[ಏಂಭತ್ತೋಂದನೇಯ ಅಧ್ಯಾಯ]
ಭಾಗಸೂಚನಾ
ಸುದಾಮನಿಗೆ ಐಶ್ವರ್ಯದ ಪ್ರಾಪ್ತಿ
ಮೂಲಮ್
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಸ ಇತ್ಥಂ ದ್ವಿಜಮುಖ್ಯೇನ ಸಹ ಸಂಕಥಯನ್ ಹರಿಃ ।
ಸರ್ವಭೂತಮನೋಭಿಜ್ಞಃ ಸ್ಮಯಮಾನ ಉವಾಚ ತಮ್ ॥
(ಶ್ಲೋಕ-2)
ಬ್ರಹ್ಮಣ್ಯೋ ಬ್ರಾಹ್ಮಣಂ ಕೃಷ್ಣೋ ಭಗವಾನ್ಪ್ರಹಸನ್ಪ್ರಿಯಮ್ ।
ಪ್ರೇಮ್ಣಾ ನಿರೀಕ್ಷಣೇನೈವ ಪ್ರೇಕ್ಷನ್ಖಲು ಸತಾಂ ಗತಿಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪ್ರಿಯಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಸಮಸ್ತರ ಮನಸ್ಸಿನ ಮಾತನ್ನು ತಿಳಿದಿರುತ್ತಾನೆ. ಅವನು ಬ್ರಾಹ್ಮಣರ ಪರಮ ಭಕ್ತನಾಗಿದ್ದು, ಅವರ ಕ್ಲೇಶಗಳ ನಾಶಕನೂ, ಸಂತರ ಏಕಮಾತ್ರ ಆಶ್ರಯನೂ ಆಗಿರುವ ಶ್ರೀಕೃಷ್ಣನು ಹಿಂದೆ ಹೇಳಿದಂತೆ ತನ್ನ ಪ್ರಿಯಸಖನೊಂದಿಗೆ ಬಹಳ ಹೊತ್ತಿನವರೆಗೆ ಮಾತನಾಡುತ್ತಾ ಇದ್ದನು. ಅವನು ತನ್ನ ಪ್ರಿಯಸಖನಾದ ಸುದಾಮನನ್ನು ಪ್ರೇಮಪೂರ್ಣವಾದ ದೃಷ್ಟಿಯಿಂದ ನೋಡುತ್ತಾ ಸ್ವಲ್ಪ ಮುಗುಳ್ನಕ್ಕು ವಿನೋದದಿಂದ ಇಂತೆಂದನು. ॥1-2॥
ಮೂಲಮ್
(ಶ್ಲೋಕ-3)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಕಿಮುಪಾಯನಮಾನೀತಂ ಬ್ರಹ್ಮನ್ ಮೇ ಭವತಾ ಗೃಹಾತ್ ।
ಅಣ್ವಪ್ಯುಪಾಹೃತಂ ಭಕ್ತೈಃ ಪ್ರೇಮ್ಣಾ ಭೂರ್ಯೇವ ಮೇ ಭವೇತ್ ।
ಭೂರ್ಯಪ್ಯಭಕ್ತೋಪಹೃತಂ ನ ಮೇ ತೋಷಾಯ ಕಲ್ಪತೇ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳಿದನು — ಪ್ರಿಯಸಖನೇ! ನನಗಾಗಿ ನೀನು ಮನೆಯಿಂದ ಯಾವ ಉಪಹಾರವನ್ನು ತಂದಿರುವೆ? ನನ್ನ ಪ್ರಿಯಭಕ್ತರು ಪ್ರೇಮದಿಂದ ಸಣ್ಣದಾದ ವಸ್ತುವನ್ನು ಅರ್ಪಿಸಿದರೂ ನನಗೆ ಅದು ಬಹುದೊಡ್ಡದಾಗಿ ಹೋಗುತ್ತದೆ. ಆದರೆ ಭಕ್ತಿಯಿಲ್ಲದವರು ಬಹಳಷ್ಟು ವಸ್ತುಗಳನ್ನು ಕಾಣಿಕೆಯಾಗಿ ಕೊಟ್ಟರೂ ನಾನು ಅದರಿಂದ ಸಂತುಷ್ಟನಾಗುವುದಿಲ್ಲ. ॥3॥
ಮೂಲಮ್
(ಶ್ಲೋಕ-4)
ಪತ್ರಂ ಪುಷ್ಪಂ ಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ ।
ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ ॥
ಅನುವಾದ
ಭಕ್ತ ಪರವಶನಾಗಿ ಫಲ, ಪುಷ್ಪ, ಪತ್ರೆ, ನೀರು — ಇವುಗಳಲ್ಲಿ ಯಾವುದೇ ವಸ್ತುವನ್ನು ನನಗೆ ಆರ್ಪಿಸುವ ಆ ಶುದ್ಧ ಹೃದಯದ ಭಕ್ತನ ಪ್ರೇಮೋಪಹಾರವನ್ನು ನಾನು ಸ್ವೀಕರಿಸುತ್ತೇನೆ ಮಾತ್ರವಲ್ಲ ಅದನ್ನು ಆದರದಿಂದ ಸೇವಿಸುತ್ತೇನೆ. ॥4॥
ಮೂಲಮ್
(ಶ್ಲೋಕ-5)
ಇತ್ಯುಕ್ತೋಪಿ ದ್ವಿಜಸ್ತಸ್ಮೈ ವ್ರೀಡಿತಃ ಪತಯೇ ಶ್ರಿಯಃ ।
ಪೃಥುಕಪ್ರಸೃತಿಂ ರಾಜನ್ ನ ಪ್ರಾಯಚ್ಛದವಾಙ್ಮುಖಃ ॥
(ಶ್ಲೋಕ-6)
