[ಅರವತ್ತಮೂರನೇಯ ಅಧ್ಯಾಯ]
ಭಾಗಸೂಚನಾ
ಭಗವಾನ್ ಶ್ರೀಕೃಷ್ಣನೊಂದಿಗೆ ಬಾಣಾಸುರನ ಯುದ್ಧ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಅಪಶ್ಯತಾಂ ಚಾನಿರುದ್ಧಂ ತದ್ಬಂಧೂನಾಂ ಚ ಭಾರತ ।
ಚತ್ವಾರೋ ವಾರ್ಷಿಕಾ ಮಾಸಾ ವ್ಯತೀಯುರನುಶೋಚತಾಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತ ಮಹಾರಾಜ! ಮಳೆಗಾಲದ ನಾಲ್ಕು ತಿಂಗಳುಗಳು ಕಳೆದು ಹೋದುವು. ಅನಿರುದ್ಧನು ಎಲ್ಲಿಗೆ ಹೋದನು? ಎಲ್ಲಿ ಇರುವನೆಂಬುದೇ ಯಾರಿಗೂ ತಿಳಿಯಲಿಲ್ಲ. ಅವನ ಬಂಧುಗಳು ಈ ಘಟನೆಯಿಂದ ಶೋಕಾಕುಲರಾದರು. ॥1॥
(ಶ್ಲೋಕ-2)
ಮೂಲಮ್
ನಾರದಾತ್ತದುಪಾಕರ್ಣ್ಯ ವಾರ್ತಾಂ ಬದ್ಧಸ್ಯ ಕರ್ಮ ಚ ।
ಪ್ರಯಯುಃ ಶೋಣಿತಪುರಂ ವೃಷ್ಣಯಃ ಕೃಷ್ಣದೇವತಾಃ ॥
ಅನುವಾದ
ಒಂದು ದಿನ ನಾರದ ಮಹರ್ಷಿಗಳು ದ್ವಾರಕೆಗೆ ಬಂದು, ಯೋಗಿನಿಯು ಅನಿರುದ್ಧನನ್ನು ಶೋಣಿತಪುರಕ್ಕೆಕೊಂಡು ಹೋದುದು, ಬಾಣಾಸುರನ ಸೈನಿಕರನ್ನು ಧ್ವಂಸಮಾಡಿದುದು, ನಾಗಪಾಶದಿಂದ ಬಂಧಿತನಾದುದು ಎಲ್ಲ ವೃತ್ತಾಂತವನ್ನು ಶ್ರೀಕೃಷ್ಣನಲ್ಲಿ ತಿಳಿಸಿದರು. ಶ್ರೀಕೃಷ್ಣನನ್ನೇ ತಮ್ಮ ಆರಾಧ್ಯದೇವನೆಂದು ಭಾವಿಸಿದ್ದ ಯದುವಂಶೀವೀರರು ಶೋಣಿಪುರಕ್ಕೆ ಪ್ರಯಾಣ ಮಾಡಿದರು. ॥2॥
(ಶ್ಲೋಕ-3)
ಮೂಲಮ್
ಪ್ರದ್ಯುಮ್ನೋ ಯುಯುಧಾನಶ್ಚ ಗದಃ ಸಾಂಬೋಥ ಸಾರಣಃ ।
ನಂದೋಪನಂದಭದ್ರಾದ್ಯಾ ರಾಮಕೃಷ್ಣಾನುವರ್ತಿನಃ ॥
(ಶ್ಲೋಕ-4)
ಮೂಲಮ್
ಅಕ್ಷೌಹಿಣೀಭಿರ್ದ್ವಾದಶಭಿಃ ಸಮೇತಾಃ ಸರ್ವತೋದಿಶಮ್ ।
ರುರುಧುರ್ಬಾಣನಗರಂ ಸಮಂತಾತ್ ಸಾತ್ವತರ್ಷಭಾಃ ॥
ಅನುವಾದ
ಬಲರಾಮ-ಶ್ರೀಕೃಷ್ಣರ ಜೊತೆಗೆ ಅವರ ಅನುಯಾಯಿಗಳಾದ ಪ್ರದ್ಯುಮ್ನ, ಸಾತ್ಯಕಿ, ಗದ, ಸಾಂಬ, ಸಾರಣ, ನಂದ, ಉಪನಂದ ಮತ್ತು ಭದ್ರ ಮೊದಲಾದ ಯಾದವರ ಹನ್ನೆರಡು ಅಕ್ಷೌಹಿಣಿ ಸೈನ್ಯ ಸಮೇತರಾಗಿ ಶೋಣಿತಪುರಕ್ಕೆ ಹೋಗಿ, ಆ ಪಟ್ಟಣಕ್ಕೆ ನಾಲ್ಕು ಕಡೆಗಳಿಂದಲೂ ಮುತ್ತಿಗೆ ಹಾಕಿದರು. ॥3-4॥
(ಶ್ಲೋಕ-5)
ಮೂಲಮ್
ಭಜ್ಯಮಾನಪುರೋದ್ಯಾನಪ್ರಾಕಾರಾಟ್ಟಾಲಗೋಪುರಮ್ ।
ಪ್ರೇಕ್ಷಮಾಣೋ ರುಷಾವಿಷ್ಟಸ್ತುಲ್ಯಸೈನ್ಯೋಭಿನಿರ್ಯಯೌ ॥
ಅನುವಾದ
ಪಟ್ಟಣದ ಉದ್ಯಾನವನಗಳನ್ನೂ, ಕೋಟೆ-ಕೊತ್ತಲುಗಳನ್ನು, ಮಹಾದ್ವಾರಗಳನ್ನು ಯಾದವ ಸೈನಿಕರು ಧ್ವಂಸಮಾಡುತ್ತಿರುವುದನ್ನು ನೋಡಿ ಕುಪಿತನಾದ ಬಾಣಾಸುರನು ಅಷ್ಟೇ ಸಂಖ್ಯೆಯ ಹನ್ನೆರಡು ಅಕ್ಷೌಹಿಣಿ ಸೈನ್ಯದೊಂದಿಗೆ ಪಟ್ಟಣದಿಂದ ಹೊರಬಂದನು.॥5॥
(ಶ್ಲೋಕ-6)
ಮೂಲಮ್
ಬಾಣಾರ್ಥೇ ಭಗವಾನ್ ರುದ್ರಃ ಸಸುತೈಃ ಪ್ರಮಥೈರ್ವೃತಃ ।
ಆರುಹ್ಯ ನಂದಿವೃಷಭಂ ಯುಯುಧೇ ರಾಮಕೃಷ್ಣಯೋಃ ॥
ಅನುವಾದ
ಬಾಣಾಸುರನ ಸಹಾಯಾರ್ಥವಾಗಿ ಸಾಕ್ಷಾತ್ ರುದ್ರದೇವನೇ ವೃಷಭಾರೂಢನಾಗಿ ತನ್ನ ಮಗನಾದ ಕಾರ್ತಿಕೇಯನಿಂದಲೂ, ಪ್ರಮಥಗಣಗಳಿಂದಲೂ ಕೂಡಿಕೊಂಡು ರಣಭೂಮಿಗೆ ಬಂದು ಬಲರಾಮ-ಶ್ರೀಕೃಷ್ಣರೊಡನೆ ಯುದ್ಧದಲ್ಲಿ ತೊಡಗಿದನು. ॥6॥
(ಶ್ಲೋಕ-7)
ಮೂಲಮ್
ಆಸೀತ್ ಸುತುಮುಲಂ ಯುದ್ಧಮದ್ಭುತಂ ರೋಮಹರ್ಷಣಮ್ ।
ಕೃಷ್ಣಶಂಕರಯೋ ರಾಜನ್ ಪ್ರದ್ಯುಮ್ನಗುಹಯೋರಪಿ ॥
ಅನುವಾದ
ಪರೀಕ್ಷಿತನೇ! ಶಂಕರನಿಗೂ ಮತ್ತು ಶ್ರೀಕೃಷ್ಣನಿಗೂ, ಕಾರ್ತಿಕೇಯ ಮತ್ತು ಪ್ರದ್ಯುಮ್ನರಿಗೂ, ಅತ್ಯಂತ ಭಯಂಕರವೂ, ಅತ್ಯದ್ಭುತವೂ, ರೋಮಾಂಚಕಾರಿಯೂ ಆದ ಯುದ್ಧವು ನಡೆಯಿತು. ॥7॥
(ಶ್ಲೋಕ-8)
ಮೂಲಮ್
ಕುಂಭಾಂಡಕೂಪಕರ್ಣಾಭ್ಯಾಂ ಬಲೇನ ಸಹ ಸಂಯುಗಃ ।
ಸಾಂಬಸ್ಯ ಬಾಣಪುತ್ರೇಣ ಬಾಣೇನ ಸಹ ಸಾತ್ಯಕೇಃ ॥
ಅನುವಾದ
