[ಐವತ್ತೈದನೇಯ ಅಧ್ಯಾಯ]
ಭಾಗಸೂಚನಾ
ಪ್ರದ್ಯುಮ್ನನ ಜನ್ಮ - ಶಂಬರಾಸುರನ ವಧೆ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಕಾಮಸ್ತು ವಾಸುದೇವಾಂಶೋ ದಗ್ಧಃ ಪ್ರಾಗ್ರುದ್ರಮನ್ಯುನಾ ।
ದೇಹೋಪಪತ್ತಯೇ ಭೂಯಸ್ತಮೇವ ಪ್ರತ್ಯಪದ್ಯತ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ರುದ್ರನಕ್ರೋಧಾಗ್ನಿಯಿಂದ ದಗ್ಧನಾಗಿ ಹೋಗಿದ್ದ ಕಾಮದೇವನು ಪುನಃ ಶರೀರವನ್ನು ಹೊಂದುವುದಕ್ಕಾಗಿ, ವಾಸುದೇವನ ಅಂಶನಾದ ಅವನು ತನ್ನ ಅಂಶೀ ವಾಸುದೇವನನ್ನೇ ಆಶ್ರಯಿಸಿದನು. ॥1॥
(ಶ್ಲೋಕ-2)
ಮೂಲಮ್
ಸ ಏವ ಜಾತೋ ವೈದರ್ಭ್ಯಾಂ ಕೃಷ್ಣವೀರ್ಯಸಮುದ್ಭವಃ ।
ಪ್ರದ್ಯುಮ್ನ ಇತಿ ವಿಖ್ಯಾತಃ ಸರ್ವತೋನವಮಃ ಪಿತುಃ ॥
ಅನುವಾದ
ಅದೇ ಕಾಮದೇವನು ಈ ಬಾರಿ ಶ್ರೀಕೃಷ್ಣನಿಂದ ರುಕ್ಮಿಣೀದೇವಿಯಲ್ಲಿ ಹುಟ್ಟಿ ಪ್ರದ್ಯುಮ್ನನೆಂಬ ಹೆಸರಿನಿಂದ ಪ್ರಸಿದ್ಧನಾದನು. ಸೌಂದರ್ಯದಿಂದಾಗಲೀ, ವೀರ್ಯ-ಪರಾಕ್ರಮದಿಂದಾಗಲೀ, ಸೌಶೀಲ್ಯಾದಿ ಗುಣಗಳಿಂದಾಗಲೀ ಅವನು ಶ್ರೀಕೃಷ್ಣನಿಂದ ಯಾವ ವಿಧದಿಂದಲೂ ಕಡಿಮೆಯಾಗಿರಲಿಲ್ಲ. ॥2॥
(ಶ್ಲೋಕ-3)
ಮೂಲಮ್
ತಂ ಶಂಬರಃ ಕಾಮರೂಪೀ ಹೃತ್ವಾ ತೋಕಮನಿರ್ದಶಮ್ ।
ಸ ವಿದಿತ್ವಾತ್ಮನಃ ಶತ್ರುಂ ಪ್ರಾಸ್ಯೋದನ್ವತ್ಯಗಾದ್ಗೃಹಮ್ ॥
ಅನುವಾದ
ಬಾಲಕ ಪ್ರದ್ಯುಮ್ನನಿಗೆ ಇನ್ನೂ ಹತ್ತು ದಿನಗಳಾದಾಗಲೇ ಇವನೇ ತನ್ನ ಭಾವೀ ಶತ್ರುವೆಂದು ತಿಳಿದಿದ್ದ ಕಾಮರೂಪಿಯಾದ ಶಂಬರಾಸುರನು ವೇಷವನ್ನು ಮರೆಸಿ ಸೂತಿಕಾಗೃಹದಿಂದ ಅವನನ್ನು ಕದ್ದುಕೊಂಡು ಹೋಗಿ ಸಮುದ್ರಕ್ಕೆಸೆದು ತನ್ನ ಮನೆಗೆ ಹೊರಟು ಹೋದನು. ॥3॥
(ಶ್ಲೋಕ-4)
ಮೂಲಮ್
ತಂ ನಿರ್ಜಗಾರ ಬಲವಾನ್ ಮೀನಃ ಸೋಪ್ಯಪರೈಃ ಸಹ ।
ವೃತೋ ಜಾಲೇನ ಮಹತಾ ಗೃಹೀತೋ ಮತ್ಸ್ಯಜೀವಿಭಿಃ ॥
ಅನುವಾದ
ಬಾಲಕ ಪ್ರದ್ಯುಮ್ನನನ್ನು ಸಮುದ್ರದಲ್ಲಿ ಒಂದು ದೊಡ್ಡ ಮೀನು ನುಂಗಿಬಿಟ್ಟಿತು. ಮೀನು ಹಿಡಿಯುವ ಬೆಸ್ತರು ದೊಡ್ಡದೊಂದು ಬಲೆಯನ್ನು ಬೀಸಿ ಇತರ ಮೀನುಗಳ ಜೊತೆಗೆ ಈ ಮೀನನ್ನು ಹಿಡಿದರು. ॥4॥
(ಶ್ಲೋಕ-5)
ಮೂಲಮ್
ತಂ ಶಂಬರಾಯ ಕೈವರ್ತಾ ಉಪಾಜಹ್ರುರುಪಾಯನಮ್ ।
ಸೂದಾ ಮಹಾನಸಂ ನೀತ್ವಾವದ್ಯನ್ ಸ್ವಧಿತಿನಾದ್ಭುತಮ್ ॥
ಅನುವಾದ
ಪ್ರದ್ಯುಮ್ನನನ್ನು ನುಂಗಿದ ಆ ದೊಡ್ಡ ಮೀನನ್ನು ಬೆಸ್ತರು ಶಂಬರಾಸುರನಿಗೆ ಕಾಣಿಕೆಯಾಗಿ ಒಪ್ಪಿಸಿದರು. ಶಂಬರಾಸುರನ ಪಾಚಕರು ಆ ಅದ್ಭುತವಾದ ಮೀನನ್ನು ಅಡಿಗೆ ಮನೆಗೆ ಕೊಂಡುಹೋಗಿ ಕತ್ತಿಯಿಂದ ಕತ್ತರಿಸ ತೊಡಗಿದರು. ॥5॥