ಸರ್ವಭೂತಾತ್ಮದೃಕ್ ಸಾಕ್ಷಾತ್ ತಸ್ಯಾಗಮನಕಾರಣಮ್ ।
ವಿಜ್ಞಾಯಾಚಿಂತಯನ್ನಾಯಂ ಶ್ರೀಕಾಮೋ ಮಾಭಜತ್ಪುರಾ ॥
(ಶ್ಲೋಕ-7)
ಪತ್ನ್ಯಾಃ ಪತಿವ್ರತಾಯಾಸ್ತು ಸಖಾ ಪ್ರಿಯಚಿಕೀರ್ಷಯಾ ।
ಪ್ರಾಪ್ತೋ ಮಾಮಸ್ಯ ದಾಸ್ಯಾಮಿ ಸಂಪದೋಮರ್ತ್ಯದುರ್ಲಭಾಃ ॥
ಅನುವಾದ
ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಹೀಗೆ ಹೇಳಿದ್ದರೂ ಆ ಬ್ರಾಹ್ಮಣನು ನಾಚಿಕೆಯಿಂದಾಗಿ ಶ್ರೀಯಃಪತಿಯಾದ ತನ್ನ ಮಿತ್ರನಿಗೆ ನಾಲ್ಕು ಮುಷ್ಟಿ ಅವಲಕ್ಕಿಯನ್ನು ಕೊಡಲಿಲ್ಲ. ಸಂಕೋಚದಿಂದ ತಲೆತಗ್ಗಿಸಿ ಕುಳಿತುಬಿಟ್ಟನು. ಪರೀಕ್ಷಿತ! ಶ್ರೀಕೃಷ್ಣನು ಸಮಸ್ತ ಪ್ರಾಣಿಗಳ ಮನಸ್ಸಿನಲ್ಲಿ ಏನಿರುವುದೆಂಬುದನ್ನು ಸಾಕ್ಷಾತ್ತಾಗಿ ಕಾಣುವ ಸಾಮರ್ಥ್ಯವನ್ನು ಹೊಂದಿದವನು. ಸುದಾಮನ ಆಗಮನದ ಕಾರಣವನ್ನು ತಿಳಿದುಕೊಂಡನು, ಅವಹ ಹೃದಯದ ಮಾತೂ ಅರ್ಥವಾಗಿತ್ತು. ‘ಇವನಾದರೋ ನನ್ನ ಪ್ರಿಯಮಿತ್ರನಾಗಿರುವನು. ಅಲ್ಲದೆ ಇವನು ಎಂದಿಗೂ ಶ್ರೀಕಾಮನಾಗಿ ನನ್ನನು ಭಜಿಸಲಿಲ್ಲ. ಈ ಸಮಯದಲ್ಲಿ ತನ್ನ ಪತಿವ್ರತೆಯಾದ ಪತ್ನಿಯ ಮನಃಸಂತೋಷಕ್ಕಾಗಿ, ಆಕೆಯ ಆಗ್ರಹದಿಂದ ಇಲ್ಲಿಗೆ ಬಂದಿರುವನು. ಈಗ ನಾನು ಇವನಿಗೆ ದೇವತೆಗಳಿಗೂ ಅತ್ಯಂತ ದುರ್ಲಭವಾದ ಸಂಪತ್ತನ್ನು ಅನುಗ್ರಹಿಸುವೆನು’ ಎಂದು ಯೋಚಿಸಿದನು. ॥5-7॥
ಮೂಲಮ್
(ಶ್ಲೋಕ-8)
ಇತ್ಥಂ ವಿಚಿಂತ್ಯ ವಸನಾಚ್ಚೀರಬದ್ಧಾನ್ ದ್ವಿಜನ್ಮನಃ ।
ಸ್ವಯಂ ಜಹಾರ ಕಿಮಿದಮಿತಿ ಪೃಥುಕತಂಡುಲಾನ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೀಗೆ ವಿಚಾರಮಾಡಿ ಅವನ ಕಂಕುಳಲ್ಲಿದ್ದ ಅವಲಕ್ಕಿಯ ಬಟ್ಟೆಗಂಟನ್ನು ‘ಇದೇನಿದು?’ ಎಂದು ಹೇಳುತ್ತಾ ಕಸಿದುಕೊಂಡನು. ॥8॥
ಮೂಲಮ್
(ಶ್ಲೋಕ-9)
ನನ್ವೇತದುಪನೀತಂ ಮೇ ಪರಮಪ್ರೀಣನಂ ಸಖೇ ।
ತರ್ಪಯಂತ್ಯಂಗ ಮಾಂ ವಿಶ್ವಮೇತೇ ಪೃಥುಕತಂಡುಲಾಃ ॥
ಅನುವಾದ
ಪ್ರಿಯಮಿತ್ರನೇ! ನಾನಾದರೋ ನನಗೆ ಅತ್ಯಂತ ಪ್ರಿಯವಾದ ತಿಂಡಿಯನ್ನೇ ತಂದಿರುವೆಯಲ್ಲ! ಸುದಾಮಾ! ಈ ಅವಲಕ್ಕಿಯು ಕೇವಲ ನನ್ನನ್ನೇ ಅಲ್ಲ ಇಡೀ ಪ್ರಪಂಚವನ್ನೇ ತೃಪ್ತಿಪಡಿಸಲು ಸಾಕಾಗುವಷ್ಟಿದೆ ಎಂದು ಅತ್ಯಾದರದಿಂದ ನುಡಿದನು. ॥9॥
ಮೂಲಮ್
(ಶ್ಲೋಕ-10)
ಇತಿ ಮುಷ್ಟಿಂ ಸಕೃಜ್ಜಗ್ಧ್ವಾ ದ್ವಿತೀಯಾಂ ಜಗ್ಧುಮಾದದೇ ।
ತಾವಚ್ಛ್ರೀರ್ಜಗೃಹೇ ಹಸ್ತಂ ತತ್ಪರಾ ಪರಮೇಷ್ಠಿ ನಃ ॥
ಅನುವಾದ
ಹೀಗೆ ಹೇಳಿ ಶ್ರೀಕೃಷ್ಣನು ಅದರಲ್ಲಿ ಒಂದು ಮುಷ್ಟಿ ಅವಲಕ್ಕಿಯನ್ನು ತೆಗೆದು ತಿಂದುಬಿಟ್ಟನು ಮತ್ತು ಇನ್ನೊಂದು ಮುಷ್ಟಿಯನ್ನು ಎತ್ತಿಕೊಂಡಾಗ ಸಾಕ್ಷಾತ್ ಲಕ್ಷ್ಮೀದೇವಿಯಾದ ರುಕ್ಮಿಣೀಯು ಭಗವಾನ್ ಶ್ರೀಕೃಷ್ಣನ ಕೈಯನ್ನು ಹಿಡಿದುಕೊಂಡಳು. ಏಕೆಂದರೆ, ಆಕೆಯು ಏಕಮಾತ್ರ ಭಗವಂತನಲ್ಲೇ ಪರಾಯಣಳಾಗಿದ್ದಳು. ಅವನನ್ನು ಬಿಟ್ಟು ಬೇರೆಲ್ಲಿಗೂ ಹೋಗಲಾರಳು. ॥10॥
