೬೦

[ಅರವತ್ತನೇಯ ಅಧ್ಯಾಯ]

ಭಾಗಸೂಚನಾ

ಶ್ರೀಕೃಷ್ಣ-ರುಕ್ಮಿಣೀ-ಸಂವಾದ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಕರ್ಹಿಚಿತ್ ಸುಖಮಾಸೀನಂ ಸ್ವತಲ್ಪಸ್ಥಂ ಜಗದ್ಗುರುಮ್ ।
ಪತಿಂ ಪರ್ಯಚರದ್ಭೈಷ್ಮೀ ವ್ಯಜನೇನ ಸಖೀಜನೈಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಹೀಗೆ ಇರುತ್ತಿರಲಾಗಿ ಒಂದು ದಿನ ಸಮಸ್ತ ಜಗತ್ತಿಗೂ ಗುರುವಾದ ಭಗವಾನ್ ಶ್ರೀಕೃಷ್ಣನು ರುಕ್ಮಿಣಿಯ ಮಂಚದ ಮೇಲೆ ಸುಖವಾಗಿ ಕುಳಿತಿದ್ದನು. ರುಕ್ಮಿಣೀದೇವಿಯು ತನ್ನ ಸಖಿಯರೊಂದಿಗೆ ಸ್ವಾಮಿಗೆ ಗಾಳಿ ಬೀಸುತ್ತಾ ಉಪಚರಿಸುತ್ತಿದ್ದಳು. ॥1॥

(ಶ್ಲೋಕ-2)

ಮೂಲಮ್

ಯಸ್ತ್ವೇತಲ್ಲೀಲಯಾ ವಿಶ್ವಂ ಸೃಜತ್ಯತ್ತ್ಯವತೀಶ್ವರಃ ।
ಸ ಹಿ ಜಾತಃ ಸ್ವಸೇತೂನಾಂ ಗೋಪೀಥಾಯ ಯದುಷ್ವಜಃ ॥

ಅನುವಾದ

ಸರ್ವಶಕ್ತನಾದ ಭಗವಂತನು ಲೀಲೆಯಿಂದ ಈ ವಿಶ್ವವನ್ನು ಸೃಜಿಸಿ, ರಕ್ಷಿಸಿ, ಕಡೆಯಲ್ಲಿ ಪ್ರಳಯವನ್ನೂ ಮಾಡುವನು. ಅಂತಹ ಹುಟ್ಟು ಸಾವುಗಳಿಲ್ಲದ ಪ್ರಭುವು ತಾನೇ ಕಲ್ಪಿಸಿದ ಧರ್ಮಮರ್ಯಾದೆಗಳ ರಕ್ಷಣೆಗಾಗಿ ಯದುವಂಶದಲ್ಲಿ ಅವತರಿಸಿದ್ದನು. ॥2॥

(ಶ್ಲೋಕ-3)

ಮೂಲಮ್

ತಸ್ಮಿನ್ನಂತರ್ಗೃಹೇ ಭ್ರಾಜನ್ಮುಕ್ತಾದಾಮವಿಲಂಬಿನಾ ।
ವಿರಾಜಿತೇ ವಿತಾನೇನ ದೀಪೈರ್ಮಣಿಮಯೈರಪಿ ॥

ಅನುವಾದ

ಪರೀಕ್ಷಿತನೇ! ರುಕ್ಮಿಣಿಯ ಆ ಅಂತಃಪುರವು ಬಹುಸುಂದರವಾಗಿತ್ತು. ವಸ್ತ್ರಗಳಿಂದ ಕಲ್ಪಿಸಿದ್ದ ಮೇಲು ಛಾವಣಿಯಲ್ಲಿ ಥಳ-ಥಳಿಸುವ ಮುತ್ತಿನ ಸರಗಳನ್ನು ತೂಗುಹಾಕಿದ್ದರು. ಮಣಿಮಯವಾದ ದೀಪಗಳು ಝಗ-ಝಗಸುತ್ತಿದ್ದವು. ॥3॥

(ಶ್ಲೋಕ-4)

ಮೂಲಮ್

ಮಲ್ಲಿಕಾದಾಮಭಿಃ ಪುಷ್ಪೈರ್ದ್ವಿರೇಕುಲನಾದಿತೈಃ ।
ಜಾಲರಂಧ್ರಪ್ರವಿಷ್ಟೈಶ್ಚ ಗೋಭಿಶ್ಚಂದ್ರಮಸೋಮಲೈಃ ॥

ಅನುವಾದ

ದುಂಬಿಗಳ ನಿನಾದದಿಂದ ಕೂಡಿದ ಜಾಜಿ, ಮಲ್ಲಿಗೆ ಹೂವುಗಳ ಹಾರಗಳಿಂದಲೂ ಅಂತಃಪುರವು ಸಮಲಂಕೃತವಾಗಿತ್ತು. ಪೂರ್ಣಚಂದ್ರನ ಶುಭ್ರವಾದ ಕಿರಣಗಳು ಕಿಟಕಿಗಳ ಮೂಲಕವಾಗಿ ಅಂತಃಪುದಲ್ಲಿ ಹರಡಿದ್ದವು.॥4॥

(ಶ್ಲೋಕ-5)

ಮೂಲಮ್

ಪಾರಿಜಾತವನಾಮೋದವಾಯುನೋದ್ಯಾನಶಾಲಿನಾ ।
ಧೂಪೈರಗುರುಜೈ ರಾಜನ್ ಜಾಲರಂಧ್ರವಿನಿರ್ಗತೈಃ ॥

ಅನುವಾದ

ಉದ್ಯಾನದಲ್ಲಿ ಪಾರಿಜಾತ ಪುಷ್ಪಗಳ ಮೇಲೆ ಬೀಸಿದ ಸುಗಂಧಮಯ ಮಂದಾನಿಲವು ಎಲ್ಲೆಡೆ ಪಸರಿಸಿತ್ತು. ಅಗರು ಧೂಪಗಳ ಪರಿಮಳವು ಕಿಟಕಿಯ ರಂಧ್ರಗಳಿಂದ ಹೊರಗೆ ಹೋಗಿ ಹರಡುತ್ತಿತ್ತು.॥5॥

(ಶ್ಲೋಕ-6)

ಮೂಲಮ್

ಪಯಃೇನನಿಭೇ ಶುಭ್ರೇ ಪರ್ಯಂಕೇ ಕಶಿಪೂತ್ತಮೇ ।
ಉಪತಸ್ಥೇ ಸುಖಾಸೀನಂ ಜಗತಾಮೀಶ್ವರಂ ಪತಿಮ್ ॥

ಅನುವಾದ

ಅಂತಹ ಅಂತಃಪುರದಲ್ಲಿ ಹಾಲಿನ ನೊರೆಯಂತೆ ಶುಭ್ರವಾದ ಹಂಸತೂಲಿ ಕಾತಲ್ಪದಲ್ಲಿ ಆನಂದ ತುಂದಿಲನಾಗಿ ಶ್ರೀಕೃಷ್ಣನು ವಿರಾಜಿಸುತ್ತಿದ್ದನು. ರುಕ್ಮಿಣೀದೇವಿಯು ತ್ರಿಲೋಕಾಧೀಶನನ್ನು ತನ್ನ ಪತಿಯನ್ನಾಗಿಸಿಕೊಂಡು ಅವನ ಸೇವೆ ಮಾಡುತ್ತಿದ್ದಳು. ॥6॥

(ಶ್ಲೋಕ-7)

ಮೂಲಮ್

ಬಾಲವ್ಯಜನಮಾದಾಯ ರತ್ನದಂಡಂ ಸಖೀಕರಾತ್ ।
ತೇನ ವೀಜಯತೀ ದೇವೀ ಉಪಾಸಾಂಚಕ್ರ ಈಶ್ವರಮ್ ॥

ಅನುವಾದ

ಲಕ್ಷ್ಮೀಸ್ವರೂಪಿಣಿಯಾದ ರುಕ್ಮಿಣಿ ದೇವಿಯು ರತ್ನಖಚಿತವಾದ ಹಿಡಿಯುಳ್ಳ ಮನೋಹರವಾದ ಚಾಮರವನ್ನು ಸಖಿಯ ಕೈಯಿಂದ ತೆಗೆದುಕೊಂಡು ತಾನೇ ಶ್ರೀಕೃಷ್ಣನಿಗೆ ಬೀಸುತ್ತಾ ಅವನ ಸೇವೆಯನ್ನು ಮಾಡುತ್ತಿದ್ದಳು.॥7॥

(ಶ್ಲೋಕ-8)

ಮೂಲಮ್

ಸೋಪಾಚ್ಯುತಂ ಕ್ವಣಯತೀ ಮಣಿನೂಪುರಾಭ್ಯಾಂ
ರೇಜೇಂಗುಲೀಯವಲಯವ್ಯಜನಾಗ್ರಹಸ್ತಾ ।
ವಸಾಂತಗೂಢಕುಚಕುಂಕುಮಶೋಣಹಾರ-
ಭಾಸಾ ನಿತಂಬಧೃತಯಾ ಚ ಪರಾರ್ಧ್ಯಕಾಂಚ್ಯಾ ॥

ಅನುವಾದ

ಆಕೆಯ ಕರಕಮಲಗಳಲ್ಲಿ ಕೈಗಡಗಗಳೂ, ಉಂಗುರಗಳೂ, ರತ್ನ ಖಚಿತ ಬಳೆಗಳೂ, ಚಾಮರವೂ ಶೋಭಿಸುತ್ತಿದ್ದವು. ಚರಣಗಳಲ್ಲಿ ಮಣಿಖಚಿತ ನೂಪುರಗಳು ಝಣ-ಝಣಿಸುತ್ತಿದ್ದವು. ಸೆರಗಿನಲ್ಲಿ ಅಡಗಿದ್ದ ಸ್ತನಗಳ ಕುಂಕುಮಕೇಸರದ ಬಣ್ಣದಿಂದ ಕೊರಳ ಹಾರಗಳು ಕೆಂಪಾಗಿ ಕಾಣುತ್ತಾ, ಚಾಮರ ಬೀಸುವಾಗ ಸ್ಪಂದಿಸುತ್ತಿದ್ದವು. ಸೊಂಟದಲ್ಲಿ ಧರಿಸಿದ್ದ ರತ್ನ ಖಚಿತವಾದ ಡಾಬಿನ ಸರಗಳು ನಿತಂಬಗಳ ಮೇಲೆ ಜೋಲಾಡುತ್ತಿದ್ದವು. ಹೀಗೆ ಆಕೆಯು ಭಗವಂತನ ಬಳಿಯಲ್ಲೇ ಇದ್ದು ಅವನ ಸೇವೆಯಲ್ಲಿ ತಲ್ಲೀನಳಾಗಿದ್ದಳು. ॥8॥

(ಶ್ಲೋಕ-9)

ಮೂಲಮ್

ತಾಂ ರೂಪಿಣೀಂ ಶ್ರಿಯಮನನ್ಯಗತಿಂ ನಿರೀಕ್ಷ್ಯ
ಯಾ ಲೀಲಯಾ ಧೃತತನೋರನುರೂಪರೂಪಾ ।
ಪ್ರೀತಃ ಸ್ಮಯನ್ನಲಕಕುಂಡಲನಿಷ್ಕಕಂಠ-
ವಕೋಲ್ಲಸತ್ಸ್ಮಿತಸುಧಾಂ ಹರಿರಾಬಭಾಷೇ ॥

ಅನುವಾದ

ಲೀಲೆಗಾಗಿ ಮನುಷ್ಯರೂಪವನ್ನು ಧರಿಸಿ ಬಂದಿರುವ ತನಗೆ ಅನುರೂಪಳಾಗಿರುವ, ಅನನ್ಯ ಶರಣಾಗಿರುವ, ಕಡು ಚೆಲುವೆಯಾದ, ಲಕ್ಷ್ಮಿಯ ಸ್ವರೂಪಳೇ ಆಗಿರುವ, ಮುಂಗುರುಳುಗಳಿಂದಲೂ, ಕುಂಡಲಗಳಿಂದಲೂ, ಕನಕ ಹಾರಗಳಿಂದಲೂ ವಿರಾಜಿಸುತ್ತಿದ್ದ ಮುಖದಲ್ಲಿ ಮಂದಹಾಸವೆಂಬ ಅಮೃತವನ್ನು ಸುರಿಸುತ್ತಿರುವ ರುಕ್ಮಿಣೀದೇವಿಯನ್ನು ನೋಡಿ ಸುಪ್ರೀತನಾದ ಶ್ರೀಹರಿಯು ಅವಳಲ್ಲಿ ಇಂತೆಂದನು - ॥9॥

