೮೨

[ಏಂಭತ್ತೇರಡನೇಯ ಅಧ್ಯಾಯ]

ಭಾಗಸೂಚನಾ

ಬಲರಾಮ ಕೃಷ್ಣರು ಗೋಪ-ಗೋಪಿಯರನ್ನು ಸಂಧಿಸಿದುದು

ಮೂಲಮ್

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಅಥೈಕದಾ ದ್ವಾರವತ್ಯಾಂ ವಸತೋ ರಾಮಕೃಷ್ಣಯೋಃ ।
ಸೂರ್ಯೋಪರಾಗಃ ಸುಮಹಾನಾಸೀತ್ಕಲ್ಪಕ್ಷಯೇ ಯಥಾ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಹೀಗೆ ಬಲರಾಮ-ಶ್ರೀಕೃಷ್ಣರು ದ್ವಾರಕೆಯಲ್ಲಿ ವಾಸ ಮಾಡುತ್ತಿದ್ದಾಗ ಒಮ್ಮೆ ಪ್ರಳಯಕಾಲದೋಪಾದಿಯಲ್ಲಿ ಮಹತ್ತರವಾದ ಪೂರ್ಣಗ್ರಾಸ ಸೂರ್ಯಗ್ರಹಣವು ಉಂಟಾಗಿತ್ತು. ॥1॥

ಮೂಲಮ್

(ಶ್ಲೋಕ-2)
ತಂ ಜ್ಞಾತ್ವಾ ಮನುಜಾ ರಾಜನ್ ಪುರಸ್ತಾದೇವ ಸರ್ವತಃ ।
ಸಮಂತಪಂಚಕಂ ಕ್ಷೇತ್ರಂ ಯಯುಃ ಶ್ರೇಯೋವಿಧಿತ್ಸಯಾ ॥

ಅನುವಾದ

ಪರೀಕ್ಷಿತನೇ! ಇದನ್ನು ಮೊದಲೇ ತಿಳಿದ ಜನರು ತಮ್ಮ ಶ್ರೇಯಃ ಪ್ರಾಪ್ತಿಗಾಗಿ ಎಲ್ಲ ಕಡೆಗಳಿಂದಲೂ ಸ್ಯಮಂತ ಪಂಚಕ ಕ್ಷೇತ್ರಕ್ಕೆ (ಕುರುಕ್ಷೇತ್ರ)ಕ್ಕೆ ಧಾವಿಸಿದರು. ॥2॥

ಮೂಲಮ್

(ಶ್ಲೋಕ-3)
ನಿಃಕ್ಷತ್ರಿಯಾಂ ಮಹೀಂ ಕುರ್ವನ್ರಾಮಃ ಶಸಭೃತಾಂ ವರಃ ।
ನೃಪಾಣಾಂ ರುಧಿರೌಘೇಣ ಯತ್ರ ಚಕ್ರೇ ಮಹಾಹ್ರದಾನ್ ॥

ಅನುವಾದ

ಶಸ್ತ್ರಧಾರಿಗಳಲ್ಲಿ ಶ್ರೇಷ್ಠನಾದ ಪರಶುರಾಮನು ಭೂಮಂಡಲವನ್ನೇ ಕ್ಷತ್ರಿಯರಿಂದ ರಹಿತವಾಗಿಸಿ ರಾಜರ ರಕ್ತದ ಕೋಡಿಯಿಂದಲೇ ದೊಡ್ಡ-ದೊಡ್ಡ ಕುಂಡಗಳನ್ನು ನಿರ್ಮಿಸಿದನು. ಅದೇ ಸ್ಯಮಂತಪಂಚಕ ಕ್ಷೇತ್ರವು. ॥3॥

ಮೂಲಮ್

(ಶ್ಲೋಕ-4)
ಈಜೇ ಚ ಭಗವಾನ್ರಾಮೋ ಯತ್ರಾಸ್ಪೃಷ್ಟೋಪಿ ಕರ್ಮಣಾ ।
ಲೋಕಸ್ಯ ಗ್ರಾಹಯನ್ನೀಶೋ ಯಥಾನ್ಯೋಘಾಪನುತ್ತಯೇ ॥

ಅನುವಾದ

ಸಾಧಾರಣ ಮನುಷ್ಯನು ತನ್ನ ಪಾಪಪರಿಹಾರಕ್ಕಾಗಿ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುವಂತೆಯೇ ಸರ್ವಶಕ್ತನಾದ ಭಗವಾನ್ ಪರಶು ರಾಮನು-ತನಗೂ, ತಾನು ಮಾಡಿದ ಕರ್ಮಕ್ಕೂ ಸಂಬಂಧವಿಲ್ಲದಿದ್ದರೂ ಲೋಕಮರ್ಯಾದೆಯನ್ನು ರಕ್ಷಿಸಲಿಕ್ಕಾಗಿ ಅಲ್ಲಿಯೇ ಮಹಾಯಜ್ಞವನ್ನು ಮಾಡಿದ್ದನು. ॥4॥

ಮೂಲಮ್

(ಶ್ಲೋಕ-5)
ಮಹತ್ಯಾಂ ತೀರ್ಥಯಾತ್ರಾಯಾಂ ತತ್ರಾಗನ್ ಭಾರತೀಃ ಪ್ರಜಾಃ ।
ವೃಷ್ಣಯಶ್ಚ ತಥಾಕ್ರೂರವಸುದೇವಾಹುಕಾದಯಃ ॥
(ಶ್ಲೋಕ-6)
ಯಯುರ್ಭಾರತ ತತ್ ಕ್ಷೇತ್ರಂ ಸ್ವಮಘಂ ಕ್ಷಪಯಿಷ್ಣವಃ ।
ಗದಪ್ರದ್ಯುಮ್ನಸಾಂಬಾದ್ಯಾಃ ಸುಚಂದ್ರಶುಕಸಾರಣೈಃ ॥
(ಶ್ಲೋಕ-7)
ಆಸ್ತೇನಿರುದ್ಧೋ ರಕ್ಷಾಯಾಂ ಕೃತವರ್ಮಾ ಚ ಯೂಥಪಃ ।
ತೇ ರಥೈರ್ದೇವಧಿಷ್ಣ್ಯಾಭೈರ್ಹಯೈಶ್ಚ ತರಲಪ್ಲವೈಃ ॥
(ಶ್ಲೋಕ-8)
ಗಜೈರ್ನದದ್ಭಿರಭ್ರಾಭೈರ್ನೃಭಿರ್ವಿದ್ಯಾಧರದ್ಯುಭಿಃ ।
ವ್ಯರೋಚಂತ ಮಹಾತೇಜಾಃ ಪಥಿ ಕಾಂಚನಮಾಲಿನಃ ॥
(ಶ್ಲೋಕ-9)
ದಿವ್ಯಸ್ರಗ್ವಸ ಸನ್ನಾಹಾಃ ಕಲತ್ರೈಃ ಖೇಚರಾ ಇವ ।
ತತ್ರ ಸ್ನಾತ್ವಾ ಮಹಾಭಾಗಾ ಉಪೋಷ್ಯ ಸುಸಮಾಹಿತಾಃ ॥

