[ಐವತ್ತೇಂಟನೇಯ ಅಧ್ಯಾಯ]
ಭಾಗಸೂಚನಾ
ಶ್ರೀಕೃಷ್ಣನ ಇತರ ವಿವಾಹ ಮಹೋತ್ಸವಗಳು
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏಕದಾ ಪಾಂಡವಾನ್ ದ್ರಷ್ಟುಂ ಪ್ರತೀತಾನ್ ಪುರುಷೋತ್ತಮಃ ।
ಇಂದ್ರಪ್ರಸ್ಥಂ ಗತಃ ಶ್ರೀಮಾನ್ ಯುಯುಧಾನಾದಿಭಿರ್ವೃತಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಪಾಂಡವರು ಲಾಕ್ಷಾಗೃಹದಲ್ಲಿ ಸುಟ್ಟುಹೋಗದೆ ಜೀವಂತ ವಾಗಿರುವರೆಂಬುದು ಈಗ ತಿಳಿದಿತ್ತು. ಒಂದುದಿನ ಭಗವಾನ್ ಶ್ರೀಕೃಷ್ಣನು ಅವರನ್ನು ಭೆಟ್ಟಿಯಾಗಲು ಸಾತ್ಯಕಿಯೇ ಮೊದಲಾದ ಸುಹೃದರೊಡನೆ ಇಂದ್ರಪ್ರಸ್ಥಕ್ಕೆ ಪ್ರಯಾಣ ಮಾಡಿದನು. ॥1॥
(ಶ್ಲೋಕ-2)
ಮೂಲಮ್
ದೃಷ್ಟ್ವಾ ತಮಾಗತಂ ಪಾರ್ಥಾ ಮುಕುಂದಮಖಿಲೇಶ್ವರಮ್ ।
ಉತ್ತಸ್ಥುರ್ಯುಗಪದ್ವೀರಾಃ ಪ್ರಾಣಾ ಮುಖ್ಯಮಿವಾಗತಮ್ ॥
ಅನುವಾದ
ಸರ್ವೇಶ್ವರನಾದ ಭಗವಾನ್ ಶ್ರೀಕೃಷ್ಣನು ದಯಮಾಡಿಸಿರುವನೆಂದು ನೋಡಿ ಪ್ರಾಣಸಂಚಾರವಾದೊಡನೆ ಇಂದ್ರಿಯಗಳೆಲ್ಲವೂ ಸಚೇತನವಾಗುವಂತೆಯೇ ವೀರವರರಾದ ಪಾಂಡವರೆಲ್ಲರೂ ಒಂದೇ ಬಾರಿಗೆ ಎದ್ದು ನಿಂತರು. ॥2॥
(ಶ್ಲೋಕ-3)
ಮೂಲಮ್
ಪರಿಷ್ವಜ್ಯಾಚ್ಯುತಂ ವೀರಾ ಅಂಗಸಂಗಹತೈನಸಃ ।
ಸಾನುರಾಗಸ್ಮಿತಂ ವಕಂ ವೀಕ್ಷ್ಯ ತಸ್ಯ ಮುದಂ ಯಯುಃ ॥
ಅನುವಾದ
ವೀರರಾದ ಪಾಂಡವರು ಭಗವಂತನಾದ ಶ್ರೀಕೃಷ್ಣನನ್ನು ಗಾಢವಾಗಿ ಆಲಿಂಗಿಸಿಕೊಂಡರು. ಪರಮಾತ್ಮನ ಅಂಗಸ್ಪರ್ಶದಿಂದ ಅವರ ಪಾಪಗಳೆಲ್ಲವೂ ಪರಿಹಾರವಾದುವು. ಭಗವಂತನ ಪ್ರೀತಿಯ ಮಂದಹಾಸದಿಂದ ಕೂಡಿದ ಮುಖಾರವಿಂದವನ್ನು ನೋಡಿ ಅವರೆಲ್ಲರೂ ಆನಂದ ತುಂದಿಲರಾದರು. ॥3॥
(ಶ್ಲೋಕ-4)
ಮೂಲಮ್
ಯುಧಿಷ್ಠಿರಸ್ಯ ಭೀಮಸ್ಯ ಕೃತ್ವಾ ಪಾದಾಭಿವಂದನಮ್ ।
ಾಲ್ಗುನಂ ಪರಿರಭ್ಯಾಥ ಯಮಾಭ್ಯಾಂ ಚಾಭಿವಂದಿತಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಯುಧಿಷ್ಠಿರನಿಗೆ ಮತ್ತು ಭೀಮಸೇನನಿಗೆ ಪಾದಾಭಿವಂದನೆಯನ್ನು ಮಾಡಿದನು. ಅರ್ಜುನನ್ನು ಆಲಿಂಗಿಸಿಕೊಂಡನು. ನಕುಲ-ಸಹದೇವರು ಭಗವಂತನ ಪಾದಗಳಿಗೆರಗಿದರು. ॥4॥
(ಶ್ಲೋಕ-5)
ಮೂಲಮ್
ಪರಮಾಸನ ಆಸೀನಂ ಕೃಷ್ಣಾ ಕೃಷ್ಣಮನಿಂದಿತಾ ।
ನವೋಢಾ ವ್ರೀಡಿತಾ ಕಿಂಚಿಚ್ಛನೈರೇತ್ಯಾಭ್ಯವಂದತ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಶ್ರೇಷ್ಠಸಿಂಹಾಸನದಲ್ಲಿ ವಿರಾಜಮಾನನಾದಾಗ ಆಗ ತಾನೇ ಪಾಂಡವರನ್ನು ವಿವಾಹವಾಗಿದ್ದ ಪರಮಸುಂದರಿಯಾದ ಕೃಷ್ಣೆಯು ನಾಚಿಕೆಯಿಂದಾಗಿ ನಿಧಾನವಾಗಿ ನಡೆದುಕೊಂಡಬಂದು ಶ್ರೀಕೃಷ್ಣನಿಗೆ ನಮಸ್ಕರಿಸಿದಳು. ॥5॥
(ಶ್ಲೋಕ-6)
ಮೂಲಮ್
ತಥೈವ ಸಾತ್ಯಕಿಃ ಪಾರ್ಥೈಃ ಪೂಜಿತಶ್ಚಾಭಿವಂದಿತಃ ।
ನಿಷಸಾದಾಸನೇನ್ಯೇ ಚ ಪೂಜಿತಾಃ ಪರ್ಯುಪಾಸತ ॥
ಅನುವಾದ
ಪಾಂಡವರು ಶ್ರೀಕೃಷ್ಣನಂತೆಯೇ ವೀರ ಸಾತ್ಯಕಿಗೂ ಸ್ವಾಗತ-ಸತ್ಕಾರಗಳನ್ನು ಮಾಡಿ ಅಭಿನಂದಿಸಿ ಒಂದು ಆಸನದಲ್ಲಿ ಕುಳ್ಳಿರಿಸಿದರು. ಶ್ರೀಕೃಷ್ಣನೊಂದಿಗೆ ಬಂದಿರುವ ಇತರ ಯದುವಂಶೀಯರನ್ನೂ ಯಥಾಯೋಗ್ಯವಾಗಿ ಸತ್ಕರಿಸಿದರು. ಅವರೆಲ್ಲರೂ ಕೃಷ್ಣನ ಸುತ್ತಲೂ ಕುಳಿತುಕೊಂಡರು. ॥6॥
(ಶ್ಲೋಕ-7)
ಮೂಲಮ್
ಪೃಥಾಂ ಸಮಾಗತ್ಯ ಕೃತಾಭಿವಾದನ-
ಸ್ತಯಾತಿಹಾರ್ದಾರ್ದ್ರದೃಶಾಭಿರಂಭಿತಃ ।
ಆಪೃಷ್ಟವಾಂಸ್ತಾಂ ಕುಶಲಂ ಸಹಸ್ನುಷಾಂ
ಪಿತೃಷ್ವಸಾರಂ ಪರಿಪೃಷ್ಟಬಾಂಧವಃ ॥
ಅನುವಾದ
ಬಳಿಕ ಶ್ರೀಕೃಷ್ಣನು ತನ್ನ ಸೋದರತ್ತೆಯಾದ ಕುಂತೀದೇವಿಯ ಬಳಿಗೆ ಹೋಗಿ ಅವಳ ಚರಣಗಳಲ್ಲಿ ನಮಸ್ಕರಿಸಿದನು. ಕುಂತಿಯೂ ಅತ್ಯಂತ ಸ್ನೇಹದಿಂದ ಕೃಷ್ಣನನ್ನು ಅಪ್ಪಿಕೊಂಡಳು. ಆಕೆಯ ಕಣ್ಣುಗಳಲ್ಲಿ ಆನಂದಾಶ್ರುಗಳು ಸುರಿಯುತ್ತಿರುವಂತೆ ಶ್ರೀಕೃಷ್ಣನಲ್ಲಿ ತನ್ನ ತವರಿನ ಬಂಧುಗಳ ಕ್ಷೇಮಸಮಾಚಾರವನ್ನು ಕೇಳಿದಳು. ಭಗವಂತನು ಯಥೋಚಿತವಾಗಿ ಉತ್ತರಿಸಿ ಕುಂತಿಯಲ್ಲಿ ಆಕೆಯ ಮತ್ತು ಸೊಸೆಯಾದ ದ್ರೌಪದಿಯ ಕುಶಲವನ್ನು ವಿಚಾರಿಸಿದನು. ॥7॥
