೫೭

[ಐವತ್ತೆಳನೇಯ ಅಧ್ಯಾಯ]

ಭಾಗಸೂಚನಾ

ಶ್ಯಮಂತಕಮಣಿಯ ಹರಣ - ಶತಧನ್ವನ ವಧೆ - ಅಕ್ರೂರನನ್ನು ದ್ವಾರಕೆಗೆ ಕರೆಸಿಕೊಂಡುದು

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ವಿಜ್ಞಾತಾರ್ಥೋಪಿ ಗೋವಿಂದೋ ದಗ್ಧಾನಾಕರ್ಣ್ಯ ಪಾಂಡವಾನ್ ।
ಕುಂತೀಂ ಚ ಕುಲ್ಯಕರಣೇ ಸಹರಾಮೋ ಯಯೌ ಕುರೂನ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಲಾಕ್ಷಾಗೃಹದಲ್ಲಿ ಪಾಂಡವರು ಸುಟ್ಟುಹೋಗಿಲ್ಲವೆಂಬುದಾಗಿ ಭಗವಾನ್ ಶ್ರೀಕೃಷ್ಣನು ತಿಳಿದಿದ್ದರೂ ಕುಂತೀಸಹಿತ ಪಾಂಡವರು ಅರಗಿನಾಲಯದಲ್ಲಿ ಭಸ್ಮವಾಗಿ ಸತ್ತುಹೋದರೆಂಬ ವಾರ್ತೆ ಕೇಳಿದಾಗ ಕುಲಪರಂಪರೆಯಿಂದ ನಡೆದು ಬಂದಿರುವ ಕಾರ್ಯವನ್ನು ನಡೆಸಲು ಶ್ರೀಕೃಷ್ಣನು ಬಲರಾಮನೊಂದಿಗೆ ಹಸ್ತಿನಾಪುರಕ್ಕೆ ಹೋದನು. ॥1॥

(ಶ್ಲೋಕ-2)

ಮೂಲಮ್

ಭೀಷ್ಮಂ ಕೃಪಂ ಸವಿದುರಂ ಗಾಂಧಾರೀಂ ದ್ರೋಣಮೇವ ಚ ।
ತುಲ್ಯದುಃಖೌ ಚ ಸಂಗಮ್ಯ ಹಾ ಕಷ್ಟಮಿತಿ ಹೋಚತುಃ ॥

ಅನುವಾದ

ಅಲ್ಲಿಗೆ ಹೋಗಿ ಭೀಷ್ಮ, ಕೃಪರು, ವಿದುರ, ಗಾಂಧಾರೀ, ದ್ರೋಣಾಚಾರ್ಯ ಮುಂತಾದವರನ್ನು ಭೇಟ್ಟಿಯಾಗಿ, ಅವರೊಂದಿಗೆ ಸಮಾನ ದುಃಖ ಸಹಾನುಭೂತಿ ಪ್ರಕಟಿಸುತ್ತಾ ‘ಅಯ್ಯೋ! ಇದು ಅತ್ಯಂತ ದುಃಖದ ಪ್ರಸಂಗವಾಗಿದೆ’ ಎಂದು ಮರುಗಿದನು. ॥2॥

(ಶ್ಲೋಕ-3)

ಮೂಲಮ್

ಲಬ್ಧ್ವೈತದಂತರಂ ರಾಜನ್ ಶತಧನ್ವಾನಮೂಚತುಃ ।
ಅಕ್ರೂರಕೃತವರ್ಮಾಣೌ ಮಣಿಃ ಕಸ್ಮಾನ್ನ ಗೃಹ್ಯತೇ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹಸ್ತಿನಾಪುರಕ್ಕೆ ಹೊರಟು ಹೋಗಿದ್ದರಿಂದ ದ್ವಾರಕೆಯಲ್ಲಿ ಅಕ್ರೂರ ಮತ್ತು ಕೃತವರ್ಮರಿಗೆ ಅವಕಾಶ ದೊರೆಯಿತು. ಅವರು ಶತಧನ್ವನ ಬಳಿಗೆ ಬಂದು - ‘ನೀನು ಸತ್ರಾಜಿತನಲ್ಲಿರುವ ಮಣಿಯನ್ನು ಏಕೆ ಅಪಹರಿಸಬಾರದು?’ ಎಂದು ಹೇಳಿದರು. ॥3॥

(ಶ್ಲೋಕ-4)

ಮೂಲಮ್

ಯೋಸ್ಮಭ್ಯಂ ಸಂಪ್ರತಿಶ್ರುತ್ಯ ಕನ್ಯಾರತ್ನಂ ವಿಗರ್ಹ್ಯ ನಃ ।
ಕೃಷ್ಣಾಯಾದಾನ್ನ ಸತ್ರಾಜಿತ್ ಕಸ್ಮಾದ್ಭ್ರಾತರಮನ್ವಿಯಾತ್ ॥

ಅನುವಾದ

ಸತ್ರಾಜಿತನು ತನ್ನ ಹಿರಿಯ ಮಗಳನ್ನು ನನಗೆ ಕೊಡುವ ಮಾತು ಕೊಟ್ಟಿದ್ದನು. ಈಗ ಅವನು ನನ್ನನ್ನು ತಿರಸ್ಕರಿಸಿ ಶ್ರೀಕೃಷ್ಣನಿಗೆ ವಿವಾಹಮಾಡಿಕೊಟ್ಟಿರುವನು. ಈಗ ಸತ್ರಾಜಿತನು ತಮ್ಮನಾದ ಪ್ರಸೇನನಂತೆ ಯಮಪುರಿಗೆ ಏಕೆ ಹೋಗಬಾರದು? ॥4॥

(ಶ್ಲೋಕ-5)

ಮೂಲಮ್

ಏವಂ ಭಿನ್ನಮತಿಸ್ತಾಭ್ಯಾಂ ಸತ್ರಾಜಿತಮಸತ್ತಮಃ ।
ಶಯಾನಮವಧೀಲ್ಲೋಭಾತ್ ಸ ಪಾಪಃ ಕ್ಷೀಣಜೀವಿತಃ ॥

ಅನುವಾದ

ಮಹಾಪಾಪಿಷ್ಠನಾದ ಶತಧನ್ವನ ಆಯುಸ್ಸೂ ತೀರಿಹೋಗಿತ್ತು. ಅಕ್ರೂರ-ಕೃತಮರ್ಮರ ಪ್ರಚೋದನೆಯಿಂದಾಗಿ ಆ ಮಹಾದುಷ್ಟನು ಮಣಿಯ ಲೋಭದಿಂದ ಮಲಗಿದ್ದ ಸತ್ರಾಜಿತನನ್ನು ಕೊಂದು ಹಾಕಿದನು. ॥5॥

