೬೭

[ಅರವತ್ತೆಳನೇಯ ಅಧ್ಯಾಯ]

ಭಾಗಸೂಚನಾ

ಬಲರಾಮನಿಂದ ದ್ವಿವಿದನ ಸಂಹಾರ

ಮೂಲಮ್

(ಶ್ಲೋಕ-1)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಭೂಯೋಹಂ ಶ್ರೋತುಮಿಚ್ಛಾಮಿ ರಾಮಸ್ಯಾದ್ಭುತಕರ್ಮಣಃ ।
ಅನಂತಸ್ಯಾಪ್ರಮೇಯಸ್ಯ ಯದನ್ಯತ್ಕೃತವಾನ್ ಪ್ರಭುಃ ॥

ಅನುವಾದ

ಪರೀಕ್ಷಿತರಾಜನು ಕೇಳಿದನು — ಪೂಜ್ಯರೇ! ಭಗವಾನ್ ಬಲರಾಮನು ಅದ್ಭುತ ಕಾರ್ಯಗಳನ್ನು ಮಾಡುವವನೂ, ಅನಂತನೂ, ಅಪ್ರಮೇಯನೂ ಆಗಿರುವನು. ಅಂತಹ ಬಲಭದ್ರನು ಮಾಡಿದ ಇತರ ಸಾಹಸ ಕಾರ್ಯಗಳನ್ನು ಕೇಳಲು ಬಯಸುತ್ತೇನೆ. ದಯಮಾಡಿ ಹೇಳಿರಿ. ॥1॥

ಮೂಲಮ್

(ಶ್ಲೋಕ-2)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ನರಕಸ್ಯ ಸಖಾ ಕಶ್ಚಿದ್ವವಿದೋ ನಾಮ ವಾನರಃ ।
ಸುಗ್ರೀವಸಚಿವಃ ಸೋಥ ಭ್ರಾತಾ ಮೈಂದಸ್ಯ ವೀರ್ಯವಾನ್ ॥

ಅನುವಾದ

ಶ್ರೀಶುಕಮುನಿಗಳು ಹೇಳುತ್ತಾರೆ — ಪರೀಕ್ಷಿತ ಮಹಾರಾಜ! ದ್ವಿವಿದನೆಂಬ ಒಬ್ಬ ವಾನರನಿದ್ದನು. ಅವನು ಭೌಮಾಸುರನ ಮಿತ್ರನೂ, ಸುಗ್ರೀವನ ಮಂತ್ರಿಯೂ, ಶಕ್ತಿಶಾಲಿಯೂ, ಮೈಂದನಿಗೆ ಸಹೋದರನೂ ಆಗಿದ್ದನು. ॥2॥

ಮೂಲಮ್

(ಶ್ಲೋಕ-3)
ಸಖ್ಯುಃ ಸೋಪಚಿತಿಂ ಕುರ್ವನ್ವಾನರೋ ರಾಷ್ಟ್ರವಿಪ್ಲವಮ್ ।
ಪುರಗ್ರಾಮಾಕರಾನ್ಘೋಷಾನದಹದ್ವಹ್ನಿಮುತ್ಸೃಜನ್ ॥

ಅನುವಾದ

ತನ್ನ ಮಿತ್ರನಾದ ಭೌಮಾಸುರನನ್ನು ಶ್ರೀಕೃಷ್ಣನು ಸಂಹರಿಸಿದನೆಂಬ ವಾರ್ತೆಯನ್ನು ಕೇಳುತ್ತಲೇ ದ್ವಿವಿದನು ತನ್ನ ಮಿತ್ರನ ಮಿತ್ರಋಣವನ್ನು ತೀರಿಸಬೇಕೆಂದು ರಾಷ್ಟ್ರದಲ್ಲಿ ವಿಪ್ಲವವನ್ನುಂಟುಮಾಡಲು ತೊಡಗಿದನು. ಆ ವಾನರನು ನಗರಗಳನ್ನು, ಪಟ್ಟಣಗಳನ್ನೂ, ಹಳ್ಳಿಗಳನ್ನೂ, ಗೋಪಾಲಕರ ಹಟ್ಟಿಗಳನ್ನು ಸುಡಲು ಪ್ರಾರಂಭಿಸಿದನು. ॥3॥

