೭೩

[ಏಪ್ಪತ್ತಮೂರನೇಯ ಅಧ್ಯಾಯ]

ಭಾಗಸೂಚನಾ

ಜರಾಸಂಧನ ಸೆರೆಮನೆಯಲ್ಲಿದ್ದ ರಾಜರ ಬೀಳ್ಕೊಡಿಗೆ, ಶ್ರೀಕೃಷ್ಣನು ಭೀಮಾರ್ಜುನರೊಡನೆ ಇಂದ್ರಪ್ರಸ್ಥಕ್ಕೆ ಹಿಂದಿರುಗಿದುದು

ಮೂಲಮ್

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಅಯುತೇ ದ್ವೇ ಶತಾನ್ಯಷ್ಟೌ ಲೀಲಯಾ ಯುಧಿ ನಿರ್ಜಿತಾಃ ।
ತೇ ನಿರ್ಗತಾ ಗಿರಿದ್ರೋಣ್ಯಾಂ ಮಲಿನಾ ಮಲವಾಸಸಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಜರಾಸಂಧನು ಅನಾಯಾಸವಾಗಿ ಇಪ್ಪತ್ತು ಸಾವಿರದ ಎಂಟು ನೂರು ರಾಜರನ್ನು ಜಯಿಸಿ ಪರ್ವತಗಳ ಮಧ್ಯದಲ್ಲಿದ್ದ ಸೆರೆಮನೆಯಲ್ಲಿಟ್ಟಿದ್ದನು. ಭಗವಾನ್ ಶ್ರೀಕೃಷ್ಣನು ಅವರನ್ನು ಮುಕ್ತಗೊಳಿಸಿದಾಗ ಸೆರೆಮನೆಯಿಂದ ಹೊರಬಂದರು. ಆಗ ಅವರ ಶರೀರಗಳು ಮತ್ತು ವಸಗಳು ಅತ್ಯಂತ ಮಲಿನವಾಗಿದ್ದವು. ॥1॥

ಮೂಲಮ್

(ಶ್ಲೋಕ-2)
ಕ್ಷುತ್ಕ್ಷಾಮಾಃ ಶುಷ್ಕವದನಾಃ ಸಂರೋಧಪರಿಕರ್ಶಿತಾಃ ।
ದದೃಶುಸ್ತೇ ಘನಶ್ಯಾಮಂ ಪೀತಕೌಶೇಯವಾಸಸಮ್ ॥

ಅನುವಾದ

ಹಸಿವಿನಿಂದ ಕಂಗೆಟ್ಟು ಮುಖಗಳು ಬಾಡಿಹೋಗಿದ್ದವು. ಸೆರೆಮನೆಯ ವಾಸದಿಂದ ಅವರ ಅಂಗಾಂಗಗಳು ಶಿಥಿಲಗೊಂಡಿದ್ದವು. ಅಲ್ಲಿಂದ ಹೊರಬರುತ್ತಲೇ ರಾಜರೆಲ್ಲರೂ ತಮ್ಮ ಮುಂದೆ ನಿಂತಿದ್ದ ಭಗವಾನ್ ಶ್ರೀಕೃಷ್ಣನನ್ನು ನೋಡಿದರು. ಅವನ ಶರೀರವು ಮೇಘ ಶ್ಯಾಮಲವಾಗಿದ್ದು ರೇಷ್ಮೆಯ ಪೀತಾಂಬರವನ್ನು ಧರಿಸಿದ್ದನು. ॥2॥

ಮೂಲಮ್

(ಶ್ಲೋಕ-3)
ಶ್ರೀವತ್ಸಾಂಕಂ ಚತುರ್ಬಾಹುಂ ಪದ್ಮಗರ್ಭಾರುಣೇಕ್ಷಣಮ್ ।
ಚಾರುಪ್ರಸನ್ನವದನಂ ಸ್ಫುರನ್ಮಕರಕುಂಡಲಮ್ ॥
(ಶ್ಲೋಕ-4)
ಪದ್ಮಹಸ್ತಂ ಗದಾಶಂಖರಥಾಂಗೈರುಪಲಕ್ಷಿತಮ್ ।
ಕಿರೀಟಹಾರಕಟಕಕಟಿಸೂತ್ರಾಂಗದಾಚಿತಮ್ ॥

ಅನುವಾದ

ಅವನಿಗೆ ನಾಲ್ಕು ಭುಜಗಳಿದ್ದು ಶಂಖ, ಚಕ್ರ, ಗದಾ, ಪದ್ಮಗಳಿಂದ ಸುಶೋಭಿತವಾಗಿದ್ದವು. ವಕ್ಷಃಸ್ಥಳದಲ್ಲಿ ಶ್ರೀವತ್ಸಚಿಹ್ನೆಯು ವಿರಾಜಿಸುತ್ತಿತ್ತು. ಕಮಲದ ಒಳಭಾಗದಂತೆ ಕೋಮಲವಾದ ನಸುಗೆಂಪು ಕಣ್ಣುಗಳು, ಸುಂದರವಾದ ವದನವು ಪ್ರಸನ್ನತೆಯ ಸದನದಂತಿದೆ. ಕಿವಿಗಳಲ್ಲಿ, ಮಕರಾಕೃತಿಯ ಕುಂಡಲಗಳು, ಸುಂದರವಾದ ಕಿರೀಟ, ಮುತ್ತಿನ ಹಾರಗಳು, ಕಡಗ-ಕಂಕಣ ಮತ್ತು ತೊಳ್ಬಂದಿಗಳು ಆಯಾಯ ಸ್ಥಾನಗಳಲ್ಲಿ ಶೋಭಿಸುತ್ತಿದ್ದವು. ॥3-4॥

