೭೨

[ಏಪ್ಪತ್ತೇರಡನೇಯ ಅಧ್ಯಾಯ]

ಭಾಗಸೂಚನಾ

ಪಾಂಡವರಿಂದ ರಾಜಸೂಯ ಯಜ್ಞದ ಉಪಕ್ರಮ ಮತ್ತು ಜರಾಸಂಧನ ಉದ್ಧಾರ

ಮೂಲಮ್

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏಕದಾ ತು ಸಭಾಮಧ್ಯೇ ಆಸ್ಥಿತೋ ಮುನಿಭಿರ್ವೃತಃ ।
ಬ್ರಾಹ್ಮಣೈಃ ಕ್ಷತ್ರಿಯೈರ್ವೈಶ್ಯೈರ್ಭ್ರಾತೃಭಿಶ್ಚ ಯುಧಿಷ್ಠಿರಃ ॥
(ಶ್ಲೋಕ-2)
ಆಚಾರ್ಯೈಃ ಕುಲವೃದ್ಧೈಶ್ಚ ಜ್ಞಾತಿಸಂಬಂಧಿ ಬಾಂಧವೈಃ ।
ಶೃಣ್ವತಾಮೇವ ಚೈ ತೇಷಾಮಾಭಾಷ್ಯೇದಮುವಾಚ ಹ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಒಂದುದಿನ ಯುಧಿಷ್ಠಿರ ಮಹಾರಾಜನು ಹಲವಾರು ಮುನಿಗಳಿಂದಲೂ ಬ್ರಾಹ್ಮಣರಿಂದಲೂ, ಕ್ಷತ್ರಿಯರಿಂದಲೂ, ವೈಶ್ಯರಿಂದಲೂ, ಭೀಮಸೇನನೇ ಮೊದಲಾದ ಸಹೋದರರಿಂದಲೂ, ಆಚಾರ್ಯರಿಂದಲೂ, ಕುರುಕುಲದ ಹಿರಿಯರಿಂದಲೂ, ಬಂಧು ಬಾಂಧವರಿಂದಲೂ ಕೂಡಿಕೊಂಡು ರಾಜಸಭೆಯಲ್ಲಿ ಕುಳಿತಿದ್ದನು. ಆಗ ಭಗವಾನ್ ಶ್ರೀಕೃಷ್ಣನನ್ನು ಸಂಬೋಧಿಸುತ್ತಾ ಎಲ್ಲರೆದುರಿಗೆ ಇಂತೆಂದನು - ॥1-2॥

ಮೂಲಮ್

(ಶ್ಲೋಕ-3)

ಮೂಲಮ್ (ವಾಚನಮ್)

ಯುಧಿಷ್ಠಿರ ಉವಾಚ

ಮೂಲಮ್

ಕ್ರತುರಾಜೇನ ಗೋವಿಂದ ರಾಜಸೂಯೇನ ಪಾವನೀಃ ।
ಯಕ್ಷ್ಯೇ ವಿಭೂತೀರ್ಭವತಸ್ತತ್ಸಂಪಾದಯ ನಃ ಪ್ರಭೋ ॥

ಅನುವಾದ

ಧರ್ಮರಾಜ ಯುಧಿಷ್ಠಿರನು ಹೇಳಿದನು — ಗೋವಿಂದ! ಸರ್ವಶ್ರೇಷ್ಠ ರಾಜಸೂಯಯಾಗದ ಮೂಲಕ ನಿನ್ನನ್ನು ಮತ್ತು ನಿನ್ನ ಪರಮಪಾವನ ವಿಭೂತಿಸ್ವರೂಪರಾದ ದೇವತೆಗಳನ್ನು ಪೂಜಿಸಲು ನಾನು ಬಯಸಿದ್ದೇನೆ. ಪ್ರಭೋ! ಕೃಪೆಮಾಡಿ ನನ್ನ ಈ ಸಂಕಲ್ಪವನ್ನು ನಡೆಸಿಕೊಡಬೇಕು. ॥3॥

ಮೂಲಮ್

(ಶ್ಲೋಕ-4)
ತ್ವತ್ಪಾದುಕೇ ಅವಿರತಂ ಪರಿ ಯೇ ಚರಂತಿ
ಧ್ಯಾಯಂತ್ಯಭದ್ರನಶನೇ ಶುಚಯೋ ಗೃಣಂತಿ ।
ವಿಂದಂತಿ ತೇ ಕಮಲನಾಭ ಭವಾಪವರ್ಗ-
ಮಾಶಾ ಸತೇ ಯದಿ ತ ಆಶಿಷ ಈಶ ನಾನ್ಯೇ ॥

ಅನುವಾದ

ಪದ್ಮನಾಭನೇ! ನಿನ್ನ ಚರಣಕಮಲಗಳ ಪಾದುಕೆಗಳು ಸಮಸ್ತ ಅಮಂಗಳಗಳನ್ನು ನಾಶಮಾಡುವಂತಹುಗಳು. ನಿರಂತರವಾಗಿ ಅವನ್ನು ಸೇವಿಸುವವರು, ಧ್ಯಾನಿಸುತ್ತಾ ಸ್ತುತಿಸುವವರೇ ನಿಜವಾದ ಪವಿತ್ರಾತ್ಮರು. ಅವರು ಜನ್ಮ-ಮೃತ್ಯುವಿನ ಚಕ್ರದಿಂದ ಬಿಡುಗಡೆ ಹೊಂದುವರು. ಅವರು ಒಂದು ವೇಳೆ ಸಾಂಸಾರಿಕ ವಿಷಯಗಳನ್ನು ಆಶಿಸಿದರೂ ಅವರಿಗೆ ಅವು ದೊರೆಯುತ್ತವೆ. ಆದರೆ ನಿನ್ನ ಚರಣಕಮಲಗಳಲ್ಲಿ ಶರಣಾಗದವರಿಗೆ ಮುಕ್ತಿಯು ಸಿಗುವುದಿಲ್ಲ, ಸಾಂಸಾರಿಕ ಭೋಗಗಳೂ ಸಿಗುವುದಿಲ್ಲ. ॥4॥

ಮೂಲಮ್

(ಶ್ಲೋಕ-5)
ತದ್ದೇವದೇವ ಭವತಶ್ಚರಣಾರವಿಂದ-
ಸೇವಾನುಭಾವಮಿಹ ಪಶ್ಯತು ಲೋಕ ಏಷಃ ।
ಯೇ ತ್ವಾಂ ಭಜಂತಿ ನ ಭಜಂತ್ಯುತ ವೋಭಯೇಷಾಂ
ನಿಷ್ಠಾಂ ಪ್ರದರ್ಶಯ ವಿಭೋ ಕುರುಸೃಂಜಯಾನಾಮ್ ॥

ಅನುವಾದ

ದೇವತೆಗಳಿಗೂ ಆರಾಧ್ಯನಾದ ಶ್ರೀಕೃಷ್ಣನೇ! ಸಂಸಾರಿ ಜನರು ನಿನ್ನ ಚರಣಕಮಲಗಳ ಸೇವೆಯ ಮಹಿಮೆಯನ್ನು ಕಾಣಲೆಂದೇ ನಾನು ಬಯಸುತ್ತೇನೆ. ಪ್ರಭೋ! ಕುರುವಂಶೀಯ ರಾಜರಲ್ಲಿ ಮತ್ತು ಸೃಂಜಯವಂಶೀಯ ರಾಜರಲ್ಲಿ ನಿನ್ನನ್ನು ಭಜಿಸುವವರ ಮತ್ತು ಭಜಿಸದವರ ವ್ಯತ್ಯಾಸವನ್ನು ಜನತೆಗೆ ನೀನು ತೋರಿಸಿಕೊಡು. ॥5॥

ಮೂಲಮ್

(ಶ್ಲೋಕ-6)
ನ ಬ್ರಹ್ಮಣಃ ಸ್ವಪರಭೇದಮತಿಸ್ತವ ಸ್ಯಾತ್
ಸರ್ವಾತ್ಮನಃ ಸಮದೃಶಃ ಸ್ವಸುಖಾನುಭೂತೇಃ ।
ಸಂಸೇವತಾಂ ಸುರತರೋರಿವ ತೇ ಪ್ರಸಾದಃ
ಸೇವಾನುರೂಪಮುದಯೋ ನ ವಿಪರ್ಯಯೋತ್ರ ॥

