೫೧

[ಐವತ್ತೋಂದನೇಯ ಅಧ್ಯಾಯ]

ಭಾಗಸೂಚನಾ

ಕಾಲಯವನನು ಭಸ್ಮವಾದುದು - ಮುಚುಕುಂದನ ಕಥೆ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ತಂ ವಿಲೋಕ್ಯ ವಿನಿಷ್ಕ್ರಾಂತಮುಜ್ಜಿಹಾನಮಿವೋಡುಪಮ್ ।
ದರ್ಶನೀಯತಮಂ ಶ್ಯಾಮಂ ಪೀತಕೌಶೇಯವಾಸಸಮ್ ॥

(ಶ್ಲೋಕ-2)

ಮೂಲಮ್

ಶ್ರೀವತ್ಸವಕ್ಷಸಂ ಭ್ರಾಜತ್ಕೌಸ್ತುಭಾಮುಕ್ತಕಂಧರಮ್ ।
ಪೃಥುದೀರ್ಘಚತುರ್ಬಾಹುಂ ನವಕಂಜಾರುಣೇಕ್ಷಣಮ್ ॥

(ಶ್ಲೋಕ-3)

ಮೂಲಮ್

ನಿತ್ಯಪ್ರಮುದಿತಂ ಶ್ರೀಮತ್ಸುಕಪೋಲಂ ಶುಚಿಸ್ಮಿತಮ್ ।
ಮುಖಾರವಿಂದಂ ಬಿಭ್ರಾಣಂ ಸ್ಫುರನ್ಮಕರಕುಂಡಲಮ್ ॥

(ಶ್ಲೋಕ-4)

ಮೂಲಮ್

ವಾಸುದೇವೋ ಹ್ಯಯಮಿತಿ ಪುಮಾನ್ ಶ್ರೀವತ್ಸಲಾಂಛನಃ ।
ಚತುರ್ಭುಜೋರವಿಂದಾಕ್ಷೋ ವನಮಾಲ್ಯತಿಸುಂದರಃ ॥

(ಶ್ಲೋಕ-5)

ಮೂಲಮ್

ಲಕ್ಷಣೈರ್ನಾರದಪ್ರೋಕ್ತೈರ್ನಾನ್ಯೋ ಭವಿತುಮರ್ಹತಿ ।
ನಿರಾಯುಧಶ್ಚಲನ್ ಪದ್ಭ್ಯಾಂ ಯೋತ್ಸ್ಯೇನೇನ ನಿರಾಯುಧಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತ ಮಹಾರಾಜ! ಮಥುರಾಪಟ್ಟಣದ ಮಹಾದ್ವಾರದಿಂದ ಹೊರಬಂದ ಶ್ರೀಕೃಷ್ಣನು ಆಗತಾನೆ ಉದಯಿಸಿದ ಪೂರ್ಣಚಂದ್ರನಂತೆ ಅತ್ಯಂತ ಸುಂದರವಾಗಿ ಕಾಣುತ್ತಿದ್ದನು. ಶ್ಯಾಮಲವರ್ಣನಾದ ಅವನು ದಿವ್ಯವಾದ ಪೀತಾಂಬರವನ್ನು ಉಟ್ಟಿದ್ದನು. ಅವನ ವಕ್ಷಃಸ್ಥಳದಲ್ಲಿ ಶ್ರೀವತ್ಸದ ಚಿಹ್ನೆಯಿತ್ತು. ಕೊರಳಲ್ಲಿ ಕೌಸ್ತುಭ ಮಣಿಯು ಹೊಳೆಯುತ್ತಿತ್ತು. ಅವನಿಗೆ ದಪ್ಪವಾಗಿಯೂ, ನೀಳವಾಗಿಯೂ ಇದ್ದ ನಾಲ್ಕು ಭುಜಗಳಿದ್ದವು. ಆಗ ತಾನೇ ಅರಳಿದ ಕಮಲದಂತಹ ಕಣ್ಣುಗಳನ್ನು ಹೊಂದಿದ್ದನು. ಮುಖ ಕಮಲದಲ್ಲಿ ರಾಶಿ-ರಾಶಿಯಾಗಿ ಆನಂದವು ಮಿನುಗುತ್ತಿತ್ತು. ಅವನ ಮಂದ-ಮಂದ ಮುಗುಳು ನಗೆಯು ನೋಡುವವರ ಮನಸ್ಸನ್ನು ಅಪಹರಿಸುತ್ತಿತ್ತು. ಕಿವಿಗಳಲ್ಲಿ ಮಕರಾಕೃತಿಯ ಕುಂಡಲಗಳು ಓಲಾಡುತ್ತಿದ್ದವು. ಅವನನ್ನು ನೋಡಿದ ಕಾಲಯವನನು - ಇವನೇ ವಾಸುದೇವನೂ ಮತ್ತು ನಾರದರು ಹೇಳಿದ್ದಂತೆ ಅವನು ಶ್ರೀವತ್ಸಲಾಂಛನನಾಗಿದ್ದನು. ಚತುರ್ಭುಜನಾಗಿದ್ದನು. ಕಮಲಾಕ್ಷನಾಗಿದ್ದನು. ವನಮಾಲಿಯಾಗಿದ್ದನು. ಕಡುಚೆಲುವನೂ ಆಗಿದ್ದನು. ಇವನು ಶ್ರೀಕೃಷ್ಣನಲ್ಲದೆ ಬೇರೆಯವನಲ್ಲವೆಂದು ನಿಶ್ಚಯಿಸಿದನು. ಅವನು ಆಯುಧ ರಹಿತನಾಗಿ ಕಾಲ್ನಡಿಗೆಯಲ್ಲೇ ಹೋಗುತ್ತಿರುವುದರಿಂದ ತಾನೂ ನಿರಾಯುಧನಾಗಿಯೇ ಇವನೊಂದಿಗೆ ಯುದ್ಧ ಮಾಡುವೆನೆಂದು ಕಾಲಯವನನು ನಿಶ್ಚಯಿಸಿದನು.॥1-5॥

(ಶ್ಲೋಕ-6)

ಮೂಲಮ್

ಇತಿ ನಿಶ್ಚಿತ್ಯ ಯವನಃ ಪ್ರಾದ್ರವಂತಂ ಪರಾಙ್ಮುಖಮ್ ।
ಅನ್ವಧಾವಜ್ಜಿಘೃಕ್ಷುಸ್ತಂ ದುರಾಪಮಪಿ ಯೋಗಿನಾಮ್ ॥

ಅನುವಾದ

ಹೀಗೆ ನಿಶ್ಚಯಿಸಿದ ಕಾಲಯವನನು ತನಗೆ ಬೆನ್ನತೋರಿ ಓಡಿ ಹೋಗುತ್ತಿದ್ದ, ಯೋಗಿಗಳಿಂದಲೂ ಹೊಂದಲು ಅಸಾಧ್ಯನಾಗಿದ್ದ ಶ್ರೀಕೃಷ್ಣನನ್ನು ಹಿಡಿಯಲಿಕ್ಕಾಗಿ ಅವನನ್ನು ಬೆನ್ನಟ್ಟಿಕೊಂಡು ಹೋದನು. ॥6॥

(ಶ್ಲೋಕ-7)

ಮೂಲಮ್

ಹಸ್ತಪ್ರಾಪ್ತಮಿವಾತ್ಮಾನಂ ಹರಿಣಾ ಸ ಪದೇ ಪದೇ ।
ನೀತೋ ದರ್ಶಯತಾ ದೂರಂ ಯವನೇಶೋದ್ರಿಕಂದರಮ್ ॥

ಅನುವಾದ

ಶ್ರೀಕೃಷ್ಣನು ಪ್ರತಿಯೊಂದು ಹೆಜ್ಜೆಯಲ್ಲೂ ಸಿಕ್ಕಿಬಿದ್ದನೆಂದೇ ಕಾಲಯವನಿಗೆ ಭಾಸವಾಗುತ್ತಿತ್ತು. ಆದರೆ ಲೀಲಾಮಾನುಷ ವಿಗ್ರಹನಾದ ಶ್ರೀಕೃಷ್ಣನು ಮಾತ್ರ ಅವನ ಕೈಗೆ ಸಿಗುತ್ತಿರಲಿಲ್ಲ. ಹೀಗೆ ಕಾಲಯವನನ್ನು ದೂರದ ಪರ್ವತ ಗುಹೆಯ ಬಳಿಗೆ ಕರೆದೊಯ್ದನು. ॥7॥

(ಶ್ಲೋಕ-8)

ಮೂಲಮ್

ಪಲಾಯನಂ ಯದುಕುಲೇ ಜಾತಸ್ಯ ತವ ನೋಚಿತಮ್ ।
ಇತಿ ಕ್ಷಿಪನ್ನನುಗತೋ ನೈನಂ ಪ್ರಾಪಾಹತಾಶುಭಃ ॥

ಅನುವಾದ

ಶ್ರೀಕೃಷ್ಣನನ್ನು ಹಿಡಿದು ಬಿಡಬೇಕೆಂದು ಅವನ ಹಿಂದೆಯೇ ಓಡುತ್ತಿದ್ದ ಕಾಲಯವನನು ಗಟ್ಟಿಯಾಗಿ ಕೂಗಿ ಶ್ರೀಕೃಷ್ಣನಿಗೆ ಹೇಳಿದನು - ಶ್ರೇಷ್ಠವಾದ ಯದುವಂಶದಲ್ಲಿ ಹುಟ್ಟಿರುವ ನಿನಗೆ ಯುದ್ಧದಿಂದ ಪಲಾಯನ ಮಾಡುವುದು ಉಚಿತವಲ್ಲ. ಹೀಗೆ ಆಕ್ಷೇಪಿಸುತ್ತಾ ಮುಂದೆ-ಮುಂದೆ ಹೋಗುತ್ತಿದ್ದರೂ ಕಾಲಯವನನಿಗೆ ಪಾಪಶೇಷವು ಇನ್ನೂ ಇದ್ದುದರಿಂದ ಭಗವಂತನು ಅವನ ಕೈಗೆ ಸಿಗಲಿಲ್ಲ. ॥8॥

(ಶ್ಲೋಕ-9)

ಮೂಲಮ್

ಏವಂ ಕ್ಷಿಪ್ತೋಪಿ ಭಗವಾನ್ ಪ್ರಾವಿಶದ್ಗಿರಿಕಂದರಮ್ ।
ಸೋಪಿ ಪ್ರವಿಷ್ಟಸ್ತತ್ರಾನ್ಯಂ ಶಯಾನಂ ದದೃಶೇ ನರಮ್ ॥