(ಶ್ಲೋಕ-10)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ರಾಜಪುತ್ರೀಪ್ಸಿತಾ ಭೂಪೈರ್ಲೋಕಪಾಲವಿಭೂತಿಭಿಃ ।
ಮಹಾನುಭಾವೈಃ ಶ್ರೀಮದ್ಭೀ ರೂಪೌದಾರ್ಯಬಲೋರ್ಜಿತೈಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ರಾಜಕುಮಾರಿ! ಐಶ್ವರ್ಯದಲ್ಲಿ ಲೋಕಪಾಲರಂತಿದ್ದ, ಹೆಚ್ಚು ಪ್ರಭಾವಶಾಲಿಗಳಾಗಿದ್ದ, ಶ್ರೀಮಂತರಾಗಿದ್ದ, ರೂಪ-ಔದಾರ್ಯ-ಬಲದಲ್ಲಿ ಅಧಿಕರಾಗಿದ್ದ ಹಲವಾರು ರಾಜರು ನಿನ್ನನ್ನು ವಿವಾಹವಾಗಲು ಅಪೇಕ್ಷಿಸಿದ್ದರು. ॥10॥

(ಶ್ಲೋಕ-11)

ಮೂಲಮ್

ತಾನ್ ಪ್ರಾಪ್ತಾನರ್ಥಿನೋ ಹಿತ್ವಾ ಚೈದ್ಯಾದೀನ್ಸ್ಮರದುರ್ಮದಾನ್ ।
ದತ್ತಾ ಭ್ರಾತ್ರಾ ಸ್ವಪಿತ್ರಾ ಚ ಕಸ್ಮಾನ್ನೋ ವವೃಷೇಸಮಾನ್ ॥

(ಶ್ಲೋಕ-12)

ಮೂಲಮ್

ರಾಜಭ್ಯೋ ಬಿಭ್ಯತಃ ಸುಭ್ರೂಃ ಸಮುದ್ರಂ ಶರಣಂ ಗತಾನ್ ।
ಬಲವದ್ಭಿಃ ಕೃತದ್ವೇಷಾನ್ಪ್ರಾಯಸ್ತ್ಯಕ್ತನೃಪಾಸನಾನ್ ॥

ಅನುವಾದ

ನಿನ್ನ ತಂದೆ ಮತ್ತು ಅಣ್ಣಂದಿರು ಶಿಶುಪಾಲನೊಂದಿಗೆ ನಿನ್ನ ಮದುವೆ ಮಾಡುವುದಾಗಿ ವಾಗ್ದಾನವನ್ನೂ ಮಾಡಿದ್ದರು. ಕಾಮೋನ್ಮತ್ತರಾದ ಶಿಶುಪಾಲನೇ ಮೊದಲಾದವರು ನಿನ್ನನ್ನು ಯಾಚಿಸಲೂ ಬಂದಿದ್ದರು. ಅಂತಹವರೆಲ್ಲರನ್ನು ತ್ಯಜಿಸಿ, ನಿನಗೆ ಸರಿದೂಗದಿರುವ ನನ್ನನ್ನೇಕೆ ನೀನು ಮದುವೆಯಾದೆ? ಸುಂದರಿ! ನೋಡು, ಜರಾಸಂಧನೇ ಮೊದಲಾದ ಶತ್ರುರಾಜರಿಗೆ ಹೆದರಿ ನಾವು ಸಮುದ್ರದಲ್ಲಿ ಮನೆಮಾಡಿಕೊಂಡು ಇದ್ದೇವೆ. ಬಲಿಷ್ಠರೊಡನೆ ನಾವು ವೈರವನ್ನು ಕಟ್ಟಿಕೊಂಡಿದ್ದೇವೆ. ಮೇಲಾಗಿ ನಾವು ರಾಜಸಿಂಹಾಸನದ ಅಧಿಕಾರದಿಂದಲೂ ವಂಚಿತರಾಗಿದ್ದೇವೆ. ॥11-12॥

(ಶ್ಲೋಕ-13)

ಮೂಲಮ್

ಅಸ್ಪಷ್ಟವರ್ತ್ಮನಾಂ ಪುಂಸಾಮಲೋಕಪಥಮೀಯುಷಾಮ್ ।
ಆಸ್ಥಿತಾಃ ಪದವೀಂ ಸುಭ್ರೂಃ ಪ್ರಾಯಃ ಸೀದಂತಿ ಯೋಷಿತಃ ॥

ಅನುವಾದ

ಸುಂದರಿಯೇ! ಅಸ್ಪಷ್ಟ ಮಾರ್ಗವುಳ್ಳ, ಲೋಕದ ಜನರ ಮಾರ್ಗವನ್ನು ಅನುಸರಿಸದೆ, ವಿಲಕ್ಷಣವಾದ ಮಾರ್ಗವನ್ನು ಹಿಡಿದಿರುವ ನಮ್ಮಂತಹ ಪುರುಷರ ಮಾರ್ಗವನ್ನು ಹಿಡಿದ ಸ್ತ್ರೀಯರು ಪ್ರಾಯಶಃ ಕಷ್ಟಕ್ಕೆ ಒಳಗಾಗುತ್ತಾರೆ. ॥13॥

(ಶ್ಲೋಕ-14)

ಮೂಲಮ್

ನಿಷ್ಕಿಂಚನಾ ವಯಂ ಶಶ್ವನ್ನಿಷ್ಕಿಂಚನಜನಪ್ರಿಯಾಃ ।
ತಸ್ಮಾತ್ ಪ್ರಾಯೇಣ ನ ಹ್ಯಾಢ್ಯಾ ಮಾಂ ಭಜಂತಿ ಸುಮಧ್ಯಮೇ ॥

ಅನುವಾದ

ಸುಂದರಳೇ! ನಾವು ಯಾವಾಗಲೂ ಯಾವುದೇ ಕಾಮನೆ ಇಲ್ಲದವರು ಆದುದರಿಂದ ನಮಗೆ ಅಂಥ ನಿಷ್ಕಂಚನರನ್ನು ಕಂಡರೆ ಬಹಳ ಪ್ರೀತಿ. ಈ ಕಾರಣದಿಂದಲೇ ಪ್ರಾಯಶಃ ಧನಿಕರಾದವರು ನನ್ನನ್ನು ಆಶ್ರಯಿಸುವುದಿಲ್ಲ. ॥14॥

(ಶ್ಲೋಕ-15)

ಮೂಲಮ್

ಯಯೋರಾತ್ಮಸಮಂ ವಿತ್ತಂ ಜನ್ಮೈಶ್ವರ್ಯಾಕೃತಿರ್ಭವಃ ।
ತಯೋರ್ವಿವಾಹೋ ಮೈತ್ರೀ ಚ ನೋತ್ತಮಾಧಮಯೋಃ ಕ್ವಚಿತ್ ॥

ಅನುವಾದ

ಧನ, ಕುಲ, ಐಶ್ವರ್ಯ, ಸೌಂದರ್ಯ, ಆದಾಯ - ಇವುಗಳಲ್ಲಿ ತಮಗೆ ಸಮಾನರಾದವರೊಂದಿಗೆ ವಿವಾಹ ಮತ್ತು ಮೈತ್ರಿಯ ಸಂಬಂಧವನ್ನು ಬೆಳೆಸಬೇಕು. ತನ್ನಿಂದ ಶ್ರೇಷ್ಠ ಅಥವಾ ಕನಿಷ್ಠರೊಂದಿಗೆ ಸಂಬಂಧ ಬೆಳೆಸಬಾರದು. ॥15॥

(ಶ್ಲೋಕ-16)

ಮೂಲಮ್

ವೈದರ್ಭ್ಯೇತದವಿಜ್ಞಾಯ ತ್ವಯಾದೀರ್ಘಸಮೀಕ್ಷಯಾ ।
ವೃತಾ ವಯಂ ಗುಣೈರ್ಹೀನಾ ಭಿಕ್ಷುಭಿಃ ಶ್ಲಾಘಿತಾ ಮುಧಾ ॥

ಅನುವಾದ

ವಿದರ್ಭರಾಜಕುಮಾರೀ! ನೀನು ದೂರದೃಷ್ಟಿಯಿಲ್ಲದೆ ಈ ವಿಷಯಗಳ ಕುರಿತು ವಿಚಾರ ಮಾಡಲಿಲ್ಲ. ಏನೂ ತಿಳಿಯದ ಭಿಕ್ಷುಕರಿಂದ ನನ್ನ ಪ್ರಶಂಸೆಯನ್ನು ಕೇಳಿ, ಗುಣಹೀನನಾದ ನನ್ನನ್ನು ವರಿಸಿದೆ. ॥16॥

(ಶ್ಲೋಕ-17)

ಮೂಲಮ್

ಅಥಾತ್ಮನೋನುರೂಪಂ ವೈ ಭಜಸ್ವ ಕ್ಷತ್ರಿಯರ್ಷಭಮ್ ।
ಯೇನ ತ್ವಮಾಶಿಷಃ ಸತ್ಯಾ ಇಹಾಮುತ್ರ ಚ ಲಪ್ಸ್ಯಸೇ ॥

ಅನುವಾದ

ದೇವಿ! ಈಗಲೂ ಕಾಲಮಿಂಚಿ ಹೋಗಿಲ್ಲ. ನೀನು ನಿನಗೆ ಅನುರೂಪನಾದ, ಶ್ರೇಷ್ಠನಾದ ಕ್ಷತ್ರಿಯ ಕುಮಾರನನ್ನು ಈಗಲೂ ವರಿಸಬಹುದು. ಇದರಿಂದ ಇಹಲೋಕ-ಪರಲೋಕಗಳ ಸಮಸ್ತ ಆಸೆ-ಆಕಾಂಕ್ಷೆಗಳು ಈಡೇರುತ್ತವೆ. ॥17॥

(ಶ್ಲೋಕ-18)

ಮೂಲಮ್

ಚೈದ್ಯಶಾಲ್ವಜರಾಸಂಧದಂತವಕಾದಯೋ ನೃಪಾಃ ।
ಮಮ ದ್ವಿಷಂತಿ ವಾಮೋರು ರುಕ್ಮೀ ಚಾಪಿ ತವಾಗ್ರಜಃ ॥

ಅನುವಾದ

ಸುಂದರೀ! ಶಿಶುಪಾಲ, ಶಾಲ್ವ, ಜರಾಸಂಧ, ದಂತವಕ್ತ್ರ ಮುಂತಾದ ರಾಜರು ಮತ್ತು ನಿಮ್ಮಣ್ಣ ರುಕ್ಮಿಯೂ ಸದಾ ಕಾಲ ನನ್ನನ್ನು ದ್ವೇಷಿಸುತ್ತಾರೆ - ಇದು ನಿನಗೆ ತಿಳಿದೇ ಇದೆ. ॥18॥

(ಶ್ಲೋಕ-19)

ಮೂಲಮ್

ತೇಷಾಂ ವೀರ್ಯಮದಾಂಧಾನಾಂ ದೃಪ್ತಾನಾಂ ಸ್ಮಯನುತ್ತಯೇ ।
ಆನೀತಾಸಿ ಮಯಾ ಭದ್ರೇ ತೇಜೋಪಹರತಾ ಸತಾಮ್ ॥

ಅನುವಾದ

ಕಲ್ಯಾಣೀ! ಅವರೆಲ್ಲರೂ ಬಲ-ಪರಾಕ್ರಮದ ಮದದಿಂದ ಕುರುಡರಾಗಿದ್ದರು. ತಮ್ಮ ಮುಂದೆ ಯಾರನ್ನೂ ಲೆಕ್ಕಿಸುತ್ತಿರಲಿಲ್ಲ. ಅಂತಹ ದುಷ್ಟರ ಗರ್ವವನ್ನೂ ಮುರಿಯಲಿಕ್ಕಾಗಿಯೇ ನಾನು ನಿನ್ನನ್ನು ಅಪಹರಿಸಿ ತಂದಿರುವೆನು. ಇದಲ್ಲದೆ ಬೇರೆ ಯಾವ ಕಾರಣವೂ ಇಲ್ಲ. ॥19॥