ಮೂಲಮ್
(ಶ್ಲೋಕ-11)
ಏತಾವತಾಲಂ ವಿಶ್ವಾತ್ಮನ್ಸರ್ವಸಂಪತ್ಸಮೃದ್ಧಯೇ ।
ಅಸ್ಮಿನ್ಲೋಕೇಥವಾಮುಷ್ಮಿನ್ಪುಂಸಸ್ತ್ವತ್ತೋಷಕಾರಣಮ್ ॥
ಅನುವಾದ
ರುಕ್ಮಿಣಿಯು ಹೇಳಿದಳು — ವಿಶ್ವಾತ್ಮನೇ! ಸಾಕು, ಸಾಕು! ಮನುಷ್ಯನಿಗೆ ಈ ಲೋಕದಲ್ಲಿ ಹಾಗೂ ಪರಲೋಕದಲ್ಲಿ ಸಮಸ್ತ ಸಂಪತ್ಸ ಮೃದ್ಧಿಯನ್ನು ಹೊಂದಲು ನೀನು ತಿಂದಿರುವ ಈ ಒಂದು ಮುಷ್ಟಿ ಅವಲಕ್ಕಿಯೇ ಹೆಚ್ಚಾಗಿದೆ. ಏಕೆಂದರೆ, ಇಷ್ಟರಿಂದಲೇ ನೀನು ಸಂತುಷ್ಟನಾಗಿರುವೆ. ॥11॥
ಮೂಲಮ್
(ಶ್ಲೋಕ-12)
ಬ್ರಾಹ್ಮಣಸ್ತಾಂ ತು ರಜನೀಮುಷಿತ್ವಾಚ್ಯುತಮಂದಿರೇ ।
ಭುಕ್ತ್ವಾ ಪೀತ್ವಾ ಸುಖಂ ಮೇನೇ ಆತ್ಮಾನಂ ಸ್ವರ್ಗತಂ ಯಥಾ ॥
ಅನುವಾದ
ಪರೀಕ್ಷಿತನೇ! ಸುದಾಮನು ಅಂದಿನ ಇರುಳನ್ನು ಭಗವಾನ್ ಶ್ರೀಕೃಷ್ಣನ ಅರಮನೆಯಲ್ಲೇ ಕಳೆದನು. ಆದರ ಪೂರ್ವಕವಾಗಿ ಶ್ರೀಕೃಷ್ಣನಿತ್ತ ಮೃಷ್ಟಾನ್ನವನ್ನು ತಿಂದು, ಪಾನೀಯಗಳನ್ನು ಕುಡಿದು, ನಾನು ವೈಕುಂಠವನ್ನೇ ಸೇರಿರುವೆನೋ ಎಂಬಂತೆ ಅನುಭವಿಸಿದನು. ॥12॥
ಮೂಲಮ್
(ಶ್ಲೋಕ-13)
ಶ್ವೋಭೂತೇ ವಿಶ್ವಭಾವೇನ ಸ್ವಸುಖೇನಾಭಿವಂದಿತಃ ।
ಜಗಾಮ ಸ್ವಾಲಯಂ ತಾತ ಪಥ್ಯನುವ್ರಜ್ಯ ನಂದಿತಃ ॥
(ಶ್ಲೋಕ-14)
ಸ ಚಾಲಬ್ಧ್ವಾ ಧನಂ ಕೃಷ್ಣಾನ್ನ ತು ಯಾಚಿತವಾನ್ ಸ್ವಯಮ್ ।
ಸ್ವಗೃಹಾನ್ ವ್ರೀಡಿತೋಗಚ್ಛನ್ಮಹದ್ದರ್ಶನನಿರ್ವೃತಃ ॥
ಅನುವಾದ
ಪರೀಕ್ಷಿತನೇ! ಶ್ರೀಕೃಷ್ಣನಿಂದ ಸುದಾಮನಿಗೆ ಪ್ರತ್ಯಕ್ಷವಾಗಿ ಏನೂ ಸಿಗದಿದ್ದರೂ ಅವನು ಮಿತ್ರನಲ್ಲಿ ಏನನ್ನೂ ಬೇಡಲಿಲ್ಲ. ಅವನು ತನ್ನ ಚಿತ್ತದ ಕಾರ್ಯದ ಬಗ್ಗೆ ಸ್ವಲ್ಪ ಲಜ್ಜಿತನಾಗಿ ಭಗವಂತನ ದರ್ಶನದಿಂದ ಉಂಟಾದ ಆನಂದಾಂಬುಧಿಯಲ್ಲಿ ಮುಳುಗಿ, ತೇಲುತ್ತಾ ತನ್ನ ಮನೆಯ ಕಡೆಗೆ ಹೊರಟನು. ॥13-14॥
ಮೂಲಮ್
(ಶ್ಲೋಕ-15)
ಅಹೋ ಬ್ರಹ್ಮಣ್ಯದೇವಸ್ಯ ದೃಷ್ಟಾ ಬ್ರಹ್ಮಣ್ಯತಾ ಮಯಾ ।
ಯದ್ದರಿದ್ರತಮೋ ಲಕ್ಷ್ಮೀಮಾಶ್ಲಿಷ್ಟೋ ಬಿಭ್ರತೋರಸಿ ॥
ಅನುವಾದ
ಅವನು ಮನಸ್ಸಿನಲ್ಲೇ ಯೋಚಿಸತೊಡಗಿದನು - ಆಹಾ! ಎಂತಹ ಆನಂದದ ಮತ್ತು ಆಶ್ಚರ್ಯದ ಮಾತಾಗಿದೆ! ಬ್ರಾಹ್ಮಣರನ್ನು ತನ್ನ ಇಷ್ಟದೇವರೆಂದು ತಿಳಿಯುವ ಭಗವಾನ್ ಶ್ರೀಕೃಷ್ಣನ ಬ್ರಾಹ್ಮಣ ಭಕ್ತಿಯನ್ನು ಇಂದು ನಾನು ಕಣ್ಣಾರೆ ಕಂಡೆನು. ಧನ್ಯ, ಧನ್ಯನಿವನು! ವಕ್ಷಃಸ್ಥಳದಲ್ಲಿ ಸಾಕ್ಷಾತ್ ಲಕ್ಷ್ಮೀದೇವಿಯನ್ನು ಧರಿಸಿದ್ದ ಶ್ರೀಕೃಷ್ಣನು ನನ್ನಂತಹ ಕಡುಬಡವನನ್ನು ಆಲಿಂಗಿಸಿಕೊಂಡುಬಿಟ್ಟನಲ್ಲ! ॥15॥
ಮೂಲಮ್
(ಶ್ಲೋಕ-16)
ಕ್ವಾಹಂ ದರಿದ್ರಃ ಪಾಪೀಯಾನ್ ಕ್ವ ಕೃಷ್ಣಃ ಶ್ರೀನಿಕೇತನಃ ।
ಬ್ರಹ್ಮಬಂಧುರಿತಿ ಸ್ಮಾಹಂ ಬಾಹುಭ್ಯಾಂ ಪರಿರಂಭಿತಃ ॥
ಅನುವಾದ
