[ಏಪ್ಪತ್ತಾರನೇಯ ಅಧ್ಯಾಯ]
ಭಾಗಸೂಚನಾ
ಶಾಲ್ವನೊಡನೆ ಯಾದವರ ಯುದ್ಧ
ಮೂಲಮ್
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಅಥಾನ್ಯದಪಿ ಕೃಷ್ಣಸ್ಯ ಶೃಣು ಕರ್ಮಾದ್ಭುತಂ ನೃಪ ।
ಕ್ರೀಡಾನರಶರೀರಸ್ಯ ಯಥಾ ಸೌಭಪತಿರ್ಹತಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳಿದರು — ಎಲೈ ಪರೀಕ್ಷಿತನೇ! ಲೀಲಾಮಾನುಷ ವಿಗ್ರಹನಾದ ಭಗವಾನ್ ಶ್ರೀಕೃಷ್ಣನ ಮತ್ತೊಂದು ಅದ್ಭುತವಾದ ಚರಿತ್ರೆಯನ್ನು ಹೇಳುವೆನು ; ಕೇಳು. ಇದರಲ್ಲಿ ಸೌಭವೆಂಬ ವಿಮಾನಕ್ಕೆ ಒಡೆಯನಾದ ಶಾಲ್ವನು ಶ್ರೀಕೃಷ್ಣನಿಂದ ಹೇಗೆ ಹತನಾದನೆಂಬುದನ್ನು ಹೇಳಲಾಗುವುದು. ॥1॥
ಮೂಲಮ್
(ಶ್ಲೋಕ-2)
ಶಿಶುಪಾಲಸಖಃ ಶಾಲ್ವೋ ರುಕ್ಮಿಣ್ಯುದ್ವಾಹ ಆಗತಃ ।
ಯದುಭಿರ್ನಿರ್ಜಿತಃ ಸಂಖ್ಯೇ ಜರಾಸಂಧಾದಯಸ್ತಥಾ ॥
ಅನುವಾದ
ಶಾಲ್ವನು ಶಿಶುಪಾಲನ ಸ್ನೇಹಿತನಾಗಿದ್ದು, ರುಕ್ಮಿಣಿಯ ವಿವಾಹದ ಸಂದರ್ಭದಲ್ಲಿ ಶಿಶುಪಾಲನ ದಿಬ್ಬಣದೊಂದಿಗೆ ಇವನೂ ಬಂದಿದ್ದನು. ಆ ಸಮಯದಲ್ಲಿ ಯಾದವವೀರರು ಯುದ್ಧದಲ್ಲಿ ಜರಾಸಂಧರೇ ಮೊದಲಾದವರೊಂದಿಗೆ ಶಾಲ್ವನನ್ನು ಗೆದ್ದುಕೊಂಡಿದ್ದರು. ॥2॥
ಮೂಲಮ್
(ಶ್ಲೋಕ-3)
ಶಾಲ್ವಃ ಪ್ರತಿಜ್ಞಾ ಮಕರೋತ್ ಶೃಣ್ವತಾಂ ಸರ್ವಭೂಭುಜಾಮ್ ।
ಅಯಾದವೀಂ ಕ್ಷ್ಮಾಂ ಕರಿಷ್ಯೇ ಪೌರುಷಂ ಮಮ ಪಶ್ಯತ ॥
ಅನುವಾದ
ಆ ದಿನ ಎಲ್ಲ ರಾಜರ ಮುಂದೆ ಶಾಲ್ವನು ‘ನಾನು ಈ ಭೂಮಂಡಲವನ್ನು ಯಾದವರಿಂದ ರಹಿತವನ್ನಾಗಿಸಿಬಿಡುತ್ತೇನೆ. ಅಂತಹ ನನ್ನ ಪೌರುಷವನ್ನು ನೀವು ನೋಡವಿರಂತೆ’ ಎಂಬ ಪ್ರತಿಜ್ಞೆಮಾಡಿದ್ದನು ॥3॥
ಮೂಲಮ್
(ಶ್ಲೋಕ-4)
ಇತಿ ಮೂಢಃ ಪ್ರತಿಜ್ಞಾಯ ದೇವಂ ಪಶುಪತಿಂ ಪ್ರಭುಮ್ ।
ಆರಾಧಯಾಮಾಸ ನೃಪ ಪಾಂಸುಮುಷ್ಟಿಂ ಸಕೃದ್ಗ್ರಸನ್ ॥
ಅನುವಾದ
ಪರೀಕ್ಷಿತನೇ! ಮೂರ್ಖನಾದ ಶಾಲ್ವನು ಹೀಗೆ ಪ್ರತಿಜ್ಞೆಮಾಡಿ ದೇವಾಧಿದೇವನಾದ ಭಗವಾನ್ ಪಶುಪತಿಯ ಆರಾಧನೆಯನ್ನು ಪ್ರಾರಂಭಿಸಿದನು. ಅವನು ದಿನಕ್ಕೆ ಒಂದು ಮುಷ್ಟಿಯಷ್ಟು ಬೂದಿಯನ್ನು ಮಾತ್ರ ಸೇವಿಸುತ್ತಿದ್ದನು. ॥4॥
