೬೫

[ಅರವತ್ತೈದನೇಯ ಅಧ್ಯಾಯ]

ಭಾಗಸೂಚನಾ

ಬಲರಾಮನು ವ್ರಜಕ್ಕೆ ಆಗಮಿಸಿದುದು

ಮೂಲಮ್

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಬಲಭದ್ರಃ ಕುರುಶ್ರೇಷ್ಠ ಭಗವಾನ್ ರಥಮಾಸ್ಥಿತಃ ।
ಸುಹೃದ್ದಿದೃಕ್ಷುರುತ್ಕಂಠಃ ಪ್ರಯಯೌ ನಂದಗೋಕುಲಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಕುರುಶ್ರೇಷ್ಠ ನಾದ ಪರೀಕ್ಷಿತನೇ! ಭಗವಾನ್ ಬಲಭದ್ರನು ನಂದಗೋಪನೇ ಮೊದಲಾದ ಸುಹೃದರನ್ನು ನೋಡುವ ತವಕದಿಂದ ರಥದಲ್ಲಿ ಕುಳಿತು ದ್ವಾರಕೆಯಿಂದ ನಂದಗೋಕುಲಕ್ಕೆ ಪ್ರಯಾಣ ಮಾಡಿದನು. ॥1॥

ಮೂಲಮ್

(ಶ್ಲೋಕ-2)
ಪರಿಷ್ವಕ್ತಶ್ಚಿರೋತ್ಕಂಠೈರ್ಗೋಪೈರ್ಗೋಪೀಭಿರೇವ ಚ ।
ರಾಮೋಭಿವಾದ್ಯ ಪಿತರಾವಾಶೀರ್ಭಿರಭಿನಂದಿತಃ ॥

ಅನುವಾದ

ಇತ್ತ ಬಲರಾಮ - ಶ್ರೀಕೃಷ್ಣನನ್ನು ನೋಡಬೇಕೆಂದು ವ್ರಜವಾಸಿಗಳಾದ ಗೋಪ-ಗೋಪಿಯರೂ ಬಹಳ ದಿವಸಗಳಿಂದ ಉತ್ಕಂಠಿತರಾಗಿದ್ದರು. ಅವರೆಲ್ಲರೂ ಬಲರಾಮನನ್ನು ನೋಡುತ್ತಲೇ ಆನಂದ ತುಂದಿಲರಾಗಿ ಬಲರಾಮನನ್ನು ಗಾಢವಾಗಿ ಆಲಿಂಗಿಸಿಕೊಂಡರು. ಬಲರಾಮನೂ ಕೂಡ ತಾಯಿಯಾದ ಯಶೋದೆಗೂ, ನಂದರಾಜನಿಗೂ ನಮಸ್ಕಾರ ಮಾಡಿದನು. ಅವರು ಆಶೀರ್ವದಿಸುತ್ತಾ ಅವನನ್ನು ಅಭಿನಂದಿಸಿದರು. ॥2॥

ಮೂಲಮ್

(ಶ್ಲೋಕ-3)
ಚಿರಂ ನಃ ಪಾಹಿ ದಾಶಾರ್ಹ ಸಾನುಜೋ ಜಗದೀಶ್ವರಃ ।
ಇತ್ಯಾರೋಪ್ಯಾಂಕಮಾಲಿಂಗ್ಯ ನೇತ್ರೈಃ ಸಿಷಿಚತುರ್ಜಲೈಃ ॥

ಅನುವಾದ

‘ದಾಶಾರ್ಹನೇ! ನೀನು ಜಗದೀಶ್ವರನಾಗಿರುವೆ. ನಿನ್ನ ತಮ್ಮನಾದ ಶ್ರೀಕೃಷ್ಣನೊಡನೆ ಸದಾ ನೀನು ನಮ್ಮನ್ನು ರಕ್ಷಿಸುತ್ತಿರು’ ಎಂದು ಹೇಳುತ್ತಾ ಅವನನ್ನು ತೊಡೆಯಲ್ಲಿ ಕುಳ್ಳಿಸಿಕೊಂಡು ಆನಂದ ಬಾಷ್ಪದಿಂದ ಅವನಿಗೆ ಅಭಿಷೇಕ ಮಾಡಿದರು. ॥3॥

ಮೂಲಮ್

(ಶ್ಲೋಕ-4)
ಗೋಪವೃದ್ಧಾಂಶ್ಚ ವಿಧಿವದ್ಯವಿಷ್ಠೈರಭಿವಂದಿತಃ ।
ಯಥಾವಯೋ ಯಥಾಸಖ್ಯಂ ಯಥಾಸಂಬಂಧಮಾತ್ಮನಃ ॥

ಅನುವಾದ

ಬಳಿಕ ಬಲರಾಮನು ಹಿರಿಯ ಗೋಪರಿಗೆ ನಮಸ್ಕರಿಸಿದನು. ಕಿರಿಯರು ಅವನಿಗೆ ನಮಸ್ಕಾರ ಮಾಡಿದರು. ಹೀಗೆ ಬಲರಾಮನು ಗೋಪಾಲಕರ ವಯಸ್ಸಿಗೆ ಅನುಸಾರವಾಗಿ, ಅವರೊಡನೆ ತನಗಿದ್ದ ಮೈತ್ರಿಗೆ ಅನುಸಾರವಾಗಿ ನೆಂಟಸ್ತಿಕೆಗೆ ತಕ್ಕಂತೆ ಎಲ್ಲರನ್ನು ಸಮಾದರಿಸಿದನು. ॥4॥