ಅನುವಾದ

ಹೀಗೆ ಅವನು ಆಕ್ಷೇಪಿಸುತ್ತಿದ್ದರೂ ಅದನ್ನು ಲಕ್ಷಿಸದೆ ಭಗವಂತನು ಆ ಪರ್ವತದ ಗುಹೆಯೊಳಗೆ ಹೊಕ್ಕನು. ಅವನ ಹಿಂದೆಯೇ ಕಾಲಯವನನೂ ಗುಹೆಯೊಳಗೆ ಹೋದನು. ಆದರೆ ಅಲ್ಲಿ ಶ್ರೀಕೃಷ್ಣನನ್ನು ಕಾಣದೆ ಬೇರೊಬ್ಬ ಪುರುಷನು ಮಲಗಿರುವುದನ್ನು ನೋಡಿದನು. ॥9॥

(ಶ್ಲೋಕ-10)

ಮೂಲಮ್

ನನ್ವಸೌ ದೂರಮಾನೀಯ ಶೇತೇ ಮಾಮಿಹ ಸಾಧುವತ್ ।
ಇತಿ ಮತ್ವಾಚ್ಯುತಂ ಮೂಢಸ್ತಂ ಪದಾ ಸಮತಾಡಯತ್ ॥

ಅನುವಾದ

ನನ್ನನ್ನು ಇಷ್ಟು ದೂರಕ್ಕೆ ಕರೆತಂದು ಸಾಧುವಿನಂತೆ ಮಾಯಾವಿಯಾದ ಕೃಷ್ಣನು ಮಲಗಿರುವನಲ್ಲ? ಹೀಗೆ ಹೇಳುತ್ತಾ ಮೂಢನಾದ ಕಾಲಯವನನು ಮಲಗಿರುವವನು ಅಚ್ಯುತನೆಂದೇ ಭಾವಿಸಿ ಕಾಲಿನಿಂದ ಅವನನ್ನು ಒದೆದನು. ॥10॥

(ಶ್ಲೋಕ-11)

ಮೂಲಮ್

ಸ ಉತ್ಥಾಯ ಚಿರಂ ಸುಪ್ತಃ ಶನೈರುನ್ಮೀಲ್ಯ ಲೋಚನೇ ।
ದಿಶೋ ವಿಲೋಕಯನ್ ಪಾರ್ಶ್ವೇ ತಮದ್ರಾಕ್ಷೀದವಸ್ಥಿತಮ್ ॥

ಅನುವಾದ

ಆ ಪುರುಷನು ಬಹಳ ದಿನಗಳಿಂದ ಅಲ್ಲೆ ಮಲಗಿದ್ದನು. ಕಾಲಿನ ಒದೆತವು ತಾಕಿದಾಕ್ಷಣ ಅವನು ಎಚ್ಚರಗೊಂಡು ನಿಧಾನವಾಗಿ ಕಣ್ಣುಗಳನ್ನು ಬಿಡುತ್ತಾ ಎಲ್ಲ ದಿಕ್ಕುಗಳನ್ನು ನೋಡುತ್ತಾ, ಕಡೆಗೆ ತನ್ನ ಪಕ್ಕದಲ್ಲಿಯೇ ನಿಂತಿದ್ದ ಕಾಲಯವನನ್ನು ನೋಡಿದನು. ॥11॥

(ಶ್ಲೋಕ-12)

ಮೂಲಮ್

ಸ ತಾವತ್ತಸ್ಯ ರುಷ್ಟಸ್ಯ ದೃಷ್ಟಿಪಾತೇನ ಭಾರತ ।
ದೇಹಜೇನಾಗ್ನಿನಾ ದಗ್ಧೋ ಭಸ್ಮಸಾದಭವತ್ ಕ್ಷಣಾತ್ ॥

ಅನುವಾದ

ಪರೀಕ್ಷಿತನೇ! ಕೋಪಿಷ್ಠನಾದ ಆ ಪುರುಷನ ದೃಷ್ಟಿಯು ಬಿದ್ದೊಡನೆಯೇ ಕಾಲಯವನು ತನ್ನ ದೇಹದಿಂದಲೇ ಹುಟ್ಟಿದ ಅಗ್ನಿಯಿಂದ ಸುಟ್ಟು ಕ್ಷಣಾರ್ಧದಲ್ಲಿ ಬೂದಿಯಾದನು. ॥12॥

(ಶ್ಲೋಕ-13)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಕೋ ನಾಮ ಸ ಪುಮಾನ್ ಬ್ರಹ್ಮನ್ ಕಸ್ಯ ಕಿಂವೀರ್ಯ ಏವ ಚ ।
ಕಸ್ಮಾದ್ಗುಹಾಂ ಗತಃ ಶಿಶ್ಯೇ ಕಿನ್ತೇಜೋ ಯವನಾರ್ದನಃ ॥

ಅನುವಾದ

ಪರೀಕ್ಷಿದ್ರಾಜನು ಕೇಳಿದನು — ಪೂಜ್ಯರೇ! ಕೇವಲ ದೃಷ್ಟಿಪಾತದಿಂದಲೇ ಕಾಲಯವನನು ಭಸ್ಮವಾಗಿ ಹೋದನಲ್ಲ ಆ ಮಹಾಪುರುಷನು ಯಾರು? ಯಾವ ವಂಶದವನು? ಯಾರ ಮಗನು? ಅವನಲ್ಲಿ ಅಂತಹ ಶಕ್ತಿಯು ಹೇಗಿತ್ತು? ಅವನು ಪರ್ವತದ ಗುಹೆಯಲ್ಲಿ ಹೋಗಿ ಏಕೆ ಮಲಗಿದ್ದನು? ದಯಮಾಡಿ ಇವೆಲ್ಲವನ್ನೂ ಹೇಳಿರಿ. ॥13॥

(ಶ್ಲೋಕ-14)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಸ ಇಕ್ಷ್ವಾಕುಕುಲೇ ಜಾತೋ ಮಾಂಧಾತೃತನಯೋ ಮಹಾನ್ ।
ಮುಚುಕುಂದ ಇತಿ ಖ್ಯಾತೋ ಬ್ರಹ್ಮಣ್ಯಃ ಸತ್ಯಸಂಗರಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳಿದರು — ಎಲೈ ಪರೀಕ್ಷಿತನೇ! ಅವನು ಇಕ್ಷ್ವಾಕುವಂಶದ ಮಾಂಧಾತ ಮಹಾರಾಜನ ಪುತ್ರನಾದ ಮುಚುಕುಂದ ರಾಜನಾಗಿದ್ದನು. ಆತನು ಬ್ರಾಹ್ಮಣಪ್ರಿಯನೂ, ಸತ್ಯನಿಷ್ಠನೂ, ಸಂಗ್ರಾಮ ವಿಜಯಿಯೂ ಆಗಿದ್ದನು. ॥14॥

(ಶ್ಲೋಕ-15)

ಮೂಲಮ್

ಸ ಯಾಚಿತಃ ಸುರಗಣೈರಿಂದ್ರಾದ್ಯೈರಾತ್ಮರಕ್ಷಣೇ ।
ಅಸುರೇಭ್ಯಃ ಪರಿತ್ರಸ್ತೈಸ್ತದ್ರಕ್ಷಾಂ ಸೋಕರೋಚ್ಚಿರಮ್ ॥

ಅನುವಾದ

ಇಂದ್ರಾದಿ ದೇವತೆಗಳು ಒಮ್ಮೆ ಅಸುರರಿಂದ ಭಯಗೊಂಡಿದ್ದಾಗ ಅವರು ತಮ್ಮ ರಕ್ಷಣೆಗಾಗಿ ಮುಚುಕುಂದ ರಾಜನನ್ನು ಪ್ರಾರ್ಥಿಸಿಕೊಂಡರು. ಅವನು ಬಹಳ ದಿನಗಳವರೆಗೆ ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದನು. ॥15॥

(ಶ್ಲೋಕ-16)

ಮೂಲಮ್

ಲಬ್ಧ್ವಾ ಗುಹಂ ತೇ ಸ್ವಃಪಾಲಂ ಮುಚುಕುಂದ ಮಥಾಬ್ರುವನ್ ।
ರಾಜನ್ ವಿರಮತಾಂ ಕೃಚ್ಛ್ರಾದ್ಭವಾನ್ ನಃ ಪರಿಪಾಲನಾತ್ ॥

ಅನುವಾದ

ಬಹಳ ದಿವಸಗಳ ತರುವಾಯ ದೇವತೆಗಳ ಸೇನಾಪತಿಯಾಗಿ ಕಾರ್ತಿಕೆಯನು ದೊರಕಿದಾಗ ದೇವತೆಗಳು ಮುಚುಕುಂದನಿಗೆ ಹೇಳಿದರು - ಮಹಾರಾಜಾ! ನಮ್ಮನ್ನು ರಕ್ಷಿಸಲಿಕ್ಕಾಗಿ ನೀವು ಬಹಳ ಶ್ರಮಪಟ್ಟಿರುವಿರಿ. ಆದ್ದರಿಂದ ಈಗ ನೀವು ವಿಶ್ರಾಂತಿ ಪಡೆಯಿರಿ. ॥16॥

(ಶ್ಲೋಕ-17)

ಮೂಲಮ್

ನರಲೋಕೇ ಪರಿತ್ಯಜ್ಯ ರಾಜ್ಯಂ ನಿಹತಕಂಟಕಮ್ ।
ಅಸ್ಮಾನ್ ಪಾಲಯತೋ ವೀರ ಕಾಮಾಸ್ತೇ ಸರ್ವ ಉಜ್ಝಿತಾಃ ॥

ಅನುವಾದ

ವೀರಶಿರೋಮಣಿಯೇ! ನೀನು ನಮ್ಮ ರಕ್ಷಣೆಗಾಗಿ ಮರ್ತ್ಯಲೋಕದ ನಿಷ್ಕಂಟಕವಾದ ರಾಜ್ಯವನ್ನು ಜೀವನದ ಅಭಿಲಾಷೆಗಳನ್ನು, ಭೋಗಗಳನ್ನು ಪರಿತ್ಯಾಗ ಮಾಡಿರುವಿ. ॥17॥

(ಶ್ಲೋಕ-18)

ಮೂಲಮ್

ಸುತಾ ಮಹಿಷ್ಯೋ ಭವತೋ ಜ್ಞಾತಯೋಮಾತ್ಯಮಂತ್ರಿಣಃ ।
ಪ್ರಜಾಶ್ಚ ತುಲ್ಯಕಾಲೀಯಾ ನಾಧುನಾ ಸಂತಿ ಕಾಲಿತಾಃ ॥

ಅನುವಾದ

ಈಗ ನಿನ್ನ ಪುತ್ರರಾಗಲೀ, ಪತ್ನೀಯಾಗಲೀ, ಬಂಧು-ಬಾಂಧವರಾಗಲೀ, ಅಮಾತ್ಯ-ಮಂತ್ರಿಗಳಾಗಲೀ, ನೀನಿದ್ದಾಗ ಇದ್ದ ಪ್ರಜಾವರ್ಗವಾಗಲೀ ಯಾರೂ ಉಳಿಯಲಿಲ್ಲ. ಎಲ್ಲರೂ ಕಾಲವಶರಾಗಿ ಹೋಗಿದ್ದಾರೆ. ॥18॥