ಅನುವಾದ

ಪ್ರಭುವೇ! ನೀನು ಎಲ್ಲರ ಆತ್ಮನೂ, ಸಮದರ್ಶಿಯೂ, ಆತ್ಮಾನಂದದ ಸಾಕ್ಷಾತ್ಕಾರನೂ, ಪರಬ್ರಹ್ಮನೂ ಆಗಿರುವೆ. ‘ಇದು ನನ್ನದು, ಇದು ಪರರದ್ದು; ಇವನು ನನ್ನವನು ಇವನು ಪರಕೀಯನು’ ಎಂಬ ಭೇದ ಭಾವವು ನಿನ್ನಲ್ಲಿಲ್ಲ. ಹೀಗಿದ್ದರೂ ಕಲ್ಪವೃಕ್ಷವನ್ನು ಸೇವಿಸುವವರಿಗೆ ತಮ್ಮ ಭಾವನೆಗೆ ಅನುಸಾರವಾಗಿ ಸಕಲ ವಸ್ತುಗಳು, ಫಲಗಳು ಸಿಗವಂತೆ ದೊರೆಯುತ್ತವೆ. ಆ ಫಲದಲ್ಲಿ ಇರುವ ನ್ಯೂನಾಧಿಕ್ಯವು ಅವರವರ ಸೇವೆಗೆ ಅನುರೂಪವಾಗಿಯೇ ಇರುವುದು. ಇದರಿಂದ ನಿನ್ನಲ್ಲಿ ವಿಷಮತೆ, ನಿರ್ದಯತೆ ಮುಂತಾದ ದೋಷಗಳು ಉಂಟಾಗುವುದಿಲ್ಲ. ॥6॥

ಮೂಲಮ್

(ಶ್ಲೋಕ-7)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಸಮ್ಯಗ್ವ್ಯವಸಿತಂ ರಾಜನ್ ಭವತಾ ಶತ್ರುಕರ್ಶನ ।
ಕಲ್ಯಾಣೀ ಯೇನ ತೇ ಕೀರ್ತಿರ್ಲೋಕಾನನುಭವಿಷ್ಯತಿ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ಶತ್ರುವಿಜಯಿಯಾದ ಯುಧಿಷ್ಠಿರನೇ! ರಾಜಸೂಯಜ್ಞಮಾಡುವ ನಿನ್ನ ನಿರ್ಧಾರವು ಶ್ಲಾಘ್ಯವಾಗಿದೆ. ಇದರಿಂದ ನಿನ್ನ ಮಂಗಳಮಯ ಕೀರ್ತಿಯು ಎಲ್ಲ ಲೋಕಗಳಲ್ಲಿಯೂ ಹರಡುವುದು. ॥7॥

ಮೂಲಮ್

(ಶ್ಲೋಕ-8)
ಋಷೀಣಾಂ ಪಿತೃದೇವಾನಾಂ ಸುಹೃದಾಮಪಿ ನಃ ಪ್ರಭೋ ।
ಸರ್ವೇಷಾಮಪಿ ಭೂತಾನಾಮೀಪ್ಸಿತಃ ಕ್ರತುರಾಡಯಮ್ ॥

ಅನುವಾದ

ರಾಜನೇ! ನಿನ್ನ ಈ ಮಹಾಯಜ್ಞವು ಋಷಿಗಳಿಗೂ, ಪಿತೃಗಳಿಗೂ, ದೇವತೆಗಳಿಗೂ, ಸುಹೃದರಿಗೂ ನಮಗೂ ಮತ್ತು ಸಮಸ್ತ ಪ್ರಾಣಿಗಳಿಗೂ ಅಭೀಷ್ಟವೇ ಆಗಿದೆ. ॥8॥

ಮೂಲಮ್

(ಶ್ಲೋಕ-9)
ವಿಜಿತ್ಯ ನೃಪತೀನ್ಸರ್ವಾನ್ಕೃತ್ವಾ ಚ ಜಗತೀಂ ವಶೇ ।
ಸಂಭೃತ್ಯ ಸರ್ವಸಂಭಾರಾನಾಹರಸ್ವ ಮಹಾಕ್ರತುಮ್ ॥

ಅನುವಾದ

ಮಹಾರಾಜ! ಭೂಮಿಯ ಸಮಸ್ತ ರಾಜರನ್ನು ಗೆದ್ದುಕೊಂಡು, ಇಡೀ ಪೃಥಿವಿಯನ್ನು ವಶಪಡಿಸಿಕೊಂಡು, ಯಜ್ಞೋಚಿತವಾದ ಸಮಸ್ತ ಸಾಮಗ್ರಿಗಳನ್ನು ಒಟ್ಟುಗೂಡಿಸಿಕೊಂಡು ಮತ್ತೆ ಈ ಮಹಾ ಯಜ್ಞಾನುಷ್ಠಾನವನ್ನು ಮಾಡು. ॥9॥

ಮೂಲಮ್

(ಶ್ಲೋಕ-10)
ಏತೇ ತೇ ಭ್ರಾತರೋ ರಾಜನ್ ಲೋಕಪಾಲಾಂಶಸಂಭವಾಃ ।
ಜಿತೋಸ್ಮ್ಯಾತ್ಮವತಾ ತೇಹಂ ದುರ್ಜಯೋ ಯೋಕೃತಾತ್ಮಭಿಃ ॥

ಅನುವಾದ

ಧರ್ಮರಾಯನೇ! ನಿನ್ನ ನಾಲ್ಕು ತಮ್ಮಂದಿರು ವಾಯು, ಇಂದ್ರರೇ ಮೊದಲಾದ ಲೋಕಪಾಲರ ಅಂಶದಿಂದ ಹುಟ್ಟಿದವರು. ಅವರೆಲ್ಲರೂ ಮಹಾವೀರರಾಗಿದ್ದಾರೆ. ನೀನಾದರೋ ಮಹಾಮನಸ್ವಿಯೂ, ಸಂಯಮಿಯೂ ಆಗಿರುವೆ. ನೀವೆಲ್ಲರೂ ನಿಮ್ಮ ಸದ್ಗುಣಗಳಿಂದ ನನ್ನನ್ನು ವಶಪಡಿಸಿಕೊಂಡಿರುವಿರಿ. ಇಂದ್ರಿಯಗಳನ್ನೂ ಮನವನ್ನು ಸಂಯಮಿಸಿಕೊಳ್ಳದವರು ನನ್ನನ್ನು ವಶಪಡಿಸಿಕೊಳ್ಳಲಾರರು. ॥10॥

ಮೂಲಮ್

(ಶ್ಲೋಕ-11)
ನ ಕಶ್ಚಿನ್ಮತ್ಪರಂ ಲೋಕೇ ತೇಜಸಾ ಯಶಸಾ ಶ್ರಿಯಾ ।
ವಿಭೂತಿಭಿರ್ವಾಭಿಭವೇದ್ದೇವೋಪಿ ಕಿಮು ಪಾರ್ಥಿವಃ ॥

ಅನುವಾದ

ಪ್ರಪಂಚದಲ್ಲಿ ದೊಡ್ಡ-ದೊಡ್ಡ ದೇವತೆಗಳೂ ಕೂಡ ತೇಜ, ಯಶಸ್ಸು, ಲಕ್ಷ್ಮೀ, ಸೌಂದರ್ಯ, ಐಶ್ವರ್ಯ ಮುಂತಾದವುಗಳ ಮೂಲಕ ನನ್ನ ಭಕ್ತರನ್ನು ತಿರಸ್ಕರಿಸಲಾರರು. ಹಾಗಿರುವಾಗ ಯಾರೇ ರಾಜನು ಅವನ ತಿರಸ್ಕಾರವನ್ನು ಮಾಡಲು ಸಂಭವವೇ ಇಲ್ಲ. ॥11॥

