[ಅರವತ್ತಾರನೇಯ ಅಧ್ಯಾಯ]
ಭಾಗಸೂಚನಾ
ಪೌಂಡ್ರಕ ಮತ್ತು ಕಾಶಿರಾಜನ ಉದ್ಧಾರ
ಮೂಲಮ್
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ನಂದವ್ರಜಂ ಗತೇ ರಾಮೇ ಕರೂಷಾಧಿಪತಿರ್ನೃಪ ।
ವಾಸುದೇವೋಹಮಿತ್ಯಜ್ಞೋ ದೂತಂ ಕೃಷ್ಣಾಯ ಪ್ರಾಹಿಣೋತ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಬಲರಾಮನು ನಂದಗೋಕುಲಕ್ಕೆ ಹೋಗಿದ್ದ ಸಮಯದಲ್ಲಿ ಕರೂಷ ದೇಶದ ಮೂರ್ಖನಾದ ಪೌಂಡ್ರಕನೆಂಬ ರಾಜನು ತಾನೇ ವಾಸುದೇವನೆಂದು ಹೇಳಿಕೊಂಡು ಶ್ರೀಕೃಷ್ಣನ ಬಳಿಗೆ ದೂತನೊಬ್ಬನನ್ನು ಕಳುಹಿಸಿಕೊಟ್ಟನು. ॥1॥
ಮೂಲಮ್
(ಶ್ಲೋಕ-2)
ತ್ವಂ ವಾಸುದೇವೋ ಭಗವಾನವತೀರ್ಣೋ ಜಗತ್ಪತಿಃ ।
ಇತಿ ಪ್ರಸ್ತೋಭಿತೋ ಬಾಲೈರ್ಮೇನ ಆತ್ಮಾನಮಚ್ಯುತಮ್ ॥
ಅನುವಾದ
ಆ ದೇಶದ ಮೂರ್ಖಜನರು ರಾಜನನ್ನು ಸಂತೋಷಗೊಳಿಸಲು ಅವನನ್ನು ಕಂಡೊಡನೆ - ‘ನೀನೇ ಭಗವಂತನಾದ ವಾಸುದೇವನಾಗಿರುವೆ. ಜಗತ್ತಿನ ರಕ್ಷಣೆಗಾಗಿ ನೀನಿಲ್ಲಿ ಅವತರಿಸಿರುವೆ’ ಎಂದು ಹೊಗಳುತ್ತಿದ್ದರು. ಇದರಿಂದ ಆ ಮೂರ್ಖರಾಜನು ತಾನೇ ಭಗವಾನ್ ಅಚ್ಯುತನೆಂದು ಭಾವಿಸಿಕೊಂಡು ಬಿಟ್ಟನು. ॥2॥
ಮೂಲಮ್
(ಶ್ಲೋಕ-3)
ದೂತಂ ಚ ಪ್ರಾಹಿಣೋನ್ಮಂದಃ ಕೃಷ್ಣಾಯಾವ್ಯಕ್ತವರ್ತ್ಮನೇ ।
ದ್ವಾರಕಾಯಾಂ ಯಥಾ ಬಾಲೋ ನೃಪೋ ಬಾಲಕೃತೋಬುಧಃ ॥
ಅನುವಾದ
ಹುಡುಗರು ಪರಸ್ಪರ ಆಟವಾಡುವಾಗ ಒಬ್ಬನನ್ನು ರಾಜನನ್ನಾಗಿಸಿಕೊಂಡು ತಾತ್ಕಾಲಿಕವಾಗಿ ಅವನನ್ನು ರಾಜನೆಂದೇ ಭಾವಿಸಿ ವ್ಯವಹರಿಸುವಂತೆ - ಪೌಂಡ್ರಕನ ಪ್ರಜೆಗಳೂ ಆಟಕ್ಕಾಗಿ ತಮ್ಮ ರಾಜನನ್ನು ವಾಸುದೇವನೆಂದೇ ಕರೆಯುತ್ತಿದ್ದರು. ಇದನ್ನು ಅರ್ಥವಿಸದೆ ಆ ಮಂದಮತಿ ಅಜ್ಞಾನಿಯಾದ ಪೌಂಡ್ರಕನು ಅಚಿಂತ್ಯಗತಿಯಾದ ಭಗವಾನ್ ಶ್ರೀಕೃಷ್ಣನ ಲೀಲಾ ರಹಸ್ಯಗಳನ್ನು ತಿಳಿಯದೆ, ಅವನ ಬಳಿಗೆ ದೂತನನ್ನು ಕಳಿಸಿಕೊಟ್ಟನು. ॥3॥
ಮೂಲಮ್
(ಶ್ಲೋಕ-4)
ದೂತಸ್ತು ದ್ವಾರಕಾಮೇತ್ಯ ಸಭಾಯಾಮಾಸ್ಥಿತಂ ಪ್ರಭುಮ್ ।
ಕೃಷ್ಣಂ ಕಮಲಪತ್ರಾಕ್ಷಂ ರಾಜಸಂದೇಶಮಬ್ರವೀತ್ ॥
ಅನುವಾದ
ಪೌಂಡ್ರಕನ ದೂತನು ದ್ವಾರಕೆಗೆ ಬಂದು, ರಾಜಸಭೆಯಲ್ಲಿ ಕುಳಿತಿರುವ ಕಮಲಾಕ್ಷನಾದ ಭಗವಾನ್ ಶ್ರೀಕೃಷ್ಣನಿಗೆ ತನ್ನ ರಾಜನ ಸಂದೇಶವನ್ನು ತಿಳಿಸಿದನು. ॥4॥
ಮೂಲಮ್
(ಶ್ಲೋಕ-5)
ವಾಸುದೇವೋವತೀರ್ಣೋಹಮೇಕ ಏವ ನ ಚಾಪರಃ ।
ಭೂತಾನಾಮನುಕಂಪಾರ್ಥಂ ತ್ವಂ ತು ಮಿಥ್ಯಾಭಿಧಾಂ ತ್ಯಜ ॥
ಅನುವಾದ
ವಾಸುದೇವನೆಂಬುವನು ನಾನೊಬ್ಬನೇ ಆಗಿದ್ದೇನೆ. ಬೇರೆಯಾವನೂ ಇಲ್ಲ. ಪ್ರಾಣಿಗಳ ಮೇಲೆ ಕೃಪೆದೋರಲು ನಾನೇ ಅವತರಿಸಿರುವೆನು. ನೀನು ಸುಳ್ಳು-ಸುಳ್ಳನೇ ನಿನ್ನ ಹೆಸರನ್ನು ವಾಸುದೇವನೆಂದು ಇಟ್ಟು ಕೊಂಡಿರುವೆ. ಈಗ ಅದನ್ನು ಬಿಟ್ಟುಬಿಡು. ॥5॥
