[ಏಪ್ಪತ್ತೋಂಭತ್ತನೇಯ ಅಧ್ಯಾಯ]
ಭಾಗಸೂಚನಾ
ಬಲರಾಮನಿಂದ ಬಲ್ವಲನ ಸಂಹಾರ - ತೀರ್ಥಯಾತ್ರೆ
ಮೂಲಮ್
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ತತಃ ಪರ್ವಣ್ಯುಪಾವೃತ್ತೇ ಪ್ರಚಂಡಃ ಪಾಂಸುವರ್ಷಣಃ ।
ಭೀಮೋ ವಾಯುರಭೂದ್ರಾಜನ್ ಪೂಯಗಂಧಸ್ತು ಸರ್ವಶಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಪರ್ವದಿವಸವು ಬಂದಾಗ ಭಯಂಕರ ಗಾಳಿಯು ಬೀಸ ತೊಡಗಿತು. ಧೂಳಿನ ಮಳೆಯು ಸುರಿಯತೊಡಗಿತು. ಎಲ್ಲ ಕಡೆಯಿಂದ ಕೀವಿನ ದುರ್ಗಂಧವು ಹರಡಿಕೊಂಡಿತು. ॥1॥
ಮೂಲಮ್
(ಶ್ಲೋಕ-2)
ತತೋಮೇಧ್ಯಮಯಂ ವರ್ಷಂ ಬಲ್ವಲೇನ ವಿನಿರ್ಮಿತಮ್ ।
ಅಭವದ್ಯಜ್ಞಶಾಲಾಯಾಂ ಸೋನ್ವದೃಶ್ಯತ ಶೂಲಧೃಕ್ ॥
ಅನುವಾದ
ಬಳಿಕ ಬಲ್ವಲ ರಾಕ್ಷಸನು ಯಜ್ಞಶಾಲೆಯಲ್ಲಿ ಮಲ-ಮೂತ್ರಾದಿ ಅಪವಿತ್ರ ವಸ್ತುಗಳನ್ನು ಸುರಿಸಿದನು. ಅನಂತರ ಕೈಯಲ್ಲಿ ತ್ರಿಶೂಲವನ್ನು ಹಿಡಿದುಕೊಂಡು ಕಾಣಿಸಿಕೊಂಡನು. ॥2॥
ಮೂಲಮ್
(ಶ್ಲೋಕ-3)
ತಂ ವಿಲೋಕ್ಯ ಬೃಹತ್ಕಾಯಂ ಭಿನ್ನಾಂಜನಚಯೋಪಮಮ್ ।
ತಪ್ತತಾಮ್ರಶಿಖಾಶ್ಮಶ್ರುಂ ದಂಷ್ಟ್ರೋಗ್ರಭ್ರುಕುಟೀಮುಖಮ್ ॥
(ಶ್ಲೋಕ-4)
ಸಸ್ಮಾರ ಮುಸಲಂ ರಾಮಃ ಪರಸೈನ್ಯವಿದಾರಣಮ್ ।
ಹಲಂ ಚ ದೈತ್ಯದಮನಂ ತೇ ತೂರ್ಣಮುಪತಸ್ಥತುಃ ॥
ಅನುವಾದ
ದೊಡ್ಡದಾದ ಶರೀರವನ್ನು ಹೊಂದಿದ್ದು ಅವನು ಕಾಡಿಗೆಯ ಬೆಟ್ಟದಂತೆ ಕಪ್ಪಾಗಿದ್ದು, ಕಾಯಿಸಿದ ತಾಮ್ರದಂತೆ ಕೆಂಪಾದ ತಲೆದೂದಲು, ಗಡ್ಡ-ಮೀಸೆಗಳನ್ನು ಹೊಂದಿದ್ದನು. ದೊಡ್ಡ-ದೊಡ್ಡ ಕೋರೆದಾಡೆಗಳಿಂದಲೂ, ಗಂಟಕ್ಕಿದ ಹುಬ್ಬುಗಳಿಂದಲೂ ಅವನ ಮುಖವು ಭಯಂಕರವಾಗಿ ಕಾಣುತ್ತಿತ್ತು. ಅವನನ್ನು ನೋಡಿದೊಡನೆ ಬಲರಾಮನು ಶತ್ರುಸೈನ್ಯವನ್ನು ಧ್ವಂಸಗೊಳಿಸುವ ಮುಸಲಾಯುಧವನ್ನು, ದೈತ್ಯರನ್ನು ಸಂಹರಿಸುವ ಹಲಾಯುಧವನ್ನು ಸ್ಮರಿಸಿಕೊಂಡನು. ಸ್ಮರಿಸಿದಾಕ್ಷಣದಲ್ಲೇ ಆ ದಿವ್ಯಾಯುಧಗಳು ಬಲರಾಮನ ಕೈಗಳನ್ನು ಅಲಂಕರಿಸಿದುವು. ॥3-4॥
ಮೂಲಮ್
(ಶ್ಲೋಕ-5)
ತಮಾಕೃಷ್ಯ ಹಲಾಗ್ರೇಣ ಬಲ್ವಲಂ ಗಗನೇಚರಮ್ ।