(ಶ್ಲೋಕ-19)

ಮೂಲಮ್

ಕಾಲೋ ಬಲೀಯಾನ್ ಬಲಿನಾಂ ಭಗವಾನೀಶ್ವರೋವ್ಯಯಃ ।
ಪ್ರಜಾಃ ಕಾಲಯತೇ ಕ್ರೀಡನ್ ಪಶುಪಾಲೋ ಯಥಾ ಪಶೂನ್ ॥

ಅನುವಾದ

ಕಾಲನೆಂಬುವನು ಸಮಸ್ತ ಬಲಿಷ್ಠರಿಗಿಂತಲೂ ಅತ್ಯಂತ ಬಲಿಷ್ಠನಾಗಿ ಇರುವನು. ಅವನು ಸಾಕ್ಷಾತ್ ಅವಿನಾಶಿಯಾದ ಭಗವತ್ಸ್ವರೂಪನಾಗಿರುವನು. ದನಗಾಯಿಗಳು ಹಸುಗಳನ್ನು ತನ್ನ ಅಧೀನದಲ್ಲಿ ಇಟ್ಟುಕೊಳ್ಳುವಂತೆ ಕಾಲನು ಆಡುತ್ತಾಡುತ್ತಲೇ ಸಮಸ್ತ ಪ್ರಜೆಗಳನ್ನು ತನ್ನ ಅಧೀನದಲ್ಲಿಟ್ಟುಕೊಳ್ಳುತ್ತಾನೆ. ॥19॥

(ಶ್ಲೋಕ-20)

ಮೂಲಮ್

ವರಂ ವೃಣೀಷ್ವ ಭದ್ರಂ ತೇ ಋತೇ ಕೈವಲ್ಯಮದ್ಯ ನಃ ।
ಏಕ ಏವೇಶ್ವರಸ್ತಸ್ಯ ಭಗವಾನ್ ವಿಷ್ಣುರವ್ಯಯಃ ॥

ಅನುವಾದ

ಮುಚುಕುಂದ ಮಹಾರಾಜ! ನಿನಗೆ ಮಂಗಳವಾಗಲಿ. ಮೋಕ್ಷಪದವಿಯೊಂದನ್ನು ಇಟ್ಟು ಬೇರೆ ಯಾವುದೇ ವರವನ್ನಾದರೂ ನೀನು ನಮ್ಮಿಂದ ಕೇಳಿ ಪಡೆದುಕೋ. ಏಕೆಂದರೆ, ಕೈವಲ್ಯ ಪದವಿಯನ್ನು ದಯಪಾಲಿಸುವ ಸಾಮರ್ಥ್ಯವು ಕೇವಲ ಅವಿನಾಶಿಯಾದ ಭಗವಾನ್ ವಿಷ್ಣವಿನಲ್ಲೇ ಇರುವುದು. ॥20॥

(ಶ್ಲೋಕ-21)

ಮೂಲಮ್

ಏವಮುಕ್ತಃ ಸ ವೈ ದೇವಾನಭಿವಂದ್ಯ ಮಹಾಯಶಾಃ ।
ಅಶಯಿಷ್ಟ ಗುಹಾವಿಷ್ಟೋ ನಿದ್ರಯಾ ದೇವದತ್ತಯಾ ॥

ಅನುವಾದ

ದೇವತೆಗಳು ಹೀಗೆ ಹೇಳಿದಾಗ ಪರಮಯಶಸ್ವಿಯಾದ ಮುಚುಕುಂದನು ಅವರಿಗೆ ವಂದಿಸಿ, ಬಹಳ ದಣಿದಿದ್ದರಿಂದ ನಿದ್ದೆಯನ್ನು ವರವಾಗಿ ಬೇಡಿಕೊಂಡನು. ಹೀಗೆ ದೇವತೆಗಳಿಂದ ವರವನ್ನು ಪಡೆದುಕೊಂಡು ನಿದ್ದೆಯಿಂದ ತುಂಬಿದವನಾಗಿ ಈ ಪರ್ವತದ ಗುಹೆಯಲ್ಲಿ ಬಂದು ಮಲಗಿದನು. ॥21॥

(ಶ್ಲೋಕ-22)

ಮೂಲಮ್

ಸ್ವಾಪಂ ಯಾತಂ ಯಸ್ತು ಮಧ್ಯೇ ಬೋಧಯೇತ್ತ್ವಾಮಚೇತನಃ ।
ಸ ತ್ವಯಾ ದೃಷ್ಟಮಾತ್ರಸ್ತು ಭಸ್ಮೀಭವತು ತತ್ಕ್ಷಣಾತ್ ॥

ಅನುವಾದ

ಆ ಸಮಯದಲ್ಲಿ ದೇವತೆಗಳು ಹೇಳಿದರು - ರಾಜನೇ! ಮಲಗಿದ್ದಾಗ ನಿನ್ನನ್ನು ಯಾವನಾದರು ಮೂರ್ಖನು ಎಬ್ಬಿಸಿಬಿಟ್ಟರೆ, ಅವನು ನಿನ್ನ ದೃಷ್ಟಿಬೀಳುತ್ತಲೇ ಭಸ್ಮವಾಗಿ ಹೋಗುವನು. ॥22॥

(ಶ್ಲೋಕ-23)

ಮೂಲಮ್

ಯವನೇ ಭಸ್ಮಸಾನ್ನೀತೇ ಭಗವಾನ್ ಸಾತ್ವತರ್ಷಭಃ ।
ಆತ್ಮಾನಂ ದರ್ಶಯಾಮಾಸ ಮುಚುಕುಂದಾಯ ಧೀಮತೇ ॥

(ಶ್ಲೋಕ-24)

ಮೂಲಮ್

ತಮಾಲೋಕ್ಯ ಘನಶ್ಯಾಮಂ ಪೀತಕೌಶೇಯವಾಸಸಮ್ ।
ಶ್ರೀವತ್ಸವಕ್ಷಸಂ ಭ್ರಾಜತ್ಕೌಸ್ತುಭೇನ ವಿರಾಜಿತಮ್ ॥

(ಶ್ಲೋಕ-25)

ಮೂಲಮ್

ಚತುರ್ಭುಜಂ ರೋಚಮಾನಂ ವೈಜಯಂತ್ಯಾ ಚ ಮಾಲಯಾ ।
ಚಾರುಪ್ರಸನ್ನವದನಂ ಸ್ಫುರನ್ಮಕರಕುಂಡಲಮ್ ॥

(ಶ್ಲೋಕ-26)

ಮೂಲಮ್

ಪ್ರೇಕ್ಷಣೀಯಂ ನೃಲೋಕಸ್ಯ ಸಾನುರಾಗಸ್ಮಿತೇಕ್ಷಣಮ್ ।
ಅಪೀಚ್ಯವಯಸಂ ಮತ್ತಮೃಗೇಂದ್ರೋದಾರವಿಕ್ರಮಮ್ ॥

(ಶ್ಲೋಕ-27)

ಮೂಲಮ್

ಪರ್ಯಪೃಚ್ಛನ್ಮಹಾಬುದ್ಧಿಸ್ತೇಜಸಾ ತಸ್ಯ ಧರ್ಷಿತಃ ।
ಶಂಕಿತಃ ಶನಕೈ ರಾಜಾ ದುರ್ಧರ್ಷಮಿವ ತೇಜಸಾ ॥

ಅನುವಾದ

ಪರೀಕ್ಷಿತನೇ! ಕಾಲಯವನನು ಭಸ್ಮವಾಗಿ ಹೋದಾಗ ಯದುವಂಶ ಶಿರೋಮಣಿಯಾದ ಭಗವಾನ್ ಶ್ರೀಕೃಷ್ಣನು ಧೀಮಂತನಾದ ಮುಚುಕುಂದನಿಗೆ ಕಾಣಿಸಿಕೊಂಡನು. ಭಗವಾನ್ ಶ್ರೀಕೃಷ್ಣನ ಶ್ರೀವಿಗ್ರಹವು ವರ್ಷಾಕಾಲದ ಮೇಘದಂತೆ ಶ್ಯಾಮಲವಾಗಿತ್ತು. ರೇಷ್ಮೆಯ ಪೀತಾಂಬರವನ್ನು ಧರಿಸಿದ್ದನು. ವಕ್ಷಃಸ್ಥಳದಲ್ಲಿ ಶ್ರೀವತ್ಸವೂ, ಕೊರಳಲ್ಲಿ ಕೌಸ್ತುಭ ಮಣಿಯೂ ವಿರಾಜಿಸುತ್ತಿತ್ತು. ಚುತರ್ಭುಜನಾಗಿದ್ದು, ವೈಜಯಂತಿಮಾಲೆಯು ಮಂಡಿಗಳವರೆಗೆ ನೇತಾಡುತ್ತಿತ್ತು. ಮುಖಕಮಲವು ಅತ್ಯಂತ ಸುಂದರವಾಗಿದ್ದು, ಪ್ರಸನ್ನತೆಯಿಂದ ಅರಳಿತ್ತು. ಕಿವಿಗಳಲ್ಲಿ ಮಕರಾಕೃತಿಯ ಕುಂಡಲಗಳು ಹೊಳೆಯುತ್ತಿದ್ದವು. ತುಟಿಗಳಲ್ಲಿ ಪ್ರೇಮಪೂರ್ಣವಾದ ಮಂದಹಾಸವಿತ್ತು. ಕಟಾಕ್ಷವೀಕ್ಷಣೆಯಿಂದ ಅನುರಾಗದ ಮಳೆಯನ್ನೇ ಸುರಿಸುವಂತಿತ್ತು. ಅತ್ಯಂತ ದರ್ಶನೀಯವಾದ ತರುಣಾವಸ್ಥೆಯಿದ್ದು, ಮದಿಸಿದ ಸಿಂಹದಂತೆ ಗಂಭೀರವಾದ ನಡಿಗೆಯುಳ್ಳವನಾಗಿದ್ದನು. ಮುಚುಕುಂದರಾಜನು ಬಹಳ ಬುದ್ಧಿವಂತನೂ, ಧೀರನೂ ಆಗಿದ್ದರೂ ಭಗವಂತನ ಇಂತಹ ದಿವ್ಯಜೋತಿರ್ಮಯ ಮೂರ್ತಿಯನ್ನು ನೋಡಿ ಚಕಿತನಾಗಿ ಅವನ ತೇಜಸ್ಸಿನಿಂದ ಹತಪ್ರಭನಾದನು. ಭಗವಂತನು ತನ್ನ ತೇಜಸ್ಸಿನಿಂದ ದುರ್ಧರ್ಷನಾಗಿ ಕಾಣುತ್ತಿದ್ದನು. ರಾಜನು ಸ್ವಲ್ಪ ಸಂಕೋಚದಿಂದಲೇ ಮೆಲ್ಲ-ಮೆಲ್ಲನೆ ಕೇಳಿದನು. ॥23-27॥

