[ಐವತ್ತನೇಯ ಅಧ್ಯಾಯ]
ಭಾಗಸೂಚನಾ
ಜರಾಸಂಧನೊಡನೆ ಯುದ್ಧ - ದ್ವಾರಕಾಪಟ್ಟಣ ನಿರ್ಮಾಣ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಅಸ್ತಿಃ ಪ್ರಾಪ್ತಿಶ್ಚ ಕಂಸಸ್ಯ ಮಹಿಷ್ಯೌ ಭರತರ್ಷಭ ।
ಮೃತೇ ಭರ್ತರಿ ದುಃಖಾರ್ತೇ ಈಯತುಃ ಸ್ಮ ಪಿತುರ್ಗೃಹಾನ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಭರತವಂಶ ಶಿರೋಮಣಿಯೇ! ಕಂಸನಿಗೆ ಅಸ್ತಿ ಮತ್ತು ಪ್ರಾಪ್ತಿ ಎಂಬ ಇಬ್ಬರು ಮಡದಿಯರಿದ್ದರು. ಪತಿಯ ಮರಣದಿಂದಾಗಿ ದುಃಖಿತರಾದ ಅವರು ತಮ್ಮ ತಂದೆಯ ಮನೆಗೆ ಹೊರಟು ಹೋದರು.॥1॥
(ಶ್ಲೋಕ-2)
ಮೂಲಮ್
ಪಿತ್ರೇ ಮಗಧರಾಜಾಯ ಜರಾಸಂಧಾಯ ದುಃಖಿತೇ ।
ವೇದಯಾಂಚಕ್ರತುಃ ಸರ್ವಮಾತ್ಮವೈಧವ್ಯಕಾರಣಮ್ ॥
ಅನುವಾದ
ದುಃಖತಪ್ತೆಯರಾಗಿದ್ದ ಅವರಿಬ್ಬರೂ ತಮ್ಮ ತಂದೆಯಾದ ಮಗಧರಾಜನಾದ ಜರಾಸಂಧನಲ್ಲಿ ತಮಗೆ ವೈಧ್ಯವ್ಯವು ಬಂದ ಕಾರಣವನ್ನು ವಿವರಿಸಿ ಹೇಳಿದರು. ॥2॥
(ಶ್ಲೋಕ-3)
ಮೂಲಮ್
ಸ ತದಪ್ರಿಯಮಾಕರ್ಣ್ಯ ಶೋಕಾಮರ್ಷಯುತೋ ನೃಪ ।
ಅಯಾದವೀಂ ಮಹೀಂ ಕರ್ತುಂ ಚಕ್ರೇ ಪರಮಮುದ್ಯಮಮ್ ॥
ಅನುವಾದ
ರಾಜನೇ! ಅಪ್ರಿಯವಾದ ಈ ಸಮಾಚಾರವನ್ನು ಕೇಳಿ ಜರಾಸಂಧನು ಬಹಳವಾಗಿ ಶೋಕಿಸಿದನು. ಆದರೆ ಒಡನೆಯೇ ಕೋಪದಿಂದ ಕಿಡಿ-ಕಿಡಿಯಾಗಿ, ಪೃಥಿವಿಯನ್ನೇ ಯಾದವರಿಂದ ರಹಿತವನ್ನಾಗಿ ಮಾಡಲು ನಿಶ್ಚಯಿಸಿ ಯುದ್ಧಕ್ಕೆ ಕಾರ್ಯೋನ್ಮುಖನಾದನು. ॥3॥
(ಶ್ಲೋಕ-4)
ಮೂಲಮ್
ಅಕ್ಷೌಹಿಣೀಭಿರ್ವಿಂಶತ್ಯಾ ತಿಸೃಭಿಶ್ಚಾಪಿ ಸಂವೃತಃ ।
ಯದುರಾಜಧಾನೀಂ ಮಥುರಾಂ ನ್ಯರುಣತ್ ಸರ್ವತೋದಿಶಮ್ ॥
ಅನುವಾದ
ಇಪ್ಪತ್ತಮೂರು ಅಕ್ಷೌಹಿಣಿ ಸೈನ್ಯ ಸಮೇತನಾಗಿ ಯಾದವರ ರಾಜಧಾನಿಯಾದ ಮಥುರೆಗೆ ಬಂದು ನಾಲ್ಕು ಕಡೆಗಳಿಂದಲೂ ಮುತ್ತಿಗೆ ಹಾಕಿದನು. ॥4॥
(ಶ್ಲೋಕ-5)
ಮೂಲಮ್
ನಿರೀಕ್ಷ್ಯ ತದ್ಬಲಂ ಕೃಷ್ಣ ಉದ್ವೇಲಮಿವ ಸಾಗರಮ್ ।
ಸ್ವಪುರಂ ತೇನ ಸಂರುದ್ಧಂ ಸ್ವಜನಂ ಚ ಭಯಾಕುಲಮ್ ॥
ಅನುವಾದ
ಭಗವಾನ್ ಶ್ರೀಕಷ್ಣನು ನೋಡಿದನು. ಜರಾಸಂಧನ ಆ ಮಹಾಸೈನ್ಯವು ಉಕ್ಕಿಬರುವ ಸಮುದ್ರದಂತೆ ಇತ್ತು. ಅವನು ನಾಲ್ಕು ಕಡೆಗಳಿಂದಲೂ ತನ್ನ ರಾಜಧಾನಿಯನ್ನು ಪ್ರತಿಬಂಧಿಸಿದ್ದು, ತನ್ನ ಸ್ವಜನರೂ, ಪುರವಾಸಿಗಳೂ ಭಯಗೊಂಡಿರುವುದನ್ನು ಗಮನಿಸಿದನು. ॥5॥
(ಶ್ಲೋಕ-6)
ಮೂಲಮ್
ಚಿಂತಯಾಮಾಸ ಭಗವಾನ್ ಹರಿಃ ಕಾರಣಮಾನುಷಃ ।
ತದ್ದೇಶಕಾಲಾನುಗುಣಂ ಸ್ವಾವತಾರಪ್ರಯೋಜನಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಭೂಭಾರಹರಣಕ್ಕಾಗಿಯೇ ಮನುಷ್ಯನಾಗಿ ಅವತರಿಸಿ ಬಂದಿದ್ದನು. ತನ್ನ ಅವತಾರದ ಪ್ರಯೋಜನವನ್ನೂ, ಈ ಸಮಯದಲ್ಲಿ ದೇಶಕಾಲಕ್ಕೆ ತಕ್ಕಂತೆ ಏನು ಮಾಡಬೇಕೆಂಬುದನ್ನು ಯೋಚಿಸಿ ನಿರ್ಧಾರಕ್ಕೆ ಬಂದನು. ॥6॥
(ಶ್ಲೋಕ-7)
ಮೂಲಮ್
ಹನಿಷ್ಯಾಮಿ ಬಲಂ ಹ್ಯೇತದ್ಭುವಿ ಭಾರಂ ಸಮಾಹಿತಮ್ ।
ಮಾಗಧೇನ ಸಮಾನೀತಂ ವಶ್ಯಾನಾಂ ಸರ್ವಭೂಭುಜಾಮ್ ॥
(ಶ್ಲೋಕ-8)
ಮೂಲಮ್
ಅಕ್ಷೌಹಿಣೀಭಿಃ ಸಂಖ್ಯಾತಂ ಭಟಾಶ್ವರಥಕುಂಜರೈಃ ।
ಮಾಗಧಸ್ತು ನ ಹಂತವ್ಯೋ ಭೂಯಃ ಕರ್ತಾ ಬಲೋದ್ಯಮಮ್ ॥
ಅನುವಾದ
ಮಗಧರಾಜನಾದ ಜರಾಸಂಧನು ತನ್ನ ಅಧೀನದಲ್ಲಿರುವ ಸಾಮಂತರಿಂದ ಇಪ್ಪತ್ತಮೂರು ಅಕ್ಷೌಹಿಣೀ ಚತುರಂಗ ಸೈನ್ಯವನ್ನು ಸಂಗ್ರಹಿಸಿ ಇಲ್ಲಿಗೆ ತಂದಿರುವನು. ಭೂಮಿಯ ಭಾರವೆಲ್ಲವೂ ಒಂದೆಡೆಯಲ್ಲೇ ಕೇಂದ್ರೀಕೃತವಾಗಿದೆ. ಈ ಸೈನ್ಯವನ್ನು ನಾನೀಗಲೇ ನಾಶಮಾಡಿಬಿಡುತ್ತೇನೆ. ಆದರೆ ಜರಾಸಂಧನನ್ನು ಮಾತ್ರ ಕೊಲ್ಲುವುದಿಲ್ಲ. ಏಕೆಂದರೆ, ಅವನು ಬದುಕಿದ್ದರೆ ಪುನಃ ಅಸುರರ ದೊಡ್ಡಸೈನ್ಯವನ್ನು ಸೇರಿಸಿ ಇಲ್ಲಿಗೆ ಕರೆತರುವನು. ಇದರಿಂದ ನನ್ನ ಭೂಭಾರಹರಣ ಕಾರ್ಯವು ಸುಗಮವಾದಿತೆಂದು ಯೋಚಿಸಿದನು. ॥7-8॥
(ಶ್ಲೋಕ-9)
ಮೂಲಮ್
ಏತದರ್ಥೋವತಾರೋಯಂ ಭೂಭಾರಹರಣಾಯ ಮೇ ।
ಸಂರಕ್ಷಣಾಯ ಸಾಧೂನಾಂ ಕೃತೋನ್ಯೇಷಾಂ ವಧಾಯ ಚ ॥
