೬೮

[ಅರವತ್ತೇಂಟನೇಯ ಅಧ್ಯಾಯ]

ಭಾಗಸೂಚನಾ

ಕೌರವರ ಮೇಲೆ ಬಲರಾಮನ ಕೋಪ ಮತ್ತು ಸಾಂಬನ ವಿವಾಹ

ಮೂಲಮ್

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ದುರ್ಯೋಧನಸುತಾಂ ರಾಜನ್ ಲಕ್ಷ್ಮಣಾಂ ಸಮಿತಿಂಜಯಃ ।
ಸ್ವಯಂವರಸ್ಥಾಮಹರತ್ಸಾಂಬೋ ಜಾಂಬವತೀಸುತಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಹಲವಾರು ವೀರರನ್ನು ಗೆದ್ದಿರುವ ಮಹಾಶೂರನಾದ ಜಾಂಬ ವತಿಯ ಮಗನಾದ ಸಾಂಬನು ಸ್ವಯಂವರ ಮಂಟಪ ದಿಂದ ಕೌರವನ ಮಗಳಾದ ಲಕ್ಷ್ಮಣಾ ಎಂಬುವಳನ್ನು ಅಪಹರಿಸಿಕೊಂಡು ಹೋದನು. ॥1॥

ಮೂಲಮ್

(ಶ್ಲೋಕ-2)
ಕೌರವಾಃ ಕುಪಿತಾ ಊಚುರ್ದುರ್ವಿನೀತೋಯಮರ್ಭಕಃ ।
ಕದರ್ಥೀಕೃತ್ಯ ನಃ ಕನ್ಯಾಮಕಾಮಾಮಹರದ್ಬಲಾತ್ ॥

ಅನುವಾದ

ಇದರಿಂದ ಕುಪಿತ ರಾದ ಕೌರವರು ಮನಬಂದಂತೆ ಮಾತನಾಡುತ್ತಾ ‘ಈ ಬಾಲಕನು ಎಷ್ಟು ಉದ್ಧಟನಾಗಿದ್ದಾನೆ; ನೋಡಿದಿರಾ? ನಮ್ಮನ್ನು ಲೆಕ್ಕಿಸದೆ ನಮ್ಮ ಕನ್ಯೆಯನ್ನು ಅಪಹರಿಸಿಕೊಂಡು ಹೋಗಿದ್ದಾನೆ. ಅಲ್ಲದೆ ನಮ್ಮ ಕನ್ಯೆಯೂ ಅವನನ್ನು ಪ್ರೀತಿಸು ತ್ತಿರಲಿಲ್ಲ. ॥2॥

ಮೂಲಮ್

(ಶ್ಲೋಕ-3)
ಬಧ್ನೀತೇಮಂ ದುರ್ವಿನೀತಂ ಕಿಂ ಕರಿಷ್ಯಂತಿ ವೃಷ್ಣಯಃ ।
ಯೇಸ್ಮತ್ಪ್ರಸಾದೋಪಚಿತಾಂ ದತ್ತಾಂ ನೋ ಭುಂಜತೇ ಮಹೀಮ್ ॥

ಅನುವಾದ

ಆದ್ದರಿಂದ ದುರ್ವಿನೀತನಾದ ಇವನನ್ನು ಈಗಲೇ ಬಂಧಿಸಿರಿ. ವೃಷ್ಣಿವಂಶೀಯರಾದರೂ ಏನು ಮಾಡುವರು? ನೋಡೋಣ. ಅವರಾದರೋ ನಾವು ಕೊಟ್ಟಿರುವ ಧನ-ಧಾನ್ಯಗಳಿಂದ ಸಮೃದ್ಧವಾದ ರಾಜ್ಯವನ್ನು ನಮ್ಮ ಕೃಪೆಯಿಂದಲೇ ಆಳುತ್ತಿದ್ದಾರೆ. ॥3॥

ಮೂಲಮ್

(ಶ್ಲೋಕ-4)
ನಿಗೃಹೀತಂ ಸುತಂ ಶ್ರುತ್ವಾ ಯದ್ಯೇಷ್ಯಂತೀಹ ವೃಷ್ಣಯಃ ।
ಭಗ್ನದರ್ಪಾಃ ಶಮಂ ಯಾಂತಿ ಪ್ರಾಣಾ ಇವ ಸುಸಂಯತಾಃ ॥

ಅನುವಾದ

ತಮ್ಮ ಪುತ್ರನ ಬಂಧನವನ್ನು ಕೇಳಿ ವೃಷ್ಣಿಗಳೇನಾದರೂ ಇಲ್ಲಿಗೆ ಬಂದರೆ ನಾವುಗಳು ಅವರ ದರ್ಪವನ್ನು ಪುಡಿ-ಪುಡಿಮಾಡಿ ಬಿಡುವೆವು. ಸಂಯಮಿಗಳಾದ ಜನರ ಇಂದ್ರಿಯಗಳು ಪ್ರಾಣಾಯಾಮದಿಂದ ಶಾಂತವಾಗುವಂತೆ ಅವರ ಅಹಂಕಾರವು ಶಾಂತ ವಾಗುವುದು. ॥4॥

ಮೂಲಮ್

(ಶ್ಲೋಕ-5)
ಇತಿ ಕರ್ಣಃ ಶಲೋ ಭೂರಿರ್ಯಜ್ಞಕೇತುಃ ಸುಯೋಧನಃ ।
ಸಾಂಬಮಾರೇಭಿರೇ ಬದ್ಧುಂ ಕುರುವೃದ್ಧಾನುಮೋದಿತಾಃ ॥

ಅನುವಾದ

ಕರ್ಣ, ಶಲ, ಭೂರಿಶ್ರವ, ಯಜ್ಞಕೇತು, ಸುಯೋಧನ ಮೊದಲಾದ ವೀರರು ಹೀಗೆ ಯೋಚಿಸಿ, ಕುರುವೃದ್ಧರ ಅನುಮತಿಯನ್ನು ಪಡೆದು ಸಾಂಬನನ್ನು ಬಂಧಿಸಲು ಅನುವಾದರು. ॥5॥

ಮೂಲಮ್

(ಶ್ಲೋಕ-6)
ದೃಷ್ಟ್ವಾನುಧಾವತಃ ಸಾಂಬೋ ಧಾರ್ತರಾಷ್ಟ್ರಾನ್ಮಹಾರಥಃ ।
ಪ್ರಗೃಹ್ಯ ರುಚಿರಂ ಚಾಪಂ ತಸ್ಥೌ ಸಿಂಹ ಇವೈಕಲಃ ॥

ಅನುವಾದ

ಧೃತರಾಷ್ಟ್ರನ ಪುತ್ರರು ತನ್ನನ್ನು ಹಿಂಬಾಲಿಸಿ ಬರುತ್ತಿದ್ದಾರೆಂದು ನೋಡಿದಾಗ ಮಹಾರಥಿಯಾದ ಸಾಂಬನು ಸುಂದರವಾದ ಧನುಸ್ಸನ್ನು ಸಿದ್ಧಪಡಿಸಿಕೊಂಡು ಸಿಂಹದಂತೆ ಏಕಾಕಿಯಾಗಿ ಕೌರವರನ್ನು ಎದುರಿಸಿ ನಿಂತನು. ॥6॥

ಮೂಲಮ್

(ಶ್ಲೋಕ-7)
ತಂ ತೇ ಜಿಘೃಕ್ಷವಃ ಕ್ರುದ್ಧಾಸ್ತಿಷ್ಠ ತಿಷ್ಠೇತಿ ಭಾಷಿಣಃ ।
ಆಸಾದ್ಯ ಧನ್ವಿನೌ ಬಾಣೈಃ ಕರ್ಣಾಗ್ರಣ್ಯಃ ಸಮಾಕಿರನ್ ॥

ಅನುವಾದ

ಕರ್ಣನನ್ನು ಮುಂದಾಳಾಗಿಟ್ಟು ಕೊಂಡು ಕೌರವವೀರರು ಧನುಸ್ಸನ್ನೆತ್ತಿಕೊಂಡು ಸಾಂಬನ ಬಳಿಗೆ ಬಂದು, ಅವನನ್ನು ಹಿಡಿಯಲಿಕ್ಕಾಗಿ ನಿಲ್ಲು! ನಿಲ್ಲು! ಎಂದು ಕೂಗುತ್ತಾ ಪರಮಕ್ರುದ್ಧರಾಗಿ ಅವನ ಮೇಲೆ ಬಾಣಗಳ ಮಳೆಯನ್ನೇ ಸುರಿಸಿದರು. ॥7॥

