[ಅರವತ್ತನಾಲ್ಕನೇಯ ಅಧ್ಯಾಯ]
ಭಾಗಸೂಚನಾ
ನೃಗರಾಜನ ಕಥೆ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏಕದೋಪವನಂ ರಾಜನ್ ಜಗ್ಮುರ್ಯದುಕುಮಾರಕಾಃ ।
ವಿಹರ್ತುಂ ಸಾಂಬಪ್ರದ್ಯುಮ್ನಚಾರುಭಾನುಗದಾದಯಃ ॥
ಅನುವಾದ
ಶ್ರೀಶುಕಮುನಿಗಳು ಹೇಳುತ್ತಾರೆ — ಪರೀಕ್ಷಿತ ಮಹಾರಾಜ! ಒಂದುದಿನ ಸಾಂಬ, ಪ್ರದ್ಯುಮ್ನ, ಚಾರುಭಾನು ಮತ್ತು ಗದ ಮೊದಲಾದ ಯದುವಂಶೀಯ ರಾಜಕುಮಾರರು ವಿಹಾರಾರ್ಥವಾಗಿ ಉಪವನಕ್ಕೆ ಹೋದರು. ॥1॥
(ಶ್ಲೋಕ-2)
ಮೂಲಮ್
ಕ್ರೀಡಿತ್ವಾ ಸುಚಿರಂ ತತ್ರ ವಿಚಿನ್ವಂತಃ ಪಿಪಾಸಿತಾಃ ।
ಜಲಂ ನಿರುದಕೇ ಕೂಪೇ ದದೃಶುಃ ಸತ್ತ್ವಮದ್ಭುತಮ್ ॥
ಅನುವಾದ
ಅವರು ಅಲ್ಲಿ ಬಹಳ ಹೊತ್ತಿನವರೆಗೆ ಆಟವಾಡುತ್ತಾ ಬಳಲಿ, ಬಾಯಾರಿಕೆ ಉಂಟಾಗಿ, ನೀರನ್ನು ಹುಡುಕಿಕೊಂಡು ಹೊರಟರು. ಅವರು ಒಂದು ಬಾವಿಯ ಬಳಿಗೆ ಹೋಗಿ ನೋಡಿದಾಗ ಅದರಲ್ಲಿ ನೀರಿರಲಿಲ್ಲ. ಒಂದು ದೊಡ್ಡದಾದ ವಿಚಿತ್ರವಾದ ಜೀವವು ಕಂಡುಬಂತು. ॥2॥
(ಶ್ಲೋಕ-3)
ಮೂಲಮ್
ಕೃಕಲಾಸಂ ಗಿರಿನಿಭಂ ವೀಕ್ಷ್ಯ ವಿಸ್ಮಿತಮಾನಸಾಃ ।
ತಸ್ಯ ಚೋದ್ಧರಣೇ ಯತ್ನಂ ಚಕ್ರುಸ್ತೇ ಕೃಪಯಾನ್ವಿತಾಃ ॥
ಅನುವಾದ
ಆ ಜೀವಿಯು ಪರ್ವತಾಕಾರದ ಒಂದು ಓತಿಕೇತವಾಗಿತ್ತು. ಅದನ್ನು ನೋಡಿ ಆಶ್ಚರ್ಯಚಕಿತರಾಗಿ ಮರುಕಗೊಂಡು ಅವರು ಆ ಪ್ರಾಣಿಯನ್ನು ಮೇಲಕ್ಕೆತ್ತಲು ಪ್ರಯತ್ನಿಸಿದರು. ॥3॥
(ಶ್ಲೋಕ-4)
ಮೂಲಮ್
ಚರ್ಮಜೈಸ್ತಾಂತವೈಃ ಪಾಶೈರ್ಬದ್ಧ್ವಾ ಪತಿತಮರ್ಭಕಾಃ ।
ನಾಶಕ್ನುವನ್ ಸಮುದ್ಧರ್ತುಂ ಕೃಷ್ಣಾಯಾಚಖ್ಯುರುತ್ಸುಕಾಃ ॥
ಅನುವಾದ
ರಾಜ ಕುಮಾರರು ತೊಗಲು ಮಿಣಿಗಳಿಂದ, ನೂಲು ಹಗ್ಗಗಳಿಂದ ಆ ಪ್ರಾಣಿಯನ್ನು ಕಟ್ಟಿ ಮೇಲಕ್ಕೆ ಎತ್ತಲಾರದೆ ಹೋದರು. ಆಗ ಕುತೂಹಲದಿಂದ ಅವರು ಈ ಆಶ್ಚರ್ಯಕರ ಸಂಗತಿಯನ್ನು ಶ್ರೀಕೃಷ್ಣನ ಬಳಿಗೆ ಬಂದು ನಿವೇದಿಸಿಕೊಂಡರು. ॥4॥
(ಶ್ಲೋಕ-5)
ಮೂಲಮ್
ತತ್ರಾಗತ್ಯಾರವಿಂದಾಕ್ಷೋ ಭಗವಾನ್ ವಿಶ್ವಭಾವನಃ ।
ವೀಕ್ಷ್ಯೋಜ್ಜಹಾರ ವಾಮೇನ ತಂ ಕರೇಣ ಸ ಲೀಲಯಾ ॥
ಅನುವಾದ
ವಿಶ್ವಭಾವನನಾದ, ಕಮಲಾಕ್ಷನಾದ ಶ್ರೀಕೃಷ್ಣನು ಬಾವಿಯ ಬಳಿಗೆ ಬಂದು ಆ ಮಹಾಪ್ರಾಣಿಯನ್ನು ಎಡಗೈಯಿಂದ ಲೀಲಾಜಾಲವಾಗಿ ಮೇಲಕ್ಕೆತ್ತಿದನು. ॥5॥
(ಶ್ಲೋಕ-6)
ಮೂಲಮ್
ಸ ಉತ್ತಮಶ್ಲೋಕಕರಾಭಿಮೃಷ್ಟೋ
ವಿಹಾಯ ಸದ್ಯಃ ಕೃಕಲಾಸರೂಪಮ್ ।
ಸಂತಪ್ತಚಾಮೀಕರಚಾರುವರ್ಣಃ
ಸ್ವರ್ಗ್ಯದ್ಭುತಾಲಂಕರಣಾಂಬರಸ್ರಕ್ ॥
ಅನುವಾದ
ಭಗವಾನ್ ಶ್ರೀಕೃಷ್ಣನ ಕರಕಮಲಗಳ ಸ್ವರ್ಶವಾಗುತ್ತಲೇ ಅದರ ಓತಿಕ್ಯಾತದ ರೂಪವು ಹೊರಟು ಹೋಗಿ ಒಬ್ಬ ಸ್ವರ್ಗೀಯ ದೇವತೆಯಂತೆ ರೂಪವಂತನಾದನು. ಅವನ ಶರೀರದ ಬಣ್ಣವು ಕಾದ ಚಿನ್ನದಂತೆ ಹೊಳೆಯುತ್ತಿತ್ತು. ಶರೀರದ ಮೇಲೆ ಅದ್ಭುತವಾದ ವಸ್ತ್ರಗಳು, ಆಭೂಷಣಗಳು ಮತ್ತು ಪುಷ್ಪಹಾರಗಳು ಶೋಭಿಸುತ್ತಿದ್ದವು. ॥6॥