ಅನುವಾದ
ಭೂಭಾರವನ್ನು ಹರಣಮಾಡಿ, ಸಾಧುಗಳ ರಕ್ಷಣೆ - ದುಷ್ಟ ಜನರ ಸಂಹಾರ ಇವೇ ನನ್ನ ಅವತಾರದ ಪ್ರಯೋಜನವಲ್ಲವೇ! ॥9॥
(ಶ್ಲೋಕ-10)
ಮೂಲಮ್
ಅನ್ಯೋಪಿ ಧರ್ಮರಕ್ಷಾಯೈ ದೇಹಃ ಸಂಭ್ರಿಯತೇ ಮಯಾ ।
ವಿರಾಮಾಯಾಪ್ಯಧರ್ಮಸ್ಯ ಕಾಲೇ ಪ್ರಭವತಃ ಕ್ವಚಿತ್ ॥
ಅನುವಾದ
ಧರ್ಮದ ರಕ್ಷಣೆಗಾಗಿಯೂ, ಬೆಳೆಯುತ್ತಿರುವ ಅಧರ್ಮವನ್ನು ತಡೆಗಟ್ಟಲು ಕೆಲವು ಸಮಯದಲ್ಲಿ ನಾನು ಅನೇಕ ದೇಹಗಳಲ್ಲಿಯೂ ಅವತರಿಸುತ್ತೇನೆ. ॥10॥
(ಶ್ಲೋಕ-11)
ಮೂಲಮ್
ಏವಂ ಧ್ಯಾಯತಿ ಗೋವಿಂದ ಆಕಾಶಾತ್ ಸೂರ್ಯವರ್ಚಸೌ ।
ರಥಾವುಪಸ್ಥಿತೌ ಸದ್ಯಃ ಸಸೂತೌ ಸಪರಿಚ್ಛದೌ ॥
ಅನುವಾದ
ಪರೀಕ್ಷಿತ ಮಹಾರಾಜ! ಭಗವಾನ್ ಶ್ರೀಕೃಷ್ಣನು ಹೀಗೆ ಯೋಚಿಸುತ್ತಿರುವಾಗಲೇ ಆಕಾಶದಿಂದ ಸೂರ್ಯಸದೃಶ ಹೊಳೆಯುತ್ತಿರುವ ಎರಡು ರಥಗಳು ಅವನ ಬಳಿಗೆ ಬಂದುವು. ಅವುಗಳು ಸಾರಥಿಗಳಿಂದ ಕೂಡಿದ್ದು ಸಮಸ್ತ ಯುದ್ಧ ಸಾಮಗ್ರಿಗಳಿಂದ ಸುಸಜ್ಜಿತವಾಗಿದ್ದುವು.॥11॥
ಮೂಲಮ್
(ಶ್ಲೋಕ-12)
ಆಯುಧಾನಿ ಚ ದಿವ್ಯಾನಿ ಪುರಾಣಾನಿ ಯದೃಚ್ಛಯಾ ।
ದೃಷ್ಟ್ವಾ ತಾನಿ ಹೃಷೀಕೇಶಃ ಸಂಕರ್ಷಣಮಥಾಬ್ರವೀತ್ ॥
ಅನುವಾದ
ಇದೇ ಸಮಯದಲ್ಲಿ ಭಗವಂತನ ಸನಾತನವಾದ ದಿವ್ಯ ಆಯುಧಗಳೂ ಅಲ್ಲಿಗೆ ಬಂದು ಉಪಸ್ಥಿತವಾದುವು. ಅವೆಲ್ಲವನ್ನು ನೋಡಿ ಭಗವಾನ್ ಶ್ರೀಕೃಷ್ಣನು ಬಲರಾಮನಲ್ಲಿ ಇಂತೆಂದನು.॥12॥
(ಶ್ಲೋಕ-13)
ಮೂಲಮ್
ಪಶ್ಯಾರ್ಯ ವ್ಯಸನಂ ಪ್ರಾಪ್ತಂ ಯದೂನಾಂ ತ್ವಾವತಾಂ ಪ್ರಭೋ ।
ಏಷ ತೇ ರಥ ಆಯಾತೋ ದಯಿತಾನ್ಯಾಯುಧಾನಿ ಚ ॥
ಅನುವಾದ
ಮಹಾಶಕ್ತಿ ಶಾಲಿಯಾದ ಅಣ್ಣನೇ! ನಿನ್ನಿಂದ ರಕ್ಷಿತವಾದ ಯಾದವರಿಗೆ ಇಂದು ಮಹಾಸಂಕಟವು ಪ್ರಾಪ್ತವಾಗಿದೆ. ಈ ಸಮಯದಲ್ಲಿ ಅವರ ಸಂಕಟವನ್ನು ನಿವಾರಿಸುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ಕಾರ್ಯಕ್ಕೆ ಬೆಂಬಲವಾಗಿ ಆಕಾಶದಿಂದ ರಥಗಳೂ ಬಂದಿವೆ. ನಮಗೆ ಪ್ರಿಯವಾದ ಆಯುಧಗಳೂ ತಾವಾಗಿಯೇ ಬಂದಿವೆ. ॥13॥
(ಶ್ಲೋಕ-14)
ಮೂಲಮ್
ಯಾನಮಾಸ್ಥಾಯ ಜಹ್ಯೇತದ್ವ್ಯಸನಾತ್ ಸ್ವಾನ್ ಸಮುದ್ಧರ ।
ಏತದರ್ಥಂ ಹಿ ನೌ ಜನ್ಮ ಸಾಧೂನಾಮೀಶ ಶರ್ಮಕೃತ್ ॥
ಅನುವಾದ
ಅಣ್ಣ! ನೀನು ರಥವನ್ನು ಹತ್ತಿ ಕುಳಿತು ಶತ್ರು ಸೈನ್ಯವನ್ನು ಸಂಹಾರಮಾಡಿ ನಮ್ಮ ಸ್ವಜನರನ್ನು ಈ ವಿಪತ್ತಿನಿಂದ ಪಾರುಮಾಡು. ಸಾಧುಗಳಿಗೆ ಸುಖವನ್ನುಂಟು ಮಾಡಲೆಂದೇ ನಾವಿಬ್ಬರೂ ಅವತರಿಸಿದ್ದೆವಲ್ಲ! ॥14॥
(ಶ್ಲೋಕ-15)
ಮೂಲಮ್
ತ್ರಯೋವಿಂಶತ್ಯನೀಕಾಖ್ಯಂ ಭೂಮೇರ್ಭಾರಮಪಾಕುರು ।
ಏವಂ ಸಮ್ಮಂತ್ರ್ಯ ದಾಶಾರ್ಹೌ ದಂಶಿತೌ ರಥಿನೌ ಪುರಾತ್ ॥
(ಶ್ಲೋಕ-16)
ಮೂಲಮ್
ನಿರ್ಜಗ್ಮತುಃ ಸ್ವಾಯುಧಾಢ್ಯೌ ಬಲೇನಾಲ್ಪೀಯಸಾವೃತೌ ।
ಶಂಖಂ ದಧ್ಮೌ ವಿನಿರ್ಗತ್ಯ ಹರಿರ್ದಾರುಕಸಾರಥಿಃ ॥
ಅನುವಾದ
ಆದ್ದರಿಂದ ಈಗ ಈ ಇಪ್ಪತ್ತಮೂರು ಅಕ್ಷೌಹಿಣಿ ಸೇನೆಯ ರೂಪದಲ್ಲಿರುವ ವಿಪುಲವಾದ ಭೂಭಾರವನ್ನು ಕಡಿಮೆಮಾಡು, ಭಗವಾನ್ ಶ್ರೀಕೃಷ್ಣ ಮತ್ತು ಬಲರಾಮನು ಹೀಗೆ ಸಮಾಲೋಚಿಸಿ ಕವಚಗಳನ್ನು ಧರಿಸಿ, ರಥಾರೂಢರಾಗಿ ಮಥುರೆಯಿಂದ ಹೊರಟರು. ಆಗ ಅವರು ದಿವ್ಯಾಯುಧಗಳಿಂದ ಸಂಪನ್ನರಾಗಿದ್ದರು ಮತ್ತು ಅತ್ಯಲ್ಪವಾದ ಸೇನೆಯೂ ಅವರೊಂದಿಗೆ ಹಿಂಬಾಲಿಸಿತು. ಶ್ರೀಕೃಷ್ಣನ ರಥವನ್ನು ದಾರುಕನು ನಡೆಸುತ್ತಿದ್ದನು. ಪುರದಿಂದ ಹೊರಗೆ ಬಂದು ಅವನು ತನ್ನ ಪಾಂಚಜನ್ಯ ಶಂಖವನ್ನು ಊದಿದನು. ॥15-16॥
(ಶ್ಲೋಕ-17)
ಮೂಲಮ್
ತತೋಭೂತ್ ಪರಸೈನ್ಯಾನಾಂ ಹೃದಿ ವಿತ್ರಾಸವೇಪಥುಃ ।
ತಾವಾಹ ಮಾಗಧೋ ವೀಕ್ಷ್ಯ ಹೇ ಕೃಷ್ಣ ಪುರುಷಾಧಮ ॥
(ಶ್ಲೋಕ-18)
ಮೂಲಮ್
ನ ತ್ವಯಾ ಯೋದ್ಧುಮಿಚ್ಛಾಮಿ ಬಾಲೇನೈಕೇನ ಲಜ್ಜಯಾ ।
ಗುಪ್ತೇನ ಹಿ ತ್ವಯಾ ಮನ ನ ಯೋತ್ಸ್ಯೇ ಯಾಹಿ ಬಂಧುಹನ್ ॥
ಅನುವಾದ
