[ಐವತ್ತಾರನೇಯ ಅಧ್ಯಾಯ]
ಭಾಗಸೂಚನಾ
ಸ್ಯಮಂತಕಮಣಿಯ ಕಥೆ ಜಾಂಬವತಿ ಮತ್ತು ಸತ್ಯಭಾಮೆಯರೊಡನೆ ಶ್ರೀಕೃಷ್ಣನ ವಿವಾಹ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಸತ್ರಾಜಿತಃ ಸ್ವತನಯಾಂ ಕೃಷ್ಣಾಯ ಕೃತಕಿಲ್ಬಿಷಃ ।
ಸ್ಯಮಂತಕೇನ ಮಣಿನಾ ಸ್ವಯಮುದ್ಯಮ್ಯ ದತ್ತವಾನ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ ಸತ್ರಾಜಿತನು ಶ್ರೀಕೃಷ್ಣನ ಮೇಲೆ ಮಿಥ್ಯಾಪವಾದವನ್ನು ಹೊರಿಸಿದ್ದನು. ಮತ್ತೆ ಆ ಅಪರಾಧದಿಂದ ಮುಕ್ತನಾಗಲು ಅವನು ತಾನಾಗಿಯೇ ಸ್ಯಮಂತಕ ಮಣಿಯೊಡನೆ ತನ್ನ ಮಗಳಾದ ಸತ್ಯಭಾಮೆಯನ್ನು ಶ್ರೀಕೃಷ್ಣನಿಗೆ ವಿವಾಹಮಾಡಿ ಕೊಟ್ಟನು. ॥1॥
(ಶ್ಲೋಕ-2)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಸತ್ರಾಜಿತಃ ಕಿಮಕರೋದ್ಬ್ರಹ್ಮನ್ ಕೃಷ್ಣಸ್ಯ ಕಿಲ್ಬಿಷಮ್ ।
ಸ್ಯಮಂತಕಃ ಕುತಸ್ತಸ್ಯ ಕಸ್ಮಾದ್ದತ್ತಾ ಸುತಾ ಹರೇಃ ॥
ಅನುವಾದ
ಪರೀಕ್ಷಿದ್ರಾಜನು ಕೇಳಿದನು — ಪೂಜ್ಯರೇ! ಸತ್ರಾಜಿತನು ಶ್ರೀಕೃಷ್ಣನಿಗೆ ಯಾವ ಅಪರಾಧವನ್ನು ಮಾಡಿದ್ದನು? ಅವನಿಗೆ ಸ್ಯಮಂತಕಮಣಿಯು ಹೇಗೆ ದೊರಕಿತ್ತು. ತನ್ನ ಕನ್ಯೆಯನ್ನು ಶ್ರೀಕೃಷ್ಣನಿಗೆ ಏಕೆ ಮದುವೆ ಮಾಡಿ ಕೊಟ್ಟನು? ॥2॥
(ಶ್ಲೋಕ-3)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಆಸೀತ್ಸತ್ರಾಜಿತಃ ಸೂರ್ಯೋ ಭಕ್ತಸ್ಯ ಪರಮಃ ಸಖಾ ।
ಪ್ರೀತಸ್ತಸ್ಮೈ ಮಣಿಂ ಪ್ರಾದಾತ್ ಸೂರ್ಯಸ್ತುಷ್ಟಃ ಸ್ಯಮಂತಕಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳಿದರು — ಪರೀಕ್ಷಿತ ಮಹಾರಾಜ! ಸತ್ರಾಜಿತನು ಸೂರ್ಯನ ಪರಮಭಕ್ತನಾಗಿದ್ದನು. ಸೂರ್ಯದೇವನು ಅವನ ಭಕ್ತಿಗೆ ಒಲಿದು ಅವನ ಪರಮ ಮಿತ್ರನೂ ಆದನು. ಸೂರ್ಯನಾರಾಯಣನೇ ಪ್ರಸನ್ನನಾಗಿ ಪ್ರೀತಿಯಿಂದ ಅವನಿಗೆ ಸ್ಯಮಂತಕಮಣಿಯನ್ನು ಅನುಗ್ರಹಿಸಿದ್ದನು. ॥3॥
(ಶ್ಲೋಕ-4)
ಮೂಲಮ್
ಸ ತಂ ಬಿಭ್ರನ್ಮಣಿಂ ಕಂಠೇ ಭ್ರಾಜಮಾನೋ ಯಥಾ ರವಿಃ ।
ಪ್ರವಿಷ್ಟೋ ದ್ವಾರಕಾಂ ರಾಜಂಸ್ತೇಜಸಾ ನೋಪಲಕ್ಷಿತಃ ॥
ಅನುವಾದ
ಸುತ್ರಾಜಿತನು ಆ ಮಣಿಯನ್ನು ಕೊರಳಿನಲ್ಲಿ ಧರಿಸಿ ಸೂರ್ಯನಂತೆಯೇ ಪ್ರಕಾಶಿಸುತ್ತಿದ್ದನು. ಪರೀಕ್ಷಿತನೇ! ಸತ್ರಾಜಿತನು ದ್ವಾರಕೆಗೆ ಬಂದಾಗ ಅತ್ಯಂತ ತೇಜಸ್ಸಿನಿಂದಾಗಿ ಅವನನ್ನು ಗುರುತಿಸಹೋದರು. ॥4॥
(ಶ್ಲೋಕ-5)
ಮೂಲಮ್
ತಂ ವಿಲೋಕ್ಯ ಜನಾ ದೂರಾತ್ತೇಜಸಾ ಮುಷ್ಟದೃಷ್ಟಯಃ ।
ದೀವ್ಯತೇಕ್ಷೈರ್ಭಗವತೇ ಶಶಂಸುಃ ಸೂರ್ಯಶಂಕಿತಾಃ ॥
ಅನುವಾದ
ದೂರದಿಂದಲೇ ಅವನನ್ನು ನೋಡಿ ಜನರಿಗೆ ಕಣ್ಣು ಕತ್ತಲೆಬಂತು. ಸಾಕ್ಷಾತ್ ಸೂರ್ಯನಾರಾಯಣನೇ ಬಂದಿರಬಹುದೇ? ಎಂದು ಜನರು ತಿಳಿದರು. ಅವರೆಲ್ಲರೂ ಈ ವಿಷಯವನ್ನು ಪಗಡೆಯಾಡುತ್ತಿದ್ದ ಶ್ರೀಕೃಷ್ಣನಿಗೆ ಹೇಳಿದರು. ॥5॥