ಅತ್ಯಂತ ಪಾಪಿಯೂ, ದರಿದ್ರನೂ ಆದ ನಾನೆಲ್ಲಿ! ಲಕ್ಷ್ಮೀದೇವಿಯ ಏಕಮಾತ್ರ ಆಶ್ರಯನಾದ ಭಗವಾನ್ ಶ್ರೀಕೃಷ್ಣನೆಲ್ಲಿ! ಆದರೂ ಅವನು ‘ಇವನು ಬ್ರಾಹ್ಮಣ’ ಎಂದು ಭಾವಿಸಿ ನನ್ನನ್ನು ತನ್ನ ನಳಿತೋಳುಗಳಿಂದ ಅಪ್ಪಿಕೊಂಡನು. ॥16॥
ಮೂಲಮ್
(ಶ್ಲೋಕ-17)
ನಿವಾಸಿತಃ ಪ್ರಿಯಾಜುಷ್ಟೇ ಪರ್ಯಂಕೇ ಭ್ರಾತರೋ ಯಥಾ ।
ಮಹಿಷ್ಯಾ ವೀಜಿತಃ ಶ್ರಾಂತೋ ವಾಲವ್ಯಜನಹಸ್ತಯಾ ॥
ಅನುವಾದ
ಇಷ್ಟೇ ಅಲ್ಲ. ತನ್ನ ಪ್ರಾಣಪ್ರಿಯಳಾದ ರುಕ್ಮಿಣೀದೇವಿಯು ಮಲಗುವ ಶ್ರೇಷ್ಠವಾದ ಮಂಚದಲ್ಲಿ ತನ್ನ ನಿಜ ಸಹೋದರನಂತೆ ನನ್ನನ್ನು ಮಲಗಿಸಿದನು. ಪರ್ಯಂಕದಲ್ಲಿ ಎಷ್ಟೊಂದು ಹೇಳಲೀ! ಬಳಲಿದ್ದ ನನಗೆ ಸಾಕ್ಷಾತ್ ಅವನ ಪಟ್ಟದರಸಿಯಾದ ರುಕ್ಮಿಣಿಯೇ ತನ್ನ ಕೈಯಾರೆ ಚಾಮರ ಬೀಸಿ ನನ್ನ ಸೇವೆಮಾಡಿದಳು. ॥17॥
ಮೂಲಮ್
(ಶ್ಲೋಕ-18)
ಶುಶ್ರೂಷಯಾ ಪರಮಯಾ ಪಾದಸಂವಾಹನಾದಿಭಿಃ ।
ಪೂಜಿತೋ ದೇವದೇವೇನ ವಿಪ್ರದೇವೇನ ದೇವವತ್ ॥
ಅನುವಾದ
ಆಹಾ! ದೇವತೆಗಳಿಗೆ ಆರಾಧ್ಯನಾಗಿದ್ದರೂ ಬ್ರಾಹ್ಮಣರನ್ನು ತನ್ನ ಇಷ್ಟ ದೇವರೆಂದು ಭಾವಿಸಿರುವ ಪ್ರಭುವು ನನ್ನ ಕಾಲನ್ನೊತ್ತಿ, ತನ್ನ ಕೈಯಿಂದ ಊಟೋಪಚಾರ ಮಾಡಿಸಿ ಅತ್ಯಂತ ಆದರದಿಂದ ದೇವತೆಯಂತೆ ಪೂಜಿಸಿ ಸೇವೆ ಮಾಡಿದನು. ॥18॥
ಮೂಲಮ್
(ಶ್ಲೋಕ-19)
ಸ್ವರ್ಗಾಪವರ್ಗಯೋಃ ಪುಂಸಾಂ ರಸಾಯಾಂ ಭುವಿ ಸಂಪದಾಮ್ ।
ಸರ್ವಾಸಾಮಪಿ ಸಿದ್ಧೀನಾಂ ಮೂಲಂ ತಚ್ಚರಣಾರ್ಚ ನಮ್ ॥
ಅನುವಾದ
ಸ್ವರ್ಗ, ಮೋಕ್ಷ, ಪೃಥಿವಿ ಮತ್ತು ರಸಾತಲದ ಸಮಸ್ತ ಸಂಪತ್ತು ಹಾಗೂ ಸಮಸ್ತ ಯೋಗಸಿದ್ಧಿಗಳ ಪ್ರಾಪ್ತಿಯ ಮೂಲಸಾಧನೆ ಶ್ರೀಕೃಷ್ಣನ ಚರಣ ಕಮಲಗಳ ಪೂಜೆಯೇ ಆಗಿದೆ. ॥19॥
ಮೂಲಮ್
(ಶ್ಲೋಕ-20)
ಅಧನೋಯಂ ಧನಂ ಪ್ರಾಪ್ಯ ಮಾದ್ಯನ್ನುಚ್ಚೈರ್ನ ಮಾಂ ಸ್ಮರೇತ್ ।
ಇತಿ ಕಾರುಣಿಕೋ ನೂನಂ ಧನಂ ಮೇಭೂರಿ ನಾದದಾತ್ ॥
ಅನುವಾದ
ಹೀಗಿದ್ದರೂ ಪರಮ ದಯಾಳುವಾದ ಶ್ರೀಕೃಷ್ಣನು - ಎಲ್ಲಾದರೂ ಈ ದರಿದ್ರನು ಧನವನ್ನು ಪಡೆದು ಧನಮದದಿಂದ ತನ್ನನ್ನು ಮರೆಯದಿರಲಿ ಎಂದು ಭಾವಿಸಿಯೇ ನನಗೆ ಸ್ವಲ್ಪವೂ ಧನವನ್ನು ಕೊಡಲಿಲ್ಲ. ॥20॥
ಮೂಲಮ್
(ಶ್ಲೋಕ-21)
ಇತಿ ತಚ್ಚಿಂತಯನ್ನಂತಃ ಪ್ರಾಪ್ತೋ ನಿಜಗೃಹಾಂತಿಕಮ್ ।
ಸೂರ್ಯಾನಲೇಂದು ಸಂಕಾಶೈರ್ವಿಮಾನೈಃ ಸರ್ವತೋ ವೃತಮ್ ॥
(ಶ್ಲೋಕ-22)
ವಿಚಿತ್ರೋಪವನೋದ್ಯಾನೈಃ ಕೂಜದ್ವಜಕುಲಾಕುಲೈಃ ।
ಪ್ರೋತ್ಫುಲ್ಲಕುಮುದಾಂಭೋಜಕಹ್ಲಾರೋತ್ಪಲವಾರಿಭಿಃ ॥
(ಶ್ಲೋಕ-23)
ಜುಷ್ಟಂ ಸ್ವಲಂಕೃತೈಃ ಪುಂಭಿಃ ಸೀಭಿಶ್ಚ ಹರಿಣಾಕ್ಷಿಭಿಃ ।
ಕಿಮಿದಂ ಕಸ್ಯ ವಾ ಸ್ಥಾನಂ ಕಥಂ ತದಿದಮಿತ್ಯಭೂತ್ ॥
ಅನುವಾದ