(ಶ್ಲೋಕ-8)
ಮೂಲಮ್
ತಮಾಹ ಪ್ರೇಮವೈಕ್ಲವ್ಯರುದ್ಧಕಂಠಾಶ್ರುಲೋಚನಾ ।
ಸ್ಮರಂತೀ ತಾನ್ಬಹೂನ್ ಕ್ಲೇಶಾನ್ ಕ್ಲೇಶಾಪಾಯಾತ್ಮದರ್ಶನಮ್ ॥
ಅನುವಾದ
ಆ ಸಮಯದಲ್ಲಿ ಪ್ರೇಮವಿಹ್ವಲಳಾದ ಕುಂತಿಯ ಕಂಠವು ಉಮ್ಮಳಿಸಿ, ಕಣ್ಣುಗಳಿಂದ ಅಶ್ರುಗಳು ಹರಿಯುತ್ತಿದ್ದವು. ಭಗವಂತನು ಆಕೆಯಲ್ಲಿ ವಿಚಾರಿಸಿದಾಗ ಅವಳಿಗೆ ತನ್ನ ಹಿಂದಿನ ಅನಂತಕ್ಲೇಶಗಳು ನೆನಪಾದುವು. ಅವಳು ಸಾವರಿಸಿಕೊಂಡು-ದರ್ಶನಮಾತ್ರದಿಂದಲೇ ಸಮಸ್ತ ಕಷ್ಟಗಳನ್ನು ನಿವಾರಿಸುವ ಶ್ರೀಕೃಷ್ಣ ಪರಮಾತ್ಮನಲ್ಲಿ ಹೇಳತೊಡಗಿದಳು. ॥8॥
(ಶ್ಲೋಕ-9)
ಮೂಲಮ್
ತದೈವ ಕುಶಲಂ ನೋಭೂತ್ ಸನಾಥಾಸ್ತೇ ಕೃತಾ ವಯಮ್
ಜ್ಞಾತೀನ್ನಃ ಸ್ಮರತಾ ಕೃಷ್ಣ ಭ್ರಾತಾ ಮೇ ಪ್ರೇಷಿತಸ್ತ್ವಯಾ ॥
ಅನುವಾದ
ಶ್ರೀಕೃಷ್ಣಾ! ನೀನು ನಮ್ಮನ್ನು ತನ್ನವರೆಂದು, ತನ್ನ ಕುಟುಂಬದವರೆಂದು ಭಾವಿಸಿ ನಮ್ಮ ಯೋಗಕ್ಷೇಮವನ್ನು ವಿಚಾರಿಸಲು ನನ್ನ ಸೋದರನಾದ ಅಕ್ರೂರನನ್ನು ಕಳಿಸಿದಾಗಲೇ ನಮ್ಮ ಕಲ್ಯಾಣವಾಗಿ ಹೋಯಿತು. ನಮ್ಮಂತಹ ಅನಾಥರನ್ನು ನೀನು ಸನಾಥರನ್ನಾಗಿಸಿದೆ. ॥9॥
(ಶ್ಲೋಕ-10)
ಮೂಲಮ್
ನ ತೇಸ್ತಿಸ್ವಪರಭ್ರಾಂತಿರ್ವಿಶ್ವಸ್ಯ ಸುಹೃದಾತ್ಮನಃ ।
ತಥಾಪಿ ಸ್ಮರತಾಂ ಶಶ್ವತ್ ಕ್ಲೇಶಾನ್ ಹಂಸಿ ಹೃದಿ ಸ್ಥಿತಃ ॥
ಅನುವಾದ
ಸಮಸ್ತ ಜಗತ್ತಿನ ಪರಮಸುಹೃದನೂ, ಹಿತೈಷಿಯೂ, ಆತ್ಮ ಸ್ವರೂಪನೂ ಆಗಿರುವೆ ಎಂಬುದನ್ನು ನಾನು ಬಲ್ಲೆನು. ಇವನು ನನ್ನವನು, ಇವನು ಪರನು ಎಂಬ ಭ್ರಾಂತಿಯೂ ನಿನ್ನಲ್ಲಿಲ್ಲ. ಹೀಗಿದ್ದರೂ ಕೃಷ್ಣಾ! ಸದಾಕಾಲ ನಿನ್ನನ್ನು ಸ್ಮರಿಸುವವನ ಹೃದಯದಲ್ಲಿ ಬಂದು ನೀನು ನೆಲೆಸಿರುವೆ ಮತ್ತು ಅವನ ಕ್ಲೇಶ ಪರಂಪರೆಯನ್ನು ಎಂದೆಂದಿಗೂ ಇಲ್ಲವಾಗಿಸುವೆ. ॥10॥
(ಶ್ಲೋಕ-11)
ಮೂಲಮ್ (ವಾಚನಮ್)
ಯುಧಿಷ್ಠಿರ ಉವಾಚ
ಮೂಲಮ್
ಕಿಂ ನ ಆಚರಿತಂ ಶ್ರೇಯೋ ನ ವೇದಾಹಮಧೀಶ್ವರ ।
ಯೋಗೇಶ್ವರಾಣಾಂ ದುರ್ದರ್ಶೋ ಯನ್ನೋ ದೃಷ್ಟಃ ಕುಮೇಧಸಾಮ್ ॥
ಅನುವಾದ
ಯುಧಿಷ್ಠಿರನು ಹೇಳಿದನು — ಸರ್ವೇಶ್ವರನಾದ ಶ್ರೀಕೃಷ್ಣ! ನಾವು ಪೂರ್ವಜನ್ಮದಲ್ಲಾಗಲೀ, ಈ ಜನ್ಮದಲ್ಲಾಗಲೀ ಯಾವ ಶ್ರೇಯಸ್ಕರ ಸಾಧನೆಯನ್ನು ಮಾಡಿರುವೆವೋ ನಮಗೆ ತಿಳಿಯದು. ನಿನ್ನ ದರ್ಶನವು ಮಹಾ-ಮಹಾ ಯೋಗೇಶ್ವರರಿಗೂ ದುರ್ಲಭವೆನಿಸಿರುವಾಗ ದುರ್ಬುದ್ಧಿಯವರಾದ ನಮಗೆ ಮನೆಯಲ್ಲಿ ಕುಳಿತಿರುವಾಗಲೇ ನಿನ್ನ ದರ್ಶನವಾಗುತ್ತಿದೆ. ॥11॥
(ಶ್ಲೋಕ-12)
ಮೂಲಮ್
ಇತಿ ವೈ ವಾರ್ಷಿಕಾನ್ಮಾಸಾನ್ರಾಜ್ಞಾ ಸೋಭ್ಯರ್ಥಿತಃ ಸುಖಮ್ ।
ಜನಯನ್ ನಯನಾನಂದಮಿಂದ್ರಪ್ರಸ್ಥೌಕಸಾಂ ವಿಭುಃ ॥
ಅನುವಾದ
ಯುಧಿಷ್ಠಿರನು ಭಗವಂತನನ್ನು ಹೀಗೆ ಸ್ತುತಿಸುತ್ತಾ ಹಲವಾರು ದಿವಸಗಳಾದರೂ ಇಂದ್ರ ಪ್ರಸ್ಥದಲ್ಲೇ ಇರುವಂತೆ ಪ್ರಾರ್ಥಿಸಿಕೊಂಡನು. ಶ್ರೀಕೃಷ್ಣನು ಇದಕ್ಕೆ ಸಮ್ಮತಿಸಿ ಇಂದ್ರಪ್ರಸ್ಥದಲ್ಲಿನ ನರ-ನಾರಿಯರ ಕಣ್ಣುಗಳಿಗೆ ಆನಂದೋತ್ಸವವನ್ನು ಕಲ್ಪಿಸುತ್ತಾ ಮಳೆಗಾಲದ ನಾಲ್ಕು ತಿಂಗಳುಗಳನ್ನು ಅಲ್ಲಿಯೇ ಕಳೆದನು. ॥12॥
(ಶ್ಲೋಕ-13)
ಮೂಲಮ್
ಏಕದಾ ರಥಮಾರುಹ್ಯ ವಿಜಯೋ ವಾನರಧ್ವಜಮ್ ।
ಗಾಂಡೀವಂ ಧನುರಾದಾಯ ತೂಣೌ ಚಾಕ್ಷಯಸಾಯಕೌ ॥
(ಶ್ಲೋಕ-14)
ಮೂಲಮ್
ಸಾಕಂ ಕೃಷ್ಣೇನ ಸನ್ನದ್ಧೋ ವಿಹರ್ತುಂ ವಿಪಿನಂ ಮಹತ್ ।
ಬಹುವ್ಯಾಲಮೃಗಾಕೀರ್ಣಂ ಪ್ರಾವಿಶತ್ ಪರವೀರಹಾ ॥
ಅನುವಾದ
ಒಮ್ಮೆ ವೀರನಾದ ಅರ್ಜುನನು ಗಾಂಡೀವಧನುಸ್ಸನ್ನೂ, ಅಕ್ಷಯ ಬತ್ತಳಿಕೆಗಳನ್ನು ತೆಗೆದುಕೊಂಡು ಕವಚವನ್ನು ತೊಟ್ಟು ಶ್ರೀಕೃಷ್ಣನೊಡನೆ ವಾನರಧ್ವಜವುಳ್ಳ ರಥದಲ್ಲಿ ಕುಳಿತು ಬೇಟೆಯಾಡುವ ಸಲುವಾಗಿ ಸರ್ಪಗಳಿಂದಲೂ, ಸಿಂಹಗಳಿಂದಲೂ, ವ್ಯಾಘ್ರಗಳಿಂದಲೂ, ಕೂಡಿದ ಅತ್ಯಂತ ಭಯಂಕರವಾದ ಅರಣ್ಯವನ್ನು ಪ್ರವೇಶಿಸಿದನು. ॥13-14॥
