೫೨

[ಐವತ್ತೇರಡನೇಯ ಅಧ್ಯಾಯ]

ಭಾಗಸೂಚನಾ

ದ್ವಾರಕಾಗಮನ, ಬಲರಾಮನ ವಿವಾಹ, ರುಕ್ಮಿಣಿಯ ಸಂದೇಶವನ್ನು ಹೊತ್ತು ತಂದ ಬ್ರಾಹ್ಮಣನ ಆಗಮನ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಥಂ ಸೋನುಗೃಹೀತೋಂಗ ಕೃಷ್ಣೇನೇಕ್ಷ್ವಾಕುನಂದನಃ ।
ತಂ ಪರಿಕ್ರಮ್ಯ ಸನ್ನಮ್ಯ ನಿಶ್ಚಕ್ರಾಮ ಗುಹಾಮುಖಾತ್ ॥

ಅನುವಾದ

ಶ್ರೀಶುಕಮುನಿಗಳು ಹೇಳುತ್ತಾರೆ — ಪರೀಕ್ಷಿತ ಮಹಾರಾಜ! ಭಗವಾನ್ ಶ್ರೀಕೃಷ್ಣನು ಹೀಗೆ ಇಕ್ಷ್ವಾಕುಕುಲ ನಂದನನಾದ ಮುಚುಕುಂದನಿಗೆ ಅನುಗ್ರಹಿಸಿದನು. ಆಗ ಅವನು ಭಗವಂತನಿಗೆ ಪ್ರದಕ್ಷಿಣೆ ಬಂದು, ನಮಸ್ಕರಿಸಿ ಗುಹೆಯಿಂದ ಹೊರಗೆ ಹೊರಟನು. ॥1॥

(ಶ್ಲೋಕ-2)

ಮೂಲಮ್

ಸ ವೀಕ್ಷ್ಯ ಕ್ಷುಲ್ಲಕಾನ್ ಮರ್ತ್ಯಾನ್ ಪಶೂನ್ ವೀರುದ್ವನಸ್ಪತೀನ್ ।
ಮತ್ವಾ ಕಲಿಯುಗಂ ಪ್ರಾಪ್ತಂ ಜಗಾಮ ದಿಶಮುತ್ತರಾಮ್ ॥

ಅನುವಾದ

ಗುಹೆಯಿಂದ ಹೊರಗೆ ಬಂದು ಮುಚುಕುಂದನು ನೋಡುತ್ತಾನೆ - ಎಲ್ಲ ಮನುಷ್ಯರು, ಪಶುಗಳು, ಲತಾ-ವೃಕ್ಷಾದಿಗಳು ಮೊದಲಿಗಿಂತ ಬಹಳ ಸಣ್ಣ-ಸಣ್ಣದಾಗಿವೆ. ಓಹೋ! ಈಗ ಕಲಿಯುಗವು ಬಂದುಬಿಟ್ಟಿದೆ ಎಂದು ತಿಳಿದು ಅವನು ಉತ್ತರದ ಕಡೆಗೆ ಪ್ರಯಾಣ ಮಾಡಿದನು. ॥2॥

(ಶ್ಲೋಕ-3)

ಮೂಲಮ್

ತಪಃಶ್ರದ್ಧಾಯುತೋ ಧೀರೋ ನಿಃಸಂಗೋ ಮುಕ್ತಸಂಶಯಃ ।
ಸಮಾಧಾಯ ಮನಃ ಕೃಷ್ಣೇ ಪ್ರಾವಿಶದ್ಗಂಧಮಾದನಮ್ ॥

ಅನುವಾದ

ಮುಚುಕುಂದ ರಾಜನು ತಪಸ್ಸು, ಶ್ರದ್ಧೆ, ಧೈರ್ಯ, ಅನಾಸಕ್ತಿ ಇವುಗಳಿಂದ ಕೂಡಿದ್ದು ಸಂದೇಹ ರಹಿತನಾಗಿದ್ದನು. ಅವನು ತನ್ನ ಚಿತ್ತವನ್ನು ಭಗವಂತನಲ್ಲಿ ತೊಡಗಿಸಿ ಗಂಧಮಾದನ ಪರ್ವತಕ್ಕೆ ಹೋದನು. ॥3॥

(ಶ್ಲೋಕ-4)

ಮೂಲಮ್

ಬದರ್ಯಾಶ್ರಮಮಾಸಾದ್ಯ ನರನಾರಾಯಣಾಲಯಮ್ ।
ಸರ್ವದ್ವಂದ್ವಸಹಃ ಶಾಂತಸ್ತಪಸಾರಾಧಯದ್ಧರಿಮ್ ॥

ಅನುವಾದ

ಅಲ್ಲಿಂದ ಭಗವಾನ್ ನರ-ನಾರಾಯಣರ ನಿತ್ಯನಿವಾಸ ಸ್ಥಾನವಾದ ಬದರಿಕಾಶ್ರಮಕ್ಕೆ ತಲುಪಿ ಬಹಳ ಶಾಂತ ಭಾವದಿಂದ ಶೀತೋಷ್ಣ - ಸುಖ - ದುಃಖಾದಿ ದ್ವಂದ್ವಗಳನ್ನು ಸಹಿಸುತ್ತಾ ತಪಸ್ಸಿನಿಂದ ಭಗವಂತನ ಆರಾಧನೆಯಲ್ಲಿ ತೊಡಗಿದನು. ॥4॥

(ಶ್ಲೋಕ-5)

ಮೂಲಮ್

ಭಗವಾನ್ ಪುನರಾವ್ರಜ್ಯ ಪುರೀಂ ಯವನವೇಷ್ಟಿತಾಮ್ ।
ಹತ್ವಾ ಮ್ಲೇಚ್ಛಬಲಂ ನಿನ್ಯೇ ತದೀಯಂ ದ್ವಾರಕಾಂ ಧನಮ್ ॥

ಅನುವಾದ

ಇತ್ತಲಾಗಿ ಭಗವಾನ್ ಶ್ರೀಕೃಷ್ಣನು ಮಥುರೆಗೆ ಮರಳಿದನು. ಅದುವರೆಗೂ ಕಾಲಯವನನ ಸೈನಿಕರು ಮಥುರೆಯನ್ನು ಆಕ್ರಮಿಸಿಕೊಂಡೇ ಇದ್ದರು. ಶ್ರೀಕೃಷ್ಣನು ಆ ಮ್ಲೇಚ್ಛರ ಸೈನ್ಯವನ್ನು ಸಂಹರಿಸಿ, ಅವರ ಎಲ್ಲ ಧನವನ್ನು ಕಸಿದುಕೊಂಡು ದ್ವಾರಕೆಗೆ ತೆರಳಿದನು. ॥5॥

(ಶ್ಲೋಕ-6)

ಮೂಲಮ್

ನೀಯಮಾನೇ ಧನೇ ಗೋಭಿರ್ನೃಭಿಶ್ಚಾಚ್ಯುತಚೋದಿತೈಃ ।
ಆಜಗಾಮ ಜರಾಸಂಧಸಯೋವಿಂಶತ್ಯನೀಕಪಃ ॥

ಅನುವಾದ

ಶ್ರೀಕೃಷ್ಣನ ಅಪ್ಪಣೆಯಂತೆ ಆ ಧನವನ್ನು ಮನುಷ್ಯರ, ಎತ್ತುಗಳ ಮೂಲಕ ತೆಗೆದುಕೊಂಡು ಹೋಗುತ್ತಿದ್ದಾಗ ಜರಾಸಂಧನು ಪುನಃ ಹದಿನೆಂಟನೆಯ ಬಾರಿಗೆ ಇಪ್ಪತ್ತಮೂರು ಅಕ್ಷೌಹಿಣಿ ಸೈನ್ಯದೊಂದಿಗೆ ಆಗಮಿಸಿದನು. ॥6॥