(ಶ್ಲೋಕ-28)

ಮೂಲಮ್ (ವಾಚನಮ್)

ಮುಚುಕುಂದ ಉವಾಚ

ಮೂಲಮ್

ಕೋ ಭವಾನಿಹ ಸಂಪ್ರಾಪ್ತೋ ವಿಪಿನೇ ಗಿರಿಗಹ್ವರೇ ।
ಪದ್ಭ್ಯಾಂ ಪದ್ಮಪಲಾಶಾಭ್ಯಾಂ ವಿಚರಸ್ಯುರುಕಂಟಕೇ ॥

ಅನುವಾದ

ಮುಚುಕುಂದ ರಾಜನು ಕೇಳಿದನು — ಸ್ವಾಮಿ! ನೀನು ಯಾರು? ಕಲ್ಲು-ಮುಳ್ಳುಗಳಿಂದ ಕೂಡಿದ ಈ ಘೋರ ಅರಣ್ಯದಲ್ಲಿ ತಾವರೆಯಂತಿರುವ ಕೋಮಲ ಚರಣಗಳಿಂದ ಏಕೆ ವಿಚರಿಸುತ್ತಿರುವೆ? ಈ ಪರ್ವತದ ಗುಹೆಯೊಳಗೆ ಬರುವ ಪ್ರಯೋಜನವಾದರೂ ಏನಿತ್ತು? ॥28॥

(ಶ್ಲೋಕ-29)

ಮೂಲಮ್

ಕಿಂಸ್ವಿತ್ತೇಜಸ್ವಿನಾಂ ತೇಜೋ ಭಗವಾನ್ ವಾ ವಿಭಾವಸುಃ ।
ಸೂರ್ಯಃ ಸೋಮೋ ಮಹೇಂದ್ರೋ ವಾ ಲೋಕಪಾಲೋಪರೋಪಿ ವಾ ॥

ಅನುವಾದ

ಮೂರ್ತಿಮತ್ತಾಗಿ ಬಂದಿರುವ ತೇಜಸ್ವಿಗಳ ತೇಜಸ್ಸೇ ನೀನಾಗಿರುವೆಯಾ? ಅಥವಾ ಭಗವಾನ್ ಅಗ್ನಿದೇವನಲ್ಲವಲ್ಲ! ನೀನು ಸೂರ್ಯ, ಚಂದ್ರ, ದೇವರಾಜ ಇಂದ್ರ, ಅಥವಾ ಬೇರೆ ಯಾವನಾದರೂ ಲೋಕ ಪಾಲನಾಗಿರುವೆಯಾ? ॥29॥

(ಶ್ಲೋಕ-30)

ಮೂಲಮ್

ಮನ್ಯೇ ತ್ವಾಂ ದೇವದೇವಾನಾಂ ತ್ರಯಾಣಾಂ ಪುರುಷರ್ಷಭಮ್ ।
ಯದ್ಬಾಧಸೇ ಗುಹಾಧ್ವಾಂತಂ ಪ್ರದೀಪಃ ಪ್ರಭಯಾ ಯಥಾ ॥

ಅನುವಾದ

ದೇವತೆಗಳ ಆರಾಧ್ಯರಾದ ಬ್ರಹ್ಮ, ವಿಷ್ಣು, ಶಿವ - ಇವರಲ್ಲಿ ಪುರುಷೋತ್ತಮನಾದ ಭಗವಾನ್ ನಾರಾಯಣನೇ ಆಗಿರುವೆ ಎಂದು ನಾನು ತಿಳಿಯುತ್ತೇನೆ. ಏಕೆಂದರೆ, ದೀಪವು ಕತ್ತಲೆಯನ್ನು ಓಡಿಸುವಂತೆ ನೀನು ನಿನ್ನ ಅಂಗಕಾಂತಿಯಿಂದ ಈ ಗುಹೆಯ ಅಂಧಕಾರವನ್ನು ದೂರ ಮಾಡುತ್ತಿರುವೆ. ॥30॥

(ಶ್ಲೋಕ-31)

ಮೂಲಮ್

ಶುಶ್ರೂಷತಾಮವ್ಯಲೀಕಮಸ್ಮಾಕಂ ನರಪುಂಗವ ।
ಸ್ವಜನ್ಮ ಕರ್ಮ ಗೋತ್ರಂ ವಾ ಕಥ್ಯತಾಂ ಯದಿ ರೋಚತೇ ॥

ಅನುವಾದ

ಪುರುಷ ಶ್ರೇಷ್ಠನೇ! ನಿನಗೆ ಉಚಿತವೆನಿಸಿದರೆ ನಿನ್ನ ಜನ್ಮ ಕರ್ಮ ಮತ್ತು ಗೋತ್ರಗಳನ್ನು ನನಗೆ ಹೇಳು. ಏಕೆಂದರೆ, ನಾನು ಶುದ್ಧವಾದ ಹೃದಯದಿಂದ ಅದನ್ನು ಕೇಳಲು ಬಯಸುತ್ತೇನೆ. ॥31॥

(ಶ್ಲೋಕ-32)

ಮೂಲಮ್

ವಯಂ ತು ಪುರುಷವ್ಯಾಘ್ರ ಐಕ್ಷ್ವಾಕಾಃ ಕ್ಷತ್ರಬಂಧವಃ ।
ಮುಚುಕುಂದ ಇತಿ ಪ್ರೋಕ್ತೋ ಯೌವನಾಶ್ವಾತ್ಮಜಃ ಪ್ರಭೋ ॥

ಅನುವಾದ

ಪುರುಷೋತ್ತಮನೇ! ನನ್ನ ವಿಷಯದಲ್ಲಿ ಕೇಳುವುದಾದರೆ, ನಾನು ಇಕ್ಷ್ವಾಕುವಂಶೀಯ ಕ್ಷತ್ರಿಯನು. ಮುಚುಕುಂದನೆಂದು ನನ್ನ ಹೆಸರು. ಯುವನಾಶ್ವನ ಮಗನಾದ ಮಾಂಧಾತನ ಮಗನಾಗಿದ್ದೇನೆ. ॥32॥

(ಶ್ಲೋಕ-33)

ಮೂಲಮ್

ಚಿರಪ್ರಜಾಗರಶ್ರಾಂತೋ ನಿದ್ರಯೋಪಹತೇಂದ್ರಿಯಃ ।
ಶಯೇಸ್ಮಿನ್ ವಿಜನೇ ಕಾಮಂ ಕೇನಾಪ್ಯುತ್ಥಾಪಿತೋಧುನಾ ॥

ಅನುವಾದ

ಪ್ರಭುವೇ! ನಾನು ಹಲವಾರು ವರ್ಷಗಳು ನಿದ್ರೆಯೇ ಇಲ್ಲದೆ ಬಹಳ ಆಯಾಸಗೊಂಡಿದ್ದೆ. ನಿದ್ರೆಯಿಂದ ನನ್ನ ಇಂದ್ರಿಯಗಳೆಲ್ಲವೂ ಶಕ್ತಿಹೀನವಾಗಿದ್ದವು. ಅದರಿಂದಾಗಿ ನಾನು ನಿರ್ಜನವಾಗಿದ್ದ ಈ ಗುಹೆಯಲ್ಲಿ ಮಲಗಿದ್ದೆ. ಈಗ ತಾನೇ ನನ್ನನ್ನು ಯಾರೋ ಎಚ್ಚರಿಸಿ ಬಿಟ್ಟರು. ॥33॥

(ಶ್ಲೋಕ-34)

ಮೂಲಮ್

ಸೋಪಿ ಭಸ್ಮೀಕೃತೋ ನೂನಮಾತ್ಮೀಯೇನೈವ ಪಾಪ್ಮನಾ ।
ಅನಂತರಂ ಭವಾನ್ ಶ್ರೀಮಾನ್ ಲಕ್ಷಿತೋಮಿತ್ರಶಾತನಃ ॥

ಅನುವಾದ

ತಾನು ಮಾಡಿದ್ದ ಪಾಪದ ಫಲವಾಗಿಯೇ ಆ ವ್ಯಕ್ತಿಯು ಭಸ್ಮವಾಗಿಹೋದನು. ಅನಂತರ ಶತ್ರುನಾಶಕನಾದ ಪರಮ ಸುಂದರನಾದ ನೀನು ನನಗೆ ಕಾಣಿಸಿಕೊಂಡೆ. ॥34॥

(ಶ್ಲೋಕ-35)

ಮೂಲಮ್

ತೇಜಸಾ ತೇವಿಷಹ್ಯೇಣ ಭೂರಿ ದ್ರಷ್ಟುಂ ನ ಶಕ್ನುಮಃ ।
ಹತೌಜಸೋ ಮಹಾಭಾಗ ಮಾನನೀಯೋಸಿ ದೇಹಿನಾಮ್ ॥

ಅನುವಾದ

ಮಹಾನುಭಾವಾ! ನೀನು ಸಮಸ್ತ ಪ್ರಾಣಿಗಳಿಗೂ ಪೂಜ್ಯನಾಗಿರುವೆ. ನಿನ್ನ ಸಹಿಸಲಶಕ್ಯವಾದ ದಿವ್ಯ ತೇಜಸ್ಸಿನಿಂದಾಗಿ ನಿನ್ನನ್ನು ದಿಟ್ಟಿಸಿ ನೋಡಲೂ ನನಗೆ ಸಾಧ್ಯವಾಗುತ್ತಿಲ್ಲ. ನಿನ್ನ ತೇಜಸ್ಸಿನ ಮುಂದೆ ನನ್ನ ತೇಜಸ್ಸು ಉಡುಗಿಹೋಗಿ ಬಿಟ್ಟಿದೆ. ॥35॥

(ಶ್ಲೋಕ-36)

ಮೂಲಮ್

ಏವಂ ಸಂಭಾಷಿತೋ ರಾಜ್ಞಾ ಭಗವಾನ್ ಭೂತಭಾವನಃ ।
ಪ್ರತ್ಯಾಹ ಪ್ರಹಸನ್ ವಾಣ್ಯಾ ಮೇಘನಾದಗಭೀರಯಾ ॥

ಅನುವಾದ

ಮುಚುಕುಂದ ಮಹಾರಾಜನು ಹೀಗೆ ಹೇಳಲು ಸಮಸ್ತ ಪ್ರಾಣಿಗಳ ನಿಯಾಮಕನಾದ ಭಗವಾನ್ ಶ್ರೀಕೃಷ್ಣನು ನಗುತ್ತಾ ಮೇಘಗಂಭೀರವಾದ ಧ್ವನಿಯಿಂದ ಹೀಗೆಂದನು. ॥36॥

