[ಅರವತ್ತೋಂಭತ್ತನೇಯ ಅಧ್ಯಾಯ]
ಭಾಗಸೂಚನಾ
ದೇವರ್ಷಿ ನಾರದರು ಭಗವಂತನ ಗೃಹಸ್ಥ ವ್ಯವಹಾರಗಳನ್ನು ನೋಡಿದುದು
ಮೂಲಮ್
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ನರಕಂ ನಿಹತಂ ಶ್ರುತ್ವಾ ತಥೋದ್ವಾಹಂ ಚ ಯೋಷಿತಾಮ್ ।
ಕೃಷ್ಣೇನೈಕೇನ ಬಹ್ವೀನಾಂ ತದ್ದಿದೃಕ್ಷುಃ ಸ್ಮ ನಾರದಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ನರಕಾಸುರನನ್ನು ಕೊಂದು ಒಬ್ಬನೇ ಸಾವಿರಾರು ರಾಜಕುಮಾರಿಯರೊಂದಿಗೆ ವಿವಾಹವಾದನೆಂದು ಕೇಳಿದ ನಾರದಮಹರ್ಷಿಗಳಿಗೆ ಭಗವಂತನು ಅವರೊಂದಿಗೆ ಗೃಹಚರ್ಯೆಯನ್ನು ಹೇಗೆ ನಡೆಸುವನೆಂದು ನೋಡುವ ಬಯಕೆ ಉಂಟಾಯಿತು. ॥1॥
ಮೂಲಮ್
(ಶ್ಲೋಕ-2)
ಚಿತ್ರಂ ಬತೈತದೇಕೇನ ವಪುಷಾ ಯುಗಪತ್ ಪೃಥಕ್ ।
ಗೃಹೇಷು ದ್ವ್ಯಷ್ಟಸಾಹಸ್ರಂ ಸಿಯ ಏಕ ಉದಾವಹತ್ ॥
ಅನುವಾದ
ಅವರು ಹೀಗೆ ಯೋಚಿಸತೊಡಗಿದರು ಭಗವಾನ್ ಶ್ರೀಕೃಷ್ಣನು ಒಂದೇ ಶರೀರದಲ್ಲಿ ಒಂದೇ ಸಮಯದಲ್ಲಿ ಹದಿನಾರು ಸಾವಿರ ಅರಮನೆಯಲ್ಲಿ ಬೇರೆ-ಬೇರೆಯಾಗಿ ಹದಿನಾರು ಸಾವಿರ ರಾಜಕುಮಾರಿಯರೊಂದಿಗೆ ಹೇಗೆ ಪಾಣಿಗ್ರಹಣ ಮಾಡಿದನು? ಇದು ಪರಮಾಶ್ಚರ್ಯವಾಗಿದೆ. ॥2॥
ಮೂಲಮ್
(ಶ್ಲೋಕ-3)
ಇತ್ಯುತ್ಸುಕೋ ದ್ವಾರವತೀಂ ದೇವರ್ಷಿರ್ದ್ರಷ್ಟುಮಾಗಮತ್ ।
ಪುಷ್ಪಿತೋಪವನಾರಾಮದ್ವಿಜಾಲಿಕುಲನಾದಿತಾಮ್ ॥
ಅನುವಾದ
ದೇವಋಷಿ ನಾರದರು ಈ ಉತ್ಸುಕತೆಯಿಂದ ಪ್ರೇರಿತರಾಗಿ ಭಗವಂತನ ಲೀಲೆಗಳನ್ನು ನೋಡಲಿಕ್ಕಾಗಿ ದ್ವಾರಕೆಗೆ ಬಂದರು. ಅಲ್ಲಿನ ವನ-ಉಪವನಗಳಲ್ಲಿ ಬಣ್ಣ-ಬಣ್ಣದ ಅರಳಿದ ಪುಷ್ಪಗಳಿಂದ ತುಂಬಿದ ವೃಕ್ಷಗಳು ತುಂಬಿಕೊಂಡಿದ್ದವು. ಅವುಗಳಲ್ಲಿ ನಾನಾ ರೀತಿಯ ಪಕ್ಷಿಗಳು ಚಿಲಿ-ಪಿಲಿ ಗುಟ್ಟುತ್ತಿದ್ದವು. ದುಂಬಿಗಳು ಝೇಂಕರಿಸುತ್ತಿದ್ದವು. ॥3॥
ಮೂಲಮ್
(ಶ್ಲೋಕ-4)
ಉತ್ಫುಲ್ಲೇಂದೀವರಾಂಭೋಜಕಹ್ಲಾರಕುಮುದೋತ್ಪಲೈಃ ।
ಛುರಿತೇಷು ಸರಸ್ಸೂಚ್ಚೈಃ ಕೂಜಿತಾಂ ಹಂಸಸಾರಸೈಃ ॥
ಅನುವಾದ
ನಿರ್ಮಲವಾದ ನೀರಿನಿಂದ ತುಂಬಿದ ಸರೋವರಗಳಲ್ಲಿ ನೀಲಿ, ಕೆಂಪು, ಬಿಳಿ ಬಣ್ಣಗಳ ಕಮಲ ನೈದಿಲೆ, ಕೆನ್ನೈದಿಲೆ ಮೊದಲಾದ ಸುಗಂಧಯುಕ್ತವಾದ ಪುಷ್ಪಗಳಿದ್ದವು. ಆ ಪುಷ್ಪಗಳ ಮಧ್ಯದಲ್ಲಿ ಹಂಸ-ಕಾರಂಡವ ಮೊದಲಾದ ಪಕ್ಷಿಗಳು ಕಲರವ ಮಾಡುತ್ತಿದ್ದವು. ॥4॥
ಮೂಲಮ್
(ಶ್ಲೋಕ-5)
ಪ್ರಾಸಾದಲಕ್ಷೈರ್ನವಭಿರ್ಜುಷ್ಟಾಂ ಸ್ಫಾಟಿಕರಾಜತೈಃ ।
ಮಹಾಮರಕತಪ್ರಖ್ಯೈಃ ಸ್ವರ್ಣರತ್ನಪರಿಚ್ಛದೈಃ ॥
ಅನುವಾದ
ದ್ವಾರಕೆಯಲ್ಲಿ ಸ್ಫಟಿಕದ ಮತ್ತು ಬೆಳ್ಳಿಯಿಂದ ನಿರ್ಮಿಸಿದ ಒಂಭತ್ತು ಲಕ್ಷ ಅರಮನೆಗಳಿದ್ದವು. ಅವುಗಳ ನೆಲಗಳು ಮರಕತಮಣಿಗಳ ಪ್ರಭೆಯಿಂದ ಹೊಳೆಯುತ್ತಿದ್ದುವು ಮತ್ತು ಅವುಗಳಲ್ಲಿ ಚಿನ್ನ ಹಾಗೂ ವಜ್ರಗಳಿಂದ ಮಾಡಿದ ಪರಿಕರಗಳಿಂದ ಸಂಪನ್ನವಾಗಿದ್ದವು. ॥5॥
ಮೂಲಮ್
(ಶ್ಲೋಕ-6)
ವಿಭಕ್ತರಥ್ಯಾಪಥಚತ್ವರಾಪಣೈಃ
ಶಾಲಾಸಭಾಭೀ ರುಚಿರಾಂ ಸುರಾಲಯೈಃ ।
ಸಂಸಿಕ್ತಮಾರ್ಗಾಂಗಣವೀಥಿದೇಹಲೀಂ
ಪತತ್ಪತಾಕಾಧ್ವಜವಾರಿತಾತಪಾಮ್ ॥
ಅನುವಾದ
