೭೪

[ಏಪ್ಪತ್ತನಾಲ್ಕನೇಯ ಅಧ್ಯಾಯ]

ಭಾಗಸೂಚನಾ

ಭಗವಂತನ ಅಗ್ರಪೂಜೆ - ಶಿಶುಪಾಲವಧೆ

ಮೂಲಮ್

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಂ ಯುಧಿಷ್ಠಿರೋ ರಾಜಾ ಜರಾಸಂಧವಧಂ ವಿಭೋಃ ।
ಕೃಷ್ಣಸ್ಯ ಚಾನುಭಾವಂ ತಂ ಶ್ರುತ್ವಾ ಪ್ರೀತಸ್ತಮಬ್ರವೀತ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಯುಧಿಷ್ಠಿರ ಮಹಾರಾಜನು, ಜರಾಸಂಧನ ವಧೆ ಮತ್ತು ಸರ್ವಶಕ್ತನಾದ ಭಗವಾನ್ ಶ್ರೀಕೃಷ್ಣನ ಅದ್ಭುತ ಮಹಿಮೆಯನ್ನು ಕೇಳಿ ಸುಪ್ರೀತನಾಗಿ ಇಂತೆಂದನು - ॥1॥

ಮೂಲಮ್

(ಶ್ಲೋಕ-2)

ಮೂಲಮ್ (ವಾಚನಮ್)

ಯುಧಿಷ್ಠಿರ ಉವಾಚ

ಮೂಲಮ್

ಯೇ ಸ್ಯುಸೈಲೋಕ್ಯಗುರವಃ ಸರ್ವೇ ಲೋಕಮಹೇಶ್ವರಾಃ ।
ವಹಂತಿ ದುರ್ಲಭಂ ಲಬ್ಧ್ವಾ ಶಿರಸೈವಾನುಶಾಸನಮ್ ॥

ಅನುವಾದ

ಯುಧಿಷ್ಠಿರನು ಹೇಳಿದನು — ಸಚ್ಚಿದಾನಂದ ಸ್ವರೂಪನಾದ ಶ್ರೀಕೃಷ್ಣನೇ! ಮೂರು ಲೋಕಗಳಿಗೂ ಸ್ವಾಮಿಗಳಾದ ಬ್ರಹ್ಮಾ-ಶಂಕರರು ಮತ್ತು ಇಂದ್ರನೇ ಮೊದಲಾದ ಲೋಕಪಾಲರು ನಿನ್ನ ಆಜ್ಞೆಯನ್ನು ಪಡೆಯಲು ತವಕಿಸುತ್ತಿರುವರು. ಅದು ದೊರಕಿದರೆ ಬಹಳ ಶ್ರದ್ಧೆಯಿಂದ ಶಿರಸಾವಹಿಸಿ ಪಾಲಿಸುತ್ತಾರೆ. ॥2॥

(ಶ್ಲೋಕ-3)

ಮೂಲಮ್

ಸ ಭವಾನರವಿಂದಾಕ್ಷೋ ದೀನಾನಾಮೀಶಮಾನಿನಾಮ್ ।
ಧತ್ತೇನುಶಾಸನಂ ಭೂಮಂಸ್ತದತ್ಯಂತವಿಡಂಬನಮ್ ॥

ಅನುವಾದ

ಅನಂತನೇ! ನಾವಾದರೋ ಅತ್ಯಂತ ದೀನರಾಗಿದ್ದರೂ ಭೂಪತಿ, ನರಪತಿಗಳೆಂದು ಭಾವಿಸಿಕೊಂಡಿದ್ದೇವೆ. ಇಂತಹ ಸ್ಥಿತಿಯಲ್ಲಿ ನಾವು ದಂಡನೆಗೆ ಅರ್ಹರಾಗಿದ್ದರೂ ನೀನು ನಮ್ಮ ಆಜ್ಞೆಯನ್ನು ಸ್ವೀಕರಿಸಿ ಅದನ್ನು ಪಾಲಿಸುತ್ತಿರುವೆ. ಸರ್ವಶಕ್ತನಾದ, ಕಮಲಾಕ್ಷನಾದ ನಿನಗೆ ಇದು ಮನುಷ್ಯಲೀಲೆಯ ಅಭಿನಯ ಮಾತ್ರವಾಗಿದೆ. ॥3॥

ಮೂಲಮ್

(ಶ್ಲೋಕ-4)
ನ ಹ್ಯೇಕಸ್ಯಾದ್ವಿತೀಯಸ್ಯ ಬ್ರಹ್ಮಣಃ ಪರಮಾತ್ಮನಃ ।
ಕರ್ಮಭಿರ್ವರ್ಧತೇ ತೇಜೋ ಹ್ರಸತೇ ಚ ಯಥಾ ರವೇಃ ॥

ಅನುವಾದ

ಉದಯಾಸ್ತಮಾನಗಳಿಗೆ ಕಾರಣನಾದ ಸೂರ್ಯನ ತೇಜಸ್ಸು ಹೆಚ್ಚು-ಕಡಿಮೆಯಾಗದಿರುವಂತೆಯೇ, ಯಾವುದೇ ಪ್ರಕಾರದ ಕರ್ಮಗಳಿಂದ ನಿನ್ನಲ್ಲಿ ಉಲ್ಲಾಸವಾಗಲೀ, ಹ್ರಾಸವಾಗಲಿ ಆಗುವುದಿಲ್ಲ. ಏಕೆಂದರೆ, ನೀನು ಸಜಾತಿಯ, ವಿಜಾತೀಯ ಮತ್ತು ಸ್ವಗತಭೇದದಿಂದ ರಹಿತನಾದ ಸಾಕ್ಷಾತ್ ಪರಬ್ರಹ್ಮ ಪರಮಾತ್ಮನಾಗಿರುವೆ. ॥4॥

ಮೂಲಮ್

(ಶ್ಲೋಕ-5)
ನ ವೈ ತೇಜಿತ ಭಕ್ತಾನಾಂ ಮಮಾಹಮಿತಿ ಮಾಧವ ।
ತ್ವಂ ತವೇತಿ ಚ ನಾನಾಧೀಃ ಪಶೂನಾಮಿವ ವೈಕೃತಾ ॥

ಅನುವಾದ

ಯಾರಿಂದಲೂ ಜಯಿಸಲ್ಪಡದ ಮಾಧವನೇ! ‘ಇದು ನಾನು-ನನ್ನದು, ಇದು ನೀನು-ನಿನ್ನದು’ ಇಂತಹ ವಿಕಾರಯುಕ್ತ ಭೇದಬುದ್ಧಿಯು ಪಶುಗಳಲ್ಲಿರುತ್ತದೆ. ಆದರೆ ನಿನ್ನ ಅನನ್ಯಭಕ್ತರಾದವರ ಚಿತ್ತದಲ್ಲಿ ಇಂತಹ ಹುಚ್ಚುತನದ ವಿಚಾರವೇ ಬರುವುದಿಲ್ಲ. ಹೀಗಿರುವಾಗ ನಿನ್ನಲ್ಲಿ ಹೇಗಿದ್ದೀತು? ನೀನು ಮಾಡುವುದೆಲ್ಲವೂ ಲೀಲೆಯೇ ಆಗಿದೆ. ॥5॥

ಮೂಲಮ್

(ಶ್ಲೋಕ-6)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಯುಕ್ತ್ವಾ ಯಜ್ಞಿಯೇ ಕಾಲೇ ವವ್ರೇ ಯುಕ್ತಾನ್ಸ ಋತ್ವಿಜಃ ।
ಕೃಷ್ಣಾನುಮೋದಿತಃ ಪಾರ್ಥೋ ಬ್ರಾಹ್ಮಣಾನ್ಬ್ರಹ್ಮವಾದಿನಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಹೀಗೆ ಹೇಳಿ ಯುಧಿಷ್ಠಿರನು ಭಗವಾನ್ ಶ್ರೀಕೃಷ್ಣನ ಅನುಮತಿ ಯಂತೆ ಯಜ್ಞದ ಕಾಲವು ಸನ್ನಿಹಿತವಾಗಲು ಯಜ್ಞಕರ್ಮಗಳಲ್ಲಿ ನಿಪುಣರಾದ ವೇದವಾದಿಗಳಾದ ಬ್ರಾಹ್ಮಣರನ್ನು, ಋತ್ವಿಕ್-ಆಚಾರ್ಯರನ್ನು ವರಣಮಾಡಿಕೊಂಡನು. ॥6॥

