[ಏಪ್ಪತ್ತೆಳನೇಯ ಅಧ್ಯಾಯ]
ಭಾಗಸೂಚನಾ
ಶಾಲ್ವನ ಸಂಹಾರ
ಮೂಲಮ್
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಸ ತೂಪಸ್ಪೃಶ್ಯ ಸಲಿಲಂ ದಂಶಿತೋ ಧೃತಕಾರ್ಮುಕಃ ।
ನಯ ಮಾಂ ದ್ಯುಮತಃ ಪಾರ್ಶ್ವಂ ವೀರಸ್ಯೇತ್ಯಾಹ ಸಾರಥಿಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತ ಮಹಾರಾಜನೇ! ಬಳಿಕ ಪ್ರದ್ಯುಮ್ನನು ಶುದ್ಧಾಚಮನವನ್ನು ಮಾಡಿ ಕವಚವನ್ನು ತೊಟ್ಟು ಧನುಸ್ಸನ್ನು ಧರಿಸಿ, ಶೀಘ್ರವಾಗಿ ನನ್ನನ್ನು ದ್ಯುಮಂತನ ಬಳಿಗೆ ಕರೆದೊಯ್ಯುವವನಾಗು ಎಂದು ಸಾರಥಿಗೆ ಹೇಳಿದನು॥1॥
ಮೂಲಮ್
(ಶ್ಲೋಕ-2)
ವಿಧಮಂತಂ ಸ್ವಸೈನ್ಯಾನಿ ದ್ಯುಮಂತಂ ರುಕ್ಮಿಣೀಸುತಃ ।
ಪ್ರತಿಹತ್ಯ ಪ್ರತ್ಯವಿಧ್ಯನ್ನಾರಾಚೈರಷ್ಟಭಿಃ ಸ್ಮಯನ್ ॥
ಅನುವಾದ
ಪ್ರದ್ಯುಮ್ನನ ಆಜ್ಞೆಯಂತೆ ಸಾರಥಿಯು ರಥವನ್ನು ದ್ಯುಮಂತನ ಬಳಿಗೆ ಒಯ್ದನು. ಆಗ ಅವನು ಯಾದವರ ಸೈನ್ಯವನ್ನು ಧ್ವಂಸಮಾಡುತ್ತಿದ್ದನು. ಪ್ರದ್ಯುಮ್ನನು ಅವನನ್ನು ತಡೆದು ಎಂಟು ಬಾಣಗಳಿಂದ ನಸುನಗುತ್ತಲೇ ಪ್ರಹರಿಸಿದನು. ॥2॥
ಮೂಲಮ್
(ಶ್ಲೋಕ-3)
ಚತುರ್ಭಿಶ್ಚತುರೋ ವಾಹಾನ್ ಸೂತಮೇಕೇನ ಚಾಹನತ್ ।
ದ್ವಾಭ್ಯಾಂ ಧನುಶ್ಚ ಕೇತುಂ ಚ ಶರೇಣಾನ್ಯೇನ ವೈ ಶಿರಃ ॥
ಅನುವಾದ
ನಾಲ್ಕು ಬಾಣಗಳಿಂದ ಅವನ ನಾಲ್ಕು, ಕುದುರೆಗಳನ್ನು ಕೊಂದು, ಒಂದು ಬಾಣದಿಂದ ಸಾರಥಿಯನ್ನು, ಎರಡು ಬಾಣಗಳಿಂದ ಧನುಸ್ಸನ್ನು, ಧ್ವಜವನ್ನು ಕತ್ತರಿಸಿ, ಮತ್ತೊಂದು ಬಾಣದಿಂದ ದ್ಯುಮಂತನ ತಲೆಯನ್ನು ತರಿದನು. ॥3॥
ಮೂಲಮ್
(ಶ್ಲೋಕ-4)
ಗದಸಾತ್ಯಕಿಸಾಂಬಾದ್ಯಾ ಜಘ್ನುಃ ಸೌಭಪತೇರ್ಬಲಮ್ ।
ಪೇತುಃ ಸಮುದ್ರೇ ಸೌಭೇಯಾಃ ಸರ್ವೇ ಸಂಛಿನ್ನಕಂಧರಾಃ ॥
ಅನುವಾದ
ಮತ್ತೊಂದು ಕಡೆ ಗದ, ಸಾತ್ಯಕಿ, ಸಾಂಬ ಮೊದಲಾದ ಯಾದವವೀರರೂ ಶಾಲ್ವನ ಸೇನೆಯನ್ನು ಸಂಹರಿಸಲು ತೊಡಗಿದರು, ಸೌಭವಿಮಾನದಲ್ಲಿದ್ದ ಸೈನಿಕರ ತಲೆಗಳು ತುಂಡಾಗಿ ಸಮುದ್ರಕ್ಕೆ ಬೀಳುತ್ತಿದ್ದವು. ॥4॥
ಮೂಲಮ್
(ಶ್ಲೋಕ-5)
ಏವಂ ಯದೂನಾಂ ಶಾಲ್ವಾನಾಂ ನಿಘ್ನತಾಮಿತರೇತರಮ್ ।
ಯುದ್ಧಂ ತ್ರಿಣವರಾತ್ರಂ ತದಭೂತ್ತುಮುಲಮುಲ್ಬಣಮ್ ॥
ಅನುವಾದ
ಹೀಗೆ ಯದುವಂಶೀಯ ವೀರರಲ್ಲಿ ಮತ್ತು ಶಾಲ್ವನ ಸೈನಿಕರಲ್ಲಿ ಪರಸ್ಪರವಾಗಿ ಪ್ರಹರಿಸುತ್ತಾ ಇಪ್ಪತ್ತೇಳು ದಿನಗಳವರೆಗೆ ಅತ್ಯಂತ ಘೋರವಾದ ಮತ್ತು ಭಯಂಕರವಾದ ಯುದ್ಧವು ನಡೆಯಿತು. ॥5॥
ಮೂಲಮ್
