೫೩

[ಐವತ್ತಮೂರನೇಯ ಅಧ್ಯಾಯ]

ಭಾಗಸೂಚನಾ

ರುಕ್ಮಿಣೀ ಕಲ್ಯಾಣ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ವೈದರ್ಭ್ಯಾಃ ಸ ತು ಸಂದೇಶಂ ನಿಶಮ್ಯ ಯದುನಂದನಃ ।
ಪ್ರಗೃಹ್ಯ ಪಾಣಿನಾ ಪಾಣಿಂ ಪ್ರಹಸನ್ನಿದಮಬ್ರವೀತ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ವಿದರ್ಭ ರಾಜಪುತ್ರಿಯಾದ ರುಕ್ಮಿಣಿಯ ಈ ಸಂದೇಶವನ್ನು ಕೇಳಿ ಯದುವಂಶಜನಾದ ಶ್ರೀಕೃಷ್ಣನು ತನ್ನ ಕೈಯಿಂದ ಬ್ರಾಹ್ಮಣನ ಕೈಯನ್ನು ಹಿಡಿದುಕೊಂಡು ನಗುತ್ತಾ ಇಂತೆಂದನು. ॥1॥

(ಶ್ಲೋಕ-2)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ತಥಾಹಮಪಿ ತಚ್ಚಿತ್ತೋ ನಿದ್ರಾಂ ಚ ನ ಲಭೇ ನಿಶಿ ।
ವೇದಾಹಂ ರುಕ್ಮಿಣಾ ದ್ವೇಷಾನ್ಮಮೋದ್ವಾಹೋ ನಿವಾರಿತಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ಬ್ರಾಹ್ಮಣೋತ್ತಮರೇ! ವಿದರ್ಭರಾಜಕುಮಾರಿಯು ನನ್ನನ್ನು ಬಯಸುವಂತೆಯೇ ನಾನು ಆಕೆಯನ್ನು ಬಯಸುತ್ತಿರುವೆನು. ನನ್ನ ಮನಸ್ಸು ಅವಳಲ್ಲೇ ನೆಲೆಸಿಬಿಟ್ಟಿದೆ. ರಾತ್ರಿಯಲ್ಲಿ ನನಗೆ ನಿದ್ದೆಯೇ ಬರುವುದಿಲ್ಲ. ರುಕ್ಮಿಯು ದ್ವೇಷದಿಂದ ನನ್ನ ವಿವಾಹವನ್ನು ತಡೆಯುತ್ತಿದ್ದಾನೆ ಎಂಬುದನ್ನು ನಾನು ಬಲ್ಲೆನು. ॥2॥

(ಶ್ಲೋಕ-3)

ಮೂಲಮ್

ತಾಮಾನಯಿಷ್ಯ ಉನ್ಮಥ್ಯ ರಾಜನ್ಯಾಪಸದಾನ್ ಮೃಧೇ ।
ಮತ್ಪರಾಮನವದ್ಯಾಂಗೀಮೇಧಸೋಗ್ನಿಶಿಖಾಮಿವ ॥

ಅನುವಾದ

ಆದರೆ ವಿಪ್ರೋತ್ತಮರೇ! ಎರಡು ಅರಣಿಗಳನ್ನು ಮಥಿಸಿ ಅಗ್ನಿಯನ್ನು ಹೊರತರುವಂತೆಯೇ ಯುದ್ಧದಲ್ಲಿ ಹೆಸರಾಂತ ಕ್ಷತ್ರಿಯ ಕುಲಕಲಂಕರಾದ ಶಿಶುಪಾಲ, ಜರಾಸಂಧರೇ ಮೊದಲಾದವರನ್ನು ಮಥಿಸಿ ನನ್ನಲ್ಲಿಯೇ ಆಸಕ್ತಳಾಗಿರುವ ಪರಮಸುಂದರಿಯಾದ ರುಕ್ಮಿಣಿಯನ್ನು ಕರೆತರುತ್ತೇನೆ. ॥3॥

(ಶ್ಲೋಕ-4)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಉದ್ವಾಹರ್ಕ್ಷಂ ಚ ವಿಜ್ಞಾಯ ರುಕ್ಮಿಣ್ಯಾ ಮಧುಸೂದನಃ ।
ರಥಃ ಸಂಯುಜ್ಯತಾಮಾಶು ದಾರುಕೇತ್ಯಾಹ ಸಾರಥಿಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಮಧುಸೂದನ ಶ್ರೀಕೃಷ್ಣನು ಬ್ರಾಹ್ಮಣನಿಗೆ ಹೀಗೆ ಹೇಳಿ ರುಕ್ಮಿಣಿಯ ವಿವಾಹದ ಮುಹೂರ್ತವನ್ನು ಅವನಿಂದ ತಿಳಿದುಕೊಂಡು ಪ್ರಯಾಣಕ್ಕಾಗಿ ರಥವನ್ನು ಬೇಗನೇ ಸಿದ್ಧಗೊಳಿಸುವಂತೆ ಸಾರಥಿಯಾದ ದಾರುಕನಿಗೆ ಹೇಳಿದನು. ॥4॥

(ಶ್ಲೋಕ-5)

ಮೂಲಮ್

ಸ ಚಾಶ್ವೈಃ ಶೈಬ್ಯಸುಗ್ರೀವಮೇಘಪುಷ್ಪಬಲಾಹಕೈಃ ।
ಯುಕ್ತಂ ರಥಮುಪಾನೀಯ ತಸ್ಥೌ ಪ್ರಾಂಜಲಿರಗ್ರತಃ ॥

ಅನುವಾದ

ದಾರುಕನು ಭಗವಂತನ ರಥಕ್ಕೆ ಶೈಬ್ಯ-ಸುಗ್ರೀವ-ಮೇಘ ಪುಷ್ಪ ಮತ್ತು ಬಲಾಹಕಗಳೆಂಬ ದಿವ್ಯ ಕುದುರೆಗಳನ್ನು ಹೂಡಿ, ಸಜ್ಜುಗೊಳಿಸಿ ಕೈ ಜೋಡಿಸಿಕೊಂಡು ಶ್ರೀಕೃಷ್ಣನ ಮುಂದೆ ನಿಂತುಕೊಂಡನು.॥5॥

(ಶ್ಲೋಕ-6)

ಮೂಲಮ್

ಆರುಹ್ಯ ಸ್ಯಂದನಂ ಶೌರಿರ್ದ್ವಿಜಮಾರೋಪ್ಯ ತೂರ್ಣಗೈಃ ।
ಆನರ್ತಾದೇಕರಾತ್ರೇಣ ವಿದರ್ಭಾನಗಮದ್ಧಯೈಃ ॥

ಅನುವಾದ

ಶೌರಿಯು ಮೊದಲು ಬ್ರಾಹ್ಮಣನನ್ನು ರಥದಲ್ಲಿ ಹತ್ತಿಸಿ, ತಾನೂ ರಥಾರೂಢನಾಗಿ ಶೀಘ್ರಗಾಮಿಗಳಾದ ಕುದುರೆಗಳ ಮೂಲಕ ಒಂದೇ ರಾತ್ರಿಯಲ್ಲಿ ಆನರ್ತದೇಶದಿಂದ ವಿದರ್ಭದೇಶಕ್ಕೆ ಬಂದು ತಲುಪಿದನು. ॥6॥

(ಶ್ಲೋಕ-7)

ಮೂಲಮ್

ರಾಜಾ ಸ ಕುಂಡಿನಪತಿಃ ಪುತ್ರಸ್ನೇಹವಶಂ ಗತಃ ।
ಶಿಶುಪಾಲಾಯ ಸ್ವಾಂ ಕನ್ಯಾಂ ದಾಸ್ಯನ್ ಕರ್ಮಾಣ್ಯಕಾರಯತ್ ॥

ಅನುವಾದ

ಕುಂಡಿನನರೇಶನಾದ ಭೀಷ್ಮಕನು ತನ್ನ ಮಗನಾದ ರುಕ್ಮಿಯ ಮೇಲಿನ ವ್ಯಾಮೋಹದಿಂದ ಅವನ ಮಾತಿನಂತೆ ತನ್ನ ಕನ್ಯೆಯಾದ ರುಕ್ಮಿಣಿಯನ್ನು ಶಿಶುಪಾಲನಿಗೆ ಕೊಟ್ಟು ಮದುವೆಮಾಡಲು ವಿವಾಹೋತ್ಸವದ ಸಿದ್ಧತೆಗಳನ್ನು ಮಾಡತೊಡಗಿದನು. ॥7॥

(ಶ್ಲೋಕ-8)

ಮೂಲಮ್

ಪುರಂ ಸಮ್ಮೃಷ್ಟಸಂಸಿಕ್ತಮಾರ್ಗರಥ್ಯಾಚತುಷ್ಪಥಮ್ ।
ಚಿತ್ರಧ್ವಜಪತಾಕಾಭಿಸ್ತೋರಣೈಃ ಸಮಲಂಕೃತಮ್ ॥

ಅನುವಾದ

ಕುಂಡಿನ ನಗರದ ರಾಜಬೀದಿಗಳನ್ನು, ನಾಲ್ಕು ಬೀದಿಗಳು ಸೇರುವ ಚೌಕಗಳನ್ನು, ಗುಡಿಸಿ ಸಾರಿಸಿ, ಗಂಧೋದಕವನ್ನು ಎರಚಲಾಗಿತ್ತು. ಚಿತ್ರ-ವಿಚಿತ್ರವಾದ ಧ್ವಜಗಳಿಂದಲೂ, ಪತಾಕೆಗಳಿಂದಲೂ, ತೋರಣಗಳಿಂದಲೂ ಸಿಂಗರಿಸಿತ್ತು. ॥80॥