(ಶ್ಲೋಕ-6)
ಮೂಲಮ್
ನಾರಾಯಣ ನಮಸ್ತೇಸ್ತು ಶಂಖಚಕ್ರಗದಾಧರ ।
ದಾಮೋದರಾರವಿಂದಾಕ್ಷ ಗೋವಿಂದ ಯದುನಂದನ ॥
ಅನುವಾದ
ಶಂಖ-ಚಕ್ರ ಗದಾಧರನಾದ ನಾರಾಯಣನೇ! ಕಮಲಾಕ್ಷನೇ! ದಾಮೋದರನೇ! ಯದುವಂಶ ಶಿರೋಮಣಿಯಾದ ಗೋವಿಂದನೇ! ನಿನಗೆ ನಮಸ್ಕಾರ ಮಾಡುತ್ತೇವೆ. ॥6॥
(ಶ್ಲೋಕ-7)
ಮೂಲಮ್
ಏಷ ಆಯಾತಿ ಸವಿತಾ ತ್ವಾಂ ದಿದೃಕ್ಷುರ್ಜಗತ್ಪತೇ ।
ಮುಷ್ಣನ್ಗಭಸ್ತಿಚಕ್ರೇಣ ನೃಣಾಂ ಚಕ್ಷೂಂಷಿ ತಿಗ್ಮಗುಃ ॥
ಅನುವಾದ
ಜಗದೀಶ್ವರನೇ! ಇದೋ ನೋಡು. ಕೊರೈಸುವ ತನ್ನ ಕಿರಣಗಳಿಂದ ಮನುಷ್ಯರ ದೃಷ್ಟಿಗಳನ್ನೇ ಅಪಹರಿಸುತ್ತಾ ಪ್ರಚಂಡರಶ್ಮಿಯಾದ ಭಗವಾನ್ ಸೂರ್ಯನಾರಾಯಣನು ನಿನ್ನನ್ನು ಸಂದರ್ಶಿಸಲು ಆಗಮಿಸಿದ್ದಾನೆ. ॥7॥
(ಶ್ಲೋಕ-8)
ಮೂಲಮ್
ನನ್ವನ್ವಿಚ್ಛಂತಿ ತೇ ಮಾರ್ಗಂ ತ್ರಿಲೋಕ್ಯಾಂ ವಿಬುಧರ್ಷಭಾಃ ।
ಜ್ಞಾತ್ವಾದ್ಯ ಗೂಢಂ ಯದುಷು ದ್ರಷ್ಟುಂ ತ್ವಾಂ ಯಾತ್ಯಜಃ ಪ್ರಭೋ ॥
ಅನುವಾದ
ಸಮಸ್ತ ಶ್ರೇಷ್ಠದೇವತೆಗಳು ಮೂರು ಲೋಕಗಳಲ್ಲಿಯೂ ನಿನ್ನನ್ನು ಹೊಂದುವ ಮಾರ್ಗವನ್ನು ಹುಡುಕುತ್ತಲೇ ಇದ್ದಾರೆ. ಆದರೆ ನೀನು ಅವರಿಗೆ ಸಿಗುವುದಿಲ್ಲ. ನೀನು ಯಾದವರಲ್ಲಿ ನಿಗೂಢನಾಗಿರುವೆನೆಂದು ತಿಳಿದು ಸೂರ್ಯನಾರಾಯಣನೇ ನಿನ್ನ ದರ್ಶನಕ್ಕಾಗಿ ಬರುತ್ತಿದ್ದಾನೆ. ॥8॥
(ಶ್ಲೋಕ-9)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ನಿಶಮ್ಯ ಬಾಲವಚನಂ ಪ್ರಹಸ್ಯಾಂಬುಜಲೋಚನಃ ।
ಪ್ರಾಹ ನಾಸೌ ರವಿರ್ದೇವಃ ಸತ್ರಾಜಿನ್ಮಣಿನಾ ಜ್ವಲನ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ತಿಳಿವಳಿಕೆಯಿಲ್ಲದ ಜನರ ಈ ಮಾತನ್ನು ಕೇಳಿ ನಸುನಗುತ್ತಾ ಕಮಲಾಕ್ಷನಾದ ಶ್ರೀಕೃಷ್ಣನು ಹೇಳಿದನು - ಬಂಧುಗಳೇ! ಇವನು ಸೂರ್ಯದೇವನಲ್ಲ. ಸೂರ್ಯಮಣಿಯನ್ನು ಧರಿಸಿದ್ದರಿಂದ ಸತ್ರಾಜಿತನು ಹೀಗೆ ಪ್ರಕಾಶಮಾನನಾಗಿದ್ದಾನೆ. ॥9॥
(ಶ್ಲೋಕ-10)
ಮೂಲಮ್
ಸತ್ರಾಜಿತ್ ಸ್ವಗೃಹಂ ಶ್ರೀಮತ್ ಕೃತಕೌತುಕಮಂಗಲಮ್ ।
ಪ್ರವಿಶ್ಯ ದೇವಸದನೇ ಮಣಿಂ ವಿಪ್ರೈರ್ನ್ಯವೇಶಯತ್ ॥
ಅನುವಾದ
ಬಳಿಕ ಸತ್ರಾಜಿತನು ಸಮೃದ್ಧವಾದ ತನ್ನ ಮನೆಯೊಳಗೆ ಪ್ರವೇಶಿಸಿದನು. ಅವನ ಶುಭಾಗಮನಕ್ಕಾಗಿ ಮನೆಯಲ್ಲಿ ಮಂಗಳೋತ್ಸವವನ್ನು ಆಚರಿಸಿದರು. ಅವನು ಬ್ರಾಹ್ಮಣರ ಮೂಲಕ ಸ್ಯಮಂತಕಮಣಿಯನ್ನು ದೇವರ ಮನೆಯಲ್ಲಿ ಪ್ರತಿಷ್ಠಾಪಿಸಿದನು. ॥10॥
(ಶ್ಲೋಕ-11)
ಮೂಲಮ್
ದಿನೇ ದಿನೇ ಸ್ವರ್ಣಭಾರಾನಷ್ಟೌ ಸ ಸೃಜತಿ ಪ್ರಭೋ ।
ದುರ್ಭಿಕ್ಷಮಾರ್ಯರಿಷ್ಟಾನಿ ಸರ್ಪಾಧಿವ್ಯಾಧಯೋಶುಭಾಃ ।
ನ ಸಂತಿ ಮಾಯಿನಸ್ತತ್ರ ಯತ್ರಾಸ್ತೇಭ್ಯರ್ಚಿತೋ ಮಣಿಃ ॥
ಅನುವಾದ