ಬಲರಾಮನೊಡನೆ ಕುಂಭಾಂಡ-ಕೂಪಕರ್ಣರು ಯುದ್ಧಮಾಡುತ್ತಿದ್ದರು. ಬಾಣಾಸುರನ ಮಗನೊಡನೆ ಸಾಂಬನೂ, ಬಾಣಾಸುರನೊಡನೆ ಸಾತ್ಯಕಿಯೂ ಯುದ್ಧಮಾಡುತ್ತಿದ್ದರು. ॥8॥
(ಶ್ಲೋಕ-9)
ಮೂಲಮ್
ಬ್ರಹ್ಮಾದಯಃ ಸುರಾಧೀಶಾ ಮುನಯಃ ಸಿದ್ಧಚಾರಣಾಃ ।
ಗಂಧರ್ವಾಪ್ಸರಸೋ ಯಕ್ಷಾ ವಿಮಾನೈರ್ದ್ರಷ್ಟುಮಾಗಮನ್ ॥
ಅನುವಾದ
ಬ್ರಹ್ಮನೇ ಮೊದಲಾದ ಸುರಾಧೀಶರೂ, ಋಷಿ-ಮುನಿಗಳೂ, ಸಿದ್ಧ-ಚಾರಣರೂ, ಗಂಧರ್ವಾಪ್ಸರೆಯರೂ, ಯಕ್ಷರೂ ಆ ಯುದ್ಧವನ್ನು ನೋಡುವುದಕ್ಕಾಗಿ ವಿಮಾನಗಳಲ್ಲಿ ಕುಳಿತು ಆಗಮಿಸಿದರು. ॥9॥
ಮೂಲಮ್
(ಶ್ಲೋಕ-10)
ಶಂಕರಾನುಚರಾನ್ ಶೌರಿರ್ಭೂತಪ್ರಮಥಗುಹ್ಯಕಾನ್ ।
ಡಾಕಿನೀರ್ಯಾತುಧಾನಾಂಶ್ಚ ವೇತಾಲಾನ್ಸವಿನಾಯಕಾನ್ ॥
(ಶ್ಲೋಕ-11)
ಮೂಲಮ್
ಪ್ರೇತಮಾತೃಪಿಶಾಚಾಂಶ್ಚ ಕೂಷ್ಮಾಂಡಾನ್ ಬ್ರಹ್ಮರಾಕ್ಷಸಾನ್ ।
ದ್ರಾವಯಾಮಾಸ ತೀಕ್ಷ್ಣಾಗ್ರೈಃ ಶರೈಃ ಶಾರ್ಙ್ಗಧನುಶ್ಚ್ಯುತೈಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ತನ್ನ ಶಾರ್ಙ್ಗ ಧನುಸ್ಸಿನಿಂದ ಹರಿತವಾದ ಬಾಣಗಳನ್ನು ಪ್ರಯೋಗಿಸುತ್ತಾ ಶಂಕರನ ಅನುಚರರಾದ ಭೂತ, ಪ್ರೇತ, ಪ್ರಮಥ, ಗುಹ್ಯಕ, ಡಾಕಿನೀ, ಯಾತುಧಾನ, ವೇತಾಲ, ವಿನಾಯಕ, ಪ್ರೇತಗಣ, ಮಾತೃ ಗಣ, ಪಿಶಾಚ, ಕೂಷ್ಮಾಂಡ ಮತ್ತು ಬ್ರಹ್ಮರಾಕ್ಷಸ - ಇವರೆಲ್ಲರನ್ನು ಓಡಿಸಿ ಬಿಟ್ಟನು. ॥10-11॥
(ಶ್ಲೋಕ-12)
ಮೂಲಮ್
ಪೃಥಗ್ವಿಧಾನಿ ಪ್ರಾಯುಂಕ್ತ ಪಿನಾಕ್ಯಸಾಣಿ ಶಾರ್ಙ್ಗೆಣೇ ।
ಪ್ರತ್ಯಸೈಃ ಶಮಯಾಮಾಸ ಶಾರ್ಙ್ಗಪಾಣಿರವಿಸ್ಮಿತಃ ॥
ಅನುವಾದ
ಪಿನಾಕಪಾಣಿಯಾದ ಶಂಕರನು ಭಗವಾನ್ ಶ್ರೀಕೃಷ್ಣನ ಮೇಲೆ ನಾನಾ ಪ್ರಕಾರದ ಅಸ್ತ್ರ-ಶಸ್ತ್ರಗಳನ್ನು ಪ್ರಯೋಗಿಸಿದನು. ಆದರೆ ಶ್ರೀಕೃಷ್ಣನು ಯಾವುದೇ ವಿಸ್ಮಯವಿಲ್ಲದೆ ಅವುಗಳನ್ನು ವಿರೋಧಿ, ಶಸ್ತ್ರಾಸ್ತ್ರಗಳಿಂದ ಉಪಶಮನ ಮಾಡಿದನು. ॥12॥
(ಶ್ಲೋಕ-13)
ಮೂಲಮ್
ಬ್ರಹ್ಮಾಸಸ್ಯ ಚ ಬ್ರಹ್ಮಾಸಂ ವಾಯವ್ಯಸ್ಯ ಚ ಪಾರ್ವತಮ್ ।
ಆಗ್ನೇಯಸ್ಯ ಚ ಪಾರ್ಜನ್ಯಂ ನೈಜಂ ಪಾಶುಪತಸ್ಯ ಚ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಬ್ರಹ್ಮಾಸ್ತ್ರದ ಉಪಶಮನಕ್ಕೆ ಬ್ರಹ್ಮಾಸ್ತ್ರವನ್ನೂ, ವಾಯುವ್ಯಾಸ್ತ್ರಕ್ಕೆ ಪರ್ವತಾಸ್ತ್ರವನ್ನು, ಆಗ್ನೇಯಾಸ್ತ್ರಕ್ಕೆ ಪರ್ಜನ್ಯಾಸ್ತ್ರವನ್ನು, ಪಾಶುಪತಾಸ್ತ್ರಕ್ಕಾಗಿ, ನಾರಾಯಣಸ್ತ್ರವನ್ನೂ ಪ್ರಯೋಗ ಮಾಡಿದನು. ॥13॥
(ಶ್ಲೋಕ-14)
ಮೂಲಮ್
ಮೋಹಯಿತ್ವಾ ತು ಗಿರಿಶಂ ಜೃಂಭಣಾಸೇಣ ಜೃಂಭಿತಮ್ ।
ಬಾಣಸ್ಯ ಪೃತನಾಂ ಶೌರಿರ್ಜಘಾನಾಸಿಗದೇಷುಭಿಃ ॥
ಅನುವಾದ
ಇದಾದ ನಂತರ ಭಗವಾನ್ ಶ್ರೀಕೃಷ್ಣನು ಜೃಂಭಣಾಸದಿಂದ ಮಹಾದೇವನನ್ನು ಮೋಹಿತಗೊಳಿಸಿದನು. ಅವನು ಯುದ್ಧದಿಂದ ನಿವೃತ್ತನಾಗಿ ಆಕಳಿಸುತ್ತಲೇ ಇರ ಬೇಕಾಯಿತು. ಆಗ ಶ್ರೀಕೃಷ್ಣನು ಕತ್ತಿ-ಗದೆ-ಬಾಣ ಇವೇ ಮುಂತಾದ ಆಯುಧಗಳಿಂದ ಬಾಣಾಸುರನ ಸೈನ್ಯವನ್ನು ಧ್ವಂಸಮಾಡಿ ಬಿಟ್ಟನು. ॥14॥
(ಶ್ಲೋಕ-15)
ಮೂಲಮ್
ಸ್ಕಂದಃ ಪ್ರದ್ಯುಮ್ನಬಾಣೌಘೈರರ್ದ್ಯಮಾನಃ ಸಮಂತತಃ ।
ಅಸೃಗ್ವಿಮುಂಚನ್ ಗಾತ್ರೇಭ್ಯಃ ಶಿಖಿನಾಪಾಕ್ರಮದ್ರಣಾತ್ ॥
ಅನುವಾದ
ಇತ್ತ ಪ್ರದ್ಯುಮ್ನನು ಬಾಣಗಳ ಮಳೆಯನ್ನು ಸುರಿಸಿ ಕಾರ್ತಿಕೇಯ ಸ್ವಾಮಿಯನ್ನು ಘಾಸಿಗೊಳಿಸಿದನು. ಅವನು ರಣರಂಗವನ್ನು ಬಿಟ್ಟು ನವಿಲಿನ ಮೇಲೆ ಕುಳಿತು ಓಡಿ ಹೋದನು. ॥15॥
(ಶ್ಲೋಕ-16)
ಮೂಲಮ್
ಕುಂಭಾಂಡಃ ಕೂಪಕರ್ಣಶ್ಚ ಪೇತತುರ್ಮುಸಲಾರ್ದಿತೌ ।
ದುದ್ರುವುಸ್ತದನೀಕಾನಿ ಹತನಾಥಾನಿ ಸರ್ವತಃ ॥
