೫೯

[ಐವತ್ತೋಂಭತ್ತನೇಯ ಅಧ್ಯಾಯ]

ಭಾಗಸೂಚನಾ

ನರಕಾಸುರನ ಸಂಹಾರ ಹದಿನಾರು ಸಾವಿರದ ನೂರುಮಂದಿ ರಾಜಕನ್ಯೆಯರೊಡನೆ ಶ್ರೀಕೃಷ್ಣನ ವಿವಾಹ

(ಶ್ಲೋಕ-1)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಯಥಾ ಹತೋ ಭಗವತಾ ಭೌಮೋ ಯೇನ ಚ ತಾಃ ಸಿಯಃ ।
ನಿರುದ್ಧಾ ಏತದಾಚಕ್ಷ್ವ ವಿಕ್ರಮಂ ಶಾರ್ಙ್ಗಧನ್ವನಃ ॥

ಅನುವಾದ

ಪರೀಕ್ಷಿದ್ರಾಜನು ಪ್ರಶ್ನಿಸುತ್ತಾನೆ — ಪೂಜ್ಯರೇ! ಸಾವಿರಾರು ಸ್ತ್ರೀಯರನ್ನು ಬಂಧನದಲ್ಲಿರಿಸಿದ ಭೌಮಾಸುರ (ನರಕಾಸುರನನ್ನು ಶ್ರೀಕೃಷ್ಣನು ಹೇಗೆ ಸಂಹರಿಸಿದನು? ಶಾರ್ಙ್ಗಧನುಸ್ಸನ್ನು ಧರಿಸಿದ್ದ ಶ್ರೀಕೃಷ್ಣನ ಈ ವಿಚಿತ್ರ ಚರಿತ್ರವನ್ನು ವಿಸ್ತಾರವಾಗಿ ಹೇಳಿರಿ. ॥1॥

(ಶ್ಲೋಕ-2)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇಂದ್ರೇಣ ಹೃತಚ್ಛತ್ರೇಣ ಹೃತಕುಂಡಲಬಂಧುನಾ ।
ಹೃತಾಮರಾದ್ರಿಸ್ಥಾನೇನ ಜ್ಞಾಪಿತೋ ಭೌಮಚೇಷ್ಟಿತಮ್ ।
ಸಭಾರ್ಯೋ ಗರುಡಾರೂಢಃ ಪ್ರಾಗ್ಜ್ಯೋತಿಷಪುರಂ ಯಯೌ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳಿದರು — ಎಲೈ ಪರೀಕ್ಷಿತನೇ! ಭೌಮಾಸುರನು ವರುಣನ ಛತ್ರವನ್ನೂ, ಅದಿತಿಯ ಕುಂಡಲಗಳನ್ನು, ಮೇರು ಪರ್ವತದಲ್ಲಿರುವ ದೇವತೆಗಳ ಮಣಿಪರ್ವತವೆಂಬ ಸ್ಥಾನವನ್ನು ಅಪಹರಿಸಿದ್ದನು. ಇದರಿಂದ ದೇವೆಂದ್ರನು ದ್ವಾರಕೆಗೆ ಬಂದು ಭಗವಾನ್ ಶ್ರೀಕೃಷ್ಣನಲ್ಲಿ ಭೌಮಾಸುರನ ಉಪಟಳವೆಲ್ಲವನ್ನು ನಿವೇದಿಸಿಕೊಂಡನು. ಆಗ ಶ್ರೀಕೃಷ್ಣನು ಸತ್ಯಭಾಮೆಯೊಡನೆ ಗರುಡನನ್ನೇರಿ ಭೌಮನ ರಾಜಧಾನಿಯಾದ ಪ್ರಾಗ್ಜ್ಯೋತಿಷಪುರಕ್ಕೆ ಹೋದನು. ॥2॥

(ಶ್ಲೋಕ-3)

ಮೂಲಮ್

ಗಿರಿದುರ್ಗೈಃ ಶಸದುರ್ಗೈರ್ಜಲಾಗ್ನ್ಯನಿಲದುರ್ಗಮಮ್ ।
ಮುರಪಾಶಾಯುತೈರ್ಘೋರೈರ್ದೃಢೈಃ ಸರ್ವತ ಆವೃತಮ್ ॥

ಅನುವಾದ

ಆ ಪುರವನ್ನು ಪ್ರವೇಶಿಸುವುದು ಅತ್ಯಂತ ಕಠಿಣವಾಗಿತ್ತು. ಮೊದಲನೆಯದಾಗಿ ಆ ಪಟ್ಟಣದ ಸುತ್ತಲೂ ಪರ್ವತಗಳದ್ದೇ ಕೋಟೆಯಿತ್ತು. ಕ್ರಮವಾಗಿ ಶಸ್ತ್ರದುರ್ಗದಿಂದಲೂ, ಜಲದುರ್ಗದಿಂದಲೂ, ಅಗ್ನಿದುರ್ಗದಿಂದಲೂ, ವಾಯುದುರ್ಗದಿಂದಲೂ ಸಮಾವೃತವಾಗಿತ್ತು. ಇದೆಲ್ಲ ಕಳೆದ ಬಳಿಕ ಮುರನೆಂಬ ರಾಕ್ಷಸನು ಹತ್ತುಸಾವಿರ ಕಬ್ಬಿಣದ ಸರಪಳಿಗಳ ದೃಢವಾದ ಜಾಲವನ್ನು ಹರಡಿಟ್ಟಿದ್ದನು. ॥3॥

(ಶ್ಲೋಕ-4)

ಮೂಲಮ್

ಗದಯಾ ನಿರ್ಬಿಭೇದಾದ್ರೀನ್ ಶಸದುರ್ಗಾಣಿ ಸಾಯಕೈಃ ।
ಚಕ್ರೇಣಾಗ್ನಿಂ ಜಲಂ ವಾಯುಂ ಮುರಪಾಶಾಂಸ್ತಥಾಸಿನಾ ॥

ಅನುವಾದ

ಭಗವಾನ್ ಶ್ರೀಕೃಷ್ಣನು ತನ್ನ ಕೌಮೋದಕೀಗದೆಯಿಂದ ಪರ್ವತ ಪ್ರಾಕಾರಗಳನ್ನು ಭೇದಿಸಿದನು. ಬಾಣಗಳಿಂದ ಶಸ್ತ್ರದುರ್ಗವನ್ನು ಧ್ವಂಸಮಾಡಿದನು. ಸುದರ್ಶನ ಚಕ್ರದಿಂದ ಅಗ್ನಿ, ಜಲ, ವಾಯು ದುರ್ಗಗಳನ್ನು ನಾಶಮಾಡಿದನು. ನಂದಕವೆಂಬ ಖಡ್ಗದಿಂದ ಮುರಾಸುರನ ಪಾಶಗಳನ್ನು ಕತ್ತರಿಸಿ ಹಾಕಿದನು. ॥4॥

(ಶ್ಲೋಕ-5)

ಮೂಲಮ್

ಶಂಖನಾದೇನ ಯಂತ್ರಾಣಿ ಹೃದಯಾನಿ ಮನಸ್ವಿನಾಮ್ ।
ಪ್ರಾಕಾರಂ ಗದಯಾ ಗುರ್ವ್ಯಾ ನಿರ್ಬಿಭೇದ ಗದಾಧರಃ ॥

ಅನುವಾದ

ಪಾಂಚಜನ್ಯ ಶಂಖದ ಧ್ವನಿಯಿಂದ ಯಂತ್ರ-ತಂತ್ರ-ಮಂತ್ರಗಳನ್ನು, ಧೈರ್ಯಶಾಲಿಗಳಾದ ರಾಕ್ಷಸರ ಮನಸ್ಸನ್ನು ಭೇದಿಸಿದನು ಮತ್ತು ನಗರದ ಕೋಟೆಯನ್ನು ಗದಾಧರನಾದ ಭಗವಂತನು ತನ್ನ ಗದೆಯಿಂದ ಧ್ವಂಸಗೊಳಿಸಿದನು. ॥5॥

(ಶ್ಲೋಕ-6)

ಮೂಲಮ್

ಪಾಂಚಜನ್ಯಧ್ವನಿಂ ಶ್ರುತ್ವಾ ಯುಗಾಂತಾಶನಿಭೀಷಣಮ್ ।
ಮುರಃ ಶಯಾನ ಉತ್ತಸ್ಥೌ ದೈತ್ಯಃ ಪಂಚಶಿರಾ ಜಲಾತ್ ॥

ಅನುವಾದ

ಭಗವಂತನ ಪಾಂಚಜನ್ಯದ ಧ್ವನಿಯು ಪ್ರಳಯಕಾಲದ ಸಿಡಿಲಿನಂತೆ ಮಹಾಭಯಂಕರವಾಗಿತ್ತು. ಅದನ್ನು ಕೇಳುತ್ತಲೇ ನೀರಿನಲ್ಲಿ ನಿದ್ರಿಸುತ್ತಿದ್ದ ಐದು ತಲೆಗಳಿಂದ ಕೂಡಿದ ಮುರನೆಂಬ ದೈತ್ಯನು ಎಚ್ಚರಗೊಂಡು ಎದ್ದು ಬಂದನು. ॥6॥