ಮುಸಲೇನಾಹನತ್ಕ್ರುದ್ಧೋ ಮೂರ್ಧ್ನಿ ಬ್ರಹ್ಮದ್ರುಹಂ ಬಲಃ ॥
(ಶ್ಲೋಕ-6)
ಸೋಪತದ್ಭುವಿ ನಿರ್ಭಿನ್ನ ಲಲಾಟೋಸೃಕ್ಸಮುತ್ಸೃಜನ್ ।
ಮುಂಚನ್ನಾರ್ತಸ್ವರಂ ಶೈಲೋ ಯಥಾ ವಜ್ರಹತೋರುಣಃ ॥
ಅನುವಾದ
ಬಲರಾಮನು ಆಕಾಶದಲ್ಲಿ ಸಂಚರಿಸುವ ಬಲ್ವಲ ದೈತ್ಯನನ್ನು ತನ್ನ ಹಲಾಯುಧದಿಂದ ಸೆಳೆದುಕೊಂಡು ಆ ಬ್ರಹ್ಮದ್ರೋಹಿಯ ಶಿರಸ್ಸಿನಲ್ಲಿ ಅತ್ಯಂತ ಕ್ರೋಧಗೊಂಡು ಮುಸಲಾಯುಧದಿಂದ ಬಲವಾಗಿ ಹೊಡೆದನು. ಇದರಿಂದ ಅವನ ಹಣೆ ಒಡೆದು, ರಕ್ತವನ್ನು ಉಗುಳುತ್ತಾ ವಜ್ರಘಾತದಿಂದ ಗೈರಿಕಾದಿ ಧಾತುಗಳಿಂದ ಕೆಂಪಾದ ಪರ್ವತವು ಉರುಳುವಂತೆ ಆರ್ತಸ್ವರದಿಂದ ಬೊಬ್ಬಿರಿದು ಸತ್ತು ನೆಲಕ್ಕೆ ಉರುಳಿದನು. ॥5-6॥
ಮೂಲಮ್
(ಶ್ಲೋಕ-7)
ಸಂಸ್ತುತ್ಯ ಮುನಯೋ ರಾಮಂ ಪ್ರಯುಜ್ಯಾವಿತಥಾಶಿಷಃ ।
ಅಭ್ಯಷಿಂಚನ್ಮಹಾಭಾಗಾ ವೃತ್ರಘ್ನಂ ವಿಬುಧಾ ಯಥಾ ॥
ಅನುವಾದ
ನೈಮಿಷಾರಣ್ಯ ನಿವಾಸಿಗಳಾದ ಮಹಾಭಾಗ್ಯ ಶಾಲಿಗಳಾದ ಮುನಿಗಳು ಬಲರಾಮನನ್ನು ಸ್ತುತಿಸಿ, ಎಂದೂ ವ್ಯರ್ಥವಾಗದಿರುವ ಆಶೀರ್ವಾದಗಳನ್ನು ಕೊಟ್ಟರು. ಮತ್ತೆ ದೇವತೆಗಳು ಇಂದ್ರನಿಗೆ ಅಭಿಷೇಕ ಮಾಡಿದಂತೆಯೇ ಬಲರಾಮನಿಗೆ ಅಭಿಷೇಕ ಮಾಡಿದರು. ॥7॥
ಮೂಲಮ್
(ಶ್ಲೋಕ-8)
ವೈಜಯಂತೀಂ ದದುರ್ಮಾಲಾಂ ಶ್ರೀಧಾಮಾಮ್ಲಾನಪಂಕಜಾಮ್ ।
ರಾಮಾಯ ವಾಸಸೀ ದಿವ್ಯೇ ದಿವ್ಯಾನ್ಯಾಭರಣಾನಿ ಚ ॥
ಅನುವಾದ
ಅನಂತರ ಋಷಿಗಳು ಬಲರಾಮನಿಗೆ ದಿವ್ಯವಾದ ವಸ್ತ್ರಾಭೂಷಣಗಳನ್ನು ಸಮರ್ಪಿಸಿ, ಎಂದೂ ಬಾಡದಿರುವ, ಸೌಂದರ್ಯಕ್ಕೆ ಆಶ್ರಯವಾದ ಕಮಲ ಪುಷ್ಪಗಳಿಂದ ಕೂಡಿದ ವೈಜಯಂತಿ ಮಾಲೆಯನ್ನು ಅರ್ಪಿಸಿದರು. ॥8॥
ಮೂಲಮ್
(ಶ್ಲೋಕ-9)
ಅಥ ತೈರಭ್ಯನುಜ್ಞಾತಃ ಕೌಶಿಕೀಮೇತ್ಯ ಬ್ರಾಹ್ಮಣೈಃ ।
ಸ್ನಾತ್ವಾ ಸರೋವರಮಗಾದ್ಯತಃ ಸರಯುರಾಸ್ರವತ್ ॥
ಅನುವಾದ
ಅನಂತರ ನೈಮಿಷಾರಣ್ಯವಾಸಿಗಳಾದ ಋಷಿಗಳಿಂದ ಬೀಳ್ಕೊಂಡು, ಅವರ ಆಜ್ಞೆಯಂತೆ ಬಲರಾಮನು ಬ್ರಾಹ್ಮಣರೊಡನೆ ಕೌಶಿಕೀ ನದಿಯ ತೀರಕ್ಕೆ ಬಂದನು. ಅಲ್ಲಿ ಸ್ನಾನ ಮಾಡಿ, ಸರಯೂ ನದಿಯ ಉಗಮವಾದ ಮಾನಸ ಸರೋವರಕ್ಕೆ ಹೋದನು. ॥9॥