(ಶ್ಲೋಕ-9)

ಮೂಲಮ್

ಸ್ರಗ್ಗಂಧಮಾಲ್ಯಾಭರಣೈರ್ವಿರಜೋಂಬರಭೂಷಿತೈಃ ।
ಜುಷ್ಟಂ ಸೀಪುರುಷೈಃ ಶ್ರೀಮದ್ಗೃಹೈರಗುರುಧೂಪಿತೈಃ ॥

ಅನುವಾದ

ಅಲ್ಲಿಯ ಸ್ತ್ರೀ-ಪುರುಷರೆಲ್ಲರೂ ಪುಷ್ಪಹಾರಗಳಿಂದಲೂ, ಸುಗಂಧಯುಕ್ತವಾದ ಮಾಲೆಗಳಿಂದಲೂ, ನಾನಾವಿಧವಾದ ಸ್ವರ್ಣಾಭರಣಗಳಿಂದಲೂ, ನವೀನ ವಸ್ತ್ರಗಳಿಂದಲೂ ಭೂಷಿತರಾಗಿದ್ದರು. ಅಂದವಾದ ಮನೆಗಳಿಂದ ಅಗರು - ಚಂದನದ ಸುಗಂಧವು ಹೊರಸೂಸುತ್ತಿತ್ತು. ॥9॥

(ಶ್ಲೋಕ-10)

ಮೂಲಮ್

ಪಿತೃನ್ ದೇವಾನ್ ಸಮಭ್ಯರ್ಚ್ಯ ವಿಪ್ರಾಂಶ್ಚ ವಿಧಿವನ್ನೃಪ ।
ಭೋಜಯಿತ್ವಾ ಯಥಾನ್ಯಾಯಂ ವಾಚಯಾಮಾಸ ಮಂಗಲಮ್ ॥

ಅನುವಾದ

ಪರೀಕ್ಷಿತನೇ! ಮಹಾರಾಜನಾದ ಭೀಷ್ಮಕನು ದೇವ-ಪಿತೃಗಳನ್ನು ಯಥಾವಿಧಿಯಾಗಿ ಪೂಜಿಸಿ ಬ್ರಾಹ್ಮಣರಿಗೆ ಭೋಜನವನ್ನು ಮಾಡಿಸಿ, ನಿಯಮಾನುಸಾರ ಸ್ವಸ್ತಿವಾಚನವನ್ನು ಮಾಡಿಸಿದನು. ॥10॥

(ಶ್ಲೋಕ-11)

ಮೂಲಮ್

ಸುಸ್ನಾತಾಂ ಸುದತೀಂ ಕನ್ಯಾಂ ಕೃತಕೌತುಕಮಂಗಲಾಮ್ ।
ಅಹತಾಂಶುಕಯುಗ್ಮೇನ ಭೂಷಿತಾಂ ಭೂಷಣೋತ್ತಮೈಃ ॥

ಅನುವಾದ

ಸುಂದರವಾದ ಹಲ್ಲುಗಳಿಂದ ಶೋಭಿಸುತ್ತಿದ್ದ ಪರಮಸುಂದರಿಯಾದ ರುಕ್ಮಿಣೀದೇವಿಗೆ ಮಂಗಳಸ್ನಾನವನ್ನು ಮಾಡಿಸಿ, ನೂತನವಸಗಳನ್ನುಡಿಸಿ, ದಿವ್ಯಾಭರಣಗಳನ್ನು ತೊಡಿಸಿ, ಕೈಗಳಿಗೆ ಮಂಗಳಕರವಾದ ಕಂಕಣವನ್ನು ಕಟ್ಟಿದರು. ॥11॥

(ಶ್ಲೋಕ-12)

ಮೂಲಮ್

ಚಕ್ರುಃ ಸಾಮರ್ಗ್ಯಜುರ್ಮಂತ್ರೈರ್ವಧ್ವಾ ರಕ್ಷಾಂ ದ್ವಿಜೋತ್ತಮಾಃ ।
ಪುರೋಹಿತೋಥರ್ವವಿದ್ವೈ ಜುಹಾವ ಗ್ರಹಶಾಂತಯೇ ॥

ಅನುವಾದ

ದ್ವಿಜಶ್ರೇಷ್ಠರು ಋಗ್ಯಜುಃ ಸಾಮ ಮಂತ್ರಗಳಿಂದ ನವವಧುವಿಗೆ ರಕ್ಷಾಬಂಧನವನ್ನು ಮಾಡಿದರು. ಅಥರ್ವ ವೇದದ ವಿದ್ವಾಂಸರಾದ ಪುರೋಹಿತರು ಗ್ರಹಶಾಂತಿಗಾಗಿ ಹೋಮವನ್ನು ಮಾಡಿದರು. ॥12॥

(ಶ್ಲೋಕ-13)

ಮೂಲಮ್

ಹಿರಣ್ಯರೂಪ್ಯವಾಸಾಂಸಿ ತಿಲಾಂಶ್ಚ ಗುಡಮಿಶ್ರಿತಾನ್ ।
ಪ್ರಾದಾದ್ಧೇನೂಂಶ್ಚ ವಿಪ್ರೇಭ್ಯೋ ರಾಜಾ ವಿಧಿವಿದಾಂ ವರಃ ॥

ಅನುವಾದ

ವಿಧಿನಿಯಮಗಳನ್ನು ಬಲ್ಲವರಲ್ಲಿ ಶ್ರೇಷ್ಠನಾದ ಭೀಷ್ಮಕಮಹಾರಾಜನು ಬ್ರಾಹ್ಮಣರಿಗೆ ಚಿನ್ನವನ್ನು, ಬೆಳ್ಳಿಯನ್ನು, ವಸ್ತ್ರಗಳನ್ನು, ಬೆಲ್ಲದೊಡನೆ ಸೇರಿಸಿದ ಎಳ್ಳನ್ನು, ಗೋವುಗಳನ್ನು ದಾನಮಾಡಿದನು.॥13॥

(ಶ್ಲೋಕ-14)

ಮೂಲಮ್

ಏವಂ ಚೇದಿಪತೀ ರಾಜಾ ದಮಘೋಷಃ ಸುತಾಯ ವೈ ।
ಕಾರಯಾಮಾಸ ಮಂತ್ರಜ್ಞೈಃ ಸರ್ವಮಭ್ಯುದಯೋಚಿತಮ್ ॥

ಅನುವಾದ

ಇದೇ ರೀತಿಯಲ್ಲಿ ಚೇದಿರಾಜನಾದ ದಮಘೋಷನೂ ತನ್ನ ಮಗನಾದ ಶಿಶುಪಾಲನ ವಿವಾಹದ ಸಂಬಂಧವಾಗಿ ಮಂತ್ರಜ್ಞರಾದ ಬ್ರಾಹ್ಮಣರಿಂದ ಮಾಂಗಲಿಕ ಕರ್ಮಗಳನ್ನು ಮಾಡಿಸಿದನು. ॥14॥

(ಶ್ಲೋಕ-15)

ಮೂಲಮ್

ಮದಚ್ಯುದ್ಭಿರ್ಗಜಾನೀಕೈಃ ಸ್ಯಂದನೈರ್ಹೇಮಮಾಲಿಭಿಃ ।
ಪತ್ತ್ಯಶ್ವಸಂಕುಲೈಃ ಸೈನ್ಯೈಃ ಪರೀತಃ ಕುಂಡಿನಂ ಯಯೌ ॥

ಅನುವಾದ

ಅನಂತರ ಮದೋದಕವನ್ನು ಸುರಿಸುತ್ತಿದ್ದ ಗಜಸೈನ್ಯದಿಂದಲೂ, ಸುವರ್ಣಮಾಲೆಗಳಿಂದ ವಿಭೂಷಿತವಾಗಿದ್ದ ರಥಸೈನ್ಯದಿಂದಲೂ, ಪದಾತಿ, ಅಶ್ವಸೈನ್ಯದಿಂದಲೂ ಕೂಡಿಕೊಂಡು ಕುಂಡಿನನಗರಕ್ಕೆ ಬಂದು ತಲುಪಿದನು. ॥15॥

(ಶ್ಲೋಕ-16)

ಮೂಲಮ್

ತಂ ವೈ ವಿದರ್ಭಾಧಿಪತಿಃ ಸಮಭ್ಯೇತ್ಯಾಭಿಪೂಜ್ಯ ಚ ।
ನಿವೇಶಯಾಮಾಸ ಮುದಾ ಕಲ್ಪಿತಾನ್ಯನಿವೇಶನೇ ॥

ಅನುವಾದ

ದಿಬ್ಬಣವು ಬಂದಿತೆಂದು ತಿಳಿದ ವಿದರ್ಭಾಧಿಪತಿ ಭೀಷ್ಮಕನು ಮುಂದೆ ಹೋಗಿ ಅವರನ್ನು ಸ್ವಾಗತ-ಸತ್ಕಾರಗಳಿಂದ ಪದ್ಧತಿಯಂತೆ ಪೂಜಿಸಿದನು. ಬಳಿಕ ಅವರಿಗಾಗಿ ಹಿಂದೆಯೇ ನಿಶ್ಚಯಿಸಿದ ರಾಜಭವನದಲ್ಲಿ ಬೀಗರನ್ನು ಇಳಿಸಿದನು. ॥16॥