ರಾಜೇಂದ್ರನೇ! ಆ ಮಣಿಯು ಅನುದಿನವೂ ಎಂಟು ಭಾರಗಳಷ್ಟು ಚಿನ್ನವನ್ನು ಕೊಡುತ್ತಿತ್ತು. ಆ ಮಣಿಯು ಪೂಜಿಸಲ್ಪಡುತ್ತಿದ್ದ ಪ್ರದೇಶದಲ್ಲಿ ದುರ್ಭಿಕ್ಷ್ಯ, ಮಹಾಮಾರಿ, ಗ್ರಹಪೀಡೆ, ಸರ್ಪಭಯ, ಮಾನಸಿಕ ಮತ್ತು ಶಾರೀರಿಕವಾದ ರೋಗಗಳು, ಮಾಟ-ಮಂತ್ರಗಳ ಉಪದ್ರವ ಇಂತಹ ಅಶುಭ ಪ್ರಸಂಗಗಳು ಯಾವುವೂ ಇರುತ್ತಿರಲಿಲ್ಲ. ॥11॥
(ಶ್ಲೋಕ-12)
ಮೂಲಮ್
ಸ ಯಾಚಿತೋ ಮಣಿಂ ಕ್ವಾಪಿ ಯದುರಾಜಾಯ ಶೌರಿಣಾ ।
ನೈವಾರ್ಥಕಾಮುಕಃ ಪ್ರಾದಾದ್ದ್ಯಾಂಚಾಭಂಗಮತರ್ಕಯನ್ ॥
(ಶ್ಲೋಕ-13)
ಮೂಲಮ್
ತಮೇಕದಾ ಮಣಿಂ ಕಂಠೇ ಪ್ರತಿಮುಚ್ಯ ಮಹಾಪ್ರಭಮ್ ।
ಪ್ರಸೇನೋ ಹಯಮಾರುಹ್ಯ ಮೃಗಯಾಂ ವ್ಯಚರದ್ದ್ವನೇ ॥
ಅನುವಾದ
ಒಮ್ಮೆ ಭಗವಾನ್ ಶ್ರೀಕೃಷ್ಣನು ಪ್ರಸಂಗವಶಾತ್ ಸತ್ರಾಜಿತನಿಗೆ ಹೇಳಿದನು - ‘ನೀನು ನಿನ್ನ ಈ ಮಣಿಯನ್ನು ರಕ್ಷಣೆಯ ದೃಷ್ಟಿಯಿಂದ ಉಗ್ರಸೇನ ಮಹಾರಾಜನಿಗೆ ಕೊಟ್ಟುಬಿಡು.’ ಆದರೆ ಅರ್ಥಲುಬ್ಧನಾಗಿದ್ದ ಸತ್ರಾಜಿತನು ಭಗವಂತನ ಆಜ್ಞೆಯ ಉಲ್ಲಂಘನೆ ಯಾದೀತೆಂದೂ ಯಾವ ವಿಚಾರವನ್ನು ಮಾಡದೆ ಮಣಿಯನ್ನು ಮಹಾರಾಜನಿಗೆ ಕೊಡಲಿಲ್ಲ.॥12-13॥
(ಶ್ಲೋಕ-14)
ಮೂಲಮ್
ಪ್ರಸೇನಂ ಸಹಯಂ ಹತ್ವಾ ಮಣಿಮಾಚ್ಛಿದ್ಯ ಕೇಸರೀ ।
ಗಿರಿಂ ವಿಶನ್ ಜಾಂಬವತಾ ನಿಹತೋ ಮಣಿಮಿಚ್ಛತಾ ॥
ಅನುವಾದ
ಒಂದು ದಿನ ಸತ್ರಾಜಿತನ ತಮ್ಮನಾದ ಪ್ರಸೇನನು ಆ ಪರಮ ಪ್ರಕಾಶಮಯ ಮಣಿಯನ್ನು ಕೊರಳಲ್ಲಿ ಧರಿಸಿಕೊಂಡು ಕುದುರೆಯನ್ನೇರಿ ಬೇಟೆಯಾಡುತ್ತಾ ಕಾಡಿನಲ್ಲಿ ಸಂಚರಿಸುತ್ತಿದ್ದನು. ॥14॥
(ಶ್ಲೋಕ-15)
ಮೂಲಮ್
ಸೋಪಿ ಚಕ್ರೇ ಕುಮಾರಸ್ಯ ಮಣಿಂ ಕ್ರೀಡನಕಂ ಬಿಲೇ ।
ಅಪಶ್ಯನ್ ಭ್ರಾತರಂ ಭ್ರಾತಾ ಸತ್ರಾಜಿತ್ ಪರ್ಯತಪ್ಯತ ॥
ಅನುವಾದ
ಅಲ್ಲಿ ಒಂದು ಸಿಂಹವು ಕುದುರೆ ಸಹಿತವಾಗಿ ಪ್ರಸೇನನನ್ನು ಕೊಂದು ಆ ಮಣಿಯನ್ನು ಕಿತ್ತುಕೊಂಡಿತು. ಅದು ಇನ್ನೇನು ಮಣಿಯೊಡನೆ ಗುಹೆಯನ್ನು ಪ್ರವೇಶಿಸಬೇಕೆನ್ನುವಷ್ಟರಲ್ಲಿ ಋಕ್ಷರಾಜನಾದ ಜಾಂಬವಂತನು ಮಣಿಗಾಗಿ ಆ ಸಿಂಹವನ್ನು ಕೊಂದು ಹಾಕಿದನು. ॥15॥
(ಶ್ಲೋಕ-16)
ಮೂಲಮ್
ಪ್ರಾಯಃ ಕೃಷ್ಣೇನ ನಿಹತೋ ಮಣಿಗ್ರೀವೋ ವನಂ ಗತಃ ।
ಭ್ರಾತಾ ಮಮೇತಿ ತಚ್ಛ್ರುತ್ವಾ ಕರ್ಣೇ ಕರ್ಣೇಜಪನ್ ಜನಾಃ ॥
ಅನುವಾದ
ಅವನು ಹೇಳತೊಡಗಿದನು. ‘ಪ್ರಾಯಶಃ ಮಣಿಯ ಆಸೆಯಿಂದ ಶ್ರೀಕೃಷ್ಣನೇ ನನ್ನ ತಮ್ಮನನ್ನು ಕೊಂದಿರಬೇಕು. ಏಕೆಂದರೆ ಅವನು ಮಣಿಯನ್ನು ಧರಿಸಿ ಕಾಡಿಗೆ ಹೋಗಿದ್ದನು.’ ಸತ್ರಾಜಿತನ ಈ ಮಾತನ್ನು ಕೇಳಿದ ಜನರು ಪರಸ್ಪರ ಪಿಸುಗುಟ್ಟುತ್ತಿದ್ದರು. ॥16॥
ಇದು (ಕರ್ಣಾಕರ್ಣಿಕೆಯಾಗಿ) ಶ್ರೀಕೃಷ್ಣನ ಕಿವಿಗೂ ಬಿತ್ತು. ಸುಳ್ಳು ಅಪವಾದವು ತನ್ನ ಮೇಲೆ ಬಂದಿರುವುದನ್ನು ತಿಳಿದಾಗ ಶ್ರೀಕೃಷ್ಣನು ಅಪವಾದದಿಂದ ಪಾರಾಗಲು ಹಲವಾರು ನಾಗರೀಕರೊಡನೆ ಪ್ರಸೇನನನ್ನು ಹುಡುಕಲು ವನಕ್ಕೆ ಹೊರಟನು.॥16॥
(ಶ್ಲೋಕ-17)
ಮೂಲಮ್