ಮೂಲಮ್

(ಶ್ಲೋಕ-5)
ಸಮುಪೇತ್ಯಾಥ ಗೋಪಾಲಾನ್ಹಾಸ್ಯಹಸ್ತಗ್ರಹಾದಿಭಿಃ ।
ವಿಶ್ರಾಂತಂ ಸುಖಮಾಸೀನಂ ಪಪ್ರಚ್ಛುಃ ಪರ್ಯುಪಾಗತಾಃ ॥
(ಶ್ಲೋಕ-6)
ಪೃಷ್ಟಾಶ್ಚಾನಾಮಯಂ ಸ್ವೇಷು ಪ್ರೇಮಗದ್ಗದಯಾ ಗಿರಾ ।
ಕೃಷ್ಣೇ ಕಮಲಪತ್ರಾಕ್ಷೇ ಸಂನ್ಯಸ್ತಾಖಿಲರಾಧಸಃ ॥

ಅನುವಾದ

ಬಲರಾಮನು ಗೋಪಾಲಕರ ಬಳಿಗೆ ಹೊಗಿ ಕೆಲವರನ್ನು ಕೈಕುಲುಕಿದನು. ಕೆಲವರಲ್ಲಿ ವಿನೋದದ ಮಾತುಗಳನ್ನಾಡಿದನು. ಕೆಲವರನ್ನು ನಗು-ನಗುತ್ತಾ ಅಪ್ಪಿಕೊಂಡನು. ಇದಾದ ಬಳಿಕ ಬಲರಾಮನು ಬಳಲಿಕೆಯನ್ನು ಕಳೆದುಕೊಂಡು ಸುಖಾಸನದಲ್ಲಿ ಕುಳಿತಿರುವಾಗ, ಕಮಲನಯನ ಭಗವಾನ್ ಶ್ರೀಕೃಷ್ಣನಿಗಾಗಿ ಸಮಸ್ತ ಭೋಗಗಳನ್ನೂ, ಸ್ವರ್ಗ, ಮೋಕ್ಷವನ್ನೂ ತ್ಯಜಿಸಿದ ಗೋಪಾಲಕರು ಬಲರಾಮನ ಬಳಿಗೆ ಬಂದರು. ಬಲರಾಮನು ಅವರ ಮನೆಯವರ ಕುರಿತು ಕುಶಲ ಪ್ರಶ್ನೆಗಳನ್ನು ಕೇಳಿದಾಗ ಅವರು ಪ್ರೇಮದಿಂದ ಉಕ್ಕಿಬರುತ್ತಿದ್ದ ಕಣ್ಣಿರಿನಿಂದಾಗಿ, ಗದ್ಗದವಾಗಿದ್ದ ಸ್ವರದಿಂದ ಅವನಲ್ಲಿ ಪ್ರಶ್ನಿಸಿದರು. ॥5-6॥

ಮೂಲಮ್

(ಶ್ಲೋಕ-7)
ಕಚ್ಚಿನ್ನೋ ಬಾಂಧವಾ ರಾಮ ಸರ್ವೇ ಕುಶಲಮಾಸತೇ ।
ಕಚ್ಚಿತ್ಸ್ಮರಥ ನೋ ರಾಮ ಯೂಯಂ ದಾರಸುತಾನ್ವಿತಾಃ ॥

ಅನುವಾದ

ಬಲರಾಮನೇ! ವಸುದೇವನೇ ಮೊದಲಾದ ನಮ್ಮ ಬಂಧುಗಳೆಲ್ಲರೂ ಕ್ಷೇಮವಾಗಿರುವರೇ? ಈಗ ನೀವು ಪತ್ನೀ-ಪುತ್ರರೊಂದಿಗೆ ಆನಂದದಿಂದ ಸಂಸಾರವನ್ನು ನಿರ್ವಹಿಸುತ್ತಿರುವಿರಿ. ಎಂದಾದರೂ ನಿಮಗೆ ನಮ್ಮಗಳ ಸ್ಮರಣೆಯುಂಟಾಗುವುದೇ? ॥7॥

ಮೂಲಮ್

(ಶ್ಲೋಕ-8)
ದಿಷ್ಟ್ಯಾ ಕಂಸೋ ಹತಃ ಪಾಪೋ ದಿಷ್ಟ್ಯಾ ಮುಕ್ತಾಃ ಸುಹೃಜ್ಜನಾಃ ।
ನಿಹತ್ಯ ನಿರ್ಜಿತ್ಯ ರಿಪೂನ್ ದಿಷ್ಟ್ಯಾ ದುರ್ಗಂ ಸಮಾಶ್ರಿತಾಃ ॥

ಅನುವಾದ

ಪಾಪಿಯಾದ ಕಂಸನನ್ನು ನೀವು ಸಂಹಾರಮಾಡಿದಿರಿ. ಇದು ದೊಡ್ಡ ಸೌಭಾಗ್ಯದ ಮಾತಾಗಿದೆ. ನಿಮ್ಮ ಸುಹೃದ್-ಸಂಬಂಧಿಗಳನ್ನು ಕಷ್ಟ-ಕಾರ್ಪಣ್ಯಗಳಿಂದ ಕಾಪಾಡಿದಿರಿ. ನೀವು ಇನ್ನೂ ಅನೇಕ ಶತ್ರುಗಳನ್ನು ಕೊಂದು ಹಾಕಿದಿರಿ, ಗೆದ್ದುಕೊಂಡಿರಿ ಇದು ಬಹುದೊಡ್ಡ ಆನಂದದ ವಿಷಯವೇ ಆಗಿದೆ. ಈಗ ನೀವುಗಳು ಅತ್ಯಂತ ಸುರಕ್ಷಿತವಾದ ಸಮುದ್ರ ಮಧ್ಯದ ದ್ವಾರಕೆಯಲ್ಲಿ ವಾಸಿಸುತ್ತಿರುವಿರಿ. ॥8॥