(ಶ್ಲೋಕ-17)

ಮೂಲಮ್

ತತ್ರ ಶಾಲ್ವೋ ಜರಾಸಂಧೋ ದಂತವಕೋ ವಿದೂರಥಃ ।
ಆಜಗ್ಮುಶ್ಚೈದ್ಯಪಕ್ಷೀಯಾಃ ಪೌಂಡ್ರಕಾದ್ಯಾಃ ಸಹಸ್ರಶಃ ॥

ಅನುವಾದ

ಶಿಶುಪಾಲನ ಕಡೆಯವರಾಗಿ ಶಾಲ್ವ, ಜರಾಸಂಧ, ದಂತವಕ, ವಿದೂರಥ, ಪೌಂಡ್ರಕ ಮೊದಲಾದ ಸಾವಿರಾರು ರಾಜರು ಆಗಮಿಸಿದ್ದರು. ॥17॥

(ಶ್ಲೋಕ-18)

ಮೂಲಮ್

ಕೃಷ್ಣರಾಮದ್ವಿಷೋ ಯತ್ತಾಃ ಕನ್ಯಾಂ ಚೈದ್ಯಾಯ ಸಾಧಿತುಮ್ ।
ಯದ್ಯಾಗತ್ಯ ಹರೇತ್ ಕೃಷ್ಣೋ ರಾಮಾದ್ಯೈರ್ಯದುಭಿರ್ವೃತಃ ॥

(ಶ್ಲೋಕ-19)

ಮೂಲಮ್

ಯೋತ್ಸ್ಯಾಮಃ ಸಂಹತಾಸ್ತೇನ ಇತಿ ನಿಶ್ಚಿತಮಾನಸಾಃ ।
ಆಜಗ್ಮುರ್ಭೂಭುಜಃ ಸರ್ವೇ ಸಮಗ್ರಬಲವಾಹನಾಃ ॥

ಅನುವಾದ

ಆ ರಾಜರೆಲ್ಲರೂ ಶ್ರೀಕೃಷ್ಣ ಮತ್ತು ಬಲರಾಮರ ವಿರೋಧಿಗಳೇ ಆಗಿದ್ದರು. ರಾಜಕುಮಾರಿ ರುಕ್ಮಿಣಿಯು ಶಿಶುಪಾಲನಿಗೇ ಸಿಗಬೇಕೆಂಬ ಆಶಯದಿಂದ ಬಂದಿದ್ದರು. ಶ್ರೀಕೃಷ್ಣನು ಬಲರಾಮರೇ ಮೊದಲಾದ ಯದುವಂಶೀಯರೊಂದಿಗೆ ಬಂದು ರುಕ್ಮಿಣಿಯನ್ನು ಅಪಹರಿಸಲು ಪ್ರಯತ್ನಿಸಿದರೆ ನಾವೆಲ್ಲರೂ ಸೇರಿ ಯುದ್ಧಮಾಡಬೇಕೆಂದೇ ಅವರೆಲ್ಲರೂ ಮನಸ್ಸಿನಲ್ಲಿ ಮೊದಲೇ ನಿಶ್ಚಯಿಸಿದ್ದರು. ಅದರಿಂದಲೇ ಆ ರಾಜರುಗಳು ತಮ್ಮ-ತಮ್ಮ ಚತುರಂಗ ಸೈನ್ಯದೊಂದಿಗೆ ಬಂದಿದ್ದರು. ॥18-19॥

(ಶ್ಲೋಕ-20)

ಮೂಲಮ್

ಶ್ರುತ್ವೈತದ್ಭಗವಾನ್ ರಾಮೋ ವಿಪಕ್ಷೀಯನೃಪೋದ್ಯಮಮ್ ।
ಕೃಷ್ಣಂ ಚೈಕಂ ಗತಂ ಹರ್ತುಂ ಕನ್ಯಾಂ ಕಲಹಶಂಕಿತಃ ॥

ಅನುವಾದ

ಶತ್ರುಪಕ್ಷದ ಈ ಸನ್ನಾಹವು ಬಲರಾಮನಿಗೆ ತಿಳಿದುಹೋಯಿತು. ತಮ್ಮನಾದ ಶ್ರೀಕೃಷ್ಣನು ಒಬ್ಬಂಟಿಗನಾಗಿಯೇ ರಾಜಕುಮಾರಿಯನ್ನು ಅಪಹರಿಸಿಕೊಂಡುಬರಲು ಹೋಗಿರುವನೆಂದು ತಿಳಿದಾಗ, ಕನ್ಯೆಯಸಲುವಾಗಿ ಎರಡೂ ಪಕ್ಷದಲ್ಲಿ ಯುದ್ಧವು ಸಂಭವಿಸಬಹುದೆಂದು ಅವನಿಗೆ ಅನಿಸಿತು. ॥20॥

(ಶ್ಲೋಕ-21)

ಮೂಲಮ್

ಬಲೇನ ಮಹತಾ ಸಾರ್ಧಂ ಭ್ರಾತೃಸ್ನೇಹಪರಿಪ್ಲುತಃ ।
ತ್ವರಿತಃ ಕುಂಡಿನಂ ಪ್ರಾಗಾದ್ಗಜಾಶ್ವರಥಪತ್ತಿಭಿಃ ॥

ಅನುವಾದ

ಶ್ರೀಕೃಷ್ಣನ ಬಲ-ಪರಾಕ್ರಮಗಳನ್ನು ಬಲರಾಮನು ತಿಳಿದಿದ್ದರೂ ಭ್ರಾತೃಸ್ನೇಹದಿಂದ ಹೃದಯ ತುಂಬಿಬಂದು, ಕೂಡಲೇ ಗಜರಥಾಶ್ವಪದಾತಿಗಳಿಂದ ಕೂಡಿದ ಚತುರಂಗಿಣಿ ಸೈನ್ಯದೊಂದಿಗೆ ಕುಂಡಿನನಗರಕ್ಕೆ ಪ್ರಯಾಣ ಮಾಡಿದನು. ॥21॥

(ಶ್ಲೋಕ-22)

ಮೂಲಮ್

ಭೀಷ್ಮಕನ್ಯಾ ವರಾರೋಹಾ ಕಾಂಕ್ಷ್ಯಂತ್ಯಾಗಮನಂ ಹರೇಃ ।
ಪ್ರತ್ಯಾಪತ್ತಿಮಪಶ್ಯಂತೀ ದ್ವಿಜಸ್ಯಾಚಿಂತಯತ್ತದಾ ॥

ಅನುವಾದ

ಇತ್ತ ಪರಮಸುಂದರಿಯಾದ ರುಕ್ಮಿಣಿಯು ಭಗವಾನ್ ಶ್ರೀಕೃಷ್ಣನ ಶುಭಾಗಮನದ ಪ್ರತೀಕ್ಷೆ ಮಾಡುತ್ತಿದ್ದಳು. ಶ್ರೀಕೃಷ್ಣನ ಸಮಾಚಾರವನ್ನು ನನಗೆ ಯಾರು ತಿಳಿಸುವರು? ಸಂದೇಶವನ್ನು ಕೊಂಡುಹೋದ ಬ್ರಾಹ್ಮಣನು ಇನ್ನೂ ಬಂದಿಲ್ಲ! ಹೀಗೆ ಯೋಚಿಸುತ್ತಾ ಚಿಂತಾತುರಳಾದಳು. ॥22॥

(ಶ್ಲೋಕ-23)

ಮೂಲಮ್

ಅಹೋ ತ್ರಿಯಾಮಾಂತರಿತ ಉದ್ವಾಹೋ ಮೇಲ್ಪರಾಧಸಃ ।
ನಾಗಚ್ಛತ್ಯರವಿಂದಾಕ್ಷೋ ನಾಹಂ ವೇದ್ಮ್ಯತ್ರ ಕಾರಣಮ್ ।
ಸೋಪಿ ನಾವರ್ತತೇದ್ಯಾಪಿ ಮತ್ಸಂದೇಶಹರೋ ದ್ವಿಜಃ ॥

ಅನುವಾದ

ಅಯ್ಯೋ! ನಿರ್ಭಾಗ್ಯಳಾದ ನನ್ನ ವಿವಾಹಕ್ಕೆ ಕೇವಲ ಒಂದು ರಾತ್ರಿಮಾತ್ರ ಉಳಿದಿದೆ. ಆದರೆ ನನ್ನ ಜೀವನಸರ್ವಸ್ವನಾದ ಕಮಲನಯನ ಭಗವಂತನು ಇನ್ನೂ ಆಗಮಿಸಲಿಲ್ಲವಲ್ಲ! ಇದರ ಕಾರಣವೇನಿರಬಹುದು? ತಿಳಿಯದಾಗಿದೆ. ಇಷ್ಟೇ ಅಲ್ಲ; ನನ್ನ ಸಂದೇಶವನ್ನು ಕೊಂಡು ಹೋದ ವಿಪ್ರೋತ್ತಮನು ಇನ್ನೂ ಬಂದಿಲ್ಲವಲ್ಲ! ॥23॥

(ಶ್ಲೋಕ-24)

