[ಏಪ್ಪತ್ತೋಂದನೇಯ ಅಧ್ಯಾಯ]
ಭಾಗಸೂಚನಾ
ಶ್ರೀಕೃಷ್ಣನು ಇಂದ್ರಪ್ರಸ್ಥಕ್ಕೆ ದಯಮಾಡಿಸಿದುದು
ಮೂಲಮ್
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತ್ಯುದೀರಿತಮಾಕರ್ಣ್ಯ ದೇವರ್ಷೇರುದ್ಧವೋಬ್ರವೀತ್ ।
ಸಭ್ಯಾನಾಂ ಮತಮಾಜ್ಞಾಯ ಕೃಷ್ಣಸ್ಯ ಚ ಮಹಾಮತಿಃ ॥
ಅನುವಾದ
ಶ್ರೀಶುಕಮುನಿಗಳು ಹೇಳುತ್ತಾರೆ — ಪರೀಕ್ಷಿತ ಮಹಾರಾಜ! ಮಹಾಮತಿಯಾದ ಉದ್ಧವನು ಶ್ರೀಕೃಷ್ಣನ ಮಾತನ್ನು ಕೇಳಿ, ದೇವರ್ಷಿಗಳಾದ ನಾರದರ, ಸಭಾಸದರ, ಬಂದಿರಾಜರುಗಳ ದೂತನ ನಿವೇದನೆಯ ಬಗೆಗೆ ಮತ್ತು ಶ್ರೀಕೃಷ್ಣನ ಅಭಿಪ್ರಾಯವೇನೆಂಬುದನ್ನು ವಿಚಾರಮಾಡಿ ಹೇಳತೊಡಗಿದನು. ॥1॥
ಮೂಲಮ್
(ಶ್ಲೋಕ-2)
ಮೂಲಮ್ (ವಾಚನಮ್)
ಉದ್ಧವ ಉವಾಚ
ಮೂಲಮ್
ಯದುಕ್ತಮೃಷಿಣಾ ದೇವ ಸಾಚಿವ್ಯಂ ಯಕ್ಷ್ಯತಸ್ತ್ವಯಾ ।
ಕಾರ್ಯಂ ಪೈತೃಷ್ವಸೇಯಸ್ಯ ರಕ್ಷಾ ಚ ಶರಣೈಷಿಣಾಮ್ ॥
ಅನುವಾದ
ಉದ್ಧವನು ಹೇಳಿದನು — ಭಗವಂತ! ನಿನ್ನ ಸೋದರಳಿಯರಾದ ಪಾಂಡವರು ರಾಜಸೂಯಯಜ್ಞದಲ್ಲಿ ಭಾಗವಹಿಸಿ ಅವರಿಗೆ ಸಹಾಯ ಮಾಡಬೇಕೆಂದು ನಾರದರು ಹೇಳಿದ ಮಾತು ಸರಿಯಾಗಿದೆ. ಜೊತೆಗೆ ಶರಣಾಗತರ ರಕ್ಷಣೆಯೂ ಆವಶ್ಯಕವಾದ ಕರ್ತವ್ಯವೇ ಆಗಿದೆ. ॥2॥
ಮೂಲಮ್
(ಶ್ಲೋಕ-3)
ಯಷ್ಟವ್ಯಂ ರಾಜಸೂಯೇನ ದಿಕ್ಚಕ್ರಜಯಿನಾ ವಿಭೋ ।
ಅತೋ ಜರಾಸುತಜಯ ಉಭಯಾರ್ಥೋ ಮತೋ ಮಮ ॥
ಅನುವಾದ
ಪ್ರಭೋ! ಹತ್ತು ದಿಕ್ಕುಗಳನ್ನು ಜಯಿಸಿದವನೇ ರಾಜಸೂಯ ಯಜ್ಞವನ್ನು ಮಾಡಬಲ್ಲನು ಎಂಬ ದೃಷ್ಟಿಯಿಂದ ವಿಚಾರ ಮಾಡಿದಾಗ ಪಾಂಡವರ ಯಜ್ಞ ಮತ್ತು ಶರಣಾಗತರ ರಕ್ಷಣೆ ಎರಡೂ ಕಾರ್ಯಗಳಿಗಾಗಿ ಜರಾಸಂಧನನ್ನು ಜಯಿಸುವುದು ಆವಶ್ಯಕವಾಗಿದೆ ಎಂಬುದು ನಿರ್ವಿವಾದವಾಗಿದೆ. ॥3॥
ಮೂಲಮ್
(ಶ್ಲೋಕ-4)
ಅಸ್ಮಾಕಂ ಚ ಮಹಾನರ್ಥೋ ಹ್ಯೇತೇನೈವ ಭವಿಷ್ಯತಿ ।
ಯಶಶ್ಚ ತವ ಗೋವಿಂದ ರಾಜ್ಞೋ ಬದ್ಧಾನ್ವಿಮುಂಚತಃ ॥
ಅನುವಾದ
ಸ್ವಾಮಿ! ಕೇವಲ ಜರಾಸಂಧನನ್ನು ಜಯಿಸುವುದರಿಂದ ನಮ್ಮ ಉದ್ದೇಶವು ಸಫಲವಾಗುವುದು; ಜೊತೆಗೆ ಅದರಿಂದ ಬಂಧಿತರಾಜರ ಮುಕ್ತಿ ಮತ್ತು ಅವರ ಕಾರಣದಿಂದ ನಿನಗೆ ನಿರ್ಮಲವಾದ ಕೀರ್ತಿಯೂ ಪ್ರಾಪ್ತವಾಗುತ್ತದೆ. ॥4॥
ಮೂಲಮ್
(ಶ್ಲೋಕ-5)
ಸ ವೈ ದುರ್ವಿಷಹೋ ರಾಜಾ ನಾಗಾಯುತಸಮೋ ಬಲೇ ।
ಬಲಿನಾಮಪಿ ಚಾನ್ಯೇಷಾಂ ಭೀಮಂ ಸಮಬಲಂ ವಿನಾ ॥
ಅನುವಾದ
ಬಲದಲ್ಲಿ ಹತ್ತು ಸಾವಿರ ಆನೆಗಳ ಬಲವಿರುವ ಜರಾಸಂಧನನ್ನು ಇತರ ಬಲಿಷ್ಠರಾಜರು ಗೆಲ್ಲಲಾರರು. ಅವನಿಗೆ ಸಮಾನಬಲವಿರುವ ಭೀಮಸೇನನೊಬ್ಬನು ಮಾತ್ರ ಅವನನ್ನು ಜಯಿಸಬಲ್ಲನು. ॥5॥
ಮೂಲಮ್
(ಶ್ಲೋಕ-6)
ದ್ವೈರಥೇ ಸ ತು ಜೇತವ್ಯೋ ಮಾ ಶತಾಕ್ಷೌಹಿಣೀಯುತಃ ।
ಬ್ರಹ್ಮಣ್ಯೋಭ್ಯರ್ಥಿತೋ ವಿಪ್ರೈರ್ನ ಪ್ರತ್ಯಾಖ್ಯಾತಿ ಕರ್ಹಿಚಿತ್ ॥
ಅನುವಾದ
ಅವನೊಡನೆ ದ್ವಂದ್ವಯುದ್ಧವನ್ನೇ ಮಾಡಿ ಅವನನ್ನ ಗೆಲ್ಲಬೇಕು. ನೂರು ಅಕ್ಷೌಹಿಣಿ ಸೈನ್ಯದೊಂದಿಗೆ ಅವನನ್ನು ಯುದ್ಧಕ್ಕೆ ನಿಂತರೆ ಅವನನ್ನು ಗೆಲ್ಲುವುದು ಅಷ್ಟು ಸುಲಭವಲ್ಲ. ಜರಾಸಂಧನು ಬಹಳ ದೊಡ್ಡ ಬ್ರಾಹ್ಮಣಭಕ್ತನಾಗಿದ್ದಾನೆ. ಬ್ರಾಹ್ಮಣರು ಅವನಲ್ಲಿ ಏನೇ ಬೇಡಿದರೂ ಎಂದಿಗೂ ಅವನು ಇಲ್ಲವೆನ್ನುವುದಿಲ್ಲ. ॥6॥
ಮೂಲಮ್
(ಶ್ಲೋಕ-7)
ಬ್ರಹ್ಮವೇಷಧರೋ ಗತ್ವಾ ತಂ ಭಿಕ್ಷೇತ ವೃಕೋದರಃ ।
ಹನಿಷ್ಯತಿ ನ ಸಂದೇಹೋ ದ್ವೈರಥೇ ತವ ಸನ್ನಿಧೌ ॥
ಅನುವಾದ