(ಶ್ಲೋಕ-7)
ಮೂಲಮ್
ಪಪ್ರಚ್ಛ ವಿದ್ವಾನಪಿ ತನ್ನಿದಾನಂ
ಜನೇಷು ವಿಖ್ಯಾಪಯಿತುಂ ಮುಕುಂದಃ ।
ಕಸ್ತ್ವಂ ಮಹಾಭಾಗ ವರೇಣ್ಯರೂಪೋ
ದೇವೋತ್ತಮಂ ತ್ವಾಂ ಗಣಯಾಮಿ ನೂನಮ್ ॥
ಅನುವಾದ
ಅಂತಹ ದಿವ್ಯಪುರುಷನಿಗೆ ಓತಿಕ್ಯಾತ ಜನ್ಮವು ಏಕೆ ಬಂತು ಎಂಬುದು ಭಗವಾನ್ ಶ್ರೀಕೃಷ್ಣನಿಗೆ ತಿಳಿದಿತ್ತಾದರೂ ಸಮಸ್ತರಿಗೂ ಈ ವಿಷಯವು ತಿಳಿಯಲೆಂಬ ಆಶಯದಿಂದ ಶ್ರೀಕೃಷ್ಣನು ಆ ದಿವ್ಯ ಪುರುಷನನ್ನು ಪ್ರಶ್ನಿಸಿದನು - ಮಹಾಭಾಗನೇ! ನೀನು ಯಾರು? ನಿನ್ನ ರೂಪವಾದರೋ ಬಹಳ ಸುಂದರವಾಗಿದೆ. ನೀನು ಶ್ರೇಷ್ಠದೇವತೆಯಾಗಿರಬಹುದೆಂದು ನಾನು ಭಾವಿಸುತ್ತೇನೆ. ॥7॥
(ಶ್ಲೋಕ-8)
ಮೂಲಮ್
ದಶಾಮಿಮಾಂ ವಾ ಕತಮೇನ ಕರ್ಮಣಾ
ಸಂಪ್ರಾಪಿತೋಸ್ಯತದರ್ಹಃ ಸುಭದ್ರ ।
ಆತ್ಮಾನಮಾಖ್ಯಾಹಿ ವಿವಿತ್ಸತಾಂ ನೋ
ಯನ್ಮನ್ಯಸೇ ನಃ ಕ್ಷಮಮತ್ರ ವಕ್ತುಮ್ ॥
ಅನುವಾದ
ಕಲ್ಯಾಣ ಮೂರ್ತಿಯೇ! ನೀನು ಯಾವ ಕರ್ಮವಿಪಾಕದಿಂದ ಇಂತಹ ಜನ್ಮವನ್ನು ಹೊಂದಿದೆ? ವಾಸ್ತವವಾಗಿ ನೀನು ಇಂತಹ ಯೋನಿಯಲ್ಲಿ ಹುಟ್ಟಬಾರದಿತ್ತು. ನಿನ್ನ ಜನ್ಮ ವೃತ್ತಾಂತವನ್ನು ತಿಳಿಸಲು ನಿನಗೆ ಉಚಿತವೆನಿಸಿದರೆ ನಮಗೆ ಅದನ್ನು ತಿಳಿಸು. ನಾವು ಅದನ್ನು ಕೇಳಬಯಸುತ್ತೇವೆ. ॥8॥
(ಶ್ಲೋಕ-9)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತಿ ಸ್ಮ ರಾಜಾ ಸಂಪೃಷ್ಟಃ ಕೃಷ್ಣೇನಾನಂತಮೂರ್ತಿನಾ ।
ಮಾಧವಂ ಪ್ರಣಿಪತ್ಯಾಹ ಕಿರೀಟೇನಾರ್ಕವರ್ಚಸಾ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಅನಂತಮೂರ್ತಿ ಭಗವಾನ್ ಶ್ರೀಕೃಷ್ಣನು ನೃಗನಲ್ಲಿ (ಏಕೆಂದರೆ ಅವನು ಅದೇ ರೂಪದಲ್ಲಿ ಪ್ರಕಟನಾಗಿದ್ದನು) ಹೀಗೆ ಪ್ರಶ್ನಿಸಿದಾಗ ಸೂರ್ಯತೇಜಸ್ಸಿನಂತೆ ಜಗ-ಜಗಿಸುತ್ತಿರುವ ಕಿರೀಟದೊಡನೆ ಶ್ರೀಕೃಷ್ಣನಿಗೆ ನಮಸ್ಕರಿಸಿ ದೇವಸದೃಶನಾದ ಅವನು ಇಂತೆಂದನು. ॥9॥
(ಶ್ಲೋಕ-10)
ಮೂಲಮ್ (ವಾಚನಮ್)
ನೃಗ ಉವಾಚ
ಮೂಲಮ್
ನೃಗೋ ನಾಮ ನರೇಂದ್ರೋಹಮಿಕ್ಷ್ವಾಕುತನಯಃ ಪ್ರಭೋ ।
ದಾನಿಷ್ವಾಖ್ಯಾಯಮಾನೇಷು ಯದಿ ತೇ ಕರ್ಣಮಸ್ಪೃಶಮ್ ॥
ಅನುವಾದ
ನೃಗರಾಜನು ಹೇಳಿದನು — ಪ್ರಭೋ! ನಾನು ಇಕ್ಷಾಕು ಮಹಾರಾಜನ ಪುತ್ರನಾದ ನೃಗನಾಗಿರುವೆನು. ವಿಶ್ವವಿಖ್ಯಾತರಾದ ದಾನಿಗಳ ಹೆಸರುಗಳನ್ನು ಹೇಳುವಾಗ ನನ್ನ ಹೆಸರನ್ನು ನೀನು ಕೇಳಿರಬಹುದು. ॥10॥
(ಶ್ಲೋಕ-11)
ಮೂಲಮ್
ಕಿಂ ನು ತೇವಿದಿತಂ ನಾಥ ಸರ್ವಭೂತಾತ್ಮಸಾಕ್ಷಿಣಃ ।
ಕಾಲೇನಾವ್ಯಾಹತದೃಶೋ ವಕ್ಷ್ಯೇಥಾಪಿ ತವಾಜ್ಞಯಾ ॥
ಅನುವಾದ
ಪ್ರಭೋ! ಸಮಸ್ತ ಪ್ರಾಣಿಗಳಿಗೂ ಆತ್ಮಸಾಕ್ಷಿಯಾಗಿರುವ ನಿನಗೆ ತಿಳಿಯದಿರುವ ವಿಷಯವು ಯಾವುದು ತಾನೇ ಇರುವುದು? ನಿನ್ನ ಜ್ಞಾನಕ್ಕೆ ಕಾಲದ ತಡೆಯಿಲ್ಲ. ಆದರೂ ನಿನ್ನ ಆಜ್ಞಾನುಸಾರವಾಗಿ ನನ್ನ ವೃತ್ತಾಂತವನ್ನು ಹೇಳುತ್ತೇನೆ. ॥11॥