ಮೂಲಮ್

(ಶ್ಲೋಕ-12)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ನಿಶಮ್ಯ ಭಗವದ್ಗೀತಂ ಪ್ರೀತಃ ುಲ್ಲಮುಖಾಂಬುಜಃ ।
ಭ್ರಾತೃನ್ದಿಗ್ವಿಜಯೇಯುಂಕ್ತ ವಿಷ್ಣುತೇಜೋಪಬೃಂಹಿತಾನ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಂತನ ಮಾತನ್ನು ಕೇಳಿ ಮಹಾರಾಜ ಯುಧಿಷ್ಠಿರನ ಹೃದಯ ಆನಂದತುಂದಿಲವಾಯಿತು. ಅವನ ಮುಖವು ಪ್ರುಲ್ಲಿತವಾಯಿತು. ಆಗ ಅವನು ತನ್ನ ತಮ್ಮಂದಿರನ್ನು ದಿಗ್ವಿಜಯಕ್ಕಾಗಿ ಕಳಿಸಿದನು. ಭಗವಾನ್ ಶ್ರೀಕೃಷ್ಣನು ಪಾಂಡವರಲ್ಲಿ ತನ್ನ ಶಕ್ತಿಯನ್ನು ತುಂಬಿ ಅತ್ಯಂತ ಪ್ರಭಾವಿಯನ್ನಾಗಿಸಿದನು. ॥12॥

ಮೂಲಮ್

(ಶ್ಲೋಕ-13)
ಸಹದೇವಂ ದಕ್ಷಿಣಸ್ಯಾಮಾದಿಶತ್ಸಹ ಸೃಂಜಯೈಃ ।
ದಿಶಿ ಪ್ರತೀಚ್ಯಾಂ ನಕುಲಮುದೀಚ್ಯಾಂ ಸವ್ಯಸಾಚಿನಮ್ ।
ಪ್ರಾಚ್ಯಾಂ ವೃಕೋದರಂ ಮತ್ಸ್ಯೈಃ ಕೇಕಯೈಃ ಸಹ ಮದ್ರಕೈಃ ॥

ಅನುವಾದ

ಧರ್ಮರಾಜ ಯುಧಿಷ್ಠಿರನು ಸೃಂಜಯವಂಶದ ವೀರರೊಂದಿಗೆ ಸಹದೇವನನ್ನು ದಕ್ಷಿಣ ದಿಕ್ಕಿಗೆ ದಿಗ್ವಿಜಯಕ್ಕಾಗಿ ಕಳಿಸಿದನು. ಮತ್ಸ್ಯದೇಶದವೀರರೊಂದಿಗೆ ನಕುಲನನ್ನು ಪಶ್ಚಿಮಕ್ಕೂ, ಕೇಕಯ ದೇಶದ ವೀರರೊಂದಿಗೆ ಅರ್ಜುನನ್ನು ಉತ್ತರಕ್ಕೂ, ಮದ್ರದೇಶದ ವೀರರೊಂದಿಗೆ ಭೀಮಸೇನನನ್ನು ದಿಗ್ವಿಜಯಕ್ಕಾಗಿ ಪೂರ್ವ ದಿಕ್ಕಿಗೂ ಕಳಿಸಿಕೊಟ್ಟನು. ॥13॥

ಮೂಲಮ್

(ಶ್ಲೋಕ-14)
ತೇ ವಿಜಿತ್ಯ ನೃಪಾನ್ವೀರಾ ಆಜಹ್ರುರ್ದಿಗ್ಭ್ಯ ಓಜಸಾ ।
ಅಜಾತಶತ್ರವೇ ಭೂರಿ ದ್ರವಿಣಂ ನೃಪ ಯಕ್ಷ್ಯತೇ ॥

ಅನುವಾದ

ಪರೀಕ್ಷಿತನೇ! ಭೀಮಸೇನನೇ ಮೊದಲಾದ ಆ ವೀರರು ತಮ್ಮ ಬಲ-ಪೌರುಷದಿಂದ ಎಲ್ಲ ದಿಕ್ಕಿನ ರಾಜರನ್ನು ಗೆದ್ದುಕೊಂಡು, ಯಜ್ಞ ಮಾಡಲು ಉದ್ಯುಕ್ತನಾದ ಯುಧಿಷ್ಠಿರನಿಗೆ ಅತುಲವಾದ ಧನವನ್ನು ತಂದು ಒಪ್ಪಿಸಿದರು. ॥14॥

ಮೂಲಮ್

(ಶ್ಲೋಕ-15)
ಶ್ರುತ್ವಾಜಿತಂ ಜರಾಸಂಧಂ ನೃಪತೇರ್ಧ್ಯಾಯತೋ ಹರಿಃ ।
ಆಹೋಪಾಯಂ ತಮೇವಾದ್ಯ ಉದ್ಧವೋ ಯಮುವಾಚ ಹ ॥

ಅನುವಾದ

ಇನ್ನೂ ಜರಾಸಂಧನನ್ನು ಗೆದ್ದುಕೊಂಡಿಲ್ಲ ಎಂಬುದನ್ನು ಕೇಳಿದ ಯುಧಿಷ್ಠಿರನು ಚಿಂತಾತುರನಾದನು. ಆ ಸಮಯದಲ್ಲಿ ಭಗವಾನ್ ಶ್ರೀಕೃಷ್ಣನು ಹಿಂದೆ ಉದ್ಧವನು ಹೇಳಿದ ಉಪಾಯವನ್ನು ಧರ್ಮರಾಯನಿಗೆ ತಿಳಿಸಿದನು. ॥15॥

ಮೂಲಮ್

(ಶ್ಲೋಕ-16)
ಭೀಮಸೇನೋರ್ಜುನಃ ಕೃಷ್ಣೋ ಬ್ರಹ್ಮಲಿಂಗಧರಾಸಯಃ ।
ಜಗ್ಮುರ್ಗಿರಿವ್ರಜಂ ತಾತ ಬೃಹದ್ರಥಸುತೋ ಯತಃ ॥

ಅನುವಾದ

ಪರೀಕ್ಷಿತನೇ! ಅನಂತರ ಭೀಮಸೇನ, ಅರ್ಜುನ ಮತ್ತು ಭಗವಾನ್ ಶ್ರೀಕೃಷ್ಣ ಹೀಗೆ ಮೂವರೂ ಬ್ರಾಹ್ಮಣರ ವೇಷವನ್ನು ಧರಿಸಿ ಜರಾಸಂಧನ ರಾಜಧಾನಿಯಾದ ಗಿರಿವ್ರಜಕ್ಕೆ ಹೋದರು. ॥16॥

ಮೂಲಮ್

(ಶ್ಲೋಕ-17)
ತೇ ಗತ್ವಾತಿಥ್ಯವೇಲಾಯಾಂ ಗೃಹೇಷು ಗೃಹಮೇಧಿನಮ್ ।
ಬ್ರಹ್ಮಣ್ಯಂ ಸಮಯಾಚೇರನ್ರಾಜನ್ಯಾ ಬ್ರಹ್ಮಲಿಂಗಿನಃ ॥

ಅನುವಾದ

ಜರಾಸಂಧನು ಬ್ರಾಹ್ಮಣರ ಭಕ್ತನಾಗಿದ್ದು, ಗೃಹಸ್ಥೋಚಿತವಾದ ಧರ್ಮಗಳನ್ನು ಪಾಲಿಸುವವನಾಗಿದ್ದನು. ಶ್ರೀಕೃಷ್ಣನೇ ಮೊದಲಾದ ಕ್ಷತ್ರಿಯವೀರರು ಬ್ರಾಹ್ಮಣರ ವೇಷಗಳನ್ನು ಧರಿಸಿ ಅತಿಥಿ-ಅಭ್ಯಾಗತರ ಸತ್ಕಾರ ಸಮಯದಲ್ಲಿ ಜರಾಸಂಧನ ಬಳಿಗೆ ಹೋಗಿ ಅವನಲ್ಲಿ ಹೀಗೆ ಯಾಚಿಸಿದರು. ॥17॥