(ಶ್ಲೋಕ-20)

ಮೂಲಮ್

ಉದಾಸೀನಾ ವಯಂ ನೂನಂ ನ ಸ್ಯಪತ್ಯಾರ್ಥಕಾಮುಕಾಃ ।
ಆತ್ಮಲಬ್ಧ್ಯಾಸ್ಮಹೇ ಪೂರ್ಣಾ ಗೇಹಯೋರ್ಜ್ಯೋತಿರಕ್ರಿಯಾಃ ॥

ಅನುವಾದ

ನಿಶ್ಚಯವಾಗಿಯೂ ನಾವು ಉದಾಸೀನರು. ನಮಗೆ ಪತ್ನೀ-ಪುತ್ರರಲ್ಲಾಗಲೀ, ಧನದಲ್ಲಾಗಲೀ ಲಾಲಸೆಯಿಲ್ಲ. ಪತ್ನೀ-ಪುತ್ರರನ್ನು ಪಡೆಯಬೇಕೆಂಬ ಕಾಮನೆಯೂ ಇಲ್ಲ. ಈ ಮನೆಯಲ್ಲಿಯೂ, ದೇಹದಲ್ಲಿಯೂ ದೀಪಶಿಖೆಯಂತೆ ಸಾಕ್ಷಿಭೂತರಾಗಿ ನಿಷ್ಕ್ರಿಯರಾಗಿ ಕುಳಿತಿದ್ದೇವೆ. ಆತ್ಮ ಸಾಕ್ಷಾತ್ಕಾರವನ್ನು ಪಡೆದು ಪೂರ್ಣಕಾಮರಾಗಿ ಕೃತಕೃತರಾಗಿದ್ದೇವೆ. ॥20॥

(ಶ್ಲೋಕ-21)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏತಾವದುಕ್ತ್ವಾ ಭಗವಾನಾತ್ಮಾನಂ ವಲ್ಲಭಾಮಿವ ।
ಮನ್ಯಮಾನಾಮವಿಶ್ಲೇಷಾತ್ ತದ್ದರ್ಪಘ್ನ ಉಪಾರಮತ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನನ್ನು ಅರೆಕ್ಷಣವೂ ಬಿಟ್ಟಿರಲಾರದೇ ಇರುವ ರುಕ್ಮಿಣಿಯಲ್ಲಿ - ನಾನು ಎಲ್ಲರಿಗಿಂತ ಹೆಚ್ಚು ನನ್ನ ಇನಿಯನಿಗೆ ಪ್ರಿಯಳಾಗಿದ್ದೇನೆ’ ಎಂಬ ಅಭಿಮಾನ ಉಂಟಾಗಿತ್ತು. ಇಂತಹ ಗರ್ವವನ್ನು ಕಳೆಯಲಿಕ್ಕಾಗಿಯೇ ಭಗವಂತನು ಇಷ್ಟನ್ನು ಹೇಳಿ ಸುಮ್ಮನಾದನು. ॥21॥

(ಶ್ಲೋಕ-22)

ಮೂಲಮ್

ಇತಿ ತ್ರಿಲೋಕೇಶಪತೇಸ್ತದಾತ್ಮನಃ
ಪ್ರಿಯಸ್ಯ ದೇವ್ಯಶ್ರುತಪೂರ್ವಮಪ್ರಿಯಮ್ ।
ಆಶ್ರುತ್ಯ ಭೀತಾ ಹೃದಿ ಜಾತವೇಪಥುಃ
ಚಿಂತಾಂ ದುರಂತಾಂ ರುದತೀ ಜಗಾಮ ಹ ॥

ಅನುವಾದ

ರಾಜೇಂದ್ರನೇ! ರುಕ್ಮಿಣೀದೇವಿಯು ತನ್ನ ಪರಮ ಪ್ರಿಯತಮನೂ, ತ್ರೈಲೋಕ್ಯನಾಥನೂ ಆದ ಭಗವಂತನ ಇಂತಹ ಅಪ್ರಿಯವಾದ ಮಾತನ್ನು ಹಿಂದೆ ಎಂದೂ ಕೇಳಿರಲಿಲ್ಲ. ಇಂದು ಕೇಳಿದಾಗ ಅತ್ಯಂತ ಭಯಗೊಂಡಳು. ಹೃದಯವು ನಡುಗತೊಡಗಿತು. ಬಿಕ್ಕಿ-ಬಿಕ್ಕಿ ಅಳುತ್ತಾ ಅಗಾಧವಾದ ಚಿಂತಾಸಾಗರದಲ್ಲಿ ಮುಳುಗಿಹೋದಳು. ॥22॥

(ಶ್ಲೋಕ-23)

ಮೂಲಮ್

ಪದಾ ಸುಜಾತೇನ ನಖಾರುಣಶ್ರಿಯಾ
ಭುವಂ ಲಿಖಂತ್ಯಶ್ರುಭಿರಂಜನಾಸಿತೈಃ ।
ಆಸಿಂಚತೀ ಕುಂಕುಮರೂಷಿತೌ ಸ್ತನೌ
ತಸ್ಥಾವಧೋಮುಖ್ಯತಿದುಃಖರುದ್ಧವಾಕ್ ॥

ಅನುವಾದ

ಆಕೆಯು ಕಮಲದಂತೆ ಕೋಮಲವಾದ ಹಾಗೂ ನಸುಗೆಂಪಾದ ಉಗುರುಗಳುಳ್ಳ ಪಾದದಿಂದ ನೆಲವನ್ನು ಕೆರೆಯುತ್ತಾ, ಕಾಡಿಗೆಯಿಂದ ಕಪ್ಪಾದ ಕಣ್ಣೀರಿನಿಂದ ಕುಂಕುಮಾಂಕಿತವಾದ ಸ್ತನಗಳನ್ನು ನೆನೆಸುತ್ತಾ, ತಲೆಯನ್ನು ತಗ್ಗಿಸಿ ನಿಂತಿದ್ದಳು. ಅತೀವ ದುಃಖದಿಂದಾಗಿ ಆಕೆಯ ಕಂಠವು ಬಿಗಿದು ಮಾತುನಿಂತು ಹೋಗಿತ್ತು. ॥23॥

(ಶ್ಲೋಕ-24)

ಮೂಲಮ್

ತಸ್ಯಾಃ ಸುದುಃಖಭಯಶೋಕವಿನಷ್ಟಬುದ್ಧೇ-
ರ್ಹಸ್ತಾಚ್ಛ್ಲಥದ್ವಲಯತೋ ವ್ಯಜನಂ ಪಪಾತ ।
ದೇಹಶ್ಚ ವಿಕ್ಲವಧಿಯಃ ಸಹಸೈವ ಮುಹ್ಯನ್
ರಂಭೇವ ವಾಯುವಿಹತಾ ಪ್ರವಿಕೀರ್ಯಕೇಶಾನ್ ॥

ಅನುವಾದ

ಅತ್ಯಂತ ವ್ಯಥೆ, ಭಯ, ಶೋಕದ ಕಾರಣಗಳಿಂದಾಗಿ ವಿಚಾರ ಶಕ್ತಿಯು ಲುಪ್ತವಾಗಿತ್ತು. ಪತಿಯ ವಿಯೋಗವು ಸಂಭವಿಸಬಹುದೆಂಬ ಕಾರಣದಿಂದ ಕ್ಷಣಮಾತ್ರದಲ್ಲಿ ಕೃಶಳಾಗಿ, ಕೈಯ, ಕಂಕಣಗಳು ಉದುರಿಹೋದವು. ಹಿಡಿದಿದ್ದ ಚಾಮರವು ಕೈಯಿಂದ ಜಾರಿತು. ತಲೆಯು ಕೆದರಿತ್ತು. ಕಳವಳಗೊಂಡ ಬುದ್ಧಿಯಿಂದ ಕೂಡಿದ್ದ ದೇಹವು ಬಿರುಗಾಳಿಗೆ ಸಿಕ್ಕಿದ ಬಾಳೆಯಗಿಡವು ಬುಡಮೇಲಾಗಿ ಬೀಳುವಂತೆ ಪ್ರಜ್ಞಾಹೀನಳಾಗಿ ನೆಲಕ್ಕುರುಳಿದಳು. ॥24॥

(ಶ್ಲೋಕ-25)

ಮೂಲಮ್

ತದ್ದೃಷ್ಟ್ವಾ ಭಗವಾನ್ ಕೃಷ್ಣಃ ಪ್ರಿಯಾಯಾಃ ಪ್ರೇಮಬಂಧನಮ್ ।
ಹಾಸ್ಯಪ್ರೌಢಿಮಜಾನಂತ್ಯಾಃ ಕರುಣಃ ಸೋನ್ವಕಂಪತ ॥

ಅನುವಾದ

ಹಾಸ್ಯದ ಹಿರಿಮೆಯನ್ನರಿಯದ ಪ್ರೇಯಸಿಯ ಪ್ರೇಮಪಾಶದ ದಾರ್ಢ್ಯವನ್ನು ಕಂಡು ಪರಮ ಕಾರುಣಿಕನಾದ ಭಗವಾನ್ ಶ್ರೀಕೃಷ್ಣನ ಹೃದಯವು ರುಕ್ಮಿಣಿಯ ಕುರಿತು ಕರುಣೆಯಿಂದ ತುಂಬಿ ಹೋಯಿತು. ॥25॥

(ಶ್ಲೋಕ-26)

ಮೂಲಮ್

ಪರ್ಯಂಕಾದವರುಹ್ಯಾಶು ತಾಮುತ್ಥಾಪ್ಯ ಚತುರ್ಭುಜಃ ।
ಕೇಶಾನ್ ಸಮುಹ್ಯ ತದ್ವಕಂ ಪ್ರಾಮೃಜತ್ ಪದ್ಮಪಾಣಿನಾ ॥

ಅನುವಾದ

ಮರಕ್ಷಣದಲ್ಲೇ ಮಂಚದಿಂದ ಕೆಳಗಿಳಿದು ತನ್ನ ನಾಲ್ಕು ಕೈಗಳಿಂದಲೂ ಪ್ರೇಯಸಿಯನ್ನು ಹಿಡಿದೆತ್ತಿ ಕೆದರಿಹೋಗಿದ್ದ ಆಕೆಯ ಕೇಶಪಾಶಗಳನ್ನು ಸರಿಪಡಿಸಿ ತನ್ನ ಶೀತಲವಾದ ಕರಕಮಲಗಳಿಂದ ಆಕೆಯ ಮುಖವನ್ನು ನೇವರಿಸಿದನು. ॥26॥

(ಶ್ಲೋಕ-27)

ಮೂಲಮ್

ಪ್ರಮೃಜ್ಯಾಶ್ರುಕಲೇ ನೇತ್ರೇ ಸ್ತನೌ ಚೋಪಹತೌ ಶುಚಾ ।
ಆಶ್ಲಿಷ್ಯ ಬಾಹುನಾ ರಾಜನ್ನನನ್ಯವಿಷಯಾಂ ಸತೀಮ್ ॥

ಅನುವಾದ

ಭಗವಂತನು ರುಕ್ಮಿಣಿಯ ಕಣ್ಣುಗಳನ್ನು ಮತ್ತು ಕಣ್ಣೀರಿನಿಂದ ನೆನೆದಿದ್ದ ಸ್ತನಗಳನ್ನು ಒರೆಸಿ, ತನ್ನಲ್ಲಿ ಅನನ್ಯ ಪ್ರೇಮಭಾವವುಳ್ಳ ಆ ಸಾಧ್ವಿಯಾದ ರುಕ್ಮಿಣಿಯನ್ನು ಗಾಢವಾಗಿ ಆಲಿಂಗಿಸಿಕೊಂಡನು. ॥27॥

(ಶ್ಲೋಕ-28)