(ಶ್ಲೋಕ-7)

ಮೂಲಮ್

ವಿಲೋಕ್ಯ ವೇಗರಭಸಂ ರಿಪುಸೈನ್ಯಸ್ಯ ಮಾಧವೌ ।
ಮನುಷ್ಯಚೇಷ್ಟಾಮಾಪನ್ನೌ ರಾಜನ್ ದುದ್ರುವತುರ್ದ್ರುತಮ್ ॥

ಅನುವಾದ

ಪರೀಕ್ಷಿತನೇ! ಶತ್ರು ಸೈನ್ಯವು ರಭಸದಿಂದ ಬರುತ್ತಿರುವುದನ್ನು ನೋಡಿದ ಭಗವಾನ್ ಶ್ರೀಕೃಷ್ಣ-ಬಲರಾಮರು ಮನುಷ್ಯರಂತೆ ಲೀಲೆಯನ್ನು ತೋರುತ್ತಾ ಅವನ ಇದಿರಿಗೆ ಪಲಾಯನ ಮಾಡಿದರು. ॥7॥

(ಶ್ಲೋಕ-8)

ಮೂಲಮ್

ವಿಹಾಯ ವಿತ್ತಂ ಪ್ರಚುರಮಭೀತೌ ಭೀರುಭೀತವತ್ ।
ಪದ್ಭ್ಯಾಂ ಪದ್ಮಪಲಾಶಾಭ್ಯಾಂ ಚೇರತುರ್ಬಹುಯೋಜನಮ್ ॥

ಅನುವಾದ

ನಿಜವಾಗಿಯೂ ಅವರ ಮನಸ್ಸಿನಲ್ಲಿ ಸ್ವಲ್ಪವೂ ಭಯವಿರಲಿಲ್ಲ. ಆದರೂ ಅತ್ಯಂತ ಭಯಗೊಂಡವರಂತೆ ನಟಿಸುತ್ತಾ, ಆ ಎಲ್ಲ ಧನವನ್ನು ಅಲ್ಲೇ ಬಿಟ್ಟು ಅವರು ಅನೇಕ ಯೋಜನಗಳಷ್ಟು ತಮ್ಮ ಕಮಲದಳದಂತೆ ಇರುವ ಸುಕೋಮಲ ಚರಣಗಳಿಂದ ಓಡುತ್ತಾ ಹೋದರು. ॥8॥

(ಶ್ಲೋಕ-9)

ಮೂಲಮ್

ಪಲಾಯಮಾನೌ ತೌ ದೃಷ್ಟ್ವಾ ಮಾಗಧಃ ಪ್ರಹಸನ್ ಬಲೀ ।
ಅನ್ವಧಾವದ್ರಥಾನೀಕೈರೀಶಯೋರಪ್ರಮಾಣವಿತ್ ॥

ಅನುವಾದ

ಶ್ರೀಕೃಷ್ಣ-ಬಲರಾಮರು ಓಡುತ್ತಿರುವುದನ್ನು ಮಹಾಬಲಿಷ್ಠನಾದ ಮಾಗಧನು ನೋಡಿ ಗಹಗಹಿಸಿ ನಗುತ್ತಾ ತನ್ನ ರಥ ಸೇನೆಯೊಂದಿಗೆ ಅವರನ್ನು ಹಿಂಬಾಲಿಸಿದನು. ಅವನು ಬಲರಾಮ-ಕೃಷ್ಣರ ಪ್ರಭಾವವನ್ನು ತಿಳಿದವನಾಗಿರಲಿಲ್ಲ. ॥9॥

(ಶ್ಲೋಕ-10)

ಮೂಲಮ್

ಪ್ರದ್ರುತ್ಯ ದೂರಂ ಸಂಶ್ರಾಂತೌ ತುಂಗಮಾರುಹತಾಂ ಗಿರಿಮ್ ।
ಪ್ರವರ್ಷಣಾಖ್ಯಂ ಭಗವಾನ್ ನಿತ್ಯದಾ ಯತ್ರ ವರ್ಷತಿ ॥

ಅನುವಾದ

ಬಹಳ ದೂರದವರೆಗೆ ಓಡಿದ್ದರಿಂದ ಸಹೋದರರಿಬ್ಬರೂ ಬಳಲಿದಂತಾಗಿ ಎತ್ತರವಾದ ಪ್ರವರ್ಷಣವೆಂಬ ಪರ್ವತವನ್ನು ಹತ್ತಿದರು. ಮೇಘಗಳು ಆ ಪರ್ವತದ ಮೇಲೆ ಸದಾಕಾಲವೂ ಮಳೆಗರೆಯುತ್ತಿದ್ದರಿಂದ ಅದು ‘ಪ್ರವರ್ಷಣ’ವೆಂಬ ಹೆಸರನ್ನು ಪಡೆದಿತ್ತು. ॥10॥

(ಶ್ಲೋಕ-11)

ಮೂಲಮ್

ಗಿರೌ ನಿಲೀನಾವಾಜ್ಞಾಯ ನಾಧಿಗಮ್ಯ ಪದಂ ನೃಪ ।
ದದಾಹ ಗಿರಿಮೇಧೋಭಿಃ ಸಮಂತಾದಗ್ನಿಮುತ್ಸೃಜನ್ ॥

ಅನುವಾದ

ಪರೀಕ್ಷಿತನೇ! ಅವರಿಬ್ಬರೂ ಬೆಟ್ಟದಲ್ಲಿ ಅವಿತುಕೊಂಡಿದ್ದು ಎಷ್ಟು ಹುಡುಕಿದರೂ ಅವರು ಕಾಣದಿದ್ದಾಗ ಜರಾಸಂಧನು ಪರ್ವತದ ಸುತ್ತಲೂ ಬೆಂಕಿಯಿಟ್ಟು ಅದನ್ನು ಸುಟ್ಟುಬಿಟ್ಟನು. ॥11॥

(ಶ್ಲೋಕ-12)

ಮೂಲಮ್

ತತ ಉತ್ಪತ್ಯ ತರಸಾ ದಹ್ಯಮಾನತಟಾದುಭೌ ।
ದಶೈಕಯೋಜನೋತ್ತುಂಗಾನ್ನಿಪೇತತುರಧೋ ಭುವಿ ॥

ಅನುವಾದ

ಪರ್ವತದ ತಪ್ಪಲು ಸುತ್ತಲೂ ಉರಿಯುತ್ತಿರುವುದನ್ನು ಭಗವಂತನು ನೋಡಿದನು. ಆಗ ಸೋದರರಿಬ್ಬರೂ ಜರಾಸಂಧನ ಸೈನ್ಯದಿಂದ ಸುತ್ತುವರಿಯಲ್ಪಟ್ಟ ಹನ್ನೊಂದು ಯೋಜನ ಎತ್ತರವಾಗಿದ್ದ ಆ ಪರ್ವತದಿಂದ ವೇಗವಾಗಿ ಕೆಳಗೆ ಭೂಮಿಗೆ ನೆಗೆದರು. ॥12॥

(ಶ್ಲೋಕ-13)

ಮೂಲಮ್

ಅಲಕ್ಷ್ಯಮಾಣೌ ರಿಪುಣಾ ಸಾನುಗೇನ ಯದೂತ್ತವೌ ।
ಸ್ವಪುರಂ ಪುನರಾಯಾತೌ ಸಮುದ್ರಪರಿಖಾಂ ನೃಪ ॥

ಅನುವಾದ

ರಾಜೇಂದ್ರ! ಜರಾಸಂಧನಾಗಲೀ, ಅವನ ಸೈನಿಕರಾಗಲೀ ಯಾರಿಗೂ ಅವರು ಕಾಣಿಸಲಿಲ್ಲ. ಅವರಿಬ್ಬರೂ ಅಲ್ಲಿಂದ ಹೊರಟು ಸಮುದ್ರದಿಂದ ಸುತ್ತುವರಿಯಲ್ಪಟ್ಟ ತಮ್ಮ ದ್ವಾರಕೆಗೆ ಹೋಗಿಬಿಟ್ಟರು. ॥13॥