ಮೂಲಮ್
(ಶ್ಲೋಕ-5)
ಸಂವತ್ಸರಾಂತೇ ಭಗವಾನಾಶುತೋಷ ಉಮಾಪತಿಃ ।
ವರೇಣಚ್ಛಂದಯಾಮಾಸ ಶಾಲ್ವಂ ಶರಣಮಾಗತಮ್ ॥
ಅನುವಾದ
ಉಮಾಪತಿಯಾದ ಶಿವನು ಬಹಳ ಬೇಗ ಸಂತುಷ್ಟನಾಗುವವನಾದರೂ ಶಾಲ್ವನ ಮನಸ್ಸಿನಲ್ಲಿದ್ದ ದುರಭಿಪ್ರಾಯವನ್ನು ಗ್ರಹಿಸಿ ಒಂದು ವರ್ಷದ ಮೇಲೆಯೇ ಪ್ರಸನ್ನನಾಗಿ ಶರಣಾಗತನಾದ ಶಾಲ್ವನಿಗೆ ವರವನ್ನು ಕೇಳಿಕೊಳ್ಳುವಂತೆ ಹೇಳಿದನು. ॥5॥
ಮೂಲಮ್
(ಶ್ಲೋಕ-6)
ದೇವಾಸುರಮನುಷ್ಯಾಣಾಂ ಗಂಧರ್ವೋರಗರಕ್ಷಸಾಮ್ ।
ಅಭೇದ್ಯಂ ಕಾಮಗಂ ವವ್ರೇ ಸ ಯಾನಂ ವೃಷ್ಣಿಭೀಷಣಮ್ ॥
ಅನುವಾದ
ಆಗ ಶಾಲ್ವನು - ದೇವಾಸುರ-ಮನುಷ್ಯರಿಂದಲೂ, ಗಂಧರ್ವೋರಗ ರಾಕ್ಷಸರಿಂದಲೂ ಭೇದಿಸಲಾಗದ, ಇಚ್ಛೆಬಂದಡೆಗೆ ಹೋಗುವ, ವೃಷ್ಣಿವಂಶದವರಿಗೆ ಭಯವನ್ನುಂಟು ಮಾಡುವ ವಿಮಾನವೊಂದನ್ನು ದಯಪಾಲಿಸು ವಂತೆ ಪರಶಿವನಲ್ಲಿ ಕೇಳಿಕೊಂಡನು. ॥6॥
ಮೂಲಮ್
(ಶ್ಲೋಕ-7)
ತಥೇತಿ ಗಿರಿಶಾದಿಷ್ಟೋ ಮಯಃ ಪರಪುರಂಜಯಃ ।
ಪುರಂ ನಿರ್ಮಾಯ ಶಾಲ್ವಾಯ ಪ್ರಾದಾತ್ಸೌಭಮಯಸ್ಮಯಮ್ ॥
ಅನುವಾದ
ಹಾಗೆಯೇ ಆಗಲೆಂದು ಹೇಳಿ ಭಗವಾನ್ ಶಂಕರನು ಅಂತಹ ಅಪೂರ್ವವಾದ ವಿಮಾನವೊಂದನ್ನು ನಿರ್ಮಿಸಿಕೊಡುವಂತೆ ದಾನವ ಶಿಲ್ಪಿಯಾದ ಮಯಾಸುರನಿಗೆ ಆಜ್ಞಾಪಿಸಿದನು. ಶತ್ರುಪಟ್ಟಣವನ್ನು ಜಯಿಸುವ ಸಾಮರ್ಥ್ಯವುಳ್ಳ ಮಯಾಸುರನು ಶಿವನ ಆಜ್ಞೆಯಂತೆ ಲೋಹಮಯವಾದ ಸೌಭವೆಂಬ ವಿಮಾನವನ್ನು ನಿರ್ಮಿಸಿ ಶಾಲ್ವನಿಗೆ ಕೊಟ್ಟನು. ॥7॥
ಮೂಲಮ್
(ಶ್ಲೋಕ-8)
ಸ ಲಬ್ಧ್ವಾ ಕಾಮಗಂ ಯಾನಂ ತಮೋಧಾಮ ದುರಾಸದಮ್ ।
ಯಯೌ ದ್ವಾರವತೀಂ ಶಾಲ್ವೋ ವೈರಂ ವೃಷ್ಣಿಕೃತಂ ಸ್ಮರನ್ ॥
ಅನುವಾದ
ಅದ್ಭುತವಾದ ನಗರದಂತೆ ಇದ್ದ ಆ ವಿಮಾನವು ಅಂಧಕಾರಮಯವಾಗಿತ್ತು. ಯಾರ ಕಣ್ಣಿಗೂ ಕಾಣಿಸುತ್ತಿರಲಿಲ್ಲ. ಆದುದರಿಂದ ಅದನ್ನು ಯಾರಿಂದಲೂ ಹಿಡಿಯಲಾಗುತ್ತಿರಲಿಲ್ಲ. ಅದು ನಡೆಸುವವನ ಇಚ್ಛೆಬಂದಲ್ಲಿಗೆ ಹೋಗುವ ಸಾಮರ್ಥ್ಯವನ್ನು ಹೊಂದಿತ್ತು. ಶಾಲ್ವನು ವೃಷ್ಣಿಗಳೊಡನೆ ಅಥವಾ ಶ್ರೀಕೃಷ್ಣನೊಡನೆ ತನಗಿದ್ದ ವೈರವನ್ನು ಪದೇ-ಪದೇ ಸ್ಮರಿಸಿಕೊಳ್ಳುತ್ತಾ ಸೌಭವಿಮಾನಾರೂಢನಾಗಿ ಸೈನ್ಯಸಮೇತನಾಗಿ ದ್ವಾರಕೆಯನ್ನು ಮುತ್ತಿದನು. ॥8॥