(ಶ್ಲೋಕ-6)
ಮೂಲಮ್
ದೃಷ್ಟ್ವಾ ತದುದರೇ ಬಾಲಂ ಮಾಯಾವತ್ಯೈ ನ್ಯವೇದಯನ್ ।
ನಾರದೋಕಥಯತ್ ಸರ್ವಂ ತಸ್ಯಾಃ ಶಂಕಿತಚೇತಸಃ ।
ಬಾಲಸ್ಯ ತತ್ತ್ವಮುತ್ಪತ್ತಿಂ ಮತ್ಸ್ಯೋದರನಿವೇಶನಮ್ ॥
ಅನುವಾದ
ಅಡಿಗೆಯವರು ಆ ಮೀನಿನ ಹೊಟ್ಟೆಯಲ್ಲಿ ಸುಂದರವಾದ ಬಾಲಕನನ್ನು ನೋಡಿ ಆಶ್ಚರ್ಯದಿಂದ ಮಾಯಾವತಿ ಎಂಬ ದಾಸಿಗೆ ಅದನ್ನು ಒಪ್ಪಿಸಿದರು. ಆಕೆಗೆ ಈ ಮಗುವು ಯಾರದ್ದಾಗಿರಬಹುದು? ಎಂಬ ಜಿಜ್ಞಾಸೆ ಉಂಟಾಯಿತು. ಆಗ ನಾರದ ಮಹರ್ಷಿಗಳು ಬಂದು ಆ ಮಾಯಾವತಿಗೆ ಈ ಬಾಲಕನು ಸಾಕ್ಷಾತ್ ಕಾಮದೇವನೇ ಆಗಿರುವನು. ಶ್ರೀಕೃಷ್ಣನ ಪತ್ನೀ ರುಕ್ಮಿಣಿಯ ಗರ್ಭದಿಂದ ಜನಿಸಿದವನು. ಬಳಿಕ ಮೀನಿನ ಹೊಟ್ಟೆಗೆ ಸೇರಿದುದನ್ನು ಹೀಗೆ ಎಲ್ಲವನ್ನು ತಿಳಿಸಿದರು. ॥6॥
(ಶ್ಲೋಕ-7)
ಮೂಲಮ್
ಸಾ ಚ ಕಾಮಸ್ಯ ವೈ ಪತ್ನೀ ರತಿರ್ನಾಮ ಯಶಸ್ವಿನೀ ।
ಪತ್ಯುರ್ನಿರ್ದಗ್ಧದೇಹಸ್ಯ ದೇಹೋತ್ಪತ್ತಿಂ ಪ್ರತೀಕ್ಷತೀ ॥
ಅನುವಾದ
ಪರೀಕ್ಷಿತನೇ! ಆ ಮಾಯಾವತಿಯು ಕಾಮದೇವನ ಪತ್ನಿಯಾದ ಯಶಸ್ವಿನೀ ರತಿದೇವಿಯೇ ಆಗಿದ್ದಳು. ರುದ್ರನ ಕ್ರೋಧಾಗ್ನಿಯಿಂದ ಕಾಮದೇವನು ಭಸ್ಮವಾದಾಗಿನಿಂದ ಆಕೆಯು ಅನಂಗನಾದ ಅವನು ಸಶರೀರನಾಗಿ ಪುನಃ ಹುಟ್ಟುವುದನ್ನೇ ನಿರೀಕ್ಷಿಸುತ್ತಿದ್ದಳು. ॥7॥
(ಶ್ಲೋಕ-8)
ಮೂಲಮ್
ನಿರೂಪಿತಾ ಶಂಬರೇಣ ಸಾ ಸೂಪೌದನಸಾಧನೇ ।
ಕಾಮದೇವಂ ಶಿಶುಂ ಬುದ್ಧ್ವಾ ಚಕ್ರೇ ಸ್ನೇಹಂ ತದಾರ್ಭಕೇ ॥
ಅನುವಾದ
ಶಂಬಾಸುರನು ಆಕೆಯನ್ನು ಅನ್ನ-ತೊವ್ವೆ ಮಾಡುವ ಅಡಿಗೆಯವಳಾಗಿ ನಿಯಮಿಸಿಕೊಂಡಿದ್ದನು. ಶಿಶುರೂಪದಿಂದ ಇರುವ ಈ ಮಗುವು ತನ್ನ ಪತಿಯೇ ಎಂದು ಭಾವಿಸಿ ಅವನನ್ನು ಬಹುವಾಗಿ ಪ್ರೀತಿಸತೊಡಗಿದಳು. ॥8॥
(ಶ್ಲೋಕ-9)
ಮೂಲಮ್
ನಾತಿದೀರ್ಘೇಣ ಕಾಲೇನ ಸ ಕಾರ್ಷ್ಣೀ ರೂಢಯೌವನಃ ।
ಜನಯಾಮಾಸ ನಾರೀಣಾಂ ವೀಕ್ಷಂತೀನಾಂ ಚ ವಿಭ್ರಮಮ್ ॥
ಅನುವಾದ
ಸ್ವಲ್ಪ ದಿವಸಗಳಲ್ಲಿಯೇ ಶ್ರೀಕೃಷ್ಣಕುಮಾರನಾದ ಪ್ರದ್ಯುಮ್ನನು ಯುವಕನಾದನು. ಅವನ ಅದ್ಭುತವಾದ ರೂಪ-ಲಾವಣ್ಯಗಳು ಅವನನ್ನು ನೋಡಿದ ಸ್ತ್ರೀಯರ ಮನಸ್ಸಿನಲ್ಲಿ ಶೃಂಗಾರರಸವು ಉಕ್ಕೇರುತ್ತಿತ್ತು. ॥9॥
(ಶ್ಲೋಕ-10)
ಮೂಲಮ್
ಸಾ ತಂ ಪತಿಂ ಪದ್ಮದಲಾಯತೇಕ್ಷಣಂ
ಪ್ರಲಂಬ ಬಾಹುಂ ನರಲೋಕಸುಂದರಮ್ ।
ಸವ್ರೀಡಹಾಸೋತ್ತಭಿತಭ್ರುವೇಕ್ಷತೀ
ಪ್ರೀತ್ಯೋಪತಸ್ಥೇ ರತಿರಂಗ ಸೌರತೈಃ ॥
ಅನುವಾದ