(ಶ್ಲೋಕ-15)
ಮೂಲಮ್
ತತ್ರಾವಿಧ್ಯಚ್ಛರೈರ್ವ್ಯಾಘ್ರಾನ್ಸೂಕರಾನ್ ಮಹಿಷಾನ್ರುರೂನ್ ।
ಶರಭಾನ್ಗವಯಾನ್ಖಡ್ಗಾನ್ ಹರಿಣಾಂಛಶಶಲ್ಲಕಾನ್ ॥
ಅನುವಾದ
ಆ ಮಹಾರಣ್ಯದಲ್ಲವನು ತನ್ನ ತೀಕ್ಷ್ಣವಾದ ಬಾಣಗಳಿಂದ ಋಷಿಗಳಿಗೆ ತೊಂದರೆ ಕೊಡುತ್ತಿದ್ದ ದುಷ್ಟ ಕಾಡುಮೃಗಗಳನ್ನು ಸಂಹರಿಸಿದನು. ॥15॥
(ಶ್ಲೋಕ-16)
ಮೂಲಮ್
ತಾನ್ನಿನ್ಯುಃ ಕಿಂಕರಾ ರಾಜ್ಞೇ ಮೇಧ್ಯಾನ್ಪರ್ವಣ್ಯುಪಾಗತೇ ।
ತೃಟ್ಪರೀತಃ ಪರಿಶ್ರಾಂತೋ ಬೀಭತ್ಸುರ್ಯಮುನಾಮಗಾತ್ ॥
ಅನುವಾದ
ಪರ್ವಕಾಲವು ಸನ್ನಿಹಿತವಾಗಿರಲಾಗಿ ಯಜ್ಞಕ್ಕೆ ಯೋಗ್ಯವಾದ ಹಲವಾರು ಸಾಮಗ್ರಿಗಳನ್ನು ಸೇವಕರು ಮಹಾರಾಜ ಯುಧಿಷ್ಠಿರನಿಗಾಗಿ ಒಯ್ದರು. ಅರ್ಜುನ-ಶ್ರೀಕೃಷ್ಣನಿಗೆ ಬಾಯಾರಿಕೆ ಉಂಟಾದ್ದರಿಂದ ಅವರಿಬ್ಬರೂ ಯಮುನಾತೀರಕ್ಕೆ ಹೋದರು. ॥16॥
(ಶ್ಲೋಕ-17)
ಮೂಲಮ್
ತತ್ರೋಪಸ್ಪೃಶ್ಯ ವಿಶದಂ ಪೀತ್ವಾ ವಾರಿ ಮಹಾರಥೌ ।
ಕೃಷ್ಣೌ ದದೃಶತುಃ ಕನ್ಯಾಂ ಚರಂತೀಂ ಚಾರುದರ್ಶನಾಮ್ ॥
ಅನುವಾದ
ಮಹಾರಥರಾದ ಕೃಷ್ಣಾರ್ಜುನರು ಯಮುನಾನದಿಗೆ ಹೋಗಿ ಕೈ-ಕಾಲುಗಳನ್ನು ತೊಳೆದುಕೊಂಡು ನಿರ್ಮಲವಾದ ನೀರನ್ನು ಕುಡಿದು, ಅಲ್ಲಿಯೇ ತಪಸ್ಸು ಮಾಡುತ್ತಿದ್ದ ಪರಮಸುಂದರಳಾದ ಕನ್ಯೆಯೋರ್ವಳನ್ನು ನೋಡಿದರು. ॥17॥
(ಶ್ಲೋಕ-18)
ಮೂಲಮ್
ತಾಮಾಸಾದ್ಯ ವರಾರೋಹಾಂ ಸುದ್ವಿಜಾಂ ರುಚಿರಾನನಾಮ್ ।
ಪಪ್ರಚ್ಛ ಪ್ರೇಷಿತಃ ಸಖ್ಯಾ ಫಾಲ್ಗುನಃ ಪ್ರಮದೋತ್ತಮಾಮ್ ॥
ಅನುವಾದ
ಆ ಸುಂದರಿಯ ತೊಡೆ, ಹಲ್ಲು ಮತ್ತು ಮುಖಗಳು ಅತ್ಯಂತ ಸುಂದರವಾಗಿತ್ತು. ಪ್ರಿಯಮಿತ್ರನಾದ ಶ್ರೀಕೃಷ್ಣನಿಂದ ಕಳುಹಲ್ಪಟ್ಟ ಅರ್ಜುನನು ಆಕೆಯ ಬಳಿಗೆ ಹೋಗಿ ವಿಚಾರಿಸಿದನು. ॥18॥
(ಶ್ಲೋಕ-19)
ಮೂಲಮ್
ಕಾ ತ್ವಂ ಕಸ್ಯಾಸಿ ಸುಶ್ರೋಣಿ ಕುತೋಸಿ ಕಿಂ ಚಿಕೀರ್ಷಸಿ ।
ಮನ್ಯೇ ತ್ವಾಂ ಪತಿಮಿಚ್ಛಂತೀಂ ಸರ್ವಂ ಕಥಯ ಶೋಭನೇ ॥
ಅನುವಾದ
ಎಲೈ ಸುಂದರಿಯೇ! ನೀನು ಯಾರಾಗಿರುವೆ? ಯಾರ ಪುತ್ರಿಯಾಗಿರುವೆ? ಎಲ್ಲಿಂದ ಬಂದಿರುವೆ? ಏನು ಮಾಡ ಬೇಕೆಂದಿರುವೆ? ನೀನು ನಿನಗೆ ಯೋಗ್ಯನಾದ ಪತಿಯನ್ನು ಬಯಸುತ್ತಿರುವೆ ಎಂದು ನಾನು ತಿಳಿಯುತ್ತೇನೆ. ಓ ಕಲ್ಯಾಣಿಯೇ! ನೀನು ನಿನ್ನ ಎಲ್ಲ ವೃತ್ತಾಂತವನ್ನು ತಿಳಿಸು. ॥19॥
(ಶ್ಲೋಕ-20)
ಮೂಲಮ್ (ವಾಚನಮ್)
ಕಾಲಿಂದ್ಯುವಾಚ
ಮೂಲಮ್
ಅಹಂ ದೇವಸ್ಯ ಸವಿತುರ್ದುಹಿತಾ ಪತಿಮಿಚ್ಛತೀ ।
ವಿಷ್ಣುಂ ವರೇಣ್ಯಂ ವರದಂ ತಪಃ ಪರಮಮಾಸ್ಥಿತಾ ॥
ಅನುವಾದ
ಕಾಲಿಂದಿಯು ಹೇಳಿದಳು — ನಾನು ಭಗವಾನ್ ಸೂರ್ಯ ನಾರಾಯಣನ ಪುತ್ರಿಯಾಗಿದ್ದೇನೆ. ಸರ್ವಶ್ರೇಷ್ಠ ವರದಾಯಕನಾದ ಭಗವಾನ್ ವಿಷ್ಣುವನ್ನು ಪತಿಯನ್ನಾಗಿ ಪಡೆಯಲು ಬಯಸುತ್ತಿರುವೆನು. ಅದಕ್ಕಾಗಿ ಇಂತಹ ಕಠೋರ ತಪಸ್ಸನ್ನು ಮಾಡುತ್ತಿದ್ದೇನೆ. ॥20॥
(ಶ್ಲೋಕ-21)
ಮೂಲಮ್
ನಾನ್ಯಂ ಪತಿಂ ವೃಣೇ ವೀರ ತಮೃತೇ ಶ್ರೀನಿಕೇತನಮ್ ।
ತುಷ್ಯತಾಂ ಮೇ ಸ ಭಗವಾನ್ ಮುಕುಂದೋನಾಥಸಂಶ್ರಯಃ ॥
ಅನುವಾದ
ವೀರವರನಾದ ಅರ್ಜುನ! ಲಕ್ಷ್ಮೀದೇವಿಗೆ ಪರಮಾಶ್ರಯನಾದ ಭಗವಂತನನ್ನು ಬಿಟ್ಟು ಬೇರೆ ಯಾರನ್ನೂ ಪತಿಯಾಗಿ ನಾನು ಸ್ವೀಕರಿಸುವುದಿಲ್ಲ. ಅನಾಥರಿಗೆ ಏಕಮಾತ್ರ ಆಸರೆಯಾದ ಭಗವಾನ್ ಶ್ರೀಕೃಷ್ಣನು ನನ್ನ ಮೇಲೆ ಪ್ರಸನ್ನನಾಗಲಿ. ॥21॥
(ಶ್ಲೋಕ-22)
ಮೂಲಮ್
ಕಾಲಿಂದೀತೀ ಸಮಾಖ್ಯಾತಾ ವಸಾಮಿ ಯಮುನಾಜಲೇ ।
ನಿರ್ಮಿತೇ ಭವನೇ ಪಿತ್ರಾ ಯಾವದಚ್ಯುತದರ್ಶನಮ್ ॥
ಅನುವಾದ