ಮೂಲಮ್
(ಶ್ಲೋಕ-9)
ನಿರುದ್ಧ್ಯ ಸೇನಯಾ ಶಾಲ್ವೋ ಮಹತ್ಯಾ ಭರತರ್ಷಭ ।
ಪುರೀಂ ಬಭಂಜೋಪವನಾನ್ಯುದ್ಯಾನಾನಿ ಚ ಸರ್ವಶಃ ॥
(ಶ್ಲೋಕ-10)
ಸಗೋಪುರಾಣಿ ದ್ವಾರಾಣಿ ಪ್ರಾಸಾದಾಟ್ಟಾಲತೋಲಿಕಾಃ ।
ವಿಹಾರಾನ್ಸ ವಿಮಾನಾಗ್ರ್ಯಾನ್ನಿಪೇತುಃ ಶಸವೃಷ್ಟಯಃ ॥
ಅನುವಾದ
ಪರೀಕ್ಷಿತನೇ! ಸೇನಾಸಮೇತನಾಗಿದ್ದ ಶಾಲ್ವನು ದ್ವಾರಕಾ ನಗರಿಯನ್ನು ನಾಲ್ಕು ದಿಕ್ಕುಗಳಿಂದಲೂ ಮುತ್ತಿಗೆ ಹಾಕಿ, ಫಲ-ಪುಷ್ಟಗಳಿಂದ ತುಂಬಿದ್ದ ಉಪವನಗಳನ್ನು, ಉದ್ಯಾನಗಳನ್ನು, ಧ್ವಂಸಮಾಡಿದನು. ಹಾಗೆಯೇ ನಗರದ್ವಾರಗಳನ್ನು, ಪ್ರಕಾರಗಳನ್ನು, ಉಪ್ಪರಿಗೆಯ ಸೌಧಗಳನ್ನು, ರಾಜಭವನಗಳನ್ನು, ಕ್ರೀಡಾಸ್ಥಳಗಳನ್ನು ನಾಶಮಾಡತೊಡಗಿದನು. ಶಾಲ್ವನು ಸೌಭವಿಮಾನದ ಅಗ್ರಭಾಗದಿಂದ ಶಸ್ತ್ರಾಸ್ತ್ರಗಳ ಮಳೆಯನ್ನೇ ಸುರಿಸಿದನು. ॥9-10॥
ಮೂಲಮ್
(ಶ್ಲೋಕ-11)
ಶಿಲಾ ದ್ರುಮಾಶ್ಚಾಶನಯಃ ಸರ್ಪಾ ಆಸಾರಶರ್ಕರಾಃ ।
ಪ್ರಚಂಡಶ್ಚಕ್ರವಾತೋಭೂದ್ರಜಸಾಚ್ಛಾದಿತಾ ದಿಶಃ ॥
ಅನುವಾದ
ಅಷ್ಟೇ ಅಲ್ಲದೆ ಆ ವಿಮಾನದಿಂದ ದೊಡ್ಡ-ದೊಡ್ಡ ಬಂಡೆಗಳು, ಮರಗಳು ಸರ್ಪಗಳ ವೃಷ್ಟಿಯೇ ಆಗುತ್ತಿತ್ತು. ಸಿಡಿಲು ಬಡಿದು, ಆಲಿಕಲ್ಲಿನ ಮಳೆಗರೆಯುತ್ತಿತ್ತು. ಪ್ರಚಂಡವಾದ ಸುಂಟರಗಾಳಿ ಎದ್ದು ದ್ವಾರಕೆಯ ನಗರದಲ್ಲೆಡೆ ಧೂಳನ್ನು ತುಂಬಿಬಿಟ್ಟಿತ್ತು. ॥11॥
ಮೂಲಮ್
(ಶ್ಲೋಕ-12)
ಇತ್ಯರ್ದ್ಯಮಾನಾ ಸೌಭೇನ ಕೃಷ್ಣಸ್ಯ ನಗರೀ ಭೃಶಮ್ ।
ನಾಭ್ಯಪದ್ಯತ ಶಂ ರಾಜಂಸಿಪುರೇಣ ಯಥಾ ಮಹೀ ॥
ಅನುವಾದ
ಪರೀಕ್ಷಿತನೇ! ಹಿಂದೆ ತ್ರಿಪುರಾಸುರ ನಿಂದ ಭೂಮಿಯು ಕ್ಷೋಭೆಗೊಂಡಂತೆ ಶಾಲ್ವನ ವಿಮಾನದಿಂದ ಪೀಡಿಸಲ್ಪಡುತ್ತಿದ್ದ ಶ್ರೀಕೃಷ್ಣನ ದ್ವಾರಕಾಪಟ್ಟಣವು ಆಗ ಸ್ವಲ್ಪವೂ ಸುಖವನ್ನು ಕಾಣದೆ, ಪ್ರಜೆಗಳು ತತ್ತರಿಸಿ ಹೋದರು. ॥12॥
ಮೂಲಮ್
(ಶ್ಲೋಕ-13)
ಪ್ರದ್ಯುಮ್ನೋ ಭಗವಾನ್ ವೀಕ್ಷ್ಯ ಬಾಧ್ಯಮಾನಾ ನಿಜಾಃ ಪ್ರಜಾಃ ।
