೪೯

[ನಲವತ್ತೊಂಭತ್ತನೆಯ ಅಧ್ಯಾಯ]

ಭಾಗಸೂಚನಾ

ಹಸ್ತಿನಾಪುರಕ್ಕೆ ಅಕ್ರೂರನ ಪ್ರಯಾಣ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಸ ಗತ್ವಾ ಹಾಸ್ತಿನಪುರಂ ಪೌರವೇಂದ್ರಯಶೋಂಕಿತಮ್ ।
ದದರ್ಶ ತತ್ರಾಂಬಿಕೇಯಂ ಸಭೀಷ್ಮಂ ವಿದುರಂ ಪೃಥಾಮ್ ॥

(ಶ್ಲೋಕ-2)

ಮೂಲಮ್

ಸಹಪುತ್ರಂ ಚ ಬಾಹ್ಲೀಕಂ ಭಾರದ್ವಾಜಂ ಸಗೌತಮಮ್ ।
ಕರ್ಣಂ ಸುಯೋಧನಂ ದ್ರೌಣಿಂ ಪಾಂಡವಾನ್ ಸುಹೃದೋಪರಾನ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನ ಆಜ್ಞಾನುಸಾರವಾಗಿ ಅಕ್ರೂರನು ಕುರುವಂಶೀಯರಾದವರ ಯಶಸ್ಸಿನಿಂದ ಅಂಕಿತವಾದ ಹಸ್ತಿನಾವತಿಗೆ ಪ್ರಯಾಣಮಾಡಿ, ಅಲ್ಲಿ ರಾಜನಾದ ಧೃತರಾಷ್ಟ್ರ, ಭೀಷ್ಮ, ವಿದುರ, ಕುಂತೀ, ಬಾಹ್ಲೀಕ ಮತ್ತು ಅವನ ಮಗ ಸೋಮದತ್ತ, ದ್ರೋಣಾಚಾರ್ಯರು, ಕೃಪಾಚಾರ್ಯರು, ಕರ್ಣ, ದುರ್ಯೋಧನ, ದ್ರೋಣಪುತ್ರ ಅಶ್ವತ್ಥಾಮ, ಯುಧಿಷ್ಠಿರಾದಿ ಪಂಚಪಾಂಡವರು ಇವರನ್ನು ಹಾಗೂ ಇತರ ಇಷ್ಟ-ಮಿತ್ರರನ್ನು ನೋಡಿದನು. ॥1-2॥

(ಶ್ಲೋಕ-3)

ಮೂಲಮ್

ಯಥಾವದುಪಸಂಗಮ್ಯ ಬಂಧುಭಿರ್ಗಾಂದಿನೀಸುತಃ ।
ಸಂಪೃಷ್ಟಸ್ತೈಃ ಸುಹೃದ್ವಾರ್ತಾಂ ಸ್ವಯಂ ಚಾಪೃಚ್ಛದವ್ಯಯಮ್ ॥

ಅನುವಾದ

ಗಾಂದಿನೀನಂದನನಾದ ಅಕ್ರೂರನು ಎಲ್ಲ ಇಷ್ಟ-ಮಿತ್ರರನ್ನು ಮತ್ತು ಸಂಬಂಧಿಗಳನ್ನು ಭೇಟಿಯಾದಾಗ ಧೃತರಾಷ್ಟ್ರನೇ ಮೊದಲಾದವರೂ ತಮ್ಮ ಮಥುರಾವಾಸಿಗಳಾದ ಸ್ವಜನ-ಸಂಬಂಧಿಗಳ ಕ್ಷೇಮ ಸಮಾಚಾರವನ್ನು ಕೇಳಿದರು. ಅಂತೆಯೇ ಅಕ್ರೂರನೂ ಹಸ್ತಿನಾಪುರವಾಸಿಗಳ ಕ್ಷೇಮ-ಸಮಾಚಾರಗಳನ್ನು ಕೇಳಿದನು. ॥3॥

(ಶ್ಲೋಕ-4)

ಮೂಲಮ್

ಉವಾಸ ಕತಿಚಿನ್ಮಾಸಾನ್ ರಾಜ್ಞೋ ವೃತ್ತವಿವಿತ್ಸಯಾ ।
ದುಷ್ಪ್ರಜಸ್ಯಾಲ್ಪಸಾರಸ್ಯ ಖಲಚ್ಛಂದಾನುವರ್ತಿನಃ ॥

ಅನುವಾದ

ಪರೀಕ್ಷಿತನೇ! ಧೃತರಾಷ್ಟ್ರನು ಪಾಂಡವರೊಂದಿಗೆ ಹೇಗೆ ವ್ಯವಹರಿಸುತ್ತಾನೆಂದು ತಿಳಿಯಲು ಅಕ್ರೂರನು ಕೆಲವು ತಿಂಗಳು ಅಲ್ಲೇ ಉಳಿದುಕೊಂಡನು. ನಿಜ ಹೇಳಬೇಕಾದರೆ - ದುಷ್ಟಪುತ್ರರ ಇಚ್ಛೆಯ ವಿರುದ್ಧವಾಗಿ ಯಾವುದನ್ನು ಮಾಡುವ ಸಾಹಸ ಧೃತರಾಷ್ಟ್ರನಲ್ಲಿರಲಿಲ್ಲ. ಅವನು ಶಕುನಿ ಮೊದಲಾದ ದುಷ್ಟರ ಸಲಹೆಯಂತೆ ಕಾರ್ಯಮಾಡುತ್ತಿದ್ದನು. ॥4॥