ಭಗವಾಂಸ್ತದುಪಶ್ರುತ್ಯ ದುರ್ಯಶೋ ಲಿಪ್ತಮಾತ್ಮನಿ ।
ಮಾರ್ಷ್ಟುಂ ಪ್ರಸೇನಪದವೀಮನ್ವಪದ್ಯತ ನಾಗರೈಃ ॥
(ಶ್ಲೋಕ-18)
ಮೂಲಮ್
ಹತಂ ಪ್ರಸೇನಮಶ್ವಂ ಚ ವೀಕ್ಷ್ಯ ಕೇಸರಿಣಾ ವನೇ ।
ತಂ ಚಾದ್ರಿಪೃಷ್ಠೇ ನಿಹತಮೃಕ್ಷೇಣ ದದೃಶುರ್ಜನಾಃ ॥
(ಶ್ಲೋಕ-19)
ಮೂಲಮ್
ಋಕ್ಷರಾಜಬಿಲಂ ಭೀಮಮಂಧೇನ ತಮಸಾವೃತಮ್ ।
ಏಕೋ ವಿವೇಶ ಭಗವಾನವಸ್ಥಾಪ್ಯ ಬಹಿಃ ಪ್ರಜಾಃ ॥
ಅನುವಾದ
ಆ ಕರಡಿಯ ಕಾಲುಗಳ ಗುರುತನ್ನು ಅನುಸರಿಸಿ ಒಂದು ಗುಹಾದ್ವಾರಕ್ಕೆ ಬಂದಾಗ ಶ್ರೀಕೃಷ್ಣನು ಜನರೆಲ್ಲರನ್ನು ಅಲ್ಲೆ ನಿಲ್ಲಿಸಿ ಒಬ್ಬಂಟಿಗನಾಗಿ ಆ ಘೋರ ಅಂಧಕಾರದಿಂದ ತುಂಬಿದ ಋಕ್ಷರಾಜನ ಭಯಂಕರ ಗುಹೆಯನ್ನು ಪ್ರವೇಶಿಸಿದನು. ॥19॥
(ಶ್ಲೋಕ-20)
ಮೂಲಮ್
ತತ್ರ ದೃಷ್ಟ್ವಾ ಮಣಿಶ್ರೇಷ್ಠಂ ಬಾಲಕ್ರೀಡನಕಂ ಕೃತಮ್ ।
ಹರ್ತುಂ ಕೃತಮತಿಸ್ತಸ್ಮಿನ್ನವತಸ್ಥೇರ್ಭಕಾಂತಿಕೇ ॥
ಅನುವಾದ
ಅಲ್ಲಿ ಆ ಶ್ರೇಷ್ಠವಾದ ಮಣಿಯು ಮಗುವಿನ ಆಟಿಕೆಯಾಗಿರುವುದನ್ನು ನೋಡಿದ ಭಗವಂತನು ಅದನ್ನು ತೆಗೆದುಕೊಂಡು ಹೋಗುವ ಇಚ್ಛೆಯಿಂದ ಆ ಮಗುವಿನ ಹತ್ತಿರ ಹೋಗಿ ನಿಂತನು. ॥20॥
(ಶ್ಲೋಕ-21)
ಮೂಲಮ್
ತಮಪೂರ್ವಂ ನರಂ ದೃಷ್ಟ್ವಾ ಧಾತ್ರೀ ಚುಕ್ರೋಶ ಭೀತವತ್ ।
ತಚ್ಛ್ರುತ್ವಾಭ್ಯದ್ರವತ್ಕ್ರುದ್ಧೋ ಜಾಂಬವಾನ್ ಬಲಿನಾಂ ವರಃ ॥
ಅನುವಾದ
ಆ ಗುಹೆಯಲ್ಲಿ ಅಪರಿಚಿತನಾದ ಮನುಷ್ಯನೊಬ್ಬನನ್ನು ಕಂಡು ಆ ಮಗುವಿನ ಸಾಕು ತಾಯಿಯು ಭಯಗೊಂಡು ಗಟ್ಟಿಯಾಗಿ ಕಿರುಚಿಕೊಂಡಳು. ಆಕೆಯ ಕೂಗನ್ನು ಕೇಳಿ ಮಹಾಬಲಿಷ್ಠನಾದ ಋಕ್ಷರಾಜ ಜಾಂಬವಂತನು ಕೋಪಗೊಂಡು ಅಲ್ಲಿಗೆ ಧಾವಿಸಿ ಬಂದನು. ॥21॥
(ಶ್ಲೋಕ-22)
ಮೂಲಮ್
ಸ ವೈ ಭಗವತಾ ತೇನ ಯುಯುಧೇ ಸ್ವಾಮಿನಾತ್ಮನಃ ।
ಪುರುಷಂ ಪ್ರಾಕೃತಂ ಮತ್ವಾ ಕುಪಿತೋ ನಾನುಭಾವವಿತ್ ॥
ಅನುವಾದ
ಪರೀಕ್ಷಿತನೇ! ಅತ್ಯಂತ ಕ್ರುದ್ಧನಾಗಿದ್ದ ಜಾಂಬವಂತನು ಆಗ ಭಗವಂತನ ಮಹಿಮೆ, ಪ್ರಭಾವ ಇವುಗಳನ್ನು ತಿಳಿಯದೇ ಹೋದನು. ಅವನನ್ನು ಒಬ್ಬ ಸಾಧಾರಣನೆಂದು ತಿಳಿದು ಜಾಂಬವಂತನು ತನ್ನ ಸ್ವಾಮಿಯಾದ ಶ್ರೀಕೃಷ್ಣನೊಡನೆ ಯುದ್ಧಮಾಡತೊಡಗಿದನು. ॥22॥
(ಶ್ಲೋಕ-23)
ಮೂಲಮ್
ದ್ವಂದ್ವಯುದ್ಧಂ ಸುತುಮುಲಮುಭಯೋರ್ವಿಜಿಗೀಷತೋಃ ।
ಆಯುಧಾಶ್ಮದ್ರುಮೈರ್ದೋರ್ಭಿಃ ಕ್ರವ್ಯಾರ್ಥೇ ಶ್ಯೇನಯೋರಿವ ॥
ಅನುವಾದ
ಮಾಂಸದ ಆಸೆಯಿಂದ ಎರಡು ಗಿಡುಗ ಪಕ್ಷಿಗಳು ಕಾದಾಡುವಂತೆಯೇ ವಿಜಯಾಭಿಲಾಷಿಗಳಾಗಿ ಶ್ರೀಕೃಷ್ಣನು ಮತ್ತು ಜಾಂಬವಂತನು ಪರಸ್ಪರ ಘೋರವಾದ ಯುದ್ಧದಲ್ಲಿ ತೊಡಗಿದರು. ಮೊದಲಿಗೆ ಅವರು ಅಸ್ತ್ರ-ಶಸ್ತ್ರಗಳಿಂದ ಪ್ರಹರಿಸಿದರೆ, ಮತ್ತೆ ಶಿಲೆಗಳಿಂದ, ಬಳಿಕ ವೃಕ್ಷಗಳಿಂದ ಕಾದಾಡುತ್ತಿದ್ದರು. ಕೊನೆಗೆ ಅವರಲ್ಲಿ ಬಾಹುಯುದ್ಧ ಪ್ರಾರಂಭವಾಯಿತು. ॥23॥
(ಶ್ಲೋಕ-24)
ಮೂಲಮ್
ಆಸೀತ್ತದಷ್ಟಾವಿಂಶಾಹಮಿತರೇತರಮುಷ್ಟಿಭಿಃ ।