ಮೂಲಮ್

(ಶ್ಲೋಕ-7)
ದ್ವೈಪಾಯನೋ ಭರದ್ವಾಜಃ ಸುಮಂತುರ್ಗೌತಮೋಸಿತಃ ।
ವಸಿಷ್ಠಶ್ಚ್ಯವನಃ ಕಣ್ವೋ ಮೈತ್ರೇಯಃ ಕವಷಸಿತಃ ॥
(ಶ್ಲೋಕ-8)
ವಿಶ್ವಾಮಿತ್ರೋ ವಾಮದೇವಃ ಸುಮತಿರ್ಜೈಮಿನಿಃ ಕ್ರತುಃ ।
ಪೈಲಃ ಪರಾಶರೋ ಗರ್ಗೋ ವೈಶಂಪಾಯನ ಏವ ಚ ॥
(ಶ್ಲೋಕ-9)
ಅಥರ್ವಾ ಕಶ್ಯಪೋ ಧೌಮ್ಯೋ ರಾಮೋ ಭಾರ್ಗವ ಆಸುರಿಃ ।
ವೀತಿಹೋತ್ರೋ ಮಧುಚ್ಛಂದಾ ವೀರಸೇನೋಕೃತವ್ರಣಃ ॥

ಅನುವಾದ

ಅವರ ಹೆಸರು ಇಂತಿತ್ತು - ಶ್ರೀಕೃಷ್ಣದ್ವೈಪಾಯನ ವ್ಯಾಸರು, ಭರದ್ವಾಜ, ಸುಮಂತು, ಗೌತಮ, ಅಸಿತ, ವಸಿಷ್ಠ, ಚ್ಯವನ, ಕಣ್ವ, ಮೈತ್ರೇಯ, ಕವಷ, ತ್ರಿತ, ವಿಶ್ವಾಮಿತ್ರ, ವಾಮ ದೇವ, ಸುಮತಿ, ಜೈಮಿನಿ, ಕ್ರತು, ಪೈಲ, ಪರಾಶರ, ಗರ್ಗ, ವೈಶಂಪಾಯನ, ಅಥರ್ವಣ, ಕಶ್ಯಪ, ಧೌಮ್ಯ, ಪರಶು ರಾಮ, ಶುಕ್ರಾಚಾರ್ಯ, ಆಸುರಿ, ವೀತಿಹೋತ್ರ, ಮಧುಚ್ಛಂದಸ, ವೀರಸೇನ ಮತ್ತು ಅಕೃತವ್ರಣ. ॥7-9॥

ಮೂಲಮ್

(ಶ್ಲೋಕ-10)
ಉಪಹೂತಾಸ್ತಥಾ ಚಾನ್ಯೇ ದ್ರೋಣಭೀಷ್ಮಕೃಪಾದಯಃ ।
ಧೃತರಾಷ್ಟ್ರಃ ಸಹಸುತೋ ವಿದುರಶ್ಚ ಮಹಾಮತಿಃ ॥

ಅನುವಾದ

ಇವರಲ್ಲದೇ ದ್ರೋಣಾಚಾರ್ಯ, ಭೀಷ್ಮಪಿತಾಮಹ, ಕೃಪಚಾರ್ಯ, ಧೃತರಾಷ್ಟ್ರ, ದುರ್ಯೋಧನನೇ ಮೊದಲಾದ ಅವನ ಮಕ್ಕಳು, ಮಹಾಮತಿಯಾದ ವಿದುರ ಇವರನ್ನು ಧರ್ಮರಾಯನು ಕರೆಸಿದನು. ॥10॥

ಮೂಲಮ್

(ಶ್ಲೋಕ-11)
ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾ ಯಜ್ಞದಿದೃಕ್ಷವಃ ।
ತತ್ರೇಯುಃ ಸರ್ವರಾಜಾನೋ ರಾಜ್ಞಾಂ ಪ್ರಕೃತಯೋ ನೃಪ ॥

ಅನುವಾದ

ರಾಜೇಂದ್ರ! ರಾಜಸೂಯ ಯಜ್ಞವನ್ನು ನೋಡಲು ದೇಶ-ದೇಶಗಳ ಎಲ್ಲ ರಾಜರೂ ಅವರ ಮಂತ್ರಿಗಳೂ, ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರರೂ, ಸಮಸ್ತ ಪ್ರಜೆಗಳೂ ಇಂದ್ರ ಪ್ರಸ್ಥಕ್ಕೆ ಆಗಮಿಸಿದರು. ॥11॥

ಮೂಲಮ್

(ಶ್ಲೋಕ-12)
ತತಸ್ತೇ ದೇವಯಜನಂ ಬ್ರಾಹ್ಮಣಾಃ ಸ್ವರ್ಣಲಾಂಗಲೈಃ ।
ಕೃಷ್ಟ್ವಾತತ್ರ ಯಥಾಮ್ನಾಯಂ ದೀಕ್ಷಯಾಂಚಕ್ರಿರೇ ನೃಪಮ್ ॥

ಅನುವಾದ

ಅನಂತರ ಋತ್ವಿಜ ಬ್ರಾಹ್ಮಣರು ಶುಭಮುಹೂರ್ತದಲ್ಲಿ ಚಿನ್ನದ ನೇಗಿಲಿನಿಂದ ಯಾಗಭೂಮಿಯನ್ನು ಉತ್ತು ಯುಧಿಷ್ಠಿರನಿಗೆ ಶಾಸ್ತ್ರವಿಧಿಗನುಸಾರವಾಗಿ ಯಜ್ಞದೀಕ್ಷೆಯನ್ನು ಕೊಟ್ಟರು. ॥12॥

ಮೂಲಮ್

(ಶ್ಲೋಕ-13)
ಹೈಮಾಃ ಕಿಲೋಪಕರಣಾ ವರುಣಸ್ಯ ಯಥಾ ಪುರಾ ।
ಇಂದ್ರಾದಯೋ ಲೋಕಪಾಲಾ ವಿರಿಂಚಭವಸಂಯುತಾಃ ॥
(ಶ್ಲೋಕ-14)
ಸಗಣಾಃ ಸಿದ್ಧಗಂಧರ್ವಾ ವಿದ್ಯಾಧರಮಹೋರಗಾಃ ।
ಮುನಯೋ ಯಕ್ಷರಕ್ಷಾಂಸಿ ಖಗಕಿನ್ನರಚಾರಣಾಃ ॥
(ಶ್ಲೋಕ-15)
ರಾಜಾನಶ್ಚ ಸಮಾಹೂತಾ ರಾಜಪತ್ನ್ಯಶ್ಚ ಸರ್ವಶಃ ।
ರಾಜಸೂಯಂ ಸಮೀಯುಃ ಸ್ಮ ರಾಜ್ಞಃ ಪಾಂಡುಸುತಸ್ಯ ವೈ ॥

ಅನುವಾದ

ಹಿಂದಿನ ಕಾಲದಲ್ಲಿ ವರುಣನ ಯಜ್ಞದಲ್ಲಿ ಯಜ್ಞಪಾತ್ರೆಗಳೆಲ್ಲವೂ ಸ್ವರ್ಣಮಯವಾಗಿದ್ದಂತೆಯೇ ಯುಧಿಷ್ಠಿರನ ಯಜ್ಞದಲ್ಲಿಯೂ ಎಲ್ಲ ಸ್ವರ್ಣ ಪಾತ್ರೆಗಳೇ ಇದ್ದವು ರಾಜಸೂಯ ಯಜ್ಞಕ್ಕೆ ಯುಧಿಷ್ಠಿರನಿಂದ ಆಹ್ವಾನವನ್ನು ಸ್ವೀಕರಿಸಿದ ಬ್ರಹ್ಮದೇವರು, ರುದ್ರದೇವರು, ಇಂದ್ರಾದಿ ಲೋಕಪಾಲರು, ತಮ್ಮ-ತಮ್ಮ ಗಣಗಳೊಂದಿಗೆ ಸಿದ್ಧ ಗಂಧರ್ವರು, ವಿದ್ಯಾಧರರು, ನಾಗರು, ಮುನಿಗಳು, ಯಕ್ಷರು, ರಾಕ್ಷಸರು, ಪಕ್ಷಿಗಳು, ಕಿನ್ನರ-ಚಾರಣರು, ದೊಡ್ಡ-ದೊಡ್ಡ ರಾಜರು, ರಾಜಪತ್ನಿಯರು - ಹೀಗೆ ಇವರೆಲ್ಲರೂ ಆಗಮಿಸಿದರು. ॥13-15॥

