೮೦

[ಏಂಭತ್ತನೇಯ ಅಧ್ಯಾಯ]

ಭಾಗಸೂಚನಾ

ಶ್ರೀಕೃಷ್ಣನಿಂದ ಸುದಾಮನ ಸ್ವಾಗತ

ಮೂಲಮ್

(ಶ್ಲೋಕ-1)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಭಗವನ್ ಯಾನಿ ಚಾನ್ಯಾನಿ
ಮುಕುಂದಸ್ಯ ಮಹಾತ್ಮನಃ ।
ವೀರ್ಯಾಣ್ಯನಂತವೀರ್ಯಸ್ಯ
ಶ್ರೋತುಮಿಚ್ಛಾಮಹೇ ಪ್ರಭೋ ॥

ಅನುವಾದ

ಪರೀಕ್ಷಿದ್ರಾಜನು ಕೇಳಿದನು — ಮಹಾತ್ಮರೇ! ಪ್ರೇಮ ಮತ್ತು ಮುಕ್ತಿಯನ್ನು ಕರುಣಿಸುವ ಪರಬ್ರಹ್ಮ ಪರಮಾತ್ಮನಾದ ಭಗವಾನ್ ಶ್ರೀಕೃಷ್ಣನ ಶಕ್ತಿಯು ಅನಂತವಾಗಿದೆ. ಅದಕ್ಕಾಗಿ ಮಾಧುರ್ಯ ಹಾಗೂ ಐಶ್ವರ್ಯಗಳಿಂದ ಕೂಡಿದ ಲೀಲೆಗಳೂ ಅನಂತವಾಗಿವೆ. ತಾವು ಇದುವರೆಗೂ ವರ್ಣಿಸದಿರುವ ಅವನ ಇತರ ಲೀಲೆಗಳನ್ನೂ ಕೇಳಲು ನಾವು ಬಯಸುತ್ತಿದ್ದೇವೆ. ॥1॥

ಮೂಲಮ್

(ಶ್ಲೋಕ-2)
ಕೋ ನು ಶ್ರುತ್ವಾಸಕೃದ್
ಬ್ರಹ್ಮನ್ನುತ್ತಮಶ್ಲೋಕಸತ್ಕಥಾಃ ।
ವಿರಮೇತ ವಿಶೇಷಜ್ಞೋ
ವಿಷಣ್ಣಃ ಕಾಮಮಾರ್ಗಣೈಃ ॥

ಅನುವಾದ

ಬ್ರಾಹ್ಮಣೋತ್ತಮರೇ! ಈ ಜೀವನು ವಿಷಯ ಸುಖವನ್ನು ಅರಸುತ್ತಾ-ಅರಸುತ್ತಾ ಅತ್ಯಂತ ದುಃಖಿತನಾಗಿದ್ದಾನೆ. ಅವು ಬಾಣಗಳಂತೆ ಇವನ ಮನಸ್ಸಿಗೆ ನಾಟುತ್ತಾ ಇರುತ್ತವೆ. ಇಂತಹ ಸ್ಥಿತಿಯಲ್ಲಿ ಪವಿತ್ರ ಕೀರ್ತಿ ಭಗವಾನ್ ಶ್ರೀಕೃಷ್ಣನ ಮಂಗಳಮಯ ಲೀಲೆಗಳನ್ನು ಪದೇ-ಪದೇ ಶ್ರವಣಿಸಿದ ರಸಜ್ಞನಾದವನು ಅದರಿಂದ ಹೇಗೆ ತಾನೇ ವಿಮುಖನಾದಾನು? ॥2॥

ಮೂಲಮ್

(ಶ್ಲೋಕ-3)
ಸಾ ವಾಗ್ಯಯಾ ತಸ್ಯ ಗುಣಾನ್ ಗೃಣೀತೇ
ಕರೌ ಚ ತತ್ಕರ್ಮಕರೌ ಮನಶ್ಚ ।
ಸ್ಮರೇದ್ವಸಂತಂ ಸ್ಥಿರಜಂಗಮೇಷು
ಶೃಣೋತಿ ತತ್ಪುಣ್ಯಕಥಾಃ ಸ ಕರ್ಣಃ ॥

ಅನುವಾದ

ಭಗವಂತನ ಗುಣಗಳನ್ನು ಹಾಡುತ್ತಿರುವ ವಾಣಿಯೆ ನಿಜವಾದ ವಾಣಿಯು. ಭಗವಂತನ ಸೇವೆಗಾಗಿ ದುಡಿಯುವ ಕೈಗಳೇ ನಿಜವಾದ ಕೈಗಳು. ಚರಾಚರ ಪ್ರಾಣಿಗಳಲ್ಲಿ ವಾಸಿಸುವ ಭಗವಂತನನ್ನು ಸ್ಮರಿಸುವ ಮನಸ್ಸೇ ನಿಜವಾದ ಮನಸ್ಸು. ಭಗವಂತನ ಪುಣ್ಯಮಯ ಕಥೆಗಳನ್ನು ಕೇಳುವ ಕಿವಿಗಳೇ ನಿಜವಾದ ಕಿವಿಗಳೆಂದು ಕರೆಯಲ್ಪಡುವವು. ॥3॥

ಮೂಲಮ್

(ಶ್ಲೋಕ-4)
ಶಿರಸ್ತು ತಸ್ಯೋಭಯಲಿಂಗಮಾನಮೇ-
ತ್ತದೇವ ಯತ್ಪಶ್ಯತಿ ತದ್ಧಿ ಚಕ್ಷುಃ ।
ಅಂಗಾನಿ ವಿಷ್ಣೋರಥ ತಜ್ಜನಾನಾಂ
ಪಾದೋದಕಂ ಯಾನಿ ಭಜಂತಿ ನಿತ್ಯಮ್ ॥

ಅನುವಾದ

ಚರಾಚರ ಜಗತ್ತನ್ನು ಭಗವಂತನ ಅಚಲ ಪ್ರತಿಮೆ ಎಂದು ಅರಿತು ನಮಸ್ಕರಿಸುವ ತಲೆಯೇ ಸಾರ್ಥಕವಾದ ತಲೆಯು. ಸರ್ವತ್ರ ಭಗವದ್ವಿಹಗ್ರವನ್ನು ದರ್ಶಿಸುವ ಕಣ್ಣುಗಳೇ ವಾಸ್ತವವಾದ ಕಣ್ಣುಗಳು. ಭಗವಂತನ ಮತ್ತು ಅವನ ಭಕ್ತರ ಚರಣೋದಕವನ್ನು ಸೇವಿಸುವ ಅಂಗಗಳೇ ನಿಜವಾದ ಅಂಗಗಳು. ನಿಜಹೇಳ ಬೇಕೆಂದರೆ ಅವನವರಾಗುವುದೇ ಸಾರ್ಥಕ ಜೀವನವು. ಆದುದರಿಂದ ಅವನ ಕಥಾಮೃತವನ್ನು ವರ್ಣಿಸಿರಿ. ॥4॥

ಮೂಲಮ್

(ಶ್ಲೋಕ-5)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ವಿಷ್ಣುರಾತೇನ ಸಂಪೃಷ್ಟೋ ಭಗವಾನ್ ಬಾದರಾಯಣಿಃ ।
ವಾಸುದೇವೇ ಭಗವತಿ ನಿಮಗ್ನಹೃದಯೋಬ್ರವೀತ್ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಶೌನಕಾದಿ ಋಷಿಗಳಿರಾ! ಪರೀಕ್ಷಿದ್ರಾಜನು ಹೀಗೆ ಪ್ರಶ್ನಿಸಿದಾಗ ಪೂಜ್ಯರಾದ ಭಕ್ತ ಶಿರೋಮಣಿಗಳಾದ ಶ್ರೀಶುಕಮುನಿಗಳ ಮನಸ್ಸು ಶ್ರೀಕೃಷ್ಣನಲ್ಲೇ ತಲ್ಲೀನವಾಗಿ ಹೋಯಿತು. ಸ್ವಲ್ಪ ಹೊತ್ತು ತಡೆದು ಅವರು ಪರೀಕ್ಷಿತನಿಗೆ ಹೇಳತೊಡಗಿದರು. ॥5॥