ವಜ್ರನಿಷ್ಪೇಷಪರುಷೈರವಿಶ್ರಮಮಹರ್ನಿಶಮ್ ॥
ಅನುವಾದ
ಪರೀಕ್ಷಿತನೇ! ವಜ್ರಾಘಾತದಂತೆ ಕಠೋರ ಮುಷ್ಠಿಗಳಿಂದ ಪರಸ್ಪರವಾಗಿ ಹೊಡೆಯುತ್ತಾ ಇಪ್ಪತ್ತೆಂಟು ದಿನಗಳವರೆಗೆ ಅವಿಶ್ರಾಂತವಾಗಿ ಹಗಲು-ರಾತ್ರಿ ಯುದ್ಧಮಾಡಿದರು. ॥24॥
(ಶ್ಲೋಕ-25)
ಮೂಲಮ್
ಕೃಷ್ಣಮುಷ್ಟಿವಿನಿಷ್ಪಾತನಿಷ್ಪಿಷ್ಟಾಂಗೋರುಬಂಧನಃ ।
ಕ್ಷೀಣಸತ್ತ್ವಃ ಸ್ವಿನ್ನಗಾತ್ರಸ್ತಮಾಹಾತೀವ ವಿಸ್ಮಿತಃ ॥
ಅನುವಾದ
ಕೊನೆಗೆ ಭಗವಾನ್ ಶ್ರೀಕೃಷ್ಣನ ವಜ್ರಮುಷ್ಠಿಯ ಏಟುಗಳಿಂದ ಜಾಂಬವಂತನ ಶರೀರದ ಮೂಳೆಗಳು ಸಡಿಲಗೊಂಡವು. ಅಂಗಾಂಗವೆಲ್ಲವೂ ಶಿಥಿಲವಾಯಿತು. ಉತ್ಸಾಹವು ಉಡುಗಿತು. ಮೈ ಬೆವತು ಕೊಂಡಿತು. ಆಗ ಅವನು ಅತ್ಯಂತ ವಿಸ್ಮಿತನಾಗಿ ಶ್ರೀಕೃಷ್ಣನಲ್ಲಿ ಹೇಳಿದನು. ॥25॥
(ಶ್ಲೋಕ-26)
ಮೂಲಮ್
ಜಾನೇ ತ್ವಾಂ ಸರ್ವಭೂತಾನಾಂ ಪ್ರಾಣ ಓಜಃ ಸಹೋ ಬಲಮ್ ।
ವಿಷ್ಣುಂ ಪುರಾಣಪುರುಷಂ ಪ್ರಭವಿಷ್ಣುಮಧೀಶ್ವರಮ್ ॥
ಅನುವಾದ
ಪ್ರಭೋ! ನೀನೇ ಸಮಸ್ತ ಪ್ರಾಣಿಗಳ ಸ್ವಾಮಿಯೂ, ರಕ್ಷಕನೂ, ಪುರಾಣಪುರುಷ ಭಗವಾನ್ ಶ್ರೀವಿಷ್ಣುವೇ ಆಗಿರುವೆ ಎಂಬುದನ್ನು ನಾನು ತಿಳಿದುಕೊಂಡೆ. ನೀನೇ ಎಲ್ಲರ ಪ್ರಾಣ, ಇಂದ್ರಿಯಬಲ, ಮನೋಬಲ ಮತ್ತು ಶರೀರ ಬಲವೂ ಆಗಿರುವೆ. ॥26॥
(ಶ್ಲೋಕ-27)
ಮೂಲಮ್
ತ್ವಂ ಹಿ ವಿಶ್ವಸೃಜಾಂ ಸ್ರಷ್ಟಾ ಸೃಜ್ಯಾನಾಮಪಿ ಯಚ್ಚ ಸತ್ ।
ಕಾಲಃ ಕಲಯತಾಮೀಶಃ ಪರ ಆತ್ಮಾ ತಥಾತ್ಮನಾಮ್ ॥
ಅನುವಾದ
ವಿಶ್ವವನ್ನು ರಚಿಸಿದ ಬ್ರಹ್ಮಾದಿಗಳಿಗೂ ನೀನು ಸೃಷ್ಟಿಕರ್ತನಾಗಿರುವೆ. ಸೃಷ್ಟಿಸಲ್ಪಟ್ಟ ಪದಾರ್ಥಗಳಲ್ಲಿಯೂ ಸತ್ತಾರೂಪದಿಂದ ನೀನೇ ವಿರಾಜಿಸುತ್ತಿರುವೆ. ಕಾಲದ ಅವಯವಗಳೆಲ್ಲದರ ನಿಯಾಮಕನಾದ ಪರಮಕಾಲನೂ ನೀನೇ ಆಗಿರುವೆ. ಶರೀರ ಭೇದದಿಂದ ಭಿನ್ನ-ಭಿನ್ನವಾಗಿ ಕಂಡು ಬರುವ ಅಂತರಾತ್ಮಗಳ ಪರಮ ಆತ್ಮನೂ ನೀನೇ ಆಗಿರುವೆ. ॥27॥
(ಶ್ಲೋಕ-28)
ಮೂಲಮ್
ಯಸ್ಯೇಷದುತ್ಕಲಿತರೋಷಕಟಾಕ್ಷಮೋಕ್ಷೈ-
ರ್ವರ್ತ್ಮಾದಿಶತ್ ಕ್ಷುಭಿತನಕ್ರತಿಮಿಂಗಿಲೋಬ್ಧಿಃ ।
ಸೇತುಃ ಕೃತಃ ಸ್ವಯಶ ಉಜ್ಜ್ವಲಿತಾ ಚ ಲಂಕಾ
ರಕ್ಷಃಶಿರಾಂಸಿ ಭುವಿ ಪೇತುರಿಷುಕ್ಷತಾನಿ ॥
ಅನುವಾದ
ಪ್ರಭೋ! ನೀನು ನಿನ್ನ ಕಣ್ಣುಗಳ ಸ್ವಲ್ಪವೇ ಕ್ರೋಧಭಾವದಿಂದ ಸಮುದ್ರದ ಕಡೆಗೆ ನೋಡಿದಾಗ ಸಮುದ್ರದೊಳಗೆ ವಾಸಿಸುವ ತಿಮಿಂಗಿಲಗಳೂ, ಮೊಸಳೆಗಳೂ, ದೊಡ್ಡ-ದೊಡ್ಡ ಮೀನುಗಳೂ ತಲ್ಲಣಿಸಿ ಹೊದುವು ಮತ್ತು ಸಮುದ್ರರಾಜನು ನಿನಗೆ ದಾರಿಕೊಟ್ಟನು. ಆಗ ನೀನು ಅದರ ಮೇಲೆ ಸೇತುವನ್ನು ನಿರ್ಮಿಸಿ ಸುಂದರ ಯಶಸ್ಸನ್ನು ಸ್ಥಾಪಿಸಿ ಲಂಕೆಯನ್ನು ಧ್ವಂಸಗೊಳಿಸುತ್ತಾ ನಿನ್ನ ಬಾಣಗಳು ರಾಕ್ಷಸರ ತಲೆಗಳನ್ನು ಕಡಿ-ಕಡಿದು ಭೂಮಿಗೆ ಉರುಳಿಸುತ್ತಿದ್ದುದು ನನ್ನ ಸ್ಮರಣೆಗೆ ಬರುತ್ತಾ ಇದೆ. (ಖಂಡಿತವಾಗಿಯೂ ನೀನು ನನ್ನ ಸ್ವಾಮಿಯಾದ ಶ್ರೀರಾಮನೇ ಈಗ ಶ್ರೀಕೃಷ್ಣನಾಗಿ ಅವತರಿಸಿರುವೆ.) ॥28॥