(ಶ್ಲೋಕ-7)

ಮೂಲಮ್

ತ್ರಿಶೂಲಮುದ್ಯಮ್ಯ ಸುದುರ್ನಿರೀಕ್ಷಣೋ
ಯುಗಾಂತಸೂರ್ಯಾನಲರೋಚಿರುಲ್ಬಣಃ ।
ಗ್ರಸಂಸಿಲೋಕೀಮಿವ ಪಂಚಭಿರ್ಮುಖೈ-
ರಭ್ಯದ್ರವತ್ತಾರ್ಕ್ಷ್ಯಸುತಂ ಯಥೋರಗಃ ॥

ಅನುವಾದ

ಆ ಮಹಾದೈತ್ಯನು ಪ್ರಳಯಕಾಲದ ಸೂರ್ಯಾಗ್ನಿಗಳಂತೆ ಪ್ರಚಂಡ ತೇಜಸ್ವಿಯಾಗಿದ್ದನು. ಅವನನ್ನು ಕಣ್ಣೆತ್ತಿ ದಿಟ್ಟಿಸಿ ನೋಡಲೂ ಯಾರಿಗೂ ಸಾಧ್ಯವಾಗುತ್ತಿರಲಿಲ್ಲ. ಪ್ರಾಣಬಿಡಲು ಇಚ್ಛಿಸಿದ ಸರ್ಪವು ಗರುಡನ ಬಳಿಗೆ ಧಾವಿಸುವಂತೆ ಮುರಾಸುರನು ತ್ರಿಶೂಲವನ್ನೆತ್ತಿಕೊಂಡು ಶ್ರೀಕೃಷ್ಣನ ಬಳಿಗೆ ಧಾವಿಸಿದನು. ಆ ಸಮಯದಲ್ಲಿ ತನ್ನ ಐದು ಮುಖಗಳಿಂದ ಮೂರು ಲೋಕಗಳನ್ನೂ ನುಂಗಿಬಿಡುವನೋ ಎಂಬಂತೆ ಕಾಣುತ್ತಿದ್ದನು. ॥7॥

(ಶ್ಲೋಕ-8)

ಮೂಲಮ್

ಆವಿಧ್ಯ ಶೂಲಂ ತರಸಾ ಗರುತ್ಮತೇ
ನಿರಸ್ಯ ವಕೈರ್ವ್ಯನದತ್ ಸ ಪಂಚಭಿಃ ।
ಸ ರೋದಸೀ ಸರ್ವದಿಶೋಂತರಂ ಮಹಾ-
ನಾಪೂರಯನ್ನಂಡಕಟಾಹಮಾವೃಣೋತ್ ॥

ಅನುವಾದ

ಆ ಮಹಾಸುರನು ತನ್ನ ತ್ರಿಶೂಲವನ್ನು ರಭಸದಿಂದ ತಿರುಗಿಸಿ ಶ್ರೀಕೃಷ್ಣನ ವಾಹನವಾದ ಗರುಡನ ಮೇಲೆ ಪ್ರಯೋಗಿಸಿ ತನ್ನ ಐದು ಮುಖಗಳಿಂದಲೂ ಸಿಂಹನಾದವನ್ನು ಮಾಡಿದನು. ಆ ಸಿಂಹನಾದದ ಮಹಾಶಬ್ದವು ಪೃಥಿವಿ, ಆಕಾಶ, ಪಾತಾಳ ಮತ್ತು ಹತ್ತುದಿಕ್ಕುಗಳಲ್ಲಿಯೂ ತುಂಬಿ ಬ್ರಹ್ಮಾಂಡವನ್ನೇ ವ್ಯಾಪಿಸಿತು. ॥8॥

(ಶ್ಲೋಕ-9)

ಮೂಲಮ್

ತದಾಪತದ್ವೈ ತ್ರಿಶಿಖಂ ಗರುತ್ಮತೇ
ಹರಿಃ ಶರಾಭ್ಯಾಮಭಿನತಿಧೌಜಸಾ ।
ಮುಖೇಷು ತಂ ಚಾಪಿ ಶರೈರತಾಡಯತ್
ತಸ್ಮೈ ಗದಾಂ ಸೋಪಿ ರುಷಾ ವ್ಯಮುಂಚತ ॥

ಅನುವಾದ

ಮುರಾಸುರನು ಪ್ರಯೋಗಿಸಿದ ತ್ರಿಶೂಲವು ವೇಗವಾಗಿ ಗರುಡನ ಕಡೆಗೆ ಬರುತ್ತಿರುವುದನ್ನು ಕಂಡು ಶ್ರೀಕೃಷ್ಣನು ತನ್ನ ಹಸ್ತಕೌಶಲ್ಯವನ್ನು ತೋರುತ್ತಾ, ಎರಡು ಬಾಣಗಳಿಂದ ಆ ತ್ರಿಶೂಲವನ್ನು ಮೂರು ತುಂಡಾಗಿ ಕತ್ತರಿಸಿಹಾಕಿದನು. ಮರುಕ್ಷಣದಲ್ಲೇ ಮುರಾಸುರನ ಐದು ಮುಖಗಳಲ್ಲಿಯೂ ಭಗವಂತನು ಬಾಣಗಳನ್ನು ಪ್ರಯೋಗಿಸಿದನು. ಇದರಿಂದ ಅತಿ ಕ್ರುದ್ಧನಾದ ಮುರಾಸುರನು ಶ್ರೀಕೃಷ್ಣನ ಮೇಲೆ ತನ್ನ ಗದೆಯನ್ನು ಪ್ರಯೋಗಿಸಿದನು. ॥9॥

(ಶ್ಲೋಕ-10)

ಮೂಲಮ್

ತಾಮಾಪತಂತೀಂ ಗದಯಾ ಗದಾಂ ಮೃಧೇ
ಗದಾಗ್ರಜೋ ನಿರ್ಬಿಭಿದೇ ಸಹಸ್ರಧಾ ।
ಉದ್ಯಮ್ಯ ಬಾಹೂನಭಿಧಾವತೋಜಿತಃ
ಶಿರಾಂಸಿ ಚಕ್ರೇಣ ಜಹಾರ ಲೀಲಯಾ ॥

ಅನುವಾದ

ಆದರೆ ಶ್ರೀಕೃಷ್ಣನು ತನ್ನ ಗದಾಪ್ರಹಾರದಿಂದ ಮುರಾಸುರನ ಗದೆಯನ್ನು ತನ್ನ ಬಳಿಗೆ ಬರುವ ಮೊದಲೇ ನುಚ್ಚುನೂರಾಗಿಸಿನು. ಈಗ ಅವನು ನಿಶ್ಶಸ್ತ್ರನಾದ್ದರಿಂದ ತನ್ನ ಭುಜಗಳನ್ನು ಚಾಚಿ ಶ್ರೀಕೃಷ್ಣನ ಕಡೆಗೆ ನುಗ್ಗಿದನು. ತತ್ಕ್ಷಣ ಅಜಿತನಾದ ಭಗವಂತನು ಚಕ್ರಾಯುಧದಿಂದ ರಾಕ್ಷಸನ ಐದು ತಲೆಗಳನ್ನು ಲೀಲಾ ಜಾಲವಾಗಿ ಕತ್ತರಿಸಿ ಹಾಕಿದನು. ॥10॥

(ಶ್ಲೋಕ-11)

ಮೂಲಮ್

ವ್ಯಸುಃ ಪಪಾತಾಂಭಸಿ ಕೃತ್ತಶೀರ್ಷೋ
ನಿಕೃತ್ತಶೃಂಗೋದ್ರಿರಿವೇಂದ್ರತೇಜಸಾ ।
ತಸ್ಯಾತ್ಮಜಾಃ ಸಪ್ತ ಪಿತುರ್ವಧಾತುರಾಃ
ಪ್ರತಿಕ್ರಿಯಾಮರ್ಷಜುಷಃ ಸಮುದ್ಯತಾಃ ॥

(ಶ್ಲೋಕ-12)

ಮೂಲಮ್

ತಾಮ್ರೋಂತರಿಕ್ಷಃ ಶ್ರವಣೋ ವಿಭಾವಸು-
ರ್ವಸುರ್ನಭಸ್ವಾನರುಣಶ್ಚ ಸಪ್ತಮಃ ।
ಪೀಠಂ ಪುರಸ್ಕೃತ್ಯ ಚಮೂಪತಿಂ ಮೃಧೇ
ಭೌಮಪ್ರಯುಕ್ತಾ ನಿರಗನ್ ಧೃತಾಯುಧಾಃ ॥