ಅನುವಾದ
ಬಲರಾಮನು ತನ್ನ ಹಲಾಯುಧದಿಂದ ಕುಂಭಾಂಡನನ್ನು ಮತ್ತು ಕೂಪಕರ್ಣನನ್ನು ಗಾಯಗೊಳಿಸಿ ರಣರಂಗದಲ್ಲಿ ಕೊಂದು ಕೆಡಹಿ ಹಾಕಿದನು. ಹೀಗೆ ತನ್ನ ಸೇನಾಪತಿಗಳು ಹತರಾಗುವುದನ್ನು ಕಂಡ ಬಾಣಸುರನ ಸಮಸ್ತ ಸೇನೆಯೂ ಚಲ್ಲಾ-ಪಿಲ್ಲಿಯಾಗಿ ಹೋಯಿತು. ॥16॥
(ಶ್ಲೋಕ-17)
ಮೂಲಮ್
ವಿಶೀರ್ಯಮಾಣಂ ಸ್ವಬಲಂ ದೃಷ್ಟ್ವಾ ಬಾಣೋತ್ಯಮರ್ಷಣಃ ।
ಕೃಷ್ಣಮಭ್ಯದ್ರವತ್ ಸಂಖ್ಯೇ ರಥೀ ಹಿತ್ವೈವ ಸಾತ್ಯಕಿಮ್ ॥
ಅನುವಾದ
ರಥಾರೂಢನಾದ ಬಾಣಸುರನು ಶ್ರೀಕೃಷ್ಣಾದಿಗಳ ಪ್ರಹಾರದಿಂದ ತನ್ನ ಸೇನೆಯು ಚೆಲ್ಲಾಪಿಲ್ಲಿಯಾಗಿ ನಾಶಹೊಂದಿರುವುದನ್ನು ನೋಡಿ ಅತ್ಯಂತ ಕ್ರೋಧಗೊಂಡನು. ಅವನು ಕೆರಳಿ ಸಾತ್ಯಕಿಯನ್ನು ಬಿಟ್ಟು ಭಗವಾನ್ ಶ್ರೀಕೃಷ್ಣನನ್ನು ಆಕ್ರಮಿಸಲು ಅವನೆಡೆಗೆ ಧಾವಿಸಿದನು. ॥17॥
(ಶ್ಲೋಕ-18)
ಮೂಲಮ್
ಧನೂಂಷ್ಯಾಕೃಷ್ಯ ಯುಗಪದ್ಬಾಣಃ ಪಂಚಶತಾನಿ ವೈ ।
ಏಕೈಕಸ್ಮಿನ್ ಶರೌ ದ್ವೌ ದ್ವೌ ಸಂದಧೇ ರಣದುರ್ಮದಃ ॥
ಅನುವಾದ
ಪರೀಕ್ಷಿತನೇ! ರಣೋನ್ಮತ್ತನಾದ ಬಾಣಾಸುರನು ತನ್ನ ಒಂದು ಸಾವಿರ ಕೈಗಳಿಂದ ಒಂದೇ ಬಾರಿಗೆ ಐದುನೂರು ಧನಸ್ಸುಗಳಿಂದ ಪ್ರತಿಯೊಬ್ಬ ಸೈನಿಕರ ಮೇಲೂ ಎರಡೆರಡು ಬಾಣಗಳನ್ನು ಪ್ರಯೋಗಿಸಿದನು. ॥18॥
(ಶ್ಲೋಕ-19)
ಮೂಲಮ್
ತಾನಿ ಚಿಚ್ಛೇದ ಭಗವಾನ್ ಧನೂಂಷಿ ಯುಗಪದ್ಧರಿಃ ।
ಸಾರಥಿಂ ರಥಮಶ್ವಾಂಶ್ಚ ಹತ್ವಾ ಶಂಖಮಪೂರಯತ್ ॥
ಅನುವಾದ
ಆದರೆ ಭಗವಾನ್ ಶ್ರೀಕೃಷ್ಣನು ಒಂದೇ ಬಾರಿಗೆ ಬಾಣಾಸುರನ ಐದುನೂರು ಧನಸ್ಸುಗಳನ್ನು ಕತ್ತರಿಸಿ, ಸಾರಥಿ, ರಥ, ಕುದುರೆಗಳನ್ನು ನೆಲ ಸಮಾಡಿದನು ಹಾಗೂ ಪಾಂಚಜನ್ಯ ಶಂಖವನ್ನೂದಿದನು. ॥19॥
(ಶ್ಲೋಕ-20)
ಮೂಲಮ್
ತನ್ಮಾತಾ ಕೋಟರಾ ನಾಮ ನಗ್ನಾ ಮುಕ್ತಶಿರೋರುಹಾ ।
ಪುರೋವತಸ್ಥೇ ಕೃಷ್ಣಸ್ಯ ಪುತ್ರಪ್ರಾಣರಿರಕ್ಷಯಾ ॥
ಅನುವಾದ
ಕೋಟರಾ ಎಂಬ ಹೆಸರಿನ ದೇವತಾ ಸ್ತ್ರೀಯು ಬಾಣಸುರನಿಗೆ ಧರ್ಮಮಾತೆಯಾಗಿದ್ದಳು. ಅವಳು ತನ್ನ ಉಪಾಸಕ ಪುತ್ರನ ಪ್ರಾಣಗಳ ರಕ್ಷಣೆಗಾಗಿ ಕೂದಲು ಕೆದರಿಕೊಂಡು ಬೆತ್ತಲೆಯಾಗಿ ಶ್ರೀಕೃಷ್ಣನ ಮುಂದೆ ಬಂದು ನಿಂತಳು. ॥20॥
(ಶ್ಲೋಕ-21)
ಮೂಲಮ್
ತತಸ್ತಿರ್ಯಙ್ಮುಖೋ ನಗ್ನಾಮನಿರೀಕ್ಷನ್ಗದಾಗ್ರಜಃ ।
ಬಾಣಶ್ಚ ತಾವದ್ವಿರಥಶ್ಛಿನ್ನಧನ್ವಾವಿಶತ್ಪುರಮ್ ॥
ಅನುವಾದ
ಆಗ ಗದಾಗ್ರಜನಾದ ಶ್ರೀಕೃಷ್ಣ ಬೆತ್ತಲೆಯಾದ ಆಕೆಯನ್ನು ನೋಡಬಾರದೆಂದು ಮುಖತಿರುಗಿಸಿ ನಿಂತನು. ಅಷ್ಟರಲ್ಲಿ ಧನಸ್ಸುಗಳನ್ನೂ, ರಥವನ್ನೂ, ಕಳೆದುಕೊಂಡು ಬಾಣಾಸುರನು ಪಟ್ಟಣಕ್ಕೆ ಹಿಂದಿರುಗಿದನು. ॥21॥
(ಶ್ಲೋಕ-22)
ಮೂಲಮ್
ವಿದ್ರಾವಿತೇ ಭೂತಗಣೇ ಜ್ವರಸ್ತು ತ್ರಿಶಿರಾಸಿಪಾತ್ ।
ಅಭ್ಯಧಾವತ ದಾಶಾರ್ಹಂ ದಹನ್ನಿವ ದಿಶೋ ದಶ ॥
ಅನುವಾದ
ಇತ್ತಲಾಗಿ ಶಂಕರನ ಭೂತಗಣಗಳೆಲ್ಲವೂ ಪಲಾಯನ ಮಾಡಿದ ನಂತರ ಮೂರು ತಲೆಗಳನ್ನೂ, ಮೂರು ಕಾಲುಗಳನ್ನು ಹೊಂದಿದ್ದು ಮಾಹೇಶ್ವರ ಜ್ವರವು ಹತ್ತು ದಿಕ್ಕುಗಳನ್ನು ದಹಿಸಿ ಬಿಡುವುದೋ ಎಂಬಂತೆ ಆರ್ಭಟಿಸುತ್ತಾ ಭಗವಾನ್ ಶ್ರೀಕೃಷ್ಣನ ಬಳಿಗೆ ಬಂದಿತು. ॥22॥
(ಶ್ಲೋಕ-23)
ಮೂಲಮ್
ಅಥ ನಾರಾಯಣೋ ದೇವಸ್ತಂ ದೃಷ್ಟ್ವಾ ವ್ಯಸೃಜಜ್ಜ್ವರಮ್ ।
ಮಾಹೇಶ್ವರೋ ವೈಷ್ಣವಶ್ಚ ಯುಯುಧಾತೇ ಜ್ವರಾವುಭೌ ॥
ಅನುವಾದ
ಭಗವಾನ್ ಶ್ರೀಕೃಷ್ಣನು ತನ್ನ ಕಡೆಗೆ ಧಾವಿಸಿ ಬರುತ್ತಿರುವ ಮಾಹೇಶ್ವರ ಜ್ವರವನ್ನು ನೋಡಿ ಅದನ್ನು ಎದುರಿಸಲಿಕ್ಕಾಗಿ ತನ್ನ ವೈಷ್ಣವಜ್ವರವನ್ನು ಬಿಟ್ಟನು. ಈಗ ವೈಷ್ಣವಜ್ವರ ಮತ್ತು ಮಾಹೇಶ್ವರ ಜ್ವರಗಳು ಪರಸ್ಪರ ಕಾದಾಡ ತೊಡಗಿದವು. ॥23॥
