[ಏಪ್ಪತ್ತೈದನೇಯ ಅಧ್ಯಾಯ]
ಭಾಗಸೂಚನಾ
ರಾಜಸೂಯ ಯಜ್ಞದ ಪರಿಸಮಾಪ್ತಿ - ದುರ್ಯೋಧನನಿಗಾದ ಅವಮಾನ
ಮೂಲಮ್
(ಶ್ಲೋಕ-1)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಅಜಾತಶತ್ರೋಸ್ತಂ ದೃಷ್ಟ್ವಾ ರಾಜಸೂಯಮಹೋದಯಮ್ ।
ಸರ್ವೇ ಮುಮುದಿರೇ ಬ್ರಹ್ಮನ್ನೃದೇವಾ ಯೇ ಸಮಾಗತಾಃ ॥
(ಶ್ಲೋಕ-2)
ದುರ್ಯೋಧನಂ ವರ್ಜಯಿತ್ವಾ ರಾಜಾನಃ ಸರ್ಷಯಃ ಸುರಾಃ ।
ಇತಿ ಶ್ರುತಂ ನೋ ಭಗವಂಸ್ತತ್ರ ಕಾರಣಮುಚ್ಯತಾಮ್ ॥
ಅನುವಾದ
ಪರೀಕ್ಷಿದ್ರಾಜನು ಕೇಳಿದನು — ಪೂಜ್ಯರೇ! ಅಜಾತಶತ್ರುವಾದ ಯುಧಿಷ್ಠಿರನ ರಾಜಸೂಯ ಯಜ್ಞವನ್ನು ನೋಡಲು ಬಂದಿರುವ ಮನುಷ್ಯರೂ, ರಾಜರೂ, ಋಷಿ-ಮುನಿಗಳೂ, ದೇವತೆಗಳೂ ಮುಂತಾದವರೆಲ್ಲರೂ ಆನಂದಿತರಾದರು. ಆದರೆ ದುರ್ಯೋಧನನಿಗೆ ಮಾತ್ರ ಸಂತೋಷವಾಗಲಿಲ್ಲ, ದುಃಖವಾಯಿತು ಎಂದು ನೀವು ಹೇಳಿದಿರಿ. ಇದರ ಕಾರಣವನ್ನು ದಯವಿಟ್ಟು ಹೇಳಿರಿ. ॥1-2॥
ಮೂಲಮ್
(ಶ್ಲೋಕ-3)
ಮೂಲಮ್ (ವಾಚನಮ್)
ಋಷಿರುವಾಚ
ಮೂಲಮ್
ಪಿತಾಮಹಸ್ಯ ತೇ ಯಜ್ಞೇ ರಾಜಸೂಯೇ ಮಹಾತ್ಮನಃ ।
ಬಾಂಧವಾಃ ಪರಿಚರ್ಯಾಯಾಂ ತಸ್ಯಾಸನ್ ಪ್ರೇಮಬಂಧನಾಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳಿದರು — ಪರೀಕ್ಷಿತನೇ! ನಿನ್ನ ಪಿತಾಮಹ ಯುಧಿಷ್ಠಿರನು ಮಹಾತ್ಮನಾಗಿದ್ದನು. ಅವನ ಪ್ರೇಮಬಂಧನಕ್ಕೆ ಸಿಲುಕಿದ ಎಲ್ಲ ಬಂಧುಬಾಂಧವರು ರಾಜಸೂಯ ಯಜ್ಞದಲ್ಲಿ ಬೇರೆ-ಬೇರೆ ಸೇವಾಕಾರ್ಯಗಳನ್ನು ವಹಿಸಿಕೊಂಡಿದ್ದರು. ॥3॥
ಮೂಲಮ್
(ಶ್ಲೋಕ-4)
ಭೀಮೋ ಮಹಾನಸಾಧ್ಯಕ್ಷೋ ಧನಾಧ್ಯಕ್ಷಃ ಸುಯೋಧನಃ ।
ಸಹದೇವಸ್ತು ಪೂಜಾಯಾಂ ನಕುಲೋ ದ್ರವ್ಯಸಾಧನೇ ॥
ಅನುವಾದ
ಭೀಮಸೇನನು ಪಾಕಶಾಲೆಗೆ ಅಧ್ಯಕ್ಷನಾಗಿದ್ದನು. ದುರ್ಯೋಧನನು ಧನಾಕ್ಷನಾಗಿದ್ದನು. ಸಹದೇವನು ಅಭ್ಯಾಗತರ ಸ್ವಾಗತ-ಸತ್ಕಾರದಲ್ಲಿ ನಿಯುಕ್ತನಾಗಿದ್ದನು. ನಕುಲನು ಸಾಮಗ್ರಿಗಳನ್ನು ಸಂಗ್ರಹಿಸುವ ಕಾರ್ಯವನ್ನು ನೋಡಿಕೊಳ್ಳುತ್ತಿದ್ದನು. ॥4॥
ಮೂಲಮ್
(ಶ್ಲೋಕ-5)
ಗುರುಶುಶ್ರೂಷಣೇ ಜಿಷ್ಣುಃ ಕೃಷ್ಣಃ ಪಾದಾವನೇಜನೇ ।
ಪರಿವೇಷಣೇ ದ್ರುಪದಜಾ ಕರ್ಣೋ ದಾನೇ ಮಹಾಮನಾಃ ॥
ಅನುವಾದ
ಅರ್ಜುನನು ಗುರುಜನರ ಸೇವಾ-ಶುಶ್ರೂಷೆಗಳ ಹೊಣೆಯನ್ನು ಹೊತ್ತಿದ್ದನು. ಭಗವಾನ್ ಶ್ರೀಕೃಷ್ಣನು ಅತಿಥಿಗಳ ಕಾಲುಗಳನ್ನು ತೊಳೆಯುವ ಕೆಲಸಮಾಡುತ್ತಿದ್ದನು. ದ್ರೌಪದಾದೇವಿಯು ಊಟ ಬಡಿಸುವ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಳು. ಉದಾರಶಿರೋಮಣಿಯಾದ ಕರ್ಣನು ಮುಕ್ತಹಸ್ತದಿಂದ ದಾನಮಾಡುತ್ತಿದ್ದನು. ॥5॥
ಮೂಲಮ್
(ಶ್ಲೋಕ-6)
ಯುಯುಧಾನೋ ವಿಕರ್ಣಶ್ಚ ಹಾರ್ದಿಕ್ಯೋ ವಿದುರಾದಯಃ ।