(ಶ್ಲೋಕ-6)
ಇಂದ್ರಪ್ರಸ್ಥಂ ಗತಃ ಕೃಷ್ಣ ಆಹೂತೋ ಧರ್ಮಸೂನುನಾ ।
ರಾಜಸೂಯೇಥ ನಿರ್ವೃತ್ತೇ ಶಿಶುಪಾಲೇ ಚ ಸಂಸ್ಥಿತೇ ॥
ಅನುವಾದ
ಆ ಸಮಯದಲ್ಲಿ ಭಗವಾನ್ ಶ್ರೀಕೃಷ್ಣನು ಧರ್ಮನಂದನನ ಕರೆಯಂತೆ ಇಂದ್ರಪ್ರಸ್ಥಕ್ಕೆ ಹೋಗಿದ್ದನು. ರಾಜಸೂಯ ಯಜ್ಞವೂ ಮುಗಿದಿತ್ತು. ಶಿಶುಪಾಲನ ವಧೆಯೂ ಆಗಿಹೋಗಿತ್ತು. ॥6॥
ಮೂಲಮ್
(ಶ್ಲೋಕ-7)
ಕುರುವೃದ್ಧಾನನುಜ್ಞಾಪ್ಯ ಮುನೀಂಶ್ಚ ಸಸುತಾಂ ಪೃಥಾಮ್ ।
ನಿಮಿತ್ತಾನ್ಯತಿಘೋರಾಣಿ ಪಶ್ಯನ್ ದ್ವಾರವತೀಂ ಯಯೌ ॥
ಅನುವಾದ
ಅಲ್ಲಿ ಭಯಂಕರವಾದ ಅಪಶಕುನಗಳು ಆಗುತ್ತಿರುವುದನ್ನು ಕಂಡು ಭಗವಾನ್ ಶ್ರೀಕೃಷ್ಣನು ಕುರುವಂಶದ ಹಿರಿಯರು, ಋಷಿ-ಮುನಿಗಳಿಂದ, ಕುಂತೀ ಮತ್ತು ಪಾಂಡವರಿಂದ ಅನುಮತಿ ಪಡೆದು ದ್ವಾರಕೆಗೆ ಪ್ರಯಾಣಮಾಡಿದನು. ॥7॥
ಮೂಲಮ್
(ಶ್ಲೋಕ-8)
ಆಹ ಚಾಹಮಿಹಾಯಾತ ಆರ್ಯಮಿಶ್ರಾಭಿಸಂಗತಃ ।
ರಾಜನ್ಯಾಶ್ಚೈದ್ಯಪಕ್ಷೀಯಾ ನೂನಂ ಹನ್ಯುಃ ಪುರೀಂ ಮಮ ॥
ಅನುವಾದ
‘ನಾನು ಪೂಜ್ಯನಾದ ಅಣ್ಣ ಬಲರಾಮನೊಂದಿಗೆ ಇಂದ್ರಪ್ರಸ್ಥಕ್ಕೆ ಬಂದುಬಿಟ್ಟೆ. ಈಗ ಶಿಶುಪಾಲನ ಪಕ್ಷಪಾತಿಗಳಾದ ಕ್ಷತ್ರಿಯರು ಅವಶ್ಯವಾಗಿ ದ್ವಾರಕೆಯ ಮೇಲೆ ಆಕ್ರಮಣ ಮಾಡಿರಬಹುದು’ ಎಂದು ಮನಸ್ಸಿನಲ್ಲೇ ಅಂದುಕೊಂಡನು. ॥8॥
ಮೂಲಮ್
(ಶ್ಲೋಕ-9)
ವೀಕ್ಷ್ಯ ತತ್ಕದನಂ ಸ್ವಾನಾಂ ನಿರೂಪ್ಯ ಪುರರಕ್ಷಣಮ್ ।
ಸೌಭಂ ಚ ಶಾಲ್ವರಾಜಂ ಚ ದಾರುಕಂ ಪ್ರಾಹ ಕೇಶವಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ದ್ವಾರಕೆಗೆ ಬಂದು ನೋಡುತ್ತಾನೆ - ನಿಜವಾಗಿಯೂ ಯಾದವರ ಮೇಲೆ ದೊಡ್ಡ ಆಪತ್ತು ಬಂದೊದಗಿದೆ. ಆಗ ಬಲರಾಮನನ್ನು ದ್ವಾರಕೆಯ ರಕ್ಷಣೆಗಾಗಿ ನಿಯೋಜಿಸಿ, ಸೌಭಪತಿ ಶಾಲ್ವನನ್ನು ನೋಡಿ ತನ್ನ ಸಾರಥಿಯಾದ ದಾರುಕನಲ್ಲಿ ಹೇಳಿದನು - ॥9॥
ಮೂಲಮ್
(ಶ್ಲೋಕ-10)
ರಥಂ ಪ್ರಾಪಯ ಮೇ ಸೂತ ಶಾಲ್ವಸ್ಯಾಂತಿಕಮಾಶು ವೈ ।
ಸಂಭ್ರಮಸ್ತೇ ನ ಕರ್ತವ್ಯೋ ಮಾಯಾವೀ ಸೌಭರಾಡಯಮ್ ॥
ಅನುವಾದ
ದಾರುಕನೇ! ನೀನು ಅತಿ ಶೀಘ್ರವಾಗಿ ನನ್ನ ರಥವನ್ನು ಶಾಲ್ವನ ಬಳಿಗೆ ಕರೆದುಕೊಂಡು ಹೋಗು. ನೋಡು, ಈ ಶಾಲ್ವನು ಮಹಾ ಮಾಯಾವಿಯಾಗಿದ್ದಾನೆ. ಆದರೂ ನೀನು ಸ್ವಲ್ಪವೂ ಭಯಪಡಬೇಡ. ॥10॥
ಮೂಲಮ್
(ಶ್ಲೋಕ-11)
ಇತ್ಯುಕ್ತಶ್ಚೋದಯಾಮಾಸ ರಥಮಾಸ್ಥಾಯ ದಾರುಕಃ ।
ವಿಶಂತಂ ದದೃಶುಃ ಸರ್ವೇ ಸ್ವೇ ಪರೇ ಚಾರುಣಾನುಜಮ್ ॥
ಅನುವಾದ