(ಶ್ಲೋಕ-12)
ಮೂಲಮ್
ಯಾವತ್ಯಃ ಸಿಕತಾ ಭೂಮೇರ್ಯಾವತ್ಯೋ ದಿವಿ ತಾರಕಾಃ ।
ಯಾವತ್ಯೋ ವರ್ಷಧಾರಾಶ್ಚ ತಾವತೀರದದಾಂ ಸ್ಮ ಗಾಃ ॥
ಅನುವಾದ
ಭಗವಂತಾ! ಪೃಥಿವಿಯಲ್ಲಿ ಇರುವ ಧೂಳಿನ ಕಣಗಳಷ್ಟು, ಆಕಾಶದಲ್ಲಿರುವ ತಾರೆಗಳಷ್ಟು, ಮಳೆಯಲ್ಲಿ ಬೀಳುವ ನೀರಧಾರೆಗಳಷ್ಟು ಸಂಖ್ಯೆಯ ಗೋವುಗಳನ್ನು ನಾನು ದಾನಮಾಡಿದ್ದೆನು. ॥12॥
(ಶ್ಲೋಕ-13)
ಮೂಲಮ್
ಪಯಸ್ವಿನೀಸ್ತರುಣೀಃ ಶೀಲರೂಪ-
ಗುಣೋಪಪನ್ನಾಃ ಕಪಿಲಾ ಹೇಮಶೃಂಗೀಃ ।
ನ್ಯಾಯಾರ್ಜಿತಾ ರೂಪ್ಯಖುರಾಃ ಸವತ್ಸಾ
ದುಕೂಲಮಾಲಾಭರಣಾ ದದಾವಹಮ್ ॥
ಅನುವಾದ
ಅವೆಲ್ಲ ಗೋವುಗಳೂ ಹಾಲು ಕರೆಯುತ್ತಿದ್ದು, ಎಳೆಪ್ರಾಯದ, ಶೀಲ, ರೂಪ ಗುಣಗಳಿಂದ ಸಂಪನ್ನವಾದ ಕಪಿಲಾ ಗೋವುಗಳಾಗಿದ್ದವು. ಅವೆಲ್ಲವನ್ನು ನಾನು ನ್ಯಾಯದಿಂದಲೇ ಸಂಪಾದಿಸಿದ್ದೆನು. ಎಲ್ಲವೂ ಕರುಗಳಿಂದ ಕೂಡಿದ್ದವು. ಅವುಗಳ ಕೊಂಬುಗಳಿಗೆ ಚಿನ್ನದ ಕಲಶಗಳಿದ್ದು, ಗೊರಸುಗಳಿಗೆ ಬೆಳ್ಳಿಯ ಕವಚಗಳಿರುತ್ತಿದ್ದವು. ಅವನ್ನು ವಸ್ತ್ರಾಭರಣಗಳಿಂದಲೂ, ಹೂವಿನ ಹಾರಗಳಿಂದಲೂ ಅಲಂಕರಿಸಲಾಗಿತ್ತು. ಅಂತಹ ಗೋವುಗಳನ್ನು ನಾನು ದಾನಮಾಡಿದ್ದೆನು. ॥13॥
(ಶ್ಲೋಕ-14)
ಮೂಲಮ್
ಸ್ವಲಂಕೃತೇಭ್ಯೋ ಗುಣಶೀಲವದ್ಭ್ಯಃ
ಸೀದತ್ಕುಟುಂಬೇಭ್ಯ ಋತವ್ರತೇಭ್ಯಃ
ತಪಃಶ್ರುತಬ್ರಹ್ಮವದಾನ್ಯಸದ್ಭ್ಯಃ
ಪ್ರಾದಾಂ ಯುವಭ್ಯೋ ದ್ವಿಜಪುಂಗವೇಭ್ಯಃ ॥
ಅನುವಾದ
ಭಗವಂತಾ! ಯುವಕರಾದ, ಸದ್ಗುಣಿಗಳಾದ, ಶೀಲಸಂಪನ್ನರಾದ, ಸಂಸಾರವನ್ನು ನಿರ್ವಹಿಸಲಾರದೆ ಕಷ್ಟಪಡುತ್ತಿದ್ದ, ಅದಾಂಭಿಕರಾದ, ತಪಸ್ವಿಗಳಾದ, ವೇದಾಧ್ಯಯನ ಶೀಲರಾದ, ಶಿಷ್ಯರಿಗೆ ವಿದ್ಯಾದಾನವನ್ನು ಮಾಡುತ್ತಿದ್ದ ಸತ್ಪುರುಷರಿಗೆ ಅವರನ್ನು ವಸ್ತ್ರಾಭರಣ ಮಾಲೆಗಳಿಂದ ಅಲಂಕರಿಸಿ ದಾನಮಾಡುತ್ತಿದ್ದೆನು. ॥14॥
(ಶ್ಲೋಕ-15)
ಮೂಲಮ್
ಗೋಭೂಹಿರಣ್ಯಾಯತನಾಶ್ವಹಸ್ತಿನಃ
ಕನ್ಯಾಃ ಸದಾಸೀಸ್ತಿಲರೂಪ್ಯಶಯ್ಯಾಃ ।
ವಾಸಾಂಸಿ ರತ್ನಾನಿ ಪರಿಚ್ಛದಾನ್ರಥಾ-
ನಿಷ್ಟಂ ಚ ಯಜ್ಞೈಶ್ಚರಿತಂ ಚ ಪೂರ್ತಮ್ ॥
ಅನುವಾದ
ಗೋದಾನ ಮಾತ್ರವಲ್ಲದೆ ಭೂಮಿ, ಚಿನ್ನ, ಮನೆ, ಕುದುರೆ, ಆನೆ, ಕನ್ಯೆ, ಎಳ್ಳು, ಬೆಳ್ಳಿ, ಹಾಸಿಗೆ, ವಸ್ತ್ರ, ರತ್ನಗಳಿಂದ ಸಮಲಂಕೃತವಾದ ರಥ - ಇವೇ ಮೊದಲಾದುವನ್ನು ಆಯಾಯ ಕಾಲಗಳಲ್ಲಿ ದಾನಮಾಡುತ್ತಿದ್ದೆನು. ಯಜ್ಞಯಾಗಾದಿಗಳನ್ನು, ಇಷ್ಟಾಪೂರ್ತ ಕರ್ಮಗಳನ್ನು ಮಾಡುತ್ತಿದ್ದೆನು. ॥15॥
(ಶ್ಲೋಕ-16)
ಮೂಲಮ್
ಕಸ್ಯಚಿದ್ವಜಮುಖ್ಯಸ್ಯ ಭ್ರಷ್ಟಾ ಗೌರ್ಮಮ ಗೋಧನೇ ।
ಸಂಪೃಕ್ತಾವಿದುಷಾ ಸಾ ಚ ಮಯಾ ದತ್ತಾ ದ್ವಿಜಾತಯೇ ॥
ಅನುವಾದ
ಒಂದು ದಿನ ಯಾರೋ ಬ್ರಾಹ್ಮಣ ಶ್ರೇಷ್ಠನೊಬ್ಬನ ಒಂದು ಹಸುವು ತಪ್ಪಿಸಿಕೊಂಡು ನನ್ನ ಹಸುಗಳಲ್ಲಿ ಬಂದು ಸೇರಿಕೊಂಡಿತು. ಇದನ್ನು ತಿಳಿಯದ ನಾನು ಆ ಗೋವನ್ನು ಮತ್ತೊಬ್ಬ ಬ್ರಾಹ್ಮಣನಿಗೆ ದಾನಮಾಡಿಬಿಟ್ಟೆ. ॥16॥