ಮೂಲಮ್
(ಶ್ಲೋಕ-6)
ಯಾನಿ ತ್ವಮಸ್ಮಚ್ಚಿಹ್ನಾನಿ ವೌಢ್ಯಾದ್ಬಿಭರ್ಷಿ ಸಾತ್ವತ ।
ತ್ಯಕ್ತ್ವೆ ಹಿ ಮಾಂ ತ್ವಂ ಶರಣಂ ನೋ ಚೇದ್ದೇಹಿ ಮಮಾಹವಮ್ ॥
ಅನುವಾದ
ಯದುವಂಶೀಯನೇ! ನೀನು ಮೂರ್ಖತೆಯಿಂದ ಶಂಖಚಕ್ರ ಮೊದಲಾದ ನನ್ನ ಚಿಹ್ನೆಗಳನ್ನು ಧರಿಸಿಕೊಂಡಿರುವೆ. ಅವುಗಳನ್ನು ಬಿಟ್ಟು ನನಗೆ ಶರಣುಬಾ. ನನ್ನ ಮಾತು ನಿನಗೆ ಒಪ್ಪಿಗೆಯಾಗಲಿಲ್ಲವಾದರೆ ನನ್ನೊಂದಿಗೆ ಯುದ್ಧಮಾಡು. ॥6॥
ಮೂಲಮ್
(ಶ್ಲೋಕ-7)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಕತ್ಥನಂ ತದುಪಾಕರ್ಣ್ಯ ಪೌಂಡ್ರಕಸ್ಯಾಲ್ಪಮೇಧಸಃ ।
ಉಗ್ರಸೇನಾದಯಃ ಸಭ್ಯಾ ಉಚ್ಚಕೈರ್ಜಹಸುಸ್ತದಾ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಮಂದಮತಿಯಾದ ಪೌಂಡ್ರಕನ ಈ ಮಾತನ್ನು ಕೇಳಿ ಉಗ್ರಸೇನರೇ ಮೊದಲಾದ ಸಭಾಸದರು ಗಹ-ಗಹಿಸಿ ನಗತೊಡಗಿದರು. ॥7॥
ಮೂಲಮ್
(ಶ್ಲೋಕ-8)
ಉವಾಚ ದೂತಂ ಭಗವಾನ್ ಪರಿಹಾಸಕಥಾಮನು ।
ಉತ್ಸ್ರಕ್ಷ್ಯೇ ಮೂಢ ಚಿಹ್ನಾನಿ ಯೈಸ್ತ್ವಮೇವಂ ವಿಕತ್ಥಸೇ ॥
(ಶ್ಲೋಕ-9)
ಮುಖಂ ತದಪಿಧಾಯಾಜ್ಞ ಕಂಕಗೃಧ್ರವಟೈರ್ವೃತಃ ।
ಶಯಿಷ್ಯಸೇ ಹತಸ್ತತ್ರ ಭವಿತಾ ಶರಣಂ ಶುನಾಮ್ ॥
ಅನುವಾದ
ಅವರೆಲ್ಲರ ನಗುವು ನಿಂತ ಮೇಲೆ ಭಗವಾನ್ ಶ್ರೀಕೃಷ್ಣನು ದೂತನಲ್ಲಿ ಹೇಳಿದನು - ನೀನು ಹೋಗಿ ನಿಮ್ಮ ರಾಜನಲ್ಲಿ ಹೀಗೆ ಹೇಳು - ‘ಎಲೈ ಮೂರ್ಖನೇ! ನಾನು ನನ್ನ ಚಿಹ್ನೆಗಳನ್ನು ನಿನ್ನ ಮೇಲೆ ಬಿಡುತ್ತೇನೆ ಮತ್ತು ನೀನು ಯಾರ ಪ್ರೇರಣೆಯಿಂದ ಈ ಪ್ರಕಾರಗಳಹುತ್ತಿರುವೆಯೋ ಅವರ ಮೇಲೆಯೂ ಪ್ರಯೋಗಿಸುವೆನು. ಎಲೈ ಮೂಢನೇ! ಆ ಸಮಯದಲ್ಲಿ ನೀನು ನನ್ನಿಂದ ಹತನಾಗಿ ಮುಖವನ್ನು ಮುಚ್ಚಿಕೊಂಡು ಹದ್ದು, ರಣಹದ್ದು ಮುಂತಾದ ಮಾಂಸವನ್ನು ತಿನ್ನುವ ಪಕ್ಷಿಗಳಿಂದ ಸುತ್ತುವರಿದು ಮಲಗಿಬಿಡುವೆ. ನೀನು ನನಗೆ ರಕ್ಷಕನಾಗುವುದಿರಲಿ, ನಾಯಿಗಳಿಗಂತೂ ರಕ್ಷಕನಾಗುವುದು ನಿಜ. ನಿನ್ನ ಮಾಂಸವನ್ನು ನಾಯಿಗಳು ತಿಂದು ತೇಗುವವು’. ॥8-9॥
ಮೂಲಮ್
(ಶ್ಲೋಕ-10)
ಇತಿ ದೂತಸ್ತದಾಕ್ಷೇಪಂ ಸ್ವಾಮಿನೇ ಸರ್ವಮಾಹರತ್ ।
ಕೃಷ್ಣೋಪಿ ರಥಮಾಸ್ಥಾಯ ಕಾಶೀಮುಪಜಗಾಮ ಹ ॥
ಅನುವಾದ
ಪರೀಕ್ಷಿತನೇ! ಭಗವಂತನ ಇಂತಹ ತಿರಸ್ಕಾರ ಪೂರ್ಣ ಸಂದೇಶವನ್ನು ಹೊತ್ತುಕೊಂಡು ಪೌಂಡ್ರಕನ ದೂತನು ತನ್ನ ಒಡೆಯನ ಬಳಿಗೆ ಹೋಗಿ ನಿವೇದಿಸಿಕೊಂಡನು. ಇತ್ತ ಭಗವಾನ್ ಶ್ರೀಕೃಷ್ಣನೂ ಕೂಡ ರಥದಲ್ಲಿ ಕುಳಿತು ಕಾಶಿ ಪಟ್ಟಣಕ್ಕೆ ಪ್ರಯಾಣ ಮಾಡಿದನು. ಏಕೆಂದರೆ, ಆ ಸಮಯದಲ್ಲಿ ಕರೂಷದ ರಾಜನು ತನ್ನ ಮಿತ್ರನಾದ ಕಾಶಿರಾಜನ ಜೊತೆಯಲ್ಲಿದ್ದನು. ॥10॥
ಮೂಲಮ್
(ಶ್ಲೋಕ-11)
ಪೌಂಡ್ರಕೋಪಿ ತದುದ್ಯೋಗಮುಪಲಭ್ಯ ಮಹಾರಥಃ ।