ಅಲ್ಲಿಯ ರಾಜಬೀದಿಗಳು, ಗಲ್ಲಿಗಳು, ಚೌಕಗಳು, ಪೇಟೆಗಳು ಅತ್ಯಂತ ಸುಂದರವಾಗಿದ್ದವು. ಅಶ್ವಶಾಲೆಗಳು, ಗೋಶಾಲೆಗಳು, ಸಭಾಭವನಗಳು, ದೇವ ಮಂದಿರಗಳು ಇವುಗಳಿಂದಾಗಿ ಅದರ ಸೌಂದರ್ಯವು ಇನ್ನೂ ಬೆಳಗುತ್ತಿತ್ತು. ದ್ವಾರಕೆಯ ಬೀದಿಗಳಲ್ಲಿ, ಚೌಕಗಳಲ್ಲಿ, ಓಣಿಗಳಲ್ಲಿ, ಬಾಗಿಲುಗಳಲ್ಲಿ ಸುಗಂಧ ದ್ರವ್ಯಗಳನ್ನು ಸಿಂಪಡಿಸಿತ್ತು. ಹಾರಾಡುತ್ತಿದ್ದ ಧ್ವಜ-ಪತಾಕೆಗಳು ಬಿಸಿಲಿನ ತಾಪವನ್ನು ತಡೆಯುತ್ತಿದ್ದವು. ॥6॥
ಮೂಲಮ್
(ಶ್ಲೋಕ-7)
ತಸ್ಯಾಮಂತಃಪುರಂ ಶ್ರೀಮದರ್ಚಿತಂ ಸರ್ವಧಿಷ್ಣ್ಯಪೈಃ ।
ಹರೇಃ ಸ್ವಕೌಶಲಂ ಯತ್ರ ತ್ವಷ್ಟ್ರಾ ಕಾರ್ತ್ಸ್ನ್ಯೇನ ದರ್ಶಿತಮ್ ॥
ಅನುವಾದ
ಆ ದ್ವಾರಕೆಯ ಮಧ್ಯಭಾಗದಲ್ಲಿ ಭಗವಾನ್ ಶ್ರೀಕೃಷ್ಣನ ವಿಶಾಲವಾದ ಸುಂದರವಾದ ಲೋಕಪಾಲರಿಂದ ಪೂಜಿಸಲ್ಪಡುತ್ತಿದ್ದ ಅಂತಃಪುರವಿತ್ತು. ಅದನ್ನು ನಿರ್ಮಿಸಲು ವಿಶ್ವ ಕರ್ಮನು ತನ್ನ ಎಲ್ಲ ಕಲಾ-ಕೌಶಲ್ಯವನ್ನು ಉಪಯೋಗಿಸಿದ್ದನು. ॥7॥
ಮೂಲಮ್
(ಶ್ಲೋಕ-8)
ತತ್ರ ಷೋಡಶಭಿಃ ಸದ್ಮಸಹಸ್ರೈಃ ಸಮಲಂಕೃತಮ್ ।
ವಿವೇಶೈಕತಮಂ ಶೌರೇಃ ಪತ್ನೀನಾಂ ಭವನಂ ಮಹತ್ ॥
ಅನುವಾದ
ಅತ್ಯಂತ ದೊಡ್ಡದಾದ ಆ ಅಂತಃಪುರವು ಹದಿನಾರು ಸಾವಿರ ಉಪಾಂತಃಪುರಗಳಿಂದ ಸಮಲಂಕೃತವಾಗಿತ್ತು. ಶೌರಿಯ ಅಷ್ಟು ಅಂತಃಪುರಗಳಲ್ಲಿ ದೊಡ್ಡದಾದ ಭವನದಲ್ಲಿ ನಾರದರು ಪ್ರವೇಶಿಸಿದರು. ॥8॥
ಮೂಲಮ್
(ಶ್ಲೋಕ-9)
ವಿಷ್ಟಬ್ಧಂ ವಿದ್ರುಮಸ್ತಂಭೈರ್ವೈದೂರ್ಯಲಕೋತ್ತಮೈಃ ।
ಇಂದ್ರನೀಲಮಯೈಃ ಕುಡ್ಯೈರ್ಜಗತ್ಯಾ ಚಾಹತತ್ವಿಷಾ ॥
ಅನುವಾದ
ಆ ಭವನದಲ್ಲಿ ವೈಢೂರ್ಯದ ಬೋದಿಗೆಗಳಿಂದ ಕೂಡಿದ ಹವಳದ ಕಂಬಗಳು, ಇಂದ್ರನೀಲಮಣಿಯ ಗೋಡೆಗಳು ಮತ್ತು ನೆಲಗಳು ಥಳ-ಥಳಿಸುತ್ತಿದ್ದವು. ॥9॥
ಮೂಲಮ್
(ಶ್ಲೋಕ-10)
ವಿತಾನೈರ್ನಿರ್ಮಿತೈಸ್ತ್ವಷ್ಟ್ರಾ ಮುಕ್ತಾದಾಮವಿಲಂಬಿಭಿಃ ।
ದಾಂತೈರಾಸನಪರ್ಯಂಕೈರ್ಮಣ್ಯುತ್ತಮಪರಿಷ್ಕೃತೈಃ ॥
ಅನುವಾದ
ಮುತ್ತಿನ ಸರಗಳಿಂದ ಸಮಲಂಕೃತವಾದ ಅನೇಕ ಚಪ್ಪರಗಳು ವಿಶ್ವ ಕರ್ಮನಿಂದ ನಿರ್ಮಿಸಲ್ಪಟ್ಟಿತ್ತು. ಹಸ್ತಿದಂತದಿಂದ ಮಾಡಿದ ಆಸನಗಳೂ ಮತ್ತು ಮಂಚಗಳಿದ್ದು, ಅವುಗಳಲ್ಲಿ ಶ್ರೇಷ್ಠ ವಾದ ಮಣಿ-ರತ್ನಗಳನ್ನು ಜೋಡಿಸಿದ್ದರು. ॥10॥
ಮೂಲಮ್
(ಶ್ಲೋಕ-11)
ದಾಸೀಭಿರ್ನಿಷ್ಕಕಂಠೀಭಿಃ ಸುವಾಸೋಭಿರಲಂಕೃತಮ್ ।
ಪುಂಭಿಃ ಸಕಂಚುಕೋಷ್ಣೀಷಸುವಸಮಣಿಕುಂಡಲೈಃ ॥
ಅನುವಾದ
ಸುಂದರವಾದ ವಸ್ತ್ರಗಳನ್ನುಟ್ಟು ಚಿನ್ನದ ಸರಗಳನ್ನು ಧರಿಸಿದ್ದ ನೂರಾರು ದಾಸಿಯರಿಂದ ಆ ಭವನವು ಸಮಲಂಕೃತವಾಗಿತ್ತು. ಅಂಗಿ-ಪೇಟ-ಸುಂದರವಾದ ಸಮವಸ್ತ್ರ ಮತ್ತು ಮಣಿ ಕುಂಡಲಗಳನ್ನು ಧರಿಸಿದ್ದ ಸೇವಕರೂ ತಮ್ಮ-ತಮ್ಮ ಕೆಲಸದಲ್ಲಿ ವ್ಯಸ್ತರಾಗಿದ್ದು ಭವನದ ಶೋಭೆಯನ್ನು ಹೆಚ್ಚಿಸಿದ್ದರು. ॥11॥
ಮೂಲಮ್
(ಶ್ಲೋಕ-12)
ರತ್ನಪ್ರದೀಪನಿಕರದ್ಯುತಿಭಿರ್ನಿರಸ್ತ-
ಧ್ವಾಂತಂ ವಿಚಿತ್ರವಲಭೀಷು ಶಿಖಂಡಿನೋಂಗ ।
ನೃತ್ಯಂತಿ ಯತ್ರ ವಿಹಿತಾಗುರುಧೂಪಮಕ್ಷೈ-
ರ್ನಿರ್ಯಾಂತಮೀಕ್ಷ್ಯ ಘನಬುದ್ಧಯ ಉನ್ನದಂತಃ ॥
ಅನುವಾದ
ಅನೇಕ ರತ್ನದೀಪಗಳು ತಮ್ಮ ಪ್ರಭೆಯಿಂದ ಕತ್ತಲನ್ನು ಓಡಿಸುತ್ತಿದ್ದವು. ಅಗರು ಧೂಪದ ಹೊಗೆಯು ಕಿಡಿಕಿಗಳಿಂದ ಹೊರಸೂಸುತ್ತಿತ್ತು. ಅದನ್ನು ನೋಡಿದ ನವಿಲುಗಳು ಮೋಡಗಳೆಂದು ಭ್ರಮಿಸಿ ಕೇಕೆಹಾಕಿ ಕುಣಿಯುತ್ತಿದ್ದವು. ॥12॥