ಭಯಂಕರವಾದ ಆ ಶಂಖಧ್ವನಿಯನ್ನು ಕೇಳಿ ಶತ್ರು ಸೈನಿಕರ ಹೃದಯಗಳು ಭಯದಿಂದ ನಡುಗಿಹೋದುವು. ರಥದಲ್ಲಿ ಕುಳಿತು ಬಂದಿರುವ ಬಲರಾಮ-ಕೃಷ್ಣರನ್ನು ನೋಡಿ ಜರಾಸಂಧನು ಹೇಳಿದನು - ಎಲೈ ಪುರುಷಾಧಮನೇ! ನಿನ್ನಂತಹ ಬಾಲಕನೊಬ್ಬನೊಡನೆ ಯುದ್ಧಮಾಡಲು ನನಗೆ ನಾಚಿಕೆಯಾಗುತ್ತದೆ. ಇಷ್ಟು ದಿವಸಗಳವರೆಗೆ ಎಲ್ಲೆಲ್ಲೋ ಬಚ್ಚಿಟ್ಟುಕೊಂಡೇ ತಿರುಗುತ್ತಿದ್ದೆ. ಎಲೈ ಮೂರ್ಖನೇ! ನೀನು ನಿನ್ನ ಸೋದರ ಮಾವನನ್ನೇ ಕೊಂದವನು. ಅದಕ್ಕಾಗಿ ನಾನು ನಿನ್ನೊಡನೆ ಯುದ್ಧ ಮಾಡುವುದಿಲ್ಲ. ಹೊರಟು ಹೋಗು. ನನ್ನ ಮುಂದೆ ಇರಬೇಡ. ॥17-18॥
(ಶ್ಲೋಕ-19)
ಮೂಲಮ್
ತವ ರಾಮ ಯದಿ ಶ್ರದ್ಧಾ ಯುಧ್ಯಸ್ವ ಧೈರ್ಯಮುದ್ವಹ ।
ಹಿತ್ವಾ ವಾ ಮಚ್ಛರೈಶ್ಛಿನ್ನಂ ದೇಹಂ ಸ್ವರ್ಯಾಹಿ ಮಾಂ ಜಹಿ ॥
ಅನುವಾದ
ಬಲರಾಮಾ! ಯುದ್ಧದಲ್ಲಿ ಮಡಿದರೆ ಸ್ವರ್ಗಪ್ರಾಪ್ತಿಯಾಗುತ್ತದೆ ಎಂಬ ಶ್ರದ್ಧೆ ನಿನಗಿದ್ದರೆ ಧೈರ್ಯದಿಂದ ನನ್ನೊಡನೆ ಯುದ್ಧಮಾಡು. ನನ್ನ ಬಾಣಗಳಿಂದ ಛಿನ್ನ-ಭಿನ್ನವಾದ ಶರೀರವನ್ನು ಇಲ್ಲೇ ಬಿಟ್ಟು ಸ್ವರ್ಗಕ್ಕೆ ಹೋಗು. ಇಲ್ಲವೇ ನಿನ್ನಲ್ಲಿ ಶಕ್ತಿಯಿದ್ದರೆ ನನ್ನನ್ನೇ ಕೊಂದು ಹಾಕು. ॥19॥
(ಶ್ಲೋಕ-20)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ನ ವೈ ಶೂರಾ ವಿಕತ್ಥಂತೇ ದರ್ಶಯಂತ್ಯೇವ ಪೌರುಷಮ್ ।
ನ ಗೃಹ್ಣೀಮೋ ವಚೋ ರಾಜನ್ನಾತುರಸ್ಯ ಮುಮೂರ್ಷತಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳಿದನು — ಜರಾಸಂಧನೇ! ಶೂರರಾದವರು ನಿನ್ನಂತೆ ಯಾರೂ ಜಂಬ ಕೊಚ್ಚಿಕೊಳ್ಳುವುದಿಲ್ಲ. ಪರಾಕ್ರಮವನ್ನೇ ತೋರುತ್ತಾರೆ. ಸಾಯಲು ಹೊರಟಿರುವ ಸನ್ನಿಪಾತದ ರೋಗಿಯು ಗಳಹುತ್ತಿರುವಂತೆ ನಿನ್ನ ಮಾತುಗಳನ್ನು ನಾನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ॥20॥
(ಶ್ಲೋಕ-21)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಜರಾಸುತಸ್ತಾವಭಿಸೃತ್ಯ ಮಾಧವೌ
ಮಹಾಬಲೌಘೇನ ಬಲೀಯಸಾವೃಣೋತ್ ।
ಸಸೈನ್ಯಯಾನಧ್ವಜವಾಜಿಸಾರಥೀ
ಸೂರ್ಯಾನಲೌ ವಾಯುರಿವಾಭ್ರರೇಣುಭಿಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ವಾಯುವು ಮೋಡಗಳಿಂದ ಸೂರ್ಯನನ್ನು, ಅಗ್ನಿಯನ್ನು ಧೂಳಿನಿಂದಲೂ ಮುಚ್ಚಿಬಿಡುವಂತೆ ಜರೆಯ ಮಗನಾದ ಜರಾಸಂಧನು ಬಲರಾಮ-ಶ್ರೀಕೃಷ್ಣರನ್ನು ಬಲಿಷ್ಠವಾದ ಮಹಾಸೈನ್ಯದಿಂದ ಸುತ್ತುವರಿದು ಮುತ್ತಿಗೆ ಹಾಕಿದನು. ಇದರಿಂದ ಅವರ ಸೈನ್ಯ, ರಥ, ಧ್ವಜ, ಸಾರಥಿ, ಕುದುರೆಗಳು ಕಾಣದಾದರು. ॥21॥
(ಶ್ಲೋಕ-22)
ಮೂಲಮ್
ಸುಪರ್ಣತಾಲಧ್ವಜಚಿಹ್ನಿತೌ ರಥಾ-
ವಲಕ್ಷಯಂತ್ಯೋ ಹರಿರಾಮಯೋರ್ಮೃಧೇ ।
ಸಿಯಃ ಪುರಾಟ್ಟಾಲಕಹರ್ಮ್ಯಗೋಪುರಂ
ಸಮಾಶ್ರಿತಾಃ ಸಂಮುಮುಹುಃ ಶುಚಾರ್ದಿತಾಃ ॥
ಅನುವಾದ
ಯುದ್ಧವನ್ನು ನೋಡಲು ಹೆಬ್ಬಾಲುಗಳಲ್ಲಿಯೂ, ಉಪ್ಪರಿಗೆಗಳಲ್ಲಿಯೂ ನಿಂತಿದ್ದ ಮಥುರಾ ನಗರದ ಸ್ತ್ರೀಯರು ಗರುಡ-ತಾಲಧ್ವಜಗಳನ್ನು ಹೊಂದಿದ್ದ ಶ್ರೀಕೃಷ್ಣ-ಬಲರಾಮರ ರಥಗಳನ್ನು ಕಾಣದೆ ಶೋಕಾಭಿಭೂತರಾಗಿ ಮೂರ್ಛೆ ಹೊಂದಿದರು. ॥ 22॥
(ಶ್ಲೋಕ-23)
ಮೂಲಮ್
ಹರಿಃ ಪರಾನೀಕಪಯೋಮುಚಾಂ ಮುಹುಃ
ಶಿಲೀಮುಖಾತ್ಯುಲ್ಬಣವರ್ಷಪೀಡಿತಮ್ ।
ಸ್ವಸೈನ್ಯಮಾಲೋಕ್ಯ ಸುರಾಸುರಾರ್ಚಿತಂ
ವ್ಯಸ್ಫೂರ್ಜಯಚ್ಛಾಂರ್ಗಶರಾಸನೋತ್ತಮಮ್ ॥
ಅನುವಾದ
ಶತ್ರುಸೈನ್ಯಗಳೆಂಬ ಮೇಘಗಳ ಮೂಲಕ ಬಾಣಗಳೆಂಬ ಅತಿವೃಷ್ಟಿಯಿಂದ ಪೀಡಿತವಾದ ತನ್ನ ಕಡೆಯ ಸೈನ್ಯವನ್ನು ನೋಡಿ ಶ್ರೀಹರಿಯು ದೇವಾಸುರರಿಂದ ಅರ್ಚಿಸಲ್ಪಡುತ್ತಿದ್ದ ಶಾರ್ಙ್ಗಧನುಸ್ಸನ್ನು ಟಂಕಾರ ಮಾಡಿದನು. ॥23॥
(ಶ್ಲೋಕ-24)
ಮೂಲಮ್
ಗೃಹ್ಣನ್ ನಿಷಂಗಾದಥ ಸಂದಧಚ್ಛರಾನ್
ವಿಕೃಷ್ಯ ಮುಂಚನ್ ಶಿತಬಾಣಪೂಗಾನ್ ।
ನಿಘ್ನನ್ ರಥಾನ್ ಕುಂಜರವಾಜಿಪತ್ತೀನ್
ನಿರಂತರಂ ಯದ್ವದಲಾತಚಕ್ರಮ್ ॥
ಅನುವಾದ