ಅಕ್ಷೌಹಿಣೀಭ್ಯಾಂ ಸಂಯುಕ್ತೋ ನಿಶ್ಚಕ್ರಾಮ ಪುರಾದ್ದ್ರುತಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನ ಆಕ್ರಮಣದ ಸಮಾಚಾರ ತಿಳಿದ ಮಹಾರಥಿ ಪೌಂಡ್ರಕನೂ ಕೂಡ ಎರಡು ಅಕ್ಷೌಹಿಣಿ ಸೈನ್ಯದೊಂದಿಗೆ ಶೀಘ್ರವಾಗಿ ನಗರದಿಂದ ಹೊರಬಿದ್ದನು. ॥11॥
ಮೂಲಮ್
(ಶ್ಲೋಕ-12)
ತಸ್ಯ ಕಾಶಿಪತಿರ್ಮಿತ್ರಂ ಪಾರ್ಷ್ಣಿಗ್ರಾಹೋನ್ವಯಾನ್ನೃಪ ।
ಅಕ್ಷೌಹಿಣೀಭಿಸ್ತಿಸೃಭಿರಪಶ್ಯತ್ ಪೌಂಡ್ರಕಂ ಹರಿಃ ॥
ಅನುವಾದ
ಕಾಶಿರಾಜನು ಪೌಂಡ್ರಕನ ಮಿತ್ರನಾಗಿದ್ದನು. ಆದ್ದರಿಂದ ಅವನೂ ಕೂಡ ಮಿತ್ರನಿಗೆ ಸಹಾಯಮಾಡಲು ಮೂರು ಅಕ್ಷೌಹಿಣಿ ಸೇನೆಯೊಡನೆ ಪೌಂಡ್ರಕನನ್ನು ಹಿಂಬಾಲಿಸುತ್ತಾ ಬಂದನು. ಪರೀಕ್ಷಿತನೇ! ಆಗ ಶ್ರೀಕೃಷ್ಣನು ಪೌಂಡ್ರಕನನ್ನು ನೋಡಿದನು. ॥12॥
ಮೂಲಮ್
(ಶ್ಲೋಕ-13)
ಶಂಖಾರ್ಯಸಿಗದಾಶಾರ್ಙ್ಗಶ್ರಿವತ್ಸಾದ್ಯುಪಲಕ್ಷಿತಮ್ ।
ಬಿಭ್ರಾಣಂ ಕೌಸ್ತುಭಮಣಿಂ ವನಮಾಲಾವಿಭೂಷಿತಮ್ ॥
ಅನುವಾದ
ಪೌಂಡ್ರಕನೂ ಶಂಖ, ಚಕ್ರ, ಖಡ್ಗ, ಗದೆ, ಶಾರ್ಙ್ಗಧನುಸ್ಸನ್ನು, ಶ್ರೀವತ್ಸ ಚಿಹ್ನೆ ಮೊದಲಾದುವನ್ನು ಧರಿಸಿದ್ದನು. ಅವನು ವಕ್ಷಃಸ್ಥಳದಲ್ಲಿ ಕೃತ್ರಿಮವಾದ ಕೌಸ್ತುಭ ಮಣಿಯಿಂದಲೂ ವನಮಾಲೆಯಿಂದಲೂ ವಿಭೂಷಿತನಾಗಿದ್ದನು. ॥13॥
ಮೂಲಮ್
(ಶ್ಲೋಕ-14)
ಕೌಶೇಯವಾಸಸೀ ಪೀತೇ ವಸಾನಂ ಗರುಡಧ್ವಜಮ್ ।
ಅಮೂಲ್ಯವೌಲ್ಯಾಭರಣಂ ಸ್ಫುರನ್ಮಕರಕುಂಡಲಮ್ ॥
ಅನುವಾದ
ಅವನು ಪೀತಾಂಬರವನ್ನು ಉಟ್ಟಿದ್ದನು. ರಥದ ಧ್ವಜದಲ್ಲಿಯೂ ಗರುಡನ ಚಿಹ್ನೆಯೇ ಇತ್ತು. ಅವನ ತಲೆಯ ಮೇಲೆ ಬಹುಮೂಲ್ಯ ಕಿರೀಟವೂ, ಕಿವಿಗಳಲ್ಲಿ ಮಕರಾಕೃತಿಯ ಕುಂಡಲಗಳೂ ಹೊಳೆಯುತ್ತಿತ್ತು. ॥14॥
ಮೂಲಮ್
(ಶ್ಲೋಕ-15)
ದೃಷ್ಟ್ವಾ ತಮಾತ್ಮನಸ್ತುಲ್ಯವೇಷಂ ಕೃತ್ರಿಮಮಾಸ್ಥಿತಮ್ ।
ಯಥಾ ನಟಂ ರಂಗಗತಂ ವಿಜಹಾಸ ಭೃಶಂ ಹರಿಃ ॥
ಅನುವಾದ
ಅವನ ಇದೆಲ್ಲ ವೇಷವೂ ಕೃತ್ರಿಮವಾದುದೇ ಆಗಿತ್ತು. ಯಾರೋ ನಟನು ರಂಗಸ್ಥಳದಲ್ಲಿ ಅಭಿನಯಿಸಲು ಸಿಂಗರಿಸಿಕೊಂಡು ಬಂದಂತ್ತಿತ್ತು. ಅವನ ವೇಷ-ಭೂಷಣಗಳನ್ನು ನೋಡಿ ಶ್ರೀಕೃಷ್ಣನು ಗಹ-ಗಹಿಸಿ ನಗತೊಡಗಿದನು. ॥15॥
ಮೂಲಮ್
(ಶ್ಲೋಕ-16)
ಶೂಲೈರ್ಗದಾಭಿಃ ಪರಿಘೈಃ ಶಕ್ತ್ಯುೃಷ್ಟಿಪ್ರಾಸತೋಮರೈಃ ।
ಅಸಿಭಿಃ ಪಟ್ಟಿಶೈರ್ಬಾಣೈಃ ಪ್ರಾಹರನ್ನರಯೋ ಹರಿಮ್ ॥
ಅನುವಾದ
ಆಗ ಶತ್ರುಗಳು ಭಗವಾನ್ ಶ್ರೀಕೃಷ್ಣನ ಮೇಲೆ ತ್ರಿಶೂಲ, ಗದೆ, ಮುದ್ಗರ, ಶಕ್ತಿ, ಋಷ್ಟಿ, ಪ್ರಾಸ, ತೋಮರ, ಖಡ್ಗ, ಪಟ್ಟಿಶ, ಬಾಣ ಮುಂತಾದ ಅಸ್ತ್ರ-ಶಸ್ತ್ರಗಳಿಂದ ಪ್ರಹಾರ ಮಾಡಿದರು. ॥16॥
ಮೂಲಮ್
(ಶ್ಲೋಕ-17)
ಕೃಷ್ಣಸ್ತು ತತ್ಪೌಂಡ್ರಕಕಾಶಿರಾಜಯೋ-
ರ್ಬಲಂ ಗಜಸ್ಯಂದನವಾಜಿಪತ್ತಿಮತ್ ।