ಮೂಲಮ್

(ಶ್ಲೋಕ-8)
ಸೋಪವಿದ್ಧಃ ಕುರುಶ್ರೇಷ್ಠ ಕುರುಭಿರ್ಯದುನಂದನಃ ।
ನಾಮೃಷ್ಯತ್ತದಚಿಂತ್ಯಾರ್ಭಃ ಸಿಂಹಃ ಕ್ಷುದ್ರಮೃಗೈರಿವ ॥

ಅನುವಾದ

ಪರೀಕ್ಷಿತನೇ! ಯದುನಂದನ ಸಾಂಬನು ಅಚಿಂತ್ಯಮಹಿಮೆಯುಳ್ಳ ಭಗವಾನ್ ಶ್ರೀಕೃಷ್ಣನ ಪುತ್ರನಾಗಿದ್ದನು. ಕೌರವರ ಪ್ರಹಾರಗಳಿಂದ ಅವನು ಕ್ಷುದ್ರ ಮೃಗಗಳಿಂದ ಆಕ್ರಮಿಸಲ್ಪಟ್ಟ ಸಿಂಹದಂತೆ ಕೆರಳಿ ಪರಮ ಕ್ರುದ್ಧನಾದನು. ॥8॥

ಮೂಲಮ್

(ಶ್ಲೋಕ-9)
ವಿಸ್ಫೂರ್ಜ್ಯ ರುಚಿರಂ ಚಾಪಂ ಸರ್ವಾನ್ವಿವ್ಯಾಧ ಸಾಯಕೈಃ ।
ಕರ್ಣಾದೀನ್ ಷಡ್ರಥಾನ್ ವೀರಾಂಸ್ತಾವದ್ಭಿರ್ಯುಗಪತ್ಪೃಥಕ್ ॥

ಅನುವಾದ

ಸಾಂಬನು ತನ್ನ ಸುಂದರವಾದ ಧನುಸ್ಸನ್ನು ಟಂಕಾರಮಾಡಿ ಬೇರೆ-ಬೇರೆ ರಥಗಳಲ್ಲಿದ್ದ ಕರ್ಣನೇ ಮೊದಲಾದ ಆರುವೀರರ ಮೇಲೆ ಒಂದೇ ಬಾರಿಗೆ ಆರಾರು ಬಾಣಗಳನ್ನು ಪ್ರತ್ಯೇಕ-ಪ್ರತ್ಯೇಕವಾಗಿ ಪ್ರಯೋಗಿಸಿದನು. ॥9॥

ಮೂಲಮ್

(ಶ್ಲೋಕ-10)
ಚತುರ್ಭಿಶ್ಚತುರೋ ವಾಹಾನೇಕೈಕೇನ ಚ ಸಾರಥೀನ್ ।
ರಥಿನಶ್ಚ ಮಹೇಷ್ವಾಸಾಂಸ್ತಸ್ಯ ತತ್ತೇಭ್ಯಪೂಜಯನ್ ॥

ಅನುವಾದ

ಅವುಗಳಲ್ಲಿ ನಾಲ್ಕು-ನಾಲ್ಕು ಬಾಣಗಳು ಕುದುರೆಗಳ ಮೇಲೂ, ಒಂದೊಂದು ಬಾಣಗಳನ್ನು ಸಾರಥಿಗಳ ಮೇಲೂ, ಒಂದೊಂದು ಬಾಣವನ್ನು ಆ ಆರುಮಂದಿ ಧನುಷ್ಮಂತರಾದ ಮಹಾರಥಿಗಳ ಮೇಲೂ ಪ್ರಯೋಗಿಸಿದನು. ಸಾಂಬನ ಈ ಅದ್ಭುತವಾದ ಕರಕೌಶಲ್ಯವನ್ನು ಕಂಡು ವೀರರೂ ಕೂಡ ಮುಕ್ತಕಂಠದಿಂದ ಅವನನ್ನು ಪ್ರಶಂಸಿಸಿದರು. ॥10॥

ಮೂಲಮ್

(ಶ್ಲೋಕ-11)
ತಂ ತು ತೇ ವಿರಥಂ ಚಕ್ರುಶ್ಚತ್ವಾರಶ್ಚತುರೋ ಹಯಾನ್ ।
ಏಕಸ್ತು ಸಾರಥಿಂ ಜಘ್ನೇ ಚಿಚ್ಛೇದಾನ್ಯಃ ಶರಾಸನಮ್ ॥

ಅನುವಾದ

ಬಳಿಕ ಕುಪಿತರಾದ ಆ ಆರು ಮಂದಿ ವೀರರು ಒಟ್ಟಿಗೆ ಸೇರಿ ಸಾಂಬನನ್ನು ರಥಹೀನನ್ನಾಗಿಸಿದರು. ನಾಲ್ಕುವೀರರು ಒಂದೊಂದು ಬಾಣದಿಂದ ಅವನ ಕುದುರೆಗಳನ್ನು ಕೊಂದು ಹಾಕಿದರು. ಒಬ್ಬನು ಸಾರಥಿಯನ್ನು ಕೊಂದು ಮತ್ತೊಬ್ಬನು ಸಾಂಬನ ಧನುಸ್ಸನ್ನು ತುಂಡರಿಸಿದನು. ॥11॥

ಮೂಲಮ್

(ಶ್ಲೋಕ-12)
ತಂ ಬದ್ಧ್ವಾ ವಿರಥೀಕೃತ್ಯ ಕೃಚ್ಛ್ರೇಣ ಕುರವೋ ಯುಧಿ ।
ಕುಮಾರಂ ಸ್ವಸ್ಯ ಕನ್ಯಾಂ ಚ ಸ್ವಪುರಂ ಜಯಿನೋವಿಶನ್ ॥

ಅನುವಾದ

ಈ ಪ್ರಕಾರವಾಗಿ ಕೌರವರು ಯುದ್ಧದಲ್ಲಿ ಬಹಳ ಕಷ್ಟಪಟ್ಟು ಸಾಂಬನನ್ನು ರಥವಿಹೀನನ್ನಾಗಿಸಿ ಬಂಧಿಸಿದರು. ಅನಂತರ ಅವನನ್ನೂ ಹಾಗೂ ತಮ್ಮ ಮಗಳಾದ ಲಕ್ಷ್ಮಣೆಯನ್ನೂ ಕರಕೊಂಡು ಹಸ್ತಿನಾವತಿಗೆ ಮರಳಿದರು. ॥12॥

ಮೂಲಮ್

(ಶ್ಲೋಕ-13)
ತಚ್ಛ್ರುತ್ವಾ ನಾರದೋಕ್ತೇನ ರಾಜನ್ ಸಂಜಾತಮನ್ಯವಃ ।
ಕುರೂನ್ ಪ್ರತ್ಯುದ್ಯಮಂ ಚಕ್ರುರುಗ್ರಸೇನಪ್ರಚೋದಿತಾಃ ॥

ಅನುವಾದ

ಪರೀಕ್ಷಿತನೇ! ನಾರದ ಮಹರ್ಷಿಗಳಿಂದ ಈ ಸಮಾಚಾರವನ್ನು ಕೇಳಿದ ಯಾದವವೀರರು ಪರಮಕ್ರುದ್ಧರಾದರು. ಅವರು ಉಗ್ರಸೇನ ಮಹಾರಾಜರ ಪ್ರೇರಣೆಯಂತೆ ಕೌರವರೊಡನೆ ಯುದ್ಧಮಾಡಲು ಸಿದ್ಧರಾದರು. ॥13॥

ಮೂಲಮ್

(ಶ್ಲೋಕ-14)
ಸಾಂತ್ವಯಿತ್ವಾ ತು ತಾನ್ ರಾಮಃ ಸಂನದ್ಧಾನ್ ವೃಷ್ಣಿಪುಂಗವಾನ್ ।
ನೈಚ್ಛತ್ಕುರೂಣಾಂ ವೃಷ್ಣೀನಾಂ ಕಲಿಂ ಕಲಿಮಲಾಪಹಃ ॥
(ಶ್ಲೋಕ-15)
ಜಗಾಮ ಹಾಸ್ತಿನಪುರಂ ರಥೇನಾದಿತ್ಯವರ್ಚಸಾ ।
ಬ್ರಾಹ್ಮಣೈಃ ಕುಲವೃದ್ಧೈಶ್ಚ ವೃತಶ್ಚಂದ್ರ ಇವ ಗ್ರಹೈಃ ॥