ಮೂಲಮ್

(ಶ್ಲೋಕ-9)
ಗೋಪ್ಯೋ ಹಸಂತ್ಯಃ ಪಪ್ರಚ್ಛೂ ರಾಮಸಂದರ್ಶನಾದೃತಾಃ ।
ಕಚ್ಚಿದಾಸ್ತೇ ಸುಖಂ ಕೃಷ್ಣಃ ಪುರಸೀಜನವಲ್ಲಭಃ ॥

ಅನುವಾದ

ಪರೀಕ್ಷಿತನೇ! ಭಗವಾನ್ ಬಲರಾಮನ ದರ್ಶನದಿಂದ, ಅವನ ಪ್ರೇಮಪೂರ್ಣ ನೋಟದಿಂದ ಗೋಪಿಯರು ಮಾರುಹೋದರು. ಅವರು ನಗುತ್ತಾ ಕೇಳುತ್ತಾರೆ - ಬಲರಾಮನೇ! ನಗರದ ನಾರಿಯರಿಗೆ ಪ್ರಾಣವಲ್ಲಭನಾದ ಶ್ರೀಕೃಷ್ಣನು ಕುಶಲಿಯಾಗಿರುವನಲ್ಲ? ॥9॥

ಮೂಲಮ್

(ಶ್ಲೋಕ-10)
ಕಚ್ಚಿತ್ಸ್ಮರತಿ ವಾ ಬಂಧೂನ್ಪಿತರಂ ಮಾತರಂ ಚ ಸಃ ।
ಅಪ್ಯಸೌ ಮಾತರಂ ದ್ರಷ್ಟುಂ ಸಕೃದಪ್ಯಾಗಮಿಷ್ಯತಿ ।
ಅಪಿ ವಾ ಸ್ಮರತೇಸ್ಮಾಕಮನುಸೇವಾಂ ಮಹಾಭುಜಃ ॥

ಅನುವಾದ

ಎಂದಾದರೂ ಅವನಿಗೆ ತನ್ನ ಬಂಧುಗಳ, ತಂದೆ-ತಾಯಿಯರ ನೆನಪು ಬರುತ್ತದೆಯೇ? ಅವನು ತನ್ನ ತಾಯಿಯ ದರ್ಶನಕ್ಕಾಗಿ ಒಮ್ಮೆಯಾದರೂ ಇಲ್ಲಿಗೆ ಬರಬಲ್ಲನೇ? ಮಹಾಬಾಹುವಾದ ಶ್ರೀಕೃಷ್ಣನು ಎಂದಾದರೂ ನಾವೆಲ್ಲರೂ ಮಾಡಿದ ಸೇವೆಯನ್ನು ಸ್ಮರಿಸುತ್ತಿರುವನೇ? ॥10॥

ಮೂಲಮ್

(ಶ್ಲೋಕ-11)
ಮಾತರಂ ಪಿತರಂ ಭ್ರಾತೃನ್ಪತೀನ್ ಪುತ್ರಾನ್ ಸ್ವಸೃರಪಿ ।
ಯದರ್ಥೇ ಜಹಿಮ ದಾಶಾರ್ಹ ದುಸ್ತ್ಯಜಾನ್ಸ್ವಜನಾನ್ ಪ್ರಭೋ ॥
(ಶ್ಲೋಕ-12)
ತಾ ನಃ ಸದ್ಯಃ ಪರಿತ್ಯಜ್ಯ ಗತಃ ಸಂಛಿನ್ನಸೌಹೃದಃ ।
ಕಥಂ ನು ತಾದೃಶಂ ಸೀಭಿರ್ನ ಶ್ರದ್ಧೀಯೇತ ಭಾಷಿತಮ್ ॥