ಮೂಲಮ್

(ಶ್ಲೋಕ-18)
ರಾಜನ್ವಿದ್ಧ್ಯತಿಥೀನ್ ಪ್ರಾಪ್ತಾನರ್ಥಿನೋ ದೂರಮಾಗತಾನ್ ।
ತನ್ನಃ ಪ್ರಯಚ್ಛ ಭದ್ರಂ ತೇ ಯದ್ವಯಂ ಕಾಮಯಾಮಹೇ ॥

ಅನುವಾದ

ಮಹಾರಾಜ! ನಿನಗೆ ಮಂಗಳವಾಗಲಿ. ನಾವು ಮೂವರೂ ನಿಮ್ಮ ಅತಿಥಿಗಳಾಗಿದ್ದು, ಬಹಳ ದೂರದಿಂದ ಬಂದಿದ್ದೇವೆ. ನಿಶ್ಚಯವಾಗಿಯೂ ನಾವು ನಿನ್ನಿಂದ ಒಂದು ವಿಶೇಷ ಪ್ರಯೋಜನವನ್ನು ಪಡೆಯಲು ಇಲ್ಲಿಗೆ ಬಂದಿರುವೆವು. ಆದುದರಿಂದ ನಾವು ನಿನ್ನಿಂದ ಅಪೇಕ್ಷಿಸುವುದನ್ನು ನೀನು ಅವಶ್ಯಕವಾಗಿ ಕೊಡಬೇಕು. ॥18॥

ಮೂಲಮ್

(ಶ್ಲೋಕ-19)
ಕಿಂ ದುರ್ಮರ್ಷಂ ತಿತಿಕ್ಷೂಣಾಂ ಕಿಮಕಾರ್ಯಮಸಾಧುಭಿಃ ।
ಕಿಂ ನ ದೇಯಂ ವದಾನ್ಯಾನಾಂ ಕಃ ಪರಃ ಸಮದರ್ಶಿನಾಮ್ ॥

ಅನುವಾದ

ಲೋಕದಲ್ಲಿ ತಿತಿಕ್ಷುಗಳಿಗೆ ಸೈರಿಸಲಾಗದಿರುವುದು ಯಾವುದಿದೆ? ದುಷ್ಟರು ಮಾಡದಿರುವ ಅಕಾರ್ಯ ಯಾವುದಿದೆ? ಉದಾರಿಗಳಿಗೆ ಕೊಡದಿರುವ ವಸ್ತುವು ಯಾವುದಿದೆ? ಸಮದರ್ಶಿಗಳಿಗೆ ಪರರೆಂಬುವರು ಯಾರಿದ್ದಾರೆ? ॥19॥

ಮೂಲಮ್

(ಶ್ಲೋಕ-20)
ಯೋನಿತ್ಯೇನ ಶರೀರೇಣ ಸತಾಂ ಗೇಯಂ ಯಶೋ ಧ್ರುವಮ್ ।
ನಾಚಿನೋತಿ ಸ್ವಯಂ ಕಲ್ಪಃ ಸ ವಾಚ್ಯಃ ಶೋಚ್ಯ ಏವ ಸಃ ॥

ಅನುವಾದ

ಯಾವ ಮನುಷ್ಯನು ತಾನು ಸಮರ್ಥನಾಗಿದ್ದರೂ ಅನಿತ್ಯವಾದ ಈ ಶರೀರದಿಂದ ಸತ್ಪುರುಷರು ಹೊಗಳುವಂತಹ ಅವಿನಾಶಿಯಾದ, ಶಾಶ್ವತವಾದ ಯಶಸ್ಸನ್ನು ಸಂಪಾದಿಸುವುದಿಲ್ಲವೋ ಅವನನ್ನು ಎಷ್ಟು ನಿಂದಿಸಿದರೂ ಕಡಿಮೆಯೇ. ಅವನ ಜೀವನವು ಅತ್ಯಂತ ಶೋಚನೀಯವಾಗಿದೆ. ॥20॥

ಮೂಲಮ್

(ಶ್ಲೋಕ-21)
ಹರಿಶ್ಚಂದ್ರೋ ರಂತಿದೇವ ಉಂಛವೃತ್ತಿಃ ಶಿಬಿರ್ಬಲಿಃ ।
ವ್ಯಾಧಃ ಕಪೋತೋ ಬಹವೋ ಹ್ಯಧ್ರುವೇಣ ಧ್ರುವಂ ಗತಾಃ ॥

ಅನುವಾದ

ಜರಾಸಂಧನೇ! ನಿನಗೆ ತಿಳಿದಿರುವಂತೆ ಹರಿಶ್ಚಂದ್ರ, ರಂತಿದೇವ, ಉಂಛವೃತ್ತಿಯಿಂದ ಜೀವಿಸುತ್ತಿದ್ದ ಮುದ್ಗಲ, ಶಿಬಿ, ಬಲಿ, ವ್ಯಾಧ ಮತ್ತು ಕೋತ ಮುಂತಾದ ಬಹಳಷ್ಟು ಜನರು ಅತಿಥಿಗಳಿಗೆ ತಮ್ಮ ಸರ್ವಸ್ವವನ್ನು ಕೊಟ್ಟು ಈ ನಾಶಯುಕ್ತವಾದ ಶರೀರದ ಮೂಲಕ ಅವಿನಾಶೀ ಪದವನ್ನು ಪಡೆದುಕೊಂಡಿರುವರು. ಅದಕ್ಕಾಗಿ ನೀನೂ ನಮ್ಮನ್ನು ನಿರಾಶೆಗೊಳಿಸಬೇಡ. ॥21॥

ಮೂಲಮ್

(ಶ್ಲೋಕ-22)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಸ್ವರೈರಾಕೃತಿಭಿಸ್ತಾಂಸ್ತು ಪ್ರಕೋಷ್ಠೈರ್ಜ್ಯಾಹತೈರಪಿ ।
ರಾಜನ್ಯಬಂಧೂನ್ ವಿಜ್ಞಾಯ ದೃಷ್ಟಪೂರ್ವಾನಚಿಂತಯತ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಜರಾಸಂಧನು ಅವರ ಮಾತಿನ ಧ್ವನಿಯನ್ನೂ, ದೇಹದ ಆಕೃತಿಯನ್ನೂ, ಬಿಲ್ಲಿನ ಹೆದೆಯನ್ನು ಬಾರಿ-ಬಾರಿಗೂ ಸೆಳೆದು ಜಡ್ಡು ಕಟ್ಟಿರುವ ಅಂಗೈಯನ್ನು ನೋಡಿ ಇವರು ಬ್ರಾಹ್ಮಣರಾಗಿರದೆ ಕ್ಷತ್ರಿಯರೇ ಆಗಿದ್ದಾರೆಂದೂ ನಿಶ್ಚಯಿಸಿಕೊಂಡನು. ಅವನು ಇವರನ್ನು ಎಲ್ಲಿಯೋ ನೋಡಿರುವುದಾಗಿ ಅಂದುಕೊಂಡನು.॥22॥

ಮೂಲಮ್

(ಶ್ಲೋಕ-23)
ರಾಜನ್ಯಬಂಧವೋ ಹ್ಯೇತೇ ಬ್ರಹ್ಮಲಿಂಗಾನಿ ಬಿಭ್ರತಿ ।
ದದಾಮಿ ಭಿಕ್ಷಿತಂ ತೇಭ್ಯ ಆತ್ಮಾನಮಪಿ ದುಸ್ತ್ಯಜಮ್ ॥

ಅನುವಾದ

ಇವರು ಕ್ಷತ್ರಿಯರೇ ಆಗಿದ್ದರೂ ನನ್ನ ಭಯದಿಂದ ಬ್ರಾಹ್ಮಣ ವೇಷವನ್ನು ಧರಿಸಿ ಬಂದಿರುವರು. ಆದ್ದರಿಂದ ಇವರು ಏನನ್ನು ಯಾಚಿಸಿದರೂ ನಾನು ಕೊಟ್ಟುಬಿಡುತ್ತೇನೆ. ಅತ್ಯಂತ ಪ್ರಿಯವಾದ ಮತ್ತು ತ್ಯಜಿಸಲು ದುಸ್ತರವಾದ ಈ ಶರೀರವನ್ನೇ ಕೇಳಿದರೂ ಕೊಟ್ಟುಬಿಡುವೆನು ಎಂದು ಮನಸ್ಸಿನಲ್ಲೇ ಯೋಚಿಸಿದನು. ॥23॥