ಅನುವಾದ

ಇಂದ್ರನ ವಜ್ರಾಯುಧದಿಂದ ಕತ್ತರಿಸಲ್ಪಟ್ಟ ಪರ್ವತವು ಸಮುದ್ರದಲ್ಲಿ ಬೀಳುವಂತೆ ಶ್ರೀಕೃಷ್ಣನ ಚಕ್ರದಿಂದ ಕತ್ತರಿಸಲ್ಪಟ್ಟು ಶಿರಸ್ಸು ರಹಿತವಾಗಿದ್ದ ಮುರಾಸುರನ ಶರೀರವು ಪ್ರಾಣರಹಿತವಾಗಿ ನೀರಿನಲ್ಲಿ ಬಿದ್ದು ಹೋಯಿತು. ಮುರಾಸುರನಿಗೆ - ತಾಮ್ರ, ಅಂತರಿಕ್ಷ, ಶ್ರವಣ, ವಿಭಾವಸು, ವಸು, ನಭಸ್ವಾನ್ ಮತ್ತು ಅರುಣನೆಂಬ ಏಳು ಮಕ್ಕಳಿದ್ದರು. ಅವರು ತಮ್ಮ ತಂದೆಯ ಮೃತ್ಯುವಿನಿಂದಾಗಿ ಅತ್ಯಂತ ಶೋಕಾಕುಲರಾಗಿ, ಸೇಡು ತೀರಿಸಿಕೊಳ್ಳಲು ಅತ್ಯಂತ ಕ್ರುದ್ಧರಾಗಿ ಭೌಮಾಸುರನ ಆದೇಶದಿಂದ ಶಸ್ತ್ರಾಸ್ತ್ರಗಳಿಂದ ಸುಸಜ್ಜಿತರಾಗಿ ಪೀಠನೆಂಬ ದೈತನನ್ನು ತಮ್ಮ ಸೇನಾಪತಿಯನ್ನಾಗಿಸಿಕೊಂಡು ಶ್ರೀಕೃಷ್ಣನ ಮೇಲೆ ಆಕ್ರಮಣ ಮಾಡಿದರು. ॥11-12॥

(ಶ್ಲೋಕ-13)

ಮೂಲಮ್

ಪ್ರಾಯುಂಜತಾಸಾದ್ಯ ಶರಾನಸೀನ್ ಗದಾಃ
ಶಕ್ತ್ಯೃಷ್ಟಿಶೂಲಾನ್ಯಜಿತೇ ರೂಷೋಲ್ಬಣಾಃ ।
ತಚ್ಛಸಕೂಟಂ ಭಗವಾನ್ ಸ್ವಮಾರ್ಗಣೈ-
ರಮೋಘವೀರ್ಯಸ್ತಿಲಶಶ್ಚಕರ್ತ ಹ ॥

ಅನುವಾದ

ಅವರು ಅಲ್ಲಿಗೆ ಬಂದು ಭಯಂಕರ ಸಿಟ್ಟಿನಿಂದ ಶ್ರೀಕೃಷ್ಣನ ಮೇಲೆ ಬಾಣ, ಖಡ್ಗ, ಗದೆ, ಶಕ್ತಿ, ಋಷ್ಟಿ, ತ್ರಿಶೂಲ ಮೊದಲಾದ ಪ್ರಚಂಡ ಶಸ್ತ್ರಗಳನ್ನು ಮಳೆಗರೆದರು. ಪರೀಕ್ಷಿತನೇ! ಭಗವಂತನ ಶಕ್ತಿಯು ಅಮೋಘವೂ, ಅನಂತವೂ ಆದುದು. ಶ್ರೀಕೃಷ್ಣನು ತನ್ನ ಹಲವಾರು ಬಾಣಗಳಿಂದ ಅವರ ಕೋಟಿ-ಕೋಟಿ ಶಸ್ತ್ರಾಸ್ತ್ರಗಳನ್ನು ನುಚ್ಚುನೂರಾಗಿಸಿದನು. ॥13॥

(ಶ್ಲೋಕ-14)

ಮೂಲಮ್

ತಾನ್ ಪೀಠಮುಖ್ಯಾನನಯದ್ಯಮಕ್ಷಯಂ
ನಿಕೃತ್ತಶೀರ್ಷೋರುಭುಜಾಂಘ್ರಿವರ್ಮಣಃ ।
ಸ್ವಾನೀಕಪಾನಚ್ಯುತಚಕ್ರಸಾಯಕೈ-
ಸ್ತಥಾ ನಿರಸ್ತಾನ್ ನರಕೋ ಧರಾಸುತಃ ॥

(ಶ್ಲೋಕ-15)

ಮೂಲಮ್

ನಿರೀಕ್ಷ್ಯ ದುರ್ಮರ್ಷಣ ಆಸ್ರವನ್ಮದೈ-
ರ್ಗಜೈಃ ಪಯೋಧಿಪ್ರಭವೈರ್ನಿರಾಕ್ರಮತ್ ।
ದೃಷ್ಟ್ವಾ ಸಭಾರ್ಯಂ ಗರುಡೋಪರಿ ಸ್ಥಿತಂ
ಸೂರ್ಯೋಪರಿಷ್ಟಾತ್ ಸತಡಿದ್ಘನಂ ಯಥಾ ।
ಕೃಷ್ಣಂ ಸ ತಸ್ಮೈ ವ್ಯಸೃಜಚ್ಛತಘ್ನೀಂ
ಯೋಧಾಶ್ಚ ಸರ್ವೇ ಯುಗಪತ್ ಸ್ಮ ವಿವ್ಯಧುಃ ॥

ಅನುವಾದ

ಭಗವಂತನು ಶಸಪ್ರಹಾರದಿಂದ ಸೇನಾಪತಿ ಪೀಠ ಮತ್ತು ಅವನ ಸೈನಿಕರ ತಲೆಗಳು, ತೊಡೆಗಳು, ಭುಜಗಳು, ಕಾಲುಗಳು, ಕವಚಗಳು ಹೀಗೆ ಎಲ್ಲವನ್ನು ತುಂಡು ತುಂಡಾಗಿ ಕತ್ತರಿಸಿ ಅವರೆಲ್ಲರನ್ನು ಯಮಸದನಕ್ಕೆ ಕಳಿಸಿದನು. ಭಗವಾನ್ ಶ್ರೀಕೃಷ್ಣನ ಚಕ್ರಾಯುಧದಿಂದಲೂ, ಬಾಣಗಳಿಂದಲೂ ತನ್ನ ಸೇನೆ ಮತ್ತು ಸೇನಾಪತಿಗಳ ಸಂಹಾರವನ್ನು ಕಂಡು ಭೂಮಿಪುತ್ರನಾದ ನರಕಾಸುರನು ಕ್ರುದ್ಧನಾದನು. ಸಮುದ್ರದಲ್ಲಿ ಹುಟ್ಟಿದ್ದ ಅನೇಕ ಮದಭರಿತ ಆನೆಗಳ ಸೈನ್ಯದೊಂದಿಗೆ ನಗರದಿಂದ ಹೊರ ಬಿದ್ದನು. ಸೂರ್ಯನ ಮೇಲ್ಭಾಗದಲ್ಲಿ ಮಿಂಚಿನಿಂದ ಕೂಡಿದ ವರ್ಷಾಕಾಲದ ಶ್ಯಾಮಲ ಮೇಘದಂತೆ ಪತ್ನಿಯೊಡನೆ ಗರುಡಾರೂಢನಾದ ಶ್ರೀಕೃಷ್ಣನನ್ನು ನರಕನು ನೋಡಿದನು. ಅವನನ್ನು ನೋಡುತ್ತಲೇ ಭೌಮಾಸುರನು ಭಗವಂತನ ಮೇಲೆ ಶತಘ್ನಿ ಎಂಬ ಶಕ್ತಿಯನ್ನು ಪ್ರಯೋಗಿಸಿದನು ಮತ್ತು ಅವನ ಸೈನಿಕರು ಒಟ್ಟಿಗೆ ಕೃಷ್ಣನ ಮೇಲೆ ತಮ್ಮ-ತಮ್ಮ ಅಸ್ತ್ರ-ಶಸ್ತ್ರಗಳನ್ನು ಪ್ರಯೋಗಿಸಿದರು. ॥14-15॥

(ಶ್ಲೋಕ-16)

ಮೂಲಮ್

ತದ್ಭೌಮಸೈನ್ಯಂ ಭಗವಾನ್ ಗದಾಗ್ರಜೋ
ವಿಚಿತ್ರವಾಜೈರ್ನಿಶಿತೈಃ ಶಿಲೀಮುಖೈಃ ।
ನಿಕೃತ್ತಬಾಹೂರುಶಿರೋಧ್ರವಿಗ್ರಹಂ
ಚಕಾರ ತರ್ಹ್ಯೇವ ಹತಾಶ್ವಕುಂಜರಮ್ ॥

ಅನುವಾದ

ಇದಕ್ಕೆ ಪ್ರತಿಯಾಗಿ ಶ್ರೀಕೃಷ್ಣನೂ ಕೂಡ ಚಿತ್ರ-ವಿಚಿತ್ರವಾದ ಗರಿಕಟ್ಟಿದ ತೀಕ್ಷ್ಣವಾದ ಬಾಣಗಳನ್ನು ಪ್ರಯೋಗಿಸಿದನು. ಇವುಗಳಿಂದ ಆಗಲೇ ಭೌಮಾಸುರ ಸೈನಿಕರ ಭುಜಗಳು, ತೊಡೆಗಳು, ತಲೆಗಳು ಕತ್ತರಿಸಲ್ಪಟ್ಟು ತೊಪ-ತೊಪನೆ ನೆಲಕ್ಕುರುಳಿದವು ಮತ್ತು ಅಸಂಖ್ಯಾತವಾದ ಆನೆ, ಕುದುರೆಗಳೂ ಅಸುನೀಗಿದವು. ॥16॥