ಅನುವಾದ

ಬಲಭದ್ರನೇ! ಸ್ವಜರನ್ನು ಪರಿತ್ಯಜಿಸುವುದು ಎಷ್ಟು ದುಸ್ತರವಾದುದು ಎಂಬುದು ನಿನಗೆ ತಿಳಿದೆ ಇದೆ. ಆದರೂ ನಾವು ನಮ್ಮ ಪ್ರಿಯತಮನಾದ ಶ್ರೀಕೃಷ್ಣನಿಗಾಗಿ ತಂದೆ-ತಾಯಿಯರನ್ನೂ, ಅಣ್ಣ ತಮ್ಮಂದಿರನ್ನೂ, ಪತಿ-ಪುತ್ರ ಮತ್ತು ಸಹೋದರಿಯರನ್ನು, ಪುತ್ರಿಯರನ್ನು ತ್ಯಜಿಸಿ ಬಿಟ್ಟೆವು. ಆದರೆ ಪ್ರಭೋ! ಅವನು ನಮ್ಮೆಲ್ಲರನ್ನೂ ಕ್ಷಣಮಾತ್ರದಲ್ಲಿ ಪರಿತ್ಯಜಿಸಿ, ನಮ್ಮ ಸೌಹಾರ್ದವನ್ನೂ, ಪ್ರೇಮ ಬಂಧನವನ್ನೂ ಕತ್ತರಿಸಿಹಾಕಿ ಹೊರಟೇ ಹೋದನು. ಆ ಸಮಯದಲ್ಲಿ ನಾವು ಬಯಸಿದ್ದರೆ ತಡೆಯುತ್ತಿದ್ದೆವು. ಆದರೆ ಅವನು ‘ನಾನು ನಿಮ್ಮ ಋಣಿಯಾಗಿದ್ದೇನೆ. ನಿಮ್ಮ ಉಪಕಾರವನ್ನು ಎಂದಿಗೂ ತೀರಿಸಲಾರೆನು. ಬೇಗನೇ ನಿಮ್ಮ ಬಳಿಗೆ ಬರುವೆನು’ ಎಂದು ಹೇಳಿದ ಬಿನ್ನಾಣದ ಮಾತುಗಳನ್ನು ಕೇಳಿದ ಯಾವ ಸ್ತ್ರೀಯು ತಾನೇ ವಿಶ್ವಾಸವನ್ನಿಡದೇ ಇದ್ದಾಳು? ॥ 11-12॥

ಮೂಲಮ್

(ಶ್ಲೋಕ-13)
ಕಥಂ ನು ಗೃಹ್ಣಂತ್ಯನವಸ್ಥಿತಾತ್ಮನೋ
ವಚಃ ಕೃತಘ್ನಸ್ಯ ಬುಧಾಃ ಪುರಸಿಯಃ ।
ಗೃಹ್ಣಂತಿ ವೈ ಚಿತ್ರಕಥಸ್ಯ ಸುಂದರ-
ಸ್ಮಿತಾವಲೋಕೋಚ್ಛ್ವಸಿತಸ್ಮರಾತುರಾಃ ॥

ಅನುವಾದ

ಆಗ ಒಬ್ಬ ಗೋಪಿಯು ಹೇಳಿದಳು - ಬಲರಾಮನೇ ನಾವೇನೋ ಹಳ್ಳಿಗರು. ಏನೂ ತಿಳಿಯದವರು. ಅವನ ಮೃದು ಮಧುರವಾದ ಮಾತನ್ನು ನಂಬಿ ಬಿಡಬಹುದು. ಆದರೆ ಚತುರರಾದ ನಗರದ ಸ್ತ್ರೀಯರು ಚಂಚಲನೂ, ಕೃತಘ್ನನೂ ಆದ ಶ್ರೀಕೃಷ್ಣನ ಮಾತುಗಳನ್ನು ಏಕೆ ನಂಬುತ್ತಾರೆ? ಅವರನ್ನು ಇವನು ಮೋಸಗೊಳಿಸಲಾರನು. ಮತ್ತೊಬ್ಬ ಗೋಪಿಯು ಹೇಳಿದಳು - ಸಖೀಯರೇ! ಯಾರಾದರೇನು? ನಮ್ಮ ಪ್ರಿಯತಮನು ಕಿರುನಗೆಯನ್ನು ಬೀರುತ್ತಾ, ಕಡೆಗಣ್ಣನೋಟದಿಂದ ನೋಡಿದಾಕ್ಷಣ ನಗರದ ಸ್ತ್ರೀಯರೂ ಕೂಡ ಪ್ರೇಮವಶರಾಗಿ ವ್ಯಾಕುಲರಾಗುವರು. ಅವರು ಖಂಡಿತವಾಗಿ ಅವನ ಮಾತನ್ನು ನಂಬಿ ತಮ್ಮನ್ನು ಅರ್ಪಿಸಿಕೊಳ್ಳುವರು. ॥13॥

ಮೂಲಮ್

(ಶ್ಲೋಕ-14)
ಕಿಂ ನಸ್ತತ್ಕಥಯಾ ಗೋಪ್ಯಃ ಕಥಾಃ ಕಥಯತಾಪರಾಃ ।
ಯಾತ್ಯಸ್ಮಾಭಿರ್ವಿನಾ ಕಾಲೋ ಯದಿ ತಸ್ಯ ತಥೈವ ನಃ ॥

ಅನುವಾದ

ಮೂರನೆಯ ಗೋಪಿಯು ಹೇಳಿದಳು - ಗೋಪಿಯರೇ! ಅವನ ಕಥೆಯಿಂದ ನಮಗೇನು ಆಗಬೇಕಾಗಿದೇ? ಬೇರೆ ಯಾವುದಾದರೂ ಪ್ರಸಂಗವಿದ್ದರೆ ಹೇಳಿರಿ. ನಾವಿಲ್ಲದೆ ಅವನು ಕಾಲವನ್ನು ಕಳೆಯಬಹುದಾದರೆ ಅವನಿಲ್ಲದೆ ನಾವೂ ಕಾಲವನ್ನು ಕಳೆಯೋಣ. ॥14॥

ಮೂಲಮ್

(ಶ್ಲೋಕ-15)
ಇತಿ ಪ್ರಹಸಿತಂ ಶೌರೇರ್ಜಲ್ಪಿತಂ ಚಾರುವೀಕ್ಷಿತಮ್ ।
ಗತಿಂ ಪ್ರೇಮಪರಿಷ್ವಂಗಂ ಸ್ಮರಂತ್ಯೋ ರುರುದುಃ ಸಿಯಃ ॥