(ಶ್ಲೋಕ-29)
ಮೂಲಮ್
ಇತಿ ವಿಜ್ಞಾತವಿಜ್ಞಾನಮೃಕ್ಷರಾಜಾನಮಚ್ಯುತಃ ।
ವ್ಯಾಜಹಾರ ಮಹಾರಾಜ ಭಗವಾನ್ ದೇವಕೀಸುತಃ ॥
(ಶ್ಲೋಕ-30)
ಮೂಲಮ್
ಅಭಿಮೃಶ್ಯಾರವಿಂದಾಕ್ಷಃ ಪಾಣಿನಾ ಶಂಕರೇಣ ತಮ್ ।
ಕೃಪಯಾ ಪರಯಾ ಭಕ್ತಂ ಪ್ರೇಮಗಂಭೀರಯಾ ಗಿರಾ ॥
ಅನುವಾದ
ಪರೀಕ್ಷಿತನೇ! ಋಕ್ಷರಾಜನಾದ ಜಾಂಬವಂತನು ಭಗವಂತನನ್ನು ಗುರುತಿಸಿಕೊಂಡಾಗ ಕಮಲನಯನ ಶ್ರೀಕೃಷ್ಣನು ತನ್ನ ಪರಮ ಕಲ್ಯಾಣಕಾರವಾದ, ಶೀತಲವಾದ ಕರ ಕಮಲಗಳಿಂದ ಅವನ ಶರೀರವನ್ನು ನೇವರಿಸಿದನು. ಬಳಿಕ ಶ್ರೀಕೃಷ್ಣನು ಭಕ್ತನ ವಿಷಯದಲ್ಲಿ ಪರಮಕೃಪೆಯನ್ನು ತೋರುತ್ತಾ, ಪ್ರೇಮಪೂರ್ಣವಾದ ಗಂಭೀರ ವಾಣಿಯಿಂದ ಭಕ್ತನಾದ ಜಾಂಬವಂತನಲಿ ಹೇಳಿದನು. ॥29-30॥
(ಶ್ಲೋಕ-31)
ಮೂಲಮ್
ಮಣಿಹೇತೋರಿಹ ಪ್ರಾಪ್ತಾ ವಯಮೃಕ್ಷಪತೇ ಬಿಲಮ್ ।
ಮಿಥ್ಯಾಭಿಶಾಪಂ ಪ್ರಮೃಜನ್ನಾತ್ಮನೋ ಮಣಿನಾಮುನಾ ॥
ಅನುವಾದ
ಋಕ್ಷರಾಜನಾದ ಜಾಂಬವಂತನೇ! ನಾನು ಮಣಿಗಾಗಿಯೇ ನಿನ್ನ ಈ ಗುಹೆಗೆ ಬಂದಿರುವೆನು. ಈ ಮಣಿಯಿಂದಾಗಿ ನನ್ನ ಮೇಲೆ ಬಂದಿರುವ ಸುಳ್ಳು ಅಪವಾದವನ್ನು ಹೋಗಲಾಡಿಸಲು ಬಯಸುತ್ತೇನೆ. ॥31॥
(ಶ್ಲೋಕ-32)
ಮೂಲಮ್
ಇತ್ಯುಕ್ತಃ ಸ್ವಾಂ ದುಹಿತರಂ ಕನ್ಯಾಂ ಜಾಂಬವತೀಂ ಮುದಾ ।
ಅರ್ಹಣಾರ್ಥಂ ಸ ಮಣಿನಾ ಕೃಷ್ಣಾಯೋಪಜಹಾರ ಹ ॥
ಅನುವಾದ
ಭಗವಂತನು ಹೀಗೆ ಹೇಳಿದಾಗ ಜಾಂಬವಂತನು ಅತ್ಯಂತ ಆನಂದದಿಂದ ಅವನನ್ನು ಪೂಜಿಸಿ, ತನ್ನ ಕನ್ಯೆಯಾದ ಜಾಂಬವತಿಯನ್ನು ಮಣಿಯೊಂದಿಗೆ ಶ್ರೀಕೃಷ್ಣನ ಚರಣಗಳಲ್ಲಿ ಸಮರ್ಪಿಸಿದನು. ॥32॥
(ಶ್ಲೋಕ-33)
ಮೂಲಮ್
ಅದೃಷ್ಟ್ವಾ ನಿರ್ಗಮಂ ಶೌರೇಃ ಪ್ರವಿಷ್ಟಸ್ಯ ಬಿಲಂ ಜನಾಃ ।
ಪ್ರತೀಕ್ಷ್ಯ ದ್ವಾದಶಾಹಾನಿ ದುಃಖಿತಾಃ ಸ್ವಪುರಂ ಯಯುಃ ॥
ಅನುವಾದ
ಗುಹೆಯ ಬಾಗಿಲಲ್ಲಿ ಶ್ರೀಕೃಷ್ಣನು ಬರುವುದನ್ನೇ ನಿರೀಕ್ಷಿಸುತ್ತಾ ನಿಂತಿದ್ದ ಪುರಜನರು ಹನ್ನೆರಡು ದಿವಸಗಳವರೆಗೆ ಕಾದಿದ್ದರು. ಒಳಹೋದ ಶೌರಿಯು ಗುಹೆಯಿಂದ ಹೊರಗೆ ಬಾರದಿರಲು ಅತಿದುಃಖಿತರಾಗಿ ದ್ವಾರಕೆಗೆ ಹಿಂದಿರುಗಿದರು. ॥33॥
(ಶ್ಲೋಕ-34)
ಮೂಲಮ್
ನಿಶಮ್ಯ ದೇವಕೀ ದೇವೀ ರುಕ್ಮಿಣ್ಯಾನಕದುಂದುಭಿಃ ।
ಸುಹೃದೋ ಜ್ಞಾತಯೋಶೋಚನ್ ಬಿಲಾತ್ ಕೃಷ್ಣಮನಿರ್ಗತಮ್ ॥
ಅನುವಾದ
ಹನ್ನೆರಡು ದಿವಸಗಳು ಕಳೆದರೂ ಶ್ರೀಕೃಷ್ಣನು ಗುಹೆಯಿಂದ ಹೊರಕ್ಕೆ ಬಾರದಿರುವುದನ್ನು ತಿಳಿದ ತಾಯಿಯಾದ ದೇವಕೀದೇವಿ, ತಂದೆಯಾದ ವಸುದೇವ, ರುಕ್ಮಿಣೀ, ಸುಹೃದರು, ಜ್ಞಾತಿ ಬಾಂಧವರು - ಎಲ್ಲರೂ ಬಹಳವಾಗಿ ದುಃಖಿಸಿದರು. ॥34॥
(ಶ್ಲೋಕ-35)
ಮೂಲಮ್
ಸತ್ರಾಜಿತಂ ಶಪನ್ ತಸ್ತೇ ದುಃಖಿತಾ ದ್ವಾರಕೌಕಸಃ ।
ಉಪತಸ್ಥುರ್ಮಹಾಮಾಯಾಂ ದುರ್ಗಾಂ ಕೃಷ್ಣೋಪಲಬ್ಧಯೇ ॥
ಅನುವಾದ