ಆದುದರಿಂದ ಭೀಮಸೇನನು ಬ್ರಾಹ್ಮಣವೇಷವನ್ನು ಧರಿಸಿ ಅವನ ಬಳಿಗೆ ಹೋಗಿ ಯುದ್ಧ ಭಿಕ್ಷೆಯನ್ನು ಬೇಡಬೇಕು. ಭಗವಂತಾ! ನಿನ್ನ ಉಪಸ್ಥಿತಿಯಲ್ಲಿ ಭೀಮಸೇನ ಮತ್ತು ಜರಾಸಂಧರ ದ್ವಂದ್ವ ಯುದ್ಧ ನಡೆದರೆ ಭೀಮಸೇನನು ಅವನನ್ನು ಕೊಲ್ಲುವುದರಲ್ಲಿ ಸಂದೇಹವೇ ಇಲ್ಲ. ॥7॥
ಮೂಲಮ್
(ಶ್ಲೋಕ-8)
ನಿಮಿತ್ತಂ ಪರಮೀಶಸ್ಯ ವಿಶ್ವಸರ್ಗನಿರೋಧಯೋಃ ।
ಹಿರಣ್ಯಗರ್ಭಃ ಶರ್ವಶ್ಚ ಕಾಲಸ್ಯಾರೂಪಿಣಸ್ತವ ॥
ಅನುವಾದ
ಪ್ರಭೋ! ನೀನು ಸರ್ವಶಕ್ತಿವಂತನೂ, ರೂಪ ರಹಿತ ಕಾಲಸ್ವರೂಪನಾಗಿರುವೆ. ವಿಶ್ವದ ಸೃಷ್ಟಿ ಮತ್ತು ಪ್ರಳಯ ನಿನ್ನ ಶಕ್ತಿಯಿಂದಲೇ ನಡೆಯುತ್ತದೆ. ಬ್ರಹ್ಮ-ರುದ್ರರು ಅದರಲ್ಲಿ ಕೇವಲ ನಿಮಿತ್ತರಾಗಿದ್ದಾರೆ. ಹೀಗೆಯೇ ನಿನ್ನ ಶಕ್ತಿಯಿಂದಲೇ ಜರಾಸಂಧನ ವಧೆಯಾಗುವುದು; ಭೀಮಸೇನನು ನೆಪಮಾತ್ರಕ್ಕಿರುತ್ತಾನೆ. ॥8॥
ಮೂಲಮ್
(ಶ್ಲೋಕ-9)
ಗಾಯಂತಿ ತೇ ವಿಶದಕರ್ಮ ಗೃಹೇಷು ದೇವ್ಯೋ
ರಾಜ್ಞಾಂ ಸ್ವಶತ್ರುವಧಮಾತ್ಮವಿಮೋಕ್ಷಣಂ ಚ ।
ಗೋಪ್ಯಶ್ಚ ಕುಂಜರಪತೇರ್ಜನಕಾತ್ಮಜಾಯಾಃ
ಪಿತ್ರೋಶ್ಚ ಲಬ್ಧಶರಣಾ ಮುನಯೋ ವಯಂ ಚ ॥
ಅನುವಾದ
ಶಂಖಚೂಡನಿಂದ ಮುಕ್ತರಾದ ಗೋಪಿಯರು ನಿನ್ನ ಕೀರ್ತಿಯನ್ನು ಗಾನಮಾಡುವಂತೆ, ಮೊಸಳೆಯಿಂದ ಮುಕ್ತನಾದ ಗಜೇಂದ್ರನು, ನಿನಗೆ ಶರಣಾಗತರಾದ ಮುನಿಗಳು, ಸೀತೆಯನ್ನು ಉದ್ಧರಿಸಿದ ಲೀಲೆಯನ್ನು ನಿನ್ನ ತಂದೆ-ತಾಯಿಯರನ್ನು ಕಾರಾಗೃಹದಿಂದ ಬಂಧಮುಕ್ತಗೊಳಿಸಿದ ನಿನ್ನ ಲೀಲೆಯನ್ನು ನಾವು ಹಾಡುವಂತೆಯೇ ನೀನು ಜರಾಸಂಧನ ವಧೆ ಮಾಡಿಸಿದಾಗ ಬಂಧನದಿಂದ ಮುಕ್ತರಾದ ಆ ರಾಜರ ಪಟ್ಟಮಹಿಷಿಯರು ತಮ್ಮ ಅರಮನೆಗಳಲ್ಲಿ - ನೀನು ಅವರ ಶತ್ರುವನ್ನು ನಾಶಗೊಳಿಸಿ ತಮ್ಮ ಪ್ರಾಣಪತಿಗಳನ್ನು ಬಿಡಿಸಿದ ನಿನ್ನ ಅಲೌಕಿಕ ಲೀಲೆಯನ್ನು ಹಾಡುವರು. ॥9॥
ಮೂಲಮ್
(ಶ್ಲೋಕ-10)
ಜರಾಸಂಧವಧಃ ಕೃಷ್ಣ ಭೂರ್ಯರ್ಥಾಯೋಪಕಲ್ಪತೇ ।
ಪ್ರಾಯಃ ಪಾಕವಿಪಾಕೇನ ತವ ಚಾಭಿಮತಃ ಕ್ರತುಃ ॥
ಅನುವಾದ
ಅದಕ್ಕಾಗಿ ಪ್ರಭೋ! ಜರಾಸಂಧನ ವಧೆಯು ಅನೇಕ ಪ್ರಯೋಜನಗಳನ್ನು ಸಿದ್ಧಗೊಳಿಸುವುದು. ಸೆರೆಯಾದ ರಾಜರ ಪುಣ್ಯದ ಪರಿಣಾಮದಿಂದಲೋ, ಜರಾಸಂಧನ ಪಾಪದ ಪರಿಣಾಮದಿಂದಲೋ ರಾಜಸೂಯಯಾಗ ಮಾಡಲು ನಿನ್ನ ಒಪ್ಪಿಗೆಯೂ ಲಭಿಸಿದೆ. ಆದುದರಿಂದ ನೀನು ಮೊದಲಿಗೆ ಇಂದ್ರಪ್ರಸ್ಥಕ್ಕೆ ಹೋಗುವುದೇ ಸೂಕ್ತವಾಗಿದೆ ಎಂದು ನನಗೆ ಅನಿಸುತ್ತದೆ. ॥10॥
ಮೂಲಮ್
(ಶ್ಲೋಕ-11)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತ್ಯುದ್ಧವವಚೋ ರಾಜನ್ ಸರ್ವತೋಭದ್ರಮಚ್ಯುತಮ್ ।
ದೇವರ್ಷಿರ್ಯದುವೃದ್ಧಾಶ್ಚ ಕೃಷ್ಣಶ್ಚ ಪ್ರತ್ಯಪೂಜಯನ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಉದ್ಧವನ ಈ ಸಲಹೆಯು ಎಲ್ಲ ರೀತಿಯಿಂದ ಹಿತಕರವೂ, ನಿರ್ದೋಷವೂ ಆಗಿತ್ತು. ದೇವರ್ಷಿ ನಾರದರು, ಯದುವಂಶದ ಹಿರಿಯರು ಮತ್ತು ಸ್ವಯಂ ಭಗವಾನ್ ಶ್ರೀಕೃಷ್ಣನೂ ಅವನ ಮಾತನ್ನು ಸಮರ್ಥಿಸಿದರು. ॥11॥
ಮೂಲಮ್
(ಶ್ಲೋಕ-12)
ಅಥಾದಿಶತ್ಪ್ರಯಾಣಾಯ ಭಗವಾನ್ ದೇವಕೀಸುತಃ ।
ಭೃತ್ಯಾನ್ದಾರುಕಜೈತ್ರಾದೀನನುಜ್ಞಾಪ್ಯ ಗುರೂನ್ ವಿಭುಃ ॥
ಅನುವಾದ
ಆಗ ಅಂತರ್ಯಾಮಿಯಾದ ಭಗವಾನ್ ಶ್ರೀಕೃಷ್ಣನು ವಸುದೇವನೇ ಮೊದಲಾದ ಹಿರಿಯರಿಂದ ಅನುಮತಿಯನ್ನು ಪಡೆದು ಸಾರಥಿಯಾದ ದಾರುಕನಿಗೆ ಮತ್ತು ಜೈತ್ರ ಮುಂತಾದ ಸೇವಕರಿಗೆ ಇಂದ್ರಪ್ರಸ್ಥಕ್ಕೆ ಹೋಗಲು ಸಿದ್ಧತೆಮಾಡಲು ಅಪ್ಪಣೆ ಮಾಡಿದನು. ॥12॥
