[ಏಪ್ಪತ್ತೇಂಟನೇಯ ಅಧ್ಯಾಯ]
ಭಾಗಸೂಚನಾ
ದಂತವಕ್ತ್ರ-ವಿದೂರಥ ಸಂಹಾರ ತೀರ್ಥಯಾತ್ರೆಯಲ್ಲಿ ಬಲರಾಮನಿಂದ ಸೂತಪುರಾಣಿಕರ ವಧೆ
ಮೂಲಮ್
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಶಿಶುಪಾಲಸ್ಯ ಶಾಲ್ವಸ್ಯ ಪೌಂಡ್ರಕಸ್ಯಾಪಿ ದುರ್ಮತಿಃ ।
ಪರಲೋಕಗತಾನಾಂ ಚ ಕುರ್ವನ್ ಪಾರೋಕ್ಷ್ಯಸೌಹೃದಮ್ ॥
(ಶ್ಲೋಕ-2)
ಏಕಃ ಪದಾತಿಃ ಸಂಕ್ರುದ್ಧೋ ಗದಾಪಾಣಿಃ ಪ್ರಕಂಪಯನ್ ।
ಪದ್ಭ್ಯಾಮಿಮಾಂ ಮಹಾರಾಜ ಮಹಾಸತ್ತ್ವೋ ವ್ಯದೃಶ್ಯತ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಶಿಶುಪಾಲ, ಶಾಲ್ವ, ಪೌಂಡ್ರಕ ಮೊದಲಾದವರು ಪರಲೋಕವನ್ನು ಸೇರಿದುದರಿಂದ ಅವರ ಮಿತ್ರಋಣವನ್ನು ತೀರಿಸಬೇಕೆಂದು ದುರ್ಮತಿಯಾದ ದಂತವಕ್ತ್ರನು ಒಬ್ಬಂಟಿಗನಾಗಿ ಕಾಲ್ನಡಿಗೆಯಿಂದ ಯುದ್ಧಭೂಮಿಗೆ ಆಗಮಿಸಿದನು. ಆಗ ಮಹಾಶಕ್ತಿಶಾಲಿಯಾದ ಅವನು ಅತ್ಯಂತ ಕ್ರುದ್ಧನಾಗಿ ಗದೆಯನ್ನೆತ್ತಿಕೊಂಡು, ಗಡುಸಾದ ಹೆಜ್ಜೆಗಳಿಂದ ಭೂಮಿಯನ್ನು ನಡುಗಿಸುತ್ತಾ ಬರುತ್ತಿರುವುದನ್ನು ಜನರು ನೋಡಿದರು. ॥1-2॥
ಮೂಲಮ್
(ಶ್ಲೋಕ-3)
ತಂ ತಥಾಯಾಂತಮಾಲೋಕ್ಯ ಗದಾಮಾದಾಯ ಸತ್ವರಃ ।
ಅವಪ್ಲುತ್ಯ ರಥಾತ್ ಕೃಷ್ಣಃ ಸಿಂಧುಂ ವೇಲೇವ ಪ್ರತ್ಯಧಾತ್ ॥
ಅನುವಾದ
ಹೀಗೆ ತನ್ನೆಡೆಗೆ ಬರುತ್ತಿರುವ ದಂತವಕ್ತ್ರನನ್ನು ನೋಡಿ ಭಗವಾನ್ ಶ್ರೀಕೃಷ್ಣನು ಶೀಘ್ರವಾಗಿ ಗದೆಯನ್ನೆತ್ತಿಕೊಂಡು ರಥದಿಂದ ಧುಮುಕಿ-ಸಮುದ್ರದ ಅಲೆಗಳನ್ನು ತೀರವು ತಡೆದು ನಿಲ್ಲಿಸುವಂತೆ ಅವನನ್ನು ತಡೆದು ನಿಲ್ಲಿಸಿದನು. ॥3॥
ಮೂಲಮ್
(ಶ್ಲೋಕ-4)
ಗದಾಮುದ್ಯಮ್ಯ ಕಾರೂಷೋ ಮುಕುಂದಂ ಪ್ರಾಹ ದುರ್ಮದಃ ।
ದಿಷ್ಟ್ಯಾ ದಿಷ್ಟ್ಯಾ ಭವಾನದ್ಯ ಮಮ ದೃಷ್ಟಿಪಥಂ ಗತಃ ॥
ಅನುವಾದ
ಶ್ರೀಕೃಷ್ಣನು ಎದುರಿಗೆ ನಿಂತಿರುವುದನ್ನು ನೋಡಿ ದುರ್ಮದನಾದ ಕರೂಷ ನರೇಶನಾದ ದಂತವಕನು ಗದೆಯನ್ನು ಮೇಲೆತ್ತಿಕೊಂಡು ಶ್ರೀಕೃಷ್ಣನಿಗೆ ಹೇಳಿದನು - ಇಂದು ನೀನು ಸೌಭಾಗ್ಯವಶದಿಂದ ನನ್ನ ಕಣ್ಣಿಗೆ ಬಿದ್ದಿರುವೆ. ॥4॥
ಮೂಲಮ್
(ಶ್ಲೋಕ-5)
ತ್ವಂ ಮಾತುಲೇಯೋ ನಃ ಕೃಷ್ಣ ಮಿತ್ರಧ್ರುಙ್ಮಾಂ ಜಿಘಾಂಸಸಿ ।
ಅತಸ್ತ್ವಾಂ ಗದಯಾ ಮಂದ ಹನಿಷ್ಯೇ ವಜ್ರಕಲ್ಪಯಾ ॥
ಅನುವಾದ
ಕೃಷ್ಣ! ನೀನು ನನ್ನ ಮಾವನ ಮಗನೇ ಆಗಿರುವೆ. ಆದ್ದರಿಂದ ನಿನ್ನನ್ನು ಕೊಲ್ಲಬಾರದು. ಆದರೆ ಅಂದು ನೀನು ನನ್ನ ಮಿತ್ರನನ್ನು ಕೊಂದುಹಾಕಿದೆ. ಮತ್ತೆ ಇಂದು ನನ್ನನ್ನು ಕೊಲ್ಲಲೆಳೆಸುವೆ. ಅದಕ್ಕಾಗಿ ಎಲೈ ಮೂರ್ಖನೇ! ಈಗ ನಾನು ನಿನ್ನನ್ನು ನನ್ನ ವಜ್ರಕರ್ಕಶವಾದ ಗದೆಯಿಂದ ಸಂಹರಿಸಿಬಿಡುತ್ತೇನೆ. ॥5॥