ದ್ವಾರಕಾವಾಸಿಗಳೆಲ್ಲರೂ ಅತ್ಯಂತ ದುಃಖಿತರಾಗಿ ಸತ್ರಾಜಿತನನ್ನು ಶಪಿಸತೊಡಗಿದರು. ಭಗವಾನ್ ಶ್ರೀಕೃಷ್ಣನು ಕ್ಷೇಮದಿಂದ ಬೇಗಬರಲೆಂದು ಮಹಾಮಾಯೆಯಾದ ದುರ್ಗಾದೇವಿಯನ್ನು ಪ್ರಾರ್ಥಿಸುತ್ತಾ, ಉಪಾಸನೆ ಮಾಡಿದರು. ॥35॥
(ಶ್ಲೋಕ-36)
ಮೂಲಮ್
ತೇಷಾಂ ತು ದೇವ್ಯಪಸ್ಥಾನಾತ್ ಪ್ರತ್ಯಾದಿಷ್ಟಾಶಿಷಾ ಸ ಚ ।
ಪ್ರಾದುರ್ಬಭೂವ ಸಿದ್ಧಾರ್ಥಃ ಸದಾರೋ ಹರ್ಷಯನ್ ಹರಿಃ ॥
ಅನುವಾದ
ಅವರ ಉಪಾಸನೆಯಿಂದ ದುರ್ಗಾದೇವಿಯು ಪ್ರಸನ್ನಳಾಗಿ ಅವರಿಗೆ ಆಶೀರ್ವಾದವನ್ನು ಕೊಟ್ಟಳು. ಅದೇ ಸಮಯದಲ್ಲಿ ಅವರ ನಡುವೆಯೇ ಸ್ಯಮಂತಕಮಣಿ ಮತ್ತು ನವವಧೂ ಜಾಂಬವತಿಯೊಂದಿಗೆ ಸಫಲ ಮನೋರಥನಾದ ಶ್ರೀಕೃಷ್ಣನು ಪ್ರಕಟನಾಗಿ ಎಲ್ಲರನ್ನು ಸಂತೋಷ ಗೊಳಿಸಿದನು. ॥36॥
(ಶ್ಲೋಕ-37)
ಮೂಲಮ್
ಉಪಲಭ್ಯ ಹೃಷೀಕೇಶಂ ಮೃತಂ ಪುನರಿವಾಗತಮ್ ।
ಸಹ ಪತ್ನ್ಯಾ ಮಣಿಗ್ರೀವಂ ಸರ್ವೇ ಜಾತಮಹೋತ್ಸವಾಃ ॥
ಅನುವಾದ
ಸ್ಯಮಂತಕ ಮಣಿಯನ್ನು ಕೊರಳಿನಲ್ಲಿ ಧರಿಸಿಕೊಂಡ ಭಗವಾನ್ ಶ್ರೀಕೃಷ್ಣನು ಪತ್ನಿಯೊಂದಿಗೆ ಬಂದಿರುವುದನ್ನು ಕಂಡು ಸತ್ತವನು ಮರಳಿ ಬದುಕಿ ಬಂದಂತೆ ದ್ವಾರಕಾವಾಸಿಗಳೆಲ್ಲರೂ ಪರಮಾನಂದದಲ್ಲಿ ಮುಳುಗಿ ಹೋದರು. ॥37॥
(ಶ್ಲೋಕ-38)
ಮೂಲಮ್
ಸತ್ರಾಜಿತಂ ಸಮಾಹೂಯ ಸಭಾಯಾಂ ರಾಜಸನ್ನಿಧೌ ।
ಪ್ರಾಪ್ತಿಂ ಚಾಖ್ಯಾಯ ಭಗವಾನ್ ಮಣಿಂ ತಸ್ಮೈ ನ್ಯವೇದಯತ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಸತ್ರಾಜಿತನನ್ನು ಉಗ್ರಸೇನ ಮಹಾರಾಜರ ರಾಜಸಭೆಗೆ ಕರೆಸಿದನು ಹಾಗೂ ಮಣಿಯು ಹೇಗೆ ಪ್ರಾಪ್ತವಾಯಿತೆಂಬ ಎಲ್ಲ ಕಥೆಯನ್ನೂ ಎಲ್ಲರೆದುರಿಗೆ ಹೇಳಿ ಆ ಮಣಿಯನ್ನು ಸತ್ರಾಜಿತನಿಗೆ ಒಪ್ಪಿಸಿದನು. ॥38॥
(ಶ್ಲೋಕ-39)
ಮೂಲಮ್
ಸ ಚಾತಿವ್ರೀಡಿತೋ ರತ್ನಂ ಗೃಹೀತ್ವಾವಾಙ್ಮುಖಸ್ತತಃ ।
ಅನುತಪ್ಯಮಾನೋ ಭವನಮಗಮತ್ ಸ್ವೇನ ಪಾಪ್ಮನಾ ॥
ಅನುವಾದ
ಇದರಿಂದ ಸತ್ರಾಜಿತನು ಅತ್ಯಂತ ಲಜ್ಜಿತನಾಗಿ ಮಣಿಯನ್ನೇನೋ ತೆಗೆದುಕೊಂಡನು; ಆದರೆ ಅವನ ಕತ್ತು ಎಲ್ಲರೆದುರಿಗೆ ಬಾಗಿಹೋಯಿತು. ತನ್ನ ಅಪರಾಧದಿಂದ ಅವನಿಗೆ ಪಶ್ಚಾತ್ತಾಪ ಉಂಟಾಗಿ ಹೇಗೋ ಮನೆಯನ್ನು ಸೇರಿಕೊಂಡನು. ॥39॥
(ಶ್ಲೋಕ-40)
ಮೂಲಮ್
ಸೋನುಧ್ಯಾಯಂಸ್ತದೇವಾಘಂ ಬಲವದ್ವಿಗ್ರಹಾಕುಲಃ ।
ಕಥಂ ಮೃಜಾಮ್ಯಾತ್ಮರಜಃ ಪ್ರಸೀದೇದ್ವಾಚ್ಯುತಃ ಕಥಮ್ ॥
ಅನುವಾದ
ಅವನ ಮನಸ್ಸಿನಲ್ಲಿ ನಿರಂತರವಾಗಿ ತನ್ನ ಅಪರಾಧವು ಕುಣಿಯುತ್ತಿತ್ತು. ಜೊತೆಗೆ ಬಲಿಷ್ಠರೊಂದಿಗೆ ಉಂಟಾದ ವಿರೋಧದಿಂದಾಗಿ ಭಯ-ಭೀತನೂ ಆದನು. ‘ನಾನು ನನ್ನ ಅಪರಾಧವನ್ನು ಹೇಗೆ ಕಳೆದುಕೊಳ್ಳಲಿ? ಭಗವಾನ್ ಶ್ರೀಕೃಷ್ಣನು ನನ್ನ ಮೇಲೆ ಹೇಗೆ ಪ್ರಸನ್ನನಾದಾನು?’ ಎಂಬುದಾಗಿ ಸದಾ ಯೋಚಿಸುತ್ತಾ ಇದ್ದನು. ॥40॥
(ಶ್ಲೋಕ-41)
ಮೂಲಮ್