ಮೂಲಮ್
(ಶ್ಲೋಕ-13)
ನಿರ್ಗಮಯ್ಯಾವರೋಧಾನ್ ಸ್ವಾನ್ ಸಸುತಾನ್ ಸಪರಿಚ್ಛದಾನ್ ।
ಸಂಕರ್ಷಣಮನುಜ್ಞಾಪ್ಯ ಯದುರಾಜಂ ಚ ಶತ್ರುಹನ್ ।
ಸೂತೋಪನೀತಂ ಸ್ವರಥಮಾರುಹದ್ಗರುಡಧ್ವಜಮ್ ॥
ಅನುವಾದ
ಅನಂತರ ಶ್ರೀಕೃಷ್ಣನು ಯದುರಾಜ ಉಗ್ರಸೇನ ಮತ್ತು ಬಲರಾಮನಿಂದ ಅಪ್ಪಣೆಯನ್ನು ಪಡೆದು ಮಕ್ಕಳೊಂದಿಗೆ ರಾಣಿಯರನ್ನು ಮತ್ತು ಅವರ ಸಾಮಗ್ರಿಗಳನ್ನು ಮುಂದಾಗಿ ಕಳಿಸಿಕೊಟ್ಟು ಮತ್ತೆ ದಾರುಕನು ಸಿದ್ಧಪಡಿಸಿ ತಂದಿರುವ ಗರುಡಧ್ವಜ ರಥದಲ್ಲಿ ತಾನು ಕುಳಿತನು. ॥13॥
ಮೂಲಮ್
(ಶ್ಲೋಕ-14)
ತತೋ ರಥದ್ವಿಪಭಟಸಾದಿನಾಯಕೈಃ
ಕರಾಲಯಾ ಪರಿವೃತ ಆತ್ಮಸೇನಯಾ ।
ಮೃದಂಗಭೇರ್ಯಾನಕಶಂಖಗೋಮುಖೈಃ
ಪ್ರಘೋಷಘೋಷಿತಕಕುಭೋ ನಿರಾಕ್ರಮತ್ ॥
ಅನುವಾದ
ಬಳಿಕ ಶ್ರೀಕೃಷ್ಣನು ಗಜಾಶ್ವ-ರಥ- ಪದಾತಿಗಳಿಂದ ಕೂಡಿದ ಚತುರಂಗ ಸೇನಾಸಮೇತನಾಗಿ ಇಂದ್ರಪ್ರಸ್ಥಕ್ಕೆ ಪ್ರಸ್ಥಾನಮಾಡಿದನು. ಆಗ ಮೃದಂಗ, ಭೇರಿ, ಡೊಳ್ಳು, ಶಂಖ, ಗೋಮುಖ ಮುಂತಾದ ವಾದ್ಯಗಳ ಧ್ವನಿಯು ದಶದಿಕ್ಕುಗಳಲ್ಲಿಯೂ ಪ್ರತಿಧ್ವನಿಸಿತು. ॥14॥
ಮೂಲಮ್
(ಶ್ಲೋಕ-15)
ನೃವಾಜಿಕಾಂಚನಶಿಬಿಕಾಭಿರಚ್ಯುತಂ
ಸಹಾತ್ಮಜಾಃ ಪತಿಮನು ಸುವ್ರತಾ ಯಯುಃ ।
ವರಾಂಬರಾಭರಣವಿಲೇಪನಸ್ರಜಃ
ಸುಸಂವೃತಾ ನೃಭಿರಸಿಚರ್ಮಪಾಣಿಭಿಃ ॥
ಅನುವಾದ
ಸತಿಶಿರೋಮಣಿ ರುಕ್ಮಿಣಿಯೇ ಮೊದಲಾದ ಸಾವಿರಾರು ಶ್ರೀಕೃಷ್ಣನ ಪತ್ನಿಯರು ತಮ್ಮ-ತಮ್ಮ ಸಂತಾನಗಳೊಂದಿಗೆ ಸುಂದರವಾದ ವಸ್ತ್ರಾಭೂಷಣಗಳಿಂದಲೂ, ಚಂದನ, ಅಂಗರಾಗ, ಪುಷ್ಪಹಾರಗಳಿಂದ ಅಲಂಕರಿಸಿಕೊಂಡು, ಸ್ವರ್ಣ ಪಲ್ಲಕ್ಕಿಗಳಲ್ಲಿ, ಡೋಲಿಗಳಲ್ಲಿ, ರಥಗಳಲ್ಲಿ ಕುಳಿತುಕೊಂಡು ಪತಿದೇವನಾದ ಶ್ರೀಕೃಷ್ಣನ ಹಿಂದೆಯೇ ಹೋಗುತ್ತಿದ್ದರು. ಕಾಲಾಳುಗಳು ಕೈಗಳಲ್ಲಿ ಕತ್ತಿ-ಗುರಾಣಿಗಳನ್ನು ಹಿಡಿದುಕೊಂಡು ಅವರನ್ನು ರಕ್ಷಿಸುತ್ತಾ ನಡೆಯುತ್ತಿದ್ದರು. ॥15॥
ಮೂಲಮ್
(ಶ್ಲೋಕ-16)
ನರೋಷ್ಟ್ರಗೋಮಹಿಷಖರಾಶ್ವತರ್ಯನಃ-
ಕರೇಣುಭಿಃ ಪರಿಜನವಾರಯೋಷಿತಃ ।
ಸ್ವಲಂಕೃತಾಃ ಕಟಕುಟಿಕಂಬಲಾಂಬರಾ-
ದ್ಯುಪಸ್ಕರಾ ಯಯುರಧಿಯುಜ್ಯ ಸರ್ವತಃ ॥
ಅನುವಾದ
ಹಾಗೆಯೇ ದಾಸ-ದಾಸಿಯರೂ, ವೇಶ್ಯೆಯರೂ, ವಸ್ತ್ರಾಭರಣಗಳಿಂದ ಅಲಂಕೃತರಾಗಿ ಚಾಪೆಗಳೂ, ಗುಡಾರಗಳೂ, ಕಂಬಳಿಗಳೂ, ವಸಗಳೂ ಮೊದಲಾದ ಸಾಮಗ್ರಿಗಳನ್ನು ಆಳುಗಳ ಮೇಲೆಯೂ ಒಂಟೆ, ಎತ್ತು, ಕೋಣ, ಹೇಸರಗತ್ತೆ, ಆನೆ-ಬಂಡಿಗಳು, ಇವುಗಳ ಮೇಲೆ ಹೇರಿಕೊಂಡು, ತಾವು ಪಲ್ಲಕ್ಕಿ, ಒಂಟೆ, ಎತ್ತಿನಗಾಡಿ, ಆನೆಗಳು ಇವುಗಳ ಮೆಲೆ ಕುಳಿತು ಪ್ರಯಾಣ ಮಾಡಿದರು. ॥16॥
ಮೂಲಮ್
(ಶ್ಲೋಕ-17)
ಬಲಂ ಬೃಹದ್ಧ್ವಜಪಟಛತ್ರಚಾಮರೈ-
ರ್ವರಾಯುಧಾಭರಣಕಿರೀಟವರ್ಮಭಿಃ ।
ದಿವಾಂಶುಭಿಸ್ತುಮುಲರವಂ ಬಭೌ ರವೇ-
ರ್ಯಥಾರ್ಣವಃ ಕ್ಷುಭಿತತಿಮಿಂಗಿಲೋರ್ಮಿಭಿಃ ॥
ಅನುವಾದ
ಮೊಸಳೆಗಳಿಂದಲೂ, ದೊಡ್ಡ-ದೊಡ್ಡ ಅಲೆಗಳಿಂದಲೂ ಭೋರ್ಗರೆಯುವ ಸಮುದ್ರವು ಶೋಭಿಸುವಂತೆಯೇ, ಭಯಂಕರ ಶಬ್ದಗಳಿಂದಲೂ ಹಾರಾಡುತ್ತಿದ್ದ ದೊಡ್ಡ-ದೊಡ್ಡ ಧ್ವಜ-ಪತಾಕೆಗಳಿಂದಲೂ, ಛತ್ರ-ಚಾಮರಗಳಿಂದಲೂ, ಶ್ರೇಷ್ಠವಾದ ಅಸ್ತ್ರ-ಶಸ್ತ್ರಗಳಿಂದಲೂ, ವಸ್ತ್ರಾಭೂಷಣಗಳಿಂದಲೂ, ಕಿರೀಟಗಳಿಂದಲೂ, ಕವಚಗಳಿಂದಲೂ ಕೂಡಿದ ಶ್ರೀಕೃಷ್ಣನ ಸೈನ್ಯದ ಮೇಲೆ ಬಿದ್ದ ಸೂರ್ಯಕಿರಣಗಳಿಂದ ಅದು ಅತ್ಯಂತ ಶೋಭಾಯಮಾನವಾಗಿ ಕಾಣುತ್ತಿತ್ತು. ॥17॥