(ಶ್ಲೋಕ-24)
ಮೂಲಮ್
ಮಾಹೇಶ್ವರಃ ಸಮಾಕ್ರಂದನ್ ವೈಷ್ಣವೇನ ಬಲಾರ್ದಿತಃ ।
ಅಲಬ್ಧ್ವಾಭಯಮನ್ಯತ್ರ ಭೀತೋ ಮಾಹೇಶ್ವರೋ ಜ್ವರಃ ।
ಶರಣಾರ್ಥೀ ಹೃಷೀಕೇಶಂ ತುಷ್ಟಾವ ಪ್ರಯತಾಂಜಲಿಃ ॥
ಅನುವಾದ
ಕೊನೆಗೆ ವೈಷ್ಣವ ಜ್ವರದ ತೇಜಸ್ಸಿನಿಂದ ಮಾಹೇಶ್ವರ ಜ್ವರವು ಪೀಡಿಸಲ್ಪಟ್ಟು ಕೂಗಿಕೊಳ್ಳಲು ಪ್ರಾರಂಭಿಸಿತು. ಭಯಗೊಂಡಿದ್ದ ಅದಕ್ಕೆ ಎಲ್ಲಿಯೂ ಅಭಯ ದೊರೆಯಲಿಲ್ಲ. ಆಗ ಅದು ಕೈ ಜೋಡಿಸಿಕೊಂಡು ಶ್ರೀಕೃಷ್ಣನನ್ನೇ ಶರಣು ಹೊಂದಿ ಪ್ರಾರ್ಥಿಸಿತು. ॥24॥
(ಶ್ಲೋಕ-25)
ಮೂಲಮ್ (ವಾಚನಮ್)
ಜ್ವರ ಉವಾಚ
ಮೂಲಮ್
ನಮಾಮಿ ತ್ವಾನಂತಶಕ್ತಿಂ ಪರೇಶಂ
ಸರ್ವಾತ್ಮಾನಂ ಕೇವಲಂ ಜ್ಞಪ್ತಿಮಾತ್ರಮ್ ।
ವಿಶ್ವೋತ್ಪತ್ತಿಸ್ಥಾನಸಂರೋಧಹೇತುಂ
ಯತ್ತದ್ಬ್ರಹ್ಮ ಬ್ರಹ್ಮಲಿಂಗಂ ಪ್ರಶಾಂತಮ್ ॥
ಅನುವಾದ
ಮಾಹೇಶ್ವರ ಜ್ವರವು ಹೇಳಿತು — ಪ್ರಭುವೇ! ನಿನ್ನ ಶಕ್ತಿಯು ಅನಂತವಾಗಿದೆ. ನೀನು ಬ್ರಹ್ಮೇಶ್ವರರಿಗಿಂತಲೂ ಶ್ರೇಷ್ಠನಾದ ಈಶ್ವರನಾಗಿರುವೆ. ಸಮಸ್ತರ ಆತ್ಮನೂ ನೀನೇ. ಅದ್ವಿತೀಯನೂ ಕೇವಲ ಜ್ಞಾನಸ್ವರೂಪನೂ ನೀನೇ ಆಗಿರುವೆ. ಪ್ರಪಂಚದ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣನು ನೀನೇ. ಶ್ರುತಿಗಳ ಮೂಲಕ ನಿನ್ನನ್ನು ಸ್ತುತಿಸಿ, ಅನುಮಾನಿಸಲಾಗುತ್ತದೆ. ಸಮಸ್ತ ವಿಕಾರಗಳಿಂದಲೂ ರಹಿತವಾದ ಶುದ್ಧಬ್ರಹ್ಮವೂ ನೀನೇ ಆಗಿರುವೆ. ಅಂತಹ ನಿನಗೆ ನಾನು ನಮಸ್ಕರಿಸುತ್ತೇನೆ. ॥25॥
(ಶ್ಲೋಕ-26)
ಮೂಲಮ್
ಕಾಲೋ ದೈವಂ ಕರ್ಮ ಜೀವಃ ಸ್ವಭಾವೋ
ದ್ರವ್ಯಂ ಕ್ಷೇತ್ರಂ ಪ್ರಾಣ ಆತ್ಮಾ ವಿಕಾರಃ ।
ತತ್ಸಂಘಾತೋ ಬೀಜರೋಹಪ್ರವಾಹ-
ಸ್ತ್ವನ್ಮಾಯೈಷಾ ತನ್ನಿಷೇಧಂ ಪ್ರಪದ್ಯೇ ॥
ಅನುವಾದ
ಕಾಲ, ಅದೃಷ್ಟ, ಕರ್ಮ, ಜೀವ, ಸ್ವಭಾವ, ಸೂಕ್ಷ್ಮಭೂತ, ಶರೀರ, ಸೂತ್ರಾತ್ಮಾ ಪ್ರಾಣ, ಅಹಂಕಾರ, ಏಕಾದಶ ಇಂದ್ರಿಯಗಳು ಮತ್ತು ಪಂಚಭೂತಗಳು ಇವುಗಳ ಸಂಘಾತದಿಂದ ಉಂಟಾದ ಲಿಂಗಶರೀರ, ಬೀಜಾಂಕುರ ನ್ಯಾಯದಂತೆ ಅದರ ಕರ್ಮ ಮತ್ತು ಕರ್ಮದಿಂದ ಪುನಃ ಲಿಂಗಶರೀರದ ಉತ್ಪತ್ತಿ - ಇವೆಲ್ಲವೂ ನಿನ್ನ ಮಾಯೆಯೇ ಆಗಿದೆ. ಈ ಮಾಯೆಗೆ ದೂರನಾಗಿ ಅದನ್ನು ನಿವಾರಣೆ ಮಾಡುವ ನಿನಗೆ ಶರಣಾಗಿದ್ದೇನೆ. ॥26॥
(ಶ್ಲೋಕ-27)
ಮೂಲಮ್
ನಾನಾಭಾವೈರ್ಲೀಲಯೈವೋಪಪನ್ನೈ-
ರ್ದೇವಾನ್ಸಾಧೂನ್ ಲೋಕಸೇತೂನ್ಬಿಭರ್ಷಿ ।
ಹಂಸ್ಯುನ್ಮಾರ್ಗಾನ್ ಹಿಂಸಯಾ ವರ್ತಮಾನಾನ್
ಜನ್ಮೈತತ್ತೇ ಭಾರಹಾರಾಯ ಭೂಮೇಃ ॥
ಅನುವಾದ
ಪ್ರಭೋ! ನೀನು ಲೀಲೆಯಿಂದಲೇ ಅನೇಕ ರೂಪಗಳನ್ನು ಧರಿಸಿ, ದೇವತೆಗಳ, ಸಾಧುಗಳ ಮತ್ತು ಲೋಕ ಮರ್ಯಾದೆಯ ಪಾಲನೆ-ಪೋಷಣೆ ಮಾಡುತ್ತಿರುವೆ. ಲೋಕಕಂಟಕರಾದ ದುರ್ಮಾರ್ಗಿಗಳನ್ನು ಸಂಹರಿಸುವೆ. ಆದುದರಿಂದ ನಿನ್ನ ಅವತಾರಗಳೆಲ್ಲವೂ ಭೂಭಾರಹರಣಕ್ಕಾಗಿ ಆಗಿವೆ. ॥27॥
(ಶ್ಲೋಕ-28)
ಮೂಲಮ್
ತಪ್ತೋಹಂ ತೇ ತೇಜಸಾ ದುಸ್ಸಹೇನ
ಶಾಂತೋಗ್ರೇಣಾತ್ಯುಲ್ಬಣೇನ ಜ್ವರೇಣ ।
ತಾವತ್ತಾಪೋ ದೇಹಿನಾಂ ತೇಂಘ್ರಿಮೂಲಂ
ನೋ ಸೇವೇರನ್ಯಾವದಾಶಾನುಬದ್ಧಾಃ ॥
ಅನುವಾದ
ಪ್ರಭುವೇ! ಶಾಂತವಾದಂತೆ ಕಂಡರೂ ಉಗ್ರವಾಗಿರುವ ನಿನ್ನ ಅತ್ಯಂತ ಭಯಾನಕವಾದ ಮತ್ತು ದುಸ್ಸಹವಾದ ಜ್ವರದಿಂದ ನಾನು ಪರಿತಪಿಸುತ್ತಿದ್ದೇನೆ. ದೇಹಧಾರಿಗಳಾದ ಜೀವರು ಆಸೆಯಿಂದ ಬಂಧಿತರಾಗಿ ನಿನ್ನ ಪಾದಕಮಲವನ್ನು ಸೇವಿಸುವವರೆಗೂ ತಾಪ-ಸಂತಾಪದಲ್ಲಿ ಬೇಯುತ್ತಿರುತ್ತಾರೆ. ॥28॥