ಕಮಲದಳದಂತೆ ಕೋಮಲವಾದ ಮತ್ತು ವಿಶಾಲವಾದ ಕಣ್ಣುಗಳು ಉಳ್ಳವನಾಗಿಯೂ, ಆಜಾನುಬಾಹುವಾಗಿಯೂ, ಮನುಷ್ಯ ಲೋಕದಲ್ಲೇ ಅತ್ಯಂತ ಸುಂದರನೂ ಆಗಿದ್ದ ಪ್ರದ್ಯುಮ್ನನನ್ನು ರತಿದೇವಿಯು ತನ್ನ ಪತಿಯಾಗಿ ಭಾವಿಸಿ, ಕಟಾಕ್ಷವೀಕ್ಷಣ, ನಾಚಿಕೆಯಿಂದ ಕೂಡಿದ ಮಂದಹಾಸ, ಹುಬ್ಬು ಹಾರಿಸುವುದು ಮುಂತಾದ ಸುರತಕ್ರೀಡಾ ಲಕ್ಷಣಗಳಿಂದ ಪ್ರೇಮದಿಂದ ಅವನನ್ನು ಮೋಹಿಸಿದಳು. ॥10॥
(ಶ್ಲೋಕ-11)
ಮೂಲಮ್
ತಾಮಾಹ ಭಗವಾನ್ ಕಾರ್ಷ್ಣಿರ್ಮಾತಸ್ತೇ ಮತಿರನ್ಯಥಾ ।
ಮಾತೃಭಾವಮತಿಕ್ರಮ್ಯ ವರ್ತಸೇ ಕಾಮಿನೀ ಯಥಾ ॥
ಅನುವಾದ
ಶ್ರೀಕೃಷ್ಣನಂದನ ಭಗವಾನ್ ಪ್ರದ್ಯುಮ್ನನು ಆಕೆಯ ಭಾವಗಳಲ್ಲಿ ಆದ ಪರಿವರ್ತನೆಗಳನ್ನು ಗಮನಿಸಿ - ದೇವಿ! ನೀನಾದರೋ ನನಗೆ ತಾಯಿಯಂತೆಯೇ ಇರುವೆ. ನಿನ್ನ ಬುದ್ಧಿಯು ಹೀಗೆ ವಿಪರೀತವೇಕೆ ಆಯಿತು? ಮಾತೃಭಾವವನ್ನು ಬಿಟ್ಟು ಕಾಮಿನಿಯಂತಹ ಹಾವ ಭಾವಗಳನ್ನು ನೀನು ತೋರಿಸುತ್ತಿರುವೆ. ಹೀಗೇಕೆ? ॥11॥
(ಶ್ಲೋಕ-12)
ಮೂಲಮ್ (ವಾಚನಮ್)
ರತಿರುವಾಚ
ಮೂಲಮ್
ಭವಾನ್ ನಾರಾಯಣಸುತಃ ಶಂಬರೇಣಾಹೃತೋ ಗೃಹಾತ್ ।
ಅಹಂ ತೇಧಿಕೃತಾ ಪತ್ನೀ ರತಿಃ ಕಾಮೋ ಭವಾನ್ ಪ್ರಭೋ ॥
ಅನುವಾದ
ರತಿಯು ಹೇಳಿದಳು — ಸ್ವಾಮಿಯೇ! ನೀವು ಸಾಕ್ಷಾತ್ ನಾರಾಯಣನ ಪುತ್ರರಾಗಿರುವಿರಿ. ಶಂಬರಾಸುರನು ನಿಮ್ಮನ್ನು ಸೂತಿಕಾಗೃಹದಿಂದ ಕದ್ದು ತಂದಿದ್ದನು. ನೀವು ನನ್ನ ಪತಿ ಸಾಕ್ಷಾತ್ ಕಾಮದೇವರೇ ಆಗಿರುವಿರಿ. ನಾನು ನಿಮ್ಮ ಅಧಿಕೃತ ಪತ್ನಿಯಾದ ರತಿಯಾಗಿರುವೆನು. ॥12॥
(ಶ್ಲೋಕ-13)
ಮೂಲಮ್
ಏಷ ತ್ವಾನಿರ್ದಶಂ ಸಿಂಧಾವಕ್ಷಿಪಚ್ಛಂಬರೋಸುರಃ ।
ಮತ್ಸ್ಯೋಗ್ರಸೀತ್ತದುದರಾದಿಹ ಪ್ರಾಪ್ತೋ ಭವಾನ್ ಪ್ರಭೋ ॥
ಅನುವಾದ
ನನ್ನ ಸ್ವಾಮಿಯೇ! ನಿಮಗಿನ್ನು ಹತ್ತು ದಿವಸಗಳು ತುಂಬುವುದರೊಳಗೆ ಈ ಶಂಬರಾಸುರನು ನಿಮ್ಮನ್ನು ಅಪಹರಿಸಿ ಸಮುದ್ರಕ್ಕೆ ಎಸೆದು ಬಿಟ್ಟಿದ್ದನು. ಅಲ್ಲಿ ಒಂದು ಮೀನು ನಿಮ್ಮನ್ನು ನುಂಗಿಬಿಟ್ಟಿತು. ಅದರ ಹೊಟ್ಟೆಯಿಂದ ತಾವು ಇಲ್ಲಿ ನನಗೆ ದೊರೆತಿರುವಿರಿ. ॥13॥
(ಶ್ಲೋಕ-14)
ಮೂಲಮ್
ತಮಿಮಂ ಜಹಿ ದುರ್ಧರ್ಷಂ ದುರ್ಜಯಂ ಶತ್ರುಮಾತ್ಮನಃ ।
ಮಾಯಾಶತವಿದಂ ತ್ವಂ ಚ ಮಾಯಾಭಿರ್ಮೋಹನಾದಿಭಿಃ ॥
ಅನುವಾದ
ಈ ಶಂಬರಾಸುರನು ನೂರಾರು ಪ್ರಕಾರದ ಮಾಯಾವಿದ್ಯೆಗಳನ್ನು ಬಲ್ಲವನು. ಇವನನ್ನು ವಶಪಡಿಸಿಕೊಳ್ಳುವುದು ಅಥವಾ ಗೆಲ್ಲುವುದು ಬಹಳ ಕಠಿಣವಾಗಿದೆ. ತಾವು ಈ ನಿಮ್ಮ ಶತ್ರುವನ್ನು ಮೋಹನವೇ ಮೊದಲಾದ ಮಾಯೆಗಳ ಮೂಲಕವಾಗಿ ನಾಶಮಾಡಿಬಿಡಿರಿ. ॥14॥