ಮೂಲಮ್
(ಶ್ಲೋಕ-13)
ತಸ್ಮಿನ್ ಸಮಾನಗುಣರೂಪವಯಸ್ಸುವೇಷ-
ದಾಸೀಸಹಸ್ರಯುತಯಾನುಸವಂ ಗೃಹಿಣ್ಯಾ ।
ವಿಪ್ರೋ ದದರ್ಶ ಚಮರವ್ಯಜನೇನ ರುಕ್ಮ-
ದಂಡೇನ ಸಾತ್ವತಪತಿಂ ಪರಿವೀಜಯಂತ್ಯಾ ॥
ಅನುವಾದ
ಅಂತಹ ದಿವ್ಯವಾದ ಅಂತಃಪುರದಲ್ಲಿ ರೂಪ-ಗುಣ ವಯಸ್ಸು-ವೇಷ-ಇವುಗಳಲ್ಲಿ ತನಗೆ ಸಮಾನರಾಗಿದ್ದ ಸಾವಿರಾರು ದಾಸಿಯರಿಂದ ಪರಿವೃತಳಾದ ರುಕ್ಮಿಣೀ ದೇವಿಯು ಚಿನ್ನದ ಹಿಡಿಯುಳ್ಳ ಬೀಸಣಿಕೆಯನ್ನು ಹಿಡಿದು ಪರ್ಯಂಕದಲ್ಲಿ ಕುಳಿತ್ತಿದ್ದ ಶ್ರೀಕೃಷ್ಣನಿಗೆ ಗಾಳಿ ಬೀಸುತ್ತಿರುವುದನ್ನು ನಾರದರು ನೋಡಿದರು. ॥13॥
ಮೂಲಮ್
(ಶ್ಲೋಕ-14)
ತಂ ಸನ್ನಿರೀಕ್ಷ್ಯ ಭಗವಾನ್ ಸಹಸೋತ್ಥಿತಃ ಶ್ರೀ-
ಪರ್ಯಂಕತಃ ಸಕಲಧರ್ಮಭೃತಾಂ ವರಿಷ್ಠಃ ।
ಆನಮ್ಯ ಪಾದಯುಗಲಂ ಶಿರಸಾ ಕಿರೀಟ-
ಜುಷ್ಟೇನ ಸಾಂಜಲಿರವೀವಿಶದಾಸನೇ ಸ್ವೇ ॥
ಅನುವಾದ
ನಾರದ ಮಹರ್ಷಿಗಳನ್ನು ಕಾಣುತ್ತಲೇ ಸಮಸ್ತ ಧಾರ್ಮಿಕರ ಮುಕುಟಮಣಿಯಾದ ಭಗವಾನ್ ಶ್ರೀಕೃಷ್ಣನು ರುಕ್ಮಿಣಿಯ ಪರ್ಯಂಕದಿಂದ ಮೇಲೆದ್ದು ಮುಂದೆ ಹೋಗಿ ಅವರ ಚರಣ ಕಮಲಗಳಿಗೆ ಕಿರೀಟದಿಂದ ಕೂಡಿದ ತಲೆಯಿಂದ ನಮಸ್ಕರಿಸಿ, ಕೈಜೋಡಿಸಿಕೊಂಡು ಅವರನ್ನು ತನ್ನ ಆಸನದಲ್ಲಿ ಕುಳ್ಳಿರಿಸಿದನು. ॥14॥
ಮೂಲಮ್
(ಶ್ಲೋಕ-15)
ತಸ್ಯಾವನಿಜ್ಯ ಚರಣೌ ತದಪಃ ಸ್ವಮೂರ್ಧ್ನಾ
ಬಿಭ್ರಜ್ಜಗದ್ಗುರುತರೋಪಿ ಸತಾಂ ಪತಿರ್ಹಿ ।
ಬ್ರಹ್ಮಣ್ಯದೇವ ಇತಿ ಯದ್ಗುಣನಾಮ ಯುಕ್ತಂ
ತಸ್ಯೈವ ಯಚ್ಚರಣಶೌಚಮಶೇಷತೀರ್ಥಮ್ ॥
ಅನುವಾದ
ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಚರಾಚರ ಜಗತ್ತಿಗೆ ಪರಮಗುರುವಾಗಿದ್ದು, ಅವನ ಚರಣಕಮಲಗಳಿಂದ ಹುಟ್ಟಿದ ಗಂಗೆಯು ಮೂರು ಲೋಕಗಳನ್ನು ಪಾವನಗೊಳಿಸುವಂತಹುದು. ಹೀಗಿದ್ದರೂ ಅವನು ಪರಮಭಕ್ತವತ್ಸಲನೂ, ಸಂತರ ಪರಮ ಆದರ್ಶನೂ, ಸಂತರ ಸ್ವಾಮಿಯೂ ಆಗಿರುವನು. ಅವನಿಗೆ ಬ್ರಹ್ಮಣ್ಯದೇವ ಎಂಬುದೊಂದು ಅಸಾಧಾರಣ ಹೆಸರೂ ಕೂಡ ಇದೆ. ಅವನು ಬ್ರಾಹ್ಮಣರನ್ನೇ ತನ್ನ ಆರಾಧ್ಯರೆಂದು ಭಾವಿಸುವನು. ಬ್ರಹ್ಮಣ್ಯದೇವ ಎಂಬ ನಾಮವು ಅವನ ಗುಣಗಳಿಗೆ ಅನುರೂಪವೇ ಆಗಿದ್ದು ಉಚಿತವೂ ಆಗಿದೆ. ಅದರಿಂದಲೇ ಶ್ರೀಕೃಷ್ಣನು ನಾರದರ ಕಾಲನ್ನು ತೊಳೆದು ಆ ಚರಣೋದಕವನ್ನು ತನ್ನ ತಲೆಯಲ್ಲಿ ಧರಿಸಿಕೊಂಡನು. ॥15॥
ಮೂಲಮ್
(ಶ್ಲೋಕ-16)
ಸಂಪೂಜ್ಯ ದೇವಋಷಿವರ್ಯಮೃಷಿಃ ಪುರಾಣೋ
ನಾರಾಯಣೋ ನರಸಖೋ ವಿಧಿನೋದಿತೇನ ।
ವಾಣ್ಯಾಭಿಭಾಷ್ಯ ಮಿತಯಾಮೃತಮಿಷ್ಟಯಾ ತಂ
ಪ್ರಾಹ ಪ್ರಭೋ ಭಗವತೇ ಕರವಾಮ ಹೇ ಕಿಮ್ ॥
ಅನುವಾದ
ಹೀಗೆ ಅರ್ಜುನನ ಮಿತ್ರನೂ, ಸಮದರ್ಶಿಯೂ ಪುರಾಣಪುರುಷನೂ ಆದ ಭಗವಾನ್ ಶ್ರೀನಾರಾಯಣನು ಶಾಸೋಕ್ತವಿಧಿಯಿಂದ ದೇವರ್ಷಿ ಶ್ರೇಷ್ಠರಾದ ನಾರದರನ್ನು ಪೂಜಿಸಿದನು. ಅನಂತರ ಅಮೃತಕ್ಕಿಂತಲೂ ಮಧುರವಾದ, ಮಿತವಾದ ಮಾತುಗಳಿಂದ ಅವರನ್ನು ಸ್ವಾಗತಿಸಿ-ಸತ್ಕರಿಸಿ, ಕೇಳಿದನು - ಪ್ರಭುಗಳೇ! ಷಡ್ಗುಣೈಶ್ವರ್ಯ ಸಂಪನ್ನರಾದ ನಿಮಗೆ ನಾನು ಯಾವ ಸೇವೆ ಮಾಡಲಿ? ॥16॥
ಮೂಲಮ್
(ಶ್ಲೋಕ-17)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ನೈವಾದ್ಭುತಂ ತ್ವಯಿ ವಿಭೋಖಿಲಲೋಕನಾಥೇ