(ಶ್ಲೋಕ-29)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ತ್ರಿಶಿರಸ್ತೇ ಪ್ರಸನ್ನೋಸ್ಮಿ ವ್ಯೇತು ತೇ ಮಜ್ಜ್ವರಾದ್ಭಯಮ್ ।
ಯೋ ನೌ ಸ್ಮರತಿ ಸಂವಾದಂ ತಸ್ಯ ತ್ವನ್ನ ಭವೇದ್ಭಯಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳಿದನು — ತ್ರಿಶಿರಸನೇ! ನಾನು ನಿನ್ನ ಮೇಲೆ ಪ್ರಸನ್ನನಾಗಿರುವೆನು. ಈಗ ನೀನು ನನ್ನ ಜ್ವರದಿಂದ ನಿರ್ಭಯನಾಗು. ಜಗತ್ತಿನಲ್ಲಿ ನಮ್ಮಿಬ್ಬರ ಈ ಸಂವಾದವನ್ನು ಸ್ಮರಿಸುವವರಿಗೆ ನಿನ್ನಿಂದ ಯಾವುದೇ ಭಯ ಇರಲಾರದು. ॥29॥
(ಶ್ಲೋಕ-30)
ಮೂಲಮ್
ಇತ್ಯುಕ್ತೋಚ್ಯುತಮಾನಮ್ಯ ಗತೋ ಮಾಹೇಶ್ವರೋ ಜ್ವರಃ ।
ಬಾಣಸ್ತು ರಥಮಾರೂಢಃ ಪ್ರಾಗಾದ್ಯೋತ್ಸ್ಯನ್ಜನಾರ್ದನಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೀಗೆ ಹೇಳಿದಾಗ ಮಾಹೇಶ್ವರಜ್ವರವು ಅವನಿಗೆ ನಮಸ್ಕರಿಸಿ ಹೊರಟು ಹೋಯಿತು. ಅಷ್ಟರಲ್ಲಿ ಬಾಣಾಸುರನು ರಥಾರೂಢನಾಗಿ ಶ್ರೀಕೃಷ್ಣನೊಡನೆ ಯುದ್ಧಮಾಡಲು ಆಗಮಿಸಿದನು. ॥30॥
(ಶ್ಲೋಕ-31)
ಮೂಲಮ್
ತತೋ ಬಾಹುಸಹಸ್ರೇಣ ನಾನಾಯುಧಧರೋಸುರಃ ।
ಮುಮೋಚ ಪರಮಕ್ರುದ್ಧೋ ಬಾಣಾಂಶ್ಚಕ್ರಾಯುಧೇ ನೃಪ ॥
ಅನುವಾದ
ಪರೀಕ್ಷಿತನೇ! ಬಾಣಾಸುರನು ತನ್ನ ಸಾವಿರ ಕೈಗಳಲ್ಲಿ ನಾನಾ ವಿಧವಾದ ಆಯುಧಗಳನ್ನು ಧರಿಸಿದ್ದನು. ಅತ್ಯಂತ ಕೋಪಾವಿಷ್ಟನಾದ ಅವನು ಚಕ್ರಪಾಣಿ ಭಗವಂತನ ಮೇಲೆ ಬಾಣಗಳ ಮಳೆಯನ್ನೇ ಸುರಿಸಿದನು. ॥31॥
(ಶ್ಲೋಕ-32)
ಮೂಲಮ್
ತಸ್ಯಾಸ್ಯತೋಸಾಣ್ಯಸಕೃಚ್ಚಕ್ರೇಣ ಕ್ಷುರನೇಮಿನಾ ।
ಚಿಚ್ಛೇದ ಭಗವಾನ್ಬಾಹೂನ್ ಶಾಖಾ ಇವ ವನಸ್ಪತೇಃ ॥
(ಶ್ಲೋಕ-33)
ಮೂಲಮ್
ಬಾಹುಷುಚ್ಛಿದ್ಯಮಾನೇಷು ಬಾಣಸ್ಯ ಭಗವಾನ್ ಭವಃ ।
ಭಕ್ತಾನುಕಂಪ್ಯುಪವ್ರಜ್ಯ ಚಕ್ರಾಯುಧಮಭಾಷತ ॥
ಅನುವಾದ
ಬಾಣಾಸುರನ ಬಾಣಗಳ ಮಳೆಯನ್ನು ನೋಡಿದಾಗ ಭಗವಾನ್ ಶ್ರೀಕೃಷ್ಣನು ವೃಕ್ಷಗಳ ಕೊಂಬೆಗಳನ್ನು ಕತ್ತರಿಸುವಂತೆ ಅತ್ಯಂತ ತೀಕ್ಷ್ಣವಾದ ಅಲಗಿನಿಂದ ಕೂಡಿದ ಸುದರ್ಶನ ಚಕ್ರದಿಂದ ಬಾಣಾಸುರನ ಬಾಹುಗಳು ಕತ್ತರಿಸಲ್ಪಡುವುದನ್ನು ಕಂಡು ಭಕ್ತವತ್ಸಲನಾದ ಭಗವಾನ್ ಶಂಕರನು ಚಕ್ರಧಾರಿ ಶ್ರೀಕೃಷ್ಣನ ಬಳಿಗೆ ಬಂದು ಅವನನ್ನು ಸ್ತುತಿಸತೊಡಗಿದನು. ॥32-33॥
(ಶ್ಲೋಕ-34)
ಮೂಲಮ್ (ವಾಚನಮ್)
ಶ್ರೀರುದ್ರ ಉವಾಚ
ಮೂಲಮ್
ತ್ವಂ ಹಿ ಬ್ರಹ್ಮ ಪರಂ ಜ್ಯೋತಿರ್ಗೂಢಂ ಬ್ರಹ್ಮಣಿ ವಾಙ್ಮಯೇ ।
ಯಂ ಪಶ್ಯಂತ್ಯಮಲಾತ್ಮಾನ ಆಕಾಶಮಿವ ಕೇವಲಮ್ ॥
ಅನುವಾದ
ಭಗವಾನ್ ಶಂಕರನು ಹೇಳಿದನು — ಪ್ರಭೋ! ನೀನು ವೇದಮಂತ್ರಗಳಲ್ಲಿ ತಾತ್ಪರ್ಯರೂಪದಿಂದ ಅಡಗಿರುವ ಪರಮ ಜ್ಯೋತಿಃಸ್ವರೂಪ ಪರಬ್ರಹ್ಮನಾಗಿರುವೆ. ಶುದ್ಧ ಹೃದಯಗಳ ಮಹಾತ್ಮರು ನಿನ್ನ ಆಕಾಶದಂತೆ ಸರ್ವವ್ಯಾಪಕ ಮತ್ತು ನಿರ್ವಿಕಾರ ಸ್ವರೂಪವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾರೆ. ॥34॥
(ಶ್ಲೋಕ-35)
ಮೂಲಮ್
ನಾಭಿರ್ನಭೋಗ್ನಿರ್ಮುಖಮಂಬು ರೇತೋ
ದ್ಯೌಃ ಶೀರ್ಷಮಾಶಾ ಶ್ರುತಿರಂಘ್ರಿರುರ್ವೀ ।
ಚಂದ್ರೋ ಮನೋ ಯಸ್ಯ ದೃಗರ್ಕ ಆತ್ಮಾ
ಅಹಂ ಸಮುದ್ರೋ ಜಠರಂ ಭುಜೇಂದ್ರಃ ॥
ಅನುವಾದ
ಆಕಾಶವು ನಿನ್ನ ನಾಭಿಯಾಗಿದೆ. ಅಗ್ನಿಯು ಮುಖ ಮತ್ತು ಜಲವು ವೀರ್ಯವಾಗಿದೆ. ಸ್ವರ್ಗವು ತಲೆಯು, ದಿಕ್ಕುಗಳೇ ಕಿವಿಗಳು, ಪೃಥಿವಿಯೇ ಚರಣಗಳಾಗಿವೆ. ಚಂದ್ರನೇ ಮನಸ್ಸು, ಸೂರ್ಯನೇ ಕಣ್ಣುಗಳು, ಶಿವನಾದ ನಾನು ನಿನ್ನ ಅಹಂಕಾರನಾಗಿರುವೆನು. ಸಮುದ್ರವೇ ನಿನ್ನ ಹೊಟ್ಟೆಯು ಮತ್ತು ಇಂದ್ರನು ನಿನ್ನ ಭುಜವಾಗಿದ್ದಾನೆ. ॥35॥
(ಶ್ಲೋಕ-36)