ಮೂಲಮ್

(ಶ್ಲೋಕ-6)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಕೃಷ್ಣಸ್ಯಾಸೀತ್ಸಖಾ ಕಶ್ಚಿದ್ ಬ್ರಾಹ್ಮಣೋ ಬ್ರಹ್ಮವಿತ್ತಮಃ ।
ವಿರಕ್ತ ಇಂದ್ರಿಯಾರ್ಥೇಷು ಪ್ರಶಾಂತಾತ್ಮಾ ಜಿತೇಂದ್ರಿಯಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳಿದರು — ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನಿಗೆ ಪರಮಮಿತ್ರನಾದ ಬ್ರಾಹ್ಮಣನೊಬ್ಬನಿದ್ದನು. ಅವನು ಮಹಾಬ್ರಹ್ಮಜ್ಞಾನಿಯೂ, ವಿಷಯಗಳಿಂದ ವಿರಕ್ತನೂ, ಶಾಂತಚಿತ್ತನೂ, ಜೀತೇಂದ್ರಿಯನೂ ಆಗಿದ್ದನು. ॥6॥

ಮೂಲಮ್

(ಶ್ಲೋಕ-7)
ಯದೃಚ್ಛಯೋಪಪನ್ನೇನ ವರ್ತಮಾನೋ ಗೃಹಾಶ್ರಮೀ ।
ತಸ್ಯ ಭಾರ್ಯಾ ಕುಚೈಲಸ್ಯ ಕುತ್ಕ್ಷಾಮಾ ಚ ತಥಾವಿಧಾ ॥

ಅನುವಾದ

ಅವನು ಗೃಹಸ್ಥನಾಗಿದ್ದರೂ ಯಾವುದೇ ಪ್ರಕಾರದ ಸಂಗ್ರಹ-ಪರಿಗ್ರಹವಿಲ್ಲದೆ ಪ್ರಾರಬ್ಧಕ್ಕನುಸಾರ ದೊರೆತುದರಲ್ಲಿ ಸಂತುಷ್ಟನಾಗಿರುತ್ತಿದ್ದನು. ಅವನ ವಸ್ತ್ರಗಳು ಹರಿದು - ಹಳೆಯದಾಗಿದ್ದು ಕುಚೇಲನೆಂದೇ ಜನರು ಅವನನ್ನು ಕರೆಯುತ್ತಿದ್ದರು. ಅವನ ಪತ್ನಿಯೂ ಅವನಂತೇ ಇದ್ದು, ಪತಿಯಂತೆ-ಹಸಿವೆಯಿಂದ ಕೃಶಳಾಗಿದ್ದಳು.॥7॥

ಮೂಲಮ್

(ಶ್ಲೋಕ-8)
ಪತಿವ್ರತಾ ಪತಿಂ ಪ್ರಾಹ ಮ್ಲಾಯತಾ ವದನೇನ ಸಾ ।
ದರಿದ್ರಾ ಸೀದಮಾನಾ ಸಾ ವೇಪಮಾನಾಭಿಗಮ್ಯ ಚ ॥

ಅನುವಾದ

ದರಿದ್ರತೆಯ ಪ್ರತಿಮೂರ್ತಿಯಂತಿದ್ದ ದುಃಖಿತಳಾದ ಪತಿವ್ರತೆಯಾದ ಆಕೆಯು ಹಸಿವಿನಿಂದ ಕಂಗೆಟ್ಟು ಒಂದು ದಿನ ತನ್ನ ಪತಿಯ ಬಳಿಗೆ ಹೋಗಿ ಬಾಡಿದ ಮುಖದಿಂದ ಸಂಕೋಚದಿಂದಲೇ ಹೀಗೆಂದಳು - ॥8॥

ಮೂಲಮ್

(ಶ್ಲೋಕ-9)
ನನು ಬ್ರಹ್ಮನ್ ಭಗವತಃ ಸಖಾ ಸಾಕ್ಷಾಚ್ಛ್ರಿಯಃ ಪತಿಃ ।
ಬ್ರಹ್ಮಣ್ಯಶ್ಚ ಶರಣ್ಯಶ್ಚ ಭಗವಾನ್ ಸಾತ್ವತರ್ಷಭಃ ॥

ಅನುವಾದ

ಬ್ರಾಹ್ಮಣೋತ್ತಮರೇ! ಸಾಕ್ಷಾತ್ ಲಕ್ಷ್ಮೀಪತಿಯಾದ ಭಗವಾನ್ ಶ್ರೀಕೃಷ್ಣನು ನಿಮಗೆ ಸ್ನೇಹಿತನಾಗಿರುವನು. ಅವನು ವಾಂಛಾಕಲ್ಪತರುವೂ, ಶರಣಾಗತ ವತ್ಸಲನೂ, ಬ್ರಾಹ್ಮಣರ ಪರಮಭಕ್ತನೂ ಆಗಿರುವನು. ॥9॥

ಮೂಲಮ್

(ಶ್ಲೋಕ-10)
ತಮುಪೈಹಿ ಮಹಾಭಾಗ ಸಾಧೂನಾಂ ಚ ಪರಾಯಣಮ್ ।
ದಾಸ್ಯತಿ ದ್ರವಿಣಂ ಭೂರಿ ಸೀದತೇ ತೇ ಕುಟುಂಬಿನೇ ॥

ಅನುವಾದ

ಪರಮಭಾಗ್ಯಶಾಲಿಗಳಾದ ಆರ್ಯಪುತ್ರರೇ! ಆ ಭಗವಂತನು ಸಂತರ ಏಕಮಾತ್ರ ಆಶ್ರಯನಾಗಿರುವನು. ತಾವು ದಯವಿಟ್ಟು ಅವನ ಬಳಿಗೆ ಹೋಗಿರಿ. ನೀವು ಕುಟುಂಬಿಗಳಾಗಿದ್ದೀರಿ, ಅನ್ನವಿಲ್ಲದೆ ದುಃಖಿತರಾಗಿರುವಿರಿ ಎಂದು ತಿಳಿದಾಗ ಅವನು ನಿಮಗೆ ಬಹಳಷ್ಟು ಧನವನ್ನು ಕೊಡುವನು. ॥10॥

ಮೂಲಮ್

(ಶ್ಲೋಕ-11)
ಆಸ್ತೇಧುನಾ ದ್ವಾರವತ್ಯಾಂ ಭೋಜವೃಷ್ಣ್ಯಂಧಕೇಶ್ವರಃ ।
ಸ್ಮರತಃ ಪಾದಕಮಲಮಾತ್ಮಾನಮಪಿ ಯಚ್ಛತಿ ।
ಕಿಂನ್ವರ್ಥಕಾಮಾನ್ಭಜತೋ ನಾತ್ಯಭೀಷ್ಟಾನ್ಜಗದ್ಗುರುಃ ॥

