[ಏಪ್ಪತ್ತನೇಯ ಅಧ್ಯಾಯ]
ಭಾಗಸೂಚನಾ
ಶ್ರೀಕೃಷ್ಣನ ದಿನಚರ್ಯೆ ಮತ್ತು ಜರಾಸಂಧನ ಬಂದಿಗಳಾಗಿದ್ದ ರಾಜರ ದೂತನ ಆಗಮನ
ಮೂಲಮ್
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಅಥೋಷಸ್ಯುಪವೃತ್ತಾಯಾಂ ಕುಕ್ಕುಟಾನ್ ಕೂಜತೋಶಪನ್ ।
ಗೃಹೀತಕಂಠ್ಯಃ ಪತಿಭಿರ್ಮಾಧವ್ಯೋ ವಿರಹಾತುರಾಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಬೆಳಗಾಗಿ ಕೋಳಿ ಕೂಗುತ್ತಲೇ ಶ್ರೀಕೃಷ್ಣನ ಬಾಹುಲತೆಗಳಿಂದ ಬಳಸಲ್ಪಟ್ಟ ಕಂಠಗಳುಳ್ಳ ಶ್ರೀಕೃಷ್ಣನ ಪತ್ನಿಯರು ಕಾಂತನು ನಮ್ಮನ್ನು ಅಗಲುವನೆಂಬ ಆಶಂಕೆಯಿಂದ ವ್ಯಾಕುಲರಾಗಿ ಕೋಳಿಗಳನ್ನೇ ಬೈಯ್ಯುತ್ತಿದ್ದರು. ॥1॥
ಮೂಲಮ್
(ಶ್ಲೋಕ-2)
ವಯಾಂಸ್ಯರೂರುವನ್ ಕೃಷ್ಣಂ ಬೋಧಯಂತೀವ ವಂದಿನಃ ।
ಗಾಯತ್ಸ್ವಲಿಷ್ವನಿದ್ರಾಣಿ ಮಂದಾರವನವಾಯುಭಿಃ ॥
ಅನುವಾದ
ಆ ಸಮಯದಲ್ಲಿ ಪಾರಿಜಾತಪುಷ್ಪದ ಸುಗಂಧಿತ ಗಾಳಿಯು ಮಂದ-ಮಂದಾವಾಗಿ ಬೀಸುತ್ತಿತ್ತು. ದುಂಬಿಗಳು ಝೇಂಕರಿಸುತ್ತಾ ಸುಪ್ರಭಾತವನ್ನು ಹಾಡುತ್ತಿದ್ದವು. ನಿದ್ದೆಯಿಂದ ಎಚ್ಚೆತ್ತ ಪಕ್ಷಿಗಳು ವಂದಿ-ಮಾಗಧರಂತೆ ಮಧುರ ಸ್ವರಗಳಿಂದ ಶ್ರೀಕೃಷ್ಣನನ್ನು ಎಚ್ಚರಿಸುತ್ತಿವೆಯೋ ಎಂಬಂತೆ ಚಿಲಿ-ಪಿಲಿ ಗುಟ್ಟುತ್ತಿದ್ದವು. ॥2॥
ಮೂಲಮ್
(ಶ್ಲೋಕ-3)
ಮುಹೂರ್ತಂ ತಂ ತು ವೈದರ್ಭೀ ನಾಮೃಷ್ಯದತಿಶೋಭನಮ್ ।
ಪರಿರಂಭಣವಿಶ್ಲೇಷಾತ್ ಪ್ರಿಯಬಾಹ್ವಂತರಂ ಗತಾ ॥
ಅನುವಾದ
ಪ್ರಿಯತಮನ ಬಾಹುಪಾಶಗಳ ಅಂತರ್ಗತಳಾಗಿದ್ದ ರುಕ್ಮಿಣೀದೇವಿಯು ಆಲಿಂಗನಕ್ಕೆ ವಿಚ್ಛಿತ್ತಿಯುಂಟಾಗುವುದೆಂಬ ಭಯದಿಂದ ಮಂಗಳಕರವಾದ ಬ್ರಾಹ್ಮೀ ಮುಹೂರ್ತವು ಬಂದುದನ್ನು ಸಹಿಸದೇ ಹೋದಳು. ॥3॥
ಮೂಲಮ್
(ಶ್ಲೋಕ-4)
ಬ್ರಾಹ್ಮೇ ಮುಹೂರ್ತ ಉತ್ಥಾಯ ವಾರ್ಯುಪಸ್ಪೃಶ್ಯ ಮಾಧವಃ ।
ದಧ್ಯೌ ಪ್ರಸನ್ನಕರಣ ಆತ್ಮಾನಂ ತಮಸಃ ಪರಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಪ್ರತಿದಿನವೂ ಬ್ರಾಹ್ಮಮುಹೂರ್ತದಲ್ಲೇ ಎದ್ದು, ಕೈ-ಕಾಲುಗಳನ್ನು ತೊಳೆದುಕೊಂಡು, ಆಚಮನಮಾಡಿ, ಮಾಯಾತೀತವಾದ ಚಿದಾತ್ಮ ಸ್ವರೂಪವನ್ನು ಧ್ಯಾನಮಾಡಲು ತೊಡಗುವನು. ಆ ಸಮಯದಲ್ಲಿ ಅವನ ರೋಮ-ರೋಮಗಳು ಆನಂದದಿಂದ ಪ್ರಸನ್ನವಾಗಿ ಇರುತ್ತಿದ್ದವು. ॥4॥
ಮೂಲಮ್
(ಶ್ಲೋಕ-5)
ಏಕಂ ಸ್ವಯಂಜ್ಯೋತಿರನನ್ಯಮವ್ಯಯಂ
ಸ್ವಸಂಸ್ಥಯಾ ನಿತ್ಯನಿರಸ್ತಕಲ್ಮಷಮ್ ।
ಬ್ರಹ್ಮಾಖ್ಯಮಸ್ಯೋದ್ಭವನಾಶಹೇತುಭಿಃ
ಸ್ವಶಕ್ತಿಭಿರ್ಲಕ್ಷಿತಭಾವನಿರ್ವೃತಿಮ್ ॥
ಅನುವಾದ
ಪರೀಕ್ಷಿದ್ರಾಜನೇ! ಭಗವಂತನ ಆ ಆತ್ಮಸ್ವರೂಪವು ಅದ್ವಿತೀಯವೂ, ಅಖಂಡವೂ, ಅವಿನಾಶಿಯೂ ಆದ ಸತ್ಯ ಸ್ವರೂಪವಾಗಿದೆ. ಚಂದ್ರಸೂರ್ಯರು ನೇತ್ರೇಂದ್ರಿಯದ ಮೂಲವಾಗಿಯೂ, ನೇತೇಂದ್ರಿಯವು ಚಂದ್ರ-ಸೂರ್ಯರ ಮೂಲಕವಾಗಿಯೂ ಪ್ರಕಾಶಗೊಳ್ಳುವಂತೆ ಆತ್ಮ ಸ್ವರೂಪವು ಬೇರೆ ಯಾವುದರಿಂದಲೂ ಪ್ರಕಾಶಿಸುವುದಿಲ್ಲ. ಸ್ವಯಂ ಪ್ರಕಾಶವಾಗಿದೆ. ಅದು ಸ್ವಸ್ವರೂಪದಲ್ಲಿ ಸದಾ-ಸರ್ವದಾ ಕಾಲಾತೀತವಾಗಿ ಏಕರಸವಾಗಿ ಇರುವುದರಿಂದ ಅವಿದ್ಯೆಯು ಅದನ್ನು ಸ್ಪರ್ಶಿಸಲೂ ಕೂಡ ಸಮರ್ಥವಾಗುವುದಿಲ್ಲ. ಜಗತ್ತಿನ ಉತ್ಪತ್ತಿ, ಸ್ಥಿತಿ ಮತ್ತು ನಾಶಕ್ಕೆ ಕಾರಣ ಭೂತರಾದ ಬ್ರಹ್ಮಶಕ್ತಿ, ವಿಷ್ಣುಶಕ್ತಿ, ರುದ್ರಶಕ್ತಿಗಳ ಮೂಲಕವಾಗಿ ಆ ಆತ್ಮಸ್ವರೂಪವು ಏಕರಸ ಸತ್ತ್ವರೂಪವಾಗಿ ಆನಂದ ಸ್ವರೂಪವಾಗಿರುವುದೆಂದು ಊಹಿಸಬಹುದು. ಅದನ್ನು ತಿಳಿಸುವುದಕ್ಕಾಗಿಯೇ ‘ಬ್ರಹ್ಮ’ ಎಂಬ ಹೆಸರಿನಿಂದ ಹೇಳಲಾಗಿದೆ. ಭಗವಾನ್ ಶ್ರೀಕೃಷ್ಣನು ತನ್ನ ಆ ಆತ್ಮ ಸ್ವರೂಪವನ್ನೇ ಧ್ಯಾನಮಾಡುತ್ತಾನೆ. ॥5॥