ಬಾಹ್ಲೀಕಪುತ್ರಾ ಭೂರ್ಯಾದ್ಯಾ ಯೇ ಚ ಸಂತರ್ದನಾದಯಃ ॥
(ಶ್ಲೋಕ-7)
ನಿರೂಪಿತಾ ಮಹಾಯಜ್ಞೇ ನಾನಾಕರ್ಮಸು ತೇ ತದಾ ।
ಪ್ರವರ್ತಂತೇ ಸ್ಮ ರಾಜೇಂದ್ರ ರಾಜ್ಞಃ ಪ್ರಿಯಚಿಕೀರ್ಷವಃ ॥
ಅನುವಾದ
ಪರೀಕ್ಷಿತನೇ! ಹೀಗೆಯೇ ಸಾತ್ಯಕಿ, ವಿಕರ್ಣ, ಹಾರ್ದಿಕ್ಯ, ವಿದುರ, ಭೂರಿಶ್ರವಾ ಮೊದಲಾದ ಬಾಹ್ಲಿಕನ ಮಕ್ಕಳು, ಸಂತರ್ದನರೇ ಮುಂತಾದವರೆಲ್ಲರೂ ರಾಜಸೂಯ ಯಜ್ಞದಲ್ಲಿ ಬೇರೆ-ಬೇರೆ ಕಾರ್ಯದಲ್ಲಿ ನಿಯುಕ್ತರಾದರು. ಎಲ್ಲರ ಆಶಯವೂ ಕೂಡ ಯುಧಿಷ್ಠಿರನಿಗೆ ಪ್ರಿಯ ಮತ್ತು ಹಿತವನ್ನುಂಟುಮಾಡಬೇಕೆಂದೇ ಇತ್ತು. ॥6-7॥
ಮೂಲಮ್
(ಶ್ಲೋಕ-8)
ಋತ್ವಿಕ್ಸದಸ್ಯಬಹುವಿತ್ಸು ಸುಹೃತ್ತಮೇಷು
ಸ್ವಿಷ್ಟೇಷು ಸೂನೃತಸಮರ್ಹಣದಕ್ಷಿಣಾಭಿಃ ।
ಚೈದ್ಯೇ ಚ ಸಾತ್ವತಪತೇಶ್ಚರಣಂ ಪ್ರವಿಷ್ಟೇ
ಚಕ್ರುಸ್ತತಸ್ತ್ವವಭೃಥಸ್ನಪನಂ ದ್ಯುನದ್ಯಾಮ್ ॥
ಅನುವಾದ
ಪರೀಕ್ಷಿತನೇ! ಹೀಗೆ ಋತ್ವಿಜರು, ಸದಸ್ಯರು, ವಿದ್ವಾಂಸರು, ಇಷ್ಟ-ಮಿತ್ರರು, ಬಂಧು-ಬಾಂಧವರು ಸಮಸ್ತರೂ ಪ್ರಿಯ ವಚನಗಳಿಂದಲೂ, ಮರ್ಯಾದೆಗಳಿಂದಲೂ, ದಕ್ಷಿಣೆಗಳಿಂದಲೂ ಯಥಾಯೋಗ್ಯವಾಗಿ ಪೂಜಿಸಲ್ಪಟ್ಟು. ಶಿಶುಪಾಲನು ಭಕ್ತವತ್ಸಲನಾದ ಭಗವಂತನ ಚರಣಗಳಲ್ಲಿ ಸೇರಿಹೋದನು. ಬಳಿಕ ಧರ್ಮರಾಜನು ದೇವಗಂಗೆಯಲ್ಲಿ ಅವಭೃತಸ್ನಾನಕ್ಕಾಗಿ ಹೊರಟನು. ॥8॥
ಮೂಲಮ್
(ಶ್ಲೋಕ-9)
ಮೃದಂಗಶಂಖಪಣವಧುಂಧುರ್ಯಾನಕಗೋಮುಖಾಃ ।
ವಾದಿತ್ರಾಣಿ ವಿಚಿತ್ರಾಣಿ ನೇದುರಾವಭೃಥೋತ್ಸವೇ ॥
ಅನುವಾದ
ಅವನು ಅವಭೃತ ಸ್ನಾನ ಮಾಡತೊಡಗಿದಾಗ ಮೃದಂಗ, ಶಂಖ, ಪಣವ, ಆನಕ, ನಗಾರಿ, ಢಕ್ಕೆ ಗೋಮುಖ ಮೊದಲಾದ ಮಂಗಳವಾದ್ಯಗಳು ಮೊಳಗಿದವು. ॥9॥
ಮೂಲಮ್
(ಶ್ಲೋಕ-10)
ನರ್ತಕ್ಯೋ ನನೃತುರ್ಹೃಷ್ಟಾ ಗಾಯಕಾ ಯೂಥಶೋ ಜಗುಃ ।
ವೀಣಾವೇಣುತಲೋನ್ನಾದಸ್ತೇಷಾಂ ಸ ದಿವಮಸ್ಪೃಶತ್ ॥
ಅನುವಾದ
ನರ್ತಕಿಯರು ನರ್ತನಮಾಡಿದರು. ಗಾಯಕರು ಗುಂಪು-ಗುಂಪಾಗಿ ಹಾಡತೊಡಗಿದರು. ವೀಣೆ, ಕೊಳಲು, ತಾಳಗಳು ನುಡಿಸಲ್ಪಟ್ಟವು. ಇವುಗಳ ಶಬ್ದವು ಆಕಾಶದಲ್ಲೆಲ್ಲ ಪ್ರತಿಧ್ವನಿಸಿತು. ॥10॥
ಮೂಲಮ್
(ಶ್ಲೋಕ-11)
ಚಿತ್ರಧ್ವಜಪತಾಕಾಗ್ರೈರಿಭೇಂದ್ರಸ್ಯಂದನಾರ್ವಭಿಃ ।
ಸ್ವಲಂಕೃತೈರ್ಭಟೈರ್ಭೂಪಾ ನಿರ್ಯಯೂ ರುಕ್ಮಮಾಲಿನಃ ॥
(ಶ್ಲೋಕ-12)
ಯದುಸೃಂಜಯಕಾಂಭೋಜಕುರುಕೇಕಯಕೋಸಲಾಃ ।
ಕಂಪಯಂತೋ ಭುವಂ ಸೈನ್ಯೈರ್ಯಜಮಾನಪುರಸ್ಸರಾಃ ॥
ಅನುವಾದ
ಸುವರ್ಣದ ಹಾರಗಳಿಂದ ಸಮಲಂಕೃತರಾದ ಯದು, ಸೃಂಜಯ, ಕಾಂಬೋಜ, ಕುರು, ಕೇಕಯ ಮತ್ತು ಕೋಸಲ ದೇಶಗಳ ರಾಜರು ಬಣ್ಣ-ಬಣ್ಣದ ಧ್ವಜಪತಾಕೆಗಳಿಂದ ಅಲಂಕೃತವಾಗಿದ್ದ ಮಹಾಗಜಗಳ ಮೇಲೂ, ಕುದುರೆಗಳ ಮೇಲೂ, ರಥಗಳಲ್ಲಿಯೂ ಕುಳಿತು ಪದಾತಿ ಸೈನಿಕರೊಡನೆ ಭೂಮಿಯನ್ನೇ ನಡುಗಿಸುತ್ತಾ ಯುಧಿಷ್ಠಿರ ಮಹಾರಾಜನನ್ನು ಮುಂದುಮಾಡಿಕೊಂಡು ಅವಭೃತಕ್ಕೆ ಹೋಗುತ್ತಿದ್ದರು. ॥11-12॥