ಅನುವಾದ

ಭೋಜ, ವೃಷ್ಣಿ, ಅಂಧಕ ಇವರೇ ಮೊದಲಾದ ಯಾದವರಿಗೆ ಸ್ವಾಮಿಯಾಗಿ ಶ್ರೀಕೃಷ್ಣನು ಈಗ ದ್ವಾರಕೆಯಲ್ಲೇ ಇದ್ದಾನೆ. ತನ್ನ ಚರಣಕಮಲಗಳನ್ನು ಸ್ಮರಿಸುವ ಭಕ್ತರಿಗೆ ಅವನು ತನ್ನನ್ನೇ ಕೊಟ್ಟುಕೊಂಡು ಬಿಡುತ್ತಾನೆ. ಹೀಗಿರುವಾಗ ಜಗದ್ಗುರುವಾದ ಶ್ರೀಕೃಷ್ಣನು ತನ್ನ ಭಕ್ತರಿಗೆ ಲೆಕ್ಕಕ್ಕಿಲ್ಲದ (ಭಕ್ತಿಯ ಹೊರತಾಗಿ ಬೇರೇನೂ ಬೇಕಿಲ್ಲ.) ಪ್ರಾಪಂಚಿಕ ಸುಖಗಳನ್ನು, ಐಶ್ವರ್ಯವನ್ನು ದಯಪಾಲಿಸುವುದರಲ್ಲಿ ಆಶ್ಚರ್ಯವೇನಿದೆ? ॥11॥

ಮೂಲಮ್

(ಶ್ಲೋಕ-12)
ಸ ಏವಂ ಭಾರ್ಯಯಾ ವಿಪ್ರೋ ಬಹುಶಃ ಪ್ರಾರ್ಥಿತೋ ಮೃದು ।
ಅಯಂ ಹಿ ಪರಮೋ ಲಾಭ ಉತ್ತಮಶ್ಲೋಕದರ್ಶನಮ್ ॥

ಅನುವಾದ

ಹೀಗೆ ಆ ಪತಿವ್ರತೆಯು ತನ್ನ ಪತಿಯಲ್ಲಿ ಹಲವುಬಾರಿ ನಮ್ರತೆಯಿಂದ ಪ್ರಾರ್ಥಿಸಿದಾಗ, ಸುದಾಮನೂ - ಧನದ ಮಾತಿರಲಿ, ಆದರೆ ಭಗವಾನ್ ಶ್ರೀಕೃಷ್ಣನ ದರ್ಶನವಾಗುವುದೇ! ಇಡೀ ಜೀವನದ ಬಹಳ ದೊಡ್ಡ ಲಾಭವಾಗಿದೆ ಎಂದು ಯೋಚಿಸಿದನು. ॥12॥

ಮೂಲಮ್

(ಶ್ಲೋಕ-13)
ಇತಿ ಸಂಚಿಂತ್ಯ ಮನಸಾ ಗಮನಾಯ ಮತಿಂ ದಧೇ ।
ಅಪ್ಯಸ್ತ್ಯುಪಾಯನಂ ಕಿಂಚಿದ್ಗೃಹೇ ಕಲ್ಯಾಣಿ ದೀಯತಾಮ್ ॥

ಅನುವಾದ

ಹೀಗೆ ವಿಚಾರಮಾಡಿ ಅವನು ದ್ವಾರಕೆಗೆ ಹೋಗಲು ನಿಶ್ಚಯಿಸಿದನು ಮತ್ತು ಪತ್ನಿಯಲ್ಲಿ ಕೇಳಿದನು - ಕಲ್ಯಾಣೀ! ಶ್ರೀಕೃಷ್ಣನಿಗೆ ಕೊಡಲು ಯೋಗ್ಯವಾದ ಏನಾದರೂ ವಸ್ತು ಮನೆಯಲ್ಲಿದೆಯೇ? ಇದ್ದರೆ ಕೊಡು. ಸ್ನೇಹಿತನನ್ನು ಬರಿಗೈಯಿಂದ ಎಂತು ಕಾಣುವುದು? ॥13॥

ಮೂಲಮ್

(ಶ್ಲೋಕ-14)
ಯಾಚಿತ್ವಾ ಚತುರೋ ಮುಷ್ಟೀನ್ ವಿಪ್ರಾನ್ ಪೃಥುಕತಂಡುಲಾನ್ ।
ಚೈಲಖಂಡೇನ ತಾನ್ಬದ್ಧ್ವಾ ಭರ್ತ್ರೇ ಪ್ರಾದಾದುಪಾಯನಮ್ ॥

ಅನುವಾದ

ಆಗ ಆ ಬ್ರಾಹ್ಮಣಿಯು ಅಕ್ಕ-ಪಕ್ಕದ ಬ್ರಾಹ್ಮಣರ ಮನೆಗಳಿಂದ ನಾಲ್ಕು ಮುಷ್ಟಿ ಅವಲಕ್ಕಿಯನ್ನು ಬೇಡಿ ತಂದು, ಒಂದು ಹರಕು ಬಟ್ಟೆಯಲ್ಲಿ ಕಟ್ಟಿ, ಭಗವಂತನಿಗೆ ಕೊಡಲಿಕ್ಕಾಗಿ ಗಂಡನ ಕೈಯಲ್ಲಿಟ್ಟಳು. ॥14॥

ಮೂಲಮ್

(ಶ್ಲೋಕ-15)
ಸ ತಾನಾದಾಯ ವಿಪ್ರಾಗ್ರ್ಯಃ ಪ್ರಯಯೌ ದ್ವಾರಕಾಂ ಕಿಲ ।
ಕೃಷ್ಣಸಂದರ್ಶನಂ ಮಹ್ಯಂ ಕಥಂ ಸ್ಯಾದಿತಿ ಚಿಂತಯನ್ ॥

ಅನುವಾದ

ಅನಂತರ ಆ ಅವಲಕ್ಕಿಯನ್ನು ಕಂಕುಳಲ್ಲಿಟ್ಟುಕೊಂಡು ಸುದಾಮನು ದ್ವಾರಕೆಗೆ ಹೊರಟನು. ನನಗೆ ಭಗವಾನ್ ಶ್ರೀಕೃಷ್ಣನ ದರ್ಶನ ಎಂತಾಗುವುದು ಎಂದು ದಾರಿಯಲ್ಲಿ ಯೋಚಿಸುತ್ತಾ ಹೋಗುತ್ತಿದ್ದನು. ॥15॥

ಮೂಲಮ್

(ಶ್ಲೋಕ-16)
ತ್ರೀಣಿ ಗುಲ್ಮಾನ್ಯತೀಯಾಯ ತಿಸ್ರಃ ಕಕ್ಷಾಶ್ಚ ಸ ದ್ವಿಜಃ ।
ವಿಪ್ರೋಗಮ್ಯಾಂಧಕವೃಷ್ಣೀನಾಂ ಗೃಹೇಷ್ವಚ್ಯುತಧರ್ಮಿಣಾಮ್ ॥

ಅನುವಾದ

ಪರೀಕ್ಷಿತನೇ! ದ್ವಾರಕೆಯನ್ನು ತಲುಪಿದೊಡನೆ ಆ ಬ್ರಾಹ್ಮಣೋತ್ತಮನು ಇತರ ಬ್ರಾಹ್ಮಣರೊಂದಿಗೆ ಮೂರು ಸೇನಾ ತುಕಡಿಗಳನ್ನು, ಮೂರು ಪ್ರಾಕಾರವನ್ನು ದಾಟಿ, ಪ್ರವೇಶಿಸಲು ಅತ್ಯಂತ ಕಠಿಣವಾದ ಭಗವದ್ಧರ್ಮವನ್ನು ಪಾಲಿಸುವ ಅಂಧಕ, ವೃಷ್ಣಿವಂಶೀಯ ಯಾದವರ ಅರಮನೆಗಳನ್ನು ತಲುಪಿದನು. ॥16॥