ಮೂಲಮ್

ಸಾಂತ್ವಯಾಮಾಸ ಸಾಂತ್ವಜ್ಞಃ ಕೃಪಯಾ ಕೃಪಣಾಂ ಪ್ರಭುಃ ।
ಹಾಸ್ಯಪ್ರೌಢಿಭ್ರಮಚ್ಚಿತ್ತಾಮತದರ್ಹಾಂ ಸತಾಂ ಗತಿಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಸಾಂತ್ವನಗೊಳಿಸುವುದರಲ್ಲಿ, ಅತ್ಯಂತ ಕುಶಲನಾಗಿದ್ದನು ಮತ್ತು ತನ್ನ ಪ್ರೇಮಿ ಭಕ್ತರಿಗೆ ಏಕಮಾತ್ರ ಆಶ್ರಯನಾಗಿದ್ದನು. ಹಾಸ್ಯದ ಗಂಭೀರತೆಯಿಂದಾಗಿ ರುಕ್ಮಿಣಿಯ ಬುದ್ಧಿಯು ಭ್ರಮಿಸಿ, ಅತ್ಯಂತ ದೀನಳಾಗಿರುವುದನ್ನು ಕಂಡು ಶ್ರೀಕೃಷ್ಣನು ತನ್ನ ಪ್ರೇಯಸಿಯನ್ನು ನಯದ ಮಾತುಗಳಿಂದ ಸಮಾಧಾನ ಗೊಳಿಸಿದನು. ॥28॥

(ಶ್ಲೋಕ-29)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಮಾ ಮಾ ವೈದರ್ಭ್ಯಸೂಯೇಥಾ ಜಾನೇ ತ್ವಾಂ ಮತ್ಪರಾಯಣಾಮ್ ।
ತ್ವದ್ವಚಃ ಶ್ರೋತುಕಾಮೇನ ಕ್ಷ್ವೇಲ್ಯಾಚರಿತಮಂಗನೇ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ವಿದರ್ಭನಂದಿನಿಯೇ! ನನ್ನಲ್ಲಿ ನೀನು ದೋಷವೆಣಿಸಬೇಡ. ನೀನು ಏಕಮಾತ್ರ ನನ್ನಲ್ಲೇ ಪರಾಯಣಳಾಗಿರುವೆ ಎಂಬುದನ್ನು ನಾನು ಬಲ್ಲೆನು. ಪ್ರಿಯ ಸಹಚರಿಯೇ! ನಿನ್ನ ಪ್ರೇಮಪೂರ್ಣವಾದ ಮಾತನ್ನು ಕೇಳಲೆಂದೇ ನಾನು ವಿನೋದಕ್ಕಾಗಿ, ಹೀಗೆ ಮಾತನಾಡಿದೆ. ॥29॥

(ಶ್ಲೋಕ-30)

ಮೂಲಮ್

ಮುಖಂ ಚ ಪ್ರೇಮಸಂರಂಭಸ್ಫುರಿತಾಧರಮೀಕ್ಷಿತುಮ್ ।
ಕಟಾಕ್ಷೇಪಾರುಣಾಪಾಂಗಂ ಸುಂದರಭ್ರುಕುಟೀತಟಮ್ ॥

ಅನುವಾದ

ಸುಂದರಿಯೇ! ಪ್ರಣಯಕೋಪದಿಂದ ನಿನ್ನ ಕೆಂಪಾದ ತುಟಿಗಳು ಅದುರುವುದನ್ನೂ, ನಸುಗೆಂಪಾದ ಕಡೆಗಣ್ಣ ನೋಟವನ್ನೂ, ಗಂಟಿಕ್ಕಿದ ಸುಂದರವಾದ ಹುಬ್ಬುಗಳನ್ನು, ಮುನಿಸಿನಿಂದ ಕೂಡಿದ ಮುದ್ದು ಮುಖವನ್ನೂ ನೋಡಬೇಕೆಂದೇ ನಾನು ಹೀಗೆ ಹೇಳಿದೆ. ॥30॥

(ಶ್ಲೋಕ-31)

ಮೂಲಮ್

ಅಯಂ ಹಿ ಪರಮೋ ಲಾಭೋ ಗೃಹೇಷು ಗೃಹಮೇಧಿನಾಮ್ ।
ಯನ್ನರ್ಮೈರ್ನೀಯತೇ ಯಾಮಃ ಪ್ರಿಯಯಾ ಭೀರು ಭಾಮಿನಿ ॥

ಅನುವಾದ

ಪರಮಪ್ರಿಯಳಾದ ಭಾಮಿನಿಯೇ! ಮನೆಯ ಕೆಲಸ-ಕಾರ್ಯಗಳಲ್ಲಿ ಹಗಲು-ರಾತ್ರಿಯೂ ತೊಡಗಿರುವ ಗೃಹಸ್ಥರಿಗೆ ತನ್ನ ಪ್ರಿಯತಮೆಯಾದ ಅರ್ಧಾಂಗಿಯೊಡನೆ ಸ್ವಲ್ಪ ಕಾಲವಾದರೂ ಪರಿಹಾಸ-ವಿನೋದದಲ್ಲಿ ಕಳೆಯುವುದೇ ಮಹತ್ತರವಾದ ಒಂದು ಲಾಭವಲ್ಲವೇ? ॥31॥

(ಶ್ಲೋಕ-32)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಸೈವಂ ಭಗವತಾ ರಾಜನ್ ವೈದರ್ಭೀ ಪರಿಸಾಂತ್ವಿತಾ ।
ಜ್ಞಾತ್ವಾ ತತ್ಪರಿಹಾಸೋಕ್ತಿಂ ಪ್ರಿಯತ್ಯಾಗಭಯಂ ಜಹೌ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ರಾಜೇಂದ್ರನೇ! ಭಗವಾನ್ ಶ್ರೀಕೃಷ್ಣನು ತನ್ನ ಪ್ರೇಯಸಿಯನ್ನು ಹೀಗೆ ನಯ ವಿನಯವಾದ ಮಾತುಗಳಿಂದ ಸಮಾಧಾನಗೊಳಿಸಲು, ತನ್ನ ಪ್ರಿಯಕರನು ಹೇಳಿದುದು ಹಾಸ್ಯಕ್ಕಾಗಿ ಎಂದು ತಿಳಿದ ರುಕ್ಮಿಣಿಯು ತನ್ನನ್ನು ಪರಿತ್ಯಾಗ ಮಾಡಿಬಿಡುವನೋ ಎಂಬ ಭಯವನ್ನು ತ್ಯಜಿಸಿ ನಿಶ್ಚಿಂತಳಾದಳು. ॥32॥

(ಶ್ಲೋಕ-33)

ಮೂಲಮ್

ಬಭಾಷ ಋಷಭಂ ಪುಂಸಾಂ ವೀಕ್ಷಂತೀ ಭಗವನ್ಮುಖಮ್ ।
ಸವ್ರೀಡಹಾಸರುಚಿರಸ್ನಿಗ್ಧಾಪಾಂಗೇನ ಭಾರತ ॥

ಅನುವಾದ

ಪರೀಕ್ಷಿತನೇ! ಈಗ ಆಕೆಯು ನಾಚಿಕೆಯಿಂದ ಕೂಡಿದ ಪ್ರೇಮಪೂರ್ಣವಾದ ಕಡೆಗಣ್ಣ ನೋಟದಿಂದ ಪುರುಷ ಶ್ರೇಷ್ಠನಾದ ಭಗವಾನ್ ಶ್ರೀಕೃಷ್ಣನನ್ನು ವೀಕ್ಷಿಸುತ್ತಾ ಮಧುರವಾದ ಮಾತಿನಿಂದ ಇಂತೆಂದಳು. ॥33॥

(ಶ್ಲೋಕ-34)

ಮೂಲಮ್ (ವಾಚನಮ್)

ರುಕ್ಮಿಣ್ಯುವಾಚ

ಮೂಲಮ್

ನನ್ವೇವಮೇತದರವಿಂದವಿಲೋಚನಾಹ
ಯದ್ವೈ ಭವಾನ್ ಭಗವತೋಸದೃಶೀ ವಿಭೂಮ್ನಃ ।
ಕ್ವ ಸ್ವೇ ಮಹಿಮ್ನ್ಯಭಿರತೋ ಭಗವಾಂಸ್ಯಧೀಶಃ
ಕ್ವಾಹಂ ಗುಣಪ್ರಕೃತಿರಜ್ಞಗೃಹೀತಪಾದಾ ॥

ಅನುವಾದ

ರುಕ್ಮಿಣೀದೇವಿಯು ಹೇಳಿದಳು — ಕಮಲಾಕ್ಷನೇ! ನೀನು ಹೇಳಿರುವುದು ಸರಿಯಾಗಿಯೇ ಇದೆ. ಬಹಳ ದೊಡ್ಡವನಾದ ನಿನಗೆ ನಾನು ಖಂಡಿತವಾಗಿಯೂ ಸಮಾನಳಲ್ಲ. ಅಪಾರವಾದ ಮಹಿಮೆಯುಳ್ಳ, ಸ್ವಸ್ವರೂಪದಲ್ಲಿ ಆನಂದವನ್ನು ಹೊಂದುವ, ತ್ರಿಗುಣಗಳಿಗೆ ಸ್ವಾಮಿಯಾದ, ಬ್ರಹ್ಮಾದಿ ದೇವತೆಗಳಿಂದ ಸೇವಿತನಾದ ಷಡ್ಗುಣೈಶ್ವರ್ಯ ಸಂಪನ್ನನಾದ ನೀನೆಲ್ಲಿ? ತ್ರಿಗುಣಾತ್ಮಕ ಪ್ರಕೃತಿಯಾಗಿ, ಲಾಪೇಕ್ಷಿಗಳಾದ ಮೂಢರಿಂದ ವಂದಿಸಲ್ಪಡುವ ಪಾದಗಳುಳ್ಳ ನಾನೆಲ್ಲಿ? ॥34॥

(ಶ್ಲೋಕ-35)

ಮೂಲಮ್

ಸತ್ಯಂ ಭಯಾದಿವ ಗುಣೇಭ್ಯ ಉರುಕ್ರಮಾಂತಃ
ಶೇತೇ ಸಮುದ್ರ ಉಪಲಂಭನಮಾತ್ರ ಆತ್ಮಾ ।
ನಿತ್ಯಂ ಕದಿಂದ್ರಿಯಗಣೈಃ ಕೃತವಿಗ್ರಹಸ್ತ್ವಂ
ತ್ವತ್ಸೇವಕೈರ್ನೃಪಪದಂ ವಿಧುತಂ ತಮೋಂಧಮ್ ॥

ಅನುವಾದ

ತ್ರಿವಿಕ್ರಮಸ್ವರೂಪನೇ! ‘ರಾಜರಿಗೆ ಹೆದರಿ ಸಮುದ್ರವನ್ನು ಸೇರಿಕೊಂಡಿರುವೆವು’ ಎಂದು ನೀನು ಹೇಳಿದುದು ಸರಿಯೇ; ಆದರೆ ರಾಜರೆಂದರೆ ಭೂಮಂಡಲದರಾಜರಲ್ಲ. ಸತ್ತ್ವರಜಸ್ತಮಗಳೆಂಬ ಮೂವರು ರಾಜರು. ಅವರಿಗೆ ಹೆದರಿ ನೀನು ಅಂತಃಕರಣರೂಪವಾದ ಸಮುದ್ರದಲ್ಲಿ, ಸಚ್ಚಿದಾನಂದಮಯವಾದ ಆತ್ಮಸ್ವರೂಪದಲ್ಲಿ ರಾರಾಜಿಸುತ್ತಿರುವೆ. ‘ಬಲಿಷ್ಠರೊಡನೆ ದ್ವೇಷವನ್ನು ಕಟ್ಟಿಕೊಂಡವರು’ ಎಂದು ಹೇಳಿಕೊಂಡೆ. ಇದೂ ನಿಜವೇ. ಮಹಾಬಲಿಷ್ಠವಾದುದು ಈ ಇಂದ್ರಿಯಗಳೇ. ಅವರೊಂದಿಗೆ ನಿನ್ನ ವೈರವಿದ್ದೇ ಇದೆ. ‘ರಾಜಸಿಂಹಾಸನದಿಂದ ವಂಚಿತರಾದವರು’ ಎಂದು ಹೇಳಿದುದೂ ಸರಿಯೇ. ನಿನ್ನ ಪಾದ ಸೇವಕರೂ ಕೂಡ ರಾಜಪದವಿಯನ್ನು ಅಜ್ಞಾನಾಂಧಕಾರ ಮಯವಾದುದೆಂದು ಧಿಕ್ಕರಿಸುವಾಗ, ನಿತ್ಯತೃಪ್ತನೂ ಆಪ್ತ ಕಾಮನೂ ಆದ ನಿನ್ನ ವಿಷಯದಲ್ಲಿ ಹೇಳುವುದೇನಿದೆ? ॥35॥