ಮೈತ್ರೀ ಜನೇಷು ಸಕಲೇಷು ದಮಃ ಖಲಾನಾಮ್ ।
ನಿಃಶ್ರೇಯಸಾಯ ಹಿ ಜಗತ್ಸ್ಥಿತಿರಕ್ಷಣಾಭ್ಯಾಂ
ಸ್ವೈರಾವತಾರ ಉರುಗಾಯ ವಿದಾಮ ಸುಷ್ಠು ॥
ಅನುವಾದ
ದೇವರ್ಷಿ ನಾರದರು ಹೇಳಿದರು — ಭಗವಂತಾ! ನೀನು ಸಮಸ್ತ ಲೋಕಗಳಿಗೆ ಏಕಮಾತ್ರ ಸ್ವಾಮಿಯಾಗಿರುವೆ. ಭಕ್ತರಲ್ಲಿ ಪ್ರೇಮ, ದುಷ್ಟರಲ್ಲಿ ದಂಡವೆಂಬುದು ನಿನ್ನಲ್ಲಿ ಹೊಸದಾದ ವಿಷಯವೇನೂ ಅಲ್ಲ. ಪರಮ ಯಶಸ್ವಿಯಾದ ಪ್ರಭೋ! ನೀನು ಜಗತ್ತಿನ ಸ್ಥಿತಿ ಮತ್ತು ರಕ್ಷಣೆಯ ಮೂಲಕ ಸಮಸ್ತ ಪ್ರಾಣಿಗಳಿಗೂ ಕಲ್ಯಾಣವನ್ನುಂಟುಮಾಡುವ ಸಲುವಾಗಿಯೇ ಸ್ವೆಚ್ಛೆಯಿಂದ ಅವತಾರವೆತ್ತುವೆ. ಉರುಗಾಯನೇ! ನಾವು ಈ ವಿಷಯವನ್ನು ಚೆನ್ನಾಗಿ ತಿಳಿದಿರುತ್ತೇವೆ. ॥17॥
ಮೂಲಮ್
(ಶ್ಲೋಕ-18)
ದೃಷ್ಟಂ ತವಾಂಘ್ರಿಯುಗಲಂ ಜನತಾಪವರ್ಗಂ
ಬ್ರಹ್ಮಾದಿಭಿರ್ಹೃದಿ ವಿಚಿಂತ್ಯಮಗಾಧಬೋಧೈಃ ।
ಸಂಸಾರಕೂಪಪತಿತೋತ್ತರಣಾವಲಂಬಂ
ಧ್ಯಾಯಂಶ್ಚರಾಮ್ಯನುಗೃಹಾಣ ಯಥಾ ಸ್ಮೃತಿಃ ಸ್ಯಾತ್ ॥
ಅನುವಾದ
ಇಂದು ನನಗೆ ನಿನ್ನ ಚರಣ ಕಮಲಗಳ ದರ್ಶನವಾದುದು ದೊಡ್ಡ ಸೌಭಾಗ್ಯದ ಮಾತಾಗಿದೆ. ನಿನ್ನ ಈ ಚರಣಕಮಲಗಳು ಸಮಸ್ತ ಜನರಿಗೆ ಮೋಕ್ಷವನ್ನು ಕೊಡುವುದರಲ್ಲಿ ಸಮರ್ಥವಾಗಿವೆ. ಅಸೀಮವಾದ ಜ್ಞಾನವುಳ್ಳ ಬ್ರಹ್ಮಾ, ಶಂಕರರೇ ಮೊದಲಾದವರು ಸದಾಕಾಲ ತಮ್ಮ ಹೃದಯದಲ್ಲಿ ಅವುಗಳನ್ನು ಚಿಂತಿಸುತ್ತಾ ಇರುತ್ತಾರೆ. ವಾಸ್ತವವಾಗಿ ಆ ಶ್ರೀಚರಣಗಳೇ ಸಂಸಾರವೆಂಬ ಬಾವಿಯಲ್ಲಿ ಬಿದ್ದಿರುವ ಜನರನ್ನು ಮೇಲಕ್ಕೆತ್ತಲೂ ಆಧಾರಭೂತವಾಗಿದೆ. ನಿನ್ನ ಆ ಚರಣಕಮಲಗಳ ಸ್ಮರಣೆಯು ನನಗಿರಲಿ ಮತ್ತು ನಾನು ಎಲ್ಲೇ ಇದ್ದರೂ, ಹೇಗಿದ್ದರೂ ಅವುಗಳ ಧ್ಯಾನದಲ್ಲೇ ತನ್ಮಯನಾಗಿರುವಂತೆ ಅನುಗ್ರಹಿಸು. ॥18॥
ಮೂಲಮ್
(ಶ್ಲೋಕ-19)
ತತೋನ್ಯದಾವಿಶದ್ಗೇಹಂ ಕೃಷ್ಣಪತ್ನ್ಯಾಃ ಸ ನಾರದಃ ।
ಯೋಗೇಶ್ವರೇಶ್ವರಸ್ಯಾಂಗ ಯೋಗಮಾಯಾವಿವಿತ್ಸಯಾ ॥
ಅನುವಾದ
ಪರೀಕ್ಷಿತನೇ! ಅನಂತರ ನಾರದ ಮಹರ್ಷಿಗಳು ಯೋಗೇಶ್ವರರಿಗೂ ಈಶ್ವರನಾದ ಭಗವಾನ್ ಶ್ರೀಕೃಷ್ಣನ ಯೋಗಮಾಯೆಯ ರಹಸ್ಯವನ್ನು ತಿಳಿಯಲು ಮತ್ತೊಬ್ಬ ಪತ್ನಿಯ ಅಂತಃಪುರಕ್ಕೆ ಹೋದರು. ॥19॥
ಮೂಲಮ್
(ಶ್ಲೋಕ-20)
ದೀವ್ಯಂತಮಕ್ಷೈಸ್ತತ್ರಾಪಿ ಪ್ರಿಯಯಾ ಚೋದ್ಧವೇನ ಚ ।
ಪೂಜಿತಃ ಪರಯಾ ಭಕ್ತ್ಯಾ ಪ್ರತ್ಯುತ್ಥಾನಾಸನಾದಿಭಿಃ ॥
ಅನುವಾದ
ಅಲ್ಲಿ ಶ್ರೀಕೃಷ್ಣನು ತನ್ನ ಪ್ರಿಯೆಯೊಂದಿಗೆ ಮತ್ತು ಉದ್ಧವನೊಂದಿಗೆ ಪಗಡೆಯಾಡುತ್ತಿದ್ದುದನ್ನು ನೋಡಿದರು. ಅಲ್ಲಿಯೂ ಭಗವಂತನು ಎದ್ದುನಿಂತು, ನಾರದರನ್ನು ಸ್ವಾಗತಿಸಿ, ಆಸನದಲ್ಲಿ ಕುಳ್ಳಿರಿಸಿ ಬಗೆ-ಬಗೆಯ ಸಾಮಗ್ರಿಗಳಿಂದ ಭಕ್ತಿಯಿಂದ ಪೂಜಿಸಿದನು. ॥20॥
ಮೂಲಮ್
(ಶ್ಲೋಕ-21)
ಪೃಷ್ಟಶ್ಚಾವಿದುಷೇವಾಸೌ ಕದಾಯಾತೋ ಭವಾನಿತಿ ।
ಕ್ರಿಯತೇ ಕಿಂ ನು ಪೂರ್ಣಾನಾಮಪೂರ್ಣೈರಸ್ಮದಾದಿಭಿಃ ॥
ಅನುವಾದ
ಬಳಿಕ ಭಗವಂತನು ಏನೂ ತಿಳಿಯದವನಂತೆ ಕೇಳಿದನು. ಮಹರ್ಷಿಗಳೇ! ಯಾವಾಗ ತಾವು ದಯಮಾಡಿಸಿದಿರಿ? ನೀವಾದರೋ ಪರಿಪೂರ್ಣ ಆತ್ಮಾರಾಮರಾಗಿರುವಿರಿ. ಅಪೂರ್ಣರಾದ ನಾವು ನಿಮ್ಮ ಯಾವ ಸೇವೆ ಮಾಡಬಲ್ಲೆವು? ॥21॥