ಶ್ರೀಕೃಷ್ಣನ ಆಜ್ಞೆಯಾದೊಡನೆಯೇ ದಾರುಕನು ರಥವನ್ನು ಶಾಲ್ವನ ಬಳಿಗೆ ಒಯ್ದನು. ಭಗವಂತನ ರಥದ ಗರುಡಧ್ವಜವನ್ನು ಕಂಡೊಡನೆ ಶ್ರೀಕೃಷ್ಣನೇ ಆಗಮಿಸಿದನೆಂದು ಯಾದವರೂ ಮತ್ತು ಶತ್ರು ಸೈನ್ಯದವರು ಭಾವಿಸಿದರು. ॥11॥
ಮೂಲಮ್
(ಶ್ಲೋಕ-12)
ಶಾಲ್ವಶ್ಚ ಕೃಷ್ಣಮಾಲೋಕ್ಯ ಹತಪ್ರಾಯಬಲೇಶ್ವರಃ ।
ಪ್ರಾಹರತ್ ಕೃಷ್ಣಸೂತಾಯ ಶಕ್ತಿಂ ಭೀಮರವಾಂ ಮೃಧೇ ॥
(ಶ್ಲೋಕ-13)
ತಾಮಾಪತಂತೀಂ ನಭಸಿ ಮಹೋಲ್ಕಾಮಿವ ರಂಹಸಾ ।
ಭಾಸಯಂತೀಂ ದಿಶಃ ಶೌರಿಃ ಸಾಯಕೈಃ ಶತಧಾಚ್ಛಿನತ್ ॥
ಅನುವಾದ
ಪರೀಕ್ಷಿತನೆ! ಅಷ್ಟರೊಳಗೆ ಶಾಲ್ವನ ಸೈನ್ಯವೆಲ್ಲ ಪ್ರಾಯಶಃ ನಾಶವಾಗಿ ಹೋಗಿತ್ತು. ಭಗವಾನ್ ಶ್ರೀಕೃಷ್ಣನನ್ನು ನೋಡುತ್ತಲೇ ಶಾಲ್ವನು ಅತ್ಯಂತ ಭಯಂಕರವಾದ ಶಕ್ತ್ಯಾಯುಧವೊಂದನ್ನು ದಾರುಕನ ಮೇಲೆ ಪ್ರಯೋಗಿಸಿದನು. ಆ ಶಕ್ತಿಯು ಭಾರೀ ಶಬ್ದ ಮಾಡುತ್ತಾ, ಹತ್ತು ದಿಕ್ಕುಗಳನ್ನು ಬೆಳಗಿಸುತ್ತಾ ದೊಡ್ಡ ಉಲ್ಕೆಯಂತೆ ವೇಗವಾಗಿ ಸಾರಥಿಯ ಕಡೆಗೆ ಬರುತ್ತಿರುವುದನ್ನು ನೋಡಿದ ಶ್ರೀಕೃಷ್ಣನು ತನ್ನ ಬಾಣಗಳಿಂದ ಅದನ್ನು ನೂರಾರು ತುಂಡುಗಳಾಗಿ ಕತ್ತರಿಸಿದನು. ॥12-13॥
ಮೂಲಮ್
(ಶ್ಲೋಕ-14)
ತಂ ಚ ಷೋಡಶಭಿರ್ವಿದ್ಧ್ವಾ ಬಾಣೈಃ ಸೌಭಂ ಚ ಖೇ ಭ್ರಮತ್ ।
ಅವಿಧ್ಯಚ್ಛರಸಂದೋಹೈಃ ಖಂ ಸೂರ್ಯ ಇವ ರಶ್ಮಿಭಿಃ ॥
ಅನುವಾದ
ಮತ್ತೆ ಶ್ರೀಕೃಷ್ಣನು ಹದಿನಾರು ಬಾಣಗಳಿಂದ ಶಾಲ್ವನನ್ನು ಪ್ರಹರಿಸಿ, ಆಕಾಶದಲ್ಲಿ ಸಂಚರಿಸುತ್ತಿದ್ದ ಸೌಭವಿಮಾನವನ್ನೂ ಸೂರ್ಯನು ತನ್ನ ಕಿರಣಗಳಿಂದ ಆಕಾಶವನ್ನು ಮುಚ್ಚಿಬಿಡುವಂತೆ-ಅಸಂಖ್ಯಾತವಾದ ಬಾಣಗಳಿಂದ ಮುಚ್ಚಿಬಿಟ್ಟನು. ॥14॥
ಮೂಲಮ್
(ಶ್ಲೋಕ-15)
ಶಾಲ್ವಃ ಶೌರೇಸ್ತು ದೋಃ ಸವ್ಯಂ ಸಶಾರ್ಙ್ಗಂ ಶಾರ್ಙ್ಗಧನ್ವನಃ ।
ಬಿಭೇದ ನ್ಯಪತದ್ಧಸ್ತಾತ್ ಶಾರ್ಙ್ಗಮಾಸೀತ್ತದದ್ಭುತಮ್ ॥
ಅನುವಾದ
ಇದಕ್ಕೆ ಪ್ರತಿಯಾಗಿ ಶಾಲ್ವನು ಶಾರ್ಙ್ಗಧನುಸ್ಸಿನಿಂದ ಕೂಡಿದ ಶ್ರೀಕೃಷ್ಣನ ಎಡತೋಳನ್ನು ತೀಕ್ಷ್ಣವಾದ ಬಾಣದಿಂದ ಪ್ರಹರಿಸಿದನು. ಇದರಿಂದ ಭಗವಂತನು ಧರಿಸಿದ್ದ ಶಾರ್ಙ್ಗಧನುಸ್ಸು ಕೆಳಗೆ ಬಿದ್ದುಹೋಯಿತು. ಇಂತಹ ಅದ್ಭುತವಾದೊಂದು ಘಟನೆ ನಡೆದುಹೋಯಿತು. ॥15॥
ಮೂಲಮ್
(ಶ್ಲೋಕ-16)
ಹಾಹಾಕಾರೋ ಮಹಾನಾಸೀದ್ ಭೂತಾನಾಂ ತತ್ರ ಪಶ್ಯತಾಮ್ ।
ವಿನದ್ಯ ಸೌಭರಾಡುಚ್ಚೈರಿದಮಾಹ ಜನಾರ್ದನಮ್ ॥
ಅನುವಾದ