ಅನುವಾದ

ಹೀಗೆ ಹೇಳುತ್ತಿದ್ದ ಗೋಪಿಯರು ಪ್ರಿಯತಮನಾದ ಶ್ರೀಕೃಷ್ಣನ ನಗು, ಸವಿ ನುಡಿಗಳು, ಚೇತೋಹಾರಿಯಾದ ಸುಂದರನೋಟ, ಅಂದವಾದ ನಡಿಗೆ, ಪ್ರೇಮಾಲಿಂಗನ ಇವುಗಳನ್ನು ಸ್ಮರಿಸಿಕೊಂಡು ಬಿಕ್ಕಿ-ಬಿಕ್ಕಿ ಅತ್ತುಬಿಟ್ಟರು. ॥15॥

ಮೂಲಮ್

(ಶ್ಲೋಕ-16)
ಸಂಕರ್ಷಣಸ್ತಾಃ ಕೃಷ್ಣಸ್ಯ ಸಂದೇಶೈರ್ಹೃದಯಂಗಮೈಃ ।
ಸಾಂತ್ವಯಾಮಾಸ ಭಗವಾನ್ ನಾನಾನುನಯಕೋವಿದಃ ॥

ಅನುವಾದ

ಪರೀಕ್ಷಿತನೇ! ಬಗೆ-ಬಗೆಯ ಸಾಂತ್ವನದ ಮಾತುಗಳನ್ನು ಹೇಳಿ ಸಮಾಧಾನಗೊಳಿಸುವುದರಲ್ಲಿ ಚತುರನಾದ ಬಲರಾಮನು ಶ್ರೀಕೃಷ್ಣನು ಕಳುಹಿಸಿದ್ದ ಹೃದಯಂಗಮವಾದ ಸಂದೇಶಗಳಿಂದ ಆ ಗೋಪಿಕೆಯರನ್ನು ಸಮಾಧಾನ ಪಡಿಸಿದನು. ॥16॥

ಮೂಲಮ್

(ಶ್ಲೋಕ-17)
ದ್ವೌ ಮಾಸೌ ತತ್ರ ಚಾವಾತ್ಸೀನ್ಮಧುಂ ಮಾಧವಮೇವ ಚ ।
ರಾಮಃ ಕ್ಷಪಾಸು ಭಗವಾನ್ ಗೋಪೀನಾಂ ರತಿಮಾವಹನ್ ॥

ಅನುವಾದ

ಹೀಗೆ ವಸಂತ ಋತುವಿನ ಚೈತ್ರ-ವೈಶಾಖ ಈ ತಿಂಗಳು ಪೂರ್ತಿಯಾಗಿ ಬಲರಾಮನು ರಾತ್ರಿಯಲ್ಲಿ ಗೋಪಿಯರಿಗೆ ಸಂತೋಷವನ್ನುಂಟುಮಾಡುತ್ತಾ ಗೋಕುಲದಲ್ಲಿದ್ದನು. ॥17॥

ಮೂಲಮ್

(ಶ್ಲೋಕ-18)
ಪೂರ್ಣಚಂದ್ರಕಲಾಮೃಷ್ಟೇ ಕೌಮುದೀಗಂಧವಾಯುನಾ ।
ಯಮುನೋಪವನೇ ರೇಮೇ ಸೇವಿತೇ ಸೀಗಣೈರ್ವೃತಃ ॥

ಅನುವಾದ

ಆಗ ಕುಮುದ ಪುಷ್ಪದ ಸುಗಂಧವನ್ನು ಹೊತ್ತು ತಂಗಾಳಿಯು ಮೆಲ್ಲ-ಮೆಲ್ಲನೆ ಬೀಸುತ್ತಿರಲಾಗಿ, ಪೂರ್ಣಚಂದ್ರನ ಬೆಳದಿಂಗಳಿನಿಂದ ಜಾಜ್ವಲ್ಯಮಾನಾಗಿ ಕಾಣುತ್ತಿದ್ದ ಯಮುನಾ ತಟದ ಉಪವನದಲ್ಲಿ ಭಗವಾನ್ ಬಲರಾಮನು ಗೋಪಿಯರೊಂದಿಗೆ ವಿಹರಿಸುತ್ತಿದ್ದನು. ॥18॥

ಮೂಲಮ್

(ಶ್ಲೋಕ-19)
ವರುಣಪ್ರೇಷಿತಾ ದೇವೀ ವಾರುಣೀ ವೃಕ್ಷಕೋಟರಾತ್ ।
ಪತಂತೀ ತದ್ವನಂ ಸರ್ವಂ ಸ್ವಗಂಧೇನಾಧ್ಯವಾಸಯತ್ ॥

ಅನುವಾದ

ವರುಣದೇವನು ಕಳಿಸಿದ ವಾರುಣಿಯು ಒಂದು ಮರದ ಪೊಟರೆಯಿಂದ ಹರಿದುಕೊಂಡು ಬರುತ್ತಾ ಆ ಉಪವನವೆಲ್ಲವನ್ನು ಸುಗಂಧದಿಂದ ಸುವಾಸಿತಗೊಳಿಸಿದಳು. ॥19॥

ಮೂಲಮ್

(ಶ್ಲೋಕ-20)
ತಂ ಗಂಧಂ ಮಧುಧಾರಾಯಾ ವಾಯುನೋಪಹೃತಂ ಬಲಃ ।
ಆಘ್ರಾಯೋಪಗತಸ್ತತ್ರ ಲಲನಾಭಿಃ ಸಮಂ ಪಪೌ ॥