ಮೂಲಮ್
(ಶ್ಲೋಕ-6)
ತರ್ಹ್ಯಾನೃಣ್ಯಮುಪೈಮ್ಯಜ್ಞ ಮಿತ್ರಾಣಾಂ ಮಿತ್ರವತ್ಸಲಃ ।
ಬಂಧುರೂಪಮರಿಂ ಹತ್ವಾ ವ್ಯಾಧಿಂ ದೇಹಚರಂ ಯಥಾ ॥
ಅನುವಾದ
ಮಂದಮತಿಯೇ! ಹಾಗೆ ನೋಡಿದರೆ ನೀನು ನನಗೆ ಸಂಬಂಧಿಯೇ ಆಗಿರುವೆ. ಆದರೆ ಶರೀರದಲ್ಲಿ ಇರುವ ಯಾವುದಾದರೂ ರೋಗದಂತೆ ನೀನು ಶತ್ರುವೇ ಆಗಿರುವೆ. ನಾನು ನನ್ನ ಮಿತ್ರರನ್ನು ತುಂಬಾ ಪ್ರೀತಿಸುತ್ತೇನೆ. ಅವರ ಋಣ ನನ್ನ ಮೇಲಿದೆ. ಈಗ ನಿನ್ನನ್ನು ಕೊಂದು ಅದನ್ನು ತೀರಿಸಿಕೊಳ್ಳುವೆ. ॥6॥
ಮೂಲಮ್
(ಶ್ಲೋಕ-7)
ಏವಂ ರೂಕ್ಷೈಸ್ತುದನ್ ವಾಕ್ಯೈಃ ಕೃಷ್ಣಂ ತೋತೈರಿವ ದ್ವಿಪಮ್ ।
ಗದಯಾ ತಾಡಯನ್ಮೂರ್ಧ್ನಿ ಸಿಂಹವದ್ವ್ಯನದಚ್ಚ ಸಃ ॥
ಅನುವಾದ
ಮಾವುತನು ಅಂಕುಶದಿಂದ ತಿವಿದು ಆನೆಯನ್ನು ಕೆರಳಿಸುವಂತೆ ದಂತವಕ್ತ್ರನು ತನ್ನ ಕಠೋರವಾದ ಮಾತುಗಳಿಂದ ಶ್ರೀಕೃಷ್ಣನನ್ನು ಕೆಣಕಿದನು ಹಾಗೂ ವೇಗವಾಗಿ ಅವನ ತಲೆಯಮೇಲೆ ಗದೆಯಿಂದ ಹೊಡೆದು ಸಿಂಹದಂತೆ ಗರ್ಜಿಸಿದನು. ॥7॥
ಮೂಲಮ್
(ಶ್ಲೋಕ-8)
ಗದಯಾಭಿಹತೋಪ್ಯಾಜೌ ನ ಚಚಾಲ ಯದೂದ್ವಹಃ ।
ಕೃಷ್ಣೋಪಿ ತಮಹನ್ಗುರ್ವ್ಯಾ ಕೌಮೋದಕ್ಯಾ ಸ್ತನಾಂತರೇ ॥
ಅನುವಾದ
ರಣರಂಗದಲ್ಲಿ ಗದೆಯ ಏಟನ್ನು ತಿಂದರೂ ಭಗವಾನ್ ಶ್ರೀಕೃಷ್ಣನು ಹಿಂದಕ್ಕೆ ಸರಿಯದೆ ಸ್ಥಿರವಾಗಿ ನಿಂತು ತನ್ನ ಅತ್ಯಂತ ಭಾರವಾಗಿದ್ದ ಕೌಮೋದಕೀ ಗದೆಯಿಂದ ದಂತವಕನ ವಕ್ಷಃಸ್ಥಳದಲ್ಲಿ ರಭಸದಿಂದ ಪ್ರಹರಿಸಿದನು. ॥8॥
ಮೂಲಮ್
(ಶ್ಲೋಕ-9)
ಗದಾನಿರ್ಭಿನ್ನ ಹೃದಯ ಉದ್ವಮನ್ರುಧಿರಂ ಮುಖಾತ್ ।
ಪ್ರಸಾರ್ಯ ಕೇಶಬಾಹ್ವಂಘ್ರೀಂಧರಣ್ಯಾಂ ನ್ಯಪತದ್ವ್ಯಸುಃ ॥
ಅನುವಾದ
ಗದಾಘಾತದಿಂದ ದಂತವಕ್ತ್ರನ ಎದೆಯೊಡೆದು ರಕ್ತವನ್ನು ಕಾರತೊಡಗಿದನು. ಕೂದಲುಗಳು ಕೆದರಿಹೋಯಿತು. ಬಾಹುಗಳನ್ನು ಚಾಚಿ ಗತಪ್ರಾಣನಾಗಿ ಅವನು ಭೂಮಿಗೊರಗಿದನು. ॥9॥
ಮೂಲಮ್
(ಶ್ಲೋಕ-10)
ತತಃ ಸೂಕ್ಷ್ಮತರಂ ಜ್ಯೋತಿಃ ಕೃಷ್ಣಮಾವಿಶದದ್ಭುತಮ್ ।
ಪಶ್ಯತಾಂ ಸರ್ವಭೂತಾನಾಂ ಯಥಾ ಚೈದ್ಯವಧೇ ನೃಪ ॥
ಪರೀಕ್ಷಿತನೇ! ಶಿಶುಪಾಲನ ವಧೆಯ ಸಮಯದಲ್ಲಿ ಆದಂತೆಯೇ, ಗತಪ್ರಾಣನಾದ ದಂತವಕ್ತ್ರನ ಶರೀರದಿಂದ ಅತ್ಯಂತ ಸೂಕ್ಷ್ಮವಾದ ಜ್ಯೋತಿಯೊಂದು ಹೊರಬಂದು ಎಲ್ಲರೂ ನೋಡುತ್ತಿರುವಂತೆಯೇ ಅದು ವಿಚಿತ್ರ ರೀತಿಯಿಂದ ಭಗವಾನ್ ಶ್ರೀಕೃಷ್ಣನಲ್ಲಿ ಸೇರಿಹೋಯಿತು. ॥10॥
(ಶ್ಲೋಕ-11)