ಮೂಲಮ್
ರೋಮಾಣಿ ಯಸ್ಯೌಷಧಯೋಂಬುವಾಹಾಃ
ಕೇಶಾ ವಿರಿಂಚೋ ಧಿಷಣಾ ವಿಸರ್ಗಃ ।
ಪ್ರಜಾಪತಿರ್ಹೃದಯಂ ಯಸ್ಯ ಧರ್ಮಃ
ಸ ವೈ ಭವಾನ್ಪುರುಷೋ ಲೋಕಕಲ್ಪಃ ॥
ಅನುವಾದ
ಧಾನ್ಯಾದಿ ಔಷಧಿಗಳು ನಿನ್ನ ರೋಮಗಳು, ಮೇಘಗಳೇ ತಲೆ ಕೂದಲು, ಬ್ರಹ್ಮನೇ ಬುದ್ಧಿಯಾಗಿದ್ದಾನೆ. ಪ್ರಜಾಪತಿಯೇ ನಿನ್ನ ಲಿಂಗವು, ಧರ್ಮವು ಹೃದಯವಾಗಿದೆ. ಹೀಗೆ ಸಮಸ್ತ ಲೋಕ-ಲೋಕಾಂತರಗಳ ಜೊತೆಗೆ ಯಾರ ಶರೀರದ ತುಲನೆ ಮಾಡಲಾಗುತ್ತದೋ ಆ ಪರಮಪುರುಷನು ನೀನೇ ಆಗಿರುವೆ. ॥36॥
(ಶ್ಲೋಕ-37)
ಮೂಲಮ್
ತವಾವತಾರೋಯಮಕುಂಠಧಾಮನ್
ಧರ್ಮಸ್ಯ ಗುಪ್ತ್ಯೈ ಜಗತೋ ಭವಾಯ ।
ವಯಂ ಚ ಸರ್ವೇ ಭವತಾನುಭಾವಿತಾ
ವಿಭಾವಯಾಮೋ ಭುವನಾನಿ ಸಪ್ತ ॥
ಅನುವಾದ
ಅಖಂಡ ಜ್ಯೋತಿಃ ಸ್ವರೂಪನಾದ ಪರಮಾತ್ಮನೇ! ನಿನ್ನ ಈ ಅವತಾರವು ಧರ್ಮರಕ್ಷಣೆಗಾಗಿ ಮತ್ತು ಪ್ರಪಂಚದ ಅಭ್ಯುದಯ ಅಭಿವೃದ್ಧಿಗಾಗಿಯೇ ಆಗಿರುವುದು. ನಾವೆಲ್ಲರೂ ನಿನ್ನ ಪ್ರಭಾವದಿಂದಲೇ ಪ್ರಭಾವಿತರಾಗಿ ಏಳು ಭುವನಗಳನ್ನು ಪಾಲಿಸುತ್ತಿದ್ದೇವೆ. ॥37॥
(ಶ್ಲೋಕ-38)
ಮೂಲಮ್
ತ್ವಮೇಕ ಆದ್ಯಃ ಪುರುಷೋದ್ವಿತೀಯ-
ಸ್ತುರ್ಯಃ ಸ್ವದೃಗ್ಘೇತುರಹೇತುರೀಶಃ ।
ಪ್ರತೀಯಸೇಥಾಪಿ ಯಥಾವಿಕಾರಂ
ಸ್ವಮಾಯಯಾ ಸರ್ವಗುಣಪ್ರಸಿದ್ಧ್ಯೈ ॥
ಅನುವಾದ
ಪ್ರಭೋ! ನೀನು ಸಜಾತೀಯ, ವಿಜಾತೀಯ ಮತ್ತು ಸ್ವಗತಭೇದ ರಹಿತನಾದ ಅದ್ವಿತೀಯ-ಆದಿಪುರುಷನಾಗಿರುವೆ. ಮಾಯಾ ಕೃತವಾದ ಜಾಗೃತ್, ಸ್ವಪ್ನ, ಸುಷುಪ್ತಿ ಎಂಬ ಮೂರು ಅವಸ್ಥೆಗಳಲ್ಲಿ ಅನುಗತವಾದ ಮತ್ತು ಅವುಗಳಿಂದ ಅತೀತ ತುರೀಯ ತತ್ತ್ವವೂ ನೀನೇ ಆಗಿರುವೆ. ನೀನು ಬೇರೆ ಯಾವುದೇ ವಸ್ತುವಿನಿಂದ ಪ್ರಕಾಶಿತನಾಗದೆ ಸ್ವಯಂ ಪ್ರಕಾಶನಾಗಿರುವೆ. ನೀನು ಎಲ್ಲದರ ಕಾರಣನಾಗಿದ್ದರೂ ನಿನಗೆ ಯಾವ ಕಾರಣವೂ ಇಲ್ಲ ಭಗವಂತನೇ! ಹೀಗಿದ್ದರೂ ಕೂಡ ತ್ರಿಗುಣಗಳ ವಿಭಿನ್ನ ವಿಷಮತೆಗಳನ್ನು ಪ್ರಕಾಶಿತಗೊಳಿಸಲು ನಿನ್ನ ಮಾಯೆಯಿಂದಲೇ ದೇವತೆ, ಪಶು-ಪಕ್ಷಿ, ಮನುಷ್ಯ ಮುಂತಾದ ಶರೀರಗಳಿಗೆ ಅನುಸಾರವಾಗಿ ಬೇರೆ-ಬೇರೆ ರೂಪಗಳನ್ನು ಹೊಂದಿ ವಿಶ್ವರೂಪನಾಗಿ ಕಂಡು ಬರುವೆ. ॥38॥
(ಶ್ಲೋಕ-39)
ಮೂಲಮ್
ಯಥೈವ ಸೂರ್ಯಃ ಪಿಹಿತಶ್ಛಾಯಯಾ ಸ್ವಯಾ
ಛಾಯಾಂ ಚ ರೂಪಾಣಿ ಚ ಸಂಚಕಾಸ್ತಿ ।
ಏವಂ ಗುಣೇನಾಪಿಹಿತೋ ಗುಣಾಂಸ್ತ್ವ-
ಮಾತ್ಮಪ್ರದೀಪೋ ಗುಣಿನಶ್ಚ ಭೂಮನ್ ॥
ಅನುವಾದ
ಪ್ರಭುವೇ! ಸೂರ್ಯನು ತನ್ನ ನೆರಳಾದ ಮೇಘಗಳಿಂದ ಮುಚ್ಚಿಹೋಗುತ್ತಾನೆ ಮತ್ತು ಆ ಮೋಡಗಳನ್ನು ಹಾಗೂ ಬೇರೆ-ಬೇರೆ ರೂಪಗಳನ್ನು ಪ್ರಕಾಶಿಸುವಂತೆಯೇ ನೀನಾದರೋ ಸ್ವಯಂಪ್ರಕಾಶನಾಗಿದ್ದರೂ ಗುಣಗಳ ಮೂಲಕ ಮುಚ್ಚಿಹೋಗುವೆ ಮತ್ತು ಸಮಸ್ತ ಗುಣಗಳನ್ನು ಗುಣಾಭಿಮಾನಿಗಳಾದ ಜೀವರನ್ನು ಪ್ರಕಾಶಿಸುತ್ತಿರುವೆ. ವಾಸ್ತವದಲ್ಲಿ ನೀನು ಅನಂತನಾಗಿರುವೆ. ॥39॥
(ಶ್ಲೋಕ-40)
ಮೂಲಮ್
ಯನ್ಮಾಯಾಮೋಹಿತಧಿಯಃ ಪುತ್ರದಾರಗೃಹಾದಿಷು ।
ಉನ್ಮಜ್ಜಂತಿ ನಿಮಜ್ಜಂತಿ ಪ್ರಸಕ್ತಾ ವೃಜಿನಾರ್ಣವೇ ॥
ಅನುವಾದ
ಭಗವಂತಾ! ನಿನ್ನ ಮಾಯೆಯಿಂದ ಮೋಹಿತರಾದ ಜನರು ಪತ್ನಿ-ಪುತ್ರ, ದೇಹ-ಗೇಹ ಮುಂತಾದವುಗಳಲ್ಲಿ ಆಸಕ್ತರಾಗಿ, ಮತ್ತೆ ದುಃಖದ ಅಪಾರ ಸಮುದ್ರದಲ್ಲಿ ಮುಳುಗಿರುತ್ತಾರೆ. ॥40॥
(ಶ್ಲೋಕ-41)
ಮೂಲಮ್
ದೇವದತ್ತಮಿಮಂ ಲಬ್ಧ್ವಾ ನೃಲೋಕಮಜಿತೇಂದ್ರಿಯಃ ।
ಯೋ ನಾದ್ರಿಯೇತ ತ್ವತ್ಪಾದೌ ಸ ಶೋಚ್ಯೋ ಹ್ಯಾತ್ಮವಂಚಕಃ ॥
ಅನುವಾದ