(ಶ್ಲೋಕ-5)

ಮೂಲಮ್

ತೇಜ ಓಜೋ ಬಲಂ ವೀರ್ಯಂ ಪ್ರಶ್ರಯಾದೀಂಶ್ಚ ಸದ್ಗುಣಾನ್ ।
ಪ್ರಜಾನುರಾಗಂ ಪಾರ್ಥೇಷು ನ ಸಹದ್ಭಿಶ್ಚಿಕೀರ್ಷಿತಮ್ ॥

(ಶ್ಲೋಕ-6)

ಮೂಲಮ್

ಕೃತಂ ಚ ಧಾರ್ತರಾಷ್ಟ್ರೈರ್ಯದ್ಗರದಾನಾದ್ಯಪೇಶಲಮ್ ।
ಆಚಖ್ಯೌ ಸರ್ವಮೇವಾಸ್ಮೈ ಪೃಥಾ ವಿದುರ ಏವ ಚ ॥

ಅನುವಾದ

ಕುಂತೀ ಮತ್ತು ವಿದುರನು ಅಕ್ರೂರನಿಗೆ ತಿಳಿಯ ಹೇಳಿದರು - ಧೃತರಾಷ್ಟ್ರನ ಮಕ್ಕಳಾದ ದುರ್ಯೋಧನಾದಿಗಳು ಪಾಂಡವರ ಪ್ರಭಾವ, ಶಸ್ತ್ರ ಕೌಶಲ್ಯ, ಬಲ, ಪರಾಕ್ರಮ, ವಿನಯ ಮೊದಲಾದ ಸದ್ಗುಣಗಳನ್ನು ನೋಡಿ ಉರಿಯುತ್ತಿರುತ್ತಾರೆ. ಪ್ರಜೆಗಳು ಪಾಂಡವರನ್ನು ವಿಶೇಷವಾಗಿ ಪ್ರೀತಿಸಿದಾಗ ಅವರು ಇನ್ನೂ ಹೆಚ್ಚು ಹೊಟ್ಟೆಕಿಚ್ಚು ಪಟ್ಟುಕೊಂಡು ಪಾಂಡವರಿಗೆ ಅನಿಷ್ಟವನ್ನು ಮಾಡಲು ಹೊರಡುತ್ತಾರೆ. ಇಂದಿನ ತನಕ ದುರ್ಯೋಧನಾದಿ ಧೃತರಾಷ್ಟ್ರನ ಪುತ್ರರು ಪಾಂಡವರಿಗೆ ವಿಷಉಣಿಸುವುದೇ ಮುಂತಾದ ಬಹಳ ಅತ್ಯಾಚಾರವನ್ನು ಮಾಡಿರುವರು ಮತ್ತು ಮುಂದೆಯೂ ಕೂಡ ಬಹಳಷ್ಟು ಮಾಡಲು ಯೋಚಿಸುತ್ತಿದ್ದಾರೆ. ॥5-6॥

(ಶ್ಲೋಕ-7)

ಮೂಲಮ್

ಪೃಥಾ ತು ಭ್ರಾತರಂ ಪ್ರಾಪ್ತಮಕ್ರೂರಮುಪಸೃತ್ಯ ತಮ್ ।
ಉವಾಚ ಜನ್ಮನಿಲಯಂ ಸ್ಮರಂತ್ಯಶ್ರುಕಲೇಕ್ಷಣಾ ॥

ಅನುವಾದ

ಅಕ್ರೂರನು ಕುಂತಿಯ ಮನೆಗೆ ಬಂದಾಗ ಕುಂತಿಯು ಅವನ ಬಳಿಗೆ ಹೋಗಿ ಕುಳಿತಳು. ಅಕ್ರೂರನನ್ನು ನೋಡಿ ಆಕೆಗೆ ತನ್ನ ತವರು ಮನೆಯ ನೆನಪಾಗಿ ಕಣ್ಣುಗಳಿಂದ ನೀರನ್ನು ಸುರಿಸುತ್ತಾ ಅವನಲ್ಲಿ ಹೇಳಿದಳು. ॥7॥

(ಶ್ಲೋಕ-8)

ಮೂಲಮ್

ಅಪಿ ಸ್ಮರಂತಿ ನಃ ಸೌಮ್ಯ ಪಿತರೌ ಭ್ರಾತರಶ್ಚ ಮೇ ।
ಭಗಿನ್ಯೋ ಭ್ರಾತೃಪುತ್ರಾಶ್ಚ ಜಾಮಯಃ ಸಖ್ಯ ಏವ ಚ ॥

ಅನುವಾದ

ಪ್ರಿಯ ಸಹೋದರನೇ! ನನ್ನ ತಂದೆ-ತಾಯಿಯರು, ಅಕ್ಕ-ತಂಗಿಯರು, ಅಳಿಯಂದಿರು, ಕುಟುಂಬದ ಸ್ತ್ರೀಯರು, ಗೆಳತಿಯರು ಎಂದಾದರೂ ನನ್ನನ್ನು ಸ್ಮರಿಸುವರೇ? ॥8॥

(ಶ್ಲೋಕ-9)