ಮೂಲಮ್

(ಶ್ಲೋಕ-17)
ಗೃಹಂ ದ್ವ್ಯಷ್ಟಸಹಸ್ರಾಣಾಂ ಮಹಿಷೀಣಾಂ ಹರೇರ್ದ್ವಿಜಃ ।
ವಿವೇಶೈಕತಮಂ ಶ್ರೀಮದ್ಬ್ರಹ್ಮಾನಂದಂ ಗತೋ ಯಥಾ ॥

ಅನುವಾದ

ಅವುಗಳ ನಡುವೆ ಭಗವಾನ್ ಶ್ರೀಕೃಷ್ಣನ ಹದಿನಾರುಸಾವಿರ ರಾಣಿಯರ ಅರಮನೆಗಳಿದ್ದವು. ಅವುಗಳಲ್ಲಿ ಬಹಳವಾಗಿ ಅಲಂಕರಿಸಲ್ಪಟ್ಟು, ಅತ್ಯಂತ ಶೋಭಾಯುಕ್ತವಾಗಿದ್ದ ಅರಮನೆಯೊಂದರೊಳಗೆ ಬ್ರಾಹ್ಮಣನು ಪ್ರವೇಶಿಸಿದನು. ಅದನ್ನು ಪ್ರವೇಶಿಸುತ್ತಲೇ ಅವನಿಗೆ ಬ್ರಹ್ಮಾನಂದದ ಸಮುದ್ರದಲ್ಲಿ ತೇಲಾಡಿದಂತೆ ಅನಿಸಿತು. ॥17॥

ಮೂಲಮ್

(ಶ್ಲೋಕ-18)
ತಂ ವಿಲೋಕ್ಯಾಚ್ಯುತೋ ದೂರಾತ್ಪ್ರಿಯಾಪರ್ಯಂಕಮಾಸ್ಥಿತಃ ।
ಸಹಸೋತ್ಥಾಯ ಚಾಭ್ಯೇತ್ಯ ದೋರ್ಭ್ಯಾಂ ಪರ್ಯಗ್ರಹೀನ್ಮುದಾ ॥

ಅನುವಾದ

ಆ ಸಮಯದಲ್ಲಿ ಭಗವಾನ್ ಶ್ರೀಕೃಷ್ಣನು ತನ್ನ ಪ್ರಾಣಪ್ರಿಯಳಾದ ರುಕ್ಮಿಣಿಯ ಮಂಚದಲ್ಲಿ ವಿರಾಜಮಾನನಾಗಿದ್ದನು. ತನ್ನೆಡೆಗೆ ಬರುತ್ತಿದ್ದ ವಿಪ್ರೋತ್ತಮನನ್ನು ದೂರದಲ್ಲೇ ಕಂಡು ಮಂಚದಿಂದ ಇಳಿದು ಅವನ ಬಳಿಗೆ ತೆರಳಿ ಅತ್ಯಂತ ಆನಂದದಿಂದ ಅವನನ್ನು ಬಿಗಿದಪ್ಪಿಕೊಂಡನು. ॥18॥

ಮೂಲಮ್

(ಶ್ಲೋಕ-19)
ಸಖ್ಯುಃ ಪ್ರಿಯಸ್ಯ ವಿಪ್ರರ್ಷೇರಂಗಸಂಗಾತಿನಿರ್ವೃತಃ ।
ಪ್ರೀತೋ ವ್ಯಮುಂಚದಬ್ಬಿಂದೂನ್ನೇತ್ರಾಭ್ಯಾಂ ಪುಷ್ಕರೇಕ್ಷಣಃ ॥

ಅನುವಾದ

ಪರೀಕ್ಷಿತನೇ! ಪರಮಾನಂದ ಸ್ವರೂಪನಾದ ಶ್ರೀಕೃಷ್ಣನು ತನ್ನ ಪ್ರಿಯ ಸಖನಾದ ವಿಪ್ರೋತ್ತಮನ ಅಂಗಸಂಗದಿಂದ ಅತ್ಯಂತ ಆನಂದಿತನಾದನು. ಅವನ ಕಮಲದಂತಿರುವ ಕೋಮಲ ನೇತ್ರಗಳಿಂದ ಪ್ರೇಮಾಶ್ರುಗಳು ಸುರಿಯತೊಡಗಿದುವು. ॥19॥

ಮೂಲಮ್

(ಶ್ಲೋಕ-20)
ಅಥೋಪವೇಶ್ಯ ಪರ್ಯಂಕೇ ಸ್ವಯಂ ಸಖ್ಯುಃ ಸಮರ್ಹಣಮ್ ।
ಉಪಹೃತ್ಯಾವನಿಜ್ಯಾಸ್ಯ ಪಾದೌ ಪಾದಾವನೇಜನೀಃ ॥
(ಶ್ಲೋಕ-21)
ಅಗ್ರಹೀಚ್ಛಿರಸಾ ರಾಜನ್ ಭಗವಾನ್ ಲೋಕಪಾವನಃ ।
ವ್ಯಲಿಂಪದ್ದಿವ್ಯಗಂಧೇನ ಚಂದನಾಗುರುಕುಂಕುಮೈಃ ॥

ಅನುವಾದ

ಬಳಿಕ ಭಗವಾನ್ ಶ್ರೀಕೃಷ್ಣನು ಅವನನ್ನು ಕರೆತಂದು ತನ್ನ ಪರ್ಯಂಕದಲ್ಲಿ ಕುಳ್ಳಿರಿಸಿದನು. ಸ್ವತಃ ತಾನೇ ಪೂಜಾಸಾಮಗ್ರಿಗಳನ್ನು ತಂದು ಅವನನ್ನು ಪೂಜಿಸಿದನು. ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಎಲ್ಲರನ್ನು ಪವಿತ್ರಗೊಳಿಸುವವನಾಗಿದ್ದರೂ ಅವನು ತನ್ನ ಕೈಗಳಿಂದಲೇ ಬ್ರಾಹ್ಮಣೋತ್ತಮನ ಕಾಲುಗಳನ್ನು ತೊಳೆದು, ಆ ಚರಣೋದಕವನ್ನು ತನ್ನ ತಲೆಯಲ್ಲಿ ಧರಿಸಿಕೊಂಡನು ಹಾಗೂ ಅವನ ಶರೀರಕ್ಕೆ ಚಂದನ, ಅಗರು, ಕೇಸರಿ ಮುಂತಾದ ದಿವ್ಯಸುಗಂಧ ದ್ರವ್ಯಗಳನ್ನು ಲೇಪಿಸಿದನು. ॥20-21॥

ಮೂಲಮ್

(ಶ್ಲೋಕ-22)
ಧೂಪೈಃ ಸುರಭಿಭಿರ್ಮಿತ್ರಂ ಪ್ರದೀಪಾವಲಿಭಿರ್ಮುದಾ ।
ಅರ್ಚಿತ್ವಾವೇದ್ಯ ತಾಂಬೂಲಂ ಗಾಂ ಚ ಸ್ವಾಗತಮಬ್ರವೀತ್ ॥

ಅನುವಾದ

ಮತ್ತೆ ಅವನು ಬಹಳ ಆನಂದದಿಂದ ಸುಗಂಧಿತ ಧೂಪದಿಂದ, ದೀಪಾವಳಿಗಳಿಂದ ಆರತಿಯನ್ನೆತ್ತಿ ಪೂಜೆಮಾಡಿ, ತಾಂಬೂಲ ಮತ್ತು ಗೋವನ್ನು ಕೊಟ್ಟು ಸುಮಧುರ ವಚನಗಳಿಂದ ಮಿತ್ರನೇ! ನೀನು ಬಂದುದು ಬಹಳ ಒಳ್ಳೆಯದಾಯಿತು ಎಂದು ಹೇಳುತ್ತಾ ಸ್ವಾಗತಿಸಿದನು. ॥22॥

