾಸಿಯರೊಂದಿಗೆ ನನ್ನನ್ನು ಇವರ ಚರಣಗಳಲ್ಲಿ ಸಮರ್ಪಿಸಿದನು. ॥15॥

ಮೂಲಮ್

(ಶ್ಲೋಕ-16)
ಅಸ್ಯ ಮೇ ಪಾದಸಂಸ್ಪರ್ಶೋ ಭವೇಜ್ಜನ್ಮನಿ ಜನ್ಮನಿ ।
ಕರ್ಮಭಿರ್ಭ್ರಾಮ್ಯಮಾಣಾಯಾ ಯೇನ ತಚ್ಛ್ರೇಯ ಆತ್ಮನಃ ॥

ಅನುವಾದ

ನಾನು ಮಾಡಿದ ಕರ್ಮಕ್ಕನುಸಾರ ನನಗೆ ಎಲ್ಲೆ ಹುಟ್ಟಬೇಕಾಗಿ ಬಂದರೂ ಎಲ್ಲಾ ಕಡೆಗಳಲ್ಲಿಯೂ ಶ್ರೀಕೃಷ್ಣನ ಚರಣಕಮಲಗಳ ಸಂಸ್ಪರ್ಶವೇ ದೊರೆಯುತ್ತಿರಲಿ. ಇದರಲ್ಲೇ ನನ್ನ ಶ್ರೇಯಸ್ಸಿದೆ ಎಂದು ತಿಳಿಯುತ್ತೇನೆ. ॥16॥

ಮೂಲಮ್

(ಶ್ಲೋಕ-17)

ಮೂಲಮ್ (ವಾಚನಮ್)

ಲಕ್ಷ್ಮಣೋವಾಚ

ಮೂಲಮ್

ಮಮಾಪಿ ರಾಜ್ಞ್ಯಚ್ಯುತಜನ್ಮಕರ್ಮ
ಶ್ರುತ್ವಾ ಮುಹುರ್ನಾರದಗೀತಮಾಸ ಹ ।
ಚಿತ್ತಂ ಮುಕುಂದೇ ಕಿಲ ಪದ್ಮಹಸ್ತಯಾ
ವೃತಃ ಸುಸಂಮೃಶ್ಯ ವಿಹಾಯ ಲೋಕಪಾನ್ ॥

ಅನುವಾದ

ಲಕ್ಷ್ಮಣೆಯು ಹೇಳುತ್ತಾಳೆ — ಮಹಾರಾಣಿ! ದೇವಋಷಿ ನಾರದರು ಪದೇ-ಪದೇ ಭಗವಂತನ ಅವತಾರ, ಲೀಲಾ ಪ್ರಸಂಗಗಳನ್ನು ಹಾಡುತ್ತಾ ಇರುತ್ತಾರೆ. ಲಕ್ಷ್ಮೀದೇವಿಯು ಸಮಸ್ತ ಲೋಕಪಾಲರನ್ನು ತ್ಯಜಿಸಿ ಭಗವಂತನನ್ನೇ ವರಿಸಿದಳು; ಇದನ್ನು ಕೇಳಿದ ನಾನೂ ಭಗವಂತನನ್ನೇ ಸೇರಬೇಕೆಂದು ವಿಚಾರಮಾಡಿ ನನ್ನ ಮನಸ್ಸೂ ಭಗವಂತನ ಚರಣಗಳಲ್ಲಿ ಆಸಕ್ತವಾಯಿತು. ॥17॥

ಮೂಲಮ್

(ಶ್ಲೋಕ-18)
ಜ್ಞಾತ್ವಾ ಮಮ ಮತಂ ಸಾಧ್ವಿ ಪಿತಾ ದುಹಿತೃವತ್ಸಲಃ ।
ಬೃಹತ್ಸೇನ ಇತಿ ಖ್ಯಾತಸ್ತತ್ರೋಪಾಯಮಚೀಕರತ್ ॥

ಅನುವಾದ

ಸಾಧ್ವಿ! ನನ್ನ ತಂದೆಯಾದ ಬೃಹತ್ಸೇನನು ನನ್ನನ್ನು ತುಂಬಾ ಪ್ರೀತಿಸುತ್ತಿದ್ದನು. ನನ್ನ ಅಭಿಪ್ರಾಯವು ಅವನಿಗೆ ತಿಳಿಸಿದಾಗ ಅವನು ನನ್ನ ಇಚ್ಛೆಯನ್ನು ನೆರವೇರಿಸಲು ಹೀಗೆ ಉಪಾಯಮಾಡಿದನು. ॥18॥

ಮೂಲಮ್

(ಶ್ಲೋಕ-19)
ಯಥಾ ಸ್ವಯಂವರೇ ರಾಜ್ಞಿ ಮತ್ಸ್ಯಃ ಪಾರ್ಥೇಪ್ಸಯಾ ಕೃತಃ ।
ಅಯಂ ತು ಬಹಿರಾಚ್ಛನ್ನೋ ದೃಶ್ಯತೇ ಸ ಜಲೇ ಪರಮ್ ॥