ಆಕಾಶದಲ್ಲಿ ಮತ್ತು ಭೂಮಿಯಲ್ಲಿ ಈ ಯುದ್ಧವನ್ನು ನೋಡುತ್ತಿದ್ದ ಜನರು ಗಟ್ಟಿಯಾಗಿ ಹಾಹಾಕಾರ ಮಾಡಿದರು. ಆಗ ಶಾಲ್ವನು ಗರ್ಜಿಸುತ್ತಾ ಶ್ರೀಕೃಷ್ಣನಲ್ಲಿ ಹೀಗೆ ಹೇಳಿದನು-॥16॥
ಮೂಲಮ್
(ಶ್ಲೋಕ-17)
ಯತ್ತ್ವಯಾ ಮೂಢ ನಃ ಸಖ್ಯುರ್ಭ್ರಾತುರ್ಭಾರ್ಯಾ ಹೃತೇಕ್ಷತಾಮ್ ।
ಪ್ರಮತ್ತಃಸ ಸಭಾಮಧ್ಯೇ ತ್ವಯಾ ವ್ಯಾಪಾದಿತಃ ಸಖಾ ॥
ಅನುವಾದ
ಎಲೈ ಮೂಢನೇ! ನಾವೆಲ್ಲರೂ ನೋಡು-ನೋಡುತ್ತಿರುವಂತೆಯೇ ನಮ್ಮ ತಮ್ಮನೂ, ಮಿತ್ರನೂ ಆದ ಶಿಶುಪಾಲನ ಪತ್ನಿಯನ್ನು ನೀನು ಕದ್ದುಕೊಂಡು ಹೋದೆ ಮತ್ತು ತುಂಬಿದ ಸಭೆಯಲ್ಲಿ ನಮ್ಮ ಮಿತ್ರನಾದ ಶಿಶುಪಾಲನು ಅಜಾಗರೂಕನಾಗಿದ್ದಾಗ ನೀನು ಅವನನ್ನು ಕೊಂದುಹಾಕಿದೆ. ॥17॥
ಮೂಲಮ್
(ಶ್ಲೋಕ-18)
ತಂ ತ್ವಾದ್ಯ ನಿಶಿತೈರ್ಬಾಣೈರಪರಾಜಿತಮಾನಿನಮ್ ।
ನಯಾಮ್ಯಪುನರಾವೃತ್ತಿಂ ಯದಿ ತಿಷ್ಠೇರ್ಮಮಾಗ್ರತಃ ॥
ಅನುವಾದ
ಆದರೂ ನಿನ್ನನ್ನು ಅಜೇಯನೆಂದು ಭಾವಿಸಿರುವೆ. ಒಂದು ವೇಳೆ ನನ್ನೆದುರಿಗೆ ಯುದ್ಧಕ್ಕೆ ನಿಂತರೆ ಇಂದು ತೀಕ್ಷ್ಣವಾದ ಬಾಣಗಳಿಂದ ಮರಳಿ ಬಾರದಿರುವ ಜಾಗಕ್ಕೆ ತಲುಪಿಸುತ್ತೇನೆ. ॥18॥
ಮೂಲಮ್
(ಶ್ಲೋಕ-19)
ಶ್ರೀಭಗವಾನುವಾಚ
ವೃಥಾ ತ್ವಂ ಕತ್ಥಸೇ ಮಂದ ನ ಪಶ್ಯಸ್ಯಂತಿಕೇಂತಕಮ್ ।
ಪೌರುಷಂ ದರ್ಶಯಂತಿ ಸ್ಮ ಶೂರಾ ನ ಬಹುಭಾಷಿಣಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳಿದನು — ಎಲೈ ಮೂರ್ಖನೇ! ನೀನು ವ್ಯರ್ಥವಾಗಿ ಗಳಹುತ್ತಿರುವೆ. ನಿನ್ನ ತಲೆಯ ಮೇಲೆ ಮೃತ್ಯುವು ಕುಣಿಯುತ್ತಿರುವುದನ್ನು ನೀನರಿಯೆ. ನಿಜವಾದ ಶೂರರು ಹೆಚ್ಚು ಮಾತನಾಡುವುದಿಲ್ಲ. ತನ್ನ ಪೌರುಷವನ್ನು ತೋರಿಸಿಕೊಡುತ್ತಾರೆ. ॥19॥
ಮೂಲಮ್
(ಶ್ಲೋಕ-20)
ಇತ್ಯುಕ್ತ್ವಾ ಭಗವಾನ್ ಶಾಲ್ವಂ ಗದಯಾ ಭೀಮವೇಗಯಾ ।
ತತಾಡ ಜತ್ರೌ ಸಂರಬ್ಧಃ ಸ ಚಕಂಪೇ ವಮನ್ನ ಸೃಕ್ ॥
ಅನುವಾದ
ಹೀಗೆ ಹೇಳಿ ಭಗವಾನ್ ಶ್ರೀಕೃಷ್ಣನು ಕ್ರುದ್ಧನಾಗಿ, ಅತ್ಯಂತ ವೇಗಶಾಲಿಯಾದ, ಭಯಂಕರವಾದ ತನ್ನ ಗದೆಯಿಂದ ಶಾಲ್ವನ ಹೆಗಲ ಮೇಲೆ ಪ್ರಹರಿಸಿದನು. ಇದರಿಂದ ಅವನು ರಕ್ತವನ್ನು ಕಕ್ಕುತ್ತಾ ಥರ-ಥರನೆ ನಡುಗಿಹೋದನು. ॥20॥
ಮೂಲಮ್
(ಶ್ಲೋಕ-21)
ಗದಾಯಾಂ ಸನ್ನಿವೃತ್ತಾಯಾಂ ಶಾಲ್ವಸ್ತ್ವಂತರಧೀಯತ ।
ತತೋ ಮುಹೂರ್ತ ಆಗತ್ಯ ಪುರುಷಃ ಶಿರಸಾಚ್ಯುತಮ್ ।
ದೇವಕ್ಯಾ ಪ್ರಹಿತೋಸ್ಮೀತಿ ನತ್ವಾ ಪ್ರಾಹ ವಚೋ ರುದನ್ ॥
ಅನುವಾದ