ಮೂಲಮ್
(ಶ್ಲೋಕ-22)
ಅಥಾಪಿ ಬ್ರೂಹಿ ನೋ ಬ್ರಹ್ಮನ್ಜನ್ಮೈತಚ್ಛೋಭನಂ ಕುರು ।
ಸ ತು ವಿಸ್ಮಿತ ಉತ್ಥಾಯ ತೂಷ್ಣೀಮನ್ಯದಗಾದ್ಗೃಹಮ್ ॥
ಅನುವಾದ
ಹೀಗಿದ್ದರೂ ಬ್ರಹ್ಮ ಸ್ವರೂಪರಾದ ನಾರದರೇ! ಯಾವ ಕಾರ್ಯವನ್ನು ಮಾಡಿಕೊಡಬೇಕೆಂದು ಅಪ್ಪಣೆಕೊಡಿರಿ. ತಮ್ಮ ಸೇವೆಗೆ ಅವಕಾಶ ಮಾಡಿಕೊಟ್ಟು ನಮ್ಮ ಜನ್ಮವನ್ನು ಸಾರ್ಥಕಗೊಳಿಸಿರಿ. ಇದನ್ನು ನೋಡಿದ ನಾರದರು ಆಶ್ಚರ್ಯಚಕಿತರಾದರು. ಅವರು ಅಲ್ಲಿಂದೆದ್ದು ಏನೂ ಮಾತನಾಡದೆ ಇನ್ನೊಂದು ಅಂತಃಪುರಕ್ಕೆ ಹೊರಟು ಹೋದರು. ॥22॥
ಮೂಲಮ್
(ಶ್ಲೋಕ-23)
ತತ್ರಾಪ್ಯಚಷ್ಟ ಗೋವಿಂದಂ ಲಾಲಯಂತಂ ಸುತಾನ್ಶಿಶೂನ್ ।
ತತೋನ್ಯಸ್ಮಿನ್ಗೃಹೇಪಶ್ಯನ್ಮಜ್ಜನಾಯ ಕೃತೋದ್ಯಮಮ್ ॥
ಅನುವಾದ
ಆ ಅಂತಃಪುರದಲ್ಲಿ ಭಗವಾನ್ ಶ್ರೀಕೃಷ್ಣನು ಎಳೆಯ ಮಕ್ಕಳನ್ನು ಆಡಿಸುತ್ತಾ ಕುಳಿತಿರುವುದನ್ನು ನೋಡಿದರು. ಅಲ್ಲಿಂದ ಮತ್ತೆ ಮತ್ತೊಂದು ಅಂತಃಪುರಕ್ಕೆ ಹೋದರೆ ಅಲ್ಲಿ ಶ್ರೀಕೃಷ್ಣನು ಸ್ನಾನದ ಸಿದ್ಧತೆ ಮಾಡುತ್ತಿರುವುದನ್ನು ನೋಡಿದರು. ॥23॥
ಮೂಲಮ್
(ಶ್ಲೋಕ-24)
ಜುಹ್ವಂತಂ ಚ ವಿತಾನಾಗ್ನೀನ್ ಯಜಂತಂ ಪಂಚಭಿರ್ಮಖೈಃ ।
ಭೋಜಯಂತಂ ದ್ವಿಜಾನ್ ಕ್ವಾಪಿ ಭುಂಜಾನಮವಶೇಷಿತಮ್ ॥
ಅನುವಾದ
(ಹೀಗೆಯೇ ದೇವರ್ಷಿನಾರದರು ಬೇರೆ ಬೇರೆ ಅಂತಃಪುರಗಳಲ್ಲಿ ಭಗವಂತನು ಬೇರೆ-ಬೇರೆ ಕಾರ್ಯಗಳನ್ನು ಮಾಡುತ್ತಿರುವುದನ್ನು ನೋಡಿದರು) - ಕೆಲವುಕಡೆ ಅವನು ಯಜ್ಞಕುಂಡದಲ್ಲಿ ಹೋಮಮಾಡುತ್ತಿದ್ದನು. ಕೆಲವೆಡೆ ಪಂಚಮಹಾ ಯಜ್ಞಗಳಿಂದ ದೇವತೆ ಮೊದಲಾದವರನ್ನು ಆರಾಧಿಸುತ್ತಿದ್ದನು. ಕೆಲವೆಡೆ ಬ್ರಾಹ್ಮಣರಿಗೆ ಭೋಜನ ಮಾಡಿಸುತ್ತಿದ್ದನು. ಕೆಲವೆಡೆ ಯಜ್ಞಶೇಷವನ್ನು ಭುಂಜಿಸುತ್ತಿದ್ದನು. ॥24॥
ಮೂಲಮ್
(ಶ್ಲೋಕ-25)
ಕ್ವಾಪಿ ಸಂಧ್ಯಾಮುಪಾಸೀನಂ ಜಪಂತಂ ಬ್ರಹ್ಮ ವಾಗ್ಯತಮ್ ।
ಏಕತ್ರ ಚಾಸಿಚರ್ಮಭ್ಯಾಂ ಚರಂತಮಸಿವರ್ತ್ಮಸು ॥
ಅನುವಾದ
ಕೆಲವೆಡೆ ಸಂಧ್ಯಾವಂದನೆ ಮಾಡುತ್ತಿದ್ದರೆ, ಕೆಲವೆಡೆ ಮೌನವಾಗಿ ಗಾಯತ್ರೀ ಜಪಮಾಡುತ್ತಿದ್ದನು. ಕೆಲವೆಡೆ ಕತ್ತಿ-ಗುರಾಣಿ ಹಿಡಿದು ಶಸ್ತ್ರಾಭ್ಯಾಸ ಮಾಡುತ್ತಿದ್ದನು. ॥25॥
ಮೂಲಮ್
(ಶ್ಲೋಕ-26)
ಅಶ್ವೈರ್ಗಜೈ ರಥೈಃ ಕ್ವಾಪಿ ವಿಚರಂತಂ ಗದಾಗ್ರಜಮ್ ।
ಕ್ವಚಿಚ್ಛಯಾನಂ ಪರ್ಯಂಕೇ ಸ್ತೂಯಮಾನಂ ಚ ವಂದಿಭಿಃ ॥
ಅನುವಾದ
ಕೆಲವುಕಡೆ ಆನೆ, ಕುದುರೆ, ರಥಗಳಲ್ಲಿ ಕುಳಿತು ಶ್ರೀಕೃಷ್ಣನು ಸಂಚರಿಸುತ್ತಿದ್ದನು. ಕೆಲವೆಡೆ ಮಂಚದಲ್ಲಿ ಪವಡಿಸಿದ್ದರೆ, ಕೆಲವೆಡೆ ವಂದಿ-ಮಾಗಧರು ಸುತ್ತಿಸುತ್ತಾ ಇದ್ದಾರೆ. ॥26॥
ಮೂಲಮ್
(ಶ್ಲೋಕ-27)
ಮಂತ್ರಯಂತಂ ಚ ಕಸ್ಮಿಂಶ್ಚಿನ್ಮಂತ್ರಿಭಿಶ್ಚೋದ್ಧವಾದಿಭಿಃ ।
ಜಲಕ್ರೀಡಾರತಂ ಕ್ವಾಪಿ ವಾರಮುಖ್ಯಾಬಲಾವೃತಮ್ ॥
ಅನುವಾದ
ಯಾವುದೋ ಅಂತಃಪುರದಲ್ಲಿ ಉದ್ಧವಾದಿ ಮಂತ್ರಿಗಳೊಡನೆ ಗಂಭೀರವಾದ ಮಂತ್ರಾವಲೋಚನೆ ಮಾಡುತ್ತಿದ್ದರೆ, ಕೆಲವೆಡೆ ಉತ್ತಮೋತ್ತಮ ವಾರಾಂಗನೆಯರೊಡನೆ ಜಲಕ್ರೀಡೆಯಾಡುತ್ತಿದ್ದನು. ॥27॥
ಮೂಲಮ್
(ಶ್ಲೋಕ-28)
ಕುತ್ರಚಿದ್ವಜಮುಖ್ಯೇಭ್ಯೋ ದದತಂ ಗಾಃ ಸ್ವಲಂಕೃತಾಃ ।
ಇತಿಹಾಸಪುರಾಣಾನಿ ಶೃಣ್ವಂತಂ ಮಂಗಲಾನಿ ಚ ॥