ಮೂಲಮ್
(ಶ್ಲೋಕ-13)
ಸದಸ್ಯರ್ತ್ವಿಗ್ದ್ವಿಜಶ್ರೇಷ್ಠಾ ಬ್ರಹ್ಮಘೋಷೇಣ ಭೂಯಸಾ ।
ದೇವರ್ಷಿಪಿತೃಗಂಧರ್ವಾಸ್ತುಷ್ಟುವುಃ ಪುಷ್ಪವರ್ಷಿಣಃ ॥
ಅನುವಾದ
ಯಜ್ಞದ ಸದಸ್ಯರು, ಋತ್ವಿಜರು, ಬಹಳಷ್ಟು ಮಂದಿ ಬ್ರಾಹ್ಮಣಶ್ರೇಷ್ಠರು ಉಚ್ಚಸ್ವರದಲ್ಲಿ, ಮಂತ್ರಗಳನ್ನು ಪಠಿಸತೊಡಗಿದರು. ದೇವತೆಗಳು, ಋಷಿಗಳು, ಪಿತೃಗಳು, ಗಂಧರ್ವರು ಆಕಾಶದಿಂದ ಹೂಮಳೆಗರೆಯುತ್ತಾ ಯುಧಿಷ್ಠಿರನನ್ನು ಹೊಗಳುತ್ತಿದ್ದರು. ॥13॥
ಮೂಲಮ್
(ಶ್ಲೋಕ-14)
ಸ್ವಲಂಕೃತಾ ನರಾ ನಾರ್ಯೋ ಗಂಧಸ್ರಗ್ಭೂಷಣಾಂಬರೈಃ ।
ವಿಲಿಂಪಂತ್ಯೋಭಿಷಿಂಚಂತ್ಯೋ ವಿಜಹ್ರುರ್ವಿವಿಧೈ ರಸೈಃ ॥
ಅನುವಾದ
ಗಂಧಮಾಲ್ಯಾಭರಣ ವಸ್ತ್ರಗಳಿಂದ ಸಮಲಂಕೃತರಾಗಿದ್ದ ಇಂದ್ರಪ್ರಸ್ಥದ ನರ-ನಾರಿಯರು ಓಕುಳಿಯ ನೀರು, ಹಾಲು, ಎಣ್ಣೆ, ಬೆಣ್ಣೆ ಮುಂತಾದವುಗಳನ್ನು ಒಬ್ಬರ ಮೇಲೊಬ್ಬರು ಎರಚಾಡುತ್ತಾ, ಆಟವಾಡುತ್ತಾ ಹಿಂಬಾಲಿಸುತ್ತಿದ್ದರು. ॥14॥
ಮೂಲಮ್
(ಶ್ಲೋಕ-15)
ತೈಲಗೋರಸಗಂಧೋದಹರಿದ್ರಾಸಾಂದ್ರಕುಂಕುಮೈಃ ।
ಪುಂಭಿರ್ಲಿಪ್ತಾಃ ಪ್ರಲಿಂಪಂತ್ಯೋ ವಿಜಹ್ರುರ್ವಾರಯೋಷಿತಃ ॥
ಅನುವಾದ
ವಾರಾಂಗನೆಯರು ಎಣ್ಣೆ, ಹಾಲು, ತುಪ್ಪ, ಬೆಣ್ಣೆ, ಪನ್ನೀರು, ಅರಸಿನ ಇವೇ ಮುಂತಾದುವನ್ನು ಬೆರಸಿದ ಕೇಸರೀ ಮಿಶ್ರಿತವಾದ ಕೆಂಪುನೀರನ್ನು ಪುರುಷರ ಮೇಲೆ ಎರಚುತ್ತಾ ಮತ್ತು ಪುರುಷರೂ ಅವರ ಮೇಲೆ ಎರಚುತ್ತಾ ಓಕುಳಿಯ ಆಟವನ್ನಾಡುತ್ತಿದ್ದರು. ॥15॥
ಮೂಲಮ್
(ಶ್ಲೋಕ-16)
ಗುಪ್ತಾ ನೃಭಿರ್ನಿರಗಮನ್ನುಪಲಬ್ಧುಮೇತದ್
ದೇವ್ಯೋ ಯಥಾ ದಿವಿ ವಿಮಾನವರೈರ್ನೃದೇವ್ಯಃ ।
ತಾ ಮಾತುಲೇಯಸಖಿಭಿಃ ಪರಿಷಿಚ್ಯಮಾನಾಃ
ಸವ್ರೀಡಹಾಸವಿಕಸದ್ವದನಾ ವಿರೇಜುಃ ॥
ಅನುವಾದ
ಆ ಸಮಯದಲ್ಲಿ ಅವಭೃತೋತ್ಸವವನ್ನು ನೋಡುವ ಸಲುವಾಗಿ ಶ್ರೇಷ್ಠವಾದ ವಿಮಾನಗಳಲ್ಲಿ ಕುಳಿತು ಆಕಾಶದಲ್ಲಿ ಅಸಂಖ್ಯಾತ ದೇವಿಯರು ಉಪಸ್ಥಿತರಾಗಿರುವಂತೆಯೇ ಇಂದ್ರಪ್ರಸ್ಥದ ರಾಜಮಹಿಷಿಯರು ಸೈನಿಕರಿಂದ ಸಂರಕ್ಷಿತರಾಗಿ ಸುಂದರವಾದ ಪಲ್ಲಕ್ಕಿಗಳಲ್ಲಿ ಕುಳಿತು ಆಗಮಿಸಿದ್ದರು. ಪಾಂಡವರ ಸೋದರಮಾವನ ಮಗನಾದ ಶ್ರೀಕೃಷ್ಣ ಮತ್ತು ಅವನ ಸ್ನೇಹಿತರು ಆ ರಾಣಿಯರ ಮೇಲೆ ಓಕುಳಿಯನ್ನು ಚೆಲ್ಲುತ್ತಿದ್ದರು. ಇದರಿಂದ ರಾಜಮಹಿಷಿಯರ ಮುಖವು ನಾಚಿಕೆಯಿಂದಲೂ, ಮಂದಹಾಸದಿಂದಲೂ ವಿಕಸಿತವಾಗಿ ಅತ್ಯಂತ ಶೋಭಾಯಮಾನವಾಗಿ ಕಾಣುತ್ತಿತ್ತು. ॥16॥
ಮೂಲಮ್
(ಶ್ಲೋಕ-17)
ತಾ ದೇವರಾನುತ ಸಖೀನ್ಸಿಷಿಚುರ್ದೃತೀಭಿಃ
ಕ್ಲಿನ್ನಾಂಬರಾ ವಿವೃತಗಾತ್ರಕುಚೋರುಮಧ್ಯಾಃ ।