(ಶ್ಲೋಕ-6)

ಮೂಲಮ್

ಸೀಣಾಂ ವಿಕ್ರೋಶಮಾನಾನಾಂ ಕ್ರಂದಂತೀನಾಮನಾಥವತ್ ।
ಹತ್ವಾ ಪಶೂನ್ ಸೌನಿಕವನ್ಮಣಿಮಾದಾಯ ಜಗ್ಮಿವಾನ್ ॥

ಅನುವಾದ

ಈ ಸಮಯದಲ್ಲಿ ಸತ್ರಾಜಿತನ ಮನೆಯಲ್ಲಿದ್ದ ಸ್ತ್ರೀಯರು ಅನಾಥರಂತೆ ಗಟ್ಟಿಯಾಗಿ ಕೂಗಿಕೊಳ್ಳುತ್ತಿದ್ದರೂ ಶತಧನ್ವನು ಅವರ ಕಡೆಗೆ ಗಮನವೇ ಕೊಡಲಿಲ್ಲ. ಕಟುಕನು ಪಶುಗಳನ್ನು ನಿರ್ದಯವಾಗಿ ಕತ್ತರಿಸುವಂತೆಯೇ ಅವನು ಸತ್ರಾಜಿತನನ್ನು ಕೊಚ್ಚಿಹಾಕಿ, ಮಣಿಯೊಂದಿಗೆ ಅಲ್ಲಿಂದ ಪರಾರಿಯಾದನು. ॥6॥

(ಶ್ಲೋಕ-7)

ಮೂಲಮ್

ಸತ್ಯಭಾಮಾ ಚ ಪಿತರಂ ಹತಂ ವೀಕ್ಷ್ಯ ಶುಚಾರ್ಪಿತಾ ।
ವ್ಯಲಪತ್ತಾತ ತಾತೇತಿ ಹಾ ಹತಾಸ್ಮೀತಿ ಮುಹ್ಯತೀ ॥

ಅನುವಾದ

ತಂದೆಯು ಹತನಾಗಿ ಬಿದ್ದಿರುವುದನ್ನು ನೋಡಿದ ಸತ್ಯ ಭಾಮೆಯು ಅತ್ಯಂತ ದುಃಖಿತಳಾಗಿ - ‘ಅಯ್ಯೋ! ತಂದೆಯೇ! ನಿನಗೆಂತಹ ಸ್ಥಿತಿಯು ಒದಗಿತು? ನೀನು ಸತ್ತನಂತರ ನಾನು ಸತ್ತಂತೆಯೇ ಸರಿ. ಹೀಗೆ ಹೇಳಿಕೊಂಡು ಗೋಳಾಡುತ್ತಾ ಮೂರ್ಛೆ ಹೋದಳು. ಎಚ್ಚರಗೊಂಡು ಪುನಃ ದುಃಖಿಸುವಳು. ॥7॥

(ಶ್ಲೋಕ-8)

ಮೂಲಮ್

ತೈಲದ್ರೋಣ್ಯಾಂ ಮೃತಂ ಪ್ರಾಸ್ಯ ಜಗಾಮ ಗಜಸಾಹ್ವಯಮ್ ।
ಕೃಷ್ಣಾಯ ವಿದಿತಾರ್ಥಾಯ ತಪ್ತಾಚಖ್ಯೌ ಪಿತುರ್ವಧಮ್ ॥

ಅನುವಾದ

ಅನಂತರ ಸತ್ಯಭಾಮೆಯು ತನ್ನ ತಂದೆಯ ಶವವನ್ನು ಎಣ್ಣೆಯ ಕೊಪ್ಪರಿಗೆಯಲ್ಲಿರಿಸಿ, ತಾನು ಹಸ್ತಿನಾಪುರಕ್ಕೆ ಹೋದಳು. ಅವಳು ಅತ್ಯಂತ ದುಃಖದಿಂದ ಭಗವಾನ್ ಶ್ರೀಕೃಷ್ಣನಲ್ಲಿ ತಂದೆಯ ಹತ್ಯೆಯ ವೃತ್ತಾಂತವನ್ನು ತಿಳಿಸಿದಳು. ಸರ್ವಾಂತರ್ಯಾಮಿಯಾದ ಶ್ರೀಕೃಷ್ಣನಾದರೋ ಇದನ್ನು ಮೊದಲೇ ತಿಳಿದಿದ್ದನು. ॥8॥

(ಶ್ಲೋಕ-9)

ಮೂಲಮ್

ತದಾಕರ್ಣ್ಯೇಶ್ವರೌ ರಾಜನ್ನನುಸೃತ್ಯ ನೃಲೋಕತಾಮ್ ।
ಹೋ ನಃ ಪರಮಂ ಕಷ್ಟಮಿತ್ಯಸ್ರಾಕ್ಷೌ ವಿಲೇಪತುಃ ॥

ಅನುವಾದ

ಪರೀಕ್ಷಿತನೇ! ಸರ್ವಶಕ್ತನಾದ ಶ್ರೀಕೃಷ್ಣನು ಮತ್ತು ಬಲರಾಮರು ಎಲ್ಲವನ್ನು ಕೇಳಿ ಮನುಷ್ಯರಂತೆ ಲೀಲೆಯಾಡುತ್ತಾ ಕಣ್ಣುಗಳಲ್ಲಿ ನೀರನ್ನು ತುಂಬಿಕೊಂಡು ಅಯ್ಯೋ! ನಮ್ಮಗಳ ಮೇಲೆ ಇದೆಂತಹ ವಿಪತ್ತು ಒದಗಿಬಂತಲ್ಲ! ಎಂದು ವಿಲಾಪಿಸತೊಡಗಿದರು. ॥9॥

(ಶ್ಲೋಕ-10)

ಮೂಲಮ್

ಆಗತ್ಯ ಭಗವಾಂಸ್ತಸ್ಮಾತ್ ಸಭಾರ್ಯಃ ಸಾಗ್ರಜಃ ಪುರಮ್ ।
ಶತಧನ್ವಾನಮಾರೇಭೇ ಹಂತುಂ ಹರ್ತುಂ ಮಣಿಂ ತತಃ ॥

ಅನುವಾದ

ಅನಂತರ ಶ್ರೀಕೃಷ್ಣನು ಸತ್ಯಭಾಮೆ ಮತ್ತು ಬಲರಾಮರೊಂದಿಗೆ ಹಸ್ತಿನಾಪುರದಿಂದ ಹೊರಟು ದ್ವಾರಕೆಗೆ ಮರಳಿದರು. ಸತ್ರಾಜಿತನನ್ನು ಕೊಂದಿರುವ ಶತಧನ್ವನನ್ನು ಸಂಹರಿಸಿ ಅವನಿಂದ ಮಣಿಯನ್ನು ಪಡೆಯಲು ಪ್ರಯತ್ನಿಸತೊಡಗಿದರು. ॥10॥