ಅನುವಾದ

ಕಲಹ ಪ್ರಧಾನವಾದ ಕಲಿಯುಗದ ಸಮಸ್ತ ಪಾಪಗಳನ್ನು ಹೋಗಲಾಡಿಸುವುದರಲ್ಲಿ ಅತ್ಯಂತ ಸಮರ್ಥನಾದ ಬಲರಾಮನಿಗೆ ವೃಷ್ಣಿ-ಕೌರವರೊಳಗೆ ಯುದ್ಧವಾಗುವುದು ಇಷ್ಟವಾಗಲಿಲ್ಲ. ಯದುವಂಶೀಯರು ಯುದ್ಧದ ಸಿದ್ದತೆ ಮಾಡಿಕೊಂಡಿದ್ದರು. ಅವರನ್ನು ಸಮಾಧಾನ ಪಡಿಸಿ, ಸೂರ್ಯನ ತೇಜಸ್ಸಿಗೆ ಸಮಾನವಾದ ರಥದಲ್ಲಿ ಕುಳಿತು ಗ್ರಹಗಳಿಂದ ಪರಿವೃತನಾದ ಚಂದ್ರನಂತೆ ಬ್ರಾಹ್ಮಣರಿಂದಲೂ, ಕುಲವೃದ್ಧರಿಂದಲೂ ಕೂಡಿಕೊಂಡು ಹಸ್ತಿನಾವತಿಗೆ ಪ್ರಯಾಣ ಮಾಡಿದನು. ॥14-15॥

ಮೂಲಮ್

(ಶ್ಲೋಕ-16)
ಗತ್ವಾ ಗಜಾಹ್ವಯಂ ರಾಮೋ ಬಾಹ್ಯೋಪವನಮಾಸ್ಥಿತಃ ।
ಉದ್ಧವಂ ಪ್ರೇಷಯಾಮಾಸ ಧೃತರಾಷ್ಟ್ರಂ ಬುಭುತ್ಸಯಾ ॥

ಅನುವಾದ

ಹಸ್ತಿನಾಪುರಕ್ಕೆ ತಲುಪಿ ನಗರದ ಹೊರ ಉದ್ಯಾನದಲ್ಲಿ ತಂಗಿದ ಬಲರಾಮನು ಕೌರವರ ಆಶಯವೇನೆಂಬುದನ್ನು ತಿಳಿಯಲು ಉದ್ಧವನನ್ನು ಧೃತರಾಷ್ಟ್ರನ ಬಳಿಗೆ ಕಳಿಸಿಕೊಟ್ಟನು. ॥16॥

ಮೂಲಮ್

(ಶ್ಲೋಕ-17)
ಸೋಭಿವಂದ್ಯಾಂಬಿಕಾಪುತ್ರಂ ಭೀಷ್ಮಂ ದ್ರೋಣಂ ಚ ಬಾಹ್ಲಿಕಮ್ ।
ದುರ್ಯೋಧನಂ ಚ ವಿಧಿವದ್ರಾಮಮಾಗತಮಬ್ರವೀತ್ ॥

ಅನುವಾದ

ಉದ್ಧವನು ಕೌರವರ ರಾಜಸಭೆಗೆ ಹೋಗಿ ಧೃತರಾಷ್ಟ್ರ, ಭೀಷ್ಮ, ದ್ರೋಣ, ಬಾಹ್ಲಿಕ, ದುರ್ಯೋಧನ ಇವರನ್ನು ಯಥಾಯೋಗ್ಯವಾಗಿ ಅಭಿನಂದಿಸಿ ಬಲರಾಮನು ಬಂದಿರುವ ವಾರ್ತೆಯನ್ನು ತಿಳಿಸಿದನು. ॥17॥

ಮೂಲಮ್

(ಶ್ಲೋಕ-18)
ತೇತಿಪ್ರೀತಾಸ್ತಮಾಕರ್ಣ್ಯ ಪ್ರಾಪ್ತಂ ರಾಮಂ ಸುಹೃತ್ತಮಮ್ ।
ತಮರ್ಚಯಿತ್ವಾಭಿಯಯುಃ ಸರ್ವೇ ಮಂಗಲಪಾಣಯಃ ॥

ಅನುವಾದ

ತಮಗೆ ಪರಮ ಹಿತೈಷಿಯೂ, ಪ್ರಿಯತಮನೂ ಆದ ಬಲರಾಮನ ಬರವನ್ನು ಕೇಳಿ ಕೌರವರು ಆನಂದಗೊಂಡರು. ಅವರು ಉದ್ಧವನನ್ನು ಸತ್ಕರಿಸಿ, ಬಲರಾಮನನ್ನು ಸ್ವಾಗತಿಸಲು ಮಂಗಳ ದ್ರವ್ಯಗಳನ್ನೆತ್ತಿಕೊಂಡು ಅವನಿದ್ದಲ್ಲಿಗೆ ಬಂದರು. ॥18॥

ಮೂಲಮ್

(ಶ್ಲೋಕ-19)
ತಂ ಸಂಗಮ್ಯ ಯಥಾನ್ಯಾಯಂ ಗಾಮರ್ಘ್ಯಂ ಚ ನ್ಯವೇದಯನ್ ।
ತೇಷಾಂ ಯೇ ತತ್ಪ್ರಭಾವಜ್ಞಾಃ ಪ್ರಣೇಮುಃ ಶಿರಸಾ ಬಲಮ್ ॥

ಅನುವಾದ

ಬಲರಾಮನನ್ನು ಕಂಡು ಕೌರವ ಪ್ರಮುಖರು ಅವನಿಗೆ ಯಥಾವಿಧಿಯಾಗಿ ಗೋವನ್ನು ಅರ್ಪಿಸಿ, ಅರ್ಘ್ಯಪಾದ್ಯಾದಿಗಳಿಂದ ಅವನನ್ನು ಸತ್ಕರಿಸಿದರು. ಅವನ ಪ್ರಭಾವವನ್ನು ಚೆನ್ನಾಗಿ ತಿಳಿದಿದ್ದ ಕೌರವ ಪ್ರಮುಖರು ಬಲರಾಮನಿಗೆ ತಲೆಬಾಗಿ ನಮಸ್ಕರಿಸಿದರು. ॥19॥

ಮೂಲಮ್

(ಶ್ಲೋಕ-20)
ಬಂಧೂನ್ ಕುಶಲಿನಃ ಶ್ರುತ್ವಾ ಪೃಷ್ಟ್ವಾ ಶಿವಮನಾಮಯಮ್ ।
ಪರಸ್ಪರಮಥೋ ರಾಮೋ ಬಭಾಷೇವಿಕ್ಲವಂ ವಚಃ ॥

ಅನುವಾದ

ಅನಂತರ ಅವರೆಲ್ಲರೂ ಪರಸ್ಪರ ಕುಶಲಪ್ರಶ್ನೆಗಳನ್ನು ಮಾಡಿ ಜ್ಞಾತಿ-ಬಂಧುಗಳಲ್ಲಿ ಪ್ರತಿಯೊಬ್ಬರ ಯೋಗ-ಕ್ಷೇಮವನ್ನು ವಿಚಾರಿಸಿದ ಬಳಿಕ ಬಲರಾಮನು ಗಂಭೀರವಾಗಿ ದಿಟ್ಟತನದಿಂದಲೇ, ಹೀಗೆ ಹೇಳಿದನು. ॥20॥

ಮೂಲಮ್

(ಶ್ಲೋಕ-21)
ಉಗ್ರಸೇನಃ ಕ್ಷಿತೀಶೇಶೋ ಯದ್ವ ಆಜ್ಞಾಪಯತ್ಪ್ರಭುಃ ।
ತದವ್ಯಗ್ರಧಿಯಃ ಶ್ರುತ್ವಾ ಕುರುಧ್ವಂ ಮಾವಿಲಂಬಿತಮ್ ॥

ಅನುವಾದ

ಸರ್ವಸಮರ್ಥನಾದ ಉಗ್ರಸೇನ ಮಹಾರಾಜನು ನಿಮಗೆ ಆಜ್ಞೆಯನ್ನು ಕಳಿಸಿರುವನು. ನೀವೆಲ್ಲರೂ ಏಕಾಗ್ರತೆಯಿಂದಲೂ ಸಾವಧಾನತೆಯಿಂದಲೂ ಕೇಳಿರಿ ಹಾಗೂ ವಿಳಂಬವಿಲ್ಲದೆ ಅದನ್ನು ಪಾಲಿಸಿರಿ. ॥21॥

ಮೂಲಮ್

(ಶ್ಲೋಕ-22)
ಯದ್ಯೂಯಂ ಬಹವಸ್ತ್ವೇಕಂ ಜಿತ್ವಾಧರ್ಮೇಣ ಧಾರ್ಮಿಕಮ್ ।
ಅಬಧ್ನೀತಾಥ ತನ್ಮೃಷ್ಯೇ ಬಂಧೂನಾಮೈಕ್ಯಕಾಮ್ಯಯಾ ॥