ಮೂಲಮ್

(ಶ್ಲೋಕ-16)
ಮೇನಿರೇ ಕೃಷ್ಣಭಕ್ತಸ್ಯ ಸೂಪಪನ್ನಮವಿಸ್ಮಿತಾಃ ।
ಅಯಾಜಯನ್ಮಹಾರಾಜಂ ಯಾಜಕಾ ದೇವವರ್ಚಸಃ ।
ರಾಜಸೂಯೇನ ವಿಧಿವತ್ಪ್ರಾಚೇತಸಮಿವಾಮರಾಃ ॥

ಅನುವಾದ

ರಾಜಸೂಯದ ವೈಭವವನ್ನು ಕಂಡು ಯಾರೂ ಅಚ್ಚರಿಗೊಳ್ಳಲಿಲ್ಲ. ಭಗವಾನ್ ಶ್ರೀಕೃಷ್ಣನ ಪರಮಭಕ್ತನಾದ ಯುಧಿಷ್ಠಿರನಿಗೆ ಇದು ಅನುರೂಪವಾಗಿರುವುದೆಂದೇ ಎಲ್ಲರೂ ಭಾವಿಸಿದರು. ಹಿಂದೆ ವರುಣನಿಂದ ದೇವತೆಗಳು ರಾಜಸೂಯ ಯಾಗವನ್ನು ಮಾಡಿಸಿದಂತೆಯೇ, ದೇವತೆಗಳಂತೆಯೇ ಮಹಾತೇಜಸ್ವಿಗಳಾದ ಯಾಜಕರು ಯುಧಿಷ್ಠಿರನಿಂದ ವಿಧಿವತ್ತಾಗಿ ರಾಜಸೂಯ ಯಜ್ಞವನ್ನು ಮಾಡಿಸಿದರು. ॥16॥

ಮೂಲಮ್

(ಶ್ಲೋಕ-17)
ಸೌತ್ಯೇಹನ್ಯವನೀಪಾಲೋ ಯಾಜಕಾನ್ ಸದಸಸ್ಪತೀನ್ ।
ಅಪೂಜಯನ್ಮಹಾಭಾಗಾನ್ ಯಥಾವತ್ ಸುಸಮಾಹಿತಃ ॥

ಅನುವಾದ

ಸೋಮರಸವನ್ನು ಹಿಂಡುವ ದಿವಸ ಧರ್ಮರಾಜನು ತನ್ನ ಪರಮಭಾಗ್ಯಶಾಲಿಗಳಾದ ಯಾಜಕರನ್ನು ಮತ್ತು ಯಜ್ಞದ ನ್ಯೂನಾತಿರೇಕಗಳನ್ನು ನಿರೀಕ್ಷಿಸಲು ನಿಯುಕ್ತರಾಗಿದ್ದ ಸದಸಸ್ಪತಿಗಳನ್ನು ಏಕಾಗ್ರಚಿತ್ತದಿಂದ ಪೂಜಿಸಿ ಸತ್ಕರಿಸಿದನು. ॥17॥

ಮೂಲಮ್

(ಶ್ಲೋಕ-18)
ಸದಸ್ಯಾಗ್ರ್ಯಾರ್ಹಣಾರ್ಹಂ ವೈ ವಿಮೃಶಂತಃ ಸಭಾಸದಃ ।
ನಾಧ್ಯಗಚ್ಛನ್ನನೈಕಾಂತ್ಯಾತ್ ಸಹದೇವಸ್ತದಾಬ್ರವೀತ್ ॥

ಅನುವಾದ

ಈಗ ಸಭಾಸದಸ್ಯರಲ್ಲಿ ಮೊಟ್ಟಮೊದಲಿಗೆ ಯಾರನ್ನು ಪೂಜಿಸಬೇಕು? ಅಗ್ರಪೂಜೆ ಯಾರಿಗೆ ಮಾಡಬೇಕು ಎಂಬ ವಿಷಯದಲ್ಲಿ ಅಲ್ಲಿ ನೆರೆದ ಸಭಾಸದರು ಚರ್ಚಿಸತೊಡಗಿದರು. ಎಷ್ಟು ಮತಿಗಳೋ ಅಷ್ಟು ಮತಗಳು. ಅದರಿಂದ ಸರ್ವಸಮ್ಮತವಾದ ನಿರ್ಣಯವು ಆಗದೇ ಹೋಯಿತು. ಇಂತಹ ಸ್ಥಿತಿಯಲ್ಲಿ ಸಹದೇವನು ಹೇಳಿದನು - ॥18॥

ಮೂಲಮ್

(ಶ್ಲೋಕ-19)
ಅರ್ಹತಿ ಹ್ಯಚ್ಯುತಃ ಶ್ರೈಷ್ಠ್ಯಂ ಭಗವಾನ್ ಸಾತ್ವತಾಂ ಪತಿಃ ।
ಏಷ ವೈ ದೇವತಾಃ ಸರ್ವಾ ದೇಶಕಾಲಧನಾದಯಃ ॥

ಅನುವಾದ

ಯದುವಂಶ ಶಿರೋಮಣಿ ಭಕ್ತವತ್ಸಲ ಭಗವಾನ್ ಶ್ರೀಕೃಷ್ಣನೇ ಶ್ರೇಷ್ಠನೂ, ಅಗ್ರಪೂಜೆಗೆ ಯೋಗ್ಯನಾಗಿದ್ದಾನೆ. ಏಕೆಂದರೆ, ಇವನೇ ಸಮಸ್ತ ದೇವತೆಗಳ ರೂಪದಲ್ಲಿರುವ ವನು ಮತ್ತು ದೇಶ, ಕಾಲ, ಧನ ಮುಂತಾದ ಇರುವ ಎಲ್ಲ ವಸ್ತುಗಳ ರೂಪದಲ್ಲಿಯೂ ಅವನೇ ಆಗಿದ್ದಾನೆ. ॥19॥

ಮೂಲಮ್

(ಶ್ಲೋಕ-20)
ಯದಾತ್ಮಕಮಿದಂ ವಿಶ್ವಂ ಕ್ರತವಶ್ಚ ಯದಾತ್ಮಕಾಃ ।
ಅಗ್ನಿರಾಹುತಯೋ ಮಂತ್ರಾಃ ಸಾಂಖ್ಯಂ ಯೋಗಶ್ಚ ಯತ್ಪರಃ ॥

ಅನುವಾದ

ಸಮಸ್ತ ವಿಶ್ವವೂ ಶ್ರೀಕೃಷ್ಣನ ರೂಪವೇ ಆಗಿದೆ. ಭಗವಾನ್ ಶ್ರೀಕೃಷ್ಣನೇ ಅಗ್ನಿ, ಆಹುತಿ ಮತ್ತು ಮಂತ್ರದ ಸ್ವರೂಪನಾಗಿರುವನು. ಜ್ಞಾನಮಾರ್ಗ ಮತ್ತು ಕರ್ಮಮಾರ್ಗ ಇವೆರಡೂ ಅವನನ್ನು ಪಡೆಯುವ ಸಾಧನಗಳಾಗಿವೆ. ॥20॥

ಮೂಲಮ್

(ಶ್ಲೋಕ-21)
ಏಕ ಏವಾದ್ವಿತೀಯೋಸಾವೈತದಾತ್ಮ್ಯಮಿದಂ ಜಗತ್ ।
ಆತ್ಮನಾತ್ಮಾಶ್ರಯಃ ಸಭ್ಯಾಃ ಸೃಜತ್ಯವತಿ ಹಂತ್ಯಜಃ ॥

ಅನುವಾದ

ಸಭಾಸದರೇ! ಭಗವಾನ್ ಶ್ರೀಕೃಷ್ಣನು ಏಕಮೇವಾ ದ್ವಿತೀಯ ಬ್ರಹ್ಮನಾಗಿದ್ದಾನೆ. ಅಖಂಡ ಬ್ರಹ್ಮಾಂಡವೂ ಇವನ ಸ್ವರೂಪವೇ ಆಗಿದೆ. ಅವನು ತಾನೇ-ತನ್ನಲ್ಲಿ ಸ್ಥಿತನಾಗಿದ್ದಾನೆ ಮತ್ತು ಜನ್ಮ, ಅಸ್ತಿತ್ವ, ವೃದ್ಧಿ ಮೊದಲಾದ ಆರು ಭಾವ ವಿಕಾರಗಳಿಂದ ರಹಿತನಾಗಿದ್ದಾನೆ. ಅವನು ತನ್ನ ಆತ್ಮಸ್ವರೂಪ ಸಂಕಲ್ಪದಿಂದಲೇ ಜಗತ್ತಿನ ಸೃಷ್ಟಿ, ಸ್ಥಿತಿ, ಸಂಹಾರಗಳನ್ನು ಮಾಡುತ್ತಾನೆ. ॥21॥