(ಶ್ಲೋಕ-37)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಜನ್ಮಕರ್ಮಾಭಿಧಾನಾನಿ ಸಂತಿ ಮೇಂಗ ಸಹಸ್ರಶಃ ।
ನ ಶಕ್ಯಂತೇನುಸಂಖ್ಯಾತುಮನಂತತ್ವಾನ್ಮಯಾಪಿ ಹಿ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ಪ್ರಿಯ ಮುಚುಕುಂದನೇ! ನನ್ನ ಜನ್ಮ, ಕರ್ಮ ಮತ್ತು ನಾಮಧೇಯಗಳು ಸಾವಿರಾರು ಸಂಖ್ಯೆಯಲ್ಲಿವೆ. ಅವು ಅನಂತವಾಗಿವೆ; ಆದ್ದರಿಂದ ಅವುಗಳನ್ನು ವಿವರಿಸಿ ಹೇಳಲು ನನಗೂ ಶಕ್ಯವಿಲ್ಲ. ॥37॥

(ಶ್ಲೋಕ-38)

ಮೂಲಮ್

ಕ್ವಚಿದ್ರಜಾಂಸಿ ವಿಮಮೇ ಪಾರ್ಥಿವಾನ್ಯುರುಜನ್ಮಭಿಃ ।
ಗುಣಕರ್ಮಾಭಿಧಾನಾನಿ ನ ಮೇ ಜನ್ಮಾನಿ ಕರ್ಹಿಚಿತ್ ॥

ಅನುವಾದ

ಯಾವನಾದರೂ ಮನುಷ್ಯನು ಹಲವಾರು ಜನ್ಮಗಳಲ್ಲಿ ಭೂಮಿಯಲ್ಲಿರುವ ಧೂಳಿನ ಕಣಗಳನ್ನು ಎಣಿಸಬಲ್ಲನು. ಆದರೆ ನನ್ನ ಜನ್ಮ, ಗುಣ, ಕರ್ಮ, ನಾಮಗಳನ್ನು ಯಾರೇ ಆದರೂ ಎಂದಿಗೂ ಎಣಿಕೆ ಮಾಡುವ ಅಥವಾ ತಿಳಿಯುವ ಸಾಧ್ಯತೆಯೇ ಇಲ್ಲ. ॥38॥

(ಶ್ಲೋಕ-39)

ಮೂಲಮ್

ಕಾಲತ್ರಯೋಪಪನ್ನಾನಿ ಜನ್ಮಕರ್ಮಾಣಿ ಮೇ ನೃಪ ।
ಅನುಕ್ರಮಂತೋ ನೈವಾಂತಂ ಗಚ್ಛಂತಿ ಪರಮರ್ಷಯಃ ॥

ಅನುವಾದ

ಮಹಾರಾಜ! ಸನಕ, ಸನಂದನರೇ ಮೊದಲಾದ ಮಹರ್ಷಿಗಳು ನನ್ನ ತ್ರಿಕಾಲ ಸಿದ್ಧವಾದ ಜನ್ಮ-ಕರ್ಮಗಳನ್ನು ವರ್ಣಿಸುತ್ತಲೇ ಇರುತ್ತಾರೆ. ಆದರೆ ಅದರ ಕೊನೆಯನ್ನು ಅವರೆಂದಿಗೂ ಮುಟ್ಟುವುದಿಲ್ಲ. ನನ್ನ ಜನ್ಮ ಕರ್ಮಗಳಿಗೆ ಅಂತ್ಯವೆಂಬುದೇ ಇಲ್ಲ. ॥39॥

(ಶ್ಲೋಕ-40)

ಮೂಲಮ್

ತಥಾಪ್ಯದ್ಯತನಾನ್ಯಂಗ ಶೃಣುಷ್ವ ಗದತೋ ಮಮ ।
ವಿಜ್ಞಾಪಿತೋ ವಿರಿಂಚೇನ ಪುರಾಹಂ ಧರ್ಮಗುಪ್ತಯೇ ।
ಭೂಮೇರ್ಭಾರಾಯಮಾಣಾನಾಮಸುರಾಣಾಂ ಕ್ಷಯಾಯ ಚ ॥

ಅನುವಾದ

ಪ್ರಿಯ ಮುಚುಕುಂದನೇ! ಹೀಗಿದ್ದರೂ ನಾನು ನನ್ನ ವರ್ತಮಾನ ಜನ್ಮ, ಕರ್ಮ ಮತ್ತು ನಾಮಗಳನ್ನು ವರ್ಣಿಸುವೆನು ಕೇಳು. ಹಿಂದೆ ಬ್ರಹ್ಮನು ಅಸುರರನ್ನು ಸಂಹರಿಸಿ ಭೂಭಾರವನ್ನು ಇಳಿಸಬೇಕೆಂದು ನನ್ನನ್ನು ಪ್ರಾರ್ಥಿಸಿದ್ದನು. ॥40॥

(ಶ್ಲೋಕ-41)

ಮೂಲಮ್

ಅವತೀರ್ಣೋ ಯದುಕುಲೇ ಗೃಹ ಆನಕದುಂದುಭೇಃ ।
ವದಂತಿ ವಾಸುದೇವೇತಿ ವಸುದೇವಸುತಂ ಹಿ ಮಾಮ್ ॥

ಅನುವಾದ

ಚತುರ್ಮುಖನ ಪ್ರಾರ್ಥನೆಯಂತೆ ನಾನು ಯದುವಂಶದಲ್ಲಿ ವಸುದೇವನ ಮನೆಯಲ್ಲಿ ಅವತರಿಸಿರುವೆನು. ಈಗ ನಾನು ವಸುದೇವನ ಪುತ್ರನಾದ್ದರಿಂದ ಜನರು ನನ್ನನ್ನು ವಾಸುದೇವನೆಂದು ಕರೆಯುತ್ತಾರೆ. ॥41॥

(ಶ್ಲೋಕ-42)

ಮೂಲಮ್

ಕಾಲನೇಮಿರ್ಹತಃ ಕಂಸಃ ಪ್ರಲಂಬಾದ್ಯಾಶ್ಚ ಸದ್ವಷಃ ।
ಅಯಂ ಚ ಯವನೋ ದಗ್ಧೋ ರಾಜಂಸ್ತೇ ತಿಗ್ಮಚಕ್ಷುಷಾ ॥

ಅನುವಾದ

ಇದುವರೆಗೆ ಸತ್ಪುರುಷರನ್ನು ದ್ವೇಷಿಸುತ್ತಿದ್ದ ಕಂಸನಾಗಿ ಹುಟ್ಟಿದ್ದ ಕಾಲನೇಮಿ ಎಂಬ ಅಸುರನನ್ನೂ, ಪ್ರಲಂಬನೇ ಮೊದಲಾದ ಕಂಸನ ಅನುಯಾಯಿಗಳಾದ ಹಲವಾರು ರಾಕ್ಷಸರನ್ನು ಸಂಹಾರ ಮಾಡಿದ್ದೇನೆ. ರಾಜನೇ! ಈ ಕಾಲಯವನನೂ ಕೂಡ ನನ್ನ ಪ್ರೇರಣೆಯಿಂದಲೇ ನಿನ್ನ ತೀಕ್ಷ್ಣದೃಷ್ಟಿ ಬಿದ್ದಾಕ್ಷಣ ಭಸ್ಮನಾಗಿ ಹೋದನು. ॥42॥

(ಶ್ಲೋಕ-43)

ಮೂಲಮ್

ಸೋಹಂ ತವಾನುಗ್ರಹಾರ್ಥಂ ಗುಹಾಮೇತಾಮುಪಾಗತಃ ।
ಪ್ರಾರ್ಥಿತಃ ಪ್ರಚುರಂ ಪೂರ್ವಂ ತ್ವಯಾಹಂ ಭಕ್ತವತ್ಸಲಃ ॥

ಅನುವಾದ

ಅದೇ ನಾನು ನಿನ್ನ ಮೇಲೆ ಕೃಪೆದೋರಲು ಈ ಗುಹೆಗೆ ಬಂದಿರುವೆನು. ಭಕ್ತವತ್ಸಲನಾದ ನನ್ನನ್ನು ಹಿಂದೆ ನೀನು ಬಹಳವಾಗಿ ಆರಾಧಿಸಿದ್ದೆ. ॥43॥

(ಶ್ಲೋಕ-44)

ಮೂಲಮ್

ವರಾನ್ ವೃಣೀಷ್ವ ರಾಜರ್ಷೇ ಸರ್ವಾನ್ ಕಾಮಾನ್ ದದಾಮಿ ತೇ ।
ಮಾಂ ಪ್ರಪನ್ನೋ ಜನಃ ಕಶ್ಚಿನ್ ನಭೂಯೋರ್ಹತಿ ಶೋಚಿತುಮ್ ॥

ಅನುವಾದ

ಅದಕ್ಕಾಗಿ ರಾಜರ್ಷಿಯೇ! ನಿನಗೆ ಅಭೀಷ್ಟವಾದ ವರವನ್ನು ಬೇಡು. ನಾನು ನಿನ್ನ ಯಾವುದೇ ಕಾಮನೆಯನ್ನಾದರೂ ಪೂರ್ಣಗೊಳಿಸುವೆನು. ನನಗೆ ಶರಣಾಗತನಾದ ಯಾರೇ ಆಗಲಿ ಪುನಃ ಶೋಕಪಡಬಾರದು; ಇದು ನನ್ನ ಆಶಯವಾಗಿದೆ. ॥44॥

(ಶ್ಲೋಕ-45)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಯುಕ್ತಸ್ತಂ ಪ್ರಣಮ್ಯಾಹ ಮುಚುಕುಂದೋ ಮುದಾನ್ವಿತಃ ।
ಜ್ಞಾತ್ವಾ ನಾರಾಯಣಂ ದೇವಂ ಗರ್ಗವಾಕ್ಯಮನುಸ್ಮರನ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಹೀಗೆ ಹೇಳಿದಾಗ ಮುಚುಕುಂದನಿಗೆ- ‘ಯದುವಂಶದಲ್ಲಿ ಭಗವಂತನು ಅವತರಿಸಲಿದ್ದಾನೆ’ ಎಂಬ ವೃದ್ಧರಾದ ಗರ್ಗರ ಮಾತು ನೆನಪಿಗೆ ಬಂತು. ಇವನು ಸಾಕ್ಷಾತ್ ಭಗವಾನ್ನಾರಾಯಣನೇ ಆಗಿರುವನೆಂದು ಅವನು ತಿಳಿದು ಆನಂದತುಂದಿಲನಾಗಿ ಭಗವಂತನ ಚರಣಗಳಲ್ಲಿ ವಂದಿಸಿಕೊಂಡು ಇಂತೆಂದನು. ॥45॥