ಬಳಿಕ ಶ್ರೀಕೃಷ್ಣನು ಬತ್ತಳಿಕೆಯಿಂದ ತೀಕ್ಷ್ಣವಾದ ಬಾಣಗಳನ್ನು ತೆಗೆದು, ಧನುಸ್ಸಿಗೆ ಹೂಡಿ, ನಾಣನ್ನು ಆಕರ್ಣಾಂತವಾಗಿ ಸೆಳೆದು ಪುಂಖಾನು-ಪುಂಖವಾಗಿ ಪ್ರಯೋಗಿಸಿ, ಜರಾಸಂಧನ ಚತುರಂಗ ಸೈನ್ಯವನ್ನು ಸಂಹರಿಸುತ್ತಿದ್ದನು. ಆ ಸಮಯದಲ್ಲಿ ಅವನ ಧನಸ್ಸು ನಿರಂತರವಾಗಿ ತಿರುಗುವ ಕೊಳ್ಳಿಯ ಚಕ್ರದಂತೆ ಕಾಣುತ್ತಿತ್ತು. ॥24॥
(ಶ್ಲೋಕ-25)
ಮೂಲಮ್
ನಿರ್ಭಿನ್ನಕುಂಭಾಃ ಕರಿಣೋ ನಿಪೇತು-
ರನೇಕಶೋಶ್ವಾ ಶರವೃಕ್ಣಕಂಧರಾಃ ।
ರಥಾ ಹತಾಶ್ವಧ್ವಜಸೂತನಾಯಕಾಃ
ಪದಾತಯಶ್ಛಿನ್ನಭುಜೋರುಕಂಧರಾಃ ॥
ಅನುವಾದ
ಸತತವಾದ ಬಾಣಗಳ ಪ್ರಹಾರದಿಂದ ಅನೇಕ ಆನೆಗಳ ಶಿರಸ್ಸುಗಳು ಕತ್ತರಿಸಲ್ಪಟ್ಟು ಸತ್ತು ಬೀಳುತ್ತಿದ್ದವು. ಬಾಣಗಳ ಮಳೆಯಿಂದ ಅನೇಕ ಕುದುರೆಗಳ ತಲೆಗಳು ತುಂಡಾಗಿ ಬೀಳುತ್ತಿದ್ದವು. ಕುದುರೆಗಳೂ, ಧ್ವಜಗಳೂ ಸಾರಥಿಗಳೂ, ರಥಿಕರೂ ಹತರಾಗಿ ಹೋಗುತ್ತಿದ್ದರು. ಪದಾತಿಗಳು ಶ್ರೀಕೃಷ್ಣನ ಚೂಪಾದ ಬಾಣಗಳಿಂದ ಕತ್ತರಿಸಲ್ಪಟ್ಟ ತೋಳು, ತೊಡೆ, ಕುತ್ತಿಗೆಗಳಿಂದ ಅಸುನೀಗಿ ಕೆಳಕ್ಕೆ ಬೀಳುತ್ತಿದ್ದರು. ॥25॥
(ಶ್ಲೋಕ-26)
ಮೂಲಮ್
ಸಂಛಿದ್ಯಮಾನದ್ವಿಪದೇಭವಾಜಿನಾ-
ಮಂಗಪ್ರಸೂತಾಃ ಶತಶೋಸೃಗಾಪಗಾಃ ।
ಭುಜಾಹಯಃ ಪೂರುಷಶೀರ್ಷಕಚ್ಛಪಾ
ಹತದ್ವಿಪದ್ವೀಪಹಯಗ್ರಹಾಕುಲಾಃ ॥
(ಶ್ಲೋಕ-27)
ಮೂಲಮ್
ಕರೋರುಮೀನಾ ನರಕೇಶಶೈವಲಾ
ಧನುಸ್ತರಂಗಾಯುಧಗುಲ್ಮಸಂಕುಲಾಃ ।
ಅಚ್ಛೂರಿಕಾವರ್ತಭಯಾನಕಾ ಮಹಾ-
ಮಣಿಪ್ರವೇಕಾಭರಣಾಶ್ಮಶರ್ಕರಾಃ ॥
ಅನುವಾದ
ಶ್ರೀಕೃಷ್ಣನು ಪ್ರಯೋಗಿಸುತ್ತಿದ್ದ ಬಾಣಗಳಿಂದ ಕತ್ತರಿಸಲ್ಪಟ್ಟ ಪದಾತಿಗಳ, ಕುದುರೆ-ಆನೆಗಳ ಶರೀರದಿಂದ ರಕ್ತವು ಧಾರಾಕಾರವಾಗಿ ಹರಿದು ಅದರಿಂದ ನೂರಾರು ರುಧಿರನದಿಗಳು ಹುಟ್ಟಿಕೊಂಡು ಹರಿಯ ತೊಡಗಿದವು. ಭಯಂಕರವಾಗಿ ಕಾಣುತ್ತಿದ್ದ ಆ ರಣನದಿಗಳಲ್ಲಿ ಸೈನಿಕರ ತೋಳುಗಳು ನೀರುಹಾವುಗಳಂತೆ ಕಾಣುತ್ತಿದ್ದವು. ಸೈನಿಕರ ತಲೆಗಳು ಆಮೆಗಳಂತಿದ್ದವು. ಸತ್ತು ಬಿದ್ದಿದ್ದ ಮಹಾಗಜಗಳ ಶರೀರಗಳೇ ಆ ರಕ್ತನದಿಯ ದ್ವೀಪಗಳು. ಕುದುರೆಗಳು ಮೊಸಳೆಯಂತಿದ್ದರೆ, ಸೈನಿಕರ ಕತ್ತರಿಸಿ ಬಿದ್ದಿದ್ದ ಕೈ-ಕಾಲುಗಳು ಅದರಲ್ಲಿನ ಮೀನುಗಳಂತೆ ಕಾಣುತ್ತಿದ್ದವು. ಸೈನಿಕರ ತಲೆಕೂದಲುಗಳು ಆ ನದಿಯ ಪಾಚಿಯಂತಿದ್ದರೆ, ತುಂಡು ತುಂಡಾಗಿ ಬಿದ್ದಿದ್ದ ಧನಸ್ಸುಗಳೇ ನದಿಯ ಅಲೆಗಳಂತೆ ಕಾಣುತ್ತಿದ್ದವು. ರಾಶಿ-ರಾಶಿಯಾಗಿ ಬಿದ್ದಿದ್ದ ಆಯುಧಗಳು ನದಿಯ ದಡದಲ್ಲಿರುವ ಪೊದೆಗಳಂತಿದ್ದರೆ, ಗುರಾಣಿಗಳು ರಕ್ತನದಿಯ ಸುಳಿಗಳಂತೆ ಕಾಣುತ್ತಿದ್ದವು. ಬಹುಮೂಲ್ಯ ಮಣಿಗಳೂ, ಆಭೂಷಗಳೂ ನದಿಯಲ್ಲಿದ್ದ ಬಂಡೆಗಳಂತೆಯೂ, ಮರಳಿನಂತೆಯೂ ಇದ್ದವು. ॥26-27॥
(ಶ್ಲೋಕ-28)
ಮೂಲಮ್
ಪ್ರವರ್ತಿತಾ ಭೀರುಭಯಾವಹಾ ಮೃಧೇ
ಮನಸ್ವಿನಾಂ ಹರ್ಷಕರೀಃ ಪರಸ್ಪರಮ್ ।
ವಿನಿಘ್ನತಾರೀನ್ ಮುಸಲೇನ ದುರ್ಮದಾನ್
ಸಂಕರ್ಷಣೇನಾಪರಿಮೇಯತೇಜಸಾ ॥
ಅನುವಾದ
ಊಹಿಸಲು ಅಸಾಧ್ಯವಾದ ಶಕ್ತಿ ಪರಾಕ್ರಮಗಳಿಂದ ಕೂಡಿದ್ದ ಬಲರಾಮನು ದುರ್ಮದರಾದ ಜರಾಸಂಧನ ಸೈನಿಕರನ್ನು ಮುಸಲಾಯುಧದಿಂದ ಸಂಹರಿಸುತ್ತಾ ಹೇಡಿಗಳಿಗೆ ಭಯವನ್ನೂ, ವೀರರಿಗೆ ಸಂತೋಷವನ್ನು ಉಂಟು ಮಾಡುವ ಅಂತಹ ನೂರಾರು ನದಿಗಳನ್ನು ರಣರಂಗದಲ್ಲಿ ಹರಿಸಿಬಿಟ್ಟನು. ॥28॥
(ಶ್ಲೋಕ-29)
ಮೂಲಮ್
ಬಲಂ ತದಂಗಾರ್ಣವದುರ್ಗಭೈರವಂ
ದುರಂತಪಾರಂ ಮಗಧೇಂದ್ರಪಾಲಿತಮ್ ।
ಕ್ಷಯಂ ಪ್ರಣೀತಂ ವಸುದೇವಪುತ್ರಯೋ-
ರ್ವಿಕ್ರೀಡಿತಂ ತಜ್ಜಗದೀಶಯೋಃ ಪರಮ್ ॥
ಅನುವಾದ
ಪರೀಕ್ಷಿತನೇ! ಜರಾಸಂಧನ ಆ ಸೈನ್ಯವು ಸಮುದ್ರದಂತೆ ಅತಿದುರ್ಗಮವಾಗಿತ್ತು. ಭಯಂಕರವಾಗಿತ್ತು. ಸಾಮಾನ್ಯರಿಂದ ಜಯಿಸಲು ಅಸಾಧ್ಯವಾಗಿತ್ತು. ಆದರೆ ಜಗದೀಶ್ವರರಾದ ಭಗವಾನ್ ಶ್ರೀಕೃಷ್ಣನು ಮತ್ತು ಬಲರಾಮನು ಅತ್ಯಂತ ಪ್ರಬಲವಾದ ಆ ಸೈನ್ಯವನ್ನು ನಾಶಮಾಡಿಬಿಟ್ಟರು. ಅವರಿಗೆ ಇದೊಂದು ಆಟವೇ ಆಗಿತ್ತು. ॥29॥
(ಶ್ಲೋಕ-30)
ಮೂಲಮ್