ಮಾ ಭೈಷ್ಟೇತ್ಯಭ್ಯಧಾದ್ವೀರೋ ರಥಾರೂಢೋ ಮಹಾಯಶಾಃ ॥
ಅನುವಾದ
(ಆ ಸಮಯದಲ್ಲಿ ಶ್ರೀಕೃಷ್ಣನೂ ದ್ವಾರಕೆಯಲ್ಲಿರಲಿಲ್ಲ.) ಆಗ ಶ್ರೀಕೃಷ್ಣನ ಮಗನಾದ ಪರಮ ಯಶಸ್ವೀ ವೀರನಾದ ಪ್ರದ್ಯುಮ್ನನು-ತಮ್ಮ ಪ್ರಜೆಗಳೆಲ್ಲರೂ ಕಷ್ಟಪಡುತ್ತಿರುವುದನ್ನು ಕಂಡು-‘ಹೆದರಬೇಡಿರಿ’ ಎಂದು ಅವರಿಗೆ ಧೈರ್ಯತುಂಬಿ ರಥಾರೂಢನಾಗಿ ಯುದ್ಧಕ್ಕೆ ಹೊರಟೇಬಿಟ್ಟನು. ॥13॥
ಮೂಲಮ್
(ಶ್ಲೋಕ-14)
ಸಾತ್ಯಕಿಶ್ಚಾರುದೇಷ್ಣಶ್ಚ ಸಾಂಬೋಕ್ರೂರಃ ಸಹಾನುಜಃ ।
ಹಾರ್ದಿಕ್ಯೋ ಭಾನುವಿಂದಶ್ಚ ಗದಶ್ಚ ಶುಕಸಾರಣೌ ॥
(ಶ್ಲೋಕ-15)
ಅಪರೇ ಚ ಮಹೇಷ್ವಾಸಾ ರಥಯೂಥಪಯೂಥಪಾಃ ।
ನಿರ್ಯಯುರ್ದಂಶಿತಾ ಗುಪ್ತಾ ರಥೇಭಾಶ್ವಪದಾತಿಭಿಃ ॥
ಅನುವಾದ
ಅವನನ್ನು ಅನುಸರಿಸುತ್ತಾ ಸಾತ್ಯಕಿ, ಚಾರು ದೇಷ್ಣ, ಸಾಂಬ, ತಮ್ಮಂದಿರೊಡನೆ ಅಕ್ರೂರ, ಕೃತವರ್ಮಾ, ಭಾನು, ವಿಂದ, ಗದ, ಶುಕ, ಸಾರಣ ಮೊದಲಾದ ಮಹಾರಥಿಗಳಾದ ಅನೇಕ ಮಹಾ-ಮಹಾವೀರರು ಕವಚಗಳನ್ನು ತೊಟ್ಟು, ಧನುಷ್ಪಾಣಿಯಾಗಿ ಹೊರಟರು. ಅವರೊಂದಿಗೆ ಅಸಂಖ್ಯಾತ ರಥ, ಗಜ, ಅಶ್ವ ಮತ್ತು ಪದಾತಿಗಳೆಂಬ ಚತುರಂಗ ಸೇನೆಯು ಹೊರಟಿತು. ॥14-15॥
ಮೂಲಮ್
(ಶ್ಲೋಕ-16)
ತತಃ ಪ್ರವವೃತೇ ಯುದ್ಧಂ ಶಾಲ್ವಾನಾಂ ಯದುಭಿಃ ಸಹ ।
ಯಥಾಸುರಾಣಾಂ ವಿಬುಧೈಸ್ತುಮುಲಂ ಲೋಮಹರ್ಷಣಮ್ ॥
ಅನುವಾದ
ಹಿಂದಿನ ಕಾಲದಲ್ಲಿ ದೇವತೆಗಳೊಂದಿಗೆ ಅಸುರರ ತುಮುಲ ಯುದ್ಧವಾದಂತೆಯೇ ಶಾಲ್ವನ ಸೈನಿಕರೊಡನೆ ಯಾದವ ವೀರರ ಯುದ್ಧವು ಪ್ರಾರಂಭಗೊಂಡಿತು. ಆ ಅದ್ಭುತಯುದ್ಧವನ್ನು ನೋಡಿದವರ ರೋಮಗಳು ನಿಮಿರಿ ನಿಂತಿರುತ್ತಿದ್ದುವು. ॥16॥
ಮೂಲಮ್
(ಶ್ಲೋಕ-17)
ತಾಶ್ಚ ಸೌಭಪತೇರ್ಮಾಯಾ ದಿವ್ಯಾಸೈ ರುಕ್ಮಿಣೀಸುತಃ ।
ಕ್ಷಣೇನ ನಾಶಯಾಮಾಸ ನೈಶಂ ತಮ ಇವೋಷ್ಣಗುಃ ॥
ಅನುವಾದ
ಸೂರ್ಯನು ತನ್ನ ಪ್ರಖರವಾದ ಕಿರಣಗಳಿಂದ ಕತ್ತಲೆಯನ್ನು ಅಳಿಸಿಹಾಕುವಂತೆ ವೀರವರನಾದ ಪ್ರದ್ಯುಮ್ನನು ತನ್ನ ದಿವ್ಯಅಸ್ತ್ರಗಳಿಂದ ಕ್ಷಣದಲ್ಲಿ ಸೌಭಪತಿ ಶಾಲ್ವನ ಮಾಯೆಯೆಲ್ಲವನ್ನೂ ನಿವಾರಿಸಿದನು. ॥17॥
ಮೂಲಮ್