ಮೂಲಮ್

(ಶ್ಲೋಕ-4)
ಕ್ವಚಿತ್ಸ ಶೈಲಾನುತ್ಪಾಟ್ಯ ತೈರ್ದೇಶಾನ್ಸಮಚೂರ್ಣಯತ್ ।
ಆನರ್ತಾನ್ಸುತರಾಮೇವ ಯತ್ರಾಸ್ತೇ ಮಿತ್ರಹಾ ಹರಿಃ ॥

ಅನುವಾದ

ಕೆಲವೊಮ್ಮೆ ಅವನು ದೊಡ್ಡ-ದೊಡ್ಡ ಪರ್ವತಗಳನ್ನು ಕಿತ್ತು ಊರುಗಳ ಮೇಲೆ, ಗ್ರಾಮಗಳ ಮೇಲೆ ಎಸೆದು ಪುಡಿ-ಪುಡಿ ಮಾಡಿಬಿಡುತ್ತಿದ್ದನು. ವಿಶೇಷವಾಗಿ ಅವನು ಆನರ್ತ ದೇಶದಲ್ಲಿಯೇ ಇಂತಹ ಉತ್ಪಾತಗಳನ್ನು ಮಾಡುತ್ತಿದ್ದನು. ಏಕೆಂದರೆ, ತನ್ನ ಮಿತ್ರಹಂತಕನಾದ ಶ್ರೀಕೃಷ್ಣನು ಅಲ್ಲೇವಾಸಿಸುತ್ತಿದ್ದನು. ॥4॥

ಮೂಲಮ್

(ಶ್ಲೋಕ-5)
ಕ್ವಚಿತ್ಸಮುದ್ರಮಧ್ಯಸ್ಥೋ ದೋರ್ಭ್ಯಾಮುತ್ಕ್ಷಿಪ್ಯ ತಜ್ಜಲಮ್ ।
ದೇಶಾನ್ನಾಗಾಯುತಪ್ರಾಣೋ ವೇಲಾಕೂಲಾನಮಜ್ಜಯತ್ ॥

ಅನುವಾದ

ದ್ವಿವಿದನಲ್ಲಿ ಹತ್ತು ಸಾವಿರ ಆನೆಗಳ ಬಲವಿತ್ತು. ಕೆಲವೊಮ್ಮೆ ಆ ದುಷ್ಟನು ಸಮುದ್ರದಲ್ಲಿ ನಿಂತು ಕೈಗಳಿಂದ ನೀರನ್ನು ಮೊಗೆದು ಸಮುದ್ರತಟದಲ್ಲಿದ್ದ ಊರುಗಳನ್ನೇ ಮುಳುಗಿಸಿ ಬಿಡುತ್ತಿದ್ದನು. ॥5॥

ಮೂಲಮ್

(ಶ್ಲೋಕ-6)
ಆಶ್ರಮಾನೃಷಿಮುಖ್ಯಾನಾಂ ಕೃತ್ವಾ ಭಗ್ನವನಸ್ಪತೀನ್ ।
ಅದೂಷಯಚ್ಛಕೃನ್ಮೂತ್ರೈರಗ್ನೀನ್ವೈತಾನಿಕಾನ್ಖಲಃ ॥

ಅನುವಾದ

ಆ ದುಷ್ಟನು ದೊಡ್ಡ ದೊಡ್ಡ ಋಷಿ ಮುನಿಗಳ ಆಶ್ರಮದ ಸುಂದರವಾದ ಲತಾ-ವನಸ್ಪತಿಗಳನ್ನು ಕಿತ್ತು ಹಾಕುತ್ತಿದ್ದನು. ಅವರ ಯಜ್ಞಕುಂಡಗಳಲ್ಲಿ ಮೂತ್ರ ಪುರೀಷಗಳನ್ನು ವಿಸರ್ಜಿಸಿ ಅಗ್ನಿಗಳನ್ನು ಕೆಡಿಸುತ್ತಿದ್ದನು. ॥6॥

ಮೂಲಮ್

(ಶ್ಲೋಕ-7)
ಪುರುಷಾನ್ಯೋಷಿತೋ ದೃಪ್ತಃ ಕ್ಷ್ಮಾಭೃದ್ದ್ರೋಣೀಗುಹಾಸು ಸಃ ।
ನಿಕ್ಷಿಪ್ಯ ಚಾಪ್ಯಧಾಚ್ಛೈಲೈಃ ಪೇಶಸ್ಕಾರೀವ ಕೀಟಕಮ್ ॥