(ಶ್ಲೋಕ-46)

ಮೂಲಮ್ (ವಾಚನಮ್)

ಮುಚುಕುಂದ ಉವಾಚ

ಮೂಲಮ್

ವಿಮೋಹಿತೋಯಂ ಜನ ಈಶ ಮಾಯಯಾ
ತ್ವದೀಯಯಾ ತ್ವಾಂ ನ ಭಜತ್ಯನರ್ಥದೃಕ್ ।
ಸುಖಾಯ ದುಃಖಪ್ರಭವೇಷು ಸಜ್ಜತೇ
ಗೃಹೇಷು ಯೋಷಿತ್ಪುರುಷಶ್ಚ ವಂಚಿತಃ ॥

ಅನುವಾದ

ಮುಚುಕುಂದನು ಹೇಳಿದನು — ಪ್ರಭೋ! ಈ ಜನರು ನಿನ್ನ ಮಾಯೆಯಿಂದ ಅತ್ಯಂತ ವಿಮೋಹಿತರಾಗಿದ್ದಾರೆ. ನಿನ್ನಿಂದ ವಿಮುಖರಾದ ಇವರು ಅನರ್ಥಕಾರಿ ಸಂಸಾರದಲ್ಲೇ ಸಿಕ್ಕಿ ಹಾಕಿಕೊಂಡು ನಿನ್ನನ್ನು ಭಜಿಸುತ್ತಿಲ್ಲ. ನಿನ್ನ ಮಾಯೆಯಿಂದ ವಂಚಿತರಾದ ಸ್ತ್ರೀ-ಪುರುಷರು ಸುಖವನ್ನು ಬಯಸಿ ದುಃಖಕ್ಕೆ ಮೂಲ ಕಾರಣವಾದ ಮನೆ-ಮಠಗಳೆಂಬ ಮಮಕಾರದಿಂದ ಸಂಸಾರದಲ್ಲಿ ಆಸಕ್ತರಾಗಿರುತ್ತಾರೆ. ॥46॥

(ಶ್ಲೋಕ-47)

ಮೂಲಮ್

ಲಬ್ಧ್ವಾ ಜನೋ ದುರ್ಲಭಮತ್ರ ಮಾನುಷಂ
ಕಥಂಚಿದವ್ಯಂಗ ಮಯತ್ನತೋನಘ ।
ಪಾದಾರವಿಂದಂ ನ ಭಜತ್ಯಸನ್ಮತಿ-
ರ್ಗೃಹಾಂಧಕೂಪೇ ಪತಿತೋ ಯಥಾ ಪಶುಃ ॥

ಅನುವಾದ

ಪಾಪರೂಪವಾದ ಸಂಸಾರದಿಂದ ಸರ್ವಥಾ ರಹಿತವಾದ ಪ್ರಭುವೇ! ಈ ಭೂಮಿಯು ಅತ್ಯಂತ ಪವಿತ್ರವಾದ ಕರ್ಮಭೂಮಿಯಾಗಿದೆ. ಇಲ್ಲಿ ಮನುಷ್ಯ ಜನ್ಮವು ಲಭಿಸುವುದು ಅತ್ಯಂತ ದುರ್ಲಭವೇ ಸರಿ. ಸರ್ವಾಂಗ ಪರಿಪೂರ್ಣವಾದ ಮನುಷ್ಯ ಶರೀರವನ್ನು ಪ್ರಯತ್ನವಿಲ್ಲದೆ ಹೇಗೋ ಹೊಂದಿಯೂ ಸದ್ಬುದ್ಧಿಯಿಲ್ಲದ ಜನರು ನಿನ್ನ ಪಾದಾರವಿಂದವನ್ನು ಭಜಿಸುವುದಿಲ್ಲ. ಹುಲ್ಲಿನ ಆಸೆಯಿಂದ ಪಶುವು ಪಾಳುಬಾವಿಯಲ್ಲಿ ಬೀಳುವಂತೆ ಮನುಷ್ಯನು ಸುಖಮಯವಾಗಿ ಕಾಣುವ ಸಂಸಾರವೆಂಬ ಕಗ್ಗತ್ತಲೆಯ ಬಾವಿಯಲ್ಲಿ ಬೀಳುತ್ತಾನೆ. ॥47॥

(ಶ್ಲೋಕ-48)

ಮೂಲಮ್

ಮಮೈಷ ಕಾಲೋಜಿತ ನಿಷ್ಫಲೋ ಗತೋ
ರಾಜ್ಯಶ್ರಿಯೋನ್ನದ್ಧಮದಸ್ಯ ಭೂಪತೇಃ ।
ಮರ್ತ್ಯಾತ್ಮಬುದ್ಧೇಃ ಸುತದಾರಕೋಶಭೂ-
ಷ್ವಾಸಜ್ಜಮಾನಸ್ಯ ದುರಂತಚಿಂತಯಾ ॥

ಅನುವಾದ

ಓ ಅಜಿತ ಪ್ರಭುವೇ? ನಾನೊಬ್ಬ ರಾಜನಾಗಿದ್ದು, ಸಂಪತ್ಸಮೃದ್ಧವಾದ ರಾಜ್ಯಲಕ್ಷ್ಮಿಯನ್ನು ಪಡೆದು ಉನ್ಮತ್ತನಾಗಿದ್ದೆನು. ದೇಹಾತ್ಮ ಬುದ್ಧಿಯುಳ್ಳ ನಾನು ಪತ್ನೀ-ಪುತ್ರರು-ಭಂಡಾರ-ರಾಜ್ಯ-ಐಶ್ವರ್ಯ-ಇತ್ಯಾದಿಗಳಲ್ಲಿಯೇ ಸದಾಕಾಲ ಆಸಕ್ತನಾಗಿದ್ದೆ. ಹಗಲು-ರಾತ್ರಿಗಳಲ್ಲಿಯೂ ನನಗೆ ಅವುಗಳದ್ದೇ ಚಿಂತೆಯಾಗಿತ್ತು. ಹೀಗಾಗಿ ಇದುವರೆಗಿನ ನನ್ನ ಜೀವನವು ವ್ಯರ್ಥವಾಗಿ ಹೋಯಿತು. ॥48॥

(ಶ್ಲೋಕ-49)

ಮೂಲಮ್

ಕಲೇವರೇಸ್ಮಿನ್ ಘಟಕುಡ್ಯಸಂನಿಭೇ
ನಿರೂಢಮಾನೋ ನರದೇವ ಇತ್ಯಹಮ್ ।
ವೃತೋ ರಥೇಭಾಶ್ವಪದಾತ್ಯನೀಕಪೈ-
ರ್ಗಾಂ ಪರ್ಯಟಂಸ್ತ್ವಾಗಣಯನ್ ಸುದುರ್ಮದಃ ॥

ಅನುವಾದ

ದೇವದೇವನೇ! ಮಡಕೆಗೂ, ಗೋಡೆಗೂ ಸಮಾನವಾದ, ನನ್ನಿಂದ ಬೇರೆಯಾದ ಈ ದೇಹವನ್ನೇ ನನ್ನ ಸ್ವರೂಪವೆಂದು ತಿಳಿದುಕೊಂಡಿದ್ದೆ. ಮಾನವರೆಲ್ಲರೂ ನಾನು ರಾಜನಾಗಿರುವೆನೆಂದು ಭಾವಿಸಿಕೊಂಡು ರಥ-ಗಜಾಶ್ವ-ಪದಾತಿಗಳೆಂಬ ಚತುರಂಗ ಬಲದಿಂದ ಸಮಾವೃತನಾಗಿ ದುರಭಿಮಾನದಿಂದ ಭೂಮಿಯಲ್ಲಿ ಅಲೆದಾಡುತ್ತಿದ್ದೆ. ಹೀಗೆ ಮದಾಂಧನಾಗಿ ನಾನು ನಿನ್ನ ವಿಷಯದಲ್ಲಿ ಯೋಚಿಸಲೇ ಇಲ್ಲ. ॥49॥

(ಶ್ಲೋಕ-50)

ಮೂಲಮ್

ಪ್ರಮತ್ತಮುಚ್ಚೈರಿತಿಕೃತ್ಯಚಿಂತಯಾ
ಪ್ರವೃದ್ಧಲೋಭಂ ವಿಷಯೇಷು ಲಾಲಸಮ್ ।
ತ್ವಮಪ್ರಮತ್ತಃ ಸಹಸಾಭಿಪದ್ಯಸೇ
ಕ್ಷುಲ್ಲೇಲಿಹಾನೋಹಿರಿವಾಖುಮಂತಕಃ ॥

ಅನುವಾದ

‘ಆ ರಾಜ್ಯವನ್ನು ಗೆಲ್ಲಬೇಕು, ಅವನ ಬೊಕ್ಕಸವನ್ನು ಅಪಹರಿಸಬೇಕು’ ಮುಂತಾದ ಆಲೋಚನೆಗಳಿಂದ ಹೆಚ್ಚಿದ ಆಶೆಯುಳ್ಳವನಾಗಿ, ವಿಷಯಸುಖದಲ್ಲೇ ಆಸಕ್ತನಾದ, ಅತಿಯಾದ ಪ್ರಮಾದಕ್ಕೆ ವಶನಾಗಿರುವ ಮನುಷ್ಯನನ್ನು ನೀನು, ಅಪ್ರಮತ್ತನಾದ ಅಂತಕನಾಗಿ-ಹಸಿವಿನಿಂದ ಕಟವಾಯಿಗಳನ್ನು ಸವರಿಕೊಳ್ಳುತ್ತಾ ಇಲಿಯನ್ನು ಹಿಡಿಯುವ ಹಾವಿನಂತೆ-ಬೇಗನೇ ಹಿಡಿದುಬಿಡುವೆ. ॥50॥

(ಶ್ಲೋಕ-51)

ಮೂಲಮ್

ಪುರಾ ರಥೈರ್ಹೇಮಪರಿಷ್ಕೃತೈಶ್ಚರನ್
ಮತಂಗಜೈರ್ವಾ ನರದೇವಸಂಜ್ಞಿತಃ ।
ಸ ಏವ ಕಾಲೇನ ದುರತ್ಯಯೇನ ತೇ
ಕಲೇವರೋ ವಿಟ್ಕೃಮಿಭಸ್ಮಸಂಜ್ಞಿತಃ ॥