ಸುದಾಮನು ಹೀಗೆ ಆನಂದ ಮಗ್ನನಾಗಿ ಯೋಚಿಸುತ್ತಾ ಶ್ರೀಕೃಷ್ಣನ ಆತಿಥ್ಯವನ್ನು ಬಾರಿ-ಬಾರಿಗೂ ಸ್ಮರಿಸುತ್ತಾ ತನ್ನ ಮನೆಯ ಬಳಿಗೆ ಬಂದನು. ಅಲ್ಲಿ ತಾನು ಹಿಂದೆ ವಾಸವಾಗಿದ್ದ ಜೋಪಡಿಯು ಕಾಣಿಸಲೇ ಇಲ್ಲ. ಸೂರ್ಯಾಗ್ನಿ- ಚಂದ್ರರ ತೇಜಸ್ಸಿಗೆ ಸಮಾನವಾದ ತೇಜಸ್ಸಿನ ರತ್ನಗಳಿಂದ ನಿರ್ಮಿತವಾದ ಗೋಪುರಗಳಿಂದ ಆ ಸ್ಥಳವು ಸಮಾವೃತವಾಗಿತ್ತು. ಆ ಅರಮನೆಯ ಸುತ್ತಲೂ ಉಪವನಗಳೂ, ಉದ್ಯಾನಗಳೂ ಕಂಗೊಳಿಸುತ್ತಿದ್ದು, ಅಲ್ಲಿದ್ದ ಮರಗಳ ಮೇಲೆ ವಿಧ-ವಿಧವಾದ ಬಣ್ಣದ ಪಕ್ಷಿಗಳು ಗುಂಪು-ಗುಂಪಾಗಿ ಚಿಲಿ-ಪಿಲಿಗುಟ್ಟುತ್ತಿದ್ದವು. ಆ ಉದ್ಯಾನಗಳಲ್ಲಿನ ಸರೋವರಗಳಲ್ಲಿ ಅರಳಿದ ಕನ್ನೈದಿಲೆ, ತಾವರೆ, ಕೆಂದಾವರೆಗಳೂ ಇದ್ದು ಅವು ಅತ್ಯಂತ ಶೋಭಾಯಮಾನವಾಗಿದ್ದವು. ಹರಿಣಾಕ್ಷಿಯರೂ, ಪುರುಷಸಿಂಹರೂ ಸುಂದರವಾದ ವಸ್ತ್ರಾಭರಣಗಳಿಂದ ಸಮಲಂಕೃತರಾಗಿ ಅಲ್ಲಲ್ಲಿ ಓಡುತ್ತಿದ್ದರು. ಆ ಸ್ಥಾನವನ್ನು ನೋಡಿ ಸುದಾಮನು ಇದೇನಿದು? ಇದು ಯಾರ ನಿವಾಸ? ನಾನಿದ್ದ ಮನೆಯೇ ಇದಾಗಿದ್ದರೆ ಇದು ಹೇಗಾಯಿತು? ಹೀಗೆ ಪರಿ-ಪರಿಯಾಗಿ ಯೋಚಿಸಿದನು. ॥21-23॥
ಮೂಲಮ್
(ಶ್ಲೋಕ-24)
ಏವಂ ವಿಾಮಾಂಸಮಾನಂ ತಂ ನರಾ ನಾರ್ಯೋಮರಪ್ರಭಾಃ ।
ಪ್ರತ್ಯಗೃಹ್ಣನ್ಮಹಾಭಾಗಂ ಗೀತವಾದ್ಯೇನ ಭೂಯಸಾ ॥
ಅನುವಾದ
ಹೀಗೆ ಚಿಂತಿಸುತ್ತಿರುವಾಗಲೇ ಅಲ್ಲಿದ್ದ ದೇವತೆಗಳಂತೆಯೇ ಪ್ರಕಾಶಮಾನರಾಗಿದ್ದ ನರ-ನಾರಿಯರು ಮಂಗಳ ಗೀತ-ವಾದ್ಯಗಳೊಂದಿಗೆ ಬಂದು ಮಹಾಭಾಗ್ಯ ಶಾಲಿಯಾದ ಸುದಾಮನನ್ನು ಸ್ವಾಗತಿಸಿದರು. ॥24॥
ಮೂಲಮ್
(ಶ್ಲೋಕ-25)
ಪತಿಮಾಗತಮಾಕರ್ಣ್ಯ ಪತ್ನ್ಯುದ್ಧರ್ಷಾತಿಸಂಭ್ರಮಾ ।
ನಿಶ್ಚಕ್ರಾಮ ಗೃಹಾತ್ತೂರ್ಣಂ ರೂಪಿಣೀ ಶ್ರೀರಿವಾಲಯಾತ್ ॥
ಅನುವಾದ
ಪತಿದೇವನ ಆಗಮನದಿಂದ ಸುದಾಮನ ಪತ್ನಿಗೆ ಪರಮಾನಂದವಾಯಿತು. ಆಕೆಯು ಪತಿಯನ್ನು ಸ್ವಾಗತಿಸಲು ಸಂಭ್ರಮದಿಂದಲೂ, ಲಗು-ಬಗೆಯಿಂದಲೂ ಮೇಲೆದ್ದು ಹೊರಗೆ ಬಂದಳು. ಅವಳಾಗ ಕಮಲವನದಿಂದ ಆಗಮಿಸಿದ್ದ ಸಾಕ್ಷಾತ್ ಲಕ್ಷ್ಮೀದೇವಿಯಂತೆ ಕಾಣುತ್ತಿದ್ದಳು. ॥25॥
ಮೂಲಮ್
(ಶ್ಲೋಕ-26)
ಪತಿವ್ರತಾ ಪತಿಂ ದೃಷ್ಟ್ವಾ ಪ್ರೇಮೋತ್ಕಂಠಾಶ್ರುಲೋಚನಾ ।
ಮೀಲಿತಾಕ್ಷ್ಯನಮದ್ಬುದ್ಧ್ಯಾ ಮನಸಾ ಪರಿಷಸ್ವಜೇ ॥
ಅನುವಾದ
ಪತಿದೇವನನ್ನು ನೋಡುತ್ತಲೇ ಪ್ರೇಮದ ಔತ್ಸುಕ್ಯದಿಂದ ಆಕೆಯ ಕಣ್ಣುಗಳಲ್ಲಿ ಆನಂದಬಾಷ್ಪಗಳು ಚಿಮ್ಮಿದುವು. ಕಣ್ಣುಗಳನ್ನು ಮುಚ್ಚಿಕೊಂಡು ಆಕೆಯು ಪತಿದೇವನಿಗೆ ನಮಸ್ಕರಿಸಿ, ಮನಸ್ಸಿನಿಂದಲೇ ಅವನನ್ನು ಆಲಿಂಗಿಸಿಕೊಂಡಳು. ॥26॥
ಮೂಲಮ್
(ಶ್ಲೋಕ-27)
ಪತ್ನೀಂ ವೀಕ್ಷ್ಯ ವಿಸ್ಫುರಂತೀಂ ದೇವೀಂ ವೈಮಾನಿಕೀಮಿವ ।
ದಾಸೀನಾಂ ನಿಷ್ಕಕಂಠೀನಾಂ ಮಧ್ಯೇ ಭಾಂತೀಂ ಸ ವಿಸ್ಮಿತಃ ॥
ಅನುವಾದ
ಪ್ರಿಯ ಪರೀಕ್ಷಿತನೇ! ಬ್ರಾಹ್ಮಣನ ಪತ್ನಿಯು ಚಿನ್ನದ ಹಾರಗಳನ್ನು ಧರಿಸಿದ್ದ, ಸೇವಕಿಯರ ಮಧ್ಯದಲ್ಲಿ ವಿಮಾನಸ್ಥಳಾದ ದೇವಾಂಗನೆಯಂತೆಯೆ ಅತ್ಯಂತ ಶೋಭಾಯಮಾನಳಾಗಿ ಕಾಣುತ್ತಿದ್ದಳು. ಆಕೆಯನ್ನು ಈ ರೂಪದಲ್ಲಿ ನೋಡಿದ ಸುದಾಮನು ವಿಸ್ಮಿತನಾದನು. ॥27॥