ಮೂಲಮ್

(ಶ್ಲೋಕ-23)
ಕುಚೈಲಂ ಮಲಿನಂ ಕ್ಷಾಮಂ ದ್ವಿಜಂ ಧಮನಿಸಂತತಮ್ ।
ದೇವೀ ಪರ್ಯಚರತ್ಸಾಕ್ಷಾಚ್ಚಾಮರವ್ಯಜನೇನ ವೈ ॥

ಅನುವಾದ

ಕುಚೇಲನು ಹರಿದ-ಹಳೆಯ ವಸ್ತ್ರಗಳನ್ನುಟ್ಟಿದ್ದನು. ಅವನ ಶರೀರವು ದುರ್ಬಲವೂ ಮಲಿನವೂ ಆಗಿದ್ದಿತು. ಶರೀರದ ನರಗಳೆಲ್ಲ ಎದ್ದು ಕಾಣುತ್ತಿದ್ದವು. ಅಂತಹವನಿಗೆ ಸಾಕ್ಷಾತ್ ರುಕ್ಮಿಣೀದೇವಿಯೇ ಚಾಮರವನ್ನು ಬೀಸುತ್ತಾ ಸೇವೆ ಮಾಡುತ್ತಿದ್ದಳು. ॥23॥

ಮೂಲಮ್

(ಶ್ಲೋಕ-24)
ಅಂತಃಪುರಜನೋ ದೃಷ್ಟ್ವಾ ಕೃಷ್ಣೇನಾಮಲಕೀರ್ತಿನಾ ।
ವಿಸ್ಮಿತೋಭೂದತಿಪ್ರೀತ್ಯಾ ಅವಧೂತಂ ಸಭಾಜಿತಮ್ ॥

ಅನುವಾದ

ಪವಿತ್ರ ಕೀರ್ತಿಯಾದ ಭಗವಾನ್ ಶ್ರೀಕೃಷ್ಣನು ಅತಿಶಯ ಪ್ರೀತ್ಯಾದರಗಳಿಂದ ಈ ಕುಚೇಲನಾದ ಅವಧೂತ ಬ್ರಾಹ್ಮಣನ ಸೇವೆ ಮಾಡುತ್ತಿರುವುದನ್ನು ಕಂಡು ಅಂತಃಪುರದ ಸ್ತ್ರೀಯರೆಲ್ಲ ಅಚ್ಚರಿಗೊಂಡರು. ॥24॥

ಮೂಲಮ್

(ಶ್ಲೋಕ-25)
ಕಿಮನೇನ ಕೃತಂ ಪುಣ್ಯಮವಧೂತೇನ ಭಿಕ್ಷುಣಾ ।
ಶ್ರಿಯಾ ಹೀನೇನ ಲೋಕೇಸ್ಮಿನ್ ಗರ್ಹಿತೇನಾಧಮೇನ ಚ ॥
(ಶ್ಲೋಕ-26)
ಯೋಸೌ ತ್ರಿಲೋಕಗುರುಣಾ ಶ್ರೀನಿವಾಸೇನ ಸಂಭೃತಃ ।
ಪರ್ಯಂಕಸ್ಥಾಂ ಶ್ರಿಯಂ ಹಿತ್ವಾ ಪರಿಷ್ವಕ್ತೋಗ್ರಜೋ ಯಥಾ ॥

ಅನುವಾದ

ಅವರು ಪರಸ್ಪರ ಹೇಳಿಕೊಂಡರು — ‘ಈ ನಿರ್ಧನನೂ, ನಿಂದನೀಯನೂ, ನಿಕೃಷ್ಟನೂ, ಭಿಕ್ಷುಕನೂ ಆದ ಈ ಅವಧೂತ ಬ್ರಾಹ್ಮಣನು ಏನು ಪುಣ್ಯಮಾಡಿದ್ದನೋ! ಅದರಿಂದ ಮೂರುಲೋಕದ ಗುರುವಾದ ಶ್ರೀನಿವಾಸ ಶ್ರೀಕೃಷ್ಣನು ಸ್ವತಃ ಇವನ ಆದರ-ಸತ್ಕಾರವನ್ನು ಮಾಡುತ್ತಿರುವನಲ್ಲ! ನೋಡೇ! ಇವನು ತನ್ನ ಪರ್ಯಂಕದಲ್ಲಿ ಸೇವೆಮಾಡುತ್ತಿದ್ದ ಸಾಕ್ಷಾತ್ ಲಕ್ಷ್ಮೀರೂಪಳಾದ ರುಕ್ಮಿಣೀದೇವಿಯನ್ನು ಬಿಟ್ಟು, ಈ ಬ್ರಾಹ್ಮಣನನ್ನು ತನ್ನಣ್ಣ ಬಲರಾಮನಂತೆ ಆಲಿಂಗಿಸಿಕೊಂಡನಲ್ಲ!’ ॥25-26॥

ಮೂಲಮ್

(ಶ್ಲೋಕ-27)
ಕಥಯಾಂಚಕ್ರತುರ್ಗಾಥಾಃ ಪೂರ್ವಾ ಗುರುಕುಲೇ ಸತೋಃ ।
ಆತ್ಮನೋ ಲಲಿತಾ ರಾಜನ್ಕರೌ ಗೃಹ್ಯ ಪರಸ್ಪರಮ್ ॥

ಅನುವಾದ

ಪ್ರಿಯ ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಮತ್ತು ಆ ಬ್ರಾಹ್ಮಣನು ಇಬ್ಬರೂ ಕೈ ಕೈಹಿಡಿದುಕೊಂಡು ತಮ್ಮ ಬಾಲ್ಯದ ಜೀವನದ ಆನಂದದಾಯಕ ಘಟನೆಗಳನ್ನು ಸ್ಮರಿಸಿಕೊಳ್ಳುತ್ತ, ಗುರುಕುಲದಲ್ಲಿದ್ದಾಗ ನಡೆದ ಘಟನೆಗಳನ್ನು ಮೆಲುಕುಹಾಕತೊಡಗಿದರು. ॥27॥

ಮೂಲಮ್

(ಶ್ಲೋಕ-28)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಅಪಿ ಬ್ರಹ್ಮನ್ಗುರುಕುಲಾದ್ಭವತಾ ಲಬ್ಧದಕ್ಷಿಣಾತ್ ।
ಸಮಾವೃತ್ತೇನ ಧರ್ಮಜ್ಞ ಭಾರ್ಯೋಢಾ ಸದೃಶೀ ನ ವಾ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ಧರ್ಮಜ್ಞನಾದ ಬ್ರಾಹ್ಮಣನೇ! ಗುರುದಕ್ಷಿಣೆಯನ್ನು ಸಮರ್ಪಿಸಿ ಗುರುಕುಲದಿಂದ ಹಿಂದಿರುಗಿದ ನಂತರ ನೀನು ತನಗೆ ಅನುರೂಪಳಾದ ಭಾರ್ಯೆಯನ್ನು ವಿವಾಹವಾದೆಯಲ್ಲವೇ? ॥28॥

ಮೂಲಮ್

(ಶ್ಲೋಕ-29)
ಪ್ರಾಯೋ ಗೃಹೇಷು ತೇ ಚಿತ್ತಮಕಾಮವಿಹತಂ ತಥಾ ।
ನೈವಾತಿಪ್ರೀಯಸೇ ವಿದ್ವನ್ಧನೇಷು ವಿದಿತಂ ಹಿ ಮೇ ॥