ಮೂಲಮ್

ಭ್ರಾತ್ರೇಯೋ ಭಗವಾನ್ ಕೃಷ್ಣಃ ಶರಣ್ಯೋ ಭಕ್ತವತ್ಸಲಃ ।
ಪೈತೃಷ್ವಸೇಯಾನ್ ಸ್ಮರತಿ ರಾಮಶ್ಚಾಂಬುರುಹೇಕ್ಷಣಃ ॥

ಅನುವಾದ

ನನ್ನ ಅಳಿಯಂದಿರಾದ ಭಗವಾನ್ ಶ್ರೀಕೃಷ್ಣ ಮತ್ತು ಕಮಲನಯನ ಬಲರಾಮ ಇವರಿಬ್ಬರೂ ಭಕ್ತವತ್ಸಲರೂ, ಶರಣಾಗತ ರಕ್ಷಕರೂ ಆಗಿದ್ದಾರೆ ಎಂದು ಕೇಳಿದ್ದೆ. ಅವರು ಎಂದಾದರೂ ತಮ್ಮ ಸೋದರ ಅತ್ತೆಯನ್ನು ಹಾಗೂ ಆಕೆಯ ಮಕ್ಕಳನು ನೆನೆಸಿಕೊಳ್ಳುವರೇನು? ॥9॥

(ಶ್ಲೋಕ-10)

ಮೂಲಮ್

ಸಾಪತ್ನಮಧ್ಯೇ ಶೋಚಂತೀಂ ವೃಕಾಣಾಂ ಹರಿಣೀಮಿವ ।
ಸಾಂತ್ವಯಿಷ್ಯತಿ ಮಾಂ ವಾಕ್ಯೈಃ ಪಿತೃಹೀನಾಂಶ್ಚ ಬಾಲಕಾನ್ ॥

ಅನುವಾದ

‘ತೋಳಗಳ ನಡುವೆ ಸಿಕ್ಕಿಕೊಂಡ ಜಿಂಕೆಯಂತೆ’ ನಾನು ಶತ್ರುಗಳ ಮಧ್ಯದಲ್ಲಿ ಸುತ್ತುವರಿದು ಶೋಕಾಕುಲಳಾಗಿದ್ದೇನೆ. ನನ್ನ ಮಕ್ಕಳು ತಂದೆಯನ್ನು ಕಳೆದುಕೊಂಡಿರುವರು. ನಮ್ಮ ಶ್ರೀಕೃಷ್ಣನು ಎಂದಾದರು ಇಲ್ಲಿಗೆ ಬಂದು ನನ್ನನ್ನು ಮತ್ತು ಈ ಅನಾಥ ಮಕ್ಕಳನ್ನು ಸಂತೈಸುವನೇ? ॥10॥

(ಶ್ಲೋಕ-11)

ಮೂಲಮ್

ಕೃಷ್ಣ ಕೃಷ್ಣ ಮಹಾಯೋಗಿನ್ ವಿಶ್ವಾತ್ಮನ್ ವಿಶ್ವಭಾವನ ।
ಪ್ರಪನ್ನಾಂ ಪಾಹಿ ಗೋವಿಂದ ಶಿಶುಭಿಶ್ಚಾವಸೀದತೀಮ್ ॥

ಅನುವಾದ

(ಶ್ರೀಕೃಷ್ಣನು ತನ್ನ ಮುಂದೆಯೇ ಇರುವಂತೆ ಭಾವಿಸಿ ಕುಂತಿಯು ಗದ್ಗದಿತಳಾಗಿ ಹೇಳತೊಡಗಿದಳು) ಓ ಸಚ್ಚಿದಾನಂದ ಸ್ವರೂಪನಾದ ಶ್ರೀಕೃಷ್ಣ! ನೀನು ಮಹಾಯೋಗಿಯೂ, ವಿಶ್ವಾತ್ಮನೂ, ಸಮಸ್ತ ವಿಶ್ವಕ್ಕೆ ಆತ್ಮನಾಗಿಯೂ, ಜಗದ್ರಕ್ಷಕನೂ ಆಗಿರುವೆ. ಗೋವಿಂದ! ನಾನು ನನ್ನ ಮಕ್ಕಳೊಂದಿಗೆ ದುಃಖದ ಮೇಲೆ ದುಃಖಗಳನ್ನೇ ಅನುಭವಿಸುತ್ತಿದ್ದೇನೆ. ನಿನಗೆ ಶರಣು ಬಂದಿರುವ ನನ್ನನ್ನು ರಕ್ಷಿಸು. ನನ್ನ ಮಕ್ಕಳನ್ನು ಕಾಪಾಡು. ॥11॥

(ಶ್ಲೋಕ-12)

ಮೂಲಮ್

ನಾನ್ಯತ್ತವ ಪದಾಂಭೋಜಾತ್ ಪಶ್ಯಾಮಿ ಶರಣಂ ನೃಣಾಮ್ ।
ಭಿಭ್ಯತಾಂ ಮೃತ್ಯುಸಂಸಾರಾದೀಶ್ವರಸ್ಯಾಪವರ್ಗಿಕಾತ್ ॥