ಔತ್ಸುಕ್ಯಮುಕ್ತಕಬರಾಚ್ಚ್ಯವಮಾನಮಾಲ್ಯಾಃ
ಕ್ಷೋಭಂ ದಧುರ್ಮಲಧಿಯಾಂ ರುಚಿರೈರ್ವಿಹಾರೈಃ ॥
ಅನುವಾದ
ಹಾಗೆಯೇ ಪಲ್ಲಕ್ಕಿಗಳಲ್ಲಿ ಕುಳಿತಿದ್ದ ರಾಣಿಯರೂ ಕೂಡ ಭಾವಮೈದುನರ ಮೇಲೂ, ಸಖಿಯರ ಮೇಲೂ ಜೀರ್ಕೊಳವೆಯಿಂದ ಓಕುಳಿಯನ್ನು ಎರಚುತ್ತಿದ್ದರು. ಹೀಗೆ ಪರಸ್ಪರ ಓಕುಳಿಯ ಆಟವನ್ನಾಡುತ್ತಿದ್ದಾಗ ಸ್ತ್ರೀಯರ ಬಟ್ಟೆಗಳೆಲ್ಲವೂ ಒದ್ದೆಯಾಗಿದ್ದವು. ಆಟವಾಡುವ ಸಂಭ್ರಮದಲ್ಲಿ ಅವರ ಮುಡಿಗಳು ಸಡಿಲವಾಗಿ ಮುಡಿದ ಹೂವುಗಳು ನಕ್ಷತ್ರಗಳಂತೆ ಉದುರುತ್ತಿದ್ದವು. ಪರೀಕ್ಷಿತನೇ! ಅವರ ಇಂತಹ ಸುಂದರವಾದ ಮತ್ತು ಪವಿತ್ರವಾದ ವಿಹಾರವನ್ನು ಕಂಡು ಮಲಿನವಾದ ಅಂತಃಕರಣವುಳ್ಳ ಪುರುಷರ ಮನಸ್ಸು ಕ್ಷೋಭೆಗೊಂಡವು. ॥17॥
ಮೂಲಮ್
(ಶ್ಲೋಕ-18)
ಸ ಸಮ್ರಾಡ್ ರಥಮಾರೂಢಃ ಸದಶ್ವಂ ರುಕ್ಮಮಾಲಿನಮ್ ।
ವ್ಯರೋಚತ ಸ್ವಪತ್ನೀಭಿಃ ಕ್ರಿಯಾಭಿಃ ಕ್ರತುರಾಡಿವ ॥
ಅನುವಾದ
ಚಕ್ರವರ್ತಿ ಮಹಾರಾಜ ಯುಧಿಷ್ಠಿರನು ದ್ರೌಪದಿಯೇ ಮೊದಲಾದ ತನ್ನ ಪತ್ನಿಯರೊಡನೆ ಸುಂದರವಾದ ಕುದುರೆ ಗಳನ್ನು ಹೂಡಲ್ಪಟ್ಟ, ಸುವರ್ಣಮಾಲೆಗಳಿಂದ ಸಮಲಂಕೃತವಾದ ದಿವ್ಯರಥದಲ್ಲಿ ಕುಳಿತು ಪ್ರಯಾಜವೇ ಮೊದಲಾದ ಯಜ್ಞಕ್ರಿಯೆಗಳಿಂದ ಕೂಡಿ ಮೂರ್ತಿವತ್ತಾಗಿ ಆವಿರ್ಭವಿಸಿದ ರಾಜಸೂಯ ಯಜ್ಞದಂತೆಯೇ ಪ್ರಕಾಶಿಸಿದನು. ॥18॥
ಮೂಲಮ್
(ಶ್ಲೋಕ-19)
ಪತ್ನೀಸಂಯಾಜಾವಭೃಥ್ಯೈಶ್ಚರಿತ್ವಾ ತೇ ತಮೃತ್ವಿಜಃ ।
ಆಚಾಂತಂ ಸ್ನಾಪಯಾಂಚಕ್ರುರ್ಗಂಗಾಯಾಂ ಸಹ ಕೃಷ್ಣಯಾ ॥
ಅನುವಾದ
ಅನಂತರ ಋತ್ವಿಜರು ಪತ್ನೀಸಂಯಾಜ (ಒಂದು ಯಜ್ಞಕ್ರಿಯೆ)ವೆಂಬ ವಿಶೇಷಯಾಗವನ್ನೂ ಮತ್ತು ಯಜ್ಞಾಂತ-ಸ್ನಾನದ ಸಂಬಂಧವಾದ ಕರ್ಮಗಳನ್ನು ಯುಧಿಷ್ಠಿರನಿಂದ ಮಾಡಿಸಿ, ಅವನಿಂದ ಶುದ್ಧಾಚಮನ ಮಾಡಿಸಿದನಂತರ ದ್ರೌಪದಿಯೊಡನೆ ಗಂಗಾಸ್ನಾನವನ್ನು ಮಾಡಿಸಿದರು. ॥19॥
ಮೂಲಮ್
(ಶ್ಲೋಕ-20)
ದೇವದುಂದುಭಯೋ ನೇದುರ್ನರದುಂದುಭಿಭಿಃ ಸಮಮ್ ।
ಮುಮುಚುಃ ಪುಷ್ಪವರ್ಷಾಣಿ ದೇವರ್ಷಿಪಿತೃಮಾನವಾಃ ॥
ಅನುವಾದ
ಆ ಸಮಯದಲ್ಲಿ ನುಡಿಸಿದ ದುಂದುಭಿಗಳೊಡನೆ ದೇವದುಂದುಭಿಗಳೂ ಮೊಳಗಿದವು. ದೇವರ್ಷಿ-ಪಿತೃ-ಮನುಷ್ಯರು ಧರ್ಮರಾಜನ ಮೇಲೆ ಪುಷ್ಪವೃಷ್ಟಿಯನ್ನು ಸುರಿಸಿದರು. ॥20॥
ಮೂಲಮ್
(ಶ್ಲೋಕ-21)
ಸಸ್ನುಸ್ತತ್ರ ತತಃ ಸರ್ವೇ ವರ್ಣಾಶ್ರಮಯುತಾ ನರಾಃ ।
ಮಹಾಪಾತಕ್ಯಪಿ ಯತಃ ಸದ್ಯೋ ಮುಚ್ಯೇತ ಕಿಲ್ಬಿಷಾತ್ ॥
ಅನುವಾದ
ಮಹಾರಾಜ ಯುಧಿಷ್ಠಿರನು ದ್ರೌಪದಿಯೊಡನೆ ಅವಭೃತ ಸ್ನಾನಮಾಡಿದ ನಂತರ ಇತರ ಸಮಸ್ತ ವರ್ಣದವರೂ ಗಂಗೆಯಲ್ಲಿ ಸ್ನಾನಮಾಡಿದರು. ಈ ಪವಿತ್ರ ಸ್ನಾನದಿಂದ ಮಹಾಪಾತಕಿಯಾದರೂ ತನ್ನ ಪಾಪಗಳಿಂದ ಕ್ಷಣದಲ್ಲೇ ಮುಕ್ತನಾಗಿ ಹೋಗುತ್ತಾನೆ. ॥21॥
ಮೂಲಮ್
(ಶ್ಲೋಕ-22)