(ಶ್ಲೋಕ-15)
ಮೂಲಮ್
ಪರಿಶೋಚತಿ ತೇ ಮಾತಾ ಕುರರೀವ ಗತಪ್ರಜಾ ।
ಪುತ್ರಸ್ನೇಹಾಕುಲಾ ದೀನಾ ವಿವತ್ಸಾ ಗೌರಿವಾತುರಾ ॥
ಅನುವಾದ
ಪ್ರಿಯತಮನೇ! ಮಗುವನ್ನು ಕಳಕೊಂಡ ನಿಮ್ಮ ತಾಯಿಯು-ಮರಿಯನ್ನು ಕಳಕೊಂಡ ಕುಕರಿಪಕ್ಷಿಯಂತೆ ಅಥವಾ ಕರುವನ್ನು ಕಳಕೊಂಡ ಹಸುವಿನಂತೆ ಪುತ್ರಸ್ನೇಹದಿಂದ ವ್ಯಾಕುಲಳಾಗಿ, ದುಃಖಾತುರಳಾಗಿ ಹಗಲೂ ರಾತ್ರಿ ಚಿಂತಿಸುತ್ತಿರುವಳು. ॥15॥
(ಶ್ಲೋಕ-16)
ಮೂಲಮ್
ಪ್ರಭಾಷ್ಯೈವಂ ದದೌ ವಿದ್ಯಾಂ ಪ್ರದ್ಯುಮ್ನಾಯ ಮಹಾತ್ಮನೇ ।
ಮಾಯಾವತೀ ಮಹಾಮಾಯಾಂ ಸರ್ವಮಾಯಾವಿನಾಶಿನೀಮ್ ॥
ಅನುವಾದ
ಹೀಗೆ ಹೇಳಿ ಮಾಯಾವತಿಯಾಗಿದ್ದ ರತಿಯು ಪರಮಶಕ್ತಿಶಾಲಿಯಾದ ಪ್ರದ್ಯುಮ್ನನಿಗೆ ‘ಮಹಾಮಾಯಾ’ ಎಂಬ ವಿದ್ಯೆಯನ್ನು ಕಲಿಸಿಕೊಟ್ಟಳು. ಇದು ಎಲ್ಲ ಪ್ರಕಾರದ ಮಾಯೆಗಳನ್ನು ನಾಶ ಮಾಡುವಂತಹ ವಿದ್ಯೆಯಾಗಿದೆ. ॥16॥
(ಶ್ಲೋಕ-17)
ಮೂಲಮ್
ಸ ಚ ಶಂಬರಮಭ್ಯೇತ್ಯ ಸಂಯುಗಾಯ ಸಮಾಹ್ವಯತ್ ।
ಅವಿಷಹ್ಯೈಸ್ತಮಾಕ್ಷೇಪೈಃ ಕ್ಷಿಪನ್ ಸಂಜನಯನ್ ಕಲಿಮ್ ॥
ಅನುವಾದ
ಆಗ ಪ್ರದ್ಯುಮ್ನನು ಶಂಬರಾಸುರನ ಬಳಿಗೆ ಹೋಗಿ ಅವನೊಡನೆ ಜಗಳವಾಡುವ ಉದ್ದೇಶದಿಂದ ಸಹಿಸಲಾಗದ ಕಟು ಮಾತುಗಳಿಂದ ಅವನನ್ನು ಆಕ್ಷೇಪಿಸಿದನು. ಇಷ್ಟೆ ಅಲ್ಲ ಕೊನೆಗೆ ಅವನನ್ನು ಯುದ್ಧಕ್ಕಾಗಿ ಆಹ್ವಾನಿಸಿಯೇ ಬಿಟ್ಟನು. ॥17॥
(ಶ್ಲೋಕ-18)
ಮೂಲಮ್
ಸೋಧಿಕ್ಷಿಪ್ತೋ ದುರ್ವಚೋಭಿಃ ಪಾದಾಹತ ಇವೋರಗಃ ।
ನಿಶ್ಚಕ್ರಾಮ ಗದಾಪಾಣಿರಮರ್ಷಾತ್ತಾಮ್ರಲೋಚನಃ ॥
ಅನುವಾದ
ಪ್ರದ್ಯುಮ್ನನ ಕಟುವಚನಗಳಿಂದ ಶಂಬರಾಸುರನು ಕಾಲಿನಿಂದ ಮೆಟ್ಟಿದ ಸರ್ಪದಂತೆ ಕೋಪದಿಂದ ಕಿಡಿ-ಕಿಡಿಯಾದನು. ಅವನ ಕಣ್ಣುಗಳು ಕ್ರೋಧಾಗ್ನಿಯಿಂದ ಕೆಂಪಾಗಿ, ಕೈಯಲ್ಲಿ ಗದೆಯನ್ನು ಹಿಡಿದು ಕೊಂಡು ಯುದ್ಧಕ್ಕಾಗಿ ಹೊರಟೇ ಬಿಟ್ಟನು. ॥18॥
(ಶ್ಲೋಕ-19)
ಮೂಲಮ್
ಗದಾಮಾವಿಧ್ಯ ತರಸಾ ಪ್ರದ್ಯುಮ್ನಾಯ ಮಹಾತ್ಮನೇ ।
ಪ್ರಕ್ಷಿಪ್ಯ ವ್ಯನದನ್ನಾದಂ ವಜ್ರನಿಷ್ಪೇಷನಿಷ್ಠುರಮ್ ॥
ಅನುವಾದ
ಅವನು ತನ್ನ ಗದೆಯನ್ನು ಗಿರ-ಗಿರನೆ ತಿರುಗಿಸುತ್ತಾ ವಜ್ರಾಘಾತದಂತೆ ಕರ್ಕಶವಾಗಿ ಸಿಂಹನಾದವನ್ನು ಮಾಡುತ್ತಾ ಪ್ರದ್ಯುಮ್ನನ ಮೇಲೆ ಆ ಗದೆಯನ್ನು ಪ್ರಯೋಗಿಸಿದನು. ॥19॥
(ಶ್ಲೋಕ-20)
ಮೂಲಮ್
ತಾಮಾಪತಂತೀಂ ಭಗವಾನ್ ಪ್ರದ್ಯುಮ್ನೋ ಗದಯಾ ಗದಾಮ್ ।
ಅಪಾಸ್ಯ ಶತ್ರವೇ ಕ್ರುದ್ಧಃ ಪ್ರಾಹಿಣೋತ್ ಸ್ವಗದಾಂ ನೃಪ ॥
ಅನುವಾದ