ಸ್ಥಿತ್ಯುದ್ಭವಾಂತಂ ಭುವನತ್ರಯಸ್ಯ ಯಃ
ಸಮೀಹತೇನಂತಗುಣಃ ಸ್ವಲೀಲಯಾ ।
ನ ತಸ್ಯ ಚಿತ್ರಂ ಪರಪಕ್ಷನಿಗ್ರಹಃ
ತಥಾಪಿ ಮರ್ತ್ಯಾನುವಿಧಸ್ಯ ವರ್ಣ್ಯತೇ ॥
ಅನುವಾದ
ರಾಜೇಂದ್ರ! ಭಗವಂತನು ಅನಂತವಾದ ಗುಣಗಳುಳ್ಳವನು. ಮಹಾ-ಮಹಿಮನಾದ ಅವನು ಆಡುತ್ತಾಡುತ್ತಲೇ ಮೂರು ಲೋಕಗಳ ಸೃಷ್ಟಿ, ಸ್ಥಿತಿ, ಸಂಹಾರಗಳನ್ನು ಮಾಡುತ್ತಾನೆ. ಅಂತಹವನಿಗೆ ಈ ಶತ್ರುಪಕ್ಷದ ವಿಜಯವು ಹೆಚ್ಚಿನದೇನಲ್ಲ. ಆದರೂ ಮನುಷ್ಯನಾಗಿ ಅವತರಿಸಿದಾಗ, ಮನುಷ್ಯರಂತೆ ಲೀಲೆಯನ್ನು ತೋರಿದಾಗ ಅವುಗಳೂ ಯಥಾವತ್ತಾಗಿ ವರ್ಣಿಸಲ್ಪಡುತ್ತವೆ. ॥30॥
(ಶ್ಲೋಕ-31)
ಮೂಲಮ್
ಜಗ್ರಾಹ ವಿರಥಂ ರಾಮೋ ಜರಾಸಂಧಂ ಮಹಾಬಲಮ್ ।
ಹತಾನೀಕಾವಶಿಷ್ಟಾಸುಂ ಸಿಂಹಃ ಸಿಂಹಮಿವೌಜಸಾ ॥
ಅನುವಾದ
ಹೀಗೆ ಜರಾಸಂಧನ ಸೈನ್ಯವೆಲ್ಲವೂ ನಿರ್ನಾಮವಾಗಿ ಹೋಯಿತು. ರಥವೂ ಮುರಿದು ಹೋಯಿತು. ಶರೀರದಲ್ಲಿ ಪ್ರಾಣಮಾತ್ರ ಉಳಿದಿತ್ತು. ಆಗ ಭಗವಾನ್ ಬಲರಾಮನು ಒಂದು ಸಿಂಹವು ಮತ್ತೊಂದು ಸಿಂಹವನ್ನು ಹಿಡಿಯುವಂತೆ ಜರಾಸಂಧನನ್ನು ಬಲಪೂರ್ವಕವಾಗಿ ಹಿಡಿದುಕೊಂಡನು.॥31॥
(ಶ್ಲೋಕ-32)
ಮೂಲಮ್
ಬಧ್ಯಮಾನಂ ಹತಾರಾತಿಂ ಪಾಶೈರ್ವಾರುಣಮಾನುಷೈಃ ।
ವಾರಯಾಮಾಸ ಗೋವಿಂದಸ್ತೇನ ಕಾರ್ಯಚಿಕೀರ್ಷಯಾ ॥
ಅನುವಾದ
ಹಲವಾರು ಶತ್ರುಗಳನ್ನು ಸಂಹರಿಸಿದ್ದ ಜರಾಸಂಧನನ್ನು ಮಾನುಷ ಪಾಶದಿಂದಲೂ, ವರುಣಪಾಶಗಳಿಂದಲೂ ಬಂಧಿಸುತ್ತಿದ್ದನು. ಇವನನ್ನು ಬಿಟ್ಟುಬಿಟ್ಟರೆ ಇನ್ನೂ ಅನೇಕ ಸೈನ್ಯವನ್ನು ಜೊತೆ ಸೇರಿಸಿಕೊಂಡು ಬರುವನು. ಆಗ ಭೂಭಾರ ಹರಣದ ಕಾರ್ಯವು ಸುಲಭವಾದೀತೆಂದು ಭಗವಾನ್ ಶ್ರೀಕೃಷ್ಣನು ಯೋಚಿಸಿ ಬಲರಾಮನಿಗೆ ಜರಾಸಂಧನನ್ನು ಬಂಧಿಸದಂತೆ ತಡೆದನು.॥32॥
(ಶ್ಲೋಕ-33)
ಮೂಲಮ್
ಸ ಮುಕ್ತೋ ಲೋಕನಾಥಾಭ್ಯಾಂ ವ್ರೀಡಿತೋ ವೀರಸಮ್ಮತಃ ।
ತಪಸೇ ಕೃತಸಂಕಲ್ಪೋ ವಾರಿತಃ ಪಥಿ ರಾಜಭಿಃ ॥
(ಶ್ಲೋಕ-34)
ಮೂಲಮ್
ವಾಕ್ಯೈಃ ಪವಿತ್ರಾರ್ಥಪದೈರ್ನಯನೈಃ ಪ್ರಾಕೃತೈರಪಿ ।
ಸ್ವಕರ್ಮಬಂಧಪ್ರಾಪ್ತೋಯಂ ಯದುಭಿಸ್ತೇ ಪರಾಭವಃ ॥
ಅನುವಾದ
ದೊಡ್ಡ-ದೊಡ್ಡ ಪರಾಕ್ರಮ ಶಾಲಿಗಳೂ ಜರಾಸಂಧನನ್ನು ಸಮ್ಮಾನಿಸುತ್ತಿದ್ದರು. ಬಲರಾಮ-ಕೃಷ್ಣರು ತನ್ನ ಮೇಲೆ ದಯತೋರಿ ದೀನನಂತೆ ಬಿಟ್ಟುಬಿಟ್ಟರು. ಇದರಿಂದ ಅವನಿಗೆ ಅತಿಯಾದ ನಾಚಿಕೆಯಾಯಿತು. ಆಗ ಅವನು ಯಾರಿಗೂ ಮುಖತೋರದೆ ತಪಸ್ಸಿಗೆ ಹೋಗಲು ನಿಶ್ಚಯಿಸಿದನು. ಆದರೆ ದಾರಿಯಲ್ಲಿ ಅವನ ಸಂಗಡಿಗರಾದ ರಾಜರು ಅನೇಕ ವಿಧದಿಂದ ಸಮಾಧಾನಗೊಳಿಸುತ್ತಾ-ರಾಜನೇ! ಅಲ್ಪಬಲರಾದ ಯಾದವರೆಲ್ಲಿ? ಮಹಾಬಲಶಾಲಿಯಾದ ನೀನೆಲ್ಲಿ? ಅವರು ನಿನ್ನನ್ನು ಖಂಡಿತವಾಗಿ ಸೋಲಿಸಲಾರರು. ನಿನಗೆ ಪ್ರಾರಬ್ಧವಶದಿಂದ ಈ ಸೋಲು ಉಂಟಾಗಿದೆ. ಇದು ದೈವೇಚ್ಛೆಯೇ ಹೊರತು ಬೇರೇನಿಲ್ಲ. ಅವರು ಪುನಃ ವಿಜಯವನ್ನು ಸಂಪಾದಿಸುವ ಆಸೆಯನ್ನು ತೋರಿಸಿ, ಲೌಕಿಕವಾದ ದೃಷ್ಟಾಂತಗಳನ್ನೂ, ಯುಕ್ತಿಗಳನ್ನೂ ಮುಂದಿಟ್ಟು ಅವನು ತಪಸ್ಸಿಗೆ ಹೋಗಬಾರದೆಂದು ಜರಾಸಂಧನನ್ನು ತಡೆದರು.॥33-34॥
(ಶ್ಲೋಕ-35)
ಮೂಲಮ್
ಹತೇಷು ಸರ್ವಾನೀಕೇಷು ನೃಪೋ ಬಾರ್ಹದ್ರಥಸ್ತದಾ ।
ಉಪೇಕ್ಷಿತೋ ಭಗವತಾ ಮಗಧಾನ್ ದುರ್ಮನಾ ಯಯೌ ॥
ಅನುವಾದ
ಪರೀಕ್ಷಿತನೇ! ಆಗ ಜರಾಸಂಧನ ಎಲ್ಲ ಸೈನ್ಯವೂ ಸತ್ತುಹೋಗಿತ್ತು. ಭಗವಾನ್ ಬಲರಾಮನು ಅವನನ್ನು ಉಪೇಕ್ಷೆಯಿಂದಲೆ ಬಿಟ್ಟು ಬಿಟ್ಟನು. ಇದರಿಂದ ಅವನು ಬಹಳ ದುಃಖಿತನಾಗಿಯೇ ಮಗಧ ದೇಶಕ್ಕೆ ಮರಳಿದನು. ॥35॥
(ಶ್ಲೋಕ-36)
ಮೂಲಮ್
ಮುಕುಂದೋಪ್ಯಕ್ಷತಬಲೋ ನಿಸ್ತೀರ್ಣಾರಿಬಲಾರ್ಣವಃ ।
ವಿಕೀರ್ಯಮಾಣಃ ಕುಸುಮೈಸಿದಶೈರನುಮೋದಿತಃ ॥
ಅನುವಾದ
ಪರೀಕ್ಷಿದ್ರಾಜನೇ! ಭಗವಾನ್ ಶ್ರೀಕೃಷ್ಣನ ಅಲ್ಪವಾದ ಸೈನ್ಯದಲ್ಲಿ ಯಾರ ಕೂದಲೂ ಕೊಂಕಲಿಲ್ಲ. ಜರಾಸಂಧನ ಸಮುದ್ರದಂತೆ ಇದ್ದ ಇಪ್ಪತ್ತಮೂರು ಅಕ್ಷೌಹಿಣೀ ಸೇನೆಯ ಮೇಲೆ ಸಹಜವಾಗಿ ವಿಜಯವನ್ನು ಪಡೆದರು. ಆಗ ದೇವತೆಗಳೂ ವಿಜಯಿಯಾದ ಶ್ರೀಕೃಷ್ಣನ ಮೇಲೆ ಪುಷ್ಪವೃಷ್ಟಿಯನ್ನು ಸುರಿಸಿ ಅವನ ಕಾರ್ಯವನ್ನು ಅನುಮೋದಿಸಿದರು. ॥36॥