ಜಗತ್ತಿನ ಮಾನವರಿಗೆ ಈ ಮನುಷ್ಯ ಶರೀರವನ್ನು ನೀನು ಮಹತ್ತರ ಕೃಪೆಮಾಡಿ ಕೊಟ್ಟಿರುವೆ. ಇದನ್ನು ಪಡೆದರೂ ಕೂಡ ತನ್ನ ಇಂದ್ರಿಯಗಳನ್ನು ಯಾವನು ವಶಪಡಿಸಿಕೊಳ್ಳುವುದಿಲ್ಲವೋ, ನಿನ್ನ ಚರಣ ಕಮಲಗಳನ್ನು ಆಶ್ರಯಿಸುವುದಿಲ್ಲವೋ, ಅವನ್ನು ಸೇವಿಸುವುದಿಲ್ಲವೋ ಅಂತಹ ಮನುಷ್ಯನ ಜೀವನವು ಅತ್ಯಂತ ಶೋಚನೀಯವಾಗಿದೆ. ಅವನು ಸ್ವತಃ ತನ್ನನ್ನು ವಂಚಿಸಿಕೊಳ್ಳುತ್ತಿದ್ದಾನೆ. ॥41॥
(ಶ್ಲೋಕ-42)
ಮೂಲಮ್
ಯಸ್ತ್ವಾಂ ವಿಸೃಜತೇ ಮರ್ತ್ಯ ಆತ್ಮಾನಂ ಪ್ರಿಯಮೀಶ್ವರಮ್ ।
ವಿಪರ್ಯಯೇಂದ್ರಿಯಾರ್ಥಾರ್ಥಂ ವಿಷಮತ್ತ್ಯಮೃತಂ ತ್ಯಜನ್ ॥
ಅನುವಾದ
ಪ್ರಭುವೇ! ನೀನು ಸಮಸ್ತ ಪ್ರಾಣಿಗಳ ಆತ್ಮನೂ, ಪ್ರಿಯತಮನೂ, ಈಶ್ವರನೂ ಆಗಿರುವೆ. ಮೃತ್ಯುಧರ್ಮವುಳ್ಳ ಮನುಷ್ಯನು ನಿನ್ನನ್ನು ಬಿಟ್ಟು, ಅನಾತ್ಮವೂ, ದುಃಖರೂಪವೂ, ತುಚ್ಛವೂ ಆದ ವಿಷಯಗಳಲ್ಲಿ ಬುದ್ಧಿಯುಳ್ಳ ಮೂರ್ಖನು ಅಮೃತವನ್ನು ಬಿಟ್ಟು ವಿಷವನ್ನು ಕುಡಿದಂತೆಯೇ ಆಗಿದೆ. ॥42॥
(ಶ್ಲೋಕ-43)
ಮೂಲಮ್
ಅಹಂ ಬ್ರಹ್ಮಾಥ ವಿಬುಧಾ ಮುನಯಶ್ಚಾಮಲಾಶಯಾಃ ।
ಸರ್ವಾತ್ಮನಾ ಪ್ರಪನ್ನಾ ಸ್ತ್ವಾಮಾತ್ಮಾನಂ ಪ್ರೇಷ್ಠಮೀಶ್ವರಮ್ ॥
ಅನುವಾದ
ಸರ್ವೇಶ್ವರನೇ! ನಾನು, ಬ್ರಹ್ಮಾ, ಸಮಸ್ತ ದೇವತೆಗಳು ಮತ್ತು ಶುದ್ಧಾತ್ಮರಾದ ಋಷಿ-ಮುನಿಗಳು ಸರ್ವಾತ್ಮಭಾವದಿಂದ ನಿನಗೆ ಶರಣಾಗಿದ್ದೇವೆ. ಏಕೆಂದರೆ, ನೀನೇ ನಮ್ಮೆಲ್ಲರ ಆತ್ಮನೂ, ಪ್ರಿಯತಮನೂ, ಈಶ್ವರನೂ ಆಗಿರುವೆ.॥43॥
ಮೂಲಮ್
(ಶ್ಲೋಕ-44)
ತಂ ತ್ವಾ ಜಗತ್ಸ್ಥಿತ್ಯುದಯಾಂತಹೇತುಂ
ಸಮಂ ಪ್ರಶಾಂತಂ ಸುಹೃದಾತ್ಮದೈವಮ್ ।
ಅನನ್ಯಮೇಕಂ ಜಗದಾತ್ಮಕೇತಂ
ಭವಾಪವರ್ಗಾಯ ಭಜಾಮ ದೇವಮ್ ॥
ಅನುವಾದ
ನೀನು ಜಗತ್ತಿನ ಉತ್ಪತ್ತಿ-ಸ್ಥಿತಿ ಪ್ರಳಯಗಳಿಗೆ ಕಾರಣನಾಗಿರುವೆ. ನೀನು ಎಲ್ಲದರಲ್ಲಿ ಸಮನೂ, ಪರಮಶಾಂತನೂ, ಎಲ್ಲರ ಸುಹೃದನೂ, ಆತ್ಮನೂ, ಇಷ್ಟದೇವನೂ ಆಗಿರುವೆ. ನೀನು ಅನನ್ಯನೂ, ಅದ್ವೀತಿಯನೂ, ಜಗದಾಧಾರನೂ, ಅಧಿಷ್ಠಾನನೂ ಆಗಿರುವೆ. ಪ್ರಭೋ! ನಾವೆಲ್ಲರೂ ಪ್ರಪಂಚದಿಂದ ಮುಕ್ತರಾಗಲಿಕ್ಕಾಗಿ ನಿನ್ನನ್ನು ಭಜಿಸುತ್ತೇವೆ. ॥44॥
(ಶ್ಲೋಕ-45)
ಮೂಲಮ್
ಅಯಂ ಮಮೇಷ್ಟೋ ದಯಿತೋನುವರ್ತೀ
ಮಯಾಭಯಂ ದತ್ತಮಮುಷ್ಯ ದೇವ ।
ಸಂಪಾದ್ಯತಾಂ ತದ್ಭವತಃ ಪ್ರಸಾದೋ
ಯಥಾ ಹಿ ತೇ ದೈತ್ಯಪತೌ ಪ್ರಸಾದಃ ॥
ಅನುವಾದ
ದೇವಾ! ಈ ಬಾಣಾಸುರನು ನನಗೆ ಪರಮಪ್ರಿಯನೂ, ಕೃಪಾ ಪಾತ್ರನೂ, ಸೇವಕನೂ ಆಗಿರುವನು. ನಾನು ಇವನಿಗೆ ಅಭಯ ದಾನವನ್ನು ಕೊಟ್ಟಿರುವೆನು. ಪ್ರಭೋ! ಇವನ ಮುತ್ತಾತನಾದ ಪ್ರಹ್ಲಾದನ ಮೇಲೆ ಹೇಗೆ ನೀನು ಕೃಪೆಯನ್ನು ತೋರಿದೆಯೋ ಹಾಗೆಯೇ ಇವನ ಮೇಲೆಯೂ ನೀನು ಕೃಪೆಯನ್ನು ತೋರು. ॥45॥
(ಶ್ಲೋಕ-46)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಯದಾತ್ಥ ಭಗವಂಸ್ತ್ವನ್ನಃ ಕರವಾಮ ಪ್ರಿಯಂ ತವ ।
ಭವತೋ ಯದ್ವ್ಯವಸಿತಂ ತನ್ಮೇ ಸಾಧ್ವನುಮೋದಿತಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳಿದನು — ಭಗವಂತನಾದ ರುದ್ರನೇ! ನಿನ್ನ ಮಾತಿನಂತೆ ನಾನು ಇವನನ್ನು ನಿರ್ಭಯನನ್ನಾಗಿಸುತ್ತೇನೆ. ನೀನು ಹಿಂದೆ ಇವನ ವಿಷಯದಲ್ಲಿ ನಿಶ್ಚಯಿಸಿರುವುದನ್ನೇ ನಾನು ಇವನ ಭುಜಗಳನ್ನು ಕತ್ತರಿಸಿ ಅನುಮೋದಿಸಿದ್ದೇನೆ. ॥46॥
(ಶ್ಲೋಕ-47)
ಮೂಲಮ್
ಅವಧ್ಯೋಯಂ ಮಮಾಪ್ಯೇಷ ವೈರೋಚನಿಸುತೋಸುರಃ ।
ಪ್ರಹ್ಲಾದಾಯ ವರೋ ದತ್ತೋ ನ ವಧ್ಯೋ ಮೇ ತವಾನ್ವಯಃ ॥
ಅನುವಾದ
ಬಾಣಾಸುರನು ದೈತ್ಯ ರಾಜ ಬಲಿಯ ಮಗನಾಗಿರುವುದನ್ನು ನಾನು ಬಲ್ಲೆನು. ಅದಕ್ಕಾಗಿ ನಾನು ಇವನನ್ನು ವಧಿಸಲಾರೆ; ಏಕೆಂದರೆ, ನಾನು ಪ್ರಹ್ಲಾದನಿಗೆ - ‘ನಿನ್ನ ವಂಶದಲ್ಲಿ ಹುಟ್ಟಿದ ಯಾವ ದೈತ್ಯನನ್ನೂ ನಾನು ವಧಿಸುವುದಿಲ್ಲ’ ಎಂಬ ವರವನ್ನು ಕೊಟ್ಟಿರುವೆನು. ॥47॥