ಪರೀಕ್ಷಿತನೇ! ಶಂಬರಾಸುರನ ಗದೆಯು ಅತಿವೇಗವಾಗಿ ತನ್ನೆಡೆಗೆ ಬರುತ್ತಿರುವುದನ್ನು ನೋಡಿದ ಪ್ರದ್ಯುಮ್ನನು ತನ್ನ ಗದೆಯಿಂದ ಹೊಡೆದು ಅವನ ಗದೆಯನ್ನು ಬೀಳಿಸಿ, ಕ್ರೋಧಗೊಂಡು ಅವನ ಮೇಲೆ ಗದಾಪ್ರಹಾರ ಮಾಡಿದನು. ॥20॥
(ಶ್ಲೋಕ-21)
ಮೂಲಮ್
ಸ ಚ ಮಾಯಾಂ ಸಮಾಶ್ರಿತ್ಯ ದೈತೇಯೀಂ ಮಯದರ್ಶಿತಾಮ್ ।
ಮುಮುಚೇಸಮಯಂ ವರ್ಷಂ ಕಾರ್ಷ್ಣೌ ವೈಹಾಯಸೋಸುರಃ ॥
ಅನುವಾದ
ಆಗ ಆ ದೈತ್ಯನು ಮಯಾಸುರನು ಕಲಿಸಿಕೊಟ್ಟ ಆಸುರೀಮಾಯೆಯನ್ನು ಆಶ್ರಯಿಸಿ ಆಕಾಶಕ್ಕೆ ಹೋಗಿ ಅಲ್ಲಿಂದಲೇ ಪ್ರದ್ಯುಮ್ನನ ಮೇಲೆ ಅಸ್ತ್ರ-ಶಸ್ತ್ರಗಳನ್ನು ಪ್ರಯೋಗಿಸತೊಡಗಿದನು. ॥21॥
(ಶ್ಲೋಕ-22)
ಮೂಲಮ್
ಬಾಧ್ಯಮಾನೋಸವರ್ಷೇಣ ರೌಕ್ಮಿಣೇಯೋ ಮಹಾರಥಃ ।
ಸತ್ತ್ವಾತ್ಮಿಕಾಂ ಮಹಾವಿದ್ಯಾಂ ಸರ್ವಮಾಯೋಪಮರ್ದಿನೀಮ್ ॥
ಅನುವಾದ
ಮಹಾರಥನಾದ ಪ್ರದ್ಯುಮ್ನನು ಶಂಬರಾಸುರನ ಮಾಯಾಮಯವಾದ ಶಸ್ತ್ರಾಸ್ತ್ರಗಳಿಂದ ಪೀಡಿತನಾದಾಗ ಸಮಸ್ತ ಮಾಯೆಯನ್ನು ಶಾಂತಗೊಳಿಸುವಂತಹ ಸತ್ತ್ವಮಯಿಯಾದ ಮಹಾವಿದ್ಯೆಯನ್ನು ಪ್ರಯೋಗಿಸಿದನು. ॥22॥
(ಶ್ಲೋಕ-23)
ಮೂಲಮ್
ತತೋ ಗೌಹ್ಯಕಗಾಂಧರ್ವಪೈಶಾಚೌರಗರಾಕ್ಷಸೀಃ ।
ಪ್ರಾಯುಂಕ್ತ ಶತಶೋ ದೈತ್ಯಃ ಕಾರ್ಷ್ಣಿರ್ವ್ಯಧಮಯತ್ ಸ ತಾಃ ॥
ಅನುವಾದ
ಅನಂತರ ಶಂಬರಾಸುರನು ಯಕ್ಷ, ಗಂಧರ್ವ, ಪಿಶಾಚ, ನಾಗ ಮತ್ತು ರಾಕ್ಷಸರ ನೂರಾರು ಮಾಯೆಗಳನ್ನು ಪ್ರಯೋಗಿಸಿದನು. ಆದರೆ ಶ್ರೀಕೃಷ್ಣಕುಮಾರ ಪ್ರದ್ಯುಮ್ನನು ತನ್ನ ಮಹಾವಿದ್ಯೆಯಿಂದ ಅದೆಲ್ಲವನ್ನೂ ನಾಶಮಾಡಿಬಿಟ್ಟನು. ॥23॥
(ಶ್ಲೋಕ-24)
ಮೂಲಮ್
ನಿಶಾತಮಸಿಮುದ್ಯಮ್ಯ ಸ ಕಿರೀಟಂ ಸಕುಂಡಲಮ್ ।
ಶಂಬರಸ್ಯ ಶಿರಃ ಕಾಯಾತ್ ತಾಮ್ರಶ್ಮಶ್ರ್ವೋಜಸಾಹರತ್ ॥
ಅನುವಾದ
ಬಳಿಕ ಅವನು ಒಂದು ಹರಿತವಾದ ಖಡ್ಗವನ್ನೆತ್ತಿಕೊಂಡು ಕಿರೀಟ ಕುಂಡಲಗಳಿಂದ ಸುಶೋಭಿತವಾದ, ಕೆಂಪಾದ ಗಡ್ಡ-ಮೀಸೆಗಳಿಂದ ಭಯಂಕರವಾಗಿದ್ದ ಶಂಬರಾಸುರನ ತಲೆಯನ್ನು ಕತ್ತರಿಸಿ ಹಾಕಿದನು. ॥24॥
(ಶ್ಲೋಕ-25)
ಮೂಲಮ್
ಆಕೀರ್ಯಮಾಣೋ ದಿವಿಜೈಃ ಸ್ತುವದ್ಭಿಃ ಕುಸುಮೋತ್ಕರೈಃ ।
ಭಾರ್ಯಯಾಂಬರಚಾರಿಣ್ಯಾ ಪುರಂ ನೀತೋ ವಿಹಾಯಸಾ ॥
ಅನುವಾದ
ದೇವತೆಗಳು ಪ್ರದ್ಯುಮ್ನನ ಮೇಲೆ ಪುಷ್ಪವೃಷ್ಟಿ ಮಾಡುತ್ತಾ ಸ್ತೋತ್ರ ಮಾಡತೊಡಗಿದರು. ಬಳಿಕ ಆಕಾಶಸಂಚಾರವನ್ನು ತಿಳಿದಿದ್ದ ರತಿದೇವಿಯು ಪ್ರದ್ಯುಮ್ನನನ್ನು ಆಕಾಶಮಾರ್ಗದಿಂದ ದ್ವಾರಕೆಗೆ ಕೊಂಡುಹೋದಳು. ॥25॥
(ಶ್ಲೋಕ-26)
ಮೂಲಮ್
ಅಂತಃಪುರವರಂ ರಾಜನ್ ಲಲನಾಶತಸಂಕುಲಮ್ ।