(ಶ್ಲೋಕ-11)

ಮೂಲಮ್

ಸೋಪಿ ಕೃಷ್ಣೋದ್ಯಮಂ ಜ್ಞಾತ್ವಾ ಭೀತಃ ಪ್ರಾಣಪರೀಪ್ಸಯಾ ।
ಸಾಹಾಯ್ಯೇ ಕೃತವರ್ಮಾಣಮಯಾಚತ ಸ ಚಾಬ್ರವೀತ್ ॥

ಅನುವಾದ

ಭಗವಾನ್ ಶ್ರೀಕೃಷ್ಣನು ತನ್ನನ್ನು ಕೊಲ್ಲಲು ಹೊಂಚು ಹಾಕುತ್ತಿರುವನೆಂದು ತಿಳಿದ ಶತಧನ್ವನು ಬಹಳವಾಗಿ ಹೆದರಿ ಹೋದನು. ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಅವನು ಕೃತವರ್ಮನ ಸಹಾಯನ್ನು ಬೇಡಿದನು. ಆಗ ಕೃತವರ್ಮನು ಹೇಳಿದನು. ॥11॥

(ಶ್ಲೋಕ-12)

ಮೂಲಮ್

ನಾಹಮೀಶ್ವರಯೋಃ ಕುರ್ಯಾಂ ಹೇಲನಂ ರಾಮಕೃಷ್ಣಯೋಃ ।
ಕೋ ನು ಕ್ಷೇಮಾಯ ಕಲ್ಪೇತ ತಯೋರ್ವೃಜಿನಮಾಚರನ್ ॥

ಅನುವಾದ

ಭಗವಾನ್ ಶ್ರೀಕೃಷ್ಣ ಮತ್ತು ಬಲರಾಮರು ಸರ್ವಶಕ್ತರಾದ ಈಶ್ವರರಾಗಿದ್ದಾರೆ. ನಾನು ಅವರನ್ನು ಎದುರಿಸಲಾರೆ. ಅವರೊಂದಿಗೆ ವೈರವನ್ನು ಕಟ್ಟಿಕೊಂಡು ಕ್ಷೇಮದಿಂದಿರಲು ಯಾರಿಗೆ ತಾನೇ ಸಾಧ್ಯವಾದೀತು? ॥12॥

(ಶ್ಲೋಕ-13)

ಮೂಲಮ್

ಕಂಸಃ ಸಹಾನುಗೋಪೀತೋ ಯದ್ದ್ವೇಷಾತ್ತ್ಯಾಜಿತಃ ಶ್ರಿಯಾ ।
ಜರಾಸಂಧಃ ಸಪ್ತದಶ ಸಂಯುಗಾನ್ ವಿರಥೋ ಗತಃ ॥

ಅನುವಾದ

ಕಂಸನು ಅವರಲ್ಲಿನ ದ್ವೇಷದಿಂದಲೇ ರಾಜ್ಯಲಕ್ಷ್ಮಿಯನ್ನು ಕಳಕೊಂಡು, ಅನುಯಾಯಿಗಳೊಂದಿಗೆ ಅವಸಾನ ಹೊಂದಿದನು. ಜರಾಸಂಧನಂತಹ ಪರಾಕ್ರಮಿಯೂ ಹದಿನೇಳು ಬಾರಿ ಸೋತು ರಥವಿಹೀನನಾಗಿ ರಣರಂಗದಿಂದ ಓಡಬೇಕಾಯಿತು. ಇವೆಲ್ಲವನ್ನು ನೀನು ತಿಳಿದೇ ಇರುವೆ. ॥13॥

(ಶ್ಲೋಕ-14)

ಮೂಲಮ್

ಪ್ರತ್ಯಾಖ್ಯಾತಃ ಸ ಚಾಕ್ರೂರಂ ಪಾರ್ಷ್ಣಿಗ್ರಾಹಮಯಾಚತ ।
ಸೋಪ್ಯಾಹ ಕೋ ವಿರುಧ್ಯೇತ ವಿದ್ವಾನೀಶ್ವರಯೋರ್ಬಲಮ್ ॥

(ಶ್ಲೋಕ-15)

ಮೂಲಮ್

ಯ ಇದಂ ಲೀಲಯಾ ವಿಶ್ವಂ ಸೃಜತ್ಯವತಿ ಹಂತಿ ಚ ।
ಚೇಷ್ಟಾಂ ವಿಶ್ವಸೃಜೋ ಯಸ್ಯ ನ ವಿದುರ್ಮೋಹಿತಾಜಯಾ ॥

(ಶ್ಲೋಕ-16)

ಮೂಲಮ್

ಯಃ ಸಪ್ತಹಾಯನಃ ಶೈಲಮುತ್ಪಾಟ್ಯೈಕೇನ ಪಾಣಿನಾ ।
ದಧಾರ ಲೀಲಯಾ ಬಾಲ ಉಚ್ಛಿಲೀಂಧ್ರಮಿವಾರ್ಭಕಃ ॥

(ಶ್ಲೋಕ-17)