(ಶ್ಲೋಕ-37)
ಮೂಲಮ್
ಮಾಥುರೈರುಪಸಂಗಮ್ಯ ವಿಜ್ವರೈರ್ಮುದಿತಾತ್ಮಭಿಃ ।
ಉಪಗೀಯಮಾನವಿಜಯಃ ಸೂತಮಾಗಧವಂದಿಭಿಃ ॥
ಅನುವಾದ
ಜರಾಸಂಧನ ಪರಾಜಯದಿಂದ ಮಥುರಾ ನಿವಾಸಿಗಳು ಭಯರಹಿತರಾಗಿದ್ದರು ಹಾಗೂ ಶ್ರೀಕೃಷ್ಣನ ವಿಜಯದಿಂದ ಅವರ ಹೃದಯ ಆನಂದದಿಂದ ತುಂಬಿ ಹೋಗಿತ್ತು. ಶ್ರೀಕೃಷ್ಣನು ಬಂದು ಅವರೊಡನೆ ಸೇರಿಕೊಂಡಾಗ ಸೂತ, ಮಾಗಧ, ವಂದೀ ಜನರು ಅವನ ವಿಜಯೋತ್ಸವದ ವೀರಗೀತೆಗಳನ್ನು ಹಾಡುತ್ತಿದ್ದರು. ॥37॥
(ಶ್ಲೋಕ-38)
ಮೂಲಮ್
ಶಂಖದುಂದುಭಯೋ ನೇದುರ್ಭೇರೀತೂರ್ಯಾಣ್ಯನೇಕಶಃ ।
ವೀಣಾವೇಣುಮೃದಂಗಾನಿ ಪುರಂ ಪ್ರವಿಶತಿ ಪ್ರಭೌ ॥
ಅನುವಾದ
ಭಗವಾನ್ ಶ್ರೀಕೃಷ್ಣನು ನಗರವನ್ನು ಪ್ರವೇಶಿಸಿದಾಗ ಅಲ್ಲಿ ಶಂಖ, ಭೇರಿ, ದುಂದುಭಿ, ವೀಣೆ, ವೇಣು, ಮೃದಂಗವೇ ಮೊದಲಾದ ಮಂಗಳ ವಾದ್ಯಗಳು ಮೊಳಗುತ್ತಿದ್ದವು. ॥38॥
(ಶ್ಲೋಕ-39)
ಮೂಲಮ್
ಸಿಕ್ತಮಾರ್ಗಾಂ ಹೃಷ್ಟಜನಾಂ ಪತಾಕಾಭಿರಲಂಕೃತಾಮ್ ।
ನಿರ್ಘುಷ್ಟಾಂ ಬ್ರಹ್ಮಘೋಷೇಣ ಕೌತುಕಾಬದ್ಧತೋರಣಾಮ್ ॥
ಅನುವಾದ
ಮಥುರೆಯ ಪ್ರತಿಯೊಂದು ಬೀದಿಯನ್ನೂ ಗುಡಿಸಿ-ಸಾರಿಸಿದ್ದರು. ಎಲ್ಲೆಲ್ಲೂ ಅತ್ಯುತ್ಸಾಹದಿಂದ ಪ್ರಜಾಜನರು ಓಡಾಡುತ್ತಿದ್ದರು. ಇಡೀ ನಗರವು ಸಣ್ಣ-ಸಣ್ಣ ಬಾವುಟಗಳಿಂದಲೂ, ದೊಡ್ಡ-ದೊಡ್ಡ ವಿಜಯ ಪತಾಕೆಗಳಿಂದಲೂ ಅಲಂಕರಿಸಲ್ಪಟ್ಟಿತ್ತು. ಬ್ರಾಹ್ಮಣರ ವೇದ ಧ್ವನಿಗಳು ನಿನಾದಿತವಾಗುತ್ತಿದ್ದವು. ಆನಂದೋತ್ಸವದ ಸೂಚಕವಾಗಿ ಎಲ್ಲೆಡೆ ತೋರಣಗಳನ್ನು ಕಟ್ಟಿದ್ದರು. ॥39॥
(ಶ್ಲೋಕ-40)
ಮೂಲಮ್
ನಿಚೀಯಮಾನೋ ನಾರೀಭಿರ್ಮಾಲ್ಯದಧ್ಯಕ್ಷತಾಂಕುರೈಃ ।
ನಿರೀಕ್ಷ್ಯಮಾಣಃ ಸಸ್ನೇಹಂ ಪ್ರೀತ್ಯುತ್ಕಲಿತಲೋಚನೈಃ ॥
ಅನುವಾದ
ಶ್ರೀಕೃಷ್ಣನು ನಗರವನ್ನು ಪ್ರವೇಶಿಸುತ್ತಿರುವಾಗ ನಗರದ ನಾರಿಯರು ಪ್ರೇಮೋತ್ಕಂಠಿತೆಯರಾಗಿ, ಸ್ನೇಹಪೂರ್ವಕವಾದ ಕಣ್ಣುಗಳಿಂದ ಅವನನ್ನು ದಿಟ್ಟಿಸುತ್ತಾ, ಹೂವಿನ ಹಾರಗಳನ್ನು, ಮೊಸರು ಬೆರೆಸಿದ ಅಕ್ಷತೆಗಳನ್ನು, ಧಾನ್ಯದ ಮೊಳಕೆಗಳನ್ನು ಶ್ರೀಕೃಷ್ಣನ ಮೇಲೆ ಎರಚುತ್ತಿದ್ದರು. ॥40॥
(ಶ್ಲೋಕ-41)
ಮೂಲಮ್
ಆಯೋಧನಗತಂ ವಿತ್ತಮನಂತಂ ವೀರಭೂಷಣಮ್ ।
ಯದುರಾಜಾಯ ತತ್ ಸರ್ವಮಾಹೃತಂ ಪ್ರಾದಿಶತ್ಪ್ರಭುಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ರಣಭೂಮಿಯಿಂದ ಅಪಾರ ಧನವನ್ನು ಮತ್ತು ವೀರರ ಆಭೂಷಣಗಳನ್ನು ತಂದಿದ್ದನು. ಅದೆಲ್ಲವನ್ನೂ ಯದುವಂಶೀಯ ರಾಜನಾದ ಉಗ್ರಸೇನನಿಗೆ ಒಪ್ಪಿಸಿದನು. ॥41॥
(ಶ್ಲೋಕ-42)
ಮೂಲಮ್
ಏವಂ ಸಪ್ತದಶಕೃತ್ವಸ್ತಾವತ್ಯಕ್ಷೌಹಿಣೀಬಲಃ ।
ಯುಯುಧೇ ಮಾಗಧೋ ರಾಜಾ ಯದುಭಿಃ ಕೃಷ್ಣಪಾಲಿತೈಃ ॥
ಅನುವಾದ
ಪರೀಕ್ಷಿತನೇ! ಹೀಗೆ ಮಗಧರಾಜ ಜರಾಸಂಧನು ಹದಿನೇಳು ಬಾರಿ ಇಪ್ಪತ್ತಮೂರು-ಇಪ್ಪತ್ತಮೂರು ಅಕ್ಷೌಹಿಣಿ ಸೈನ್ಯವನ್ನು ಸೇರಿಸಿ ಭಗವಾನ್ ಶ್ರೀಕೃಷ್ಣನಿಂದ ರಕ್ಷಿತವಾದ ಯುದವಂಶೀಯರೊಡನೆ ಯುದ್ಧಮಾಡಿದನು. ॥42॥
(ಶ್ಲೋಕ-43)
ಮೂಲಮ್
ಅಕ್ಷಿಣ್ವಂಸ್ತದ್ಬಲಂ ಸರ್ವಂ ವೃಷ್ಣಯಃ ಕೃಷ್ಣತೇಜಸಾ ।
ಹತೇಷು ಸ್ವೇಷ್ವನೀಕೇಷು ತ್ಯಕ್ತೋಯಾದರಿಭಿರ್ನೃಪಃ ॥
ಅನುವಾದ
ಆದರೆ ಯಾದವರು ಶ್ರೀಕೃಷ್ಣನ ಶಕ್ತಿಯಿಂದ ಪ್ರತಿಬಾರಿಯೂ ಅವನ ಸೈನ್ಯವನ್ನು ನಾಶಮಾಡಿದರು. ಸೈನ್ಯವೆಲ್ಲವೂ ನಾಶವಾದಾಗ ಯದುವಂಶೀಯರು ಉಪೇಕ್ಷೆಯಿಂದ ಬಿಟ್ಟು ಬಿಟ್ಟಾಗ ಜರಾಸಂಧನು ತನ್ನ ರಾಜಧಾನಿಗೆ ಮರಳುತ್ತಿದ್ದನು. ॥43॥
(ಶ್ಲೋಕ-44)
ಮೂಲಮ್
ಅಷ್ಟಾದಶಮಸಂಗ್ರಾಮೇ ಆಗಾಮಿನಿ ತದಂತರಾ ।
ನಾರದಪ್ರೇಷಿತೋ ವೀರೋ ಯವನಃ ಪ್ರತ್ಯದೃಶ್ಯತ ॥
ಅನುವಾದ
ಮಾಗಧನು ಹದಿನೆಂಟನೆಯ ಬಾರಿಯೂ ಸಂಗ್ರಾಮದ ಸಿದ್ಧತೆ ಮಾಡಿಕೊಂಡಾಗಲೇ ನಾರದರಿಂದ ಕಳುಹಲ್ಪಟ್ಟ ವೀರಕಾಲಯವನು ಕಾಣಿಸಿಕೊಂಡನು.॥44॥