ನನ್ನ ಹೆಸರು ಕಾಳಿಂದೀ ಎಂದಾಗಿದೆ. ಯಮುನಾಜಲದಲ್ಲಿ ನನ್ನ ತಂದೆಯಾದ ಸೂರ್ಯನು ನನಗಾಗಿ ಒಂದು ಭವನವನ್ನು ನಿರ್ಮಿಸಿ ಕೊಟ್ಟಿರುವನು. ಅದರಲ್ಲೇ ನಾನಿರುವುದು. ಭಗವಂತನ ದರ್ಶನವಾಗುವವರೆಗೆ ನಾನು ಇಲ್ಲೇ ಇರುವೆನು. ॥22॥
(ಶ್ಲೋಕ-23)
ಮೂಲಮ್
ತಥಾವದದ್ಗುಡಾಕೇಶೋ ವಾಸುದೇವಾಯ ಸೋಪಿ ತಾಮ್ ।
ರಥಮಾರೋಪ್ಯ ತದ್ವಿದ್ವಾನ್ ಧರ್ಮರಾಜಮುಪಾಗಮತ್ ॥
ಅನುವಾದ
ಅರ್ಜುನನು ಶ್ರೀಕೃಷ್ಣನ ಬಳಿಗೆ ಹೋಗಿ ಎಲ್ಲ ವಿಷಯಗಳನ್ನು ಹೇಳಿದನು. ಶ್ರೀಕೃಷ್ಣನಾದರೋ ಈ ವಿಷಯಗಳೆಲ್ಲವನ್ನೂ ಮೊದಲೇ ತಿಳಿದಿದ್ದನು. ಕೃಷ್ಣಾರ್ಜುನರಿಬ್ಬರೂ ಕಾಳಿಂದಿಯನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಧರ್ಮರಾಜನ ಬಳಿಗೆ ಹೋದರು. ॥23॥
(ಶ್ಲೋಕ-24)
ಮೂಲಮ್
ಯದೈವ ಕೃಷ್ಣಃ ಸಂದಿಷ್ಟಃ ಪಾರ್ಥಾನಾಂ ಪರಮಾದ್ಭುತಮ್ ।
ಕಾರಯಾಮಾಸ ನಗರಂ ವಿಚಿತ್ರಂ ವಿಶ್ವಕರ್ಮಣಾ ॥
ಅನುವಾದ
ಪಾಂಡವರ ಪ್ರಾರ್ಥನೆಯಂತೆ ಶ್ರೀಕೃಷ್ಣನು ಪಾಂಡವರ ವಾಸಕ್ಕಾಗಿ ಪರಮಾದ್ಭುತವಾದ ಮತ್ತು ವಿಚಿತ್ರವಾದ ನಗರವೊಂದನ್ನು ವಿಶ್ವಕರ್ಮನಿಂದ ನಿರ್ಮಾಣ ಮಾಡಿಸಿಕೊಟ್ಟನು. ॥24॥
(ಶ್ಲೋಕ-25)
ಮೂಲಮ್
ಭಗವಾಂಸ್ತತ್ರ ನಿವಸನ್ ಸ್ವಾನಾಂ ಪ್ರಿಯಚಿಕೀರ್ಷಯಾ ।
ಅಗ್ನಯೇ ಖಾಂಡವಂ ದಾತುಮರ್ಜುನಸ್ಯಾಸ ಸಾರಥಿಃ ॥
ಅನುವಾದ
ಪಾಂಡವರಿಗೆ ಅನುಕೂಲಗಳನ್ನು ಕಲ್ಪಿಸಿಕೊಡಬೇಕೆಂಬ ಆಶಯದಿಂದಲೇ ಶ್ರೀಕೃಷ್ಣನು ಕೆಲವುಕಾಲ ಅಲ್ಲೇ ವಾಸವಾಗಿದ್ದನು. ಈ ಮಧ್ಯದಲ್ಲೇ ಖಾಂಡವವನವನ್ನು ಅಗ್ನಿಗೆ ಅರ್ಪಿಸುವ ಸಲುವಾಗಿ ಶ್ರೀಕೃಷ್ಣನು ಅರ್ಜುನನಿಗೆ ಸಾರಥಿಯೂ ಆದನು. ॥25॥
(ಶ್ಲೋಕ-26)
ಮೂಲಮ್
ಸೋಗ್ನಿಸ್ತುಷ್ಟೋ ಧನುರದಾದ್ಧಯಾನ್ ಶ್ವೇತಾನ್ರಥಂ ನೃಪ ।
ಅರ್ಜುನಾಯಾಕ್ಷಯೌ ತೂಣೌ ವರ್ಮ ಚಾಭೇದ್ಯಮಸಿಭಿಃ ॥
ಅನುವಾದ
ಖಾಂಡವವನದ ಭೋಜನದಿಂದ ಸಂತೃಪ್ತನಾದ ಅಗ್ನಿದೇವನು ಅರ್ಜುನನಿಗೆ ಗಾಂಡೀವನೆಂಬ ಧನಸ್ಸನ್ನೂ, ನಾಲ್ಕು ಬಿಳಿಯ ಕುದುರೆಗಳನ್ನು, ಒಂದು ರಥವನ್ನು, ಎರಡು ಅಕ್ಷಯವಾದ ಬತ್ತಳಿಕೆಗಳನ್ನು, ಶತ್ರುಗಳಿಂದ ಅಭೇದ್ಯವಾದ ಕವಚವನ್ನು ಅನುಗ್ರಹಿಸಿ ಕೊಟ್ಟನು. ॥26॥
(ಶ್ಲೋಕ-27)
ಮೂಲಮ್
ಮಯಶ್ಚ ಮೋಚಿತೋ ವಹ್ನೇಃ ಸಭಾಂ ಸಖ್ಯ ಉಪಾಹರತ್ ।
ಯಸ್ಮಿನ್ ದುರ್ಯೋಧನಸ್ಯಾಸೀಜ್ಜಲಸ್ಥಲದೃಶಿಭ್ರಮಃ ॥
ಅನುವಾದ
ಖಾಂಡವದಾಹದ ಸಮಯದಲ್ಲಿ ಅರ್ಜುನನು ಮಯನೆಂಬ ದಾನವನನ್ನು ಅಗ್ನಿಯಿಂದ ಪಾರಾಗಿಸಿದ್ದನು. ಆದ್ದರಿಂದ ಅವನು ಅರ್ಜುನನೊಂದಿಗೆ ಮೈತ್ರಿಯನ್ನು ಬೆಳೆಸಿ ಪಾಂಡವರ ಸಲುವಾಗಿ ಒಂದು ಅದ್ಭುತವಾದ ಸಭಾಭವನವನ್ನು ನಿರ್ಮಿಸಿಕೊಟ್ಟನು. ಆದೇ ಸಭಾಭವನದಲ್ಲಿ ದುರ್ಯೋಧನನು ನೆಲ-ಜಲದ ಭ್ರಮೆಯಿಂದಾಗಿ ಅವಮಾನಿತನಾಗಿದ್ದನು. ॥27॥
(ಶ್ಲೋಕ-28)
ಮೂಲಮ್
ಸ ತೇನ ಸಮನುಜ್ಞಾತಃ ಸುಹೃದ್ಭಿಶ್ಚಾನುಮೋದಿತಃ ।
ಆಯಯೌ ದ್ವಾರಕಾಂ ಭೂಯಃ ಸಾತ್ಯಕಿಪ್ರಮುಖೈರ್ವೃತಃ ॥
ಅನುವಾದ
ಕೆಲವು ದಿವಸಗಳ ಬಳಿಕ ಭಗವಾನ್ ಶ್ರೀಕೃಷ್ಣನು ಅರ್ಜುನನಿಂದ ಹಾಗೂ ಇತರ ಸಂಬಂಧಿಕರಿಂದ ಅನುಮತಿಯನ್ನು ಪಡೆದುಕೊಂಡು, ಸಾತ್ಯಕಿಯೇ ಮೊದಲಾದವರೊಂದಿಗೆ ದ್ವಾರಕೆಗೆ ಹಿಂದಿರಿಗಿದನು. ॥28॥
(ಶ್ಲೋಕ-29)
ಮೂಲಮ್
ಅಥೋಪಯೇಮೇ ಕಾಲಿಂದೀಂ ಸುಪುಣ್ಯತ್ವರ್ ಕ್ಷ ಊರ್ಜಿತೇ ।
ವಿತನ್ವನ್ ಪರಮಾನಂದಂ ಸ್ವಾನಾಂ ಪರಮಮಂಗಲಮ್ ॥
ಅನುವಾದ
ಅಲ್ಲಿಗೆ ಬಂದು ಶ್ರೀಕೃಷ್ಣನು ಪ್ರಶಸ್ತವಾದ ಋತು-ನಕ್ಷತ್ರ-ಮುಹೂರ್ತದಲ್ಲಿ ಸ್ವಜನರಿಗೆ ಆನಂದವನ್ನೂ, ಶುಭವನ್ನೂ, ಮಂಗಳವನ್ನೂ ಉಂಟುಮಾಡುತ್ತಾ ಕಾಳಿಂದಿಯನ್ನು ವಿಧಿಪೂರ್ವಕವಾಗಿ ವಿವಾಹವಾದನು. ॥29॥
(ಶ್ಲೋಕ-30)
ಮೂಲಮ್
ವಿಂದಾನುವಿಂದಾವಾವಂತ್ಯೌ ದುರ್ಯೋಧನವಶಾನುಗೌ ।
ಸ್ವಯಂವರೇ ಸ್ವಭಗಿನೀಂ ಕೃಷ್ಣೇ ಸಕ್ತಾಂ ನ್ಯಷೇಧತಾಮ್ ॥
ಅನುವಾದ