ಮೂಲಮ್
(ಶ್ಲೋಕ-10)
ಅನುಸ್ರೋತೇನ ಸರಯೂಂ ಪ್ರಯಾಗಮುಪಗಮ್ಯ ಸಃ ।
ಸ್ನಾತ್ವಾ ಸಂತರ್ಪ್ಯ ದೇವಾದೀನ್ಜಗಾಮ ಪುಲಹಾಶ್ರಮಮ್ ॥
ಅನುವಾದ
ಅಲ್ಲಿಂದ ಸರಯೂ ತೀರದಲ್ಲೇ ಮುಂದರಿಯುತ್ತಾ ತೀರ್ಥರಾಜ ಪ್ರಯಾಗಕ್ಕೆ ಬಂದರು. ಅಲ್ಲಿ ಸ್ನಾನಮಾಡಿ, ದೇವ-ಋಷಿ ಪಿತೃ ತರ್ಪಣಗಳನ್ನು ಮಾಡಿ ಅಲ್ಲಿಂದ ಪುಲಹಾಶ್ರಮಕ್ಕೆ ಹೋದನು. ॥10॥
ಮೂಲಮ್
(ಶ್ಲೋಕ-11)
ಗೋಮತೀಂ ಗಂಡಕೀಂ ಸ್ನಾತ್ವಾ ವಿಪಾಶಾಂ ಶೋಣ ಆಪ್ಲುತಃ ।
ಗಯಾಂ ಗತ್ವಾ ಪಿತೃ ನಿಷ್ಟ್ವಾ ಗಂಗಾಸಾಗರಸಂಗಮೇ ॥
(ಶ್ಲೋಕ-12)
ಉಪಸ್ಪೃಶ್ಯ ಮಹೇಂದ್ರಾದ್ರೌ ರಾಮಂ ದೃಷ್ಟ್ವಾಭಿವಾದ್ಯ ಚ ।
ಸಪ್ತಗೋದಾವರೀಂ ವೇಣಾಂ ಪಂಪಾಂ ಭೀಮರಥೀಂ ತತಃ ॥
(ಶ್ಲೋಕ-13)
ಸ್ಕಂದಂ ದೃಷ್ಟ್ವಾ ಯಯೌ ರಾಮಃ ಶ್ರೀಶೈಲಂ ಗಿರಿಶಾಲಯಮ್ ।
ದ್ರವಿಡೇಷು ಮಹಾಪುಣ್ಯಂ ದೃಷ್ಟ್ವಾದ್ರಿಂ ವೇಂಕಟಂ ಪ್ರಭುಃ ॥
(ಶ್ಲೋಕ-14)
ಕಾಮಕೋಷ್ಣೀಂ ಪುರೀಂ ಕಾಂಚೀಂ ಕಾವೇರೀಂ ಚ ಸರಿದ್ವರಾಮ್ ।
ಶ್ರೀರಂಗಾಖ್ಯಂ ಮಹಾಪುಣ್ಯಂ ಯತ್ರ ಸನ್ನಿಹಿತೋ ಹರಿಃ ॥
ಅನುವಾದ
ಅಲ್ಲಿಂದ ಮುಂದೆ ಗಂಡಕೀ, ಗೋಮತೀ, ವಿಪಾಶಾ, ಶೋಣಾ ಮುಂತಾದ ಪುಣ್ಯನದಿಗಳಲ್ಲಿ ಸ್ನಾನಮಾಡಿ, ಗಯಾ ಕ್ಷೇತ್ರಕ್ಕೆ ಬಂದು ಅಲ್ಲಿ ಪಿತೃಗಳಿಗೆ ಶ್ರಾದ್ಧಮಾಡಿ, ತರ್ಪಣಾದಿಗಳನ್ನಿತ್ತು ಮುಂದೆ ಪ್ರಯಾಣ ಮಾಡುತ್ತಾ ಗಂಗಾ-ಸಾಗರ ಸಂಗಮಕ್ಕೆ ಹೋಗಿ ಅಲ್ಲಿ ಸ್ನಾನಾದಿ ತೀರ್ಥ ಕರ್ಮಗಳನ್ನಾಚರಿಸಿ, ಮಹೇಂದ್ರ ಪರ್ವತಕ್ಕೆ ಹೋದನು. ಅಲ್ಲಿ ಪರಶುರಾಮರ ದರ್ಶನ ಮತ್ತು ಅಭಿವಾದನ ಮಾಡಿದನು. ಅನಂತರ ಸಪ್ತಗೋದಾವರೀ, ವೇಣಾ, ಪಂಪಾ ಭೀಮರಥೀ ಮುಂತಾದವುಗಳಲ್ಲಿ ಸ್ನಾನಮಾಡಿ, ಕಾರ್ತಿಕ ಸ್ವಾಮಿಯನ್ನು ದರ್ಶಿಸಿ ಪರಶಿವನ ನಿವಾಸವಾದ ಶ್ರೀಶೈಲಕ್ಕೆ ತಲುಪಿದನು. ಬಳಿಕ ಬಲರಾಮನು ದ್ರವಿಡ ದೇಶದ ಪರಮ ಪುಣ್ಯಮಯ ವೇಂಕಟಾದ್ರಿ ಕ್ಷೇತ್ರವನ್ನು ದರ್ಶನಮಾಡಿ ಅಲ್ಲಿಂದ ಅವನು ಕಂಚಿ ಕಾಮಾಕ್ಷಿ, ಶಿವಕಾಂಚಿ, ವಿಷ್ಣುಕಾಂಚಿ ದರ್ಶನ ಮಾಡುತ್ತಾ ಶ್ರೇಷ್ಠವಾದ ಕಾವೇರಿ ನದಿಯಲ್ಲಿ ಸ್ನಾನಮಾಡಿ, ಪುಣ್ಯಪ್ರದವಾದ, ಶ್ರೀಹರಿಯ ಸಾಕ್ಷಾತ್ ಸಾನ್ನಿಧ್ಯವಿರುವ ಶ್ರೀರಂಗಕ್ಷೇತ್ರಕ್ಕೆ ಆಗಮಿಸಿದನು. ॥11-14॥