ಮೂಲಮ್

ಅಪಿ ಮಯ್ಯನವದ್ಯಾತ್ಮಾ ದೃಷ್ಟ್ವಾ ಕಿಂಚಿಜ್ಜುಗುಪ್ಸಿತಮ್ ।
ಮತ್ಪಾಣಿಗ್ರಹಣೇ ನೂನಂ ನಾಯಾತಿ ಹಿ ಕೃತೋದ್ಯಮಃ ॥

ಅನುವಾದ

ಪರಿಶುದ್ಧ ಹೃದಯನಾದ ಭಗವಾನ್ ಶ್ರೀಕೃಷ್ಣನೇನಾದರೂ ನನ್ನಲ್ಲಿ ಯಾವುದಾದರೂ ಜುಗುಪ್ಸಿತವಾದ ವ್ಯವಹಾರವನ್ನು ಕಂಡು ನನ್ನ ಪಾಣಿಗ್ರಹಣಕ್ಕೆ, ಪ್ರಯತ್ನಿಸದೆ ಇರುವುದು ಅವನು ಇಲ್ಲಿಗೆ ಬಾರದಿರುವ ಕಾರಣವಾಗಿರಬಹುದೇ? ॥24॥

(ಶ್ಲೋಕ-25)

ಮೂಲಮ್

ದುರ್ಭಗಾಯಾ ನ ಮೇ ಧಾತಾ ನಾನುಕೂಲೋ ಮಹೇಶ್ವರಃ ।
ದೇವೀ ವಾ ವಿಮುಖಾ ಗೌರೀ ರುದ್ರಾಣೀ ಗಿರಿಜಾ ಸತೀ ॥

ಅನುವಾದ

ನಿಶ್ಚಯವಾಗಿಯೂ ನಾನು ದುರ್ಭಾಗ್ಯಳೇ ಸರಿ. ಬ್ರಹ್ಮನಾಗಲೀ, ಪರಶಿವನಾಗಲೀ ನನಗೆ ಅನುಕೂಲರಾಗಿಲ್ಲ. ರುದ್ರಪತ್ನಿಯಾದ ಗಿರಿರಾಜ ಕುಮಾರಿಯಾದ ಪಾರ್ವತಿಯೂ ನನ್ನ ವಿಷಯದಲ್ಲಿ ವಿಮುಖಳಾಗಿದ್ದಾಳೆಯೋ ಏನೋ? ॥25॥

(ಶ್ಲೋಕ-26)

ಮೂಲಮ್

ಏವಂ ಚಿಂತಯತೀ ಬಾಲಾ ಗೋವಿಂದಹೃತಮಾನಸಾ ।
ನ್ಯಮೀಲಯತ ಕಾಲಜ್ಞಾ ನೇತ್ರೇ ಚಾಶ್ರುಕಲಾಕುಲೇ ॥

ಅನುವಾದ

ಪರೀಕ್ಷಿತನೇ! ಗೋವಿಂದನಿಂದ ಅಪಹರಿಸಲ್ಪಟ್ಟ ಮನಸ್ಸುಳ್ಳ ರುಕ್ಮಿಣೀದೇವಿಯು ಹೀಗೆ ಚಿಂತಿಸುತ್ತಾ, ‘ಇನ್ನೂ ಸಮಯವಿದೆಯಲ್ಲ!’ ಎಂದು ತಿಳಿದು ಕಣ್ಣೀರಿನಿಂದ ತುಂಬಿದ ತನ್ನ ಕಂಗಳನ್ನು ಹಾಗೆಯೇ ಮುಚ್ಚಿಕೊಂಡಳು. ॥26॥

(ಶ್ಲೋಕ-27)

ಮೂಲಮ್

ಏವಂ ವಧ್ವಾಃ ಪ್ರತೀಕ್ಷಂತ್ಯಾ ಗೋವಿಂದಾಗಮನಂ ನೃಪ ।
ವಾಮ ಊರುರ್ಭುಜೋ ನೇತ್ರಮಸ್ಫುರನ್ ಪ್ರಿಯಭಾಷಿಣಃ ॥

ಅನುವಾದ

ಪರೀಕ್ಷಿತನೇ! ಹೀಗೆ ರುಕ್ಮಿಣಿಯು ಭಗವಾನ್ ಶ್ರೀಕೃಷ್ಣನ ಶುಭಾಗಮನವನ್ನು ಪ್ರತೀಕ್ಷೆ ಮಾಡುತ್ತಿದ್ದಾಲೇ ಆಕೆಯ ಎಡತೊಡೆ, ಭುಜ, ಕಣ್ಣುಗಳು ಅದುರತೊಡಗಿದವು. ಅವು ಪ್ರಿಯತಮನ ಆಗಮನದ ಪ್ರಿಯವಾರ್ತೆಯನ್ನು ಸೂಚಿಸುತ್ತಿದ್ದವು.॥27॥

(ಶ್ಲೋಕ-28)

ಮೂಲಮ್

ಅಥ ಕೃಷ್ಣವಿನಿರ್ದಿಷ್ಟಃ ಸ ಏವ ದ್ವಿಜಸತ್ತಮಃ ।
ಅಂತಃಪುರಚರೀಂ ದೇವೀಂ ರಾಜಪುತ್ರೀಂ ದದರ್ಶ ಹ ॥

ಅನುವಾದ

ಅಷ್ಟರಲ್ಲಿಯೇ ಭಗವಾನ್ ಶ್ರೀಕೃಷ್ಣನು ಕಳಿಸಿರುವ ಆ ಬ್ರಾಹ್ಮಣನು ಬಂದು ಅಂತಃಪುರದಲ್ಲಿದ್ದ ರಾಜಕುಮಾರಿ ರುಕ್ಮಿಣಿಯನ್ನು ಧ್ಯಾನಮಗ್ನಳಾದ ಯಾರೋ ದೇವಿಯೇ ಆಗಿರುವಳೋ ಎಂಬಂತೆ ನೋಡಿದನು. ॥28॥

(ಶ್ಲೋಕ-29)

ಮೂಲಮ್

ಸಾ ತಂ ಪ್ರಹೃಷ್ಟವದನಮವ್ಯಗ್ರಾತ್ಮಗತಿಂ ಸತೀ ।
ಆಲಕ್ಷ್ಯ ಲಕ್ಷಣಾಭಿಜ್ಞಾ ಸಮಪೃಚ್ಛಚ್ಛುಚಿಸ್ಮಿತಾ ॥

ಅನುವಾದ

ಸಾಧ್ವಿಯಾದ ರುಕ್ಮಿಣಿಯು - ಬ್ರಾಹ್ಮಣನ ಮುಖವು ಪ್ರಫುಲ್ಲಿತವಾಗಿದೆ. ಮುಖದಲ್ಲಿ, ಮನಸ್ಸಿನಲ್ಲಿ ಯಾವುದೇ ಅಳುಕೂ ಇಲ್ಲದ ಅವನನ್ನು ನೋಡಿ ಲಕ್ಷಣ ಶಾಸ್ತ್ರವನ್ನು ತಿಳಿದಿದ್ದ ಆಕೆಯು ತನ್ನ ಕಾರ್ಯವು ಸಿದ್ಧಿ ಯಾಗಿರುವುದೆಂದು ನಿಶ್ವಯಿಸಿ, ಪ್ರಸನ್ನವದನೆಯಾಗಿ ಬ್ರಾಹ್ಮಣೋತ್ತಮನಲ್ಲಿ ಹೋದ ಕಾರ್ಯವೇನಾಯಿತೆಂದು ಕೇಳಿದಳು. ॥29॥

(ಶ್ಲೋಕ-30)

ಮೂಲಮ್

ತಸ್ಯಾ ಆವೇದಯತ್ ಪ್ರಾಪ್ತಂ ಶಶಂಸ ಯದುನಂದನಮ್ ।
ಉಕ್ತಂ ಚ ಸತ್ಯವಚನಮಾತ್ಮೋಪನಯನಂ ಪ್ರತಿ ॥

ಅನುವಾದ

ಆಗ ಭೂಸುರೋತ್ತಮನು - ‘ಭಗವಾನ್ ಶ್ರೀಕೃಷ್ಣನು ಇಲ್ಲಿಗೆ ದಯಮಾಡಿಸಿರುವನು’ ಎಂದು ನಿವೇದಿಸಿಕೊಂಡು ಶ್ರೀಕೃಷ್ಣನನ್ನು ಬಹಳವಾಗಿ ಪ್ರಶಂಸಿಸಿದನು. ರಾಜಕುಮಾರಿಯೇ! ನಿನ್ನನ್ನು ಕೊಂಡುಹೋಗುವುದಾಗಿ ಸತ್ಯಪ್ರತಿಜ್ಞೆಯನ್ನು ಮಾಡಿರುವನೆಂದೂ ತಿಳಿಸಿದನು. ॥30॥

(ಶ್ಲೋಕ-31)

ಮೂಲಮ್

ತಮಾಗತಂ ಸಮಾಜ್ಞಾಯ ವೈದರ್ಭೀ ಹೃಷ್ಟಮಾನಸಾ ।
ನ ಪಶ್ಯಂತೀ ಬ್ರಾಹ್ಮಣಾಯ ಪ್ರಿಯಮನ್ಯನ್ನನಾಮ ಸಾ ॥

ಅನುವಾದ

ಭಗವಂತನ ಶುಭಾಗಮನದ ವಾರ್ತೆಯನ್ನು ಕೇಳಿ ರುಕ್ಮಿಣೀದೇವಿಯ ಹೃದಯ ಆನಂದ ತುಂದಿಲವಾಯಿತು. ಆಕೆಯು ಇದಕ್ಕೆ ಬದಲಾಗಿ ಬ್ರಾಹ್ಮಣನಿಗೆ ಭಗವಂತನಲ್ಲದೆ ಬೇರೆ ಯಾವುದೂ ಪ್ರಿಯವಲ್ಲದ ಕಾರಣದಿಂದ ಅವನಿಗೆ ಕೇವಲ ಭಕ್ತಿಯಿಂದ ನಮಸ್ಕಾರವನ್ನು ಮಾಡಿದಳು. ॥31॥