ಅನುವಾದ

ದ್ರೌಪದಿಯೇ! ಪಾಂಡವವೀರನಾದ ಅರ್ಜುನನನ್ನು ಅಳಿಯನನ್ನಾಗಿಸಿಕೊಳ್ಳಲು ನಿನ್ನ ತಂದೆಯು ಸ್ವಯಂವರದಲ್ಲಿ ಮತ್ಸ್ಯಯಂತ್ರವನ್ನು ಇರಿಸಿದ್ದನೋ ಹಾಗೆಯೇ ನನ್ನ ತಂದೆಯೂ ಮಾಡಿದರು. ಆದರೆ ನಿಮ್ಮ ಮತ್ಸ್ಯಯಂತ್ರಕ್ಕಿಂತ ನಮ್ಮದು ವಿಶಿಷ್ಟವಾಗಿತ್ತು. ನಿಮ್ಮಲ್ಲಿ ಮತ್ಸ್ಯವು ಹೊರಗಿನಿಂದ ಕಂಡುಬಂದರೆ ನಮ್ಮದು ಹೊರಗಿಂದ ಮುಚ್ಚಲ್ಪಟ್ಟು ಅದರ ನೆರಳು ಕೆಳಗಿನ ನೀರಿನಲ್ಲಿ ಮಾತ್ರ ಕಾಣುತ್ತಿತ್ತು. ॥19॥

ಮೂಲಮ್

(ಶ್ಲೋಕ-20)
ಶ್ರುತ್ವೈತತ್ಸರ್ವತೋ ಭೂಪಾ ಆಯಯುರ್ಮತ್ಪಿತುಃ ಪುರಮ್ ।
ಸರ್ವಾಸಶಸತತ್ತ್ವಜ್ಞಾಃ ಸೋಪಾಧ್ಯಾಯಾಃ ಸಹಸ್ರಶಃ ॥

ಅನುವಾದ

ಈ ಸಮಾಚಾರವು ರಾಜರಿಗೆ ತಿಳಿದಾಗ ಎಲ್ಲ ಕಡೆಗಳಿಂದ ಸಾವಿರಾರು ಅಸ್ತ್ರ-ಶಸ್ತ್ರಗಳ ತಜ್ಞರಾದ ರಾಜರು ತಮ್ಮ-ತಮ್ಮ ಗುರುಗಳೊಂದಿಗೆ ನಮ್ಮ ತಂದೆಯ ರಾಜಧಾನಿಗೆ ಆಗಮಿಸಿದರು. ॥20॥

ಮೂಲಮ್

(ಶ್ಲೋಕ-21)
ಪಿತ್ರಾ ಸಂಪೂಜಿತಾಃ ಸರ್ವೇ ಯಥಾವೀರ್ಯಂ ಯಥಾವಯಃ ।
ಆದದುಃ ಸಶರಂ ಚಾಪಂ ವೇದ್ಧುಂ ಪರ್ಷದಿ ಮದ್ಧಿಯಃ ॥

ಅನುವಾದ

ನನ್ನ ತಂದೆಯವರು ಬಂದಿರುವ ರಾಜರೆಲ್ಲರ ಬಲ-ಪೌರುಷ, ವಯಸ್ಸಿಗೆ ತಕ್ಕಂತೆ ಯಥೋಚಿತವಾಗಿ ಸ್ವಾಗತ-ಸತ್ಕಾರವನ್ನು ಮಾಡಿದರು. ಬಂದವರು ನನ್ನನ್ನು ಪಡೆದುಕೊಳ್ಳಲೋಸುವ ಸ್ವಯಂವರ ಸಭೆಯಲ್ಲಿ ಇಟ್ಟ ಧನುರ್ಬಾಣಗಳನ್ನು ಎತ್ತಿಕೊಂಡರು. ॥21॥

ಮೂಲಮ್

(ಶ್ಲೋಕ-22)
ಆದಾಯ ವ್ಯಸೃಜನ್ ಕೇಚಿತ್ಸಜ್ಯಂ ಕರ್ತುಮನೀಶ್ವರಾಃ ।
ಆಕೋಟಿ ಜ್ಯಾಂ ಸಮುತ್ಕೃಷ್ಯ ಪೇತುರೇಕೇಮುನಾ ಹತಾಃ ॥

ಅನುವಾದ

ಅವರಲ್ಲಿ ಎಷ್ಟೋ ರಾಜರು ಧನುಸ್ಸಿಗೆ ಹೆದೆಯೇರಿಸದೇ ಹೋದರು. ಅವರು ಧನುಸ್ಸನ್ನು ಹಾಗೆಯೇ ಇಟ್ಟುಬಿಟ್ಟರು. ಕೆಲವರು ಹೆದೆಯೇರಿಸುವಾಗ ನಾಣನ್ನು ಇನ್ನೊಂದು ತುದಿಗೆ ಬಿಗಿಯ ಬೇಕೆನ್ನುವಷ್ಟರಲ್ಲಿ ಕೈಜಾರಿ ಬಿದ್ದುಬಿಟ್ಟರು. ॥22॥