ಮೂಲಮ್

(ಶ್ಲೋಕ-5)
ಭ್ರಾಜದ್ವರಮಣಿಗ್ರೀವಂ ನಿವೀತಂ ವನಮಾಲಯಾ ।
ಪಿಬಂತ ಇವ ಚಕ್ಷುರ್ಭ್ಯಾಂ ಲಿಹಂತ ಇವ ಜಿಹ್ವಯಾ ॥
(ಶ್ಲೋಕ-6)
ಜಿಘ್ರಂತ ಇವ ನಾಸಾಭ್ಯಾಂ ರಂಭಂತ ಇವ ಬಾಹುಭಿಃ ।
ಪ್ರಣೇಮುರ್ಹತಪಾಪ್ಮಾನೋ ಮೂರ್ಧಭಿಃ ಪಾದಯೋರ್ಹರೇಃ ॥

ಅನುವಾದ

ಕೊರಳಲ್ಲಿ ಕೌಸ್ತುಭಮಣಿಯು ಹೊಳೆಯುತ್ತಿತ್ತು. ವನಮಾಲೆಯನ್ನು ತೊಟ್ಟುಕೊಂಡಿರುವ ಶ್ರೀಕೃಷ್ಣನನ್ನು ಆ ರಾಜರು ಕಣ್ಣುಗಳನ್ನು ಅರಳಿಸಿಕೊಂಡು, ತೆರೆದಬಾಯಿಂದ ಎವೆಯಿಕ್ಕದೆ ನೋಡುತ್ತಿರುವುದನ್ನು ನೋಡಿದರೆ ಅವರು ತಮ್ಮ ಕಣ್ಣುಗಳಿಂದಲೇ ಅವನ ರೂಪ ಮಾಧುರ್ಯವನ್ನು ಸವಿಯುತ್ತಿರುವಂತೆಯೂ, ನಾಲಿಗೆಯಿಂದ ನೆಕ್ಕುತ್ತಿರುವಂತೆಯೂ, ಮೂಗಿನಿಂದ ಆಘ್ರಾಣಿಸುವಂತೆಯೂ, ಬಾಹುಗಳಿಂದ ಆಲಿಂಗಿಸಿಕೊಳ್ಳುತ್ತಿರುವಂತೆಯೂ ಅನಿಸುತ್ತಿತ್ತು. ಆತನ ದರ್ಶನ ಮಾತ್ರದಿಂದಲೇ ಸಮಸ್ತ ಪಾಪಗಳನ್ನು ಕಳೆದುಕೊಂಡ ಆ ರಾಜರು ಭಗವಂತನ ಚರಣಗಳಲ್ಲಿ ಶಿರಸ್ಸನ್ನಿಟ್ಟು ನಮಸ್ಕರಿಸಿದರು. ॥5-6॥

ಮೂಲಮ್

(ಶ್ಲೋಕ-7)
ಕೃಷ್ಣಸಂದರ್ಶನಾಹ್ಲಾದಧ್ವಸ್ತಸಂರೋಧನಕ್ಲಮಾಃ ।
ಪ್ರಶಶಂಸುರ್ಹೃಷೀಕೇಶಂ ಗೀರ್ಭಿಃ ಪ್ರಾಂಜಲಪಯೋ ನೃಪಾಃ ॥

ಅನುವಾದ

ಭಗವಾನ್ ಶ್ರೀಕೃಷ್ಣನ ದರ್ಶನದಿಂದಾದ ಆನಂದದಲ್ಲಿ ಸೆರೆಮನೆಯ ಕಷ್ಟಗಳೆಲ್ಲ ಮರೆತುಹೋದುವು. ಅವರೆಲ್ಲರೂ ಕೈಜೋಡಿಸಿಕೊಂಡು ವಿನಮ್ರ ವಾಣಿಯಿಂದ ಶ್ರೀಕೃಷ್ಣನನ್ನು ಸ್ತುತಿಸತೊಡಗಿದರು. ॥7॥

ಮೂಲಮ್

(ಶ್ಲೋಕ-8)

ಮೂಲಮ್ (ವಾಚನಮ್)

ರಾಜಾನ ಊಚುಃ

ಮೂಲಮ್

ನಮಸ್ತೇ ದೇವದೇವೇಶ ಪ್ರಪನ್ನಾರ್ತಿಹರಾವ್ಯಯ ।
ಪ್ರಪನ್ನಾನ್ಪಾಹಿ ನಃ ಕೃಷ್ಣ ನಿರ್ವಿಣ್ಣಾನ್ ಘೋರಸಂಸೃತೇಃ ॥

ಅನುವಾದ

ರಾಜರುಗಳೆಂದರು — ಶರಣಾಗತರ ಸಮಸ್ತ ದುಃಖಗಳನ್ನೂ, ಭಯವನ್ನು ಹೋಗಲಾಡಿಸುವವನೇ! ದೇವ ದೇವೇಶ್ವರನೇ! ಸಚ್ಚಿದಾನಂದ ಸ್ವರೂಪನೇ! ಅವಿನಾಶಿಯೇ! ಶ್ರೀಕೃಷ್ಣನೇ! ನಾವೆಲ್ಲರೂ ನಿನಗೆ ನಮಸ್ಕರಿಸುತ್ತೇವೆ. ಜರಾಸಂಧನ ಕಾರಾಗೃಹದಿಂದೆನೋ ನಮ್ಮನ್ನು ಬಿಡುಗಡೆ ಮಾಡಿದೆ. ಈಗ ಈ ಜನ್ಮ-ಮರಣ ರೂಪವಾದ ಘೋರ ವಾದಸಂಸಾರ ಚಕ್ರದಿಂದಲೂ ಬಿಡುಗಡೆಮಾಡು. ಸಂಸಾರದ ಕಟುವಾದ ದುಃಖವನ್ನು ಅನುಭವಿಸಿ ಬೇಸತ್ತಿದ್ದೇವೆ. ಶರಣಾಗತರಾಗಿರುವ ನಮ್ಮನ್ನು ಸಂರಕ್ಷಿಸು. ॥8॥