ಇತ್ತ ಗದೆಯು ಭಗವಂತನ ಬಳಿಗೆ ಮರಳಿ ಬಂದಾಗ ಶಾಲ್ವನು ಅಂತರ್ಧಾನನಾದನು. ಅನಂತರ ಮುಹೂರ್ತಕಾಲ ಕಳೆಯುತ್ತಿರುವಂತೆ ಒಬ್ಬ ಮನುಷ್ಯನು ಭಗವಂತನ ಸಮೀಪಕ್ಕೆ ಬಂದು ತಲೆಬಾಗಿ ನಮಸ್ಕರಿಸಿ, ಅಳುತ್ತಾ ಹೇಳಿದನು- ನನ್ನನ್ನು ನಿಮ್ಮ ತಾಯಿ ದೇವಕಿಯು ಕಳಿಸಿರುವಳು - ॥21॥
ಮೂಲಮ್
(ಶ್ಲೋಕ-22)
ಕೃಷ್ಣ ಕೃಷ್ಣ ಮಹಾಬಾಹೋ ಪಿತಾ ತೇ ಪಿತೃವತ್ಸಲ ।
ಬದ್ಧ್ವಾಪನೀತಃ ಶಾಲ್ವೇನ ಸೌನಿಕೇನ ಯಥಾ ಪಶುಃ ॥
ಅನುವಾದ
ಆಕೆಯು ಹೇಳಿರುವಳು - ಕೃಷ್ಣ! ಕೃಷ್ಣಾ! ಮಹಾಬಾಹುವೇ! ಪಿತೃವತ್ಸಲನೇ! ಶಾಲ್ವನು ನಿನ್ನ ತಂದೆಯನ್ನು ಬಂಧಿಸಿ, ಕಟುಕನು ಪಶುವನ್ನು ಕಟ್ಟಿಕೊಂಡು ಎಳೆದುಕೊಂಡುಹೋಗಿರುವನು. ॥22॥
ಮೂಲಮ್
(ಶ್ಲೋಕ-23)
ನಿಶಮ್ಯ ವಿಪ್ರಿಯಂ ಕೃಷ್ಣೋ ಮಾನುಷೀಂ ಪ್ರಕೃತಿಂ ಗತಃ ।
ವಿಮನಸ್ಕೋ ಘೃಣೀ ಸ್ನೇಹಾದ್ಬಭಾಷೇ ಪ್ರಾಕೃತೋ ಯಥಾ ॥
ಅನುವಾದ
ಈ ಅಪ್ರಿಯವಾದ ಸಮಾಚಾರವನ್ನು ಕೇಳಿದ ಭಗವಾನ್ ಶ್ರೀಕೃಷ್ಣನ ಮುಖದಲ್ಲಿ ಮನುಷ್ಯಸ್ವಭಾವದಂತೆ ಖಿನ್ನತೆ ಆವರಿಸಿತು. ಅವನು ಸಾಮಾನ್ಯ ಮನುಷ್ಯರಂತೆ ಅತ್ಯಂತ ದಯಾಪರನಾಗಿ ಪಿತೃಸ್ನೇಹದಿಂದ ಹೀಗೆ ಹೇಳತೊಡಗಿದನು. ॥23॥
ಮೂಲಮ್
(ಶ್ಲೋಕ-24)
ಕಥಂ ರಾಮಮಸಂಭ್ರಾಂತಂ ಜಿತ್ವಾಜೇಯಂ ಸುರಾಸುರೈಃ ।
ಶಾಲ್ವೇನಾಲ್ಪೀಯಸಾ ನೀತಃ ಪಿತಾ ಮೇ ಬಲವಾನ್ ವಿಧಿಃ ॥
ಅನುವಾದ
ಅರೇ! ನನ್ನ ಅಣ್ಣ ಬಲರಾಮನನ್ನು ದೇವತೆಗಳು ಅಥವಾ ಅಸುರರು ಯಾರೂ ಗೆಲ್ಲಲಾರರು. ಅವನು ಸದಾಕಾಲ ಸಾವಧಾನವಾಗಿರುವವನು. ಶಾಲ್ವನ ಬಲ-ಪೌರುಷವಾದರೋ ಅಲ್ಪವಾದುದು. ಹೀಗಿದ್ದರೂ ಇವನು ನನ್ನಣ್ಣನನ್ನು ಹೇಗೆ ಗೆದ್ದುಕೊಂಡನು? ನಮ್ಮ ತಂದೆಯನ್ನು ಹೇಗೆ ಬಂಧಿಸಿಕೊಂಡು ಹೋದನು? ನಿಜವಾಗಿ ಪ್ರಾರಬ್ಧವು ಬಲವತ್ತರವಾದುದು. ॥24॥
ಮೂಲಮ್
(ಶ್ಲೋಕ-25)
ಇತಿ ಬ್ರುವಾಣೇ ಗೋವಿಂದೇ ಸೌಭರಾಟ್ ಪ್ರತ್ಯುಪಸ್ಥಿತಃ ।
ವಸುದೇವಮಿವಾನೀಯ ಕೃಷ್ಣಂ ಚೇದಮುವಾಚ ಸಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೀಗೆ ಹೇಳುತ್ತಿರುವಂತೆಯೇ ಶಾಲ್ವನು ವಸುದೇವನಂತಹ ಒಬ್ಬ ಮಾಯಾರಚಿತ ಮನುಷ್ಯನನ್ನು ಹಿಡಿದುಕೊಂಡು ಬಂದು, ಶ್ರೀಕೃಷ್ಣನಲ್ಲಿ ಹೇಳತೊಡಗಿದನು. ॥25॥
ಮೂಲಮ್
(ಶ್ಲೋಕ-26)
ಏಷ ತೇ ಜನಿತಾ ತಾತೋ ಯದರ್ಥಮಿಹ ಜೀವಸಿ ।
ವಧಿಷ್ಯೇ ವೀಕ್ಷತಸ್ತೇಮುಮೀಶಶ್ಚೇತ್ ಪಾಹಿ ಬಾಲಿಶ ॥
ಅನುವಾದ