ಕಿಂ ಕೃತ್ವಾ ಸಾಧು ಮಹ್ಯಂ ಸ್ಯಾನ್ನ ಶಪೇದ್ವಾ ಜನೋ ಯಥಾ ।
ಅದೀರ್ಘದರ್ಶನಂ ಕ್ಷುದ್ರಂ ಮೂಢಂ ದ್ರವಿಣಲೋಲುಪಮ್ ॥
ಅನುವಾದ
ನನ್ನ ಶ್ರೇಯಸ್ಸು ಉಂಟಾಗಿ, ಜನರು ನನ್ನನ್ನು ನಿಂದಿಸದೇ ಇರುವಂತಹ ಯಾವ ಕಾರ್ಯವನ್ನು ಮಾಡಲಿ? ನಿಜವಾಗಿ ನಾನು ಮುಂದಾಲೋಚನೆಯಿಲ್ಲದೆ ಕ್ಷುದ್ರನಾಗಿದ್ದೇನೆ. ಧನ ಲೋಭದಿಂದ ನಾನು ಬಹುದೊಡ್ಡ ಮೂಢತನದ ಕಾರ್ಯವನ್ನು ಮಾಡಿಬಿಟ್ಟೆನಲ್ಲ! ॥41॥
(ಶ್ಲೋಕ-42)
ಮೂಲಮ್
ದಾಸ್ಯೇ ದುಹಿತರಂ ತಸ್ಮೈ ಸೀರತ್ನಂ ರತ್ನಮೇವ ಚ ।
ಉಪಾಯೋಯಂ ಸಮೀಚೀನಸ್ತಸ್ಯ ಶಾಂತಿರ್ನ ಚಾನ್ಯಥಾ ॥
ಅನುವಾದ
ಈಗ ನಾನು ರಮಣಿಯರ ರತ್ನದಂತಿರುವ ನನ್ನ ಕನ್ಯೆಯಾದ ಸತ್ಯಭಾಮೆಯನ್ನು ಸ್ಯಮಂತಕ ಮಣಿಯೊಂದಿಗೆ ಶ್ರೀಕೃಷ್ಣನಿಗೆ ಕೊಟ್ಟು ಬಿಡುತ್ತೇನೆ. ಸಮೀಚೀನವಾದ ಈ ಉಪಾಯದಿಂದ ನನ್ನ ಅಪರಾಧವು ಪರಿಹಾರವಾಗುತ್ತದೆ. ಇದಲ್ಲದೆ ಬೇರೆ ಉಪಾಯವೇ ಇಲ್ಲ. ॥42॥
(ಶ್ಲೋಕ-43)
ಮೂಲಮ್
ಏವಂ ವ್ಯವಸಿತೋ ಬುದ್ಧ್ಯಾ ಸತ್ರಾಜಿತ್ ಸ್ವಸುತಾಂ ಶುಭಾಮ್ ।
ಮಣಿಂ ಚ ಸ್ವಯಮುದ್ಯಮ್ಯ ಕೃಷ್ಣಾಯೋಪಜಹಾರ ಹ ॥
ಅನುವಾದ
ಸತ್ರಾಜಿತನು ತನ್ನ ವಿವೇಕ ಬುದ್ಧಿಯಿಂದ ಹೀಗೆ ನಿಶ್ಚಯಿಸಿ ಕಾರ್ಯಪ್ರವೃತ್ತನಾದನು. ತನ್ನ ಕನ್ಯಾಮಣಿಯನ್ನು ಮತ್ತು ಸ್ಯಮಂತಕ ಮಣಿಯನ್ನು ಕೊಂಡುಹೋಗಿ ಶ್ರೀಕೃಷ್ಣನಿಗೆ ಅರ್ಪಿಸಿ ಬಿಟ್ಟನು. ॥43॥
(ಶ್ಲೋಕ-44)
ಮೂಲಮ್
ತಾಂ ಸತ್ಯಭಾಮಾಂ ಭಗವಾನ್ ಉಪಯೇಮೇ ಯಥಾವಿ ।
ಬಹುಭಿರ್ಯಾಚಿತಾಂ ಶೀಲರೂಪೌದಾರ್ಯಗುಣಾನ್ವಿತಾಮ್ ॥
ಅನುವಾದ
ಶೀಲ-ಸ್ವಭಾವ, ಸೌಂದರ್ಯ, ಔದಾರ್ಯ ಮೊದಲಾದ ಸದ್ಗುಣಗಳಿಂದ ಸಂಪನ್ನಳಾಗಿದ್ದ ಸತ್ಯಭಾಮೆಯು ನಮಗೆ ಸಿಗಲಿ ಎಂದು ಬಹಳಷ್ಟು ಜನರು ಆಶಿಸುತ್ತಿದ್ದರು ಹಾಗೂ ಬೇಡಿಕೆಯನ್ನೂ ಮುಂದಿಟ್ಟಿದ್ದರು. ಆದರೆ ಈಗ ಭಗವಾನ್ ಶ್ರೀಕೃಷ್ಣನು ವಿಧಿಪೂರ್ವಕವಾಗಿ ಆಕೆಯ ಪಾಣಿಗ್ರಹಣ ಮಾಡಿದನು. ॥44॥
(ಶ್ಲೋಕ-45)
ಮೂಲಮ್
ಭಗವಾನಾಹ ನ ಮಣಿಂ ಪ್ರತೀಚ್ಛಾಮೋ ವಯಂ ನೃಪ ।
ತವಾಸ್ತಾಂ ದೇವಭಕ್ತಸ್ಯ ವಯಂ ಚ ಲಭಾಗಿನಃ ॥
ಅನುವಾದ
ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಸತ್ರಾಜಿತನಿಗೆ ಹೇಳಿದನು- ‘ನಾನು ಈ ಸ್ಯಮಂತಕಮಣಿಯನ್ನು ತೆಗೆದುಕೊಳ್ಳುವುದಿಲ್ಲ. ನೀನು ಸೂರ್ಯ ಭಗವಂತನ ಭಕ್ತನಾಗಿರುವೆ. ಆದ್ದರಿಂದ ಅದು ನಿನ್ನ ಬಳಿಯಲ್ಲೇ ಇರಲಿ. ನಾವಾದರೋ ಅದರ ಫಲಕ್ಕೆ ಅರ್ಥಾತ್ ಅದರಿಂದ ದೊರಕುವ ಚಿನ್ನಕ್ಕೆ, ಅಧಿಕಾರಿಗಳಾಗಿದ್ದೇವೆ. ಅದನ್ನಷ್ಟು ನಮಗೆ ಕೊಡುತ್ತಾ ಬಾ. ॥45॥
ಅನುವಾದ (ಸಮಾಪ್ತಿಃ)
ಐವತ್ತಾರನೆಯ ಅಧ್ಯಾಯವು ಮುಗಿಯಿತು. ॥56॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ
ಸ್ಯಮಂತಕೋಪಾಖ್ಯಾನೇ ಷಟ್ ಪಂಚಾಶತ್ತಮೋಽಧ್ಯಾಯಃ ॥56॥