ಅವಂತಿ ದೇಶಕ್ಕೆ (ಉಜ್ಜೈನಿ) ರಾಜನಾಗಿದ್ದ ವಿಂದಾನುವಿಂದರು ದುರ್ಯೋಧನನಿಗೆ ಸಾಮಂತರಾಗಿದ್ದರು. ಅವರಿಗೆ ಮಿತ್ರವಿಂದಾ ಎಂಬ ತಂಗಿಯಿದ್ದಳು. ಆಕೆಯು ಸ್ವಯಂವರದಲ್ಲಿ ಶ್ರೀಕೃಷ್ಣನನ್ನೇ ತನ್ನ ಪತಿಯಾಗಿಸಿಕೊಳ್ಳಲು ಬಯಸಿದ್ದಳು. ಆದರೆ ವಿಂದ-ಅನುವಿಂದರು ತಂಗಿಯನ್ನು ತಡೆದರು. ॥30॥
(ಶ್ಲೋಕ-31)
ಮೂಲಮ್
ರಾಜಾಧಿದೇವ್ಯಾಸ್ತನಯಾಂ ಮಿತ್ರವಿಂದಾಂ ಪಿತೃಷ್ವಸುಃ ।
ಪ್ರಸಹ್ಯ ಹೃತವಾನ್ ಕೃಷ್ಣೋ ರಾಜನ್ ರಾಜ್ಞಾಂ ಪ್ರಪಶ್ಯತಾಮ್ ॥
ಅನುವಾದ
ಪರೀಕ್ಷಿತನೇ! ಮಿತ್ರವಿಂದೆಯು ಶ್ರೀಕೃಷ್ಣನ ಸೋದರತ್ತೆಯಾದ ರಾಜಾಧಿದೇವಿಯ ಮಗಳಾಗಿದ್ದಳು. ಶ್ರೀಕೃಷ್ಣನು ರಾಜರಿಂದ ತುಂಬಿದ ಸಭೆಯಲ್ಲಿ ಸಮಸ್ತರಾಜರು ನೋಡುತ್ತಿರುವಂತೆ ಆಕೆಯನ್ನು ಬಲವಂತವಾಗಿ ಅಪಹರಿಸಿಕೊಂಡು ಹೋದನು. ॥31॥
(ಶ್ಲೋಕ-32)
ಮೂಲಮ್
ನಗ್ನಜಿನ್ನಾಮ ಕೌಸಲ್ಯ ಆಸೀದ್ರಾಜಾತಿಧಾರ್ಮಿಕಃ ।
ತಸ್ಯ ಸತ್ಯಾಭವತ್ ಕನ್ಯಾ ದೇವೀ ನಾಗ್ನಜಿತೀ ನೃಪ ॥
(ಶ್ಲೋಕ-32)
ಮೂಲಮ್
ನ ತಾಂ ಶೇಕುರ್ನೃಪಾ ವೋಢುಮಜಿತ್ವಾ ಸಪ್ತ ಗೋವೃಷಾನ್ ।
ತೀಕ್ಷ್ಣಶೃಂಗಾನ್ ಸುದುರ್ಧರ್ಷಾನ್ ವೀರಗಂಧಾಸಹಾನ್ಖಲಾನ್ ॥
ಅನುವಾದ
ಪರೀಕ್ಷಿತನೇ! ಕೋಸಲದೇಶದಲ್ಲಿ ನಗ್ನಜಿತನೆಂಬ ಧಾರ್ಮಿಕನಾದ ರಾಜನಿದ್ದನು. ಅವನಿಗೆ ಕಡುಚೆಲುವೆಯಾದ ಸತ್ಯಾ ಎಂಬ ಹೆಸರಿನ ಕನ್ಯೆಯಿದ್ದಳು. ನಗ್ನಜಿತನ ಮಗಳಾದ್ದರಿಂದ ಅವಳಿಗೆ ನಾಗ್ನಜಿತಿ ಎಂಬ ಇನ್ನೊಂದು ಹೆಸರಿತ್ತು. ಪರೀಕ್ಷಿತನೇ! ರಾಜನ ವೀರ್ಯಶುಲ್ಕ ಪ್ರತಿಜ್ಞೆಗೆ ಅನುಸಾರವಾಗಿ ಅವನಲ್ಲಿದ್ದ ಬಲಿಷ್ಠವಾದ ಏಳುಗೂಳಿಗಳನ್ನು ಯಾವ ರಾಜಕುಮಾರನೂ ಜಯಿಸಲಿಲ್ಲವಾದ ಕಾರಣ ರಾಜಕುಮಾರರು ಆಕೆಯೊಂದಿಗೆ ಮದುವೆಯಾಗದೇ ಹೋದರು. ಏಕೆಂದರೆ, ಆ ಗೂಳಿಗಳ ಕೊಂಬುಗಳು ಅತ್ಯಂತ ಚೂಪಾಗಿದ್ದುವು. ಯಾರಿಂದಲೂ ಎದುರಿಸಲು ಅವು ಅಸಾಧ್ಯವಾಗಿದ್ದವು. ವೀರಪುರುಷರ ವಾಸನೆಯನ್ನು ಅವು ಸಹಿಸುತ್ತಿರಲಿಲ್ಲ. ॥32-33॥
(ಶ್ಲೋಕ-34)
ಮೂಲಮ್
ತಾಂ ಶ್ರುತ್ವಾ ವೃಷಜಿಲ್ಲಭ್ಯಾಂ ಭಗವಾನ್ ಸಾತ್ವತಾಂ ಪತಿಃ ।
ಜಗಾಮ ಕೌಸಲ್ಯಪುರಂ ಸೈನ್ಯೇನ ಮಹತಾ ವೃತಃ ॥
ಅನುವಾದ
‘ಅಂತಹ ಕೊಬ್ಬಿದ ಗೂಳಿಗಳನ್ನು ಗೆದ್ದವನಿಗೇ ರಾಜಕನ್ಯೆ ದೊರೆಯುವಳು’ ಎಂಬುದನ್ನು ಕೇಳಿ ಯದುವಂಶಶಿರೋಮಣಿಯಾದ ಶ್ರೀಕೃಷ್ಣನು ಅಪಾರವಾದ ಸೈನ್ಯದೊಡನೆ ಕೋಸಲಪುರಕ್ಕೆ ಪ್ರಯಾಣಮಾಡಿದನು. ॥34॥
(ಶ್ಲೋಕ-35)
ಮೂಲಮ್
ಸ ಕೋಸಲಪತಿಃ ಪ್ರೀತಃ ಪ್ರತ್ಯುತ್ಥಾನಾಸನಾದಿಭಿಃ
ಅರ್ಹಣೇನಾಪಿ ಗುರುಣಾ ಪೂಜಯನ್ ಪ್ರತಿನಂದಿತಃ ॥
ಅನುವಾದ
ಕೋಸಲರಾಜನಾದ ನಗ್ನಜಿತನು ಶ್ರೀಕೃಷ್ಣನನ್ನು ನೋಡಿ ಸುಪ್ರೀತನಾಗಿ ಅವನನ್ನು ಆದರದಿಂದ ಸ್ವಾಗತಿಸಿ ಸತ್ಕರಿಸಿದನು. ಭಗವಾನ್ ಶ್ರೀಕೃಷ್ಣನೂ ಕೂಡ ರಾಜನನ್ನು ಯಥಾಯೋಗ್ಯವಾಗಿ ಅಭಿನಂದಿಸಿದನು. ॥35॥
(ಶ್ಲೋಕ-36)
ಮೂಲಮ್
ವರಂ ವಿಲೋಕ್ಯಾಭಿಮತಂ ಸಮಾಗತಂ
ನರೇಂದ್ರಕನ್ಯಾ ಚಕಮೇ ರಮಾಪತಿಮ್ ।
ಭೂಯಾದಯಂ ಮೇ ಪತಿರಾಶಿಷೋಮಲಾಃ
ಕರೋತು ಸತ್ಯಾ ಯದಿ ಮೇ ಧೃತೋ ವ್ರತೈಃ ॥
ಅನುವಾದ
ಬಹಳ ದಿವಸಗಳಿಂದಲೂ ತಾನು ಬಯಸುತ್ತಿದ್ದ ರಮಾರಮಣನಾದ ಶ್ರೀಕೃಷ್ಣನೇ ಆಗಮಿಸಿರುವುದನ್ನು ನೋಡಿ ಆನಂದತುಂದಿಲಳಾದ ಸತ್ಯೆಯು ಅವನನ್ನೇ ತನ್ನ ಪತಿಯಾಗಬೇಕೆಂದು ಅಪೇಕ್ಷಿಸಿದಳು. ‘ನಾನು ವ್ರತನಿಯಮಾದಿಗಳನ್ನು ಆಚರಿಸುತ್ತಾ ಇವನನ್ನೇ ಸದಾಕಾಲ ಚಿಂತಿಸುತ್ತಿದ್ದುದು ಸತ್ಯವಾದರೆ ಇವನೇ ನನಗೆ ಪತಿಯಾಗಲಿ ಮತ್ತು ನನ್ನ ಶುದ್ಧವಾದ ಲಾಲಸೆಗಳು ಪೂರ್ಣಗೊಳ್ಳಲಿ’ ಎಂದು ಹರಿಸಿಕೊಂಡಳು. ॥36॥
(ಶ್ಲೋಕ-37)
ಮೂಲಮ್
ಯತ್ಪಾದಪಂಕಜರಜಃ ಶಿರಸಾ ಬಿಭರ್ತಿ
ಶ್ರೀರಬ್ಜಜಃ ಸಗಿರಿಶಃ ಸಹಲೋಕಪಾಲೈಃ ।
ಲೀಲಾತನೂಃ ಸ್ವಕೃತಸೇತುಪರೀಪ್ಸಯೇಶಃ