ಗದಾಸಿಚಕ್ರೇಷುಭಿರಾರ್ದಯದ್ ಭೃಶಂ
ಯಥಾ ಯುಗಾಂತೇ ಹುತಭುಕ್ ಪೃಥಕ್ ಪ್ರಜಾಃ ॥
ಅನುವಾದ
ಪ್ರಳಯಕಾಲದಲ್ಲಿ ಅಗ್ನಿಯು ಎಲ್ಲ ರೀತಿಯ ಪ್ರಾಣಿಗಳನ್ನು ಸುಟ್ಟು ಹಾಕುವಂತೆಯೇ ಭಗವಾನ್ ಶ್ರೀಕೃಷ್ಣನೂ ಕೂಡ ಗದೆ, ಖಡ್ಗ, ಚಕ್ರ ಮತ್ತು ಬಾಣಗಳೇ ಮೊದಲಾದ ಶಸ್ತ್ರಾಸ್ತ್ರಗಳಿಂದ ಪೌಂಡ್ರಕ ಹಾಗೂ ಕಾಶೀ ರಾಜನ ಆನೆ, ಕುದುರೆ, ರಥ, ಪದಾತಿಗಳಿಂದ ಕೂಡಿದ ಚತುರಂಗ ಸೈನ್ಯವನ್ನು ಕ್ಷಣಮಾತ್ರದಲ್ಲಿ ಧ್ವಂಸಮಾಡಿಬಿಟ್ಟನು. ॥17॥
ಮೂಲಮ್
(ಶ್ಲೋಕ-18)
ಆಯೋಧನಂ ತದ್ರಥವಾಜಿಕುಂಜರ-
ದ್ವಿಪತ್ಖರೋಷ್ಟ್ರೈರರಿಣಾವಖಂಡಿತೈಃ ।
ಬಭೌ ಚಿತಂ ಮೋದವಹಂ ಮನಸ್ವಿನಾ-
ಮಾಕ್ರೀಡನಂ ಭೂತಪತೇರಿವೋಲ್ಬಣಮ್ ॥
ಅನುವಾದ
ಭಗವಂತನ ಚಕ್ರದಿಂದ ತುಂಡು-ತುಂಡಾದ ರಥ, ಆನೆ, ಕುದುರೆ, ಮನುಷ್ಯರು, ಕತ್ತೆ, ಒಂಟೇ ಮುಂತಾದವುಗಳಿಂದ ರಣರಂಗವು ತುಂಬಿಹೋಯಿತು. ಅದು ಭೂತನಾಥನಾದ ಶಿವನ ಭಯಂಕರವಾದ ಆಡುಂಬೊಲದಂತೆ ಕಂಡುಬರುತ್ತಿತ್ತು. ಅದನ್ನು ನೋಡಿದ ಶೂರರ ಉತ್ಸಾಹವು ಇನ್ನೂ ಹೆಚ್ಚುತ್ತಿತ್ತು. ॥18॥
ಮೂಲಮ್
(ಶ್ಲೋಕ-19)
ಅಥಾಹ ಪೌಂಡ್ರಕಮ್ ಶೌರಿರ್ಭೋ ಭೋಃ ಪೌಂಡ್ರಕ ಯದ್ಭವಾನ್ ।
ದೂತವಾಕ್ಯೇನ ಮಾಮಾಹ ತಾನ್ಯಸಾಣ್ಯುತ್ಸೃಜಾಮಿ ತೇ ॥
ಅನುವಾದ
ಬಳಿಕ ಭಗವಾನ್ ಶ್ರೀಕೃಷ್ಣನು ಪೌಂಡ್ರಕನಲ್ಲಿ ಹೇಳಿದನು ಎಲವೋ ಪೌಂಡ್ರಕನೇ! ನನ್ನ ಅಸ್ತ್ರ-ಶಸ್ತ್ರಾದಿಗಳನ್ನು ಬಿಟ್ಟು ಬಿಡಲು ನೀನು ದೂತನ ಮೂಲಕ ಹೇಳಿಕಳಿಸಿದ್ದೆ. ಸರಿ ಈಗ ನಾನು ಅವನ್ನು ನಿನ್ನ ಮೇಲೆ ಬಿಡುತ್ತಿದ್ದೇನೆ. ॥19॥
ಮೂಲಮ್
(ಶ್ಲೋಕ-20)
ತ್ಯಾಜಯಿಷ್ಯೇಭಿಧಾನಂ ಮೇ ಯತ್ತ್ವಯಾಜ್ಞ ಮೃಷಾ ಧೃತಮ್ ।
ವ್ರಜಾಮಿ ಶರಣಂ ತೇದ್ಯ ಯದಿ ನೇಚ್ಛಾಮಿ ಸಂಯುಗಮ್ ॥
ಅನುವಾದ
ನೀನು ಸುಳ್ಳು-ಸುಳ್ಳೆ ನನ್ನ ಹೆಸರನ್ನು ಇಟ್ಟುಕೊಂಡಿರುವೆ. ಆದ್ದರಿಂದ ಮೂರ್ಖನೇ! ಈಗ ನಾನು ನಿನ್ನಿಂದ ಆ ಹೆಸರುಗಳನ್ನು ಬಿಡಿಸಿಬಿಡುತ್ತೇನೆ. ಇನ್ನು ಉಳಿದಿರುವುದು ಶರಣಾಗುವ ಮಾತು - ನಾನು ನಿನ್ನೊಡನೆ ಯುದ್ಧಮಾಡಲಾಗದಿದ್ದಾಗ ನಿನಗೆ ಶರಣು ಬರುವೆನು. ॥20॥
ಮೂಲಮ್
(ಶ್ಲೋಕ-21)
ಇತಿ ಕ್ಷಿಪ್ತ್ವಾ ಶಿತೈರ್ಬಾಣೈರ್ವಿರಥೀಕೃತ್ಯ ಪೌಂಡ್ರಕಮ್ ।
ಶಿರೋವೃಶ್ಚದ್ರಥಾಂಗೇನ ವಜ್ರೇಣೇಂದ್ರೋ ಯಥಾ ಗಿರೇಃ ॥
ಅನುವಾದ
ಶ್ರೀಕೃಷ್ಣನು ಹೀಗೆ ಪೌಂಡ್ರಕನನ್ನು ತಿರಸ್ಕರಿಸುತ್ತಾ ತನ್ನ ತೀಕ್ಷ್ಣವಾದ ಬಾಣಗಳಿಂದ ಅವನ ರಥವನ್ನು ಮುರಿದುಹಾಕಿ, ಇಂದ್ರನು ವಜ್ರಾಯುಧದಿಂದ ಪರ್ವತಗಳನ್ನು ಕತ್ತರಿಸಿಹಾಕುವಂತೆ ಸುದರ್ಶನ ಚಕ್ರದಿಂದ ಅವನ ತಲೆಯನ್ನು ಹಾರಿಸಿಬಿಟ್ಟನು. ॥21॥
ಮೂಲಮ್
(ಶ್ಲೋಕ-22)
ತಥಾ ಕಾಶಿಪತೇಃ ಕಾಯಾಚ್ಛಿರ ಉತ್ಕೃತ್ಯ ಪತ್ರಿಭಿಃ ।