ಮೂಲಮ್

(ಶ್ಲೋಕ-22)
ವಿವಿಧಾನೀಹ ಕರ್ಮಾಣಿ ಜನಯನ್ಯದವೇಕ್ಷಯಾ ।
ಈಹತೇ ಯದಯಂ ಸರ್ವಃ ಶ್ರೇಯೋ ಧರ್ಮಾದಿಲಕ್ಷಣಮ್ ॥

ಅನುವಾದ

ಸಮಸ್ತ ಜಗತ್ತು ಶ್ರೀಕೃಷ್ಣನ ಅನುಗ್ರಹದಿಂದಲೇ ಅನೇಕ ವಿಧದ ಕರ್ಮಾನುಷ್ಠಾನಗಳನ್ನು ಮಾಡುತ್ತಾ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳನ್ನು ಸಾಧಿಸಿಕೊಳ್ಳುತ್ತಾರೆ. ॥22॥

ಮೂಲಮ್

(ಶ್ಲೋಕ-23)
ತಸ್ಮಾತ್ ಕೃಷ್ಣಾಯ ಮಹತೇ ದೀಯತಾಂ ಪರಮಾರ್ಹಣಮ್ ।
ಏವಂ ಚೇತ್ ಸರ್ವಭೂತಾನಾಮಾತ್ಮನಶ್ಚಾರ್ಹಣಂ ಭವೇತ್ ॥

ಅನುವಾದ

ಅದಕ್ಕಾಗಿ ಸರ್ವಶ್ರೇಷ್ಠನಾದ ಭಗವಾನ್ ಶ್ರೀಕೃಷ್ಣನದೇ ಅಗ್ರಪೂಜೆಯಾಗಬೇಕು. ಇವನನ್ನು ಪೂಜಿಸುವುದರಿಂದ ಸಮಸ್ತ ಪ್ರಾಣಿಗಳ ಹಾಗೂ ತನ್ನಾತ್ಮದ ಪೂಜೆಯೂ ನಡೆದಂತಾಗುತ್ತದೆ. ॥23॥

ಮೂಲಮ್

(ಶ್ಲೋಕ-24)
ಸರ್ವಭೂತಾತ್ಮಭೂತಾಯ ಕೃಷ್ಣಾಯಾನನ್ಯದರ್ಶಿನೇ ।
ದೇಯಂ ಶಾಂತಾಯ ಪೂರ್ಣಾಯ ದತ್ತಸ್ಯಾನಂತ್ಯಮಿಚ್ಛತಾ ॥

ಅನುವಾದ

ದಾನಕ್ಕೆ ಅನಂತವಾದ ಫಲವನ್ನು ಅಪೇಕ್ಷಿಸುವವನು ಸಮಸ್ತ ಪ್ರಾಣಿಗಳಿಗೂ ಆತ್ಮಸ್ವರೂಪನಾದ, ಭೇದಭಾವರಹಿತನಾದ, ಪರಮಶಾಂತನಾದ, ಪರಿಪೂರ್ಣನಾದ, ಮಹಾತ್ಮನಾದ ಶ್ರೀಕೃಷ್ಣನಿಗೇ ದಾನಮಾಡಬೇಕು. ॥24॥

ಮೂಲಮ್

(ಶ್ಲೋಕ-25)
ಇತ್ಯುಕ್ತ್ವಾ ಸಹದೇವೋಭೂತ್ತೂಷ್ಣೀಂ ಕೃಷ್ಣಾನುಭಾವವಿತ್ ।
ತಚ್ಛ್ರುತ್ವಾ ತುಷ್ಟುವುಃ ಸರ್ವೇ ಸಾಧು ಸಾಧ್ವಿತಿ ಸತ್ತಮಾಃ ॥

ಅನುವಾದ

ಪರೀಕ್ಷಿತನೇ! ಭಗವಂತನ ಮಹಿಮೆಯನ್ನೂ, ಅವನ ಪ್ರಭಾವವನ್ನು ಅರಿತಿದ್ದ ಸಹದೇವನು ಹೀಗೆ ಹೇಳಿ ಸುಮ್ಮನಾದನು. ಆ ಸಮಯದಲ್ಲಿ ಧರ್ಮರಾಯನ ಯಜ್ಞಸಭೆಯಲ್ಲಿ ಉಪಸ್ಥಿತರಾಗಿದ್ದ ಸತ್ಪುರುಷರೆಲ್ಲರೂ ಏಕಕಂಠದಿಂದ ಸಾಧು! ಸಾಧು! ಬಹಳ ಚೆನ್ನಾಗಿದೆ ಎಂದು ಹೇಳಿ ಸಹದೇವನ ಮಾತನ್ನು ಸಮರ್ಥಿಸಿದರು. ॥25॥

ಮೂಲಮ್

(ಶ್ಲೋಕ-26)
ಶ್ರುತ್ವಾ ದ್ವಿಜೇರಿತಂ ರಾಜಾ ಜ್ಞಾತ್ವಾ ಹಾರ್ದಂ ಸಭಾಸದಾಮ್ ।
ಸಮರ್ಹಯದ್ಧೃಷೀಕೇಶಂ ಪ್ರೀತಃ ಪ್ರಣಯವಿಹ್ವಲಃ ॥

ಅನುವಾದ

ಯುಧಿಷ್ಠಿರನು ಬ್ರಾಹ್ಮಣರ ಈ ಸಾಧುವಾದ ವನ್ನು ಕೇಳಿ, ಸಭ್ಯರ ಅಭಿಪ್ರಾಯವನ್ನು ತಿಳಿದವನಾಗಿ ಆನಂದದಿಂದಲೂ, ಪ್ರೇಮೋದ್ರೇಕದಿಂದಲೂ ವಿಹ್ವಲನಾಗಿ ಭಗವಾನ್ ಶ್ರೀಕೃಷ್ಣನ ಅಗ್ರಪೂಜೆಯನ್ನು ಮಾಡಿದನು. ॥26॥

ಮೂಲಮ್

(ಶ್ಲೋಕ-27)
ತತ್ಪಾದಾವವನಿಜ್ಯಾಪಃ ಶಿರಸಾ ಲೋಕಪಾವನೀಃ ।
ಸಭಾರ್ಯಃ ಸಾನುಜಾಮಾತ್ಯಃ ಸಕುಟುಂಬೋವಹನ್ಮುದಾ ॥

ಅನುವಾದ

ಯುಧಿಷ್ಠಿರನು ತನ್ನ ಪತ್ನಿಯರು, ತಮ್ಮಂದಿರು, ಮಂತ್ರಿಗಳು ಮತ್ತು ಕುಟುಂಬ ವರ್ಗದವರೊಡನೆ ಅತ್ಯಂತ ಪ್ರೇಮದಿಂದಲೂ, ಆನಂದದಿಂದಲೂ ಭಗವಂತನ ಚರಣಾ ರವಿಂದಗಳನ್ನು ತೊಳೆದು ಲೋಕಪಾವನವಾದ ಚರಣ ತೀರ್ಥವನ್ನು ತಲೆಯಲ್ಲಿ ಧರಿಸಿಕೊಂಡನು. ॥27॥

ಮೂಲಮ್

(ಶ್ಲೋಕ-28)
ವಾಸೋಭಿಃ ಪೀತಕೌಶೇಯೈರ್ಭೂಷಣೈಶ್ಚ ಮಹಾಧನೈಃ ।
ಅರ್ಹಯಿತ್ವಾಶ್ರುಪೂರ್ಣಾಕ್ಷೋ ನಾಶಕತ್ಸಮವೇಕ್ಷಿತುಮ್ ॥

ಅನುವಾದ

ಆಗ ಅವನು ಭಗವಂತನಿಗೆ ರೇಷ್ಮೆಯ ಪೀತಾಂಬರವನ್ನು, ಬಹು ಮೂಲ್ಯವಾದ ಆಭರಣಗಳನ್ನು ಸಮರ್ಪಿಸಿದನು. ಆ ಸಮಯದಲ್ಲಿ ಅವನ ಕಣ್ಣುಗಳು ಪ್ರೇಮಾನಂದದ ಅಶ್ರುಗಳಿಂದ ತುಂಬಿಹೋಗಿ ಭಗವಂತನನ್ನು ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ. ॥28॥

ಮೂಲಮ್

(ಶ್ಲೋಕ-29)
ಇತ್ಥಂ ಸಭಾಜಿತಂ ವೀಕ್ಷ್ಯ ಸರ್ವೇ ಪ್ರಾಂಜಲಯೋ ಜನಾಃ ।
ನಮೋ ಜಯೇತಿ ನೇಮುಸ್ತಂ ನಿಪೇತುಃ ಪುಷ್ಪವೃಷ್ಟಯಃ ॥