ಮೂಲಮ್
(ಶ್ಲೋಕ-28)
ಪ್ರೀತಃ ಸ್ವಯಂ ತಯಾ ಯುಕ್ತಃ ಪ್ರವಿಷ್ಟೋ ನಿಜಮಂದಿರಮ್ ।
ಮಣಿಸ್ತಂಭಶತೋಪೇತಂ ಮಹೇಂದ್ರಭವನಂ ಯಥಾ ॥
ಅನುವಾದ
ಅವನು ತನ್ನ ಪತ್ನಿಯೊಂದಿಗೆ ದೇವೇಂದ್ರನ ನಿವಾಸಸ್ಥಾನದಂತಿರುವ ಸಾವಿರಾರು ಮಣಿಮಯ ಕಂಬಗಳಿಂದ ಕೂಡಿದ ಆ ಸರ್ವಾಂಗ ಸುಂದರವಾದ ಅರಮನೆಯನ್ನು ಪರಮ ಪ್ರೀತನಾಗಿ ಪ್ರವೇಶಿಸಿದನು. ॥28॥
ಮೂಲಮ್
(ಶ್ಲೋಕ-29)
ಪಯಃೇನನಿಭಾಃ ಶಯ್ಯಾ ದಾಂತಾ ರುಕ್ಮಪರಿಚ್ಛದಾಃ ।
ಪರ್ಯಂಕಾ ಹೇಮದಂಡಾನಿ ಚಾಮರವ್ಯಜನಾನಿ ಚ ॥
ಅನುವಾದ
ಅಲ್ಲಿ ಹಸ್ತಿದಂತಗಳಿಂದ ನಿರ್ಮಿತವಾಗಿದ್ದ ಸ್ವರ್ಣಖಚಿತವಾದ ಮಂಚಗಳಲ್ಲಿ ಹಾಲಿನ ನೊರೆಯಂತಿದ್ದ ಬಿಳಿಯ ಹಂಸತೂಲಿಕಾ ತಲ್ಪಗಳು ಹಾಸಿದ್ದವು. ಚಿನ್ನದ ಹಿಡಿಗಳಿದ್ದ ಛತ್ರ-ಚಾಮರಗಳು ಅಲ್ಲಿ ಇಡಲ್ಪಟ್ಟಿದ್ದವು. ॥29॥
ಮೂಲಮ್
(ಶ್ಲೋಕ-30)
ಆಸನಾನಿ ಚ ಹೈಮಾನಿ ಮೃದೂಪಸ್ತರಣಾನಿ ಚ ।
ಮುಕ್ತಾದಾಮವಿಲಂಬೀನಿ ವಿತಾನಾನಿ ದ್ಯುಮಂತಿ ಚ ॥
ಅನುವಾದ
ಸ್ವರ್ಣ ಸಿಂಹಾಸನದಲ್ಲಿ ಮೃದುವಾದ ಮೆತ್ತೆಗಳು, ಮೇಲ್ಭಾಗದಲ್ಲಿ ತೂಗುಹಾಕಿದ್ದ ಮುತ್ತಿನ ಗೊಂಚಲುಗಳಿಂದ ಅಲಂಕೃತವಾದ ಮೇಲ್ಕಟ್ಟುಗಳೂ ಇದ್ದವು. ॥30॥
ಮೂಲಮ್
(ಶ್ಲೋಕ-31)
ಸ್ವಚ್ಛಸ್ಫಟಿಕಕುಡ್ಯೇಷು ಮಹಾಮಾರಕತೇಷು ಚ ।
ರತ್ನದೀಪಾ ಭ್ರಾಜಮಾನಾ ಲಲನಾರತ್ನ ಸಂಯುತಾಃ ॥
ಅನುವಾದ
ಆ ಅರಮನೆಯಲ್ಲಿ ಸ್ವಚ್ಛವಾದ ಸ್ಫಟಿಕದ ಗೋಡೆಗಳು ಮರಕತ ಮಣಿಗಳಿಂದ ಚಿತ್ರಿತವಾಗಿದ್ದವು. ರತ್ನನಿರ್ಮಿತವಾದ ಸ್ತ್ರೀವಿಗ್ರಹಗಳ ಕೈಗಳಲ್ಲಿ ರತ್ನಮಣಿ ದೀಪಗಳು ಬೆಳಗುತ್ತಿದ್ದವು. ॥31॥
ಮೂಲಮ್
(ಶ್ಲೋಕ-32)
ವಿಲೋಕ್ಯ ಬ್ರಾಹ್ಮಣಸ್ತತ್ರ ಸಮೃದ್ಧೀಃ ಸರ್ವಸಂಪದಾಮ್ ।
ತರ್ಕಯಾಮಾಸ ನಿರ್ವ್ಯಗ್ರಃ ಸ್ವಸಮೃದ್ಧಿಮಹೈತುಕೀಮ್ ॥
ಅನುವಾದ
ಹೀಗೆ ಸಮಸ್ತ ಸಂಪತ್ತುಗಳ ಸಮೃದ್ಧಿಯನ್ನು ನೋಡಿ, ಅದರ ಪ್ರತ್ಯಕ್ಷವಾದ ಯಾವ ಕಾರಣವನ್ನು ಕಾಣದೆ ಬ್ರಾಹ್ಮಣ ಸುದಾಮನು - ನನ್ನ ಬಳಿ ಇಷ್ಟೊಂದು ಸಂಪತ್ತು ಹೇಗೆ ಬಂತು? ಎಂದು ಗಹನವಾಗಿ ಯೋಚಿಸತೊಡಗಿದನು. ॥32॥
ಮೂಲಮ್
(ಶ್ಲೋಕ-33)
ನೂನಂ ಬತೈತನ್ಮಮ ದುರ್ಭಗಸ್ಯ
ಶಶ್ವದ್ದರಿದ್ರಸ್ಯ ಸಮೃದ್ಧಿಹೇತುಃ ।
ಮಹಾವಿಭೂತೇರವಲೋಕತೋನ್ಯೋ
ನೈವೋಪಪದ್ಯೇತ ಯದೂತ್ತಮಸ್ಯ ॥
ಅನುವಾದ
ನಾನು ಹುಟ್ಟಿನಿಂದಲೇ ಭಾಗ್ಯ ಹೀನನಾದ ದರಿದ್ರನು. ಹೀಗಿದ್ದರೂ ನನ್ನ ಸಂಪತ್ತಿನ ಸಮೃದ್ಧತೆಗೆ ಕಾರಣವೇನಿರಬಹುದು ಎಂದು ಮನಸ್ಸಿನಲ್ಲೆ ಅಂದುಕೊಂಡನು. ಪರಮೈಶ್ವರ್ಯಶಾಲಿಯಾದ ಯದುವಂಶ ಶಿರೋಮಣಿ ಭಗವಾನ್ ಶ್ರೀಕೃಷ್ಣನ ಕೃಪಾಕಟಾಕ್ಷವಲ್ಲದೆ ಬೇರೆ ಯಾವ ಕಾರಣವೂ ಖಂಡಿತವಾಗಿಯೂ ಇರಲಾರದು. ॥33॥
ಮೂಲಮ್
(ಶ್ಲೋಕ-34)