(ಶ್ಲೋಕ-17)

ಮೂಲಮ್

ಯಾನಿ ಯೋಧೈಃ ಪ್ರಯುಕ್ತಾನಿ ಶಸಾಸಾಣಿ ಕುರೂದ್ವಹ ।
ಹರಿಸ್ತಾನ್ಯಚ್ಛಿನತ್ತೀಕ್ಷ್ಣೈಃ ಶರೈರೇಕೈಕಶಸಿಭಿಃ ॥

ಅನುವಾದ

ಪರೀಕ್ಷಿತನೇ! ನರಕಾಸುರನ ಸೈನಿಕರು ಭಗವಂತನ ಮೇಲೆ ಪ್ರಯೋಗಿಸಿದ ಅಸ್ತ್ರ-ಶಸ್ತ್ರಗಳೆಲ್ಲವನ್ನೂ ಶ್ರೀಕೃಷ್ಣನು ಮೂರು-ಮೂರು ಬಾಣಗಳಿಂದ ಕತ್ತರಿಸಿ ಹಾಕಿದನು. ॥17॥

(ಶ್ಲೋಕ-18)

ಮೂಲಮ್

ಉಹ್ಯಮಾನಃ ಸುಪರ್ಣೇನ ಪಕ್ಷಾಭ್ಯಾಂ ನಿಘ್ನತಾ ಗಜಾನ್ ।
ಗರುತ್ಮತಾ ಹನ್ಯಮಾನಾಸ್ತುಂಡಪಕ್ಷನಖೈರ್ಗಜಾಃ ॥

(ಶ್ಲೋಕ-19)

ಮೂಲಮ್

ಪುರಮೇವಾವಿಶನ್ನಾರ್ತಾ ನರಕೋ ಯುಧ್ಯಯುಧ್ಯತ ।
ದೃಷ್ಟ್ವಾವಿದ್ರಾವಿತಂ ಸೈನ್ಯಂ ಗರುಡೇನಾರ್ದಿತಂ ಸ್ವಕಮ್ ॥

(ಶ್ಲೋಕ-20)

ಮೂಲಮ್

ತಂ ಭೌಮಃ ಪ್ರಾಹರಚ್ಛಕ್ತ್ಯಾ ವಜ್ರಃ ಪ್ರತಿಹತೋ ಯತಃ ।
ನಾಕಂಪತ ತಯಾ ವಿದ್ಧೋ ಮಾಲಾಹತ ಇವ ದ್ವಿಪಃ ॥

ಅನುವಾದ

ಆ ಸಮಯದಲ್ಲಿ ಭಗವಾನ್ ಶ್ರೀಕೃಷ್ಣನು ಗರುಡಾರೂಢನಾಗಿದ್ದನು ಹಾಗೂ ಗರುಡನೂ ತನ್ನ ಬಲಿಷ್ಠವಾದ ರೆಕ್ಕೆಗಳಿಂದ ಗಜಸೈನ್ಯವನ್ನು ಬಡಿದು ಕೊಲ್ಲುತ್ತಿದ್ದನು. ಕೊಕ್ಕಿನಿಂದ ಕುಕ್ಕಿ, ಪಂಜಗಳಿಂದ, ರೆಕ್ಕೆಗಳಿಂದ ಪ್ರಹರಿಸುತ್ತಿದ್ದ ಏಟುಗಳನ್ನು ತಾಳಲಾರದೆ ಆನೆಗಳೆಲ್ಲವೂ ಸಂಕಟಪಡುತ್ತಾ, ಕಿರಿಚಿಕೊಳ್ಳುತ್ತಾ ಯುದ್ಧಭೂಮಿಯಿಂದ ಓಡಿ ಹೋಗಿ ನಗರವನ್ನು ಹೊಕ್ಕವು. ಆಗ ಭೌಮಾಸುರನು ಒಬ್ಬಂಟಿಗನಾಗಿ ಕಾದಾಡುತ್ತಿದ್ದನು. ಗರುಡನ ಏಟುಗಳಿಂದ ಪೀಡಿತವಾಗಿ ತನ್ನ ಸೇನೆಯು ಓಡುತ್ತಿರುವುದನ್ನು ಕಂಡು ನರಕನು ವ್ರಜಾಯುಧವನ್ನೂ ವಿಲಗೊಳಿಸಿದ ಭಾರೀ ಶಕ್ತಿಯೊಂದನ್ನು ಗರುಡನ ಮೇಲೆ ಪ್ರಯೋಗಿಸಿದನು. ಆದರೆ ಆ ಶಕ್ತಿಯಿಂದ ಗರುಡನು ಸ್ವಲ್ಪವೂ ವಿಚಲಿತನಾಗದೆ ಯಾರಾದರೂ ಆನೆಯನ್ನು ಹೂವಿನ ಹಾರದಿಂದ ಹೊಡೆದಂತೆ ನಿಶ್ಚಲನಾಗಿದ್ದನು. ॥18-20॥

(ಶ್ಲೋಕ-21)

ಮೂಲಮ್

ಶೂಲಂ ಭೌಮೋಚ್ಯುತಂ ಹಂತುಮಾದದೇ ವಿತಥೋದ್ಯಮಃ ।
ತದ್ವಿಸರ್ಗಾತ್ ಪೂರ್ವಮೇವ ನರಕಸ್ಯ ಶಿರೋ ಹರಿಃ
ಅಪಾಹರದ್ಗಜಸ್ಥಸ್ಯ ಚಕ್ರೇಣ ಕ್ಷುರನೇಮಿನಾ ॥

ಅನುವಾದ

ತಾನು ಪ್ರಯೋಗಿಸಿದ ಆಯುಧಗಳೆಲ್ಲವೂ ವ್ಯರ್ಥವಾಗಿ ಹೋಗುತ್ತಿರಲು ಅತಿಕ್ರುದ್ಧವಾದ ನರಕಾಸುರನು ಶ್ರೀಕೃಷ್ಣನನ್ನು ಕೊಂದುಹಾಕಲು ಒಂದು ತ್ರಿಶೂಲವನ್ನು ಎತ್ತಿಕೊಂಡನು. ಆದರೆ ಅದನ್ನು ಪ್ರಯೋಗಿಸ ಬೇಕೆನ್ನುಷ್ಟರಲ್ಲಿ ಭಗವಾನ್ ಶ್ರೀಕೃಷ್ಣನು ಖಡ್ಗದಂತೆ ಹರಿತವಾಗಿದ್ದ ಅಂಚುಳ್ಳ ಚಕ್ರಾಯುಧದಿಂದ ಗಜಾರೂಢನಾದ ಭೌಮಾಸುರನ ತಲೆಯನ್ನು ಕತ್ತರಿಸಿಹಾಕಿದನು. ॥21॥

(ಶ್ಲೋಕ-22)

ಮೂಲಮ್

ಸಕುಂಡಲಂ ಚಾರುಕಿರೀಟಭೂಷಣಂ
ಬಭೌ ಪೃಥಿವ್ಯಾಂ ಪತಿತಂ ಸಮುಜ್ಜ್ವಲತ್ ।
ಹಾ ಹೇತಿ ಸಾಧ್ವಿತ್ಯೃಷಯಃ ಸುರೇಶ್ವರಾ
ಮಾಲ್ಯೈರ್ಮುಕುಂದಂ ವಿಕಿರಂತ ಈಡಿರೇ ॥

ಅನುವಾದ

ಸುಂದರವಾದ ಕಿರೀಟ ಕುಂಡಲಗಳಿಂದ ಹೊಳೆಯುತ್ತಿದ್ದ ಅವನ ಶಿರಸ್ಸು ನೆಲಕ್ಕೆ ಉರುಳಿತು. ಅದನ್ನು ನೋಡಿದ ನರಕಾಸುರನ ಸಂಬಂಧಿಗಳು ಅಯ್ಯೋ! ನಮ್ಮ ಗತಿ ಏನು? ಎಂದು ಕಿರುಚಿಕೊಂಡರು. ಋಷಿ-ಮುನಿಗಳು ಸಾಧು! ಸಾಧು! ಎಂದು ಶ್ರೀಕೃಷ್ಣನನ್ನು ಪ್ರಶಂಸಿಸಿದರು. ದೇವತೆಗಳು ಅವನ ಮೇಲೆ ಪುಷ್ಪವೃಷ್ಟಿಯನ್ನು ಗರೆಯುತ್ತಾ ಸ್ತುತಿಸತೊಡಗಿದರು. ॥22॥

(ಶ್ಲೋಕ-23)

ಮೂಲಮ್

ತತಶ್ಚ ಭೂಃ ಕೃಷ್ಣಮುಪೇತ್ಯ ಕುಂಡಲೇ
ಪ್ರತಪ್ತಜಾಂಬೂನದರತ್ನಭಾಸ್ವರೇ ।
ಸವೈಜಯಂತ್ಯಾ ವನಮಾಲಯಾರ್ಪಯತ್
ಪ್ರಾಚೇತಸಂ ಛತ್ರಮಥೋ ಮಹಾಮಣಿಮ್ ॥