ಮೂಲಮ್
(ಶ್ಲೋಕ-18)
ಅಥೋ ಮುನಿರ್ಯದುಪತಿನಾ ಸಭಾಜಿತಃ
ಪ್ರಣಮ್ಯ ತಂ ಹೃದಿ ವಿದಧದ್ವಿಹಾಯಸಾ ।
ನಿಶಮ್ಯ ತದ್ವ್ಯವಸಿತಮಾಹೃತಾರ್ಹಣೋ
ಮುಕುಂದಸಂದರ್ಶನನಿರ್ವೃತೇಂದ್ರಿಯಃ ॥
ಅನುವಾದ
ಶ್ರೀಕೃಷ್ಣನಿಂದ ಸಮ್ಮಾನಿತರಾದ ನಾರದ ಮಹರ್ಷಿಗಳು ಅವನ ನಿಶ್ಚಯವನ್ನು ಕೇಳಿ ಅತ್ಯಂತ ಪ್ರಸನ್ನರಾದರು. ಭಗವಂತನ ದರ್ಶನದಿಂದ ಅವರ ಹೃನ್ಮನಗಳೂ, ಇಂದ್ರಿಯಗಳೂ ಪರಮಾನಂದ ಭರಿತವಾದುವು. ಬೀಳ್ಕೊಡುವಾಗ ಶ್ರೀಕೃಷ್ಣನು ಅವರನ್ನು ನಾನಾ ವಿಧವಾದ ಸಾಮಗ್ರಿಗಳಿಂದ ಪೂಜಿಸಿದನು. ದೇವಋಷಿ ನಾರದರು ಶ್ರೀಕೃಷ್ಣನನ್ನು ವಂದಿಸುತ್ತಾ, ಅವನ ದಿವ್ಯಮೂರ್ತಿಯನ್ನು ಹೃದಯದಲ್ಲಿ ಧರಿಸಿಕೊಂಡು ಆಕಾಶಮಾರ್ಗದಿಂದ ಹೊರಟುಹೋದರು. ॥18॥
ಮೂಲಮ್
(ಶ್ಲೋಕ-19)
ರಾಜದೂತಮುವಾಚೇದಂ ಭಗವಾನ್ ಪ್ರೀಣಯನ್ ಗಿರಾ ।
ಮಾ ಭೈಷ್ಟ ದೂತ ಭದ್ರಂ ವೋ ಘಾತಯಿಷ್ಯಾಮಿ ಮಾಗಧಮ್ ॥
ಅನುವಾದ
ಬಳಿಕ ಭಗವಾನ್ ಶ್ರೀಕೃಷ್ಣನು ಜರಾಸಂಧನ ಬಂದಿಯಾದ ರಾಜರ ದೂತನಿಗೆ ಸುಮಧುರ ಮಾತಿನಿಂದ ಆಶ್ವಾಸನೆಯನ್ನೀಯುತ್ತಾ - ದೂತನೇ! ನೀನು ರಾಜರ ಬಳಿಗೆ ಹೋಗಿ - ‘ಹೆದರಬೇಡಿರಿ. ನಿಮ್ಮೆಲ್ಲರಿಗೆ ಮಂಗಳವಾಗಲಿ. ನಾನು ಜರಾಸಂಧನನ್ನು ಕೊಲ್ಲಿಸುವೆನು.’ ಎಂದು ಹೇಳು. ॥19॥
ಮೂಲಮ್
(ಶ್ಲೋಕ-20)
ಇತ್ಯುಕ್ತಃ ಪ್ರಸ್ಥಿತೋ ದೂತೋ ಯಥಾವದವದನ್ನೃಪಾನ್ ।
ತೇಪಿ ಸಂದರ್ಶನಂ ಶೌರೇಃ ಪ್ರತ್ಯೈಕ್ಷನ್ ಯನ್ಮುಮುಕ್ಷವಃ ॥
ಅನುವಾದ
ಹೀಗೆ ಭಗವಂತನ ಆಜ್ಞೆಯನ್ನು ಪಡೆದು ಆ ದೂತನು ಗಿರಿವ್ರಜಕ್ಕೆ ಹೊರಟು ಹೋದನು. ಅಲ್ಲಿ ರಾಜರಿಗೆ ಭಗವಾನ್ ಶ್ರೀಕೃಷ್ಣನ ಸಂದೇಶವನ್ನು ಯಥಾವತ್ತಾಗಿ ಮುಟ್ಟಿಸಿದನು. ಆ ರಾಜರೂ ಕೂಡ ಕಾರಾಗೃಹದಿಂದ ಬಿಡುಗಡೆ ಹೊಂದಲೂ, ಶೀಘ್ರವೇ ಭಗವಂತನ ಶುಭ ದರ್ಶನವನ್ನು ಪಡೆಯಲು ಕಾತರದಿಂದ ಪ್ರತೀಕ್ಷಿಸುತ್ತಿದ್ದರು. ॥20॥
ಮೂಲಮ್
(ಶ್ಲೋಕ-21)
ಆನರ್ತಸೌವೀರಮರೂಂಸ್ತೀರ್ತ್ವಾ ವಿನಶನಂ ಹರಿಃ ।
ಗಿರೀನ್ ನದೀರತೀಯಾಯ ಪುರಗ್ರಾಮವ್ರಜಾಕರಾನ್ ॥
ಅನುವಾದ
ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ದ್ವಾರಕೆಯಿಂದ ಹೊರಟು ಆನರ್ತ, ಸೌವೀರ, ಮರು, ಕುರುಕ್ಷೇತ್ರ ಇವುಗಳ ನಡುವೆ ಸಿಕ್ಕುವ ಪರ್ವತ ನದಿ, ನಗರ, ಗ್ರಾಮ, ಹಳ್ಳಿ, ಗಣಿಗಳಿದ್ದ ಪ್ರದೇಶಗಳನ್ನು ದಾಟಿ ಮುಂದರಿಯುತ್ತಿದ್ದನು. ॥21॥
ಮೂಲಮ್
(ಶ್ಲೋಕ-22)
ತತೋ ದೃಷದ್ವತೀಂ ತೀರ್ತ್ವಾ ಮುಕುಂದೋಥ ಸರಸ್ವತೀಮ್ ।
ಪಂಚಾಲಾನಥ ಮತ್ಸ್ಯಾಂಶ್ಚ ಶಕ್ರಪ್ರಸ್ಥಮಥಾಗಮತ್ ॥
ಅನುವಾದ
ಭಗವಾನ್ ಮುಕುಂದನು ದಾರಿಯಲ್ಲಿ ದೃಷದ್ವತೀ ಹಾಗೂ ಸರಸ್ವತೀ ನದಿಗಳನ್ನು ದಾಟಿ ಪಾಂಚಾಲ, ಮತ್ಸ್ಯ ದೇಶಗಳ ಮೂಲಕವಾಗಿ ಇಂದ್ರಪ್ರಸ್ಥವನ್ನು ತಲುಪಿದನು. ॥22॥
ಮೂಲಮ್
(ಶ್ಲೋಕ-23)
ತಮುಪಾಗತಮಾಕರ್ಣ್ಯ ಪ್ರೀತೋ ದುರ್ದರ್ಶನಂ ನೃಣಾಮ್ ।
ಅಜಾತಶತ್ರುರ್ನಿರಗಾತ್ ಸೋಪಾಧ್ಯಾಯಃ ಸುಹೃದ್ವ ತಃ ॥
ಅನುವಾದ
ಪರೀಕ್ಷಿತನೇ! ಮಾನವರಿಂದ ಸಂದರ್ಶಿಸಲು ಸುದುರ್ಲಭನಾದ ಶ್ರೀಕೃಷ್ಣನು ಪರಿವಾರ ಸಹಿತವಾಗಿ ತನ್ನ ರಾಜಧಾನಿಗೆ ಬರುತ್ತಿದ್ದಾನೆಂಬ ವಾರ್ತೆಯನ್ನು ಕೇಳಿ ಅಜಾತಶತ್ರುವಾದ ಯುಧಿಷ್ಠಿರನು ಹಿರಿ-ಹಿರಿ ಹಿಗ್ಗಿದನು. ಅವನು ಆಚಾರ್ಯರೊಡನೆಯೂ, ಸ್ವಜನಬಂಧುಗಳೊಂದಿಗೂ ಭಗವಂತನನ್ನು ಇದಿರ್ಗೊಳ್ಳಲು ಊರ ಹೊರಬಾಗಿಲಿಗೆ ಬಂದನು. ॥23॥