ಮೂಲಮ್
(ಶ್ಲೋಕ-6)
ಅಥಾಪ್ಲುತೋಂಭಸ್ಯಮಲೇ ಯಥಾವಿಧಿ
ಕ್ರಿಯಾಕಲಾಪಂ ಪರಿಧಾಯ ವಾಸಸೀ ।
ಚಕಾರ ಸಂಧ್ಯೋಪಗಮಾದಿ ಸತ್ತಮೋ
ಹುತಾನಲೋ ಬ್ರಹ್ಮ ಜಜಾಪ ವಾಗ್ಯತಃ ॥
ಅನಂತರ ಅವನು ವಿಧಿಪೂರ್ವಕವಾಗಿ ನಿರ್ಮಲವೂ ಪವಿತ್ರವೂ ಆದ ನೀರಿನಲ್ಲಿ ಮುಳುಗಿ ಸ್ನಾನಮಾಡುವನು. ಮತ್ತೆ ಶುದ್ಧವಾದ ಧೋತಿಯನ್ನುಟ್ಟು ಉತ್ತರೀಯವನ್ನು ಹೊದ್ದು ಸಂಧ್ಯಾವಂದನೆಯೇ ಮೊದಲಾದ ನಿತ್ಯಕರ್ಮಗಳನ್ನು ಮಾಡುತ್ತಾನೆ. ಬಳಿಕ ಹವನ ಮಾಡಿ, ಮೌನವಾಗಿ ಗಾಯತ್ರಿಯನ್ನು ಜಪಿಸುವನು. ॥6॥
(ಶ್ಲೋಕ-7)
ಉಪಸ್ಥಾಯಾರ್ಕಮುದ್ಯಂತಂ ತರ್ಪಯಿತ್ವಾತ್ಮನಃ ಕಲಾಃ ।
ದೇವಾನೃಷೀನ್ ಪಿತೃನ್ವ ದ್ಧಾನ್ ವಿಪ್ರಾನಭ್ಯರ್ಚ್ಯ ಚಾತ್ಮವಾನ್ ॥
(ಶ್ಲೋಕ-8)
ಧೇನೂನಾಂ ರುಕ್ಮಶೃಂಗೀಣಾಂ ಸಾಧ್ವೀನಾಂ ವೌಕ್ತಿಕಸ್ರಜಾಮ್ ।
ಪಯಸ್ವಿನೀನಾಂ ಗೃಷ್ಟೀನಾಂ ಸವತ್ಸಾನಾಂ ಸುವಾಸಸಾಮ್ ॥
(ಶ್ಲೋಕ-9)
ದದೌ ರೂಪ್ಯಖುರಾಗ್ರಾಣಾಂ ಕ್ಷೌಮಾಜಿನತಿಲೈಃ ಸಹ ।
ಅಲಂಕೃತೇಭ್ಯೋ ವಿಪ್ರೇಭ್ಯೋ ಬದ್ವಂ ಬದ್ವಂ ದಿನೇ ದಿನೇ ॥
ಅನುವಾದ
ಬಳಿಕ ಸೂರ್ಯನು ಉದಯಿಸುವವರೆಗೆ ಸೂರ್ಯೋಪಸ್ಥಾನವನ್ನು ಮಾಡಿ, ತನ್ನ ಕಲಾ ಸ್ವರೂಪರಾದ ದೇವತೆಗಳಿಗೆ, ಋಷಿಗಳಿಗೆ ಮತ್ತು ಪಿತೃಗಳಿಗೆ ತರ್ಪಣಗಳನ್ನು ಕೊಡುತ್ತಿದ್ದನು. ಮತ್ತೆ ಕುಲವೃದ್ಧರನ್ನು, ಬ್ರಾಹ್ಮಣರನ್ನು ಯಥಾವಿಧಿಯಾಗಿ ಪೂಜಿಸುವನು. ಅನಂತರ ಮನನ ಶೀಲನಾದ ಶ್ರೀಕೃಷ್ಣನು ಹಾಲು ಕೊಡುವ, ಸಾಧು ಸ್ವಭಾವದ ಸವತ್ಸಗೋವುಗಳನ್ನು ದಾನ ಮಾಡುತ್ತಿದ್ದನು. ಆಗ ಆ ಗೋವುಗಳನ್ನು ಸುಂದರವಾದ ವಸ್ತ್ರಗಳಿಂದ, ಮುತ್ತಿನಹಾರಗಳಿಂದ ಅಲಂಕರಿಸಿ, ಅವುಗಳ ಕೊಂಬುಗಳಿಗೆ ಚಿನ್ನವನ್ನು ಅಲಂಕರಿಸಿ, ಗೊರಸುಗಳಿಗೆ ಬೆಳ್ಳಿಯ ಕವಚಗಳನ್ನು ತೊಡಿಸಲಾಗುತ್ತಿತ್ತು. ಶ್ರೀಕೃಷ್ಣನು ಬ್ರಾಹ್ಮಣರನ್ನು ವಸಾ ಭೂಷಣಗಳಿಂದ ಸತ್ಕರಿಸಿ, ರೇಷ್ಮೆ ವಸ್ತ್ರ, ಮೃಗಚರ್ಮ ಮತ್ತು ಎಳ್ಳಿನೊಂದಿಗೆ ಪ್ರತಿ ದಿನವೂ ಹದಿಮೂರುಸಾವಿರದ ಎಂಭತ್ತನಾಲ್ಕು (ಒಂದು ಬಧ್ವ) ಗೋವುಗಳನ್ನು ದಾನಮಾಡುತ್ತಿದ್ದನು. ॥7-9॥
ಮೂಲಮ್
(ಶ್ಲೋಕ-10)
ಗೋವಿಪ್ರದೇವತಾವೃದ್ಧಗುರೂನ್ ಭೂತಾನಿ ಸರ್ವಶಃ ।
ನಮಸ್ಕೃತ್ಯಾತ್ಮಸಂಭೂತೀರ್ಮಂಗಲಾನಿ ಸಮಸ್ಪೃಶತ್ ॥
ಅನುವಾದ
ಬಳಿಕ ತನ್ನ ವಿಭೂತಿರೂಪವಾದ ಗೋವು, ಬ್ರಾಹ್ಮಣ, ದೇವತೆ, ಕುಲವೃದ್ಧರು, ಗುರುಗಳು ಮತ್ತು ಸಮಸ್ತ ಪ್ರಾಣಿಗಳನ್ನು ನಮಸ್ಕರಿಸಿ ಮಾಂಗಲಿಕ ವಸ್ತುಗಳನ್ನು ಸ್ಪರ್ಶಿಸುತ್ತಿದ್ದನು. ॥10॥
ಮೂಲಮ್
(ಶ್ಲೋಕ-11)
ಆತ್ಮಾನಂ ಭೂಷಯಾಮಾಸ ನರಲೋಕವಿಭೂಷಣಮ್ ।
ವಾಸೋಭಿರ್ಭೂಷಣೈಃ ಸ್ವೀಯೈರ್ದಿವ್ಯಸ್ರಗನುಲೇಪನೈಃ ॥
ಅನುವಾದ
ಪರೀಕ್ಷಿತನೇ! ಭಗವಂತನ ಶರೀರದ ಸಹಜ ಸೌಂದರ್ಯವೇ ಮನುಷ್ಯಲೋಕದ ಅಲಂಕಾರವಾಗಿದ್ದರೂ ಅವನು ಪೀತಾಂಬರವೇ ಮೊದಲಾದ ದಿವ್ಯ ವಸ್ತ್ರಗಳನ್ನು, ಕೌಸ್ತುಭಾದಿ ಆಭೂಷಣಗಳನ್ನು, ಪುಷ್ಪಹಾರಗಳನ್ನು ಧರಿಸಿಕೊಂಡು, ಚಂದನವೇ ಮುಂತಾದ ದಿವ್ಯ ಪರಿಮಳ ದ್ರವ್ಯಗಳಿಂದ ತನ್ನನ್ನು ಅಲಂಕರಿಸಿಕೊಳ್ಳುತ್ತಿದ್ದನು. ॥11॥
ಮೂಲಮ್
(ಶ್ಲೋಕ-12)
ಅವೇಕ್ಷ್ಯಾಜ್ಯಂ ತಥಾದರ್ಶಂ ಗೋವೃಷದ್ವಿಜದೇವತಾಃ ।
ಕಾಮಾಂಶ್ಚ ಸರ್ವವರ್ಣಾನಾಂ ಪೌರಾಂತಃಪುರಚಾರಿಣಾಮ್ ।
ಪ್ರದಾಪ್ಯ ಪ್ರಕೃತೀಃ ಕಾಮೈಃ ಪ್ರತೋಷ್ಯ ಪ್ರತ್ಯನಂದತ ॥
ಅನುವಾದ