ಅನುವಾದ

ಬಳಿಕ ನರಕಾಸುರನ ತಾಯಿಯಾದ ಭೂದೇವಿಯು ಶ್ರೀಕೃಷ್ಣನ ಬಳಿಗೆ ಬಂದು ಅವನ ಕೊರಳಿಗೆ ವೈಜಯಂತಿಯೊಂದಿಗೆ ವನಮಾಲೆಯನ್ನು ತೊಡಿಸಿದಳು ಮತ್ತು ಪುಟಕ್ಕೆ ಹಾಕಿದ ಬಂಗಾರದಿಂದಲೂ ಶ್ರೇಷ್ಠವಾದ ರತ್ನಗಳಿಂದಲೂ ಬೆಳಗುತ್ತಿದ್ದ ಅದಿತಿಯ ಕುಂಡಲಗಳನ್ನು ಭಗವಂತನಿಗೆ ನೀಡಿದಳು. ಜೊತೆಗೆ ವರುಣನ ಛತ್ರವನ್ನೂ ಒಂದು ಮಹಾಮಣಿಯನ್ನು ಅರ್ಪಿಸಿದಳು. ॥23॥

(ಶ್ಲೋಕ-24)

ಮೂಲಮ್

ಅಸ್ತೌಷೀದಥ ವಿಶ್ವೇಶಂ ದೇವೀ ದೇವವರಾರ್ಚಿತಮ್ ।
ಪ್ರಾಂಜಲಿಃ ಪ್ರಣತಾ ರಾಜನ್ ಭಕ್ತಿಪ್ರವಣಯಾ ಧಿಯಾ ॥

ಅನುವಾದ

ರಾಜೇಂದ್ರನೇ! ಬಳಿಕ ಭೂದೇವಿಯು ದೇವಶ್ರೇಷ್ಠರಿಂದ ಅರ್ಚಿಸಲ್ಪಡುತ್ತಿದ್ದ ವಿಶ್ವೇಶನಾದ ಭಗವಾನ್ ಶ್ರೀಕೃಷ್ಣನಿಗೆ ಪ್ರಣಾಮಗೈದು, ಕೈಜೋಡಿಸಿಕೊಂಡು ಭಕ್ತಿಭಾವದಿಂದ ತುಂಬಿದ ಹೃದಯದಿಂದ ಸ್ತುತಿಸತೊಡಗಿದಳು. ॥24॥

(ಶ್ಲೋಕ-25)

ಮೂಲಮ್ (ವಾಚನಮ್)

ಭೂಮಿರುವಾಚ

ಮೂಲಮ್

ನಮಸ್ತೇ ದೇವದೇವೇಶ ಶಂಖಚಕ್ರಗದಾಧರ ।
ಭಕ್ತೇಚ್ಛೋಪಾತ್ತರೂಪಾಯ ಪರಮಾತ್ಮನ್ ನಮೋಸ್ತು ತೇ ॥

ಅನುವಾದ

ಪೃಥಿವಿದೇವಿಯು ಹೇಳಿದಳು — ಶಂಖಚಕ್ರಗದಾಧರನೇ! ದೇವದೇವೇಶ್ವರನೇ! ನಾನು ನಿನಗೆ ನಮಸ್ಕರಿಸುತ್ತೇನೆ. ಪರಮಾತ್ಮನೇ! ನೀನು ನಿನ್ನ ಭಕ್ತರ ಇಚ್ಛೆಯನ್ನು ಪೂರ್ಣಗೊಳಿಸಲು ಅದಕ್ಕನುಸಾರವಾಗಿ ರೂಪಗಳನ್ನು ಹೊಂದುವಂತಹ ನಿನಗೆ ನಮಸ್ಕರಿಸುತ್ತೇನೆ. ॥25॥

ಮೂಲಮ್

(ಶ್ಲೋಕ-26)
ನಮಃ ಪಂಕಜನಾಭಾಯ ನಮಃ ಪಂಕಜಮಾಲಿನೇ ।
ನಮಃ ಪಂಕಜನೇತ್ರಾಯ ನಮಸ್ತೇ ಪಂಕಜಾಂಘ್ರಯೇ ॥

ಅನುವಾದ

ಪ್ರಭುವೇ! ನಿನ್ನ ನಾಭಿಯಿಂದ ಕಮಲವು ಪ್ರಕಟವಾಗಿದೆ. ನೀನು ಕಮಲದ ಮಾಲೆಯನ್ನು ಧರಿಸಿರುವೆ. ನಿನ್ನ ನೇತ್ರಗಳು ಕಮಲದಂತೆ ಅರಳಿ ಶಾಂತಿದಾಯಕಗಳಾಗಿವೆ. ನಿನ್ನ ಚರಣಗಳು ಕಮಲದಂತೆ ಸುಕೋಮಲ ಮತ್ತು ಭಕ್ತರ ಹೃದಯಗಳನ್ನು ಶೀತಲಗೊಳಿಸುವಂತಹುವುಗಳು. ಅಂತಹ ನಿನಗೆ ಪದೇ-ಪದೇ ನಮಸ್ಕರಿಸುತ್ತೇನೆ. ॥26॥

(ಶ್ಲೋಕ-27)

ಮೂಲಮ್

ನಮೋ ಭಗವತೇ ತುಭ್ಯಂ ವಾಸುದೇವಾಯ ವಿಷ್ಣವೇ ।
ಪುರುಷಾಯಾದಿಬೀಜಾಯ ಪೂರ್ಣಬೋಧಾಯ ತೇ ನಮಃ ॥

ಅನುವಾದ

ನೀನು ಸಮಗ್ರ ಐಶ್ವರ್ಯ, ಧರ್ಮ, ಯಶ, ಸಂಪತ್ತು, ಜ್ಞಾನ ಮತ್ತು ವೈರಾಗ್ಯ ಇವುಗಳಿಗೆ ಆಶ್ರಯನಾಗಿರುವೆ. ನೀನು ಸರ್ವವ್ಯಾಪಕನಾಗಿದ್ದರೂ ವಸುದೇವನ ನಂದನನಾಗಿ ಪ್ರಕಟನಾಗುವೆ. ನಾನು ನಿನಗೆ ನಮಸ್ಕರಿಸುತ್ತೇನೆ. ಪುರುಷೋತ್ತಮನಾಗಿರುವ, ಸಮಸ್ತ ಕಾರಣಗಳಿಗೂ ಪರಮಕಾರಣನಾದ, ಪೂರ್ಣಜ್ಞಾನಸ್ವರೂಪನಾದ ನಿನಗೆ ನಾನು ನಮಸ್ಕರಿಸುತ್ತೇನೆ. ॥27॥

(ಶ್ಲೋಕ-28)

ಮೂಲಮ್

ಅಜಾಯ ಜನಯಿತ್ರೇಸ್ಯ ಬ್ರಹ್ಮಣೇನಂತಶಕ್ತಯೇ ।
ಪರಾವರಾತ್ಮನ್ ಭೂತಾತ್ಮನ್ ಪರಮಾತ್ಮನ್ ನಮೋಸ್ತು ತೇ ॥

ಅನುವಾದ

ನೀನು ಜನ್ಮರಹಿತ ನಾದರೂ ಈ ಜಗತ್ತಿಗೆ ಜನ್ಮದಾತನಾಗಿರುವೆ. ನೀನೇ ಅನಂತ ಶಕ್ತಿಗಳಿಗೆ ಆಶ್ರಯನಾದ ಪರಬ್ರಹ್ಮನಾಗಿರುವೆ. ಜಗತ್ತಿನಲ್ಲಿರುವ ಕಾರ್ಯ ಕಾರಣರೂಪಗಳೂ, ಚರಾಚರಗಳೆಲ್ಲವೂ ನಿನ್ನ ಸ್ವರೂಪವೇ ಆಗಿದೆ. ಪರಮಾತ್ಮನೇ! ನಿನಗೆ ಪುನಃ ಪುನಃ ನಮಸ್ಕಾರಗಳು. ॥28॥

(ಶ್ಲೋಕ-29)

ಮೂಲಮ್

ತ್ವಂ ವೈ ಸಿಸೃಕ್ಷೂ ರಜ ಉತ್ಕಟಂ ಪ್ರಭೋ
ತಮೋ ನಿರೋಧಾಯ ಬಿಭರ್ಷ್ಯಸಂವೃತಃ ।
ಸ್ಥಾನಾಯ ಸತ್ತ್ವಂ ಜಗತೋ ಜಗತ್ಪತೇ
ಕಾಲಃ ಪ್ರಧಾನಂ ಪುರುಷೋ ಭವಾನ್ಪರಃ ॥