ವಿವೇಶ ಪತ್ನ್ಯಾ ಗಗನಾದ್ವದ್ಯುತೇವ ಬಲಾಹಕಃ ॥
ಅನುವಾದ
ಪರೀಕ್ಷಿತನೇ! ಮೇಘದೊಡನಿರುವ ಮಿಂಚಿನಂತೆ ಪ್ರದ್ಯುಮ್ನನು ಪತ್ನೀ ಸಮೇತನಾಗಿ ಆಕಾಶದಿಂದ ಕೆಳಗಿಳಿದು ನೂರಾರು ಲಲನೆಯರಿಂದ ಸಮಾಕುಲವಾಗಿದ್ದ, ಶ್ರೇಷ್ಠವಾದ ಅಂತಃಪುರವನ್ನು ಪ್ರವೇಶಿಸಿದನು. ॥26॥
(ಶ್ಲೋಕ-27)
ಮೂಲಮ್
ತಂ ದೃಷ್ಟ್ವಾ ಜಲದಶ್ಯಾಮಂ ಪೀತಕೌಶೇಯವಾಸಸಮ್ ।
ಪ್ರಲಂಬಬಾಹುಂ ತಾಮ್ರಾಕ್ಷಂ ಸುಸ್ಮಿತಂ ರುಚಿರಾನನಮ್ ॥
(ಶ್ಲೋಕ-28)
ಮೂಲಮ್
ಸ್ವಲಂಕೃತಮುಖಾಂಭೋಜಂ ನೀಲವಕ್ರಾಲಕಾಲಿಭಿಃ ।
ಕೃಷ್ಣಂ ಮತ್ವಾ ಸಿಯೋ ಹ್ರೀತಾ ನಿಲಿಲ್ಯುಸ್ತತ್ರ ತತ್ರ ಹ ॥
ಅನುವಾದ
ನೀಲಮೇಘ ಶ್ಯಾಮನಾಗಿಯೂ, ರೇಷ್ಮೆಯ ಪೀತಾಂಬರವನ್ನುಟ್ಟಿದ್ದ, ಆಜಾನುಬಾಹುವಾದ, ಎಣ್ಣೆಗೆಂಪಾದ ಕಣ್ಣುಗಳಿಂದ ಕೂಡಿದ್ದ, ಮಂದಹಾಸವನ್ನು ಬೀರುತ್ತಿದ್ದ ಸುಂದರ ಮುಖಾರವಿಂದನಾಗಿದ್ದ, ಕಪ್ಪಾದ ಗುಂಗುರು ಕೂದಲುಗಳಿಂದ ಸಮಲಂಕೃತವಾದ ಮುಖಕಮಲದಿಂದ ಬೆಳಗುತ್ತಿದ್ದ ಪ್ರದ್ಯುಮ್ನನನ್ನು ಕಂಡು ಅಂತಃಪುರದ ನಾರಿಯರು ಕೃಷ್ಣನೇ ಬಂದನೆಂಬ ಭ್ರಾಂತಿಯಿಂದ ನಾಚಿಕೆಗೊಂಡು ಅಲ್ಲಲ್ಲಿಯೇ ಅಡಗಿ ಕೊಂಡರು. ॥27-28॥
(ಶ್ಲೋಕ-29)
ಮೂಲಮ್
ಅವಧಾರ್ಯ ಶನೈರೀಷದ್ವೈಲಕ್ಷಣ್ಯೇನ ಯೋಷಿತಃ ।
ಉಪಜಗ್ಮುಃ ಪ್ರಮುದಿತಾಃ ಸಸೀರತ್ನಂ ಸುವಿಸ್ಮಿತಾಃ ॥
ಅನುವಾದ
ಸ್ವಲ್ಪ ಹೊತ್ತಾದ ಬಳಿಕ ಶ್ರೀಕೃಷ್ಣನಿಗಿಂತಲೂ ಇವನಲ್ಲಿ ಸ್ವಲ್ಪ ವೈಲಕ್ಷಣ್ಯವಿದ್ದುದರಿಂದ ಇವನು ಕೃಷ್ಣನಲ್ಲವೆಂದು ತಿಳಿದು ಆನಂದ-ವಿಸ್ಮಯದಿಂದ ಶ್ರೇಷ್ಠರಾದ ನೂತನ ದಂಪತಿಗಳ ಬಳಿಗೆ ಹೋದರು. ॥29॥
(ಶ್ಲೋಕ-30)
ಮೂಲಮ್
ಅಥ ತತ್ರಾಸಿತಾಪಾಂಗೀ ವೈದರ್ಭೀ ವಲ್ಗುಭಾಷಿಣೀ ।
ಅಸ್ಮರತ್ ಸ್ವಸುತಂ ನಷ್ಟಂ ಸ್ನೇಹಸ್ನುತಪಯೋಧರಾ ॥
ಅನುವಾದ
ಅದೇ ಸಮಯಕ್ಕೆ ಸರಿಯಾಗಿ, ಕಪ್ಪಾದ ಕಣ್ಣುಗಳುಳ್ಳ, ಮಧುರ ಭಾಷಿಣಿಯಾದ ರುಕ್ಮಿಣೀದೇವಿಯು ಅಲ್ಲಿಗೆ ಬಂದಳು. ನೂತನ ದಂಪತಿಗಳನ್ನು ನೋಡಿದೊಡನೆಯೇ ಆಕೆಗೆ ಕಳೆದು ಹೋಗಿದ್ದ ಪುತ್ರನ ಸ್ಮರಣೆಯಾಗಿ, ವಾತ್ಸಲ್ಯಾಧಿಕ್ಯದಿಂದ ಅವಳ ಸ್ತನಗಳಲ್ಲಿ ಹಾಲು ಸ್ರವಿಸತೊಡಗಿತು. ॥30॥
(ಶ್ಲೋಕ-31)
ಮೂಲಮ್
ಕೋ ನ್ವಯಂ ನರವೈದೂರ್ಯಃ ಕಸ್ಯ ವಾ ಕಮಲೇಕ್ಷಣಃ ।
ಧೃತಃ ಕಯಾ ವಾ ಜಠರೇ ಕೇಯಂ ಲಬ್ಧಾ ತ್ವನೇನ ವಾ ॥
ಅನುವಾದ
ರುಕ್ಮಿಣಿಯು ಹಾಗೆಯೇ ಯೋಚಿಸತೊಡಗಿದಳು. ಈ ರತ್ನಪ್ರಾಯನಾದ ತರುಣನು ಯಾರು? ಕಮಲನಯನನಾದ ಇವನು ಯಾರ ಪುತ್ರನಾಗಿರಬಹುದು? ಯಾವ ಮಹಾ ಸೌಭಾಗ್ಯವತಿಯು ಇವನನ್ನು ಗರ್ಭದಲ್ಲಿ ಧರಿಸಿದ್ದಿರಬಹುದು? ಯಾವ ಸೌಭಾಗ್ಯವತಿಯು ಇವನನ್ನು ಪತಿಯನ್ನಾಗಿ ವರಿಸಿರಬಹುದು? ॥31॥