ಅನುವಾದ
ಕೆಲವೆಡೆ ಶ್ರೇಷ್ಠವಾದ ಬ್ರಾಹ್ಮಣರಿಗೆ ವಸ್ತ್ರಾಭೂಷಗಳಿಂದ ಅಲಂಕೃತವಾದ ಗೋವುಗಳನ್ನು ದಾನಮಾಡುತ್ತಿದ್ದ, ಕೆಲವೆಡೆ ಮಂಗಲಮಯ ಇತಿಹಾಸ ಪುರಾಣಗಳನ್ನು ಶ್ರವಣಿಸುತ್ತಿದ್ದನು. ॥28॥
ಮೂಲಮ್
(ಶ್ಲೋಕ-29)
ಹಸಂತಂ ಹಾಸ್ಯಕಥಯಾ ಕದಾಚಿತ್ ಪ್ರಿಯಯಾ ಗೃಹೇ ।
ಕ್ವಾಪಿ ಧರ್ಮಂ ಸೇವಮಾನಮರ್ಥಕಾವೌ ಚ ಕುತ್ರಚಿತ್ ॥
ಅನುವಾದ
ಕೆಲವು ಪತ್ನಿಯರ ಅಂತಃಪುರಗಳಲ್ಲಿ ತನ್ನ ಪ್ರೇಯಸಿಯರೊಡನೆ ಹಾಸ್ಯ-ವಿನೋದದ ಮಾತುಗಳನ್ನಾಡುತ್ತಾ ನಗುತ್ತಿದ್ದನು. ಕೆಲವೆಡೆ ಧರ್ಮಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ನಿರತನಾಗಿದ್ದರೆ, ಕೆಲವೆಡೆ ಅರ್ಥಸಂಗ್ರಹದ ವಿಷಯವಾಗಿ ಮಂತ್ರಿಗಳೊಡನೆ ಸಮಾಲೋಚಿಸುತ್ತಿದ್ದನು. ಕೆಲವುಕಡೆ ಧರ್ಮಾನುಕೂಲ ಗೃಹಸ್ಥೋಚಿತ ವಿಷಯ ಭೋಗಗಳನ್ನು ಅನುಭವಿಸುತ್ತಿದ್ದನು. ॥29॥
ಮೂಲಮ್
(ಶ್ಲೋಕ-30)
ಧ್ಯಾಯಂತಮೇಕಮಾಸೀನಂ ಪುರುಷಂ ಪ್ರಕೃತೇಃ ಪರಮ್ ।
ಶುಶ್ರೂಷಂತಂ ಗುರೂನ್ ಕ್ವಾಪಿ ಕಾಮೈರ್ಭೋಗೈಃ ಸಪರ್ಯಯಾ ॥
ಅನುವಾದ
ಕೆಲವೆಡೆ ಏಕಾಂತದಲ್ಲಿ ಕುಳಿತು ಪ್ರಕೃತಿಗೆ ಅತೀತನಾದ ಪುರಾಣ ಪುರುಷನನ್ನು ಧ್ಯಾನಿಸುತ್ತಿದ್ದನು. ಕೆಲವೆಡೆ ಗುರು-ಹಿರಿಯರಿಗೆ ಇಚ್ಛಿತ ಭೋಗ ಸಾಮಗ್ರಿಗಳನ್ನಿತ್ತು ಅವರ ಸೇವೆ-ಶುಶ್ರೂಷೆ ಮಾಡುತ್ತಿದ್ದನು. ॥30॥
ಮೂಲಮ್
(ಶ್ಲೋಕ-31)
ಕುರ್ವಂತಂ ವಿಗ್ರಹಂ ಕೈಶ್ಚಿತ್ಸಂಧಿಂ ಚಾನ್ಯತ್ರ ಕೇಶವಮ್ ।
ಕುತ್ರಾಪಿ ಸಹ ರಾಮೇಣ ಚಿಂತಯಂತಂ ಸತಾಂ ಶಿವಮ್ ॥
ಅನುವಾದ
ದೇವಋಷಿ ನಾರದರು ನೋಡುತ್ತಾರೆ ಭಗವಾನ್ ಶ್ರೀಕೃಷ್ಣನು ಯಾರೊಂದಿಗೋ ಯುದ್ಧದ ಮಾತನ್ನಾಡುತ್ತಿದ್ದರೆ, ಯಾರೊಂದಿಗೋ ಸಂಧಿಯ ಪ್ರಸ್ತಾಪವನ್ನು ಮಾಡುತ್ತಿದ್ದನು. ಕೆಲವು ಕಡೆ ಬಲರಾಮನೊಂದಿಗೆ ಕುಳಿತುಕೊಂಡು ಸತ್ಪುರುಷರ ಕಲ್ಯಾಣದ ಕುರಿತು ಯೋಚಿಸುತ್ತಿದ್ದನು. ॥31॥
ಮೂಲಮ್
(ಶ್ಲೋಕ-32)
ಪುತ್ರಾಣಾಂ ದುಹಿತೃಣಾಂ ಚ ಕಾಲೇ ವಿಧ್ಯುಪಯಾಪನಮ್ ।
ದಾರೈರ್ವರೈಸ್ತತ್ಸದೃಶೈಃ ಕಲ್ಪಯಂತಂ ವಿಭೂತಿಭಿಃ ॥
ಅನುವಾದ
ಕೆಲವೆಡೆ ಉಚಿತ ಸಮಯದಲ್ಲಿ ಪುತ್ರ-ಪುತ್ರಿಯರು ಅವರಿಗೆ ಅನುರೂಪರಾದ ವಧೂ-ವರರೊಂದಿಗೆ ಸಂಭ್ರದಿಂದ ವಿಧಿವತ್ತಾಗಿ ವಿವಾಹ ಮಾಡುತ್ತಿದ್ದನು. ॥32॥
ಮೂಲಮ್
(ಶ್ಲೋಕ-33)
ಪ್ರಸ್ಥಾಪನೋಪಾನಯನೈರಪತ್ಯಾನಾಂ ಮಹೋತ್ಸವಾನ್ ।
ವೀಕ್ಷ್ಯ ಯೋಗೇಶ್ವರೇಶಸ್ಯ ಯೇಷಾಂ ಲೋಕಾ ವಿಸಿಸ್ಮಿರೇ ॥
ಅನುವಾದ
ಕೆಲವುಕಡೆ ವಿವಾಹಿತ ಕನ್ಯೆಯನ್ನು ಅತ್ತೆ ಮನೆಗೆ ಕಳಿಸುತ್ತಿದ್ದರೆ, ಕೆಲವೆಡೆ ಕನ್ಯೆಯರನ್ನು ಕರೆಸುವ ಸಿದ್ಧತೆ ಮಾಡುತ್ತಿದ್ದನು. ಯೋಗೇಶ್ವರ ಭಗವಾನ್ ಶ್ರೀಕೃಷ್ಣನ ಈ ವಿರಾಟ್ ಉತ್ಸವವನ್ನು ನೋಡಿ ಎಲ್ಲ ಜನರು ಆಶ್ಚರ್ಯಚಕಿತರಾಗುತ್ತಿದ್ದರು. ॥33॥
ಮೂಲಮ್
(ಶ್ಲೋಕ-34)
ಯಜಂತಂ ಸಕಲಾನ್ದೇವಾನ್ ಕ್ವಾಪಿ ಕ್ರತುಭಿರೂರ್ಜಿತೈಃ ।
ಪೂರ್ತಯಂತಂ ಕ್ವಚಿದ್ಧರ್ಮಂ ಕೂಪಾರಾಮಮಠಾದಿಭಿಃ ॥
ಅನುವಾದ
ಕೆಲವೆಡೆ ದೊಡ್ಡ-ದೊಡ್ಡ ಯಜ್ಞಗಳ ಮೂಲಕ ದೇವತೆಗಳನ್ನು ಪೂಜಿಸುತ್ತಿದ್ದರೆ, ಕೆಲವು ಕಡೆ ಬಾವಿ, ಉದ್ಯಾನ, ಅಗ್ರಹಾರ ಮುಂತಾದುವನ್ನು ಮಾಡಿಸಿ ಇಷ್ಟಾಪೂರ್ತ ಧರ್ಮವನ್ನು ಆಚರಿಸುತ್ತಿದ್ದನು. ॥34॥