ನನ್ವಬ್ರುವಾಣೋ ದಿಶತೇ ಸಮಕ್ಷಂ
ಯಾಚಿಷ್ಣವೇ ಭೂರ್ಯಪಿ ಭೂರಿಭೋಜಃ ।
ಪರ್ಜನ್ಯವತ್ತತ್ಸ್ವಯಮೀಕ್ಷಮಾಣೋ
ದಾಶಾರ್ಹಕಾಣಾಮೃಷಭಃ ಸಖಾ ಮೇ ॥
ಅನುವಾದ
ಇದೆಲ್ಲವೂ ಅವನ ಕರುಣಾ ಪ್ರಸಾದವೇ ಆಗಿದೆ. ಸಾಕ್ಷಾತ್ ಭಗವಾನ್ ಶ್ರೀಕೃಷ್ಣನು ಪೂರ್ಣಕಾಮನೂ, ಲಕ್ಷ್ಮೀಪತಿಯೂ ಆಗಿರುವುದರಿಂದಲೇ ಅನಂತ ಭೋಗ ಸಾಮಗ್ರಿಗಳಿಂದ ಕೂಡಿರುವನು. ಅದಕ್ಕಾಗಿ ಅವನು ಬೇಡುವ ಭಕ್ತನಿಗೆ ಅವನ ಮನಸ್ಸಿನ ಭಾವವನ್ನರಿತು ಬಹಳಷ್ಟು ಕೊಡುತ್ತಾನೆ; ಆದರೆ ಕೊಟ್ಟಿದ್ದು ಸ್ವಲ್ಪವೇ ಎಂದು ಭಾವಿಸಿ ಮುಂದುಗಡೆ ಏನನ್ನೂ ಆಡುವುದಿಲ್ಲ. ನನ್ನ ಮಿತ್ರನಾದ ಯದುವಂಶ ಭೂಷಣ ಶ್ಯಾಮಸುಂದರನು ನಿಜವಾಗಿ - ಸಮುದ್ರವನ್ನೇ ತುಂಬುವ ಸಾಮರ್ಥ್ಯವಿದ್ದರೂ ಮೇಘಗಳು ರೈತನಿಗೆ ಕಾಣಿಸದೆ ಅವನು ಮಲಗಿದಾಗ ರಾತ್ರಿಯಲ್ಲ ಮಳೆಸುರಿಸಿದರೂ ನಾನು ಸ್ವಲ್ಪವೇ ಕೊಟ್ಟಿರುವೆನು ಎಂದುತಿಳಿಯುವಂತೆ, ಆ ಮೇಘಗಳಿಂದಲೂ ಮಿಗಿಲಾದ ಉದಾರನಾಗಿದ್ದಾನೆ. ॥34॥
ಮೂಲಮ್
(ಶ್ಲೋಕ-35)
ಕಿಂಚಿತ್ಕರೋತ್ಯುರ್ವಪಿ ಯತ್ಸ್ವದತ್ತಂ
ಸುಹೃತ್ಕೃತಂ ಲ್ಗ್ವಪಿ ಭೂರಿಕಾರೀ ।
ಮಯೋಪನೀತಾಂ ಪೃಥುಕೈಕಮುಷ್ಟಿಂ
ಪ್ರತ್ಯಗ್ರಹೀತ್ ಪ್ರೀತಿಯುತೋ ಮಹಾತ್ಮಾ ॥
ಅನುವಾದ
ನನ್ನ ಪ್ರಿಯಸಖನಾದ ಶ್ರೀಕೃಷ್ಣನು ಅನಂತವಾಗಿ ಕರುಣಿಸಿದರೂ ಅಲ್ಪವೆಂದೇ ಭಾವಿಸುವನು. ಅವನ ಪ್ರೇಮಿಭಕ್ತರು ಅವನಿಗಾಗಿ ಏನಾದರೂ ಕಿಂಚಿತ್ ಕೊಟ್ಟರೂ ಅವನು ಅಪಾರವೆಂದು ಭಾವಿಸಿಕೊಳ್ಳುತ್ತಾನೆ. ನಾನು ಅವನಿಗೆ ಕೇವಲ ಒಂದು ಹಿಡಿ ಅವಲಕ್ಕಿಯನ್ನು ಕೊಟ್ಟಿದ್ದು; ಆದರೆ ಉದಾರಶಿರೋಮಣಿಯಾದ ಶ್ರೀಕೃಷ್ಣನು ಅದನ್ನು ಅತಿದೊಡ್ಡ ಕಾಣಿಕೆ ಎಂದು ಭಾವಿಸಿ ಅತ್ಯಂತ ಆದರ ಪ್ರೀತಿಯಿಂದ ತಿಂದುಬಿಟ್ಟನಲ್ಲ! ॥35॥
ಮೂಲಮ್
(ಶ್ಲೋಕ-36)
ತಸ್ಯೈವ ಮೇ ಸೌಹೃದಸಖ್ಯಮೈತ್ರೀದಾಸ್ಯಂ ಪುನರ್ಜನ್ಮನಿ ಜನ್ಮನಿ ಸ್ಯಾತ್ ।
ಮಹಾನುಭಾವೇನ ಗುಣಾಲಯೇನ ವಿಷಜ್ಜತಸ್ತತ್ಪುರುಷಪ್ರಸಂಗಃ ॥
ಅನುವಾದ
ಜನ್ಮ-ಜನ್ಮಗಳಲ್ಲಿಯೂ ನನಗೆ ನನ್ನ ಪ್ರಿಯಸಖನಾದ, ಮಹಾನುಭಾವನಾದ, ಸಮಸ್ತ ಗುಣಗಳಿಗೂ ಏಕಮಾತ್ರ ನಿವಾಸಸ್ಥಾನನಾದ ಶ್ರೀಕೃಷ್ಣನೊಬ್ಬನ ಸೌಹೃದ, ಸಖ್ಯ, ಮೈತ್ರಿ, ದಾಸ್ಯಗಳು ಲಭಿಸಲಿ. ಭಗವಾನ್ ಶ್ರೀಕೃಷ್ಣನ ಪಾದಾರವಿಂದಗಳಲ್ಲಿಯೇ ನನ್ನ ಅನುರಾಗವು ಬೆಳೆಯುತ್ತಾ ಇರಲಿ. ಅವನ ಪ್ರೇಮಿಭಕ್ತರ ಸತ್ಸಂಗ ದೊರೆಯುತ್ತಾ ಇರಲಿ. ॥36॥
ಮೂಲಮ್
(ಶ್ಲೋಕ-37)
ಭಕ್ತಾಯ ಚಿತ್ರಾ ಭಗವಾನ್ ಹಿ ಸಂಪದೋ
ರಾಜ್ಯಂ ವಿಭೂತೀರ್ನ ಸಮರ್ಥಯತ್ಯಜಃ ।
ಅದೀರ್ಘಬೋಧಾಯ ವಿಚಕ್ಷಣಃ ಸ್ವಯಂ
ಪಶ್ಯನ್ನಿಪಾತಂ ಧನಿನಾಂ ಮದೋದ್ಭವಮ್ ॥
ಅನುವಾದ