ಅನುವಾದ

ಹೀಗೆ ಸುವರ್ಣಾಭರಣಗಳಿಂದ ಸಮಲಂಕೃತವಾದ ರಥಗಳಲ್ಲಿ ಅಥವಾ ಚಿನ್ನದ ಅಂಬಾರಿಯಿಂದ ಮದಿಸಿದ ಆನೆಯ ಮೇಲೆ ಕುಳಿತು ನರದೇವನೆಂಬ ಅಭಿಧಾನವನ್ನು ಪಡೆದು ಪ್ರಪಂಚವೆಲ್ಲಾ ಪರ್ಯಟನೆ ಮಾಡುತ್ತಿದ್ದ ಶರೀರವು ನಾಶವಾಗಿ ಹೋಗಲು, ಅಶಕ್ಯವಾದ ನಿನ್ನ ಕಾಲಕ್ಕೆ ಪರವಶವಾಗಿ, ಪಕ್ಷಿಗಳ, ವಿಷ್ಠೆಯೋ, ಹುಳುವೋ ಅಥವಾ ಭಸ್ಮವೋ ಆಗಿಬಿಡುತ್ತದೆ. ॥51॥

(ಶ್ಲೋಕ-52)

ಮೂಲಮ್

ನಿರ್ಜಿತ್ಯ ದಿಕ್ಚಕ್ರಮಭೂತವಿಗ್ರಹೋ
ವರಾಸನಸ್ಥಃ ಸಮರಾಜವಂದಿತಃ ।
ಗೃಹೇಷು ಮೈಥುನ್ಯಸುಖೇಷು ಯೋಷಿತಾಂ
ಕ್ರೀಡಾಮೃಗಃ ಪೂರುಷ ಈಶ ನೀಯತೇ ॥

ಅನುವಾದ

ಪ್ರಭುವೇ! ಒಬ್ಬ ಚಕ್ರವರ್ತಿಯು ಎಲ್ಲ ದಿಕ್ಕುಗಳಲ್ಲಿಯೂ ವಿಜಯವನ್ನು ಸಂಪಾದಿಸಿ, ತನ್ನೆದುರಿಗೆ ಯುದ್ಧಮಾಡುವವರೇ ಪ್ರಪಂಚದಲ್ಲಿ ಯಾರೂ ಇಲ್ಲವೆಂದು ಎಣಿಸಿ ಸಿಂಹಾಸನದ ಮೇಲೆ ಕುಳಿತಾಗ ಅವನಿಗೆ ಸಮಾನರಾದ ಮತ್ತು ಸಾಮಂತರಾಜರು ನತಮಸ್ತಕರಾಗುತ್ತಾರೋ, ಅಂತಹ ರಾಜಾಧಿರಾಜನು ಗ್ರಾಮಸುಖಗಳಿಗೆ ನೆಲೆಯಾಗಿರುವ ಮನೆಯಲ್ಲಿ ಹೆಂಗಸರ ಆಟದ ಪಶುವಾಗಿ ಬಿಡುತ್ತಾನೆ. ॥52॥

(ಶ್ಲೋಕ-53)

ಮೂಲಮ್

ಕರೋತಿ ಕರ್ಮಾಣಿ ತಪಸ್ಸುನಿಷ್ಠಿತೋ
ನಿವೃತ್ತಭೋಗಸ್ತದಪೇಕ್ಷಯಾ ದದತ್ ।
ಪುನಶ್ಚ ಭೂಯೇಯಮಹಂ ಸ್ವರಾಡಿತಿ
ಪ್ರವೃದ್ಧತರ್ಷೋ ನ ಸುಖಾಯ ಕಲ್ಪತೇ ॥

ಅನುವಾದ

ಬಹಳಷ್ಟು ಜನರು ವಿಷಯಭೋಗಗಳನ್ನು ತ್ಯಜಿಸಿ ತಪೋನಿಷ್ಠರಾಗಿ ಹಲವಾರು ದಾನಕರ್ಮಗಳನ್ನು, ಯಜ್ಞಕರ್ಮಗಳನ್ನೂ ಮಾಡುತ್ತಾರೆ. ಆದರೆ ಅವರ ಆ ತಪಸ್ಸು ನಾನು ಪುನಃ ಚಕ್ರವರ್ತಿಯಾಗಬೇಕೆಂಬುದೇ ಆಗಿರುತ್ತದೆ. ಹೀಗೆ ವೃದ್ಧಿಹೊಂದಿದ ತೃಷ್ಣೆಯುಳ್ಳವರು ಎಂದಿಗೂ ಸುಖಿಗಳಾಗಲಾರರು. ॥53॥

(ಶ್ಲೋಕ-54)

ಮೂಲಮ್

ಭವಾಪವರ್ಗೋ ಭ್ರಮತೋ ಯದಾ ಭವೇ-
ಜ್ಜನಸ್ಯ ತರ್ಹ್ಯಚ್ಯುತ ಸತ್ಸಮಾಗಮಃ ।
ಸತ್ಸಂಗಮೋ ಯರ್ಹಿ ತದೈವ ಸದ್ಗತೌ
ಪರಾವರೇಶೇ ತ್ವಯಿ ಜಾಯತೇ ಮತಿಃ ॥

ಅನುವಾದ

ಅಚ್ಯುತನೇ! ಜೀವನು ಅನಾದಿಕಾಲದಿಂದಲೂ ಹುಟ್ಟು-ಸಾವುಗಳೆಂಬ ಸಂಸಾರ ಚಕ್ರದಲ್ಲಿ ಸಿಕ್ಕಿ ಸುತ್ತುತ್ತಲೇ ಇರುವನು. ಸಂಸಾರ ಚಕ್ರದಿಂದ ಪಾರಾಗುವ ಸಮಯವು ಬಂದಾಗ ಅವನಿಗೆ ಸತ್ಸಂಗವು ದೊರೆಯುತ್ತದೆ. ಸತ್ಸಂಗವಾದೊಡನೆಯೇ ಕಾರ್ಯ-ಕಾರಣರೂಪನಾದ, ಜಗತ್ತಿಗೆ ಏಕಮಾತ್ರಸ್ವಾಮಿಯಾದ, ಸತ್ಪುರುಷರಿಗೆ ಪರಮಾಶ್ರಯನಾದ ನಿನ್ನಲ್ಲಿ ಜೀವಿಯ ಬುದ್ಧಿಯು ಅತ್ಯಂತ ದೃಢತೆಯಿಂದ ತೊಡಗುತ್ತದೆ; ಇದು ನಿಶ್ಚಯವಾದುದು. ॥54॥

(ಶ್ಲೋಕ-55)

ಮೂಲಮ್

ಮನ್ಯೇ ಮಮಾನುಗ್ರಹ ಈಶ ತೇ ಕೃತೋ
ರಾಜ್ಯಾನುಬಂಧಾಪಗಮೋ ಯದೃಚ್ಛಯಾ ।
ಯಃ ಪ್ರಾರ್ಥ್ಯತೇ ಸಾಧುಭಿರೇಕಚರ್ಯಯಾ
ವನಂ ವಿವಿಕ್ಷದ್ಭಿರಖಂಡಭೂಮಿಪೈಃ ॥

ಅನುವಾದ

ಸ್ವಾಮಿಯೇ! ನೀನು ನನ್ನ ಮೇಲೆ ಪರಮಾನುಗ್ರಹವನ್ನು ಮಾಡಿರುವೆಯೆಂದೇ ನಾನು ಭಾವಿಸುತ್ತೇನೆ. ನಿನ್ನ ಅನುಗ್ರಹದಿಂದ ಯಾವ ಪರಿಶ್ರಮವೂ ಇಲ್ಲದೆ ನನಗೆ ರಾಜ್ಯದ ಸಂಬಂಧ ಕಡಿದುಹೋಯಿತು. ಸಾಧು ಸ್ವಭಾವದ ಚಕ್ರ ವರ್ತಿಗಳೂ ಕೂಡ ರಾಜ್ಯವನ್ನು ಬಿಟ್ಟು ಏಕಾಂತದಲ್ಲಿ ಭಜನೆ-ಸಾಧನೆ ಮಾಡಬೇಕೆಂದು ಕಾಡಿಗೆ ಹೋಗಲು ಅಪೇಕ್ಷಿಸಿದಾಗ ಅಹಂಕಾರ-ಮಮಕಾರಗಳಿಂದ ಮುಕ್ತರಾಗಲು ನಿನ್ನನ್ನು ಬಹಳವಾಗಿ ಪ್ರಾರ್ಥಿಸುತ್ತಾರೆ. ॥55॥

(ಶ್ಲೋಕ-56)

ಮೂಲಮ್

ನ ಕಾಮಯೇನ್ಯಂ ತವ ಪಾದಸೇವನಾ-
ದಕಿಂಚನಪ್ರಾರ್ಥ್ಯತಮಾದ್ವರಂ ವಿಭೋ ।
ಆರಾಧ್ಯ ಕಸ್ತ್ವಾಂ ಹ್ಯಪವರ್ಗದಂ ಹರೇ
ವೃಣೀತ ಆರ್ಯೋ ವರಮಾತ್ಮ ಬಂಧನಮ್ ॥

ಅನುವಾದ

ಅಂತರ್ಯಾಮಿಯೇ! ಯಾರ ಬಳಿಯಲ್ಲಿ ಯಾವುದೇ ಸಂಗ್ರಹ-ಪರಿಗ್ರಹವಿಲ್ಲವೋ ಅಥವಾ ಅದರ ಅಭಿಮಾನದಿಂದ ರಹಿತರಾದ ಅಕಿಂಚನರೂ ಕೂಡ ನಿನ್ನ ಚರಣ ಸೇವೆಯಲ್ಲದೆ ಬೇರೆ ಏನನ್ನೂ ಬೇಡುವುದಿಲ್ಲ. ಹಾಗಿರುವಾಗ ಮೋಕ್ಷವನ್ನು ಕರುಣಿಸುವ ನಿನ್ನ ಆರಾಧನೆ ಮಾಡಿ - ತನ್ನನ್ನು ಬಂಧಿಸುವಂತಹ ಸಾಂಸಾರಿಕ ವಿಷಯಗಳನ್ನು ಯಾವ ಶ್ರೇಷ್ಠ ಪುರುಷನು ತಾನೇ ಬೇಡಿಕೊಳ್ಳುವನು? ॥56॥

(ಶ್ಲೋಕ-57)

ಮೂಲಮ್

ತಸ್ಮಾದ್ವಿಸೃಜ್ಯಾಶಿಷ ಈಶ ಸರ್ವತೋ
ರಜಸ್ತಮಃಸತ್ತ್ವಗುಣಾನುಬಂಧನಾಃ ।
ನಿರಂಜನಂ ನಿರ್ಗುಣಮದ್ವಯಂ ಪರಂ
ತ್ವಾಂ ಜ್ಞಪ್ತಿಮಾತ್ರಂ ಪುರುಷಂ ವ್ರಜಾಮ್ಯಹಮ್ ॥