ಮೂಲಮ್

(ಶ್ಲೋಕ-9)
ನೈನಂ ನಾಥಾನ್ವಸೂಯಾಮೋ ಮಾಗಧಂ ಮಧುಸೂದನ ।
ಅನುಗ್ರಹೋ ಯದ್ಭವತೋ ರಾಜ್ಞಾಂ ರಾಜ್ಯಚ್ಯುತಿರ್ವಿಭೋ ॥

ಅನುವಾದ

ನಮ್ಮ ಸ್ವಾಮಿಯಾದ ಮಧುಸೂದನನೇ! ರಾಜ್ಯಚ್ಯುತರಾದ ಬಗ್ಗೆ ಜರಾಸಂಧನಲ್ಲಿ ನಾವು ದೋಷವೆಣಿಸುವುದಿಲ್ಲ. ಭಗವಂತಾ! ಇದಾದರೋ ನಿನ್ನ ಅನುಗ್ರಹವನ್ನು ಪಡೆಯಲು ಕಾರಣವಾಯಿತು. ॥9॥

ಮೂಲಮ್

(ಶ್ಲೋಕ-10)
ರಾಜ್ಯೈಶ್ವರ್ಯಮದೋನ್ನದ್ಧೋ ನ ಶ್ರೇಯೋ ವಿಂದತೇ ನೃಪಃ ।
ತ್ವನ್ಮಾಯಾಮೋಹಿತೋನಿತ್ಯಾ ಮನ್ಯತೇ ಸಂಪದೋಚಲಾಃ ॥

ಅನುವಾದ

ರಾಜ್ಯ ಐಶ್ವರ್ಯದ ಮದದಿಂದ ಉನ್ಮತ್ತರಾದ ರಾಜರಿಗೆ ನಿಜಸುಖದ - ಶ್ರೇಯಸ್ಸಿನ ಪ್ರಾಪ್ತಿಯು ಎಂದಿಗೂ ಆಗುವುದಿಲ್ಲ. ಅವರು ನಿನ್ನ ಮಾಯೆಯಿಂದ ಮೋಹಿತರಾಗಿ ಅನಿತ್ಯವಾದ ಸಂಪತ್ತುಗಳನ್ನು ಅಚಲವೆಂದು ತಿಳಿದಿರುತ್ತಾರೆ. ॥10॥

ಮೂಲಮ್

(ಶ್ಲೋಕ-11)
ಮೃಗತೃಷ್ಣಾಂ ಯಥಾ ಬಾಲಾ ಮನ್ಯಂತ ಉದಕಾಶಯಮ್ ।
ಏವಂ ವೈಕಾರಿಕೀಂ ಮಾಯಾಮಯುಕ್ತಾ ವಸ್ತು ಚಕ್ಷತೇ ॥

ಅನುವಾದ

ಮೂರ್ಖರಾದವರು ಬಿಸಿಲ್ಗುದುರೆಯನ್ನು ಜಲಾಶಯವೆಂದು ಭಾವಿಸುವಂತೆಯೇ ಇಂದ್ರಿಯ ಲೋಲುಪರಾದ ಅಜ್ಞಾನಿಗಳು ಈ ಪರಿವರ್ತನ ಶೀಲವಾದ ಮಾಯೆಯನ್ನು ಸತ್ಯವಾದದ್ದೆಂದು ತಿಳಿಯುತ್ತಾರೆ. ॥11॥

ಮೂಲಮ್

(ಶ್ಲೋಕ-12)
ವಯಂ ಪುರಾ ಶ್ರೀಮದನಷ್ಟದೃಷ್ಟಯೋ
ಜಿಗೀಷಯಾಸ್ಯಾ ಇತರೇತರಸ್ಪೃಧಃ ।
ಘ್ನಂತಃ ಪ್ರಜಾಃ ಸ್ವಾ ಅತಿನಿರ್ಘೃಣಾಃ ಪ್ರಭೋ
ಮೃತ್ಯುಂ ಪುರಸ್ತ್ವಾವಿಗಣಯ್ಯ ದುರ್ಮದಾಃ ॥

ಅನುವಾದ

ಭಗವಂತಾ! ಮೊದಲು ನಾವುಗಳು ಧನ-ಸಂಪತ್ತಿನ ಅಮಲಿನಿಂದ ಕುರುಡರಾಗಿದ್ದೆವು. ಈ ಪೃಥಿವಿಯನ್ನು ಗೆಲ್ಲಲು ಪರಸ್ಪರ ಸ್ಪರ್ಧಿಸುತ್ತಿದ್ದೆವು ಹಾಗೂ ನಮ್ಮ ಪ್ರಜೆಗಳನ್ನೇ ಪೀಡಿಸುತ್ತಿದ್ದೆವು. ನಿಜವಾಗಿಯೂ ನಮ್ಮ ಜೀವನವು ಅತ್ಯಂತ ಕ್ರೂರತೆಯಿಂದ ಕೂಡಿತ್ತು. ನೀನೇ ಮೃತ್ಯುರೂಪದಿಂದ ನಮ್ಮ ಮುಂದೆ ನಿಂತಿರುವೆ ಎಂಬುದನ್ನು ಲೆಕ್ಕಿಸದಷ್ಟು ನಾವು ಗರ್ವಿಷ್ಠರಾಗಿದ್ದೆವು. ॥12॥

ಮೂಲಮ್

(ಶ್ಲೋಕ-13)
ತ ಏವ ಕೃಷ್ಣಾದ್ಯ ಗಭೀರರಂಹಸಾ
ದುರಂತವೀರ್ಯೇಣ ವಿಚಾಲಿತಾಃ ಶ್ರಿಯಃ ।
ಕಾಲೇನ ತನ್ವಾ ಭವತೋನುಕಂಪಯಾ
ವಿನಷ್ಟದರ್ಪಾಶ್ಚರಣೌ ಸ್ಮರಾಮ ತೇ ॥