ಮೂಲಮ್
(ಶ್ಲೋಕ-35)
ಚರಂತಂ ಮೃಗಯಾಂ ಕ್ವಾಪಿ ಹಯಮಾರುಹ್ಯ ಸೈಂಧವಮ್ ।
ಘ್ನಂತಂ ತತಃ ಪಶೂನ್ ಮೇಧ್ಯಾನ್ ಪರೀತಂ ಯದುಪುಂಗವೈಃ ॥
ಅನುವಾದ
ಕೆಲವೆಡೆ ಶ್ರೇಷ್ಠ ಯಾದವರಿಂದ ಸುತ್ತುವರಿದು ಸಿಂಧುದೇಶದ ಕುದುರೆಯ ಮೇಲೆ ಕುಳಿತುಕೊಂಡು ಬೇಟೆಯಾಡುತ್ತಾ ಯಜ್ಞಕ್ಕಾಗಿ ವಸ್ತುಗಳನ್ನು ಸಂಗ್ರಹಿಸುತ್ತಾ ॥35॥
ಮೂಲಮ್
(ಶ್ಲೋಕ-36)
ಅವ್ಯಕ್ತಲಿಂಗಂ ಪ್ರಕೃತಿಷ್ವಂತಃಪುರಗೃಹಾದಿಷು ।
ಕ್ವಚಿಚ್ಚರಂತಂ ಯೋಗೇಶಂ ತತ್ತದ್ಭಾವಬುಭುತ್ಸಯಾ ॥
ಅನುವಾದ
ಕೆಲವೆಡೆ ಅಂತಃಪುರಗಳಲ್ಲಿ ಹಾಗೂ ಪ್ರಜೆಗಳ ಮಧ್ಯದಲ್ಲಿಯೂ ವೇಷವನ್ನು ಬದಲಿಸಿ ಅಡಗಿಕೊಂಡು ಎಲ್ಲರ ಅಭಿಪ್ರಾಯವನ್ನು ತಿಳಿಯಲು ಸಂಚರಿಸುತ್ತಿದ್ದ ಮಹಾಯೋಗಿಯಾದ ಶ್ರೀಕೃಷ್ಣನನ್ನು ನೋಡಿ ನಾರದರು ಮೂಕರಾದರು. ॥36॥
ಮೂಲಮ್
(ಶ್ಲೋಕ-37)
ಅಥೋವಾಚ ಹೃಷೀಕೇಶಂ ನಾರದಃ ಪ್ರಹಸನ್ನಿವ ।
ಯೋಗಮಾಯೋದಯಂ ವೀಕ್ಷ್ಯ ಮಾನುಷೀಮೀಯುಷೋ ಗತಿಮ್ ॥
ಅನುವಾದ
ಪರೀಕ್ಷಿತನೇ! ಹೀಗೆ ಮನುಷ್ಯರಂತೆ ಲೀಲೆ ಮಾಡುವ ಹೃಷಿಕೇಶ ಭಗವಂತನ ಯೋಗಮಾಯೆಯ ವೈಭವವನ್ನು ನೋಡಿ ದೇವರ್ಷಿ ನಾರದರು ಮುಗುಳ್ನಗುತ್ತಾ ಹೇಳಿದರು - ॥37॥
ಮೂಲಮ್
(ಶ್ಲೋಕ-38)
ವಿದಾಮ ಯೋಗಮಾಯಾಸ್ತೇ ದುರ್ದರ್ಶಾ ಅಪಿ ಮಾಯಿನಾಮ್ ।
ಯೋಗೇಶ್ವರಾತ್ಮನ್ ನಿರ್ಭಾತಾ ಭವತ್ಪಾದನಿಷೇವಯಾ ॥
ಅನುವಾದ
ಯೋಗೇಶ್ವರರಿಗೂ ಆತ್ಮಸ್ವರೂಪನಾದವನೇ! ನಿನ್ನ ಯೋಗಮಾಯೆಯನ್ನು ಬ್ರಹ್ಮಾದಿ ಮಹಾ-ಮಹಾ ಮಾಯಾವಿಗಳಿಗೂ ತಿಳಿಯಲು ಅಗಮ್ಯವಾಗಿದೆ. ಆದರೆ ನಿನ್ನ ಚರಣಕಮಲಗಳ ಸೇವೆಯಿಂದ ನಾವು ಆ ಯೋಗ ಮಾಯೆಯನ್ನು ತಿಳಿದುಕೊಂಡೆವು. ॥38॥
ಮೂಲಮ್
(ಶ್ಲೋಕ-39)
ಅನುಜಾನೀಹಿ ಮಾಂ ದೇವಲೋಕಾಂಸ್ತೇ ಯಶಸಾಪ್ಲುತಾನ್ ।
ಪರ್ಯಟಾಮಿ ತವೋದ್ಗಾಯನ್ ಲೀಲಾಂ ಭುವನಪಾವನೀಮ್ ॥
ಅನುವಾದ
ದೇವ ದೇವನೇ! ನನಗೆ ಹೋಗಲು ಅನುಮತಿಯನ್ನು ದಯಪಾಲಿಸು. ನಿನ್ನ ಯಶಸ್ಸಿನಿಂದ ತುಂಬಿಹೋಗಿರುವ ಮೂರುಲೋಕಗಳಲ್ಲಿಯೂ, ತ್ರಿಭುವನ ಪಾವನಿಯಾದ ನಿನ್ನ ಲೀಲೆಗಳನ್ನು ಹಾಡುತ್ತಾ ಸಂಚರಿಸುತ್ತೇನೆ. ॥39॥
ಮೂಲಮ್
(ಶ್ಲೋಕ-40)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಬ್ರಹ್ಮನ್ ಧರ್ಮಸ್ಯ ವಕ್ತಾಹಂ ಕರ್ತಾ ತದನುಮೋದಿತಾ ।
ತಚ್ಛಿಕ್ಷಯನ್ಲೋಕಮಿಮಮಾಸ್ಥಿತಃ ಪುತ್ರ ಮಾ ಖಿದಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳಿದನು — ಬ್ರಾಹ್ಮಣ ಶ್ರೇಷ್ಠನೇ! ನಾನೇ ಧರ್ಮದ ಉಪದೇಶಕನೂ, ಪಾಲನೆ ಮಾಡುವವನೂ, ಅದನ್ನು ಅನುಷ್ಠಾನ ಮಾಡುವವರನ್ನು ಅನು ಮೋದಿಸುವವನೂ ಆಗಿದ್ದೇನೆ. ಪ್ರಪಂಚಕ್ಕೆ ಧರ್ಮದ ಶಿಕ್ಷಣವನ್ನು ಕೊಡಬೇಕೆನ್ನುವ ಉದ್ದೇಶದಿಂದಲೇ ನಾನು ಈ ಪ್ರಕಾರ ಧರ್ಮವನ್ನು ಆಚರಿಸುತ್ತಿದ್ದೇನೆ. ಪ್ರಿಯಪುತ್ರನೇ! ನೀನು ನನ್ನ ಈ ಯೋಗಮಾಯೆಯನ್ನು ನೋಡಿ ಮೋಹಿತನಾಗಬೇಡ. ॥40॥
ಮೂಲಮ್
(ಶ್ಲೋಕ-41)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತ್ಯಾಚರಂತಂ ಸದ್ಧರ್ಮಾನ್ ಪಾವನಾನ್ಗೃಹಮೇಧಿನಾಮ್ ।