ಅನುವಾದ

ಕಣಜದ ಹುಳವು ಬೇರೊಂದು ಕ್ರಿಮಿಯನ್ನು ತಂದು ತನ್ನ ಗೂಡಿನಲ್ಲಿಟ್ಟು ಮುಚ್ಚಿಬಿಡುವಂತೆಯೇ ಆ ಮದೋನ್ಮತ್ತನಾದ ವಾನರನು ಸ್ತ್ರೀಯರನ್ನು, ಪುರುಷರನ್ನು ಎತ್ತಿಕೊಂಡು ಹೋಗಿ ಪರ್ವತಗಳ ಗುಹೆಗಳಲ್ಲಿ ಕೂಡಿಹಾಕಿ ಬಾಗಿಲಿಗೆ ಬಂಡೆಗಳನ್ನು ಮುಚ್ಚಿಬಿಡುತ್ತಿದ್ದನು. ॥7॥

ಮೂಲಮ್

(ಶ್ಲೋಕ-8)
ಏವಂ ದೇಶಾನ್ವಿಪ್ರಕುರ್ವನ್ದೂಷಯಂಶ್ಚ ಕುಲಸಿಯಃ ।
ಶ್ರುತ್ವಾ ಸುಲಲಿತಂ ಗೀತಂ ಗಿರಿಂ ರೈವತಕಂ ಯಯೌ ॥

ಅನುವಾದ

ಹೀಗೆ ಅವನು ದೇಶವಾಸಿಗಳನ್ನು ತಿರಸ್ಕರಿಸುತ್ತಾ ಕುಲೀನ ಸ್ತ್ರೀಯರನ್ನು ಕೆಡಿಸುತ್ತಿದ್ದನು. ಒಂದು ದಿನ ಆ ದುಷ್ಟನು ಕರ್ಣಾನಂದ ಕರವಾದ ಸಂಗೀತವನ್ನು ಕೇಳಿ ರೈವತಕ ಪರ್ವತಕ್ಕೆ ಹೋದನು. ॥8॥

ಮೂಲಮ್

(ಶ್ಲೋಕ-9)
ತತ್ರಾಪಶ್ಯದ್ಯದುಪತಿಂ ರಾಮಂ ಪುಷ್ಕರಮಾಲಿನಮ್ ।
ಸುದರ್ಶನೀಯಸರ್ವಾಂಗಂ ಲಲನಾಯೂಥಮಧ್ಯಗಮ್ ॥

ಅನುವಾದ

ಅಲ್ಲಿ ಯದುವಂಶ ಶಿರೋಮಣಿ ಬಲರಾಮನು ಸುಂದರವಾದ ಯುವತಿಯರೊಂದಿಗೆ ವಿರಾಜಿಸುತ್ತಿರುವುದನ್ನು ಅವನು ನೋಡಿದನು. ಬಲರಾಮನ ಪ್ರತಿಯೊಂದು ಅಂಗಾಂಗಗಳು ಸುಂದರವೂ, ದರ್ಶನೀಯವೂ ಆಗಿದ್ದು ಕೊರಳಲ್ಲಿ ಕಮಲ ಪುಷ್ಪಗಳ ಮಾಲೆಯು ಶೋಭಿಸುತ್ತಿತ್ತು. ॥9॥

ಮೂಲಮ್

(ಶ್ಲೋಕ-10)
ಗಾಯಂತಂ ವಾರುಣೀಂ ಪೀತ್ವಾ ಮದವಿಹ್ವಲಲೋಚನಮ್ ।
ವಿಭ್ರಾಜಮಾನಂ ವಪುಷಾ ಪ್ರಭಿನ್ನಮಿವ ವಾರಣಮ್ ॥

ಅನುವಾದ

ಅವನು ಮಧುಪಾನ ಮಾಡಿ ಮಧುರವಾಗಿ ಸಂಗೀತವನ್ನು ಹಾಡುತ್ತಿದ್ದನು. ಅವನ ಕಣ್ಣುಗಳು ಆನಂದೋನ್ಮಾದದಿಂದ ವಿಹ್ವಲವಾಗಿದ್ದವು. ಅವನ ಶರೀರವು ಮತ್ತಗಜದಂತೆ ಶೋಭಾಯಮಾನವಾಗಿತ್ತು. ॥10॥