ಅನುವಾದ

ಸಚ್ಚಿದಾನಂದ ಸ್ವರೂಪನಾದ ಶ್ರೀಕೃಷ್ಣನೇ! ಕಾಲದ ಗತಿಯು ಅತ್ಯಂತ ಗಹನವಾಗಿದೆ. ಯಾರಿಂದಲೂ ನಿವಾರಿಸಲಾರದಷ್ಟು ಬಲವತ್ತರವಾಗಿದೆ. ಎಷ್ಟಾದರೂ ಅದು ನಿನ್ನ ಸ್ವರೂಪವೇ ಅಲ್ಲವೇ! ಈಗ ಅದು ನಮ್ಮನ್ನು ಶ್ರೀಹೀನರನ್ನಾಗಿಯೂ, ರಾಜ್ಯಹೀನರನ್ನಾಗಿಯೂ ಮಾಡಿಬಿಟ್ಟಿದೆ. ನಿನ್ನ ಅಹೈತುಕವಾದ ಅನುಕಂಪದಿಂದಾಗಿ ನಮ್ಮ ಮದವು ನುಚ್ಚು-ನೂರಾಯಿತು. ಈಗ ನಾವು ನಿನ್ನ ಚರಣಗಳನ್ನು ಸ್ಮರಿಸುತ್ತೇವೆ. ॥13॥

ಮೂಲಮ್

(ಶ್ಲೋಕ-14)
ಅಥೋ ನ ರಾಜ್ಯಂ ಮೃಗತೃಷ್ಣಿರೂಪಿತಂ
ದೇಹೇನ ಶಶ್ವತ್ ಪತತಾ ರುಜಾಂ ಭುವಾ ।
ಉಪಾಸಿತವ್ಯಂ ಸ್ಪೃಹಯಾಮಹೇ ವಿಭೋ
ಕ್ರಿಯಾಲಂ ಪ್ರೇತ್ಯ ಚ ಕರ್ಣರೋಚನಮ್ ॥

ಅನುವಾದ

ಪ್ರಭೋ! ಈ ಶರೀರವು ದಿನ-ದಿನಕ್ಕೆ ಕ್ಷೀಣಿಸುತ್ತಾ ಹೋಗುತ್ತದೆ. ರೋಗಗಳ ಜನ್ಮಭೂಮಿಯೇ ಆಗಿದೆ. ಆದುದರಿಂದ ಮರೀಚಿಕೆಯಂತೆ ಸುಖಮಯವಾಗಿ ಕಾಣುವ ಈ ರಾಜ್ಯಭೋಗವೂ ಮರಣಾನಂತರದಲ್ಲಿ ಕರ್ಮಗಳ ಫಲವಾಗಿ ನಮಗೆ ಸಿಗುವ ಸ್ವರ್ಗಾದಿಗಳೂ ಬೇಡ. ಏಕೆಂದರೆ, ಅವು ನಿಸ್ಸಾರವಾದವುಗಳು ಎಂದೂ, ಕೇವಲ ಕೇಳಲು ಮಾತ್ರ ಆಕರ್ಷಕವಾಗಿವೆ ಎಂಬುದನ್ನೂ ನಾವು ತಿಳಿದಿದ್ದೇವೆ.॥14॥

ಮೂಲಮ್

(ಶ್ಲೋಕ-15)
ತಂ ನಃ ಸಮಾದಿಶೋಪಾಯಂ ಯೇನ ತೇ ಚರಣಾಬ್ಜಯೋಃ ।
ಸ್ಮೃತಿರ್ಯಥಾ ನ ವಿರಮೇದಪಿ ಸಂಸರತಾಮಿಹ ॥

ಅನುವಾದ

ನಿನ್ನ ಚರಣಾರವಿಂದಗಳ ಸ್ಮೃತಿಯು ಎಂದೂ ಮರೆಯದೆ ಅದು ಸದಾಸ್ಮೃತಿಪಥದಲ್ಲಿ ನಿರಂತರವಾಗುವಂತಹ ಯಾವುದಾದರೂ ಉಪಾಯವನ್ನು ಹೇಳು. ನಾವು ಪ್ರಪಂಚದ ಯಾವುದೇ ಯೋನಿಯಲ್ಲಿಯೂ ಪುನಃ ಹುಟ್ಟಿದರೂ ನಿನ್ನ ಸ್ಮೃತಿಯು ಸದಾಕಾಲ ಇರುವಂತೆ ಮಾಡು. ॥15॥

ಮೂಲಮ್

(ಶ್ಲೋಕ-16)
ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ ।
ಪ್ರಣತಕ್ಲೇಶನಾಶಾಯ ಗೋವಿಂದಾಯ ನಮೋ ನಮಃ ॥

ಅನುವಾದ

ನಮಿಸಿದವರ ಕ್ಲೇಶಗಳನ್ನು ಹೋಗಲಾಡಿಸುವ ಶ್ರೀಕೃಷ್ಣನಿಗೆ, ವಾಸುದೇವನಿಗೆ, ಶ್ರೀಹರಿಯೇ! ಪರಮಾತ್ಮನೇ! ಗೋವಿಂದನೇ! ನಿನಗೆ ಪುನಃ ಪುನಃ ನಮಸ್ಕರಿಸುತ್ತೇವೆ. ॥16॥