ಮೂಲಮ್

(ಶ್ಲೋಕ-24)
ಬಲೇರ್ನು ಶ್ರೂಯತೇ ಕೀರ್ತಿರ್ವಿತತಾ ದಿಕ್ಷ್ವಕಲ್ಮಷಾ ।
ಐಶ್ವರ್ಯಾದ್ಭ್ರಂಶಿತಸ್ಯಾಪಿ ವಿಪ್ರವ್ಯಾಜೇನ ವಿಷ್ಣುನಾ ॥

ಅನುವಾದ

ಭಗವಂತನಾದ ವಿಷ್ಣುವು ಬ್ರಾಹ್ಮಣನ ವೇಷವನ್ನು ಧರಿಸಿ ಬಲಿಚಕ್ರವರ್ತಿಯ ರಾಜ್ಯೈಶ್ವರ್ಯಗಳೆಲ್ಲವನ್ನೂ ಅಪಹರಿಸಿಬಿಟ್ಟಿದ್ದನು. ಆದರೆ ಬಲಿಯ ಧವಳ ಕೀರ್ತಿಯು ಈಗಲೂ ಎಲ್ಲ ಕಡೆಗಳಲ್ಲಿಯೂ ಹರಡಿಕೊಂಡಿದೆ. ಇಂದು ಕೂಡ ಜನರು ಆದರದಿಂದ ಅದನ್ನು ಕೊಂಡಾಡುತ್ತಾ ಇದ್ದಾರಲ್ಲ! ॥24॥

ಮೂಲಮ್

(ಶ್ಲೋಕ-25)
ಶ್ರಿಯಂ ಜಿಹೀರ್ಷತೇಂದ್ರಸ್ಯ ವಿಷ್ಣವೇ ದ್ವಿಜರೂಪಿಣೇ ।
ಜಾನನ್ನಪಿ ಮಹೀಂ ಪ್ರಾದಾದ್ವಾರ್ಯಮಾಣೋಪಿ ದೈತ್ಯರಾಟ್ ॥

ಅನುವಾದ

ಭಗವಾನ್ ವಿಷ್ಣುವು ದೇವೇಂದ್ರನ ರಾಜ್ಯಲಕ್ಷ್ಮಿಯನ್ನು ಬಲಿಯಿಂದ ಕಸಿದುಕೊಂಡು ಅವನಿಗೆ ಕೊಡಲೆಂದೇ ಬ್ರಾಹ್ಮಣ ವೇಷವನ್ನು ಧರಿಸಿದ್ದ ನೆಂಬುದರಲ್ಲಿ ಸಂದೇಹವಿಲ್ಲ. ದೈತ್ಯರಾಜ ಬಲಿಗೂ ಇದು ತಿಳಿದಿತ್ತು. ಗುರುಗಳಾದ ಶುಕ್ರಾಚಾರ್ಯರೂ ಅವನನ್ನು ತಡೆದಿದ್ದರೂ ಅವನು ಭೂದಾನವನ್ನು ಮಾಡಿಯೇ ಬಿಟ್ಟನು. ॥25॥

ಮೂಲಮ್

(ಶ್ಲೋಕ-26)
ಜೀವತಾ ಬ್ರಾಹ್ಮಣಾರ್ಥಾಯ ಕೋ ನ್ವರ್ಥಃ ಕ್ಷತ್ರಬಂಧುನಾ ।
ದೇಹೇನ ಪತಮಾನೇನ ನೇಹತಾ ವಿಪುಲಂ ಯಶಃ ॥

ಅನುವಾದ

ಈ ಶರೀರವು ನಾಶವುಳ್ಳದ್ದು. ಈ ಶರೀರದಿಂದ ಯಾರು ವಿಪುಲವಾದ ಯಶಸ್ಸನ್ನುಗಳಿಸುವುದಿಲ್ಲವೋ ಮತ್ತು ಯಾವ ಕ್ಷತ್ರಿಯನು ಬ್ರಾಹ್ಮಣರಿಗಾಗಿಯೇ ಜೀವಿಸುವುದಿಲ್ಲವೋ ಅವನು ಬದುಕಿರುವುದು ವ್ಯರ್ಥವಾದುದೆಂದೇ ನನ್ನ ನಿಶ್ಚಯವು. ॥26॥

ಮೂಲಮ್

(ಶ್ಲೋಕ-27)
ಇತ್ಯುದಾರಮತಿಃ ಪ್ರಾಹ ಕೃಷ್ಣಾರ್ಜುನವೃಕೋದರಾನ್ ।
ಹೇ ವಿಪ್ರಾ ವ್ರಿಯತಾಂ ಕಾಮೋ ದದಾಮ್ಯಾತ್ಮಶಿರೋಪಿ ವಃ ॥

ಅನುವಾದ

ಪರೀಕ್ಷಿತನೇ! ನಿಜವಾಗಿಯೂ ಜರಾಸಂಧನ ಬುದ್ಧಿಯು ಉದಾರವಾಗಿತ್ತು. ಮೇಲಿನಂತೆ ವಿಚಾರಮಾಡಿ ಅವನು ಬ್ರಾಹ್ಮಣ ವೇಷಧಾರಿ ಶ್ರೀಕೃಷ್ಣ, ಅರ್ಜುನ ಮತ್ತು ಭೀಮಸೇನರಲ್ಲಿ ಹೇಳಿದನು - ಎಲೈ ಬ್ರಾಹ್ಮಣರೇ! ನಿಮಗೆ ಬೇಕಾದ್ದನ್ನು ಕೇಳಿರಿ. ನನ್ನ ತಲೆಯನ್ನೇ ಬಯಸಿದರೂ ನಿಮಗೆ ಕೊಟ್ಟು ಬಿಡುತ್ತೇನೆ. ॥27॥

ಮೂಲಮ್

(ಶ್ಲೋಕ-28)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಯುದ್ಧಂ ನೋ ದೇಹಿ ರಾಜೇಂದ್ರ ದ್ವಂದ್ವಶೋ ಯದಿ ಮನ್ಯಸೇ ।
ಯುದ್ಧಾರ್ಥಿನೋ ವಯಂ ಪ್ರಾಪ್ತಾ ರಾಜನ್ಯಾ ನಾನ್ನಕಾಂಕ್ಷಿಣಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ರಾಜೇಂದ್ರನೇ! ನಾವು ಅನ್ನಾಪೇಕ್ಷಿಗಳಾದ ಬ್ರಾಹ್ಮಣರಲ್ಲ. ನಾವು ನಿನ್ನೊಡನೆ ಯುದ್ಧವನ್ನು ಅಪೇಕ್ಷಿಸಿ ಬಂದಿರುವ ಕ್ಷತ್ರಿಯರು. ನಿನಗೆ ಉಚಿತವೆನಿಸಿದರೆ ದ್ವಂದ್ವ ಯುದ್ಧದ ಭಿಕ್ಷೆಯನ್ನು ಕೊಡು. ॥28॥

ಮೂಲಮ್

(ಶ್ಲೋಕ-29)
ಅಸೌ ವೃಕೋದರಃ ಪಾರ್ಥಸ್ತಸ್ಯ ಭ್ರಾತಾರ್ಜುನೋ ಹ್ಯಯಮ್ ।
ಅನಯೋರ್ಮಾತುಲೇಯಂ ಮಾಂ ಕೃಷ್ಣಂ ಜಾನೀಹಿ ತೇ ರಿಪುಮ್ ॥

ಅನುವಾದ

ನೋಡು, ಇವನು ಪಾಂಡುಪುತ್ರನಾದ ಭೀಮಸೇನನು ಮತ್ತು ಇವನು ಅವನ ತಮ್ಮ ಅರ್ಜುನನು ಮತ್ತು ನಾನು ಇವರಿಬ್ಬರ ಸೋದರ ಮಾವನ ಮಗನಾದ ನಿನ್ನ ಹಳೆಯ ಶತ್ರುವಾದ ಕೃಷ್ಣನೆಂದೇ ತಿಳಿ. ॥29॥