ಮತ್ತೆ ಅವನು ತುಪ್ಪದಲ್ಲಿಯೂ, ದರ್ಪಣದಲ್ಲಿಯೂ ತನ್ನ ಮುಖಾರವಿಂದವನ್ನು ನೋಡಿಕೊಂಡು, ಗೋ, ವೃಷಭ, ಬ್ರಾಹ್ಮಣ, ದೇವತಾ ಪ್ರತಿಮೆಗಳನ್ನು ದರ್ಶಿಸುವನು. ಪುನಃ ಪುರವಾಸಿಗಳ ಮತ್ತು ಅಂತಃಪುರದಲ್ಲಿ ವಾಸಿಸುವ ನಾಲ್ಕು ವರ್ಣದ ಜನರುಗಳ ಅಭಿಲಾಷೆಯನ್ನು ಪೂರ್ಣಗೊಳಿಸಿ, ಅವರನ್ನು ಸಂತುಷ್ಟ ಗೊಳಿಸಿ, ಬೇರೆ ಗ್ರಾಮವಾಸಿ ಪ್ರಜೆಗಳ ಕಾಮನೆಗಳನ್ನು ಪೂರ್ಣ ಗೊಳಿಸಿ, ಹೀಗೆ ಎಲ್ಲರನ್ನು ಸಂತೋಷಪಡಿಸಿ, ಅವರನ್ನು ನೋಡಿ ತಾನು ಸಂತೋಷಗೊಳ್ಳುವನು. ॥12॥
ಮೂಲಮ್
(ಶ್ಲೋಕ-13)
ಸಂವಿಭಜ್ಯಾಗ್ರತೋ ವಿಪ್ರಾನ್ ಸ್ರಕ್ತಾಂಬೂಲಾನುಲೇಪನೈಃ ।
ಸುಹೃದಃ ಪ್ರಕೃತೀರ್ದಾರಾನುಪಾಯುಂಕ್ತ ತತಃ ಸ್ವಯಮ್ ॥
ಅನುವಾದ
ಅವನು ಪುಷ್ಪಮಾಲೆ, ತಾಂಬೂಲ, ಚಂದನ ಮತ್ತು ಅಂಗರಾಗ ಮೊದಲಾದ ವಸ್ತುಗಳನ್ನು ಮೊದಲಿಗೆ ಬ್ರಾಹ್ಮಣರಿಗೆ, ಸ್ವಜನ- ಸಂಬಂಧಿಗಳಿಗೆ, ಮಂತ್ರಿ, ರಾಣಿಯರಿಗೆ ಹಂಚಿಕೊಟ್ಟು ಉಳಿದುದನ್ನು ತಾನು ಉಪಯೋಗಿಸುತ್ತಿದ್ದನು. ॥13॥
ಮೂಲಮ್
(ಶ್ಲೋಕ-14)
ತಾವತ್ಸೂತ ಉಪಾನೀಯ ಸ್ಯಂದನಂ ಪರಮಾದ್ಭುತಮ್ ।
ಸುಗ್ರೀವಾದ್ಯೈರ್ಹಯೈರ್ಯುಕ್ತಂ ಪ್ರಣಮ್ಯಾವಸ್ಥಿತೋಗ್ರತಃ ॥
ಅನುವಾದ
ಭಗವಂತನು ಇಷ್ಟೆಲ್ಲ ಮಾಡುವಷ್ಟರಲ್ಲಿ ಸಾರಥಿಯಾದ ದಾರುಕನು ಸುಗ್ರೀವಾದಿ ಕುದುರೆಗಳನ್ನು ಹೂಡಿದ ಅತ್ಯಂತ ಅದ್ಭುತವಾದ ರಥವನ್ನು ತಂದು ನಿಲ್ಲಿಸಿ ಶ್ರೀಕೃಷ್ಣನಿಗೆ ವಂದಿಸಿ ಅವನ ಮುಂದೆ ನಿಲ್ಲುತ್ತಿದ್ದನು. ॥14॥
ಮೂಲಮ್
(ಶ್ಲೋಕ-15)
ಗೃಹೀತ್ವಾ ಪಾಣಿನಾ ಪಾಣೀ ಸಾರಥೇಸ್ತಮಥಾರುಹತ್ ।
ಸಾತ್ಯಕ್ಯುದ್ಧವಸಂಯುಕ್ತಃ ಪೂರ್ವಾದ್ರಿಮಿವ ಭಾಸ್ಕರಃ ॥
ಅನುವಾದ
ಅನಂತರ ಭಗವಾನ್ ಶ್ರೀಕೃಷ್ಣನು ಸಾತ್ಯಕಿ ಮತ್ತು ಉದ್ಧವರೊಂದಿಗೆ, ಸಾರಥಿಯ ಕೈಯನ್ನು ಹಿಡಿದುಕೊಂಡು ಭುವನ ಭಾಸ್ಕರ ಭಗವಾನ್ ಸೂರ್ಯನು ಉದಯಾಚಲದಲ್ಲಿ ಆರೂಢನಾಗುವಂತೆಯೇ ರಥಾರೂಢನಾಗುವನು. ॥15॥
ಮೂಲಮ್
(ಶ್ಲೋಕ-16)
ಈಕ್ಷಿತೋಂತಃಪುರಸೀಣಾಂ ಸವ್ರೀಡಪ್ರೇಮವೀಕ್ಷಿತೈಃ ।
ಕೃಚ್ಛ್ರಾದ್ವಿಸೃಷ್ಟೋ ನಿರಗಾಜ್ಜಾತಹಾಸೋ ಹರನ್ ಮನಃ ॥
ಅನುವಾದ
ಆ ಸಮಯದಲ್ಲಿ, ರಾಣಿ ವಾಸದ ಸ್ತ್ರೀಯರು ನಾಚಿಕೆ ಮತ್ತು ಪ್ರೇಮ ಪೂರ್ಣವಾದ ನೋಟದಿಂದ ಅವನನ್ನು ನೋಡುತ್ತಾ ಬಹಳ ಕಷ್ಟದಿಂದ ಬೀಳ್ಕೊಡುತ್ತಿದ್ದರು. ಭಗವಂತನು ಅವರ ಚಿತ್ತವನ್ನು ಅಪ ಹರಿಸಿಕೊಂಡು ಅರಮನೆಯಿಂದ ಹೊರಡುತ್ತಿದ್ದನು. ॥16॥
ಮೂಲಮ್
(ಶ್ಲೋಕ-17)
ಸುಧರ್ಮಾಖ್ಯಾಂ ಸಭಾಂ ಸರ್ವೈರ್ವೃಷ್ಣಿಭಿಃ ಪರಿವಾರಿತಃ ।
ಪ್ರಾವಿಶದ್ಯನ್ನಿವಿಷ್ಟಾನಾಂ ನ ಸಂತ್ಯಂಗ ಷಡೂರ್ಮಯಃ ॥
ಅನುವಾದ
ಪರೀಕ್ಷಿತನೇ! ಅನಂತರ ಭಗವಾನ್ ಶ್ರೀಕೃಷ್ಣನು ಸಮಸ್ತ ಯದುವಂಶೀಯರೊಂದಿಗೆ ಸುಧರ್ಮಾ ಎಂಬ ಸಭೆಯನ್ನು ಪ್ರವೇಶಿಸುವನು. ಆ ಸಭೆಯ ಮಹಿಮೆ ಎಂದರೆ ಅದರಲ್ಲಿ ಕುಳಿತಿರುವವರಿಗೆ ಹಸಿವು-ಬಾಯಾರಿಕೆ, ಶೋಕ-ಮೋಹ, ಜರಾಮೃತ್ಯುವೆಂಬ ಆರು ಊರ್ಮಿಗಳು ಬಾಧಿಸುವುದಿಲ್ಲ. ॥17॥
ಮೂಲಮ್
(ಶ್ಲೋಕ-18)
ತತ್ರೋಪವಿಷ್ಟಃ ಪರಮಾಸನೇ ವಿಭು-
ರ್ಬಭೌ ಸ್ವಭಾಸಾ ಕಕುಭೋವಭಾಸಯನ್ ।
ವೃತೋ ನೃಸಿಂಹೈರ್ಯದುಭಿರ್ಯದೂತ್ತಮೋ
ಯಥೋಡುರಾಜೋ ದಿವಿ ತಾರಕಾಗಣೈಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ತನ್ನ ಅಂಗಕಾಂತಿಯಿಂದ ದಶದಿಕ್ಕುಗಳನ್ನು ಬೆಳಗಿಸುತ್ತಾ ಶ್ರೇಷ್ಠ ಸಿಂಹಾಸನದಲ್ಲಿ ವಿರಾಜಿಸುವನು. ಆ ಸಮಯದಲ್ಲಿ ಯದುವಂಶೀಯ ವೀರರ ನಡುವೆ ಯದುವಂಶಶಿರೋಮಣಿ ಭಗವಾನ್ ಶ್ರೀಕೃಷ್ಣನು ಆಕಾಶದಲ್ಲಿ ತಾರೆಯರಿಂದ ಸುತ್ತುವರಿಯಲ್ಪಟ್ಟ ಚಂದ್ರನಂತೇ ಆ ಸಭೆಯಲ್ಲಿ ಶೋಭಿಸುತ್ತಿದ್ದನು. ॥18॥
ಮೂಲಮ್
(ಶ್ಲೋಕ-19)
ತತ್ರೋಪಮಂತ್ರಿಣೋ ರಾಜನ್ ನಾನಾಹಾಸ್ಯರಸೈರ್ವಿಭುಮ್ ।
ಉಪತಸ್ಥುರ್ನಟಾಚಾರ್ಯಾ ನರ್ತಕ್ಯಸ್ತಾಂಡವೈಃ ಪೃಥಕ್ ॥
ಅನುವಾದ