ಮೂಲಮ್

(ಶ್ಲೋಕ-17)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಸಂಸ್ತೂಯಮಾನೋ ಭಗವಾನ್ ರಾಜಭಿರ್ಮುಕ್ತಬಂಧನೈಃ ।
ತಾನಾಹ ಕರುಣಸ್ತಾತ ಶರಣ್ಯಃ ಶ್ಲಕ್ಷ್ಣಯಾ ಗಿರಾ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಕಾರಾಗೃಹದಿಂದ ಮುಕ್ತರಾದ ರಾಜರು ಕರುಣಾಸಮುದ್ರನಾದ ಭಗವಾನ್ ಶ್ರೀಕೃಷ್ಣನನ್ನು ಹೀಗೆ ಸ್ತೋತ್ರಮಾಡಲು, ಶರಣಾಗತ ರಕ್ಷಕನಾದ ಪ್ರಭುವು ಮಧುರವಾದ ಮಾತಿನಿಂದ ಅವರಲ್ಲಿ ಇಂತೆಂದನು. ॥17॥

ಮೂಲಮ್

(ಶ್ಲೋಕ-18)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಅದ್ಯಪ್ರಭೃತಿ ವೋ ಭೂಪಾ ಮಯ್ಯಾತ್ಮನ್ಯಖಿಲೇಶ್ವರೇ ।
ಸುದೃಢಾ ಜಾಯತೇ ಭಕ್ತಿರ್ಬಾಢಮಾಶಂಸಿತಂ ತಥಾ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ನರಪತಿಗಳೇ! ನಿಮ್ಮ ಅಪೇಕ್ಷೆಯಂತೆ ಇಂದಿನಿಂದ ನಿಮಗೆ ಆತ್ಮಸ್ವರೂಪನಾದ ಮತ್ತು ಅಖಿಲೇಶ್ವರನಾದ ನನ್ನಲ್ಲಿ ಭಕ್ತಿಯು ಉಂಟಾಗುತ್ತದೆ. ॥18॥

ಮೂಲಮ್

(ಶ್ಲೋಕ-19)
ದಿಷ್ಟ್ಯಾ ವ್ಯವಸಿತಂ ಭೂಪಾ ಭವಂತ ಋತಭಾಷಿಣಃ ।
ಶ್ರಿಯೈಶ್ವರ್ಯಮದೋನ್ನಾಹಂ ಪಶ್ಯ ಉನ್ಮಾದಕಂ ನೃಣಾಮ್ ॥

ಅನುವಾದ

ರಾಜರುಗಳೇ! ನನ್ನನ್ನು ಯಾವಾಗಲೂ ಸ್ಮರಿಸುತ್ತಿರಬೇಕೆಂದು ನೀವು ನಿಶ್ಚಯವನ್ನು ಮಾಡಿರುವಿರಿ. ನೀವೆಲ್ಲರೂ ಸತ್ಯಭಾಷಿಗಳೇ ಆಗಿರುವಿರಿ. ಐಶ್ವರ್ಯಮದ ಮತ್ತು ಪ್ರಭುತ್ವಮದದಿಂದ ಉಂಟಾಗುವ ಗರ್ವಾತಿರೇಕವು ಜನರಿಗೆ ಹುಚ್ಚು ಹಿಡಿಸುವುದೆಂಬುದನ್ನು ನಾನು ನೋಡಿದ್ದೇನೆ. ॥19॥

ಮೂಲಮ್

(ಶ್ಲೋಕ-20)
ಹೈಹಯೋ ನಹುಷೋ ವೇನೋ ರಾವಣೋ ನರಕೋಪರೇ ।
ಶ್ರೀಮದಾದ್ಭ್ರಂಶಿತಾಃ ಸ್ಥಾನಾದ್ದೇವದೈತ್ಯನರೇಶ್ವರಾಃ ॥

ಅನುವಾದ

ಹೈಹಯ, ನಹುಷ, ವೇನ, ರಾವಣ, ನರಕಾಸುರ ಮೊದಲಾದ ಅನೇಕ ದೇವ ದೈತ್ಯ-ನರಪತಿಗಳು ಸಂಪತ್ತಿನ ಮತ್ತು ಅಧಿಕಾರ ಮದದಿಂದ ತಮ್ಮ ಸ್ಥಾನದಿಂದ ಚ್ಯುತರಾದರು. ॥20॥

ಮೂಲಮ್

(ಶ್ಲೋಕ-21)
ಭವಂತ ಏತದ್ವಿಜ್ಞಾಯ ದೇಹಾದ್ಯುತ್ಪಾದ್ಯಮಂತವತ್ ।
ಮಾಂ ಯಜಂತೋಧ್ವರೈರ್ಯುಕ್ತಾಃ ಪ್ರಜಾ ಧರ್ಮೇಣ ರಕ್ಷಥ ॥

ಅನುವಾದ

ಶರೀರ ಮತ್ತು ಅದರ ಸಂಬಂಧಿಗಳು ಹುಟ್ಟುತ್ತಾರೆ ಅದಕ್ಕಾಗಿ ಅವರ ನಾಶವೂ ಅವಶ್ಯವಾಗಿ ಆಗುತ್ತದೆ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ. ಆದ್ದರಿಂದ ಅದರಲ್ಲಿ ಆಸಕ್ತರಾಗಬೇಡಿರಿ. ಮನಸ್ಸನ್ನು, ಇಂದ್ರಿಯಗಳನ್ನು ವಶದಲ್ಲಿಟ್ಟುಕೊಂಡು ಯಜ್ಞಗಳ ಮೂಲಕ ನನ್ನನ್ನು ಆರಾಧಿಸಿ, ಧರ್ಮದಿಂದ ಪ್ರಜೆಗಳನ್ನು ರಕ್ಷಿಸಿರಿ. ॥21॥

ಮೂಲಮ್

(ಶ್ಲೋಕ-22)
ಸಂತನ್ವಂತಃ ಪ್ರಜಾತಂತೂನ್ ಸುಖಂ ದುಃಖಂ ಭವಾಭವೌ ।
ಪ್ರಾಪ್ತಂ ಪ್ರಾಪ್ತಂ ಚ ಸೇವಂತೋ ಮಚ್ಚಿತ್ತಾ ವಿಚರಿಷ್ಯಥ ॥