ನ್ಯಪಾತಯತ್ ಕಾಶಿಪುರ್ಯಾಂ ಪದ್ಮಕೋಶಮಿವಾನಿಲಃ ॥
ಅನುವಾದ
ಹಾಗೆಯೇ ಭಗವಂತನು ತನ್ನ ಬಾಣಗಳಿಂದ ಕಾಶೀನರೇಶನ ತಲೆಯನ್ನು ಹಾರಿಸಿ ಗಾಳಿಯು ಕಮಲದ ಹೂವನ್ನು ಹಾರಿಸಿಕೊಂಡು ಹೋಗುವಂತೆ ಕಾಶೀನಗರದಲ್ಲಿ ಬೀಳಿಸಿದನು. ॥22॥
ಮೂಲಮ್
(ಶ್ಲೋಕ-23)
ಏವಂ ಮತ್ಸರಿಣಂ ಹತ್ವಾ ಪೌಂಡ್ರಕಂ ಸಸಖಂ ಹರಿಃ ।
ದ್ವಾರಕಾಮಾವಿಶತ್ ಸಿದ್ಧೈರ್ಗೀಯಮಾನಕಥಾಮೃತಃ ॥
ಅನುವಾದ
ಈ ಪ್ರಕಾರವಾಗಿ ತನ್ನೊಡನೆ ದ್ವೇಷವನ್ನು ಸಾಧಿಸುತ್ತಿದ್ದ ಪೌಂಡ್ರಕನನ್ನು ಮತ್ತು ಅವನ ಸ್ನೇಹಿತನಾದ ಕಾಶೀರಾಜನನ್ನು ಸಂಹರಿಸಿದ ಭಗವಾನ್ ಶ್ರೀಕೃಷ್ಣನು ತನ್ನ ರಾಜಧಾನಿಯಾದ ದ್ವಾರಕೆಗೆ ಹಿಂದಿರುಗಿದನು. ಆ ಸಮಯದಲ್ಲಿ ಸಿದ್ಧರು ಭಗವಂತನ ಕಥಾಮೃತವನ್ನು ಹಾಡುತ್ತಿದ್ದರು. ॥23॥
ಮೂಲಮ್
(ಶ್ಲೋಕ-24)
ಸ ನಿತ್ಯಂ ಭಗವದ್ಧ್ಯಾನಪ್ರಧ್ವಸ್ತಾಖಿಲಬಂಧನಃ ।
ಬಿಭ್ರಾಣಶ್ಚ ಹರೇ ರಾಜನ್ ಸ್ವರೂಪಂ ತನ್ಮಯೋಭವತ್ ॥
ಅನುವಾದ
ಪರೀಕ್ಷಿತನೇ! ಪೌಂಡ್ರಕನು ಭಗವಂತನ ರೂಪವನ್ನು ಯಾವುದೇ ಭಾವದಿಂದಲೂ ಸದಾಕಾಲ ಚಿಂತಿಸುತ್ತಲೇ ಇದ್ದನು. ಇದರಿಂದ ಅವನ ಎಲ್ಲ ಬಂಧನಗಳು ಹರಿದುಹೋಯಿತು. ಅವನು ಭಗವಂತನಂತೆಯೇ ವೇಷವನ್ನು ಧರಿಸುತ್ತಿದ್ದನು. ಇದರಿಂದ ಪದೇ-ಪದೇ ಅವನ ಸ್ಮರಣೆಯಾಗುವುದರಿಂದ ಅವನು ಭಗವಂತನ ಸಾರೂಪ್ಯಮುಕ್ತಿಯನ್ನು ಹೊಂದಿದನು.॥24॥
ಮೂಲಮ್
(ಶ್ಲೋಕ-25)
ಶಿರಃ ಪತಿತಮಾಲೋಕ್ಯ ರಾಜದ್ವಾರೇ ಸಕುಂಡಲಮ್ ।
ಕಿಮಿದಂ ಕಸ್ಯ ವಾ ವಕಮಿತಿ ಸಂಶಿಶ್ಶಿರೇ ಜನಾಃ ॥
ಅನುವಾದ
ಇತ್ತ ಕಾಶಿಯ ಅರಮನೆಯ ಮಹಾದ್ವಾರದಲ್ಲಿ ಬಿದ್ದಿದ್ದ ಕುಂಡಲ ಮಂಡಿತವಾದ ಒಂದು ಮುಂಡವನ್ನು ನೋಡಿ ಜನರು ‘ಇದು ಯಾರ ತಲೆಯಾಗಿರಬಹುದು? ಎಂದು ನಾನಾರೀತಿಯಿಂದ ತರ್ಕಿಸತೊಡಗಿದರು. ॥25॥
ಮೂಲಮ್
(ಶ್ಲೋಕ-26)
ರಾಜ್ಞಃ ಕಾಶಿಪತೇರ್ಜ್ಞಾತ್ವಾ ಮಹಿಷ್ಯಃ ಪುತ್ರಬಾಂಧವಾಃ ।
ಪೌರಾಶ್ಚ ಹಾ ಹತಾ ರಾಜನ್ ನಾಥ ನಾಥೇತಿ ಪ್ರಾರುದನ್ ॥
ಅನುವಾದ
ಇದಾದರೋ ಕಾಶಿ ರಾಜನ ತಲೆ ಎಂದು ತಿಳಿದಾಗ ರಾಣಿಯರು, ರಾಜಕುಮಾರರು, ರಾಜಪರಿವಾರದ ಜನರು ಹಾಗೂ ನಾಗರಿಕರು ಅಳುತ್ತಾ ಅಯ್ಯೋ! ಸ್ವಾಮಿ! ನಮ್ಮ ಸರ್ವನಾಶವಾಯಿತೆಂದು ಗೋಳಾಡಿದರು. ॥26॥
ಮೂಲಮ್
(ಶ್ಲೋಕ-27)
ಸುದಕ್ಷಿಣಸ್ತಸ್ಯ ಸುತಃ ಕೃತ್ವಾ ಸಂಸ್ಥಾವಿಧಿಂ ಪಿತುಃ ।
ನಿಹತ್ಯ ಪಿತೃಹಂತಾರಂ ಯಾಸ್ಯಾಮ್ಯಪಚಿತಿಂ ಪಿತುಃ ॥
(ಶ್ಲೋಕ-28)
ಇತ್ಯಾತ್ಮನಾಭಿಸಂಧಾಯ ಸೋಪಾಧ್ಯಾಯೋ ಮಹೇಶ್ವರಮ್ ।
ಸುದಕ್ಷಿಣೋರ್ಚಯಾಮಾಸ ಪರಮೇಣ ಸಮಾಧಿನಾ ॥
ಅನುವಾದ