(ಶ್ಲೋಕ-32)

ಮೂಲಮ್

ಪ್ರಾಪ್ತೌ ಶ್ರುತ್ವಾ ಸ್ವದುಹಿತುರುದ್ವಾಹಪ್ರೇಕ್ಷಣೋತ್ಸುಕೌ ।
ಅಭ್ಯಯಾತ್ತೂರ್ಯಘೋಷೇಣ ರಾಮಕೃಷ್ಣೌ ಸಮರ್ಹಣೈಃ ॥

ಅನುವಾದ

ಭಗವಾನ್ ಶ್ರೀಕೃಷ್ಣ ಮತ್ತು ಬಲರಾಮರು ತನ್ನ ಮಗಳ ವಿವಾಹವನ್ನು ನೊಡುವ ಉತ್ಸುಕತೆಯಿಂದ ಕುಂಡಿನ ನಗರಕ್ಕೆ ಆಗವಿಸಿರುವರೆಂದು ಕೇಳಿದ ಭೀಷ್ಮಕನು ಮಂಗಳ ವಾದ್ಯಗಳ ಪುರಸ್ಸರವಾಗಿ ಅವರನ್ನು ಇದಿರ್ಗೊಂಡನು. ॥32॥

(ಶ್ಲೋಕ-33)

ಮೂಲಮ್

ಮಧುಪರ್ಕಮುಪಾನೀಯ ವಾಸಾಂಸಿ ವಿರಜಾಂಸಿ ಸಃ ।
ಉಪಾಯನಾನ್ಯಭೀಷ್ಟಾನಿ ವಿಧಿವತ್ ಸಮಪೂಜಯತ್ ॥

ಅನುವಾದ

ಮತ್ತೆ ಮಧುಪರ್ಕದಿಂದಲೂ, ಶುಭ್ರ ವಸ್ತ್ರಗಳಿಂದಲೂ, ಅಭೀಷ್ಟವಾದ ಕಾಣಿಕೆಗಳಿಂದಲೂ ಅವರನ್ನು ವಿಧಿಪೂರ್ವಕವಾಗಿ ಪೂಜಿಸಿದನು. ॥33॥

(ಶ್ಲೋಕ-34)

ಮೂಲಮ್

ತಯೋರ್ನಿವೇಶನಂ ಶ್ರೀಮದುಪಕಲ್ಪ್ಯ ಮಹಾಮತಿಃ ।
ಸಸೈನ್ಯಯೋಃ ಸಾನುಗಯೋರಾತಿಥ್ಯಂ ವಿದಧೇ ಯಥಾ ॥

ಅನುವಾದ

ಮೇಧಾವಿಯಾದ ಭೀಷ್ಮಕನು ಶ್ರೀಕೃಷ್ಣ-ಬಲರಾಮರಿಗೂ ಮತ್ತು ಅವರೊಡನೆ ಬಂದಿದ್ದ ಸೈನಿಕರಿಗೂ ಸಮಸ್ತ ಸಾಮಗ್ರಿಗಳಿಂದ ಕೂಡಿದ ಸುಂದರವಾದ ಬಿಡಾರಗಳನ್ನು ಕಲ್ಪಿಸಿಕೊಟ್ಟು ಯೋಗ್ಯರೀತಿಯಿಂದ ಆತಿಥ್ಯ-ಸತ್ಕಾರ ಮಾಡಿದನು. ॥34॥

(ಶ್ಲೋಕ-35)

ಮೂಲಮ್

ಏವಂ ರಾಜ್ಞಾಂ ಸಮೇತಾನಾಂ ಯಥಾವೀರ್ಯಂ ಯಥಾವಯಃ ।
ಯಥಾಬಲಂ ಯಥಾವಿತ್ತಂ ಸರ್ವೈಃ ಕಾಮೈಃ ಸಮರ್ಹಯತ್ ॥

ಅನುವಾದ

ಹೀಗೆ ಭೀಷ್ಮಕ ಮಹಾರಾಜನು ತನ್ನ ಆಹ್ವಾನದಂತೆ ಬಂದಿರುವ ರಾಜರೆಲ್ಲರನ್ನೂ ಅವರವರ ಪರಾಕ್ರಮ, ವಯಸ್ಸು, ಬಲ, ಧನ ಇವುಗಳಿಗನುಸಾರವಾಗಿ ಅವರು ಬಯಸಿದ ವಸ್ತುಗಳೆಲ್ಲವನ್ನು ಕೊಟ್ಟು ಬಹಳವಾಗಿ ಸತ್ಕರಿಸಿದನು. ॥35॥

(ಶ್ಲೋಕ-36)

ಮೂಲಮ್

ಕೃಷ್ಣಮಾಗತಮಾಕರ್ಣ್ಯ ವಿದರ್ಭಪುರವಾಸಿನಃ ।
ಆಗತ್ಯ ನೇತ್ರಾಂಜಲಿಭಿಃ ಪಪುಸ್ತನ್ಮುಖಪಂಕಜಮ್ ॥

ಅನುವಾದ

ಭಗವಾನ್ ಶ್ರೀಕೃಷ್ಣನು ತಮ್ಮ ನಗರಕ್ಕೆ ಬಂದಿರುವನೆಂದು ಕೇಳಿದಾಗ ನಗರವಾಸಿಗಳು ಭಗವಂತನ ನಿವಾಸಸ್ಥಾನಕ್ಕೆ ಬಂದು ತಮ್ಮ ಕಣ್ಣುಗಳೆಂಬ ಬೊಗಸೆಗಳಿಂದ ಶ್ರೀಕೃಷ್ಣನ ಮುಖಾರವಿಂದದ ಮಧುರ ಮಕರಂದರಸವನ್ನು ಪಾನಮಾಡತೊಡಗಿದರು. ॥36॥

(ಶ್ಲೋಕ-37)

ಮೂಲಮ್

ಅಸ್ಯೈವ ಭಾರ್ಯಾ ಭವಿತುಂ ರುಕ್ಮಿಣ್ಯರ್ಹತಿ ನಾಪರಾ ।
ಅಸಾವಪ್ಯನವದ್ಯಾತ್ಮಾ ಭೈಷ್ಮ್ಯಾಃ ಸಮುಚಿತಃ ಪತಿಃ ॥

ಅನುವಾದ

ಅವರು ಪರಸ್ಪರ ಹೀಗೆ ಮಾತನಾಡಿಕೊಳ್ಳುತ್ತಿದ್ದರು - ನಮ್ಮ ರುಕ್ಮಿಣಿಯು ಇವನ ಅರ್ಧಾಂಗಿಯಾಗಲು ಯೋಗ್ಯಳೇ ಆಗಿದ್ದಾಳೆ. ಈ ಪರಮ ಪವಿತ್ರಮೂರ್ತಿಯಾದ ಶ್ಯಾಮಸುಂದರನೇ ರುಕ್ಮಿಣಿಗೆ ಯೋಗ್ಯಪತಿಯಾಗಿದ್ದಾನೆ. ॥37॥

(ಶ್ಲೋಕ-38)

ಮೂಲಮ್

ಕಿಂಚಿತ್ಸುಚರಿತಂ ಯನ್ನಸ್ತೇನ ತುಷ್ಟಸಿಲೋಕಕೃತ್ ।
ಅನುಗೃಹ್ಣಾತು ಗೃಹ್ಣಾತು ವೈದರ್ಭ್ಯಾಃ ಪಾಣಿಮಚ್ಯುತಃ ॥

ಅನುವಾದ

ನಾವೇನಾದರೂ ಹಿಂದಿನ ಜನ್ಮದಲ್ಲಿ ಅಥವಾ ಈ ಜನ್ಮದಲ್ಲಿ ಏನಾದರೂ ಸತ್ಕರ್ಮ ಮಾಡಿದ್ದರೆ, ತ್ರೈಲೋಕ್ಯ ವಿಧಾತನಾದ ಭಗವಂತನು ನಮ್ಮ ಮೇಲೆ ಪ್ರಸನ್ನನಾಗಿ ಶ್ಯಾಮಸುಂದರ ಶ್ರೀಕೃಷ್ಣನೇ ವಿದರ್ಭ ರಾಜಕುಮಾರಿ ರುಕ್ಮಿಣಿಯ ಪಾಣಿಗ್ರಹಣ ಮಾಡಿ ಅನುಗ್ರಹಿಸಲಿ. ॥38॥

(ಶ್ಲೋಕ-39)

ಮೂಲಮ್

ಏವಂ ಪ್ರೇಮಕಲಾಬದ್ಧಾ ವದಂತಿ ಸ್ಮ ಪುರೌಕಸಃ ।
ಕನ್ಯಾ ಚಾಂತಃಪುರಾತ್ ಪ್ರಾಗಾದ್ಭಟೈರ್ಗುಪ್ತಾಂಬಿಕಾಲಯಮ್ ॥