ಅನುವಾದ

ಶ್ರೀಕೃಷ್ಣ! ಈ ಪ್ರಪಂಚವು ಮೃತ್ಯುಮಯವಾಗಿದ್ದು, ನಿನ್ನ ಚರಣಗಳು ಮೋಕ್ಷವನ್ನು ಕರುಣಿಸುವಂತಹುದು. ಈ ಸಂಸಾರಕ್ಕೆ ಹೆದರಿ ಶರಣಾದವರಿಗೆ ನಿನ್ನ ಚರಣಕಮಲಗಳಲ್ಲದೆ ಬೇರೆ ಯಾವುದೇ ಆಶ್ರಯವನ್ನು ನಾನು ನೋಡುತ್ತಿಲ್ಲ. ॥12॥

(ಶ್ಲೋಕ-13)

ಮೂಲಮ್

ನಮಃ ಕೃಷ್ಣಾಯ ಶುದ್ಧಾಯ ಬ್ರಹ್ಮಣೇ ಪರಮಾತ್ಮನೇ ।
ಯೋಗೇಶ್ವರಾಯ ಯೋಗಾಯ ತ್ವಾಮಹಂ ಶರಣಂ ಗತಾ ॥

ಅನುವಾದ

ಶ್ರೀಕೃಷ್ಣನೇ! ನೀನು ಮಾಯಾಲೇಶದಿಂದ ರಹಿತನಾದ ಪರಮ ಶುದ್ಧನಾಗಿರುವೆ. ಸಾಕ್ಷಾತ್ ಪರಬ್ರಹ್ಮ ಪರಮಾತ್ಮನಾಗಿರುವೆ. ಸಮಸ್ತ ಸಾಧನೆಗಳ, ಯೋಗಗಳ ಮತ್ತು ಉಪಾಯಗಳ ಸ್ವಾಮಿಯಾಗಿದ್ದು ಸಾಕ್ಷಾತ್ ಯೋಗವೂ ಆಗಿರುವೆ. ನಾನು ನಿನಗೆ ಶರಣಾಗಿದ್ದೇನೆ. ನೀನು ನನ್ನನ್ನು ರಕ್ಷಿಸು. ॥13॥

(ಶ್ಲೋಕ-14)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಯನುಸ್ಮೃತ್ಯ ಸ್ವಜನಂ ಕೃಷ್ಣಂ ಚ ಜಗದೀಶ್ವರಮ್ ।
ಪ್ರಾರುದದ್ದುಃಖಿತಾ ರಾಜನ್ ಭವತಾಂ ಪ್ರಪಿತಾಮಹೀ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ನಿನ್ನ ಮುತ್ತಜ್ಜಿಯಾದ ಕುಂತೀದೇವಿಯು ಹೀಗೆ ತಮ್ಮ ಸಂಬಂಧಿಗಳನ್ನೂ, ಕೊನೆಗೆ ಜಗದೀಶ್ವರನಾದ ಶ್ರೀಕೃಷ್ಣನನ್ನು ಸ್ಮರಿಸಿಕೊಂಡು ಕೊನೆಗೆ ಅತ್ಯಂತ ದುಃಖಿತಳಾಗಿ ಬಿಕ್ಕಿ-ಬಿಕ್ಕಿ ಅಳತೊಡಗಿದಳು. ॥14॥

(ಶ್ಲೋಕ-15)

ಮೂಲಮ್

ಸಮದುಃಖಸುಖೋಕ್ರೂರೋ ವಿದುರಶ್ಚ ಮಹಾಯಶಾಃ ।
ಸಾಂತ್ವಯಾಮಾಸತುಃ ಕುಂತೀಂ ತತ್ಪುತ್ರೋತ್ಪತ್ತಿಹೇತುಭಿಃ ॥

ಅನುವಾದ

ಅಕ್ರೂರನು ಮತ್ತು ವಿದುರರು ಇಬ್ಬರೂ ಸುಖ ದುಃಖಗಳನ್ನು ಸಮಾನವಾಗಿ ನೋಡುತ್ತಿದ್ದರು. ಯಶಸ್ವಿಯಾದ ಈ ಮಹಾತ್ಮರಿಬ್ಬರೂ ಕುಂತಿಗೆ ಅವಳ ಪುತ್ರರ ಜನ್ಮದಾತರಾದ ಧರ್ಮ, ವಾಯು ಮೊದಲಾದ ದೇವತೆಗಳ ನೆನಪನ್ನು ತಂದುಕೊಟ್ಟು, ನಿನ್ನ ಮಕ್ಕಳು ಅಧರ್ಮವನ್ನು ನಾಶಗೊಳಿಸಲೆಂದೇ ಹುಟ್ಟಿರುವರು ಎಂದು ಬಹಳವಾಗಿ ತಿಳಿಯ ಹೇಳಿ ಸಾಂತ್ವನ ನೀಡಿದರು. ॥15॥

(ಶ್ಲೋಕ-16)

ಮೂಲಮ್

ಯಾಸ್ಯನ್ ರಾಜಾನಮಭ್ಯೇತ್ಯ ವಿಷಮಂ ಪುತ್ರಲಾಲಸಮ್ ।
ಅವದತ್ ಸುಹೃದಾಂ ಮಧ್ಯೇ ಬಂಧುಭಿಃ ಸೌಹೃದೋದಿತಮ್ ॥