ಮೂಲಮ್
(ಶ್ಲೋಕ-15)
ಋಷಭಾದ್ರಿಂ ಹರೇಃ ಕ್ಷೇತ್ರಂ ದಕ್ಷಿಣಾಂ ಮಥುರಾಂ ತಥಾ ।
ಸಾಮುದ್ರಂ ಸೇತುಮಗಮನ್ಮಹಾಪಾತಕನಾಶನಮ್ ॥
ಅನುವಾದ
ಅಲ್ಲಿ ರಂಗನಾಥ ಸ್ವಾಮಿಯನ್ನು ಸಂದರ್ಶಿಸಿ ಅಲ್ಲಿಂದ ಭಗವಾನ್ ವಿಷ್ಣುವಿನ ಮತ್ತೊಂದು ಕ್ಷೇತ್ರವಾದ ಋಷಭ ಪರ್ವತ, ದಕ್ಷಿಣ ಮಥುರೆ ಹಾಗೂ ಮಹಾ ಮಹಾ ಪಾಪಗಳನ್ನು ನಾಶಗೊಳಿಸುವ ಸೇತುಬಂಧದ ಯಾತ್ರೆ ಮಾಡಿದನು. ॥15॥
ಮೂಲಮ್
(ಶ್ಲೋಕ-16)
ತತ್ರಾಯುತಮದಾದ್ಧೇನೂರ್ಬ್ರಾಹ್ಮಣೇಭ್ಯೋ ಹಲಾಯುಧಃ ।
ಕೃತಮಾಲಾಂ ತಾಮ್ರಪರ್ಣೀಂ ಮಲಯಂ ಚ ಕುಲಾಚಲಮ್ ॥
ಅನುವಾದ
ಅಲ್ಲಿ ಬಲರಾಮನು ಬ್ರಾಹ್ಮಣರಿಗೆ ಹತ್ತು ಸಾವಿರ ಗೋವುಗಳನ್ನು ದಾನಮಾಡಿದನು. ಪುನಃ ಅಲ್ಲಿಂದ ಕೃತಮಾಲಾ, ತಾಮ್ರಪರ್ಣಿ ನದಿಗಳಲ್ಲಿ ಸ್ನಾನಮಾಡಿ ಮತ್ತೆ ಮಲಯಾಚಲಕ್ಕೆ ಹೋದನು. ಆ ಪರ್ವತವು ಏಳು ಕುಲಪರ್ವತಗಳಲ್ಲಿ ಒಂದಾಗಿದೆ. ॥16॥
ಮೂಲಮ್
(ಶ್ಲೋಕ-17)
ತತ್ರಾಗಸ್ತ್ಯಂ ಸಮಾಸೀನಂ ನಮಸ್ಕೃತ್ಯಾಭಿವಾದ್ಯ ಚ ।
ಯೋಜಿತಸ್ತೇನ ಚಾಶೀರ್ಭಿರನುಜ್ಞಾತೋ ಗತೋರ್ಣವಮ್ ।
ದಕ್ಷಿಣಂ ತತ್ರ ಕನ್ಯಾಖ್ಯಾಂ ದುರ್ಗಾಂ ದೇವೀಂ ದದರ್ಶ ಸಃ ॥
ಅನುವಾದ
ಅಲ್ಲಿ ವಿರಾಜಮಾನರಾದ ಅಗಸ್ತ್ಯ ಮುನಿಗಳನ್ನು ಅಭಿವಾದನ - ನಮಸ್ಕಾರಮಾಡಿ, ಅವರಿಂದ ಆಶೀರ್ವಾದ-ಅನುಜ್ಞೆಯನ್ನು ಪಡೆದು ಬಲರಾಮನು ದಕ್ಷಿಣ ಸಮುದ್ರದ ಯಾತ್ರೆಗೈದನು. ಅಲ್ಲಿ ಅವನು ದುರ್ಗಾದೇವಿಯನ್ನು ಕನ್ಯಾಕುಮಾರಿಯ ರೂಪದಲ್ಲಿ ದರ್ಶಿಸಿದನು. ॥17॥
ಮೂಲಮ್
(ಶ್ಲೋಕ-18)
ತತಃ ಾಲ್ಗುನಮಾಸಾದ್ಯ ಪಂಚಾಪ್ಸರಸಮುತ್ತಮಮ್ ।
ವಿಷ್ಣುಃ ಸನ್ನಿಹಿತೋ ಯತ್ರ ಸ್ನಾತ್ವಾ ಸ್ಪರ್ಶದ್ಗವಾಯುತಮ್ ॥
ಅನುವಾದ
ಅನಂತರ ಅವನು ಫಾಲ್ಗುಣತೀರ್ಥವಾದ ಅನಂತಶಯನ ಕ್ಷೇತ್ರಕ್ಕೆ ಹೋಗಿ ಅಲ್ಲಿಯ ಪಂಚಾಪ್ಸರಸ ತೀರ್ಥದಲ್ಲಿ ಸ್ನಾನ ಮಾಡಿದನು. ಆ ತೀರ್ಥದಲ್ಲಿ ಭಗವಾನ್ ವಿಷ್ಣುವಿನ ಸದಾ ಸಾನ್ನಿಧ್ಯವಿರುತ್ತದೆ. ಅಲ್ಲಿ ಬಲರಾಮನು ಹತ್ತು ಸಾವಿರ ಗೋವುಗಳನ್ನು ಬ್ರಾಹ್ಮಣರಿಗೆ ದಾನ ಮಾಡಿದನು. ॥18॥