ಅನುವಾದ

ಆದ್ದರಿಂದ ಪ್ರಭುವೇ! ನಾನು ಸತ್ತ್ವ-ರಜ-ತಮೋಗುಣಗಳಿಗೆ ಸಂಬಂಧಿಸಿದ ಸಮಸ್ತ ಕಾಮನೆಗಳನ್ನು ಬಿಟ್ಟು ಮಾಯೆಯ ಲೇಶಮಾತ್ರ ಸಂಬಂಧವೂ ಇಲ್ಲದ, ಗುಣಾತೀತನಾದ, ಅದ್ವೀತಿಯನಾದ, ಚಿತ್ಸ್ವರೂಪನಾದ, ಪರಮಪುರುಷನಾದ ನಿನಗೆ ಶರಣಾಗುತ್ತೇನೆ. ॥57॥

(ಶ್ಲೋಕ-58)

ಮೂಲಮ್

ಚಿರಮಿಹ ವೃಜಿನಾರ್ತಸ್ತಪ್ಯಮಾನೋನುತಾಪೈ-
ರವಿತೃಷಷಡಮಿತ್ರೋಲಬ್ಧಶಾಂತಿಃ ಕಥಂಚಿತ್ ।
ಶರಣದ ಸಮುಪೇತಸ್ತ್ವತ್ಪದಾಬ್ಜಂ ಪರಾತ್ಮ-
ನ್ನಭಯಮೃತಮಶೋಕಂ ಪಾಹಿ ಮಾಪನ್ನಮೀಶ ॥

ಅನುವಾದ

ಪರಮೇಶ್ವರನೇ! ಅನಾದಿಕಾಲದಿಂದಲೂ ನನ್ನ ಕರ್ಮ ಫಲಗಳನ್ನು ಅನುಭವಿಸುತ್ತಾ ನಾನು ಆರ್ತನಾಗಿದ್ದೆ. ಆ ದುಃಖದ ಜ್ವಾಲೆಯು ನನ್ನನ್ನು ಹಗಲು ರಾತ್ರಿಯೆನ್ನದೆ ದಹಿಸುತ್ತಲೇ ಇತ್ತು. ನನ್ನ ಆಂತರಿಕ ಆರು ಶತ್ರುಗಳು (ಐದು ಇಂದ್ರಿಗಳು ಒಂದು ಮನಸ್ಸು) ಎಂದೂ ಶಾಂತರಾಗುವುದೇ ಇಲ್ಲ. ಅವರ ವಿಷಯ ತೃಷ್ಣೆಯು ದಿನ-ದಿನಕ್ಕೆ ವೃದ್ಧಿಸುತ್ತಲೇ ಇದೆ. ಈಗ ನಾನು ಭಯ, ಶೋಕ, ಮೃತ್ಯು ಇವುಗಳಿಂದ ರಹಿತವಾದ ನಿನ್ನ ಪಾದಕಮಲಗಳಲ್ಲಿ ಶರಣಾಗತನಾಗಿದ್ದೇನೆ. ಪರಮಾತ್ಮನೇ! ಶರಣಾಗತನಾದ ನನ್ನನ್ನು ರಕ್ಷಿಸು. ॥58॥

(ಶ್ಲೋಕ-59)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಸಾರ್ವಭೌಮ ಮಹಾರಾಜ ಮತಿಸ್ತೇ ವಿಮಲೋರ್ಜಿತಾ ।
ವರೈಃ ಪ್ರಲೋಭಿತಸ್ಯಾಪಿ ನ ಕಾಮೈರ್ವಿಹತಾ ಯತಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು - ಸಾರ್ವಭೌಮ ಮಹಾರಾಜ! ನಿನ್ನ ಬುದ್ಧಿಯು ಪರಿಶುದ್ಧವಾಗಿಯೂ, ಉನ್ನತಮಟ್ಟದಲ್ಲಿಯೂ ಇದೆ. ನಾನು ಪುನಃ ಪುನಃ ನಿನಗೆ ವರದ ಲೋಭವನ್ನು ತೋರುತ್ತಿದ್ದರೂ ನಿನ್ನ ಬುದ್ಧಿಯು ಕಾಮನೆಗಳಿಗೆ ವಶವಾಗಲಿಲ್ಲ. ॥59॥

(ಶ್ಲೋಕ-60)

ಮೂಲಮ್

ಪ್ರಲೋಭಿತೋ ವರೈರ್ಯತ್ತ್ವಮಪ್ರಮಾದಾಯ ವಿದ್ಧಿ ತತ್ ।
ನ ಧೀರ್ಮಯ್ಯೇಕಭಕ್ತಾನಾಮಾಶೀರ್ಭಿರ್ಭಿದ್ಯತೇ ಕ್ವಚಿತ್ ॥

ಅನುವಾದ

ನಾನು ವರವನ್ನು ಕೊಡಲು ನಿನ್ನನ್ನು ಪ್ರಲೋಭಿಸಿದುದು ನಿನ್ನ ಬುದ್ಧಿಯು ಪ್ರಮತ್ತವಾಗಿದೆಯೋ, ಅಪ್ರಮತ್ತವಾಗಿದೆಯೋ ಎಂಬುದನ್ನು ಪರೀಕ್ಷಿಸಲಿಕ್ಕಾಗಿ. ನನ್ನ ಅನನ್ಯಭಕ್ತರಾದವರ ಬುದ್ಧಿಯು ಎಂದಿಗೂ ಕಾಮನೆಗಳಿಗಾಗಿ ಅತ್ತ-ಇತ್ತ ಅಲೆಯುವುದಿಲ್ಲ. ॥60॥

(ಶ್ಲೋಕ-61)

ಮೂಲಮ್

ಯುಂಜಾನಾನಾಮಭಕ್ತಾನಾಂ ಪ್ರಾಣಾಯಾಮಾದಿಭಿರ್ಮನಃ ।
ಅಕ್ಷೀಣವಾಸನಂ ರಾಜನ್ ದೃಶ್ಯತೇ ಪುನರುತ್ಥಿತಮ್ ॥

ಅನುವಾದ

ನನ್ನ ಭಕ್ತರಲ್ಲದವರು ಪ್ರಾಣಾಯಾಮಾದಿಗಳಿಂದ ತಮ್ಮ ಮನಸ್ಸನ್ನು ವಶಪಡಿಸಿಕೊಳ್ಳಲು ಎಷ್ಟೇ ಪ್ರಯತ್ನ ಮಾಡಿದರೂ ಅವರ ವಾಸನೆಗಳು ಕ್ಷೀಣಿಸುವುದಿಲ್ಲ. ರಾಜನೇ! ಅವರ ಮನಸ್ಸು ಪುನಃ ವಿಷಯಗಳಿಗಾಗಿ ತವಕಿಸುತ್ತದೆ. ॥61॥

(ಶ್ಲೋಕ-62)

ಮೂಲಮ್

ವಿಚರಸ್ವ ಮಹೀಂ ಕಾಮಂ ಮಯ್ಯಾವೇಶಿತಮಾನಸಃ ।
ಅಸ್ತ್ವೇವ ನಿತ್ಯದಾ ತುಭ್ಯಂ ಭಕ್ತಿರ್ಮಯ್ಯನಪಾಯಿನೀ ॥

ಅನುವಾದ

ರಾಜಾ! ನೀನು ನಿನ್ನ ಮನಸ್ಸನ್ನು ಮತ್ತು ಮನೋಭಾವಗಳನ್ನು ನನ್ನಲ್ಲಿ ಅರ್ಪಿಸಿಬಿಡು. ನನ್ನಲ್ಲಿ ತೊಡಗಿಸು ಮತ್ತೆ ಸ್ವೇಚ್ಛೆಯಿಂದ ಭೂಮಂಡಲದಲ್ಲಿ ಸಂಚರಿಸುತ್ತಿರು. ನನ್ನಲ್ಲಿ ನಿನಗೆ ಸ್ಥಿರವಾದ ಭಕ್ತಿಯು ನಿತ್ಯ-ನಿರಂತರವಾಗಿ ಇದ್ದೇ ಇರುವುದು. ॥62॥

(ಶ್ಲೋಕ-63)

ಮೂಲಮ್

ಕ್ಷಾತ್ರಧರ್ಮಸ್ಥಿತೋ ಜಂತೂನ್ ನ್ಯವಧೀರ್ಮೃಗಯಾದಿಭಿಃ ।
ಸಮಾಹಿತಸ್ತತ್ತಪಸಾ ಜಹ್ಯಘಂ ಮದುಪಾಶ್ರಿತಃ ॥

ಅನುವಾದ

ನೀನು ಕ್ಷತ್ರಿಯ ಧರ್ಮವನ್ನು ಆಚರಿಸುತ್ತಿರುವಾಗ ಬೇಟೆಯೇ ಮೊದಲಾದ ಸಂದರ್ಭಗಳಲ್ಲಿ ಬಹಳಷ್ಟು ಪಶುಗಳನ್ನು ಕೊಂದಿರುವೆ. ಈಗ ಏಕಾಗ್ರಚಿತ್ತದಿಂದ ನನ್ನನ್ನು ಉಪಾಸಿಸುತ್ತಾ, ತಪಸ್ಸಿನ ಮೂಲಕ ಆ ಪಾಪಗಳನ್ನು ಕಳೆದುಕೋ. ॥63॥

(ಶ್ಲೋಕ-64)

ಮೂಲಮ್

ಜನ್ಮನ್ಯನಂತರೇ ರಾಜನ್ ಸರ್ವಭೂತಸುಹೃತ್ತಮಃ ।
ಭೂತ್ವಾ ದ್ವಿಜವರಸ್ತ್ವಂ ವೈ ಮಾಮುಪೈಷ್ಯಸಿ ಕೇವಲಮ್ ॥

ಅನುವಾದ

ರಾಜನೇ! ಮುಂದಿನ ಜನ್ಮದಲ್ಲಿ ನೀನು ಬ್ರಾಹ್ಮಣನಾಗಿ ಹುಟ್ಟಿ ಸಮಸ್ತ ಪ್ರಾಣಿಗಳ ನಿಜವಾದ ಹಿತೈಷಿಯೂ, ಪರಮಸುಹೃದನೂ ಆಗುವೆ. ಮತ್ತೆ ವಿಶುದ್ಧ ವಿಜ್ಞಾನಘನ ಪರಮಾತ್ಮನಾದ ನನ್ನನ್ನು ಪಡೆಯುವೆ. ॥64॥

ಅನುವಾದ (ಸಮಾಪ್ತಿಃ)

ಐವತ್ತೊಂದನೆಯ ಅಧ್ಯಾಯವು ಮುಗಿಯಿತು. ॥51॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ
ಮುಚುಕುಂದಸ್ತುತಿರ್ನಾಮೈಕಪಂಚಾಶತ್ತಮೋಽಧ್ಯಾಯಃ ॥51॥