ಮೂಲಮ್

(ಶ್ಲೋಕ-11)
ದುಷ್ಟಃ ಶಾಖಾಮೃಗಃ ಶಾಖಾ ಮಾರೂಢಃ ಕಂಪಯನ್ದ್ರುಮಾನ್ ।
ಚಕ್ರೇ ಕಿಲಕಿಲಾಶಬ್ದ ಮಾತ್ಮಾನಂ ಸಂಪ್ರದರ್ಶಯನ್ ॥

ಅನುವಾದ

ಆ ದುಷ್ಟ ವಾನರನು ಬಲರಾಮನಿದ್ದಲ್ಲಿಗೆ ಬಂದು ಮರದ ಮೇಲೆ ಹತ್ತಿ ಕೊಂಬೆಗಳನ್ನು ರಭಸದಿಂದ ಅಲ್ಲಾಡಿಸುತ್ತಿದ್ದನು. ಕೆಲವೊಮ್ಮೆ ಸ್ತ್ರೀಯರ ಮುಂದೆ ನಿಂತು ಕಲ-ಕಲಶಬ್ದ ಮಾಡುತ್ತಾ ತಾನಿರುವುದನ್ನು ತೋರಿಸಿಕೊಳ್ಳುವನು. ॥11॥

ಮೂಲಮ್

(ಶ್ಲೋಕ-12)
ತಸ್ಯ ಧಾರ್ಷ್ಟ್ಯಂ ಕಪೇರ್ವೀಕ್ಷ್ಯ ತರುಣ್ಯೋ ಜಾತಿಚಾಪಲಾಃ ।
ಹಾಸ್ಯಪ್ರಿಯಾ ವಿಜಹಸುರ್ಬಲದೇವಪರಿಗ್ರಹಾಃ ॥

ಅನುವಾದ

ಯುವತಿಯರು ಸ್ವಾಭಾವಿಕವಾಗಿ ಚಂಚಲೆಯರೂ ಹಾಸ್ಯಪ್ರಿಯರೂ ಆಗಿರುತ್ತಾರೆ. ದ್ವಿವಿದನ ಕಪಿಚೇಷ್ಟೆಗಳನ್ನು ಕಂಡು ಬಲರಾಮನ ಪ್ರೇಯಸಿಯರು ಪಕ-ಪಕನೆ ನಗತೊಡಗಿದರು. ॥12॥

ಮೂಲಮ್

(ಶ್ಲೋಕ-13)
ತಾ ಹೇಲಯಾಮಾಸ ಕಪಿರ್ಭ್ರೂಕ್ಷೇಪೈಃ ಸಮ್ಮುಖಾದಿಭಿಃ ।
ದರ್ಶಯನ್ ಸ್ವಗುದಂ ತಾಸಾಂ ರಾಮಸ್ಯ ಚ ನಿರೀಕ್ಷತಃ ॥

ಅನುವಾದ

ಈಗ ಆ ವಾನರನು ಬಲರಾಮನು ನೋಡುತ್ತಿರುವಂತೆಯೇ ಸ್ತ್ರೀಯರನ್ನು ಹಲ್ಲುಕಿರಿಯುತ್ತಾ, ಗರ್ಜಿಸುತ್ತಾ, ಹುಬ್ಬುಗಳನ್ನು ಹಾರಿಸುತ್ತಾ, ಅಣಕಿಸುತ್ತಿದ್ದನು. ಕೆಲವೊಮ್ಮೆ ಅವರಿಗೆ ಗುದವನ್ನು ತೋರಿಸಿ ಅವಹೇಳನ ಮಾಡುತ್ತಿದ್ದನು. ॥13॥