ಮೂಲಮ್

(ಶ್ಲೋಕ-23)
ಸಜ್ಯಂ ಕೃತ್ವಾ ಪರೇ ವೀರಾ ಮಾಗಧಾಂಬಷ್ಠಚೇದಿಪಾಃ ।
ಭೀಮೋ ದುರ್ಯೋಧನಃ ಕರ್ಣೋ ನಾವಿಂದಂಸ್ತದವಸ್ಥಿತಿಮ್ ॥

ಅನುವಾದ

ಮಹಾರಾಣಿ! ಜರಾಸಂಧ, ಅಂಬಷ್ಠನರೇಶ, ಶಿಶುಪಾಲ, ಭೀಮಸೇನ, ದುರ್ಯೋಧನ, ಕರ್ಣ ಮೊದಲಾದ ಮಹಾ-ಮಹಾ ಪ್ರಸಿದ್ಧ ವೀರರು ಹೆದೆಯೇನೋ ಏರಿಸಿದರು. ಆದರೆ ಅವರಿಗೆ ಮೀನಿನ ಲಕ್ಷ್ಯವು ತಿಳಿಯದೇ ಹೋಯಿತು.॥23॥

ಮೂಲಮ್

(ಶ್ಲೋಕ-24)
ಮತ್ಸ್ಯಾಭಾಸಂ ಜಲೇ ವೀಕ್ಷ್ಯ ಜ್ಞಾತ್ವಾ ಚ ತದವಸ್ಥಿತಿಮ್ ।
ಪಾರ್ಥೋ ಯತ್ತೋಸೃಜದ್ಬಾಣಂ ನಾಚ್ಛಿನತ್ಪಸ್ಪೃಶೇ ಪರಮ್ ॥

ಅನುವಾದ

ಮಧ್ಯಮ ಪಾಂಡವನಾದ ಅರ್ಜುನನು ನೀರಿನಲ್ಲಿ ಮೀನಿನ ನೆರಳನ್ನು ಗುರುತಿಸಿ ಅದೆಲ್ಲಿದೆ ಎಂಬುದನ್ನು ತಿಳಿದುಕೊಂಡನು. ಬಹಳ ಎಚ್ಚರಿಕೆಯಿಂದ ಬಾಣವನ್ನೂ ಪ್ರಯೋಗಿಸಿದನು. ಆದರೆ ಅವನಿಂದಲೂ ಲಕ್ಷ್ಯವೇಧವಾಗದೆ ಈ ಬಾಣವು ಲಕ್ಷ್ಯವನ್ನು ಸ್ಪರ್ಶಿಸಿ ಹೊರಟು ಹೋಯಿತು. ॥24॥

ಮೂಲಮ್

(ಶ್ಲೋಕ-25)
ರಾಜನ್ಯೇಷು ನಿವೃತ್ತೇಷು ಭಗ್ನಮಾನೇಷು ಮಾನಿಷು ।
ಭಗವಾನ್ ಧನುರಾದಾಯ ಸಜ್ಯಂ ಕೃತ್ವಾಥ ಲೀಲಯಾ ॥
(ಶ್ಲೋಕ-26)
ತಸ್ಮಿನ್ಸಂಧಾಯ ವಿಶಿಖಂ ಮತ್ಸ್ಯಂ ವೀಕ್ಷ್ಯ ಸಕೃಜ್ಜಲೇ ।
ಛಿತ್ತ್ವೇಷುಣಾಪಾತಯತ್ತಂ ಸೂರ್ಯೇ ಚಾಭಿಜಿತಿ ಸ್ಥಿತೇ ॥

ಅನುವಾದ

ಮಹಾರಾಣಿ! ಹೀಗೆ ಮಹಾ-ಮಹಾ ಅಭಿಮಾನಿಗಳಾಗಿದ್ದ ರಾಜರು ಭಗ್ನದರ್ಪರಾಗಿ, ಭಗ್ನಮನೋರಥರಾಗಿ ಹಿಂದಿರುಗಿದ ನಂತರ ಉಳಿದವರೂ ನನ್ನನ್ನು ಪಡೆಯಬೇಕೆಂಬ ಆಸೆಯನ್ನು, ಮತ್ಸ್ಯಯಂತ್ರಭೇದನದ ಪ್ರಯತ್ನವನ್ನು ತೊರೆದುಬಿಟ್ಟರು. ಆಗ ಭಗವಂತನು ಧನುಸ್ಸನ್ನೆತ್ತಿಕೊಂಡು ಆಡುತ್ತಾಡುತ್ತಲೇ ನಿರಾಯಸವಾಗಿ ಹೆದೆಯನ್ನೇರಿಸಿ, ಬಾಣವನ್ನು ಸಂಧಾನಗೈದು ನೀರಿನಲ್ಲಿ ಒಂದೇ ಬಾರಿಗೆ ಮೀನಿನ ನೆರಳನ್ನು ನೋಡಿ ಬಾಣವನ್ನು ಹೂಡಿ ಮೀನನ್ನು ಕೆಳಗೆ ಬೀಳಿಸಿದನು. ಆ ಸಮಯದಲ್ಲಿ ಸರಿಯಾಗಿ ಮಧ್ಯಾಹ್ನವಾಗಿದ್ದು ಸರ್ವಸಾಧಕ ಅಭಿಜಿನ್ಮುಹೂರ್ತವಾಗಿತ್ತು. ॥25-26॥