(ಶ್ಲೋಕ-17)
ಮೂಲಮ್
ತಾಂ ನೀಯಮಾನಾಂ ತತ್ಸ್ವಾಮೀ
ದೃಷ್ಟ್ವೋವಾಚ ಮಮೇತಿ ತಮ್ ।
ಮಮೇತಿ ಪ್ರತಿಗ್ರಾಹ್ಯಾಹ
ನೃಗೋ ಮೇ ದತ್ತವಾನಿತಿ ॥
ಅನುವಾದ
ನನ್ನಿಂದ ದಾನ ಪಡೆದ ಆ ಬ್ರಾಹ್ಮಣನು ಹಸುವನ್ನು ಹೊಡೆದುಕೊಂಡು ಹೋಗುತ್ತಿದ್ದಾಗ, ಆ ಗೋವಿನ ಹಿಂದಿನ ಒಡೆಯನು ‘ಇದು ನನ್ನ ಹಸು’ ಎಂದು ಹೇಳಿದನು. ದಾನಪಡೆದವನು - ಇದು ನನ್ನದೇ ಹಸು ಆಗಿದೆ. ಏಕೆಂದರೆ, ನೃಗರಾಜನು ನನಗೆ ಇದನ್ನು ದಾನಮಾಡಿರುವನು. ॥17॥
(ಶ್ಲೋಕ-18)
ಮೂಲಮ್
ವಿಪ್ರೌ ವಿವದಮಾನೌ ಮಾಮೂಚತುಃ ಸ್ವಾರ್ಥಸಾಧಕೌ ।
ಭವಾನ್ ದಾತಾಪಹರ್ತೇತಿ ತಚ್ಛ್ರುತ್ವಾ ಮೇಭವದ್ಭ್ರಮಃ ॥
ಅನುವಾದ
ಅವರು ಇಬ್ಬರೂ ಬ್ರಾಹ್ಮಣರು ಪರಸ್ಪರ ಜಗಳಾಡುತ್ತಾ ತಮ್ಮ-ತಮ್ಮ ವಾದವನ್ನು ಸಮರ್ಥಿಸಿಕೊಳ್ಳುತ್ತಾ ನನ್ನ ಬಳಿಗೆ ಬಂದರು. ನನ್ನಿಂದ ದಾನ ಪಡೆದ ಬ್ರಾಹ್ಮಣನು ತನ್ನ ವಾದವನ್ನು ಮುಂದಿಡುತ್ತಾ - ಈ ಹಸುವನ್ನು ಈಗಾಗಲೇ ನೀನು ದಾನ ಮಾಡಿರುವೆ. ಇದು ನನಗೆ ಸೇರಿದ್ದಾಗಿದೆ. ಇನ್ನೊಬ್ಬನು ಹೇಳಿದನು. - ಬ್ರಾಹ್ಮಣನು ಹೇಳುತ್ತಿರುವುದು ನಿಶ್ವಯವಾದರೆ ನೀನು ನನ್ನ ಹಸುವನ್ನು ಕದ್ದಿರುವೆ. ಭಗವಂತಾ! ಆ ಬ್ರಾಹ್ಮಣರಿಬ್ಬರ ಮಾತು ಕೇಳಿ ನನ್ನ ಚಿತ್ತವು ಭ್ರಮಿಸಿಹೋಯಿತು. ॥18॥
(ಶ್ಲೋಕ-19)
ಮೂಲಮ್
ಅನುನೀತಾವುಭೌ ವಿಪ್ರೌ ಧರ್ಮಕೃಚ್ಛ್ರಗತೇನ ವೈ ।
ಗವಾಂ ಲಕ್ಷಂ ಪ್ರಕೃಷ್ಟಾನಾಂ ದಾಸ್ಯಾಮ್ಯೇಷಾ ಪ್ರದೀಯತಾಮ್ ॥
ಅನುವಾದ
ನಾನು ಧರ್ಮಸಂಕಟದಲ್ಲಿ ಬಿದ್ದು ಅವರಿಬ್ಬರಲ್ಲಿ ತುಂಬಾ ಅನುನಯಗಳಿಂದ ಬೇಡಿಕೊಂಡೆನು - ‘ನಾನು ಇದರ ಬದಲಿಗೆ ಒಂದು ಲಕ್ಷ ಉತ್ತಮ ಗೋವುಗಳನ್ನು ಕೊಡುತ್ತೇನೆ. ತಾವು ಆ ಹಸುವನ್ನು ನನಗೆ ಕೊಟ್ಟು ಬಿಡಿರಿ. ॥19॥
(ಶ್ಲೋಕ-20)
ಮೂಲಮ್
ಭವಂತಾವನುಗೃಹ್ಣೀತಾಂ ಕಿಂಕರಸ್ಯಾವಿಜಾನತಃ ।
ಸಮುದ್ಧರತ ಮಾಂ ಕೃಚ್ಛ್ರಾತ್ಪತಂತಂ ನಿರಯೇಶುಚೌ ॥
ಅನುವಾದ
ನಾನು ನಿಮ್ಮ ಸೇವಕನಾಗಿದ್ದೇನೆ. ಅಜ್ಞಾನದಿಂದ ಈ ಅಪರಾಧವು ನನ್ನಿಂದ ನಡೆದು ಹೋಯಿತು. ನನ್ನ ಮೇಲೆ ಕೃಪೆದೋರಿ, ಈ ಘೋರ ಕಷ್ಟದಿಂದ ಮತ್ತು ನರಕದಿಂದ ನನ್ನನ್ನು ಕಾಪಾಡಿರಿ. ॥20॥
(ಶ್ಲೋಕ-21)
ಮೂಲಮ್
ನಾಹಂ ಪ್ರತೀಚ್ಛೇ ವೈ ರಾಜನ್ನಿತ್ಯುಕ್ತ್ವಾ ಸ್ವಾಮ್ಯಪಾಕ್ರಮತ್ ।
ನಾನ್ಯದ್ಗವಾಮಪ್ಯಯುತಮಿಚ್ಛಾಮೀತ್ಯಪರೋ ಯಯೌ ॥
ಅನುವಾದ
ರಾಜನೇ! ನಾನು ಇದರ ಬದಲಿಗೆ ಬೇರೆ ಏನನ್ನೂ ತೆಗೆದುಕೊಳ್ಳುವುದಿಲ್ಲ ಎಂದು ಹಸುವಿನ ಒಡೆಯ ಹೊರಟುಹೋದ. ದಾನ ಪಡೆದ ಬ್ರಾಹ್ಮಣನೂ - ‘ನೀನು ಇದರ ಬದಲಿಗೆ ಒಂದು ಲಕ್ಷವಲ್ಲ ಅದರ ಮೇಲೆ ಹತ್ತು ಸಾವಿರ ಗೋವುಗಳನ್ನು ಕೊಟ್ಟರೂ ನನಗೆ ಬೇಡ’ ಎಂದು ಹೇಳಿ ಅವನೂ ಹೋಗಿ ಬಿಟ್ಟನು. ॥21॥
(ಶ್ಲೋಕ-22)
ಮೂಲಮ್