(ಶ್ಲೋಕ-36)

ಮೂಲಮ್

ತ್ವತ್ಪಾದಪದ್ಮಮಕರಂದಜುಷಾಂ ಮುನೀನಾಂ
ವರ್ತ್ಮಾಸ್ಫುಟಂ ನೃಪಶುಭಿರ್ನನು ದುರ್ವಿಭಾವ್ಯಮ್ ।
ಯಸ್ಮಾದಲೌಕಿಕಮಿವೇಹಿತಮೀಶ್ವರಸ್ಯ
ಭೂಮಂಸ್ತವೇಹಿತಮಥೋ ಅನು ಯೇ ಭವಂತಮ್ ॥

ಅನುವಾದ

ನಾವು ಸ್ಪಷ್ಟವಾದ ಮಾರ್ಗವಿಲ್ಲದವರೆಂದೂ, ಲೌಕಕ ವ್ಯವಹಾರಗಳನ್ನು ಪಾಲಿಸತಕ್ಕ ವರಲ್ಲವೆಂದೂ, ಹೇಳಿಕೊಂಡೆ; ಇದೂ ಯಥಾರ್ಥವೇ ಆಗಿದೆ. ಏಕೆಂದರೆ, ನಿನ್ನ ಪಾದಪದ್ಮಗಳ ಮಕರಂದವನ್ನು ಸೇವಿಸುವವರ ಮಾರ್ಗವೂ ಅಸ್ಪಷ್ಟವಾಗಿರುತ್ತದೆ ಮತ್ತು ವಿಷಯಗಳಲ್ಲಿ ಮೈಮರೆತ ನರಪಶುಗಳಿಂದ ಅದನ್ನು ಊಹಿಸಲು ಸಾಧ್ಯವಾಗುವುದಿಲ್ಲ. ಓ ಅನಂತನೇ! ನಿನ್ನ ಮಾರ್ಗದಲ್ಲಿ ನಡೆಯುವ ನಿನ್ನ ಭಕ್ತರ ಚೇಷ್ಟೆಗಳೂ ಪ್ರಾಯಶಃ ಅಲೌಕಿಕವಾಗಿರುವಾಗ ಸಮಸ್ತ ಶಕ್ತಿಗಳ ಮತ್ತು ಐಶ್ವರ್ಯಗಳ ಆಶ್ರಯನಾದ ನಿನ್ನ ಚೇಷ್ಟೆಗಳು ಅಲೌಕಿವಾಗಿರುವುದರಲ್ಲಿ ಹೇಳುವುದೇನಿದೆ? ॥36॥

(ಶ್ಲೋಕ-37)

ಮೂಲಮ್

ನಿಷ್ಕಿಂಚನೋ ನನು ಭವಾನ್ ನ ಯತೋಸ್ತಿ ಕಿಂಚಿದ್
ಯಸ್ಮೈಬಲಿಂ ಬಲಿಭುಜೋಪಿ ಹರಂತ್ಯಜಾದ್ಯಾಃ ।
ನ ತ್ವಾ ವಿದಂತ್ಯಸುತೃಪೋಂತಕಮಾಢ್ಯತಾಂಧಾಃ
ಪ್ರೇಷ್ಠೋ ಭವಾನ್ ಬಲಿಭುಜಾಮಪಿ ತೇಪಿ ತುಭ್ಯಮ್ ॥

ಅನುವಾದ

ನಾವು ಅಕಿಂಚನರು ಎಂದು ಹೇಳಿಕೊಂಡೆ, ಆದರೆ ನಿನ್ನ ಅಕಿಂಚನತೆ ದರಿದ್ರತೆಯಲ್ಲ. ನೀನಲ್ಲದೆ ಬೇರೆ ಯಾವ ವಸ್ತುವೂ ಇಲ್ಲದಿರುವುದರಿಂದ ಎಲ್ಲವೂ ನೀನೇ ಆಗಿರುವೆ ಎಂಬುದೇ ಅರ್ಥವಾಗಿದೆ. ನಿನ್ನ ಬಳಿಯಲ್ಲಿ ಇಟ್ಟುಕೊಳ್ಳಲಿಕ್ಕಾಗಿ ಏನೂ ಇಲ್ಲ. ಆದರೆ ಯಾರು ಬ್ರಹ್ಮಾದಿ ದೇವತೆಗಳನ್ನು ಪೂಜಿಸುವರೋ, ಕಾಣಿಕೆಗಳನ್ನು ಅರ್ಪಿಸುವರೋ ಆ ಜನರೇ ನಿನ್ನನ್ನೂ ಪೂಜಿಸುತ್ತಲೇ ಇರುತ್ತಾರೆ. ನೀನು ಅವರಿಗೆ ಪ್ರಿಯನಾಗಿರುವೆ, ಅವರು ನಿನಗೆ ಪ್ರಿಯರಾಗಿರುವರು. ಧನಾಢ್ಯರಾದವರು ನನ್ನನ್ನು ಭಜಿಸುವುದಿಲ್ಲ ಎಂದು ನೀನು ಹೇಳಿದುದೂ ಉಚಿತವೇ ಆಗಿದೆ. ತಮ್ಮ ಶ್ರೀಮಂತಿಕೆಯ ಅಭಿಮಾನದಿಂದ ಕುರುಡರಾಗಿ, ಇಂದ್ರಿಯಗಳನ್ನು ತೃಪ್ತಿಪಡಿಸುವುದರಲ್ಲೇ ತೊಡಗಿರುವವರು ನಿನ್ನನ್ನು ಭಜಿಸುವುದಿಲ್ಲ, ಸೇವಿಸುವುದಿಲ್ಲ. ನೀನೇ ಮೃತ್ಯು(ಕಾಲ)ರೂಪದಿಂದ ಅವರ ತಲೆಯ ಮೇಲೆ ಕುಳಿತಿರುವೆ ಎಂಬುದನ್ನೂ ಅವರು ತಿಳಿಯರು. ॥37॥

(ಶ್ಲೋಕ-38)

ಮೂಲಮ್

ತ್ವಂ ವೈ ಸಮಸ್ತಪುರುಷಾರ್ಥಮಯಃ ಲಾತ್ಮಾ
ಯದ್ವಾಂಛಯಾ ಸುಮತಯೋ ವಿಸೃಜಂತಿ ಕೃತ್ಸ್ನಮ್ ।
ತೇಷಾಂ ವಿಭೋ ಸಮುಚಿತೋ ಭವತಃ ಸಮಾಜಃ
ಪುಂಸಃ ಸಿಯಾಶ್ಚ ರತಯೋಃ ಸುಖದುಃಖಿನೋರ್ನ ॥

ಅನುವಾದ

ಜಗತ್ತಿನಲ್ಲಿ ಜೀವಿಯ ವಾಂಛನೀಯವಾದ ಧರ್ಮ, ಅರ್ಥ, ಕಾಮ, ಮೋಕ್ಷ - ಇವೆಲ್ಲದರ ರೂಪದಲ್ಲಿ ನೀನೇ ಪ್ರಕಟನಾಗಿರುವೆ. ಸಮಸ್ತ ವೃತ್ತಿ-ಪ್ರವೃತ್ತಿಗಳು, ಸಾಧನೆಗಳು, ಸಿದ್ಧಿಗಳು ಮತ್ತು ಸಾಧ್ಯಗಳು ಇವೆಲ್ಲದರ ಫಲಸ್ವರೂಪ ನೀನೆ ಆಗಿರುವೆ. ವಿಚಾರ ಶೀಲರಾದ ಜನರು ನಿನ್ನನ್ನು ಪಡೆಯಲಿಕ್ಕಾಗಿ, ಎಲ್ಲವನ್ನೂ ಬಿಟ್ಟುಬಿಡುತ್ತಾರೆ. ಭಗವಂತಾ! ಅಂತಹ ವಿವೇಕೀ ಜನರೊಂದಿಗೆ ನಿನ್ನ ಸಂಬಂಧವಾಗಬೇಕು. ಸ್ತ್ರೀ-ಪುರುಷರ ಸಹವಾಸದಿಂದ ದೊರಕುವ ಸುಖ ಅಥವಾ ದುಃಖಗಳಿಗೆ ವಶೀಭೂತರಾದ ಜನರು ಎಂದಿಗೂ ನಿನ್ನೊಂದಿಗೆ ಸಂಬಂಧ ಬೆಳೆಸಲು ಯೋಗ್ಯರಾಗಿರುವುದಿಲ್ಲ. ॥38॥

(ಶ್ಲೋಕ-39)

ಮೂಲಮ್

ತ್ವಂ ನ್ಯಸ್ತದಂಡಮುನಿಭಿರ್ಗದಿತಾನುಭಾವ
ಆತ್ಮಾತ್ಮದಶ್ಚ ಜಗತಾಮಿತಿ ಮೇ ವೃತೋಸಿ ।
ಹಿತ್ವಾ ಭವದ್ಭ್ರುವ ಉದೀರಿತಕಾಲವೇಗ-
ಧ್ವಸ್ತಾಶಿಷೋಬ್ಜಭವನಾಕಪತೀನ್ ಕುತೋನ್ಯೇ ॥

ಅನುವಾದ

ಭಿಕ್ಷುಕರಿಂದ ವ್ಯರ್ಥವಾಗಿ ಪ್ರಶಂಸಿಸಲ್ಪಡುವವನು ಎಂದು ಹೇಳಿಕೊಂಡಿರುವೆ. ಆದರೆ ಯಾವ ಭಿಕ್ಷುಕರು? ಪರಮ ಶಾಂತರೂ, ಸಂನ್ಯಾಸಿಗಳೂ, ಮಹಾಪರಾಧಿಯನ್ನು ಶಿಕ್ಷಿಸಬಾರದೆಂದು ನಿಶ್ಚಯಿಸಿಕೊಂಡವರೂ ಆದ ಮಹಾತ್ಮರು ನಿನ್ನ ಮಹಿಮೆಯನ್ನು ವರ್ಣಿಸಿರುವರು. ನಾನು ದೂರದರ್ಶಿತ್ವವಿಲ್ಲದೆ ನಿನ್ನನ್ನು ವರಿಸಲಿಲ್ಲ. ನೀನು ಸಮಸ್ತ ಜಗತ್ತಿನ ಆತ್ಮನಾಗಿರುವೆ. ನಿನ್ನ ಪ್ರೇಮಿಗಳಿಗೆ ನಿನ್ನನ್ನೇ ಕೊಟ್ಟು ಕೊಳ್ಳುವೆ. ನೀನು ಕೇವಲ ಹುಬ್ಬನ್ನು ಹಾರಿಸಿದ ಮಾತ್ರದಿಂದ ಪ್ರೇರಿತವಾದ ಕಾಲವು ಬ್ರಹ್ಮೇಂದ್ರಾದಿಗಳ ಐಶ್ವರ್ಯವನ್ನೂ, ಆಕಾಂಕ್ಷೆಗಳನ್ನೂ ಧ್ವಂಸಮಾಡಿಬಿಡುತ್ತದೆ. ಇದನ್ನು ತಿಳಿದೇ ನಾನು ಅವರನ್ನು ತ್ಯಾಗಮಾಡಿರುವೆನು. ಹಾಗಿರುವಾಗ ಬೇರೆ ಯವರ ವಿಷಯದಲ್ಲಿ ಹೇಳುವುದೇನಿದೆ? ॥39॥

(ಶ್ಲೋಕ-40)

ಮೂಲಮ್

ಜಾಡ್ಯಂ ವಚಸ್ತವ ಗದಾಗ್ರಜ ಯಸ್ತು ಭೂಪಾನ್
ವಿದ್ರಾವ್ಯ ಶಾರ್ಙ್ಗನಿನದೇನ ಜಹರ್ಥ ಮಾಂ ತ್ವಮ್ ।
ಸಿಂಹೋ ಯಥಾ ಸ್ವಬಲಿಮೀಶ ಪಶೂನ್ ಸ್ವಭಾಗಂ
ತೇಭ್ಯೋ ಭಯಾದ್ಯದುದಧಿಂ ಶರಣಂ ಪ್ರಪನ್ನಃ ॥