ಅನುವಾದ

ಉಗ್ರಸೇನನು ಹೇಳಿರುವನು - ಹಲವಾರು ಮಂದಿ ಮಹಾರಥರು ಒಟ್ಟಿಗೆ ಸೇರಿ ಏಕಾಕಿಯಾಗಿದ್ದ ಧಾರ್ಮಿಕನಾದ ಸಾಂಬನನ್ನು ಅಧರ್ಮದಿಂದ ಪರಾಜಯಗೊಳಿಸಿ ಬಂಧಿಸಿರಿವಿರಿ. ಬಂಧುಗಳಲ್ಲಿ ಪರಸ್ಪರ ಐಕ್ಯ ಮತ್ಯವಿರಬೇಕೆಂಬ ಆಶಯದಿಂದ ಈ ತಿರಸ್ಕಾರವನ್ನು ಇಷ್ಟರವರೆಗೆ ನಾವು ಸಹಿಸಿಕೊಂಡೆವು. ಸಾಂಬನನ್ನು ಕೂಡಲೇ ಬಿಡುಗಡೆ ಮಾಡಿ ನವವಧುವಿನೊಡನೆ ಅವನನ್ನು ಕಳಿಸಿಕೊಡದೆ ಇದ್ದರೆ ನಮ್ಮ ಸೈರಣೆಯು ಹೀಗೆಯೇ ಉಳಿಯಲಾರದು. ॥22॥

ಮೂಲಮ್

(ಶ್ಲೋಕ-23)
ವೀರ್ಯಶೌರ್ಯಬಲೋನ್ನದ್ಧಮಾತ್ಮಶಕ್ತಿಸಮಂ ವಚಃ ।
ಕುರವೋ ಬಲದೇವಸ್ಯ ನಿಶಮ್ಯೋಚುಃ ಪ್ರಕೋಪಿತಾಃ ॥

ಅನುವಾದ

ಪರೀಕ್ಷಿತನೇ! ಬಲರಾಮನ ವಾಣಿಯು ಆತನ ವೀರ್ಯ ಶೌರ್ಯ-ಬಲ-ಪೌರುಷ-ಉತ್ಸಾಹ ಮತ್ತು ಶಕ್ತಿಗಳಿಗೆ ಅನುರೂಪವಾಗಿತ್ತು. ಬಲರಾಮನ ನಿಷ್ಠುರವಾದ ಈ ಮಾತನ್ನು ಕೇಳಿ ಕುಪಿತರಾದ ಕೌರವರು ಆತನಲ್ಲಿ ಹೇಳಿದರು- ॥23॥

ಮೂಲಮ್

(ಶ್ಲೋಕ-24)
ಅಹೋ ಮಹಚ್ಚಿತ್ರಮಿದಂ ಕಾಲಗತ್ಯಾ ದುರತ್ಯಯಾ ।
ಆರುರುಕ್ಷತ್ಯುಪಾನದ್ವೈ ಶಿರೋ ಮುಕುಟಸೇವಿತಮ್ ॥

ಅನುವಾದ

ನಿಶ್ಚಯವಾಗಿಯೂ ಇದು ಎಂತಹ ಅಚ್ಚರಿಯ ಸಂಗತಿ! ಮೀರಿನಡೆಯಲು ಅಸಾಧ್ಯವಾದ ಕಾಲಗತಿಯಿಂದಾಗಿ ಕಾಲಿನಲ್ಲಿರಬೇಕಾದ ಪಾದರಕ್ಷೆಯು ಕಿರೀಟವಿರುವ ತಲೆಯನ್ನೇರಲು ಹವಣಿಸುತ್ತಿದೆಯಲ್ಲ! ॥24॥

ಮೂಲಮ್

(ಶ್ಲೋಕ-25)
ಏತೇ ಯೌನೇನ ಸಂಬದ್ಧಾಃ ಸಹಶಯ್ಯಾಸನಾಶನಾಃ ।
ವೃಷ್ಣಯಸ್ತುಲ್ಯತಾಂ ನೀತಾ ಅಸ್ಮದ್ದತ್ತನೃಪಾಸನಾಃ ॥

ಅನುವಾದ

ಯದುವಂಶೀಯರು ರಾಜಮನೆತನಕ್ಕೆ ಸೇರಿದವರಲ್ಲವಾದರೂ ನಾವು ಇವರೊಡನೆ ವಿವಾಹ ಸಂಬಂಧವನ್ನು ಬೆಳೆಸಿದೆವು. ಇದರಿಂದ ಇವರು ನಮ್ಮೊಂದಿಗೆ ಮಲಗುವುದು-ಕುಳಿತುಕೊಳ್ಳುವುದು ಮತ್ತು ಸಹಪಂಕ್ತಿಭೋಜನವನ್ನು ಮಾಡ ತೊಡಗಿದರು. ಇವರಿಗೆ ನಾವೇ ರಾಜಸಿಂಹಾಸನವನ್ನಿತ್ತು ನಮಗೆ ಸಮಾನರನ್ನಾಗಿಸಿದೆವು. ॥25॥

ಮೂಲಮ್

(ಶ್ಲೋಕ-26)
ಚಾಮರವ್ಯಜನೇ ಶಂಖಮಾತಪತ್ರಂ ಚ ಪಾಂಡುರಮ್ ।
ಕಿರೀಟಮಾಸನಂ ಶಯ್ಯಾಂ ಭುಂಜಂತ್ಯಸ್ಮದುಪೇಕ್ಷಯಾ ॥

ಅನುವಾದ

ಈ ಯದುವಂಶೀಯರು ರಾಜೋಚಿತವಾದ ಚಾಮರ, ವ್ಯಜನ, ಶಂಖ, ಶ್ವೇತಚ್ಛತ್ರ, ಕಿರೀಟ, ರಾಜಸಿಂಹಾಸನ, ರಾಜೋಚಿತವಾದ ಹಂಸತೂಲಿಕಾತಲ್ಪ - ಹೀಗೆ ಎಲ್ಲವನ್ನು ಉಪಭೋಗಿಸುತ್ತಿದ್ದಾರೆ. ನಾವುಗಳು ಬೇಕೆಂತಲೇ ಈ ವಿಷಯದಲ್ಲಿ ಉಪೇಕ್ಷೆಯಿಂದ ಇದ್ದೇವೆ. ॥26॥

ಮೂಲಮ್

(ಶ್ಲೋಕ-27)
ಅಲಂ ಯದೂನಾಂ ನರದೇವಲಾಂಛನೈ-
ರ್ದಾತುಃ ಪ್ರತೀಪೈಃ ಣಿನಾಮಿವಾಮೃತಮ್ ।
ಯೇಸ್ಮತ್ಪ್ರಸಾದೋಪಚಿತಾ ಹಿ ಯಾದವಾ
ಆಜ್ಞಾಪಯಂತ್ಯದ್ಯ ಗತತ್ರಪಾ ಬತ ॥

ಅನುವಾದ

ಇನ್ನು ಸಾಕು! ಸಾಕು! ಯದುವಂಶೀಯರಲ್ಲಿ ರಾಜಚಿಹ್ನೆಗಳು ಇರುವುದು ಆವಶ್ಯಕತೆಯಿಲ್ಲ. ಅದನ್ನು ಕಿತ್ತುಕೊಳ್ಳಲೇಬೇಕು. ಹಾವಿಗೆ ಹಾಲುಣಿಸುವವನಿಗೇ ಘಾತಕವಾಗುವಂತೆಯೇ ನಾವು ಕೊಟ್ಟಿರುವ ರಾಜಚಿಹ್ನೆಗಳನ್ನು ಪಡೆದು ಈ ಯದುವಂಶೀಯರು ನಮಗೆ ಪ್ರತಿಕಾರ ಮಾಡುತ್ತಿದ್ದಾರಲ್ಲ! ಅಯ್ಯೋ! ನಮ್ಮ ಅನುಗ್ರಹದಿಂದಲೇ ಅಭಿವೃದ್ಧಿಯನ್ನು ಹೊಂದಿದ ಇವರು ನಿರ್ಲಜ್ಜರಾಗಿ ನಮಗೆ ಆಜ್ಞೆ ಮಾಡುವ ಮಟ್ಟಕ್ಕೆ ಬಂದಿರುವರಲ್ಲ! ॥27॥

ಮೂಲಮ್

(ಶ್ಲೋಕ-28)
ಕಥಮಿಂದ್ರೋಪಿ ಕುರುಭಿರ್ಭೀಷ್ಮದ್ರೋಣಾರ್ಜುನಾದಿಭಿಃ ।
ಅದತ್ತಮವರುಂಧೀತ ಸಿಂಹಗ್ರಸ್ತಮಿವೋರಣಃ ॥