ಕಾಶಿರಾಜನ ಮಗನಾದ ಸುದಕ್ಷಿಣನು ತನ್ನ ತಂದೆಯ ಅಂತ್ಯೇಷ್ಟಿಯನ್ನು ನೆರವೇರಿಸಿ, ನನ್ನ ತಂದೆಯನ್ನು ಕೊಂದಿರುವವನನ್ನು ಕೊಂದೇ ತಂದೆಯ ಋಣದಿಂದ ಮುಕ್ತನಾಗುವೆನು ಎಂದು ಮನಸ್ಸಿನಲ್ಲೇ ನಿಶ್ವಯಿಸಿಕೊಂಡನು. ಅದರಂತೆ ಅವನು ತನ್ನ ಕುಲ-ಪುರೋಹಿತ ಮತ್ತು ಆಚಾರ್ಯರೊಡನೆ ಅತ್ಯಂತ ಏಕಾಗ್ರತೆಯಿಂದ ಭಗವಂತನಾದ ಶಂಕರನನ್ನು ಆರಾಧಿಸತೊಡಗಿದನು. ॥27-28॥
ಮೂಲಮ್
(ಶ್ಲೋಕ-29)
ಪ್ರೀತೋವಿಮುಕ್ತೇ ಭಗವಾಂಸ್ತಸ್ಮೈ ವರಮದಾದ್ಭವಃ ।
ಪಿತೃಹಂತೃವಧೋಪಾಯಂ ಸ ವವ್ರೇ ವರಮೀಪ್ಸಿತಮ್ ॥
ಅನುವಾದ
ಕಾಶೀ ನಗರದಲ್ಲಿ ಅವನ ಆರಾಧನೆಯಿಂದ ಪ್ರಸನ್ನನಾದ ಭಗವಾನ್ ಶಂಕರನು ಅವನಲ್ಲಿ ವರವನ್ನು ಬೇಡಲು ಹೇಳಿದನು. ಸುದಕ್ಷಿಣನು - ‘ನನಗೆ ನನ್ನ ಪಿತೃಘಾತಿಯ ವಧೆಯ ಉಪಾಯವನ್ನು ತಿಳಿಸಬೇಕೆಂಬ ವರವನ್ನು ಬೇಡಿದನು. ॥29॥
ಮೂಲಮ್
(ಶ್ಲೋಕ-30)
ದಕ್ಷಿಣಾಗ್ನಿಂ ಪರಿಚರ ಬ್ರಾಹ್ಮಣೈಃ ಸಮಮೃತ್ವಿಜಮ್ ।
ಅಭಿಚಾರವಿಧಾನೇನ ಸ ಚಾಗ್ನಿಃ ಪ್ರಮಥೈರ್ವೃತಃ ॥
(ಶ್ಲೋಕ-31)
ಸಾಧಯಿಷ್ಯತಿ ಸಂಕಲ್ಪಮಬ್ರಹ್ಮಣ್ಯೇ ಪ್ರಯೋಜಿತಃ ।
ಇತ್ಯಾದಿಷ್ಟಸ್ತಥಾ ಚಕ್ರೇ ಕೃಷ್ಣಾಯಾಭಿಚರನ್ ವ್ರತೀ ॥
ಅನುವಾದ
ಪರಶಿವನು ಹೇಳಿದನು - ‘ನೀನು ಬ್ರಾಹ್ಮಣರೊಂದಿಗೆ ಸೇರಿ ಯಜ್ಞದ ದೇವತೆಯಾದ ಋತ್ವಿಗ್ಭೂತವಾದ ದಕ್ಷಿಣಾಗ್ನಿಯನ್ನು ಅಭಿಚಾರವಿಧಿಯಿಂದ ಆರಾಧಿಸು. ಇದರಿಂದ ಆ ಅಗ್ನಿಯು ಪ್ರಮಥ ಗಣಗಳೊಂದಿಗೆ ಪ್ರಕಟವಾಗುತ್ತದೆ. ಬ್ರಾಹ್ಮಣ ಭಕ್ತರಲ್ಲದವರ ಮೇಲೆ ಅದನ್ನು ಪ್ರಯೋಗಿಸಿದರೆ ಅದು ನಿನ್ನ ಸಂಕಲ್ಪವನ್ನು ಸಿದ್ಧಿಸಿಕೊಡುವುದು. ಭಗವಾನ್ ಶಂಕರನ ಇಂತಹ ಆಜ್ಞೆಯನ್ನು ಪಡೆದುಕೊಂಡು ಸುದಕ್ಷಿಣನು ಅನುಷ್ಠಾನಕ್ಕೆ ಬೇಕಾದ ನಿಯಮಗಳನ್ನು ಸ್ವೀಕರಿಸಿ, ಭಗವಾನ್ ಶ್ರೀಕೃಷ್ಣನಿಗಾಗಿ ಅಭಿಚಾರ (ಮಾರಣದ ಪುರಶ್ಚರಣ) ವನ್ನು ಮಾಡತೊಡಗಿದನು. ॥30-31॥
ಮೂಲಮ್
(ಶ್ಲೋಕ-32)
ತತೋಗ್ನಿರುತ್ಥಿತಃ ಕುಂಡಾನ್ಮೂರ್ತಿಮಾನತಿಭೀಷಣಃ ।
ತಪ್ತತಾಮ್ರಶಿಖಾಶ್ಮಶ್ರುರಂಗಾರೋದ್ಗಾರಿಲೋಚನಃ ॥
ಅನುವಾದ
ಅಭಿಚಾರ ಹೋಮವು ಪೂರ್ಣವಾಗುತ್ತಿದ್ದಂತೆ ಯಜ್ಞ ಕುಂಡದಿಂದ ಅತಿ ಭೀಷಣವಾದ ಅಗ್ನಿಯು ಮೂರ್ತಿಮತ್ತಾಗಿ ಪ್ರಕಟನಾದನು. ಅವನ ಕೂದಲು, ಗಡ್ಡ-ಮೀಸೆಗಳು ಕಾಯಿಸಿದ ತಾಮ್ರದಂತೆ ಕೆಂಪಾಗಿದ್ದವು. ಕಣ್ಣುಗಳು ಕೆಂಡವನ್ನು ಉಗುಳುತ್ತಿವೆಯೋ ಎಂಬಂತೆ ಇತ್ತು. ॥32॥
ಮೂಲಮ್
(ಶ್ಲೋಕ-33)
ದಂಷ್ಟ್ರೋಗ್ರಭ್ರುಕುಟೀದಂಡಕಠೋರಾಸ್ಯಃ ಸ್ವಜಿಹ್ವಯಾ ।
ಆಲಿಹನ್ಸೃಕ್ಕಿಣೀ ನಗ್ನೋ ವಿಧುನ್ವಂಸಿಶಿಖಂ ಜ್ವಲನ್ ॥
ಅನುವಾದ
ಕೋರೆದಾಡೆಗಳಿದ್ದು, ವಕ್ರವಾದ ಹುಬ್ಬುಗಳಿಂದಾಗಿ ಮುಖವು ಅತ್ಯುಗ್ರವಾಗಿತ್ತು. ಅವನು ತನ್ನ ಕೆನ್ನಾಲಿಗೆಯಿಂದ ಕಟವಾಯಿಗಳನ್ನು ನೆಕ್ಕಿಕೊಳ್ಳುತ್ತಿದ್ದನು. ಬೆತ್ತಲಾಗಿದ್ದನು. ಕೈಯಲ್ಲಿ ಬೆಂಕಿಯ ಜ್ವಾಲೆಗಳು ಹೊರಹೊಮ್ಮುತ್ತಿದ್ದ ತ್ರಿಶೂಲವೊಂದನ್ನು ಹಿಡಿದುಕೊಂಡು ತಿರುಗಿಸುತ್ತಾ ಇದ್ದನು. ॥33॥