ವಿದೂರಥಸ್ತು ತದ್ಭ್ರಾತಾ ಭ್ರಾತೃಶೋಕಪರಿಪ್ಲುತಃ ।
ಆಗಚ್ಛದಸಿಚರ್ಮಭ್ಯಾಮುಚ್ಛ್ವಸಂಸ್ತಜ್ಜಿಘಾಂಸಯಾ ॥
ಅನುವಾದ
ವಿದೂರಥನೆಂಬುವನು ದಂತವಕ್ತ್ರನ ತಮ್ಮನು. ಅವನು ಅಣ್ಣನ ಮರಣದಿಂದಾಗಿ ಅತ್ಯಂತ ಶೋಕಾಕುಲನಾಗಿದ್ದನು. ಈಗವನು ಬಹಳವಾಗಿ ಕ್ರುದ್ಧನಾಗಿ ದೀರ್ಘವಾಗಿ ನಿಟ್ಟುಸಿರು ಬಿಡುತ್ತಾ ಕೈಯಲ್ಲಿ ಕತ್ತಿ-ಗುರಾಣಿಗಳನ್ನು ಹಿಡಿದು ಶ್ರೀಕೃಷ್ಣನನ್ನು ಕೊಂದುಹಾಕುವುದಕ್ಕಾಗಿ ಬಂದನು. ॥11॥
ಮೂಲಮ್
(ಶ್ಲೋಕ-12)
ತಸ್ಯ ಚಾಪತತಃ ಕೃಷ್ಣಶ್ಚಕ್ರೇಣ ಕ್ಷುರನೇಮಿನಾ ।
ಶಿರೋ ಜಹಾರ ರಾಜೇಂದ್ರ ಸಕಿರೀಟಂ ಸಕುಂಡಲಮ್ ॥
(ಶ್ಲೋಕ-13)
ಏವಂ ಸೌಭಂ ಚ ಶಾಲ್ವಂ ಚ ದಂತವಕಂ ಸಹಾನುಜಮ್ ।
ಹತ್ವಾ ದುರ್ವಿಷಹಾನನ್ಯೈರೀಡಿತಃ ಸುರಮಾನವೈಃ ॥
(ಶ್ಲೋಕ-14)
ಮುನಿಭಿಃ ಸಿದ್ಧಗಂಧರ್ವೈರ್ವಿದ್ಯಾಧರಮಹೋರಗೈಃ ।
ಅಪ್ಸರೋಭಿಃ ಪಿತೃಗಣೈರ್ಯಕ್ಷೈಃ ಕಿನ್ನರಚಾರಣೈಃ ॥
(ಶ್ಲೋಕ-15)
ಉಪಗೀಯಮಾನವಿಜಯಃ ಕುಸುಮೈರಭಿವರ್ಷಿತಃ ।
ವೃತಶ್ಚ ವೃಷ್ಣಿಪ್ರವರೈರ್ವಿವೇಶಾಲಂಕೃತಾಂ ಪುರೀಮ್ ॥
ಅನುವಾದ
ರಾಜೇಂದ್ರನೇ! ಅವನು ತನ್ನ ಮೇಲೆ ಪ್ರಹಾರ ಮಾಡಲು ಬಯಸುತ್ತಿರುವುದನ್ನು ನೋಡಿದ ಭಗವಾನ್ ಶ್ರೀಕೃಷ್ಣನು ಕತ್ತಿಯಂತೆ ಹರಿತವಾದ ಅಂಚುಗಳುಳ್ಳ ಚಕ್ರಾಯುಧದಿಂದ ಕಿರೀಟ-ಕುಂಡಲಗಳ ಸಹಿತವಾಗಿ ಅವನ ತಲೆಯನ್ನು ಕತ್ತರಿಸಿ ಹಾಕಿದನು. ॥12॥ ಈ ಪ್ರಕಾರವಾಗಿ ಶ್ರೀಕೃಷ್ಣನು ಇತರರಿಂದ ಎದುರಿಸಲು ಅಸಾಧ್ಯರಾದ ಶಾಲ್ವನನ್ನೂ ಅವನ ಸೌಭ ವಿಮಾನವನ್ನೂ, ದಂತವಕ್ತ್ರನನ್ನೂ, ವಿದೂರಥನನ್ನು ಸಂಹರಿಸಿ ದ್ವಾರಕಾ ಪಟ್ಟಣವನ್ನು ಪ್ರವೇಶಿಸಿದನು. ಆ ಸಮಯದಲ್ಲಿ ದೇವತೆಗಳು, ಮನುಷ್ಯರು ಅವನನ್ನು ಸ್ತುತಿಸುತ್ತಿದ್ದರು. ದೊಡ್ಡ-ದೊಡ್ಡ ಋಷಿ-ಮುನಿಗಳು, ಸಿದ್ಧರು-ಗಂಧರ್ವರು, ವಿದ್ಯಾಧರರು ಮತ್ತು ವಾಸುಕಿಯೇ ಮೊದಲಾದ ನಾಗರು, ಅಪ್ಸರೆಯರು, ಪಿತೃಗಳೂ, ಯಕ್ಷರು, ಕಿನ್ನರರು, ಚಾರಣರೂ ಅವನ ಮೇಲೆ ಹೂವಿನ ಮಳೆಗರೆಯುತ್ತಾ, ಅವನ ವಿಜಯ ಕೀರ್ತನೆಗಳನ್ನು ಹಾಡುತ್ತಿದ್ದರು. ಭಗವಂತನು ಪ್ರವೇಶಿಸುವಾಗ ದ್ವಾರಕೆಯು ಬಹಳ ಅಲಂಕೃತವಾಗಿತ್ತು. ಮಹಾ-ಮಹಾ ವೃಷ್ಣಿವಂಶೀ ಯಾದವ ವೀರರೂ ಅವನನ್ನೇ ಅನುಸರಿಸುತ್ತಿದ್ದರು. ॥13-15॥
ಮೂಲಮ್
(ಶ್ಲೋಕ-16)
ಏವಂ ಯೋಗೇಶ್ವರಃ ಕೃಷ್ಣೋ ಭಗವಾನ್ ಜಗದೀಶ್ವರಃ ।
ಈಯತೇ ಪಶುದೃಷ್ಟೀನಾಂ ನಿರ್ಜಿತೋ ಜಯತೀತಿ ಸಃ ॥
ಅನುವಾದ