ಅನುವಾದ

ಪರೀಕ್ಷಿತನೇ! ಕುಂಡಿನಪುರ ನಿವಾಸಿಗಳೆಲ್ಲರೂ ಪ್ರೇಮ ಪರವಶರಾಗಿ ಮಾತನಾಡಿಕೊಳ್ಳುತ್ತಿರುವಾಗಲೇ ರಾಜಭಟರಿಂದ ರಕ್ಷಿಸಲ್ಪಡುತ್ತಿದ್ದ ಮದುವಣಗಿತ್ತಿಯು ಅಂತಃಪುರದಿಂದ ಹೊರಟು ಅಂಬಿಕಾಲಯಕ್ಕೆ ದೇವಿಯ ಪೂಜೆಗಾಗಿ ಹೊರಟಳು. ॥39॥

(ಶ್ಲೋಕ-40)

ಮೂಲಮ್

ಪದ್ಭ್ಯಾಂ ವಿನಿರ್ಯಯೌ ದ್ರಷ್ಟುಂ ಭವಾನ್ಯಾಃ ಪಾದಪಲ್ಲವಮ್ ।
ಸಾ ಚಾನುಧ್ಯಾಯತೀ ಸಮ್ಯಙ್ ಮುಕುಂದಚರಣಾಂಬುಜಮ್ ॥

ಅನುವಾದ

ರುಕ್ಮಿಣಿಯಾದರೋ ಶ್ರೀಕೃಷ್ಣನ ಚರಣಕಮಗಳನ್ನೇ ಧ್ಯಾನಿಸುತ್ತಾ, ಭಗವತಿ ಭವಾನಿಯ ಪದ ಪಲ್ಲವಗಳನ್ನು ಸಂದರ್ಶಿಸಲು ಕಾಲ್ನಡಿಗೆಯಿಂದಲೇ ದೇವಾಲಯಕ್ಕೆ ಹೋದಳು. ॥40॥

(ಶ್ಲೋಕ-41)

ಮೂಲಮ್

ಯತವಾಙ್ಮಾತೃಭಿಃ ಸಾರ್ಧಂ ಸಖೀಭಿಃ ಪರಿವಾರಿತಾ ।
ಗುಪ್ತಾ ರಾಜಭಟೈಃ ಶೂರೈಃ ಸನ್ನದ್ಧೈರುದ್ಯತಾಯುಧೈಃ ।
ಮೃದಂಗಶಂಖಪಣವಾಸ್ತೂರ್ಯಭೇರ್ಯಶ್ಚ ಜಘ್ನಿರೇ ॥

ಅನುವಾದ

ಮೌನವಾಗಿದ್ದ ಆಕೆಯು ಮಾತೃವರ್ಗದವರಿಂದ ಪರಿವೃತಳಾಗಿದ್ದಳು. ಆಯುಧಗಳನ್ನುಧರಿಸಿ ಸನ್ನದ್ಧರಾದ ಶೂರ ರಾಜಭಟರು ಸುತ್ತಲೂ ಆಕೆಯನ್ನು ರಕ್ಷಿಸುತ್ತಿದ್ದರು. ಭೇರಿ, ಮೃದಂಗ, ಶಂಖ, ಪಣವ, ತೂರ್ಯ - ಮೊದಲಾದ ಮಂಗಳವಾದ್ಯಗಳು ಮೊಳಗುತ್ತಿದ್ದವು. ॥41॥

(ಶ್ಲೋಕ-42)

ಮೂಲಮ್

ನಾನೋಪಹಾರಬಲಿಭಿರ್ವಾರಮುಖ್ಯಾಃ ಸಹಸ್ರಶಃ ।
ಸ್ರಗ್ಗಂಧವಸಾಭರಣೈರ್ದ್ವಿಜಪತ್ನ್ಯಃ ಸ್ವಲಂಕೃತಾಃ ॥

ಅನುವಾದ

ಹಲವಾರು ಬ್ರಾಹ್ಮಣಪತ್ನಿಯರು ಪುಷ್ಪಮಾಲೆಗಳಿಂದಲೂ, ಚಂದನಾದಿ ಸುಗಂಧ ದ್ರವ್ಯಗಳಿಂದಲೂ, ವಸ್ತ್ರಾಭರಣಗಳಿಂದಲೂ ಅಲಂಕರಿಸಿಕೊಂಡು ಜೊತೆ-ಜೊತೆಯಲ್ಲೇ ಹೋಗುತ್ತಿದ್ದರು. ಅನೇಕ ಪ್ರಕಾರದ ಕಾಣಿಕೆಗಳನ್ನು, ಪೂಜಾ ಸಾಮಗ್ರಿಗಳನ್ನು ಎತ್ತಿಕೊಂಡು ಸಾವಿರಾರು ವಾರಾಂಗನೆಯರು ವಧುವನ್ನು ಹಿಂಬಾಲಿಸುತ್ತಿದ್ದರು. ॥42॥

(ಶ್ಲೋಕ-43)

ಮೂಲಮ್

ಗಾಯಂತಶ್ಚ ಸ್ತುವಂತಶ್ಚ ಗಾಯಕಾ ವಾದ್ಯವಾದಕಾಃ ।
ಪರಿವಾರ್ಯ ವಧೂಂ ಜಗ್ಮುಃ ಸೂತಮಾಗಧವಂದಿನಃ ॥

ಅನುವಾದ

ಗಾಯಕರು ಗಾನ ಮಾಡುತ್ತಿದ್ದರು. ವಾದ್ಯಗಾರರು ವಾದ್ಯಗಳನ್ನು ನುಡಿಸುತ್ತಾ ಸಾಗಿದ್ದರು. ಸೂತ-ಮಾಗಧ-ವಂದೀಜನರು ವಧುವಿನ ಸುತ್ತಲೂ ಜಯಕಾರ ಮಾಡುತ್ತಾ ಬಿರುದಾವಳಿಗಳನ್ನು ಉಘ್ಘಡಿಸುತ್ತಿದ್ದರು. ॥43॥

(ಶ್ಲೋಕ-44)

ಮೂಲಮ್

ಆಸಾದ್ಯ ದೇವೀಸದನಂ ಧೌತಪಾದಕರಾಂಬುಜಾ ।
ಉಪಸ್ಪೃಶ್ಯ ಶುಚಿಃ ಶಾಂತಾ ಪ್ರವಿವೇಶಾಂಬಿಕಾಂತಿಕಮ್ ॥

ಅನುವಾದ

ದೇವಿಯ ಮಂದಿರವನ್ನು ತಲುಪಿದ ರುಕ್ಮಿಣಿಯು ಕಮಲದಂತಿರುವ ಸುಕೋಮಲವಾದ ಕೈ-ಕಾಲುಗಳನ್ನು ತೊಳೆದು, ಆಚಮನ ಮಾಡಿ, ಅಂತರ್ಬಾಹ್ಯಶುದ್ಧಳಾಗಿ, ಶಾಂತಭಾವದಿಂದ ಕೂಡಿಕೊಂಡು ಅಂಬಿಕೆಯ ಮಂದಿರವನ್ನು ಪ್ರವೇಶಿಸಿದಳು. ॥44॥

(ಶ್ಲೋಕ-45)

ಮೂಲಮ್

ತಾಂ ವೈ ಪ್ರವಯಸೋ ಬಾಲಾಂ ವಿಧಿಜ್ಞಾ ವಿಪ್ರಯೋಷಿತಃ ।
ಭವಾನೀಂ ವಂದಯಾನ್ಚಕ್ರುರ್ಭವಪತ್ನೀಂ ಭವಾನ್ವಿತಾಮ್ ॥

ಅನುವಾದ

ಜೊತೆಗಿದ್ದ ಅನೇಕ ವಿಧಿ-ವಿಧಾನಗಳನ್ನು ಬಲ್ಲ ಹಿರಿಯ ಬ್ರಾಹ್ಮಣ ಮುತ್ತೈದೆಯರು ಭಗವಾನ್ ಶಂಕರನ ಅರ್ಧಾಂಗಿನಿಯಾದ ಭವಾನಿಗೆ ಮತ್ತು ಭಗವಾನ್ ಪರಶಿವನಿಗೆ ರುಕ್ಮಿಣಿಯಿಂದ ನಮಸ್ಕಾರವನ್ನು ಮಾಡಿಸಿದರು. ॥45॥

(ಶ್ಲೋಕ-46)

ಮೂಲಮ್

ನಮಸ್ಯೇ ತ್ವಾಂಬಿಕೇಭೀಕ್ಷ್ಣಂ ಸ್ವಸಂತಾನಯುತಾಂ ಶಿವಾಮ್ ।
ಭೂಯಾತ್ ಪತಿರ್ಮೇ ಭಗವಾನ್ ಕೃಷ್ಣಸ್ತದನುಮೋದತಾಮ್ ॥

ಅನುವಾದ

ರುಕ್ಮಿಣಿಯು ಭಗವತಿಯಲ್ಲಿ ಪ್ರಾರ್ಥಿಸುತ್ತಾಳೆ — ಜಗದಂಬೇ! ನಿನ್ನ ಮಡಿಲಲ್ಲಿ ಕುಳಿತಿರುವ ಗಣಪತಿಗೆ ಮತ್ತು ನಿನಗೆ ನಾನು ಪದೇ-ಪದೇ ನಮಸ್ಕರಿಸುತ್ತೇನೆ. ತಾಯೆ! ಭಗವಾನ್ ಶ್ರೀಕೃಷ್ಣನೇ ನನ್ನ ಪತಿಯಾಗುವಂತೆ ಅನುಗ್ರಹಿಸಿ ಆಶೀರ್ವದಿಸು. ॥46॥