ಪರೀಕ್ಷಿತನೇ! ಆ ಸಭೆಯಲ್ಲಿ ವಿದೂಷಕರು ನಾನಾ ವಿಧದ ಹಾಸ್ಯಚಟಾಕಿಗಳಿಂದ, ನಾಟ್ಯಾಚಾರ್ಯರು ನಟನೆಯಿಂದ, ನರ್ತಕಿಯರು ಬೇರೆ-ಬೇರೆ ಗುಂಪು-ಗುಂಪಾಗಿ ಕಲಾಪೂರ್ಣ ನೃತ್ಯಗಳಿಂದ ಭಗವಂತನ ಸೇವೆ ಮಾಡುತ್ತಿದ್ದರು. ॥19॥
ಮೂಲಮ್
(ಶ್ಲೋಕ-20)
ಮೃದಂಗವೀಣಾಮುರಜವೇಣುತಾಲದರಸ್ವನೈಃ ।
ನನೃತುರ್ಜಗುಸ್ತುಷ್ಟುವುಶ್ಚ ಸೂತಮಾಗಧವಂದಿನಃ ॥
ಅನುವಾದ
ಆಗ ಮೃದಂಗ, ವೀಣೆ, ಪಖವಾಜ್, ಕೊಳಲು, ಕರತಾಳ, ಶಂಖ ಮೊದಲಾದ ವಾದ್ಯಗಳು ಮೊಳಗುತ್ತಿದ್ದವು. ಸೂತ-ಮಾಗಧ ವಂದೀ ಜನರು ಹಾಡುತ್ತಾ-ಕುಣಿಯುತ್ತಾ ಭಗವಂತನನ್ನು ಸ್ತುತಿಸುತ್ತಿದ್ದರು. ॥20॥
ಮೂಲಮ್
(ಶ್ಲೋಕ-21)
ತತ್ರಾಹುರ್ಬ್ರಾಹ್ಮಣಾಃ ಕೇಚಿದಾಸೀನಾ ಬ್ರಹ್ಮವಾದಿನಃ ।
ಪೂರ್ವೇಷಾಂ ಪುಣ್ಯಯಶಸಾಂ ರಾಜ್ಞಾಂ ಚಾಕಥಯನ್ಕಥಾಃ ॥
ಅನುವಾದ
ಕೆಲವು ವ್ಯಾಖ್ಯಾನ ಕುಶಲರಾದ ಬ್ರಾಹ್ಮಣರು ಅಲ್ಲಿ ಕುಳಿತು ಬ್ರಹ್ಮತತ್ತ್ವವನ್ನು ಪ್ರತಿಪಾದಿಸುತ್ತಿದ್ದರು. ಮತ್ತೆ ಕೆಲವರು ಪೂರ್ವಕಾಲದ ಪವಿತ್ರಕೀರ್ತಿಗಳಾದ ರಾಜರ ಕಥೆಗಳನ್ನು ಹೇಳುತ್ತಿದ್ದರು. ಹೀಗೆಯೇ ಶ್ರೀಕೃಷ್ಣನ ದಿನಚರಿಯು ಅನುದಿನವೂ ನಡೆಯುತ್ತಿತ್ತು. ॥21॥
ಮೂಲಮ್
(ಶ್ಲೋಕ-22)
ತತ್ರೈಕಃ ಪುರುಷೋ ರಾಜನ್ನಾಗತೋಪೂರ್ವದರ್ಶನಃ ।
ವಿಜ್ಞಾಪಿತೋ ಭಗವತೇ ಪ್ರತೀಹಾರೈಃ ಪ್ರವೇಶಿತಃ ॥
ಅನುವಾದ
ಹೀಗೆಯೇ ಒಂದು ದಿನ ಭಗವಂತನು ಸುಧರ್ಮಾ ಸಭೆಯಲ್ಲಿ ಸಿಂಹಾಸನಾರೂಢನಾಗಿ ಕುಳಿತಿರುವಾಗ ಸಭಾದ್ವಾರಕ್ಕೆ ಒಬ್ಬ ಅಪರಿತ ವ್ಯಕ್ತಿಯು ಬಂದನು. ದ್ವಾರ ಪಾಲಕರು ಶ್ರೀಕೃಷ್ಣನಿಗೆ ಇದರ ಸೂಚನೆಯಿತ್ತು ಅವನನ್ನು ಸಭೆಗೆ ಕರೆತಂದರು. ॥22॥
ಮೂಲಮ್
(ಶ್ಲೋಕ-23)
ಸ ನಮಸ್ಕೃತ್ಯ ಕೃಷ್ಣಾಯ ಪರೇಶಾಯ ಕೃತಾಂಜಲಿಃ ।
ರಾಜ್ಞಾಮಾವೇದಯದ್ದುಃಖಂ ಜರಾಸಂಧನಿರೋಧಜಮ್ ॥
(ಶ್ಲೋಕ-24)
ಯೇ ಚ ದಿಗ್ವಿಜಯೇ ತಸ್ಯ ಸಂನತಿಂ ನ ಯಯುರ್ನೃಪಾಃ ।
ಪ್ರಸಹ್ಯ ರುದ್ಧಾಸ್ತೇನಾಸನ್ನಯುತೇ ದ್ವೇ ಗಿರಿವ್ರಜೇ ॥
ಅನುವಾದ
ಆ ಮನುಷ್ಯನು ಪರಮೇಶ್ವರನಾದ ಶ್ರೀಕೃಷ್ಣನಿಗೆ ಕೈಜೋಡಿಸಿ ನಮಸ್ಕರಿಸಿ ಜರಾಸಂಧನಿಂದ ಸೆರೆಹಿಡಿಯಲ್ಪಟ್ಟ ರಾಜರಿಗೆ ಉಂಟಾದ ದುಃಖವನ್ನು ವಿವರಿಸಿ ಹೇಳಿದನು. ಜರಾಸಂಧನು ದಿಗ್ವಿಜಯದ ಸಮಯದಲ್ಲಿ ಆತನಿಗೆ ತಲೆಬಾಗದಿದ್ದ ರಾಜರನ್ನು ಯುದ್ಧದಲ್ಲಿ ಪರಾಜಯಗೊಳಿಸಿ ಗಿರಿವ್ರಜದ ಸೆರೆಮನೆಯಲ್ಲಿಡುತ್ತಿದ್ದನು. ಅಂತಹವರ ಸಂಖ್ಯೆಯು ಇಪ್ಪತ್ತು ಸಾವಿರದಷ್ಟಿದೆ. ಅಂತಹ ರಾಜರು ತಮ್ಮ ಪ್ರಾರ್ಥನೆಯನ್ನು ಹೀಗೆ ಕಳಿಸಿದ್ದಾರೆ - ॥23-24॥
ಮೂಲಮ್
(ಶ್ಲೋಕ-25)
ಕೃಷ್ಣ ಕೃಷ್ಣಾಪ್ರಮೇಯಾತ್ಮನ್ ಪ್ರಪನ್ನಭಯಭಂಜನ ।
ವಯಂ ತ್ವಾಂ ಶರಣಂ ಯಾಮೋ ಭವಭೀತಾಃ ಪೃಥಗ್ಧಿಯಃ ॥
ಅನುವಾದ
ಸಚ್ಚಿದಾನಂದ ಸ್ವರೂಪನಾದ ಶ್ರೀಕೃಷ್ಣನೇ! ಅಪ್ರಮೇಯಾತ್ಮನೇ! ಶರಣಾಗತರಾದವರ ಭಯವನ್ನು ಧ್ವಂಸಮಾಡುವವನೇ! ನಮ್ಮ ಭೇದ ಬುದ್ಧಿಯು ಅಳಿಸಿಹೋಗಿಲ್ಲ. ನಾವು ಜನ್ಮ-ಮೃತ್ಯುರೂಪವಾದ ಸಂಸಾರಚಕ್ರದಿಂದ ಭಯಗೊಂಡು ನಿನಗೆ ಶರಣು ಬಂದಿದ್ದೇವೆ. ॥25॥
ಮೂಲಮ್
(ಶ್ಲೋಕ-26)
ಲೋಕೋ ವಿಕರ್ಮನಿರತಃ ಕುಶಲೇ ಪ್ರಮತ್ತಃ
ಕರ್ಮಣ್ಯಯಂ ತ್ವದುದಿತೇ ಭವದರ್ಚನೇ ಸ್ವೇ ।
ಯಸ್ತಾವದಸ್ಯ ಬಲವಾನಿಹ ಜೀವಿತಾಶಾಂ
ಸದ್ಯಶ್ಛಿನತ್ತ್ಯನಿಮಿಷಾಯ ನಮೋಸ್ತು ತಸ್ಮೈ ॥
ಅನುವಾದ