(ಶ್ಲೋಕ-18)
ವಿವ್ಯಾಧ ಪಂಚವಿಂಶತ್ಯಾ ಸ್ವರ್ಣಪುಂಖೈರಯೋಮುಖೈಃ ।
ಶಾಲ್ವಸ್ಯ ಧ್ವಜಿನೀಪಾಲಂ ಶರೈಃ ಸನ್ನತಪರ್ವಭಿಃ ॥
ಅನುವಾದ
ಸುವರ್ಣಮಯವಾದ ರೆಕ್ಕೆಗಳನ್ನು ಹೊಂದಿದ ಲೋಹದ ಅಗ್ರಭಾಗವುಳ್ಳ ಇಪ್ಪತ್ತೈದು ಬಾಣಗಳಿಂದ ಪ್ರದ್ಯುಮ್ನನು ಶಾಲ್ವನ ಸೇನಾಪತಿಯನ್ನು ಘಾಸಿಗೊಳಿಸಿದನು. ॥18॥
ಮೂಲಮ್
(ಶ್ಲೋಕ-19)
ಶತೇನಾತಾಡಯಚ್ಛಾಲ್ವಮೇಕೈಕೇನಾಸ್ಯ ಸೈನಿಕಾನ್ ।
ದಶಭಿರ್ದಶಭಿರ್ನೇತೃನ್ ವಾಹನಾನಿ ತ್ರಿಭಿಸಿಭಿಃ ॥
ಅನುವಾದ
ಮಹಾವೀರನಾದ ಪ್ರದ್ಯುಮ್ನನು ಪುನಃ ಶಾಲ್ವನನ್ನು ನೂರು ಬಾಣಗಳಿಂದಲೂ, ಒಬ್ಬೊಬ್ಬ ಸೈನಿಕರನ್ನು ಒಂದೊಂದು ಬಾಣದಿಂದಲೂ ಸಾರಥಿಗಳನ್ನು ಹತ್ತತ್ತು ಬಾಣಗಳಿಂದಲೂ, ವಾಹನಗಳನ್ನು ಮೂರು- ಮೂರು ಬಾಣಗಳಿಂದ ಪ್ರಹರಿಸಿ ಗಾಯಗೊಳಿಸಿದನು. ॥19॥
ಮೂಲಮ್
(ಶ್ಲೋಕ-20)
ತದದ್ಭುತಂ ಮಹತ್ಕರ್ಮ ಪ್ರದ್ಯುಮ್ನಸ್ಯ ಮಹಾತ್ಮನಃ ।
ದೃಷ್ಟ್ವಾ ತಂ ಪೂಜಯಾಮಾಸುಃ ಸರ್ವೇ ಸ್ವಪರಸೈನಿಕಾಃ ॥
ಅನುವಾದ
ಮಹಾತ್ಮನಾದ ಪ್ರದ್ಯುಮ್ನನ ಈ ಮಹತ್ಕಾರ್ಯವನ್ನು ಕಂಡು ಅವನ ಕಡೆಯ ಸೈನಿಕರು ಮತ್ತು ಶತ್ರು ಪಕ್ಷದ ಸೈನಿಕರೂ ಕೂಡ ಅವನನ್ನು ಬಹಳವಾಗಿ ಪ್ರಶಂಸಿಸಿದರು. ॥20॥
ಮೂಲಮ್
(ಶ್ಲೋಕ-21)
ಬಹುರೂಪೈಕರೂಪಂ ತದ್ದೃಶ್ಯತೇ ನ ಚ ದೃಶ್ಯತೇ ।
ಮಾಯಾಮಯಂ ಮಯಕೃತಂ ದುರ್ವಿಭಾವ್ಯಂ ಪರೈರಭೂತ್ ॥
ಅನುವಾದ
ಪರೀಕ್ಷಿತನೇ! ಮಾಯಾಸುರನಿಂದ ನಿರ್ಮಿಸಲ್ಪಟ್ಟ ಸೌಭವಿಮಾನವು ಅತ್ಯಂತ ಮಾಯಾಮಯವಾಗಿತ್ತು. ಕೆಲವೊಮ್ಮೆ ಅನೇಕ ರೂಪದಿಂದ ಕಂಡುಬಂದರೆ, ಕೆಲವೊಮ್ಮೆ ಒಂದೇಯಾಗಿ ತೋರುತ್ತಿತ್ತು. ಕೆಲವೊಮ್ಮೆ ಕಣ್ಮರೆಯಾಗುತ್ತಿತ್ತು. ಯದುವೀರರಿಗೆ ಆ ವಿಮಾನವು ಎಲ್ಲಿದೆ? ಯಾವಾಗ ಬರುತ್ತಿದೆ? ಎಂಬುದೇ ತಿಳಿಯುತ್ತಿರಲಿಲ್ಲ. ॥21॥
ಮೂಲಮ್
(ಶ್ಲೋಕ-22)
ಕ್ವಚಿದ್ಭೂವೌ ಕ್ವಚಿದ್ವ್ಯೋಮ್ನಿ ಗಿರಿಮೂರ್ಧ್ನಿ ಜಲೇ ಕ್ವಚಿತ್ ।
ಅಲಾತಚಕ್ರವದ್ಭ್ರಾಮ್ಯತ್ಸೌಭಂ ತದ್ದುರವಸ್ಥಿತಮ್ ॥
ಅನುವಾದ