ಅನುವಾದ

ಪರೀಕ್ಷಿತನೇ! ಮಹತ್ವಪೂರ್ಣವಾದ ಆ ತೀರ್ಥ ಯಾತ್ರೆಯ ಸಮಯದಲ್ಲಿ ಭಾರತವರ್ಷದ ಎಲ್ಲ ಪ್ರಾಂತಗಳ ಪ್ರಜೆಗಳು ಕುರುಕ್ಷೇತ್ರಕ್ಕೆ ಆಗಮಿಸಿದರು. ಅವರಲ್ಲಿ ಅಕ್ರೂರ, ವಸುದೇವ, ಉಗ್ರಸೇನನೇ ಮೊದಲಾದ ಹಿರಿಯರೂ, ಗದ, ಪ್ರದ್ಯುಮ್ನ ಸಾಂಬರೇ ಮೊದಲಾದ ಬೇರೆ ಯುದವಂಶೀಯರೂ ತಮ್ಮ-ತಮ್ಮ ಪಾಪಗಳನ್ನು ನಾಶಮಾಡಿಕೊಳ್ಳಲು ಕುರುಕ್ಷೇತ್ರಕ್ಕೆ ಬಂದಿದ್ದರು. ಪ್ರದ್ಯುಮ್ನನಂದನ ಅನಿರುದ್ಧ ಮತ್ತು ಯಾದವ ಸೇನಾಪತಿ ಕೃತವರ್ಮ ಇವರಿಬ್ಬರೂ ಸುಚಂದ್ರ, ಶುಕ, ಸಾರಣ ಮೊದಲಾದವರೊಡನೆ ನಗರದ ರಕ್ಷಣೆಗಾಗಿ ದ್ವಾರಕೆಯಲ್ಲೇ ಉಳಿದರು. ಯಾದವರು ಮೊದಲೇ ಸ್ವಭಾವದಿಂದ ಪರಮ ತೇಜಸ್ವಿಗಳಾಗಿದ್ದರು. ಈಗ ಕೊರಳಲ್ಲಿ ಚಿನ್ನದ ಸರಗಳನ್ನು, ಪುಷ್ಪಹಾರಗಳನ್ನೂ, ಬಹುಮೂಲ್ಯ ವಸ್ತ್ರಗಳನ್ನು, ಕವಚಗಳನ್ನು ಧರಿಸಿ ಅವರ ಶೋಭೆ ಇನ್ನೂ ಹೆಚ್ಚಾಗಿತ್ತು. ಅವರೆಲ್ಲರೂ ದೇವತೆಗಳ ವಿಮಾನಕ್ಕೆ ಸದೃಶವಾದ ರಥಗಳಲ್ಲಿಯೂ, ಸಮುದ್ರದ ಅಲೆಗಳಂತೆ ಚಲಿಸುವ ಕುದುರೆಗಳ ಮೇಲೆಯೂ, ಮೇಘ ಸದೃಶವಾದ ಘೀಳಿಡುತ್ತಿದ್ದ ಆನೆಗಳ ಮೇಲೆಯೂ, ವಿದ್ಯಾಧರರಿಗೆ ಸದೃಶರಾದ ಮನುಷ್ಯರಿಂದ ಒಯ್ಯಲ್ಪಡುತ್ತಿದ್ದ ಪಲ್ಲಕ್ಕಿಗಳ ಮೇಲೆಯೂ ತಮ್ಮ-ತಮ್ಮ ಮಡದಿಯರೊಂದಿಗೆ ಕುಳಿತು ಸ್ವರ್ಗದ ದೇವತೆಗಳಂತೆಯೇ ಯಾತ್ರೆ ಮಾಡಿದರು. ಮಹಾಭಾಗ್ಯಶಾಲಿಗಳಾದ ಯದುವಂಶೀಯರು ಕುರುಕ್ಷೇತ್ರಕ್ಕೆ ತಲುಪಿ ಏಕಾಗ್ರತೆಯಿಂದ ಪುಣ್ಯತೀರ್ಥದಲ್ಲಿ ಸ್ನಾನಮಾಡಿ ಉಪವಾಸದಿಂದಿದ್ದು ಗ್ರಹಣದ ಪರ್ವಕಾಲವನ್ನು ನಿರೀಕ್ಷಿಸುತ್ತಿದ್ದರು. ॥5-9॥

ಮೂಲಮ್

(ಶ್ಲೋಕ-10)
ಬ್ರಾಹ್ಮಣೇಭ್ಯೋ ದದುರ್ಧೇನೂರ್ವಾಸಃಸ್ರಗ್ರುಕ್ಮಮಾಲಿನೀಃ ।
ರಾಮಹ್ರದೇಷು ವಿಧಿವತ್ಪುನರಾಪ್ಲುತ್ಯ ವೃಷ್ಣಯಃ ॥
(ಶ್ಲೋಕ-11)
ದದುಃ ಸ್ವನ್ನಂ ದ್ವಿಜಾಗ್ರ್ಯೇಭ್ಯಃ ಕೃಷ್ಣೇ ನೋ ಭಕ್ತಿರಸ್ತ್ವಿತಿ ।
ಸ್ವಯಂ ಚ ತದನುಜ್ಞಾತಾ ವೃಷ್ಣಯಃ ಕೃಷ್ಣದೇವತಾಃ ॥
(ಶ್ಲೋಕ-12)
ಭುಕ್ತ್ವೋಪವಿವಿಶುಃ ಕಾಮಂ ಸ್ನಿಗ್ಧಚ್ಛಾಯಾಂಘ್ರಿಪಾಂಘ್ರಿಷು ।
ತತ್ರಾಗತಾಂಸ್ತೇ ದದೃಶುಃ ಸುಹೃತ್ಸಂಬಂಧಿನೋ ನೃಪಾನ್ ॥

ಅನುವಾದ

ಸೂರ್ಯಗ್ರಹಣವು ಪ್ರಾರಂಭವಾಗುತ್ತಲೇ ವಸ್ತ್ರಗಳಿಂದಲೂ, ಪುಷ್ಪಮಾಲಿಕೆಗಳಿಂದಲೂ ಮತ್ತು ಚಿನ್ನದ ಸರಗಳಿಂದಲೂ ಸಮಲಂಕೃತವಾದ ಗೋವುಗಳನ್ನು ಬ್ರಾಹ್ಮಣರಿಗೆ ದಾನ ಮಾಡಿದರು. ಗ್ರಹಣದ ಮೋಕ್ಷವಾಗುತ್ತಲೇ ಅವರು ಪರಶುರಾಮನಿಂದ ನಿರ್ಮಿತವಾದ ಕುಂಡಗಳಲ್ಲಿ ಯಾದವರು ವಿಧಿವತ್ತಾಗಿ ಸ್ನಾನ ಮಾಡಿದರು ಹಾಗೂ ಸತ್ಪಾತ್ರರಾದ ಬ್ರಾಹ್ಮಣರಿಗೆ ಮೃಷ್ಟಾನ್ನವನ್ನು ಭೋಜನ ಮಾಡಿಸಿ, ಶ್ರೀಕೃಷ್ಣನಲ್ಲಿ ತಮಗೆ ಅಚಲವಾದ ಭಕ್ತಿ ಇರುವಂತೆ ಆಶೀರ್ವದಿಸಬೇಕೆಂದು ಬ್ರಾಹ್ಮಣರಲ್ಲಿ ಪ್ರಾರ್ಥಿಸಿದರು. ಭಗವಾನ್ ಶ್ರೀಕೃಷ್ಣನನ್ನೇ ತಮ್ಮ ಆದರ್ಶ ಮತ್ತು ಇಷ್ಟದೇವನೆಂದು ತಿಳಿದಿರುವ ಯದುವಂಶೀಯರು ಬ್ರಾಹ್ಮಣರಿಂದ ಅನುಮತಿ ಪಡೆದು ಭೋಜನಮಾಡಿದರು. ಮತ್ತೆ ದಟ್ಟವಾದ ಮರಗಳ ಕೆಳಗೆ ತಂಪಾದ ನೆರಳಲ್ಲಿ ತಮ್ಮ-ತಮ್ಮ ಇಚ್ಛಾನುಸಾರವಾಗಿ ಬಿಡಾರಗಳನ್ನು ನಿರ್ಮಿಸಿಕೊಂಡು ವಿಶ್ರಮಿಸಿದರು. ಪರೀಕ್ಷಿತನೇ! ಹೀಗೆ ವಿಶ್ರಾಂತಿ ಪಡೆದು ಯಾದವರು ಅಲ್ಲಿಗೆ ಬಂದಿದ್ದ ತಮ್ಮ ಸುಹೃದರನ್ನು, ಸಂಬಂಧಿಗಳನ್ನು ಸಂದರ್ಶಿಸತೊಡಗಿದರು. ॥10-12॥

ಮೂಲಮ್

(ಶ್ಲೋಕ-13)
ಮತ್ಸ್ಯೋಶೀನರಕೌಸಲ್ಯವಿದರ್ಭಕುರುಸೃಂಜಯಾನ್ ।
ಕಾಂಭೋಜಕೈಕಯಾನ್ಮದ್ರಾನ್ ಕುಂತೀನಾನರ್ತಕೇರಲಾನ್ ॥
(ಶ್ಲೋಕ-14)
ಅನ್ಯಾಂಶ್ಚೈವಾತ್ಮಪಕ್ಷೀಯಾನ್ ಪರಾಂಶ್ಚ ಶತಶೋ ನೃಪ ।
ನಂದಾದೀನ್ಸುಹೃದೋ ಗೋಪಾನ್ ಗೋಪೀಶ್ಚೋತ್ಕಂಠಿತಾಶ್ಚಿರಮ್ ॥

ಅನುವಾದ

ಅಲ್ಲಿಗೆ ಮತ್ಸ್ಯ, ಉಶೀನರ, ಕೋಸಲ, ವಿದರ್ಭ, ಕುರು, ಸೃಂಜಯ, ಕಾಂಭೋಜ, ಕೈಕಯ, ಮದ್ರ, ಕುಂತಿ, ಆನರ್ತ, ಕೇರಳ, ಹಾಗೆಯೇ ಬೇರೆ ಅನೇಕ ದೇಶದ ತಮ್ಮ ಪಕ್ಷದ ಮತ್ತು ಶತ್ರುಪಕ್ಷದ ನೂರಾರು ರಾಜರು ಬಂದಿದ್ದರು. ಪರೀಕ್ಷಿತನೇ! ಇದಲ್ಲದೆ ಪರಮ ಹಿತೈಷಿ ನಂದರಾಜ ಮೊದಲಾದ ಗೋಪಾಲಕರೂ ಮತ್ತು ಭಗವಂತನ ದರ್ಶನಕ್ಕಾಗಿ ಎಷ್ಟೋ ಕಾಲದಿಂದ ಉತ್ಕಂಠಿತರಾದ ಗೋಪಿಯರೂ ಅಲ್ಲಿಗೆ ಬಂದಿದ್ದರು. ಯಾದವರು ಇವರೆಲ್ಲರನ್ನೂ ನೋಡಿದರು.॥13-14॥