ಮೂಲಮ್
(ಶ್ಲೋಕ-34)
ಪದ್ಭ್ಯಾಂ ತಾಲಪ್ರಮಾಣಾಭ್ಯಾಂ ಕಂಪಯನ್ನವನೀತಲಮ್ ।
ಸೋಭ್ಯಧಾವದ್ವ ತೋ ಭೂತೈರ್ದ್ವಾರಕಾಂ ಪ್ರದಹಂದಿಶಃ ॥
ಅನುವಾದ
ತಾಳೆ ಮರದಂತೆ ದೊಡ್ಡ-ದೊಡ್ಡ ಕಾಲುಗಳಿದ್ದವು. ಅವನು ನಡೆಯುವಾಗ ಭೂಮಿಯನ್ನು ನಡುಗಿಸುತ್ತಾ, ತನ್ನ ಜ್ವಾಲೆಗಳಿಂದ ಹತ್ತು ದಿಕ್ಕುಗಳನ್ನು ಸುಡುತ್ತಾ ದ್ವಾರಕೆಯ ಕಡೆಗೆ ಧಾವಿಸಿದನು. ಅವನೊಡನೆ ಅನೇಕ ಭೂತಗಳೂ ಇದ್ದವು. ॥34॥
ಮೂಲಮ್
(ಶ್ಲೋಕ-35)
ತಮಾಭಿಚಾರದಹನಮಾಯಾಂತಂ ದ್ವಾರಕೌಕಸಃ ।
ವಿಲೋಕ್ಯ ತತ್ರಸುಃ ಸರ್ವೇ ವನದಾಹೇ ಮೃಗಾ ಯಥಾ ॥
ಅನುವಾದ
ಆ ಅಭಿಚಾರಿಕವಾದ ಅಗ್ನಿಯು ಬರುತ್ತಿರುವುದನ್ನು ನೋಡಿ ದ್ವಾರಕಾ ನಿವಾಸಿಗಳು ಕಾಡಿನಲ್ಲಿ ಬೆಂಕಿಯು ಹೊತ್ತಿಕೊಂಡಾಗ ಜಿಂಕೆಗಳು ಹೆದರುವಂತೆ ಹೆದರಿಹೋದರು. ॥35॥
ಮೂಲಮ್
(ಶ್ಲೋಕ-36)
ಅಕ್ಷೈಃ ಸಭಾಯಾಂ ಕ್ರೀಡಂತಂ ಭಗವಂತಂ ಭಯಾತುರಾಃ ।
ತ್ರಾಹಿ ತ್ರಾಹಿ ತ್ರಿಲೋಕೇಶ ವಹ್ನೇಃ ಪ್ರದಹತಃ ಪುರಮ್ ॥
ಅನುವಾದ
ಅವರೆಲ್ಲರೂ ಭಯಗೊಂಡು ಭಗವಂತನ ಬಳಿಗೆ ಓಡಿ ಬಂದರು. ಶ್ರೀಕೃಷ್ಣನು ಆಗ ಸಭೆಯಲ್ಲಿ ಕುಳಿತು ಪಗಡೆಯಾಡುತ್ತಿದ್ದನು. ಅವರೆಲ್ಲರೂ ಪ್ರಾರ್ಥಿಸಿದರು - ತ್ರಿಲೋಕೇಶನೇ! ಭಯಂಕರವಾದ ಅಗ್ನಿಯಿಂದ ದ್ವಾರಕಾ ಪಟ್ಟಣವು ಸುಡುತ್ತಿದೆ. ಕಾಪಾಡು! ಕಾಪಾಡು! ॥36॥
ಮೂಲಮ್
(ಶ್ಲೋಕ-37)
ಶ್ರುತ್ವಾ ತಜ್ಜನವೈಕ್ಲವ್ಯಂ ದೃಷ್ಟ್ವಾ ಸ್ವಾನಾಂ ಚ ಸಾಧ್ವಸಮ್ ।
ಶರಣ್ಯಃ ಸಂಪ್ರಹಸ್ಯಾಹ ಮಾ ಭೈಷ್ಟೇತ್ಯವಿತಾಸ್ಮ್ಯಹಮ್ ॥
ಅನುವಾದ
ದ್ವಾರಕಾವಾಸಿಗಳೂ ಸ್ವಜನರೂ ದುಃಖಪಡುತ್ತಿರುವುದನ್ನು, ಭಯದಿಂದ ನಡುಗುತ್ತಾ ಕೂಗಿಕೊಳ್ಳುವುದನ್ನು ನೋಡಿದ ಶರಣಾಗತವತ್ಸಲನಾದ ಭಗವಂತನು ನಗುತ್ತಾ ಹೇಳಿದನು - ಹೆದರಬೇಡಿರಿ. ನಾನು ನಿಮ್ಮೆಲ್ಲರನ್ನು ರಕ್ಷಿಸುತ್ತೇನೆ. ॥37॥
ಮೂಲಮ್
(ಶ್ಲೋಕ-38)
ಸರ್ವಸ್ಯಾಂತರ್ಬಹಿಃಸಾಕ್ಷೀ ಕೃತ್ಯಾಂ ಮಾಹೇಶ್ವರೀಂ ವಿಭುಃ ।
ವಿಜ್ಞಾಯ ತದ್ವಿಘಾತಾರ್ಥಂ ಪಾರ್ಶ್ವಸ್ಥಂ ಚಕ್ರಮಾದಿಶತ್ ॥
ಅನುವಾದ
ಪರೀಕ್ಷಿತನೇ! ಭಗವಂತನು ಸಮಸ್ತರ ಹೊರಗಿನ-ಒಳಗಿನ ವ್ಯಾಪಾರಗಳಿಗೆ ಸಾಕ್ಷಿಯಾಗಿದ್ದಾನೆ. ಇದು ಕಾಶಿಯಿಂದ ಬಂದಿರುವ ಮಾಹೇಶ್ವರೀ ಕೃತ್ಯೆಯಾಗಿದೆ ಎಂದು ತಿಳಿದು ಅವನು ಅದರ ಪ್ರತೀಕಾರಕ್ಕಾಗಿ ಬಳಿಯಲ್ಲೇ ವಿರಾಜಮಾನವಾಗಿದ್ದ ಸುದರ್ಶನ ಚಕ್ರಕ್ಕೆ ಆಜ್ಞಾಪಿಸಿದನು. ॥38॥
ಮೂಲಮ್
(ಶ್ಲೋಕ-39)
ತತ್ಸೂರ್ಯಕೋಟಿಪ್ರತಿಮಂ ಸುದರ್ಶನಂ
ಜಾಜ್ವಲ್ಯಮಾನಂ ಪ್ರಲಯಾನಲಪ್ರಭಮ್ ।
ಸ್ವತೇಜಸಾ ಖಂ ಕಕುಭೋಥ ರೋದಸೀ
ಚಕ್ರಂ ಮುಕುಂದಾಸಮಥಾಗ್ನಿಮಾರ್ದಯತ್ ॥ 39 ॥