(ಶ್ಲೋಕ-47)

ಮೂಲಮ್

ಅದ್ಭಿರ್ಗಂಧಾಕ್ಷತೈರ್ಧೂಪೈರ್ವಾಸಃಸ್ರಙ್ಮಾಲ್ಯಭೂಷಣೈಃ ।
ನಾನೋಪಹಾರಬಲಿಭಿಃ ಪ್ರದೀಪಾವಲಿಭಿಃ ಪೃಥಕ್ ॥

ಅನುವಾದ

ಬಳಿಕ ರುಕ್ಮಿಣಿಯು ಜಲ, ಗಂಧ, ಅಕ್ಷತೆ, ವಸ್ತ್ರ, ಪುಷ್ಪಹಾರ, ಆಭೂಷಣಗಳು, ಧೂಪ, ದೀಪಾದಿಗಳಿಂದಲೂ, ನಾನಾ ವಿಧವಾದ ನೈವೇದ್ಯಗಳಿಂದಲೂ, ಕಾಣಿಕೆಗಳಿಂದಲೂ, ಮಂಗಳ ಆರತಿಗಳಿಂದಲೂ ಅಂಬಿಕೆಯನ್ನು ಪೂಜಿಸಿದಳು. ॥47॥

(ಶ್ಲೋಕ-48)

ಮೂಲಮ್

ವಿಪ್ರಸಿಯಃ ಪತಿಮತೀಸ್ತಥಾ ತೈಃ ಸಮಪೂಜಯತ್ ।
ಲವಣಾಪೂಪತಾಂಬೂಲಕಂಠಸೂತ್ರಲೇಕ್ಷುಭಿಃ ॥

ಅನುವಾದ

ಅನಂತರ ಸುಮಂಗಲಿಯರಾದ ಬ್ರಾಹ್ಮಣ ಸ್ತ್ರೀಯರಿಗೆ ಮೇಲೆ ಹೇಳಿದ ಪೂಜಾ-ಸಾಮಗ್ರಿಗಳಿಂದಲೂ, ಉಪ್ಪು, ಅಪೂಪ, ತಾಂಬೂಲ, ಕಂಠಸೂತ್ರ, ಹಣ್ಣುಗಳು, ಕಬ್ಬು ಇತ್ಯಾದಿಗಳಿಂದಲೂ ವಿಧಿವತ್ತಾಗಿ ಪೂಜೆಯನ್ನು ಸಲ್ಲಿಸಿದಳು. ॥48॥

(ಶ್ಲೋಕ-49)

ಮೂಲಮ್

ತಸ್ಯೈ ಸಿಯಸ್ತಾಃ ಪ್ರದದುಃ ಶೇಷಾಂ ಯುಯುಜುರಾಶಿಷಃ ।
ತಾಭ್ಯೋ ದೇವ್ಯೈ ನಮಶ್ಚಕ್ರೇ ಶೇಷಾಂ ಚ ಜಗೃಹೇ ವಧೂಃ ॥

ಅನುವಾದ

ಬ್ರಾಹ್ಮಣ ಸ್ತ್ರೀಯರು ರಾಜಕುಮಾರಿಗೆ ಪ್ರಸಾದವನ್ನಿತ್ತು ಆಶೀರ್ವದಿಸಿದರು. ಮದುಮಗಳು ಬ್ರಾಹ್ಮಣಿಯರಿಗೂ, ಜಗದಂಬೆಗೂ ನಮಸ್ಕರಿಸಿ ಪ್ರಸಾದವನ್ನು ಸ್ವೀಕರಿಸಿದಳು. ॥49॥

(ಶ್ಲೋಕ-50)

ಮೂಲಮ್

ಮುನಿವ್ರತಮಥ ತ್ಯಕ್ತ್ವಾ ನಿಶ್ಚಕ್ರಾಮಾಂಬಿಕಾಗೃಹಾತ್ ।
ಪ್ರಗೃಹ್ಯ ಪಾಣಿನಾ ಭೃತ್ಯಾಂ ರತ್ನಮುದ್ರೋಪಶೋಭಿನಾ ॥

ಅನುವಾದ

ಬಳಿಕ ರಾಜಕುಮಾರಿಯು ಮೌನವನ್ನು ಮುರಿದು ರತ್ನಖಚಿತವಾದ ಉಂಗುರದಿಂದ ಶೋಭಾಯಮಾನವಾದ ತನ್ನ ಕೈಯಿಂದ ಸೇವಕಿಯೊಬ್ಬಳ ಕೈಯನ್ನು ಹಿಡಿದುಕೊಂಡು ಅಂಬಿಕಾಗುಡಿಯಿಂದ ಹೊರ ಬಿದ್ದಳು. ॥50॥

(ಶ್ಲೋಕ-51)

ಮೂಲಮ್

ತಾಂ ದೇವಮಾಯಾಮಿವ ವೀರಮೋಹಿನೀಂ
ಸುಮಧ್ಯಮಾಂ ಕುಂಡಲಮಂಡಿತಾನನಾಮ್ ।
ಶ್ಯಾಮಾಂ ನಿತಂಬಾರ್ಪಿತರತ್ನಮೇಖಲಾಂ
ವ್ಯಂಜತ್ಸ್ತನೀಂ ಕುಂತಲಶಂಕಿತೇಕ್ಷಣಾಮ್ ॥

ಅನುವಾದ

ಪರೀಕ್ಷಿತನೇ! ರುಕ್ಮಿಣಿಯು ಭಗವಂತನ ಮಾಯೆಯಂತೆಯೇ ವೀರಾಧಿವೀರರನ್ನು ವಿಮೋಹಗೊಳಿಸುತ್ತಿದ್ದಳು. ಆಕೆಯ ಕಟಿಪ್ರದೇಶವು ಸುಂದರವಾಗಿಯೂ, ತೆಳುವಾಗಿಯೂ ಇತ್ತು. ಫಳ ಫಳಿಸುವ ಕುಂಡಲಗಳಿಂದ ಮುಖಕಮಲವು ಸಮಲಂಕೃತವಾಗಿತ್ತು. ಯೌವನದ ಹೊಸ್ತಿಲನ್ನು ಆಗತಾನೇ ಮೆಟ್ಟಿದ್ದಳು. ನಿತಂಬವು ರತ್ನ ಮಯವಾದ ಸೊಂಟಪಟ್ಟಿಯಿಂದ ಅಲಂಕೃತವಾಗಿತ್ತು. ವಕ್ಷಸ್ಥಳವು ಆಗತಾನೇ ಎದ್ದು ಕಾಣುತ್ತಿತ್ತು. ಮುಂಗುರುಳುಗಳು ಮುಂದೆ ಚಾಚಿಕೊಂಡು ಇದ್ದುದರಿಂದ ನೋಟವು ಚಂಚಲವಾಗಿತ್ತು. ॥51॥

(ಶ್ಲೋಕ-52)

ಮೂಲಮ್

ಶುಚಿಸ್ಮಿತಾಂ ಬಿಂಬಲಾಧರದ್ಯುತಿ-
ಶೋಣಾಯಮಾನದ್ವಿಜಕುಂದಕುಡ್ಮಲಾಮ್ ।
ಪದಾ ಚಲಂತೀಂ ಕಲಹಂಸಗಾಮಿನೀಂ
ಶಿಂಜತ್ಕಲಾನೂಪುರಧಾಮಶೋಭಿನಾ ।
ವಿಲೋಕ್ಯ ವೀರಾ ಮುಮುಹುಃ ಸಮಾಗತಾ
ಯಶಸ್ವಿನಸ್ತತ್ಕೃತಹೃಚ್ಛಯಾರ್ದಿತಾಃ ॥

ಅನುವಾದ

ಆಕೆಯ ತುಟಿಗಳಲ್ಲಿ ಮನೋಹರವಾದ ಮುಗುಳ್ನಗೆ ಇತ್ತು, ತೊಂಡೆಹಣ್ಣಿನಂತಿದ್ದ ಅವಳ ತುಟಿಯ ಕೆಂಪಿನಿಂದ ಮಲ್ಲಿಗೆ ಮೊಗ್ಗುಗಳಂತಿದ್ದ ಆಕೆಯ ಹಲ್ಲುಗಳು ಸ್ವಲ್ಪ ಕೆಂಪಾಗಿ ಕಾಣುತ್ತಿದ್ದವು. ಝಣ-ಝಣಿಸುತ್ತಿದ್ದ ಕಾಲಂದುಗೆಗಳ ಕಾಂತಿಯಿಂದ ಮನೋಹರವಾಗಿ ಕಾಣುತ್ತಿದ್ದ ಕೋಮಲವಾದ ಕಾಲುಗಳಿಂದ ರಾಜಹಂಸದಂತೆ ನಡೆಯುತ್ತಿದ್ದಳು. ರುಕ್ಮಿಣಿಯ ಅಂತಹ ಅನುಪಮವಾದ ಅಂಗಕಾಂತಿಯನ್ನು ನೋಡಿ ಅಲ್ಲಿಗೆ ಬಂದ ದೊಡ್ಡ-ದೊಡ್ಡ ಯಶಸ್ವೀ ವೀರರೆಲ್ಲರೂ ಮೋಹಿತರಾದರು. ಮನ್ಮಥನೂ ಭಗವಂತನ ಕಾರ್ಯವನ್ನು ಸಾಧಿಸಿಕೊಡಲು ತನ್ನ ಹೂಬಾಣಗಳಿಂದ ಅವರ ಹೃದಯಗಳನ್ನು ಜರ್ಜರಿತವಾಗಿಸಿದ್ದನು. ॥52॥