ಮೂಲಮ್

(ಶ್ಲೋಕ-15)
ಅನ್ಯೋನ್ಯಸಂದರ್ಶನಹರ್ಷರಂಹಸಾ
ಪ್ರೋತ್ಫುಲ್ಲಹೃದ್ವಕಸರೋರುಹಶ್ರಿಯಃ ।
ಆಶ್ಲಿಷ್ಯ ಗಾಢಂ ನಯನೈಃ ಸ್ರವಜ್ಜಲಾ
ಹೃಷ್ಯತ್ತ್ವಚೋ ರುದ್ಧಗಿರೋ ಯಯುರ್ಮುದಮ್ ॥

ಅನುವಾದ

ಪರೀಕ್ಷಿತನೇ! ಪರಸ್ಪರ ದರ್ಶನ, ಮಿಲನ, ವಾರ್ತಾಲಾಪದಿಂದ ಎಲ್ಲರಿಗೂ ಬಹಳ ಆನಂದವಾಯಿತು. ಎಲ್ಲರ ಹೃದಯ-ಕಮಲ ಹಾಗೂ ಮುಖ-ಕಮಲಗಳು ಅರಳಿದವು. ಒಬ್ಬರು ಮತ್ತೊಬ್ಬರನ್ನು ಬರಸೆಳೆದು ಅಪ್ಪಿಕೊಳ್ಳುವರು, ಅವರ ಕಣ್ಣುಗಳಲ್ಲಿ ಆನಂದಾಶ್ರುಗಳು ಸುರಿಯುತ್ತಿದ್ದವು. ರೋಮಾಂಚನವುಂಟಾಗಿ ಪ್ರೇಮೋದ್ರೇಕದಿಂದ ಗಂಟಲು ಬಿಗಿದುಕೊಂಡಿತು. ಸಮಸ್ತರೂ ಆನಂದಸಾಗರದಲ್ಲಿ ಮುಳುಗಿಹೋದರು. ॥15॥

ಮೂಲಮ್

(ಶ್ಲೋಕ-16)
ಸಿಯಶ್ಚ ಸಂವೀಕ್ಷ್ಯ ಮಿಥೋತಿಸೌಹೃದ-
ಸ್ಮಿತಾಮಲಾಪಾಂಗದೃಶೋಭಿರೇಭಿರೇ ।
ಸ್ತನೈಃ ಸ್ತನಾನ್ಕುಂಕುಮಪಂಕರೂಷಿತಾನ್
ನಿಹತ್ಯ ದೋರ್ಭಿಃ ಪ್ರಣಯಾಶ್ರುಲೋಚನಾಃ ॥

ಅನುವಾದ

ಪುರುಷರಂತೆಯೇ ಸ್ತ್ರೀಯರೂ ಪರಸ್ಪರ ಒಬ್ಬರನ್ನೊಬ್ಬರನ್ನು ನೋಡಿ ಪ್ರೇಮಾನಂದಭರಿತರಾದರು. ಅವರು ಅತ್ಯಂತ ಸೌಹಾರ್ದಭಾವವನ್ನು ಸೂಚಿಸುತ್ತಾ ಮಂದಹಾಸವನ್ನು ಬೀರುತ್ತಾ ಕಡೆಗಣ್ಣ ನೋಟದಿಂದ ಅನುರಾಗವನ್ನು ವ್ಯಕ್ತಪಡಿಸುತ್ತಾ ಆನಂದಿಸಿದರು. ಒಬ್ಬರನ್ನೊಬ್ಬರು ಬಿಗಿದಪ್ಪಿಕೊಂಡಾಗ ಕುಂಕುಮ ಲಿಪ್ತವಾದ ಕುಚಗಳಿಂದ ಕುಚಗಳನ್ನು ಸಂಘಟಿಸುತ್ತಾ, ಆನಂದ ಬಾಷ್ಪವನ್ನು ಸುರಿಸುತ್ತಾ ನಲಿದಾಡಿದರು. ॥16॥

ಮೂಲಮ್

(ಶ್ಲೋಕ-17)
ತತೋಭಿವಾದ್ಯ ತೇ ವೃದ್ಧಾನ್ಯವಿಷ್ಠೈರಭಿವಾದಿತಾಃ ।
ಸ್ವಾಗತಂ ಕುಶಲಂ ಪೃಷ್ಟ್ವಾ ಚಕ್ರುಃ ಕೃಷ್ಣಕಥಾ ಮಿಥಃ ॥

ಅನುವಾದ

ಅನಂತರ ತಮಗಿಂತ ಹಿರಿಯರಿಗೆ ನಮಸ್ಕರಿಸಿದರು ಮತ್ತು ತಮಗಿಂತ ಕಿರಿಯವರಿಂದ ನಮಸ್ಕಾರ ಸ್ವೀಕರಿಸಿದರು. ಅವರು ಪರಸ್ಪರ ಸ್ವಾಗತಿಸುತ್ತಾ, ಕ್ಷೇಮಸಮಾಚಾರವನ್ನು ಕೇಳಿಕೊಂಡು ಮತ್ತೆ ಶ್ರೀಕೃಷ್ಣನ ಮಧುರ ಲೀಲೆಗಳನ್ನು ಒಬ್ಬರು ಮತ್ತೊಬ್ಬರಿಗೆ ಹೇಳಿಕೊಳ್ಳತೊಡಗಿದರು. ॥17॥

ಮೂಲಮ್

(ಶ್ಲೋಕ-18)
ಪೃಥಾ ಭ್ರಾತೃನ್ಸ್ವಸೃರ್ವೀಕ್ಷ್ಯ ತತ್ಪುತ್ರಾನ್ಪಿತರಾವಪಿ ।
ಭ್ರಾತೃಪತ್ನೀರ್ಮುಕುಂದಂ ಚ ಜಹೌ ಸಂಕಥಯಾ ಶುಚಃ ॥

ಅನುವಾದ

ಪರೀಕ್ಷಿತನೇ! ಕುಂತಿಯು ವಸುದೇವನೇ ಮೊದಲಾದ ತನ್ನ ಸಹೋದರ-ಸಹೋದರಿಯರನ್ನೂ, ಅವರ ಪುತ್ರರನ್ನೂ, ತಂದೆ ತಾಯಿ, ಅತ್ತಿಗೆಯರನ್ನು ಹಾಗೂ ಭಗವಾನ್ ಶ್ರೀಕೃಷ್ಣನನ್ನು ನೋಡಿ, ಅವರೊಂದಿಗೆ ಮಾತಾಡಿ ತನ್ನ ದುಃಖವೆಲ್ಲವನ್ನೂ ಮರೆತಳು. ॥18॥

ಮೂಲಮ್

(ಶ್ಲೋಕ-19)
ಕುಂತ್ಯುವಾಚ
ಆರ್ಯ ಭ್ರಾತರಹಂ ಮನ್ಯೇ ಆತ್ಮಾನಮಕೃತಾಶಿಷಮ್ ।
ಯದ್ವಾ ಆಪತ್ಸು ಮದ್ವಾರ್ತಾಂ ನಾನುಸ್ಮರಥ ಸತ್ತಮಾಃ ॥

ಅನುವಾದ

ಕುಂತಿಯು ವಸುದೇವನಲ್ಲಿ ಹೇಳಿದಳು — ಅಣ್ಣಾ! ನಾನು ನಿಜವಾಗಿಯೂ ನಿರ್ಭಾಗ್ಯಳೇ ಸರಿ. ನನ್ನ ಒಂದೂ ಆಸೆ ಈಡೇರಲಿಲ್ಲ. ನಿಮ್ಮಂತಹ ಸಾಧು-ಸ್ವಭಾವದ ಸಜ್ಜನ ಸಹೋದರರೂ ಆಪತ್ತಿನಲ್ಲಿ ಸಿಕ್ಕಿಕೊಂಡ ನನ್ನ ಸಮಾಚಾರವನ್ನು ಸ್ಮರಿಸಲೇ ಇಲ್ಲ. ಇದಕ್ಕಿಂತ ಮಿಗಿಲಾದ ದುಃಖದ ಮಾತೇನಿರಬಹುದು? ॥19॥

ಮೂಲಮ್

(ಶ್ಲೋಕ-20)
ಸುಹೃದೋ ಜ್ಞಾತಯಃ ಪುತ್ರಾ ಭ್ರಾತರಃ ಪಿತರಾವಪಿ ।
ನಾನುಸ್ಮರಂತಿ ಸ್ವಜನಂ ಯಸ್ಯ ದೈವಮದಕ್ಷಿಣಮ್ ॥

ಅನುವಾದ

ಅಣ್ಣಾ! ದೈವವು ಪ್ರತಿಕೂಲವಾದಾಗ ಅಂತಹವರನ್ನು ಸ್ವಜನರು, ಸಂಬಂಧಿಗಳು, ಪುತ್ರರು, ತಂದೆ-ತಾಯಿಗಳು, ಸಹೋದರರು ಮರೆತುಬಿಡುತ್ತಾರೆ. ಇದರಲ್ಲಿ ನಿಮ್ಮದೇನೂ ದೋಷವಿಲ್ಲ. ॥20॥