ಅನುವಾದ

ಹೀಗೆ ಅಗ್ರಪೂಜೆಯಿಂದ ಸಮ್ಮಾನಿತನಾದ ಶ್ರೀಕೃಷ್ಣನನ್ನು ನೋಡಿ ಆ ಸಭೆಯಲ್ಲಿ ಕುಳಿತಿದ್ದವರೆಲ್ಲರೂ ಕೈಜೋಡಿಸಿಕೊಂಡು ಶ್ರೀಕೃಷ್ಣಾಯ ನಮೋ ನಮಃ, ಶ್ರೀಕೃಷ್ಣನಿಗೆ ಜಯವಾಗಲಿ ಎಂದು ಹೇಳಿಕೊಂಡು ನಮಸ್ಕರಿಸತೊಡಗಿದರು. ಆಗ ಆಕಾಶದಿಂದ ತಾನಾಗಿಯೇ ಪುಷ್ಪವೃಷ್ಟಿಯಾಗತೊಡಗಿತು. ॥29॥

ಮೂಲಮ್

(ಶ್ಲೋಕ-30)
ಇತ್ಥಂ ನಿಶಮ್ಯ ದಮಘೋಷಸುತಃ ಸ್ವಪೀಠಾ-
ದುತ್ಥಾಯ ಕೃಷ್ಣಗುಣವರ್ಣನಜಾತಮನ್ಯುಃ ।
ಉತ್ಕ್ಷಿಪ್ಯ ಬಾಹುಮಿದಮಾಹ ಸದಸ್ಯಮರ್ಷೀ
ಸಂಶ್ರಾವಯನ್ ಭಗವತೇ ಪರುಷಾಣ್ಯಭೀತಃ ॥

ಅನುವಾದ

ಪರೀಕ್ಷಿತನೇ! ತನ್ನ ಆಸನದಲ್ಲಿ ಕುಳಿತಿದ್ದ ಶಿಶುಪಾಲನು ಇದೆಲ್ಲವನ್ನೂ ನೋಡಿ-ಕೇಳುತ್ತಿದ್ದನು. ಭಗವಾನ್ ಶ್ರೀಕೃಷ್ಣನ ಗುಣಗಾನವನ್ನು ಕೇಳಿ ಕ್ರೋಧಗೊಂಡು ಎದ್ದುನಿಂತು, ತುಂಬಿದ ಸಭೆಯಲ್ಲಿ ಕೈಯನ್ನು ಮೇಲಕ್ಕೆತ್ತಿ ಅಸಹಿಷ್ಣುತೆಯಿಂದ, ನಿರ್ಭಯನಾಗಿ ಭಗವಂತನಿಗೆ ಕೇಳಿಸುವಂತೆ ಅತ್ಯಂತ ಕಠೋರವಾದ ಮಾತುಗಳನ್ನಾಡತೊಡಗಿದನು. ॥30॥

ಮೂಲಮ್

(ಶ್ಲೋಕ-31)
ಈಶೋ ದುರತ್ಯಯಃ ಕಾಲ ಇತಿ ಸತ್ಯವತೀ ಶ್ರುತಿಃ ।
ವೃದ್ಧಾನಾಮಪಿ ಯದ್ಬುದ್ಧಿರ್ಬಾಲವಾಕ್ಯೈರ್ವಿಭಿದ್ಯತೇ ॥

ಅನುವಾದ

ಸಭ್ಯರೇ! ‘ಕಾಲನೇ ಈಶ್ವರನಾಗಿದ್ದಾನೆ’ ಎಂದು ಹೇಳಿದ ಶ್ರುತಿಯ ಮಾತು ಅಕ್ಷರಶಃ ಸತ್ಯವಾಗಿದೆ. ಲಕ್ಷ-ಲಕ್ಷ ಪ್ರಯತ್ನ ಮಾಡಿದರೂ ಅದು ತನ್ನ ಕೆಲಸವನ್ನು ಮಾಡಿಯೇ ತೀರುತ್ತದೆ. ಇಲ್ಲಿ ಮಕ್ಕಳ ಮತ್ತು ಮೂರ್ಖರ ಮಾತುಗಳಿಂದ ದೊಡ್ಡ-ದೊಡ್ಡ ವಯೋವೃದ್ಧರ, ಜ್ಞಾನವೃದ್ಧರ ಬುದ್ಧಿಯೂ ಪಲ್ಲಟವಾಗುವುದು. ಇದರ ಪ್ರತ್ಯಕ್ಷಪ್ರಮಾಣವಾಗಿದೆ. ॥31॥

ಮೂಲಮ್

(ಶ್ಲೋಕ-32)
ಯೂಯಂ ಪಾತ್ರವಿದಾಂ ಶ್ರೇಷ್ಠಾ ಮಾ ಮನ್ಧ ್ವಂ ಬಾಲಭಾಷಿತಮ್ ।
ಸದಸಸ್ಪತಯಃ ಸರ್ವೇ ಕೃಷ್ಣೋ ಯತ್ಸಮ್ಮತೋರ್ಹಣೇ ॥

ಅನುವಾದ

ನೀವೆಲ್ಲರೂ ಅಗ್ರಪೂಜೆಗೆ ಅರ್ಹರಾರೆಂಬುದನ್ನು ನಿರ್ಣಯಿಸುವುದರಲ್ಲಿ ಸಮರ್ಥರಾಗಿರುವಿರಿ ಎಂದು ನಾನು ತಿಳಿದಿದ್ದೇನೆ. ಅದಕ್ಕಾಗಿ ಸದಸಸ್ಪತಿಗಳೇ! ಬಾಲಕನಾದ ಸಹದೇವನು ಹೇಳಿದ - ‘ಶ್ರೀಕೃಷ್ಣನೇ ಅಗ್ರಪೂಜೆಗೆ ಅರ್ಹನಾಗಿದ್ದಾನೆ’ ಎಂಬ ಮಾತನ್ನು ನೀವು ಅನುಮೋದಿಸಬೇಡಿರಿ. ॥32॥

ಮೂಲಮ್

(ಶ್ಲೋಕ-33)
ತಪೋವಿದ್ಯಾವ್ರತಧರಾನ್ ಜ್ಞಾನವಿಧ್ವಸ್ತಕಲ್ಮಷಾನ್ ।
ಪರಮರ್ಷೀನ್ ಬ್ರಹ್ಮನಿಷ್ಠಾನ್ಲೋಕಪಾಲೈಶ್ಚ ಪೂಜಿತಾನ್ ॥

ಅನುವಾದ

ಇಲ್ಲಿ ದೊಡ್ಡ-ದೊಡ್ಡ ತಪಸ್ವಿಗಳು, ವಿದ್ವಾಂಸರು, ವ್ರತನಿಷ್ಠರು, ಜ್ಞಾನದ ಮೂಲಕ ತಮ್ಮ ಸಮಸ್ತ ಪಾಪ-ತಾಪಗಳನ್ನು ಶಾಂತಗೊಳಿಸಿದವರು, ಈ ಸಭೆಯಲ್ಲಿ ಪರಮಜ್ಞಾನಿ ಮಹರ್ಷಿಗಳಾದ ಬ್ರಹ್ಮನಿಷ್ಠರು ಮುಂತಾದವರು ಉಪಸ್ಥಿತರಾಗಿದ್ದಾರೆ. ಇಂತಹವರನ್ನು ದೊಡ್ಡ-ದೊಡ್ಡ ಲೋಕಪಾಲರೂ ಪೂಜಿಸುತ್ತಿರುವರು. ॥33॥

ಮೂಲಮ್

(ಶ್ಲೋಕ-34)
ಸದಸ್ಪತೀನತಿಕ್ರಮ್ಯ ಗೋಪಾಲಃ ಕುಲಪಾಂಸನಃ ।
ಯಥಾ ಕಾಕಃ ಪುರೋಡಾಶಂ ಸಪರ್ಯಾಂ ಕಥಮರ್ಹತಿ ॥

ಅನುವಾದ

ಯಜ್ಞದ ನ್ಯೂನಾತಿರೇಕವನ್ನು ಹೇಳುವಂತಹ ಆ ಸದಸತ್ಪತಿಗಳನ್ನು ಬಿಟ್ಟು ಈ ಕುಲಕಲಂಕನಾದ ಗೊಲ್ಲನು ಹೇಗೆ ತಾನೆ ಅಗ್ರಪೂಜೆಗೆ ಅಧಿಕಾರಿಯಾಗಬಲ್ಲನು? ಎಂದಾದರೂ ಕಾಗೆಯು ಯಜ್ಞದ ಪುರೋಡಾಶಕ್ಕೆ ಅಧಿಕಾರಿಯಾಗಬಲ್ಲುದೇ? ॥34॥