ಅನುವಾದ

ವಾಯುವಿನಿಂದ ತರಲ್ಪಟ್ಟ ಆ ಮಧುಧಾರೆಯ ವಾಸನೆಯನ್ನು ಬಲರಾಮನು ಆಘ್ರಾಣಿಸಿ ವಾರುಣಿಮಧುವು ಸುರಿಯುತ್ತಿದ್ದಲ್ಲಿಗೆ ಹೋಗಿ ಗೋಪಿಯರೊಂದಿಗೆ ಅದನ್ನು ಪಾನಮಾಡಿದನು. ॥20॥

ಮೂಲಮ್

(ಶ್ಲೋಕ-21)
ಉಪಗೀಯಮಾನಚರಿತೋ ವನಿತಾಭಿರ್ಹಲಾಯುಧಃ ।
ವನೇಷು ವ್ಯಚರತ್ ಕ್ಷೀಬೋ ಮದವಿಹ್ವಲಲೋಚನಃ ॥

ಅನುವಾದ

ಆ ಸಮಯದಲ್ಲಿ ಗೋಪಿಯರು ಬಲರಾಮನ ಸುತ್ತಲೂ ನೆರೆದು ಅವನ ಚರಿತ್ರವನ್ನು ಹಾಡುತ್ತಿದ್ದರು. ಮಧುಪಾನದಿಂದ ಅಮಲೇರಿ ಬಂದು ಬಲರಾಮನು ಆ ವನದಲ್ಲಿ ಸಂಚರಿಸುತ್ತಿದ್ದನು. ಅವನ ಕಣ್ಣುಗಳು ಆನಂದಮದದಿಂದ ವಿಹ್ವಲವಾಗಿದ್ದವು. ॥21॥

ಮೂಲಮ್

(ಶ್ಲೋಕ-22)
ಸ್ರಗ್ವ್ಯೇಕಕುಂಡಲೋ ಮತ್ತೋ ವೈಜಯಂತ್ಯಾ ಚ ಮಾಲಯಾ ।
ಬಿಭ್ರತ್ ಸ್ಮಿತಮುಖಾಂಭೋಜಂ ಸ್ವೇದಪ್ರಾಲೇಯಭೂಷಿತಮ್ ॥

ಅನುವಾದ

ಮತ್ತನಾದ ಅವನು ಕೊರಳಲ್ಲಿ ವೈಜಯಂತಿ ಮಾಲೆಯನ್ನು ಧರಿಸಿದ್ದನು. ಅವನ ಒಂದೇ ಕಿವಿಯಲ್ಲಿ ಕುಂಡಲವಿತ್ತು. ಹಿಮದ ಹನಿಗಳಂತೆ ಕಾಣುತ್ತಿದ್ದ ಬೆವರಿನಿಂದ ವಿಭೂಷಿತನಾಗಿ, ಮಂದಹಾಸದಿಂದ ಕೂಡಿದ ಮುಖಕಮಲದಿಂದ ಬಲರಾಮನು ಅತ್ಯಂತ ಶೋಭಾಯಮಾನನಾಗಿ ಕಾಣುತ್ತಿದ್ದನು. ॥22॥

ಮೂಲಮ್

(ಶ್ಲೋಕ-23)
ಸ ಆಜುಹಾವ ಯಮುನಾಂ ಜಲಕ್ರೀಡಾರ್ಥಮೀಶ್ವರಃ ।
ನಿಜಂ ವಾಕ್ಯಮನಾದೃತ್ಯ ಮತ್ತ ಇತ್ಯಾಪಗಾಂ ಬಲಃ ।
ಅನಾಗತಾಂ ಹಲಾಗ್ರೇಣ ಕುಪಿತೋ ವಿಚಕರ್ಷ ಹ ॥ 23 ॥

ಅನುವಾದ

ಸರ್ವಶಕ್ತಿ ಸಂಪನ್ನನಾದ ಬಲರಾಮನು ಜಲ ಕ್ರೀಡೆಗಾಗಿ ಯಮುನೆಯನ್ನು ಆಹ್ವಾನಿಸಿದನು. ಆದರೆ ಯಮುನೆಯು ಇವನು ಮದಮತ್ತನಾಗಿರುವನೆಂದು ತಿಳಿದು ಅವನ ಆಜ್ಞೆಯನ್ನು ಉಲ್ಲಂಘಿಸಿ ಅವನ ಬಳಿಗೆ ಬರಲಿಲ್ಲ. ಆಗ ಬಲರಾಮನು ಕ್ರೋಧಗೊಂಡು ತನ್ನ ಹಲಾಯುಧದಿಂದ ಆಕೆಯನ್ನು ತನ್ನತ್ತ ಸೆಳೆದುಕೊಂಡನು. ॥23॥

ಮೂಲಮ್

(ಶ್ಲೋಕ-24)
ಪಾಪೇ ತ್ವಂ ಮಾಮವಜ್ಞಾಯ ಯನ್ನಾಯಾಸಿ ಮಯಾಹುತಾ ।
ನೇಷ್ಯೇ ತ್ವಾಂ ಲಾಂಗಲಾಗ್ರೇಣ ಶತಧಾ ಕಾಮಚಾರಿಣೀಮ್ ॥