ಮೂಲಮ್

(ಶ್ಲೋಕ-21)

ಮೂಲಮ್ (ವಾಚನಮ್)

ವಸುದೇವ ಉವಾಚ

ಮೂಲಮ್

ಅಂಬ ಮಾಸ್ಮಾನಸೂಯೇಥಾ ದೈವಕ್ರೀಡನಕಾನ್ನರಾನ್ ।
ಈಶಸ್ಯ ಹಿ ವಶೇ ಲೋಕಃ ಕುರುತೇ ಕಾರ್ಯತೇಥವಾ ॥

ಅನುವಾದ

ವಸುದೇವನು ಹೇಳಿದನು — ತಂಗೀ! ಬೇಸರಪಡ ಬೇಡ. ನಮ್ಮಿಂದ ಬೇರೆ ಎಂದು ಎಣಿಸಬೇಡ. ಮನುಷ್ಯರೆಲ್ಲರೂ ದೈವದ ಕೈಯ ಆಟದ ಗೊಂಬೆಗಳು. ಈ ಸಂಪೂರ್ಣ ಜಗತ್ತು ಈಶ್ವರನ ಅಧೀನದಲ್ಲಿದ್ದು ಕರ್ಮ ಮಾಡುತ್ತಾ ಅದರ ಫಲವನ್ನು ಅನುಭವಿಸುತ್ತಾರೆ. ॥21॥

ಮೂಲಮ್

(ಶ್ಲೋಕ-22)
ಕಂಸಪ್ರತಾಪಿತಾಃ ಸರ್ವೇ ವಯಂ ಯಾತಾ ದಿಶಂ ದಿಶಮ್ ।
ಏತರ್ಹ್ಯೇವ ಪುನಃ ಸ್ಥಾನಂ ದೈವೇನಾಸಾದಿತಾಃ ಸ್ವಸಃ ॥

ಅನುವಾದ

ಸಹೋದರಿ! ಕಂಸನ ಉಪಟಳದಿಂದ ನಾವೆಲ್ಲರೂ ದಿಕ್ಕಾಪಾಲಾಗಿ ಹೋಗಿದ್ದೆವು. ಈಶ ಕೃಪೆಯಿಂದ ನಾವೆಲ್ಲರೂ ಪುನಃ ನಮ್ಮ-ನಮ್ಮ ಸ್ಥಾನವನ್ನು ಹೊಂದಿ ಕೆಲವೇ ದಿನಗಳಾಗಿವೆ. ॥22॥

ಮೂಲಮ್

(ಶ್ಲೋಕ-23)
ಶ್ರೀಶುಕ ಉವಾಚ
ವಸುದೇವೋಗ್ರಸೇನಾದ್ಯೈರ್ಯದುಭಿಸ್ತೇರ್ಚಿತಾ ನೃಪಾಃ ।
ಆಸನ್ನಚ್ಯುತಸಂದರ್ಶಪರಮಾನಂದನಿರ್ವೃತಾಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ವಸುದೇವ, ಉಗ್ರಸೇನರೇ ಮೊದಲಾದ ಯಾದವರು ಇಲ್ಲಿಗೆ ಬಂದಿರುವ ಎಲ್ಲ ರಾಜರನ್ನೂ ಯಥೋಚಿತ ನಮಸ್ಕಾರ ಮಾಡಿದರು. ಅವರೆಲ್ಲರೂ ಭಗವಾನ್ ಶ್ರೀಕೃಷ್ಣನ ದರ್ಶನವನ್ನು ಪಡೆದು ಪರಮಾನಂದಭರಿತರಾಗಿ ಶಾಂತಿಯನ್ನು ಅನುಭವಿಸಿದರು. ॥23॥

ಮೂಲಮ್

(ಶ್ಲೋಕ-24)
ಭೀಷ್ಮೋ ದ್ರೋಣೋಂಬಿಕಾಪುತ್ರೋ ಗಾಂಧಾರೀ ಸಸುತಾ ತಥಾ ।
ಸದಾರಾಃ ಪಾಂಡವಾಃ ಕುಂತೀ ಸೃಂಜಯೋ ವಿದುರಃ ಕೃಪಃ ॥
(ಶ್ಲೋಕ-25)
ಕುಂತಿಭೋಜೋ ವಿರಾಟಶ್ಚ ಭೀಷ್ಮಕೋ ನಗ್ನಜಿನ್ಮಹಾನ್ ।
ಪುರುಜಿದ್ದ್ರುಪದಃ ಶಲ್ಯೋ ಧೃಷ್ಟಕೇತುಃ ಸ ಕಾಶಿರಾಟ್ ॥
(ಶ್ಲೋಕ-26)
ದಮಘೋಷೋ ವಿಶಾಲಾಕ್ಷೋ ಮೈಥಿಲೋ ಮದ್ರಕೇಕಯೌ ।
ಯುಧಾಮನ್ಯುಃ ಸುಶರ್ಮಾ ಚ ಸಸುತಾ ಬಾಹ್ಲಿಕಾದಯಃ ॥
(ಶ್ಲೋಕ-27)
ರಾಜಾನೋ ಯೇ ಚ ರಾಜೇಂದ್ರ ಯುಧಿಷ್ಠಿರಮನುವ್ರತಾಃ ।
ಶ್ರೀನಿಕೇತಂ ವಪುಃ ಶೌರೇಃ ಸಸೀಕಂ ವೀಕ್ಷ್ಯ ವಿಸ್ಮಿತಾಃ ॥

ಅನುವಾದ

ಪರೀಕ್ಷಿತನೇ! ಪಿತಾಮಹ ಭೀಷ್ಮರು, ದ್ರೋಣಾಚಾರ್ಯರು, ಧೃತರಾಷ್ಟ್ರ, ದುರ್ಯೋಧನಾದಿ ಪುತ್ರರೊಂದಿಗೆ ಗಾಂಧಾರಿ, ಪತ್ನಿಯರೊಂದಿಗೆ ಯುಧಿಷ್ಠಿರನೇ ಮೊದಲಾದ ಪಾಂಡವರು, ಕುಂತೀ, ಸಂಜಯ, ವಿದುರ, ಕೃಪಾಚಾರ್ಯರು, ಕುಂತಿಭೋಜ, ವಿರಾಟ, ಭೀಷ್ಮಕ, ಮಹಾರಾಜ ನಾಗ್ನಜಿತ್ತು, ಪುರುಜಿತ್ತು, ದ್ರುಪದ, ಶಲ್ಯ, ಧೃಷ್ಟಕೇತು, ಕಾಶೀರಾಜ, ದಮಘೋಷ, ವಿಶಾಲಾಕ್ಷ, ಮಿಥಿಲಾನರೇಶ, ಮದ್ರರಾಜ, ಕೇಕಯನರೇಶ, ಯುಧಾಮನ್ಯು, ಸುಶರ್ಮಾ, ತಮ್ಮ ಪುತ್ರರೊಂದಿಗೆ ಬಾಹ್ಲೀಕ ಹಾಗೂ ಇತರ ಯುಧಿಷ್ಠಿರನ ಅನುಯಾಯಿಗಳಾದ ರಾಜರು - ಹೀಗೆ ಇವರೆಲ್ಲರೂ ರಾಣಿಯರೊಡಗೂಡಿದ್ದ ಭಗವಾನ್ ಶ್ರೀಕೃಷ್ಣನ ಪರಮಸುಂದರ ಶ್ರೀನಿಕೇತನ ದಿವ್ಯಮಂಗಳ ವಿಗ್ರಹವನ್ನು ನೋಡಿ ಅತ್ಯಂತ ವಿಸ್ಮಿತರಾದರು. ॥24-27॥

ಮೂಲಮ್

(ಶ್ಲೋಕ-28)
ಅಥ ತೇ ರಾಮಕೃಷ್ಣಾಭ್ಯಾಂ ಸಮ್ಯಕ್ ಪ್ರಾಪ್ತಸಮರ್ಹಣಾಃ ।
ಪ್ರಶಶಂಸುರ್ಮುದಾ ಯುಕ್ತಾ ವೃಷ್ಣೀನ್ಕೃಷ್ಣಪರಿಗ್ರಹಾನ್ ॥

ಅನುವಾದ

ಈಗ ಅವರೆಲ್ಲರೂ ಬಲರಾಮ-ಶ್ರೀಕೃಷ್ಣರಿಂದ ಯಥೋಚಿತವಾದ ಸಮ್ಮಾನವನ್ನು ಪಡೆದು ಅತ್ಯಾನಂದದಿಂದ ಶ್ರೀಕೃಷ್ಣನನ್ನು, ಅವನ ಸ್ವಜನ ಯದುವಂಶೀಯರನ್ನೂ ಪ್ರಶಂಸಿತೊಡಗಿದರು. ॥28॥

ಮೂಲಮ್

(ಶ್ಲೋಕ-29)
ಅಹೋ ಭೋಜಪತೇ ಯೂಯಂ ಜನ್ಮಭಾಜೋ ನೃಣಾಮಿಹ ।
ಯತ್ಪಶ್ಯಥಾಸಕೃತ್ಕೃಷ್ಣಂ ದುರ್ದರ್ಶಮಪಿ ಯೋಗಿನಾಮ್ ॥