ಪರೀಕ್ಷಿತನೇ! ಯೋಗೇಶ್ವರನೂ, ಜಗದೀಶ್ವರನೂ ಆದ ಭಗವಾನ್ ಶ್ರೀಕೃಷ್ಣನು ಹೀಗೆ ಅನೇಕ ಪ್ರಕಾರವಾದ ಲೀಲೆಗಳನ್ನು ಆಡುತ್ತಿದ್ದನು. ಇವನ ನಿಜಸ್ವರೂಪವನ್ನು ತಿಳಿಯದಿದ್ದ ಪಾಮರರಾದ ಅವಿವೇಕಿಗಳು ಕೆಲವು ಸಲ ಶ್ರೀಕೃಷ್ಣನು ಸೋತನೆಂದೂ, ಕೆಲವುಸಲ ಜಯಗಳಿಸಿದನೆಂದೂ ಭಾವಿಸುತ್ತಿದ್ದರು. ಆದರೆ ವಾಸ್ತವವಾಗಿ ಅವನು ಸದಾಕಾಲ ವಿಜಯಿಯೇ ಆಗಿದ್ದಾನೆ. ಅವನಿಗೆ ಸೋಲೆಂಬುದೇ ಇಲ್ಲ. ಇದೆಲ್ಲವೂ ಲೀಲಾಮಾತ್ರ ಆಗಿದೆ. ॥16॥
ಮೂಲಮ್
(ಶ್ಲೋಕ-17)
ಶ್ರುತ್ವಾ ಯುದ್ಧೋದ್ಯಮಂ ರಾಮಃ ಕುರೂಣಾಂ ಸಹ ಪಾಂಡವೈಃ ।
ತೀರ್ಥಾಭಿಷೇಕವ್ಯಾಜೇನ ಮಧ್ಯಸ್ಥಃ ಪ್ರಯಯೌ ಕಿಲ ॥
ಅನುವಾದ
ಒಮ್ಮೆ ಬಲರಾಮನು ಕೌರವರಿಗೂ-ಪಾಂಡವರಿಗೂ ಯುದ್ಧಕ್ಕಾಗಿ ಸಿದ್ಧತೆಗಳು ಆಗುತ್ತಿರುವುದೆಂಬ ವಾರ್ತೆಯನ್ನು ಕೇಳಿದನು. ಯಾರೊಬ್ಬರ ಪಕ್ಷವನ್ನೂ ವಹಿಸುವುದು ಅವನಿಗೆ ಇಷ್ಟವಿರಲಿಲ್ಲ. ಅವನು ತಟಸ್ಥನಾಗಿದ್ದನು. ಅದಕ್ಕಾಗಿ ಅವನು ತೀರ್ಥಯಾತ್ರೆಯ ನೆಪದಿಂದ ದ್ವಾರಕೆಯಿಂದ ಹೊರಟುಬಿಟ್ಟನು. ॥17॥
ಮೂಲಮ್
(ಶ್ಲೋಕ-18)
ಸ್ನಾತ್ವಾ ಪ್ರಭಾಸೇ ಸಂತರ್ಪ್ಯ ದೇವರ್ಷಿಪಿತೃಮಾನವಾನ್ ।
ಸರಸ್ವತೀಂ ಪ್ರತಿಸ್ರೋತಂ ಯಯೌ ಬ್ರಾಹ್ಮಣಸಂವೃತಃ ॥
ಅನುವಾದ
ಅಲ್ಲಿಂದ ಹೊರಟು ಅವನು ಮೊದಲಿಗೆ ಪ್ರಭಾಸಕ್ಷೇತ್ರದಲ್ಲಿ ಸ್ನಾನ ತರ್ಪಣಾದಿಗಳನ್ನು ಮಾಡಿ, ಬ್ರಾಹ್ಮಣ ಭೋಜನದ ಮೂಲಕ ದೇವತೆಗಳನ್ನು, ಋಷಿಗಳನ್ನು, ಪಿತೃಗಳನ್ನು, ಮನುಷ್ಯರನ್ನು ಸಂತೃಪ್ತಗೊಳಿಸಿದನು. ಅನಂತರ ಅವನು ಕೆಲವು ಬ್ರಾಹ್ಮಣರೊಂದಿಗೆ ಪಶ್ಚಿಮವಾಹಿನಿಯಾದ ಸರಸ್ವತೀನದಿಯ ತೀರಕ್ಕೆ ಬಂದನು. ॥18॥
ಮೂಲಮ್
(ಶ್ಲೋಕ-19)
ಪೃಥೂದಕಂ ಬಿಂದುಸರಸಿತಕೂಪಂ ಸುದರ್ಶನಮ್ ।
ವಿಶಾಲಂ ಬ್ರಹ್ಮತೀರ್ಥಂ ಚ ಚಕ್ರಂ ಪ್ರಾಚೀಂ ಸರಸ್ವತೀಮ್ ॥
ಅನುವಾದ
ಅಲ್ಲಿ ಸ್ನಾನಾದಿಗಳನ್ನು ಮುಗಿಸಿಕೊಂಡು ಕ್ರಮವಾಗಿ ಪೃಥೂದಕ, ಬಿಂದುಸರ, ತ್ರಿತಕೂಪ, ಸುದರ್ಶನತೀರ್ಥ, ವಿಶಾಲತೀರ್ಥ, ಬ್ರಹ್ಮತೀರ್ಥ ಚಕ್ರತೀರ್ಥ ಮತ್ತು ಪೂರ್ವವಾಹಿನಿಯಾದ ಸರಸ್ವತೀ ಮುಂತಾದ ತೀರ್ಥಗಳಿಗೆ ಹೋದನು. ॥19॥
ಮೂಲಮ್
(ಶ್ಲೋಕ-20)
ಯಮುನಾಮನು ಯಾನ್ಯೇವ ಗಂಗಾಮನು ಚ ಭಾರತ ।
ಜಗಾಮ ನೈಮಿಷಂ ಯತ್ರ ಋಷಯಃ ಸತ್ರಮಾಸತೇ ॥
ಅನುವಾದ
ಪರೀಕ್ಷಿತನೇ! ಅನಂತರ ಯಮುನಾತೀರದ ಮತ್ತು ಮುಖ್ಯ-ಮುಖ್ಯ ತೀರ್ಥಗಳನ್ನು ಸಂದರ್ಶಿಸುತ್ತಾ ದೊಡ್ಡ-ದೊಡ್ಡ ಋಷಿಗಳು ಸತ್ಸಂಗ ಸತ್ರವನ್ನು ನಡೆಸುತ್ತಿದ್ದ ನೈಮಿಷಾರಣ್ಯಕ್ಕೆ ಬಂದನು. ॥20॥
ಮೂಲಮ್
(ಶ್ಲೋಕ-21)
ತಮಾಗತಮಭಿಪ್ರೇತ್ಯ ಮುನಯೋ ದೀರ್ಘಸತ್ರಿಣಃ ।