ಅನುವಾದ

ಹಾಗೂ ಹೇಳಿದನು - ಪಾಪಿಷ್ಠಳೇ! ನಾನು ಜಲಕ್ರೀಡೆಗಾಗಿ ಕರೆದರೂ ನೀನು ನನ್ನ ಆಜ್ಞೆಯನ್ನು ತಿರಸ್ಕರಿಸಿ ನನ್ನ ಬಳಿಗೆ ಬರಲಿಲ್ಲ. ಸ್ವೆಚ್ಛಾಚಾರಿಣಿಯಾದ ನಿನ್ನನ್ನು ಈಗಲೇ ಹಲಾಯುಧದ ಅಗ್ರಭಾಗದಿಂದ ನೂರಾರು ತುಂಡುಗಳಾಗಿ ಕತ್ತರಿಸಿಬಿಡುತ್ತೇನೆ. ॥24॥

ಮೂಲಮ್

(ಶ್ಲೋಕ-25)
ಏವಂ ನಿರ್ಭರ್ತ್ಸಿತಾ ಭೀತಾ ಯಮುನಾ ಯದುನಂದನಮ್ ।
ಉವಾಚ ಚಕಿತಾ ವಾಚಂ ಪತಿತಾ ಪಾದಯೋರ್ನೃಪ ॥

ಅನುವಾದ

ಬಲರಾಮನು ಯಮುನೆಯನ್ನು ಹೀಗೆ ಗದರಿಸಿದಾಗ ಭಯಗೊಂಡು ಆಕೆಯು ಬಲಭದ್ರನ ಕಾಲಿಗೆ ಬಿದ್ದು ದೈನ್ಯದಿಂದ ಪ್ರಾರ್ಥಿಸಿದಳು. ॥25॥

ಮೂಲಮ್

(ಶ್ಲೋಕ-26)

ಮೂಲಮ್ (ವಾಚನಮ್)

ಯಮನೋವಾಚ

ಮೂಲಮ್

ರಾಮ ರಾಮ ಮಹಾಬಾಹೋ ನ ಜಾನೇ ತವ ವಿಕ್ರಮಮ್ ।
ಯಸ್ಯೈಕಾಂಶೇನ ವಿಧೃತಾ ಜಗತೀ ಜಗತಃ ಪತೇ ॥

ಅನುವಾದ

ಯಮುನೆಯು ಹೇಳಿದಳು — ಮಹಾಬಾಹುವಾದ ಬಲರಾಮನೇ! ನಾನು ನಿನ್ನ ಪರಾಕ್ರಮವನ್ನು ಮರೆತು ಹೋಗಿದ್ದೆ. ಜಗತ್ಪತಿಯೇ! ನಿನ್ನ ಒಂದಂಶನಾದ ಶೇಷನು ಇಡೀ ಜಗತ್ತನ್ನೇ ಧರಿಸಿದ್ದಾನೆ. ಹಾಗಿರುವಾಗ ಪೂರ್ಣಾಂಶನಾದ ನಿನ್ನ ಸಾಮರ್ಥ್ಯಕ್ಕೆ ಮಿತಿಯುಂಟೆ? ॥26॥

ಮೂಲಮ್

(ಶ್ಲೋಕ-27)
ಪರಂ ಭಾವಂ ಭಗವತೋ ಭಗವನ್ ಮಾಮಜಾನತೀಮ್ ।
ಮೋಕ್ತುಮರ್ಹಸಿ ವಿಶ್ವಾತ್ಮನ್ ಪ್ರಪನ್ನಾಂ ಭಕ್ತವತ್ಸಲ ॥

ಅನುವಾದ

ಭಗವಂತಾ! ನೀನು ಪರಮ ಐಶ್ವರ್ಯಶಾಲಿಯಾಗಿರುವೆ. ನಿನ್ನ ನಿಜವಾದ ಸ್ವರೂಪವನ್ನು ತಿಳಿಯದ ಕಾರಣದಿಂದಲೇ ನನ್ನಿಂದ ಇಂತಹ ಅಪರಾಧ ನಡೆದುಹೋಯಿತು. ಸರ್ವಸ್ವ ರೂಪನಾದ ಭಕ್ತವತ್ಸಲನೇ! ನಾನು ನಿನ್ನಲ್ಲಿ ಶರಣಾಗಿದ್ದೇನೆ. ನೀನು ನನ್ನ ತಪ್ಪನ್ನು ಮನ್ನಿಸಿ, ಕ್ಷಮಿಸಿ ನನ್ನನ್ನು ಬಿಟ್ಟು ಬಿಡು. ॥27॥

ಮೂಲಮ್

(ಶ್ಲೋಕ-28)
ತತೋ ವ್ಯಮುಂಚದ್ಯಮುನಾಂ ಯಾಚಿತೋ ಭಗವಾನ್ಬಲಃ ।
ವಿಜಗಾಹ ಜಲಂ ಸೀಭಿಃ ಕರೇಣುಭಿರಿವೇಭರಾಟ್ ॥

ಅನುವಾದ

ಯಮುನೆಯ ಪ್ರಾರ್ಥನೆಯನ್ನು ಮನ್ನಿಸಿ ಭಗವಾನ್ ಬಲರಾಮನು ಆಕೆಯನ್ನು ಕ್ಷಮಿಸಿ, ಗಜರಾಜನು ಹೆಣ್ಣಾನೆಗಳೊಂದಿಗೆ ಕ್ರೀಡಿಸುವಂತೆಯೇ ಅವನು ಗೋಪಿಕೆಯರೊಂದಿಗೆ ಜಲಕ್ರೀಡೆಯಾಡಿದನು. ॥28॥