ಮೂಲಮ್

ನಮಸ್ತಸ್ಮೈ ಭಗವತೇ ಕೃಷ್ಣಾಯಾದ್ಭುತಕರ್ಮಣೇ ।
ಅನಂತಾಯಾದಿಭೂತಾಯ ಕೂಟಸ್ಥಾಯಾತ್ಮನೇ ನಮಃ ॥

ಅನುವಾದ

ಕೊಲೆಗೆ ಪ್ರಚೋದಿಸಿದ ಕೃತವರ್ಮನು ಹೀಗೆ ಹೇಳಿ ಜಾರಿಕೊಳ್ಳಲು, ಶತಧನ್ವನು ಸಹಾಯಕ್ಕಾಗಿ ಅಕ್ರೂರನನ್ನು ಪ್ರಾರ್ಥಿಸಿದನು. ಅವನೆಂದನು- ಅಯ್ಯಾ! ಸರ್ವಶಕ್ತನಾದ ಭಗವಂತನ ಬಲ-ಪರಾಕ್ರಮಗಳನ್ನು ತಿಳಿದು ತಿಳಿದು ಅವನೊಂದಿಗೆ ಯಾರು ತಾನೇ ವೈರವನ್ನು ಕಟ್ಟಿಕೊಳ್ಳುವನು? ಭಗವಂತನೇ ಲೀಲಾವಿನೋದಕ್ಕಾಗಿಯೇ ಈ ವಿಶ್ವವನ್ನು ರಚಿಸಿ, ರಕ್ಷಿಸಿ, ಸಂಹರಿಸುತ್ತಾನೆ. ಅವನು ಎಂದು ಏನನ್ನು ಮಾಡ ಬಯಸುವನೋ ಇದನ್ನು ಮಾಯೆಯಿಂದ ಮೋಹಿತರಾದ ಬ್ರಹ್ಮಾದಿಗಳೂ ತಿಳಿಯಲಾರರು. ಇವನು ಬಾಲಕನಾಗಿದ್ದಾಗ ಏಳನೇ ವಯಸ್ಸಿನಲ್ಲೇ ಒಂದೇ ಕೈಯಿಂದ ಗೋವರ್ಧನವನ್ನು ಕಿತ್ತು ಮಗುವೊಂದು ನಾಯಿಕೊಡೆಯನ್ನು ಮೇಲೆತ್ತಿಹಿಡಿಯುವಂತೆ, ಲೀಲಾಜಾಲವಾಗಿ ಏಳು ದಿವಸಗಳ ತನಕ ಎತ್ತಿಹಿಡಿದಿದ್ದನು. ಅದ್ಭುತಕರ್ಮಿಯಾದ ಭಗವಾನ್ ಶ್ರೀಕೃಷ್ಣನಿಗೆ ನಾನಾದರೋ ನಮಸ್ಕಾರ ಮಾಡುತ್ತೇನೆ. ಅವನು ಅನಂತನೂ, ಅನಾದಿಯೂ, ಕೂಟಸ್ಥನೂ, ಆತ್ಮಸ್ವರೂಪನೂ ಆಗಿರುವನು. ಅಂತಹವನಿಗೆ ನಾನು ನಮಸ್ಕರಿಸುತ್ತೇನೆ. ॥14-17॥

(ಶ್ಲೋಕ-18)

ಮೂಲಮ್

ಪ್ರತ್ಯಾಖ್ಯಾತಃ ಸ ತೇನಾಪಿ ಶತಧನ್ವಾ ಮಹಾಮಣಿಮ್ ।
ತಸ್ಮಿನ್ನ್ಯಸ್ಯಾಶ್ವಮಾರುಹ್ಯ ಶತಯೋಜನಗಂ ಯಯೌ ॥

ಅನುವಾದ

ಹೀಗೆ ಶತಧನ್ವನು ಅಕ್ರೂರನಿಂದಲೂ ತಿರಸ್ಕರಿಸಲ್ಪಟ್ಟವನಾಗಿ ತನ್ನಲ್ಲಿದ್ದ ಮಣಿಯನ್ನು ಅಕ್ರೂರನಲ್ಲಿಯೇ ನ್ಯಾಸವಾಗಿಟ್ಟು, ದಿನಕ್ಕೆ ನೂರು ಯೋಜನೆಗಳಷ್ಟು ಪ್ರಯಾಣಮಾಡುವಂತಹ ಕುದುರೆಯನ್ನೇರಿ ಅಲ್ಲಿಂದ ಹೊರಟು ಬಿಟ್ಟನು. ॥18॥

ಮೂಲಮ್

(ಶ್ಲೋಕ-19)
ಗರುಡಧ್ವಜಮಾರುಹ್ಯ ರಥಂ ರಾಮಜನಾರ್ದನೌ ।
ಅನ್ವಯಾತಾಂ ಮಹಾವೇಗೈರಶ್ವೈ ರಾಜನ್ ಗುರುದ್ರುಹಮ್ ॥

ಅನುವಾದ

ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣ-ಬಲರಾಮರು ಶತಧನ್ವನು ದ್ವಾರಕೆಯಿಂದ ಹೊರಟುಹೋದ ವಾರ್ತೆಯನ್ನು ಕೇಳಿ ಗರುಡ ಧ್ವಜವಿರುವ ಹಾಗೂ ಮಹಾವೇಗವಾಗಿ ಚಲಿಸುವ ಕುದುರೆಗಳನ್ನು ಹೂಡಿದ ರಥದಲ್ಲಿ ಕುಳಿತುಕೊಂಡು ಅವರು ತಮ್ಮ ಮಾವನನ್ನು ಕೊಂದಿರುವ ಶತಧನ್ವನನ್ನು ಬೆನ್ನಟ್ಟಿದರು. ॥19॥

(ಶ್ಲೋಕ-20)

ಮೂಲಮ್

ಮಿಥಿಲಾಯಾಮುಪವನೇ ವಿಸೃಜ್ಯ ಪತಿತಂ ಹಯಮ್ ।
ಪದ್ಭ್ಯಾಮಧಾವತ್ ಸಂತ್ರಸ್ತಃ ಕೃಷ್ಣೋಪ್ಯನ್ವದ್ರವದ್ರುಷಾ ॥

ಅನುವಾದ

ಮಿಥಿಲಾಪಟ್ಟಣದ ಉಪವನವೊಂದರಲ್ಲಿ ಶತಧನ್ವನ ಕುದುರೆಯು ಬಿದ್ದು ಹೋಯಿತು. ಆಗ ಅವನು ಅದನ್ನು ಬಿಟ್ಟು ಅಲ್ಲೇ ಬಹಳವಾಗಿ ಭಯಗೊಂಡು ಓಡಲಾರಂಭಿಸಿದನು. ಭಗವಾನ್ ಶ್ರೀಕೃಷ್ಣನೂ ಕ್ರುದ್ಧವಾಗಿ ಅವನನ್ನು ಹಿಂಬಾಲಿಸಿದನು. ॥20॥

(ಶ್ಲೋಕ-21)

ಮೂಲಮ್

ಪದಾತೇರ್ಭಗವಾಂಸ್ತಸ್ಯ ಪದಾತಿಸ್ತಿಗ್ಮನೇಮಿನಾ ।
ಚಕ್ರೇಣ ಶಿರ ಉತ್ಕೃತ್ಯ ವಾಸಸೋವ್ಯಚಿನೋನ್ಮಣಿಮ್ ॥

ಅನುವಾದ

ಶತಧನ್ವನು ಪದಾತಿಯಾಗಿಯೇ ಓಡುತ್ತಿದ್ದುದರಿಂದ ಭಗವಂತನು ಹಾಗೆಯೇ ರಥವನ್ನು ಬಿಟ್ಟು ಪದಾತಿಯಾಗಿಯೇ ಓಡಿ ಹೋಗಿ ಹರಿತವಾದ ತನ್ನ ಸುದರ್ಶನದಿಂದ ಅವನ ತಲೆಯನ್ನು ತರಿದು ಅವನು ಉಟ್ಟಿದ್ದ ಬಟ್ಟೆಯಲ್ಲಿ ಸ್ಯಮಂತಕ ಮಣಿಯನ್ನು ಹುಡುಕಿದನು. ॥21॥