(ಶ್ಲೋಕ-14)

ಮೂಲಮ್

ಸೋಪಿ ದಗ್ಧಾವಿತಿ ಮೃಷಾ ಮನ್ವಾನೋ ಬಲಕೇಶವೌ ।
ಬಲಮಾಕೃಷ್ಯ ಸುಮಹನ್ಮಗಧಾನ್ ಮಾಗಧೋ ಯಯೌ ॥

ಅನುವಾದ

ಜರಾಸಂಧನು ಶ್ರೀಕೃಷ್ಣ ಬಲರಾಮರನ್ನು ಕಾಣದೆ ಅವರು ಬೆಂಕಿಯಲ್ಲಿ ಸುಟ್ಟುಹೋಗಿದ್ದಾರೆ ಎಂದು ತಪ್ಪಾಗಿ ತಿಳಿದುಕೊಂಡನು. ಮತ್ತೆ ಸೈನ್ಯದೊಂದಿಗೆ ಹಿಂದಿರುಗಿ ಮಗಧ ದೇಶಕ್ಕೆ ಹೊರಟು ಹೋದನು. ॥14॥

(ಶ್ಲೋಕ-15)

ಮೂಲಮ್

ಆನರ್ತಾಧಿಪತಿಃ ಶ್ರೀಮಾನ್ ರೈವತೋ ರೇವತೀಂ ಸುತಾಮ್ ।
ಬ್ರಹ್ಮಣಾ ಚೋದಿತಃ ಪ್ರಾದಾದ್ಬಲಾಯೇತಿ ಪುರೋದಿತಮ್ ॥

ಅನುವಾದ

ಪರೀಕ್ಷಿತ ಮಹಾರಾಜ! ನಾನು ಹಿಂದೆ (ಒಂಭತ್ತನೆಯ ಸ್ಕಂಧದಲ್ಲಿ) ಆನರ್ತ ದೇಶದ ರಾಜನಾದ ರೈವತನು ತನ್ನ ಮಗಳಾದ ರೇವತಿಯನ್ನು ಬ್ರಹ್ಮದೇವರ ಪ್ರೇರಣೆಯಂತೆ ಬಲರಾಮನಿಗೆ ಕೊಟ್ಟು ವಿವಾಹಮಾಡಿದನೆಂಬ ಸಂಗತಿಯನ್ನು ಹೇಳಿದ್ದೆನು. ॥15॥

(ಶ್ಲೋಕ-16)

ಮೂಲಮ್

ಭಗವಾನಪಿ ಗೋವಿಂದ ಉಪಯೇಮೇ ಕುರೂದ್ವಹ ।
ವೈದರ್ಭೀಂ ಭೀಷ್ಮಕಸುತಾಂ ಶ್ರಿಯೋ ಮಾತ್ರಾಂ ಸ್ವಯಂವರೇ ॥

(ಶ್ಲೋಕ-17)

ಮೂಲಮ್

ಪ್ರಮಥ್ಯ ತರಸಾ ರಾಜ್ಞಃ ಶಾಲ್ವಾದೀಂಶ್ಚೈದ್ಯಪಕ್ಷಗಾನ್ ।
ಪಶ್ಯತಾಂ ಸರ್ವಲೋಕಾನಾಂ ತಾರ್ಕ್ಷಪುತ್ರಃ ಸುಧಾಮಿವ ॥

ಅನುವಾದ

ರಾಜನೇ! ಭಗವಾನ್ ಶ್ರೀಕೃಷ್ಣನೂ ಕೂಡ ಸ್ವಯಂವರಕ್ಕೆ ಬಂದ ಶಿಶುಪಾಲ ಮತ್ತು ಅವನ ಪಕ್ಷಪಾತಿಗಳು ಶಾಲ್ವರೇ ಮೊದಲಾದ ರಾಜರನ್ನು ಬಲಪೂರ್ವಕವಾಗಿ ಪರಾಜಯಗೊಳಿಸಿ, ಎಲ್ಲರೂ ನೋಡುತ್ತಿರುವಂತೆಯೇ ಗರುಡನು ಅಮೃತವನ್ನು ಅಪಹರಿಸಿದಂತೆಯೇ ವಿದರ್ಭದೇಶದ ರಾಜಕುಮಾರಿಯಾದ ರುಕ್ಮಿಣಿಯನ್ನು ಅಪಹರಿಸಿ ತಂದು ಅವಳೊಡನೆ ವಿವಾಹವಾದನು. ರುಕ್ಮಿಣಿಯು ಭೀಷ್ಮಕನ ಕನ್ಯೆಯಾಗಿದ್ದು, ಸಾಕ್ಷಾತ್ ಲಕ್ಷ್ಮಿಯ ಅವತಾರವಾಗಿದ್ದಳು. ॥16-17॥

(ಶ್ಲೋಕ-18)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಭಗವಾನ್ ಭೀಷ್ಮಕಸುತಾಂ ರುಕ್ಮಿಣೀಂ ರುಚಿರಾನನಾಮ್ ।
ರಾಕ್ಷಸೇನ ವಿಧಾನೇನ ಉಪಯೇಮ ಇತಿ ಶ್ರುತಮ್ ॥

ಅನುವಾದ

ಪರೀಕ್ಷಿತ ರಾಜನು ಕೇಳಿದನು — ಪೂಜ್ಯರೇ! ಭಗವಾನ್ ಶ್ರೀಕೃಷ್ಣನು ಭೀಷ್ಮಕನ ಮಗಳಾದ ಪರಮ ಸುಂದರಿ ರುಕ್ಮಿಣೀದೇವಿಯನ್ನು ಬಲವಂತವಾಗಿ ಕರೆತಂದು ರಾಕ್ಷಸ ವಿಧಿಯಂತೆ ಅವಳೊಂದಿಗೆ ವಿವಾಹವಾದನು ಎಂದು ನಾವು ಕೇಳಿದ್ದೇವೆ. ॥18॥

(ಶ್ಲೋಕ-19)

ಮೂಲಮ್

ಭಗವನ್ ಶ್ರೋತುಮಿಚ್ಛಾಮಿ ಕೃಷ್ಣಸ್ಯಾಮಿತತೇಜಸಃ ।
ಯಥಾ ಮಾಗಧಶಾಲ್ವಾದೀನ್ ಜಿತ್ವಾ ಕನ್ಯಾಮುಪಾಹರತ್ ॥

ಅನುವಾದ

ಮಹಾತ್ಮರೇ! ಪರಮತೇಜಸ್ವಿಯಾದ ಶ್ರೀಕೃಷ್ಣನು ಜರಾಸಂಧ, ಶಾಲ್ವ ಮೊದಲಾದ ರಾಜರನ್ನು ಗೆದ್ದು ಯಾವ ವಿಧಿಯಿಂದ ರುಕ್ಮಿಣಿಯನ್ನು ಅಪಹರಿಸಿದನು? ಇದನ್ನು ಕೇಳಲು ನಾನು ಇಚ್ಛಿಸುತ್ತೇನೆ. ॥19॥

(ಶ್ಲೋಕ-20)

ಮೂಲಮ್

ಬ್ರಹ್ಮನ್ ಕೃಷ್ಣಕಥಾಃ ಪುಣ್ಯಾ ಮಾಧ್ವೀರ್ಲೋಕಮಲಾಪಹಾಃ ।
ಕೋ ನು ತೃಪ್ಯೇತ ಶೃಣ್ವಾನಃ ಶ್ರುತಜ್ಞೋ ನಿತ್ಯನೂತನಾಃ ॥