ಮೂಲಮ್
(ಶ್ಲೋಕ-19)
ತತೋಭಿವ್ರಜ್ಯ ಭಗವಾನ್ ಕೇರಲಾಂಸ್ತು ತ್ರಿಗರ್ತಕಾನ್ ।
ಗೋಕರ್ಣಾಖ್ಯಂ ಶಿವಕ್ಷೇತ್ರಂ ಸಾನ್ನಿಧ್ಯಂ ಯತ್ರ ಧೂರ್ಜಟೇಃ ॥
ಅನುವಾದ
ಅನಂತರ ಭಗವಾನ್ ಬಲರಾಮನು ಅಲ್ಲಿಂದ ಹೊರಟು ಕೇರಳ ಮತ್ತು ತ್ರಿಗರ್ತದೇಶಗಳನ್ನು ಸಂಚರಿಸಿ ಸದಾ- ಸರ್ವದಾ ಶ್ರೀಶಂಕರನ ಸಾನ್ನಿಧ್ಯವಿರುವ ಗೋಕರ್ಣಕ್ಷೇತ್ರಕ್ಕೆ ಹೋಗಿ ಮಹಾಬಲೇಶ್ವರನದರ್ಶನ ಮಾಡಿದನು. ॥19॥
ಮೂಲಮ್
(ಶ್ಲೋಕ-20)
ಆರ್ಯಾಂ ದ್ವೈಪಾಯನೀಂ ದೃಷ್ಟ್ವಾ ಶೂರ್ಪಾರಕಮಗಾದ್ಬಲಃ ।
ತಾಪೀಂ ಪಯೋಷ್ಣೀಂ ನಿರ್ವಿಂಧ್ಯಾಮುಪಸ್ಪೃಶ್ಯಾಥ ದಂಡಕಮ್ ॥
ಅನುವಾದ
ಅಲ್ಲಿಂದ ಮುಂದೆ ನೀರಿನಿಂದಾವೃತವಾದ ದ್ವೀಪದಲ್ಲಿ ನಿವಾಸ ಮಾಡಿದ್ದ ಆರ್ಯಾ ದುರ್ಗೆಯ ದರ್ಶನಮಾಡಲು ಕೊಂಕಣ ಪ್ರದೇಶಕ್ಕೆ ಹೋದನು ಮತ್ತೆ ಅಲ್ಲಿಂದ ಹೊರಟು ಶೂರ್ಪಾರಕ ಕ್ಷೇತ್ರದ ಯಾತ್ರೆ ಮಾಡಿದನು. ಬಳಿಕ ತಾಪೀ, ಪಯೋಷ್ಣಿ ಮತ್ತು ನಿರ್ವಿಂಧ್ಯಾ ನದಿಗಳಲ್ಲಿ ಸ್ನಾನಮಾಡಿ ದಂಡಕಾರಣ್ಯಕ್ಕೆ ಹೋದನು. ॥20॥
ಮೂಲಮ್
(ಶ್ಲೋಕ-21)
ಪ್ರವಿಶ್ಯ ರೇವಾಮಗಮದ್ಯತ್ರ ಮಾಹಿಷ್ಮತೀ ಪುರೀ ।
ಮನುತೀರ್ಥಮುಪಸ್ಪೃಶ್ಯ ಪ್ರಭಾಸಂ ಪುನರಾಗಮತ್ ॥
ಅನುವಾದ
ಅಲ್ಲಿಂದ ನರ್ಮದಾ ತೀರದಲ್ಲಿರುವ ಮಾಹಿಷ್ಮತಿಪುರಿಗೆ ಹೋಗಿ ಅಲ್ಲಿ ಮನುತೀರ್ಥದಲ್ಲಿ ಸ್ನಾನಮಾಡಿ ಮತ್ತೆ ಪ್ರಭಾಸ ಕ್ಷೇತ್ರಕ್ಕೆ ಹೊರಟುಬಂದನು. ॥21॥
ಮೂಲಮ್
(ಶ್ಲೋಕ-22)
ಶ್ರುತ್ವಾ ದ್ವಿಜೈಃ ಕಥ್ಯಮಾನಂ ಕುರುಪಾಂಡವಸಂಯುಗೇ ।
ಸರ್ವರಾಜನ್ಯನಿಧನಂ ಭಾರಂ ಮೇನೇ ಹೃತಂ ಭುವಃ ॥
ಅನುವಾದ
ಅಲ್ಲಿ ಅವನು ಕೌರವ-ಪಾಂಡವರ ಯುದ್ಧದಲ್ಲಿ ಅಧಿಕಾಂಶ ಕ್ಷತ್ರಿಯರ ಸಂಹಾರವಾಗಿದೆ ಎಂದು ಬ್ರಾಹ್ಮಣರಿಂದ ಕೇಳಿದನು. ಈಗ ಬಹಳಷ್ಟು ಭೂಭಾರವು ತಗ್ಗಿತೆಂದು ಅವನು ಅಂದುಕೊಂಡನು.॥22॥
ಮೂಲಮ್
(ಶ್ಲೋಕ-23)
ಸ ಭೀಮದುರ್ಯೋಧನಯೋರ್ಗದಾಭ್ಯಾಂ ಯುಧ್ಯತೋರ್ಮೃಧೇ ।