ಅಥ ರಾಜಾಹತೇ ಕ್ಷೌಮೇ ಪರಿಧಾಯ ಸ್ವಲಂಕೃತಃ ।
ಋತ್ವಿಕ್ಸದಸ್ಯವಿಪ್ರಾದೀನಾನರ್ಚಾಭರಣಾಂಬರೈಃ ॥
ಅನುವಾದ
ಬಳಿಕ ಯುಧಿಷ್ಠಿರನು ನವೀನ ರೇಷ್ಮೆಯ ಪಂಚೆ-ಉತ್ತರೀಯವನ್ನು ಧರಿಸಿಕೊಂಡು ವಿಧ-ವಿಧವಾದ ಆಭರಣಗಳಿಂದ ಅಲಂಕೃತನಾದನು. ಮತ್ತೆ ಋತ್ವಿಜರಿಗೆ, ಸದಸ್ಯರಿಗೆ, ಬ್ರಾಹ್ಮಣರಿಗೆ ವಸ್ತ್ರಾಭೂಷಣಗಳನ್ನು ಕೊಟ್ಟು ಸತ್ಕರಿಸಿದನು. ॥22॥
ಮೂಲಮ್
(ಶ್ಲೋಕ-23)
ಬಂಧುಜ್ಞಾತಿನೃಪಾನ್ಮಿತ್ರಸುಹೃದೋನ್ಯಾಂಶ್ಚ ಸರ್ವಶಃ ।
ಅಭೀಕ್ಷ್ಣಂ ಪೂಜಯಾಮಾಸ ನಾರಾಯಣಪರೋ ನೃಪಃ ॥
ಅನುವಾದ
ನಾರಾಯಣ ಪರಾಯಣನೂ, ಎಲ್ಲರಲ್ಲಿಯೂ ಭಗವಂತನನ್ನೇ ಕಾಣುವವನೂ, ಶ್ರೀಕೃಷ್ಣನ ಪರಮಭಕ್ತನೂ ಆದ ಯುಧಿಷ್ಠಿರನು ಬಂಧುಗಳನ್ನೂ, ಜ್ಞಾತಿಗಳನ್ನೂ, ರಾಜರನ್ನೂ, ಸುಹೃದರನ್ನೂ, ಸಮಸ್ತರನ್ನೂ ಪುನಃಪುನಃ ಪೂಜಿಸಿ ಸತ್ಕರಿಸಿದನು. ॥23॥
ಮೂಲಮ್
(ಶ್ಲೋಕ-24)
ಸರ್ವೇ ಜನಾಃ ಸುರರುಚೋ ಮಣಿಕುಂಡಲಸ್ರ-
ಗುಷ್ಣೀಷಕಂಚುಕದುಕೂಲಮಹಾರ್ಘ್ಯಹಾರಾಃ ।
ನಾರ್ಯಶ್ಚ ಕುಂಡಲಯುಗಾಲಕವೃಂದ ಜುಷ್ಟ-
ವಕ ಶ್ರಿಯಃ ಕನಕಮೇಖಲಯಾ ವಿರೇಜುಃ ॥ 24 ॥
ಅನುವಾದ
ಆ ಸಮಯದಲ್ಲಿ ಸಮಸ್ತ ಜನರೂ ರತ್ನಕುಂಡಲಗಳಿಂದಲೂ, ಪುಷ್ಪಹಾರಗಳಿಂದಲೂ, ರುಮಾಲುಗಳಿಂದಲೂ, ಕವಚಗಳಿಂದಲೂ, ಪಟ್ಟೆವಸ್ತ್ರಗಳಿಂದಲೂ, ಬಹುಮೂಲ್ಯ ರತ್ನಹಾರಗಳಿಂದಲೂ ಸಮಲಂಕೃತರಾಗಿ ದೇವತೆಗಳಂತೆ ಶೋಭಿಸುತ್ತಿದ್ದರು. ಸ್ತ್ರೀಯರೂ ಕೂಡ ಥಳ-ಥಳಿಸುವ ಓಲೆಗಳನ್ನು ಧರಿಸಿ, ಗುಂಗುರು ಕೂದಲುಗಳಿಂದ ಅಲಂಕೃತವಾದ ಮುಖಕಮಲಗಳಿಂದಲೂ, ಸುವರ್ಣಮಯವಾದ ಸೊಂಟಪಟ್ಟಿಯಿಂದಲೂ ಕೂಡಿ ಅತ್ಯಂತ ಶೋಭಾಯಮಾನರಾಗಿ ಕಾಣುತ್ತಿದ್ದರು. ॥24॥
ಮೂಲಮ್
(ಶ್ಲೋಕ-25)
ಅಥರ್ತ್ವಿಜೋ ಮಹಾಶೀಲಾಃ ಸದಸ್ಯಾ ಬ್ರಹ್ಮವಾದಿನಃ ।
ಬ್ರಹ್ಮಕ್ಷತ್ರಿಯವಿಟ್ಶೂದ್ರಾ ರಾಜಾನೋ ಯೇ ಸಮಾಗತಾಃ ॥
(ಶ್ಲೋಕ-26)
ದೇವರ್ಷಿಪಿತೃಭೂತಾನಿ ಲೋಕಪಾಲಾಃ ಸಹಾನುಗಾಃ ।
ಪೂಜಿತಾಸ್ತಮನುಜ್ಞಾಪ್ಯ ಸ್ವಧಾಮಾನಿ ಯಯುರ್ನೃಪ ॥
ಅನುವಾದ
ಪರೀಕ್ಷಿತನೇ! ರಾಜಸೂಯ ಯಜ್ಞಕ್ಕೆ ಆಗಮಿಸಿದ್ದ ಶೀಲವಂತರಾದ ಋತ್ವಿಜರು, ವೇದಪಾಠಿಗಳಾದ ಸದಸ್ಯರು, ಬ್ರಾಹ್ಮಣ ಕ್ಷತ್ರಿಯ-ವೈಶ್ಯ-ಶೂದ್ರರು, ರಾಜರುಗಳು, ದೇವತೆಗಳು, ಋಷಿಗಳು, ಮುನಿಗಳು, ಪಿತೃದೇವತೆಗಳು, ಇತರ ಪ್ರಾಣಿಗಳೂ ತಮ್ಮ-ತಮ್ಮ ಅನುಯಾಯಿಗಳೊಂದಿಗೆ ಆಗಮಿಸಿದ್ದ ಲೋಕಪಾಲರು-ಇವರೆಲ್ಲರನ್ನೂ ಧರ್ಮರಾಜನಾದ ಯುಧಿಷ್ಠಿರನು ಯಥೋಚಿತವಾಗಿ ಪೂಜಿಸಿ ಸತ್ಕರಿಸಿದನು. ಅನಂತರ ಅವರೆಲ್ಲರೂ ರಾಜನ ಅನುಮತಿಯನ್ನು ಪಡೆದು ತಮ್ಮ-ತಮ್ಮ ನಿವಾಸಸ್ಥಾನಗಳಿಗೆ ಹೊರಟುಹೋದರು. ॥25-26॥
ಮೂಲಮ್
(ಶ್ಲೋಕ-27)
ಹರಿದಾಸಸ್ಯ ರಾಜರ್ಷೇ ರಾಜಸೂಯಮಹೋದಯಮ್ ।