ಏತಸ್ಮಿನ್ನಂತರೇ ಯಾಮ್ಯೈರ್ದೂತೈರ್ನೀತೋ ಯಮಕ್ಷಯಮ್ ।
ಯಮೇನ ಪೃಷ್ಟಸ್ತತ್ರಾಹಂ ದೇವದೇವ ಜಗತ್ಪತೇ ॥
ಅನುವಾದ
ದೇವಾಧಿದೇವ! ಜಗದೀಶ್ವರನೇ! ಇದಾದ ಬಳಿಕ ನನ್ನ ಆಯುಸ್ಸು ಮುಗಿದಾಗ ಯಮದೂತರು ಬಂದು ನನ್ನನ್ನು ಯಮಪುರಿಗೆ ಕೊಂಡು ಹೋದರು. ಅಲ್ಲಿ ಯಮನು ನನ್ನಲ್ಲಿ ಕೇಳಿದನು. ॥22॥
(ಶ್ಲೋಕ-23)
ಮೂಲಮ್
ಪೂರ್ವಂ ತ್ವಮಶುಭಂ ಭುಂಕ್ಷೇ ಉತಾಹೋ ನೃಪತೇ ಶುಭಮ್ ।
ನಾಂತಂ ದಾನಸ್ಯ ಧರ್ಮಸ್ಯ ಪಶ್ಯೇ ಲೋಕಸ್ಯ ಭಾಸ್ವತಃ ॥
ಅನುವಾದ
ರಾಜನೇ! ನೀನು ಮೊದಲಿಗೆ ನಿನ್ನ ಪಾಪದ ಫಲವನ್ನು ಅನುಭವಿಸುವೆಯಾ? ಅಥವಾ ಪುಣ್ಯದ್ದೋ? ನೀನು ಮಾಡಿದ ದಾನ ಧರ್ಮದ ಫಲವಾಗಿ ನಿನಗೆ ಅಸೀಮವಾದ ತೇಜೋಮಯವಾದ ಲೋಕಗಳು ಪ್ರಾಪ್ತವಾಗುವವು. ॥23॥
(ಶ್ಲೋಕ-24)
ಮೂಲಮ್
ಪೂರ್ವಂ ದೇವಾಶುಭಂ ಭುಂಜ ಇತಿ ಪ್ರಾಹ ಪತೇತಿ ಸಃ ।
ತಾವದದ್ರಾಕ್ಷಮಾತ್ಮಾನಂ ಕೃಕಲಾಸಂ ಪತನ್ಪ್ರಭೋ ॥
ಅನುವಾದ
ಭಗವಂತಾ! ಅದಕ್ಕೆ ನಾನು ಮೊದಲಿಗೆ ಪಾಪದ ಫಲವನ್ನು ಅನುಭವಿಸುವೆ ಎಂದು ಯಮರಾಜನಿಗೆ ಹೇಳಿದೆನು. ಯಮರಾಜನು - ನಿನ್ನ ಪಾಪದ ಫಲವಾಗಿ ‘ನೀನು ನೀಚ ಯೋನಿಯಲ್ಲಿ ಬೀಳು’ ಎಂದು ಹೇಳಿದೊಡನೆಯೇ ನಾನು ಓತಿಕ್ಯಾತನಾಗಿ ಈ ಬಾವಿಯಲ್ಲಿ ಬಿದ್ದೆನು. ॥24॥
(ಶ್ಲೋಕ-25)
ಮೂಲಮ್
ಬ್ರಹ್ಮಣ್ಯಸ್ಯ ವದಾನ್ಯಸ್ಯ ತವ ದಾಸಸ್ಯ ಕೇಶವ ।
ಸ್ಮೃತಿರ್ನಾದ್ಯಾಪಿ ವಿಧ್ವಸ್ತಾ ಭವತ್ಸಂದರ್ಶನಾರ್ಥಿನಃ ॥
ಅನುವಾದ
ಪ್ರಭೋ! ನಾನು ಬ್ರಾಹ್ಮಣರ ಸೇವಕನೂ, ಉದಾರದಾನಿಯೂ, ನಿನ್ನ ಭಕ್ತನೂ ಆಗಿದ್ದೆ. ನಿನ್ನ ದರ್ಶನವಾಗ ಬೇಕೆಂಬ ಉತ್ಕಟ ಅಭಿಲಾಷೆಯಿತ್ತು. ಹೀಗೆ ನಿನ್ನ ಕೃಪೆಯಿಂದ ನನ್ನ ಹಿಂದಿನ ಜನ್ಮದ ಸ್ಮೃತಿಯು ನಾಶವಾಗಲಿಲ್ಲ. ॥25॥
(ಶ್ಲೋಕ-26)
ಮೂಲಮ್
ಸ ತ್ವಂ ಕಥಂ ಮಮ ವಿಭೋಕ್ಷಿಪಥಃ ಪರಾತ್ಮಾ
ಯೋಗೇಶ್ವರೈಃ ಶ್ರುತಿದೃಶಾಮಲಹೃದ್ವಿಭಾವ್ಯಃ ।
ಸಾಕ್ಷಾದಧೋಕ್ಷಜ ಉರುವ್ಯಸನಾಂಧಬುದ್ಧೇಃ
ಸ್ಯಾನ್ಮೇನುದೃಶ್ಯ ಇಹ ಯಸ್ಯ ಭವಾಪವರ್ಗಃ ॥
ಅನುವಾದ
ಪ್ರಭುವೇ! ನೀನು ಪರಮಾತ್ಮನೇ ಆಗಿರುವೆ. ಶುದ್ಧ ಹೃದಯರಾದ ಮಹಾಯೋಗಿಗಳು ವೇದಾಂತಜ್ಞಾನವೆಂಬ ಕಣ್ಣಿನಿಂದ ತಮ್ಮ ಹೃದಯದಲ್ಲಿ ನಿನ್ನನ್ನು ಧ್ಯಾನಿಸುತ್ತಾ ಇರುತ್ತಾರೆ. ಇಂದ್ರಿಯಾತೀತನಾದ ಪರಮಾತ್ಮನೇ! ನೀನು ಸಾಕ್ಷಾತ್ತಾಗಿ ನನಗೆ ಹೇಗೆ ಕಾಣಿಸಿಕೊಂಡೆ? ನಾನಾದರೋ ಅನೇಕ ಪ್ರಕಾರದ ವ್ಯಸನಗಳಿಂದ ಕುರುಡನಾಗಿ ಬಿಟ್ಟಿದ್ದೆನು. ಸಂಸಾರಸಾಗರದಿಂದ ಬಿಡುಗಡೆಯ ಸಮಯವು ಸನ್ನಿಹಿತವಾದಾಗಲೇ ನಿನ್ನ ದರ್ಶನವಾಗುವುದು. ॥26॥
(ಶ್ಲೋಕ-27)
ಮೂಲಮ್
ದೇವದೇವ ಜಗನ್ನಾಥ ಗೋವಿಂದ ಪುರುಷೋತ್ತಮ ।
ನಾರಾಯಣ ಹೃಷೀಕೇಶ ಪುಣ್ಯಶ್ಲೋಕಾಚ್ಯುತಾವ್ಯಯ ॥
ಅನುವಾದ