ಅನುವಾದ

ಬ್ರಹ್ಮರ್ಷಿಗಳೇ! ನಿಶ್ಚಯವಾಗಿಯೂ ಭಗವಾನ್ ಶ್ರೀಕೃಷ್ಣನ ಲೀಲಾ ಪ್ರಸಂಗಗಳು ಪುಣ್ಯತಮವಾದವುಗಳು. ಜಗತ್ತಿನ ಪಾಪಗಳನ್ನು ಹೋಗಲಾಡಿಸಿ, ಪವಿತ್ರಮಾಡುವಂತಹುದು. ಇಂತಹ ನಿತ್ಯನೂತನವಾದ ಆ ಲೀಲೆಗಳನ್ನು ಶ್ರವಣಿಸಿ ಯಾವ ರಸಿಕನು ತಾನೇ ತೃಪ್ತಿಹೊಂದಬಲ್ಲನು? ॥20॥

(ಶ್ಲೋಕ-21)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ರಾಜಾಸೀದ್ಭೀಷ್ಮಕೋ ನಾಮ ವಿದರ್ಭಾಧಿಪತಿರ್ಮಹಾನ್ ।
ತಸ್ಯ ಪಂಚಾಭವನ್ ಪುತ್ರಾಃ ಕನ್ಯೈಕಾ ಚ ವರಾನನಾ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ವಿದರ್ಭದೇಶಕ್ಕೆ ಭೀಷ್ಮಕ ಮಹಾರಾಜನು ಅಧಿಪತಿಯಾಗಿದ್ದನು. ಅವನಿಗೆ ಐವರು ಪುತ್ರರೂ, ಓರ್ವ ಸುಂದರಿಯಾದ ಕನ್ಯೆ ಇದ್ದಳು. ॥21॥

(ಶ್ಲೋಕ-22)

ಮೂಲಮ್

ರುಕ್ಮ್ಯಗ್ರಜೋ ರುಕ್ಮರಥೋ ರುಕ್ಮಬಾಹುರನಂತರಃ ।
ರುಕ್ಮಕೇಶೋ ರುಕ್ಮಮಾಲೀ ರುಕ್ಮಿಣ್ಯೇಷಾಂ ಸ್ವಸಾ ಸತೀ ॥

ಅನುವಾದ

ಹಿರಿಯ ಪುತ್ರನ ಹೆಸರು ರುಕ್ಮಿ ಎಂದಿದ್ದು, ರುಕ್ಮರಥ, ರುಕ್ಮಬಾಹು, ರುಕ್ಮಕೇಶ ಮತ್ತು ರುಕ್ಮಮಾಲಿ ಎಂಬ ನಾಲ್ವರು ಸಹೋದರ ಹೆಸರುಗಳು. ಸತೀ ರುಕ್ಮಿಣಿಯು ಇವರಿಗೆ ಸಹೋದರಿಯಾಗಿದ್ದಳು. ॥22॥

(ಶ್ಲೋಕ-23)

ಮೂಲಮ್

ಸೋಪಶ್ರುತ್ಯ ಮುಕುಂದಸ್ಯ ರೂಪವೀರ್ಯಗುಣಶ್ರಿಯಃ ।
ಗೃಹಾಗತೈರ್ಗೀಯಮಾನಾಸ್ತಂ ಮೇನೇ ಸದೃಶಂ ಪತಿಮ್ ॥

ಅನುವಾದ

ಭೀಷ್ಮಕನ ಅರಮನೆಗೆ ಬರುತ್ತಿದ್ದ ಹರಿದಾಸರಿಂದ ಪ್ರಶಂಸಿಸಲ್ಪಟ್ಟ ಭಗವಾನ್ ಶ್ರೀಕೃಷ್ಣನ ಸೌಂದರ್ಯ, ಪರಾಕ್ರಮ, ಗುಣ-ವೈಭವಗಳನ್ನು ರುಕ್ಮಿಣಿಯು ಕೇಳಿದಳು. ಆಗ ಆಕೆಯು ಶ್ರೀಕೃಷ್ಣನೇ ನನಗೆ ಅನುರೂಪನಾದ ಪತಿಯೆಂದು ನಿಶ್ಚಯಿಸಿದಳು. ॥23॥

(ಶ್ಲೋಕ-24)

ಮೂಲಮ್

ತಾಂ ಬುದ್ಧಿಲಕ್ಷಣೌದಾರ್ಯರೂಪಶೀಲಗುಣಾಶ್ರಯಾಮ್ ।
ಕೃಷ್ಣಶ್ಚ ಸದೃಶೀಂ ಭಾರ್ಯಾಂ ಸಮುದ್ವೋಢುಂ ಮನೋ ದಧೇ ॥

ಅನುವಾದ

ಅತ್ತ ಭಗವಾನ್ ಶ್ರೀಕೃಷ್ಣನೂ ರುಕ್ಮಿಣಿಯು ಅತ್ಯಂತ ಸುಂದರಳೂ, ಪರಮ ಬುದ್ಧಿವಂತೆಯೂ, ಉದಾರಳೂ, ಸೌಂದರ್ಯ-ಶೀಲ ಸ್ವಭಾವ ಗುಣಗಳಿಂದ ಅದ್ವಿತೀಯಳೂ ಆಗಿರುವಳೆಂದು ತಿಳಿದುಕೊಂಡು ರುಕ್ಮಿಣಿಯೇ ತನಗೆ ಅನುರೂಪ ಪತ್ನಿಯೆಂದೇ ಭಾವಿಸಿ ಅವಳೊಂದಿಗೆ ವಿವಾಹವಾಗುವುದಾಗಿ ನಿಶ್ಚಯಿಸಿದನು. ॥24॥

(ಶ್ಲೋಕ-25)

ಮೂಲಮ್

ಬಂಧೂನಾಮಿಚ್ಛತಾಂ ದಾತುಂ ಕೃಷ್ಣಾಯ ಭಗಿನೀಂ ನೃಪ ।
ತತೋ ನಿವಾರ್ಯ ಕೃಷ್ಣದ್ವಿಡ್ರುಕ್ಮೀ ಚೈದ್ಯಮಮನ್ಯತ ॥

ಅನುವಾದ

ರುಕ್ಮಿಣಿಯ ವಿವಾಹವು ಶ್ರೀಕೃಷ್ಣನೊಂದಿಗೆ ಆಗಬೇಕೆಂದು ಬಂಧು-ಬಾಂಧವರು ಬಯಸುತ್ತಿದ್ದರು. ಆದರೆ ರುಕ್ಮಿಯು ಶ್ರೀಕೃಷ್ಣನನ್ನು ಬಹಳವಾಗಿ ದ್ವೇಷಿಸುತ್ತಿದ್ದನು. ಅವನು ಆಕೆಯನ್ನು ವಿವಾಹ ಮಾಡಿಕೊಡಲು ತಡೆದು, ತನ್ನ ಮಿತ್ರನಾದ ಶಿಶುಪಾಲನೇ ನಮ್ಮ ತಂಗಿಗೆ ಯೋಗ್ಯವರನೆಂದು ತಿಳಿಯುತ್ತಿದ್ದನು. ॥25॥

(ಶ್ಲೋಕ-26)

ಮೂಲಮ್

ತದವೇತ್ಯಾಸಿತಾಪಾಂಗೀ ವೈದರ್ಭೀ ದುರ್ಮನಾ ಭೃಶಮ್ ।
ವಿಚಿಂತ್ಯಾಪ್ತಂ ದ್ವಿಜಂ ಕಂಚಿತ್ ಕೃಷ್ಣಾಯ ಪ್ರಾಹಿಣೋದ್ದ್ರುತಮ್ ॥