ನೈವಾತೃಪ್ಯನ್ ಪ್ರಶಂಸಂತಃ ಪಿಬನ್ಮರ್ತ್ಯೋಮೃತಂ ಯಥಾ ॥
ಅನುವಾದ
ಪರೀಕ್ಷಿದ್ರಾಜನೇ! ಅಮೃತಪಾನ ಮಾಡುತ್ತಾ-ಮಾಡುತ್ತಾ ಮನುಷ್ಯನು ತೃಪ್ತನಾಗದಿರುವಂತೆಯೇ ಹರಿದಾಸನಾದ, ರಾಜರ್ಷಿಯಾದ ಯುಧಿಷ್ಠಿರನ ರಾಜಸೂಯ ಯಾಗವನ್ನು ಎಷ್ಟು ಹೊಗಳಿದರೂ ಜನರಿಗೆ ತೃಪ್ತಿಯೇ ಆಗುತ್ತಿರಲಿಲ್ಲ. ॥27॥
ಮೂಲಮ್
(ಶ್ಲೋಕ-28)
ತತೋ ಯುಧಿಷ್ಠಿರೋ ರಾಜಾ ಸುಹೃತ್ಸಂಬಂಧಿ ಬಾಂಧವಾನ್ ।
ಪ್ರೇಮ್ಣಾ ನಿವಾಸಯಾಮಾಸ ಕೃಷ್ಣಂ ಚ ತ್ಯಾಗಕಾತರಃ ॥
ಅನುವಾದ
ಬಳಿಕ ಯುಧಿಷ್ಠಿರನು ಪ್ರಯಾಣ ಹೊರಟಿದ್ದ ತನ್ನ ಸುಹೃದರನ್ನು, ನೆಂಟರಿಷ್ಟರನ್ನು, ಬಂಧುಗಳನ್ನು ಮತ್ತು ಶ್ರೀಕೃಷ್ಣನನ್ನು ಅವರ ವಿಯೋಗವನ್ನು ಸಹಿಸಿಕೊಳ್ಳಲಾರದೆ ಪ್ರೇಮದಿಂದ ಅವರೆಲ್ಲರನ್ನೂ ತಡೆಹಿಡಿದು ಇರಿಸಿಕೊಂಡನು. ॥28॥
ಮೂಲಮ್
(ಶ್ಲೋಕ-29)
ಭಗವಾನಪಿ ತತ್ರಾಂಗ ನ್ಯವಾತ್ಸೀತ್ತತ್ಪ್ರಿಯಂಕರಃ ।
ಪ್ರಸ್ಥಾಪ್ಯ ಯದುವೀರಾಂಶ್ಚ ಸಾಂಬಾದೀಂಶ್ಚ ಕುಶಸ್ಥಲೀಮ್ ॥
ಅನುವಾದ
ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಯದುವಂಶದ ವೀರರಾದ ಸಾಂಬರೇ ಮೊದಲಾದವರನ್ನು ದ್ವಾರಕೆಗೆ ಕಳಿಸಿ ಕೊಟ್ಟು, ತಾನು ಯುಧಿಷ್ಠಿರರಾಜನ ಅಭಿಲಾಷೆಯನ್ನು ಪೂರ್ಣಗೊಳಿಸಲಿಕ್ಕಾಗಿ, ಅವನಿಗೆ ಆನಂದವನ್ನುಂಟು ಮಾಡುವುದಕ್ಕಾಗಿ ಸ್ವಲ್ಪಕಾಲ ಅಲ್ಲೇ ಇರಲು ಬಯಸಿದನು. ॥29॥
ಮೂಲಮ್
(ಶ್ಲೋಕ-30)
ಇತ್ಥಂ ರಾಜಾ ಧರ್ಮಸುತೋ ಮನೋರಥಮಹಾರ್ಣವಮ್ ।
ಸುದುಸ್ತರಂ ಸಮುತ್ತೀರ್ಯ ಕೃಷ್ಣೇನಾಸೀದ್ಗತಜ್ವರಃ ॥
ಅನುವಾದ
ಹೀಗೆ ಧರ್ಮನಂದನನಾದ ಯುಧಿಷ್ಠಿರನು ದಾಟಲು ಅತ್ಯಂತ ದುಸ್ತರವಾಗಿದ್ದ ಮನೋರಥವೆಂಬ ಮಹಾಸಮುದ್ರವನ್ನು ಭಗವಾನ್ ಶ್ರೀಕೃಷ್ಣನ ಕೃಪಾವಿಶೇಷದಿಂದ ಸುಲಭವಾಗಿ ದಾಟಿ ನಿಶ್ಚಿಂತನಾದನು. ॥30॥
ಮೂಲಮ್
(ಶ್ಲೋಕ-31)
ಏಕದಾಂತಃಪುರೇ ತಸ್ಯ ವೀಕ್ಷ್ಯ ದುರ್ಯೋಧನಃ ಶ್ರಿಯಮ್ ।
ಅತಪ್ಯದ್ರಾಜಸೂಯಸ್ಯ ಮಹಿತ್ವಂ ಚಾಚ್ಯುತಾತ್ಮನಃ ॥
ಅನುವಾದ
ಹಾಗೆ ಉಳಿದುಕೊಂಡವರಲ್ಲಿ ದುರ್ಯೋಧನನೂ ಒಬ್ಬನು. ಒಂದು ದಿನ ಭಗವಂತನ ಪರಮಪ್ರೇಮಿ ಯುಧಿಷ್ಠಿರ ರಾಜನ ಅಂತಃಪುರದ ಸೌಂದರ್ಯ-ಸಂಪತ್ತನ್ನೂ, ರಾಜಸೂಯ ಯಜ್ಞದಿಂದ ಪ್ರಾಪ್ತವಾದ ಮಹತ್ವವನ್ನು ನೋಡಿದ ದುರ್ಯೋಧನನ ಮನಸ್ಸು ಮತ್ಸರದಿಂದ ಕುದಿಯತೊಡಗಿತು. ॥31॥
ಮೂಲಮ್
(ಶ್ಲೋಕ-32)
ಯಸ್ಮಿನ್ ನರೇಂದ್ರದಿತಿಜೇಂದ್ರಸುರೇಂದ್ರಲಕ್ಷ್ಮೀ-
ರ್ನಾನಾ ವಿಭಾಂತಿ ಕಿಲ ವಿಶ್ವಸೃಜೋಪಕ್ಲೃಪ್ತಾಃ ।
ತಾಭಿಃ ಪತೀಂದ್ರುಪದರಾಜಸುತೋಪತಸ್ಥೇ
ಯಸ್ಯಾಂ ವಿಷಕ್ತಹೃದಯಃ ಕುರುರಾಡತಪ್ಯತ್ ॥
(ಶ್ಲೋಕ-33)
ಯಸ್ಮಿಂಸ್ತದಾ ಮಧುಪತೇರ್ಮಹಿಷೀಸಹಸ್ರಂ