ಅನುವಾದ

ಅವರೆಲ್ಲರೂ ಪ್ರಧಾನವಾಗಿ ಉಗ್ರಸೇನನನ್ನು ಸಂಬೋಧಿಸುತ್ತಾ ಹೇಳತೊಡಗಿದರು - ‘‘ಭೋಜರಾಜ ಉಗ್ರಸೇನನೇ! ಮನುಷ್ಯಲೋಕದಲ್ಲಿ ಜನ್ಮತಾಳಿರುವ ನಿಮ್ಮ ಜೀವನವೇ ನಿಶ್ಚಯವಾಗಿ ಧನ್ಯವಾಗಿದೆ. ಸಾರ್ಥಕವಾಗಿದೆ. ಏಕೆಂದರೆ, ದೊಡ್ಡ-ದೊಡ್ಡ ಯೋಗಿಗಳಿಗೂ ದರ್ಶನಕ್ಕೆ ದುರ್ಲಭನಾದ ಶ್ರೀಕೃಷ್ಣನನ್ನು ನೀವೆಲ್ಲರೂ ನಿತ್ಯ-ನಿರಂತರವಾಗಿ ನೋಡುತ್ತಾ ಇದ್ದೀರಿ. ॥29॥

ಮೂಲಮ್

(ಶ್ಲೋಕ-30)
ಯದ್ವಿಶ್ರುತಿಃ ಶ್ರುತಿನುತೇದಮಲಂ ಪುನಾತಿ
ಪಾದಾವನೇಜನಪಯಶ್ಚ ವಚಶ್ಚ ಶಾಸಮ್ ।
ಭೂಃ ಕಾಲಭರ್ಜಿತಭಗಾಪಿ ಯದಂಘ್ರಿಪದ್ಮ-
ಸ್ಪರ್ಶೊತ್ಥಶಕ್ತಿರಭಿವರ್ಷತಿ ನೋಖಿಲಾರ್ಥಾನ್ ॥

ಅನುವಾದ

ವೇದಗಳು ಅತ್ಯಾದರದಿಂದ ಭಗವಾನ್ ಶ್ರೀಕೃಷ್ಣನ ಕೀರ್ತಿಯನ್ನು ಕೊಂಡಾಡುತ್ತವೆ. ಅವನ ಚರಣೋದಕ ಗಂಗೆಯು, ಅವನ ವಾಣಿಯಾದ (ಗೀತೆಯು) ಶಾಸ್ತ್ರವು ಮತ್ತು ಅವನ ಮಂಗಳ ಕೀರ್ತಿಯು ಈ ಜಗತ್ತನ್ನು ಪಾವನಗೊಳಿಸುತ್ತಿದೆ. ಕಾಲ ಬಾಧಿತವಾಗಿ ಪೃಥಿವಿಯ ಸೌಭಾಗ್ಯವೆಲ್ಲವೂ ನಾಶವಾಗಿ ಹೋಗಿತ್ತು. ಆದರೆ ಅವನ ಚರಣಕಮಲಗಳ ಸ್ಪರ್ಶ ಸುಖವನ್ನು ಪಡೆದು ಭೂದೇವಿಯೂ ಸರ್ವಸಮರ್ಥಳಾಗಿ ನಾವು ಅಪೇಕ್ಷಿಸಿದುದೆಲ್ಲವನ್ನೂ ಮಳೆಗರೆಯುತ್ತಿದ್ದಾಳೆ. ॥30॥

ಮೂಲಮ್

(ಶ್ಲೋಕ-31)
ತದ್ದರ್ಶನಸ್ಪರ್ಶನಾನುಪಥಪ್ರಜಲ್ಪ-
ಶಯ್ಯಾಸನಾಶನಸಯೌನಸಪಿಂಡಬಂಧಃ ।
ಯೇಷಾಂ ಗೃಹೇ ನಿರಯವರ್ತ್ಮನಿ ವರ್ತತಾಂ ವಃ
ಸ್ವರ್ಗಾಪವರ್ಗವಿರಮಃ ಸ್ವಯಮಾಸ ವಿಷ್ಣುಃ ॥

ಅನುವಾದ

ಉಗ್ರಸೇನನೇ! ಅಂತಹ ದೇವ-ದೇವನಾದ ಶ್ರೀಕೃಷ್ಣ ನೊಡನೆ ನಿಮಗೆ ವಿವಾಹಸಂಬಂಧ ಹಾಗೂ ಗೋತ್ರ ಸಂಬಂಧವೂ ಇದೆ. ಇಷ್ಟೇ ಅಲ್ಲ; ನೀವೆಲ್ಲರೂ ಯಾವಾಗಲೂ ಅವನನ್ನು ದರ್ಶಿಸುತ್ತಾ, ಸ್ಪರ್ಶಿಸುತ್ತಾ ಇರುವಿರಿ. ಅವನೊಡನೆ ನಡೆಯುವಿರಿ, ಮಾತನಾಡುವಿರಿ, ಮಲಗುವಿರಿ, ಕುಳಿತುಕೊಳ್ಳುವಿರಿ, ಊಟ-ತಿಂಡಿಗಳನ್ನು ಮಾಡುತ್ತಿರುವಿರಿ. ನೀವು ನರಕಕ್ಕೆ, ದಾರಿಯಾದ ಸಂಸಾರಸಾಗರದಲ್ಲಿ ಬಿದ್ದು ತೊಳಲುತ್ತಿದ್ದರೂ ನಿಮ್ಮ ಮನೆಯಲ್ಲಿ ಸರ್ವವ್ಯಾಪಕನಾದ ಭಗವಾನ್ ವಿಷ್ಣುವು ಮೂರ್ತಿಮಂತನಾಗಿ ನಿವಾಸಮಾಡಿದ್ದಾನೆ. ಅವನ ದರ್ಶನ ಮಾತ್ರದಿಂದಲೇ ಸ್ವರ್ಗ-ಮೋಕ್ಷಗಳ ಅಭಿಲಾಷೆಗಳೂ ಇಲ್ಲವಾಗುತ್ತವೆ.’’ ॥31॥

ಮೂಲಮ್

(ಶ್ಲೋಕ-32)

ಮೂಲಮ್ (ವಾಚನಮ್)

ಶ್ರೀ ಶುಕ ಉವಾಚ

ಮೂಲಮ್

ನಂದಸ್ತತ್ರ ಯದೂನ್ಪ್ರಾಪ್ತಾನ್ ಜ್ಞಾತ್ವಾ ಕೃಷ್ಣಪುರೋಗಮಾನ್ ।
ತತ್ರಾಗಮದ್ವ ತೋ ಗೋಪೈರನಃಸ್ಥಾರ್ಥೈರ್ದಿದೃಕ್ಷಯಾ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಶ್ರೀಕೃಷ್ಣನೇ ಮೊದಲಾದ ಯಾದವರು ಕುರುಕ್ಷೇತ್ರಕ್ಕೆ ಆಗ ಮಿಸಿರುವರು ಎಂದು ಕೇಳಿದ ನಂದಗೋಪನು ಗೋಪಾಲರೊಂದಿಗೆ ತಮ್ಮ ಸಾಮಗ್ರಿಗಳನ್ನು ಎತ್ತಿನ ಗಾಡಿಗಳಲ್ಲಿ ಹೇರಿಕೊಂಡು ತಮ್ಮ ಪ್ರಿಯಪುತ್ರರಾದ ಶ್ರೀಕೃಷ್ಣ ಬಲರಾಮರನ್ನು ನೋಡಲಿಕ್ಕಾಗಿ ಅಲ್ಲಿಗೆ ಬಂದರು. ॥32॥

ಮೂಲಮ್

(ಶ್ಲೋಕ-33)
ತಂ ದೃಷ್ಟ್ವಾ ವೃಷ್ಣಯೋ ಹೃಷ್ಟಾಸ್ತನ್ವಃ ಪ್ರಾಣಮಿವೋತ್ಥಿತಾಃ ।
ಪರಿಷಸ್ವಜಿರೇ ಗಾಢಂ ಚಿರದರ್ಶನಕಾತರಾಃ ॥

ಅನುವಾದ

ನಂದರಾಜ ಮೊದಲಾದ ಗೋಪಾಲರನ್ನು ನೋಡಿ ಸಮಸ್ತ ಯಾದವರು ಆನಂದತುಂದಿಲರಾದರು. ಮೃತ ಶರೀರದಲ್ಲಿ ಪ್ರಾಣ ಸಂಚಾರವಾದಂತೆ ಲಗುಬಗೆಯಿಂದ ಎದ್ದು ನಿಂತರು. ಪರಸ್ಪರ ಅವರು ಒಬ್ಬರನ್ನೊಬ್ಬರು ಭೇಟಿಯಾಗಲು ಬಹಳ ದಿನಗಳಿಂದ ಕಾತುರರಾಗಿದ್ದರು. ಅದರಿಂದ ಒಬ್ಬರನ್ನೊಬ್ಬರು ಬಹಳ ಹೊತ್ತಿನವರೆಗೆ ಗಾಢವಾಗಿ ಆಲಿಂಗಿಸಿಕೊಂಡೇ ಇದ್ದರು. ॥33॥