ಮೂಲಮ್

(ಶ್ಲೋಕ-30)
ಏವಮಾವೇದಿತೋ ರಾಜಾ ಜಹಾಸೋಚ್ಚೈಃ ಸ್ಮ ಮಾಗಧಃ ।
ಆಹ ಚಾಮರ್ಷಿತೋ ಮಂದಾ ಯುದ್ಧಂ ತರ್ಹಿ ದದಾಮಿ ವಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೀಗೆ ತನ್ನನ್ನು ಪರಿಚಯಿಸಿದಾಗ ಜರಾಸಂಧನು ಗಹ-ಗಹಿಸಿ ನಗತೊಡಗಿದನು ಮತ್ತು ಕೆರಳಿ ನುಡಿದನು ಎಲೈ ಮೂರ್ಖರೇ! ನಿಮಗೆ ಯುದ್ಧದ ಇಚ್ಛೆಯಿದ್ದರೆ ತಗೊಳ್ಳಿ ಕೊಟ್ಟಿದ್ದೇನೆ, ನಿಮ್ಮ ಪ್ರಾರ್ಥನೆಯನ್ನು ಸ್ವೀಕರಿಸುತ್ತೇನೆ. ॥30॥

ಮೂಲಮ್

(ಶ್ಲೋಕ-31)
ನ ತ್ವಯಾ ಭೀರುಣಾ ಯೋತ್ಸ್ಯೇ ಯುಧಿ ವಿಕ್ಲವಚೇತಸಾ ।
ಮಥುರಾಂ ಸ್ವಪುರೀಂ ತ್ಯಕ್ತ್ವಾ ಸಮುದ್ರಂ ಶರಣಂ ಗತಃ ॥

ಅನುವಾದ

ಆದರೆ ಕೃಷ್ಣ! ಯುದ್ಧವೆಂದರೆ ಭಯಗೊಳ್ಳುವ, ಹೇಡಿಯಾದ ನೀನು, ನಾನು ಯುದ್ಧಕ್ಕೆ ಬಂದಾಗ ಮಥುರೆಯನ್ನೇ ಬಿಟ್ಟು ಓಡಿಹೋಗಿ ಸಮುದ್ರದ ಮಧ್ಯದಲ್ಲಿ ನೆಲೆಸಿರುವೆ. ನಿನ್ನೊಡನೆ ನಾನು ಯುದ್ಧಮಾಡುವುದಿಲ್ಲ. ॥31॥

ಮೂಲಮ್

(ಶ್ಲೋಕ-32)
ಅಯಂ ತು ವಯಸಾತುಲ್ಯೋ ನಾತಿಸತ್ತ್ವೋ ನ ಮೇ ಸಮಃ ।
ಅರ್ಜುನೋ ನ ಭವೇದ್ಯೋದ್ಧಾ ಭೀಮಸ್ತುಲ್ಯಬಲೋ ಮಮ ॥

ಅನುವಾದ

ಈ ಅರ್ಜುನನು ಒಬ್ಬ ಯೋಧನೇ? ಒಂದೋ ವಯಸ್ಸಿನಲ್ಲಿ ನನ್ನಿಂದ ಬಹಳ ಚಿಕ್ಕವನು, ಇನ್ನೊಂದು ವಿಶೇಷ ಬಲವಂತನೂ ಅಲ್ಲ. ಆದ್ದರಿಂದ ಇವನು ನನಗೆ ಸರಿಸಮಾನನಾಗಲಾರನು. ಇವನೊಡನೆ ಯುದ್ಧಮಾಡುವುದಿಲ್ಲ. ಆದರೆ ಈ ಭೀಮ ಸೇನನು ನನ್ನಂತೆಯೇ ಬಲಿಷ್ಠನಾಗಿದ್ದು, ನನಗೆ ಸರಿಸಮಾನನಾಗಿದ್ದಾನೆ. ॥32॥

ಮೂಲಮ್

(ಶ್ಲೋಕ-33)
ಇತ್ಯುಕ್ತ್ವಾ ಭೀಮಸೇನಾಯ ಪ್ರಾದಾಯ ಮಹತೀಂ ಗದಾಮ್ ।
ದ್ವಿತೀಯಾಂ ಸ್ವಯಮಾದಾಯ ನಿರ್ಜಗಾಮ ಪುರಾದ್ಬಹಿಃ ॥

ಅನುವಾದ

ಜರಾಸಂಧನು ಹೀಗೆ ಹೇಳಿ ಭೀಮಸೇನನಿಗೆ ದೊಡ್ಡದಾದ ಗದೆಯೊಂದನ್ನು ಕೊಟ್ಟನು. ತಾನು ಇನ್ನೊಂದು ಗದೆಯನ್ನು ಎತ್ತಿಕೊಂಡು ದ್ವಂದ್ವಯುದ್ಧಕ್ಕಾಗಿ ನಗರದಿಂದ ಹೊರಗೆ ಬಂದನು. ॥33॥

ಮೂಲಮ್

(ಶ್ಲೋಕ-34)
ತತಃ ಸಮೇ ಖಲೇ ವೀರೌ ಸಂಯುಕ್ತಾವಿತರೇತರೌ ।
ಜಘ್ನತುರ್ವಜ್ರಕಲ್ಪಾಭ್ಯಾಂ ಗದಾಭ್ಯಾಂ ರಣದುರ್ಮದೌ ॥

ಅನುವಾದ

ಬಳಿಕ ರಣೋನ್ಮತ್ತರಾದ ಭೀಮ-ಜರಾಸಂಧರು ರಣರಂಗಕ್ಕೆ ಬಂದು ವಜ್ರಕ್ಕೆ ಸಮಾನವಾಗಿದ್ದ ಗದೆಗಳಿಂದ ಪರಸ್ಪರ ಯುದ್ಧ ಮಾಡಲು ತೊಡಗಿದರು. ॥34॥

ಮೂಲಮ್

(ಶ್ಲೋಕ-35)
ಮಂಡಲಾನಿ ವಿಚಿತ್ರಾಣಿ ಸವ್ಯಂ ದಕ್ಷಿಣಮೇವ ಚ ।
ಚರತೋಃ ಶುಶುಭೇ ಯುದ್ಧಂ ನಟಯೋರಿವ ರಂಗಿಣೋಃ ॥

ಅನುವಾದ

ರಂಗಮಂಟಪದಲ್ಲಿ ಇಬ್ಬರು ನಟರು ಯುದ್ಧದ ಅಭಿನಯವನ್ನು ತೋರಿಸುವಂತೆ ಅವರಿಬ್ಬರೂ ಎಡಕ್ಕೂ, ಬಲಕ್ಕೂ ವಿಚಿತ್ರ ರೀತಿಯಲ್ಲಿ ಮಂಡಲಾಕಾರವಾಗಿ ಸುತ್ತುತ್ತಾ ಗದಾಯುದ್ಧದ ವರಸೆಗಳನ್ನು ತೋರಿಸುತ್ತಾ ರಾರಾಜಿಸಿದರು. ॥35॥

ಮೂಲಮ್

(ಶ್ಲೋಕ-36)
ತತಶ್ಚಟಚಟಾಶಬ್ದೋ ವಜ್ರನಿಷ್ಪೇಷಸನ್ನಿಭಃ ।
ಗದಯೋಃ ಕ್ಷಿಪ್ತಯೋ ರಾಜನ್ ದಂತಯೋರಿವ ದಂತಿನೋಃ ॥

ಅನುವಾದ

ಪರೀಕ್ಷಿತನೇ! ಪರಸ್ಪರವಾಗಿ ಪ್ರಹರಿಸಿದ ಗದಾಘಾತದಿಂದ ಉಂಟಾಗುತ್ತಿದ್ದ ಶಬ್ದವು ಸಿಡಿಲು ಬಡಿದಂತೆಯೂ, ಎರಡು ಆನೆಗಳು ಪರಸ್ಪರವಾಗಿ ದಂತಗಳಿಂದ ತಿವಿಯುತ್ತಾ ಕಾದಾಡುವಾಗ ಉಂಟಾಗುವ ಚಟ-ಚಟಾ ಶಬ್ದದಂತೆಯೂ ಕೇಳಿಬರುತ್ತಿತ್ತು. ॥36॥