ಶ್ರೋಣೀಭರೇಣ ಶನಕೈಃ ಕ್ವಣದಂಘ್ರಿಶೋಭಮ್ ।
ಮಧ್ಯೇ ಸುಚಾರು ಕುಚಕುಂಕುಮಶೋಣಹಾರಂ
ಶ್ರೀಮನ್ಮುಖಂ ಪ್ರಚಲಕುಂಡಲಕುಂತಲಾಢ್ಯಮ್ ॥
ಅನುವಾದ
ಪರೀಕ್ಷಿತನೇ! ಪಾಂಡವರಿಗಾಗಿ ಮಯನಿಂದ ನಿರ್ಮಿಸಿಕೊಟ್ಟಿದ್ದ ಆ ಸಭಾಭವನದಲ್ಲಿ ನರೇಂದ್ರರ, ದೈತ್ಯೇಂದ್ರರ ಮತ್ತು ಸುರೇಂದ್ರರ ವೈಭವವು ಎದ್ದುಕಾಣುತ್ತಿತ್ತು. ನಾನಾ ಪ್ರಕಾರದ ಭೋಗಸಾಮಗ್ರಿಗಳು ಆ ಸಭಾಭವನದಲ್ಲಿದ್ದು, ಅವುಗಳ ಮೂಲಕ ದ್ರೌಪದಿಯು ತನ್ನ ಪತಿಗಳ ಸೇವೆ ಮಾಡುತ್ತಿದ್ದಳು. ಅಂತಹ ರಾಜಭವನದಲ್ಲಿ ಆ ದಿನಗಳಲ್ಲಿ ಶ್ರೀಕೃಷ್ಣನ ಸಾವಿರಾರು ರಾಣಿಯರು ವಾಸಿಸುತ್ತಿದ್ದರು. ಅವರು ನಿತಂಬಗಳ ಭಾರ ದಿಂದ ನಿಧಾನವಾಗಿ ನಡೆಯುತ್ತಿದ್ದರು. ಆಗ ಅವರ ಕಾಲ್ಗೆಜ್ಜೆಗಳ ಝಣ-ಝಣ ನಿನಾದವು ಎಲ್ಲೆಡೆ ವ್ಯಾಪಿಸಿತ್ತು. ಸುಂದರವಾದ ಕಟಿಭಾಗವುಳ್ಳ ಅವರು ಧರಿಸಿದ್ದ ಬಿಳಿಯ ಮುತ್ತಿನ ಹಾರಗಳು ಕುಚಗಳಿಗೆ ಲೇಪಿತವಾದ ಕುಂಕುಮ ಕೇಸರಿಯಿಂದಾಗಿ ಕೆಂಪಾಗಿ ಕಾಣುತ್ತಿದ್ದವು. ಕುಂಡಲಗಳು ಮತ್ತು ಮುಂಗುರುಳುಗಳ ನಲಿದಾಟದಿಂದ ಅವರ ಮುಖದ ಶೋಭೆಯು ಇನ್ನೂ ಹೆಚ್ಚಾಗುತ್ತಿತ್ತು. ಇಂತಹ ವೈಭವವನ್ನು ಕಂಡ ದುರ್ಯೋಧನನು ಅಂತಹ ವೈಭವವು ತನಗಿಲ್ಲವಲ್ಲ ಎಂದು ಪರಿತಪಿಸಿದನು. ಪರೀಕ್ಷಿತನೇ! ನಿಜ ಹೇಳಬೇಕೆಂದರೆ, ದುರ್ಯೋಧನನ ಮನಸ್ಸು ದ್ರೌಪದಿಯಲ್ಲಿ ಆಸಕ್ತವಾಗಿದ್ದುದೇ ಅವನ ಸಂತಾಪಕ್ಕೆ ಮುಖ್ಯ ಕಾರಣವಾಗಿತ್ತು. ॥32-33॥
ಮೂಲಮ್
(ಶ್ಲೋಕ-34)
ಸಭಾಯಾಂ ಮಯಕ್ಲೃಪ್ತಾಯಾಂ ಕ್ವಾಪಿ ಧರ್ಮಸುತೋರಾಟ್ ।
ವೃತೋನುಜೈರ್ಬಂಧುಭಿಶ್ಚಕೃಷ್ಣೇನಾಪಿ ಸ್ವಚಕ್ಷುಷಾ ॥
(ಶ್ಲೋಕ-35)
ಆಸೀನಃ ಕಾಂಚನೇ ಸಾಕ್ಷಾದಾಸನೇ ಮಘವಾನಿವ ।
ಪಾರಮೇಷ್ಠ್ಯಶ್ರಿಯಾ ಜುಷ್ಟಃ ಸ್ತೂಯಮಾನಶ್ಚ ವಂದಿಭಿಃ ॥
ಅನುವಾದ
ಒಂದು ದಿನ ರಾಜಾಧಿರಾಜನಾದ ಯುಧಿಷ್ಠಿರ ಮಹಾರಾಜನು ತನ್ನ ಅನುಜರಿಂದಲೂ, ಸಂಬಂಧಿಗಳಿಂದಲೂ, ತನ್ನ ಕಣ್ಮಣಿಯೂ, ಪರಮಹಿತೈಷಿಯೂ ಆದ ಭಗವಾನ್ ಶ್ರೀಕೃಷ್ಣನೊಡನೆ ಮಯಸಭೆಯಲ್ಲಿ ಸ್ವರ್ಣಸಿಂಹಾಸನದಲ್ಲಿ ದೇವೇಂದ್ರನಂತೆ ವಿರಾಜಮಾನನಾಗಿದ್ದನು. ಅವನಲ್ಲಿದ್ದ ಭೋಗ-ಸಾಮಗ್ರಿಗಳೂ, ರಾಜ್ಯಲಕ್ಷ್ಮಿಯೂ ಬ್ರಹ್ಮನ ಐಶ್ವರ್ಯಕ್ಕೆ ಸಮಾನವಾಗಿತ್ತು. ವಂದೀಜನರು ಅವನನ್ನು ಸ್ತುತಿಸುತ್ತಿದ್ದರು. ॥34-35॥
ಮೂಲಮ್
(ಶ್ಲೋಕ-36)
ತತ್ರ ದುರ್ಯೋಧನೋ ಮಾನೀ ಪರೀತೋ ಭ್ರಾತೃಭಿರ್ನೃಪ ।
ಕಿರೀಟಮಾಲೀ ನ್ಯವಿಶದಸಿಹಸ್ತಃ ಕ್ಷಿಪನ್ರುಷಾ ॥
ಅನುವಾದ
ಅದೇ ಸಮಯಕ್ಕೆ ಅಭಿಮಾನಿಯಾದ ದುರ್ಯೋಧನನು ತನ್ನ ತಮ್ಮಂದಿರಾದ ದುಃಶಾಸನರೇ ಮೊದಲಾದವರೊಂದಿಗೆ ಅಲ್ಲಿಗೆ ಬಂದನು. ಅವನ ತಲೆಯಲ್ಲಿ ಕಿರೀಟ, ಕತ್ತಿನಲ್ಲಿ ಹಾರಗಳು, ಕೈಯಲ್ಲಿ ಖಡ್ಗವಿದ್ದು, ಅವನು ಕ್ರೋಧಗೊಂಡು ದ್ವಾರಪಾಲಕರನ್ನು ತಿರಸ್ಕರಿಸುತ್ತಾ ಪ್ರವೇಶಿಸಿದನು. ॥36॥