ಮೂಲಮ್

(ಶ್ಲೋಕ-34)
ವಸುದೇವಃ ಪರಿಷ್ವಜ್ಯ ಸಂಪ್ರೀತಃ ಪ್ರೇಮವಿಹ್ವಲಃ ।
ಸ್ಮರನ್ ಕಂಸಕೃತಾನ್ ಕ್ಲೇಶಾನ್ ಪುತ್ರನ್ಯಾಸಂ ಚ ಗೋಕುಲೇ ॥

ಅನುವಾದ

ವಸುದೇವನು ಅತ್ಯಂತ ಪ್ರೇಮವಿಹ್ವಲನಾಗಿ ನಂದಗೋಪನನ್ನು ಅಪ್ಪಿಕೊಂಡನು. ಕಂಸನು ಯಾವ ರೀತಿಯಿಂದ ಸತಾಯಿಸುತ್ತಿದ್ದನು, ತನ್ನ ಪುತ್ರರನ್ನು ಗೋಕುಲಕ್ಕೆ ಕೊಂಡು ಹೋಗಿ ನಂದರಾಜನಲ್ಲಿ, ಹೇಗೆ ಇರಿಸಿದೆನು, ಹೀಗೆ ಎಲ್ಲ ಘಟನೆಗಳು ಒಂದೊಂದಾಗಿ ಅವನಿಗೆ ನೆನಪಾದುವು. ॥34॥

ಮೂಲಮ್

(ಶ್ಲೋಕ-35)
ಕೃಷ್ಣರಾವೌ ಪರಿಷ್ವಜ್ಯ ಪಿತರಾವಭಿವಾದ್ಯ ಚ ।
ನ ಕಿಂಚನೋಚತುಃ ಪ್ರೇಮ್ಣಾ ಸಾಶ್ರುಕಂಠೌ ಕುರೂದ್ವಹ ॥

ಅನುವಾದ

ಭಗವಾನ್ ಶ್ರೀಕೃಷ್ಣ ಮತ್ತು ಬಲರಾಮರು ತಾಯಿ ಯಶೋದೆಯನ್ನು ತಂದೆ ನಂದಗೋಪನನ್ನು ಪ್ರೇಮಾದರದಿಂದ ಅಪ್ಪಿಕೊಂಡು, ಚರಣಗಳಲ್ಲಿ ವಂದಿಸಿಕೊಂಡರು. ಪರೀಕ್ಷಿತನೇ! ಆ ಸಮಯದಲ್ಲಿ ಪ್ರೇಮೋದ್ರೇಕದಿಂದ ಸಹೋದರರಿಬ್ಬರ ಗಂಟಲು ಕಟ್ಟಿಕೊಂಡು ಏನನ್ನೂ ಮಾತನಾಡದಾದರು. ॥35॥

ಮೂಲಮ್

(ಶ್ಲೋಕ-36)
ತಾವಾತ್ಮಾಸನಮಾರೋಪ್ಯ ಬಾಹುಭ್ಯಾಂ ಪರಿರಭ್ಯ ಚ ।
ಯಶೋದಾ ಚ ಮಹಾಭಾಗಾ ಸುತೌ ವಿಜಹತುಃ ಶುಚಃ ॥

ಅನುವಾದ

ಮಹಾಭಾಗ್ಯಶಾಲಿಯಾದ ಯಶೋದೆ ಮತ್ತು ನಂದರಾಜನು ಪುತ್ರರಿಬ್ಬರನ್ನು ತೊಡೆಯಲ್ಲಿ ಕುಳ್ಳಿರಿಸಿಕೊಂಡು, ಗಾಢವಾಗಿ ಬಿಗಿದಪ್ಪಿಕೊಂಡರು. ಬಹಳ ಕಾಲದಿಂದ ಕಾಣದೇ ಇದ್ದ ಅವರ ಹೃದಯದ ದುಃಖವೆಲ್ಲವೂ ಅಳಿದುಹೋಯಿತು. ॥36॥

ಮೂಲಮ್

(ಶ್ಲೋಕ-37)
ರೋಹಿಣೀ ದೇವಕೀ ಚಾಥ ಪರಿಷ್ವಜ್ಯ ವ್ರಜೇಶ್ವರೀಮ್ ।
ಸ್ಮರಂತ್ಯೌ ತತ್ಕೃತಾಂ ಮೈತ್ರಿಂ ಬಾಷ್ಪಕಂಠ್ಯೌ ಸಮೂಚತುಃ ॥

ಅನುವಾದ

ವಸುದೇವನ ಪತ್ನಿಯರಾದ ದೇವಕೀ-ರೋಹಿಣಿಯರು ವ್ರಜೇಶ್ವರಿಯಾದ ಯಶೋದೆಯನ್ನು ಗಾಢವಾಗಿ ಆಲಿಂಗಿಸಿಕೊಂಡು ಆನಂದ ಬಾಷ್ಪಗಳನ್ನು ಸುರಿಸಿದರು. ತಮ್ಮ ಹಿಂದಿನ ಮೈತ್ರಿಯನ್ನು ಮತ್ತು ಯಶೋದೆಯು ಮಾಡಿದ ಉಪಕಾರವನ್ನು ಜ್ಞಾಪಿಸಿಕೊಳ್ಳುತ್ತಾ ಅವರು ಯಶೋದೆಯ ಬಳಿ ಹೇಳಿದರು - ॥37॥

ಮೂಲಮ್

(ಶ್ಲೋಕ-38)
ಕಾ ವಿಸ್ಮರೇತ ವಾಂ ಮೈತ್ರೀಮನಿವೃತ್ತಾಂ ವ್ರಜೇಶ್ವರಿ ।
ಅವಾಪ್ಯಾಪ್ಯೈಂದ್ರಮೈಶ್ವರ್ಯಂ ಯಸ್ಯಾ ನೇಹ ಪ್ರತಿಕ್ರಿಯಾ ॥

ಅನುವಾದ

ಯಶೋದಾ ದೇವಿಯೇ! ನಿನ್ನ ಮತ್ತು ವ್ರಜೇಶ್ವರನಾದ ನಂದಗೋಪನ ಸುಸ್ಥಿರವಾದ ಮೈತ್ರಿಯನ್ನು ಯಾವಳು ತಾನೇ ಮರೆಯಬಲ್ಲಳು? ಇಂದ್ರನ ಐಶ್ವರ್ಯವನ್ನೇ ಪಡೆದುಕೊಂಡು ನಿಮಗೆ ಕೊಟ್ಟರೂ ನೀವು ಮಾಡಿದ ಉಪಕಾರವನ್ನು ತೀರಸಲಾಗದು. ॥38॥

ಮೂಲಮ್

(ಶ್ಲೋಕ-39)
ಏತಾವದೃಷ್ಟಪಿತರೌ ಯುವಯೋಃ ಸ್ಮ ಪಿತ್ರೋಃ
ಸಂಪ್ರೀಣನಾಭ್ಯುದಯಪೋಷಣಪಾಲನಾನಿ ।
ಪ್ರಾಪ್ಯೋಷತುರ್ಭವತಿ ಪಕ್ಷ್ಮ ಹ ಯದ್ವದಕ್ಷ್ಣೋ-
ರ್ನ್ಯಸ್ತಾವಕುತ್ರ ಚ ಭಯೌ ನ ಸತಾಂ ಪರಃ ಸ್ವಃ ॥

ಅನುವಾದ

ದೇವಿ! ಬಲರಾಮ - ಶ್ರೀಕೃಷ್ಣರು ತಂದೆ-ತಾಯಿಯರನ್ನೇ ಕಾಣದ್ದಾಗ ಇವರ ತಂದೆಯು ಇವರನ್ನು ನ್ಯಾಸರೂಪವಾಗಿ ನಿಮ್ಮಲ್ಲಿ ಬಿಟ್ಟು ಬಂದರು. ಆ ಸಮಯದಲ್ಲಿ ನೀವು ಇವರಿಬ್ಬರನ್ನೂ ರೆಪ್ಪೆಗಳು ಕಣ್ಣನ್ನು ರಕ್ಷಿಸುವಂತೆ ರಕ್ಷಿಸಿದಿರಿ. ನೀವು ಈ ಮಕ್ಕಳನ್ನು ನಿಮ್ಮ ಮುದ್ದು ಮಕ್ಕಳೆಂದೇ ಭಾವಿಸಿ ಪ್ರೀತಿಸಿದಿರಿ, ಬೆಳೆಸಿದಿರಿ, ಲಾಲಿಸಿ ಪಾಲಿಸಿದಿರಿ, ಇವರ ಅಭ್ಯುದಯಕ್ಕಾಗಿ ಅನೇಕ ಮಾಂಗಲಿಕ ಉತ್ಸವಗಳನ್ನು ಆಚರಿಸಿದಿರಿ. ನಿಜಹೇಳ ಬೇಕೆಂದರೆ ಇವರ ತಂದೆ ತಾಯಿಗಳು ನೀವೇ ಆಗಿದ್ದೀರಿ. ನಿಮ್ಮ ಪಾಲನೆಯಲ್ಲಿ ಇವರು ಯಾವ ಭಯವೂ ಇಲ್ಲದೆ ನಿಮ್ಮ ಮನೆಯಲ್ಲಿ ಇದ್ದರು. ಹೀಗೆ ಮಾಡಿದುದು ಸತ್ಪುರುಷರಾದ ನಿಮಗೆ ಅನುಗುಣವೇ ಆಗಿತ್ತು. ಏಕೆಂದರೆ, ಸತ್ಪುರುಷರ ದೃಷ್ಟಿಯಲ್ಲಿ ‘ನಮ್ಮದು-ಬೇರೆಯವರದ್ದು’ ಎಂಬ ಭೇದ-ಭಾವವೇ ಇರುವುದಿಲ್ಲ. ಹೀಗೆ ಹೇಳುತ್ತ ಯಶೋದೆಯನ್ನು ಬಹಳವಾಗಿ ಶ್ಲಾಘಿಸಿದರು. ॥39॥