ಮೂಲಮ್

(ಶ್ಲೋಕ-27)
ದಿವಿ ದುಂದುಭಯೋ ನೇದುರ್ಜಯಶಬ್ದಯುತಾ ಭುವಿ ।
ದೇವಾಶ್ಚ ಕುಸುಮಾಸಾರಾನ್ಮುಮುಚುರ್ಹರ್ಷವಿಹ್ವಲಾಃ ॥

ಅನುವಾದ

ದೇವಿಯೇ! ಆಗ ದೇವ ದುಂದುಭಿಗಳು ಮೊಳಗಿದವು. ಶ್ರೀಕೃಷ್ಣನಿಗೆ ಜಯವಾಗಲಿ ಎಂಬ ಜಯಘೋಷ ಭೂಮಂಡಲದಲ್ಲೆಲ್ಲ ಕೇಳಿ ಬರುತ್ತಿತ್ತು. ದೇವತೆಗಳು ಆನಂದತುಂದಿಲರಾಗಿ ಹೂವಿನ ಮಳೆಯನ್ನು ಸುರಿಸಿದರು. ॥27॥

ಮೂಲಮ್

(ಶ್ಲೋಕ-28)
ತದ್ರಂಗಮಾವಿಶಮಹಂ ಕಲನೂಪುರಾಭ್ಯಾಂ
ಪದ್ಭ್ಯಾಂ ಪ್ರಗೃಹ್ಯ ಕನಕೋಜ್ಜ್ವಲರತ್ನಮಾಲಾಮ್ ।
ನೂತ್ನೇ ನಿವೀಯ ಪರಿಧಾಯ ಚ ಕೌಶಿಕಾಗ್ರ್ಯೇ
ಸವ್ರೀಡಹಾಸವದನಾ ಕಬರೀಧೃತಸ್ರಕ್ ॥
(ಶ್ಲೋಕ-29)
ಉನ್ನೀಯ ವಕ ಮುರುಕುಂತಲಕುಂಡಲತ್ವಿಡ್-
ಗಂಡಸ್ಥಲಂ ಶಿಶಿರಹಾಸಕಟಾಕ್ಷಮೋಕ್ಷೈಃ ।
ರಾಜ್ಞೋ ನಿರೀಕ್ಷ್ಯ ಪರಿತಃ ಶನಕೈರ್ಮುರಾರೇ-
ರಂಸೇನುರಕ್ತಹೃದಯಾ ನಿದಧೇ ಸ್ವಮಾಲಾಮ್ ॥

ಅನುವಾದ

ಮಹಾರಾಣಿ! ಅದೇ ಸಮಯಕ್ಕೆ ಕಾಲಂದುಗೆಗಳು ಝಣ ಝಣಿಸುತ್ತಾ ನಾನು ಸ್ವಯಂವರ ಮಂಟಪವನ್ನು ಪ್ರವೇಶಿಸಿದೆನು. ನಾನು ನವೀನವಾದ ರೇಷ್ಮೆ ಸೀರೆಯನ್ನುಟ್ಟಿದ್ದು, ತುರುಬಿಗೆ ಮಲ್ಲಿಗೆಯ ದಂಡೆಯನ್ನು ಮುಡಿದುಕೊಂಡು ಬರುವಾಗ ನನ್ನ ಮುಖದಲ್ಲಿ ಲಜ್ಜಾಮಿತ್ರವಾದ ಮಂದಹಾಸವು ಮಿನುಗುತ್ತಿತ್ತು. ನಾನು ಕೈಯಲ್ಲಿ ರತ್ನಗಳನ್ನು ಕೋದ ಸ್ವರ್ಣಹಾರವನ್ನು ಹಿಡಿದಿದ್ದೆನು. ದ್ರೌಪದಿ! ಆಗ ನನ್ನ ಮುಖಮಂಡಲವು ಮುಂಗುರುಗಳಿಂದಲೂ, ಕೆನ್ನೆಗಳ ಮೇಲೆ ಬಿದ್ದ ಕುಂಡಲಗಳ ಪ್ರಭೆಯಿಂದ ಅತ್ಯಂತ ಸುಶೋಭಿತವಾಗಿತ್ತು. ನಾನೊಮ್ಮೆ ಮುಖವೆತ್ತಿ ಚಂದ್ರ ಕಿರಣದಂತಿರುವ ಶೀತಲ ಓರೆನೋಟದಿಂದ ಸುತ್ತಲೂ ಕುಳಿತಿದ್ದ ರಾಜರ ಕಡೆಗೆ ನೋಡಿ ಮತ್ತೆ ನಿಧಾನವಾಗಿ ಮುನ್ನಡೆದು ಶ್ರೀಕೃಷ್ಣನಲ್ಲೇ ಅನುರಕ್ತವಾದ ಮನಸ್ಸಿನಿಂದ ವರಮಾಲೆಯನ್ನು ಭಗವಂತನ ಕೊರಳಿಗೆ ಹಾಕಿದೆನು. ॥28-29॥