ಮೂಲಮ್
(ಶ್ಲೋಕ-24)
ಗೀತವಾದಿತ್ರಘೋಷೇಣ ಬ್ರಹ್ಮಘೋಷೇಣ ಭೂಯಸಾ ।
ಅಭ್ಯಯಾತ್ಸ ಹೃಷೀಕೇಶಂ ಪ್ರಾಣಾಃ ಪ್ರಾಣಮಿವಾದೃತಃ ॥
ಅನುವಾದ
ಮಂಗಳ ಗೀತೆಗಳು, ವಾದ್ಯಗಳು ಮೊಳಗಿದವು. ಅನೇಕ ಬ್ರಾಹ್ಮಣರು ಮಂತ್ರೋಚ್ಛಾರಣೆ ಮಾಡತೊಡಗಿದರು. ಇಂದ್ರಿಯಗಳು ಮುಖ್ಯ ಪ್ರಾಣದೊಡನೆ ಸೇರುವಂತೆ ಯುಧಿಷ್ಠಿರನು ಭಗವಾನ್ ಹೃಷಿಕೇಶನನ್ನು ಸ್ವಾಗತಿಸಲು ಮುಂದಾದನು. ॥24॥
ಮೂಲಮ್
(ಶ್ಲೋಕ-25)
ದೃಷ್ಟ್ವಾ ವಿಕ್ಲಿನ್ನಹೃದಯಃ ಕೃಷ್ಣಂ ಸ್ನೇಹೇನ ಪಾಂಡವಃ ।
ಚಿರಾದ್ದೃಷ್ಟಂ ಪ್ರಿಯತಮಂ ಸಸ್ವಜೇಥ ಪುನಃ ಪುನಃ ॥
ಅನುವಾದ
ಭಗವಾನ್ ಶ್ರೀಕೃಷ್ಣನನ್ನು ನೋಡಿದ ಯುಧಿಷ್ಠಿರನ ಹೃದಯವು ಸ್ನೇಹಾತಿರೇಕದಿಂದ ಗದ್ಗದವಾಯಿತು. ಬಹಳ ದಿವಸಗಳ ಬಳಿದ ತನ್ನ ಪ್ರಿಯನಾದ ಭಗವಾನ್ ಶ್ರೀಕೃಷ್ಣನನ್ನು ನೋಡುವ ಸೌಭಾಗ್ಯವು ಒದಗಿತ್ತು. ಆದ್ದರಿಂದ ಅವನು ಕೃಷ್ಣನನ್ನು ಬಾರಿ-ಬಾರಿಗೂ ಆಲಿಂಗಿಸಿಕೊಂಡನು. ॥25॥
ಮೂಲಮ್
(ಶ್ಲೋಕ-26)
ದೋರ್ಭ್ಯಾಂ ಪರಿಷ್ವಜ್ಯ ರಮಾಮಲಾಲಯಂ
ಮುಕುಂದಗಾತ್ರಂ ನೃಪತಿರ್ಹತಾಶುಭಃ ।
ಲೇಭೇ ಪರಾಂ ನಿರ್ವೃತಿಮಶ್ರುಲೋಚನೋ
ಹೃಷ್ಯತ್ತನುರ್ವಿಸ್ಮೃತಲೋಕವಿಭ್ರಮಃ ॥
ಅನುವಾದ
ಭಗವಾನ್ ಶ್ರೀಕೃಷ್ಣನ ಶ್ರೀವಿಗ್ರಹವು ಲಕ್ಷ್ಮೀದೇವಿಗೆ ಪವಿತ್ರವೂ, ವಾಸಸ್ಥಾನವೂ ಆಗಿದೆ. ಯುಧಿಷ್ಠಿರನು ತನ್ನೆರಡೂ ಭುಜಗಳಿಂದ ಅದನ್ನು ಆಲಿಂಗಿಸಿಕೊಂಡು ಸಮಸ್ತ ಪಾಪ-ತಾಪಗಳಿಂದ ಬಿಡುಗಡೆ ಹೊಂದಿದನು. ಅವನು ಪರಮಾನಂದದ ಸಾಗರದಲ್ಲಿ ಮುಳುಗಿ ಹೋದನು. ಕಣ್ಣುಗಳಿಂದ ಆನಂದಾಶ್ರುಗಳು ಸುರಿಯುತ್ತಿದ್ದು, ಶರೀರ ಪುಳಕಗೊಂಡಿತು. ಅವನು ಲೋಕವ್ಯವಹಾರವನ್ನೇ ಸಂಪೂರ್ಣವಾಗಿ ಮರೆತುಬಿಟ್ಟನು. ॥26॥
ಮೂಲಮ್
(ಶ್ಲೋಕ-27)
ತಂ ಮಾತುಲೇಯಂ ಪರಿರಭ್ಯ ನಿರ್ವೃತೋ
ಭೀಮಃ ಸ್ಮಯನ್ ಪ್ರೇಮಜವಾಕುಲೇಂದ್ರಿಯಃ ।
ಯವೌ ಕಿರೀಟೀ ಚ ಸುಹೃತ್ತಮಂ ಮುದಾ
ಪ್ರವೃದ್ಧಬಾಷ್ಪಾಃ ಪರಿರೇಭಿರೇಚ್ಯುತಮ್ ॥
ಅನುವಾದ
ಅನಂತರ ಭೀಮಸೇನನು ನಸುನಗುತ್ತಾ ಸೋದರ ಮಾವನ ಮಗನಾದ ಶ್ರೀಕೃಷ್ಣನನ್ನು ಗಾಢವಾಗಿ ಆಲಿಂಗಿಸಿಕೊಂಡು ಆನಂದಿಸಿದನು. ಪ್ರೇಮಾತಿಶಯದಿಂದ ಪರವಶನಾಗಿ ಬಾಹ್ಯಸ್ಮೃತಿಯೇ ಸ್ತಬ್ಧವಾಯಿತು. ಅರ್ಜುನ-ನಕುಲ-ಸಹದೇವರೂ ಕೂಡ ತಮಗೆ ಅತ್ಯಂತ ಪ್ರಿಯನಾದ ಶ್ರೀಕೃಷ್ಣನನ್ನು ಆನಂದದಿಂದ ಆಲಿಂಗಿಸಿಕೊಂಡರು. ಆಗ ಅವರ ಕಣ್ಣುಗಳಿಂದ ಆನಂದಬಾಷ್ಟಗಳು ಸುರಿಯುತ್ತಿದ್ದವು. ॥27॥
ಮೂಲಮ್
(ಶ್ಲೋಕ-28)
ಅರ್ಜುನೇನ ಪರಿಷ್ವಕ್ತೋ ಯಮಾಭ್ಯಾಮಭಿವಾದಿತಃ ।
ಬ್ರಾಹ್ಮಣೇಭ್ಯೋ ನಮಸ್ಕೃತ್ಯ ವೃದ್ಧೇಭ್ಯಶ್ಚ ಯಥಾರ್ಹತಃ ॥
ಅನುವಾದ
ಅರ್ಜುನನು ಪುನಃ ಭಗವಂತನನ್ನು ಆಲಿಂಗಿಸಿಕೊಂಡನು. ನಕುಲ-ಸಹದೇವರು ಅಭಿವಾದನ ಮಾಡಿದರು ಮತ್ತು ಭಗವಾನ್ ಶ್ರೀಕೃಷ್ಣನು ಬ್ರಾಹ್ಮಣರನ್ನೂ, ಕುರುವಂಶೀ ವೃದ್ಧರನ್ನೂ ಯಥಾಯೋಗ್ಯವಾಗಿ ನಮಸ್ಕಾರ ಮಾಡಿದನು. ॥28॥
ಮೂಲಮ್
(ಶ್ಲೋಕ-29)
ಮಾನಿತೋ ಮಾನಯಾಮಾಸ ಕುರುಸೃಂಜಯಕೈಕಯಾನ್ ।
ಸೂತಮಾಗಧಗಂಧರ್ವಾ ವಂದಿನಶ್ಚೋಪಮಂತ್ರಿಣಃ ॥
(ಶ್ಲೋಕ-30)
ಮೃದಂಗಶಂಖಪಟಹವೀಣಾಪಣವಗೋಮುಖೈಃ ।
ಬ್ರಾಹ್ಮಣಾಶ್ಚಾರವಿಂದಾಕ್ಷಂ ತುಷ್ಟುವುರ್ನನೃತುರ್ಜಗುಃ ॥
ಅನುವಾದ