ಅನುವಾದ

ವಿವಾಹಿತನಾಗಿ ಗೃಹಸ್ಥ ಧರ್ಮದಲ್ಲಿದ್ದರೂ ಕೂಡ ಪ್ರಾಯಶಃ ನಿನ್ನ ಮನಸ್ಸು ವಿಷಯಭೋಗಗಳಲ್ಲಿ ಆಸಕ್ತವಾಗಿಲ್ಲವೆಂದು ನಾನು ಭಾವಿಸಿದ್ದೇನೆ. ವಿದ್ವಾಂಸನೇ! ಧನಾದಿಗಳಲ್ಲಿಯೂ ಕೂಡ ನಿನಗೆ ಯಾವ ಪ್ರೀತಿಯು ಇಲ್ಲವೆಂಬುದು ನನಗೆ ತಿಳಿದಿದೆ. ॥29॥

ಮೂಲಮ್

(ಶ್ಲೋಕ-30)
ಕೇಚಿತ್ಕುರ್ವಂತಿ ಕರ್ಮಾಣಿ ಕಾಮೈರಹತಚೇತಸಃ ।
ತ್ಯಜಂತಃ ಪ್ರಕೃತೀರ್ದೈವೀರ್ಯಥಾಹಂ ಲೋಕಸಂಗ್ರಹಮ್ ॥

ಅನುವಾದ

ಪ್ರಪಂಚದಲ್ಲಿ ಕೆಲವೇ ಜನರು ಮಾಯೆಯಿಂದ ನಿರ್ಮಿತವಾದ ವಿಷಯ ಸಂಬಂಧವಾದ ವಾಸನೆಗಳನ್ನು ದೂರಮಾಡಿ, ವಿಷಯ ವಾಸನೆಯು ಕಿಂಚಿತ್ತಾದರೂ ಮನಸ್ಸಿನಲ್ಲಿ ಇರದಿದ್ದರೂ ನನ್ನಂತೆ ಲೋಕಸಂಗ್ರಹಕ್ಕಾಗಿ ಕರ್ತವ್ಯ ಕರ್ಮಗಳನ್ನು ಮಾಡುತ್ತಿರುತ್ತಾರೆ. ॥30॥

ಮೂಲಮ್

(ಶ್ಲೋಕ-31)
ಕಚ್ಚಿದ್ಗುರುಕುಲೇ ವಾಸಂ ಬ್ರಹ್ಮನ್ಸ್ಮರಸಿ ನೌ ಯತಃ ।
ದ್ವಿಜೋ ವಿಜ್ಞಾಯ ವಿಜ್ಞೇಯಂ ತಮಸಃ ಪಾರಮಶ್ನುತೇ ॥

ಅನುವಾದ

ಬ್ರಾಹ್ಮಣ ಶ್ರೇಷ್ಠನೇ! ನಾವಿಬ್ಬರೂ ಒಟ್ಟಿಗೆ ಗುರುಕುಲದಲ್ಲಿ ವಾಸಿಸುತ್ತಿದ್ದಾಗಿನ ಮಾತುಗಳು ನೆನಪಿದೆಯೆ? ನಿಜವಾಗಿ ಗುರುಕುಲದಲ್ಲೇ ದ್ವಿಜರಿಗೆ ತಾವು ತಿಳಿಯಬೇಕಾದ ಜ್ಞಾನವುಂಟಾಗುತ್ತದೆ. ಅದರ ಮೂಲಕ ಅವರು ಅಜ್ಞಾನಾಂಧಕಾರದಿಂದ ಪಾರಾಗಿ ಹೋಗುವರು. ॥31॥

ಮೂಲಮ್

(ಶ್ಲೋಕ-32)
ಸ ವೈ ಸತ್ಕರ್ಮಣಾಂ ಸಾಕ್ಷಾತ್ ದ್ವಿಜಾತೇರಿಹ ಸಂಭವಃ ।
ಆದ್ಯೋಂಗ ಯತ್ರಾಶ್ರಮಿಣಾಂ ಯಥಾಹಂ ಜ್ಞಾನದೋ ಗುರುಃ ॥

ಅನುವಾದ

ಮಿತ್ರನೇ! ಈ ಪ್ರಪಂಚದಲ್ಲಿ ಶರೀರಕ್ಕೆ ಕಾರಣನಾದ ಜನ್ಮದಾತ ತಂದೆಯು ಮೊದಲನೆಯ ಗುರು. ಅನಂತರ ಉಪನಯನಾದಿ ಸಂಸ್ಕಾರಗಳನ್ನು ಮಾಡಿ ಸತ್ಕರ್ಮಗಳ ಶಿಕ್ಷಣವನ್ನು ಕೊಡುವವನು ಎರಡನೆಯ ಗುರುವು ಪೂಜ್ಯನೇ ಆಗಿರುವನು. ಬಳಿಕ ಜ್ಞಾನೋಪದೇಶವನ್ನು ಮಾಡಿ ಪರಮಾತ್ಮನನ್ನು ಸಾಕ್ಷಾತ್ಕರಿಸಿ ಕೊಡುವ ಗುರುವು ಪರಮಾತ್ಮ ಸ್ವರೂಪನೇ ಆಗಿರುವನು. ವರ್ಣಾಶ್ರಮಿಗಳಿಗೆ ಹೀಗೆ ಮೂರು ಗುರುಗಳಿರುತ್ತಾರೆ. ॥32॥

ಮೂಲಮ್

(ಶ್ಲೋಕ-33)
ನನ್ವರ್ಥಕೋವಿದಾ ಬ್ರಹ್ಮನ್ ವರ್ಣಾಶ್ರಮವತಾಮಿಹ ।
ಯೇ ಮಯಾ ಗುರುಣಾ ವಾಚಾ ತರಂತ್ಯಂಜೋ ಭವಾರ್ಣವಮ್ ॥

ಅನುವಾದ

ಪ್ರಿಯಸಖನೇ! ಗುರುವಿನ ಸ್ವರೂಪದಲ್ಲಿ ಸಾಕ್ಷಾತ್ ನಾನೇ ಆಗಿರುವೆನು. ಈ ಜಗತ್ತಿನ ವರ್ಣಾಶ್ರಮಿಗಳಲ್ಲಿ ತನ್ನ ಸದ್ಗುರುವಿನ ಉಪದೇಶದಂತೆ ಆಯಾಸವಿಲ್ಲದೆಯೇ ಭವಸಾಗರವನ್ನು ದಾಟುವವರೇ ತನ್ನ ಸ್ವಾರ್ಥ ಮತ್ತು ಪರಮಾರ್ಥದ ನಿಜವಾದ ಕೋವಿದರಲ್ಲವೇ? ॥33॥

ಮೂಲಮ್

(ಶ್ಲೋಕ-34)
ನಾಹಮಿಜ್ಯಾಪ್ರಜಾತಿಭ್ಯಾಂ ತಪಸೋಪಶಮೇನ ವಾ ।
ತುಷ್ಯೇಯಂ ಸರ್ವಭೂತಾತ್ಮಾ ಗುರುಶುಶ್ರೂಷಯಾ ಯಥಾ ॥