ಮೂಲಮ್
(ಶ್ಲೋಕ-37)
ಸ್ಥಲೇಭ್ಯಗೃಹ್ಣಾದ್ವಸಾಂತಂ ಜಲಂ ಮತ್ವಾ ಸ್ಥಲೇಪತತ್ ।
ಜಲೇ ಚ ಸ್ಥಲವದ್ಭ್ರಾಂತ್ಯಾ ಮಯಮಾಯಾವಿಮೋಹಿತಃ ॥
ಅನುವಾದ
ಆ ಸಭಾ ಭವನದಲ್ಲಿ ಮಯನು ನಿರ್ಮಿಸಿದ ಮಾಯೆಯಿಂದಾಗಿ ದುರ್ಯೋಧನನು ಮೋಹಿತನಾಗಿ ನೆಲವನ್ನು ಜಲವೆಂದೂ ಭ್ರಮಿಸಿ ತನ್ನ ಬಟ್ಟೆಗಳನ್ನು ಎತ್ತಿ ಹಿಡಿದನು ಹಾಗೂ ಜಲವನ್ನು ನೆಲವೆಂದು ತಿಳಿದು ಅದರಲ್ಲಿ ಬಿದ್ದುಬಿಟ್ಟನು. ॥37॥
ಮೂಲಮ್
(ಶ್ಲೋಕ-38)
ಜಹಾಸ ಭೀಮಸ್ತಂ ದೃಷ್ಟ್ವಾ ಸಿಯೋ ನೃಪತಯೋಪರೇ ।
ನಿವಾರ್ಯಮಾಣಾ ಅಪ್ಯಂಗ ರಾಜ್ಞಾ ಕೃಷ್ಣಾನುಮೋದಿತಾಃ ॥
ಅನುವಾದ
ಅವನು ಬಿದ್ದುದನ್ನು ನೋಡಿ ಭೀಮಸೇನ, ರಾಣಿಯರು ಹಾಗೂ ನೆರೆದಿದ್ದ ರಾಜರೆಲ್ಲರೂ ನಗತೊಡಗಿದರು. ಯುಧಿಷ್ಠಿರನು ನಗಬಾರದೆಂದು ತಡೆಯತ್ತಿದ್ದರೂ, ಅವರಿಗೆ ಶ್ರೀಕೃಷ್ಣನ ಸಂಕೇತ-ಅನುಮೋದನೆಯೂ ದೊರಕಿತ್ತು. ॥38॥
ಮೂಲಮ್
(ಶ್ಲೋಕ-39)
ಸ ವ್ರೀಡಿತೋವಾಗ್ವದನೋ ರುಷಾ ಜ್ವಲನ್
ನಿಷ್ಕ್ರಮ್ಯ ತೂಷ್ಣೀಂ ಪ್ರಯಯೌ ಗಜಾಹ್ವಯಮ್ ।
ಹಾಹೇತಿ ಶಬ್ದಃ ಸುಮಹಾನಭೂತ್ಸತಾ-
ಮಜಾತಶತ್ರುರ್ವಿಮನಾ ಇವಾಭವತ್ ।
ಬಭೂವ ತೂಷ್ಣೀಂ ಭಗವಾನ್ಭುವೋ ಭರಂ
ಸಮುಜ್ಜಿಹೀರ್ಷುರ್ಭ್ರಮತಿ ಸ್ಮ ಯದ್ದೃಶಾ ॥ 39 ॥
ಅನುವಾದ
ಇದರಿಂದ ದುರ್ಯೋಧನನು ನಾಚಿಕೊಂಡು ಅವನ ರೋಮ ರೋಮಗಳೆಲ್ಲ ಕ್ರೋಧದಿಂದ ಉರಿಯತೊಡಗಿತು. ಅವನು ತಲೆತಗ್ಗಿಸಿಕೊಂಡು, ಏನನ್ನೂ ಮಾತನಾಡದೆ ಹಸ್ತಿನಾಪುರಕ್ಕೆ ಹೊರಟು ಹೋದನು. ಈ ಘಟನೆಯನ್ನು ನೋಡಿ ಸತ್ಪುರುಷರಲ್ಲಿ ಹಾಹಾಕಾರವೆದ್ದಿತು. ಧರ್ಮರಾಜ ಯುಧಿಷ್ಠಿರನ ಮನಸ್ಸು ಖಿನ್ನವಾಯಿತು. ಪರೀಕ್ಷಿತನೇ! ಇದೆಲ್ಲವೂ ನಡೆದರೂ ಶ್ರೀಕೃಷ್ಣನು ಸುಮ್ಮನಿದ್ದನು. ಯಾವುದೇ ಪ್ರಕಾರದಿಂದ ಭೂಭಾರವು ತಗ್ಗ ಬೇಕೆಂಬುದೇ ಅವನ ಇಚ್ಛೆಯಿತ್ತು. ನಿಜಹೇಳಬೇಕಾದರೆ ಅವನ ಮಾಯೆಯಿಂದಲೇ ದುರ್ಯೋ ಧನನಿಗೆ ಅಂತಹ ಭ್ರಮೆ ಉಂಟಾಗಿತ್ತು. ॥39॥
ಮೂಲಮ್
(ಶ್ಲೋಕ-40)
ಏತತ್ತೇಭಿಹಿತಂ ರಾಜನ್ ಯತ್ಪೃಷ್ಟೋಹಮಿಹ ತ್ವಯಾ ।
ಸುಯೋಧನಸ್ಯ ದೌರಾತ್ಮ್ಯಂ ರಾಜಸೂಯೇ ಮಹಾಕ್ರತೌ ॥
ಅನುವಾದ
ಪರೀಕ್ಷಿತನೇ! ಆ ಮಹಾ ರಾಜಸೂಯ ಯಜ್ಞದಲ್ಲಿ ದುರ್ಯೋಧನನಿಗೆ ಏಕೆ ಮತ್ಸರವುಂಟಾಗಿತ್ತು? ಎಂದು ನೀನು ಕೇಳಿದ್ದೆಯಲ್ಲ! ಅದೆಲ್ಲವನ್ನು ನಾನು ನಿನಗೆ ವಿಸ್ತಾರವಾಗಿ ತಿಳಿಸಿದ್ದೇನೆ. ॥40॥
ಅನುವಾದ (ಸಮಾಪ್ತಿಃ)
ಎಪ್ಪತ್ತೈದನೆಯ ಅಧ್ಯಾಯವು ಮುಗಿಯಿತು. ॥75॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ
ದುರ್ಯೋಧನಮಾನಭಂಗೋ ನಾಮ ಪಂಚಸಪ್ತತಿತಮೋಽಧ್ಯಾಯಃ ॥75॥