ಅದು ಕೆಲವೊಮ್ಮೆ ಭೂಮಿಯಲ್ಲಿ ಸಂಚರಿಸಿದರೆ, ಕೆಲವೊಮ್ಮೆ ಆಕಾಶದಲ್ಲಿ ಹಾರುತ್ತಿತ್ತು. ಕೆಲವೊಮ್ಮೆ ಪರ್ವತಾಗ್ರದಲ್ಲಿ ಕಂಡುಬಂದರೆ, ಕೆಲವೊಮ್ಮೆ ನೀರಿನ ಮೇಲೆ ತೇಲುತ್ತಿತ್ತು. ಆ ಸೌಭವಿಮಾನವು ಕೊಳ್ಳಿಯ ಚಕ್ರದಂತೆ ಎಲ್ಲೆಂದರಲ್ಲಿ ಸಂಚರಿಸುತ್ತಾ ನಿಂತಲ್ಲಿ ನಿಲ್ಲದೆ ಯದುವೀರರಿಗೆ ಭ್ರಾಂತಿಯನ್ನು ಉಂಟುಮಾಡುತ್ತಿತ್ತು. ॥22॥
ಮೂಲಮ್
(ಶ್ಲೋಕ-23)
ಯತ್ರ ಯತ್ರೋಪಲಕ್ಷ್ಯೇತ ಸಸೌಭಃ ಸಹಸೈನಿಕಃ ।
ಶಾಲ್ವಸ್ತತಸ್ತತೋಮುಂಚನ್ ಶರಾನ್ಸಾತ್ವತಯೂಥಪಾಃ ॥
ಅನುವಾದ
ಶಾಲ್ವನು ಸೈನಿಕರೊಡನೆ ಮತ್ತು ತನ್ನ ವಿಮಾನದೊಡನೆ ಕಂಡಬಂದಲ್ಲೆಲ್ಲ ಯಾದವ ಸೇನಾಪತಿಗಳು ಬಾಣಗಳ ಮಳೆಯನ್ನೇ ಸುರಿಸುತ್ತಿದ್ದರು. ॥23॥
ಮೂಲಮ್
(ಶ್ಲೋಕ-24)
ಶರೈರಗ್ನ್ಯರ್ಕಸಂಸ್ಪರ್ಶೈರಾಶೀವಿಷದುರಾಸದೈಃ ।
ಪೀಡ್ಯಮಾನಪುರಾನೀಕಃ ಶಾಲ್ವೋಮುಹ್ಯತ್ಪರೇರಿತೈಃ ॥
ಅನುವಾದ
ಅವರ ಬಾಣಗಳು ಸೂರ್ಯ, ಅಗ್ನಿಗಳಂತೆ ಉರಿಯುತ್ತಾ ಪ್ರಖರವಾಗಿದ್ದು, ವಿಷಸರ್ಪಗಳಂತೆ ತಡೆದುಕೊಳ್ಳಲು ಅಸಾಧ್ಯವಾಗಿದ್ದವು. ಅವುಗಳಿಂದ ಶಾಲ್ವನ ನಗರಾಕಾರವಾದ ವಿಮಾನ ಮತ್ತು ಸೈನ್ಯವು ಅತ್ಯಂತ ಪೀಡಿತವಾಯಿತು. ಕೊನೆಗೆ ಯಾದವರ ಬಾಣಗಳಿಂದ ಶಾಲ್ವನೂ ಮೂರ್ಛೆಗೊಂಡನು. ॥24॥
ಮೂಲಮ್
(ಶ್ಲೋಕ-25)
ಶಾಲ್ವಾನೀಕಪಶಸೌಘೈರ್ವೃಷ್ಣಿವೀರಾ ಭೃಶಾರ್ದಿತಾಃ ।
ನ ತತ್ಯಜೂ ರಣಂ ಸ್ವಂ ಸ್ವಂ ಲೋಕದ್ವಯಜಿಗೀಷವಃ ॥
ಅನುವಾದ
ಪರೀಕ್ಷಿತನೇ! ಶಾಲ್ವನ ಸೇನಾಪತಿಗಳೂ ಯಾದವ ಸೈನ್ಯದ ಮೇಲೆ ಶಸ್ತ್ರಾಸ್ತ್ರಗಳ ಮಳೆಗರೆದರು. ಇದರಿಂದ ಯಾದವಸೈನಿಕರು ಬಹಳ ಗಾಯಗೊಂಡರು. ಆದರೂ ‘ಜಯಿಸಿದರೆ ಭೋಗ, ಸತ್ತರೆ ಸ್ವರ್ಗ’ ಎಂದು ಯೋಚಿಸುತ್ತಾ ಅವರು ರಣಭೂಮಿಯನ್ನು ಬಿಟ್ಟು ಓಡಿಹೋಗಲಿಲ್ಲ. ॥25॥
ಮೂಲಮ್
(ಶ್ಲೋಕ-26)
ಶಾಲ್ವಾಮಾತ್ಯೋ ದ್ಯುಮಾನ್ನಾಮ ಪ್ರದ್ಯುಮ್ನಂ ಪ್ರಾಕ್ಪ್ರಪೀಡಿತಃ ।
ಆಸಾದ್ಯ ಗದಯಾ ವೌರ್ವ್ಯಾ ವ್ಯಾಹತ್ಯ ವ್ಯನದದ್ಬಲೀ ॥
ಅನುವಾದ