ದೇವತೆಗಳ ಆರಾಧ್ಯನಾದ ದೇವಾದೇವನೇ! ಜಗನ್ನಾಥನೇ, ಗೋವಿಂದನೇ, ಪುರುಷೋತ್ತಮನೇ! ನಾರಾಯಣನೇ! ಹೃಷಿಕೇಶನೇ! ಪುಣ್ಯ ಶ್ಲೋಕನೇ! ಅಚ್ಯುತನೇ! ಅವ್ಯಯನೇ! ನೀನೇ ಸಮಸ್ತ ಇಂದ್ರಿಯಗಳಿಗೆ ಸ್ವಾಮಿಯಾಗಿರುವೆ. ॥27॥
(ಶ್ಲೋಕ-28)
ಮೂಲಮ್
ಅನುಜಾನೀಹಿ ಮಾಂ ಕೃಷ್ಣ ಯಾಂತಂ ದೇವಗತಿಂ ಪ್ರಭೋ ।
ಯತ್ರ ಕ್ವಾಪಿ ಸತಶ್ಚೇತೋ ಭೂಯಾನ್ಮೇ ತ್ವತ್ಪದಾಸ್ಪದಮ್ ॥
ಅನುವಾದ
ಶ್ರೀಕೃಷ್ಣನೇ! ನಾನು ಈಗ ದೇವತೆಗಳ ಲೋಕಕ್ಕೆ ಹೋಗುತ್ತಿದ್ದೇನೆ. ನೀನು ಅನುಮತಿಯನ್ನು ನೀಡು. ನಾನು ಎಲ್ಲಿಯೇ ಇದ್ದರೂ, ಯಾವುದೇ ಯೋನಿಯಲ್ಲಿ ಇದ್ದರೂ ನನ್ನ ಮನಸ್ಸು ಸದಾಕಾಲವೂ ನಿನ್ನ ಚರಣಕಮಲಗಳಲ್ಲೇ ಲೀನವಾಗುವಂತೆ ಅನುಗ್ರಹಿಸು. ॥28॥
(ಶ್ಲೋಕ-29)
ಮೂಲಮ್
ನಮಸ್ತೇ ಸರ್ವಭಾವಾಯ ಬ್ರಹ್ಮಣೇನಂತಶಕ್ತಯೇ ।
ಕೃಷ್ಣಾಯ ವಾಸುದೇವಾಯ ಯೋಗಾನಾಂ ಪತಯೇ ನಮಃ ॥
ಅನುವಾದ
ಸರ್ವಸ್ವರೂಪನೇ! ಬ್ರಹ್ಮಸ್ವರೂಪನೇ! ಅನಂತವಾದ ಶಕ್ತಿಯುಳ್ಳವನೇ! ನಿನಗೆ ನಮಸ್ಕರಿಸುತ್ತೇನೆ. ಸಚ್ಚಿದಾನಂದ ಸ್ವರೂಪನಾದ ಸರ್ವಾಂತರ್ಯಾಮಿ ವಾಸುದೇವ ಶ್ರೀಕೃಷ್ಣನೇ! ಸಮಸ್ತ ಯೋಗಿಗಳಿಗೂ ಸ್ವಾಮಿಯಾದ ಯೋಗೇಶ್ವರನೇ! ನಾನು ನಿನಗೆ ಪುನಃ ಪುನಃ ನಮಸ್ಕರಿಸುತ್ತೇನೆ. ॥29॥
(ಶ್ಲೋಕ-30)
ಮೂಲಮ್
ಇತ್ಯುಕ್ತ್ವಾ ತಂ ಪರಿಕ್ರಮ್ಯ ಪಾದೌ ಸ್ಪೃಷ್ಟ್ವಾ ಸ್ವವೌಲಿನಾ
ಅನುಜ್ಞಾತೋ ವಿಮಾನಾಗ್ರ್ಯಮಾರುಹತ್ ಪಶ್ಯತಾಂ ನೃಣಾಮ್ ॥
ಅನುವಾದ
ನೃಗರಾಜನು ಹೀಗೆ ಭಗವಂತನಿಗೆ ಪ್ರದಕ್ಷಿಣೆಮಾಡಿ ತನ್ನ ಕಿರೀಟದಿಂದ ಅವನ ಚರಣಗಳನ್ನು ಸ್ಪರ್ಶಿಸಿ ನಮಸ್ಕರಿಸಿದನು. ಮತ್ತೆ ಶ್ರೀಕೃಷ್ಣನಿಂದ ಅನುಮತಿಯನ್ನು ಪಡೆದು ಎಲ್ಲರೂ ನೋಡುತ್ತಿರುವಂತೆಯೇ ಶ್ರೇಷ್ಠವಾದ ವಿಮಾನದಲ್ಲಿ ಕುಳಿತು ದೇವಲೋಕಕ್ಕೆ ಹೊರಟು ಹೋದನು. ॥30॥
(ಶ್ಲೋಕ-31)
ಮೂಲಮ್
ಕೃಷ್ಣಃ ಪರಿಜನಂ ಪ್ರಾಹ ಭಗವಾನ್ ದೇವಕೀಸುತಃ ।
ಬ್ರಹ್ಮಣ್ಯದೇವೋ ಧರ್ಮಾತ್ಮಾ ರಾಜನ್ಯಾನನುಶಿಕ್ಷಯನ್ ॥
ಅನುವಾದ
ಪರೀಕ್ಷಿತನೇ! ನೃಗರಾಜನು ಹೊರಟುಹೋದ ಬಳಿಕ ಬ್ರಾಹ್ಮಣರಿಗೆ ಪರಮಪ್ರಿಯನಾದ, ಧರ್ಮಾತ್ಮನಾದ ದೇವಕಿನಂದನ ಭಗವಾನ್ ಶ್ರೀಕೃಷ್ಣನು ಕ್ಷತ್ರಿಯರಿಗೆ ಉಪದೇಶವನ್ನು ಕೊಡುವ ಸಲುವಾಗಿ ಅಲ್ಲಿ ನೆರೆದಿದ್ದ ತನ್ನ ಕುಟುಂಬ ವರ್ಗದ ಜನರಲ್ಲಿ ಹೇಳಿದನು. ॥31॥
(ಶ್ಲೋಕ-32)
ಮೂಲಮ್
ದುರ್ಜರಂ ಬತ ಬ್ರಹ್ಮಸ್ವಂ ಭುಕ್ತಮಗ್ನೇರ್ಮನಾಗಪಿ ।
ತೇಜೀಯಸೋಪಿ ಕಿಮುತ ರಾಜ್ಞಾಮೀಶ್ವರಮಾನಿನಾಮ್ ॥
ಅನುವಾದ
ಬಂಧುಗಳೇ! ಅಗ್ನಿಯಂತಹ ತೇಜಸ್ವಿಗಳೂ ಕೂಡ ಬ್ರಾಹ್ಮಣರ ಅತ್ಯಲ್ಪವಾದ ಧನವನ್ನೂ ಅರಗಿಸಿಕೊಳ್ಳಲಾರರು. ಹೀಗಿರುವಾಗ ತಾವೇ ಈಶ್ವರರೆಂದು ಭಾವಿಸಿಕೊಂಡಿರುವ ದುರಭಿಮಾನಿಗಳಾದ ರಾಜರೇ ಆಗಿದ್ದರೂ ಅವರ ವಿಷಯದಲ್ಲಿ ಹೇಳುವುದೇನಿದೆ? ॥32॥
(ಶ್ಲೋಕ-33)
ಮೂಲಮ್
ನಾಹಂ ಹಾಲಾಹಲಂ ಮನ್ಯೇ ವಿಷಂ ಯಸ್ಯ ಪ್ರತಿಕ್ರಿಯಾ ।