ಕುರು, ಸೃಂಜಯ, ಕೇಕಯ ದೇಶದ ರಾಜರೂ ಭಗವಾನ್ ಶ್ರೀಕೃಷ್ಣನನ್ನು ಸಮ್ಮಾನಿಸಿದರು. ಭಗವಂತನೂ ಅವರನ್ನು ಯಥೋಚಿತವಾಗಿ ಸತ್ಕರಿಸಿದನು. ಸೂತ-ಮಾಗಧ-ವಂದೀಜನರು ಮತ್ತು ಬ್ರಾಹ್ಮಣರು ಭಗವಂತನನ್ನು ಸ್ತುತಿಸತೊಡಗಿದರು. ಗಂಧರ್ವರು, ನಟರು, ವಿದೂಷಕ ಮುಂತಾದವರು ಮೃದಂಗ, ಶಂಖ, ಡೋಲು, ವೀಣೆ, ಕೊಂಬು-ಕಹಳೆಗಳನ್ನು ನುಡಿಸುತ್ತಾ, ಹಾಡುತ್ತಾ, ನರ್ತನವಾಡಿದರು. ॥29-30॥
ಮೂಲಮ್
(ಶ್ಲೋಕ-31)
ಏವಂ ಸುಹೃದ್ಭಿಃ ಪರ್ಯಸ್ತಃ ಪುಣ್ಯಶ್ಲೋಕಶಿಖಾಮಣಿಃ ।
ಸಂಸ್ತೂಯಮಾನೋ ಭಗವಾನ್ ವಿವೇಶಾಲಂಕೃತಂ ಪುರಮ್ ॥
ಅನುವಾದ
ಹೀಗೆ ಪುಣ್ಯಶ್ಲೋಕ ಶಿರೋಮಣಿಯಾದ ಶ್ರೀಕೃಷ್ಣನು ಸುಹೃದ್-ಸ್ವಜನರೊಂದಿಗೆ ಸರ್ವಾಲಂಕಾರ ಶೋಭಿತವಾದ ಇಂದ್ರಪ್ರಸ್ಥ ನಗರಿಯನ್ನು ಪ್ರವೇಶಿಸಿದನು. ಆ ಸಮಯದಲ್ಲಿ ಜನರು ಪರಸ್ಪರವಾಗಿ ಭಗವಾನ್ ಶ್ರೀಕೃಷ್ಣನನ್ನು ಪ್ರಶಂಸಿಸುತ್ತಾ ನಡೆಯುತ್ತಿದ್ದರು. ॥31॥
ಮೂಲಮ್
(ಶ್ಲೋಕ-32)
ಸಂಸಿಕ್ತವರ್ತ್ಮ ಕರಿಣಾಂ ಮದಗಂಧತೋಯೈ-
ಶ್ಚಿತ್ರಧ್ವಜೈಃ ಕನಕತೋರಣಪೂರ್ಣಕುಂಭೈಃ ।
ಮೃಷ್ಟಾತ್ಮಭಿರ್ನವದುಕೂಲವಿಭೂಷಣಸ್ರಗ್
ಗಂಧೈರ್ನೃಭಿರ್ಯುವತಿಭಿಶ್ಚ ವಿರಾಜಮಾನಮ್ ॥
ಅನುವಾದ
ಇಂದ್ರಪ್ರಸ್ಥ ನಗರದ ಮಾರ್ಗಗಳು ಮದಿಸಿದ ಆನೆಗಳ ಸುಗಂಧಯುಕ್ತವಾದ ಮದೋದಕದಿಂದ ತೋಯಿಸಲ್ಪಟ್ಟಿದ್ದವು. ಅಲ್ಲಲ್ಲಿ ಬಣ್ಣ-ಬಣ್ಣದ ಧ್ವಜ-ಪತಾಕೆಗಳು ಹಾರಾಡುತ್ತಿದ್ದವು. ಚಿನ್ನದ ತೋರಣಗಳನ್ನು ಕಟ್ಟಿದ್ದರು. ನೀರು ತುಂಬಿದ ಚಿನ್ನದ ಕಲಶಗಳನ್ನು ಶ್ರೀಕೃಷ್ಣನ ಸ್ವಾಗತಕ್ಕಾಗಿ ಎಲ್ಲೆಡೆಗಳಲ್ಲಿ ಇಡಲ್ಪಟ್ಟಿದ್ದವು. ನಗರದ ನರ-ನಾರಿಯರು ನೂತನವಸ್ತ್ರಗಳನ್ನು, ಆಭರಣಗಳನ್ನು ತೊಟ್ಟು, ಪುಷ್ಪಮಾಲಿಕೆಗಳನ್ನು ಧರಿಸಿಕೊಂಡು, ಸುಗಂಧ ದ್ರವ್ಯಗಳನ್ನು ಪೂಸಿಕೊಂಡು ಸರ್ವಾಲಂಕಾರ ಭೂಷಿತರಾಗಿ ಓಡಾಡುತ್ತಿದ್ದರು. ॥32॥
ಮೂಲಮ್
(ಶ್ಲೋಕ-33)
ಉದ್ದೀಪ್ತದೀಪಬಲಿಭಿಃ ಪ್ರತಿಸದ್ಮಜಾಲ-
ನಿರ್ಯಾತಧೂಪರುಚಿರಂ ವಿಲಸತ್ಪತಾಕಮ್ ।
ಮೂರ್ಧನ್ಯಹೇಮಕಲಶೈ ರಜತೋರುಶೃಂಗೈ-
ರ್ಜುಷ್ಟಂ ದದರ್ಶ ಭವನೈಃ ಕುರುರಾಜಧಾಮ ॥
ಅನುವಾದ
ಮನೆ-ಮನೆ ಹೊಸ್ತಿಲುಗಳಲ್ಲಿ ದೀಪಗಳನ್ನು ಬೆಳಗಿಸಿದ್ದರು, ಅದನ್ನು ನೋಡಿದಾಗ ದೀಪಾವಳಿಯೇ ನೆನಪಾಗುತ್ತಿತ್ತು. ಪ್ರತಿಯೊಂದು ಮನೆಗಳ ಗವಾಕ್ಷಿಗಳಿಂದ ಅಗರು ರೂಪದ ಹೊಗೆ ಹೊರ ಸೂಸುತ್ತಿತ್ತು. ಎಲ್ಲ ಮನೆಗಳ ಮೇಲೆಯೂ ಧ್ವಜಗಳು ಹಾರಾಡುತ್ತಿದ್ದು, ಬೆಳ್ಳಿಯ ಶಿಖರಗಳಿದ್ದು, ಚಿನ್ನದ ಕಲಶಗಳು ಹೊಳೆಯುತ್ತಿದ್ದುವು. ಇಂತಹ ಸೌಧಗಳಿಂದ ಕೂಡಿದ್ದ ಪಾಂಡವರ ರಾಜಧಾನಿ ಇಂದ್ರಪ್ರಸ್ಥವನ್ನು ನೋಡುತ್ತಾ ಭಗವಾನ್ ಶ್ರೀಕೃಷ್ಣನು ಮುಂದರಿಯುತ್ತಿದ್ದನು. ॥33॥
ಮೂಲಮ್
(ಶ್ಲೋಕ-34)
ಪ್ರಾಪ್ತಂ ನಿಶಮ್ಯ ನರಲೋಚನಪಾನಪಾತ್ರ-
ವೌತ್ಸುಕ್ಯವಿಶ್ಲಥಿತಕೇಶದುಕೂಲಬಂಧಾಃ ।
ಸದ್ಯೋ ವಿಸೃಜ್ಯ ಗೃಹಕರ್ಮ ಪತೀಂಶ್ಚ ತಲ್ಪೇ
ದ್ರಷ್ಟುಂ ಯಯುರ್ಯುವತಯಃ ಸ್ಮ ನರೇಂದ್ರಮಾರ್ಗೇ ॥
ಅನುವಾದ
ಮನುಷ್ಯರ ಕಣ್ಣುಗಳ ಪಾನಪಾತ್ರೆ ಅರ್ಥಾತ್ ಅತ್ಯಂತ ದರ್ಶನೀಯನಾದ ಭಗವಾನ್ ಶ್ರೀಕೃಷ್ಣನು ರಾಜಮಾರ್ಗದಲ್ಲಿ ಬರುತ್ತಿರುವನೆಂದು ಕೇಳಿದ ನಗರದ ಯುವತಿಯರು ಅವನ ದರ್ಶನದ ಔತ್ಸುಕ್ಯದಿಂದ ಮನೆಯ ಕೆಲಸವನ್ನು ಅಷ್ಟಕ್ಕೆ ನಿಲ್ಲಿಸಿ, ತಮ್ಮ ಗಂಡಂದಿರನ್ನೂ ಬಿಟ್ಟು ಅವರಿಗೂ ಹೇಳದೆ ಓಡಿ ಹೋಗುತ್ತಿರುವಾಗ ಮುಡಿಯು ಬಿಚ್ಚಿಹೋಗಿರುವುದನ್ನು, ಉಟ್ಟಸೀರೆಯು ಸಡಲಿಸಿರುವುದನ್ನು ಗಮನಿಸದೆ ಧಾವಿಸಿ ರಾಜಬೀದಿಗೆ ಬಂದರು. ॥34॥
