೪೮

[ನಲವತ್ತೆಂಟನೆಯ ಅಧ್ಯಾಯ]

ಭಾಗಸೂಚನಾ

ಭಗವಂತನು ಕುಬ್ಜೆಯ ಮತ್ತು ಅಕ್ರೂರನ ಮನೆಗಳಿಗೆ ಹೋದುದು

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಅಥ ವಿಜ್ಞಾಯ ಭಗವಾನ್ ಸರ್ವಾತ್ಮಾ ಸರ್ವದರ್ಶನಃ ।
ಸೈರಂಧ್ರ್ಯಾಃ ಕಾಮತಪ್ತಾಯಾಃ ಪ್ರಿಯಮಿಚ್ಛನ್ ಗೃಹಂ ಯಯೌ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಅನಂತರ ಸಮಸ್ತರ ಆತ್ಮವಾಗಿರುವ ಹಾಗೂ ಸರ್ವದ್ರಷ್ಟಾರನಾದ ಭಗವಾನ್ ಶ್ರೀಕೃಷ್ಣನು ತನ್ನನ್ನು ಸೇರಬೇಕೆಂಬ ಆಸೆಯನ್ನಿಟ್ಟುಕೊಂಡು ಪರಿತಪಿಸುತ್ತಿದ್ದ ಕುಬ್ಜೆಯ ಮೇಲೆ ಅನುಗ್ರಹ ತೋರಲು ಅವಳ ಮನೆಗೆ ಹೋದನು. ॥1॥

(ಶ್ಲೋಕ-2)

ಮೂಲಮ್

ಮಹಾರ್ಹೋಪಸ್ಕರೈರಾಢ್ಯಂ ಕಾಮೋಪಾಯೋಪಬೃಂಹಿತಮ್ ।
ಮುಕ್ತಾದಾಮಪತಾಕಾಭಿರ್ವಿತಾನಶಯನಾಸನೈಃ ।
ಧೂಪೈಃ ಸುರಭಿಭಿರ್ದೀಪೈಃ ಸ್ರಗ್ಗಂಧೈರಪಿ ಮಂಡಿತಮ್ ॥

ಅನುವಾದ

ಕುಬ್ಜೆಯ ಮನೆಯು ಸರ್ವಸಂಪತ್ಸಮೃದ್ಧವಾಗಿತ್ತು. ಆ ಮನೆಯು ಶೃಂಗಾರ ರಸವನ್ನು ಉದ್ದೀಪನಗೊಳಿಸುವಂತ ಬಹಳಷ್ಟು ಸಾಧನ-ಸಾಮಗ್ರಿಗಳಿಂದ ತುಂಬಿತ್ತು. ಆಕೆಯ ಆ ಭವನವು ಮುತ್ತಿನಹಾರಗಳಿಂದಲೂ, ಪತಾಕೆಗಳಿಂದಲೂ, ಮೇಲ್ಕಟ್ಟುಗಳಿಂದಲೂ, ಹಂಸತೂಲಿಕಾತಲ್ಪಗಳಿಂದಲೂ, ಸುವರ್ಣಮಯ ಆಸನಗಳಿಂದಲೂ ಸುಗಂಧಯುಕ್ತವಾದ ಧೂಪಗಳಿಂದಲೂ, ದೀಪಗಳಿಂದಲೂ, ಮಾಲೆಗಳಿಂದಲೂ, ಸುಗಂಧ ಚಂದನಗಳಿಂದಲೂ ಸಮಲಂಕೃತವಾಗಿತ್ತು. ॥2॥

(ಶ್ಲೋಕ-3)

ಮೂಲಮ್

ಗೃಹಂ ತಮಾಯಾಂತಮವೇಕ್ಷ್ಯ ಸಾಸನಾತ್
ಸದ್ಯಃ ಸಮುತ್ಥಾಯ ಹಿ ಜಾತಸಂಭ್ರಮಾ ।
ಯಥೋಪಸಂಗಮ್ಯ ಸಖೀಭಿರಚ್ಯುತಂ
ಸಭಾಜಯಾಮಾಸ ಸದಾಸನಾದಿಭಿಃ ॥