ಅನುವಾದ

ಗದಾಗ್ರಜನೇ! ಸಿಂಹವು ತನ್ನ ಗರ್ಜನೆಯಿಂದ ಕಾಡಿನ ಮೃಗಗಳನ್ನು ಓಡಿಸಿ, ಅದರ ಭಾಗವನ್ನು ಕಚ್ಚಿಕೊಂಡು ಹೋಗುವಂತೆ ಕೇವಲ ಶಾರ್ಙ್ಗಧನುಸ್ಸಿನ ಟಂಕಾರದಿಂದಲೇ ಸಮಸ್ತ ರಾಜರನ್ನು ಓಡಿಸಿ, ನಿನ್ನ ದಾಸಿಯಾದ ನನ್ನನ್ನು ಅಪಹರಿಸಿಕೊಂಡು ಬಂದಿರುವೆ. ಇದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಹೀಗಿರುವಾಗ ರಾಜರಿಗೆ ಹೆದರಿ ಸಮುದ್ರವನ್ನು ಆಶ್ರಯಿಸಿರುವೆನು ಎಂಬ ನಿನ್ನ ಮಾತು ಯುಕ್ತಿಯುಕ್ತವಾಗಿ ಕಾಣುವುದಿಲ್ಲ. ॥40॥

(ಶ್ಲೋಕ-41)

ಮೂಲಮ್

ಯದ್ವಾಂಛಯಾ ನೃಪಶಿಖಾಮಣಯೋಂಗವೈನ್ಯ-
ಜಾಯಂತನಾಹುಷಗಯಾದಯ ಐಕಪತ್ಯಮ್ ।
ರಾಜ್ಯಂ ವಿಸೃಜ್ಯ ವಿವಿಶುರ್ವನಮಂಬುಜಾಕ್ಷ
ಸೀದಂತಿ ತೇನುಪದವೀಂ ತ ಇಹಾಸ್ಥಿತಾಃ ಕಿಮ್ ॥

ಅನುವಾದ

ಕಮಲನಯನ! ‘ನನ್ನನ್ನು ಅನುಸರಿಸಿದವರು ಪ್ರಾಯಶಃ ಕಷ್ಟವನ್ನೇ ಪಡುತ್ತಾರೆ’ ಎಂದು ನೀನು ಹೇಗೆ ಹೇಳಬಲ್ಲೆ? ಹಿಂದೆ ಅಂಗ, ಪೃಥು, ಭರತ, ಯಯಾತಿ, ಗಯ ಇವೇ ಮೊದಲಾದ ರಾಜಾಧಿರಾಜರು ತಮ್ಮ ಏಕಚ್ಛತ್ರ ಸಾಮ್ರಾಜ್ಯವನ್ನು ಪರಿತ್ಯಜಿಸಿ ಕೇವಲ ನಿನ್ನನ್ನು ಸೇರಬೇಕೆಂಬ ಮಹತ್ವಾಕಾಂಕ್ಷೆಯಿಂದ ತಪಸ್ಸು ಮಾಡಲು ಅರಣ್ಯಕ್ಕೆ ಹೋದರು. ನಿನ್ನನ್ನು ಅನುಸರಣೆ ಮಾಡಿದ ಅವರು ಏನಾದರೂ ಕಷ್ಟವನ್ನು ಅನುಭವಿಸುತ್ತಿರುವರೇ? ॥41॥

(ಶ್ಲೋಕ-42)

ಮೂಲಮ್

ಕಾನ್ಯಂ ಶ್ರಯೇತ ತವ ಪಾದಸರೋಜಗಂಧಮ್
ಆಘ್ರಾಯ ಸನ್ಮುಖರಿತಂ ಜನತಾಪವರ್ಗಮ್ ।
ಲಕ್ಷ್ಮ್ಯಾಲಯಂ ತ್ವವಿಗಣಯ್ಯ ಗುಣಾಲಯಸ್ಯ
ಮರ್ತ್ಯಾ ಸದೋರುಭಯಮರ್ಥವಿವಿಕ್ತದೃಷ್ಟಿಃ ॥

ಅನುವಾದ

ಬೇರೆ ಯಾರಾದರೂ ರಾಜಕುಮಾರನನ್ನು ವರಿಸೆಂದು ನೀನು ನನಗೆ ಸಲಹೆ ಮಾಡಿದೆ. ಭಗವಂತಾ! ನೀನು ಸಮಸ್ತ ಗುಣಗಳಿಗೆ ಏಕಮಾತ್ರ ಆಶ್ರಯನಾಗಿರುವೆ. ಸತ್ಪುರುಷರು ನಿನ್ನ ಚರಣ ಕಮಲಗಳ ಗಂಧವನ್ನು ಆಘ್ರಾಣಿಸಿ ಅವನ್ನು ಗಾನ ಮಾಡುತ್ತಲೇ ಇರುತ್ತಾರೆ. ದಿವ್ಯವಾದ ಆ ನಿನ್ನ ಚರಣ ಕಮಲಗಳ ಆಶ್ರಯವನ್ನು ಹೊಂದಿದೊಡನೆಯೇ ಸಂಸಾರದ ಪಾಪ-ತಾಪಗಳಿಂದ ಮುಕ್ತಿ ಸಿಗುತ್ತದೆ. ಲಕ್ಷ್ಮಿಯು ಸದಾಕಾಲ ಅವುಗಳಲ್ಲೇ ನಿವಾಸಮಾಡಿಕೊಂಡಿದ್ದಾಳೆ. ತನ್ನ ಸ್ವಾರ್ಥ ಪರಮಾರ್ಥಗಳನ್ನು ಚೆನ್ನಾಗಿ ತಿಳಿದಿರುವ ಯಾವ ಸ್ತ್ರೀಯು ತಾನೇ ಒಮ್ಮೆ ಅಂತಹ ಚರಣಕಮಲಗಳ ಗಂಧವನ್ನು ಆಘ್ರಾಣಿಸಿದ ಬಳಿಕ ಅದನ್ನು ತಿರಸ್ಕರಿಸಿ, ಹುಟ್ಟು-ಸಾವುಗಳ, ರೋಗ-ರುಜಿನಗಳ ಭಯದಿಂದ ಪೀಡಿತರಾದ ಮನುಷ್ಯರನ್ನು ವರಿಸಿಯಾಳು? ಬುದ್ಧಿವಂತೆಯಾದ ಯಾವ ಸ್ತ್ರೀಯೂ ಹಾಗೆ ಮಾಡಲಾರಳು. ॥42॥

(ಶ್ಲೋಕ-43)

ಮೂಲಮ್

ತಂ ತ್ವಾನುರೂಪಮಭಜಂ ಜಗತಾಮಧೀಶ-
ಮಾತ್ಮಾನಮತ್ರ ಚ ಪರತ್ರ ಚ ಕಾಮಪೂರಮ್ ।
ಸ್ಯಾನ್ಮೇ ತವಾಂಘ್ರಿರರಣಂ ಸೃತಿಭಿರ್ಭ್ರಮಂತ್ಯಾ
ಯೋ ವೈ ಭಜಂತಮುಪಯಾತ್ಯನೃತಾಪವರ್ಗಃ ॥

ಅನುವಾದ

ಪ್ರಭುವೇ! ಸಮಸ್ತ ಜಗತ್ತಿಗೂ ನೀನೇ ಸ್ವಾಮಿಯಾಗಿರುವೆ. ನೀನು ಇಹ-ಪರಲೋಕಗಳಲ್ಲಿರುವ ಸಮಸ್ತ ಪ್ರಾಣಿಗಳ ಆಸೆ ಆಕಾಂಕ್ಷೆಗಳನ್ನು ಪೂರ್ಣಗೊಳಿಸುವವನೂ ಮತ್ತು ಆತ್ಮನೂ ಆಗಿರುವೆ. ಅಂತಹ ನಿನ್ನನ್ನು ಆತ್ಮರೂಪನೆಂದೇ ತಿಳಿದು ನಾನು ವರಿಸಿರುವೆನು. ನನ್ನ ಕರ್ಮಕ್ಕೆ ಅನುಸಾರವಾಗಿ ಬೇರೆ-ಬೇರೆ ಯೋನಿಗಳಲ್ಲಿ ಹುಟ್ಟಬೇಕಾದರೂ ನಾನು ಆ ಬಗ್ಗೆ ಯೋಚಿಸುವುದಿಲ್ಲ. ನಿನ್ನನ್ನು ಸದಾ ಭಜಿಸುವವರ ಮಿಥ್ಯಾಸಂಸಾರವನ್ನು ನಾಶಗೊಳಿಸುವ ನಿನ್ನ ಚರಣಕಮಲಗಳೇ ನನಗೆ ಎಲ್ಲ ಜನ್ಮಗಳಲ್ಲಿಯೂ ಆಶ್ರಯವಾಗಿರಲೆಂಬ ಒಂದೇ ಅಭಿಲಾಷೆ ಇರುವುದು. ॥43॥

(ಶ್ಲೋಕ-44)

ಮೂಲಮ್

ತಸ್ಯಾಃ ಸ್ಯುರಚ್ಯುತ ನೃಪಾ ಭವತೋಪದಿಷ್ಟಾಃ
ಸೀಣಾಂ ಗೃಹೇಷು ಖರಗೋಶ್ವಬಿಡಾಲಭೃತ್ಯಾಃ ।
ಯತ್ಕರ್ಣಮೂಲಮರಿಕರ್ಷಣ ನೋಪಯಾಯಾದ್
ಯುಷ್ಮತ್ಕಥಾಮೃಡವಿರಿಂಚಸಭಾಸು ಗೀತಾ ॥

ಅನುವಾದ

ಅಚ್ಯುತನೇ! ಶತ್ರುಧ್ವಂಸನೇ! ಕತ್ತೆಗಳಂತೆ, ಎತ್ತುಗಳಂತೆ, ಕುದುರೆಗಳಂತೆ, ಬೆಕ್ಕುಗಳಂತೆ ಮತ್ತು ಭೃತ್ಯರಂತೆ ಅರಮನೆಯಲ್ಲಿ ಹೆಂಗಸರ ಸೇವೆ ಮಾಡಿಕೊಂಡಿರುವ ರಾಜರ ಕುರಿತು ವರಿಸಲು ನೀನು ಸಂಕೇತ ಮಾಡಿರುವೆ. ಆದರೆ ಶಂಕರ, ಬ್ರಹ್ಮಾದಿ ದೇವತೆಗಳ ಸಭೆಯಲ್ಲಿ ಗಾನಮಾಡಲ್ಪಡುವ ನಿನ್ನ ಲೀಲಾಕಥೆಗಳು ಯಾರ ಕಿವಿಗಳಲ್ಲಿ ಪ್ರವೇಶ ಮಾಡಲಿಲ್ಲವೋ ಅಂತಹ ದುರ್ಭಾಗ್ಯರಾದ ಸ್ತ್ರೀಯರೇ ಆ ರಾಜರನ್ನು ವರಿಸಲಿ. ॥44॥

(ಶ್ಲೋಕ-45)

ಮೂಲಮ್

ತ್ವಕ್ಶ್ಮಶ್ರುರೋಮನಖಕೇಶಪಿನದ್ಧಮಂತ-
ರ್ಮಾಂಸಾಸ್ಥಿರಕ್ತಕೃಮಿವಿಟ್ಕಪಿತ್ತವಾತಮ್ ।
ಜೀವಚ್ಛವಂ ಭಜತಿ ಕಾಂತಮತಿರ್ವಿಮೂಢಾ
ಯಾ ತೇ ಪದಾಬ್ಜಮಕರಂದಮಜಿಘ್ರತೀ ಸೀ ॥

ಅನುವಾದ

ಈ ಮನುಷ್ಯ ಶರೀರವು ಜೀವಿಸಿದ್ದರೂ ಹೆಣದಂತೆ ಇದೆ. ಮೇಲಿನಿಂದ ಚರ್ಮ, ಗಡ್ಡ-ಮೀಸೆ, ರೋಮ, ನಖ, ಕೂದಲುಗಳಿಂದ ಮುಚ್ಚಿರುತ್ತದೆ. ಆದರೆ ಇದರೊಳಗೆ ಮಾಂಸ, ಎಲುಬು, ರಕ್ತ, ಕ್ರಿಮಿ, ಮಲಮೂತ್ರ, ಕಫ-ಪಿತ್ತ ವಾತಗಳಿಂದ ತುಂಬಿದೆ. ಎಂದಿಗೂ ನಿನ್ನ ಚರಣಾರವಿಂದದ ಮಕರಂದವನ್ನು ಆಘ್ರಾಣಿಸದ ಮೂಢ ಸ್ತ್ರೀಯರೇ ಇಂತಹವರನ್ನು ತಮ್ಮ ಪ್ರಿಯತಮನೆಂದು ತಿಳಿದು ಸೇವಿಸುತ್ತಿರುವರು. ॥45॥