ಮೂಲಮ್

(ಶ್ಲೋಕ-30)
ತಾವನ್ಮೃದಂಗಪಟಹಾಃ ಶಂಖಭೇರ್ಯಾನಕಾದಯಃ ।
ನಿನೇದುರ್ನಟನರ್ತಕ್ಯೋ ನನೃತುರ್ಗಾಯಕಾ ಜಗುಃ ॥

ಅನುವಾದ

ನಾನು ವರಮಾಲೆಯನ್ನು ತೊಡಿಸುತ್ತಲೇ ಮೃದಂಗ, ಪಟಹ, ಶಂಖ, ಡೋಲು, ನಗಾರಿ ಮುಂತಾದ ಮಂಗಳ ವಾದ್ಯಗಳು ಮೊಳಗಿದವು. ನಟ ನರ್ತಕಿಯರು ನೃತ್ಯವಾಡತೊಡಗಿದರು, ಗಾಯಕರು ಕರ್ಣಾನಂದವಾಗಿ ಹಾಡುತ್ತಿದ್ದರು. ॥30॥

ಮೂಲಮ್

(ಶ್ಲೋಕ-31)
ಏವಂ ವೃತೇ ಭಗವತಿ ಮಯೇಶೇ ನೃಪಯೂಥಪಾಃ ।
ನ ಸೇಹಿರೇ ಯಾಜ್ಞಸೇನಿ ಸ್ಪರ್ಧಂತೋ ಹೃಚ್ಚಯಾತುರಾಃ ॥

ಅನುವಾದ

ದ್ರೌಪದಾದೇವಿಯೇ! ನಾನು ಈ ಪ್ರಕಾರವಾಗಿ ಸರ್ವೇಶ್ವರನಾದ ಶ್ರೀಕೃಷ್ಣನ ಕೊರಳಿಗೆ ವರಮಾಲೆಯನ್ನು ತೊಡಿಸಿ ವರಿಸಿಕೊಂಡಾಗ ಕಾಮಾತುರರಾದ ರಾಜರೆಲ್ಲರೂ ಸಹಿಸಲಾರದೆ ಮತ್ಸರಗೊಂಡು ಕೆರಳಿನಿಂತರು. ॥31॥

ಮೂಲಮ್

(ಶ್ಲೋಕ-32)
ಮಾಂ ತಾವದ್ರಥಮಾರೋಪ್ಯ ಹಯರತ್ನಚತುಷ್ಟಯಮ್ ।
ಶಾರ್ಙ್ಗಮುದ್ಯಮ್ಯ ಸನ್ನದ್ಧಸ್ತಸ್ಥಾವಾಜೌ ಚತುರ್ಭುಜಃ ॥

ಅನುವಾದ

ಚತುರ್ಭುಜನಾದ ಭಗವಂತನು ಶ್ರೇಷ್ಠವಾದ ನಾಲ್ಕು ಕುದುರೆಗಳನ್ನು ಹೂಡಿದ್ದ ರಥದಲ್ಲಿ ನನ್ನನ್ನು ಕುಳ್ಳಿರಿಸಿಕೊಂಡು, ಕವಚವನ್ನು ತೊಟ್ಟು ಕೈಯಲ್ಲಿ ಶಾರ್ಙ್ಗಧನುಸ್ಸನ್ನು ಹಿಡಿದುಕೊಂಡು ಯುದ್ಧಕ್ಕೆ ಸಿದ್ಧನಾಗಿ ನಿಂತನು. ॥32॥

ಮೂಲಮ್

(ಶ್ಲೋಕ-33)
ದಾರುಕಶ್ಚೋದಯಾಮಾಸ ಕಾಂಚನೋಪಸ್ಕರಂ ರಥಮ್ ।
ಮಿಷತಾಂ ಭೂಭುಜಾಂ ರಾಜ್ಞಿ ಮೃಗಾಣಾಂ ಮೃಗರಾಡಿವ ॥

ಅನುವಾದ

ಮಹಾರಾಣಿಯೇ! ಸಿಂಹವು ಜಿಂಕೆಗಳ ಗುಂಪಿನ ನಡುವಿನಿಂದ ಹಾದುಹೋಗುವಂತೆ ಶ್ರೀಕೃಷ್ಣನ ಸಾರಥಿಯಾಗಿ ದಾರುಕನು ಸ್ವರ್ಣಮಯ ಸಾಮಗ್ರಿಗಳಿಂದ ಸುಸಜ್ಜಿತವಾದ ದಿವ್ಯರಥವನ್ನು ರಾಜರುಗಳು ನೋಡುತ್ತಿರುವಂತೆ ಮುನ್ನುಗ್ಗಿಸಿದನು. ॥33॥