ಅನುವಾದ

ಧೃತರಾಷ್ಟ್ರನು ತನ್ನ ತಮ್ಮನ ಮಕ್ಕಳೊಂದಿಗೆ ಪಕ್ಷಪಾತವನ್ನು ಮಾಡುತ್ತಿದ್ದಾನೆ ಮತ್ತು ಅವರೊಂದಿಗೆ ತನ್ನ ಪುತ್ರರಂತೆ ವ್ಯವಹರಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿಯೇ ಇತ್ತು. ಮಥುರೆಗೆ ಹೊರಡುವಾಗ ಅಕ್ರೂರನು ಧೃತರಾಷ್ಟ್ರನ ಬಳಿಗೆ ಬಂದು ಕೌರವರಿಂದ ತುಂಬಿದ ಸಭೆಯಲ್ಲಿ ಶ್ರೀಕೃಷ್ಣ ಮತ್ತು ಬಲರಾಮಾದಿ ಹಿತೈಷಿಗಳ ಸಂದೇಶವನ್ನು ತಿಳಿಸಿದನು. ॥16॥

(ಶ್ಲೋಕ-17)

ಮೂಲಮ್ (ವಾಚನಮ್)

ಅಕ್ರೂರ ಉವಾಚ

ಮೂಲಮ್

ಭೋ ಭೋ ವೈಚಿತ್ರವೀರ್ಯ ತ್ವಂ ಕುರೂಣಾಂ ಕೀರ್ತಿವರ್ಧನ ।
ಭ್ರಾತರ್ಯುಪರತೇ ಪಾಂಡಾವಧುನಾಸನಮಾಸ್ಥಿತಃ ॥

ಅನುವಾದ

ಅಕ್ರೂರನು ಹೇಳಿದನು — ಕುರವಂಶೀಯರ ಕೀರ್ತಿಯನ್ನು ಹೆಚ್ಚಿಸುವ ವಿಚಿತ್ರವೀರ್ಯನ ಮಗನಾದ ಧೃತರಾಷ್ಟ್ರನೇ! ನಿನ್ನ ತಮ್ಮನಾದ ಪಾಂಡುಮಹಾರಾಜನು ಅವಸಾನ ಹೊಂದಿದ ಬಳಿಕ ಈಗತಾನೇ ನೀನು ರಾಜ್ಯ ಸಿಂಹಾಸನವನ್ನು ಏರಿರುವೆ. ॥17॥

(ಶ್ಲೋಕ-18)

ಮೂಲಮ್

ಧರ್ಮೇಣ ಪಾಲಯನ್ನುರ್ವೀಂ ಪ್ರಜಾಃ ಶೀಲೇನ ರಂಜಯನ್ ।
ವರ್ತಮಾನಃ ಸಮಃ ಸ್ವೇಷು ಶ್ರೇಯಃ ಕೀರ್ತಿಮವಾಪ್ಸ್ಯಸಿ ॥

ಅನುವಾದ

ಧರ್ಮದಿಂದ ರಾಜ್ಯಭಾರವನ್ನು ಮಾಡುತ್ತಾ, ಸದ್ವ್ಯವಹಾರಗಳಿಂದ ಪ್ರಜೆಗಳನ್ನು ಸಂತೋಷಪಡಿಸುತ್ತಾ, ಸ್ವಜನರಲ್ಲಿ ಪಕ್ಷಪಾತವಿಲ್ಲದೆ ಸಮನಾಗಿ ವ್ಯವಹರಿಸುತ್ತಿದ್ದರೆ ಶ್ರೇಯಸ್ಸನ್ನೂ, ಕೀರ್ತಿಯನ್ನೂ ಪಡೆಯುವೆ. ॥18॥

(ಶ್ಲೋಕ-19)

ಮೂಲಮ್

ಅನ್ಯಥಾ ತ್ವಾಚರನ್ಲೋಕೇ ಗರ್ಹಿತೋ ಯಾಸ್ಯಸೇ ತಮಃ ।
ತಸ್ಮಾತ್ಸಮತ್ವೇ ವರ್ತಸ್ವ ಪಾಂಡವೇಷ್ವಾತ್ಮಜೇಷು ಚ ॥

ಅನುವಾದ

ಇದಕ್ಕೆ ವಿಪರೀತವಾಗಿ ಆಚರಿಸಿದರೆ ಈ ಲೋಕದಲ್ಲಿ ನೀನು ನಿಂದೆಗೆ ಗುರಿಯಾಗುವೆ. ಸತ್ತ ಬಳಿಕ ನರಕಕ್ಕೆ ಹೋಗಬೇಕಾದೀತು. ಆದ್ದರಿಂದ ನಿನ್ನ ಪುತ್ರರಲ್ಲಿಯೂ ಮತ್ತು ಪಾಂಡವರಲ್ಲಿಯೂ ಸಮಾನತೆಯಿಂದ ವರ್ತಿಸು. ॥19॥

(ಶ್ಲೋಕ-20)

ಮೂಲಮ್

ನೇಹ ಚಾತ್ಯಂತಸಂವಾಸಃ ಕರ್ಹಿಚಿತ್ ಕೇನಚಿತ್ಸಹ ।
ರಾಜನ್ ಸ್ವೇನಾಪಿ ದೇಹೇನ ಕಿಮು ಜಾಯಾತ್ಮಜಾದಿಭಿಃ ॥