ಅನುವಾದ

ತನ್ನ ಹಿರಿಯಣ್ಣನಾದ ರುಕ್ಮಿಯು ಶಿಶುಪಾಲನೊಂದಿಗೆ ನನ್ನ ವಿವಾಹ ಮಾಡಲಿದ್ದಾನೆಂದು ತಿಳಿದ ಪರಮಸುಂದರಳಾದ ರುಕ್ಮಿಣಿಯು ಅತ್ಯಂತ ದುಃಖಿತಳಾಗಿ ಬಹಳವಾಗಿ ಯೋಚಿಸಿ ಕೊನೆಗೆ ತನ್ನ ವಿಶ್ವಾಸಪಾತ್ರನಾದ ಓರ್ವ ಬ್ರಾಹ್ಮಣನ ಮೂಲಕ ಕೂಡಲೇ ಶ್ರೀಕೃಷ್ಣನಿಗೆ ಸಂದೇಶವನ್ನು ಕಳಿಸಿದಳು. ॥26॥

(ಶ್ಲೋಕ-27)

ಮೂಲಮ್

ದ್ವಾರಕಾಂ ಸ ಸಮಭ್ಯೇತ್ಯ ಪ್ರತೀಹಾರೈಃ ಪ್ರವೇಶಿತಃ ।
ಅಪಶ್ಯದಾದ್ಯಂ ಪುರುಷಮಾಸೀನಂ ಕಾಂಚನಾಸನೇ ॥

ಅನುವಾದ

ಆ ಬ್ರಾಹ್ಮಣನು ದ್ವಾರಕಾಪಟ್ಟಣಕ್ಕೆ ತಲುಪಿದಾಗ ದ್ವಾರಪಾಲಕರು ಕೃಷ್ಣನ ಅರಮನೆಯೊಳಗೆ ಕರೆದುಕೊಂಡು ಹೋದರು. ಅಲ್ಲಿ ಅವನು ಆದಿ ಪುರುಷನಾದ ಭಗವಾನ್ ಶ್ರೀಕೃಷ್ಣನು ಸ್ವರ್ಣ ಸಿಂಹಾಸನದ ಮೇಲೆ ವಿರಾಜಮಾನನಾಗಿ ಇರುವುದನ್ನು ನೋಡಿದನು. ॥27॥

(ಶ್ಲೋಕ-28)

ಮೂಲಮ್

ದೃಷ್ಟ್ವಾ ಬ್ರಹ್ಮಣ್ಯದೇವಸ್ತಮವರುಹ್ಯ ನಿಜಾಸನಾತ್ ।
ಉಪವೇಶ್ಯಾರ್ಹಯಾಂಚಕ್ರೇ ಯಥಾತ್ಮಾನಂ ದಿವೌಕಸಃ ॥

ಅನುವಾದ

ಬ್ರಾಹ್ಮಣರ ಪರಮಭಕ್ತನಾದ ಭಗವಾನ್ ಶ್ರೀಕೃಷ್ಣನು ಆ ಭೂಸುರೋತ್ತಮನನ್ನು ನೋಡುತ್ತಲೇ ತನ್ನ ಆಸನದಿಂದ ಇಳಿದು, ಅವನನ್ನು ತನ್ನ ಸಿಂಹಾಸನದಲ್ಲಿ, ಕುಳ್ಳಿರಿಸಿ ದೇವತೆಗಳು ಭಗವಂತನನ್ನು ಪೂಜಿಸುವಂತೆಯೇ ಅವನನ್ನು ಪೂಜಿಸಿದನು. ॥28॥

(ಶ್ಲೋಕ-29)

ಮೂಲಮ್

ತಂ ಭುಕ್ತವಂತಂ ವಿಶ್ರಾಂತಮುಪಗಮ್ಯ ಸತಾಂ ಗತಿಃ ।
ಪಾಣಿನಾಭಿಮೃಶನ್ ಪಾದಾವವ್ಯಗ್ರಸ್ತಮಪೃಚ್ಛತ ॥

ಅನುವಾದ

ಆದರ-ಸತ್ಕಾರವಾದ ಬಳಿಕ, ಕುಶಲ ಪ್ರಶ್ನೆಗಳಾದವು. ಬ್ರಾಹ್ಮಣನು ಉಂಡು-ತಿಂದು ವಿಶ್ರಾಂತಿ ಪಡೆಯುತ್ತಿದ್ದಾಗ ಪರಮಾಶ್ರಯನಾದ ಶ್ರೀಕೃಷ್ಣನು ಅವನ ಬಳಿಯಲ್ಲಿ ಕುಳಿತು ತನ್ನ ಕೋಮಲವಾದ ಕೈಗಳಿಂದ ಅವನ ಪಾದಸೇವೆಯನ್ನು ಮಾಡುತ್ತಾ, ಶಾಂತ ಭಾವದಿಂದ ಕೇಳಿದನು - ॥29॥

(ಶ್ಲೋಕ-30)

ಮೂಲಮ್

ಕಚ್ಚಿದ್ವಜವರಶ್ರೇಷ್ಠ ಧರ್ಮಸ್ತೇ ವೃದ್ಧಸಮ್ಮತಃ ।
ವರ್ತತೇ ನಾತಿಕೃಚ್ಛ್ರೇಣ ಸಂತುಷ್ಟಮನಸಃ ಸದಾ ॥

ಅನುವಾದ

ದ್ವಿಜಶ್ರೇಷ್ಠನೇ! ನಿನ್ನ ಮನಸ್ಸು ಸದಾ ಸರ್ವದಾ ಸಂತುಷ್ಟವಾಗಿದೆಯಲ್ಲ? ಹಿರಿಯರಿಗೆ ಒಪ್ಪಿಗೆಯಾದ ಧರ್ಮವನ್ನು ಆಚರಿಸಲು ನಿನಗೆ ಕಷ್ಟವೇನೂ ಆಗುತ್ತಿಲ್ಲವಲ್ಲ! ॥30॥

(ಶ್ಲೋಕ-31)

ಮೂಲಮ್

ಸಂತುಷ್ಟೋ ಯರ್ಹಿ ವರ್ತೇತ ಬ್ರಾಹ್ಮಣೋ ಯೇನ ಕೇನಚಿತ್ ।
ಅಹೀಯಮಾನಃ ಸ್ವಾದ್ಧರ್ಮಾತ್ ಸ ಹ್ಯಸ್ಯಾಖಿಲಕಾಮಧುಕ್ ॥

ಅನುವಾದ

ಬ್ರಾಹ್ಮಣನು ದೊರೆತುದರಲ್ಲಿ ಸಂತುಷ್ಟನಾಗಿದ್ದು, ಸ್ವಧರ್ಮವನ್ನು ಪಾಲಿಸುತ್ತಾ ಅದರಿಂದ ಚ್ಯುತನಾಗದಿದ್ದರೆ ಆ ಸಂತೋಷವೇ ಅವನ ಸಮಸ್ತ ಕಾಮನೆಗಳನ್ನು ಪೂರ್ಣಗೊಳಿಸುತ್ತದೆ. ॥31॥

(ಶ್ಲೋಕ-32)

ಮೂಲಮ್

ಅಸಂತುಷ್ಟೋಸಕೃಲ್ಲೋಕಾನಾಪ್ನೋತ್ಯಪಿ ಸುರೇಶ್ವರಃ ।
ಅಕಿಂಚನೋಪಿ ಸಂತುಷ್ಟಃ ಶೇತೇ ಸರ್ವಾಂಗವಿಜ್ವರಃ ॥