ಅಭಿನಂದ್ಯ ಯಥಾನ್ಯಾಯಂ ಪ್ರಣಮ್ಯೋತ್ಥಾಯ ಚಾರ್ಚಯನ್ ॥
ಅನುವಾದ
ದೀರ್ಘಕಾಲ ನಡೆಯುವ ಸತ್ರಯಾಗದ ವ್ರತವನ್ನು ಕೈಗೊಂಡು ಕುಳಿತಿದ್ದ ಮಹರ್ಷಿಗಳು ಬಲರಾಮನು ಬಂದುದನ್ನು ನೋಡಿ ತಮ್ಮ ಆಸನಗಳಿಂದೆದ್ದು ಮುಂದೆ ಹೋಗಿ ಆತನನ್ನು ಸ್ವಾಗತಿಸಿ ಯಥಾಯೋಗ್ಯವಾಗಿ ಅಭಿನಂದಿಸಿ ಅವನನ್ನು ಪೂಜಿಸಿದರು. ॥21॥
ಮೂಲಮ್
(ಶ್ಲೋಕ-22)
ಸೋರ್ಚಿತಃ ಸಪರೀವಾರಃ ಕೃತಾಸನಪರಿಗ್ರಹಃ ।
ರೋಮಹರ್ಷಣಮಾಸೀನಂ ಮಹರ್ಷೇಃ ಶಿಷ್ಯಮೈಕ್ಷತ ॥
ಅನುವಾದ
ತನ್ನ ಜೊತೆಯವರೊಡನೆ ಆಸನವನ್ನು ಸ್ವೀಕರಿಸಿ ಕುಳಿತು ಅವರಿಂದ ಸತ್ಕೃತನಾದ ಬಲರಾಮನು-ವ್ಯಾಸ-ಪೀಠದಲ್ಲಿ ಕುಳಿತಿದ್ದ ಭಗವಾನ್ ವ್ಯಾಸರ ಶಿಷ್ಯನಾದ ರೋಮಹರ್ಷಣನನ್ನು ನೋಡಿದನು. ॥22॥
ಮೂಲಮ್
(ಶ್ಲೋಕ-23)
ಅಪ್ರತ್ಯುತ್ಥಾಯಿನಂ ಸೂತಮಕೃತಪ್ರಹ್ವಣಾಂಜಲಿಮ್ ।
ಅಧ್ಯಾಸೀನಂ ಚ ತಾನ್ವಿಪ್ರಾಂಶ್ಚುಕೋಪೋದ್ವೀಕ್ಷ್ಯ ಮಾಧವಃ ॥
ಅನುವಾದ
ರೋಮಹರ್ಷಣನು ಸೂತ ಜಾತಿಯಲ್ಲಿ ಹುಟ್ಟಿದವನಾಗಿದ್ದರೂ ಬ್ರಾಹ್ಮಣರು ಕುಳಿತಿದ್ದುದಕ್ಕಿಂತ ಎತ್ತರವಾದ ಆಸನದಲ್ಲಿ ಕುಳಿತಿದ್ದುದನ್ನು, ತಾನು ಆಗಮಿಸಿದರೂ ಮೇಲೆದ್ದು ಅಭಿನಂದಿಸದೇ ಇದ್ದುದನ್ನು ನೋಡಿ ಬಲರಾಮನು ಕುಪಿತನಾಗಿ ಗುಡುಗಿದನು - ॥23॥
ಮೂಲಮ್
(ಶ್ಲೋಕ-24)
ಕಸ್ಮಾದಸಾವಿಮಾನ್ ವಿಪ್ರಾನಧ್ಯಾಸ್ತೇ ಪ್ರತಿಲೋಮಜಃ ।
ಧರ್ಮಪಾಲಾಂಸ್ತಥೈವಾಸ್ಮಾನ್ ವಧಮರ್ಹತಿ ದುರ್ಮತಿಃ ॥
ಅನುವಾದ
‘‘ಈ ರೋಮಹರ್ಷಣನು ಪ್ರತಿಲೋಮ ಜಾತಿಯಲ್ಲಿ ಹುಟ್ಟಿದವನಾಗಿದ್ದರೂ ಈ ಶ್ರೇಷ್ಠರಾದ ಬ್ರಾಹ್ಮಣರು ಮತ್ತು ಧರ್ಮರಕ್ಷಕರಾದ ನಾವು ಕುಳಿತಿರುವುದಕ್ಕಿಂತ ಉನ್ನತವಾದ ಪೀಠದಲ್ಲಿ ಕುಳಿತಿರುವನು. ಆದುದರಿಂದ ಈ ದುರ್ಬುದ್ಧಿಯು ಮರಣದಂಡನೆಗೆ ಪಾತ್ರನಾಗಿದ್ದಾನೆ. ॥24॥
ಮೂಲಮ್
(ಶ್ಲೋಕ-25)
ಋಷೇರ್ಭಗವತೋ ಭೂತ್ವಾ ಶಿಷ್ಯೋಧೀತ್ಯ ಬಹೂನಿ ಚ ।
ಸೇತಿಹಾಸಪುರಾಣಾನಿ ಧರ್ಮಶಾಸಾಣಿ ಸರ್ವಶಃ ॥
(ಶ್ಲೋಕ-26)
ಅದಾಂತಸ್ಯಾವಿನೀತಸ್ಯ ವೃಥಾ ಪಂಡಿತಮಾನಿನಃ ।
ನ ಗುಣಾಯ ಭವಂತಿ ಸ್ಮ ನಟಸ್ಯೇವಾಜಿತಾತ್ಮನಃ ॥
ಅನುವಾದ
ಈ ಮೂರ್ಖನು ಭಗವಾನ್ ವ್ಯಾಸಮಹರ್ಷಿಗಳ ಶಿಷ್ಯನಾಗಿ ಅವರಿಂದ ಇತಿಹಾಸ-ಪುರಾಣಗಳನ್ನು, ಧರ್ಮಶಾಸ್ತ್ರವೇ ಮೊದಲಾದ ಹಲವಾರು ಶಾಸ್ತ್ರಗಳನ್ನೂ ಅಧ್ಯಯನ ಮಾಡಿರುವನು. ಆದರೆ ಇವನಿಗೆ ಮನಸ್ಸಿನ ಮೇಲೆ ಸಂಯಮವೇ ಇಲ್ಲ. ಇವನಲ್ಲಿ ವಿನಯವು ಇರದೆ, ಉದ್ದಂಡನಾಗಿದ್ದಾನೆ. ತಾನೇ ಮಹಾಪಂಡಿತನೆಂದು ಭಾವಿಸಿಕೊಂಡು ಬಿಟ್ಟಿದ್ದಾನೆ. ನಟನಾದವನ ಎಲ್ಲ ಚೇಷ್ಟೆಗಳೂ ಅಭಿನಯಮಾತ್ರವಾಗಿರುವಂತೆ ಇವನ ಅಧ್ಯಯನವೆಲ್ಲವೂ ಕೇವಲ ತೋರಿಕೆಗೆ ಮಾತ್ರವಾಗಿದೆ. ಇದರಿಂದ ಇವನಿಗಾಗಲೀ, ಇತರರಿಗಾಗಲೀ ಯಾವ ಪ್ರಯೋಜನವೂ ಇಲ್ಲ. ॥25-26॥