ಅನುವಾದ

ಸಿಂಹದ ಪಾಲನ್ನು ಕುರಿ ಮರಿಯು ಹೇಗೆ ಕಿತ್ತುಕೊಳ್ಳಲಾರದೋ ಹಾಗೆಯೇ ಭೀಷ್ಮ ದ್ರೋಣಾರ್ಜುನರೇ ಮೊದಲಾದ ಕೌರವರು ಬಿಟ್ಟು ಕೊಡದೇ ಇರುವ ವಸ್ತುವನ್ನು ದೇವೇಂದ್ರನಾದರೂ ಹೇಗೆ ತಾನೇ ಕಸಿದುಕೊಂಡು ಹೋದಾನು? ಹಾಗಿರುವಾಗ ಸಾಂಬನನ್ನು ಬಿಡಿಸಿಕೊಂಡು ಹೋಗುವುದು ಯಾದವರಿಗೆ ಹೇಗೆ ಸಾಧ್ಯವಾಗುವುದು? ॥28॥

ಮೂಲಮ್

(ಶ್ಲೋಕ-29)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಜನ್ಮಬಂಧುಶ್ರಿಯೋನ್ನದ್ಧಮದಾಸ್ತೇ ಭರತರ್ಷಭ ।
ಆಶ್ರಾವ್ಯ ರಾಮಂ ದುರ್ವಾಚ್ಯಮಸಭ್ಯಾಃ ಪುರಮಾವಿಶನ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಕೌರವರು ತಮ್ಮ ಕುಲೀನತೆಯಿಂದ, ತಮಗಿದ್ದ ಮಹಾಶೂರರಾದ ಬಂಧುವರ್ಗದವರಿಂದ, ಬಲದಿಂದ, ಸಂಪತ್ತಿನಿಂದ ಮದೋದ್ಧತರಾಗಿ ಬಿಟ್ಟಿರುವರು. ಅವರು ಸಾಧಾರಣ ಶಿಷ್ಟಾಚಾರವನ್ನು ಲೆಕ್ಕಿಸದೆ ಅಸಭ್ಯವರ್ತನೆಯಿಂದ ಕೂಡಿದವರಾಗಿ ಬಲರಾಮನೊಂದಿಗೆ ಇಂತಹ ದುರ್ವಚನಗಳನ್ನಾಡಿ ಹಸ್ತಿನಾಪುರಕ್ಕೆ ಹಿಂದಿರುಗಿದರು. ॥29॥

ಮೂಲಮ್

(ಶ್ಲೋಕ-30)
ದೃಷ್ಟ್ವಾ ಕುರೂಣಾಂ ದೌಃಶೀಲ್ಯಂ ಶ್ರುತ್ವಾವಾಚ್ಯಾನಿ ಚಾಚ್ಯುತಃ ।
ಅವೋಚತ್ಕೋಪಸಂರಬ್ಧೋ ದುಷ್ಪ್ರೇಕ್ಷ್ಯಃ ಪ್ರಹಸನ್ಮುಹುಃ ॥

ಅನುವಾದ

ಬಲರಾಮನು ಕೌರವರ ದುಷ್ಟತೆಯನ್ನೂ ಅಶಿಷ್ಟತೆಯನ್ನು ನೋಡಿ, ದುರ್ವಚನಗಳನ್ನು ಕೇಳಿ ಅವನು ಕೆರಳಿ ಕೋಪದಿಂದ ಕಿಡಿ-ಕಿಡಿಯಾದನು. ಅವನನ್ನು ನೋಡಲೂ ಕೂಡ ಆಗುತ್ತಿರಲಿಲ್ಲ. ಪುನಃ ಪುನಃ ಗಟ್ಟಿಯಾಗಿ ನಗುತ್ತಾ ಹೇಳತೊಡಗಿದನು - ॥30॥

ಮೂಲಮ್

(ಶ್ಲೋಕ-31)
ನೂನಂ ನಾನಾಮದೋನ್ನದ್ಧಾಃ ಶಾಂತಿಂ ನೇಚ್ಛಂತ್ಯಸಾಧವಃ ।
ತೇಷಾಂ ಹಿ ಪ್ರಶಮೋ ದಂಡಃ ಪಶೂನಾಂ ಲಗುಡೋ ಯಥಾ ॥

ಅನುವಾದ

ನಿಜ! ಅಸತ್ಪುರುಷರು ಕುಲಮದ, ಧನಮದ, ವೀರ್ಯಮದ ಮೊದಲಾದ ಮದಗಳಿಂದ ಕೊಬ್ಬಿದವರಾಗಿ ಶಾಂತಿಯನ್ನು ಬಯಸುವುದಿಲ್ಲ. ಪಶುಗಳನ್ನು ಹತೋಟಿಯಲ್ಲಿಡಲು ದೊಣ್ಣೆಯೇ ಆವಶ್ಯಕ ವಿರುವಂತೆ, ಇಂತಹ ದುಷ್ಟರನ್ನು ಹತೋಟಿಗೆ ತರಲು ದಂಡೋಪಾಯವೇ ಸೂಕ್ತವಾದುದು. ॥31॥

ಮೂಲಮ್

(ಶ್ಲೋಕ-32)
ಅಹೋ ಯದೂನ್ಸುಸಂರಬ್ಧಾನ್ ಕೃಷ್ಣಂ ಚ ಕುಪಿತಂ ಶನೈಃ ।
ಸಾಂತ್ವಯಿತ್ವಾಹಮೇತೇಷಾಂ ಶಮಮಿಚ್ಛನ್ನಿಹಾಗತಃ ॥

ಅನುವಾದ

ನೋಡಿರಲ್ಲ! ಎಲ್ಲ ಯದುವೀರರೂ ಮತ್ತು ಶ್ರೀಕಷ್ಣನೂ ಕೂಡ ಕೋಪಗೊಂಡು ಯುದ್ಧಕ್ಕೆ ಸಿದ್ಧರಾಗಿದ್ದರು. ನಾನು ಅವರೆಲ್ಲರನ್ನು ಸಮಾಧಾನಪಡಿಸಿ ಶಾಂತಿಯನ್ನು ಬಯಸಿ ಇಲ್ಲಿಗೆ ಬಂದೆನು. ॥32॥

ಮೂಲಮ್

(ಶ್ಲೋಕ-33)
ತ ಇಮೇ ಮಂದಮತಯಃ ಕಲಹಾಭಿರತಾಃ ಖಲಾಃ ।
ತಂ ಮಾಮವಜ್ಞಾಯ ಮುಹುರ್ದುರ್ಭಾಷಾನ್ ಮಾನಿನೋಬ್ರುವನ್ ॥

ಅನುವಾದ

ಆದರೆ ಈ ಕೌರವರು ಶಾಂತಿಪ್ರಿಯರಲ್ಲ. ಮಂದ ಬುದ್ಧಿಯವರು. ಕಲಹಪ್ರಿಯರು. ನೀಚರು. ದುರಭಿಮಾನಿಗಳು. ನನ್ನನ್ನು ತಿರಸ್ಕರಿಸುತ್ತಾ ಕೆಟ್ಟ-ಕೆಟ್ಟ ಮಾತುಗಳನ್ನೇ ಆಡಿದರು. ॥33॥

ಮೂಲಮ್

(ಶ್ಲೋಕ-34)
ನೋಗ್ರಸೇನಃ ಕಿಲ ವಿಭುರ್ಭೋಜವೃಷ್ಣ್ಯಂಧಕೇಶ್ವರಃ ।
ಶಕ್ರಾದಯೋ ಲೋಕಪಾಲಾ ಯಸ್ಯಾದೇಶಾನುವರ್ತಿನಃ ॥

ಅನುವಾದ

ಇಂದ್ರನೇ ಮೊದಲಾದ ಲೋಕಪಾಲರು ಯಾರ ಆದೇಶವನ್ನು ಶಿರಸಾವಹಿಸಿಕೊಂಡು ಪಾಲಿಸುವರೋ ಅಂತಹ ಭೋಜ, ವೃಷ್ಣಿ, ಅಂಧಕವಂಶೀಯರಿಗೆ ರಾಜನಾದ ಉಗ್ರಸೇನ ಮಹಾರಾಜರು ರಾಜನಲ್ಲವಂತೆ! ಇದೆಂತಹ ಮಾತು! ॥34॥

ಮೂಲಮ್

(ಶ್ಲೋಕ-35)
ಸುಧರ್ಮಾಕ್ರಮ್ಯತೇ ಯೇನ ಪಾರಿಜಾತೋಮರಾಂಘ್ರಿಪಃ ।
ಆನೀಯ ಭುಜ್ಯತೇ ಸೋಸೌ ನ ಕಿಲಾಧ್ಯಾಸನಾರ್ಹಣಃ ॥