ಮೂಲಮ್

(ಶ್ಲೋಕ-14)
ತಂ ಗ್ರಾವ್ಣಾ ಪ್ರಾಹರತ್ಕ್ರುದ್ಧೋ ಬಲಃ ಪ್ರಹರತಾಂ ವರಃ ।
ಸ ವಂಚಯಿತ್ವಾ ಗ್ರಾವಾಣಂ ಮದಿರಾಕಲಶಂ ಕಪಿಃ ॥
(ಶ್ಲೋಕ-15)
ಗೃಹೀತ್ವಾ ಹೇಲಯಾಮಾಸ ಧೂರ್ತಸ್ತಂ ಕೋಪಯನ್ಹಸನ್ ।
ನಿರ್ಭಿದ್ಯ ಕಲಶಂ ದುಷ್ಟೋ ವಾಸಾಂಸ್ಯಾಸ್ಫಾಲಯದ್ಬಲಮ್ ॥

ಅನುವಾದ

ವೀರ ಶಿರೋಮಣಿ ಬಲರಾಮನು ಅವನ ಇಂತಹ ಚೇಷ್ಟೆಗಳನ್ನು ನೋಡಿ ಕ್ರೋಧಿತನಾಗಿ ಅವನ ಮೇಲೆ ಒಂದು ಕಲ್ಲನ್ನು ಎಸೆದನು. ಆದರೆ ದ್ವಿವಿದನು ಅದನ್ನು ತಪ್ಪಿಸಿಕೊಂಡು, ಬಲರಾಮನ ಬಳಿಯಿದ್ದ ಮಧು ಕಲಶವನ್ನೆತ್ತಿಕೊಂಡು ಹೋಗಿ ಬಲರಾಮನನ್ನು ಅಣಕಿಸಿದನು. ಆ ಧೂರ್ತನು ಮಧುಕಲಶವನ್ನು ಒಡೆದು ಹಾಕಿದನು ಮತ್ತು ಸ್ತ್ರೀಯರ ವಸ್ತ್ರಗಳನ್ನು ಹರಿದು ಹಾಕಿದನು. ಈಗ ಅವನು ಗಹ-ಗಹಿಸಿ ನಗುತ್ತಾ ಬಲರಾಮನನ್ನು ಕ್ರೋಧಿತಗೊಳಿಸತೊಡಗಿದನು. ॥14-15॥

ಮೂಲಮ್

(ಶ್ಲೋಕ-16)
ಕದರ್ಥೀಕೃತ್ಯ ಬಲವಾನ್ವಿಪ್ರಚಕ್ರೇ ಮದೋದ್ಧತಃ ।
ತಂ ತಸ್ಯಾವಿನಯಂ ದೃಷ್ಟ್ವಾ ದೇಶಾಂಶ್ಚ ತದುಪದ್ರುತಾನ್ ॥
(ಶ್ಲೋಕ-17)
ಕ್ರುದ್ಧೋ ಮುಸಲಮಾದತ್ತ ಹಲಂ ಚಾರಿಜಿಘಾಂಸಯಾ ।
ದ್ವಿವಿದೋಪಿ ಮಹಾವೀರ್ಯಃ ಶಾಲಮುದ್ಯಮ್ಯ ಪಾಣಿನಾ ॥
(ಶ್ಲೋಕ-18)
ಅಭ್ಯೇತ್ಯ ತರಸಾ ತೇನ ಬಲಂ ಮೂರ್ಧನ್ಯತಾಡಯತ್ ।
ತಂ ತು ಸಂಕರ್ಷಣೋ ಮೂರ್ಧ್ನಿ ಪತಂತಮಚಲೋ ಯಥಾ ॥
(ಶ್ಲೋಕ-19)
ಪ್ರತಿಜಗ್ರಾಹ ಬಲವಾನ್ಸುನಂದೇನಾಹನಚ್ಚ ತಮ್ ।
ಮುಸಲಾಹತಮಸ್ತಿಷ್ಕೋ ವಿರೇಜೇ ರಕ್ತಧಾರಯಾ ॥
(ಶ್ಲೋಕ-20)
ಗಿರಿರ್ಯಥಾ ಗೈರಿಕಯಾ ಪ್ರಹಾರಂ ನಾನುಚಿಂತಯನ್ ।
ಪುನರನ್ಯಂ ಸಮುತ್ಕ್ಷಿಪ್ಯ ಕೃತ್ವಾ ನಿಷ್ಪತ್ರಮೋಜಸಾ ॥
(ಶ್ಲೋಕ-21)
ತೇನಾಹನತ್ಸುಸಂಕ್ರುದ್ಧಸ್ತಂ ಬಲಃ ಶತಧಾಚ್ಛಿನತ್ ।
ತತೋನ್ಯೇನ ರುಷಾ ಜಘ್ನೇ ತಂ ಚಾಪಿ ಶತಧಾಚ್ಛಿನತ್ ॥