(ಶ್ಲೋಕ-48)
ಮೂಲಮ್
ದರ್ಪೋಪಶಮನಾಯಾಸ್ಯ ಪ್ರವೃಕ್ಣಾ ಬಾಹವೋ ಮಯಾ ।
ಸೂದಿತಂ ಚ ಬಲಂ ಭೂರಿ ಯಚ್ಚ ಭಾರಾಯಿತಂ ಭುವಃ ॥
ಅನುವಾದ
ಇವನ ದರ್ಪವನ್ನು ಮುರಿಯುವ ಸಲುವಾಗಿ ನಾನು ಇವನ ತೋಳುಗಳನ್ನು ಕತ್ತರಿಸಿ ಹಾಕಿದೆನು. ಇವನ ಬಹಳ ದೊಡ್ಡ ಸೈನ್ಯವು ಭೂಮಿಗೆ ಭಾರವಾಗಿತ್ತು. ಅದಕ್ಕಾಗಿ ನಾನು ಅದನ್ನು ಸಂಹರಿಸಿ ಬಿಟ್ಟಿರುವೆನು. ॥48॥
(ಶ್ಲೋಕ-49)
ಮೂಲಮ್
ಚತ್ವಾರೋಸ್ಯ ಭುಜಾಃ ಶಿಷ್ಟಾ ಭವಿಷ್ಯಂತ್ಯಜರಾಮರಾಃ ।
ಪಾರ್ಷದಮುಖ್ಯೋ ಭವತೋ ನ ಕುತಶ್ಚಿದ್ಭಯೋಸುರಃ ॥
ಅನುವಾದ
ಈಗ ಇವನಿಗೆ ನಾಲ್ಕು ಭುಜಗಳು ಉಳಿದಿವೆ. ಅವು ಅಜರಾಮರವಾಗಿರುವವು. ಈ ಬಾಣಾಸುರನು ನಿನ್ನ ಪಾರ್ಷದರಲ್ಲಿ ಮುಖ್ಯನಾಗಿರುವನು. ಇನ್ನು ಇವನಿಗೆ ಯಾರಿಂದಲೂ, ಯಾವುದೇ ರೀತಿಯ ಭಯವು ಇರುವುದಿಲ್ಲ. ॥49॥
(ಶ್ಲೋಕ-50)
ಮೂಲಮ್
ಇತಿ ಲಬ್ಧ್ವಾಭಯಂ ಕೃಷ್ಣಂ ಪ್ರಣಮ್ಯ ಶಿರಸಾಸುರಃ ।
ಪ್ರಾದ್ಯುಮ್ನಿಂ ರಥಮಾರೋಪ್ಯ ಸವಧ್ವಾ ಸಮುಪಾನಯತ್ ॥
ಅನುವಾದ
ಶ್ರೀಕೃಷ್ಣನಿಂದ ಹೀಗೆ ಅಭಯದಾನವನ್ನು ಪಡೆದು ಬಾಣಾಸುರನು ಅವನ ಬಳಿಗೆ ಬಂದು ಶಿರಸಾಷ್ಟಾಂಗ ನಮಸ್ಕಾರಮಾಡಿ, ಅನಿರುದ್ಧನನ್ನು, ತನ್ನ ಪುತ್ರಿಯಾದ ಉಷೆಯನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಭಗವಂತನ ಬಳಿಗೆ ಕರೆದುಕೊಂಡು ಬಂದನು. ॥50॥
(ಶ್ಲೋಕ-51)
ಮೂಲಮ್
ಅಕ್ಷೌಹಿಣ್ಯಾ ಪರಿವೃತಂ ಸುವಾಸಃಸಮಲಂಕೃತಮ್ ।
ಸಪತ್ನೀಕಂ ಪುರಸ್ಕೃತ್ಯ ಯಯೌ ರುದ್ರಾನುಮೋದಿತಃ ॥
ಅನುವಾದ
ಅನಂತರ ಭಗವಾನ್ ಶ್ರೀಕೃಷ್ಣನು ಮಹಾದೇವನಿಂದ ಅನುಮತಿಯನ್ನು ಪಡೆದು ಒಂದು ಅಕ್ಷೌಹಿಣಿ ಸೈನ್ಯದೊಂದಿಗೆ ವಸ್ತ್ರಾಲಂಕಾರ ಭೂಷಿತರಾದ ಉಷೆ - ಅನಿರುದ್ಧರನ್ನು ಮುಂದಿಟ್ಟುಕೊಂಡು ದ್ವಾರಕೆಗೆ ಪ್ರಯಾಣ ಮಾಡಿದನು. ॥51॥
(ಶ್ಲೋಕ-52)
ಮೂಲಮ್
ಸ್ವರಾಜಧಾನೀಂ ಸಮಲಂಕೃತಾಂ ಧ್ವಜೈಃ
ಸತೋರಣೈರುಕ್ಷಿತಮಾರ್ಗಚತ್ವರಾಮ್ ।
ವಿವೇಶ ಶಂಖಾನಕದುಂದುಭಿಸ್ವನೈ-
ರಭ್ಯುದ್ಯತಃ ಪೌರಸುಹೃದ್ವಜಾತಿಭಿಃ ॥
ಅನುವಾದ
ಇತ್ತ ದ್ವಾರಕೆಯಲ್ಲಿ ಭಗವಾನ್ ಶ್ರೀಕೃಷ್ಣರೇ ಮೊದಲಾದವರ ಶುಭಾಗಮನದ ಸಮಾಚಾರವನ್ನು ಕೇಳಿ ನಗರವಾಸಿಗಳು ತಳಿರು-ತೋರಣಗಳಿಂದ ನಗರದ ಮೂಲೆ-ಮೂಲೆಗಳನ್ನು ಸಿಂಗರಿಸಿದರು. ರಾಜಬೀದಿಗಳನ್ನು ಚೌಕಗಳನ್ನೂ ಗುಡಿಸಿ-ಸಾರಿಸಿ ಸುಗಂಧಿತ ನೀರನ್ನು ಸಿಂಪಡಿಸಿದರು. ನಗರದ ನಾಗರೀಕರೂ, ಬಂಧು-ಬಾಂಧವರೂ, ಬ್ರಾಹ್ಮಣರೂ ಮುಂದೆ ಬಂದು ವೈಭವದಿಂದ ಸ್ವಾಗತಿಸಿದರು. ಆಗ ಶಂಖ, ಮೃದಂಗ, ನಗಾರಿ, ಕಹಳೆ ಮೊದಲಾದ ವಾದ್ಯಗಳು ಮೊಳಗುತ್ತಿರಲು ಶ್ರೀಕೃಷ್ಣನು ನಗರವನ್ನು ಪ್ರವೇಶಿಸಿದನು. ॥52॥
(ಶ್ಲೋಕ-53)
ಮೂಲಮ್
ಯ ಏವಂ ಕೃಷ್ಣವಿಜಯಂ ಶಂಕರೇಣ ಚ ಸಂಯುಗಮ್ ।
ಸಂಸ್ಮರೇತ್ಪ್ರಾತರುತ್ಥಾಯ ನ ತಸ್ಯ ಸ್ಯಾತ್ ಪರಾಜಯಃ ॥
ಅನುವಾದ
ಪರೀಕ್ಷಿತನೇ! ಶ್ರೀಕೃಷ್ಣ - ಶಂಕರರ ಈ ಯುದ್ಧ ಪ್ರಸಂಗವನ್ನು ಮತ್ತು ಶ್ರೀಕೃಷ್ಣನ ವಿಜಯದ ಕಥೆಯನ್ನು ಬೆಳಗೆದ್ದೊಡನೆ ಸ್ಮರಿಸುವ ಮನುಷ್ಯನಿಗೆ ಯಾವ ಕಾರ್ಯದಲ್ಲೂ ಪರಾಜಯವಾಗುವುದಿಲ್ಲ. ॥53॥
ಅನುವಾದ (ಸಮಾಪ್ತಿಃ)
ಅರವತ್ತಮೂರನೆಯ ಅಧ್ಯಾಯವು ಮುಗಿಯಿತು. ॥63॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ ಅನಿರುದ್ಧಾನಯನಂ ನಾಮ ತ್ರಿಷಷ್ಟಿತಮೋಽಧ್ಯಾಯಃ ॥63॥