ಮೂಲಮ್

(ಶ್ಲೋಕ-35)
ವರ್ಣಾಶ್ರಮಕುಲಾಪೇತಃ ಸರ್ವಧರ್ಮಬಹಿಷ್ಕೃತಃ ।
ಸ್ವೈರವರ್ತೀ ಗುಣೈರ್ಹೀನಃ ಸಪರ್ಯಾಂ ಕಥಮರ್ಹತಿ ॥

ಅನುವಾದ

ಇವನಿಗೆ ಯಾವುದೇ ವರ್ಣವಾಗಲಿ, ಆಶ್ರಮವಾಗಲೀ ಇಲ್ಲ. ಕುಲವೂ ಉನ್ನತವಾಗಿಲ್ಲ. ಎಲ್ಲ ಧರ್ಮಗಳಿಂದಲೂ ಹೊರಗಾಗಿರುವನು. ವೇದ ಮತ್ತು ಲೋಕಮರ್ಯಾದೆಗಳನ್ನು ಉಲ್ಲಂಘಿಸಿ ಮನಬಂದಂತೆ ವರ್ತಿಸುತ್ತಾನೆ. ಇವನಲ್ಲಿ ಯಾವುದೇ ಗುಣಗಳಿಲ್ಲ. ಇಂತಹ ಸ್ಥಿತಿಯಲ್ಲಿ ಇವನು ಅಗ್ರಪೂಜೆಗೆ ಹೇಗೆ ಅರ್ಹನಾಗಬಲ್ಲನು? ॥35॥

ಮೂಲಮ್

(ಶ್ಲೋಕ-36)
ಯಯಾತಿನೈಷಾಂ ಹಿ ಕುಲಂ ಶಪ್ತಂ ಸದ್ಭಿರ್ಬಹಿಷ್ಕೃತಮ್ ।
ವೃಥಾ ಪಾನರತಂ ಶಶ್ವತ್ಸಪರ್ಯಾಂ ಕಥಮರ್ಹತಿ ॥

ಅನುವಾದ

ಯಯಾತಿ ರಾಜನು ಇವನ ವಂಶಕ್ಕೆ ಶಪಿಸಿರುವ ವಿಷಯವನ್ನು ನೀವೆಲ್ಲರೂ ತಿಳಿದಿರುವಿರಿ. ಅದಕ್ಕಾಗಿಯೇ ಸತ್ಪುರುಷರು ಈ ವಂಶವನ್ನು ಬಹಿಷ್ಕರಿಸಿರುವರು. ಇವರೆಲ್ಲರೂ ಸದಾಕಾಲ ಮಧುಪಾನದಲ್ಲೇ ಆಸಕ್ತರಾಗಿರುತ್ತಾರೆ. ಹೀಗಿರುವಾಗ ಇವನು ಅಗ್ರಪೂಜೆಗೆ ಹೇಗೆ ಯೋಗ್ಯನಾಗಬಲ್ಲನು? ॥36॥

ಮೂಲಮ್

(ಶ್ಲೋಕ-37)
ಬ್ರಹ್ಮರ್ಷಿಸೇವಿತಾನ್ ದೇಶಾನ್ ಹಿತ್ವೈತೇಬ್ರಹ್ಮವರ್ಚಸಮ್ ।
ಸಮುದ್ರಂ ದುರ್ಗಮಾಶ್ರಿತ್ಯ ಬಾಧಂತೇ ದಸ್ಯವಃ ಪ್ರಜಾಃ ॥

ಅನುವಾದ

ಇವರೆಲ್ಲರೂ ಬ್ರಹ್ಮರ್ಷಿಗಳಿಂದ ಸೇವಿತವಾದ ಮಥುರೆಯನ್ನು ತ್ಯಜಿಸಿ, ಬ್ರಹ್ಮವರ್ಚಸ್ಸಿನ ವಿರೋಧಿಯಾದ (ವೇದ ಚರ್ಚಾರಹಿತ) ಸಮುದ್ರದಲ್ಲಿ ದುರ್ಗವನ್ನು ರಚಿಸಿಕೊಂಡು ಇರುತ್ತಾರೆ. ಅಲ್ಲಿಂದ ಇವರು ಹೊರಗೆ ಬಂದಾಗ ಕಳ್ಳರಂತೆ ಪ್ರಜೆಗಳೆಲ್ಲರನ್ನೂ ಪೀಡಿಸುತ್ತಾರೆ. ॥37॥

ಮೂಲಮ್

(ಶ್ಲೋಕ-38)
ಏವಮಾದೀನ್ಯಭದ್ರಾಣಿ ಬಭಾಷೇ ನಷ್ಟಮಂಗಲಃ ।
ನೋವಾಚ ಕಿಂಚಿದ್ಭಗವಾನ್ ಯಥಾ ಸಿಂಹಃ ಶಿವಾರುತಮ್ ॥

ಅನುವಾದ

ಪರೀಕ್ಷಿತನೇ! ನಿರ್ಭಾಗ್ಯನಾದ ಶಿಶುಪಾಲನು ಹೀಗೆ ಅನೇಕ ಕರ್ಣಕಠೋರವಾದ ಮತ್ತು ಅಶುಭವಾದ ಮಾತುಗಳಿಂದ ಶ್ರೀಕೃಷ್ಣನನ್ನು ನಿಂದೆ ಮಾಡುತ್ತಿರಲು - ಸಿಂಹವು ನರಿಯ ಕೂಗನ್ನು ಅಲಕ್ಷಿಸುವಂತೆ ಭಗವಾನ್ ಶ್ರೀಕೃಷ್ಣನು ಅವನೊಡನೆ ಏನನ್ನೂ ಮಾತನಾಡಲಿಲ್ಲ. ॥38॥

ಮೂಲಮ್

(ಶ್ಲೋಕ-39)
ಭಗವನ್ನಿಂದನಂ ಶ್ರುತ್ವಾ ದುಃಸಹಂ ತತ್ಸಭಾಸದಃ ।
ಕರ್ಣೌ ಪಿಧಾಯ ನಿರ್ಜಗ್ಮುಃ ಶಪಂತಶ್ಚೇದಿಪಂ ರುಷಾ ॥

ಅನುವಾದ

ಆದರೆ ಸಭಾಸರಿಗೆ ಭಗವಂತನ ನಿಂದೆಯನ್ನು ಕೇಳುವುದು ಅಸಹ್ಯವುಂಟಾಗಿ ತಮ್ಮ-ತಮ್ಮ ಕಿವಿಗಳನ್ನು ಮುಚ್ಚಿಕೊಂಡು ಸಿಟ್ಟಿನಿಂದ ಶಿಶುಪಾಲನನ್ನು ನಿಂದಿಸುತ್ತಾ ಸಭಾಭವನದಿಂದ ಹೊರಟುಹೋದರು. ॥39॥

ಮೂಲಮ್

(ಶ್ಲೋಕ-40)
ನಿಂದಾಂ ಭಗವತಃ ಶೃಣ್ವಂಸ್ತತ್ಪರಸ್ಯ ಜನಸ್ಯ ವಾ ।
ತತೋ ನಾಪೈತಿ ಯಃ ಸೋಪಿ ಯಾತ್ಯಧಃ ಸುಕೃತಾಚ್ಚ್ಯುತಃ ॥

ಅನುವಾದ

ಪರೀಕ್ಷಿದ್ರಾಜನೇ! ಭಗವಂತನ ಅಥವಾ ಅವನ ಭಕ್ತರ ನಿಂದೆಯನ್ನು ಕೇಳಿ ಅಲ್ಲಿಂದ ಹೊರಟುಹೋಗದವನು ತನ್ನ ಶುಭಕರ್ಮಗಳಿಂದ ಚ್ಯುತನಾಗಿ, ಅವನ ಅಧೋಗತಿಯಾಗುತ್ತದೆ. ॥40॥

ಮೂಲಮ್

(ಶ್ಲೋಕ-41)
ತತಃ ಪಾಂಡುಸುತಾಃ ಕ್ರುದ್ಧಾ ಮತ್ಸ್ಯಕೈಕಯಸೃಂಜಯಾಃ ।
ಉದಾಯುಧಾಃ ಸಮುತ್ತಸ್ಥುಃ ಶಿಶುಪಾಲಜಿಘಾಂಸವಃ ॥