ಅನುವಾದ

ಪ್ರಿಯ ಮಿತ್ರನೇ! ನಾನು ಸಮಸ್ತ ಪ್ರಾಣಿಗಳ ಹೃದಯದಲ್ಲಿ ಅಂತರ್ಯಾಮಿ ರೂಪದಿಂದ ಆತ್ಮನಾಗಿ ವಿರಾಜಿಸುತ್ತಿರುವೆನು. ಸದ್ಗುರುವಿನ ಸೇವಾ ಶುಶ್ರೂಷೆಗಳಿಂದ ನಾನು ಸಂತುಷ್ಟನಾಗುವಂತೆ, ಗೃಹಸ್ಥರ ಧರ್ಮವಾದ ಪಂಚಮಹಾ ಯಜ್ಞಾದಿಗಳನ್ನು ಮಾಡುವುದರಿಂದಾಗಲೀ, ಬ್ರಹ್ಮಚಾರಿಯ ಧರ್ಮವಾದ ವೇದಾಧ್ಯಯನದಿಂದಾಗಲೀ, ವಾನಪ್ರಸ್ಥಾಶ್ರಮದ ಧರ್ಮವಾದ ತಪಸ್ಸಿನಿಂದಾಗಲೀ, ಸಂನ್ಯಾಸೀಗಳ ಧರ್ಮವಾದ ವಿರಕ್ತತೆಯಿಂದಾಗಲೀ ನನಗೆ ತೃಪ್ತಿಯಾಗುವುದಿಲ್ಲ. ॥34॥

ಮೂಲಮ್

(ಶ್ಲೋಕ-35)
ಅಪಿ ನಃ ಸ್ಮರ್ಯತೇ ಬ್ರಹ್ಮನ್ವ ತ್ತಂ ನಿವಸತಾಂ ಗುರೌ ।
ಗುರುದಾರೈಶ್ಚೋದಿತಾನಾಮಿಂಧನಾನಯನೇ ಕ್ವಚಿತ್ ॥

ಅನುವಾದ

ಬ್ರಾಹ್ಮಣೋತ್ತಮನೇ! ನಾವಿಬ್ಬರೂ ಗುರುಕುಲದಲ್ಲಿದ್ದಾಗ ನಡೆದ ಒಂದು ಪ್ರಸಂಗವು ನಿನಗೆ ನೆನಪಿದೆಯೇ! ಒಂದು ದಿನ ನಮ್ಮಿಬ್ಬರಿಗೂ ಗುರುಪತ್ನೀಯರು ಸೌದೆಯನ್ನು ತರಲು ಕಾಡಿಗೆ ಕಳಿಸಿದ್ದರು. ॥35॥

ಮೂಲಮ್

(ಶ್ಲೋಕ-36)
ಪ್ರವಿಷ್ಟಾನಾಂ ಮಹಾರಣ್ಯಮಪರ್ತೌ ಸುಮಹದ್ವಜ ।
ವಾತವರ್ಷಮಭೂತ್ತೀವ್ರಂ ನಿಷ್ಠುರಾಃ ಸ್ತನಯಿತ್ನವಃ ॥

ಅನುವಾದ

ಆಗ ನಾವುಗಳು ನಿಬಿಡವಾದ ಕಾಡೊಂದನ್ನು ಪ್ರವೇಶಿಸಿದೆವು. ಅದು ಮಳೆಗಾಲವಲ್ಲದಿದ್ದರೂ ಭಯಂಕರವಾದ ಬಿರುಗಾಳಿಯೊಂದಿಗೆ ಧಾರಾಕಾರ ಮಳೆಯು ಸುರಿಯತೊಡಗಿತು. ಆಕಾಶದಲ್ಲಿ ಗುಡುಗು-ಸಿಡಿಲುಗಳು ಆರ್ಭಟಿಸುತ್ತಿದ್ದವು. ॥36॥

ಮೂಲಮ್

(ಶ್ಲೋಕ-37)
ಸೂರ್ಯಶ್ಚಾಸ್ತಂ ಗತಸ್ತಾವತ್ತಮಸಾ ಚಾವೃತಾ ದಿಶಃ ।
ನಿಮ್ನಂ ಕೂಲಂ ಜಲಮಯಂ ನ ಪ್ರಾಜ್ಞಾಯತ ಕಿಂಚನ ॥

ಅನುವಾದ

ಸೂರ್ಯನಾರಾಯಣನು ಅಸ್ತಮಿಸಿದನು. ಎಲ್ಲೆಡೆ ಗಾಢಾಂಧಕಾರವು ಕವಿಯಿತು. ಅತಿವೃಷ್ಟಿಯಿಂದಾಗಿ ಎಲ್ಲಾ ಕಡೆ ನೀರು ತುಂಬಿಹೋಗಿ ಹಳ್ಳವೆಲ್ಲಿದೆ? ತಿಟ್ಟೆಲ್ಲಿದೆ? ಎಂಬುದೇ ತಿಳಿಯುತ್ತಿರಲಿಲ್ಲ. ॥37॥

ಮೂಲಮ್

(ಶ್ಲೋಕ-38)
ವಯಂ ಭೃಶಂ ತತ್ರ ಮಹಾನಿಲಾಂಬುಭಿರ್ನಿಹನ್ಯಮಾನಾ ಮುಹುರಂಬುಸಂಪ್ಲವೇ ।
ದಿಶೋವಿದಂತೋಥ ಪರಸ್ಪರಂ ವನೇ ಗೃಹೀತಹಸ್ತಾಃ ಪರಿಬಭ್ರಿಮಾತುರಾಃ ॥

ಅನುವಾದ

ಅದೊಂದು ಸಣ್ಣ ಪ್ರಳಯದಂತೆ ಇತ್ತು. ಬಿರುಗಾಳಿಯ ಮತ್ತು ಮಳೆಯ ನೀರಿನ ಹೊಡೆತದಿಂದ ನಮಗೆ ಅತ್ಯಂತ ಪೀಡೆಯುಂಟಾಗಿ ದಿಕ್ಕುಗಾಣದೆ ಪರಸ್ಪರ ಕೈ ಕೈ ಹಿಡಿದುಕೊಂಡು ಭಯಗೊಂಡವರಾಗಿ ಅರಣ್ಯದಲ್ಲಿ ಅತ್ತ-ಇತ್ತ ಅಲೆಯುತ್ತಿದ್ದೆವು. ॥38॥

ಮೂಲಮ್

(ಶ್ಲೋಕ-39)
ಏತದ್ವಿದಿತ್ವಾ ಉದಿತೇ ರವೌ ಸಾಂದೀಪನಿರ್ಗುರುಃ ।
ಅನ್ವೇಷಮಾಣೋ ನಃ ಶಿಷ್ಯಾನಾಚಾರ್ಯೋಪಶ್ಯದಾತುರಾನ್ ॥

ಅನುವಾದ

ರಾತ್ರಿಯಲ್ಲಿ ನಾವು ಆಶ್ರಮಕ್ಕೆ ಹಿಂದಿರುಗಲಿಲ್ಲವೆಂದು ತಿಳಿದ ಸಾಂದೀಪನಿಮುನಿಗಳು ಸೂರ್ಯೋದಯವಾಗುತ್ತಲೇ ಶಿಷ್ಯರೊಡನೆ ನಮ್ಮನ್ನು ಹುಡುಕುತ್ತಾ ಬಂದು ಭಯಗೊಂಡಿದ್ದ ನಮ್ಮನ್ನು ನೋಡಿದರು. ॥39॥

ಮೂಲಮ್

(ಶ್ಲೋಕ-40)
ಅಹೋ ಹೇ ಪುತ್ರಕಾ ಯೂಯಮಸ್ಮದರ್ಥೇತಿದುಃಖಿತಾಃ ।
ಆತ್ಮಾ ವೈ ಪ್ರಾಣಿನಾಂ ಪ್ರೇಷ್ಠಸ್ತಮನಾದೃತ್ಯ ಮತ್ಪರಾಃ ॥