(ಶ್ಲೋಕ-45)
ಮೂಲಮ್
ರುರೋಧ ಮಥುರಾಮೇತ್ಯ ತಿಸೃಭಿರ್ಮ್ಲೇಚ್ಛಕೋಟಿಭಿಃ ।
ನೃಲೋಕೇ ಚಾಪ್ರತಿದ್ವಂದ್ವೋ ವೃಷ್ಣೀನ್ ಶ್ರುತ್ವಾತ್ಮಸಂಮಿತಾನ್ ॥
ಅನುವಾದ
ಯುದ್ಧದಲ್ಲಿ ಕಾಲಯವನ ಮುಂದೆ ನಿಲ್ಲಬಲ್ಲ ವೀರನು ಪ್ರಪಂಚದಲ್ಲೇ ಇನ್ನೊಬ್ಬನಿರಲಿಲ್ಲ. ಯದುವಂಶೀಯರು ನನ್ನಂತೆಯೇ ಬಲಶಾಲಿಗಳಾಗಿದ್ದಾರೆ ಮತ್ತು ನನ್ನೊಡನೆ ಯುದ್ಧಮಾಡಬಲ್ಲರು ಎಂದು ಕೇಳಿದಾಗ ಅವನು ಮೂರು ಕೋಟಿ ಮ್ಲೇಚ್ಛರ ಸೇನೆಯೊಂದಿಗೆ ಬಂದು ಮಥುರೆಯನ್ನು ಮುತ್ತಿದನು. ॥45॥
(ಶ್ಲೋಕ-46)
ಮೂಲಮ್
ತಂ ದೃಷ್ಟ್ವಾ ಚಿಂತಯತ್ ಕೃಷ್ಣಃ ಸಂಕರ್ಷಣಸಹಾಯವಾನ್ ।
ಅಹೋ ಯದೂನಾಂ ವೃಜಿನಂ ಪ್ರಾಪ್ತಂ ಹ್ಯುಭಯತೋ ಮಹತ್ ॥
ಅನುವಾದ
ಕಾಲಯವನನು ಮಥುರಾ ಪಟ್ಟಣವನ್ನು ಆಕ್ರಮಿಸಿದುದನ್ನು ಕಂಡು ಸಂಕರ್ಷಣನಿಗೆ ಸಹಾಯಕನಾದ ಶ್ರೀಕೃಷ್ಣನು ಅವನೊಡನೆ ಯೋಚಿಸಿದನು - ಅಯ್ಯೋ! ಈ ಸಮಯದಲ್ಲಿ ಜರಾಸಂಧ ಮತ್ತು ಕಾಲಯವನ ಈ ಇಬ್ಬರೂ ಬಂದಿರುತ್ತಾರೆ. ಇದರಿಂದ ಯಾದವರ ಮೇಲೆ ಎರಡು ಆಪತ್ತುಗಳು ಏಕಕಾಲದಲ್ಲಿ ಸಂಭವಿಸಿವೆ. ॥46॥
(ಶ್ಲೋಕ-47)
ಮೂಲಮ್
ಯವನೋಯಂ ನಿರುಂಧೇಸ್ಮಾನದ್ಯ ತಾವನ್ಮಹಾಬಲಃ ।
ಮಾಗಧೋಪ್ಯದ್ಯ ವಾ ಶ್ವೋ ವಾ ಪರಶ್ವೋ ವಾಗಮಿಷ್ಯತಿ ॥
ಅನುವಾದ
ಇಂದು ಕಾಲಯವನನು ಮೂರುಕೋಟಿ ಮ್ಲೇಚ್ಛಸೈನ್ಯ ಸಮೇತನಾಗಿ ಬಂದು ಆಕ್ರಮಿಸಿರುವನು. ಇಂದೋ ನಾಳೆಯೋ ಜರಾಸಂಧನೂ ಬರಬಹುದು.॥47॥
(ಶ್ಲೋಕ-48)
ಮೂಲಮ್
ಆವಯೋರ್ಯುಧ್ಯತೋರಸ್ಯ ಯದ್ಯಾಗಂತಾ ಜರಾಸುತಃ ।
ಬಂಧೂನ್ ವಧಿಷ್ಯತ್ಯಥವಾ ನೇಷ್ಯತೇ ಸ್ವಪುರಂ ಬಲೀ ॥
ಅನುವಾದ
ನಾವಿಬ್ಬರೂ ಇವನೊಡನೆ ಯುದ್ಧದಲ್ಲಿ ತೊಡಗಿದಾಗಲೇ ಜರಾಸಂಧನು ಬಂದು ತಲುಪಿದರೆ ಮಹಾಬಲಿಷ್ಠನಾದ ಅವನು ನಮ್ಮ ಬಂಧುಗಳನ್ನೆಲ್ಲ ಕೊಂದು ಹಾಕಬಹುದು ಅಥವಾ ಸೆರೆಹಿಡಿದುಕೊಂಡು ತನ್ನ ನಗರಕ್ಕೆ ಕೊಂಡುಹೋಗಬಹುದು. ॥48॥
(ಶ್ಲೋಕ-49)
ಮೂಲಮ್
ತಸ್ಮಾದದ್ಯ ವಿಧಾಸ್ಯಾಮೋ ದುರ್ಗಂ ದ್ವಿಪದದುರ್ಗಮಮ್ ।
ತತ್ರ ಜ್ಞಾತೀನ್ ಸಮಾಧಾಯ ಯವನಂ ಘಾತಯಾಮಹೇ ॥
ಅನುವಾದ
ಅದಕ್ಕಾಗಿ ಇಂದು ನಾವು ಯಾವುದೇ ಮನುಷ್ಯನಿಗೆ ಪ್ರವೇಶಿಸಲು ಅತ್ಯಂತ ಕಠಿಣವಾದ ಒಂದು ದುರ್ಗವನ್ನು ನಿರ್ಮಾಣಮಾಡೋಣ. ನಮ್ಮ ಸ್ವಜನ-ಸಂಬಂಧಿಗಳನ್ನು ಆ ಕೋಟೆಯಲ್ಲಿ ಇರಿಸಿ ಮತ್ತೆ ಈ ಕಾಲಯವನ ವಧೆ ಮಾಡಿಸೋಣ. ॥49॥
(ಶ್ಲೋಕ-50)
ಮೂಲಮ್
ಇತಿ ಸಮ್ಮಂತ್ರ್ಯ ಭಗವಾನ್ ದುರ್ಗಂ ದ್ವಾದಶಯೋಜನಮ್ ।
ಅಂತಃ ಸಮುದ್ರೇ ನಗರಂ ಕೃತ್ಸ್ನಾದ್ಭುತಮಚೀಕರತ್ ॥
ಅನುವಾದ
ಬಲರಾಮನೊಂದಿಗೆ ಹೀಗೆ ವಿಚಾರ ವಿನಿಯಮ ಮಾಡಿ ಭಗವಾನ್ ಶ್ರೀಕೃಷ್ಣನು ಸಮುದ್ರದ ಮಧ್ಯದಲ್ಲಿ ಒಂದು ದುರ್ಗಮವಾದ ನಗರವನ್ನು ನಿರ್ಮಿಸಿದನು. ಅದರಲ್ಲಿ ಎಲ್ಲ ವಸ್ತುಗಳೂ ಅದ್ಭುತವಾಗಿದ್ದವು. ಆ ನಗರದ ಉದ್ದಗಲವು ಹನ್ನೆರಡು ಯೋಜನಗಳಷ್ಟಿತ್ತು. ॥50॥
(ಶ್ಲೋಕ-51)
ಮೂಲಮ್
ದೃಶ್ಯತೇ ಯತ್ರ ಹಿ ತ್ವಾಷ್ಟ್ರಂ ವಿಜ್ಞಾನಂ ಶಿಲ್ಪನೈಪುಣಮ್ ।
ರಥ್ಯಾಚತ್ವರವೀಥೀಭಿರ್ಯಥಾವಾಸ್ತು ವಿನಿರ್ಮಿತಮ್ ॥
ಅನುವಾದ
ಆ ನಗರದ ಒಂದೊಂದು ವಸ್ತುಗಳಲ್ಲೂ ವಿಶ್ವಕರ್ಮನ ವಾಸ್ತುವಿಜ್ಞಾನವು ಹಾಗೂ ಶಿಲ್ಪಕಲೆಯ ನೈಪುಣ್ಯವು ಪ್ರಕಟವಾಗಿತ್ತು. ಅದರಲ್ಲಿ ವಾಸ್ತುಶಾಸ್ತ್ರಕ್ಕನುಸಾರವಾಗಿ ದೊಡ್ಡ-ದೊಡ್ಡ ರಾಜಬೀದಿಗಳೂ, ವೃತ್ತಗಳೂ, ಇತರ ಮಾರ್ಗಗಳೂ ಯಥಾಸ್ಥಾನಗಳಲ್ಲಿ ವಿಭಾಜಿಸಲ್ಪಟ್ಟಿತ್ತು. ॥51॥
(ಶ್ಲೋಕ-52)
ಮೂಲಮ್
ಸುರದ್ರುಮಲತೋದ್ಯಾನವಿಚಿತ್ರೋಪವನಾನ್ವಿತಮ್ ।
ಹೇಮಶೃಂಗೈಃದಿವಿಸ್ಪೃಗ್ಭಿಃ ಸ್ಫಾಟಿಕಾಟ್ಟಾಲಗೋಪುರೈಃ ॥
ಅನುವಾದ
ಆ ನಗರದಲ್ಲಿ ಪಾರಿಜಾತವೇ ಮೊದಲಾದ ದೇವತಾವೃಕ್ಷಗಳಿಂದಲೂ, ಲತೆಗಳಿಂದಲೂ ಸಂಪನ್ನವಾಗಿದ್ದ ಸುಂದರವಾದ ಉದ್ಯಾನವನಗಳೂ ಮತ್ತು ಚಿತ್ರ-ವಿಚಿತ್ರವಾದ ಉಪವನಗಳೂ ಇದ್ದವು. ಅಲ್ಲಿ ಆಕಾಶವನ್ನು ಮುಟ್ಟುತ್ತಿದ್ದ ಸ್ವರ್ಣಗೋಪುರಗಳಿಂದಲೂ, ಸ್ಫಟಿಕಮಯವಾದ ಉಪ್ಪರಿಗೆಗಳಿಂದಲೂ, ಬಹಿರ್ದ್ವಾರಗಳಿಂದಲೂ ಅತ್ಯಂತ ಸುಂದರವಾಗಿ ಕಾಣುತ್ತಿತ್ತು.॥52॥