(ಶ್ಲೋಕ-22)

ಮೂಲಮ್

ಅಲಬ್ಧಮಣಿರಾಗತ್ಯ ಕೃಷ್ಣ ಆಹಾಗ್ರಜಾಂತಿಕಮ್ ।
ವೃಥಾ ಹತಃ ಶತಧನುರ್ಮಣಿಸ್ತತ್ರ ನ ವಿದ್ಯತೇ ॥

ಅನುವಾದ

ಆದರೆ ಮಣಿಯು ಸಿಗದಿದ್ದಾಗ ಶ್ರೀಕೃಷ್ಣನು ಅಣ್ಣನಾದ ಬಲರಾಮನ ಬಳಿಗೆ ಬಂದು - ಶತಧನ್ವನನ್ನು ವ್ಯರ್ಥವಾಗಿ ಕೊಂದಂತಾಯಿತು. ಏಕೆಂದರೆ, ಅವನ ಬಳಿಯಲ್ಲಿ ಸ್ಯಮಂತಕ ಮಣಿಯು ಇರಲೇ ಇಲ್ಲ ಎಂದು ಹೇಳಿದನು. ॥22॥

(ಶ್ಲೋಕ-23)

ಮೂಲಮ್

ತತ ಆಹ ಬಲೋ ನೂನಂ ಸ ಮಣಿಃ ಶತಧನ್ವನಾ ।
ಕಸ್ಮಿಂಶ್ಚಿತ್ ಪುರುಷೇ ನ್ಯಸ್ತಸ್ತಮನ್ವೇಷ ಪುರಂ ವ್ರಜ ॥

ಅನುವಾದ

ಬಲರಾಮನು ಹೇಳಿದನು - ಕೃಷ್ಣ! ಶತಧನ್ವನು ಸ್ಯಮಂತಕ ಮಣಿಯನ್ನು ಬೇರೆಯಾರಲ್ಲಾದರೂ ಇಟ್ಟಿರಬೇಕು. ನೀನು ದ್ವಾರಕೆಗೆ ಹೋಗಿ ಅದು ಯಾರಲ್ಲಿದೆ ಎಂಬುದನ್ನು ತಿಳಿದುಕೊ. ॥23॥

(ಶ್ಲೋಕ-24)

ಮೂಲಮ್

ಅಹಂ ವಿದೇಹಮಿಚ್ಛಾಮಿ ದ್ರಷ್ಟುಂ ಪ್ರಿಯತಮಂ ಮಮ ।
ಇತ್ಯುಕ್ತ್ವಾ ಮಿಥಿಲಾಂ ರಾಜನ್ ವಿವೇಶ ಯದುನಂದನಃ ॥

ಅನುವಾದ

ನನ್ನ ಪ್ರಿಯಮಿತ್ರನಾದ ವಿದೇಹರಾಜನನ್ನು ಕಾಣಲು ನಾನು ಬಯಸುತ್ತೇನೆ. ಪರೀಕ್ಷಿತನೇ! ಹೀಗೆ ಹೇಳಿ ಯದುವಂಶ ಶಿರೋಮಣಿಯಾದ ಬಲರಾಮನು ಮಿಥಿಲಾನಗರಕ್ಕೆ ಹೋದನು. ॥24॥

(ಶ್ಲೋಕ-25)

ಮೂಲಮ್

ತಂ ದೃಷ್ಟ್ವಾ ಸಹಸೋತ್ಥಾಯ ಮೈಥಿಲಃ ಪ್ರೀತಮಾನಸಃ ।
ಅರ್ಹಯಾಮಾಸ ವಿಧಿವದರ್ಹಣೀಯಂ ಸಮರ್ಹಣೈಃ ॥

ಅನುವಾದ

ಪರಮಪೂಜನೀಯನಾದ ಬಲರಾಮನು ಆಗಮಿಸಿರುವನೆಂದು ತಿಳಿದ ಮಿಥಿಲಾನರೇಶನ ಹೃದಯವು ಆನಂದದಿಂದ ತುಂಬಿಹೋಯಿತು. ಅವನು ಲಗುಬಗೆಯಿಂದ ಆಸನದಿಂದ ಎದ್ದು ಅನೇಕ ಪೂಜಾಸಾಮಗ್ರಿಗಳಿಂದ ಬಲರಾಮನನ್ನು ಪೂಜಿಸಿದನು. ॥25॥

(ಶ್ಲೋಕ-26)

ಮೂಲಮ್

ಉವಾಸ ತಸ್ಯಾಂ ಕತಿಚಿನ್ಮಿಥಿಲಾಯಾಂ ಸಮಾ ವಿಭುಃ ।
ಮಾನಿತಃ ಪ್ರೀತಿಯುಕ್ತೇನ ಜನಕೇನ ಮಹಾತ್ಮನಾ ।
ತತೋಶಿಕ್ಷದ್ಗದಾಂ ಕಾಲೇ ಧಾರ್ತರಾಷ್ಟ್ರಃ ಸುಯೋಧನಃ ॥

ಅನುವಾದ

ಇದಾದ ಬಳಿಕ ಭಗವಾನ್ ಬಲರಾಮನು ಕೆಲವು ವರ್ಷಗಳವರೆಗೆ ಮಿಥಿಲೆಯಲ್ಲೇ ಇದ್ದು ಬಿಟ್ಟನು. ಮಹಾತ್ಮಾ ಜನಕನು ಅತ್ಯಂತ ಪ್ರೇಮಾದರಗಳಿಂದ ಅವನನ್ನು ಇರಿಸಿಕೊಂಡನು. ಅದೇ ಸಮಯದಲ್ಲಿ ಧೃತರಾಷ್ಟ್ರನ ಮಗನಾದ ದುರ್ಯೋಧನನು ಮಿಥಿಲೆಗೆ ಬಂದು ಬಲರಾಮನಿಂದ ಗದಾಯುದ್ಧವನ್ನು ಕಲಿತುಕೊಂಡನು. ॥26॥

(ಶ್ಲೋಕ-27)

ಮೂಲಮ್

ಕೇಶವೋ ದ್ವಾರಕಾಮೇತ್ಯ ನಿಧನಂ ಶತಧನ್ವನಃ ।
ಅಪ್ರಾಪ್ತಿಂ ಚ ಮಣೇಃ ಪ್ರಾಹ ಪ್ರಿಯಾಯಾಃ ಪ್ರಿಯಕೃದ್ವಿಭುಃ ॥