ಮೂಲಮ್
(ಶ್ಲೋಕ-27)
ಏತದರ್ಥೋಹಿ ಲೋಕೇಸ್ಮಿನ್ನವತಾರೋ ಮಯಾ ಕೃತಃ ।
ವಧ್ಯಾ ಮೇ ಧರ್ಮಧ್ವಜಿನಸ್ತೇ ಹಿ ಪಾತಕಿನೋಧಿಕಾಃ ॥
ಅನುವಾದ
ಧರ್ಮದ ಲಾಂಛನಗಳನ್ನು ಧರಿಸಿಕೊಂಡು ಧರ್ಮವನ್ನು ಪಾಲಿಸದಿರುವವರು ಹೆಚ್ಚು ಪಾಪಿಗಳಾಗಿದ್ದಾರೆ. ಇವರು ವಧಿಸಲು ಯೋಗ್ಯರಾಗಿದ್ದಾರೆ. ಈ ಜಗತ್ತಿನಲ್ಲಿ ಇಂತಹ ಧರ್ಮಧ್ವಜಿಗಳನ್ನು ಶಿಕ್ಷಿಸುವ ಸಲುವಾಗಿಯೇ ನಾನು ಅವತಾರವೆತ್ತಿದ್ದೇನೆ.’’ ॥27॥
ಮೂಲಮ್
(ಶ್ಲೋಕ-28)
ಏತಾವದುಕ್ತ್ವಾ ಭಗವಾನ್ ನಿವೃತ್ತೋಸದ್ವಧಾದಪಿ ।
ಭಾವಿತ್ವಾತ್ತಂ ಕುಶಾಗ್ರೇಣ ಕರಸ್ಥೇನಾಹನತ್ ಪ್ರಭುಃ ॥
ಅನುವಾದ
ಭಗವಾನ್ ಬಲರಾಮನು ತೀರ್ಥಯಾತ್ರೆಯ ಕಾರಣದಿಂದ ದುಷ್ಟರ ಸಂಹಾರವನ್ನು ನಿಲ್ಲಿಸಿಬಿಟ್ಟಿದ್ದರೂ ಹೀಗೆ ಹೇಳಿ ಅವನು ಕೈಯಲ್ಲಿದ್ದ ದರ್ಭೆಯ ಅಗ್ರಭಾಗದಿಂದ ರೋಮಹರ್ಷಣನನ್ನು ಪ್ರಹರಿಸಿದನು. ಕೂಡಲೇ ಅವನು ಅಸುನೀಗಿದನು. ಆಗಬೇಕಾಗಿದ್ದುದು ಆಗಿಯೇ ತೀರುವುದು. ॥28॥
ಮೂಲಮ್
(ಶ್ಲೋಕ-29)
ಹಾಹೇತಿ ವಾದಿನಃ ಸರ್ವೇ ಮುನಯಃ ಖಿನ್ನ ಮಾನಸಾಃ ।
ಊಚುಃ ಸಂಕರ್ಷಣಂ ದೇವಮಧರ್ಮಸ್ತೇ ಕೃತಃ ಪ್ರಭೋ ॥
ಅನುವಾದ
ಸೂತನು ಹತನಾದುದನ್ನು ಕಂಡು ಎಲ್ಲ ಋಷಿ-ಮುನಿಗಳು ‘ಅಯ್ಯೋ! ಎಂತಹ ಅನಾಹುತವಾಯಿತು!’ ಎಂದು ಕೂಗಿಕೊಳ್ಳುತ್ತಾ ಖಿನ್ನಮನಸ್ಕರಾದರು. ಅವರು ದೇವಾಧಿದೇವನಾದ ಭಗವಾನ್ ಬಲರಾಮನಲ್ಲಿ - ‘ಪ್ರಭೋ! ನೀನು ಭಾರೀ ದೊಡ್ಡ ಅಧರ್ಮವನ್ನು ಮಾಡಿಬಿಟ್ಟೆ’ ಎಂದು ಹೇಳಿದರು. ॥29॥
ಮೂಲಮ್
(ಶ್ಲೋಕ-30)
ಅಸ್ಯ ಬ್ರಹ್ಮಾಸನಂ ದತ್ತಮಸ್ಮಾಭಿರ್ಯದುನಂದನ ।
ಆಯುಶ್ಚಾತ್ಮಾಕ್ಲಮಂ ತಾವದ್ಯಾವತ್ಸತ್ರಂ ಸಮಾಪ್ಯತೇ ॥
ಅನುವಾದ
ಯದುವಂಶ ಶಿರೋಮಣಿಯೇ! ರೋಮಹರ್ಷಣ ಸೂತನನ್ನು ಯಜ್ಞದಲ್ಲಿ ಪುರಾಣವನ್ನು ಹೇಳಲು ಬ್ರಹ್ಮನ ಆಸನದಲ್ಲಿ ನಾವೇ ಕುಳ್ಳಿರಿಸಿದ್ದೆವು. ನಾವು ಪ್ರಾರಂಭಿಸಿದ ಸತ್ರಯಾಗವು ಮುಗಿಯುವವರೆಗೆ ಈತನಿಗೆ ಶಾರೀರಿಕ ಕಷ್ಟಗಳಿಂದ ರಹಿತವಾದ ಆಯುಸ್ಸನ್ನೂ ಕೊಟ್ಟಿದ್ದೆವು. ॥30॥
ಮೂಲಮ್
(ಶ್ಲೋಕ-31)
ಅಜಾನತೈವಾಚರಿತಸ್ತ್ವಯಾ ಬ್ರಹ್ಮವಧೋ ಯಥಾ ।
ಯೋಗೇಶ್ವರಸ್ಯ ಭವತೋ ನಾಮ್ನಾಯೋಪಿ ನಿಯಾಮಕಃ ॥
(ಶ್ಲೋಕ-32)