ಅನುವಾದ

ಪರೀಕ್ಷಿತನೇ! ಶಿಶುಪಾಲನ ಶ್ರೀಕೃಷ್ಣನಿಂದಾವಾಕ್ಯಗಳಿಂದ ಅತಿಕ್ರುದ್ಧರಾದ ಪಾಂಡವ, ಮತ್ಸ್ಯ, ಕೇಕಯ ಮತ್ತು ಸೃಂಜಯ ನರಪತಿಗಳು ಶಿಶುಪಾಲನನ್ನು ಕೊಂದುಹಾಕಲೆಂದು ಆಯುಧಗಳನ್ನು ಧರಿಸಿ ಎದ್ದುನಿಂತರು. ॥41॥

ಮೂಲಮ್

(ಶ್ಲೋಕ-42)
ತತಶ್ಚೈದ್ಯಸ್ತ್ವಸಂಭ್ರಾಂತೋ ಜಗೃಹೇ ಖಡ್ಗ ಚರ್ಮಣೀ ।
ಭರ್ತ್ಸಯನ್ ಕೃಷ್ಣಪಕ್ಷೀಯಾನ್ರಾಜ್ಞಃ ಸದಸಿ ಭಾರತ ॥

ಅನುವಾದ

ಆದರೆ ಇದರಿಂದ ಶಿಶುಪಾಲನು ಗಾಬರಿಗೊಳ್ಳಲಿಲ್ಲ. ಅವನು ಹಿಂದೆ-ಮುಂದೆ ಯೋಚಿಸದೆ ತನ್ನ ಕತ್ತಿ ಗುರಾಣಿಗಳನ್ನು ಎತ್ತಿಕೊಂಡು ತುಂಬಿದ ಆ ಸಭೆಯಲ್ಲಿ ಶ್ರೀಕೃಷ್ಣನ ಪಕ್ಷಪಾತಿಗಳಾದ ರಾಜರೆದುರಿಗೆ ಯುದ್ಧಕ್ಕೆ ಸಿದ್ಧನಾದನು. ॥42॥

ಮೂಲಮ್

(ಶ್ಲೋಕ-43)
ತಾವದುತ್ಥಾಯ ಭಗವಾನ್ ಸ್ವಾನ್ನಿವಾರ್ಯ ಸ್ವಯಂ ರುಷಾ ।
ಶಿರಃ ಕ್ಷುರಾಂತಚಕ್ರೇಣ ಜಹಾರಾಪತತೋ ರಿಪೋಃ ॥

ಅನುವಾದ

ಅಷ್ಟರಲ್ಲಿ ಭಗವಾನ್ ಶ್ರೀಕೃಷ್ಣನು ಆಸನದಿಂದ ಮೇಲೆದ್ದು ತನ್ನ ಕಡೆಯವರೆಲ್ಲರನ್ನು ಹಿಂದಕ್ಕೆ ಸರಿಸಿ, ಪರಮಕ್ರುದ್ಧನಾಗಿ ಕತ್ತಿಯಂತೆ ಹರಿತವಾದ ಅಲಗಿನಿಂದ ಕೂಡಿದ್ದ ಚಕ್ರದಿಂದ ತನ್ನ ಕಡೆಗೆ ನುಗ್ಗಿಬರುತ್ತಿದ್ದ ಶಿಶುಪಾಲನ ಶಿರಸ್ಸನ್ನು ಕತ್ತರಿಸಿಬಿಟ್ಟನು. ॥43॥

ಮೂಲಮ್

(ಶ್ಲೋಕ-44)
ಶಬ್ದಃ ಕೋಲಾಹಲೋಪ್ಯಾಸೀತ್ ಶಿಶುಪಾಲೇ ಹತೇ ಮಹಾನ್ ।
ತಸ್ಯಾನುಯಾಯಿನೋ ಭೂಪಾ ದುದ್ರುವುರ್ಜೀವಿತೈಷಿಣಃ ॥

ಅನುವಾದ

ಶಿಶುಪಾಲನ ಸಂಹಾರವಾದೊಡನೆ ಆ ಸಭೆಯಲ್ಲಿ ದೊಡ್ಡ ಕೋಲಾಹಲವುಂಟಾಯಿತು. ಶಿಶುಪಾಲನ ಅನುಯಾಯಿಗಳಾದ ರಾಜರು ಜೀವಿಸಿರಬೇಕೆಂಬ ಆಸೆಯಿಂದ ಅಲ್ಲಿಂದ ಪಲಾಯನ ಮಾಡಿದರು. ॥44॥

ಮೂಲಮ್

(ಶ್ಲೋಕ-45)
ಚೈದ್ಯದೇಹೋತ್ಥಿತಂ ಜ್ಯೋತಿರ್ವಾಸುದೇವಮುಪಾವಿಶತ್ ।
ಪಶ್ಯತಾಂ ಸರ್ವಭೂತಾನಾಮುಲ್ಕೇವ ಭುವಿ ಖಾಚ್ಚ್ಯುತಾ ॥

ಅನುವಾದ

ಉಲ್ಕೆಯು ಅಂತರಿಕ್ಷದಿಂದ ಭೂಮಿಗೆ ಬೀಳುವಂತೆ ಸಮಸ್ತರು ನೋಡುತ್ತಿರುವಂತೆ ಶಿಶುಪಾಲನ ಶರೀರದಿಂದ ಹೊರಟ ಅವನ ಜೀವಜ್ಯೋತಿಯು ಭಗವಾನ್ ಶ್ರೀಕೃಷ್ಣನಲ್ಲಿ ಸೇರಿತು. ॥45॥

ಮೂಲಮ್

(ಶ್ಲೋಕ-46)
ಜನ್ಮತ್ರಯಾನುಗುಣಿತವೈರಸಂರಬ್ಧಯಾ ಧಿಯಾ ।
ಧ್ಯಾಯಂಸ್ತನ್ಮಯತಾಂ ಯಾತೋ ಭಾವೋ ಹಿ ಭವಕಾರಣಮ್ ॥

ಅನುವಾದ

ಪರೀಕ್ಷಿತನೇ! ಶಿಶಿಪಾಲನ ಅಂತಃಕರಣದಲ್ಲಿ ಮೂರು ಜನ್ಮಗಳಿಂದಲೂ ಒಂದೇ ಸಮನೆ ವೈರಭಾವವು ಬೆಳೆಯುತ್ತಲೇ ಇತ್ತು. ಹೀಗೆ ವೈರಭಾವದಿಂದಲೇ ಅವನು ಶ್ರೀಕೃಷ್ಣನನ್ನು ಸದಾ ಧ್ಯಾನಿಸುತ್ತಲೇ ಇದ್ದನು. ಈ ಕಾರಣದಿಂದಲೇ ಅವನು ವಿಷ್ಣುವಿನ ಪಾರ್ಷದರಲ್ಲಿ ಸೇರಿಹೋದನು. ಮರಣಾನಂತರ ದೊರೆಯುವ ಗತಿಗೆ ಭಾವವೇ ಕಾರಣವಾಗುತ್ತದೆ. ॥46॥

ಮೂಲಮ್

(ಶ್ಲೋಕ-47)
ಋತ್ವಿಗ್ಭ್ಯಃ ಸಸದಸ್ಯೇಭ್ಯೋ ದಕ್ಷಿಣಾಂ ವಿಪುಲಾಮದಾತ್ ।
ಸರ್ವಾನ್ ಸಂಪೂಜ್ಯ ವಿಧಿವಚ್ಚಕ್ರೇವಭೃಥಮೇಕರಾಟ್ ॥

ಅನುವಾದ

ಶಿಶುಪಾಲನಿಗೆ ಸದ್ಗತಿಯುಂಟಾದ ಬಳಿಕ ಚಕ್ರವರ್ತಿ ಧರ್ಮರಾಜ ಯುಧಿಷ್ಠಿರನು ಆಚಾರ್ಯರಿಗೂ ಮತ್ತು ಋತ್ವಿಜರಿಗೂ ಹೇರಳವಾದ ದಕ್ಷಿಣೆಯನ್ನು ಕೊಟ್ಟು, ಸತ್ಕರಿಸಿ ವಿಧಿಪೂರ್ವಕವಾಗಿ ಯಜ್ಞಾಂತ್ಯದ ಅವಭೃತಸ್ನಾನ ಮಾಡಿದನು. ॥47॥

ಮೂಲಮ್

(ಶ್ಲೋಕ-48)
ಸಾಧಯಿತ್ವಾ ಕ್ರತುಂ ರಾಜ್ಞಃ ಕೃಷ್ಣೋ ಯೋಗೇಶ್ವರೇಶ್ವರಃ ।
ಉವಾಸ ಕತಿಚಿನ್ಮಾಸಾನ್ಸುಹೃದ್ಭಿರಭಿಯಾಚಿತಃ ॥