ಮೂಲಮ್

(ಶ್ಲೋಕ-34)
ತೇನ್ವಸಜ್ಜಂತ ರಾಜನ್ಯಾ ನಿಷೇದ್ಧುಂ ಪಥಿ ಕೇಚನ ।
ಸಂಯತ್ತಾ ಉದ್ಧೃತೇಷ್ವಾಸಾ ಗ್ರಾಮಸಿಂಹಾ ಯಥಾ ಹರಿಮ್ ॥

ಅನುವಾದ

ಸ್ಪರ್ಧಿಸಲು ಹೊರಟಿದ್ದ ರಾಜರಲ್ಲಿ ಕೆಲವರು ಆಯುಧಗಳನ್ನು ಧರಿಸಿ ಯುದ್ಧಸನ್ನದ್ಧರಾಗಿ ಸಿಂಹವನ್ನು ಗ್ರಾಮಸಿಂಹ (ನಾಯಿಗಳು)ಗಳು ಹಿಂಬಾಲಿಸುವಂತೆ ನಾವು ಕುಳಿತಿದ್ದ ರಥವನ್ನು ಹಿಂಬಾಲಿಸಿದರು. ॥34॥

ಮೂಲಮ್

(ಶ್ಲೋಕ-35)
ತೇ ಶಾರ್ಙ್ಗಚ್ಯುತಬಾಣೌಘೈಃ ಕೃತ್ತಬಾಹ್ವಂಘ್ರಿಕಂಧರಾಃ ।
ನಿಪೇತುಃ ಪ್ರಧನೇ ಕೇಚಿದೇಕೇ ಸಂತ್ಯಜ್ಯ ದುದ್ರುವುಃ ॥

ಅನುವಾದ

ಶ್ರೀಕೃಷ್ಣನು ರಥವನ್ನು ನಿಲ್ಲಿಸಿ ಅವರೊಡನೆ ಯುದ್ಧಮಾಡತೊಡಗಿದನು. ಶಾರ್ಙ್ಗಧನುಸ್ಸಿನಿಂದ ಹೊರಟ ಬಾಣಗಳಿಂದ ಹಲವು ರಾಜರ ತೋಳುಗಳು, ತೊಡೆಗಳು, ಕುತ್ತಿಗೆಗಳೂ ಕತ್ತರಿಸಲ್ಪಟ್ಟು ಕೆಳಕ್ಕೆ ಬಿದ್ದವು. ಕೆಲವು ಧರಾಶಾಯಿಗಳಾದರು. ಅಳಿದುಳಿದ ಕೆಲವರು ರಣರಂಗದಿಂದ ಪಲಾಯನ ಮಾಡಿದರು. ॥35॥

ಮೂಲಮ್

(ಶ್ಲೋಕ-36)
ತತಃ ಪುರೀಂ ಯದುಪತಿರತ್ಯಲಂಕೃತಾಮ್
ರವಿಚ್ಛದಧ್ವಜಪಟಚಿತ್ರತೋರಣಾಮ್ ।
ಕುಶಸ್ಥಲೀಂ ದಿವಿ ಭುವಿ ಚಾಭಿಸಂಸ್ತುತಾಂ
ಸಮಾವಿಶತ್ತರಣಿರಿವ ಸ್ವಕೇತನಮ್ ॥

ಅನುವಾದ

ಅನಂತರ ಸೂರ್ಯನನ್ನು ಮರೆಮಾಡುವ ಧ್ವಜ-ಪತಾಕೆಗಳಿಂದಲೂ, ಚಿತ್ರ-ವಿಚಿತ್ರವಾದ ತೋರಣಗಳಿಂದ ಅತಿಶಯವಾಗಿ ಅಲಂಕರಿಸಲ್ಪಟ್ಟಿದ್ದ, ಸ್ವರ್ಗದಲ್ಲಿಯೂ, ಭೂಮಿಯಲ್ಲಿಯೂ ಪ್ರಶಂಸಿತವಾದ ಕುಶಸ್ಥಳಿಯನ್ನು (ದ್ವಾರಕೆಯನ್ನು) ಸೂರ್ಯನಂತೆ ಯದುವಂಶ ಶಿರೋಮಣಿಯಾದ ಶ್ರೀಕೃಷ್ಣನು ಪ್ರವೇಶಿದನು. ॥36॥

ಮೂಲಮ್

(ಶ್ಲೋಕ-37)
ಪಿತಾ ಮೇ ಪೂಜಯಾಮಾಸ ಸುಹೃತ್ಸಂಬಂಧಿ ಬಾಂಧವಾನ್ ।
ಮಹಾರ್ಹವಾಸೋಲಂಕಾರೈಃ ಶಯ್ಯಾಸನಪರಿಚ್ಛದೈಃ ॥