ಅನುವಾದ

ಇಂದ್ರಪದವಿಯೂ ದೊರೆತರೂ ಸಂತೋಷವಾಗದಿರು ವವನು ಸುಖಕ್ಕಾಗಿ ಒಂದು ಲೋಕದಿಂದ ಮತ್ತೊಂದು ಲೋಕಗಳಿಗೂ ಪದೇ-ಪದೇ ಅಲೆಯುತ್ತಾ ಎಂದಿಗೂ ಶಾಂತಿಯಿಂದ ಕುಳ್ಳಿರಲಾಗುವುದಿಲ್ಲ. ಆದರೆ ಬಳಿಯಲ್ಲಿ ಸ್ವಲ್ಪವೂ ಸಂಗ್ರಹ-ಪರಿಗ್ರಹವಿಲ್ಲದಿರುವವನು ಅದೇ ಸ್ಥಿತಿಯಲ್ಲಿ ಸಂತುಷ್ಟನಾಗಿದ್ದರೆ, ಅವನಿಗೆ ಎಲ್ಲ ರೀತಿಯ ಸಂತಾಪರಹಿತವಾದ ಸುಖ-ನಿದ್ದೆಯು ಬರುತ್ತದೆ. ॥32॥

(ಶ್ಲೋಕ-33)

ಮೂಲಮ್

ವಿಪ್ರಾನ್ ಸ್ವಲಾಭಸಂತುಷ್ಟಾನ್ ಸಾಧೂನ್ ಭೂತಸುಹೃತ್ತಮಾನ್ ।
ನಿರಹಂಕಾರಿಣಃ ಶಾಂತಾನ್ ನಮಸ್ಯೇ ಶಿರಸಾಸಕೃತ್ ॥

ಅನುವಾದ

ತಾನಾಗಿ ದೊರೆತಿರುವ ವಸ್ತುವಿನಲ್ಲಿ ಸಂತೋಷಪಡುವ, ಸ್ವಭಾವವು ಅತ್ಯಂತ ಮೃದು ಮಧುರವಾಗಿದ್ದು, ಸಮಸ್ತ ಪ್ರಾಣಿಗಳ ಹಿತೈಷಿಯಾದ, ಅಹಂಕಾರ ರಹಿತರಾಗಿ ಶಾಂತರಾದ ಬ್ರಾಹ್ಮಣರನ್ನು ನಾನು ಸದಾಕಾಲ ತಲೆಬಾಗಿ ನಮಸ್ಕರಿಸುತ್ತೇನೆ. ॥33॥

(ಶ್ಲೋಕ-34)

ಮೂಲಮ್

ಕಚ್ಚಿದ್ವಃ ಕುಶಲಂ ಬ್ರಹ್ಮನ್ ರಾಜತೋ ಯಸ್ಯ ಹಿ ಪ್ರಜಾಃ ।
ಸುಖಂ ವಸಂತಿ ವಿಷಯೇ ಪಾಲ್ಯಮಾನಾಃ ಸ ಮೇ ಪ್ರಿಯಃ ॥

ಅನುವಾದ

ಬ್ರಾಹ್ಮಣೋತ್ತಮನೇ! ರಾಜನು ನಿಮ್ಮ ಯೋಗ-ಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವನಲ್ಲ? ಯಾರ ರಾಜ್ಯದಲ್ಲಿ ಪ್ರಜೆಗಳು ರಾಜನಿಂದ ಪಾಲಿಸಲ್ಪಡುತ್ತಾ, ಸುಖದಿಂದ ಇರುವರೋ, ಅಂತಹ ರಾಜನು ನನಗೆ ಅತ್ಯಂತ ಪ್ರಿಯನು. ॥34॥

(ಶ್ಲೋಕ-35)

ಮೂಲಮ್

ಯತಸ್ತ್ವಮಾಗತೋ ದುರ್ಗಂ ನಿಸ್ತೀರ್ಯೇಹ ಯದಿಚ್ಛಯಾ ।
ಸರ್ವಂ ನೋ ಬ್ರೂಹ್ಯಗುಹ್ಯಂ ಚೇತ್ ಕಿಂ ಕಾರ್ಯಂ ಕರವಾಮ ತೇ ॥

ಅನುವಾದ

ಭೂಸುರ ಶ್ರೇಷ್ಠರೇ! ನೀವು ಎಲ್ಲಿಂದ, ಯಾವ ಕಾರ್ಯಾರ್ಥವಾಗಿ, ಯಾವ ಅಭಿಲಾಷೆಯಿಂದ ಇಷ್ಟೊಂದು ಕಠಿಣವಾದ ಮಾರ್ಗವನ್ನು ಕ್ರಮಿಸಿ ಇಲ್ಲಿಗೆ ಆಗಮಿಸಿರುವಿರಿ. ಅಂತಹ ವಿಶೇಷವಾದ ಗೋಪ್ಯವಲ್ಲವಾಗಿದ್ದರೆ ನನಗೆ ಹೇಳಿರಿ. ನಾನು ನಿಮಗೆ ಯಾವ ಸೇವೆ ಮಾಡಲಿ? ಅಪ್ಪಣೆ ಕೊಡಿರಿ. ॥35॥

(ಶ್ಲೋಕ-36)

ಮೂಲಮ್

ಏವಂ ಸಂಪೃಷ್ಟಸಂಪ್ರಶ್ನೋ ಬ್ರಾಹ್ಮಣಃ ಪರಮೇಷ್ಠಿನಾ ।
ಲೀಲಾಗೃಹೀತದೇಹೇನ ತಸ್ಮೈ ಸರ್ವಮವರ್ಣಯತ್ ॥

ಅನುವಾದ

ಪರೀಕ್ಷಿತನೇ! ಲೀಲಾಮಾನುಷ ವಿಗ್ರಹನಾದ ಭಗವಾನ್ ಶ್ರೀಕೃಷ್ಣನು ಹೀಗೆ ಬ್ರಾಹ್ಮಣನಲ್ಲಿ ವಿಚಾರಿಸಿದಾಗ, ಅವನು ಎಲ್ಲವನ್ನೂ ಅರುಹಿದ ಬಳಿಕ ರುಕ್ಮಿಣೀದೇವಿಯ ಸಂದೇಶವನ್ನು ಭಗವಂತನಲ್ಲಿ ನಿವೇದಿಸಿಕೊಂಡನು. ॥36॥

(ಶ್ಲೋಕ-37)

ಮೂಲಮ್ (ವಾಚನಮ್)

ರುಕ್ಮಿಣ್ಯುವಾಚ

ಮೂಲಮ್

ಶ್ರುತ್ವಾ ಗುಣಾನ್ ಭುವನಸುಂದರ ಶೃಣ್ವತಾಂ ತೇ
ನಿರ್ವಿಶ್ಯ ಕರ್ಣವಿವರೈರ್ಹರತೋಂಗತಾಪಮ್ ।
ರೂಪಂ ದೃಶಾಂ ದೃಶಿಮತಾಮಖಿಲಾರ್ಥಲಾಭಂ
ತ್ವಯ್ಯಚ್ಯುತಾವಿಶತಿ ಚಿತ್ತಮಪತ್ರಪಂ ಮೇ ॥