ಯದ್ಯೇತದ್ಬ್ರಹ್ಮಹತ್ಯಾಯಾಃ ಪಾವನಂ ಲೋಕಪಾವನ ।
ಚರಿಷ್ಯತಿ ಭವಾನ್ಲೋಕಸಂಗ್ರಹೋನನ್ಯಚೋದಿತಃ ॥
ಅನುವಾದ
ಈ ವಿಷಯವನ್ನು ತಿಳಿಯದ ನೀನು ಬ್ರಹ್ಮಹತ್ಯೆಗೆ ಸಮಾನವಾದ ಕಾರ್ಯವನ್ನು ಮಾಡಿಬಿಟ್ಟಿರುವೆ. ಯೋಗೇಶ್ವರನಾದ ನಿನ್ನ ಮೇಲೆ ವೇದಗಳೂ ಕೂಡ ವಿಧಿ-ನಿಷೇಧಗಳನ್ನು ಹೇರಲಾರವು ಎಂಬುದನ್ನೂ ನಾವು ಅರಿತಿದ್ದೇವೆ. ಲೋಕವನ್ನು ಪವಿತ್ರಗೊಳಿಸುವ ಸಲುವಾಗಿಯೇ ನಿನ್ನ ಅವತಾರವಾಗಿದೆ. ಆದರೂ ನಮ್ಮದೊಂದು ಪ್ರಾರ್ಥನೆಯಿದೆ. ಯಾರ ಪ್ರೇರಣೆಯೂ ಇಲ್ಲದೆ ಸ್ವೇಚ್ಛೆಯಿಂದಲೇ ನೀನು ಬ್ರಹ್ಮಹತ್ಯಾ ದೋಷಕ್ಕೆ ಪ್ರಾಯಶ್ಚಿತ್ತವನ್ನು ಮಾಡಿಕೊಂಡರೆ ಇದರಿಂದ ಜನರಿಗೆ ದೊಡ್ಡ ಪಾಠಸಿಗಬಹುದು. ॥31-32॥
ಮೂಲಮ್
(ಶ್ಲೋಕ-33)
ಶ್ರೀಭಗವಾನುವಾಚ
ಕರಿಷ್ಯೇ ವಧನಿರ್ವೇಶಂ ಲೋಕಾನುಗ್ರಹಕಾಮ್ಯಯಾ ।
ನಿಯಮಃ ಪ್ರಥಮೇ ಕಲ್ಪೇ ಯಾವಾನ್ಸ ತು ವಿಧೀಯತಾಮ್ ॥
ಅನುವಾದ
ಭಗವಾನ್ ಬಲರಾಮನು ಹೇಳುತ್ತಾನೆ — ನಾನು ಲೋಕ ಶಿಕ್ಷಣಕ್ಕಾಗಿ ಮತ್ತು ಲೊಕಾನುಗ್ರಹಕ್ಕಾಗಿ ಬ್ರಹ್ಮಹತ್ಯಾಪಾಪಕ್ಕೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುತ್ತೇನೆ. ಆದುದರಿಂದ ಪ್ರಥಮ ಶ್ರೇಣಿಯ ಪ್ರಾಯಶ್ಚಿತ್ತದ ವಿಧಿ-ವಿಧಾನಗಳನ್ನು ನೀವು ನನಗೆ ಹೇಳಿರಿ. ॥33॥
ಮೂಲಮ್
(ಶ್ಲೋಕ-34)
ದೀರ್ಘಮಾಯುರ್ಬತೈತಸ್ಯ ಸತ್ತ್ವಮಿಂದ್ರಿಯಮೇವ ಚ ।
ಆಶಾಸಿತಂ ಯತ್ತದ್ ಬ್ರೂತ ಸಾಧಯೇ ಯೋಗಮಾಯಯಾ ॥
ಅನುವಾದ
ಈ ರೋಮಹರ್ಷನಿಗೆ ನೀವು ಕೊಡಲು ಬಯಸಿದ ದೀರ್ಘಾಯುಷ್ಯವನ್ನು, ಶರೀರ ಬಲವನ್ನೂ, ಇಂದ್ರಿಯ ಶಕ್ತಿಯನ್ನೂ ನನಗೆ ಹೇಳಿರಿ. ನನ್ನ ಯೋಗಮಾಯೆಯಿಂದ ಅವೆಲ್ಲವನ್ನು ಸಾಧಿಸಿಕೊಡುತ್ತೇನೆ. ॥34॥
ಮೂಲಮ್
(ಶ್ಲೋಕ-35)
ಮೂಲಮ್ (ವಾಚನಮ್)
ಋಷಯ ಊಚುಃ
ಮೂಲಮ್
ಅಸಸ್ಯ ತವ ವೀರ್ಯಸ್ಯ ಮೃತ್ಯೋರಸ್ಮಾಕಮೇವ ಚ ।
ಯಥಾ ಭವೇದ್ವಚಃ ಸತ್ಯಂ ತಥಾ ರಾಮ ವಿಧೀಯತಾಮ್ ॥
ಅನುವಾದ
ಋಷಿಗಳು ಹೇಳಿದರು — ಬಲರಾಮನೇ! ನಿನ್ನ ಅಸ್ತ್ರ, ಪರಾಕ್ರಮ ಮತ್ತು ಇವನ ಮೃತ್ಯುವು ವ್ಯರ್ಥವಾಗಬಾರದು. ನಾವು ಇವನಿಗೆ ಕೊಟ್ಟ ವರದಾನವೂ ಸತ್ಯವಾಗಬೇಕು. ನಿನ್ನ ಯೋಗಮಾಯೆಯಿಂದ ಇದನ್ನು ಸಾಧಿಸಿಕೊಡು ಪ್ರಭುವೇ! ॥35॥
ಮೂಲಮ್
(ಶ್ಲೋಕ-36)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಆತ್ಮಾ ವೈ ಪುತ್ರ ಉತ್ಪನ್ನ ಇತಿ ವೇದಾನುಶಾಸನಮ್ ।
ತಸ್ಮಾದಸ್ಯ ಭವೇದ್ವಕ್ತಾ ಆಯುರಿಂದ್ರಿಯಸತ್ತ್ವವಾನ್ ॥
ಅನುವಾದ