ಅನುವಾದ

ನನ್ನ ಮನೋರಥವು ಪೂರ್ಣಗೊಂಡಿದ್ದರಿಂದ ನನ್ನ ತಂದೆಯವರಿಗೆ ಬಹಳ ಸಂತೋಷವಾಯಿತು. ಅವನು ತನ್ನ ಹಿತೈಷಿ ಸುಹೃದರನ್ನು, ಬಂಧು-ಬಾಂಧವರನ್ನು, ಜ್ಞಾತಿ-ಬಂಧುಗಳನ್ನು ಬಹುಮೂಲ್ಯ ವಸಾಭೂಷಣ, ಶಯ್ಯೆ ಆಸನ ಮೊದಲಾದ ವಿವಿಧ ಸಾಮಗ್ರಿಗಳನ್ನು ಕೊಟ್ಟು ಸನ್ಮಾನಿಸಿದನು. ॥37॥

ಮೂಲಮ್

(ಶ್ಲೋಕ-38)
ದಾಸೀಭಿಃ ಸರ್ವಸಂಪದ್ಭಿರ್ಭಟೇಭರಥವಾಜಿಭಿಃ ।
ಆಯುಧಾನಿ ಮಹಾರ್ಹಾಣಿ ದದೌ ಪೂರ್ಣಸ್ಯ ಭಕ್ತಿತಃ ॥

ಅನುವಾದ

ಭಗವಂತನು ಪರಿಪೂರ್ಣನಾಗಿದ್ದರೂ ನನ್ನ ತಂದೆಯು ಅವನಿಗೆ ಅನೇಕ ದಾಸಿಯರನ್ನು, ಅತುಲಸಂಪತ್ತನ್ನೂ, ಚುತರಂಗ ಸೈನ್ಯವನ್ನು ಬಹುಮೂಲ್ಯ ಶಸ್ತ್ರಾಸ್ತ್ರಗಳನ್ನು ಬಳುವಳಿಯಾಗಿ ಸಮರ್ಪಿಸಿದನು. ॥38॥

ಮೂಲಮ್

(ಶ್ಲೋಕ-39)
ಆತ್ಮಾರಾಮಸ್ಯ ತಸ್ಯೇಮಾ ವಯಂ ವೈ ಗೃಹದಾಸಿಕಾಃ ।
ಸರ್ವಸಂಗನಿವೃತ್ತ್ಯಾದ್ಧಾ ತಪಸಾ ಚ ಬಭೂವಿಮ ॥

ಅನುವಾದ

ಮಹಾರಾಣಿ! ನಾವು ಹಿಂದಿನ ಜನ್ಮದಲ್ಲಿ ಎಲ್ಲದರ ಆಸಕ್ತಿಯನ್ನು ತ್ಯಜಿಸಿ ಯಾವುದೋ ಮಹತ್ತರ ತಪಸ್ಸು ಮಾಡಿದ್ದಿರಬೇಕು; ಅದರಿಂದಲೇ ನಮಗೆ ಈ ಜನ್ಮದಲ್ಲಿ ಆತ್ಮಾರಾಮನಾದ ಭಗವಂತನ ದಾಸಿಯರಾಗಿರುವ ಸೌಭಾಗ್ಯವು ದೊರೆಯಿತು. ॥39॥

ಮೂಲಮ್

(ಶ್ಲೋಕ-40)

ಮೂಲಮ್ (ವಾಚನಮ್)

ಮಹಿಷ್ಯ ಊಚುಃ

ಮೂಲಮ್

ಭೌಮಂ ನಿಹತ್ಯ ಸಗಣಂ ಯುಧಿ ತೇನ ರುದ್ಧಾ
ಜ್ಞಾತ್ವಾಥ ನಃ ಕ್ಷಿತಿಜಯೇ ಜಿತರಾಜಕನ್ಯಾಃ ।
ನಿರ್ಮುಚ್ಯ ಸಂಸೃತಿವಿಮೋಕ್ಷ ಮನುಸ್ಮರಂತೀಃ
ಪಾದಾಂಬುಜಂ ಪರಿಣಿನಾಯ ಯ ಆಪ್ತಕಾಮಃ ॥

ಅನುವಾದ

ಹದಿನಾರು ಸಾವಿರ ಪತ್ನಿಯರ ಪರವಾಗಿ ರೋಹಿಣಿಯು ಹೇಳುತ್ತಾಳೆ - ದ್ರೌಪದಿಯೇ! ಭೌಮಾಸುರನು ದಿಗ್ವಿಜಯದ ಸಮಯದಲ್ಲಿ ಬಹಳಷ್ಟು ರಾಜರನ್ನು ಗೆದ್ದು ಅವರ ಕನ್ಯೆಯರಾದ ನಮ್ಮನ್ನು ಕಾರಾಗೃಹದಲ್ಲಿ ಇರಿಸಿದ್ದನು. ಇದನ್ನು ತಿಳಿದ ಭಗವಂತನು ಭೌಮಾಸುರನನ್ನು ಮತ್ತು ಅವನ ಸೇನೆಯನ್ನು ಸಂಹರಿಸಿ, ಶ್ರೀಕೃಷ್ಣನು ಪೂರ್ಣಕಾಮನಾಗಿದ್ದರೂ ಅವನು ನಮ್ಮನ್ನು, ಅಲ್ಲಿಂದ ಬಿಡಿಸಿ, ನಮ್ಮ ಪಾಣಿಗ್ರಹಣವನ್ನು ಮಾಡಿ ತನ್ನ ದಾಸಿಯರನ್ನಾಗಿಸಿದರು. ನಾವೆಲ್ಲರೂ ಸದಾಕಾಲ ಜನ್ಮ-ಮೃತ್ಯುರೂಪವಾದ ಸಂಸಾರದಿಂದ ಬಿಡುಗಡೆಹೊಂದಲು ಅವನ ಚರಣಕಮಲಗಳನ್ನೇ ಧ್ಯಾನಿಸುತ್ತಾ ಇದ್ದೆವು. ॥40॥