(ಶ್ಲೋಕ-32)
ಮೂಲಮ್
ಮಮ ಚಾಪ್ಯಾತ್ಮಜೋ ನಷ್ಟೋ ನೀತೋ ಯಃ ಸೂತಿಕಾಗೃಹಾತ್ ।
ಏತತ್ತುಲ್ಯವಯೋರೂಪೋ ಯದಿ ಜೀವತಿ ಕುತ್ರಚಿತ್ ॥
ಅನುವಾದ
ನನ್ನದೊಂದು ಎಳೆಗಂಡು ಮಗು ಕಳೆದುಹೋಗಿತ್ತು. ಸೂತಿಕಾಗೃಹದಿಂದ ಯಾರು ಅಪಹರಿಸಿಕೊಂಡು ಹೋದರೋ ತಿಳಿಯದು. ಅವನೇನಾದರೂ ಬದುಕಿದ್ದರೆ ಇವನಂತೆಯೇ ನವಯುವಕನೂ, ರೂಪವಂತನೂ ಆಗಿರುತ್ತಿದ್ದನು. ॥32॥
(ಶ್ಲೋಕ-33)
ಮೂಲಮ್
ಕಥಂ ತ್ವನೇನ ಸಂಪ್ರಾಪ್ತಂ ಸಾರೂಪ್ಯಂ ಶಾಂರ್ಗಧನ್ವನಃ ।
ಆಕೃತ್ಯಾವಯವೈರ್ಗತ್ಯಾ ಸ್ವರಹಾಸಾವಲೋಕನೈಃ ॥
ಅನುವಾದ
ಶಾರ್ಙ್ಗಧನ್ವನಾದ ಶ್ರೀಕೃಷ್ಣನ ಸಾರೂಪ್ಯವು ಇವನಿಗೆ ಹೇಗೆ ಪ್ರಾಪ್ತವಾಯಿತು? ಆಕೃತಿಯಲ್ಲಿ, ಅವಯವಗಳಲ್ಲಿ, ನಡಿಗೆಯಲ್ಲಿ, ಸ್ವರದಲ್ಲಿ ಮಂದಹಾಸಯುಕ್ತವಾದ ನೋಟದಲ್ಲಿ ಇವನು ಶ್ರೀಕೃಷ್ಣನಂತೆಯೇ ಇದ್ದಾನಲ್ಲ? ಇದು ಹೇಗೆ ಸಾಧ್ಯವಾಯಿತು? ॥33॥
(ಶ್ಲೋಕ-34)
ಮೂಲಮ್
ಸ ಏವ ವಾ ಭವೇನ್ನೂನಂ ಯೋ ಮೇ ಗರ್ಭೇ ಧೃತೋರ್ಭಕಃ ।
ಅಮುಷ್ಮಿನ್ ಪ್ರೀತಿರಧಿಕಾ ವಾಮಃ ಸ್ಫುರತಿ ಮೇ ಭುಜಃ ॥
ಅನುವಾದ
ಏನೇ ಇರಲಿ, ನಾನು ಗರ್ಭದಲ್ಲಿ ಧರಿಸಿದ್ದ ಶಿಶುವು ನಿಶ್ಚಯವಾಗಿಯೂ ಇವನೇ ಆಗಿರಬೇಕು! ಇವನನ್ನು ನೋಡುತ್ತಿದ್ದಂತೆ ನನಗೆ ಇವನ ಮೇಲೆ ವಾತ್ಸಲ್ಯವು ಹೆಚ್ಚುತ್ತಿದ್ದು, ಶುಭಸೂಚಕವಾಗಿ ನನ್ನ ಎಡ ಭುಜವೂ ಅದುರುತ್ತಿದೆ. ॥34॥
(ಶ್ಲೋಕ-35)
ಮೂಲಮ್
ಏವಂ ಮೀಮಾಂಸಮಾನಾಯಾಂ ವೈದರ್ಭ್ಯಾಂ ದೇವಕೀಸುತಃ ।
ದೇವಕ್ಯಾನಕದುಂದುಭ್ಯಾಮುತ್ತಮಶ್ಲೋಕ ಆಗಮತ್ ॥
ಅನುವಾದ
ಪರೀಕ್ಷಿತನೇ! ಹೀಗೆ ರುಕ್ಮಿಣಿಯು ತನ್ನ ಮನಸ್ಸಿನಲ್ಲಿಯೇ ತರ್ಕಿಸುತ್ತಿರಲಾಗಿ ದೇವಕಿಯ ಮಗನಾದ, ಪವಿತ್ರಕೀರ್ತಿಯಾದ ಶ್ರೀಕೃಷ್ಣನು ವಸುದೇವ-ದೇವಕಿಯರೊಡನೆ ಅಲ್ಲಿಗೆ ಆಗಮಿಸಿದನು. ॥35॥
(ಶ್ಲೋಕ-36)
ಮೂಲಮ್
ವಿಜ್ಞಾತಾರ್ಥೋಪಿ ಭಗವಾನ್ತೂಷ್ಣೀಮಾಸ ಜನಾರ್ದನಃ ।
ನಾರದೋಕಥಯತ್ ಸರ್ವಂ ಶಂಬರಾಹರಣಾದಿಕಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಎಲ್ಲವನ್ನೂ ಬಲ್ಲವನಾಗಿದ್ದರೂ ಸುಮ್ಮನೆ ನಿಂತುಕೊಂಡಿದ್ದನು. ಅಷ್ಟರಲ್ಲಿ ದೇವರ್ಷಿಗಳಾದ ನಾರದರು ಅಲ್ಲಿಗೆ ಬಂದು - ಪ್ರದ್ಯುಮ್ನನನ್ನು ಶಂಬರಾಸುರನು ಅಪಹರಿಸಿದುದು, ಸಮುದ್ರಕ್ಕೆ ಎಸೆದುದು, ಮುಂತಾದ ನಡೆದ ಎಲ್ಲ ಘಟನೆಗಳನ್ನು ವಿಸ್ತಾರವಾಗಿ ತಿಳಿಯಪಡಿಸಿದನು. ॥36॥