ವಾರಯಿಷ್ಯನ್ವಿನಶನಂ ಜಗಾಮ ಯದುನಂದನಃ ॥
ಅನುವಾದ
ಮಹಾಭಾರತ ಸಂಗ್ರಾಮದ ಕೊನೆಯದಿನ ರಣರಂಗದಲ್ಲಿ ಭೀಮಸೇನ ಮತ್ತು ದುರ್ಯೋಧನರ ಗದಾಯುದ್ಧ ನಡೆಯುತ್ತಿದ್ದಾಗಲೇ ಬಲರಾಮನು ಅವರನ್ನು ತಡೆಯಲು ಕುರುಕ್ಷೇತ್ರಕ್ಕೆ ಹೋದನು. ॥23॥
ಮೂಲಮ್
(ಶ್ಲೋಕ-24)
ಯುಧಿಷ್ಠಿರಸ್ತು ತಂ ದೃಷ್ಟ್ವಾ ಯವೌ ಕೃಷ್ಣಾರ್ಜುನಾವಪಿ ।
ಅಭಿವಾದ್ಯಾಭವಂಸ್ತೂಷ್ಣೀಂ ಕಿಂವಿವಕ್ಷುರಿಹಾಗತಃ ॥
ಅನುವಾದ
ಬಲರಾಮನನ್ನು ನೋಡಿ ಮಹಾರಾಜ ಯುಧಿಷ್ಠಿರ, ನಕುಲ, ಸಹದೇವ, ಭಗವಾನ್ ಶ್ರೀಕೃಷ್ಣ, ಅರ್ಜುನ - ಇವರೆಲ್ಲರೂ ಅವನಿಗೆ ನಮಸ್ಕಾರ ಮಾಡಿ ಸುಮ್ಮನೇ ಇದ್ದರು. ಇವನು ಏನು ಹೇಳಲು ಇಲ್ಲಿಗೆ ಬಂದಿರುವನೋ ಎಂದು ಹೆದರುತ್ತಲೇ ಮನಸ್ಸಿನಲ್ಲಿ ಯೋಚಿಸುತ್ತಿದ್ದರು. ॥24॥
ಮೂಲಮ್
(ಶ್ಲೋಕ-25)
ಗದಾಪಾಣೀ ಉಭೌ ದೃಷ್ಟ್ವಾ ಸಂರಬ್ಧೌ ವಿಜಯೈಷಿಣೌ ।
ಮಂಡಲಾನಿ ವಿಚಿತ್ರಾಣಿ ಚರಂತಾವಿದಮಬ್ರವೀತ್ ॥
ಅನುವಾದ
ಆ ಸಮಯದಲ್ಲಿ ಭೀಮಸೇನ ಮತ್ತು ದುರ್ಯೋಧನ ಇಬ್ಬರೂ ಕೈಗಳಲ್ಲಿ ಗದೆಗಳನ್ನು ಹಿಡಿದುಕೊಂಡು ಕ್ರೋಧಾಭಿ ಭೂತರಾಗಿ ಒಬ್ಬರು ಮತ್ತೊಬ್ಬರನ್ನು ಗೆಲ್ಲಬೇಕೆಂಬ ಆಶಯದಿಂದ ಮಂಡಲಾಕಾರವಾಗಿ ಹೆಜ್ಜೆಯನ್ನಿಡುತ್ತಾ ನಾನಾ ರೀತಿಯ ಪಟ್ಟುಗಳನ್ನು ಪ್ರಯೋಗಿಸುತ್ತಾ ಕಾದಾಡುತ್ತಿದ್ದರು. ಅವರನ್ನು ನೋಡಿ ಬಲರಾಮನು ಹೇಳಿದನು - ॥25॥
ಮೂಲಮ್
(ಶ್ಲೋಕ-26)
ಯುವಾಂ ತುಲ್ಯಬಲೌ ವೀರೌ ಹೇ ರಾಜನ್ ಹೇ ವೃಕೋದರ ।
ಏಕಂ ಪ್ರಾಣಾಧಿಕಂ ಮನ್ಯೇ ಉತೈಕಂ ಶಿಕ್ಷಯಾಧಿಕಮ್ ॥
ಅನುವಾದ
ಭೀಮ ದುರ್ಯೋಧನರೇ! ನೀವಿಬ್ಬರು ವೀರರಿದ್ದೀರಿ. ನಿಮ್ಮಿಬ್ಬರಲ್ಲಿಯೂ ಬಲ-ಪೌರುಷಗಳು ಸಮಾನವಾಗಿವೆ. ಭೀಮಸೇನನಲ್ಲಿ ಬಲವು ಹೆಚ್ಚಾಗಿದೆ ಮತ್ತು ದುರ್ಯೋಧನನು ಗದಾಯುದ್ಧದಲ್ಲಿ ಹೆಚ್ಚಿನ ಶಿಕ್ಷಣ ಪಡೆದಿರುವನೆಂದು ನಾನು ತಿಳಿಯುತ್ತೇನೆ. ॥26॥
ಮೂಲಮ್
(ಶ್ಲೋಕ-27)
ತಸ್ಮಾದೇಕತರಸ್ಯೇಹ ಯುವಯೋಃ ಸಮವೀರ್ಯಯೋಃ ।
ನ ಲಕ್ಷ್ಯತೇ ಜಯೋನ್ಯೋ ವಾ ವಿರಮತ್ವಲೋ ರಣಃ ॥
ಅನುವಾದ