ಅನುವಾದ

ರುಕ್ಮಿಣೀದೇವಿಯು ಹೇಳಿರುವಳು — ಓ ತ್ರಿಭುವನ ಸುಂದರನೇ! ನಿನ್ನ ಗುಣಗಳು ಶ್ರವಣಿಸುವವರ ಕಿವಿಗಳ ಮೂಲಕ ಹೃದಯವನ್ನು ಪ್ರವೇಶಿಸಿ ಸರ್ವಾಂಗಗಳ ತಾಪವನ್ನು, ಜನ್ಮ-ಜನ್ಮಾಂತರದ ಉರಿಯನ್ನು ಕಳೆಯುತ್ತವೆ. ನಿನ್ನ ರೂಪ- ಸೌಂದರ್ಯವಾದರೋ ಕಣ್ಣುಗಳಿಗೆ ಧರ್ಮಾರ್ಥಕಾಮ-ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನೂ ಕೊಡುತ್ತದೆ. ನಿನ್ನ ದಿವ್ಯರೂಪವನ್ನು ಸಂದರ್ಶಿಸಿದವರಿಗೆ ಸಕಲ ಸಿದ್ಧಿಗಳೂ ದೊರಕುತ್ತವೆ. ಅಂತಹ ಗುಣಸಾಗರನಾದ ಅಚ್ಯುತನೇ! ನಿನ್ನಲ್ಲಿ, ನನ್ನ ಮನಸ್ಸು ಯಾವುದೇ ನಾಚಿಕೆಯಿಲ್ಲದೆ ನೆಟ್ಟಿದೆ. ॥37॥

(ಶ್ಲೋಕ-38)

ಮೂಲಮ್

ಕಾ ತ್ವಾ ಮುಕುಂದ ಮಹತೀ ಕುಲಶೀಲರೂಪ-
ವಿದ್ಯಾವಯೋದ್ರವಿಣಧಾಮಭಿರಾತ್ಮತುಲ್ಯಮ್ ।
ಧೀರಾ ಪತಿಂ ಕುಲವತೀ ನ ವೃಣೀತ ಕನ್ಯಾ
ಕಾಲೇ ನೃಸಿಂಹ ನರಲೋಕಮನೋಭಿರಾಮಮ್ ॥

ಅನುವಾದ

ಪ್ರೇಮಸ್ವರೂಪನಾದ ಶ್ಯಾಮ ಸುಂದರನೇ! ಯಾವ ದೃಷ್ಟಿಯಿಂದ ನೋಡಿದರೂ, ಕುಲ, ಶೀಲ, ಸ್ವಭಾವ, ಸೌಂದರ್ಯ, ವಿದ್ಯೆ, ವಯಸ್ಸು, ಧನ-ಧಾಮ - ಹೀಗೆ ಎಲ್ಲದರಲ್ಲಿಯೂ ನೀನು ಅದ್ವಿತೀಯನಾಗಿರುವೆ. ನಿನ್ನಂತೆ ನೀನೇ ಆಗಿರುವೆ. ನರಶ್ರೇಷ್ಠನೇ! ನೀನೇ ಹೇಳು. ಸತ್ಕುಲ ಪ್ರಸೂತೆಯಾದ, ಧೈರ್ಯಶಾಲಿಯಾದ, ಯಾವ ಕನ್ಯೆಯು ತಾನೇ ಕಾಲವು ಸನ್ನಿಹಿತವಾದಾಗ ಸಕಲ ಸದ್ಗುಣ ಸಂಪನ್ನನಾದ, ನರಲೋಕದ ಪ್ರಾಣಿಗಳ ಮನಸ್ಸನ್ನು ಆನಂದಗೊಳಿಸುವ ಸುಂದರನಾದ ನಿನ್ನನ್ನು ಪತಿಯನ್ನಾಗಿ ವರಿಸದೇ ಇರುವಳು? ॥38॥

(ಶ್ಲೋಕ-39)

ಮೂಲಮ್

ತನ್ಮೇ ಭವಾನ್ ಖಲು ವೃತಃ ಪತಿರಂಗ ಜಾಯಾ-
ಮಾತ್ಮಾರ್ಪಿತಶ್ಚ ಭವತೋತ್ರ ವಿಭೋ ವಿಧೇಹಿ ।
ಮಾ ವೀರಭಾಗಮಭಿಮರ್ಶತು ಚೈದ್ಯ ಆರಾದ್
ಗೋಮಾಯುವನ್ಮೃಗಪತೇರ್ಬಲಿಮಂಬುಜಾಕ್ಷ ॥

ಅನುವಾದ

ಪ್ರಿಯತಮನೇ! ನಾನು ನಿನ್ನನ್ನು ಪತಿಯನ್ನಾಗಿ ವರಿಸಿಬಿಟ್ಟಿದ್ದೇನೆ. ನಾನು ನಿನಗೆ ಆತ್ಮ ಸಮರ್ಪಣೆ ಮಾಡಿರುವೆನು. ನೀನು ಅಂತರ್ಯಾಮಿಯಾಗಿರುವೆ. ನನ್ನ ಹೃದಯದಲ್ಲಿರುವುದನ್ನು ನೀನು ತಿಳಿದೇ ಇರುವೆ. ನೀನು ಇಲ್ಲಿಗೆ ಬಂದು ನನ್ನನ್ನು ಪತ್ನಿಯನ್ನಾಗಿ ಸ್ವೀಕರಿಸು. ಕಮಲನಯನ! ಪ್ರಾಣವಲ್ಲಭ! ನಾನು ನಿನ್ನಂತಹ ವೀರನಿಗೆ ಸಮರ್ಪಿತಳಾಗಿರುವೆನು; ನಿನ್ನವಳಾಗಿ ರುವೆನು. ಸಿಂಹನಿಗೆ ಸಿಗಬೇಕಾದ ಭಾಗವನ್ನು ನರಿಯು ಮುಟ್ಟುವಂತೆ ಆ ಶಿಶುಪಾಲನು ಎಲ್ಲಾದರೂ ಹತ್ತಿರಕ್ಕೆ ಬಂದು ನನ್ನನ್ನು ಸ್ಪರ್ಶಿಸದಿರಲಿ. ॥39॥

(ಶ್ಲೋಕ-40)

ಮೂಲಮ್

ಪೂರ್ತೇಷ್ಟದತ್ತನಿಯಮವ್ರತದೇವವಿಪ್ರ-
ಗುರ್ವರ್ಚನಾದಿಭಿರಲಂ ಭಗವಾನ್ ಪರೇಶಃ ।
ಆರಾಧಿತೋ ಯದಿ ಗದಾಗ್ರಜ ಏತ್ಯ ಪಾಣಿಂ
ಗೃಹ್ಣಾತು ಮೇ ನ ದಮಘೋಷಸುತಾದಯೋನ್ಯೇ ॥

ಅನುವಾದ

ನಾನು ಈ ಹಿಂದೆ ಮಾಡಿದ ಇಷ್ಟಾ-ಪೂರ್ತಾದಿಗಳಿಂದಲೂ, ದಾನಗಳಿಂದಲೂ, ವ್ರತ ನಿಯಮಾದಿಗಳಿಂದಲೂ, ದೇವ-ಬ್ರಾಹ್ಮಣ ಗುರು ಜನರನ್ನು ಪೂಜಿಸುವುದರಿಂದಲೂ ಭಗವಾನ್ ಪರಮೇಶ್ವರನ ಆರಾಧನೆಯಿಂದ ಅವನು ಪ್ರಸನ್ನನಾಗಿದ್ದರೆ ಭಗವಾನ್ ಶ್ರೀಕೃಷ್ಣನು ಆಗಮಿಸಿ ನನ್ನ ಪಾಣಿಗ್ರಹಣಮಾಡಲಿ. ಶಿಶುಪಾಲನೇ ಆಗಲೀ, ಬೇರೆ ಯಾರೇ ಆಗಲಿ ನನ್ನ ಕೈ ಹಿಡಿಯುವುದು ಬೇಡ. ॥40॥

(ಶ್ಲೋಕ-41)

ಮೂಲಮ್

ಶ್ವೋಭಾವಿನಿ ತ್ವಮಜಿತೋದ್ವಹನೇ ವಿದರ್ಭಾನ್
ಗುಪ್ತಃ ಸಮೇತ್ಯ ಪೃತನಾಪತಿಭಿಃ ಪರೀತಃ ।
ನಿರ್ಮಥ್ಯ ಚೈದ್ಯಮಗಧೇಂದ್ರಬಲಂ ಪ್ರಸಹ್ಯ
ಮಾಂ ರಾಕ್ಷಸೇನ ವಿಧಿನೋದ್ವಹ ವೀರ್ಯಶುಲ್ಕಾಮ್ ॥