ಅನುವಾದ

ಪ್ರಭುವೇ! ನೀನು ಜಗತ್ತನ್ನು ಸೃಷ್ಟಿಮಾಡಲು ಇಚ್ಛಿಸಿದಾಗ ಉತ್ಕಟವಾದ ರಜೋಗುಣವನ್ನು, ಅದನ್ನು ಪ್ರಳಯ ಮಾಡಲು ಬಯಸಿದಾಗ ತಮೋಗುಣವನ್ನು ಹಾಗೂ ಅದನ್ನು ಪಾಲಿಸಲು ಬಯಸಿದಾಗ ಸತ್ವಗುಣವನ್ನು ಸ್ವೀಕರಿಸುವೆ. ಆದರೆ ಇದೆಲ್ಲವನ್ನೂ ಮಾಡಿಯೂ ನೀನು ಗುಣಗಳಿಂದ ಲಿಪ್ತನಾಗುವುದಿಲ್ಲ. ಜಗತ್ಪತಿಯೇ! ನೀನು ಸಾಕ್ಷಾತ್ ಪ್ರಕೃತಿ, ಪುರುಷ ಮತ್ತು ಎರಡರ ಸಂಯೋಗ-ವಿಯೋಗಗಳಿಗೆ ಕಾರಣವಾದ ಕಾಲಸ್ವರೂಪನೂ ಆಗಿರುವೆ; ಅವುಗಳಿಂದ ಬೇರೆಯೂ ಆಗಿರುವೆ. ॥29॥

(ಶ್ಲೋಕ-30)

ಮೂಲಮ್

ಅಹಂ ಪಯೋ ಜ್ಯೋತಿರಥಾನಿಲೋ ನಭೋ
ಮಾತ್ರಾಣಿ ದೇವಾ ಮನ ಇಂದ್ರಿಯಾಣಿ ।
ಕರ್ತಾ ಮಹಾನಿತ್ಯಖಿಲಂ ಚರಾಚರಂ
ತ್ವಯ್ಯದ್ವಿತೀಯೇ ಭಗವನ್ನಯಂ ಭ್ರಮಃ ॥

ಅನುವಾದ

ಭಗವಂತ! ಭೂಮಿಯಾದ ನಾನು, ಜಲ, ಅಗ್ನಿ, ವಾಯು, ಆಕಾಶ, ಪಂಚತನ್ಮಾತ್ರೆಗಳು, ಮನಸ್ಸು, ಇಂದ್ರಿಯಗಳು ಮತ್ತು ಇವುಗಳ ಅಧಿಷ್ಠಾತೃ ದೇವತೆಗಳು, ಅಹಂಕಾರ, ಮಹತ್ತತ್ತ್ವ, ಸಮಸ್ತ ಚರಾಚರ ಜಗತ್ತು - ಇವೆಲ್ಲವೂ ಅದ್ವಿತೀಯನಾದ ನಿನ್ನಲ್ಲಿ ಭ್ರಾಂತಿಯಿಂದಾಗಿ ಪ್ರತ್ಯೇಕವಾಗಿ ಕಾಣುತ್ತದೆ. ಆದರೆ ವಸ್ತುತಃ ಇವೆಲ್ಲವೂ ನಿನ್ನ ಸ್ವರೂಪವೇ ಆಗಿದೆ. ॥30॥

(ಶ್ಲೋಕ-31)

ಮೂಲಮ್

ತಸ್ಯಾತ್ಮಜೋಯಂ ತವ ಪಾದಪಂಕಜಂ
ಭೀತಃ ಪ್ರಪನ್ನಾರ್ತಿಹರೋಪಸಾದಿತಃ ।
ತತ್ಪಾಲಯೈನಂ ಕುರು ಹಸ್ತಪಂಕಜಂ
ಶಿರಸ್ಯಮುಷ್ಯಾಖಿಲಕಲ್ಮಷಾಪಹಮ್ ॥

ಅನುವಾದ

ಶರಣಾಗತ ಭಯಭಂಜನನಾದ ಪ್ರಭುವೇ! ನನ್ನ ಪುತ್ರನಾದ ಭೌಮಾಸುರನ ಮಗ ಭಗದತ್ತನು ಅತ್ಯಂತ ಭಯಗೊಂಡಿರುವನು. ನಾನು ಇವನನ್ನು ನಿನ್ನ ಚರಣಾರವಿಂದಗಳ ಆಶ್ರಯವನ್ನು ಬೇಡಲು ಕರೆತಂದಿರುವೆನು. ಪ್ರಭೋ! ನೀನು ಇವನನ್ನು ರಕ್ಷಿಸು ಮತ್ತು ಸಮಸ್ತ ಜಗತ್ತಿನ ಪಾಪ-ತಾಪಗಳನ್ನು ನಾಶಗೊಳಿಸುವಂತಹ ನಿನ್ನ ಕರಕಮಲವನ್ನು ಇವನ ತಲೆಯ ಮೇಲೆ ಇರಿಸು. ॥31॥

(ಶ್ಲೋಕ-32)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತಿ ಭೂಮ್ಯಾರ್ಥಿತೋ ವಾಗ್ಭಿರ್ಭಗವಾನ್ ಭಕ್ತಿನಮ್ರಯಾ ।
ದತ್ತ್ವಾಭಯಂ ಭೌಮಗೃಹಂ ಪ್ರಾವಿಶತ್ ಸಕಲರ್ದ್ಧಿಮತ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭೂದೇವಿಯು ಭಕ್ತಿಭಾವದಿಂದ, ವಿನಮ್ರಳಾಗಿ ಹೀಗೆ ಭಗವಾನ್ ಶ್ರೀಕೃಷ್ಣನನ್ನು ಪ್ರಾರ್ಥಿಸಿದಾಗ ಅವನು ಭಗದತ್ತನಿಗೆ ಅಭಯ ದಾನವನ್ನು ಇತ್ತು ಭೌಮಾಸುರನ ಸಮಸ್ತ ಸಂಪತ್ಸಮೃದ್ಧವಾದ ಅರಮನೆಯನ್ನು ಪ್ರವೇಶಿದನು. ॥32॥

(ಶ್ಲೋಕ-33)

ಮೂಲಮ್

ತತ್ರ ರಾಜನ್ಯಕನ್ಯಾನಾಂ ಷಟ್ಸಹಸ್ರಾಧಿಕಾಯುತಮ್ ।
ಭೌಮಾಹೃತಾನಾಂ ವಿಕ್ರಮ್ಯ ರಾಜಭ್ಯೋ ದದೃಶೇ ಹರಿಃ ॥

ಅನುವಾದ

ಭಗವಂತನು ಅಲ್ಲಿಗೆ ಹೋಗಿ ನೋಡಿದನು - ಭೌಮಾಸುರನು ಬಲಾತ್ಕಾರವಾಗಿ ರಾಜರಿಂದ ಹದಿನಾರು ಸಾವಿರ ರಾಜಕುಮಾರಿಯರನ್ನು ಅಪಹರಿಸಿ ತನ್ನಲ್ಲಿ ಇಟ್ಟುಕೊಂಡಿದ್ದನು. ॥33॥

(ಶ್ಲೋಕ-34)

ಮೂಲಮ್

ತಂ ಪ್ರವಿಷ್ಟಂ ಸಿಯೋ ವೀಕ್ಷ್ಯ ನರವೀರಂ ವಿಮೋಹಿತಾಃ ।
ಮನಸಾ ವವ್ರಿರೇಭೀಷ್ಟಂ ಪತಿಂ ದೈವೋಪಸಾದಿತಮ್ ॥

ಅನುವಾದ

ಅಂತಃಪುರವನ್ನು ಪ್ರವೇಶಿಸಿದ ನರಶ್ರೇಷ್ಠನಾದ ಭಗವಾನ್ ಶ್ರೀಕೃಷ್ಣನನ್ನು ನೋಡಿದಾಗ ಆ ರಾಜಕುಮಾರಿಯರು ಮೋಹಿತರಾಗಿ ಭಗವಂತನ ಅಹೈತುಕವಾದ ದಯೆ ಮತ್ತು ತಮ್ಮ ಸೌಭಾಗ್ಯವೆಂದೇ ಭಾವಿಸಿ ಮನಸ್ಸಿನಲ್ಲಿಯೇ ಅವನನ್ನು ಪರಮಪ್ರಿಯತಮ ಪತಿಯ ರೂಪದಲ್ಲಿ ವರಿಸಿದರು. ॥34॥

(ಶ್ಲೋಕ-35)

ಮೂಲಮ್

ಭೂಯಾತ್ ಪತಿರಯಂ ಮಹ್ಯಂ ಧಾತಾ ತದನುಮೋದತಾಮ್ ।
ಇತಿ ಸರ್ವಾಃ ಪೃಥಕ್ ಕೃಷ್ಣೇ ಭಾವೇನ ಹೃದಯಂ ದಧುಃ ॥

ಅನುವಾದ

ಆ ರಾಜಕುಮಾರಿಯರಲ್ಲಿ ಪ್ರತಿಯೊಬ್ಬಳೂ ಬೇರೆ-ಬೇರೆಯಾಗಿ - ‘ಈ ಶ್ರೀಕೃಷ್ಣನೇ ನನಗೆ ಪತಿಯಾಗಲಿ ಹಾಗೂ ವಿಧಾತನು ನನ್ನ ಈ ಅಭಿಲಾಷೆಯನ್ನು ಪೂರ್ಣಗೊಳಿಸಲಿ’ ಎಂದು ಮನಸ್ಸಿನಲ್ಲೆ ನಿಶ್ಚಯಿಸಿ, ಅವರು ಪ್ರೇಮಭಾವದಿಂದ ತಮ್ಮ ಹೃದಯಗಳನ್ನು ಭಗವಂತನಿಗೆ ಅರ್ಪಿಸಿಬಿಟ್ಟರು. ॥35॥