ಭಗವಂತಾ! ಲೋಕದಲ್ಲಿ ಅಧಿಕಾಂಶ ಜನರು ಸಕಾಮಕರ್ಮಗಳಲ್ಲಿ ಮತ್ತು ನಿಷಿದ್ಧ ಕರ್ಮಗಳಲ್ಲಿ ತೊಡಗಿದ್ದು ಕ್ಷೇಮಕರವಾದ ಸ್ವಧರ್ಮಗಳಲ್ಲಿ ವಿಸ್ಮರಣೆಯನ್ನು ಹೊಂದಿರುವರು. ನಿನ್ನಿಂದಲೇ ಹೇಳಲ್ಪಟ್ಟ ಪಾಂಚರಾತ್ರಾದ್ಯಾಗಮದ ಮೂಲಕ ನಿನ್ನ ಪೂಜಾದ್ಯುಪಚಾರಗಳನ್ನು ಮಾಡುವ ಮನಸ್ಸುಳ್ಳವರಾಗುವುದಿಲ್ಲ. ನೀನು ಮಹಾಬಲಿಷ್ಠನಾಗಿರುವೆ. ಕಾಲರೂಪದಿಂದ ನೀನು ಸದಾ-ಸರ್ವದಾ ಸಾವಧಾನದಿಂದಿರುತ್ತಾ ಅಂತಹವರ ಆಶಾಲತೆಯನ್ನು ಕ್ಷಣಮಾತ್ರದಲ್ಲಿ ಕತ್ತರಿಸಿ ಹಾಕುವೆ. ಅಂತಹ ಕಾಲರೂಪವಾದ ನಿನಗೆ ನಮಸ್ಕರಿಸುತ್ತೇವೆ. ॥26॥
ಮೂಲಮ್
(ಶ್ಲೋಕ-27)
ಲೋಕೇ ಭವಾನ್ಜಗದಿನಃ ಕಲಯಾವತೀರ್ಣಃ
ಸದ್ರಕ್ಷಣಾಯ ಖಲನಿಗ್ರಹಣಾಯ ಚಾನ್ಯಃ ।
ಕಶ್ಚಿತ್ತ್ವದೀಯಮತಿಯಾತಿ ನಿದೇಶಮೀಶ
ಕಿಂ ವಾ ಜನಃ ಸ್ವಕೃತಮೃಚ್ಛತಿ ತನ್ನ ವಿದ್ಮಃ ॥
ಅನುವಾದ
ಪ್ರಭುವೇ! ನೀನು ಜಗದೀಶ್ವರನೇ ಆಗಿರುವೆ. ಸತ್ಪುರುಷರ ರಕ್ಷಣೆಗಾಗಿಯೂ, ದುಷ್ಟರ ನಿಗ್ರಹಕ್ಕಾಗಿಯೂ ಜ್ಞಾನ-ಬಲ ಇವೇ ಮುಂತಾದ ಕಲೆಗಳೊಡನೆ ನೀನು ಅವತರಿಸಿರುವೆ. ಇಂತಹ ಸ್ಥಿತಿಯಲ್ಲಿ ಜರಾಸಂಧನಾಗಲೀ ಇತರ ರಾಜರಾಗಲೀ ನಿನ್ನ ಇಚ್ಛೆಗೆ ಮತ್ತು ಆಜ್ಞೆಗೆ ವಿರುದ್ಧವಾಗಿ ನಮ್ಮನ್ನು ಹೀಗೆ ತೊಂದರೆಪಡಿಸುತ್ತಿದ್ದಾರೆ? ಇದನ್ನು ನಾವು ಅರಿಯೆವು. ಒಂದು ವೇಳೆ ‘ಜರಾಸಂಧನು ಕಷ್ಟವನ್ನು ಕೊಡುತ್ತಿಲ್ಲ. ಅವನ ರೂಪದಿಂದ, ಅವನನ್ನು ನಿಮಿತ್ತವಾಗಿಸಿಕೊಂಡು ನಮ್ಮ ಅಶುಭ ಕರ್ಮಗಳೇ ನಮಗೆ ದುಃಖಕೊಡುತ್ತಿವೆ’ ಎಂದು ಹೇಳಿದರೂ ಇದು ಸರಿಯಲ್ಲ. ಏಕೆಂದರೆ, ನಾವುಗಳು ನಿನ್ನವರಾದಾಗ ನಮ್ಮ ದುಷ್ಕರ್ಮಗಳು ನಮಗೆ ಫಲಕೊಡಲು ಹೇಗೆ ಸಮರ್ಥವಾದಾವು?
ಆದ್ದರಿಂದ ನೀನು ದಯೆತೋರಿ ಅವಶ್ಯವಾಗಿ ನಮ್ಮನ್ನು ಈ ಕ್ಲೇಶಗಳಿಂದ ಬಿಡುಗಡೆಗೊಳಿಸು. ॥27॥
ಮೂಲಮ್
(ಶ್ಲೋಕ-28)
ಸ್ವಪ್ನಾಯಿತಂ ನೃಪಸುಖಂ ಪರತಂತ್ರಮೀಶ
ಶಶ್ವದ್ಭಯೇನ ಮೃತಕೇನ ಧುರಂ ವಹಾಮಃ ।
ಹಿತ್ವಾ ತದಾತ್ಮನಿ ಸುಖಂ ತ್ವದನೀಹಲಭ್ಯಂ
ಕ್ಲಿಶ್ಯಾಮಹೇತಿಕೃಪಣಾಸ್ತವ ಮಾಯಯೇಹ ॥
ಅನುವಾದ
ಪ್ರಭುವೇ! ರಾಜ ಸೌಖ್ಯವೆಂಬುದು ಸ್ವಪ್ನಪ್ರಾಯವಾದುದು ಮತ್ತು ಪರಾಧೀನವಾದುದು. ರಾಜಸುಖವನ್ನು ಉಪಭೋಗಿಸುವ ಈ ಶರೀರವು ಜೀವಚ್ಛವದಂತಿದೆ. ಸದಾ ಭಯಗೊಂಡೇ ಹೆಣದಂತಿರುವ ಈ ಶರೀರದಿಂದ ರಾಜ್ಯದ ಹೊರೆಯನ್ನು ಹೊರುತ್ತೇವೆ. ನಿನ್ನ ಕೃಪೆಯಿಂದ ನಿಷ್ಕಾಮಕರ್ಮಗಳಿಗೆ ಪ್ರಾಪ್ತವಾಗುವ ಸ್ವತಂತ್ರವಾದ ಆತ್ಮಸುಖವನ್ನು ತ್ಯಜಿಸಿದ್ದೇವೆ. ಅಜ್ಞಾನಿಗಳಾದ ನಾವು ನಿನ್ನ ಮಾಯೆಯಿಂದ ವಿಮೋಹಿತರಾಗಿ ಬಹಳವಾಗಿ ಕ್ಲೇಶಗಳನ್ನು ಅನುಭವಿಸುತ್ತಿದ್ದೇವೆ. ॥28॥
ಮೂಲಮ್
(ಶ್ಲೋಕ-29)
ತನ್ನೋ ಭವಾನ್ಪ್ರಣತಶೋಕಹರಾಂಘ್ರಿಯುಗ್ಮೋ
ಬದ್ಧಾನ್ವಿಯುಂಕ್ಷ್ವ ಮಗಧಾಹ್ವಯಕರ್ಮಪಾಶಾತ್ ।
ಯೋ ಭೂಭುಜೋಯುತಮತಂಗಜವೀರ್ಯಮೇಕೋ
ಬಿಭ್ರದ್ರುರೋಧ ಭವನೇ ಮೃಗರಾಡಿವಾವೀಃ ॥
ಅನುವಾದ
ಭಗವಂತ! ನಿನ್ನ ಚರಣಕಮಲಗಳು ಶರಣಾಗತರಾದವರ ಸಮಸ್ತ ಶೋಕಗಳನ್ನೂ, ಮೋಹಗಳನ್ನೂ ನಾಶಗೊಳಿಸುತ್ತವೆ. ಆದುದರಿಂದ ಜರಾಸಂಧರೂಪವಾದ ಕರ್ಮಬಂಧನದಿಂದ ನಮ್ಮನ್ನು ಬಿಡುಗಡೆಗೊಳಿಸು. ಪ್ರಭೋ! ಈ ಜರಾಸಂಧನು ಹತ್ತು ಸಾವಿರ ಆನೆಗಳ ಬಲವನ್ನು ಒಬ್ಬನೇ ಹೊಂದಿದ್ದಾನೆ. ಸಿಂಹವು ಕುರಿಗಳನ್ನು ತಡೆಹಿಡಿದಿರುವಂತೆ ಇವನು ನಮ್ಮನ್ನು ಬಂಧನದಲ್ಲಿರಿಸಿದ್ದಾನೆ. ॥29॥
ಮೂಲಮ್
(ಶ್ಲೋಕ-30)
ಯೋ ವೈ ತ್ವಯಾ ದ್ವಿನವಕೃತ್ವ ಉದಾತ್ತಚಕ್ರ
ಭಗ್ನೋ ಮೃಧೇ ಖಲು ಭವಂತಮನಂತವೀರ್ಯಮ್ ।
ಜಿತ್ವಾ ನೃಲೋಕನಿರತಂ ಸಕೃದೂಢದರ್ಪೋ
ಯುಷ್ಮತ್ಪ್ರಜಾ ರುಜತಿ ನೋಜಿತ ತದ್ವಿಧೇಹಿ ॥
ಅನುವಾದ