ಮೂಲಮ್

(ಶ್ಲೋಕ-41)
ನ ವಯಂ ಸಾಧ್ವಿ ಸಾಮ್ರಾಜ್ಯಂ ಸ್ವಾರಾಜ್ಯಂ ಭೌಜ್ಯಮಪ್ಯುತ ।
ವೈರಾಜ್ಯಂ ಪಾರಮೇಷ್ಠ್ಯಂ ಚ ಆನಂತ್ಯಂ ವಾ ಹರೇಃ ಪದಮ್ ॥
(ಶ್ಲೋಕ-42)
ಕಾಮಯಾಮಹ ಏತಸ್ಯ ಶ್ರೀಮತ್ಪಾದರಜಃಶ್ರಿಯಃ ।
ಕುಚಕುಂಕುಮಗಂಧಾಢ್ಯಂ ಮೂರ್ಧ್ನಾ ವೋಢುಂ ಗದಾಭೃತಃ ॥

ಅನುವಾದ

ಸಾಧ್ವಿಯೇ! ನಮಗೆ ಸಾಮ್ರಾಜ್ಯವಾಗಲೀ (ಚಕ್ರವರ್ತಿ ಪದವಿ), ಸ್ವಾರಾಜ್ಯವಾಗಲೀ (ಇಂದ್ರ ಪದವಿ), ಭೌಜ್ಯವಾಗಲೀ (ತ್ರೈಲೋಕ್ಯಾಧಿಪತ್ಯ), ವೈರಾಜ್ಯವಾಗಲೀ (ಅಣಿಮಾದಿ ಅಷ್ಟ ಸಿದ್ಧಿಗಳು), ಪಾರಮೇಷ್ಠ್ಯವಾಗಲೀ (ಬ್ರಹ್ಮ ಪದವಿ), ಮೋಕ್ಷವಾಗಲೀ, ಅಪೇಕ್ಷಿತವಲ್ಲ. ಶ್ರೀದೇವಿಯ ಕುಚ ಕುಂಕುಮದಿಂದ ಸುಗಂಧಿತವಾದ ಶ್ರೀಕೃಷ್ಣನ ಸುಕೋಮಲವಾದ ಪಾದಾರವಿಂದಗಳ ಧೂಳಿಯನ್ನು ಸದಾ ತಲೆಯಲ್ಲಿ ಧರಿಸಿಕೊಂಡಿರಲುಬಯಸುತ್ತೇವೆ. ॥41-42॥

ಮೂಲಮ್

(ಶ್ಲೋಕ-43)
ವ್ರಜಸಿಯೋ ಯದ್ವಾಂಛಂತಿ ಪುಲಿಂದ್ಯಸ್ತೃಣವೀರುಧಃ ।
ಗಾವಶ್ಚಾರಯತೋ ಗೋಪಾಃ ಪಾದಸ್ಪರ್ಶಂ ಮಹಾತ್ಮನಃ ॥

ಅನುವಾದ

ಜಗದಾನಂದಕಂದನಾದ ಶ್ರೀಕೃಷ್ಣನು ಹಸುಗಳನ್ನು ಮೇಯಿಸುವಾಗ ಅವನ ಕಾಲಿನ ಯಾವ ಧೂಳಿಯನ್ನು ಸ್ಪರ್ಶಿಸಬೇಕೆಂದು ಗೊಲ್ಲತಿಯರೂ, ಗೋಪರೂ, ಬೇಡತಿಯರೂ ಅಪೇಕ್ಷಿಸುತ್ತಿದ್ದರೋ, ಹುಲ್ಲು-ಕಡ್ಡಿಗಳೂ ಯಾರ ಪಾದಸ್ಪರ್ಶವನ್ನು ಬಯಸುತ್ತಿದ್ದವೋ, ಹಾಗೆಯೇ ನಾವೂ ಕೂಡ ಅವನ ದಿವ್ಯಪಾದಧೂಳಿಯನ್ನು ತಲೆಯಲ್ಲಿ ಸದಾಕಾಲ ಅಪೇಕ್ಷಿಸುತ್ತೇವೆ. ॥43॥

ಅನುವಾದ (ಸಮಾಪ್ತಿಃ)

ಎಂಭತ್ತಮೂರನೆಯ ಅಧ್ಯಾಯವು ಮುಗಿಯಿತು. ॥83॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ
ತ್ರ್ಯಶೀತಿತಮೋಽಧ್ಯಾಯಃ ॥83॥