ಬ್ರಹ್ಮಸ್ವಂ ಹಿ ವಿಷಂ ಪ್ರೋಕ್ತಂ ನಾಸ್ಯ ಪ್ರತಿವಿಧಿರ್ಭುವಿ ॥
ಅನುವಾದ
ನಾನು ಹಾಲಾಹಲ ವಿಷವನ್ನೂ ವಿಷವೆಂದು ಭಾವಿಸುವುದಿಲ್ಲ. ಏಕೆಂದರೆ, ಅದರ ಚಿಕಿತ್ಸೆಯೂ ಆಗುತ್ತದೆ. ವಾಸ್ತವವಾಗಿ ಬ್ರಾಹ್ಮಣರ ಧನವೇ ಪರಮ ವಿಷವಾಗಿದೆ. ಅದನ್ನು ಅರಗಿಸಿಕೊಳ್ಳುವಂತಹ ಯಾವುದೇ ಔಷಧವೂ, ಉಪಾಯೂ ಭೂಮಿಯಲಿಲ್ಲ. ॥33॥
(ಶ್ಲೋಕ-34)
ಮೂಲಮ್
ಹಿನಸ್ತಿ ವಿಷಮತ್ತಾರಂ ವಹ್ನಿರದ್ಭಿಃ ಪ್ರಶಾಮ್ಯತಿ ।
ಕುಲಂ ಸಮೂಲಂ ದಹತಿ ಬ್ರಹ್ಮಸ್ವಾರಣಿಪಾವಕಃ ॥
ಅನುವಾದ
ಹಾಲಾಹಲ ವಿಷವು ಕೇವಲ ತಿಂದವನನ್ನೇ ಕೊಲ್ಲುತ್ತದೆ ಮತ್ತು ಬೆಂಕಿಯನ್ನು ನೀರಿನಿಂದ ಆರಿಸಲಾಗುತ್ತದೆ. ಆದರೆ ಬ್ರಾಹ್ಮಣ ಧನರೂಪವಾದ ಅರಣಿಯಿಂದ ಉಂಟಾದ ಅಗ್ನಿಯು ಇಡೀ ಕುಲವನ್ನೇ ಸಮೂಲವಾಗಿ ಸುಟ್ಟುಬಿಡುತ್ತದೆ. ॥34॥
(ಶ್ಲೋಕ-35)
ಮೂಲಮ್
ಬ್ರಹ್ಮಸ್ವಂ ದುರನುಜ್ಞಾತಂ ಭುಕ್ತಂ ಹಂತಿ ತ್ರಿಪೂರುಷಮ್ ।
ಪ್ರಸಹ್ಯತು ಬಲಾದ್ಭುಕ್ತಂ ದಶ ಪೂರ್ವಾನ್ ದಶಾಪರಾನ್ ॥
ಅನುವಾದ
ಬ್ರಾಹ್ಮಣನ ಅನುಮತಿಯನ್ನು ಪಡೆಯದೆ ಅವನ ಧನವನ್ನು ಉಪಭೋಗಿಸಿದವರು ಮಕ್ಕಳು, ಮೊಮ್ಮಕ್ಕಳು ಹೀಗೆ ಮೂರು ತಲೆಮಾರುಗಳು ವಿನಾಶಹೊಂದುವರು. ಇನ್ನು ಬಲಾತ್ಕಾರವಾಗಿ ಕಿತ್ತುಕೊಂಡು ಅದನ್ನು ಭೋಗಿಸಿದರೆ ಹಿಂದಿನ ಹತ್ತು ತಲೆಮಾರಿನವರು, ಮುಂದಿನ ಹತ್ತು ತಲೆಮಾರಿನವರು ನರಕಕ್ಕೆ ಹೋಗುತ್ತಾರೆ. ॥35॥
(ಶ್ಲೋಕ-36)
ಮೂಲಮ್
ರಾಜಾನೋ ರಾಜಲಕ್ಷ್ಮ್ಯಾಂಧಾ ನಾತ್ಮಪಾತಂ ವಿಚಕ್ಷತೇ ।
ನಿರಯಂ ಯೇಭಿಮನ್ಯಂತೇ ಬ್ರಹ್ಮಸ್ವಂ ಸಾಧು ಬಾಲಿಶಾಃ ॥
ಅನುವಾದ
ಮೂರ್ಖನಾದ ರಾಜನು ತನ್ನ ರಾಜ್ಯಲಕ್ಷ್ಮಿಯ ಮದದಿಂದ ಕುರುಡನಾಗಿ ಬ್ರಾಹ್ಮಣರ ಧನವನ್ನು ಕಬಳಿಸಲು ಬಯಸುವವನು ನರಕದ ದಾರಿಯನ್ನು ಕಂಡುಕೊಂಡನೆಂದೇ ತಿಳಿಯಬೇಕು. ಅವರು ಎಂತಹ ಅಧಃಪತನದ ಹೊಂಡದಲ್ಲಿ ಬೀಳಲಿದ್ದೇವೆ ಎಂಬುದನ್ನೂ ನೋಡುವುದಿಲ್ಲ. ॥36॥
(ಶ್ಲೋಕ-37)
ಮೂಲಮ್
ಗೃಹ್ಣಂತಿ ಯಾವತಃ ಪಾಂಸೂನ್ಕ್ರಂದತಾಮಶ್ರುಬಿಂದವಃ ।
ವಿಪ್ರಾಣಾಂ ಹೃತವೃತ್ತೀನಾಂ ವದಾನ್ಯಾನಾಂ ಕುಟುಂಬಿನಾಮ್ ॥
(ಶ್ಲೋಕ-38)
ಮೂಲಮ್
ರಾಜಾನೋ ರಾಜಕುಲ್ಯಾಶ್ಚ ತಾವತೋಬ್ದಾನ್ನಿರಂಕುಶಾಃ ।
ಕುಂಭೀಪಾಕೇಷು ಪಚ್ಯಂತೇ ಬ್ರಹ್ಮದಾಯಾಪಹಾರಿಣಃ ॥
ಅನುವಾದ
ಉದಾರಹೃದಯರಾದ, ಕುಟುಂಬಿಗಳಾದ ಬ್ರಾಹ್ಮಣರ ವೃತ್ತಿಯನ್ನು ಕಿತ್ತುಕೊಂಡಾಗ, ಆ ಬ್ರಾಹ್ಮಣರು ಅಳುವಾಗ ಕಣ್ಣಿನಿಂದ ಬಿದ್ದ ಕಣ್ಣೀರಿನಿಂದ ಭೂಮಿಯ ಎಷ್ಟು ಕಣಗಳು ನೆನೆಯುವುವೋ ಅಷ್ಟು ವರ್ಷಗಳಕಾಲ ಬ್ರಾಹ್ಮಣನ ಸ್ವತ್ತನ್ನು ಅಪಹರಿಸಿದ ಉಚ್ಛಂಖಲ ರಾಜನು ಮತ್ತು ಅವನ ವಂಶಜರು ಕುಂಭೀಪಾಕ ನರಕದಲ್ಲಿ ದುಃಖವನ್ನು ಅನುಭವಿಸಬೇಕಾಗುತ್ತದೆ. ॥37-38॥
(ಶ್ಲೋಕ-39)
ಮೂಲಮ್
ಸ್ವದತ್ತಾಂ ಪರದತ್ತಾಂ ವಾ ಬ್ರಹ್ಮವೃತ್ತಿಂ ಹರೇಚ್ಚ ಯಃ ।