ಅನುವಾದ

ಯಾರು ಸುಧರ್ಮಾ ಎಂಬ ದೇವಸಭೆಯನ್ನಾಕ್ರಮಿಸಿ, ದೇವತಾವೃಕ್ಷವಾದ ಪಾರಿಜಾತವನ್ನು ಕಿತ್ತು ತಂದು ಅದರ ಫಲವನ್ನಿಲ್ಲಿ ಅನುಭವಿಸುತ್ತಿರುವನೋ ಅಂತಹ ಭಗವಾನ್ ಶ್ರೀಕೃಷ್ಣನು ರಾಜಸಿಂಹಾಸನಕ್ಕೆ ಅಧಿಕಾರಿಯಲ್ಲವಂತೆ! ಇರಲಿ. ॥35॥

ಮೂಲಮ್

(ಶ್ಲೋಕ-36)
ಯಸ್ಯ ಪಾದಯುಗಂ ಸಾಕ್ಷಾತ್ ಶ್ರೀರುಪಾಸ್ತೇಖಿಲೇಶ್ವರೀ ।
ಸ ನಾರ್ಹತಿ ಕಿಲ ಶ್ರೀಶೋ ನರದೇವಪರಿಚ್ಛದಾನ್ ॥

ಅನುವಾದ

ಸಮಸ್ತ ಜಗತ್ತಿಗೂ ಒಡೆಯಳಾದ ಭಗವತಿ ಲಕ್ಷ್ಮೀದೇವಿಯೇ ಯಾರ ಚರಣಕಮಲಗಳನ್ನು ಉಪಾಸಿಸುತ್ತಿರುವಳೋ ಅಂತಹ ಲಕ್ಷ್ಮೀಪತಿಯಾದ ಭಗವಾನ್ ಶ್ರೀಕೃಷ್ಣನಿಗೆ ರಾಜೋಚಿತವಾದ ಛತ್ರ, ಚಾಮರಾದಿಗಳು ಸಲ್ಲಿಸುವುದಿಲ್ಲವಂತೆ! ॥36॥

ಮೂಲಮ್

(ಶ್ಲೋಕ-37)
ಯಸ್ಯಾಂಘ್ರಿಪಂಕಜರಜೋಖಿಲಲೋಕಪಾಲೈ-
ರ್ವೌಲ್ಯುತ್ತಮೈರ್ಧೃತಮುಪಾಸಿತತೀರ್ಥತೀರ್ಥಮ್ ।
ಬ್ರಹ್ಮಾ ಭವೋಹಮಪಿ ಯಸ್ಯ ಕಲಾಃ ಕಲಾಯಾಃ
ಶ್ರೀಶ್ಚೋದ್ವಹೇಮ ಚಿರಮಸ್ಯ ನೃಪಾಸನಂ ಕ್ವ ॥

ಅನುವಾದ

ಸರಿಯಪ್ಪಾ! ಸರಿ! ಯಾರ ಚರಣ ಕಮಲಗಳ ಧೂಳಿಯು ಸತ್ಪುರುಷರಿಂದ ಸೇವಿಸಲ್ಪಡುವ ಗಂಗೆಯೇ ಮೊದಲಾದ ತೀರ್ಥಗಳಿಗೂ ತೀರ್ಥರೂಪವಾಗಿರುವುದೋ ಅಂತಹ ಪಾದಧೂಳಿಯನ್ನು ಸಮಸ್ತ ಲೋಕಪಾಲರೂ ತಮ್ಮ-ತಮ್ಮ ಕಿರೀಟಗಳಲ್ಲಿ ಧರಿಸುವರೋ, ನಾನು, ಬ್ರಹ್ಮ, ಶಂಕರ, ಲಕ್ಷ್ಮೀದೇವಿ ಇವರೇ ಮೊದಲಾದ ವಿಭೂತಿಗಳು ಯಾರ ಅಂಶಾಂಶ ಭೂತರಾಗಿರುವೆವೋ ಹಾಗೂ ಯಾರ ಚರಣಧೂಳಿಯನ್ನು ಸದಾ ಶಿರದಲ್ಲಿ ಧರಿಸುವೆವೋ ಅಂತಹ ಶ್ರೀಕೃಷ್ಣನಿಗೆ ಸಿಂಹಾಸನದಲ್ಲಿ ಕುಳಿತುಕೊಳ್ಳುವ ಅರ್ಹತೆಯಿಲ್ಲವಂತೆ! ಎಂತಹ ಸೊಗಸಾದ ಮಾತು! ॥37॥

ಮೂಲಮ್

(ಶ್ಲೋಕ-38)
ಭುಂಜತೇ ಕುರುಭಿರ್ದತ್ತಂ ಭೂಖಂಡಂ ವೃಷ್ಣಯಃ ಕಿಲ ।
ಉಪಾನಹಃ ಕಿಲ ವಯಂ ಸ್ವಯಂ ತು ಕುರವಃ ಶಿರಃ ॥

ಅನುವಾದ

ಕೌರವರು ಕೊಟ್ಟಿರುವ ಭೂಮಿಯ ತುಂಡನ್ನು ಬಡಪಾಯಿಗಳಾದ ಯಾದವರು ಉಪಭೋಗಿಸುತ್ತಿದ್ದಾರಂತೆ. ನಾವು ಪಾದರಕ್ಷೆಗಳಂತೆ! ಕುರುಗಳು ತಲೆಯಂತೆ! ಎಂತಹ ಹೋಲಿಕೆ! ॥38॥

ಮೂಲಮ್

(ಶ್ಲೋಕ-39)
ಅಹೋ ಐಶ್ವರ್ಯಮತ್ತಾನಾಂ ಮತ್ತಾನಾಮಿವ ಮಾನಿನಾಮ್ ।
ಅಸಂಬದ್ಧಾ ಗಿರೋ ರೂಕ್ಷಾಃ ಕಃ ಸಹೇತಾನುಶಾಸಿತಾ ॥

ಅನುವಾದ

ಐಶ್ವರ್ಯ ಮದದಿಂದ ಉನ್ಮತ್ತರಾಗಿ ದರ್ಪಿಷ್ಟರಾಗಿರುವ ಈ ಕೌರವರು ಹುಚ್ಚರಂತಾಗಿದ್ದಾರೆ. ಇವರ ಒಂದೊಂದು ಮಾತೂ ಕಠೋರವಾಗಿದೆ ಹಾಗೂ ತಲೆ-ಬುಡ ಇಲ್ಲದ್ದಾಗಿದೆ. ಇಂತಹವರನ್ನು ಶಿಕ್ಷಿಸಲು, ಇವರನ್ನು ದಂಡಿಸುವ ಸಾಮರ್ಥ್ಯವುಳ್ಳ ನನ್ನಂತಹವನು ಇಂತಹ ಮಾತುಗಳನ್ನು ಹೇಗೆ ತಾನೇ ಸಹಿಸ ಬಲ್ಲನು? ॥39॥

ಮೂಲಮ್

(ಶ್ಲೋಕ-40)
ಅದ್ಯ ನಿಷ್ಕೌರವೀಂ ಪೃಥ್ವೀಂ ಕರಿಷ್ಯಾಮೀತ್ಯಮರ್ಷಿತಃ ।
ಗೃಹೀತ್ವಾ ಹಲಮುತ್ತಸ್ಥೌ ದಹನ್ನಿವ ಜಗತಯಮ್ ॥

ಅನುವಾದ

‘ಇಂದು ನಾನು ಭೂಮಂಡಲವನ್ನು ಕೌರವರಿಂದ ರಹಿತನನ್ನಾಗಿಸಿಬಿಡುತ್ತೇನೆ’ ಎಂದೆನ್ನುತ್ತಾ ಅತ್ಯಂತ ಕ್ರುದ್ಧನಾದ ಬಲರಾಮನು ಮೂರು ಲೋಕಗಳನ್ನು ಸುಟ್ಟು ಬಿಡುವನೋ ಎಂಬಂತೆ ಹಲಾಯುಧವನ್ನು ಹಿಡಿದು ಮೇಲಕ್ಕೆದ್ದನು. ॥40॥

ಮೂಲಮ್

(ಶ್ಲೋಕ-41)
ಲಾಂಗಲಾಗ್ರೇಣ ನಗರಮುದ್ವಿದಾರ್ಯ ಗಜಾಹ್ವಯಮ್ ।
ವಿಚಕರ್ಷ ಸ ಗಂಗಾಯಾಂ ಪ್ರಹರಿಷ್ಯನ್ನಮರ್ಷಿತಃ ॥