ಅನುವಾದ

ನೀವು ಪುತ್ರರನ್ನು ಪಡೆದು ವಂಶಪರಂಪರೆಯನ್ನು ರಕ್ಷಿಸಿರಿ. ಪ್ರಾರಬ್ಧದ ಅನುಸಾರವಾಗಿ ಪ್ರಾಪ್ತವಾಗುವ ಸುಖ-ದುಃಖಗಳನ್ನು, ಹುಟ್ಟು-ಸಾವುಗಳನ್ನು, ಲಾಭ-ನಷ್ಟಗಳನ್ನು ಸಮಭಾವದಿಂದ ಕಾಣುತ್ತಾ ನನ್ನ ಪ್ರಸಾದವೆಂದು ಭಾವಿಸಿ ಅನುಭವಿಸಿರಿ. ಯಾವಾಗಲೂ ನಿಮ್ಮ ಮನಸ್ಸನ್ನು ನನ್ನಲ್ಲಿಯೇ ನೆಲೆಗೊಳಿಸಿ ಜೀವನವನ್ನು ಸಾಗಿಸಿರಿ. ॥22॥

ಮೂಲಮ್

(ಶ್ಲೋಕ-23)
ಉದಾಸೀನಾಶ್ಚ ದೇಹಾದಾವಾತ್ಮಾರಾಮಾ ಧೃತವ್ರತಾಃ ।
ಮಯ್ಯಾವೇಶ್ಯ ಮನಃ ಸಮ್ಯಙ್ಮಾಮಂತೇ ಬ್ರಹ್ಮ ಯಾಸ್ಯಥ ॥

ಅನುವಾದ

ದೇಹ ಮತ್ತು ದೇಹಸಂಬಂಧಿಗಳಲ್ಲಿ ಯಾವುದೇ ಆಸಕ್ತಿಯನ್ನಿಡದೇ ಉದಾಸೀನರಾಗಿರಿ. ದೃಢವ್ರತರಾಗಿ, ನಿಮ್ಮ-ನಿಮ್ಮ ಆತ್ಮಗಳಲ್ಲೇ ರಮಿಸುತ್ತ ಇರಿ. ನಿಮ್ಮ ಮನಸ್ಸನ್ನು ನನ್ನಲ್ಲಿಯೇ ಚೆನ್ನಾಗಿ ನೆಲೆಗೊಳಿಸಿ, ನೀವು ಕಡೆಯಲ್ಲಿ ಬ್ರಹ್ಮಸ್ವರೂಪನಾದ ನನ್ನನ್ನೇ ಹೊಂದುವಿರಿ. ॥23॥

ಮೂಲಮ್

(ಶ್ಲೋಕ-24)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಯಾದಿಶ್ಯ ನೃಪಾನ್ ಕೃಷ್ಣೋ ಭಗವಾನ್ ಭುವನೇಶ್ವರಃ ।
ತೇಷಾಂ ನ್ಯಯುಂಕ್ತ ಪುರುಷಾನ್ ಸಿಯೋ ಮಜ್ಜನಕರ್ಮಣಿ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭುವನೇಶ್ವರನಾದ ಭಗವಾನ್ ಶ್ರೀಕೃಷ್ಣನು ರಾಜರುಗಳಿಗೆ ಹೀಗೆ ಉಪದೇಶಮಾಡಿ ಅವರಿಗೆ ಸ್ನಾನಾದಿಗಳನ್ನು ಮಾಡಿಸಲು ಅನೇಕ ಸ್ತ್ರೀ-ಪುರುಷರನ್ನು ನೇಮಿಸಿದನು. ॥24॥

ಮೂಲಮ್

(ಶ್ಲೋಕ-25)
ಸಪರ್ಯಾಂ ಕಾರಯಾಮಾಸ ಸಹದೇವೇನ ಭಾರತ ।
ನರದೇವೋಚಿತೈರ್ವಸೈರ್ಭೂಷಣೈಃ ಸ್ರಗ್ವಿಲೇಪನೈಃ ॥

ಅನುವಾದ

ಪರೀಕ್ಷಿದ್ರಾಜನೇ! ಜರಾಸಂಧನ ಪುತ್ರನಾದ ಸಹದೇವನಿಂದ ಅವರೆಲ್ಲರಿಗೂ ರಾಜೋಚಿತವಾದ ವಸ್ತ್ರಾಭೂಷಣಗಳನ್ನು, ಮಾಲೆ- ಚಂದನಾದಿಗಳನ್ನು ಕೊಡಿಸಿ ಬಹಳವಾಗಿ ಸನ್ಮಾನಿಸಿದನು. ॥25॥

ಮೂಲಮ್

(ಶ್ಲೋಕ-26)
ಭೋಜಯಿತ್ವಾ ವರಾನ್ನೇನ ಸುಸ್ನಾತಾನ್ ಸಮಲಂಕೃತಾನ್ ।
ಭೋಗೈಶ್ಚ ವಿವಿಧೈರ್ಯುಕ್ತಾಂಸ್ತಾಂಬೂಲಾದ್ಯೈರ್ನೃಪೋಚಿತೈಃ ॥

ಅನುವಾದ

ಶ್ರೀಕೃಷ್ಣನು, ರಾಜರೆಲ್ಲರೂ ಸ್ನಾನ ಮಾಡಿ ವಸ್ತ್ರಾಭರಣಗಳಿಂದ ಅಲಂಕೃತರಾದಾಗ ಅವರಿಗೆ ನಾನಾ ವಿಧವಾದ ಮೃಷ್ಟಾನ್ನದ ಭೋಜನವನ್ನು ಮಾಡಿಸಿ, ರಾಜೋಚಿತವಾದ ಫಲ-ಪುಷ್ಪ-ತಾಂಬೂಲಗಳನ್ನು ಸಹದೇವನಿಂದ ಕೊಡಿಸಿದನು. ॥26॥