ಪರೀಕ್ಷಿದ್ರಾಜನೇ! ಶಾಲ್ವನ ದ್ಯುಮಂತನೆಂಬ ಮಂತ್ರಿಯು ಈ ಹಿಂದೆ ಪ್ರದ್ಯುಮ್ನನು ಪ್ರಯೋಗಿಸಿದ ಇಪ್ಪತ್ತೈದು ಬಾಣಗಳಿಂದ ಬಹಳ ಗಾಯಗೊಂಡಿದ್ದನು. ಸ್ವಲ್ಪ ಚೇತರಿಸಿಕೊಂಡು; ಪುನಃ ಪ್ರದ್ಯುಮ್ನನೊಡನೆ ಯುದ್ಧ ಮಾಡಲು ಬಂದು ಮಹಾಬಲಿಷ್ಠನಾದ ದ್ಯುಮಂತನು ಕಬ್ಬಿಣದ ಗದೆಯಿಂದ ಪ್ರದ್ಯುಮ್ನನನ್ನು ರಭಸದಿಂದ ಪ್ರಹರಿಸಿ ಗಟ್ಟಿಯಾಗಿ ಗರ್ಜಿಸಿದನು. ॥26॥
ಮೂಲಮ್
(ಶ್ಲೋಕ-27)
ಪ್ರದ್ಯುಮ್ನಂ ಗದಯಾ ಶೀರ್ಣವಕ್ಷಃಸ್ಥಲಮರಿಂದಮಮ್ ।
ಅಪೋವಾಹ ರಣಾತ್ಸೂತೋ ಧರ್ಮವಿದ್ದಾರುಕಾತ್ಮಜಃ ॥
ಅನುವಾದ
ಪರೀಕ್ಷಿತನೇ! ದ್ಯುಮಂತನ ಗದಾಪ್ರಹಾರದಿಂದ ಪ್ರದ್ಯುಮ್ನನ ಎದೆ ಒಡೆದಂತಾಗಿ ಮೂರ್ಛಿತನಾದನು. ಅವನ ರಥವನ್ನು ನಡೆಸುತ್ತಿದ್ದ ದಾರುಕನ ಪುತ್ರನು ಸಾರಥಿಯ ಧರ್ಮಕ್ಕನುಸಾರ ಅವನನ್ನು ರಣಭೂಮಿಯಿಂದ ಹೊರಕ್ಕೆ ಕೊಂಡೊಯ್ದನು. ॥27॥
ಮೂಲಮ್
(ಶ್ಲೋಕ-28)
ಲಬ್ಧಸಂಜ್ಞೋ ಮುಹೂರ್ತೇನ ಕಾರ್ಷ್ಣಿಃ ಸಾರಥಿಮಬ್ರವೀತ್ ।
ಅಹೋ ಅಸಾಧ್ವಿದಂ ಸೂತ ಯದ್ರಣಾನ್ಮೇಪಸರ್ಪಣಮ್ ॥
ಅನುವಾದ
ಮುಹೂರ್ತಕಾಲವು ಕಳೆದನಂತರ ಪ್ರದ್ಯುಮ್ನನಿಗೆ ಮೂರ್ಛೆಯ ತಿಳಿಯಿತು. ಆಗ ಅವನು ಸಾರಥಿಗೆ ಹೇಳಿದನು ಸಾರಥಿಯೇ! ನನ್ನನ್ನು ರಣರಂಗದಿಂದ ಹಿಂದಕ್ಕೆ ಕರೆತಂದು ಬಹಳ ತಪ್ಪು ಕೆಲಸವನ್ನು ಮಾಡಿಬಿಟ್ಟಿರುವೆ. ನೀನು ಹೀಗೆ ಮಾಡಬಾರದಾಗಿತ್ತು. ॥28॥
ಮೂಲಮ್
(ಶ್ಲೋಕ-29)
ನ ಯದೂನಾಂ ಕುಲೇ ಜಾತಃ ಶ್ರೂಯತೇ ರಣವಿಚ್ಯುತಃ ।
ವಿನಾ ಮತ್ಕ್ಲೀಬಚಿತ್ತೇನ ಸೂತೇನ ಪ್ರಾಪ್ತ ಕಿಲ್ಬಿಷಾತ್ ॥
ಅನುವಾದ
ಸೂತನೇ! ನಮ್ಮ ವಂಶದಲ್ಲಿ ಯಾವನೇ ವೀರನು ರಣರಂಗದಿಂದ ಪಲಾಯನಮಾಡಿದರೆಂಬುದನ್ನು ನಾನು ಇದೂವರೆಗೂ ಕೇಳಿಯೇ ಇಲ್ಲ. ಹೇಡಿಯಾದ ಸಾರಥಿಯಿಂದಾಗಿ ನಾನೊಬ್ಬನು ಇಂತಹ ಕಳಂಕಕ್ಕೆ ಗುರಿಯಾಗಬೇಕಾಯಿತಲ್ಲ! ॥29॥
ಮೂಲಮ್
(ಶ್ಲೋಕ-30)
ಕಿಂ ನು ವಕ್ಷ್ಯೇಭಿಸಂಗಮ್ಯ ಪಿತರೌ ರಾಮಕೇಶವೌ ।
ಯುದ್ಧಾತ್ಸಮ್ಯಗಪಕ್ರಾಂತಃ ಪೃಷ್ಟಸ್ತತ್ರಾತ್ಮನಃ ಕ್ಷಮಮ್ ॥
ಅನುವಾದ
ಈಗ ನಾನು ದೊಡ್ಡಪ್ಪನಾದ ಬಲರಾಮನ ಮತ್ತು ತಂದೆಯಾದ ಶ್ರೀಕೃಷ್ಣನ ಮುಂದೆ ಹೋಗಿ ಏನು ಹೇಳಲಿ? ಈಗಲಾದರೋ ಎಲ್ಲ ಜನರು ‘ನಾನು ಯುದ್ಧದಿಂದ ಓಡಿ ಹೋದೆ’ ಎಂದೇ ಹೇಳುವರು. ಅವರು ಪ್ರಶ್ನಿಸಿದಾಗ ನನ್ನ ಶೌರ್ಯ-ಸಾಹಸಗಳಿಗೆ ಅನುರೂಪವಾದ ಯಾವ ಉತ್ತರವನ್ನು ಕೊಡಲಿ? ॥30॥