ಮೂಲಮ್
(ಶ್ಲೋಕ-35)
ತಸ್ಮಿನ್ ಸುಸಂಕುಲ ಇಭಾಶ್ವರಥದ್ವಿಪದ್ಭಿಃ
ಕೃಷ್ಣಂ ಸಭಾರ್ಯಮುಪಲಭ್ಯ ಗೃಹಾಧಿರೂಢಾಃ ।
ನಾರ್ಯೋ ವಿಕೀರ್ಯ ಕುಸುಮೈರ್ಮನಸೋಪಗುಹ್ಯ
ಸುಸ್ವಾಗತಂ ವಿದಧುರುತ್ಸ್ಮಯವೀಕ್ಷಿತೇನ ॥
ಅನುವಾದ
ರಥಾಶ್ವ-ಗಜ-ಪದಾತಿ ಸೈನಿಕರಿಂದ ಸಮಾಕುಲವಾಗಿದ್ದ ರಾಜ ಪಥದಲ್ಲಿ ಪತ್ನಿಯರ ಸಮೇತನಾಗಿ ಬರುತ್ತಿದ್ದ ಭಗವಾನ್ ಶ್ರೀಕೃಷ್ಣನನ್ನು ಮನೆಗಳ ಉಪ್ಪರಿಗೆಗಳ ಮೇಲೆ ನಿಂತ ಸೀಯರು ದರ್ಶನಮಾಡಿ ಅವನ ಮೇಲೆ ಹೂವಿನ ಮಳೆಯನ್ನು ಸುರಿಸಿದರು. ಮನಸ್ಸಿನಿಂದಲೇ ಜಗದಾನಂದ ಕಂದನನ್ನು ಆಲಿಂಗಿಸಿಕೊಂಡು, ಪ್ರೇಮ ಪೂರ್ಣವಾದ ಮಂದಹಾಸದಿಂದಲೂ, ಕಡೆಗಣ್ಣ ನೋಟಗಳಿಂದಲೂ ಶ್ರೀಕೃಷ್ಣನನ್ನು ಸ್ವಾಗತಿಸಿದರು. ॥35॥
ಮೂಲಮ್
(ಶ್ಲೋಕ-36)
ಊಚುಃ ಸಿಯಃ ಪಥಿ ನಿರೀಕ್ಷ್ಯ ಮುಕುಂದಪತ್ನೀ-
ಸ್ತಾರಾ ಯಥೋಡುಪಸಹಾಃ ಕಿಮಕಾರ್ಯಮೂಭಿಃ ।
ಯಚ್ಚಕ್ಷುಷಾಂ ಪುರುಷವೌಲಿರುದಾರಹಾಸ-
ಲೀಲಾವಲೋಕಕಲಯೋತ್ಸವಮಾತನೋತಿ ॥
ಅನುವಾದ
ನಗರದ ನಾರಿಯರು ರಾಜಪಥದಲ್ಲಿ ಚಂದ್ರನೊಡನೆ ಇರುವ ನಕ್ಷತ್ರ ದೇವತೆಗಳಂತಿದ್ದ ಶ್ರೀಕೃಷ್ಣನ ಪತ್ನಿಯರನ್ನು ನೋಡಿ ಹೀಗೆ ಮಾತಾಡಿಕೊಂಡರು - ಸಖಿಯರೇ! ಪುರುಷಶ್ರೇಷ್ಠನಾದ ಶ್ರೀಕೃಷ್ಣನು ಉದಾರವಾದ ಹಾಸ್ಯದಿಂದಲೂ, ವಿಲಾಸಪೂರ್ಣ ಕಟಾಕ್ಷ ವೀಕ್ಷಣದಿಂದಲೂ ತನ್ನ ಪತ್ನಿಯರ ಕಡೆಗೆ ನೋಡುತ್ತಾ ಅವರ ಕಣ್ಣುಗಳಿಗೆ ಪರಮಾನಂದಪ್ರದನಾಗಿದ್ದಾನೆ. ಇಂತಹ ಸೌಭಾಗ್ಯವನ್ನು ಪಡೆಯಲು ಇವರು ಎಂತಹ ಪುಣ್ಯ ಕಾರ್ಯಗಳನ್ನು ಮಾಡಿದ್ದರು? ॥36॥
ಮೂಲಮ್
(ಶ್ಲೋಕ-37)
ತತ್ರ ತತ್ರೋಪಸಂಗಮ್ಯ ಪೌರಾ ಮಂಗಲಪಾಣಯಃ ।
ಚಕ್ರುಃ ಸಪರ್ಯಾಂ ಕೃಷ್ಣಾಯ ಶ್ರೇಣೀಮುಖ್ಯಾ ಹತೈನಸಃ ॥
ಅನುವಾದ
ಹೀಗೆ ಭಗವಾನ್ ಶ್ರೀಕೃಷ್ಣನು ರಾಜಬೀದಿಯಲ್ಲಿ ಹೋಗುತ್ತಿದ್ದಾಗ ಅಲ್ಲಲ್ಲಿ ಪುಣ್ಯಾತ್ಮರಾದ ಶ್ರೀಮಂತರೂ, ವ್ಯಾಪಾರಿಗಳೂ, ಪರಜನರೂ ಅನೇಕ ಮಾಂಗಲಿಕ ದ್ರವ್ಯಗಳನ್ನು ತಂದು-ತಂದು ಶ್ರೀಕೃಷ್ಣನನ್ನು ಪೂಜಿಸಿ, ಸ್ವಾಗತಿಸಿ, ಸತ್ಕರಿಸುತ್ತಿದ್ದರು. ॥37॥
ಮೂಲಮ್
(ಶ್ಲೋಕ-38)
ಅಂತಃಪುರಜನೈಃ ಪ್ರೀತ್ಯಾ ಮುಕುಂದಃ ುಲ್ಲಲೋಚನೈಃ ।
ಸಸಂಭ್ರಮೈರಭ್ಯುಪೇತಃ ಪ್ರಾವಿಶದ್ರಾಜಮಂದಿರಮ್ ॥
ಅನುವಾದ
ಅಂತಃಪುರದ ಸ್ತ್ರೀಯರು ಭಗವಾನ್ ಶ್ರೀಕೃಷ್ಣನನ್ನು ನೋಡಿ ಪ್ರೇಮಾನಂದದಲ್ಲಿ ಮುಳುಗಿಹೋದರು. ಅವರು ಪ್ರೇಮವಿಹ್ವಲ ಮತ್ತು ಆನಂದದಿಂದ ಅರಳಿದ್ದ ತಮ್ಮ ಕಣ್ಣುಗಳಿಂದ ಭಗವಂತನನ್ನು ಸ್ವಾಗತಿಸಿ ಸತ್ಕರಿಸಿದರು. ಅವರ ಸ್ವಾಗತ-ಸತ್ಕಾರವನ್ನು ಸ್ವೀಕರಿಸುತ್ತಾ ಶ್ರೀಕೃಷ್ಣನು ಅರಮನೆಯನ್ನು ಪ್ರವೇಶಿಸಿದನು. ॥38॥
ಮೂಲಮ್
(ಶ್ಲೋಕ-39)
ಪೃಥಾ ವಿಲೋಕ್ಯ ಭ್ರಾತ್ರೇಯಂ ಕೃಷ್ಣಂ ತ್ರಿಭುವನೇಶ್ವರಮ್ ।
ಪ್ರೀತಾತ್ಮೋತ್ಥಾಯ ಪರ್ಯಂಕಾತ್ಸಸ್ನುಷಾ ಪರಿಷಸ್ವಜೇ ॥
ಅನುವಾದ
ಕುಂತಿಯು ತ್ರಿಭುವ ನೇಶ್ವರನಾದ ತನ್ನ ಅಣ್ಣನ ಮಗನಾದ ಶ್ರೀಕೃಷ್ಣನನ್ನು ನೋಡಿದಾಗ ಆಕೆಯ ಹೃದಯಪ್ರೇಮದಿಂದ ತುಂಬಿ ಬಂತು. ಅವಳು ಮಂಚದಿಂದಿಳಿದು ಸೊಸೆಯಾದ ದ್ರೌಪದಿಯೊಡನೆ ಮುಂದೆ ಬಂದು ಶ್ರೀಕೃಷ್ಣನನ್ನು ಗಾಢವಾಗಿ ಆಲಿಂಗಿಸಿಕೊಂಡಳು. ॥39॥
ಮೂಲಮ್
(ಶ್ಲೋಕ-40)
ಗೋವಿಂದಂ ಗೃಹಮಾನೀಯ ದೇವದೇವೇಶಮಾದೃತಃ ।
ಪೂಜಾಯಾಂ ನಾವಿದತ್ ಕೃತ್ಯಂ ಪ್ರಮೋದೋಪಹತೋ ನೃಪಃ ॥
ಅನುವಾದ