(ಶ್ಲೋಕ-37)
ಮೂಲಮ್
ತಚ್ಛ್ರುತ್ವಾ ಮಹದಾಶ್ಚರ್ಯಂ ಕೃಷ್ಣಾಂತಃಪುರಯೋಷಿತಃ ।
ಅಭ್ಯನಂದನ್ ಬಹೂನಬ್ದಾನ್ನಷ್ಟಂ ಮೃತಮಿವಾಗತಮ್ ॥
ಅನುವಾದ
ನಾರದರಿಂದ ಈ ಆಶ್ಚರ್ಯಕರ ಘಟನೆಯನ್ನು ಕೇಳಿದ ಶ್ರೀಕೃಷ್ಣನ ಅಂತಃಪುರದ ನಾರಿಯರು ಆಶ್ಚರ್ಯ ಚಕಿತರಾಗಿ ಅನೇಕ ವರ್ಷಗಳಿಂದ ಕಳೆದುಹೋಗಿ ಮರಳಿ ಬಂದಿರುವ ಪ್ರದ್ಯುಮ್ನನನ್ನು ನೋಡಿ ಸತ್ತುಹೋದವನು ಮರಳಿ ಬದುಕಿದಂತೆ ಅಭಿನಂದಿಸತೊಡಗಿದರು. ॥37॥
(ಶ್ಲೋಕ-38)
ಮೂಲಮ್
ದೇವಕೀ ವಸುದೇವಶ್ಚ ಕೃಷ್ಣರಾವೌ ತಥಾ ಸಿಯಃ ।
ದಂಪತೀ ತೌ ಪರಿಷ್ವಜ್ಯ ರುಕ್ಮಿಣೀ ಚ ಯಯುರ್ಮುದಮ್ ॥
ಅನುವಾದ
ವಸುದೇವ-ದೇವಕಿಯರು, ಶ್ರೀಕೃಷ್ಣ - ಬಲರಾಮರು, ರುಕ್ಮಿಣೀದೇವಿಯು ಹಾಗೂ ಇತರ ಸ್ತ್ರೀಯರೆಲ್ಲರೂ ನವದಂಪತಿಗಳನ್ನು ಆಲಿಂಗಿಸಿಕೊಂಡು ಆನಂದಿತರಾದರು. ॥38॥
(ಶ್ಲೋಕ-39)
ಮೂಲಮ್
ನಷ್ಟಂ ಪ್ರದ್ಯುಮ್ನಮಾಯಾತ ಮಾಕರ್ಣ್ಯ ದ್ವಾರಕೌಕಸಃ ।
ಅಹೋ ಮೃತ ಇವಾಯಾತೋ ಬಾಲೋ ದಿಷ್ಟ್ಯೇತಿ ಹಾಬ್ರುವನ್ ॥
ಅನುವಾದ
ಕಳೆದುಹೋದ ಪ್ರದ್ಯುಮ್ನನು ಮರಳಿ ಬಂದಿರುವನೆಂದು ತಿಳಿದಾಗ ದ್ವಾರಕೆಯ ನರ-ನಾರಿಯರು ಪರಸ್ಪರವಾಗಿ ಮಾತನಾಡಿಕೊಂಡರು ; ಆಹಾ! ಈ ಬಾಲಕನು ಸತ್ತು ಮರಳಿ ಬಂದಂತೆಯೇ ಎಂತಹ ಸೌಭಾಗ್ಯದ ಮಾತಾಗಿದೆ. ॥39॥
(ಶ್ಲೋಕ-40)
ಮೂಲಮ್
ಯಂ ವೈ ಮುಹುಃ ಪಿತೃಸರೂಪನಿಜೇಶಭಾವಾಃ
ತನ್ಮಾತರೋ ಯದಭಜನ್ ರಹರೂಢಭಾವಾಃ ।
ಚಿತ್ರಂ ನ ತತ್ ಖಲು ರಮಾಸ್ಪದಬಿಂಬಬಿಂಬೇ
ಕಾಮೇ ಸ್ಮರೇಕ್ಷಿವಿಷಯೇ ಕಿಮುತಾನ್ಯನಾರ್ಯಃ ॥
ಅನುವಾದ
ಪರೀಕ್ಷಿತನೇ! ಪ್ರದ್ಯುಮ್ನನ ರೂಪ- ಸೌಂದರ್ಯಗಳು ಶ್ರೀಕೃಷ್ಣನ ರೂಪ-ಸೌಂದರ್ಯಗಳಿಗೆ ಎಷ್ಟು ಅನುರೂಪವಾಗಿತ್ತೆಂದರೆ, ಪ್ರದ್ಯುಮ್ನನನ್ನು ನೋಡಿದ ಶ್ರೀಕೃಷ್ಣನ ಪತ್ನೀಯರು ಕೆಲವೊಮ್ಮೆ ಶ್ರೀಕೃಷ್ಣನೇ ಬಂದಿರುವನೆಂದು ಭ್ರಮಿಸುತ್ತಿದ್ದರು. ಹೀಗಿರುವಾಗ ಲಕ್ಷ್ಮಿದೇವಿಗೆ ಆಶ್ರಯನಾದ ಶ್ರೀಕೃಷ್ಣನ ಪ್ರತಿಬಿಂಬ ಸ್ವರೂಪನಾದ ಕಾಮಾವತಾರನಾದ ಪ್ರದ್ಯುಮ್ನನನ್ನು ನೋಡಿದ ಇತರ ಸ್ತ್ರೀಯರ ಸ್ಥಿತಿಯು ವಿಚಿತ್ರವಾಗುತ್ತಿತ್ತು, ಎಂಬುದರಲ್ಲಿ ಹೇಳುವುದೇನಿದೆ? ॥40॥
ಅನುವಾದ (ಸಮಾಪ್ತಿಃ)
ಐವತ್ತೈದನೆಯ ಅಧ್ಯಾಯವು ಮುಗಿಯಿತು. ॥55॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ
ಪ್ರದ್ಯುಮ್ನೋತ್ಪತ್ತಿನಿರೂಪಣಂ ನಾಮ ಪಂಚಪಂಚಾಶತ್ತಮೋಽಧ್ಯಾಯಃ ॥55॥