ಅಜನ್ಮನಾದ ಭಗವಾನ್ ಶ್ರೀಕೃಷ್ಣನು ಸಂಪತ್ತು ಮುಂತಾದವುಗಳ ದೋಷವನ್ನು ತಿಳಿದಿರುವನು. ದೊಡ್ಡ ದೊಡ್ಡ ಶ್ರೀಮಂತರಿಗೆ ಧನಮದದಿಂದ ಉಂಟಾಗುವ ಅಧಃಪತನವನ್ನು ನೋಡುತ್ತಾನೆ. ಅದಕ್ಕಾಗಿ ಅವನು ದೂರದೃಷ್ಟಿಯಿಲ್ಲದ ತನ್ನ ಭಕ್ತನು ಬಯಸಿದರೂ ನಾನಾರೀತಿಯ ರಾಜ್ಯ, ಸಂಪತ್ತು, ಐಶ್ವರ್ಯ ಮುಂತಾದವುಗಳನ್ನು ಅವನಿಗೆ ಕೊಡುವುದಿಲ್ಲ. ಇದು ಅವನ ಪರಮ ಕರುಣೆಯೇ ಆಗಿದೆ. ॥37॥
ಮೂಲಮ್
(ಶ್ಲೋಕ-38)
ಇತ್ಥಂ ವ್ಯವಸಿತೋ ಬುದ್ಧ್ಯಾ ಭಕ್ತೋತೀವ ಜನಾರ್ದನೇ ।
ವಿಷಯಾನ್ಜಾಯಯಾ ತ್ಯಕ್ಷ್ಯನ್ಬುಭುಜೇ ನಾತಿಲಂಪಟಃ ॥
ಅನುವಾದ
ಪರೀಕ್ಷಿತನೇ! ಸುದಾಮನು ಹೀಗೆ ತನ್ನ ಬುದ್ಧಿಯಿಂದ ನಿಶ್ಚಯಿಸಿ, ತ್ಯಾಗಪೂರ್ವಕ ಅನಾಸಕ್ತಿ ಭಾವದಿಂದ ತನ್ನ ಪತ್ನಿಯೊಂದಿಗೆ ಭಗವತ್ಪ್ರಸಾದ ರೂಪವಾಗಿ ದೊರೆತ ವಿಷಯಗಳನ್ನು ಅನುಭವಿಸತೊಡಗಿದನು. ಹೀಗೆ ದಿನದಿಂದ ದಿನಕ್ಕೆ ಅವನ ಪ್ರೇಮ-ಭಕ್ತಿಗಳು ಹೆಚ್ಚುತ್ತಲೇ ಹೋದವು. ॥38॥
ಮೂಲಮ್
(ಶ್ಲೋಕ-39)
ತಸ್ಯ ವೈ ದೇವದೇವಸ್ಯ ಹರೇರ್ಯಜ್ಞಪತೇಃ ಪ್ರಭೋಃ ।
ಬ್ರಾಹ್ಮಣಾಃ ಪ್ರಭವೋ ದೈವಂ ನ ತೇಭ್ಯೋ ವಿದ್ಯತೇ ಪರಮ್ ॥
ಅನುವಾದ
ಪ್ರಿಯ ಪರೀಕ್ಷಿತನೇ! ದೇವದೇವನೂ, ಭಕ್ತಭಯ ಹಾರಿಯೂ, ಯಜ್ಞಪತಿಯೂ ಆದ ಪ್ರಭುವು ಬ್ರಾಹ್ಮಣರನ್ನು ಸಾಕ್ಷಾತ್ ತನ್ನ ಇಷ್ಟದೇವರೆಂದು ಭಾವಿಸುತ್ತಾನೆ. ಅದಕ್ಕಾಗಿ ಬ್ರಾಹ್ಮಣರಿಗಿಂತ ಮಿಗಿಲಾದ ಯಾವುದೇ ಪ್ರಾಣಿಯು ಜಗತ್ತಿನಲ್ಲಿ ಇಲ್ಲ. ॥39॥
ಮೂಲಮ್
(ಶ್ಲೋಕ-40)
ಏವಂ ಸ ವಿಪ್ರೋ ಭಗವತ್ಸುಹೃತ್ತದಾ
ದೃಷ್ಟ್ವಾ ಸ್ವಭೃತ್ಯೈರಜಿತಂ ಪರಾಜಿತಮ್ ।
ತದ್ಧ್ಯಾನವೇಗೋದ್ಗ್ರಥಿತಾತ್ಮಬಂಧನ-
ಸ್ತದ್ಧಾಮ ಲೇಭೇಚಿರತಃ ಸತಾಂ ಗತಿಮ್ ॥
ಅನುವಾದ
ಹೀಗೆ ಭಗವಂತನ ಪ್ರಿಯ ಮಿತ್ರನಾದ ಸುದಾಮನು-ಯಾರಿಂದಲೂ ಜಯಿಸಲ್ಪಡದ ಭಗವಂತನು ತನ್ನ ಸೇವಕರಾದ ಭಕ್ತರಿಂದ ಜಯಿಸಲ್ಪಟ್ಟಿರುವುದನ್ನು ಕಂಡು ಅವನ ಧ್ಯಾನದಲ್ಲಿಯೇ ಸದಾ ನಿರತನಾಗಿರುತ್ತಿದ್ದನು. ಧ್ಯಾನದ ಆವೇಗದಿಂದ ಅವಿದ್ಯೆಯ ಗಂಟು ಕಳಚಿಹೋಗಿ, ಅತ್ಯಲ್ಪ ಸಮಯದಲ್ಲೇ ಸಂತರಿಗೆ ಏಕಮಾತ್ರ ಆಶ್ರಯನಾದ ಭಗವಂತನ ಧಾಮವನ್ನು ಸೇರಿದನು. ॥40॥
ಮೂಲಮ್
(ಶ್ಲೋಕ-41)
ಏತದ್ಬ್ರಹ್ಮಣ್ಯದೇವಸ್ಯ ಶ್ರುತ್ವಾ ಬ್ರಹ್ಮಣ್ಯತಾಂ ನರಃ ।
ಲಬ್ಧಭಾವೋ ಭಗವತಿ ಕರ್ಮಬಂಧಾದ್ವಿಮುಚ್ಯತೇ ॥
ಅನುವಾದ
ಪರೀಕ್ಷಿತನೇ! ಬ್ರಾಹ್ಮಣರನ್ನು ತನ್ನ ಇಷ್ಟದೇವರೆಂದು ಭಾವಿಸುವ ಭಗವಾನ್ ಶ್ರೀಕೃಷ್ಣನ ಈ ಬ್ರಾಹ್ಮಣಭಕ್ತಿಯನ್ನು ಕೇಳುವವನಿಗೆ ಭಗವಂತನ ಚರಣಗಳಲ್ಲಿ ಪ್ರೇಮ ಭಾವವು ಉಂಟಾಗಿ, ಅವನು ಕರ್ಮಬಂಧನದಿಂದ ಬಿಡುಗಡೆ ಹೊಂದುವನು. ॥41॥
ಅನುವಾದ (ಸಮಾಪ್ತಿಃ)
ಎಂಭತ್ತೊಂದನೆಯ ಅಧ್ಯಾಯವು ಮುಗಿಯಿತು. ॥81॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ ಪೃಥುಕೋಪಾಖ್ಯಾನಂ ನಾಮ ಏಕಾಶೀತಿತಮೋಽಧ್ಯಾಯಃ ॥81॥