ಅನುವಾದ

ಬಳಿಕ ಆತನು ನೇಗಿಲತುದಿಯಿಂದ ಹಸ್ತಿನಾಪಟ್ಟಣವನ್ನು ಕಿತ್ತು ಅದನ್ನು ಮುಳುಗಿಸಿಬಿಡಬೇಕೆಂದು ಗಂಗೆಯ ಕಡೆಗೆ ಸೆಳೆಯತೊಡಗಿದನು. ॥41॥

ಮೂಲಮ್

(ಶ್ಲೋಕ-42)
ಜಲಯಾನಮಿವಾಘೂರ್ಣಂ ಗಂಗಾಯಾಂ ನಗರಂ ಪತತ್ ।
ಆಕೃಷ್ಯಮಾಣಮಾಲೋಕ್ಯ ಕೌರವಾ ಜಾತಸಂಭ್ರಮಾಃ ॥

ಅನುವಾದ

ಹಲಾಯುಧದಿಂದ ಸೆಳೆಯಲ್ಪಟ್ಟಾಗ ಹಸ್ತಿನಾವತಿಯು ನೀರಿನಲ್ಲಿರುವ ದೋಣಿಯು ಅಲ್ಲಾಡುವಂತೆ ನಡುಗ ತೊಡಗಿತು. ತಮ್ಮ ನಗರವಾದರೋ ಗಂಗೆಯಲ್ಲಿ ಮುಳುಗುತ್ತಾ ಇದೆ; ಎಂದು ನೋಡಿದ ಕೌರವರು ಗಾಬರಿಗೊಂಡರು. ॥42॥

ಮೂಲಮ್

(ಶ್ಲೋಕ-43)
ತಮೇವ ಶರಣಂ ಜಗ್ಮುಃ ಸಕುಟುಂಬಾ ಜಿಜೀವಿಷವಃ ।
ಸಲಕ್ಷ್ಮಣಂ ಪುರಸ್ಕೃತ್ಯ ಸಾಂಬಂ ಪ್ರಾಂಜಲಯಃ ಪ್ರಭುಮ್ ॥

ಅನುವಾದ

ಮತ್ತೆ ಕೌರವರು ಲಕ್ಷ್ಮಣೆಯ ಜೊತೆಗೆ ಸಾಂಬನನ್ನು ಮುಂದೆ ಮಾಡಿಕೊಂಡು ತಮ್ಮ ಪ್ರಾಣಗಳನ್ನು ರಕ್ಷಿಸಿಕೊಳ್ಳಲಿಕ್ಕಾಗಿ ಕುಟುಂಬ ಸಹಿತ ಕೈ ಜೋಡಿಸಿಕೊಂಡು ಸರ್ವಶಕ್ತನಾದ ಭಗವಾನ್ ಬಲರಾಮನಿಗೆ ಶರಣಾಗಿ ಪ್ರಾರ್ಥಿಸಿದರು. ॥43॥

ಮೂಲಮ್

(ಶ್ಲೋಕ-44)
ರಾಮ ರಾಮಾಖಿಲಾಧಾರ ಪ್ರಭಾವಂ ನ ವಿದಾಮ ತೇ ।
ಮೂಢಾನಾಂ ನಃ ಕುಬುದ್ಧೀನಾಂ ಕ್ಷಂತುಮರ್ಹಸ್ಯತಿಕ್ರಮಮ್ ॥

ಅನುವಾದ

ಲೋಕಾಭಿರಾಮನಾದ ಬಲರಾಮನೇ! ನೀನು ಸಮಸ್ತ ಜಗತ್ತಿಗೂ ಆಧಾರಭೂತನಾದ ಶೇಷನೇ ಆಗಿರುವೆ. ನಾವು ನಿನ್ನ ಪ್ರಭಾವವನ್ನು ತಿಳಿದವರಲ್ಲ. ನಾವು ನಿಶ್ಚಯವಾಗಿಯೂ ಮೂರ್ಖರು. ಕುತ್ಸಿತವಾದ ಬುದ್ಧಿಯುಳ್ಳವರು. ನಾವು ಮಾಡಿದ ಅಪರಾಧವನ್ನು ಕ್ಷಮಿಸಿಬಿಡು. ॥44॥

ಮೂಲಮ್

(ಶ್ಲೋಕ-45)
ಸ್ಥಿತ್ಯುತ್ಪತ್ತ್ಯಪ್ಯಯಾನಾಂ ತ್ವಮೇಕೋ ಹೇತುರ್ನಿರಾಶ್ರಯಃ ।
ಲೋಕಾನ್ ಕ್ರೀಡನಕಾನೀಶ ಕ್ರೀಡತಸ್ತೇ ವದಂತಿ ಹಿ ॥

ಅನುವಾದ

ಪ್ರಭುವೇ! ನೀನು ಜಗತ್ತಿನ ಉತ್ಪತ್ತಿ, ಸ್ಥಿತಿ, ಲಯಗಳಿಗೆ ಏಕಮಾತ್ರ ಕಾರಣನಾಗಿರುವೆ. ನೀನು ನಿರಾಧಾರನು. ಲೋಕಗಳನ್ನೇ ಆಟಿಕೆಗಳನ್ನಾಗಿಸಿಕೊಂಡು ನೀನು ಆಟವಾಡುವೆಯೆಂದು ಜ್ಞಾನಿಗಳಾದ ಋಷಿ-ಮುನಿಗಳು ಹೇಳುತ್ತಾರೆ. ॥45॥

ಮೂಲಮ್

(ಶ್ಲೋಕ-46)
ತ್ವಮೇವ ಮೂರ್ಧ್ನೀದಮನಂತ ಲೀಲಯಾ
ಭೂಮಂಡಲಂ ಬಿಭರ್ಷಿ ಸಹಸ್ರಮೂರ್ಧನ್ ।
ಅಂತೇ ಚ ಯಃ ಸ್ವಾತ್ಮನಿ ರುದ್ಧವಿಶ್ವಃ
ಶೇಷೇದ್ವಿತೀಯಃ ಪರಿಶಿಷ್ಯಮಾಣಃ ॥

ಅನುವಾದ

ಅನಂತನೇ! ನಿನಗೆ ಸಾವಿರ ತಲೆಗಳಿವೆ. ನೀನು ಆಟವಾಡುತ್ತಲೇ ಈ ಅಖಂಡ ಭೂಮಂಡಲವನ್ನು ನಿನ್ನ ತಲೆಯಲ್ಲಿ ಧರಿಸಿರುವೆ. ಪ್ರಳಯಕಾಲವು ಸನ್ನಿಹಿತವಾದಾಗ ಸಮಸ್ತ ಜಗತ್ತನ್ನು ನಿನ್ನಲ್ಲಿಯೇ ಲೀನಗೊಳಿಸಿಕೊಳ್ಳುವೆ. ಆ ಸಮಯದಲ್ಲಿ ಉಳಿದಿರುವ ನೀನೊಬ್ಬನೇ ಅದ್ವಿತೀಯ ರೂಪದಿಂದ ಪವಡಿಸುವೆ. ॥46॥

ಮೂಲಮ್

(ಶ್ಲೋಕ-47)
ಕೋಪಸ್ತೇಖಿಲಶಿಕ್ಷಾರ್ಥಂ ನ ದ್ವೇಷಾನ್ನ ಚ ಮತ್ಸರಾತ್ ।
ಬಿಭ್ರತೋ ಭಗವನ್ಸತ್ತ್ವಂ ಸ್ಥಿತಿಪಾಲನತತ್ಪರಃ ॥

ಅನುವಾದ

ಭಗವಂತನೇ! ನೀನು ಜಗತ್ತಿನ ಸ್ಥಿತಿ ಮತ್ತು ಪಾಲನೆಗಾಗಿ ಶುದ್ಧಸತ್ತ್ವಮಯವಾದ ಶರೀರವನ್ನು ಗ್ರಹಣಮಾಡುವೆ. ನಿನ್ನ ಈ ಕ್ರೋಧವು ದ್ವೇಷ ಅಥವಾ ಮತ್ಸರದ ಕಾರಣದಿಂದ ಉಂಟಾದುದಲ್ಲ. ಇದಾದರೋ ಸಮಸ್ತ ಪ್ರಾಣಿಗಳ ಶಿಕ್ಷಣಾರ್ಥವಾಗಿಯೇ ಇದೆ. ॥47॥

ಮೂಲಮ್

(ಶ್ಲೋಕ-48)
ನಮಸ್ತೇ ಸರ್ವಭೂತಾತ್ಮನ್ ಸರ್ವಶಕ್ತಿಧರಾವ್ಯಯ ।
ವಿಶ್ವಕರ್ಮನ್ ನಮಸ್ತೇಸ್ತು ತ್ವಾಂ ವಯಂ ಶರಣಂ ಗತಾಃ ॥