ಆದ್ದರಿಂದ ನಿಮ್ಮಂತಹ ಸಮಾನ ಬಲಶಾಲಿಗಳಲ್ಲಿ ಯಾರೇ ಒಬ್ಬನ ವಿಜಯ ಅಥವಾ ಪರಾಜಯವಾಗುವುದು ಕಾಣುವುದಿಲ್ಲ. ಆದ್ದರಿಂದ ನೀವು ವ್ಯರ್ಥವಾಗಿ ಯುದ್ಧಮಾಡ ಬೇಡಿ. ಈಗ ಇದನ್ನು ನಿಲ್ಲಿಸಿ ಬಿಡಿರಿ. ॥27॥
ಮೂಲಮ್
(ಶ್ಲೋಕ-28)
ನ ತದ್ವಾಕ್ಯಂ ಜಗೃಹತುರ್ಬದ್ಧವೈರೌ ನೃಪಾರ್ಥವತ್ ।
ಅನುಸ್ಮರಂತಾವನ್ಯೋನ್ಯಂ ದುರುಕ್ತಂ ದುಷ್ಕೃತಾನಿ ಚ ॥
ಅನುವಾದ
ಪರೀಕ್ಷಿತನೇ! ಬಲರಾಮನ ಮಾತು ಇಬ್ಬರಿಗೂ ಹಿತಕರವಾಗಿತ್ತು. ಆದರೆ ಅವರಿಬ್ಬರ ವೈರಭಾವವು ಅತೀವದೃಢವಾಗಿದ್ದರಿಂದ ಅವರು ಬಲರಾಮನ ಮಾತನ್ನು ಪುರಸ್ಕರಿಸಲಿಲ್ಲ. ಅವರು ಹಿಂದಿನ ದುರ್ವ್ಯವಹಾರಗಳನ್ನು ನೆನೆಯುತ್ತಾ ಕಟುಮಾತುಗಳನ್ನಾಡುತ್ತಾ ಉನ್ಮತ್ತರಾಗಿಯೇ ಇದ್ದರು. ॥28॥
ಮೂಲಮ್
(ಶ್ಲೋಕ-29)
ದಿಷ್ಟಂ ತದನುಮನ್ವಾನೋ ರಾಮೋ ದ್ವಾರವತೀಂ ಯಯೌ ।
ಉಗ್ರಸೇನಾದಿಭಿಃ ಪ್ರೀತೈರ್ಜ್ಞಾತಿಭಿಃ ಸಮುಪಾಗತಃ ॥
ಅನುವಾದ
ಭಗವಾನ್ ಬಲರಾಮನು - ‘ಇವರ ಪ್ರಾರಬ್ಧವೇ ಹೀಗಿದೆ’ ಎಂದು ನಿಶ್ಚಯಿಸಿ, ಈ ವಿಷಯದಲ್ಲಿ ಆಗ್ರಹ ಮಾಡದೆ ದ್ವಾರಕೆಗೆ ಹೊರಟು ಹೋದನು. ದ್ವಾರಕೆಯಲ್ಲಿ ಉಗ್ರಸೇನರೇ ಮುಂತಾದ ಹಿರಿಯರೂ ಹಾಗೂ ಇತರ ಸಂಬಂಧಿಗಳು ಅತ್ಯಂತ ಪ್ರೇಮದಿಂದ ಮುಂದೆ ಬಂದು ಬಲರಾಮನನ್ನು ಸ್ವಾಗತಿಸಿದರು. ॥29॥
ಮೂಲಮ್
(ಶ್ಲೋಕ-30)
ತಂ ಪುನರ್ನೈಮಿಷಂ ಪ್ರಾಪ್ತಮೃಷಯೋಯಾಜಯನ್ಮುದಾ ।
ಕ್ರತ್ವಂಗಂ ಕ್ರತುಭಿಃ ಸರ್ವೈರ್ನಿವೃತ್ತಾಖಿಲವಿಗ್ರಹಮ್ ॥
ಅನುವಾದ
ಅಲ್ಲಿಂದ ಪುನಃ ಬಲರಾಮನು ನೈಮಿಷಾರಣ್ಯ ಕ್ಷೇತ್ರಕ್ಕೆ ಹೋದನು. ಅಲ್ಲಿಯ ಋಷಿಗಳು ಯುದ್ಧಾದಿಗಳಿಂದ ನಿವೃತ್ತನಾದ ಬಲರಾಮನಿಂದ ತುಂಬು ಪ್ರೇಮದಿಂದ ಎಲ್ಲ ಪ್ರಕಾರದ ಯಜ್ಞಗಳನ್ನು ಮಾಡಿಸಿದರು. ಪರೀಕ್ಷಿತನೇ! ನಿಜಹೇಳಬೇಕೆಂದರೆ, ಇರುವ ಎಲ್ಲ ಯಜ್ಞಗಳು ಬಲರಾಮನ ಅಂಗಭೂತವೇ ಆಗಿವೆ. ಅದಕ್ಕಾಗಿ ಅವನ ಈ ಯಜ್ಞಾನುಷ್ಠಾನವು ಕೇವಲ ಲೋಕಸಂಗ್ರಹಕ್ಕಾಗಿಯೇ ಇತ್ತು. ॥30॥
ಮೂಲಮ್
(ಶ್ಲೋಕ-31)
ತೇಭ್ಯೋ ವಿಶುದ್ಧವಿಜ್ಞಾನಂ ಭಗವಾನ್ ವ್ಯತರದ್ವಿಭುಃ ।