ಮೂಲಮ್

(ಶ್ಲೋಕ-40)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಗೋಪ್ಯಶ್ಚ ಕೃಷ್ಣಮುಪಲಭ್ಯ ಚಿರಾದಭೀಷ್ಟಂ-
ಯತ್ಪ್ರೇಕ್ಷಣೇ ದೃಶಿಷು ಪಕ್ಷ್ಮಕೃತಂ ಶಪಂತಿ ।
ದೃಗ್ಭಿರ್ಹೃದೀಕೃತಮಲಂ ಪರಿರಭ್ಯ ಸರ್ವಾಃ
ತದ್ಭಾವಮಾಪುರಪಿ ನಿತ್ಯಯುಜಾಂ ದುರಾಪಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಗೋಪಿಯರಿಗೆ ಪರಮಪ್ರಿಯತಮನೂ, ಜೀವನ ಸರ್ವಸ್ವನೂ ಶ್ರೀಕೃಷ್ಣನೇ ಆಗಿದ್ದನು ಎಂದು ನಾನು ಹೇಳಿದನಷ್ಟೆ! ಅವನನ್ನು ದರ್ಶನಮಾಡುವಾಗ ರೆಪ್ಪೆಗಳು ಮುಚ್ಚಿಕೊಂಡಾಗ ಅವರು ಆ ರೆಪ್ಪೆಗಳನ್ನು ಸೃಷ್ಟಿಸಿದವನನ್ನೇ ಬೈಯುತ್ತಿದ್ದರು. ಅಂತಹ ಪ್ರೇಮಮೂರ್ತಿಗಳಾದ ಗೋಪಿಯರಿಗೆ ಬಹಳ ದಿನಗಳ ಬಳಿಕ ಇಂದು ಭಗವಾನ್ ಶ್ರೀಕೃಷ್ಣನ ದರ್ಶನವಾಯಿತು. ಇದಕ್ಕಾಗಿ ಅವರ ಮನಸ್ಸಿನಲ್ಲಿದ್ದ ಅಭಿಲಾಷೆಯನ್ನು ಯಾರೂ ಅಳೆಯಲಾರರು. ಅವರು ಕಂಗಳ ಮೂಲಕ ತಮ್ಮ ಪ್ರಿಯತಮ ಶ್ರೀಕೃಷ್ಣನನ್ನು ಹೃದಯಕ್ಕೊಯ್ದು ಗಾಢವಾಗಿ ಆಲಿಂಗಿಸಿಕೊಂಡರು ಮತು ಮನಸ್ಸಿನಲ್ಲೇ ಆಲಿಂಗಿಸಿಕೊಂಡು ತನ್ಮಯರಾಗಿಬಿಟ್ಟರು. ಪರೀಕ್ಷಿತನೇ! ನಿತ್ಯ-ನಿರಂತರ ಅಭ್ಯಾಸ ಮಾಡುವಂತಹ ಯೋಗಿಗಳಿಗೂ ಅತ್ಯಂತ ದುರ್ಲಭವಾದ ಭಾವಸ್ಥಿತಿಯನ್ನು ಅಂದು ಅವರು ಪಡೆದುಕೊಂಡರು. ॥40॥

ಮೂಲಮ್

(ಶ್ಲೋಕ-41)
ಭಗವಾಂಸ್ತಾಸ್ತಥಾಭೂತಾ ವಿವಿಕ್ತ ಉಪಸಂಗತಃ ।
ಆಶ್ಲಿಷ್ಯಾನಾಮಯಂ ಪೃಷ್ಟ್ವಾ ಪ್ರಹಸನ್ನಿದಮಬ್ರವೀತ್ ॥

ಅನುವಾದ

ಗೋಪಿಯರು ತನ್ನಲ್ಲಿ ತನ್ಮಯರಾಗಿ ಬಿಟ್ಟಿದ್ದಾರೆ ಎಂದು ನೋಡಿದ ಭಗವಾನ್ ಶ್ರೀಕೃಷ್ಣನು ಏಕಾಂತದಲ್ಲಿ ಅವರ ಬಳಿಗೆ ಹೋದನು. ಅವರನ್ನು ಅಪ್ಪಿಕೊಂಡನು. ಕ್ಷೇಮ-ಸಮಾಚಾರವನ್ನು ಕೇಳುತ್ತಾ, ನಸು-ನಗುತ್ತಾ ಹೀಗೆ ಹೇಳಿದನು - ॥41॥

ಮೂಲಮ್

(ಶ್ಲೋಕ-42)
ಅಪಿ ಸ್ಮರಥ ನಃ ಸಖ್ಯಃ ಸ್ವಾನಾಮರ್ಥಚಿಕೀರ್ಷಯಾ ।
ಗತಾಂಶ್ಚಿರಾಯಿತಾನ್ ಶತ್ರುಪಕ್ಷಕ್ಷಪಣಚೇತಸಃ ॥

ಅನುವಾದ

ಸಖಿಯರೇ! ನಾವು ನಮ್ಮ ಸ್ವಜನ-ಸಂಬಂಧಿಗಳ ಕೆಲಸವನ್ನು ಮಾಡುವುದಕ್ಕಾಗಿ ವ್ರಜದಿಂದ ಹೊರಗೆ ಮತ್ತು ಹೀಗೆ ನಿಮ್ಮಂತಹ ಪ್ರೇಯಸಿಯರನ್ನು ಬಿಟ್ಟು ನಾವು ಶತ್ರುಗಳನ್ನು ನಾಶಮಾಡುವುದರಲ್ಲಿ ತೊಡಗಿಬಿಟ್ಟೆವು. ಬಹಳದಿನಗಳು ಕಳೆದುವು ಎಂದಾದರು ನೀವುಗಳು ನಮ್ಮನ್ನು ಸ್ಮರಿಸುತ್ತಿರೇನು? ॥42॥

ಮೂಲಮ್

(ಶ್ಲೋಕ-43)
ಅಪ್ಯವಧ್ಯಾಯಥಾಸ್ಮಾನ್ ಸ್ವಿದಕೃತಜ್ಞಾವಿಶಂಕಯಾ ।
ನೂನಂ ಭೂತಾನಿ ಭಗವಾನ್ ಯುನಕ್ತಿ ವಿಯುನಕ್ತಿ ಚ ॥

ಅನುವಾದ

ಪ್ರಿಯಗೋಪಿಯರೇ! ಮಾಡಿದ ಉಪಕಾರವನ್ನು ಸ್ಮರಿಸುವವನಲ್ಲವೆಂದು ಭಾವಿಸಿ ನನ್ನನ್ನು ಕಡೆಗಾಣಿಸಿ ಬಿಟ್ಟಿದ್ದೀರಾ? ಹಾಗೆ ನನ್ನನ್ನು ತಿಳಿಯಬೇಡಿರಿ. ಸೇರುವಿಕೆಯೂ ಅಗಲುವಿಕೆಯೂ ನಮ್ಮ ಅಧೀನದಲ್ಲಿಲ್ಲ. ಭಗವಂತನೇ ಪ್ರಾಣಿಗಳ ಸಂಯೋಗ ಮತ್ತು ವಿಯೋಗಕ್ಕೆ ಕಾರಣನಾಗಿದ್ದಾನೆ. ॥43॥

ಮೂಲಮ್

(ಶ್ಲೋಕ-44)
ವಾಯುರ್ಯಥಾ ಘನಾನೀಕಂ ತೃಣಂ ತೂಲಂ ರಜಾಂಸಿ ಚ ।
ಸಂಯೋಜ್ಯಾಕ್ಷಿಪತೇ ಭೂಯಸ್ತಥಾ ಭೂತಾನಿ ಭೂತಕೃತ್ ॥