ಮೂಲಮ್

(ಶ್ಲೋಕ-27)
ತೇ ಪೂಜಿತಾ ಮುಕುಂದೇನ ರಾಜಾನೋ ಮೃಷ್ಟಕುಂಡಲಾಃ ।
ವಿರೇಜುರ್ಮೋಚಿತಾಃ ಕ್ಲೇಶಾತ್ಪ್ರಾವೃಡಂತೇ ಯಥಾ ಗ್ರಹಾಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೀಗೆ ಸೆರೆಯಿಂದ ಮುಕ್ತರಾದ ರಾಜರನ್ನು ಸಮ್ಮಾನಿಸಿದನು. ಈಗ ಅವರು ಸಮಸ್ತಕ್ಲೇಶಗಳಿಂದ ಬಿಡುಗಡೆ ಹೊಂದಿ, ದಿವ್ಯವಾದ ಕುಂಡಲಗಳಿಂದ ಸಮಲಂಕೃತರಾಗಿ ವರ್ಷಾಕಾಲವು ಕಳೆದನಂತರ ಮೋಡಗಳಿಲ್ಲದ ಆಕಾಶದಲ್ಲಿ ತಾರೆಗಳು ಬೆಳಗುವಂತೆ ರಾರಾಜಿಸಿದರು. ॥27॥

ಮೂಲಮ್

(ಶ್ಲೋಕ-28)
ರಥಾನ್ಸದಶ್ವಾನಾರೋಪ್ಯ ಮಣಿಕಾಂಚನಭೂಷಿತಾನ್ ।
ಪ್ರೀಣಯ್ಯ ಸೂನೃತೈರ್ವಾಕ್ಯೈಃ ಸ್ವದೇಶಾನ್ಪ್ರತ್ಯಯಾಪಯತ್ ॥

ಅನುವಾದ

ಮತ್ತೆ ಭಗವಾನ್ ಶ್ರೀಕೃಷ್ಣನು ಮಣಿಕಾಂಚನಗಳಿಂದ ಭೂಷಿತವಾದ, ಶ್ರೇಷ್ಠವಾದ ಕುದುರೆಗಳಿಂದ ಕೂಡಿದ ರಥಗಳಲ್ಲಿ ಆ ರಾಜರನ್ನು ಕುಳ್ಳಿರಿಸಿ, ಸುಮಧುರವಾದ ಮಾತುಗಳಿಂದ ಅವರನ್ನು ತೃಪ್ತಿಪಡಿಸಿ ಅವರವರ ದೇಶಗಳಿಗೆ ಕಳಿಸಿಕೊಟ್ಟನು. ॥28॥

ಮೂಲಮ್

(ಶ್ಲೋಕ-29)
ತ ಏವಂ ಮೋಚಿತಾಃ ಕೃಚ್ಛ್ರಾತ್ ಕೃಷ್ಣೇನ ಸುಮಹಾತ್ಮನಾ ।
ಯಯುಸ್ತಮೇವ ಧ್ಯಾಯಂತಃ ಕೃತಾನಿ ಚ ಜಗತ್ಪತೇಃ ॥

ಅನುವಾದ

ಹೀಗೆ ಉದಾರಶಿರೋಮಣಿಯಾದ ಭಗವಾನ್ ಶ್ರೀಕೃಷ್ಣನು ಎಲ್ಲ ರಾಜರನ್ನು ಕಷ್ಟದಿಂದ ಪಾರುಮಾಡಿದನು. ಆ ರಾಜರೆಲ್ಲರೂ ಜಗತ್ಪತಿಯಾದ ಶ್ರೀಕೃಷ್ಣನ ರೂಪ, ಗುಣ ಮತ್ತು ಲೀಲೆಗಳನ್ನು ಚಿಂತಿಸುತ್ತಾ ತಮ್ಮ-ತಮ್ಮ ರಾಜಧಾನಿಗಳಿಗೆ ಪ್ರಯಾಣ ಮಾಡಿದರು. ॥29॥

ಮೂಲಮ್

(ಶ್ಲೋಕ-30)
ಜಗದುಃ ಪ್ರಕೃತಿಭ್ಯಸ್ತೇ ಮಹಾಪುರುಷಚೇಷ್ಟಿತಮ್ ।
ಯಥಾನ್ವಶಾಸದ್ಭಗವಾಂಸ್ತಥಾ ಚಕ್ರುರತಂದ್ರಿತಾಃ ॥

ಅನುವಾದ

ತಮ್ಮ ರಾಜಧಾನಿಗೆ ತೆರಳಿದ ಬಳಿಕ ಆ ರಾಜರೆಲ್ಲರೂ ಭಗವಾನ ಶ್ರೀಕೃಷ್ಣನು ತಮಗೆ ಮಾಡಿದ ಉಪಕಾರವನ್ನೂ, ಅವನ ಇತರ ಅದ್ಭುತವಾದ ಲೀಲಾಪ್ರಸಂಗಗಳನ್ನು ಪ್ರಜೆಗಳಲ್ಲಿ ಪ್ರಚುರಪಡಿಸಿದರು. ಮತ್ತೆ ಎಚ್ಚರಿಕೆಯಿಂದ ಭಗವಂತನ ಆಜ್ಞಾನುಸಾರವಾಗಿ ತಮ್ಮ ಜೀವನವನ್ನು ನಿರ್ವಹಿಸುತ್ತಿದ್ದರು. ॥30॥