ಅನುವಾದ

ಪರೀಕ್ಷಿತನೇ! ಈ ಪ್ರಕಾರವಾಗಿ ಬಲಿಷ್ಠನೂ, ಮದೋನ್ಮತ್ತನೂ ಆದ ದ್ವಿವಿದನು ಬಲರಾಮನನ್ನು ಅಣಕಿಸುತ್ತಾ, ತಿರಸ್ಕರಿಸತೊಡಗಿದಾಗ, ಬಲರಾಮನು ಅವನ ಉದ್ಧಟತನವನ್ನು ನೋಡಿ, ಅವನಿಂದ ಪೀಡಿಸಲ್ಪಟ್ಟ ದೇಶಗಳ ದುರ್ದಶೆಯ ಕುರಿತು ವಿಚಾರ ಮಾಡಿ ಆ ಶತ್ರುವನ್ನು ಕೊಂದುಹಾಕುವುದೆಂದು ಕ್ರೋಧಗೊಂಡು ಹಲಾಯುಧವನ್ನು ಎತ್ತಿದನು. ಮಹಾವೀರ್ಯನಾದ ದ್ವಿವಿದನು ಸಾಲವೃಕ್ಷವೊಂದನ್ನು ಕಿತ್ತುಕೊಂಡು ರಭಸದಿಂದ ಬಲರಾಮನ ತಲೆಯಮೇಲೆ ಪ್ರಹರಿಸಿದನು. ಪರ್ವತದಂತೆ ಅಚಲನಾಗಿ ನಿಂತುಕೊಂಡಿದ್ದ ಬಲರಾಮನು ತನ್ನ ತಲೆಯ ಮೇಲೆ ಬೀಳಲಿದ್ದ ಮರವನ್ನು ಹಿಡಿದನು. ಬಳಿಕ ಸುನಂದವೆಂಬ ಮುಸಲಾಯುಧದಿಂದ ದ್ವಿವಿದನನ್ನು ಪ್ರಹರಿಸಿದನು. ಮುಸಲಾಯುಧದ ಏಟಿನಿಂದ ದ್ವಿವಿದನ ತಲೆಯು ಒಡೆದು ರಕ್ತದ ಧಾರೆಯೇ ಹರಿಯಿತು. ಆಗ ಅವನು ಗೈರಿಕಾದಿ ಧಾತುಗಳಿಂದ ಕೂಡಿದ ಪರ್ವತದಂತೆ ಕಾಣುತ್ತಿದ್ದನು. ತಲೆಯೊಡೆದು ರಕ್ತವು ಹರಿಯುತ್ತಿದ್ದರೂ ಅದನ್ನು ಲೆಕ್ಕಿಸದೆ ಕೋಪಗೊಂಡು ಇನ್ನೊಂದು ಮರವನ್ನು ಕಿತ್ತು ತನ್ನ ಭುಜಬಲದಿಂದ ಅದನ್ನು ಪತ್ರರಹಿತವನ್ನಾಗಿ ಮಾಡಿ ಅದರಿಂದ ಬಲರಾಮನನ್ನು ಜೋರಾಗಿ ಪ್ರಹರಿಸಿದನು. ಬಲರಾಮನು ಆ ವೃಕ್ಷವನ್ನು ಮುಸಲಾಯುಧದಿಂದ ನೂರು ಚೂರುಗಳನ್ನಾಗಿ ಮಾಡಿದನು. ಮತ್ತೆ ದ್ವಿವಿದನು ಮತ್ತೊಂದು ವೃಕ್ಷವನ್ನೆತ್ತಿಕೊಂಡು ಸಿಟ್ಟಿನಿಂದ ಪ್ರಯೋಗಿಸಿದನು. ಅದನ್ನು ಬಲರಾಮನು ಚೂರು-ಚೂರು ಮಾಡಿದನು. ॥16-21॥