ಮೂಲಮ್

(ಶ್ಲೋಕ-37)
ತೇ ವೈ ಗದೇ ಭುಜಜವೇನ ನಿಪಾತ್ಯ ಮಾನೇ
ಅನ್ಯೋನ್ಯತೋಂಸಕಟಿಪಾದಕರೋರುಜತ್ರೂನ್ ।
ಚೂರ್ಣೀಬಭೂವತುರುಪೇತ್ಯ ಯಥಾರ್ಕಶಾಖೇ
ಸಂಯುಧ್ಯತೋರ್ದ್ವಿರದಯೋರಿವ ದೀಪ್ತಮನ್ವ್ಯೋಃ ॥

ಅನುವಾದ

ಭೀಮ ಜರಾಸಂಧರು ಭುಜಗಳಿಂದ ಗದೆಗಳನ್ನು ವೇಗವಾಗಿ ಅಪ್ಪಳಿಸಿದಾಗ ಆ ಗದೆಗಳು-ಪರಸ್ಪರವಾಗಿ ಅವರ ಹೆಗಲು, ಸೊಂಟ, ಕೈ-ಕಾಲುಗಳು, ತೊಡೆ, ಕಂಕುಳಗಳಲ್ಲಿ ಬಿದ್ದು ಕೋಪದಿಂದ ಹೋರಾಡುವ ಆನೆಗೆ ಹೊಡೆದ ಎಕ್ಕದ ಕೊಂಬೆಯಂತೆ ನುಚ್ಚು ನೂರಾದವು. ॥37॥

ಮೂಲಮ್

(ಶ್ಲೋಕ-38)
ಇತ್ಥಂ ತಯೋಃ ಪ್ರಹತಯೋರ್ಗದಯೋರ್ನೃವೀರೌ
ಕ್ರುದ್ಧೌ ಸ್ವಮುಷ್ಟಿಭಿರಯಃಸ್ಪರ್ಶೈರಪಿಷ್ಟಾಮ್ ।
ಶಬ್ದಸ್ತಯೋಃ ಪ್ರಹರತೋರಿಭಯೋರಿವಾಸೀ-
ನ್ನಿರ್ಘಾತವಜ್ರಪರುಷಸ್ತಲತಾಡನೋತ್ಥಃ ॥

ಅನುವಾದ

ಪರೀಕ್ಷಿತನೇ! ಹೀಗೆ ಅವರ ಗದೆಗಳು ಪರಸ್ಪರ ಪ್ರಹಾರಗಳಿಂದ ಪುಡಿ-ಪುಡಿಯಾಗಲು, ಕ್ರುದ್ಧರಾಗಿದ್ದ ಅವರು ಉಕ್ಕಿಗೆ ಸಮಾನವಾದ ತಮ್ಮ ಮುಷ್ಟಿಗಳಿಂದಲೇ ಬಡಿದಾಡ ತೊಡಗಿದರು. ಮದಿಸಿದ ಎರಡು ಆನೆಗಳು ಕಾದಾಡುವಂತೆ ಮುಷ್ಟಿ ಯುದ್ಧವನ್ನು ಮಾಡುತ್ತಿದ್ದ ಭೀಮ-ಜರಾಸಂಧರ ಅಂಗೈಗಳ, ಮುಷ್ಟಿಗಳ ಹೊಡೆತದಿಂದ ಉಂಟಾದ ಶಬ್ದವು ಸಿಡಿಲಿನ ಅಬ್ಬರದಂತೆ ಕೇಳಿಬರುತ್ತಿತ್ತು. ॥38॥

ಮೂಲಮ್

(ಶ್ಲೋಕ-39)
ತಯೋರೇವಂ ಪ್ರಹರತೋಃ ಸಮಶಿಕ್ಷಾಬಲೌಜಸೋಃ ।
ನಿರ್ವಿಶೇಷಮಭೂದ್ಯುದ್ಧಮಕ್ಷೀಣಜವಯೋರ್ನೃಪ ॥

ಅನುವಾದ

ಪರೀಕ್ಷಿತನೇ! ಜರಾಸಂಧ ಭೀಮಸೇನರಿಬ್ಬರ ದ್ವಂದ್ವಯುದ್ಧದಲ್ಲಿ ಕೌಶಲ್ಯ, ಬಲ ಮತ್ತು ಉತ್ಸಾಹಗಳು ಸಮಾನವಾಗಿದ್ದವು. ಅಷ್ಟುಕಾಲ ಯುದ್ಧ ಮಾಡಿದರೂ ಅವರ ಬಲವು ಸ್ವಲ್ಪವಾದರೂ ಕುಂದಲಿಲ್ಲ. ಹೀಗೆ ಅವ್ಯಾಹತವಾಗಿ ಪ್ರಹರಿಸುತ್ತಿದ್ದರೂ ಯಾರಿಗೂ ಸೋಲು-ಗೆಲುವು ಉಂಟಾಗಲಿಲ್ಲ. ॥39॥

ಮೂಲಮ್

(ಶ್ಲೋಕ-40)
ಏವಂ ತಯೋರ್ಮಹಾರಾಜ ಯುಧ್ಯತೋಃ ಸಪ್ತವಿಂಶತಿಃ ।
ದಿನಾನಿ ನಿರಗಂಸ್ತತ್ರ ಸುಹೃದ್ವನ್ನಿಶಿ ತಿಷ್ಠತೋಃ ॥

ಅನುವಾದ

ಆ ವೀರರಿಬ್ಬರೂ ರಾತ್ರಿಯಲ್ಲಿ ಸುಹೃದರಂತೆ ಇರುತ್ತಿದ್ದರು. ಬೆಳಗಾಗುತ್ತಲೇ ಯುದ್ಧದಲ್ಲಿ ತೊಡುಗುತ್ತಿದ್ದರು. ಮಹಾರಾಜನೇ! ಈ ಪ್ರಕಾರವಾಗಿ ಅವರ ದ್ವಂದ್ವ ಯುದ್ಧವು ಇಪ್ಪತ್ತೇಳು ದಿನಗಳವರೆಗೂ ನಡೆಯಿತು. ॥40॥

ಮೂಲಮ್

(ಶ್ಲೋಕ-41)
ಏಕದಾ ಮಾತುಲೇಯಂ ವೈ ಪ್ರಾಹ ರಾಜನ್ ವೃಕೋದರಃ ।
ನ ಶಕ್ತೋಹಂ ಜರಾಸಂಧಂ ನಿರ್ಜೇತುಂ ಯುಧಿ ಮಾಧವ ॥

ಅನುವಾದ

ಪ್ರಿಯ ಪರೀಕ್ಷಿತನೇ! ಇಪ್ಪತ್ತೆಂಟನೆಯ ದಿನ ಭೀಮಸೇನನು ಸೋದರಮಾವನ ಮಗನಾದ ಶ್ರೀಕೃಷ್ಣನಲ್ಲಿ ಹೇಳಿದನು - ಮಾಧವ! ಯುದ್ಧದಲ್ಲಿ ಜರಾಸಂಧನನ್ನು ನಾನು ಜಯಿಸಲಾರೆನು. ॥41॥

ಮೂಲಮ್

(ಶ್ಲೋಕ-42)
ಶತ್ರೋರ್ಜನ್ಮಮೃತೀ ವಿದ್ವಾನ್ ಜೀವಿತಂ ಚ ಜರಾಕೃತಮ್ ।
ಪಾರ್ಥಮಾಪ್ಯಾಯಯನ್ ಸ್ವೇನ ತೇಜಸಾಚಿಂತಯದ್ಧರಿಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಜರಾಸಂಧನ ಜನ್ಮ ಮತ್ತು ಮೃತ್ಯುವಿನ ರಹಸ್ಯವನ್ನು ತಿಳಿದಿದ್ದನು. ಜರಾ ಎಂಬ ರಾಕ್ಷಸಿಯು ಎರಡು ಹೋಳುಗಳಾಗಿ ಬಿದ್ದಿದ್ದ ಶರೀರದ ಭಾಗಗಳನ್ನು ಜೋಡಿಸಿ ಜರಾಸಂಧನಿಗೆ ಜೀವದಾನ ಮಾಡಿದ್ದಳೆಂಬುದೂ ಅವನಿಗೆ ತಿಳಿದಿತ್ತು. ಅದಕ್ಕಾಗಿ ಭೀಮಸೇನನ ಶರೀರದಲ್ಲಿ ತನ್ನ ಶಕ್ತಿಯನ್ನು ತುಂಬಿ ಜರಾಸಂಧನ ವಧೆಯ ಉಪಾಯವನ್ನು ಯೋಚಿಸಿದನು. ॥42॥