(ಶ್ಲೋಕ-53)

ಮೂಲಮ್

ಯಾಂ ವೀಕ್ಷ್ಯ ತೇ ನೃಪತಯಸ್ತದುದಾರಹಾಸ-
ವ್ರೀಡಾವಲೋಕಹೃತಚೇತಸ ಉಜ್ಝಿತಾಸಾಃ ।
ಪೇತುಃ ಕ್ಷಿತೌ ಗಜರಥಾಶ್ವಗತಾ ವಿಮೂಢಾ
ಯಾತ್ರಾಚ್ಛಲೇನಘಿಘಿಹರಯೇರ್ಪಯತೀಂಘಿಘಿಸ್ವಶೋಭಾಮ್ ॥

ಅನುವಾದ

ರುಕ್ಮಿಣಿಯು ಹೀಗೆ ಯಾತ್ರೆಯ ವ್ಯಾಜದಿಂದ ಮಂದಗತಿಯಿಂದ ನಡೆಯುತ್ತಾ ಭಗವಾನ್ ಶ್ರೀಕೃಷ್ಣನಿಗೆ ತನ್ನ ಸೌಂದರ್ಯವನ್ನು ಅರ್ಪಿಸುತ್ತಿದ್ದಳು. ಆಕೆಯ ಲೋಕೋತ್ತರವಾದ ಮುಕ್ತಮಂದಹಾಸವನ್ನು ಹಾಗೂ ಕುಡಿ ನೋಟವನ್ನು ಕಂಡು ಬುದ್ಧಿಗೆಟ್ಟ ನರಪತಿಗಳು ತಾವು ಹಿಡಿದಿದ್ದ ಆಯುಧಗಳನ್ನು ಬಿಸಾಡಿ ತಾವು ಕುಳಿತಿದ್ದ ರಥಾಶ್ವ-ಗಜಗಳ ಮೇಲಿಂದ ಕೆಳಕ್ಕೆ ಬಿದ್ದು ಹೋದರು.॥53॥

(ಶ್ಲೋಕ-54)

ಮೂಲಮ್

ಸೈವಂ ಶನೈಶ್ಚಲಯತೀ ಚಲಪದ್ಮಕೋಶೌ
ಪ್ರಾಪ್ತಿಂ ತದಾ ಭಗವತಃ ಪ್ರಸಮೀಕ್ಷಮಾಣಾ ।
ಉತ್ಸಾರ್ಯ ವಾಮಕರಜೈರಲಕಾನಪಾಂಗೈಃ
ಪ್ರಾಪ್ತಾನ್ ಹ್ರಿಯೈಕ್ಷತ ನೃಪಾನ್ ದದೃಶೇಚ್ಯುತಂಸಾ ॥

ಅನುವಾದ

ಹೀಗೆ ರುಕ್ಮಿಣಿಯು ಭಗವಾನ್ ಶ್ರೀಕೃಷ್ಣನ ಶುಭಾಗಮ ನವನ್ನು ಪ್ರತೀಕ್ಷೆ ಮಾಡುತ್ತಾ ಕಮಲದಂತಹ ಸುಕೋಮಲವಾದ ಪಾದಪದ್ಮಗಳಿಂದ ಮೆಲ್ಲ-ಮೆಲ್ಲನೆ ನಡೆದುಕೊಂಡು ಹೋಗುತ್ತಿದ್ದಳು. ಮುಖವನ್ನು ಮುಚ್ಚುತ್ತಿದ್ದ ಮುಂಗುರುಳುಗಳನ್ನು ಎಡಗೈ ಬೆರಳುಗಳಿಂದ ಹಿಂದಕ್ಕೆ, ಸರಿಸಿ, ಅಲ್ಲಿ ಬಂದಿರುವ ರಾಜರನ್ನು ಲಜ್ಜೆಯಿಂದ ಕೂಡಿದ ಕಡೆಗಣ್ಣಿನಿಂದ ನೋಡುತ್ತಿದ್ದಳು. ಹಾಗೆಯೇ ಆಕೆಗೆ ಶ್ಯಾಮಸುಂದರನಾದ ಶ್ರೀಕೃಷ್ಣನ ದರ್ಶನವಾಯಿತು. ॥54॥

(ಶ್ಲೋಕ-55)

ಮೂಲಮ್

ತಾಂ ರಾಜಕನ್ಯಾಂ ರಥಮಾರುರುಕ್ಷತೀಂ
ಜಹಾರ ಕೃಷ್ಣೋ ದ್ವಿಷತಾಂ ಸಮೀಕ್ಷತಾಮ್ ।
ರಥಂ ಸಮಾರೋಪ್ಯ ಸುಪರ್ಣಲಕ್ಷಣಂ
ರಾಜನ್ಯಚಕ್ರಂ ಪರಿಭೂಯ ಮಾಧವಃ ॥

ಅನುವಾದ

ರಾಜಕುಮಾರಿ ರುಕ್ಮಿಣಿಯು ರಥದಲ್ಲಿ ಹತ್ತಲು ಅಪೇಕ್ಷಿಸುತ್ತಿದ್ದಾಗಲೇ ಭಗವಾನ್ ಶ್ರೀಕೃಷ್ಣನು ಸಮಸ್ತ ಶತ್ರುಗಳು ನೋಡು ನೋಡುತ್ತಿರುವಂತೆ ರುಕ್ಮಿಣಿಯನ್ನು ಎತ್ತಿಕೊಂಡು, ನೂರಾರು ರಾಜರ ತಲೆಯನ್ನು ಮೆಟ್ಟಿ, ಗರುಡಧ್ವಜದಿಂದ ಶೋಭಿಸುವ ತನ್ನ ರಥದಲ್ಲಿ ಕುಳ್ಳಿರಿಸಿಕೊಂಡನು. ॥55॥

(ಶ್ಲೋಕ-56)

ಮೂಲಮ್

ತತೋ ಯಯೌ ರಾಮಪುರೋಗಮೈಃ ಶನೈಃ ।
ಸೃಗಾಲಮಧ್ಯಾವಿವ ಭಾಗಹೃದ್ಧರಿಃ ॥

ಅನುವಾದ

ಬಳಿಕ ನರಿಗಳ ಮಧ್ಯದಲ್ಲಿದ್ದ ತನ್ನ ಬೇಟೆಯನ್ನು ಸಿಂಹವು ಎತ್ತಿಕೊಂಡು ಹೋಗುವಂತೆ ನರಿಗಳಂತಿದ್ದ ರಾಜರ ಮಧ್ಯದಿಂದ ರುಕ್ಮಿಣಿಯನ್ನು ಎತ್ತಿಕೊಂಡು ಶ್ರೀಕೃಷ್ಣನು ಬಲರಾಮಾದಿ ಯದುವಂಶೀಯ ಯೋಧರೊಡನೆ ಅಲ್ಲಿಂದ ಹೊರಟನು. ॥56॥

(ಶ್ಲೋಕ-57)

ಮೂಲಮ್

ತಂ ಮಾನಿನಃ ಸ್ವಾಭಿಭವಂ ಯಶಃಕ್ಷಯಂ
ಪರೇ ಜರಾಸಂಧವಶಾ ನ ಸೇಹಿರೇ ।
ಅಹೋ ಧಿಗಸ್ಮಾನ್ ಯಶ ಆತ್ತಧನ್ವನಾಂ
ಗೋಪೈರ್ಹೃತಂ ಕೇಸರಿಣಾಂ ಮೃಗೈರಿವ ॥

ಅನುವಾದ

ಆ ಸಮಯದಲ್ಲಿ ಜರಾಸಂಧನ ವಶವರ್ತಿಗಳಾದ ದುರಭಿಮಾನಿ ರಾಜರುಗಳಿಗೆ ಯಶಃಕೀರ್ತಿ ನಾಶಕವಾದ ಇಂತಹ ತಿರಸ್ಕಾರವನ್ನು ಸಹಿಸಿಕೊಳ್ಳಲಾಗಲಿಲ್ಲ. ಅವರೆಲ್ಲರೂ ಕೆರಳಿ ಕೂಗಾಡತೊಡಗಿದರು - ಆಹಾ! ಆಯುಧಗಳನ್ನು ಹಿಡಿದು ನಿಂತಿರುವ ನಮಗೆ ಧಿಕ್ಕಾರವಿರಲಿ. ಸಿಂಹಗಳಿಗೆ ಸೇರಬೇಕಾದ ಭಾಗವನ್ನು ನರಿಗಳು ಅಪಹರಿಸುವಂತೆ ನಮ್ಮ ಯಶಸ್ಸನ್ನು ಸಾಧಾರಣರಾದ ಗೊಲ್ಲರು ಇಂದು ಅಪಹರಿಸಿ ಬಿಟ್ಟರಲ್ಲ! ॥57॥

ಅನುವಾದ (ಸಮಾಪ್ತಿಃ)

ಐವತ್ತಮೂರನೆಯ ಅಧ್ಯಾಯವು ಮುಗಿಯಿತು. ॥53॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ
ರುಕ್ಮಿಣೀಹರಣಂ ನಾಮ ತ್ರಿಪಂಚಾಶತ್ತಮೋಧ್ಯಾಯಃ ॥53॥