ಅನುವಾದ
ಭಗವಾನ್ ಮುಕುಂದನ ಪ್ರಿಯವಾದ ಅಸ್ತ್ರ ಸುದರ್ಶನ ಚಕ್ರವು ಕೋಟಿ-ಕೋಟಿ ಸೂರ್ಯನಂತೆ ತೇಜಸ್ಸುಳ್ಳದ್ದು, ಪ್ರಳಯಕಾಲದ ಅಗ್ನಿಯಂತೆ ಜಾಜ್ವಲ್ಯ ಮಾನವಾಗಿತ್ತು. ಅದರ ತೇಜದಿಂದ ಆಕಾಶ, ದಿಕ್ಕುಗಳು ಮತ್ತು ಅಂತರಿಕ್ಷವು ಬೆಳಗುತ್ತಿದ್ದವು. ಶ್ರೀಕೃಷ್ಣನ ಅಪ್ಪಣೆಯಂತೆ ಅದು ಅಭಿಚಾರ ಅಗ್ನಿಯನ್ನು ಕ್ಷಣಮಾತ್ರದಲ್ಲಿ ಹಿಮ್ಮೆಟ್ಟಿಸಿದನು. ॥39॥
ಮೂಲಮ್
(ಶ್ಲೋಕ-40)
ಕೃತ್ಯಾನಲಃ ಪ್ರತಿಹತಃ ಸ ರಥಾಂಗಪಾಣೇ-
ರಸೌಜಸಾ ಸ ನೃಪ ಭಗ್ನಮುಖೋ ನಿವೃತ್ತಃ ।
ವಾರಾಣಸೀಂ ಪರಿಸಮೇತ್ಯ ಸುದಕ್ಷಿಣಂ ತಂ
ಸರ್ತ್ವಿಗ್ಜನಂ ಸಮದಹತ್ಸ್ವಕೃತೋಭಿಚಾರಃ ॥ 40 ॥
ಅನುವಾದ
ರಥಾಂಗಪಾಣಿಯಾದ ಶ್ರೀಕೃಷ್ಣನ ಅಸ್ತ್ರವಾದ ಸುದರ್ಶನ ಚಕ್ರದ ಶಕ್ತಿಯಿಂದ ಕೃತ್ಯಾಗ್ನಿಯ ಮುಖಭಂಗವಾಯಿತು. ಅದರ ತೇಜವು ನಷ್ಟವಾಗಿ, ಶಕ್ತಿಯು ಕುಂದಿಹೋಗಿ ಅದು ಅಲ್ಲಿಂದ ಹಿಂದಿರುಗಿ ಕಾಶಿಗೆ ಬಂದು ಋತ್ವಿಜ ಆಚಾರ್ಯರೊಂದಿಗೆ ಸುದಕ್ಷಿಣನನ್ನು ಸುಟ್ಟು ಬೂದಿಮಾಡಿತು. ಹೀಗೆ ಅಭಿಚಾರವು ಅವನಿಗೆ ಮುಳುವಾಯಿತು. ॥40॥
ಮೂಲಮ್
(ಶ್ಲೋಕ-41)
ಚಕ್ರಂ ಚ ವಿಷ್ಣೋಸ್ತದನುಪ್ರವಿಷ್ಟಂ
ವಾರಾಣಸೀಂ ಸಾಟ್ಟಸಭಾಲಯಾಪಣಾಮ್ ।
ಸಗೋಪುರಾಟ್ಟಾಲಕಕೋಷ್ಠಸಂಕುಲಾಂ
ಸಕೋಶಹಸ್ತ್ಯಶ್ವರಥಾನ್ನಶಾಲಾಮ್ ॥ 41 ॥
(ಶ್ಲೋಕ-42)
ದಗ್ಧ್ವಾ ವಾರಾಣಸೀಂ ಸರ್ವಾಂ ವಿಷ್ಣೋಶ್ಚಕ್ರಂ ಸುದರ್ಶನಮ್ ।
ಭೂಯಃ ಪಾರ್ಶ್ವಮುಪಾತಿಷ್ಠತ್ ಕೃಷ್ಣಸ್ಯಾಕ್ಲಿಷ್ಟಕರ್ಮಣಃ ॥
ಅನುವಾದ
ಕೃತ್ಯಾಗ್ನಿಯ ಬೆನ್ನಿಗೇ ಸುದರ್ಶನವು ಕಾಶಿಗೆ ಬಂದು, ವಿಶಾಲವಾದ ಆ ನಗರಿಯ ದೊಡ್ಡ - ದೊಡ್ಡ ಉಪ್ಪರಿಗೆ ಮನೆಗಳನ್ನೂ, ಸಭಾಭವನಗಳನ್ನು, ಅಂಗಡಿಮುಂಗಟ್ಟುಗಳನ್ನು, ನಗರ ದ್ವಾರಗಳನ್ನೂ, ಗೋಪುರಗಳನ್ನೂ, ಪ್ರಾಕಾರಗಳನ್ನೂ, ಭಂಡಾರಗಳನ್ನೂ, ಆನೆ, ಕುದುರೆ, ರಥಗಳನ್ನು, ಅನ್ನ ಶಾಲೆಗಳನ್ನೂ ಕ್ಷಣಾರ್ಧದಲ್ಲಿ ಬೂದಿಮಾಡಿ, ಮತ್ತೆ ಅದು ಪರಮಾನಂದ ಮಯವಾದ ಲೀಲೆಗಳನ್ನು ಮಾಡುವಂತಹ ಭಗವಾನ್ ಶ್ರೀಕೃಷ್ಣನ ಬಳಿಗೆ ಬಂದು ಕುಳಿತು ಕೊಂಡಿತು. ॥41-42॥
ಮೂಲಮ್
(ಶ್ಲೋಕ-43)
ಯ ಏತಚ್ಛ್ರಾವಯೇನ್ಮರ್ತ್ಯ ಉತ್ತಮಶ್ಲೋಕವಿಕ್ರಮಮ್ ।
ಸಮಾಹಿತೋ ವಾ ಶೃಣುಯಾತ್ ಸರ್ವಪಾಪೈಃ ಪ್ರಮುಚ್ಯತೇ ॥
ಅನುವಾದ
ಪುಣ್ಯಕೀರ್ತಿಯಾದ ಭಗವಾನ್ ಶ್ರೀಕೃಷ್ಣನ ಈ ಚರಿತ್ರವನ್ನು ಏಕಾಗ್ರತೆಯಿಂದ ಹೇಳುವ, ಕೇಳುವ ಮನುಷ್ಯನು ಎಲ್ಲ ಪಾಪಗಳಿಂದ ಮುಕ್ತನಾಗಿ ಹೋಗುತ್ತಾನೆ. ॥43॥
ಅನುವಾದ (ಸಮಾಪ್ತಿಃ)
ಅರವತ್ತಾರನೆಯ ಅಧ್ಯಾಯವು ಮುಗಿಯಿತು. ॥66॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ ಪೌಂಡ್ರಕಾದಿವಧೋ ನಾಮ ಷಟ್ಷಷ್ಟಿತಮೋಽಧ್ಯಾಯಃ ॥66॥