ಷಷ್ಟಿವರ್ಷಸಹಸ್ರಾಣಿ ವಿಷ್ಠಾಯಾಂ ಜಾಯತೇ ಕೃಮಿಃ ॥
ಅನುವಾದ
ಬ್ರಾಹ್ಮಣರಿಗೆ ತಾನು ಕೊಟ್ಟದ್ದಾಗಲೀ, ಬೇರೆಯವರು ಕೊಟ್ಟದ್ದಾಗಲಿ ಜೀವನಾಧಾರವಾದ ವೃತ್ತಿಯನ್ನು (ಧನವನ್ನು) ಕಿತ್ತುಕೊಳ್ಳುವ ರಾಜನು ಅರವತ್ತು ಸಾವಿರ ವರ್ಷಗಳವರೆಗೆ ಮಲದ ಕ್ರಿಮಿಯಾಗುತ್ತಾನೆ. ॥39॥
(ಶ್ಲೋಕ-40)
ಮೂಲಮ್
ನ ಮೇ ಬ್ರಹ್ಮಧನಂ ಭೂಯಾದ್ಯದ್ಗೃದ್ಧ್ವಾಲ್ಪಾಯುಷೋ ನೃಪಾಃ ।
ಪರಾಜಿತಾಶ್ಚ್ಯುತಾ ರಾಜ್ಯಾದ್ ಭವಂತ್ಯುದ್ವೇಜಿನೋಹಯಃ ॥
ಅನುವಾದ
ಬ್ರಾಹ್ಮಣನ ಸ್ವತ್ತಿಗೆ ಆಸೆಪಡುವುದರಿಂದಲೇ ರಾಜನು ಅಲ್ಪಾಯುವಾಗುತ್ತಾನೆ. ಶತ್ರುಗಳಿಂದ ಪರಾಜಿತನಾಗುತ್ತಾನೆ. ರಾಜ್ಯಭ್ರಷ್ಟನಾಗುತ್ತಾನೆ. ಸತ್ತನಂತರವೂ ಬೇರೆಯವರಿಗೆ ಕಷ್ಟಕೊಡುವಂತಹ ಹಾವಾಗುತ್ತಾನೆ. ಆದುದರಿಂದ ಯಾವುದೇ ಕಾರಣದಿಂದಲೂ ನನಗೆ ಬ್ರಾಹ್ಮಣರ ಸ್ವತ್ತು ಬೇಡ. ॥40॥
(ಶ್ಲೋಕ-41)
ಮೂಲಮ್
ವಿಪ್ರಂ ಕೃತಾಗಸಮಪಿ ನೈವ ದ್ರುಹ್ಯತ ಮಾಮಕಾಃ ।
ಘ್ನಂತಂ ಬಹು ಶಪಂತಂ ವಾ ನಮಸ್ಕುರುತ ನಿತ್ಯಶಃ ॥
ಅನುವಾದ
ಆದ್ದರಿಂದ ನನ್ನ ಆತ್ಮೀಯರೇ! ಬ್ರಾಹ್ಮಣನು ಅಪರಾಧವನ್ನು ಮಾಡಿದರೂ ಅವನನ್ನು ದ್ವೇಷಿಸಬೇಡಿರಿ. ಅವನು ಹೊಡೆದರೂ, ಬಹಳವಾಗಿ ಬೈದರೂ, ಶಪಿಸಿದರೂ ನೀವು ಅವನಿಗೆ ನಮಸ್ಕಾರವನ್ನೇ ಮಾಡುತ್ತಾ ಇರಿ. ॥41॥
(ಶ್ಲೋಕ-42)
ಮೂಲಮ್
ಯಥಾಹಂ ಪ್ರಣಮೇ ವಿಪ್ರಾನನುಕಾಲಂ ಸಮಾಹಿತಃ ।
ತಥಾ ನಮತ ಯೂಯಂ ಚ ಯೋನ್ಯಥಾ ಮೇ ಸ ದಂಡಭಾಕ್ ॥
ಅನುವಾದ
ನಾನು ಬಹಳ ಎಚ್ಚರಿಕೆಯಿಂದ ಮೂರು ಹೊತ್ತು ಬ್ರಾಹ್ಮಣರನ್ನು ನಮಸ್ಕರಿಸುವಂತೆಯೇ ನೀವೂ ಮಾಡುತ್ತಾ ಇರಿ. ನನ್ನ ಈ ಆಜ್ಞೆಯನ್ನು ಉಲ್ಲಂಘಿಸುವವನನ್ನು ನಾನು ಕ್ಷಮಿಸದೆ, ಶಿಕ್ಷಿಸಿಬಿಡುತ್ತೇನೆ. ॥42॥
(ಶ್ಲೋಕ-43)
ಮೂಲಮ್
ಬ್ರಾಹ್ಮಣಾರ್ಥೋ ಹ್ಯಪಹೃತೋ ಹರ್ತಾರಂ ಪಾತಯತ್ಯಧಃ ।
ಅಜಾನಂತಮಪಿ ಹ್ಯೇನಂ ನೃಗಂ ಬ್ರಾಹ್ಮಣಗೌರಿವ ॥
ಅನುವಾದ
ಅಪಹರಿಸಲ್ಪಟ್ಟ ಬ್ರಾಹ್ಮಣನ ಐಶ್ವರ್ಯವು ಅಪಹಾರಿಯನ್ನು ಬ್ರಾಹ್ಮಣನ ಸ್ವತ್ತೆಂಬುದನ್ನು ತಿಳಿಯದೆ ಅವನು ಆ ಅಪರಾಧವನ್ನು ಮಾಡಿದ್ದರೂ ಬ್ರಾಹ್ಮಣನ ಹಸುವು ನೃಗಮಹಾರಾಜನನ್ನು ನರಕಕ್ಕೆ ತಳ್ಳಿದಂತೆ ಅಧಃ ಪತನಗೊಳಿಸುತ್ತದೆ. ॥43॥
(ಶ್ಲೋಕ-44)
ಮೂಲಮ್
ಏವಂ ವಿಶ್ರಾವ್ಯ ಭಗವಾನ್ ಮುಕುಂದೋ ದ್ವಾರಕೌಕಸಃ ।
ಪಾವನಃ ಸರ್ವಲೋಕಾನಾಂ ವಿವೇಶ ನಿಜಮಂದಿರಮ್ ॥
ಅನುವಾದ
ಪರೀಕ್ಷಿತನೇ! ಸಮಸ್ತ ಲೋಕಗಳನ್ನು ಪವಿತ್ರಗೊಳಿಸುವಂತಹ ಭಗವಾನ್ ಶ್ರೀಕೃಷ್ಣನು ದ್ವಾರಕಾವಾಸಿಗಳಿಗೆ ಹೀಗೆ ಉಪದೇಶಮಾಡಿ ತನ್ನ ಅರಮನೆಗೆ ಹೊರಟುಹೋದನು. ॥44॥
ಅನುವಾದ (ಸಮಾಪ್ತಿಃ)
ಅರವತ್ತನಾಲ್ಕನೆಯ ಅಧ್ಯಾಯವು ಮುಗಿಯಿತು. ॥64॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ ನೃಗೋಪಾಖ್ಯಾನಂ ನಾಮ ಚತುಃಷಷ್ಟಿತಮೋಽಧ್ಯಾಯಃ ॥64॥