ಅನುವಾದ

ಮಹಾರಾಜ! ಯಾರು ಯಾವಾಗಲೂ ಯಾರೊಡನೆಯೂ ಹೆಚ್ಚು ಕಾಲ ಸೇರಿಕೊಂಡು ಇರುವುದಿಲ್ಲ. ತನ್ನದೆಂದು ತಿಳಿದಿರುವ ಈ ಶರೀರದಲ್ಲಿಯೂ ಹೆಚ್ಚುಕಾಲ ಇರಲಾಗುವುದಿಲ್ಲ. ಹೀಗಿರುವಾಗ ಪತ್ನೀ-ಪುತ್ರರ ವಿಷಯವಾಗಿ ಹೇಳುವು ದೇನಿದೆ? ॥20॥

(ಶ್ಲೋಕ-21)

ಮೂಲಮ್

ಏಕಃ ಪ್ರಸೂಯತೇ ಜಂತುರೇಕ ಏವ ಪ್ರಲೀಯತೇ ।
ಏಕೋನುಭುಂಕ್ತೇ ಸುಕೃತಮೇಕ ಏವ ಚ ದುಷ್ಕೃತಮ್ ॥

ಅನುವಾದ

ಜೀವಿಯು ಒಬ್ಬನೇ ಹುಟ್ಟುತ್ತಾನೆ. ಒಬ್ಬನೇ ಸತ್ತುಹೋಗುತ್ತಾನೆ ತಾನು ಮಾಡಿದ ಪಾಪ-ಪುಣ್ಯಗಳ ಫಲಗಳನ್ನೂ ಒಬ್ಬನೇ ಅನುಭವಿಸುತ್ತಾನೆ. ॥21॥

(ಶ್ಲೋಕ-22)

ಮೂಲಮ್

ಅಧರ್ಮೋಪಚಿತಂ ವಿತ್ತಂ ಹರಂತ್ಯನ್ಯೇಲ್ಪಮೇಧಸಃ ।
ಸಂಭೋಜನೀಯಾಪದೇಶೈರ್ಜಲಾನೀವ ಜಲೌಕಸಃ ॥

ಅನುವಾದ

ಸತಿ-ಸುತ ಬಂಧುಗಳು ‘ನಾವು ನಿನ್ನವರು, ನಮ್ಮ ಭರಣ-ಪೋಷಣೆಗಳನ್ನು ನೀನು ಮಾಡಬೇಕು’ ಎಂದು ಹೇಳಿ ಕೊಂಡು-ಅಲ್ಪಬುದ್ಧಿಯವನು ಅಧರ್ಮದಿಂದ ಸಂಪಾದಿಸಿದ ಹಣವನ್ನು ಜಲಚರ ಪ್ರಾಣಿಗಳು ನೀರನ್ನು ಕುಡಿದು ಬಿಡುವಂತೆ ತಿಂದುಹಾಕುತ್ತಾರೆ. ॥22॥

(ಶ್ಲೋಕ-23)

ಮೂಲಮ್

ಪುಷ್ಣಾತಿ ಯಾನಧರ್ಮೇಣ ಸ್ವಬುದ್ಧ್ಯಾ ತಮಪಂಡಿತಮ್ ।
ತೇಕೃತಾರ್ಥಂ ಪ್ರಹಿಣ್ವಂತಿ ಪ್ರಾಣಾ ರಾಯಃ ಸುತಾದಯಃ ॥

ಅನುವಾದ

ಈ ಮೂರ್ಖ ಜೀವನು ಯಾರನ್ನು ತನ್ನವರೆಂದು ತಿಳಿದು ಅಧರ್ಮದಿಂದಲಾದರೂ ಪಾಲಿಸಿ-ಪೋಷಿಸುತ್ತಾರೋ, ಅವರೇ ಪ್ರಾಣ, ಧನ, ಪುತ್ರಾದಿಗಳು ಈ ಜೀವನನ್ನು ಅಸಂತುಷ್ಟ ನಿರುವಾಗಲೆ ಬಿಟ್ಟು ಹೊರಟು ಹೋಗುತ್ತಾರೆ. ॥23॥

(ಶ್ಲೋಕ-24)

ಮೂಲಮ್

ಸ್ವಯಂ ಕಿಲ್ಬಿಷಮಾದಾಯ ತೈಸ್ತ್ಯಕ್ತೋ ನಾರ್ಥಕೋವಿದಃ ।
ಅಸಿದ್ಧಾರ್ಥೋ ವಿಶತ್ಯಂಧಂ ಸ್ವಧರ್ಮವಿಮುಖಸ್ತಮಃ ॥

ಅನುವಾದ

ನಿಜವಾಗಿ ಹೇಳಬೇಕಾದರೆ - ತನ್ನ ಧರ್ಮದಿಂದ ವಿಮುಖನಾದವನು ತನ್ನ ಲೌಕಿಕ ಸ್ವಾರ್ಥವನ್ನು ತಿಳಿಯುವುದಿಲ್ಲ. ಯಾರಿಗಾಗಿ ಅವನು ಅಧರ್ಮವನ್ನು ಮಾಡುವನೋ, ಅವರೂ ಅವನನ್ನು ಬಿಟ್ಟೇ ಬಿಡುವರು. ಅವನಿಗೆ ಎಂದಿಗೂ ಸಂತೋಷವಾಗಲಾರದು ಹಾಗೂ ತನ್ನ ಪಾಪದ ಮೂಟೆಯನ್ನು ತಲೆಯಲ್ಲಿ ಹೊತ್ತುಕೊಂಡು ಘೋರವಾದ ನರಕಕ್ಕೆ ಹೋಗುವನು. ॥24॥