ಮೂರ್ಖನೇ! ನೀನು ಯಾರಿಗಾಗಿ ಬದುಕಿರುವೆಯೋ ಅಂತಹ ನಿನಗೆ ಜನ್ಮದಾತನಾದ ತಂದೆಯೇ ಇವನಾಗಿದ್ದಾನೆ; ನೋಡು. ನೀನು ನೋಡುತ್ತಿರುವಂತೆ ಇವನನ್ನು ನಾನೀಗ ಕತ್ತರಿಸಿ ಬಿಡುತ್ತೇನೆ. ನಿನಗೇನಾದರೂ ಶಕ್ತಿಯಿದ್ದರೆ ಇವನನ್ನು ಬದುಕಿಸಿಕೋ. ॥26॥
ಮೂಲಮ್
(ಶ್ಲೋಕ-27)
ಏವಂ ನಿರ್ಭರ್ತ್ಸ್ಯ ಮಾಯಾವೀ ಖಡ್ಗೇನಾನಕದುಂದುಭೇಃ ।
ಉತ್ಕೃತ್ಯ ಶಿರ ಆದಾಯ ಖಸ್ತಂ ಸೌಭಂ ಸಮಾವಿಶತ್ ॥
ಅನುವಾದ
ಮಾಯಾವಿಯಾದ ಶಾಲ್ವನು ಹೀಗೆ ಭಗವಂತನನ್ನು ನಿಂದಿಸುತ್ತಾ ಮಾಯಾರಚಿತ ವಸುದೇವನ ತಲೆಯನ್ನು ಕತ್ತಿಯಿಂದ ತುಂಡರಿಸಿ, ಅದನ್ನೆತ್ತಿಕೊಂಡು ಆಕಾಶದಲ್ಲಿ ನಿಂತಿದ್ದ ಸೌಭ ವಿಮಾನವನ್ನೇರಿದನು. ॥27॥
ಮೂಲಮ್
(ಶ್ಲೋಕ-28)
ತತೋ ಮುಹೂರ್ತಂ ಪ್ರಕೃತಾವುಪಪ್ಲುತಃ
ಸ್ವಬೋಧ ಆಸ್ತೇ ಸ್ವಜನಾನುಷಂಗತಃ ।
ಮಹಾನುಭಾವಸ್ತದಬುದ್ಧ್ಯದಾಸುರೀಂ
ಮಾಯಾಂ ಸ ಶಾಲ್ವಪ್ರಸೃತಾಂ ಮಯೋದಿತಾಮ್ ॥
ಅನುವಾದ
ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಸ್ವಯಂಸಿದ್ಧ ಜ್ಞಾನಸ್ವರೂಪನೂ, ಮಹಾನುಭಾವನೂ ಆಗಿದ್ದನು. ಆ ಘಟನೆಯನ್ನು ನೋಡಿ ಎರಡುಗಳಿಗೆ ತಂದೆಯಾದ ವಸುದೇವನ ವಿಷಯದಲ್ಲಿ ಅತ್ಯಂತ ಪ್ರೀತಿಯಿದ್ದ ಕಾರಣ ಸಾಧಾರಣ ಮನುಷ್ಯರಂತೆ ಶೋಕಸಾಗರದಲ್ಲಿ ಮುಳುಗಿ ಹೋದನು. ಸ್ವಲ್ಪ ಹೊತ್ತಾದನಂತರ ತಾನು ಕಂಡದ್ದು ಶಾಲ್ವನಿಗೆ ಮಯನು ಉಪದೇಶಿಸಿದ್ದ ಮಾಯಾವಿದ್ಯೆಯ ಪ್ರದರ್ಶನವೆಂಬುದು ಶ್ರೀಕೃಷ್ಣನಿಗೆ ತಿಳಿದುಹೋಯಿತು. ॥28॥
ಮೂಲಮ್
(ಶ್ಲೋಕ-29)
ನ ತತ್ರ ದೂತಂ ನ ಪಿತುಃ ಕಲೇವರಂ
ಪ್ರಬುದ್ಧ ಆಜೌ ಸಮಪಶ್ಯದಚ್ಯುತಃ ।
ಸ್ವಾಪ್ನಂ ಯಥಾ ಚಾಂಬರಚಾರಿಣಂ ರಿಪುಂ
ಸೌಭಸ್ಥ ಮಾಲೋಕ್ಯ ನಿಹಂತುಮುದ್ಯತಃ ॥
ಅನುವಾದ
ಕನಸಿನಲ್ಲಿ ಕಂಡದ್ದೆಲ್ಲಾ ಎಚ್ಚರವಾದೊಡನೆ ಕಾಣದೇ ಹೋಗುವಂತೆಯೇ ಶ್ರೀಕೃಷ್ಣನಿಗೆ ನಿಜಸ್ಥಿತಿಯುಂಟಾಗುತ್ತಲೇ ಅಲ್ಲಿ ಆ ದೂತನಾಗಲೀ, ತಂದೆಯ ಶರೀರವಾಗಲೀ ಏನೂ ಇರಲಿಲ್ಲ. ವಿಮಾನವನ್ನು ಹತ್ತಿ ಅಟ್ಟಹಾಸದಿಂದ ಆಕಾಶದಲ್ಲಿ ಸಂಚರಿಸುತ್ತಿದ್ದ ಶಾಲ್ವನನ್ನು ನೋಡಿ ಅವನನ್ನು ವಧಿಸಲು ಮುಂದಾದನು. ॥29॥
ಮೂಲಮ್
(ಶ್ಲೋಕ-30)
ಏವಂ ವದಂತಿ ರಾಜರ್ಷೇ ಋಷಯಃ ಕೇಚ ನಾನ್ವಿತಾಃ ।
ಯತ್ ಸ್ವವಾಚೋ ವಿರುಧ್ಯೇತ ನೂನಂ ತೇ ನ ಸ್ಮರಂತ್ಯುತ ॥
ಅನುವಾದ