ಯೇನೈವಾತ್ಮನ್ಯದೋ ವಿಶ್ವಮಾತ್ಮಾನಂ ವಿಶ್ವಗಂ ವಿದುಃ ॥
ಅನುವಾದ
ಸರ್ವಸಮರ್ಥನಾದ ಬಲಭದ್ರನು ಆ ಋಷಿಗಳಿಗೆ ವಿಶುದ್ಧ ತತ್ತ್ವಜ್ಞಾನದ ಉಪದೇಶ ಮಾಡಿದನು. ಇದರಿಂದ ಆ ಜನರೆಲ್ಲರೂ ಈ ಸಮಸ್ತ ವಿಶ್ವವು ತನ್ನಲ್ಲಿ ಮತ್ತು ತನ್ನನ್ನು ಸಮಸ್ತ ವಿಶ್ವದಲ್ಲಿ ಅನುಭವಿಸತೊಡಗಿದರು. ॥31॥
ಮೂಲಮ್
(ಶ್ಲೋಕ-32)
ಸ್ವಪತ್ನ್ಯಾವಭೃಥಸ್ನಾತೋ ಜ್ಞಾತಿಬಂಧುಸುಹೃದ್ವ ತಃ ।
ರೇಜೇ ಸ್ವಜ್ಯೋತ್ಸ್ನ ಯೇವೇಂದುಃ ಸುವಾಸಾಃ ಸುಷ್ಠ್ ವಲಂಕೃತಃ ॥
ಅನುವಾದ
ಅನಂತರ ಬಲರಾಮನು ತನ್ನ ಪತ್ನೀ ರೇವತಿಯೊಂದಿಗೆ ಯಜ್ಞಾಂತ ಸ್ನಾನ (ಅವಭೃತ) ಮಾಡಿ, ಸುಂದರವಾದ ವಸ್ತ್ರಾಲಂಕಾರಗಳಿಂದ ವಿಭೂಷಿತನಾಗಿ ಸ್ವಜನ-ಸಂಬಂಧಿಗಳೊಡನೆ-ತನ್ನ ಬೆಳದಿಂಗಳಿಂದ ನಕ್ಷತ್ರಗಳೊಡನೆ ಬೆಳಗುವ ಚಂದ್ರನಂತೆ ಶೋಭಾಯಮಾನನಾದನು. ॥32॥
ಮೂಲಮ್
(ಶ್ಲೋಕ-33)
ಈದೃಗ್ವಿಧಾನ್ಯಸಂಖ್ಯಾನಿ ಬಲಸ್ಯ ಬಲಶಾಲಿನಃ ।
ಅನಂತಸ್ಯಾಪ್ರಮೇಯಸ್ಯ ಮಾಯಾಮರ್ತ್ಯಸ್ಯ ಸಂತಿ ಹಿ ॥
ಅನುವಾದ
ಪರೀಕ್ಷಿತನೇ! ಭಗವಾನ್ ಬಲರಾಮನು ಸಾಕ್ಷಾತ್ ಅನಂತನೇ ಆಗಿದ್ದಾನೆ. ಅವನ ಸ್ವರೂಪವು ಮನ-ವಚನಗಳಿಗೆ ಅತೀತವಾದುದು. ಅವನು ಲೀಲೆಗಾಗಿಯೆ ಮನುಷ್ಯ ಶರೀರವನ್ನು ಧರಿಸಿರುವನು. ಆ ಮಹಾಬಲಶಾಲಿಯಾದ ಬಲರಾಮನ ಇಂತಹ ಅನಂತ ಚರಿತ್ರೆಗಳನ್ನು ಯಾರು ತಾನೇ ಎಣಿಸಬಲ್ಲರು? ॥33॥
ಮೂಲಮ್
(ಶ್ಲೋಕ-34)
ಯೋನುಸ್ಮರೇತ ರಾಮಸ್ಯ ಕರ್ಮಾಣ್ಯದ್ಭುತಕರ್ಮಣಃ ।
ಸಾಯಂ ಪ್ರಾತರನಂತಸ್ಯ ವಿಷ್ಣೋಃ ಸ ದಯಿತೋ ಭವೇತ್ ॥
ಅನುವಾದ
ಅನಂತನೂ, ಸರ್ವವ್ಯಾಪಕನೂ, ಆದ ಅದ್ಭುತ ಕರ್ಮಗಳನ್ನು ಮಾಡಿದ ಭಗವಾನ್ ಬಲರಾಮನ ಚರಿತ್ರೆಗಳನ್ನು ಸಾಯಂಕಾಲ-ಪ್ರಾತಃಕಾಲಗಳಲ್ಲಿ ಸ್ಮರಿಸುವ ಮನುಷ್ಯನು ಭಗವಂತನಿಗೆ ಅತ್ಯಂತ ಪ್ರಿಯನೆನಿಸುವನು. ॥34॥
ಅನುವಾದ (ಸಮಾಪ್ತಿಃ)
ಎಂಭತ್ತನೆಯ ಅಧ್ಯಾಯವು ಮುಗಿಯಿತು. ॥80॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ
ಬಲದೇವತೀರ್ಥಯಾತ್ರಾ ನಿರೂಪಣಂ ನಾಮ ಏಕೋನಾಶೀತಿತಮೋಧ್ಯಾಯಃ ॥79॥