ಅನುವಾದ

ಇತ್ತ ಪ್ರಿಯೆಯಾದ ಸತ್ಯಭಾಮೆಯ ಪ್ರಿಯಕಾರ್ಯವನ್ನು ಮಾಡಿ ಭಗವಾನ್ ಶ್ರೀಕೃಷ್ಣನು ದ್ವಾರಕೆಗೆ ಮರಳಿ ಬಂದು ಆಕೆಯ ಬಳಿ ಶತಧನ್ವನನ್ನು ಕೊಂದುಹಾಕಿದರೂ ಸ್ಯಮಂತಕಮಣಿಯು ಅವನ ಬಳಿ ದೊರಕಲಿಲ್ಲವೆಂದು ತಿಳಿಸಿದನು. ॥27॥

(ಶ್ಲೋಕ-28)

ಮೂಲಮ್

ತತಃ ಸ ಕಾರಯಾಮಾಸ ಕ್ರಿಯಾ ಬಂಧೋರ್ಹತಸ್ಯ ವೈ ।
ಸಾಕಂ ಸುಹೃದ್ಭಿರ್ಭಗವಾನ್ ಯಾ ಯಾಃ ಸ್ಯುಃ ಸಾಂಪರಾಯಿಕಾಃ ॥

ಅನುವಾದ

ಅನಂತರ ಶ್ರೀಕೃಷ್ಣನು ಮಾವನಾದ ಸತ್ರಾಜಿತನಿಗೆ ಪರಲೋಕ ಸಾಧನವಾದ ಔರ್ಧ್ವ ದೇಹಿಕಕ್ರಿಯೆಗಳನ್ನು ಸುಹೃದರೊಡನೆ ಸೇರಿ ಮಾಡಿದನು.॥28॥

(ಶ್ಲೋಕ-29)

ಮೂಲಮ್

ಅಕ್ರೂರಃ ಕೃತವರ್ಮಾ ಚ ಶ್ರುತ್ವಾ ಶತಧನೋರ್ವಧಮ್ ।
ವ್ಯೆಷತುರ್ಭಯವಿತ್ರಸ್ತೌ ದ್ವಾರಕಾಯಾಃ ಪ್ರಯೋಜಕೌ ॥

ಅನುವಾದ

ಸತ್ರಾಜಿತನನ್ನು ಕೊಲ್ಲಲು ಶತಧನ್ವನನ್ನು ಅಕ್ರೂರ ಮತ್ತು ಕೃತವರ್ಮರೇ ಪ್ರೇರೇಪಿಸಿದ್ದರು. ಭಗವಾನ್ ಶ್ರೀಕೃಷ್ಣನು ಶತಧನ್ವನನ್ನು ಕೊಂದಿರುವ ವಾರ್ತೆಯನ್ನು ಕೇಳಿದಾಗ ಅವರು ಬಹಳವಾಗಿ ಭಯಗೊಂಡು ದ್ವಾರಕೆಯಿಂದ ಓಡಿ ಹೋದರು. ॥29॥

(ಶ್ಲೋಕ-30)

ಮೂಲಮ್

ಅಕ್ರೂರೇ ಪ್ರೋಷಿತೇರಿಷ್ಟಾನ್ಯಾಸನ್ ವೈ ದ್ವಾರಕೌಕಸಾಮ್ ।
ಶಾರೀರಾ ಮಾನಸಾಸ್ತಾಪಾ ಮುಹುರ್ದೈವಿಕಭೌತಿಕಾಃ ॥

(ಶ್ಲೋಕ-31)

ಮೂಲಮ್

ಇತ್ಯಂಗೋಪದಿಶಂತ್ಯೇಕೇ ವಿಸ್ಮೃತ್ಯ ಪ್ರಾಗುದಾಹೃತಮ್ ।
ಮುನಿವಾಸನಿವಾಸೇ ಕಿಂ ಘಟೇತಾರಿಷ್ಟದರ್ಶನಮ್ ॥

ಅನುವಾದ

ಪರೀಕ್ಷಿತನೇ! ಅಕ್ರೂರನು ದ್ವಾರಕೆಯಿಂದ ಹೊರಟು ಹೋದ ಬಳಿಕ ದ್ವಾರಕಾನಿವಾಸಿಗಳಿಗೆ ಅನೇಕ ವಿಧವಾದ ಅನಿಷ್ಟಗಳನ್ನು, ಅರಿಷ್ಟಗಳನ್ನು ಇದಿರಿಸಬೇಕಾಯಿತು ಎಂದು ಕೆಲವರು ಭಾವಿಸಿದರು. ಇವರೆಲ್ಲರೂ ಹಿಂದೆ ನಡೆದ ಶ್ರೀಕೃಷ್ಣನ ಮಹಾತ್ಮ್ಯ-ಮಹಿಮೆಯನ್ನು ಮರೆತೇ ಬಿಟ್ಟಿದ್ದರು. ಮಹರ್ಷಿಗಳ ಮನೋವೃತ್ತಿಗೆ ನೆಲೆಯೆನಿಸಿರುವ ಭಗವಂತನಿಗೆ ನಿವಾಸಸ್ಥಾನವಾದ ದ್ವಾರಕೆಯಲ್ಲಿ ಅನಿಷ್ಟಗಳು ಹೇಗೆ ತಾನೆ ಉಂಟಾಗಬಲ್ಲವು? ಎಂದು ಮತ್ತೆ ಕೆಲವರು ಹೇಳತೊಡಗಿದರು. ॥30-31॥

(ಶ್ಲೋಕ-32)

ಮೂಲಮ್

ದೇವೇವರ್ಷತಿ ಕಾಶೀಶಃ ಶ್ವಲ್ಕಾಯಾಗತಾಯ ವೈ ।
ಸ್ವಸುತಾಂ ಗಾಂದಿನೀಂ ಪ್ರಾದಾತ್ತತೋವರ್ಷತ್ಸ್ಮ ಕಾಶಿಷು ॥

(ಶ್ಲೋಕ-33)

ಮೂಲಮ್

ತತ್ಸುತಸ್ತತ್ಪ್ರಭಾವೋಸಾವಕ್ರೂರೋ ಯತ್ರ ಯತ್ರ ಹ ।
ದೇವೋಭಿವರ್ಷತೇ ತತ್ರ ನೋಪತಾಪಾ ನ ಮಾರಿಕಾಃ ॥

(ಶ್ಲೋಕ-34)

ಮೂಲಮ್

ಇತಿ ವೃದ್ಧವಚಃ ಶ್ರುತ್ವಾ ನೈತಾವದಿಹ ಕಾರಣಮ್ ।
ಇತಿ ಮತ್ವಾ ಸಮಾನಾಯ್ಯ ಪ್ರಾಹಾಕ್ರೂರಂ ಜನಾರ್ದನಃ ॥