ಅನುವಾದ

ಪರೀಕ್ಷಿತನೇ! ಈ ಪ್ರಕಾರವಾಗಿ ಯೋಗೇಶ್ವರ ಭಗವಾನ್ ಶ್ರೀಕೃಷ್ಣನು ಯುಧಿಷ್ಠಿರನ ರಾಜಸೂಯ ಯಜ್ಞವನ್ನು ಪೂರ್ಣಗೊಳಿಸಿಕೊಟ್ಟು, ತನ್ನ ನೆಂಟರಿಷ್ಟರ ಮತ್ತು ಸುಹೃದರ ಆಗ್ರಹದಿಂದ ಕೆಲವು ತಿಂಗಳುಗಳವರೆಗೆ ಅಲ್ಲೇ ಇದ್ದನು. ॥48॥

ಮೂಲಮ್

(ಶ್ಲೋಕ-49)
ತತೋನುಜ್ಞಾಪ್ಯ ರಾಜಾನಮನಿಚ್ಛಂತಮಪೀಶ್ವರಃ ।
ಯಯೌ ಸಭಾರ್ಯಃ ಸಾಮಾತ್ಯಃ ಸ್ವಪುರಂ ದೇವಕೀಸುತಃ ॥

ಅನುವಾದ

ಅನಂತರ ಯುಧಿಷ್ಠಿರನಿಗೆ ಕಳಿಸಿಕೊಡಲು ಇಷ್ಟವಿಲ್ಲದಿದ್ದರೂ ಸರ್ವಶಕ್ತನಾದ ಭಗವಾನ್ ಶ್ರೀಕೃಷ್ಣನು ಅವನಿಂದ ಬೀಳ್ಕೊಂಡು ತನ್ನ ರಾಣಿಯರೊಂದಿಗೆ, ಮಂತ್ರಿಗಳೊಡನೆ ಇಂದ್ರಪ್ರಸ್ಥದಿಂದ ದ್ವಾರಕೆಗೆ ಪ್ರಯಾಣ ಬೆಳೆಸಿದನು. ॥49॥

ಮೂಲಮ್

(ಶ್ಲೋಕ-50)
ವರ್ಣಿತಂ ತದುಪಾಖ್ಯಾನಂ ಮಯಾ ತೇ ಬಹುವಿಸ್ತರಮ್ ।
ವೈಕುಂಠವಾಸಿನೋರ್ಜನ್ಮ ವಿಪ್ರಶಾಪಾತ್ ಪುನಃ ಪುನಃ ॥

ಅನುವಾದ

ಪರೀಕ್ಷಿತನೇ! ವೈಕುಂಠವಾಸಿಗಳಾದ ಜಯ-ವಿಜಯರು ಸನಕಾದಿಗಳ ಶಾಪದಿಂದ ಪುನಃ ಪುನಃ ಹುಟ್ಟಬೇಕಾಗಿ ಬಂದ ಉಪಾಖ್ಯಾನವನ್ನು ನಾನು ಹಿಂದೆ (ಸಪ್ತಮಸ್ಕಂಧದಲ್ಲಿ) ನಿನಗೆ ವಿಸ್ತಾರವಾಗಿ ಹೇಳಿಬಿಟ್ಟಿದ್ದೇನೆ. ॥50॥

ಮೂಲಮ್

(ಶ್ಲೋಕ-51)
ರಾಜಸೂಯಾವಭೃಥ್ಯೇನ ಸ್ನಾತೋ ರಾಜಾ ಯುಧಿಷ್ಠಿರಃ ।
ಬ್ರಹ್ಮಕ್ಷತ್ರಸಭಾಮಧ್ಯೇ ಶುಶುಭೇ ಸುರರಾಡಿವ ॥

ಅನುವಾದ

ರಾಜಸೂಯ ಯಾಗವನ್ನು ಮಾಡಿ ವಿಧಿವತ್ತಾಗಿ ಅವಭೃತ ಸ್ನಾನ ಮಾಡಿದ ಯುಧಿಷ್ಠಿರನು ಬ್ರಾಹ್ಮಣ ಮತ್ತು ಕ್ಷತ್ರಿಯರ ಸಭೆಯಲ್ಲಿ ದೇವೇಂದ್ರನಂತೆ ಪ್ರಕಾಶಿಸಿದನು. ॥51॥

ಮೂಲಮ್

(ಶ್ಲೋಕ-52)
ರಾಜ್ಞಾ ಸಭಾಜಿತಾಃ ಸರ್ವೇ ಸುರಮಾನವಖೇಚರಾಃ ।
ಕೃಷ್ಣಂ ಕ್ರತುಂ ಚ ಶಂಸಂತಃ ಸ್ವಧಾಮಾನಿ ಯಯುರ್ಮುದಾ ॥

ಅನುವಾದ

ಯುಧಿಷ್ಠಿರನು ದೇವತೆಗಳನ್ನು, ಮನುಷ್ಯರನ್ನು, ಆಕಾಶಚಾರಿಗಳನ್ನು ಯಥಾ ಯೋಗ್ಯವಾಗಿ ಸತ್ಕರಿಸಿದನು. ಅವರೆಲ್ಲರೂ ರಾಜಸೂಯ ಯಜ್ಞವನ್ನು ಮತ್ತು ಭಗವಾನ್ ಶ್ರೀಕೃಷ್ಣನನ್ನು ಪ್ರಶಂಸಿಸುತ್ತಾ ಬಹಳ ಆನಂದದಿಂದ ತಮ್ಮ-ತಮ್ಮ ಲೋಕಗಳಿಗೆ ತೆರಳಿದರು. ॥52॥

ಮೂಲಮ್

(ಶ್ಲೋಕ-53)
ದುರ್ಯೋಧನಮೃತೇ ಪಾಪಂ ಕಲಿಂ ಕುರುಕುಲಾಮಯಮ್ ।
ಯೋ ನ ಸೇಹೇ ಶ್ರಿಯಂ ಸ್ಫೀತಾಂ ದೃಷ್ಟ್ವಾ ಪಾಂಡುಸುತಸ್ಯ ತಾಮ್ ॥

ಅನುವಾದ

ಪರೀಕ್ಷಿತನೇ! ಎಲ್ಲರೂ ಸಂತೋಷಗೊಂಡರು. ಆದರೆ ದುರ್ಯೋಧನನಿಗೆ ಪಾಂಡವರ ಈ ಉಜ್ವಲ ರಾಜ್ಯಲಕ್ಷ್ಮಿಯ ಉತ್ಕರ್ಷವು ಸಹಿಸದಾಯಿತು. ಏಕೆಂದರೆ, ಅವನು ಸ್ವಭಾವದಿಂದಲೇ ಪಾಪಿಯೂ, ಕಲಹಪ್ರಿಯನೂ ಮತ್ತು ಕುರುಕುಲವನ್ನು ನಾಶಗೊಳಿಸುವಂತಹ ಒಂದು ಮಹಾರೋಗವೇ ಆಗಿದ್ದನು. ॥53॥

ಮೂಲಮ್

(ಶ್ಲೋಕ-54)
ಯ ಇದಂ ಕೀರ್ತಯೇದ್ವಿಷ್ಣೋಃ ಕರ್ಮ ಚೈದ್ಯವಧಾದಿಕಮ್ ।
ರಾಜಮೋಕ್ಷಂ ವಿತಾನಂ ಚ ಸರ್ವಪಾಪೈಃ ಪ್ರಮುಚ್ಯತೇ ॥

ಅನುವಾದ

ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಮಾಡಿದ ಶಿಶುಪಾಲ ವಧೆ, ಜರಾಸಂಧ ವಧೆ, ಸೆರೆಯಾಳಾದ ರಾಜರ ಬಿಡುಗಡೆ, ಯಜ್ಞಾನುಷ್ಠಾನ ಮೊದಲಾದ ಈ ಲೀಲೆಗಳನ್ನು ಕೀರ್ತನೆ ಮಾಡುವವನು ಸಮಸ್ತ ಪಾಪಗಳಿಂದ ಮುಕ್ತನಾಗಿ ಹೋಗುವನು. ॥54॥

ಅನುವಾದ (ಸಮಾಪ್ತಿಃ)

ಎಪ್ಪತ್ತನಾಲ್ಕನೆಯ ಅಧ್ಯಾಯವು ಮುಗಿಯಿತು. ॥74॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ ಶಿಶುಪಾಲವಧೋ ನಾಮ ಚತುಃಸಪ್ತತಿತಮೋಽಧ್ಯಾಯಃ ॥74॥