(ಶ್ಲೋಕ-25)

ಮೂಲಮ್

ತಸ್ಮಾಲ್ಲೋಕಮಿಮಂ ರಾಜನ್ ಸ್ವಪ್ನಮಾಯಾಮನೋರಥಮ್ ।
ವೀಕ್ಷ್ಯಾಯಮ್ಯಾತ್ಮನಾತ್ಮಾನಂ ಸಮಃ ಶಾಂತೋ ಭವ ಪ್ರಭೋ ॥

ಅನುವಾದ

ಅದಕ್ಕಾಗಿ ಮಹಾರಾಜ! ಈ ಪ್ರಪಂಚವನ್ನು ಕನಸೆಂದೂ, ಇಂದ್ರಜಾಲವೆಂದೂ, ಕೇವಲ ಮನಸ್ಸಿನ ಮಂಡಿಗೆಯೆಂದೂ, ನಶ್ವರವಾದುದೆಂದೂ ಭಾವಿಸಿ, ಬುದ್ಧಿಯಿಂದ ಮನಸ್ಸನ್ನು ಸಮಾಧಾನಪಡಿಸಿಕೊಂಡು ಮಕ್ಕಳೆಲ್ಲರನ್ನೂ ಸಮತ್ವದಿಂದ ಕಾಣುತ್ತಾ ಶಾಂತನಾಗಿರು. ॥25॥

(ಶ್ಲೋಕ-26)

ಮೂಲಮ್ (ವಾಚನಮ್)

ಧೃತರಾಷ್ಟ್ರ ಉವಾಚ

ಮೂಲಮ್

ಯಥಾ ವದತಿ ಕಲ್ಯಾಣೀಂ ವಾಚಂ ದಾನಪತೇ ಭವಾನ್ ।
ತಥಾನಯಾ ನ ತೃಪ್ಯಾಮಿ ಮರ್ತ್ಯಃ ಪ್ರಾಪ್ಯ ಯಥಾಮೃತಮ್ ॥

ಅನುವಾದ

ಧೃತರಾಷ್ಟ್ರನು ಹೇಳಿದನು — ದಾನಪತಿಯಾದ ಅಕ್ರೂರ! ನೀನು ನಿಶ್ಚಯವಾಗಿಯೂ ನನಗೆ ಶ್ರೇಯಸ್ಕರವಾದ ಮಾತನ್ನೇ ಹೇಳಿರುವೆ. ಮನುಷ್ಯನು ಅಮೃತವನ್ನು ಎಷ್ಟು ಕುಡಿದರೂ ತೃಪ್ತನಾಗದಿರುವಂತೆ, ಅಮೃತಸ್ವರೂಪವಾದ ನಿನ್ನ ಮಾತುಗಳಿಂದ ನಾನು ತೃಪ್ತನಾಗಲಿಲ್ಲ. ಇನ್ನೂ ಕೇಳಬೇಕೆನಿಸುತ್ತದೆ. ॥26॥

(ಶ್ಲೋಕ-27)

ಮೂಲಮ್

ತಥಾಪಿ ಸೂನೃತಾ ಸೌಮ್ಯ ಹೃದಿ ನ ಸ್ಥೀಯತೇ ಚಲೇ ।
ಪುತ್ರಾನುರಾಗವಿಷಮೇ ವಿದ್ಯುತ್ ಸೌದಾಮನೀ ಯಥಾ ॥

ಅನುವಾದ

ಅಕ್ರೂರನೇ! ಹೀಗಿದ್ದರೂ ನಿನ್ನ ಹಿತಕರವಾದ ಒಳ್ಳೆಯ ಮಾತುಗಳು ಚಂಚಲವಾದ ನನ್ನ ಮನಸ್ಸಿನಲ್ಲಿ ಸ್ವಲ್ಪವೂ ಉಳಿಯಲಿಲ್ಲ. ಏಕೆಂದರೆ, ನನ್ನ ಹೃದಯವು ಪುತ್ರರ ವ್ಯಾಮೋಹದಿಂದ ಅತ್ಯಂತ ವಿಷಮಯವಾಗಿದೆ. ಸ್ಫಟಿಕ ಪರ್ವತದ ಮೇಲೆ ಮಿಂಚು ಒಮ್ಮೆ ಹೊಳೆದು ಮಾಯವಾಗುವಂತೆ ನಿನ್ನ ಉಪದೇಶಗಳ ಸ್ಥಿತಿಯೂ ಹಾಗೆಯೇ ಆಗಿದೆ. ॥27॥

(ಶ್ಲೋಕ-28)

ಮೂಲಮ್

ಈಶ್ವರಸ್ಯ ವಿಧಿಂ ಕೋ ನು ವಿಧುನೋತ್ಯನ್ಯಥಾ ಪುಮಾನ್ ।
ಭೂಮೇರ್ಭಾರಾವತಾರಾಯ ಯೋವತೀರ್ಣೋ ಯದೋಃ ಕುಲೇ ॥