ಮೂಲಮ್
(ಶ್ಲೋಕ-31)
ವ್ಯಕ್ತಂ ಮೇ ಕಥಯಿಷ್ಯಂತಿ ಹಸಂತ್ಯೋ ಭ್ರಾತೃಜಾಮಯಃ ।
ಕ್ಲೈಬ್ಯಂ ಕಥಂ ಕಥಂ ವೀರ ತವಾನ್ಯೈಃ ಕಥ್ಯತಾಂ ಮೃಧೇ ॥
ಅನುವಾದ
ನನ್ನ ಅತ್ತಿಗೆ-ನಾದಿನಿಯರು ನನ್ನ ಹೇಡಿತನವನ್ನು ಹಂಗಿಸುತ್ತಾ, ಗಹ-ಗಹಿಸಿ ನಗುತ್ತಾ ‘ವೀರಾಧಿ ವೀರ ಶೂರನೇ! ನೀನು ನಪುಂಸಕ ಹೇಗಾದೆ? ನೀನು ಶತ್ರುಗಳೊಡನೆ ರಣರಂಗದಲ್ಲಿ ಹೇಗೆ ಯುದ್ಧ ಮಾಡಿದೆ? ವಿವರಿಸಿ ಹೇಳು’ ಎಂದು ಕೇಳಿದರೆ ನಾನೇನು ಉತ್ತರಿಸಲಿ? ॥31॥
ಮೂಲಮ್
(ಶ್ಲೋಕ-32)
ಮೂಲಮ್ (ವಾಚನಮ್)
ಸಾರಥಿರುವಾಚ
ಮೂಲಮ್
ಧರ್ಮಂ ವಿಜಾನತಾಯುಷ್ಮನ್ ಕೃತಮೇತನ್ಮಯಾ ವಿಭೋ ।
ಸೂತಃ ಕೃಚ್ಛ್ರಗತಂ ರಕ್ಷೇದ್ರಥಿನಂ ಸಾರಥಿಂ ರಥೀ ॥
ಅನುವಾದ
ಸಾರಥಿಯು ಹೇಳಿದನು — ಆಯುಷ್ಮಂತನೇ! ನಾನು ಸಾರಥಿಯ ಧರ್ಮವನ್ನು ಚೆನ್ನಾಗಿ ಅರಿತುಕೊಂಡೇ ಮಾಡಿರುವೆನು. ಒಡೆಯಾ! ಪ್ರಾಣಾಪತ್ತಿನಲ್ಲಿ ಸಿಕ್ಕಿಬಿದ್ದಿರುವಾಗ ಸಾರಥಿಯು ರಥಿಕನನ್ನು ರಕ್ಷಿಸಬೇಕು. ಹಾಗೆಯೇ ಸಾರಥಿಯನ್ನು ಕಾಪಾಡಬೇಕು ಎಂಬುದು ಯುದ್ಧದ ಧರ್ಮವಾಗಿದೆಯಲ್ಲ! ॥32॥
ಮೂಲಮ್
(ಶ್ಲೋಕ-33)
ಏತದ್ವಿದಿತ್ವಾ ತು ಭವಾನ್ ಮಯಾಪೋವಾಹಿತೋ ರಣಾತ್ ।
ಉಪಸೃಷ್ಟಃ ಪರೇಣೇತಿ ಮೂರ್ಚ್ಛಿತೋ ಗದಯಾ ಹತಃ ॥
ಅನುವಾದ
ಈ ಧರ್ಮವನ್ನು ತಿಳಿದುಕೊಂಡೇ ನಾನು ನಿಮ್ಮನ್ನು ರಣರಂಗದಿಂದ ಕರೆ ತಂದಿರುವೆನು. ಶತ್ರುವು ನಿಮ್ಮ ಮೇಲೆ ಗದಾ ಪ್ರಹಾರಮಾಡಿದಾಗ ನೀವು ಮೂರ್ಛಿತರಾದಿರಿ. ದೊಡ್ಡ ಆಪತ್ತಿನಲ್ಲಿ ಸಿಲುಕಿದಿರಿ. ಅದರಿಂದಾಗಿ ನಾನು ಹೀಗೆ ಮಾಡಬೇಕಾಯಿತು. (ಸೂತನ ಮಾತನ್ನು ಕೇಳಿ ಪ್ರದ್ಯುಮ್ನನಿಗೂ ಸಮಾಧಾನವಾಯಿತು.) ॥33॥
ಅನುವಾದ (ಸಮಾಪ್ತಿಃ)
ಎಪ್ಪತ್ತಾರನೆಯ ಅಧ್ಯಾಯವು ಮುಗಿಯಿತು. ॥76॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ
ಶಾಲ್ವಯುದ್ಧೇ ಷಟ್ಸಪ್ತತಿತಮೋಽಧ್ಯಾಯಃ ॥76॥