ಕಾಲೇ ದಧತ್ ಸ ಭಗವಾನ್ ಮಮ ಕೇನ ತುಷ್ಯೇತ್ ॥
ಅನುವಾದ
ನಾಗ್ನಜಿತೀ ಸತ್ಯೆಯು ಮನಸ್ಸಿನಲ್ಲೇ ಯೋಚಿಸ ತೊಡಗಿದಳು - ಯಾರ ಪಾದಧೂಳಿಯನ್ನು ಲಕ್ಷ್ಮೀದೇವಿ, ಬ್ರಹ್ಮ-ರುದ್ರರು, ಸಮಸ್ತ ಲೋಕಪಾಲರು ಮತ್ತು ದೇವಾಧಿದೇವತೆಗಳು ತಮ್ಮ ತಲೆಯಲ್ಲಿ ಭಕ್ತಿಯಿಂದ ಧರಿಸುವರೋ, ಯಾವನು ತಾನೇ ಕಲ್ಪಿಸಿದ ಲೋಕಮರ್ಯಾದೆಯನ್ನು ಸಂಪನ್ನಗೊಳಿಸುವ ಸಲುವಾಗಿ ಆಗಾಗ ಅನೇಕ ಲೀಲಾವತಾರಗಳನ್ನು ತಾಳುವನೋ, ಅಂತಹ ಪ್ರಭುವು ನನ್ನ ಯಾವ ವ್ರತ ನಿಯಮಗಳಿಂದ ತಾನೇ ಪ್ರಸನ್ನನಾದಾನು? ಕೇವಲ ಅವನ ಕೃಪೆಯಿಂದಲೇ ನನ್ನನ್ನು ವರಿಸಬೇಕಾಗಿದೆ. ॥37॥
(ಶ್ಲೋಕ-38)
ಮೂಲಮ್
ಅರ್ಚಿತಂ ಪುನರಿತ್ಯಾಹ ನಾರಾಯಣ ಜಗತ್ಪತೇ ।
ಆತ್ಮಾನಂದೇನ ಪೂರ್ಣಸ್ಯ ಕರವಾಣಿ ಕಿಮಲ್ಪಕಃ ॥
ಅನುವಾದ
ಪರೀಕ್ಷಿತನೇ! ನಗ್ನಜಿತರಾಜನು ಭಗವಾನ್ ಶ್ರೀಕೃಷ್ಣನನ್ನು ವಿಧಿಪೂರ್ವಕವಾಗಿ ಪೂಜಿಸಿ ಹೀಗೆ ಪ್ರಾರ್ಥಿಸಿದನು - ‘ನಾರಾಯಣ! ಜಗತ್ಪತಿಯೇ! ನೀನು ಆತ್ಮಾನಂದದಿಂದ ಪರಿಪೂರ್ಣನಾಗಿರುವೆ. ನಾನಾದರೋ ಅಲ್ಪ ಮನುಷ್ಯನು. ನಾನು ನಿನ್ನ ಯಾವ ಸೇವೆ ಮಾಡಲಿ?’ ॥38॥
(ಶ್ಲೋಕ-39)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ತಮಾಹ ಭಗವಾನ್ ಹೃಷ್ಟಃ ಕೃತಾಸನಪರಿಗ್ರಹಃ ।
ಮೇಘಗಂಭೀರಯಾ ವಾಚಾ ಸಸ್ಮಿತಂ ಕುರುನಂದನ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ನಗ್ನಜಿತ ಮಹಾರಾಜನು ಇತ್ತ ಆಸನ, ಪೂಜಾದಿಗಳನ್ನು ಸ್ವೀಕರಿಸಿ ಭಗವಾನ್ ಶ್ರೀಕೃಷ್ಣನು ಅತ್ಯಂತ ಸಂತುಷ್ಟನಾದನು. ಅವನು ಮುಗುಳ್ನಗುತ್ತಾ ಮೇಘ ಗಂಭೀರವಾಣಿಯಿಂದ ಇಂತೆಂದನು.॥39॥
(ಶ್ಲೋಕ-40)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ನರೇಂದ್ರಯಾಂಚಾ ಕವಿಭಿರ್ವಿಗರ್ಹಿತಾ
ರಾಜನ್ಯಬಂಧೋರ್ನಿಜಧರ್ಮವರ್ತಿನಃ ।
ತಥಾಪಿ ಯಾಚೇ ತವ ಸೌಹೃದೇಚ್ಛಯಾ
ಕನ್ಯಾಂ ತ್ವದೀಯಾಂ ನ ಹಿ ಶುಲ್ಕದಾ ವಯಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳಿದನು — ರಾಜನೇ! ತನ್ನ ಧರ್ಮದಲ್ಲಿ ನೆಲೆಯಾಗಿ ನಿಂತ ಕ್ಷತ್ರಿಯನು ಏನನ್ನೂ ಬೇಡುವುದು ಉಚಿತವಲ್ಲ. ಧರ್ಮಜ್ಞರಾದ ವಿದ್ವಾಂಸರು ಅವನ ಈ ಕರ್ಮವನ್ನು ನಿಂದಿಸಿರುವರು. ಹೀಗಿದ್ದರೂ ನಾನು ನಿನ್ನಲ್ಲಿ ಪ್ರೇಮ ಸೌಹಾರ್ದದ ಸಂಬಂಧವನ್ನು ಬೆಳೆಸುವ ಇಚ್ಛೆಯಿಂದ ನಿನ್ನ ಕನ್ಯೆಯನ್ನು ಬಯಸುತ್ತಿದ್ದೇನೆ. ಆದರೆ ನಾವು ಕನ್ಯಾಶುಲ್ಕವನ್ನು ಕೊಡತಕ್ಕವರಲ್ಲ. ॥40॥
(ಶ್ಲೋಕ-41)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಕೋನ್ಯಸ್ತೇಭ್ಯಧಿಕೋ ನಾಥ ಕನ್ಯಾವರ ಇಹೇಪ್ಸಿತಃ ।
ಗುಣೈಕಧಾಮ್ನೋ ಯಸ್ಯಾಂಗೇ ಶ್ರೀರ್ವಸತ್ಯನಪಾಯಿನೀ ॥
ಅನುವಾದ
ನಗ್ನಜಿತರಾಜನು ಹೇಳಿದನು — ‘‘ಪ್ರಭುವೇ! ನೀನು ಸಮಸ್ತ ಗುಣಗಳಿಗೆ ಪರಮಾಶ್ರಯನಾಗಿರುವೆ. ಸಾಕ್ಷಾತ್ ಮಹಾಲಕ್ಷ್ಮಿಯೇ ನಿನ್ನ ವಕ್ಷಃಸ್ಥಳದಲ್ಲಿ ವಾಸಮಾಡುತ್ತಾಳೆ. ನನ್ನ ಮಗಳಿಗೆ ನಿನಗಿಂತಲೂ ಶ್ರೇಷ್ಠನಾದ ವರನು ಬೇರೆ ಯಾರು ತಾನೇ ಇರಬಲ್ಲನು? ॥41॥
(ಶ್ಲೋಕ-42)
ಮೂಲಮ್
ಕಿಂ ತ್ವಸ್ಮಾಭಿಃ ಕೃತಃ ಪೂರ್ವಂ ಸಮಯಃ ಸಾತ್ವತರ್ಷಭ ।
ಪುಂಸಾಂ ವೀರ್ಯಪರೀಕ್ಷಾರ್ಥಂ ಕನ್ಯಾವರಪರೀಪ್ಸಯಾ ॥
ಅನುವಾದ
ಆದರೆ ಯದುವಂಶ ಶಿರೋಮಣಿಯೇ! ಕನ್ಯೆಗೆ ಅನುರೂಪನಾದ ವರನು ಯಾರೆಂಬುದನ್ನು ತಿಳಿಯಲು ಮತ್ತು ವರನ ಶೌರ್ಯ-ಸಾಮರ್ಥ್ಯಗಳನ್ನು ಪರೀಕ್ಷಿಸಲಿಕ್ಕಾಗಿ ಹಿಂದಿನಿಂದಲೂ ಒಂದು ನಿಯಮವನ್ನು ಪಾಲಿಸುತ್ತಾ ಬಂದಿದ್ದೇವೆ. ॥42॥
(ಶ್ಲೋಕ-43)
ಮೂಲಮ್
ಸಪ್ತೈತೇ ಗೋವೃಷಾ ವೀರ ದುರ್ದಾಂತಾ ದುರವಗ್ರಹಾಃ ।
ಏತೈರ್ಭಗ್ನಾಃ ಸುಬಹವೋ ಭಿನ್ನಗಾತ್ರಾ ನೃಪಾತ್ಮಜಾಃ ॥