ಭಗವಾನ್ ಬಲರಾಮನು ಹೇಳಿದನು — ಋಷಿಗಳಿರಾ! ತಾನೇ (ಆತ್ಮನು) ಪುತ್ರನ ರೂಪದಲ್ಲಿ ಹುಟ್ಟುವನೆಂದು ವೇದವು ಹೇಳುತ್ತದೆ. ಅದಕ್ಕಾಗಿ ರೋಮಹರ್ಷಣನ ಸ್ಥಾನದಲ್ಲಿ ಅವನ ಮಗನು ನಿಮಗೆ ಪುರಾಣಕಥೆಗಳನ್ನು ಹೇಳುವನು. ಅವನಿಗೆ ನಾನು ನನ್ನಶಕ್ತಿಯಿಂದ ದೀರ್ಘಾಯುಸ್ಸು, ಇಂದ್ರಿಯಪಟುತ್ವ ಮತ್ತು ಬಲವನ್ನು ಕರುಣಿಸುತ್ತೇನೆ. ॥36॥
ಮೂಲಮ್
(ಶ್ಲೋಕ-37)
ಕಿಂ ವಃ ಕಾಮೋ ಮುನಿಶ್ರೇಷ್ಠಾ ಬ್ರೂತಾಹಂ ಕರವಾಣ್ಯಥ ।
ಅಜಾನತಸ್ತ್ವಪಚಿತಿಂ ಯಥಾ ಮೇ ಚಿಂತ್ಯತಾಂ ಬುಧಾಃ ॥
ಅನುವಾದ
ಮಹರ್ಷಿಗಳೇ! ಇದಲ್ಲದೆ ಇನ್ನೇನು ನೀವುಗಳು ಬಯಸುವಿರೋ ಅದನ್ನು ಹೇಳಿರಿ. ನಾನು ನಿಮ್ಮಗಳ ಇಚ್ಛೆಯನ್ನು ಪೂರ್ಣಗೊಳಿಸುವೆನು. ತಿಳಿಯದೆ ನನ್ನಿಂದಾದ ಅಪರಾಧಕ್ಕೆ ಪ್ರಾಯಶ್ಚಿತ್ತವನ್ನೂ ಹೇಳಿರಿ. ಏಕೆಂದರೆ, ತಾವು ಈ ವಿಷಯದಲ್ಲಿ ವಿದ್ವಾಂಸರಾಗಿದ್ದೀರಿ.॥37॥
ಮೂಲಮ್
(ಶ್ಲೋಕ-38)
ಮೂಲಮ್ (ವಾಚನಮ್)
ಋಷಯ ಊಚುಃ
ಮೂಲಮ್
ಇಲ್ವಲಸ್ಯ ಸುತೋ ಘೋರೋ ಬಲ್ವಲೋ ನಾಮ ದಾನವಃ ।
ಸ ದೂಷಯತಿ ನಃ ಸತ್ರಮೇತ್ಯ ಪರ್ವಣಿ ಪರ್ವಣಿ ॥
ಅನುವಾದ
ಋಷಿಗಳು ಹೇಳಿದರು — ಇಲ್ವಲನ ಮಗ ಬಲ್ವಲ ಎಂಬ ಭಯಂಕರನಾದ ದಾನವನಿರುವನು. ಅವನು ಪ್ರತಿಯೊಂದು ಪರ್ವಗಳಲ್ಲಿಯೂ (ಅಮಾವಾಸ್ಯೆ ಮತ್ತು ಪೌರ್ಣಿಮೆ) ಇಲ್ಲಿಗೆ ಬಂದು ನಮ್ಮ ಸತ್ರವನ್ನು ಕೆಡಿಸುತ್ತಾನೆ. ॥38॥
ಮೂಲಮ್
(ಶ್ಲೋಕ-39)
ತಂ ಪಾಪಂ ಜಹಿ ದಾಶಾರ್ಹ ತನ್ನಃ ಶುಶ್ರೂಷಣಂ ಪರಮ್ ।
ಪೂಯಶೋಣಿತವಿಣ್ಮೂತ್ರಸುರಾಮಾಂಸಾಭಿವರ್ಷಿಣಮ್ ॥
ಅನುವಾದ
ಯದುನಂದನನೇ! ಅವನು ಇಲ್ಲಿಗೆ ಬಂದು ಕೀವು, ರಕ್ತ, ಅಮೇಧ್ಯ, ಮೂತ್ರ, ಮದ್ಯ, ಮಾಂಸ ಇವುಗಳನ್ನು ಯಜ್ಞವೇದಿಕೆಯಲ್ಲಿ ಸುರಿಯುತ್ತಾನೆ. ನೀನು ಆ ಪಾಪಿಯನ್ನು ಸಂಹರಿಸಿದರೆ ನಮ್ಮಗಳ ದೊಡ್ಡ ಸೇವೆ ಮಾಡಿದಂತಾಗುವುದು. ॥39॥
ಮೂಲಮ್
(ಶ್ಲೋಕ-40)
ತತಶ್ಚ ಭಾರತಂ ವರ್ಷಂ ಪರೀತ್ಯ ಸುಸಮಾಹಿತಃ ।
ಚರಿತ್ವಾ ದ್ವಾದಶ ಮಾಸಾಂಸ್ತೀರ್ಥಸ್ನಾಯೀ ವಿಶುದ್ಧ್ಯಸೇ ॥
ಅನುವಾದ
ಅನಂತರ ನೀನು ಏಕಾಗ್ರ ಮನಸ್ಸಿನಿಂದ ತೀರ್ಥಗಳಲ್ಲಿ, ಸ್ನಾನ ಮಾಡುತ್ತಾ ಹನ್ನೆರಡು ತಿಂಗಳವರೆಗೆ ಭಾರತವರ್ಷವನ್ನು ಸಂಚರಿಸು. ಇದರಿಂದ ನಿನ್ನ ಶುದ್ಧಿಯಾಗುವುದು. ॥40॥
ಅನುವಾದ (ಸಮಾಪ್ತಿಃ)
ಎಪ್ಪತ್ತೆಂಟನೆಯ ಅಧ್ಯಾಯವು ಮುಗಿಯಿತು. ॥78॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ ಬಲದೇವಚರಿತ್ರೇ ಬಲ್ವಲ ವಧೋಪಕ್ರಮೋನಾಮಾಷ್ಟಸಪ್ತತಿತಮೋಧ್ಯಾಯಃ ॥78॥