ಮೂಲಮ್

(ಶ್ಲೋಕ-31)
ಜರಾಸಂಧಂ ಘಾತಯಿತ್ವಾ ಭೀಮಸೇನೇನ ಕೇಶವಃ ।
ಪಾರ್ಥಾಭ್ಯಾಂ ಸಂಯುತಃ ಪ್ರಾಯಾತ್ಸಹದೇವೇನ ಪೂಜಿತಃ ॥
(ಶ್ಲೋಕ-32)
ಗತ್ವಾ ತೇ ಖಾಂಡವಪ್ರಸ್ಥಂ ಶಂಖಾನ್ ದಧ್ಮುರ್ಜಿತಾರಯಃ ।
ಹರ್ಷಯಂತಃ ಸ್ವಸುಹೃದೋ ದುರ್ಹೃದಾಂ ಚಾಸುಖಾವಹಾಃ ॥

ಅನುವಾದ

ಪರೀಕ್ಷಿತನೇ! ಈ ಪ್ರಕಾರವಾಗಿ ಭಗವಾನ್ ಶ್ರೀಕೃಷ್ಣನು ಭೀಮಸೇನನಿಂದ ಜರಾಸಂಧನ ವಧೆಯನ್ನು ಮಾಡಿಸಿ, ಭೀಮಸೇನ ಮತ್ತು ಅರ್ಜುನರೊಂದಿಗೆ ಜರಾಸಂಧನ ಮಗನಾದ ಸಹದೇವನಿಂದ ಸತ್ಕೃತರಾಗಿ ಇಂದ್ರಪ್ರಸ್ಥಕ್ಕೆ ಪ್ರಯಾಣಮಾಡಿದರು. ವಿಜಯಿಗಳಾಗಿ ಬಂದಿರುವ ಕೃಷ್ಣಾರ್ಜುನ ಭೀಮಸೇನರು ಇಂದ್ರಪ್ರಸ್ಥದ ಸಮೀಪಕ್ಕೆ ಬಂದು ತಮ್ಮ-ತಮ್ಮ ಶಂಖಗಳನ್ನು ಊದಿದರು. ಇದರಿಂದ ಅವರ ಇಷ್ಟಮಿತ್ರರಿಗೆ ಬಹಳ ಸುಖವಾದರೆ ಶತ್ರುಗಳಿಗೆ ತುಂಬಾ ದುಃಖವಾಯಿತು. ॥31-32॥

ಮೂಲಮ್

(ಶ್ಲೋಕ-33)
ತಚ್ಛ್ರುತ್ವಾ ಪ್ರೀತಮನಸ ಇಂದ್ರಪ್ರಸ್ಥನಿವಾಸಿನಃ ।
ಮೇನಿರೇ ಮಾಗಧಂ ಶಾಂತಂ ರಾಜಾ ಚಾಪ್ತಮನೋರಥಃ ॥

ಅನುವಾದ

ಆ ಶಂಖಧ್ವನಿಯನ್ನು ಕೇಳಿ ಇಂದ್ರಪ್ರಸ್ಥದ ನಿವಾಸಿಗಳ ಮನಸ್ಸು ಪ್ರುಲ್ಲಿತವಾಯಿತು. ಜರಾಸಂಧನು ಮೃತನಾದನೆಂದೇ ಅವರು ತಿಳಿದುಕೊಂಡರು. ಇನ್ನು ಯುಧಿಷ್ಠಿರ ಮಹಾರಾಜರ ರಾಜಸೂಯಯಜ್ಞದ ಸಂಕಲ್ಪವು ಈಡೇರಿದಂತೆಯೇ ಸರಿ ಎಂದು ಆನಂದಿಸಿದರು. ॥33॥

ಮೂಲಮ್

(ಶ್ಲೋಕ-34)
ಅಭಿವಂದ್ಯಾಥ ರಾಜಾನಂ ಭೀಮಾರ್ಜುನಜನಾರ್ದನಾಃ ।
ಸರ್ವಮಾಶ್ರಾವಯಾಂಚಕ್ರುರಾತ್ಮನಾ ಯದನುಷ್ಠಿತಮ್ ॥

ಅನುವಾದ

ಭೀಮಾರ್ಜುನ ಸಮೇತ ಶ್ರೀಕೃಷ್ಣರು ಅರಮನೆಗೆ ಬಂದು ಯುಧಿಷ್ಠಿರನನ್ನು ವಂದಿಸಿ, ಜರಾಸಂಧನ ವಧೆಗಾಗಿ ತಾವು ಮಾಡಿದ ಎಲ್ಲ ಕಾರ್ಯಗಳನ್ನು ವಿವರಿಸಿ ಹೇಳಿದರು. ॥34॥

ಮೂಲಮ್

(ಶ್ಲೋಕ-35)
ನಿಶಮ್ಯ ಧರ್ಮರಾಜಸ್ತತ್ ಕೇಶವೇನಾನುಕಂಪಿತಮ್ ।
ಆನಂದಾಶ್ರುಕಲಾಂ ಮುಂಚನ್ಪ್ರೇಮ್ಣಾ ನೋವಾಚ ಕಿಂಚನ ॥

ಅನುವಾದ

ಭಗವಾನ್ ಶ್ರೀಕೃಷ್ಣನ ಪರಮಾನುಗ್ರಹದ ಮಾತನ್ನು ಕೇಳಿದ ಯುಧಿಷ್ಠಿರನು ಆನಂದಭರಿತನಾದನು. ಆನಂದಾಶ್ರುಗಳು ಕಣ್ಣುಗಳಿಂದ ಹರಿಯತೊಡಗಿದವು. ಇದರಿಂದ ಅವನಿಗೆ ಏನನ್ನೂ ಮಾತನಾಡಲಾಗಲಿಲ್ಲ. ॥35॥

ಅನುವಾದ (ಸಮಾಪ್ತಿಃ)

ಎಪ್ಪತ್ತಮೂರನೆಯ ಅಧ್ಯಾಯವು ಮುಗಿಯಿತು. ॥73॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ ಕೃಷ್ಣಾದ್ಯಾಗಮನಂ ನಾಮ ತ್ರಿಸಪ್ತತಿತಮೋಽಧ್ಯಾಯಃ ॥73॥