ಅನುವಾದ
ವೀರಶ್ರೇಷ್ಠನಾದ ಶ್ರೀಕೃಷ್ಣ! ನಮ್ಮಲ್ಲಿ ಎದಿರಿಸಲು ಅಸಾಧ್ಯವಾದ ಮತ್ತು ಹಿಡಿಯಲು ದುಸ್ಸಾಧ್ಯವಾದ ಏಳು ಕೊಬ್ಬಿದ ಗೂಳಿಗಳಿವೆ. ಇವುಗಳನ್ನು ಬಗ್ಗಿಸಲು ಹೋಗಿ ಹಲವಾರು ರಾಜಕುಮಾರರು ಕೈ-ಕಾಲುಗಳನ್ನು ಮುರಿದುಕೊಂಡಿದ್ದಾರೆ. ॥43॥
(ಶ್ಲೋಕ-44)
ಮೂಲಮ್
ಯದಿಮೇ ನಿಗೃಹೀತಾಃ ಸ್ಯುಸ್ತ್ವಯೈವ ಯದುನಂದನ ।
ವರೋ ಭವಾನಭಿಮತೋ ದುಹಿತುರ್ಮೇ ಶ್ರಿಯಃ ಪತೇ ॥
ಅನುವಾದ
ಯದುನಂದನನೇ! ಶ್ರೀಯಃಪತಿಯೇ! ನಿನ್ನಿಂದೇನಾದರೂ ಈ ಏಳು ಗೂಳಿಗಳೂ ನಿಗ್ರಹಿಸಲ್ಪಟ್ಟರೆ ಆಗ ನೀನು ನನ್ನ ಮಗಳಿಗೆ ಅನುರೂಪನಾದ, ಅಭೀಷ್ಟನಾದ ವರನಾಗುವೆ’’ ॥44॥
(ಶ್ಲೋಕ-45)
ಮೂಲಮ್
ಏವಂ ಸಮಯಮಾಕರ್ಣ್ಯ ಬದ್ಧ್ವಾ ಪರಿಕರಂ ಪ್ರಭುಃ ।
ಆತ್ಮಾನಂ ಸಪ್ತಧಾ ಕೃತ್ವಾ ನ್ಯಗೃಹ್ಣಾಲ್ಲೀಲಯೈವ ತಾನ್ ॥
ಅನುವಾದ
ಸರ್ವಶಕ್ತನಾದ ಶ್ರೀಕೃಷ್ಣನು ನಗ್ನಜಿತನ ಈ ಪಣವನ್ನು ಕೇಳಿ ತನ್ನನ್ನು ಏಳು ರೂಪವಾಗಿ ಕಲ್ಪಿಸಿಕೊಂಡು ನಡಕಟ್ಟನ್ನು ಬಿಗಿದು ಲೀಲಾಜಾಲವಾಗಿ ಆ ಏಳು ಗೂಳಿಗಳನ್ನು ನಿಗ್ರಹಿಸಿದನು. ॥45॥
(ಶ್ಲೋಕ-46)
ಮೂಲಮ್
ಬದ್ಧ್ವಾತಾನ್ ದಾಮಭಿಃ ಶೌರಿರ್ಭಗ್ನದರ್ಪಾನ್ ಹತೌಜಸಃ ।
ವ್ಯಕರ್ಷಲ್ಲೀಲಯಾ ಬದ್ಧಾನ್ ಬಲೋ ದಾರುಮಯಾನ್ ಯಥಾ ॥
ಅನುವಾದ
ಅವುಗಳಿಗೆ ಮೂಗು ದಾರವನ್ನು ಹಾಕಿ, ಹಗ್ಗದಿಂದ ಬಿಗಿದು, ದರ್ಪವನ್ನು ಕಳೆದುಕೊಂಡಿದ್ದ ಮತ್ತು ಶಕ್ತಿಗುಂದಿದ್ದ ಆ ಗೂಳಿಗಳನ್ನು ಬಾಲಕರು ಮರದ ಬಸವನನ್ನು ಅತ್ತಲಿತ್ತ ಎಳೆದಾಡುವಂತೆಯೇ ಎಳೆದಾಡಿದನು. ॥46॥
(ಶ್ಲೋಕ-47)
ಮೂಲಮ್
ತತಃ ಪ್ರೀತಃ ಸುತಾಂ ರಾಜಾ ದದೌ ಕೃಷ್ಣಾಯ ವಿಸ್ಮಿತಃ ।
ತಾಂ ಪ್ರತ್ಯಗೃಹ್ಣಾದ್ಭಗವಾನ್ ವಿಧಿವತ್ಸದೃಶೀಂ ಪ್ರಭುಃ ॥
ಅನುವಾದ
ವಿಸ್ಮಿತನಾದ ನಗ್ನಜಿತ ಮಹಾರಾಜನು ಶ್ರೀಕೃಷ್ಣನ ವೀರ್ಯ-ಸಾಹಸವನ್ನು ನೋಡಿ ಸುಪ್ರೀತನಾಗಿ ತನ್ನ ಮಗಳನ್ನು ಶ್ರೀಕೃಷ್ಣನಿಗೆ ಒಪ್ಪಿಸಿಕೊಟ್ಟನು. ಭಗವಂತನು ತನಗೆ ಅನುರೂಪಳಾಗಿದ್ದ ಸತ್ಯೆಯನ್ನು ವಿಧಿಪೂರ್ವಕವಾಗಿ ಪಾಣಿಗ್ರಹಣಮಾಡಿಕೊಂಡನು.॥47॥
(ಶ್ಲೋಕ-48)
ಮೂಲಮ್
ರಾಜಪತ್ನ್ಯಶ್ಚ ದುಹಿತುಃ ಕೃಷ್ಣಂ ಲಬ್ಧ್ವಾ ಪ್ರಿಯಂ ಪತಿಮ್ ।
ಲೇಭಿರೇ ಪರಮಾನಂದಂ ಜಾತಶ್ಚ ಪರಮೋತ್ಸವಃ ॥
ಅನುವಾದ
ತಮ್ಮ ಮಗಳಿಗೆ ಅತ್ಯಂತ ಪ್ರಿಯನಾಗಿದ್ದ ಶ್ರೀಕೃಷ್ಣನು ಪತಿಯಾಗಿ ದೊರೆತಿರುವುದನ್ನು ನೋಡಿದ ರಾಜಪತ್ನಿಯರು ಪರಮಾನಂದವನ್ನು ಹೊಂದಿದರು. ಕಲ್ಯಾಣಮಹೋತ್ಸವವು ಸಂಭ್ರಮದಿಂದ ಜರುಗಿತು. ॥48॥
(ಶ್ಲೋಕ-49)
ಮೂಲಮ್
ಶಂಖಭೇರ್ಯಾನಕಾ ನೇದುರ್ಗೀತವಾದ್ಯದ್ವಿಜಾಶಿಷಃ ।
ನರಾ ನಾರ್ಯಃ ಪ್ರಮುದಿತಾಃ ಸುವಾಸಃ ಸ್ರಗಲಂಕೃತಾಃ ॥
ಅನುವಾದ
ಶಂಖ, ಡೋಲು, ಭೇರಿ, ನಗಾರಿಗಳು ಮೊಳಗಿದವು. ಎಲ್ಲೆಡೆ ಗಾಯನ, ವಾದ್ಯ ಘೋಷಗಳು ನಡೆದವು. ಬ್ರಾಹ್ಮಣರು ಆಶೀರ್ವದಿಸುತ್ತಿದ್ದರು. ಸುಂದರವಾದ ವಸ್ತ್ರಾಭರಣಗಳಿಂದ, ಹೂವಿನ ಹಾರಗಳಿಂದ ಅಲಂಕರಿಸಿಕೊಂಡು ನಗರದ ನರ-ನಾರಿಯರು ಆನಂದ ಸಾಗರದಲ್ಲಿ ಮುಳುಗಿಹೋದರು. ॥49॥
(ಶ್ಲೋಕ-50)
ಮೂಲಮ್
ದಶಧೇನುಸಹಸ್ರಾಣಿ ಪಾರಿಬರ್ಹಮದಾದ್ವಿಭುಃ ।
ಯುವತೀನಾಂ ತ್ರಿಸಾಹಸ್ರಂ ನಿಷ್ಕಗ್ರೀವಸುವಾಸಸಾಮ್ ॥
(ಶ್ಲೋಕ-51)
ಮೂಲಮ್
ನವನಾಗಸಹಸ್ರಾಣಿ ನಾಗಾಚ್ಛತಗುಣಾನ್ರಥಾನ್ ।
ರಥಾಚ್ಛತಗುಣಾನಶ್ವಾನಶ್ವಾಚ್ಛತಗುಣಾನ್ ನರಾನ್ ॥
ಅನುವಾದ
ನಗ್ನಜಿತ ರಾಜನು ಹತ್ತುಸಾವಿರ ಗೋವುಗಳನ್ನು, ಸುಂದರವಾದ ವಸ್ತ್ರಗಳನ್ನೂ, ಸ್ವರ್ಣಹಾರಗಳನ್ನೂ ಧರಿಸಿದ ಮೂರು ಸಾವಿರ ನವಯುತಿಯರಾದ ದಾಸಿಯರನ್ನು ಬಳುವಳಿಯಾಗಿ ಕೊಟ್ಟನು. ಜೊತೆಗೆ ಒಂಭತ್ತು ಸಾವಿರ ಆನೆಗಳು, ಒಂಭತ್ತು ಲಕ್ಷ ರಥಗಳು, ಒಂಭತ್ತು ಕೋಟಿ ಕುದುರೆಗಳನ್ನು ಒಂಭತ್ತು ಅರ್ಬುದ ಸೇವಕರನ್ನು ಬಳುವಳಿಯಾಗಿ ನೀಡಿದನು. ॥50-51॥