ಚಕ್ರಪಾಣಿಯೇ! ಜರಾಸಂಧನು ಹದಿನೆಂಟು ಬಾರಿ ನಿನ್ನೊಡನೆ ಯುದ್ಧಮಾಡಿ ಹದಿನೇಳು ಬಾರಿ ಪರಾಜಿತನಾಗಿ ಓಡಿದ್ದಾನೆ. ಆದರೇ ಒಂದೇ ಸಲ ನಿನ್ನನ್ನು ಗೆದ್ದಿರುವನು. ನಿನ್ನ ಶಕ್ತಿ-ಬಲ-ಪೌರುಷಗಳು ಅನಂತವಾಗಿವೆ ಎಂಬುದನ್ನು ನಾವು ಬಲ್ಲೆವು. ಹೀಗಿದ್ದರೂ ಮನುಷ್ಯರಂತೆ ಆಚರಿಸಿ ನೀನೇ ಸೋತವನಂತೆ ಅಭಿನಯಿಸಿದೆ. ಆದರೆ ಇದರಿಂದ ಅವನ ಅಹಂಕಾರವು ಬೆಳದು ಹೋಯಿತು. ಓ ಅಜಿತನೇ! ನಾವೆಲ್ಲರೂ ನಿನ್ನ ಭಕ್ತರಾಗಿ ಇದ್ದೇವೆ, ನಿನ್ನ ಪ್ರಜೆಗಳಾಗಿದ್ದೇವೆ ಎಂದು ತಿಳಿದು ನಮಗೆಲ್ಲ ಇನ್ನೂ ಜಾಸ್ತಿ ಕಷ್ಟಗಳನ್ನು ಕೊಡುತ್ತಿದ್ದಾನೆ. ಈಗ ನಿನಗೆ ಉಚಿತವೆನಿಸಿದಂತೆ ಮಾಡು. ॥30॥
ಮೂಲಮ್
(ಶ್ಲೋಕ-31)
ಮೂಲಮ್ (ವಾಚನಮ್)
ದೂತ ಉವಾಚ
ಮೂಲಮ್
ಇತಿ ಮಾಗಧಸಂರುದ್ಧಾ ಭವದ್ದರ್ಶನಕಾಂಕ್ಷಿಣಃ ।
ಪ್ರಪನ್ನಾಃ ಪಾದಮೂಲಂ ತೇ ದೀನಾನಾಂ ಶಂ ವಿಧೀಯತಾಮ್ ॥
ಅನುವಾದ
ದೂತನು ಹೇಳಿದನು — ಭಗವಂತಾ! ಜರಾಸಂಧನಲ್ಲಿ ಬಂದಿಯಾದ ರಾಜರು ಹೀಗೆ ನಿನ್ನಲ್ಲಿ ಪ್ರಾರ್ಥಿಸಿದ್ದಾರೆ. ಅವರೆಲ್ಲರೂ ನಿನ್ನ ಚರಣಕಮಲಗಳಲ್ಲಿ ಶರಣಾಗಿದ್ದಾರೆ ಮತ್ತು ನಿನ್ನ ದರ್ಶನವನ್ನು ಅಪೇಕ್ಷಿಸುತ್ತಿದ್ದಾರೆ. ನೀನು ದಯತೋರಿ ಆ ದೀನರಿಗೆ ಸುಖವನ್ನು ಉಂಟುಮಾಡು. ॥31॥
ಮೂಲಮ್
(ಶ್ಲೋಕ-32)
ಶ್ರೀಶುಕ ಉವಾಚ
ರಾಜದೂತೇ ಬ್ರುವತ್ಯೇವಂ ದೇವರ್ಷಿಃ ಪರಮದ್ಯುತಿಃ ।
ಬಿಭ್ರತ್ ಪಿಂಗಜಟಾಭಾರಂ ಪ್ರಾದುರಾಸೀದ್ಯಥಾ ರವಿಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ರಾಜದೂತನು ಹೀಗೆ ಹೇಳುತ್ತಿರುವಂತೆಯೇ ಪರಮ ತೇಜಸ್ವಿಗಳಾದ ನಾರದಮಹರ್ಷಿಗಳು ಹೊಂಬಣ್ಣದ ಜಟಾಭಾರವನ್ನು ಧರಿಸಿದ್ದ, ಸೂರ್ಯನಂತೇ ತೇಜಃಪುಂಜರಾಗಿ ಶ್ರೀಕೃಷ್ಣನ ಸಭೆಗೆ ಆಗಮಿಸಿದರು. ॥32॥
ಮೂಲಮ್
(ಶ್ಲೋಕ-33)
ತಂ ದೃಷ್ಟ್ವಾ ಭಗವಾನ್ ಕೃಷ್ಣಃ ಸರ್ವಲೋಕೇಶ್ವರೇಶ್ವರಃ ।
ವವಂದ ಉತ್ಥಿತಃ ಶೀರ್ಷ್ಣಾ ಸಸಭ್ಯಃ ಸಾನುಗೋ ಮುದಾ ॥
ಅನುವಾದ
ಬ್ರಹ್ಮನೇ ಮೊದಲಾದ ಸಮಸ್ತ ಲೋಕಪಾಲರಿಗೂ ಏಕಮಾತ್ರಸ್ವಾಮಿಯಾದ ಶ್ರೀಕೃಷ್ಣನು ನಾರದರನ್ನು ನೋಡುತ್ತಲೇ ಹರ್ಷಗೊಂಡು ಸಭ್ಯರೊಡನೆಯೂ, ಸೇವಕರೊಡನೆಯೂ ಎದ್ದುನಿಂತು ತಲೆಬಾಗಿ ನಮಸ್ಕರಿಸಿದನು. ॥33॥
ಮೂಲಮ್
(ಶ್ಲೋಕ-34)
ಸಭಾಜಯಿತ್ವಾ ವಿಧಿವತ್ ಕೃತಾಸನಪರಿಗ್ರಹಮ್ ।
ಬಭಾಷೇ ಸೂನೃತೈರ್ವಾಕ್ಯೈಃ ಶ್ರದ್ಧಯಾ ತರ್ಪಯನ್ ಮುನಿಮ್ ॥
ಅನುವಾದ
ನಾರದಮಹರ್ಷಿಗಳು ಆಸನವನ್ನು ಪರಿಗ್ರಹಿಸಿ ಆಸೀನರಾದ ನಂತರ ಭಗವಂತನು ಅವರನ್ನು ಯಥಾವಿಧಿಯಾಗಿ ಪೂಜಿಸಿ ಸಂತುಷ್ಟಗೊಳಿಸಿ ಸವಿಯಾದ ಮಾತುಗಳಿಂದ ಹೀಗೆ ಹೇಳಿದನು - ॥34॥
ಮೂಲಮ್
(ಶ್ಲೋಕ-35)
ಅಪಿ ಸ್ವಿದದ್ಯ ಲೋಕಾನಾಂ ತ್ರಯಾಣಾಮಕುತೋಭಯಮ್ ।
ನನು ಭೂಯಾನ್ ಭಗವತೋ ಲೋಕಾನ್ಪರ್ಯಟತೋ ಗುಣಃ ॥
ಅನುವಾದ
ದೇವರ್ಷಿಗಳೇ! ಈ ಸಮಯದಲ್ಲಿ ಮೂರು ಲೋಕಗಳೂ ನಿರ್ಭಯವಾಗಿ ಸಕುಶಲರಾಗಿರುವುದಲ್ಲವೇ? ನೀವು ತ್ರಿಲೋಕ ಸಂಚಾರಿಗಳು. ಇದರಿಂದ ನಮಗೆ ಮನೆಯಲ್ಲಿದ್ದೇ ಎಲ್ಲ ಸಮಾಚಾರಗಳು ತಿಳಿಯುತ್ತಿರುವುದು ದೊಡ್ಡಲಾಭವಾಗಿದೆ. ॥35॥
ಮೂಲಮ್
(ಶ್ಲೋಕ-36)
ನ ಹಿ ತೇವಿದಿತಂ ಕಿಂಚಿತ್ ಲೋಕೇಷ್ವೀಶ್ವರಕರ್ತೃಷು ।
ಅಥ ಪೃಚ್ಛಾಮಹೇ ಯುಷ್ಮಾನ್ ಪಾಂಡವಾನಾಂ ಚಿಕೀರ್ಷಿತಮ್ ॥
ಅನುವಾದ
ಈಶ್ವರನಿಂದ ರಚಿಸಲ್ಪಟ್ಟ ಮೂರು ಲೋಕಗಳಲ್ಲಿಯೂ ನಿಮಗೆ ತಿಳಿಯದಿರುವ ಯಾವುದೇ ವಿಷಯವಿಲ್ಲ. ಆದ್ದರಿಂದ ಯುಧಿಷ್ಠಿರಾದಿ ಪಾಂಡವರು ಈಗ ಏನು ಮಾಡ ಬೇಕೆಂದಿರುವರು? ಇದನ್ನು ನಿಮ್ಮಿಂದ ತಿಳಿಯಲು ನಾನು ಬಯಸುತ್ತೇನೆ. ॥36॥
ಮೂಲಮ್
(ಶ್ಲೋಕ-37)
ಶ್ರೀನಾರದ ಉವಾಚ
ದೃಷ್ಟಾ ಮಯಾ ತೇ ಬಹುಶೋ ದುರತ್ಯಯಾ
ಮಾಯಾ ವಿಭೋ ವಿಶ್ವಸೃಜಶ್ಚ ಮಾಯಿನಃ ।
ಭೂತೇಷು ಭೂಮಂಶ್ಚರತಃ ಸ್ವಶಕ್ತಿಭಿ-
ರ್ವಹ್ನೇರಿವಚ್ಛನ್ನರುಚೋ ನ ಮೇದ್ಭುತಮ್ ॥ 37 ॥