ಅನುವಾದ

‘‘ಒಮ್ಮೆ ಕಾಶೀರಾಜ್ಯದಲ್ಲಿ ಮಳೆಯೇ ಇಲ್ಲದೆ ಕ್ಷಾಮ ತಲೆದೋರಿತ್ತಂತೆ. ಆ ಸಮಯದಲ್ಲಿ ಕಾಶೀರಾಜರು ತನ್ನ ರಾಜ್ಯಕ್ಕೆ ಬಂದಿರುವ ಅಕ್ರೂರನ ತಂದೆಯಾದ ಶ್ವಲ್ಕನಿಗೆ ತನ್ನ ಮಗಳಾದ ಗಾಂದಿನಿಯನ್ನು ಕೊಟ್ಟು ಮದುವೆಮಾಡಿ ದೊಡನೆಯೇ ಮಳೆಯಾಯಿತಂತೆ. ಶ್ವಲ್ಕನ ಮಗನಾದ ಅಕ್ರೂರನಲ್ಲಿಯೂ ಇಂತಹುದೇ ಮಹಿಮೆಯಿರುವುದಂತೆ. ಅವನೆಲ್ಲಿಗೆ ಹೋದರೂ ಅಲ್ಲಿ ಮಳೆ-ಬೆಳೆಗಳು ಸಮೃದ್ಧವಾಗಿ, ಯಾವುದೇ ವಿಧವಾದ ಕಷ್ಟವಾಗಲೀ, ಮಹಾಮಾರಿಯೇ ಮುಂತಾದ ಉಪದ್ರವಗಳಾಗಲೀ ಇರುವುದಿಲ್ಲವಂತೆ.’ ಹೀಗೆ ಕೆಲವು ಹಿರಿಯರು ಮಾತನಾಡಿಕೊಳ್ಳುತ್ತಿದ್ದರು. ಪರೀಕ್ಷಿತನೇ! ಅವರ ಮಾತನ್ನು ಕೇಳಿದ ಭಗವಂತನು - ಈಗ ತಲೆದೋರಿದ ಉಪದ್ರವಗಳಿಗೆ ಈ ಕಾರಣವಿರಲಾರದು ಎಂದು ಯೋಚಿಸಿ ಶ್ರೀಕೃಷ್ಣನು ದೂತನನ್ನು ಕಳುಹಿಸಿ ಅಕ್ರೂರನನ್ನು ಹುಡುಕಿಸಿ, ಕರೆತಂದು ಅವನೊಡನೆ ಮಾತಾನಾಡಿದನು. ॥32-34॥

(ಶ್ಲೋಕ-35)

ಮೂಲಮ್

ಪೂಜಯಿತ್ವಾಭಿಭಾಷ್ಯೈನಂ ಕಥಯಿತ್ವಾ ಪ್ರಿಯಾಃ ಕಥಾಃ ।
ವಿಜ್ಞಾತಾಖಿಲಚಿತ್ತಜ್ಞಃ ಸ್ಮಯಮಾನ ಉವಾಚ ಹ ॥

ಅನುವಾದ

ಭಗವಂತನು ಅವನನ್ನು ಬಹಳವಾಗಿ ಸ್ವಾಗತ-ಸತ್ಕಾರಮಾಡಿ, ಸವಿಮಾತುಗಳನ್ನಾಡಿದನು. ಪರೀಕ್ಷಿತನೇ! ಎಲ್ಲರ ಮನಸ್ಸಿನ ಪ್ರತಿಯೊಂದು ಸಂಕಲ್ಪವನ್ನು ಬಲ್ಲವನಾದ ಶ್ರೀಕೃಷ್ಣನು ಮುಗುಳು ನಗುತ್ತಾ ಅಕ್ರೂರನಿಗೆ ಹೇಳಿದನು. ॥35॥

(ಶ್ಲೋಕ-36)

ಮೂಲಮ್

ನನು ದಾನಪತೇ ನ್ಯಸ್ತಸ್ತ್ವಯ್ಯಾಸ್ತೇ ಶತಧನ್ವನಾ ।
ಸ್ಯಮಂತಕೋ ಮಣಿಃ ಶ್ರೀಮಾನ್ ವಿದಿತಃ ಪೂರ್ವಮೇವ ನಃ ॥

ಅನುವಾದ

ದಾನಪತಿಯಾದ ಚಿಕ್ಕಪ್ಪನೇ! ಶತಧನ್ವನು ಪ್ರಕಾಶಮಾನವಾದ ಮತ್ತು ಸಂಪತ್ತನ್ನು ಕೊಡುವ ಸ್ಯಮಂತಕಮಣಿಯನ್ನು ನಿನ್ನಲ್ಲಿ ನ್ಯಾಸವಾಗಿ ಇಟ್ಟಿರುವನೆಂಬುದು ನನಗೆ ಮೊದಲೇ ತಿಳಿದಿತ್ತು. ॥36॥

(ಶ್ಲೋಕ-37)

ಮೂಲಮ್

ಸತ್ರಾಜಿತೋನಪತ್ಯತ್ವಾದ್ಗೃಹ್ಣೀಯುರ್ದುಹಿತುಃ ಸುತಾಃ ।
ದಾಯಂ ನಿನೀಯಾಪಃ ಪಿಂಡಾನ್ವಿಮುಚ್ಯರ್ಣಂ ಚ ಶೇಷಿತಮ್ ॥

ಅನುವಾದ

ಸತ್ರಾಜಿತನಿಗೆ ಗಂಡು ಮಕ್ಕಳಿಲ್ಲದುದು ನೀನು ತಿಳಿದೇ ಇರುವೆ. ಅದಕ್ಕಾಗಿ ಅವನ ಮಗಳ ಮಕ್ಕಳು ಅವನಿಗೆ ಮಾಡಬೇಕಾದ ಪಿಂಡಪ್ರದಾನ, ತಿಲಾಂಜಲಿಯೇ ಮೊದಲಾದ ಕರ್ಮಾಂತರಗಳನ್ನು ಮಾಡಿರುವರು. ಅವನ ಋಣವನ್ನು ತೀರಿಸಿರುವರು. ಆದ್ದರಿಂದ ಅವನಲ್ಲಿರಬಹುದಾದ ಆಸ್ತಿಗೆ ಅವರೇ ಹಕ್ಕುದಾರರಾಗುತ್ತಾರೆ. ॥37॥

(ಶ್ಲೋಕ-38)