(ಶ್ಲೋಕ-52)
ಮೂಲಮ್
ದಂಪತೀ ರಥಮಾರೋಪ್ಯ ಮಹತ್ಯಾ ಸೇನಯಾ ವೃತೌ ।
ಸ್ನೇಹಪ್ರಕ್ಲಿನ್ನಹೃದಯೋ ಯಾಪಯಾಮಾಸ ಕೋಸಲಃ ॥
ಅನುವಾದ
ಕೋಸಲದ ರಾಜನಾದ ನಗ್ನಜಿತನು ಮಗಳು-ಅಳಿಯನನ್ನು ರಥದಲ್ಲಿ ಕುಳ್ಳಿರಿಸಿ ಒಂದು ಬೃಹತ್ತಾದ ಸೇನೆಯೊಂದಿಗೆ ಬೀಳ್ಕೊಟ್ಟನು. ಆಗ ಅವನ ಹೃದಯವು ಸ್ನೇಹ-ವಾತ್ಸಲ್ಯದ ಉದ್ರೇಕದಿಂದ ಆರ್ದ್ರವಾಯಿತು. ॥52॥
(ಶ್ಲೋಕ-53)
ಮೂಲಮ್
ಶ್ರುತ್ವೈತದ್ದ್ರುರುಧುರ್ಭೂಪಾ ನಯಂತಂ ಪಥಿ ಕನ್ಯಕಾಮ್ ।
ಭಗ್ನವೀರ್ಯಾಃ ಸುದುರ್ಮರ್ಷಾ ಯದುಭಿರ್ಗೋವೃಷೈಃ ಪುರಾ ॥
ಅನುವಾದ
ಪರೀಕ್ಷಿತನೇ! ಯದುವಂಶೀಯರಿಂದಲೂ, ನಗ್ನಜಿತನ ಏಳು ಗೂಳಿಗಳಿಂದಲೂ ಭಗ್ನವೀರ್ಯರಾಗಿದ್ದ ರಾಜಕುಮಾರರು - ಶ್ರೀಕೃಷ್ಣನು ಸತ್ಯೆಯನ್ನು ಕರೆದುಕೊಂಡು ಹೋಗುತ್ತಿರುವನೆಂಬ ವಾರ್ತೆಯನ್ನು ಕೇಳಿ, ಅಸಹನಶೀಲರಾಗಿ ಶ್ರೀಕೃಷ್ಣನ ರಥವನ್ನು ಆಕ್ರಮಿಸಿದರು. ॥53॥
(ಶ್ಲೋಕ-54)
ಮೂಲಮ್
ತಾನಸ್ಯತಃ ಶರವ್ರಾತಾನ್ ಬಂಧುಪ್ರಿಯಕೃದರ್ಜುನಃ ।
ಗಾಂಡೀವೀ ಕಾಲಯಾಮಾಸ ಸಿಂಹಃ ಕ್ಷುದ್ರಮೃಗಾನಿವ ॥
ಅನುವಾದ
ಅವರೆಲ್ಲರೂ ಶ್ರೀಕೃಷ್ಣನ ಮೇಲೆ ವೇಗವಾಗಿ ಬಾಣಗಳನ್ನು ಸುರಿಸತೊಡಗಿದರು. ಆಗ ಪಾಂಡವವೀರನಾದ ಅರ್ಜುನನು ಗೆಳೆಯನಾದ ಶ್ರೀಕೃಷ್ಣನಿಗೆ ಪ್ರಿಯವನ್ನುಂಟು ಮಾಡಲು ಗಾಂಡೀವ ಧನುಸ್ಸನ್ನು ಹಿಡಿದು, ಸಿಂಹವು ಕ್ಷುದ್ರ ಮೃಗಗಳನ್ನು ಧ್ವಂಸಮಾಡುವಂತೆ ಆ ರಾಜಕುಮಾರರನ್ನು ಧ್ವಂಸಮಾಡಿಬಿಟ್ಟನು. ॥54॥
(ಶ್ಲೋಕ-55)
ಮೂಲಮ್
ಪಾರಿಬರ್ಹಮುಪಾಗೃಹ್ಯ ದ್ವಾರಕಾಮೇತ್ಯ ಸತ್ಯಯಾ ।
ರೇಮೇ ಯದೂನಾಮೃಷಭೋ ಭಗವಾನ್ ದೇವಕೀಸುತಃ ॥
ಅನುವಾದ
ಅನಂತರ ಯದುವಂಶ ಶಿರೋಮಣಿಯಾದ ದೇವಕೀನಂದನ ಶ್ರೀಕೃಷ್ಣನು ಆ ಬಳುವಳಿಯನ್ನು ಮತ್ತು ಸತ್ಯೆಯನ್ನು ಜೊತೆಸೇರಿ ದ್ವಾರಕೆಗೆ ಬಂದು, ಅಲ್ಲಿ ಗೃಹಸ್ಥೋಚಿತವಾಗಿ ವಿಹರಿಸತೊಡಗಿದನು. ॥55॥
(ಶ್ಲೋಕ-56)
ಮೂಲಮ್
ಶ್ರುತಕೀರ್ತೇಃ ಸುತಾಂ ಭದ್ರಾಮುಪಯೇಮೇ ಪಿತೃಷ್ವಸುಃ ।
ಕೈಕೇಯೀಂ ಭಾತೃಭಿರ್ದತ್ತಾಂ ಕೃಷ್ಣಃ ಸಂತರ್ದನಾದಿಭಿಃ ॥
ಅನುವಾದ
ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನ ಸೋದರತ್ತೆಯಾದ ಶ್ರುತಕೀರ್ತಿಯನ್ನು ಕೇಕಯರಾಜನು ವಿವಾಹವಾಗಿದ್ದನು. ಅವಳಿಗೆ ಭದ್ರಾ ಎಂಬ ಮಗಳಿದ್ದಳು. ಆಕೆಯ ಸೋದರರಾದ ಸಂತರ್ದನರೇ ಮೊದಲಾದವರು ಭದ್ರೆಯನ್ನು ಶ್ರೀಕೃಷ್ಣನಿಗೆ ಅರ್ಪಿಸಿದರು. ಅವನು ಆಕೆಯ ಪಾಣಿಗ್ರಹಣ ಮಾಡಿದನು. ॥56॥
(ಶ್ಲೋಕ-57)
ಮೂಲಮ್
ಸುತಾಂ ಚ ಮದ್ರಾಧಿಪತೇರ್ಲಕ್ಷ್ಮಣಾಂ ಲಕ್ಷಣೈರ್ಯುತಾಮ್ ।
ಸ್ವಯಂವರೇ ಜಹಾರೈಕಃ ಸ ಸುಪರ್ಣಃ ಸುಧಾಮಿವ ॥
ಅನುವಾದ
ಮದ್ರದೇಶದ ರಾಜನಿಗೆ ಲಕ್ಷ್ಮಣಾ ಎಂಬ ಅತ್ಯಂತ ಸುಲಕ್ಷಣಳಾದ ಕನ್ಯೆಯೊಬ್ಬಳಿದ್ದಳು. ಗರುಡನು ಸ್ವರ್ಗದಿಂದ ಅಮೃತವನ್ನು ಹರಣಮಾಡಿದಂತೆಯೇ ಶ್ರೀಕೃಷ್ಣನು ಸ್ವಯಂವರದಲ್ಲಿ ಒಬ್ಬಂಟಿಗನಾಗಿ ಆಕೆಯನ್ನು ಅಪಹರಿಸಿ ತಂದನು. ॥57॥
(ಶ್ಲೋಕ-58)
ಮೂಲಮ್
ಅನ್ಯಾಶ್ಚೈವಂವಿಧಾ ಭಾರ್ಯಾಃ ಕೃಷ್ಣಸ್ಯಾಸನ್ ಸಹಸ್ರಶಃ ।
ಭೌಮಂ ಹತ್ವಾ ತನ್ನಿರೋಧಾದಾಹೃತಾಶ್ಚಾರುದರ್ಶನಾಃ ॥
ಅನುವಾದ
ಪರೀಕ್ಷಿತನೇ! ಹೀಗೆಯೇ ಭಗವಾನ್ ಶ್ರೀಕೃಷ್ಣನಿಗೆ ಇನ್ನೂ ಸಾವಿರಾರು ಪತ್ನಿಯರಿದ್ದರು. ಆ ಪರಮಸುಂದರಿಯನ್ನು ಭೌಮಾಸುರನನ್ನು ಸಂಹರಿಸಿ ಅವನ ಕಾರಾಗೃಹದಿಂದ ಬಿಡಿಸಿ ತಂದಿದ್ದನು. ॥58॥
ಅನುವಾದ (ಸಮಾಪ್ತಿಃ)
ಐವತ್ತೆಂಟನೆಯ ಅಧ್ಯಾಯವು ಮುಗಿಯಿತು. ॥58॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ
ಅಷ್ಟಮಹಿಷ್ಯುದ್ವಾಹೋ ನಾಮೋಷ್ಟಪಂಚಾಶತ್ತಮೋಽಧ್ಯಾಯಃ ॥58॥