ಮೂಲಮ್

(ಶ್ಲೋಕ-22)
ಏವಂ ಯುಧ್ಯನ್ಭಗವತಾ ಭಗ್ನೇ ಭಗ್ನೇ ಪುನಃ ಪುನಃ ।
ಆಕೃಷ್ಯ ಸರ್ವತೋ ವೃಕ್ಷಾನ್ನಿರ್ವೃಕ್ಷಮಕರೋದ್ವನಮ್ ॥

ಅನುವಾದ

ಹೀಗೆ ಯುದ್ಧಮಾಡುತ್ತಿದ್ದಾಗ ಒಂದು ಮರ ಪುಡಿ-ಪುಡಿಯಾಗಿ ಹೋದರೆ ಮತ್ತೊಂದು, ಇನ್ನೊಂದು ಹೀಗೆ ಮರಗಳ ಮೇಲೆ ಮರಗಳನ್ನು ಕಿತ್ತು ಪ್ರಹರಿಸುವನು. ಬಲರಾಮನು ಪುಡಿ ಮಾಡುವನು ಆಗ ಆ ಪರ್ವತವು ವೃಕ್ಷರಹಿತವಾಯಿತು. ॥22॥

ಮೂಲಮ್

(ಶ್ಲೋಕ-23)
ತತೋಮುಂಚಚ್ಛಿಲಾವರ್ಷಂ ಬಲಸ್ಯೋಪರ್ಯಮರ್ಷಿತಃ ।
ತತ್ಸರ್ವಂ ಚೂರ್ಣಯಾಮಾಸ ಲೀಲಯಾ ಮುಸಲಾಯುಧಃ ॥

ಅನುವಾದ

ಮರಗಳೇ ಸಿಗದಿದ್ದಾಗ ದ್ವಿವಿದನ ಕ್ರೋಧವು ಇನ್ನೂ ಹೆಚ್ಚಿತು. ಆಗ ಕೆರಳಿ ಆತನು ಬಲರಾಮನ ಮೇಲೆ ದೊಡ್ಡ-ದೊಡ್ಡ ಬಂಡೆಗಳ ಮಳೆಯನ್ನೇ ಸುರಿಸಿದನು. ಬಲಭದ್ರನು ಲೀಲಾಜಾಲವಾಗಿ ತನ್ನ ಮುಸಲಾಯುಧದಿಂದ ಅವೆಲ್ಲವನ್ನೂ ನುಚ್ಚು-ನೂರಾಗಿಸಿ ಬಿಟ್ಟನು. ॥23॥

ಮೂಲಮ್

(ಶ್ಲೋಕ-24)
ಸ ಬಾಹೂ ತಾಲಸಂಕಾಶೌ ಮುಷ್ಟೀಕೃತ್ಯ ಕಪೀಶ್ವರಃ ।
ಆಸಾದ್ಯ ರೋಹಿಣೀಪುತ್ರಂ ತಾಭ್ಯಾಂ ವಕ್ಷಸ್ಯರೂರುಜತ್ ॥

ಅನುವಾದ

ಬಂಡೆಗಳೂ ಮುಗಿದು ಹೋದಾಗ ಕಪೀಶ್ವರನು ತಾಳೆಯ ಮರಕ್ಕಿಂತ ಉದ್ದವಾಗಿದ್ದ ತನ್ನ ಕೈಗಳ ಮುಷ್ಟಿ ಬಿಗಿದುಕೊಂಡು ಬಲರಾಮನ ಬಳಿಗೆ ಹೋಗಿ ಅವನ ಎದೆಗೆ ಪ್ರಹರಿಸಿದನು. ॥24॥

ಮೂಲಮ್

(ಶ್ಲೋಕ-25)
ಯಾದವೇಂದ್ರೋಪಿ ತಂ ದೋರ್ಭ್ಯಾಂ ತ್ಯಕ್ತ್ವಾ ಮುಸಲಲಾಂಗಲೇ ।
ಜತ್ರಾವಭ್ಯರ್ದಯತ್ಕ್ರುದ್ಧಃ ಸೋಪತದ್ರುಧಿರಂ ವಮನ್ ॥