(ಶ್ಲೋಕ-53)
ಮೂಲಮ್
ರಾಜತಾರಕುಟೈಃ ಕೋಷ್ಟೈರ್ಹೇಮಕುಂಭೈರಲಂಕೃತೈಃ ।
ರತ್ನಕೂಟೈಃ ಗೃಹೈಃ ಹೈಮೈಃ ಮಹಾಮರಕತಸ್ಥಲೈಃ ॥
ಅನುವಾದ
ಬೆಳ್ಳಿ ಮತ್ತು ಹಿತ್ತಾಳೆಗಳಿಂದ ನಿರ್ಮಿಸಿದ ಅನೇಕ ಧಾನ್ಯ ಭಂಡಾರಗಳಿದ್ದವು. ಕುಸುರಿ ಕೆಲಸಗಳಿಂದ ಕೂಡಿದ ಚಿನ್ನದ ಕಲಶಗಳಿಂದ ಅಲಂಕೃತವಾದ ಮಹಾ-ಮಹಾ ಸೌಧಗಳಿದ್ದು, ಮರಕತಮಯವಾಗಿದ್ದ ಅದರ ನೆಲಗಳಿಂದ ಆ ದ್ವಾರಕಾಪಟ್ಟಣವು ಸುಂದರವಾಗಿ ಶೋಭಿಸುತ್ತಿತ್ತು. ॥53॥
(ಶ್ಲೋಕ-54)
ಮೂಲಮ್
ವಾಸ್ತೋಷ್ಪತೀನಾಂ ಚ ಗೃಹೈರ್ವಲಭೀಭಿಶ್ಚ ನಿರ್ಮಿತಮ್ ।
ಚಾತುರ್ವರ್ಣ್ಯಜನಾಕೀರ್ಣಂ ಯದುದೇವಗೃಹೋಲ್ಲಸತ್ ॥
ಅನುವಾದ
ಚಂದ್ರಶಾಲೆಗಳೊಡನೆ ನಿರ್ಮಿಸಿದ ವಾಸ್ತು ದೇವತೆಯ ಮಂದಿರಗಳು ನಿರ್ಮಾಣಗೊಂಡಿದ್ದವು. ಅದರಲ್ಲಿ ನಾಲ್ಕು ವರ್ಣದವರೂ ವಾಸಿಸುತ್ತಿದ್ದು, ನಗರದ ಮಧ್ಯದಲ್ಲಿ ಯದುವಂಶ ಪ್ರಧಾನರಾದ ಉಗ್ರಸೇನ, ವಸುದೇವ, ಬಲರಾಮ, ಶ್ರೀಕೃಷ್ಣರೇ ಮೊದಲಾದವರ ಅರಮನೆಗಳು ಪ್ರಕಾಶಿಸುತ್ತಿದ್ದವು. ॥54॥
(ಶ್ಲೋಕ-55)
ಮೂಲಮ್
ಸುಧರ್ಮಾಂ ಪಾರಿಜಾತಂ ಚ ಮಹೇಂದ್ರಃ ಪ್ರಾಹಿಣೋದ್ಧರೇಃ ।
ಯತ್ರ ಚಾವಸ್ಥಿತೋ ಮರ್ತ್ಯೋ ಮರ್ತ್ಯಧರ್ಮೈರ್ನ ಯುಜ್ಯತೇ ॥
ಅನುವಾದ
ಪರೀಕ್ಷಿತನೇ! ಆ ಸಮಯದಲ್ಲಿ ದೇವೇಂದ್ರನು ಭಗವಾನ್ ಶ್ರೀಕೃಷ್ಣನಿಗಾಗಿ ಪಾರಿಜಾತವೃಕ್ಷ ಮತ್ತು ಸುಧರ್ಮಾ ಎಂಬ ಸಭೆಯನ್ನು ಕಳುಹಿಸಿಕೊಟ್ಟನು. ಆ ದಿವ್ಯವಾದ ಸಭೆಯಲ್ಲಿ ಕುಳಿತವನಿಗೆ ಹಸಿವು-ಬಾಯಾರಿಕೆ ಮುಂತಾದ ಮರ್ತ್ಯ ಧರ್ಮವಿರುತ್ತಿರಲಿಲ್ಲ. ॥55॥
(ಶ್ಲೋಕ-56)
ಮೂಲಮ್
ಶ್ಯಾಮೈಕಕರ್ಣಾನ್ ವರುಣೋ ಹಯಾನ್ಶುಕ್ಲಾನ್ ಮನೋಜವಾನ್ ।
ಅಷ್ಟೌ ನಿಧಿಪತಿಃ ಕೋಶಾನ್ ಲೋಕಪಾಲೋ ನಿಜೋದಯಾನ್ ॥
ಅನುವಾದ
ಒಂದು ಕಿವಿಮಾತ್ರ ಕಪ್ಪಾಗಿದ್ದು ಬಿಳಿಯ ಬಣ್ಣದಿಂದ ಪ್ರಕಾಶಿಸುತ್ತಿದ್ದ, ಮನೋವೇಗಕ್ಕೆ ಸಮಾನ ವೇಗವುಳ್ಳ ಹಲವಾರು ಕುದುರೆಗಳನ್ನೂ ವರುಣನು ಕಳಿಸಿಕೊಟ್ಟನು. ಧನಪತಿಯಾದ ಕುಬೇರನು ತನ್ನ ಎಂಟು ನಿಧಿಗಳನ್ನೂ ಕಳಿಸಿಕೊಟ್ಟನು. ಲೋಕಪಾಲರೂ ಕೂಡ ತಮ್ಮ-ತಮ್ಮ ವಿಭೂತಿಗಳನ್ನು ಭಗವಂತನ ಬಳಿಗೆ ಕಳಿಸಿಕೊಟ್ಟರು. ॥56॥
(ಶ್ಲೋಕ-57)
ಮೂಲಮ್
ಯದ್ಯದ್ಭಗವತಾ ದತ್ತಮಾಧಿಪತ್ಯಂ ಸ್ವಸಿದ್ಧಯೇ ।
ಸರ್ವಂ ಪ್ರತ್ಯರ್ಪಯಾಮಾಸುರ್ಹರೌ ಭೂಮಿಗತೇ ನೃಪ ॥
ಅನುವಾದ
ಪರೀಕ್ಷಿತನೇ! ಸಮಸ್ತ ಲೋಕ ಪಾಲರಿಗೂ ಭಗವಾನ್ ಶ್ರೀಕೃಷ್ಣನು ಅವರವರ ಕಾರ್ಯವನ್ನು ನಿರ್ವಹಿಸಬೇಕಾದ ಶಕ್ತಿಗಳನ್ನೂ, ಸಿದ್ಧಿಗಳನ್ನೂ ದಯಪಾಲಿಸಿದ್ದನು. ಶ್ರೀಕೃಷ್ಣನು ಪೃಥಿವಿಯಲ್ಲಿ ಅವತರಿಸಿ, ಲೀಲೆಗಳನ್ನು ತೋರಿಸಲು ಪ್ರಾರಂಭಿಸಿದಾಗ ಲೋಕಪಾಲರೆಲ್ಲರೂ ತಮ್ಮಲ್ಲಿದ್ದ ಸಿದ್ಧಿಗಳನ್ನು ಶ್ರೀಕೃಷ್ಣನಿಗೆ ಸಮರ್ಪಿಸಿದರು. ॥57॥
(ಶ್ಲೋಕ-58)
ಮೂಲಮ್
ತತ್ರ ಯೋಗಪ್ರಭಾವೇಣ ನೀತ್ವಾ ಸರ್ವಜನಂ ಹರಿಃ ।
ಪ್ರಜಾಪಾಲೇನ ರಾಮೇಣ ಕೃಷ್ಣಃ ಸಮನುಮಂತ್ರಿತಃ ।
ನಿರ್ಜಗಾಮ ಪುರದ್ವಾರಾತ್ ಪದ್ಮಮಾಲೀ ನಿರಾಯುಧಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ತನ್ನ ಸಮಸ್ತ ಸ್ವಜನ ಸಂಬಂಧಿಗಳನ್ನು ತನ್ನ ಅಚಿಂತ್ಯವಾದ ಮಹಾಶಕ್ತಿಯಾದ ಯೋಗಮಾಯೆಯಿಂದ ದ್ವಾರಕೆಗೆ ಕರೆತಂದನು. ಉಳಿದ ಪ್ರಜೆಗಳ ರಕ್ಷಣೆಯನ್ನು ಬಲರಾಮನಿಗೆ ಒಪ್ಪಿಸಿ, ಅವನಿಂದ ಅನುಮತಿಯನ್ನು ಪಡೆದು ಭಗವಂತನು ಕಮಲದ ಮಾಲೆಯನ್ನು ಧರಿಸಿ ನಿರಾಯುಧನಾಗಿ ಪಟ್ಟಣದ ಮಹಾದ್ವಾರದಿಂದ ಹೊರಬಿದ್ದನು. ॥58॥
ಅನುವಾದ (ಸಮಾಪ್ತಿಃ)
ಐವತ್ತನೆಯ ಅಧ್ಯಾಯವು ಮುಗಿಯಿತು. ॥50॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ ದುರ್ಗನಿವೇಶನಂ ನಾಮ ಪಂಚಾಶತ್ತಮೋಽಧ್ಯಾಯಃ ॥50॥