ತಮೇವ ಸರ್ವಗೇಹೇಷು ಸಂತಮೇಕಂ ದದರ್ಶ ಹ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಹೀಗೆ ಭಗವಾನ್ ಶ್ರೀಕೃಷ್ಣನು ಗೃಹಸ್ಥಾಶ್ರಮಿಗಳನ್ನು ಪವಿತ್ರಗೊಳಿಸುವ ಶ್ರೇಷ್ಠವಾದ ಧರ್ಮಗಳನ್ನು ಆಚರಿಸುತ್ತಿದ್ದನು - ಅವನು ಒಬ್ಬನೇ ಆಗಿದ್ದರೂ ನಾರದ ಮಹರ್ಷಿಗಳು ಅವನನ್ನು ಅವನ ಪ್ರತಿಯೊಬ್ಬ ಪತ್ನಿಯರ ಅಂತಃಪುರಗಳಲ್ಲಿ ಬೇರೆ-ಬೇರೆಯಾಗಿ ನೋಡಿದರು. ॥41॥
ಮೂಲಮ್
(ಶ್ಲೋಕ-42)
ಕೃಷ್ಣಸ್ಯಾನಂತವೀರ್ಯಸ್ಯ ಯೋಗಮಾಯಾಮಹೋದಯಮ್ ।
ಮುಹುರ್ದೃಷ್ಟ್ವಾ ಋಷಿರಭೂದ್ವಿಸ್ಮಿತೋ ಜಾತಕೌತುಕಃ ॥
ಅನುವಾದ
ಅನಂತಶಕ್ತಿ ಯುಳ್ಳ ಭಗವಾನ್ ಶ್ರೀಕೃಷ್ಣನ ಯೋಗಮಾಯೆಯ ಪರಮೈಶ್ವರ್ಯವನ್ನು ಪದೇ-ಪದೇ ನೋಡಿ ದೇವರ್ಷಿ ನಾರದರು ಕುತೂಹಲವಿಷ್ಟರಾಗಿ ವಿಸ್ಮಿತರಾದರು. ॥42॥
ಮೂಲಮ್
(ಶ್ಲೋಕ-43)
ಇತ್ಯರ್ಥಕಾಮಧರ್ಮೇಷು ಕೃಷ್ಣೇನ ಶ್ರದ್ಧಿತಾತ್ಮನಾ ।
ಸಮ್ಯಕ್ಸಭಾಜಿತಃ ಪ್ರೀತಸ್ತಮೇವಾನುಸ್ಮರನ್ಯಯೌ ॥
ಅನುವಾದ
ದ್ವಾರಕೆಯಲ್ಲಿ ಭಗವಾನ್ ಶ್ರೀಕೃಷ್ಣನು ಗೃಹಸ್ಥರಂತೆಯೇ ಧರ್ಮ, ಅರ್ಥ, ಕಾಮಗಳೆಂಬ ಪುರುಷಾರ್ಥಗಳನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಿದ್ದನು. ಅವನು ದೇವರ್ಷಿ ನಾರದರನ್ನು ಬಹಳವಾಗಿ ಸನ್ಮಾನಿಸಿದನು. ನಾರದರು ಸುಪ್ರೀತರಾಗಿ ಭಗವಂತನನ್ನು ಸ್ಮರಿಸುತ್ತಾ ಅಲ್ಲಿಂದ ಹೊರಟು ಹೋದರು. ॥43॥
ಮೂಲಮ್
(ಶ್ಲೋಕ-44)
ಏವಂ ಮನುಷ್ಯಪದವೀಮನುವರ್ತಮಾನೋ
ನಾರಾಯಣೋಖಿಲಭವಾಯ ಗೃಹೀತಶಕ್ತಿಃ ।
ರೇಮೇಂಗ ಷೋಡಶಸಹಸ್ರವರಾಂಗನಾನಾಂ
ಸವ್ರೀಡಸೌಹೃದನಿರೀಕ್ಷಣಹಾಸಜುಷ್ಟಃ ॥
ಅನುವಾದ
ಪರೀಕ್ಷಿತ ಮಹಾರಾಜ! ಭಗವಾನ್ ನಾರಾಯಣನು ಅಖಿಲ ಜಗತ್ತಿನ ಕಲ್ಯಾಣಕ್ಕಾಗಿ ತನ್ನ ಅಚಿಂತ್ಯ ಮಹಾಶಕ್ತಿಯಾದ ಯೋಗಮಾಯೆಯನ್ನು ಸ್ವೀಕರಿಸಿಕೊಂಡು ಮನುಷ್ಯರಂತೆ ಲೀಲೆ ಮಾಡುತ್ತಿದ್ದನು. ಹದಿನಾರು ಸಾವಿರಕ್ಕಿಂತಲೂ ಹೆಚ್ಚಾಗಿದ್ದ ಪತ್ನಿಯರು ಲಜ್ಜೆ, ಸೌಹಾರ್ದ, ಕಟಾಕ್ಷವೀಕ್ಷಣೆ, ಮಂದಹಾಸ ಇವುಗಳಿಂದ ಅವನ ಸೇವೆ ಮಾಡುತ್ತಿದ್ದರು. ಅಂತಹ ತನ್ನ ಪ್ರೇಯಸಿಯರೊಡನೆ ಶ್ರೀಕೃಷ್ಣನು ವಿಹರಿಸುತ್ತಿದ್ದನು. ॥44॥
ಮೂಲಮ್
(ಶ್ಲೋಕ-45)
ಯಾನೀಹ ವಿಶ್ವವಿಲಯೋದ್ಭವವೃತ್ತಿಹೇತುಃ
ಕರ್ಮಾಣ್ಯನನ್ಯವಿಷಯಾಣಿ ಹರಿಶ್ಚಕಾರ ।
ಯಸ್ತ್ವಂಗ ಗಾಯತಿ ಶೃಣೋತ್ಯನುಮೋದತೇ ವಾ
ಭಕ್ತಿರ್ಭವೇದ್ಭಗವತಿ ಹ್ಯಪವರ್ಗಮಾರ್ಗೇ ॥
ಅನುವಾದ
ಮಹಾರಾಜ! ಭಗವಾನ್ ಶ್ರೀಕೃಷ್ಣನು ಮಾಡಿತೋರಿದ ಲೀಲೆಗಳನ್ನು ಬೇರೆ ಯಾರೂ ಮಾಡಲಾರರು. ಅವನೇ ವಿಶ್ವದ ಉತ್ಪತ್ತಿ, ಸ್ಥಿತಿ, ಪ್ರಳಯಗಳಿಗೆ ಪರಮ ಕಾರಣನಾಗಿದ್ದಾನೆ. ಅವನ ಲೀಲೆಗಳನ್ನು ಹಾಡುವವನು, ಕೇಳುವವನು ಮತ್ತು ಗಾನಮಾಡಲು ಪ್ರೋತ್ಸಾಹಿಸುವವನು ಮೋಕ್ಷಕ್ಕೆ ಮಾರ್ಗಸ್ವರೂಪನಾದ ಶ್ರೀಕೃಷ್ಣನಲ್ಲಿ ಪರಮ ಭಕ್ತಿಯುಳ್ಳವನಾಗುವನು. ॥45॥
ಅನುವಾದ (ಸಮಾಪ್ತಿಃ)
ಅರವತ್ತೊಂಭತ್ತನೆಯ ಅಧ್ಯಾಯವು ಮುಗಿಯಿತು. ॥69॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ ಕೃಷ್ಣಗಾರ್ಹಸ್ಥ್ಯದರ್ಶನಂ ನಾಮೈಕೋನಸಪ್ತತಿತಮೋಽಧ್ಯಾಯಃ ॥69॥