ಅನುವಾದ

ವಾಯುವು ಮೋಡಗಳನ್ನು, ಹುಲ್ಲುಕಡ್ಡಿಗಳನ್ನು, ಹತ್ತಿಯನ್ನು, ಧೂಳಿನ ಕಣಗಳನ್ನು ಒಮ್ಮೆ ಒಂದಾಗಿಸಿ ಮತ್ತೊಮ್ಮೆ ಛಿದ್ರಗೊಳಿಸುತ್ತದೆಯೋ ಹಾಗೆಯೇ ಸಮಸ್ತ ಪದಾರ್ಥಗಳ ಸೃಷ್ಟಿಕರ್ತನಾದ ಭಗವಂತನು ಪ್ರಾಣಿಗಳಿಗೆ ಸ್ವೇಚ್ಛೆಯಿಂದ ಸಂಯೋಗ-ವಿಯೋಗಗಳನ್ನು ಉಂಟುಮಾಡುತ್ತಾನೆ. ॥44॥

ಮೂಲಮ್

(ಶ್ಲೋಕ-45)
ಮಯಿ ಭಕ್ತಿರ್ಹಿ ಭೂತಾನಾಮಮೃತತ್ವಾಯ ಕಲ್ಪತೇ ।
ದಿಷ್ಟ್ಯಾ ಯದಾಸೀನ್ಮತ್ಸ್ನೇಹೋ ಭವತೀನಾಂ ಮದಾಪನಃ ॥

ಅನುವಾದ

ಸಖಿಯರೇ! ನನ್ನನ್ನು ಪಡೆಯುವಂತಹ ಪರಮಪ್ರೇಮವು ನಿಮಗೆಲ್ಲರಿಗೆ ಪ್ರಾಪ್ತವಾಗಿರುವುದು ದೊಡ್ಡ ಸೌಭಾಗ್ಯದ ಮಾತಾಗಿದೆ. ಏಕೆಂದರೆ, ನನ್ನ ಕುರಿತು ಉಂಟಾದ ಪ್ರೇಮಾ-ಭಕ್ತಿಯು ಪ್ರಾಣಿಗಳಿಗೆ ಅಮೃತತ್ತ್ವವನ್ನು ದೊರಕಿಸುವುದರಲ್ಲಿ ಸಮರ್ಥವಾಗಿದೆ. ॥45॥

ಮೂಲಮ್

(ಶ್ಲೋಕ-46)
ಅಹಂ ಹಿ ಸರ್ವಭೂತಾನಾಮಾದಿರಂತೋಂತರಂ ಬಹಿಃ ।
ಭೌತಿಕಾನಾಂ ಯಥಾ ಖಂ ವಾರ್ಭೂರ್ವಾಯುರ್ಜ್ಯೋತಿರಂಗನಾಃ ॥

ಅನುವಾದ

ಪ್ರಿಯ ಗೋಪಿಯರೇ! ಘಟ-ಪಟಗಳೇ ಮೊದಲಾದ ಭೌತಿಕ ಪದಾರ್ಥಗಳಿಗೆ ಪಂಚಭೂತಗಳಾದ ಪೃಥಿವಿ, ಜಲ, ವಾಯು, ಅಗ್ನಿ, ಆಕಾಶಗಳೇ ಮೂಲಕಾರಣವಾಗಿದ್ದು ಅವುಗಳ ಹೊರಗೂ, ಒಳಗೂ ಇದ್ದು ಅವುಗಳಲ್ಲಿ ಹಾಸುಹೊಕ್ಕಾಗಿದೆಯೋ ಹಾಗೆಯೇ ನಾನು ಸಮಸ್ತ ಪ್ರಾಣಿಗಳ ಆದಿಯೂ, ಮಧ್ಯನೂ, ಅಂತ್ಯನೂ ಹಾಗೂ ಅವುಗಳ ಹೊರಗೆ, ಒಳಗೆ ಕೇವಲ ನಾನೇ ವ್ಯಾಪಿಸಿಕೊಂಡಿದ್ದೇನೆ. ॥46॥

ಮೂಲಮ್

(ಶ್ಲೋಕ-47)
ಏವಂ ಹ್ಯೇತಾನಿ ಭೂತಾನಿ ಭೂತೇಷ್ವಾತ್ಮಾತ್ಮನಾ ತತಃ ।
ಉಭಯಂ ಮಯ್ಯಥ ಪರೇ ಪಶ್ಯತಾಭಾತಮಕ್ಷರೇ ॥

ಅನುವಾದ

ಹೀಗೆ ಸಮಸ್ತ ಪ್ರಾಣಿಗಳ ಶರೀರಗಳಲ್ಲಿಯೂ ಈ ಪಂಚಭೂತಗಳೇ ಕಾರಣರೂಪದಿಂದ ಉಪಸ್ಥಿತವಾಗಿವೆ. ಆತ್ಮನು ಭೋಕ್ತೃವಿನ ರೂಪದಲ್ಲಿ ಅಥವಾ ಜೀವರೂಪದಿಂದ ಇದ್ದಾನೆ. ನಾನಾದರೋ ಇವೆರಡರಿಂದಲೂ ಬೇರೆಯಾಗಿ ಅವಿನಾಶಿಯಾದ ಸತ್ಯಸ್ವರೂಪದಲ್ಲಿರುತ್ತೇನೆ. ಆದುದರಿಂದ ಇವೆರಡೂ ನನ್ನೊಳಗೆ ಕಂಡುಬರುತ್ತವೆ. ಹೀಗೆ ನೀವೆಲ್ಲರೂ ಕಂಡುಕೊಳ್ಳಿರಿ. ॥47॥

ಮೂಲಮ್

(ಶ್ಲೋಕ-48)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಅಧ್ಯಾತ್ಮಶಿಕ್ಷಯಾ ಗೋಪ್ಯ ಏವಂ ಕೃಷ್ಣೇನ ಶಿಕ್ಷಿತಾಃ ।
ತದನುಸ್ಮರಣಧ್ವಸ್ತಜೀವಕೋಶಾಸ್ತಮಧ್ಯಗನ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಹೀಗೆ ಗೋಪಿಯರಿಗೆ ಅಧ್ಯಾತ್ಮ ಜ್ಞಾನದ ಉಪದೇಶವನ್ನಿತ್ತನು. ಇಂತಹ ಭಗವದುಪದೇಶವನ್ನು ಪದೇ-ಪದೇ ಸ್ಮರಿಸಿಕೊಳ್ಳುತ್ತಾ ಗೋಪಿಯರ ಜೀವ ಕೋಶ (ಲಿಂಗಶರೀರ) ನಾಶವಾಗಿಹೋಯಿತು. ಅವರೆಲ್ಲರೂ ಭಗವಂತನ ನಿಜಸ್ವರೂಪವನ್ನು ಹೊಂದಿದರು. ॥48॥

ಮೂಲಮ್

(ಶ್ಲೋಕ-49)
ಆಹುಶ್ಚ ತೇ ನಲಿನನಾಭ ಪದಾರವಿಂದಂ
ಯೋಗೇಶ್ವರೈರ್ಹೃದಿ ವಿಚಿಂತ್ಯಮಗಾಧಬೋಧೈಃ ।
ಸಂಸಾರಕೂಪಪತಿತೋತ್ತರಣಾವಲಂಬಂ
ಗೇಹಂಜುಷಾಮಪಿ ಮನಸ್ಯುದಿಯಾತ್ಸದಾ ನಃ ॥

ಅನುವಾದ

ಆನಂದತುಂದಿಲರಾದ ಅವರು ಶ್ರೀಕೃಷ್ಣನನ್ನು ಹೀಗೆ ಪ್ರಾರ್ಥಿಸಿಕೊಂಡರು - ಓ ಕಮಲನಾಭನೆ! ಜ್ಞಾನಸಂಪನ್ನರಾದ ಮಹಾ-ಮಹಾಯೋಗಿಗಳು ತಮ್ಮ ಹೃದಯಕಮಲಗಳಲ್ಲಿ ನಿನ್ನ ದಿವ್ಯವಾದ ಚರಣಕಮಲಗಳನ್ನು ಸದಾಧ್ಯಾನ ಮಾಡುತ್ತಿರುತ್ತಾರೆ. ಸಂಸಾರ ಕೂಪದಲ್ಲಿ ಬಿದ್ದಿರುವ ಜನರಿಗೆ ಪಾರಾಗಲು ನಿನ್ನ ಚರಣಕಮಲಗಳೇ ಏಕಮಾತ್ರ ಅವಲಂಬನೆಯಾಗಿದೆ. ಪ್ರಭೋ! ನಿನ್ನ ಚರಣಕಮಲಗಳು ಮನೆವಾರ್ತೆಯ ಕೆಲಸಮಾಡುತ್ತಿದ್ದರೂ ಸದಾಕಾಲ ನಮ್ಮ ಹೃದಯದಲ್ಲಿ ವಿರಾಜಿಸುತ್ತಿರಲಿ; ನಾವು ಒಂದು ಕ್ಷಣವೂ ಅದನ್ನು ಮರೆಯದಂತೆ ದಯಮಾಡಿ ಅನುಗ್ರಹಿಸು. ॥49॥

ಅನುವಾದ (ಸಮಾಪ್ತಿಃ)

ಎಂಭತ್ತೆರಡನೆಯ ಅಧ್ಯಾಯವು ಮುಗಿಯಿತು. ॥82॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ ವೃಷ್ಣಿಗೋಪಸಂಗಮೋನಾಮ ದ್ವ್ಯಶೀತಿತಮೋಽಧ್ಯಾಯಃ ॥82॥