ಮೂಲಮ್

(ಶ್ಲೋಕ-43)
ಸಂಚಿಂತ್ಯಾರಿವಧೋಪಾಯಂ ಭೀಮಸ್ಯಾಮೋಘದರ್ಶನಃ ।
ದರ್ಶಯಾಮಾಸ ವಿಟಪಂ ಪಾಟಯನ್ನಿವ ಸಂಜ್ಞಯಾ ॥

ಅನುವಾದ

ಪರೀಕ್ಷಿತನೇ! ಬಳಿಕ ಅಮೋಘ ಜ್ಞಾನಶಕ್ತಿಯನ್ನು ಹೊಂದಿದ್ದ ಶ್ರೀಕೃಷ್ಣನು ಜರಾಸಂಧನ ಮೃತ್ಯುವಿನ ಉಪಾಯವನ್ನು ಅರಿತು ಒಂದು ಮರದ ರೆಂಬೆಯನ್ನು ಉದ್ದವಾಗಿ ಸೀಳಿಹಾಕಿ ಈ ಸಂಜ್ಞೆಯ ಮೂಲಕ ಭೀಮಸೇನನಿಗೆ ತೋರಿಸಿದನು. ॥43॥

ಮೂಲಮ್

(ಶ್ಲೋಕ-44)
ತದ್ವಿಜ್ಞಾಯ ಮಹಾಸತ್ತ್ವೋ ಭೀಮಃ ಪ್ರಹರತಾಂ ವರಃ ।
ಗೃಹೀತ್ವಾ ಪಾದಯೋಃ ಶತ್ರುಂ ಪಾತಯಾಮಾಸ ಭೂತಲೇ ॥

ಅನುವಾದ

ವೀರಶಿರೋ ಮಣಿಯೂ, ಶಕ್ತಿಶಾಲಿಯೂ ಆದ ಭೀಮಸೇನನು ಭಗವಾನ್ ಶ್ರೀಕೃಷ್ಣನ ಅಭಿಪ್ರಾಯವನ್ನು ಗ್ರಹಿಸಿ, ಜರಾಸಂಧನ ಕಾಲನ್ನು ಹಿಡಿದು ನೆಲಕ್ಕೆ ಕೆಡವಿದನು. ॥44॥

ಮೂಲಮ್

(ಶ್ಲೋಕ-45)
ಏಕಂ ಪಾದಂ ಪದಾಕ್ರಮ್ಯ ದೋರ್ಭ್ಯಾಮನ್ಯಂ ಪ್ರಗೃಹ್ಯ ಸಃ ।
ಗುದತಃ ಪಾಟಯಾಮಾಸ ಶಾಖಾಮಿವ ಮಹಾಗಜಃ ॥

ಅನುವಾದ

ಬಳಿಕ ಜರಾಸಂಧನ ಒಂದು ಕಾಲನ್ನು ತನ್ನ ಕಾಲಿನಿಂದ ಮೆಟ್ಟಿಕೊಂಡು ಮತ್ತೊಂದು ಕಾಲನ್ನು ಎರಡೂ ಕೈಗಳಿಂದ ಹಿಡಿದು, ಸಲಗವು ಮರದ ರೆಂಬೆಯನ್ನು ಸೀಳುವಂತೆ ಗುದ ದ್ವಾರದ ಕಡೆಯಿಂದ ಅವನನ್ನು ಸೀಳಿಬಿಟ್ಟನು. ॥45॥

ಮೂಲಮ್

(ಶ್ಲೋಕ-46)
ಏಕಪಾದೋರುವೃಷಣಕಟಿಪೃಷ್ಠಸ್ತನಾಂಸಕೇ ।
ಏಕಬಾಹ್ವಕ್ಷಿಭ್ರೂಕರ್ಣೇ ಶಕಲೇ ದದೃಶುಃ ಪ್ರಜಾಃ ॥

ಅನುವಾದ

ನೆರೆದಿದ್ದ ಜನರು ಎರಡು ಸೀಳುಗಳಲ್ಲಿಯೂ ಒಂದೊಂದು ಕಾಲು, ತೊಡೆ, ಅಂಡಕೋಶ, ಕಟಿಭಾಗ, ಪೃಷ್ಠ, ಸ್ತನ, ಹೆಗಲು, ತೋಳು, ಕಣ್ಣು, ಹುಬ್ಬು ಮತ್ತು ಕಿವಿಗಳಿರುವುದನ್ನು ನೋಡಿದರು. ॥46॥

ಮೂಲಮ್

(ಶ್ಲೋಕ-47)
ಹಾಹಾಕಾರೋ ಮಹಾನಾಸೀನ್ನಿಹತೇ ಮಗಧೇಶ್ವರೇ ।
ಪೂಜಯಾಮಾಸತುರ್ಭೀಮಂ ಪರಿರಭ್ಯ ಜಯಾಚ್ಯುತೌ ॥

ಅನುವಾದ

ಮಗಧರಾಜನಾದ ಜರಾಸಂಧನು ಸತ್ತು ಹೋದಾಗ ಅವನ ಪ್ರಜೆಗಳು ಗಟ್ಟಿಯಾಗಿ ಅಯ್ಯೋ! ಅಯ್ಯೋ! ನಮಗೆ ಇನ್ನಾರುಗತಿ! ಎಂದು ಗೋಳಾಡಿದರು. ಭಗವಾನ್ ಶ್ರೀಕೃಷ್ಣಾರ್ಜುನರು ಭೀಮಸೇನನನ್ನು ಆಲಿಂಗಿಸಿಕೊಂಡು ಪ್ರಶಂಸಿಸಿದರು. ॥47॥

ಮೂಲಮ್

(ಶ್ಲೋಕ-48)
ಸಹದೇವಂ ತತ್ತನಯಂ ಭಗವಾನ್ ಭೂತಭಾವನಃ ।
ಅಭ್ಯಷಿಂಚದಮೇಯಾತ್ಮಾ ಮಗಧಾನಾಂ ಪತಿಂ ಪ್ರಭುಃ ।
ಮೋಚಯಾಮಾಸ ರಾಜನ್ಯಾನ್ಸಂರುದ್ಧಾ ಮಾಗಧೇನ ಯೇ ॥

ಅನುವಾದ

ಸಕಲ ಪ್ರಾಣಿಗಳನ್ನು ಪರಿಪಾಲಿಸುವ, ಅಪ್ರಮೇಯಾತ್ಮನಾದ ಶ್ರೀಕೃಷ್ಣನು ಜರಾಸಂಧನ ಮಗನಾದ ಸಹದೇವನನ್ನು ಮಗಧರಾಜ್ಯಕ್ಕೆ ರಾಜನನ್ನಾಗಿಸಿ ಸಿಂಹಾಸನದಲ್ಲಿ ಕುಳ್ಳಿರಿಸಿ ಪಟ್ಟಾಭಿಷೇಕ ಮಾಡಿದನು. ಜರಾಸಂಧನು ಬಂಧಿಸಿಟ್ಟಿದ್ದ ರಾಜರೆಲ್ಲರನ್ನು ಬಂಧಮುಕ್ತಗೊಳಿಸಿದನು. ॥48॥

ಅನುವಾದ (ಸಮಾಪ್ತಿಃ)

ಎಪ್ಪತ್ತೆರಡನೆಯ ಅಧ್ಯಾಯವು ಮುಗಿಯಿತು. ॥72॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ ಜರಾಸಂಧವಧೋ ನಾಮ ದ್ವಿಸಪ್ತತಿತಮೋಽಧ್ಯಾಯಃ ॥72॥