ದೇವದೇವೇಶ್ವರ ಭಗವಾನ್ ಶ್ರೀಕೃಷ್ಣನನ್ನು ಆದರ ಭಾವದಿಂದ ಅರಮನೆಯೊಳಗೆ ಕರೆತಂದಾಗ ಯುಧಿಷ್ಠಿರನು ಆನಂದೋದ್ರೇಕದಿಂದ ಮೈಮರೆತನು. ಭಗವಂತನನ್ನು ಯಾವ ವಿಧದಿಂದ ಪೂಜಿಸಬೇಕೆಂಬುದು ತಿಳಿಯದೆ ಹೋಯಿತು.॥40॥
ಮೂಲಮ್
(ಶ್ಲೋಕ-41)
ಪಿತೃಷ್ವಸುರ್ಗುರುಸೀಣಾಂ ಕೃಷ್ಣಶ್ಚಕ್ರೇಭಿವಾದನಮ್ ।
ಸ್ವಯಂ ಚ ಕೃಷ್ಣಯಾ ರಾಜನ್ ಭಗಿನ್ಯಾ ಚಾಭಿವಂದಿತಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ತನ್ನ ಅತ್ತೆ ಕುಂತಿಯನ್ನು ಹಾಗೂ ಗುರುಪತ್ನಿಯರಿಗೂ ನಮಸ್ಕರಿಸಿದನು. ಅವನ ತಂಗಿಯಾದ ಸುಭದ್ರೆ ಮತ್ತು ದ್ರೌಪದಿಯು ಭಗವಂತನಿಗೆ ನಮಸ್ಕರಿಸಿದರು.॥41॥
ಮೂಲಮ್
(ಶ್ಲೋಕ-42)
ಶ್ವಶ್ರ್ವಾ ಸಂಚೋದಿತಾ ಕೃಷ್ಣಾ ಕೃಷ್ಣಪತ್ನೀಶ್ಚ ಸರ್ವಶಃ ।
ಆನರ್ಚ ರುಕ್ಮಿಣೀಂ ಸತ್ಯಾಂ ಭದ್ರಾಂ ಜಾಂಬವತೀಂ ತಥಾ ॥
(ಶ್ಲೋಕ-43)
ಕಾಲಿಂದೀಂ ಮಿತ್ರವಿಂದಾಂ ಚ ಶೈಬ್ಯಾಂ ನಾಗ್ನಜಿತೀಂ ಸತೀಮ್ ।
ಅನ್ಯಾಶ್ಚಾಭ್ಯಾಗತಾ ಯಾಸ್ತು ವಾಸಃಸ್ರಙ್ಮಂಡನಾದಿಭಿಃ ॥
ಅನುವಾದ
ಅತ್ತೆಯಾದ ಕುಂತೀದೇವಿಯ ಪ್ರೇರಣೆಯಂತೆ ದ್ರೌಪದಿಯು ರುಕ್ಮಿಣೀ, ಸತ್ಯಭಾಮೆ, ಭದ್ರಾ, ಜಾಂಬವತೀ, ಕಾಲಿಂದೀ, ಮಿತ್ರ ವಿಂದಾ, ಲಕ್ಷ್ಮಣಾ ಮತ್ತು ಸತ್ಯಾ ಮೊದಲಾದ ಶ್ರೀಕೃಷ್ಣನ ಪಟ್ಟದರಾಣಿಯರನ್ನು ಹಾಗೂ ಅಲ್ಲಿಗೆ ಬಂದ ಶ್ರೀಕೃಷ್ಣನ ಇತರ ರಾಣಿಯರನ್ನು ವಸ್ತ್ರಾಭರಣ, ಪುಷ್ಪಹಾರಗಳಿಂದ ಯಥಾಯೋಗ್ಯವಾಗಿ ಸತ್ಕರಿಸಿದಳು. ॥42-43॥
ಮೂಲಮ್
(ಶ್ಲೋಕ-44)
ಸುಖಂ ನಿವಾಸಯಾಮಾಸ ಧರ್ಮರಾಜೋ ಜನಾರ್ದನಮ್ ।
ಸಸೈನ್ಯಂ ಸಾನುಗಾಮಾತ್ಯಂ ಸಭಾರ್ಯಂ ಚ ನವಂ ನವಮ್ ॥
ಅನುವಾದ
ಧರ್ಮರಾಜ ಯುಧಿಷ್ಠಿರನು ಶ್ರೀಕೃಷ್ಣನಿಗೆ ಅವನ ಸೈನ್ಯಕ್ಕೆ, ಸೇವಕ-ಮಂತ್ರಿಗಳಿಗೆ ಹಾಗೂ ಪತ್ನಿಯರಿಗೆ ಯಥಾಯೋಗ್ಯವಾದ ಸುಖಕರ ವಸತಿಗಳನ್ನು ಏರ್ಪಡಿಸಿಕೊಟ್ಟು ಅನುದಿನವು ಹೊಸ-ಹೊಸ ಬಗೆಯ ಸತ್ಕಾರಗಳಿಂದ ಅವರೆಲ್ಲರನ್ನು ಉಪಚರಿಸುತ್ತಿದ್ದನು. ॥44॥
ಮೂಲಮ್
(ಶ್ಲೋಕ-45)
ತರ್ಪಯಿತ್ವಾ ಖಾಂಡವೇನ ವಹ್ನಿಂ ಫಾಲ್ಗುನಸಂಯುತಃ ।
ಮೋಚಯಿತ್ವಾ ಮಯಂ ಯೇನ ರಾಜ್ಞೇ ದಿವ್ಯಾ ಸಭಾ ಕೃತಾ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಅರ್ಜುನನೊಂದಿಗೆ ಇದ್ದು ಖಾಂಡವವನವನ್ನು ದಹಿಸಲು ಅಗ್ನಿಗೆ ಅನುವುಮಾಡಿಕೊಟ್ಟು ಅವನನ್ನು ತೃಪ್ತ ಪಡಿಸಿದನು. ಆ ಅಗ್ನಿಯಿಂದ ಬದುಕಿಸಿದ್ದ ಮಾಯಾಸುರನು ಭಗವಂತನ ಆಜ್ಞೆಯಂತೆ ಯುಧಿಷ್ಠಿರನಿಗೆ ದಿವ್ಯವಾದೊಂದು ಸಭಾಭವನವನ್ನು ನಿರ್ಮಿಸಿಕೊಟ್ಟನು. ॥45॥
ಮೂಲಮ್
(ಶ್ಲೋಕ-46)
ಉವಾಸ ಕತಿಚಿನ್ಮಾಸಾನ್ ರಾಜ್ಞಃ ಪ್ರಿಯಚಿಕೀರ್ಷಯಾ ।
ವಿಹರನ್ರಥಮಾರುಹ್ಯ ಫಾಲ್ಗುನೇನ ಭಟೈರ್ವೃತಃ ॥
ಅನುವಾದ
ಶ್ರೀಕೃಷ್ಣನು ಯುಧಿಷ್ಠಿರನನ್ನು ಸಂತೋಷಪಡಿಸಲೆಂದೇ ಕೆಲವು ತಿಂಗಳುಗಳ ಕಾಲ ಇಂದ್ರಪ್ರಸ್ಥದಲ್ಲೇ ಉಳಿದುಕೊಂಡನು. ಅವನು ಆಗಾಗ ಅರ್ಜುನನೊಡನೆ ರಥದಲ್ಲಿ ಕುಳಿತು ಅಲ್ಲಿ-ಇಲ್ಲಿ ಸಂಚರಿಸುತ್ತಿದ್ದನು. ಆಗ ಮಹಾ-ಮಹಾ ವೀರ ಸೈನಿಕರೂ ಕೂಡ ಅವರ ಸೇವೆಗೆ ಜೊತೆಯಲ್ಲೇ ಹೋಗುತ್ತಿದ್ದರು. ॥46॥
ಅನುವಾದ (ಸಮಾಪ್ತಿಃ)
ಎಪ್ಪತ್ತೊಂದನೆಯ ಅಧ್ಯಾಯವು ಮುಗಿಯಿತು. ॥71॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ ಕೃಷ್ಣಸ್ಯೇಂದ್ರಪ್ರಸ್ಥಗಮನಂ ನಾಮೈಕಸಪ್ತತಿತಮೋಽಧ್ಯಾಯಃ ॥71॥