ಅನುವಾದ
ದೇವರ್ಷಿಗಳಾದ ನಾರದರು ಹೇಳಿದರು — ಸರ್ವವ್ಯಾಪಕನಾದ ಅನಂತನೇ! ವಿಶ್ವಕರ್ತೃವಾದ ನೀನು ಮಹಾಮಾಯಾವಿಯು. ಬ್ರಹ್ಮನೇ ಮೊದಲಾದ ದೊಡ್ಡ-ದೊಡ್ಡ ಮಾಯಾವಿಗಳೂ ಕೂಡ ನಿನ್ನ ಮಾಯೆಯ ಕೊನೆಯನ್ನು ಕಾಣರು. ಕಟ್ಟಿಗೆಯಲ್ಲಿ ಅಗ್ನಿಯು ಅಡಗಿರುವಂತೆಯೇ ನೀನು ಸಮಸ್ತ ಪ್ರಾಣಿಗಳ ಶರೀರಗಳಲ್ಲಿ ಅಚಿಂತ್ಯ ಶಕ್ತಿಯಿಂದ ವ್ಯಾಪ್ತನಾಗಿರುವೆ. ಆದರೆ ಜನರ ದೃಷ್ಟಿಯು ಸತ್ವಾದಿ ಗುಣಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದರಿಂದ ತಮ್ಮೊಳಗೆ ಇರುವ ನಿನ್ನನ್ನು ಅವರು ಕಾಣಲಾರರು. ನಾನು ಒಂದಲ್ಲ ಅನೇಕ ಬಾರಿ ನಿನ್ನ ಮಾಯೆಯನ್ನು ಕಂಡಿರುವೆನು. ಅದರಿಂದ ನೀನು ಏನೂ ತಿಳಿಯದವರಂತೆ ಪಾಂಡವರ ಸಮಾಚಾರವನ್ನು ಕೇಳುವುದರಲ್ಲಿ ನನಗೆ ಅದ್ಭುತವೇನೂ ಕಾಣುತ್ತಿಲ್ಲ. ॥37॥
ಮೂಲಮ್
(ಶ್ಲೋಕ-38)
ತವೇಹಿತಂ ಕೋರ್ಹತಿ ಸಾಧು ವೇದಿತುಂ
ಸ್ವಮಾಯಯೇದಂ ಸೃಜತೋ ನಿಯಚ್ಛತಃ ।
ಯದ್ವಿದ್ಯಮಾನಾತ್ಮತಯಾವಭಾಸತೇ
ತಸ್ಮೈ ನಮಸ್ತೇ ಸ್ವವಿಲಕ್ಷಣಾತ್ಮನೇ ॥
ಅನುವಾದ
ಭಗವಂತಾ! ನೀನು ನಿನ್ನ ಮಾಯೆಯಿಂದಲೇ ಈ ಜಗತ್ತನ್ನು ರಚಿಸಿ, ಸಂಹಾರಮಾಡುವೆ. ಇದು ಮಿಥ್ಯೆಯಾಗಿದ್ದರೂ ನಿನ್ನ ಮಾಯೆಯಿಂದಾಗಿ ಸತ್ಯವಾಗಿರುವಂತೆ ಕಂಡುಬರುತ್ತದೆ. ನೀನು ಯಾವಾಗ ಏನು ಮಾಡಬೇಕೆಂದಿರುವೆಯೋ ಇದನ್ನು ಸರಿಯಾಗಿ ಯಾರು ತಾನೇ ಬಲ್ಲರು? ನಿನ್ನ ಸ್ವರೂಪವು ಸರ್ವಥಾ ಅಚಿಂತ್ಯವಾಗಿದೆ. ಅಂತಹ ಸರ್ವವಿಲಕ್ಷಣನಾದ ನಿನ್ನನ್ನು ಪದೇ-ಪದೇ ನಮಸ್ಕರಿಸುತ್ತೇನೆ. ॥38॥
ಮೂಲಮ್
(ಶ್ಲೋಕ-39)
ಜೀವಸ್ಯ ಯಃ ಸಂಸರತೋ ವಿಮೋಕ್ಷಣಂ
ನ ಜಾನತೋನರ್ಥವಹಾಚ್ಛರೀರತಃ ।
ಲೀಲಾವತಾರೈಃ ಸ್ವಯಶಃ ಪ್ರದೀಪಕಂ
ಪ್ರಾಜ್ವಾಲಯತ್ತ್ವಾ ತಮಹಂ ಪ್ರಪದ್ಯೇ ॥
ಅನುವಾದ
ಶರೀರ ಮತ್ತು ಇದರೊಂದಿಗೆ ಸಂಬಂಧಿಸಿದ ವಾಸನೆಗಳಲ್ಲಿ ಸಿಕ್ಕಿಹಾಕಿಕೊಂಡ ಜೀವನು ಜನ್ಮ-ಮೃತ್ಯುರೂಪವಾದ ಸಂಸಾರಚಕ್ರದಲ್ಲಿ ಅಲೆಯುತ್ತಾ ಇದ್ದು, ಈ ಶರೀರದಿಂದ ಹೇಗೆ ಮುಕ್ತನಾಗುವೆ ಎಂಬುದು ತಿಳಿಯುತ್ತಿಲ್ಲ. ವಾಸ್ತವವಾಗಿ ಜೀವಿಗಳ ಹಿತಕ್ಕಾಗಿಯೇ ನೀನು ವಿವಿಧ ಲೀಲಾವತಾರಗಳನ್ನು ಎತ್ತಿ ನಿನ್ನ ಪವಿತ್ರಕೀರ್ತಿಯ ಉಜ್ವಲವಾದ ದೀಪವನ್ನು ಪ್ರಜ್ವಲಿಸುವೆ. ಅಂತಹ ನಿನಗೆ ಸರ್ವಾತ್ಮನಾ ಶರಣಾಗಿದ್ದೇನೆ. ॥39॥
ಮೂಲಮ್
(ಶ್ಲೋಕ-40)
ಅಥಾಪ್ಯಾಶ್ರಾವಯೇ ಬ್ರಹ್ಮ ನರಲೋಕವಿಡಂಬನಮ್ ।
ರಾಜ್ಞಃ ಪೈತೃಷ್ವಸೇಯಸ್ಯ ಭಕ್ತಸ್ಯ ಚ ಚಿಕೀರ್ಷಿತಮ್ ॥
ಅನುವಾದ
ಪ್ರಭೋ! ನೀನು ಸಾಕ್ಷಾತ್ ಪರಬ್ರಹ್ಮನಾಗಿದ್ದರೂ ಮನುಷ್ಯರಂತಹ ಲೀಲಾ ನಾಟಕವನ್ನಾಡುತ್ತಾ ನನ್ನಲ್ಲಿ ಕೇಳುತ್ತಿರುವೆಯಲ್ಲ! ಅದಕ್ಕಾಗಿ ನಿನ್ನ ಸೋದರಳಿಯನೂ, ಪ್ರೇಮಿ ಭಕ್ತನೂ ಆದ ಯುಧಿಷ್ಠಿರನು ಏನು ಮಾಡಬೇಕೆಂದಿರುವನೋ ಅದನ್ನು ನಾನು ನಿನಗೆ ಹೇಳುತ್ತೇನೆ. ॥40॥
ಮೂಲಮ್
(ಶ್ಲೋಕ-41)
ಯಕ್ಷ್ಯತಿ ತ್ವಾಂ ಮಖೇಂದ್ರೇಣ ರಾಜಸೂಯೇನ ಪಾಂಡವಃ ।
ಪಾರಮೇಷ್ಠ್ಯಕಾಮೋ ನೃಪತಿಸ್ತದ್ಭವಾನನುಮೋದತಾಮ್ ॥
ಅನುವಾದ
ಬ್ರಹ್ಮಲೋಕದಲ್ಲಿ ಪ್ರಾಪ್ತವಾಗುವ ಭೋಗವು ಯುಧಿಷ್ಠಿರ ಮಹಾರಾಜನಿಗೆ ಇಲ್ಲೇ ದೊರೆತಿದೆ; ಇದರಲ್ಲಿ ಸಂದೇಹವೇ ಇಲ್ಲ. ಆದರೂ ಅವನು ಶ್ರೇಷ್ಠವಾದ ರಾಜಸೂಯಯಜ್ಞದ ಮೂಲಕ ನಿನ್ನನ್ನು ಆರಾಧಿಸಬೇಕೆಂದಿರುವನು. ನೀನು ಕೃಪೆದೋರಿ ಅದನ್ನು ಅನುಮೋದಿಸುವವನಾಗು. ॥41॥
ಮೂಲಮ್
(ಶ್ಲೋಕ-42)
ತಸ್ಮಿನ್ ದೇವ ಕ್ರತುವರೇ ಭವಂತಂ ವೈ ಸುರಾದಯಃ ।
ದಿದೃಕ್ಷವಃ ಸಮೇಷ್ಯಂತಿ ರಾಜಾನಶ್ಚ ಯಶಸ್ವಿನಃ ॥
ಅನುವಾದ