(ಶ್ಲೋಕ-36)

ಮೂಲಮ್

ತಾಃ ಪ್ರಾಹಿಣೋದ್ದ್ವಾರವತೀಂ ಸುಮೃಷ್ಟವಿರಜೋಂಬರಾಃ ।
ನರಯಾನೈರ್ಮಹಾಕೋಶಾನ್ ರಥಾಶ್ವಾನ್ ದ್ರವಿಣಂ ಮಹತ್ ॥

ಅನುವಾದ

ಶ್ರೀಕೃಷ್ಣನು ಅವರೆಲ್ಲರಿಗೆ ಅಭಯವನ್ನಿತ್ತನು. ಸುಂದರವಾದ ವಸ್ತ್ರಾಭರಣಗಳಿಂದ ಸಮಲಂಕೃತೆಯರಾಗಿದ್ದ ಆ ರಾಜಕುಮಾರಿಯರನ್ನು ಪಲ್ಲಕ್ಕಿಗಳಲ್ಲಿ ಕುಳ್ಳಿರಿಸಿ ದ್ವಾರಕೆಗೆ ಕಳಿಸಿಕೊಟ್ಟನು. ಜೊತೆಗೆ ನರಾಕುಸರನಲ್ಲಿದ್ದ ಅತುಲವಾದ ಭಂಡಾರವನ್ನು, ರಥಾಶ್ವಗಳನ್ನೂ, ಐಶ್ವರ್ಯವನ್ನೂ ದ್ವಾರಕೆಗೆ ಕಳಿಸಿದನು. ॥36॥

(ಶ್ಲೋಕ-37)

ಮೂಲಮ್

ಐರಾವತಕುಲೇಭಾಂಶ್ಚ ಚತುರ್ದಂತಾಂಸ್ತರಸ್ವಿನಃ ।
ಪಾಂಡುರಾಂಶ್ಚ ಚತುಃಷಷ್ಟಿಂ ಪ್ರೇಷಯಾಮಾಸ ಕೇಶವಃ ॥

ಅನುವಾದ

ಐರಾವತದ ವಂಶದಲ್ಲಿ ಹುಟ್ಟಿದ, ಅತ್ಯಂತ ವೇಗವುಳ್ಳ, ನಾಲ್ಕು ನಾಲ್ಕು ದಂತಗಳುಳ್ಳ ಬಿಳಿಯ ಬಣ್ಣದ ಅರವತ್ತನಾಲ್ಕು ಆನೆಗಳನ್ನು ಭಗವಂತನು ಅಲ್ಲಿಂದ ದ್ವಾರಕೆಗೆ ಕಳಿಸಿದನು. ॥37॥

(ಶ್ಲೋಕ-38)

ಮೂಲಮ್

ಗತ್ವಾ ಸುರೇಂದ್ರಭವನಂ ದತ್ತ್ವಾದಿತ್ಯೈ ಚ ಕುಂಡಲೇ ।
ಪೂಜಿತಸಿದಶೇಂದ್ರೇಣ ಸಹೇಂದ್ರಾಣ್ಯಾ ಚ ಸಪ್ರಿಯಃ ॥

ಅನುವಾದ

ಅನಂತರ ಭಗವಾನ್ ಶ್ರೀಕೃಷ್ಣನು ಸತ್ಯಭಾಮೆಯೊಂದಿಗೆ ಅಮರಾವತಿಯಲ್ಲಿದ್ದ ದೇವೇಂದ್ರನ ಅರಮನೆಗೆ ಹೋದನು. ಅಲ್ಲಿ ಇಂದ್ರನು ತನ್ನ ಪತ್ನಿಯಾದ ಶಚಿದೇವಿಯೊಡನೆ ಸತ್ಯಭಾಮೆಯನ್ನೂ, ಭಗವಾನ್ ಶ್ರೀಕೃಷ್ಣನನ್ನು ಯಥೋಚಿತವಾಗಿ ಪೂಜಿಸಿದನು. ಬಳಿಕ ಭಗವಂತನು ಅದಿತಿಯ ಕುಂಡಲಗಳನ್ನು ಅವನಿಗೆ ಕೊಟ್ಟನು. ॥38॥

(ಶ್ಲೋಕ-39)

ಮೂಲಮ್

ಚೋದಿತೋ ಭಾರ್ಯಯೋತ್ಪಾಟ್ಯ ಪಾರಿಜಾತಂ ಗರುತ್ಮತಿ ।
ಆರೋಪ್ಯ ಸೇಂದ್ರಾನ್ವಿಬುಧಾನ್ನಿರ್ಜಿತ್ಯೋಪಾನಯತ್ ಪುರಮ್ ॥

ಅನುವಾದ

ಅಲ್ಲಿಂದ ಮರಳುವಾಗ ಸತ್ಯಭಾಮೆಯ ಪ್ರೇರಣೆಯಂತೆ ಭಗವಾನ್ ಶ್ರೀಕೃಷ್ಣನು ನಂದನವನದ ಪಾರಿಜಾತವನ್ನು ಕಿತ್ತು ಗರುಡನ ಹೆಗಲೇರಿಸಿ, ದೇವೇಂದ್ರ ಹಾಗೂ ಸಮಸ್ತ ದೇವತೆಗಳನ್ನು ಜಯಿಸಿ ಅದನ್ನು ದ್ವಾರಕೆಗೆ ತೆಗೆದುಕೊಂಡು ಬಂದನು. ॥39॥

(ಶ್ಲೋಕ-40)

ಮೂಲಮ್

ಸ್ಥಾಪಿತಃ ಸತ್ಯಭಾಮಾಯಾ ಗೃಹೋದ್ಯಾನೋಪಶೋಭನಃ ।
ಅನ್ವಗುರ್ಭ್ರಮರಾಃ ಸ್ವರ್ಗಾತ್ ತದ್ಗಂಧಾಸವಲಂಪಟಾಃ ॥

ಅನುವಾದ

ಭಗವಂತನು ಅದನ್ನು ಸತ್ಯಭಾಮೆಯ ಅರಮನೆಯ ಹೂದೋಟದಲ್ಲಿ ನೆಟ್ಟನು. ಇದರಿಂದ ಆ ಉದ್ಯಾನದ ಶೋಭೆಯು ಇನ್ನೂ ಹೆಚ್ಚಾಯಿತು. ಕಲ್ಪವೃಕ್ಷದೊಂದಿಗೆ ಅದರ ಹೂಗಳ ಮತ್ತು ಮಕರಂದದ ಲೋಭಿಗಳಾದ ದುಂಬಿಗಳು ಸ್ವರ್ಗದಿಂದ ದ್ವಾರಕೆಗೆ ಬಂದುಬಿಟ್ಟವು. ॥40॥

(ಶ್ಲೋಕ-41)

ಮೂಲಮ್

ಯಯಾಚ ಆನಮ್ಯ ಕಿರೀಟಕೋಟಿಭಿಃ
ಪಾದೌ ಸ್ಪೃಶನ್ನಚ್ಯುತಮರ್ಥಸಾಧನಮ್ ।
ಸಿದ್ಧಾರ್ಥ ಏತೇನ ವಿಗೃಹ್ಯತೇ ಮಹಾ-
ನಹೋ ಸುರಾಣಾಂ ಚ ತಮೋ ಧಿಗಾಢ್ಯತಾಮ್ ॥

ಅನುವಾದ

ಪರೀಕ್ಷಿತನೇ! ಇಂದ್ರನು ಶ್ರೀಕೃಷ್ಣನಿಂದ ಯಾವುದಾದರೂ ಕೆಲಸವಾಗಬೇಕಾದಾಗ ಅವನು ತಲೆಯನ್ನು ತಗ್ಗಿಸಿ ಕಿರೀಟದ ತುದಿಯಿಂದ ಶ್ರೀಕೃಷ್ಣನ ಚರಣಗಳನ್ನು ಸ್ಪರ್ಶಿಸಿ ಅವನಲ್ಲಿ ಭಿಕ್ಷೆ ಬೇಡಿದ್ದನು. ಆದರೆ ಕೆಲಸವಾದ ಮೇಲೆ ಅವನು ಅದೇ ಶ್ರೀಕೃಷ್ಣನಲ್ಲಿ ಯುದ್ಧವನ್ನು ಮಾಡಲು ಹಿಂದು ಮುಂದು ನೋಡಲಿಲ್ಲ. ನಿಜವಾಗಿ ನೋಡಿದರೆ ಈ ದೇವತೆಗಳೂ ಕೂಡ ಭಾರೀ ತಮೋಗುಣಿಗಳು ಸ್ವಾರ್ಥಿಗಳು ಮತ್ತು ಅವರಲ್ಲಿರುವ ದೊಡ್ಡ ದೋಷವೆಂದರೆ ಧನಾಢ್ಯತೆ. ಇಂತಹ ಧನಾಢ್ಯತೆಗೆ ಧಿಕ್ಕಾರವಿರಲಿ. ॥41॥

(ಶ್ಲೋಕ-42)