(ಶ್ಲೋಕ-46)

ಮೂಲಮ್

ಅಸ್ತ್ವಂಬುಜಾಕ್ಷ ಮಮ ತೇ ಚರಣಾನುರಾಗ
ಆತ್ಮನ್ರತಸ್ಯ ಮಯಿ ಚಾನತಿರಿಕ್ತದೃಷ್ಟೇಃ ।
ಯರ್ಹ್ಯಸ್ಯ ವೃದ್ಧಯ ಉಪಾತ್ತರಜೋತಿಮಾತ್ರೋ
ಮಾಮೀಕ್ಷಸೇ ತದು ಹ ನಃ ಪರಮಾನುಕಂಪಾ ॥

ಅನುವಾದ

ಕಮಲಾಕ್ಷನೇ! ನೀನು ಆತ್ಮಾರಾಮನಾಗಿರುವೆ. ನಾನು ಸುಂದರಳಾಗಿದ್ದೇನೆ, ಗುಣವತಿಯಾಗಿದ್ದೇನೆ ಇದರ ಕಡೆಗೆ ನಿನ್ನ ದೃಷ್ಟಿಯೇ ಹೋಗುವುದಿಲ್ಲ. ಆದ್ದರಿಂದ ನೀನು ಉದಾಸೀನನಾಗಿರುವುದು ಸ್ವಾಭಾವಿಕವೇ ಆಗಿದೆ. ಹೀಗಿದ್ದರೂ ನಿನ್ನ ಚರಣಕಮಲಗಳಲ್ಲಿ ನನ್ನ ಅನುರಾಗವು ಸುದೃಢವಾಗಿರಲೆಂದೇ ನನಗೆ ಅಭಿಲಾಷೆಯು. ನೀನು ಈ ಜಗತ್ತಿನ ಅಭಿವೃದ್ಧಿಗೆ ಉತ್ಕಟ ರಜೋಗುಣವನ್ನು ಸ್ವೀಕರಿಸಿ ನನ್ನ ಕಡೆಗೆ ನೋಡಿದಾಗಲೇ ನಿನ್ನ ಪರಮಾನುಗ್ರಹವಾಗಿದೆ.॥46॥

(ಶ್ಲೋಕ-47)

ಮೂಲಮ್

ನೈವಾಲೀಕಮಹಂ ಮನ್ಯೇ ವಚಸ್ತೇ ಮಧುಸೂದನ ।
ಅಂಬಾಯಾ ಇವ ಹಿ ಪ್ರಾಯಃ ಕನ್ಯಾಯಾಃ ಸ್ಯಾದ್ರತಿಃ ಕ್ವಚಿತ್ ॥

ಅನುವಾದ

ಮಧುಸೂದನ! ‘ನಿನಗೆ ಅನುರೂಪನಾದ ಕ್ಷತ್ರಿಯ ಶ್ರೇಷ್ಠನನ್ನು ನೀನು ಸೇವಿಸು’ ಎಂದೂ ನೀನೇ ಹೇಳಿದೆ. ನಿನ್ನ ಮಾತು ಸುಳ್ಳೆಂದು ನಾನು ಭಾವಿಸುವುದಿಲ್ಲ. ಕೆಲವರ ವಿಷಯದಲ್ಲಿ ಇದು ನಿಜ. ಕಾಶೀರಾಜನ ಮಗಳಾದ ಅಂಬೆಯು ಮೊದಲು ಒಬ್ಬನನ್ನು ಪ್ರೀತಿಸಿ, ಅನಂತರ ಮತ್ತೊಬ್ಬನನ್ನು ಪ್ರೀತಿಸಿದಳು. ಹಾಗೆಯೇ ಕೆಲವು ಕನ್ಯೆಯರು ಮೊದಲು ಒಬ್ಬನನ್ನು ಪ್ರೀತಿಸಿದ್ದು ಬಳಿಕ ಬೇರೆಯವರನ್ನು ಪ್ರೀತಿಸಬಹುದು. ॥47॥

(ಶ್ಲೋಕ-48)

ಮೂಲಮ್

ವ್ಯೆಢಾಯಾಶ್ಚಾಪಿ ಪುಂಶ್ಚಲ್ಯಾ ಮನೋಭ್ಯೇತಿ ನವಂ ನವಮ್ ।
ಬುಧೋಸತೀಂ ನ ಬಿಭೃಯಾತ್ ತಾಂ ಬಿಭ್ರದುಭಯಚ್ಯುತಃ ॥

ಅನುವಾದ

ಕುಲಟೆಯಾದ ಸ್ತ್ರೀಯಳ ಮನಸ್ಸು ವಿವಾಹವಾದ ಬಳಿಕವೂ ಹೊಸ-ಹೊಸ ಪುರುಷರ ಕಡೆಗೆ ಸೆಳೆಯಲ್ಪಡುತ್ತದೆ. ಬುದ್ಧಿವಂತನಾದವನು ಇಂತಹ ಕುಲಟೆಯಾದ ಸ್ತ್ರೀಯನ್ನು ಇಟ್ಟುಕೊಳ್ಳಬಾರದು. ಅಂತಹವಳನ್ನು ತನ್ನವಳನ್ನಾಗಿಸಿಕೊಳ್ಳುವವರು ಇಹ-ಪರ ಎರಡೂ ಲೋಕಗಳನ್ನು ಕಳೆದುಕೊಳ್ಳುವರು. ಉಭಯ ಭ್ರಷ್ಟರಾಗುವರು. ॥48॥

(ಶ್ಲೋಕ-49)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಸಾಧ್ವ್ಯೇತಚ್ಛ್ರೋತುಕಾಮೈಸ್ತ್ವಂ ರಾಜಪುತ್ರಿ ಪ್ರಲಂಬಿತಾ ।
ಮಯೋದಿತಂ ಯದನ್ವಾತ್ಥ ಸರ್ವಂ ತತ್ ಸತ್ಯಮೇವ ಹಿ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ಸಾಧ್ವಿಯೇ! ರಾಜಕುಮಾರಿಯೇ! ನಿನ್ನ ಇಂತಹ ಮಾತುಗಳನ್ನು ಕೇಳ ಬೇಕೆಂದೇ ನಾನು ನಿನ್ನಲ್ಲಿ ಹೀಗೆ ಪರಿಹಾಸದ ಮಾತುಗಳನ್ನಾಡಿದೆ. ನಾನು ಹೇಳಿದುದಕ್ಕೆ ನಿನ್ನ ವ್ಯಾಖ್ಯಾನವು ಸಮಂಜಸವಾಗಿದೆ. ಸತ್ಯವಾಗಿಯೂ ಇದೆ. ॥49॥

ಮೂಲಮ್

(ಶ್ಲೋಕ-50)
ಯಾನ್ ಯಾನ್ ಕಾಮಯಸೇ ಕಾಮಾ ನ್ಮಯ್ಯಕಾಮಾಯ ಭಾಮಿನಿ ।
ಸಂತಿ ಹ್ಯೇಕಾಂತಭಕ್ತಾಯಾ ಸ್ತವ ಕಲ್ಯಾಣಿ ನಿತ್ಯದಾ ॥

ಅನುವಾದ

ಸುಂದರೀ! ನೀನು ನನ್ನ ಅನನ್ಯ ಪ್ರೇಯಸಿಯಾಗಿರುವೆ. ನಿನಗೆ ನನ್ನಲ್ಲಿಯೂ ಅನನ್ಯ ಪ್ರೀತಿಯಿದೆ. ನೀನು ನನ್ನಿಂದ ಬಯಸುವುದೆಲ್ಲವೂ ನಿನಗೆ ಸರ್ವದಾ ಸಿದ್ಧವಾಗಿಯೇ ಇದೆ. ನನ್ನಲ್ಲಿ ಮಾಡಿದ ಅಭಿಲಾಷೆಗಳು ಸಾಂಸಾರಿಕ ಕಾಮನೆಗಳಂತೆ ಬಂಧನಕ್ಕೆ ಕಾರಣವಾಗುವುದಿಲ್ಲ. ಏಕಾಂತ ಭಕ್ತೆಯಾದ ನಿನಗೆ ಇತರ ಎಲ್ಲ ಕಾಮನೆಗಳನ್ನು ನಿವೃತ್ತಿಗೊಳಿಸಿ ನನ್ನನ್ನೇ ಸೇರಲು ಅನುವು ಮಾಡಿಕೊಡುತ್ತದೆ. ॥50॥

(ಶ್ಲೋಕ-51)

ಮೂಲಮ್

ಉಪಲಬ್ಧಂ ಪತಿಪ್ರೇಮ ಪಾತಿವ್ರತ್ಯಂ ಚ ತೇನಘೇ ।
ಯದ್ವಾಕ್ಯೈಶ್ಚಾಲ್ಯಮಾನಾಯಾ ನ ಧೀರ್ಮಯ್ಯಪಕರ್ಷಿತಾ ॥

ಅನುವಾದ

ಪುಣ್ಯಾತ್ಮಳೇ! ನಾನು ನಿನ್ನ ಪತಿಪ್ರೇಮವನ್ನೂ, ಪಾತಿವ್ರತ್ಯವನ್ನೂ ಚೆನ್ನಾಗಿ ಕಂಡುಕೊಂಡೆ. ಬುದ್ಧಿಯನ್ನು ಕದಲಿಸಬಹುದಾದ ನನ್ನ ಮಾತುಗಳಿಂದಲೂ ನಿನ್ನ ಬುದ್ಧಿಯು ನನ್ನಿಂದ ಸ್ವಲ್ಪವಾದರೂ ವಿಚಲಿತವಾಗಲಿಲ್ಲ. ॥51॥

(ಶ್ಲೋಕ-52)

ಮೂಲಮ್

ಯೇ ಮಾಂ ಭಜಂತಿ ದಾಂಪತ್ಯೇ ತಪಸಾ ವ್ರತಚರ್ಯಯಾ ।
ಕಾಮಾತ್ಮಾನೋಪವರ್ಗೇಶಂ ಮೋಹಿತಾ ಮಮ ಮಾಯಯಾ ॥

ಅನುವಾದ

ಪ್ರಿಯೇ! ನಾನು ಮೋಕ್ಷಕ್ಕೆ ಸ್ವಾಮಿಯಾಗಿರುವೆನು. ಜನರನ್ನು ಸಂಸಾರ ಸಾಗರದಿಂದ ಪಾರು ಮಾಡುತ್ತೇನೆ. ನಾನಾ ವಿಧದ ವ್ರತ, ತಪಸ್ಸು ಮಾಡುತ್ತಾ ದಾಂಪತ್ಯ ಜೀವನದ ವಿಷಯ-ಸುಖದ ಅಭಿಲಾಷೆಯಿಂದ ನನ್ನ ಭಜನೆ ಮಾಡುವ ಸಕಾಮ ಪುರುಷರು ನನ್ನ ಮಾಯೆಯಿಂದ ಮೋಹಿತರಾಗಿದ್ದಾರೆ. ॥52॥

(ಶ್ಲೋಕ-53)

ಮೂಲಮ್

ಮಾಂ ಪ್ರಾಪ್ಯ ಮಾನಿನ್ಯಪವರ್ಗಸಂಪದಂ
ವಾಂಛಂತಿ ಯೇ ಸಂಪದ ಏವ ತತ್ಪತಿಮ್ ।
ತೇ ಮಂದಭಾಗ್ಯಾ ನಿರಯೇಪಿ ಯೇ ನೃಣಾಂ
ಮಾತ್ರಾತ್ಮಕತ್ವಾನ್ನಿರಯಃ ಸುಸಂಗಮಃ ॥