ಅನುವಾದ

ಸಮಸ್ತ ಶಕ್ತಿಗಳನ್ನು ಧರಿಸತಕ್ಕವನೇ! ಸಮಸ್ತ ಪ್ರಾಣಿಗಳ ಆತ್ಮಸ್ವರೂಪನೇ ಅವಿನಾಶಿಯೇ! ಭಗವಂತನೇ! ನಾವು ನಿನಗೆ ನಮಸ್ಕರಿಸುತ್ತೇವೆ. ಸಮಸ್ತ ವಿಶ್ವವನ್ನೂ ಸೃಷ್ಟಿಸುವ ದೇವನೇ! ನಾವು ಪುನಃ ಪುನಃ ನಿನಗೆ ನಮಸ್ಕರಿಸುತ್ತೇವೆ. ನಾವು ನಿನಗೆ ಶರಣಾಗಿದ್ದೇವೆ. ನೀನು ದಯಮಾಡಿ ನಮ್ಮನ್ನು ರಕ್ಷಿಸು. ॥48॥

ಮೂಲಮ್

(ಶ್ಲೋಕ-49)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಂ ಪ್ರಪನ್ನೈಃ ಸಂವಿಗ್ನೈರ್ವೇಪಮಾನಾಯನೈರ್ಬಲಃ ।
ಪ್ರಸಾದಿತಃ ಸುಪ್ರಸನ್ನೋ ಮಾ ಭೈಷ್ಟೇತ್ಯಭಯಂ ದದೌ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಕೌರವರ ಗಜಪುರಿಯು ನಡುಗುತ್ತಾ ಇದ್ದು ಅವರು ಅತ್ಯಂತ ಗಾಬರಿಗೊಂಡಿದ್ದರು. ಸಮಸ್ತ ಕುರುವಂಶೀಯರು ಹೀಗೆ ಭಗವಾನ್ ಬಲರಾಮನಿಗೆ ಶರಣಾಗಿ, ಅವನನ್ನು ಪ್ರಾರ್ಥಿಸಿದಾಗ ಅವನು ಪ್ರಸನ್ನನಾಗಿ - ‘ಹೆದರಬೇಡಿರಿ’ ಎಂದು ಹೇಳಿ ಅವರಿಗೆ ಅಭಯವನ್ನು ನೀಡಿದನು. ॥49॥

ಮೂಲಮ್

(ಶ್ಲೋಕ-50)
ದುರ್ಯೋಧನಃ ಪಾರಿಬರ್ಹಂ ಕುಂಜರಾನ್ ಷಷ್ಟಿಹಾಯನಾನ್ ।
ದದೌ ಚ ದ್ವಾದಶಶತಾನ್ಯಯುತಾನಿ ತುರಂಗಮಾನ್ ॥
(ಶ್ಲೋಕ-51)
ರಥಾನಾಂ ಷಟ್ಸಹಸ್ರಾಣಿ ರೌಕ್ಮಾಣಾಂ ಸೂರ್ಯವರ್ಚಸಾಮ್ ।
ದಾಸೀನಾಂ ನಿಷ್ಕಕಂಠೀನಾಂ ಸಹಸ್ರಂ ದುಹಿತೃವತ್ಸಲಃ ॥

ಅನುವಾದ

ಪರೀಕ್ಷಿತನೇ! ಅನಂತರ ಮಗಳನ್ನು ಬಹಳವಾಗಿ ಪ್ರೀತಿಸುತ್ತಿದ್ದ ದುರ್ಯೋಧನನು ಅರವತ್ತು ವರ್ಷ ವಯಸ್ಸಿನ ಹನ್ನೆರಡು ನೂರು ಆನೆಗಳನ್ನು, ಹತ್ತ ಸಾವಿರ ಕುದುರೆಗಳನ್ನು ಸೂರ್ಯನಂತೆ ಹೊಳೆಯುವ ಚಿನ್ನದ ಆರು ಸಾವಿರ ರಥಗಳನ್ನು ಮತ್ತು ಸುವರ್ಣ ಹಾರಗಳಿಂದ ಸಮಲಂಕೃತೆಯರಾದ ಒಂದು ಸಾವಿರ ದಾಸಿಯರನ್ನು ಮಗಳಿಗೆ ಬಳುವಳಿಯಾಗಿ ಕೊಟ್ಟನು. ॥50-51॥

ಮೂಲಮ್

(ಶ್ಲೋಕ-52)
ಪ್ರತಿಗೃಹ್ಯ ತು ತತ್ಸರ್ವಂ ಭಗವಾನ್ ಸಾತ್ವತರ್ಷಭಃ ।
ಸಸುತಃ ಸಸ್ನುಷಃ ಪ್ರಾಗಾತ್ಸುಹೃದ್ಭಿರಭಿನಂದಿತಃ ॥

ಅನುವಾದ

ಯದುವಂಶ ಶಿರೋಮಣಿಯಾದ ಬಲರಾಮನು ಸಮಸ್ತವಾದ ಬಳುವಳಿಯನ್ನು ಸ್ವೀಕರಿಸಿ ಲಕ್ಷ್ಮಣೆ ಮತ್ತು ಸಾಂಬರೊಂದಿಗೆ ಕೌರವರ ಅಭಿನಂದನೆಗಳನ್ನು ಸ್ವೀಕರಿಸಿ ದ್ವಾರಕೆಗೆ ಪ್ರಯಾಣ ಬೆಳೆಸಿದನು. ॥52॥

ಮೂಲಮ್

(ಶ್ಲೋಕ-53)
ತತಃ ಪ್ರವಿಷ್ಟಃ ಸ್ವಪುರಂ ಹಲಾಯುಧಃ
ಸಮೇತ್ಯ ಬಂಧೂನನುರಕ್ತಚೇತಸಃ ।
ಶಶಂಸ ಸರ್ವಂ ಯದುಪುಂಗವಾನಾಂ
ಮಧ್ಯೇ ಸಭಾಯಾಂ ಕುರುಷು ಸ್ವಚೇಷ್ಟಿತಮ್ ॥

ಅನುವಾದ

ಬಲರಾಮನು ದ್ವಾರಕೆಗೆ ಹೋಗಿ ತನ್ನಲ್ಲಿಯೇ ಅನುರಕ್ತರಾಗಿದ್ದ ಹಾಗೂ ಸಮಾಚಾರವನ್ನು ತಿಳಿಯಲು ಉತ್ಸುಕರಾದ ಬಂಧುಗಳೊಡನೆ ಸೇರಿ, ಯದುಪುಂಗವರ ಸಭಾ ಮಧ್ಯದಲ್ಲಿ ತಾನು ಕೌರವರೊಂದಿಗೆ ವ್ಯವಹರಿಸಿದ ಸಕಲ ವೃತ್ತಾಂತವನ್ನು ಸವಿಸ್ತಾರವಾಗಿ ಹೇಳಿದನು. ॥53॥

ಮೂಲಮ್

(ಶ್ಲೋಕ-54)
ಅದ್ಯಾಪಿ ಚ ಪುರಂ ಹ್ಯೇತತ್ಸೂಚಯದ್ರಾಮವಿಕ್ರಮಮ್ ।
ಸಮುನ್ನತಂ ದಕ್ಷಿಣತೋ ಗಂಗಾಯಾಮನುದೃಶ್ಯತೇ ॥

ಅನುವಾದ

ಪರೀಕ್ಷಿತನೇ! ಹಸ್ತಿನಾಪುರವು ಈಗಲೂ ದಕ್ಷಿಣದಿಕ್ಕಿನಲ್ಲಿ ಸ್ವಲ್ಪ ಎತ್ತರವಾಗಿದ್ದು ಗಂಗಾ ನದಿಯ ಕಡೆಗೆ ಸ್ವಲ್ಪವಾಲಿಕೊಂಡಿದೆ. ಹೀಗೆ ಅದು ಭಗವಾನ್ ಬಲರಾಮನ ಅತುಲ ಪರಾಕ್ರಮವನ್ನು ಸೂಚಿಸುತ್ತದೆ. ॥54॥

ಅನುವಾದ (ಸಮಾಪ್ತಿಃ)

ಅರವತ್ತೆಂಟನೆಯ ಅಧ್ಯಾಯವು ಮುಗಿಯಿತು. ॥68॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ ಹಸ್ತಿನಾಪುರಕರ್ಷಣರೂಪಸಂಕರ್ಷಣವಿಜಯೋ ನಾಮ ಅಷ್ಟಷಷ್ಟಿತಮೋಽಧ್ಯಾಯಃ ॥68॥