ಅನುವಾದ

ಇದರಿಂದ ಪರಮ ಕ್ರುದ್ಧನಾದ ಯದುವಂಶ ಶಿರೋಮಣಿ ಬಲರಾಮನು ಮುಸಲಾಯುಧ ಮತ್ತು ಹಲಾಯುಧಗಳಿಂದ ದ್ವಿವಿದನ ಹೆಗಲಿಗೆ ಬಲವಾಗಿ ಪ್ರಹರಿಸಿದನು. ಒಡನೆಯೇ ಕಪೀಶ್ವರನು ರಕ್ತವನ್ನು ಕಾರುತ್ತಾ ಕೆಳಗೆಬಿದ್ದನು. ॥25॥

ಮೂಲಮ್

(ಶ್ಲೋಕ-26)
ಚಕಂಪೇ ತೇನ ಪತತಾ ಸಟಂಕಃ ಸವನಸ್ಪತಿಃ ।
ಪರ್ವತಃ ಕುರುಶಾರ್ದೂಲ ವಾಯುನಾ ನೌರಿವಾಂಭಸಿ ॥

ಅನುವಾದ

ಪರೀಕ್ಷಿತನೇ! ಬಿರುಗಾಳಿ ಬಂದಾಗ ಸಮುದ್ರದಲ್ಲಿರುವ ನಾವೆಯು ಅಳ್ಳಾಡುವಂತೆ ಅವನು ನೆಲಕ್ಕೆ ಬೀಳುತ್ತಲೇ ವೃಕ್ಷಗಳ ಸಹಿತವಾಗಿ ರೈವತಕ ಪರ್ವತವು ನಡುಗಿಹೋಯಿತು. ॥26॥

ಮೂಲಮ್

(ಶ್ಲೋಕ-27)
ಜಯಶಬ್ದೋ ನಮಃಶಬ್ದಃ ಸಾಧು ಸಾಧ್ವಿತಿ ಚಾಂಬರೇ ।
ಸುರಸಿದ್ಧಮುನೀಂದ್ರಾಣಾಮಾಸೀತ್ಕುಸುಮವರ್ಷಿಣಾಮ್ ॥

ಅನುವಾದ

ಆಕಾಶದಲ್ಲಿ ದೇವತೆಗಳು ಬಲರಾಮನಿಗೆ ಜಯವಾಗಲೀ, ಜಯವಾಗಲೀ ಎಂದು ಜಯಘೋಷ ಮಾಡಿದರು. ಸಿದ್ಧರು ನಮೋ ನಮಃ ಎಂದು ನಮಸ್ಕರಿಸಿದರು. ಋಷಿ-ಮುನಿಗಳು ಭಲೇ! ಬಲರಾಮ! ಭಲೇ!! ಎಂದು ಪ್ರಶಂಸಿಸುತ್ತಾ ಅವನ ಮೇಲೆ ಹೂಮಳೆಗರೆದರು. ॥27॥

ಮೂಲಮ್

(ಶ್ಲೋಕ-28)
ಏವಂ ನಿಹತ್ಯ ದ್ವಿವಿದಂ ಜಗದ್ವ್ಯತಿಕರಾವಹಮ್ ।
ಸಂಸ್ತೂಯಮಾನೋ ಭಗವಾನ್ ಜನೈಃ ಸ್ವಪುರಮಾವಿಶತ್ ॥

ಅನುವಾದ

ಪರೀಕ್ಷಿತನೇ! ಜಗತ್ತಿನಲ್ಲಿ ಭಾರೀ ಉಪದ್ರವನ್ನುಂಟು ಮಾಡಿದ ದ್ವಿವಿದನನ್ನು ಭಗವಾನ್ ಬಲರಾಮನು ಸಂಹರಿಸಿ ದ್ವಾರಕೆಗೆ ಹಿಂದಿರುಗಿದನು. ಆ ಸಮಯದಲ್ಲಿ ಪುರಜನರು-ಪರಿಜನರು ಅವನನ್ನು ವಿಧ-ವಿಧವಾಗಿ ಕೊಂಡಾಡಿದರು. ॥28॥

ಅನುವಾದ (ಸಮಾಪ್ತಿಃ)

ಅರವತ್ತೇಳನೆಯ ಅಧ್ಯಾಯವು ಮುಗಿಯಿತು. ॥67॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ ದ್ವಿವಿದವಧೋನಾಮ ಸಪ್ತಷಷ್ಟಿತಮೋಽಧ್ಯಾಯಃ ॥67॥