ಅನುವಾದ

ಮಾನಿನಿಯೇ! ನಾನು ಮೋಕ್ಷಕ್ಕೂ ಮತ್ತು ಸಮಸ್ತ ಸಂಪತ್ತುಗಳಿಗೂ ಅಧೀಶ್ವರನಾಗಿದ್ದೇನೆ. ಪರಮಾತ್ಮನಾದ ನನ್ನನ್ನು ಪಡೆದ ಬಳಿಕವೂ, ಯಾರು ಕೇವಲ ವಿಷಯಸುಖದ ಸಾಧನವಾದ ಸಂಪತ್ತನ್ನೇ ಬಯಸುತ್ತಾರೋ, ನನ್ನ ಪರಾಭಕ್ತಿಯನ್ನು ಬಯಸುವುದಿಲ್ಲವೋ ಅವರು ಮಂದಭಾಗ್ಯರೇ ಸರಿ, ಏಕೆಂದರೆ, ವಿಷಯಸುಖವಾದರೋ ನರಕದಲ್ಲಿ ಮತ್ತು ನರಕಕ್ಕೆ ಸಮಾನವಾದ ಹಂದಿ, ನಾಯಿ ಮೊದಲಾದ ಯೋನಿಗಳಲ್ಲಿಯೂ ದೊರಕಬಲ್ಲದು. ಆದರೆ ಆ ಜನರ ಮನಸ್ಸು ವಿಷಯಗಳಲ್ಲೇ ತೊಡಗಿರುತ್ತದೆ ಅದಕ್ಕಾಗಿ ಅವರಿಗೆ ನರಕಕ್ಕೆ ಹೋಗುವುದೂ ಒಳ್ಳೆಯದೆ ನಿಸುತ್ತದೆ. ॥53॥

(ಶ್ಲೋಕ-54)

ಮೂಲಮ್

ದಿಷ್ಟ್ಯಾ ಗೃಹೇಶ್ವರ್ಯಸಕೃನ್ಮಯಿ ತ್ವಯಾ
ಕೃತಾನುವೃತ್ತಿರ್ಭವಮೋಚನೀ ಖಲೈಃ ।
ಸುದುಷ್ಕರಾಸೌ ಸುತರಾಂ ದುರಾಶಿಷೋ
ಹ್ಯಸುಂಭರಾಯಾ ನಿಕೃತಿಂಜುಷಃ ಸಿಯಾಃ ॥

ಅನುವಾದ

ಗೃಹೇಶ್ವರಿಯೇ! ಪ್ರಾಣಪ್ರಿಯಳೇ! ನೀನು ಅದೃಷ್ಟವಶದಿಂದ ಸಂಸಾರಬಂಧನದಿಂದ ವಿಮುಕ್ತಗೊಳಿಸುವ ನನ್ನ ಸೇವೆಯನ್ನು ನಿರಂತರವಾಗಿ ಮಾಡುತ್ತಿರುವೆ. ದುಷ್ಟರಾದವರು ಹೀಗೆಂದೂ ಮಾಡಲಾರರು. ಅದರಲ್ಲಿಯೂ ದುಷ್ಟವಾದ ಕಾಮನೆಗಳಿಂದ ತುಂಬಿಹೋಗುವ ಮನಸ್ಸುಳ್ಳ. ಇಂದ್ರಿಯಗಳ ತೃಪ್ತಿಗಾಗಿ ಅನೇಕ ವಂಚನೆಗಳನ್ನು ಮಾಡುವ ಹೆಂಗಸಿಗೆ ಇಂತಹ ನಿಷ್ಕಾಮ ಸೇವೆಯನ್ನಂತೂ ಮಾಡಲು ಸಾಧ್ಯವೇ ಆಗುವುದಿಲ್ಲ. ॥54॥

(ಶ್ಲೋಕ-55)

ಮೂಲಮ್

ನ ತ್ವಾದೃಶೀಂ ಪ್ರಣಯಿನೀಂ ಗೃಹಿಣೀಂ ಗೃಹೇಷು
ಪಶ್ಯಾಮಿ ಮಾನಿನಿ ಯಯಾ ಸ್ವವಿವಾಹಕಾಲೇ ।
ಪ್ರಾಪ್ತಾನ್ನೃಪಾನವಗಣಯ್ಯ ರಹೋಹರೋ ಮೇ
ಪ್ರಸ್ಥಾಪಿತೋ ದ್ವಿಜ ಉಪಶ್ರುತಸತ್ಕಥಸ್ಯ ॥

ಅನುವಾದ

ಮಾನಿನಿಯೇ! ನನಗೆ ನನ್ನ ಮನೆಗಳಲ್ಲಿ ನಿನ್ನಂತೆ ಪ್ರೇಮಿಸುವ ಭಾರ್ಯೆ ಬೇರೆಯಾರೂ ಕಂಡುಬರುವುದಿಲ್ಲ. ಏಕೆಂದರೆ, (ವಿವಾಹದ ಸಮಯದಲ್ಲಿ) ನೀನು ನನ್ನನ್ನು ನೋಡಿರಲಿಲ್ಲ, ಕೇವಲ ನನ್ನ ಪ್ರಶಂಸೆಯನ್ನು ಕೇಳಿದ್ದೆಯಷ್ಟೆ. ಆಗಲೂ ನಿನ್ನ ವಿವಾಹಕ್ಕೆ ಬಂದಿರುವ ರಾಜರನ್ನು ಉಪೇಕ್ಷೆಮಾಡಿ ಬ್ರಾಹ್ಮಣನ ಮೂಲಕ ನನ್ನ ಬಳಿಗೆ ಗುಪ್ತ ಸಂದೇಶವನ್ನು ಕಳಿಸಿದ್ದೆ. ॥55॥

(ಶ್ಲೋಕ-56)

ಮೂಲಮ್

ಭ್ರಾತುರ್ವಿರೂಪಕರಣಂ ಯುಧಿ ನಿರ್ಜಿತಸ್ಯ
ಪ್ರೋದ್ವಾಹಪರ್ವಣಿ ಚ ತದ್ವಧಮಕ್ಷಗೋಷ್ಠ್ಯಾಮ್ ।
ದುಃಖಂ ಸಮುತ್ಥಮಸಹೋಸ್ಮದಯೋಗಭೀತ್ಯಾ
ನೈವಾಬ್ರವೀಃ ಕಿಮಪಿ ತೇನ ವಯಂ ಜಿತಾಸ್ತೇ ॥

ಅನುವಾದ

ನಿನ್ನನ್ನು ಅಪಹರಿಸಿಕೊಂಡು ಬರುವಾಗ ನಿನ್ನ ಅಣ್ಣನನ್ನು ಯುದ್ಧದಲ್ಲಿ ಗೆದ್ದು ವಿರೂಪಗೊಳಿಸಿದ್ದೆ ಹಾಗೂ ಅನಿರುದ್ಧನ ವಿವಾಹ ಮಹೋತ್ಸವದಲ್ಲಿ ಪಗಡೆ ಯಾಡುವಾಗ ಬಲರಾಮನು ರುಕ್ಮಿಯನ್ನು ಕೊಂದುಹಾಕಿದನು. ಆದರೆ ನನ್ನಿಂದ ವಿಯೋಗವಾಗುವ ಭಯದಿಂದ ನೀನು ಮೌನವಾಗಿ ಎಲ್ಲ ದುಃಖವನ್ನು ನುಂಗಿಕೊಂಡೆ. ನನ್ನಲ್ಲಿ ಒಂದು ಮಾತೂ ಆಡಲಿಲ್ಲ. ನಿನ್ನ ಈ ಗುಣದಿಂದ ನಾನು ನಿನ್ನ ವಶನಾಗಿಬಿಟ್ಟಿದ್ದೇನೆ. ॥56॥

(ಶ್ಲೋಕ-57)

ಮೂಲಮ್

ದೂತಸ್ತ್ವಯಾತ್ಮಲಭನೇ ಸುವಿವಿಕ್ತಮಂತ್ರಃ
ಪ್ರಸ್ಥಾಪಿತೋ ಮಯಿ ಚಿರಾಯತಿ ಶೂನ್ಯಮೇತತ್ ।
ಮತ್ವಾ ಜಿಹಾಸ ಇದಮಂಗಮನನ್ಯಯೋಗ್ಯಂ
ತಿಷ್ಠೇತ ತತ್ತ್ವಯಿ ವಯಂ ಪ್ರತಿನಂದಯಾಮಃ ॥

ಅನುವಾದ

ನೀನು ನನ್ನ ಪ್ರಾಪ್ತಿಗಾಗಿ ಬ್ರಾಹ್ಮಣನ ಮೂಲಕ ಗುಪ್ತ ಸಂದೇಶವನ್ನು ಕಳಿಸಿದ್ದೆ, ಆದರೆ ನಾನು ತಲುಪಲು ಸ್ವಲ್ಪ ತಡವಾದಾಗ ನಿನಗೆ ಇಡೀ ಜಗತ್ತೇ ಶೂನ್ಯವಾದಂತಾಗಿತ್ತು. ಆ ಸಮಯದಲ್ಲಿ ನಿನ್ನ ಈ ಸರ್ವಾಂಗ ಸುಂದರ ಶರೀರವನ್ನು ಬೇರೆ ಯಾರಿಗೂ ಅರ್ಪಿಸುವುದು ಯೋಗ್ಯವಲ್ಲವೆಂದು ತಿಳಿದು ಅದನ್ನು ಬಿಟ್ಟು ಬಿಡುವ ಸಂಕಲ್ಪವನ್ನು ಮಾಡಿದೆ. ನಿನ್ನ ಈ ಪ್ರೇಮಭಾವವು ನಿನ್ನೊಳಗೆ ಇರಲಿ. ಇದಕ್ಕೆ ಬದಲಾಗಿ ನಾನು ಏನನ್ನೂ ಕೊಡಲಾರೆ. ಸರ್ವೋಚ್ಚವಾದ ನಿನ್ನ ಈ ಪ್ರೇಮಭಾವವನ್ನು ನಾನು ಅಭಿನಂದಿಸುತ್ತೇನೆ. ॥57॥

(ಶ್ಲೋಕ-58)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಂ ಸೌರತಸಂಲಾಪೈರ್ಭಗವಾನ್ ಜಗದೀಶ್ವರಃ ।
ಸ್ವರತೋ ರಮಯಾ ರೇಮೇ ನರಲೋಕಂ ವಿಡಂಬಯನ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಜಗದೀಶ್ವರನಾದ ಭಗವಾನ್ ಶ್ರೀಕೃಷ್ಣನು ಆತ್ಮಾರಾಮನಾಗಿದ್ದಾನೆ. ಅವನು ಮನುಷ್ಯರಂತೆ ಲೀಲೆ ಮಾಡುತ್ತಿರುವಾಗ ಅದರಲ್ಲಿ ದಾಂಪತ್ಯ ಪ್ರೇಮವನ್ನು ವೃದ್ಧಿಪಡಿಸುವ ವಿನೋದದಿಂದ ತುಂಬಿದ ಮಾತು-ಕತೆಯನ್ನು ಮಾಡುತ್ತಾ ಮತ್ತು ಹೀಗೆ ಲಕ್ಷ್ಮೀರೂಪಳಾದ ರುಕ್ಮಿಣಿಯೊಂದಿಗೆ ವಿಹರಿಸುತ್ತಿದ್ದನು. ॥58॥

ಮೂಲಮ್

(ಶ್ಲೋಕ-59)
ತಥಾನ್ಯಾಸಾಮಪಿ ವಿಭುರ್ಗೃಹೇಷು ಗೃಹವಾನಿವ ।
ಆಸ್ಥಿತೋ ಗೃಹಮೇಧೀಯಾಂಧರ್ಮಾಂಲ್ಲೋಕಗುರುರ್ಹರಿಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಸಮಸ್ತ ಜಗತ್ತಿಗೆ ಶಿಕ್ಷಣವನ್ನು ಕೊಡುವ ಸರ್ವವ್ಯಾಪಕನಾಗಿದ್ದಾನೆ. ಅವನು ಹೀಗೆಯೇ ಇತರ ಪತ್ನಿಯರ ಅರಮನೆಗಳಲ್ಲಿಯೂ ಗೃಹಸ್ಥರಂತೆ ಇರುತ್ತಾ, ಗೃಹಸ್ಥೋಚಿತವಾದ ಧರ್ಮವನ್ನು ಪಾಲಿಸುತ್ತಿದ್ದನು. ॥59॥

ಅನುವಾದ (ಸಮಾಪ್ತಿಃ)

ಅರವತ್ತನೆಯ ಅಧ್ಯಾಯವು ಮುಗಿಯಿತು. ॥60॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ
ಕೃಷ್ಣರುಕ್ಮಿಣೀಸಂವಾದೋ ನಾಮ ಷಷ್ಟಿತಮೋಧ್ಯಾಯಃ ॥60॥