ಭಗವಂತಾ! ಆ ಶ್ರೇಷ್ಠವಾದ ಯಜ್ಞದಲ್ಲಿ ನಿನ್ನ ದರ್ಶನ ಪಡೆಯಲು ದೊಡ್ಡ-ದೊಡ್ಡ ದೇವತೆಗಳೂ, ಯಶೋವಂತರಾದ ನರಪತಿಗಳೂ ಆಗಮಿಸುವರು. ॥42॥
ಮೂಲಮ್
(ಶ್ಲೋಕ-43)
ಶ್ರವಣಾತ್ಕೀರ್ತನಾತ್ ಧ್ಯಾನಾತ್ ಪೂಯಂತೇಂತೇವಸಾಯಿನಃ ।
ತವ ಬ್ರಹ್ಮಮಯಸ್ಯೇಶ ಕಿಮುತೇಕ್ಷಾಭಿಮರ್ಶಿನಃ ॥
ಅನುವಾದ
ಪ್ರಭೋ! ನೀನು ಸಾಕ್ಷಾತ್ ವಿಜ್ಞಾನಾನಂದ ಘನಬ್ರಹ್ಮನೇ ಆಗಿರುವೆ. ನಿನ್ನ ನಾಮಶ್ರವಣ, ನಾಮ ಸಂಕೀರ್ತನ ಮತ್ತು ಧ್ಯಾನ ಮಾತ್ರದಿಂದ ಅಂತ್ಯಜರೂ ಕೂಡ ಪವಿತ್ರರಾಗಿ ಬಿಡುತ್ತಾರೆ. ಹೀಗಿರುವಾಗ ನಿನ್ನ ದರ್ಶನ, ಸ್ಪರ್ಶಮಾಡುವವರ ಕುರಿತು ಹೇಳುವುದೇನಿದೆ? ॥43॥
ಮೂಲಮ್
(ಶ್ಲೋಕ-44)
ಯಸ್ಯಾಮಲಂ ದಿವಿ ಯಶಃ ಪ್ರಥಿತಂ ರಸಾಯಾಂ
ಭೂವೌ ಚ ತೇ ಭುವನಮಂಗಲ ದಿಗ್ವಿತಾನಮ್ ।
ಮಂದಾಕಿನೀತಿ ದಿವಿ ಭೋಗವತೀತಿ ಚಾಧೋ
ಗಂಗೇತಿ ಚೇಹ ಚರಣಾಂಬು ಪುನಾತಿ ವಿಶ್ವಮ್ ॥
ಅನುವಾದ
ತ್ರಿಭುವನ ಮಂಗಳನೇ! ನಿನ್ನ ನಿರ್ಮಲ ಕೀರ್ತಿಯು ಸಮಸ್ತ ದಿಕ್ಕುಗಳಲ್ಲಿಯೂ, ಸ್ವರ್ಗ, ಮರ್ತ್ಯ, ಪಾತಾಳಲೋಕಗಳಲ್ಲಿಯೂ ಹರಡಿಕೊಂಡುಬಿಟ್ಟಿದೆ. ಹಾಗೆಯೇ ನಿನ್ನ ಚರಣಾಮೃತ ತೀರ್ಥವು ಸ್ವರ್ಗದಲ್ಲಿ ಮಂದಾಕಿನಿಯಾಗಿಯೂ, ಪಾತಾಳದಲ್ಲಿ ಭೋಗವತಿಯಾಗಿಯೂ, ಭೂಲೋಕದಲ್ಲಿ ಗಂಗೆ ಎಂಬ ಹೆಸರಿನಿಂದಲೂ ಪ್ರವಹಿಸಿ ಸಮಸ್ತ ವಿಶ್ವವನ್ನು ಪವಿತ್ರಗೊಳಿಸುತ್ತಿದೆ. ॥44॥
ಮೂಲಮ್
(ಶ್ಲೋಕ-45)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ತತ್ರ ತೇಷ್ವಾತ್ಮಪಕ್ಷೇಷ್ವಗೃಹ್ಣತ್ಸು ವಿಜಿಗೀಷಯಾ ।
ವಾಚಃ ಪೇಶೈಃ ಸ್ಮಯನ್ಭೃತ್ಯಮುದ್ಧವಂ ಪ್ರಾಹ ಕೇಶವಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಸಭೆಯಲ್ಲಿ ಉಪಸ್ಥಿತರಾಗಿದ್ದ ಯದುವೀರರೆಲ್ಲರೂ ಮೊದಲು ಜರಾಸಂಧನೊಡನೆ ಯುದ್ಧಮಾಡಿ ಅವನನ್ನು ಗೆದ್ದುಕೊಳ್ಳ ಬೇಕೆಂದು ಅತ್ಯಂತ ಉತ್ಸುಕರಾಗಿದ್ದರು. ಆದ್ದರಿಂದ ನಾರದರ ಮಾತು ಅವರಿಗೆ ರುಚಿಸಲಿಲ್ಲ. ಆಗ ಬ್ರಹ್ಮಾದಿಗಳಿಗೆ ಶಾಸಕನಾದ ಭಗವಾನ್ ಶ್ರೀಕೃಷ್ಣನು ಮುಗುಳ್ನಗುತ್ತಾ ಸುಮಧುರವಾದ ಮಾತಿನಿಂದ ಉದ್ಧವನಲ್ಲಿ ಇಂತೆಂದನು - ॥45॥
ಮೂಲಮ್
(ಶ್ಲೋಕ-46)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ತ್ವಂ ಹಿ ನಃ ಪರಮಂ ಚಕ್ಷುಃ ಸುಹೃನ್ಮಂತ್ರಾರ್ಥತತ್ತ್ವ ವಿತ್ ।
ಅಥಾತ್ರ ಬ್ರೂಹ್ಯನುಷ್ಠೇಯಂ ಶ್ರದ್ದಧ್ಮಃ ಕರವಾಮ ತತ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳಿದನು — ಉದ್ಧವನೇ! ನೀನು ನಮ್ಮ ಹಿತೈಷಿಯೂ, ಸುಹೃದನೂ ಆಗಿರುವೆ. ಮಂತ್ರಾಲೋಚನೆಗಳ ರಹಸ್ಯವನ್ನು ತಿಳಿದಿರುವೆ. ಅದರಿಂದ ನೀನು ನಮಗೆ ಕಣ್ಣಿನಂತೆಯೇ ಇರುವೆ. ಈಗ ನಾವು ಏನು ಮಾಡಬೇಕೆಂಬುದನ್ನು ನೀನೇ ಹೇಳು. ನಿನ್ನ ಮಾತಿನಲ್ಲಿ ನಮಗೆ ವಿಶ್ವಾಸವಿದೆ. ಆದ್ದರಿಂದ ನಿನ್ನ ಸಲಹೆಯಂತೆಯೇ ನಾವು ನಡೆದುಕೊಳ್ಳುವೆವು. ॥46॥
ಮೂಲಮ್
(ಶ್ಲೋಕ-47)
ಇತ್ಯುಪಾಮಂತ್ರಿತೋ ಭರ್ತ್ರಾ ಸರ್ವಜ್ಞೇನಾಪಿ ಮುಗ್ಧವತ್ ।
ನಿದೇಶಂ ಶಿರಸಾಧಾಯ ಉದ್ಧವಃ ಪ್ರತ್ಯಭಾಷತ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಸರ್ವಜ್ಞನಾಗಿದ್ದರೂ ಏನೂ ತಿಳಿಯದವನಂತೆ ನನ್ನಲ್ಲಿ ಸಲಹೆ ಕೇಳುತ್ತಿರುವನಲ್ಲ! ಇರಲಿ, ಅವನ ಆಜ್ಞೆಯನ್ನು ಶಿರಸಾವಹಿಸಿ ಆತನು ಉತ್ತರಿಸತೊಡಗಿದನು. ॥47॥
ಅನುವಾದ (ಸಮಾಪ್ತಿಃ)
ಎಪ್ಪತ್ತನೆಯ ಅಧ್ಯಾಯವು ಮುಗಿಯಿತು. ॥70॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ ಭಗವದ್ಯಾನವಿಚಾರೇ ಸಪ್ತತಿತಮೋಽಧ್ಯಾಯಃ ॥70॥