ಪ್ರಿಯ ಪರೀಕ್ಷಿತನೇ! ಶ್ರೀಕೃಷ್ಣನಿಗೆ ವಿಮೋಹ ಉಂಟಾದ ಮಾತುಗಳನ್ನು ಪೂರ್ವಾಪರ ವಿಚಾರ ಮಾಡದ ಕೆಲವು - ಕೆಲವು ಋಷಿಗಳು ಹೇಳುತ್ತಿರುತ್ತಾರೆ. ಶ್ರೀಕೃಷ್ಣನ ವಿಷಯದಲ್ಲಿ ಹೀಗೆ ಹೇಳುವುದು - ‘ಅವನು ಮಾಯಾತೀತನೂ, ಸರ್ವಜ್ಞನೂ’ ಎಂದು ಅವರೇ ಹಿಂದೆ ಹೇಳಿದ ಮಾತುಗಳಿಗೆ ವಿರೋಧವಾಗಿದೆ. ॥30॥
ಮೂಲಮ್
(ಶ್ಲೋಕ-31)
ಕ್ವ ಶೋಕಮೋಹೌ ಸ್ನೇಹೋ ವಾ ಭಯಂ ವಾ ಯೇಜ್ಞ ಸಂಭವಾಃ ।
ಕ್ವ ಚಾಖಂಡಿತವಿಜ್ಞಾನಜ್ಞಾನೈಶ್ವರ್ಯಸ್ತ್ವಖಂಡಿತಃ ॥
ಅನುವಾದ
ಅಜ್ಞಾನದಿಂದುಟಾಗುವ ಶೋಕ-ಮೋಹ-ಸ್ನೇಹ-ಭಯಗಳೆಲ್ಲಿ? ಪರಿಪೂರ್ಣವಾದ ಜ್ಞಾನ-ವಿಜ್ಞಾನೈಶ್ವರ್ಯಗಳಿಗೆ ನೆಲೆಯಾದ, ದೇವವಂದ್ಯನಾದ, ಪರಿಪೂರ್ಣನಾದ ಶ್ರೀಕೃಷ್ಣನೆಲ್ಲಿ? (ಅವನಲ್ಲಿ ಇಂತಹ ಭಾವಗಳಿರುವುದು ಸಂಭವವೇ ಇಲ್ಲ.) ॥31॥
ಮೂಲಮ್
(ಶ್ಲೋಕ-32)
ಯತ್ಪಾದಸೇವೋರ್ಜಿತ ಯಾತ್ಮವಿದ್ಯಯಾ
ಹಿನ್ವಂತ್ಯನಾದ್ಯಾತ್ಮವಿಪರ್ಯಯಗ್ರಹಮ್ ।
ಲಭಂತ ಆತ್ಮೀಯಮನಂತಮೈಶ್ವರಂ
ಕುತೋ ನು ಮೋಹಃ ಪರಮಸ್ಯ ಸದ್ಗತೇಃ ॥
ಅನುವಾದ
ದೊಡ್ಡ ದೊಡ್ಡ ಋಷಿಮುನಿಗಳು ಭಗವಾನ್ ಶ್ರೀಕೃಷ್ಣನ ಚರಣಕಮಲಗಳ ಸೇವೆಮಾಡಿ ಆತ್ಮವಿದ್ಯೆಯನ್ನು ಸಂಪಾದಿಸಿಕೊಳ್ಳುತ್ತಾರೆ ಮತ್ತು ಅನಾದಿಕಾಲದಿಂದಲೂ ಬಂದಿರುವ ಅಜ್ಞಾನರೂಪವಾದ ದೇಹಾತ್ಮ ಬುದ್ಧಿಯನ್ನು ತೊರೆಯುತ್ತಾರೆ. ಆತ್ಮಸಂಬಂಧಿಯಾದ ಅನಂತ ಐಶ್ವರ್ಯವನ್ನು ಪಡೆದುಕೊಳ್ಳುತ್ತಾರೆ. ಅಂತಹ ಸಂತರ ಪರಮಗತಿ ಸ್ವರೂಪನಾದ ಭಗವಾನ್ ಶ್ರೀಕೃಷ್ಣನಲ್ಲಿ ಇಂತಹ ಮೋಹವು ಹೇಗೆ ತಾನೇ ಉಂಟಾಗಬಲ್ಲದು? ॥32॥
ಮೂಲಮ್
(ಶ್ಲೋಕ-33)
ತಂ ಶಸಪೂಗೈಃ ಪ್ರಹರಂತಮೋಜಸಾ
ಶಾಲ್ವಂ ಶರೈಃ ಶೌರಿರಮೋಘವಿಕ್ರಮಃ ।
ವಿದ್ಧ್ವಾಚ್ಛಿನದ್ವರ್ಮ ಧನುಃ ಶಿರೋಮಣಿಂ
ಸೌಭಂ ಚ ಶತ್ರೋರ್ಗದಯಾ ರುರೋಜ ಹ ॥
ಅನುವಾದ
ಈಗ ಶಾಲ್ವನು ಉತ್ಸಾಹಭರಿತನಾಗಿ ಶ್ರೀಕೃಷ್ಣನ ಮೇಲೆ ಪುಂಖಾನುಪುಂಖವಾಗಿ ಶಸ್ತ್ರಗಳ ಮಳೆಗರೆಯತೊಡಗಿದನು. ಅಮೋಘಶಕ್ತಿಯುಳ್ಳ ಭಗವಾನ್ ಶ್ರೀಕೃಷ್ಣನೂ ಕೂಡ ತನ್ನ ಬಾಣಗಳಿಂದ ಶಾಲ್ವನನ್ನು ಗಾಯಗೊಳಿಸಿ, ಕವಚ, ಧನುಸ್ಸು ಮತ್ತು ಕಿರೀಟವನ್ನು ಪುಡಿ-ಪುಡಿ ಮಾಡಿದನು. ಜೊತೆಗೆ ಗದಾಘಾತದಿಂದ ಅವನ ವಿಮಾನವನ್ನು ಘಾಸಿಗೊಳಿಸಿದನು. ॥33॥
ಮೂಲಮ್
(ಶ್ಲೋಕ-34)
ತತ್ ಕೃಷ್ಣಹಸ್ತೇರಿತಯಾ ವಿಚೂರ್ಣಿತಂ
ಪಪಾತ ತೋಯೇ ಗದಯಾ ಸಹಸ್ರಧಾ ।
ವಿಸೃಜ್ಯ ತದ್ಭೂತಲಮಾಸ್ಥಿತೋ ಗದಾ-
ಮುದ್ಯಮ್ಯ ಶಾಲ್ವೋಚ್ಯುತಮಭ್ಯಗಾದ್ದ್ರುತಮ್ ॥
ಅನುವಾದ
ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ವೇಗವಾಗಿ ಎಸೆದಿರುವ ಗದೆಯಿಂದ ಆ ವಿಮಾನವು ನುಚ್ಚು-ನೂರಾಗಿ ಸಮುದ್ರಕ್ಕೆ ಬಿದ್ದು ಹೋಯಿತು. ಅದು ಬೀಳುವ ಮೊದಲೇ ಶಾಲ್ವನು ವಿಮಾನದಿಂದ ನೆಲಕ್ಕೆ ಹಾರಿ ಗದಾಪಾಣಿಯಾಗಿ ವೇಗವಾಗಿ ಶ್ರೀಕೃಷ್ಣನ ಕಡೆಗೆ ಮುನ್ನುಗ್ಗಿದನು. ॥34॥
ಮೂಲಮ್
(ಶ್ಲೋಕ-35)
ಆಧಾವತಃ ಸಗದಂ ತಸ್ಯ ಬಾಹುಂ
ಭಲ್ಲೇನ ಛಿತ್ತ್ವಾಥ ರಥಾಂಗಮದ್ಭುತಮ್ ।
ವಧಾಯ ಶಾಲ್ವಸ್ಯ ಲಯಾರ್ಕಸನ್ನಿಭಂ
ಬಿಭ್ರದ್ಬಭೌ ಸಾರ್ಕ ಇವೋದಯಾಚಲಃ ॥
ಅನುವಾದ
ಶಾಲ್ವನ ಆಕ್ರಮಣವನ್ನು ನೋಡಿದ ಶ್ರೀಕೃಷ್ಣನು ಭಲ್ಲೆಯಿಂದ ಗದೆಯ ಸಹಿತ ಅವನ ತೋಳನ್ನು ಕತ್ತರಿಸಿ ಹಾಕಿದನು. ಮತ್ತೆ ಅವನನ್ನು ಕೊಲ್ಲಲಿಕ್ಕಾಗಿ ಪ್ರಳಯಕಾಲದ ಸೂರ್ಯನಂತೆ ತೇಜಸ್ಸಿನಿಂದ ಕೂಡಿದ್ದ ಪರಮಾದ್ಭುತವಾದ ಸುದರ್ಶನ ಚಕ್ರವನ್ನು ಧರಿಸಿ ಸೂರ್ಯನಿಂದ ಕೂಡಿದ ಉದಯಾಚಲದಂತೆ ಪ್ರಕಾಶಿಸಿದನು. ॥35॥
ಮೂಲಮ್
(ಶ್ಲೋಕ-36)
ಜಹಾರ ತೇನೈವ ಶಿರಃ ಸಕುಂಡಲಂ
ಕಿರೀಟಯುಕ್ತಂ ಪುರುಮಾಯಿನೋ ಹರಿಃ ।
ವಜ್ರೇಣ ವೃತ್ರಸ್ಯ ಯಥಾ ಪುರಂದರೋ
ಬಭೂವ ಹಾಹೇತಿ ವಚಸ್ತದಾ ನೃಣಾಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಮಾಯಾವಿ ಶಾಲ್ವನ ಕಿರೀಟ ಕುಂಡಲ ಸಹಿತ ಶಿರಸ್ಸನ್ನು-ಇಂದ್ರನು ವಜ್ರಾಯುಧದಿಂದ ವೃತ್ರಾಸುರನ ಶಿರವನ್ನು ಕತ್ತರಿಸಿದಂತೆ ಚಕ್ರಾಯುಧದಿಂದ ಕತ್ತರಿಸಿಬಿಟ್ಟನು. ಆ ಸಮಯದಲ್ಲಿ ಶಾಲ್ವನ ಸೈನಿಕರೆಲ್ಲರೂ ದುಃಖತಪ್ತರಾಗಿ ಅಯ್ಯೋ! ಅಯ್ಯೋ! ಎಂದು ಕಿರುಚಿಕೊಂಡರು. ॥36॥
ಮೂಲಮ್
(ಶ್ಲೋಕ-37)
ತಸ್ಮಿನ್ನಿಪತಿತೇ ಪಾಪೇ ಸೌಭೇ ಚ ಗದಯಾ ಹತೇ ।
ನೇದುರ್ದುಂದುಭಯೋ ರಾಜನ್ ದಿವಿ ದೇವಗಣೇರಿತಾಃ ।
ಸಖೀನಾಮಪಚಿತಿಂ ಕುರ್ವನ್ ದಂತವಕೋ ರುಷಾಭ್ಯಗಾತ್ ॥
ಅನುವಾದ
ಪರೀಕ್ಷಿತನೇ! ಹೀಗೆ ಪಾಪಿಯಾದ ಶಾಲ್ವನು ಹತನಾಗಿ ಅವನ ವಿಮಾನವೂ ಗದೆಯಿಂದ ವಿಧ್ವಸ್ತವಾದಾಗ ದೇವತೆಗಳು ಆಕಾಶದಲ್ಲಿ ದುಂದುಭಿಗಳನ್ನು ನುಡಿಸ ತೊಡಗಿದರು. ಇದೇ ಸಮಯಕ್ಕೆ ಸರಿಯಾಗಿ ದಂತವಕ್ತ್ರನು ತನ್ನ ಮಿತ್ರನಾದ ಶಿಶುಪಾಲನೇ ಮೊದಲಾದವರ ಸಾವಿನ ಸೇಡನ್ನು ತೀರಿಸಿಕೊಳ್ಳಲು ಅತ್ಯಂತ ಕ್ರುದ್ಧನಾಗಿ ದ್ವಾರಕೆಗೆ ಆಗಮಿಸಿದನು. ॥37॥
ಅನುವಾದ (ಸಮಾಪ್ತಿಃ)
ಎಪ್ಪತ್ತೇಳನೆಯ ಅಧ್ಯಾಯವು ಮುಗಿಯಿತು. ॥77॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ ಸೌಭವಧೋನಾಮ ಸಪ್ತಸಪ್ತತಿತಮೋಽಧ್ಯಾಯಃ ॥77॥