ಮೂಲಮ್

ಅಥೋ ಮುಹೂರ್ತ ಏಕಸ್ಮಿನ್ ನಾನಾಗಾರೇಷು ತಾಃ ಸಿಯಃ ।
ಯಥೋಪಯೇಮೇ ಭಗವಾಂಸ್ತಾವದ್ರೂಪಧರೋವ್ಯಯಃ ॥

ಅನುವಾದ

ಅನಂತರ ಭಗವಾನ್ ಶ್ರೀಕೃಷ್ಣನು ಒಂದೇ ಮುಹೂರ್ತದಲ್ಲಿ ಪ್ರತ್ಯೇಕ-ಪ್ರತ್ಯೇಕ ಭವನಗಳಲ್ಲಿ ಬೇರೆ-ಬೇರೆಯ ರಾಜಕನ್ಯೆಯರಿಗೆ ಅಭೀಷ್ಟವಾದ ಅಷ್ಟೂ ರೂಪಗಳನ್ನು ಧರಿಸಿಕೊಂಡು ಒಂದೇ ಬಾರಿಗೆ ಹದಿನಾರುಸಾವಿರ ಕನ್ಯೆಯರ ಪಾಣಿಗ್ರಹಣ ಮಾಡಿದನು. ಸರ್ವಶಕ್ತನಾದ ಅವಿನಾಶಿ ಭಗವಂತನ ವಿಷಯದಲ್ಲಿ ಆಶ್ಚರ್ಯದ ಮಾತೇನಿದೆ? ॥42॥

(ಶ್ಲೋಕ-43)

ಮೂಲಮ್

ಗೃಹೇಷು ತಾಸಾಮನಪಾಯ್ಯತರ್ಕ್ಯಕೃನ್ನಿರಸ್ತಸಾಮ್ಯಾತಿಶಯೇಷ್ವವಸ್ಥಿತಃ ।
ರೇಮೇ ರಮಾಭಿರ್ನಿಜಕಾಮಸಂಪ್ಲುತೋ ಯಥೇತರೋ ಗಾರ್ಹಕಮೇಧಿಕಾಂಶ್ಚರನ್ ॥

ಅನುವಾದ

ಭಗವಂತನ ಪತ್ನೀಯರ ಬೇರೆ-ಬೇರೆ ಭವನಗಳಲ್ಲಿ ಜಗತ್ತಿನಲ್ಲಿ ಅದಕ್ಕೆ ಸರಿಸಮಾನವಾದ ಯಾವುದೇ ಸಾಮಗ್ರಿಗಳೂ ಎಲ್ಲಿಯೂ, ಇಲ್ಲದಿರುವಂತಹ ದಿವ್ಯ ಸಾಮಗ್ರಿಗಳು ತುಂಬಿದ್ದವು. ಆ ಅರಮನೆಗಳಲ್ಲಿ ಇದ್ದುಕೊಂಡು ಮತಿಗೆ ನಿಲುಕದ ಲೀಲೆಯನ್ನು ತೋರುವ ಅವಿನಾಶಿ ಭಗವಾನ್ ಶ್ರೀಕೃಷ್ಣನು ಆತ್ಮಾನಂದದಲ್ಲಿ ಮಗ್ನನಾಗಿರುತ್ತಾ ಲಕ್ಷ್ಮೀದೇವಿಯ ಅಂಶರೂಪರಾದ ಆ ಪತ್ನಿಯರೊಂದಿಗೆ - ಸಾಧಾರಣ ಗೃಹಸ್ಥನಂತೆ ಗೃಹಸ್ಥ ಧರ್ಮಕ್ಕನುಸಾರ ಆಚರಣೆಗಳನ್ನು ಮಾಡುತ್ತಾ ವಿಹರಿಸುತ್ತಿದ್ದನು. ॥43॥

(ಶ್ಲೋಕ-44)

ಮೂಲಮ್

ಇತ್ಥಂ ರಮಾಪತಿಮವಾಪ್ಯ ಪತಿಂ ಸಿಯಸ್ತಾ
ಬ್ರಹ್ಮಾದಯೋಪಿ ನ ವಿದುಃ ಪದವೀಂ ಯದೀಯಾಮ್ ।
ಭೇಜುರ್ಮುದಾವಿರತಮೇಧಿತಯಾನುರಾಗ-
ಹಾಸಾವಲೋಕನವಸಂಗಮಜಲ್ಪಲಜ್ಜಾಃ ॥

ಅನುವಾದ

ಪರೀಕ್ಷಿತನೇ! ಬ್ರಹ್ಮಾದಿ ಶ್ರೇಷ್ಠದೇವತೆಗಳೂ ಕೂಡ ಭಗವಂತನ ವಾಸ್ತವಿಕವಾದ ಸ್ವರೂಪವನ್ನು ಮತ್ತು ಅವನ ಪ್ರಾಪ್ತಿಯ ಮಾರ್ಗವನ್ನೂ ತಿಳಿಯುತ್ತಿಲ್ಲ. ಅಂತಹ ರಮಾರಮಣನಾದ ಭಗವಾನ್ ಶ್ರೀಕೃಷ್ಣನನ್ನು ಆ ಪತ್ನಿಯರು ಪತಿಯಾಗಿ ಪಡೆದುಕೊಂಡಿದ್ದರು. ಈಗ ನಿತ್ಯ-ನಿರಂತರ ಅವರ ಪ್ರೇಮಾನಂದಗಳು ಅಭಿವೃದ್ಧಿಯಾಗುತ್ತಿತ್ತು. ಅವರು ಪ್ರೇಮದಿಂದ ಕೂಡಿದ ಮಂದಹಾಸದಿಂದಲೂ ಮಧುರವಾದ ನೋಟದಿಂದಲೂ, ನೂತನ ಸಮಾಗಮದಿಂದಲೂ, ಪ್ರೇಮಾಲಾಪ ಹಾಗೂ ಪ್ರೇಮ ಭಾವವನ್ನು ಹೆಚ್ಚಿಸುವ ಲಜ್ಜೆಯಿಂದ ಕೂಡಿಕೊಂಡು ಎಲ್ಲ ಪ್ರಕಾರದಿಂದ ಭಗವಂತನ ಸೇವೆ ಮಾಡುತ್ತಿದ್ದರು. ॥44॥

(ಶ್ಲೋಕ-46)

ಮೂಲಮ್

ಪ್ರತ್ಯುದ್ಗಮಾಸನವರಾರ್ಹಣಪಾದಶೌಚ-
ತಾಂಬೂಲವಿಶ್ರಮಣವೀಜನಗಂಧಮಾಲ್ಯೈಃ ।
ಕೇಶಪ್ರಸಾರಶಯನಸ್ನಪನೋಪಹಾರ್ಯೈ-
ರ್ದಾಸೀಶತಾ ಅಪಿ ವಿಭೋರ್ವಿದಧುಃ ಸ್ಮ ದಾಸ್ಯಮ್ ॥

ಅನುವಾದ

ಅವರಲ್ಲಿ ಎಲ್ಲ ಪತ್ನಿಯರೊಂದಿಗೂ ಸೇವೆ ಮಾಡುವ ಸಾವಿರಾರು ದಾಸಿಯರು ಇರುತ್ತಿದ್ದರು. ಹೀಗಿದ್ದರೂ ಅವರ ಅರಮನೆಗೆ ಭಗವಂತನು ದಯಮಾಡಿಸಿದಾಗ ಅವರು ಸ್ವತಃ ಮುಂದೆ ಬಂದು ಆದರದಿಂದ ಬರಮಾಡಿಕೊಂಡು ಶ್ರೇಷ್ಠ ಆಸನದಲ್ಲಿ ಕುಳ್ಳಿರಿಸಿ, ಉತ್ತಮ ಸಾಮಗ್ರಿಗಳಿಂದ ಪೂಜಿಸುವರು. ಚರಣ ಕಮಲಗಳನ್ನು ತೊಳೆದು ಸುವಾಸಿತವಾದ ತಾಂಬೂಲವನ್ನು ನೀಡುವರು. ಕಾಲೊತ್ತುತ್ತಾ ಬಳಲಿಕೆಯನ್ನು ದೂರಮಾಡುವರು. ಗಾಳಿ ಬೀಸುವರು, ಚಂದನ ಮುಂತಾದ ಪರಿಮಳ ದ್ರವ್ಯಗಳನ್ನು ಪೂಸುವರು. ಹೂವಿನ ಹಾರಗಳನ್ನು ತೊಡಿಸಿ, ಕೂದಲು ಸರಿಪಡಿಸುವರು. ಸ್ನಾನಮಾಡಿಸುವರು, ಮಲಗಿಸುವರು, ಬಗೆ-ಬಗೆಯ ಭೋಜನ ಮಾಡಿಸುವರು - ಹೀಗೆ ತಮ್ಮ ಕೈಗಳಿಂದಲೇ ಭಗವಂತನ ಸೇವೆ ಮಾಡುತ್ತಿದ್ದರು. ॥45॥

ಅನುವಾದ (ಸಮಾಪ್ತಿಃ)

ಐವತ್ತೊಂಭತ್ತನೆಯ ಅಧ್ಯಾಯವು ಮುಗಿಯಿತು. ॥59॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ
ಪಾರಿಜಾತಹರಣನರಕವಧೋ ನಾಮೈಕೋನಷಷ್ಟಿತಮೋಽಧ್ಯಾಯಃ ॥59॥