ಅನುವಾದ

ಪ್ರಭೋ! ನೀನು ಅಜಿತನಾಗಿರುವೆ. ನನ್ನ ವಿವಾಹವು ನಡೆಯುವ ಒಂದುದಿನ ಮುಂಚಿತವಾಗಿ ನೀನು ನಮ್ಮ ರಾಜಧಾನಿಗೆ ಗುಪ್ತರೂಪದಿಂದ ಬಂದುಬಿಡು. ಮತ್ತೆ ಶಿಶುಪಾಲ ಹಾಗೂ ಜರಾಸಂಧರ ಸೇನೆಗಳನ್ನು ಧ್ವಂಸಮಾಡಿ ವೀರ್ಯಶುಲ್ಕಳಾದ ನನ್ನನ್ನು ಬಲವಂತವಾಗಿ ಸೆಳೆದೊಯ್ದು ರಾಕ್ಷಸವಿಧಿಯಂತೆ ಪಾಣಿಗ್ರಹಣ ಮಾಡಿಕೋ. ॥41॥

(ಶ್ಲೋಕ-42)

ಮೂಲಮ್

ಅಂತಃಪುರಾಂತರಚರೀಮನಿಹತ್ಯ ಬಂಧೂಂ-
ಸ್ತ್ವಾಮುದ್ವಹೇ ಕಥಮಿತಿ ಪ್ರವದಾಮ್ಯುಪಾಯಮ್ ।
ಪೂರ್ವೇದ್ಯುರಸ್ತಿ ಮಹತೀ ಕುಲದೇವಿಯಾತ್ರಾ
ಯಸ್ಯಾಂ ಬಹಿರ್ನವವಧೂರ್ಗಿರಿಜಾಮುಪೇಯಾತ್ ॥

ಅನುವಾದ

ಅಂತಃಪುರದ ರಾಣೀವಾಸದಲ್ಲಿರುವ ನನ್ನನ್ನು ಅಪಹರಿಸಿಕೊಂಡು ಬರಬೇಕಾದರೆ ತಡೆಯಲು ಬರುವ ರಾಜಭಟರನ್ನು, ಬಂಧುಗಳನ್ನು ಕೊಲ್ಲದೆ ಹೇಗೆ ತರಲಿ? ಎಂದು ನೀನು ಯೋಚಿಸುವೆಯಾದರೆ, ಇದಕ್ಕೊಂದು ಉಪಾಯವನ್ನು ನಾನು ತಿಳಿಸುತ್ತೇನೆ. ನಮ್ಮ ಕುಲಾಚಾರದಂತೆ ವಿವಾಹದ ಹಿಂದಿನ ದಿವಸ ಕುಲದೇವಿಯದರ್ಶನ ಮಾಡಲು ದೊಡ್ಡದೊಂದು ಯಾತ್ರೆಯೇ ಹೊರಡುತ್ತದೆ. ಅದರಲ್ಲಿ ವಿವಾಹವಾಗುವ ನವವಧುವು ಗಿರಿಜಾದೇವಿಯ ಮಂದಿರಕ್ಕೆ ಹೋಗಬೇಕು. ಆ ಸಮಯದಲ್ಲಿ ನೀನು ನನ್ನನು ಅಪಹರಿಸಿಕೊಂಡು ಹೋಗಬಹುದು. ॥42॥

(ಶ್ಲೋಕ-43)

ಮೂಲಮ್

ಯಸ್ಯಾಂಘ್ರಿಪಂಕಜರಜಃಸ್ನಪನಂ ಮಹಾಂತೋ
ವಾಂಛಂತ್ಯುಮಾಪತಿರಿವಾತ್ಮತಮೋಪಹತ್ಯೈ ।
ಯರ್ಹ್ಯಂಬುಜಾಕ್ಷ ನ ಲಭೇಯ ಭವತ್ಪ್ರಸಾದಂ
ಜಹ್ಯಾಮಸೂನ್ ವ್ರತಕೃಶಾನ್ಶತಜನ್ಮಭಿಃ ಸ್ಯಾತ್ ॥

ಅನುವಾದ

ಕಮಲಾಕ್ಷನೇ! ಉಮಾಪತಿಯಾದ ಭಗವಾನ್ ಶಂಕರನಿಗೆ ಸಮಾನರಾದ ದೊಡ್ಡ-ದೊಡ್ಡ ಮಹಾಪುರುಷರೂ ಕೂಡ ಆತ್ಮಶುದ್ಧಿಗಾಗಿ ನಿನ್ನ ಚರಣ ಕಮಲಗಳ ಧೂಳಿಯಲ್ಲಿ ಸ್ನಾನ ಮಾಡಲು ಬಯಸುತ್ತಾರೆ. ನನಗೇನಾದರೂ ನಿನ್ನ ಪ್ರಸಾದವು, ಚರಣ ರಜವು ಪಡೆಯಲಾಗದಿದ್ದರೆ ವ್ರತೋಪವಾಸಾದಿಗಳಿಂದ ಶರೀರವನ್ನು ಶೋಷಿಸಿ ಪ್ರಾಣತ್ಯಾಗ ಮಾಡುತ್ತೇನೆ. ಬೇಕಾದರೆ ನೂರಾರು ಜನ್ಮಗಳು ಕಳೆದಾದರೂ ನಿನ್ನ ಆ ಪ್ರಸಾದವನ್ನು ಅವಶ್ಯಕವಾಗಿ ಪಡೆಯುತ್ತೇನೆ. ॥43॥

(ಶ್ಲೋಕ-44)

ಮೂಲಮ್ (ವಾಚನಮ್)

ಬ್ರಾಹ್ಮಣ ಉವಾಚ

ಮೂಲಮ್

ಇತ್ಯೇತೇ ಗುಹ್ಯಸಂದೇಶಾ ಯದುದೇವ ಮಯಾಹೃತಾಃ ।
ವಿಮೃಶ್ಯ ಕರ್ತುಂ ಯಚ್ಚಾತ್ರ ಕ್ರಿಯತಾಂ ತದನಂತರಮ್ ॥

ಅನುವಾದ

ಬ್ರಾಹ್ಮಣನು ಹೇಳುತ್ತಾನೆ — ಯದುವಂಶ ಶಿರೋಮಣಿಯೇ! ಇದೇ ರುಕ್ಮಿಣಿಯು ಕಳಿಸಿದ ಗುಹ್ಯವಾದ ಸಂದೇಶವಾಗಿದೆ. ಅದನ್ನು ಎತ್ತಿಕೊಂಡು ನಾನು ನಿನ್ನ ಬಳಿಗೆ ಬಂದಿರುವೆನು. ಈ ಸಂಬಂಧದಲ್ಲಿ ಏನು ಮಾಡಬೇಕೋ ಅದನ್ನು ಪರ್ಯಾಲೋಚಿಸಿ, ಅದಕ್ಕನುಸಾರವಾಗಿ ಅತಿ ತ್ವರೆಯಿಂದ ಕಾರ್ಯವನ್ನು ಮಾಡು. ॥44॥

ಅನುವಾದ (ಸಮಾಪ್ತಿಃ)

ಐವತ್ತೆರಡನೆಯ ಅಧ್ಯಾಯವು ಮುಗಿಯಿತು. ॥52॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ
ರುಕ್ಮಿಣ್ಯುದ್ವಾಹಪ್ರಸ್ತಾವೇ ದ್ವಿಪಂಚಾಶತ್ತಮೋಽಧ್ಯಾಯಃ ॥52॥