ಮೂಲಮ್

(ಶ್ಲೋಕ-29)
ಕಾಮಂ ವಿಹೃತ್ಯ ಸಲಿಲಾದುತ್ತೀರ್ಣಾಯಾಸಿತಾಂಬರೇ ।
ಭೂಷಣಾನಿ ಮಹಾರ್ಹಾಣಿ ದದೌ ಕಾಂತಿಃ ಶುಭಾಂ ಸ್ರಜಮ್ ॥

ಅನುವಾದ

ಯಥೇಚ್ಛವಾಗಿ ಜಲಕ್ರೀಡೆಯಾಡಿ ಬಲರಾಮನು ನೀರಿನಿಂದ ಹೊರಗೆ ಬಂದಾಗ, ವರುಣನಿಂದ ಕಳುಹಲ್ಪಟ್ಟ ಕಾಂತೀದೇವಿಯು ಅವನಿಗೆ ನೀಲಾಂಬರವನ್ನು, ಬಹುಮೂಲ್ಯವಾದ ಆಭರಣಗಳನ್ನು ಸುಂದರವಾದ ಚಿನ್ನದ ಹಾರವನ್ನು ಅರ್ಪಿಸಿದಳು. ॥29॥

ಮೂಲಮ್

(ಶ್ಲೋಕ-30)
ವಸಿತ್ವಾ ವಾಸಸೀ ನೀಲೇ ಮಾಲಾಮಾಮುಚ್ಯ ಕಾಂಚನೀಮ್ ।
ರೇಜೇ ಸ್ವಲಂಕೃತೋ ಲಿಪ್ತೋ ಮಾಹೇಂದ್ರ ಇವ ವಾರಣಃ ॥

ಅನುವಾದ

ಬಲರಾಮನು ನೀಲಾಂಬರವನ್ನುಟ್ಟು ಬಂಗಾರದ ಮಾಲೆಯನ್ನು ತೊಟ್ಟುಕೊಂಡನು. ಅಂಗರಾಗವನ್ನು ಮೈಗೆ ಪೂಸಿಕೊಂಡು, ಸುಂದರ ಭೂಷಣಗಳಿಂದ ಅಲಂಕರಿಸಿಕೊಂಡು ಇಂದ್ರನ ಬಿಳಿಯಾದ ಐರಾವತದಂತೆ ಶೋಭಿಸಿದನು. ॥30॥

ಮೂಲಮ್

(ಶ್ಲೋಕ-31)
ಅದ್ಯಾಪಿ ದೃಶ್ಯತೇ ರಾಜನ್ ಯಮುನಾಕೃಷ್ಟವರ್ತ್ಮನಾ ।
ಬಲಸ್ಯಾನಂತವೀರ್ಯಸ್ಯ ವೀರ್ಯಂ ಸೂಚಯತೀವ ಹಿ ॥

ಅನುವಾದ

ಪರೀಕ್ಷಿತನೇ! ಅನಂತವೀರ್ಯನಾದ ಬಲರಾಮನ ವೀರ್ಯ-ಪರಾಕ್ರಮವನ್ನು ಸೂಚಿಸುತ್ತಿದೆಯೋ ಎಂಬಂತೆ ಈಗಲೂ ಯಮುನಾನದಿಯು ನೇಗಿಲಿನಿಂದ ಸೆಳೆಯಲ್ಪಟ್ಟ ಮಾರ್ಗದಲ್ಲೇ ಹರಿಯುತ್ತಿದೆ. ॥31॥

ಮೂಲಮ್

(ಶ್ಲೋಕ-32)
ಏವಂ ಸರ್ವಾ ನಿಶಾ ಯಾತಾ ಏಕೇವ ರಮತೋ ವ್ರಜೇ ।
ರಾಮಸ್ಯಾಕ್ಷಿಪ್ತಚಿತ್ತಸ್ಯ ಮಾಧುರ್ಯೈರ್ವ್ರಜಯೋಷಿತಾಮ್ ॥

ಅನುವಾದ

ವ್ರಜವಾಸಿನಿಯರಾದ ಗೋಪಿಯರ ಮಾಧುರ್ಯ, ಬೆಡಗು ಬಿನ್ನಾಣಗಳಿಂದ ಬಲರಾಮನ ಮನಸ್ಸು ಅಪಹರಿಸಲ್ಪಟ್ಟಿತ್ತು. ಹಲವಾರು ರಾತ್ರಿಗಳು ಒಂದೇ ರಾತ್ರಿಯಂತೆ ಕಳೆದು ಹೋದ ಸಮಯವು ಅವರ ಅರಿವಿಗೆ ಬರಲೇ ಇಲ್ಲ. ಹೀಗೆ ಬಲರಾಮನು ವ್ರಜದಲ್ಲಿ ವಿಹರಿಸುತ್ತಿದ್ದನು. ॥32॥

ಅನುವಾದ (ಸಮಾಪ್ತಿಃ)

ಅರವತ್ತೈದನೆಯ ಅಧ್ಯಾಯವು ಮುಗಿಯಿತು. ॥65॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ
ಬಲದೇವವಿಜಯೇ ಯಮುನಾಕರ್ಷಣಂ ನಾಮ ಪಂಚಷಷ್ಟಿತಮೋಽಧ್ಯಾಯಃ ॥65॥