ಅನುವಾದ

ಅವರು ಹೇಳಿದರು — ಆಶ್ಚರ್ಯ! ಏನಚ್ಚರಿ! ಮಕ್ಕಳೇ! ನೀವು ನಮ್ಮ ಸಲುವಾಗಿ ಬಹಳವಾಗಿ ಕಷ್ಟಪಡುತ್ತಿರುವಿರಿ. ಎಲ್ಲ ಪ್ರಾಣಿಗಳಿಗೂ ಅವರವರ ಶರೀರವು ಎಲ್ಲಕ್ಕಿಂತ ಹೆಚ್ಚು ಪ್ರಿಯವಾಗಿರುತ್ತದೆ. ಆದರೆ ನೀವಿಬ್ಬರೂ ಅದನ್ನು ಲೆಕ್ಕಿಸದೇ ನಮ್ಮ ಸೇವೆಯಲ್ಲಿ ತತ್ಪರರಾಗಿರುವಿರಿ. ॥40॥

ಮೂಲಮ್

(ಶ್ಲೋಕ-41)
ಏತದೇವ ಹಿ ಸಚ್ಛಿಷ್ಯೈಃ ಕರ್ತವ್ಯಂ ಗುರುನಿಷ್ಕೃತಮ್ ।
ಯದ್ವೈ ವಿಶುದ್ಧಭಾವೇನ ಸರ್ವಾರ್ಥಾತ್ಮಾರ್ಪಣಂ ಗುರೌ ॥

ಅನುವಾದ

ಸತ್ ಶಿಷ್ಯರಿಗೆ ವಿಶುದ್ಧ ಭಾವದಿಂದ ತನ್ನ ಸಮಸ್ತವನ್ನೂ ಮತ್ತು ಶರೀರವನ್ನು ಗುರುಗಳ ಸೇವೆಯಲ್ಲಿ ಸಮರ್ಪಿಸುವುದೇ ಗುರುಗಳ ಋಣದಿಂದ ಮುಕ್ತರಾಗಲು ಇರುವ ಕರ್ತವ್ಯವಾಗಿದೆ. ॥41॥

ಮೂಲಮ್

(ಶ್ಲೋಕ-42)
ತುಷ್ಟೋಹಂ ಭೋ ದ್ವಿಜಶ್ರೇಷ್ಠಾಃ ಸತ್ಯಾಃ ಸಂತು ಮನೋರಥಾಃ ।
ಛಂದಾಂಸ್ಯಯಾತಯಾಮಾನಿ ಭವನ್ತ್ವಿಹ ಪರತ್ರ ಚ ॥

ಅನುವಾದ

ದ್ವಿಜಶಿರೋಮಣಿಗಳೇ! ನಾನು ನಿಮ್ಮ ವಿಷಯದಲ್ಲಿ ಸಂತುಷ್ಟನಾಗಿದ್ದೇನೆ. ನಿಮ್ಮ ಸಮಸ್ತ ಮನೋರಥಗಳು ಪೂರ್ಣಗೊಳ್ಳಲಿ. ನೀವುಗಳು ನಮ್ಮಿಂದ ಮಾಡಿರುವ ವೇದಾಧ್ಯಯನವು ನಿಮಗೆ ಸದಾಕಾಲ ಕಂಠಸ್ಥವಾಗಿದ್ದು, ಈ ಲೋಕ-ಪರಲೋಕಗಳಲ್ಲಿ ಎಲ್ಲಿಯೂ ನಿಷ್ಫಲವಾಗದಿರಲಿ. ॥42॥

ಮೂಲಮ್

(ಶ್ಲೋಕ-43)
ಇತ್ಥಂವಿಧಾನ್ಯನೇಕಾನಿ ವಸತಾಂ ಗುರುವೇಶ್ಮಸು ।
ಗುರೋರನುಗ್ರಹೇಣೈವ ಪುಮಾನ್ಪೂರ್ಣಃ ಪ್ರಶಾಂತಯೇ ॥

ಅನುವಾದ

ಪ್ರಿಯಮಿತ್ರನೇ! ನಾವುಗಳು ಗುರುಕುಲದಲ್ಲಿ ವಾಸವಾಗಿದ್ದಾಗ ನಮ್ಮ ಜೀವನದಲ್ಲಿ ಇಂತಹ ಅನೇಕ ಘಟನೆಗಳು ಘಟಿಸಿದ್ದವು. ಸದ್ಗುರುವಿನ ಕೃಪೆಯಿಂದಲೇ ಮನುಷ್ಯನು ಶಾಂತಿಯ ಅಧಿಕಾರಿಯಾಗುತ್ತಾನೆ ಮತ್ತು ಪೂರ್ಣತೆಗೆ ತಲುಪುತ್ತಾನೆ ಇದರಲ್ಲಿ ಸಂದೇಹವೇ ಇಲ್ಲ. ॥43॥

ಮೂಲಮ್

(ಶ್ಲೋಕ-44)

ಮೂಲಮ್ (ವಾಚನಮ್)

ಬ್ರಾಹ್ಮಣ ಉವಾಚ

ಮೂಲಮ್

ಕಿಮಸ್ಮಾಭಿರನಿರ್ವೃತ್ತಂ ದೇವದೇವ ಜಗದ್ಗುರೋ ।
ಭವತಾ ಸತ್ಯಕಾಮೇನ ಯೇಷಾಂ ವಾಸೋ ಗುರಾವಭೂತ್ ॥

ಅನುವಾದ

ಸುದಾಮ ಬ್ರಾಹ್ಮಣನು ಹೇಳಿದನು — ದೇವ ದೇವನಾದ ಜಗದ್ಗುರು ಶ್ರೀಕೃಷ್ಣನೇ! ಸತ್ಯಸಂಕಲ್ಪನಾದ, ಪರಮಾತ್ಮನಾದ ನಿನ್ನೊಡನೆ ಗುರುಕುಲದಲ್ಲಿ ವಾಸಮಾಡುವ ಸೌಭಾಗ್ಯವು ಸಿಕ್ಕಿದ ನನಗೆ ಇನ್ನು ಏನು ತಾನೇ ಮಾಡಲು ಉಳಿದಿದೆ? ಎಲ್ಲ ಕರ್ತವ್ಯಗಳನ್ನು ಮುಗಿಸಿದಂತಾಗಿದೆ. ॥44॥

ಮೂಲಮ್

(ಶ್ಲೋಕ-45)
ಯಸ್ಯಚ್ಛಂದೋಮಯಂ ಬ್ರಹ್ಮ ದೇಹ ಆವಪನಂ ವಿಭೋ ।
ಶ್ರೇಯಸಾಂ ತಸ್ಯ ಗುರುಷು ವಾಸೋತ್ಯಂತವಿಡಂಬನಮ್ ॥

ಅನುವಾದ

ಪ್ರಭುವೇ! ಛಂದೋಮಯವಾದ ವೇದವು ಚತುರ್ವಿಧ ಪುರುಷಾರ್ಥಗಳಿಗೂ ಮೂಲಸ್ರೋತವಾಗಿದೆ ಹಾಗೂ ಅದು ನಿನ್ನ ಶರೀರವೇ ಆಗಿದೆ. ಅಂತಹ ನೀನು ವೇದಾಧ್ಯಯನಕ್ಕಾಗಿ ಗುರುಕುಲದಲ್ಲಿ ವಾಸಿಸುವುದು ಮನುಷ್ಯಲೀಲೆಯ ಅಭಿನಯವಲ್ಲದೆ ಮತ್ತೇನಿದೆ?॥45॥

ಅನುವಾದ (ಸಮಾಪ್ತಿಃ)

ಎಂಭತ್ತನೆಯ ಅಧ್ಯಾಯವು ಮುಗಿಯಿತು. ॥80॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ ಶ್ರೀದಾಮಚರಿತೇ ಅಶೀತಿತಮೋಽಧ್ಯಾಯಃ ॥80॥