ಅನುವಾದ

ಅಕ್ರೂರನೇ! ಸರ್ವಶಕ್ತನಾದ ಭಗವಂತನು ಪೃಥಿವಿಯ ಭಾರವನ್ನಿಳುಹಲೆಂದೇ ಯದುಕುಲದಲ್ಲಿ ಅವತರಿಸಿರುವನೆಂದು ನಾನು ಕೇಳಿದ್ದೇನೆ. ಅವನ ವಿಧಾನದಲ್ಲಿ ವ್ಯತ್ಯಾಸ ಮಾಡಬಲ್ಲ ಯಾವ ಮನುಷ್ಯನು ತಾನೇ ಸಮರ್ಥನು? ಅವನ ಇಚ್ಛೆಯಂತೆಯೇ ನಡೆಯುವುದು. ॥28॥

(ಶ್ಲೋಕ-29)

ಮೂಲಮ್

ಯೋ ದುರ್ವಿಮರ್ಶಪಥಯಾ ನಿಜಮಾಯಯೇದಂ
ಸೃಷ್ಟ್ವಾ ಗುಣಾನ್ ವಿಭಜತೇ ತದನುಪ್ರವಿಷ್ಟಃ ।
ತಸ್ಮೈ ನಮೋ ದುರವಬೋಧವಿಹಾರತಂತ್ರ-
ಸಂಸಾರಚಕ್ರಗತಯೇ ಪರಮೇಶ್ವರಾಯ ॥

ಅನುವಾದ

ಭಗವಂತನ ಮಾಯೆಯು ಅಚಿಂತ್ಯವಾದುದು. ಆ ಮಾಯೆಯಿಂದಲೇ ಈ ಜಗತ್ತನ್ನು ಸೃಷ್ಟಿಸಿ ತಾನೂ ಅದರಲ್ಲಿಯೇ ಸೇರಿಕೊಂಡು ಗುಣ-ಕರ್ಮಗಳನ್ನು ಪ್ರಪಂಚಕ್ಕೆ ವಿಭಾಗಿಸಿಕೊಡುತ್ತಾನೆ. ಈ ಜಗಚ್ಚಕ್ರದ ಅವಿಚ್ಛಿನ್ನ ಗತಿಯಲ್ಲಿ ಅವನ ಅಚಿಂತ್ಯ ಲೀಲಾಶಕ್ತಿಯ ಹೊರತು ಬೇರೆ ಯಾವ ಕಾರಣವೂ ಇಲ್ಲ. ಅಂತಹ ಪರಮೈಶ್ವರ್ಯಶಾಲಿಯಾದ ಪ್ರಭುವಿಗೆ ನಾನು ನಮಸ್ಕರಿಸುತ್ತೇನೆ. ॥29॥

(ಶ್ಲೋಕ-30)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಯಭಿಪ್ರೇತ್ಯ ನೃಪತೇರಭಿಪ್ರಾಯಂ ಸ ಯಾದವಃ ।
ಸುಹೃದ್ಭಿಃ ಸಮನುಜ್ಞಾತಃ ಪುನರ್ಯದುಪುರೀಮಗಾತ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಮಹಾರಾಜ! ಹೀಗೆ ಅಕ್ರೂರನು ಧೃತರಾಷ್ಟ್ರನ ಅಭಿಪ್ರಾಯವನ್ನು ತಿಳಿದುಕೊಂಡು, ಕುರುವಂಶೀಯರಾದ ಸ್ವಜನರಿಂದ ಅನುಮತಿಯನ್ನು ಪಡೆದು ಮಥುರೆಗೆ ಮರಳಿದನು. ॥30॥

(ಶ್ಲೋಕ-31)

ಮೂಲಮ್

ಶಶಂಸ ರಾಮಕೃಷ್ಣಾಭ್ಯಾಂ ಧೃತರಾಷ್ಟ್ರವಿಚೇಷ್ಟಿತಮ್ ।
ಪಾಂಡವಾನ್ ಪ್ರತಿ ಕೌರವ್ಯ ಯದರ್ಥಂ ಪ್ರೇಷಿತಃ ಸ್ವಯಮ್ ॥

ಅನುವಾದ

ಪರೀಕ್ಷಿತನೇ! ಅಕ್ರೂರನು ಅಲ್ಲಿ ಭಗವಾನ್ ಶ್ರೀಕೃಷ್ಣ ಮತ್ತು ಬಲರಾಮರಲ್ಲಿ ಧೃತರಾಷ್ಟ್ರನು ಪಾಂಡವರೊಡನೆ ವ್ಯವಹರಿಸುತ್ತಿದ್ದ ಎಲ್ಲ ವೃತ್ತಾಂತವನ್ನು ತಿಳಿಸಿದನು. ಏಕೆಂದರೆ ಅವನನ್ನು ಹಸ್ತಿನಾಪುರಕ್ಕೆ ಕಳಿಸಿದ ಉದ್ದೇಶವೇ ಅದಾಗಿತ್ತು. ॥31॥

ಅನುವಾದ (ಸಮಾಪ್ತಿಃ)

ನಲವತ್ತೊಂಭತ್ತನೆಯ ಅಧ್ಯಾಯವು ಮುಗಿಯಿತು. ॥49॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ಏಕೋನಪಂಚಾಶತ್ತಮೋಽಧ್ಯಾಯಃ ॥49॥
ಹತ್ತನೆಯ ಸ್ಕಂಧದ ಪೂರ್ವಾರ್ಧವು ಸಂಪೂರ್ಣವಾಯಿತು.
ಹರಿಃ ಓಂ ತತ್ಸತ್ - ಹರಿಃ ಓಂ ತತ್ಸತ್