ಮೂಲಮ್

ತಥಾಪಿ ದುರ್ಧರಸ್ತ್ವನ್ಯೈಸ್ತ್ವಯ್ಯಾಸ್ತಾಂ ಸುವ್ರತೇ ಮಣಿಃ ।
ಕಿಂತು ಮಾಮಗ್ರಜಃ ಸಮ್ಯಙ್ನಪ್ರತ್ಯೇತಿ ಮಣಿಂ ಪ್ರತಿ ॥

(ಶ್ಲೋಕ-39)

ಮೂಲಮ್

ದರ್ಶಯಸ್ವ ಮಹಾಭಾಗ ಬಂಧೂನಾಂ ಶಾಂತಿಮಾವಹ ।
ಅವ್ಯಚ್ಛಿನ್ನಾ ಮಖಾಸ್ತೇದ್ಯ ವರ್ತಂತೇ ರುಕ್ಮವೇದಯಃ ॥

ಅನುವಾದ

ಆದ್ದರಿಂದ ಭಾಗ್ಯಶಾಲಿಯಾದ ಅಕ್ರೂರನೇ! ನೀನು ಆ ಮಣಿಯನ್ನು ತೋರಿಸಿ ನಮ್ಮ ಇಷ್ಟ-ಮಿತ್ರರ, ಬಲರಾಮನ, ಸತ್ಯ ಭಾಮೆಯ ಮತ್ತು ಜಾಂಬವತಿಯ ಸಂದೇಹವನ್ನು ದೂರಗೊಳಿಸು ಹಾಗೂ ಅವರ ಹೃದಯಕ್ಕೆ, ಶಾಂತಿಯನ್ನು ನೀಡು. ಆ ಮಣಿಯ ಪ್ರಭಾವದಿಂದಲೇ ಇತ್ತೀಚೆಗೆ ನೀನು ಸ್ವರ್ಣವೇದಿಗಳಿಂದ ಒಡಗೂಡಿದ ಮಹಾಯಜ್ಞಗಳನ್ನು ನಿರಂತರವಾಗಿ ಮಾಡುತ್ತಿರುವೆ ಎಂಬುದೂ ನನಗೆ ತಿಳಿದಿದೆ. ॥39॥

(ಶ್ಲೋಕ-40)

ಮೂಲಮ್

ಏವಂ ಸಾಮಭಿರಾಲಬ್ಧಃ ಶ್ವಲ್ಕತನಯೋ ಮಣಿಮ್ ।
ಆದಾಯ ವಾಸಸಾಚ್ಛನ್ನಂ ದದೌ ಸೂರ್ಯಸಮಪ್ರಭಮ್ ॥

ಅನುವಾದ

ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಹೇಳಿದ ಈ ಪ್ರಕಾರದ ಸಾಂತ್ವನದ ಮಾತುಗಳಿಂದ ಪ್ರೇರಿತನಾದ ಅಕ್ರೂರನು ವಸ್ತ್ರದಲ್ಲಿ ಸುತ್ತಿಟ್ಟ ಸ್ಯಮಂತಕಮಣಿಯನ್ನು ಹೊರ ತೆಗೆದು ಭಗವಂತನಿಗೆ ಅರ್ಪಿಸಿಬಿಟ್ಟನು. ॥40॥

(ಶ್ಲೋಕ-41)

ಮೂಲಮ್

ಸ್ಯಮಂತಕಂ ದರ್ಶಯಿತ್ವಾ ಜ್ಞಾತಿಭ್ಯೋ ರಜ ಆತ್ಮನಃ ।
ವಿಮೃಜ್ಯ ಮಣಿನಾ ಭೂಯಸ್ತಸ್ಮೈ ಪ್ರತ್ಯರ್ಪಯತ್ ಪ್ರಭುಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಆ ಸ್ಯಮಂತಕ ಮಣಿಯನ್ನು ತನ್ನ ಜ್ಞಾತಿಬಾಂಧವರೆಲ್ಲರಿಗೂ ತೋರಿಸಿ ತನಗೆ ಬಂದ ಅಪವಾದವನ್ನು ಕಳೆದುಕೊಂಡನು. ಅದನ್ನು ಇಟ್ಟುಕೊಳ್ಳಲು ತಾನು ಸಮರ್ಥನಾಗಿದ್ದರೂ ಪುನಃ ಅಕ್ರೂರನಿಗೆ ಆ ಮಣಿಯನ್ನು ಕೊಟ್ಟನು. ॥41॥

(ಶ್ಲೋಕ-42)

ಮೂಲಮ್

ಯಸ್ತ್ವೇತದ್ಭಗವತ ಈಶ್ವರಸ್ಯ ವಿಷ್ಣೋ-
ರ್ವೀರ್ಯಾಢ್ಯಂ ವೃಜಿನಹರಂ ಸುಮಂಗಲಂ ಚ ।
ಆಖ್ಯಾನಂ ಪಠತಿ ಶೃಣೋತ್ಯನುಸ್ಮರೇದ್ವಾ
ದುಷ್ಕೀರ್ತಿಂ ದುರಿತಮಪೋಹ್ಯ ಯಾತಿ ಶಾಂತಿಮ್ ॥

ಅನುವಾದ

ಸರ್ವಶಕ್ತನಾದ, ಸರ್ವವ್ಯಾಪಕನಾದ ಭಗವಾನ್ ಶ್ರೀಕೃಷ್ಣನ ಪರಾಕ್ರಮಗಳಿಂದ ಕೂಡಿದ ಮಂಗಲಮಯವಾದ ಈ ಆಖ್ಯಾನವು ಸಮಸ್ತ ಪಾಪಗಳನ್ನೂ, ಅಪವಾದಗಳನ್ನೂ, ಕಳಂಕಗಳನ್ನೂ ತೊಡೆದು ಹಾಕುತ್ತದೆ. ಇದನ್ನು ಪಠಿಸುವವನು, ಶ್ರವಣಿಸುವವನು, ಅಥವಾ ಸ್ಮರಿಸುವವನೂ ಎಲ್ಲ ವಿಧವಾದ ದುಷ್ಕೀರ್ತಿಗಳಿಂದ, ಪಾಪಗಳಿಂದ ಬಿಡುಗಡೆಹೊಂದಿ ಪರಮ ಶಾಂತಿಯನ್ನು ಹೊಂದುತ್ತಾನೆ. ॥42॥

ಅನುವಾದ (ಸಮಾಪ್ತಿಃ)

ಐವತ್ತೇಳನೆಯ ಅಧ್ಯಾಯವು ಮುಗಿಯಿತು. ॥57॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ
ಸ್ಯಮಂತಕೋಪಾಖ್ಯಾನೇ ಸಪ್ತಪಂಚಾಶತ್ತಮೋಽಧ್ಯಾಯಃ ॥57॥

ಮೂಲಮ್