ಅನುವಾದ

ತನ್ನ ಸ್ವಾಮಿಯು ಮನೆಯೊಳಗೆ ಬಂದುದನ್ನು ನೋಡಿ ಕುಬ್ಜೆಯು ಆಸನದಿಂದ ಮೇಲೆದ್ದು ಅತ್ಯಂತ ಸಂಭ್ರಮದಿಂದ ತನ್ನ ಸಖಿಯರೊಡನೆ ಶ್ರೀಕೃಷ್ಣನನ್ನು ಆದರದಿಂದ ಸ್ವಾಗತಿಸಿ, ಸುಖಾಸನವನ್ನಿತ್ತು, ಯಥಾವಿಧಿಯಾಗಿ ಪೂಜಿಸಿದಳು. ॥3॥

(ಶ್ಲೋಕ-4)

ಮೂಲಮ್

ತಥೋದ್ಧವಃ ಸಾಧು ತಯಾಭಿಪೂಜಿತೋ
ನ್ಯಷೀದದುರ್ವ್ಯಾಮಭಿಮೃಶ್ಯ ಚಾಸನಮ್ ।
ಕೃಷ್ಣೋಪಿ ತೂರ್ಣಂ ಶಯನಂ ಮಹಾಧನಂ
ವಿವೇಶ ಲೋಕಾಚರಿತಾನ್ಯನುವ್ರತಃ ॥

ಅನುವಾದ

ಶ್ರೀಕೃಷ್ಣನನ್ನು ಸತ್ಕರಿಸಿದಂತೆಯೇ ಅವನ ಭಕ್ತನಾದ ಉದ್ಧವನನ್ನು ಸತ್ಕರಿಸಿ, ಕುಳಿತುಕೊಳ್ಳಲು ದಿವ್ಯಾಸನವನ್ನಿತ್ತಳು. ಆದರೆ ಉದ್ಧವನು ಸ್ವಾಮಿಯ ಜೊತೆಯಲ್ಲಿ ಕುಳಿತುಕೊಳ್ಳಲು ಇಷ್ಟಪಡದೆ ಆಕೆಯಿತ್ತ ಆಸನವನ್ನು ಕೈಯಿಂದ ಮುಟ್ಟಿ ನೆಲದ ಮೇಲೆ ಕುಳಿತನು. ಲೋಕಾಚಾರಗಳನ್ನು ಅನುಸರಿಸುವ ಶ್ರೀಕೃಷ್ಣನು ಬಹುಮೂಲ್ಯವಾದ ಹಾಸಿಗೆಯ ಮೇಲೆ ಕುಳಿತನು. ॥4॥

(ಶ್ಲೋಕ-5)

ಮೂಲಮ್

ಸಾ ಮಜ್ಜನಾಲೇಪದುಕೂಲಭೂಷಣ-
ಸ್ರಗ್ಗಂಧತಾಂಬೂಲಸುಧಾಸವಾದಿಭಿಃ ।
ಪ್ರಸಾಧಿತಾತ್ಮೋಪಸಸಾರ ಮಾಧವಂ
ಸವ್ರೀಡಲೀಲೋತ್ಸ್ಮಿತವಿಭ್ರಮೇಕ್ಷಿತೈಃ ॥

ಅನುವಾದ

ಅನಂತರ ಕುಬ್ಜೆಯು ಮಂಗಳಸ್ನಾನವನ್ನು ಮಾಡಿ, ಅಂಗರಾಗವನ್ನು ಲೇಪಿಸಿಕೊಂಡು, ದಿವ್ಯವಾದ ವಸ್ತ್ರಾಭೂಷಣಗಳಿಂದ ಸಮಲಂಕೃತೆಯಾಗಿ, ಗಂಧವನ್ನು ಪೂಸಿಕೊಂಡು, ಹೂಮುಡಿದುಕೊಂಡು, ಆಸವವನ್ನು ಕುಡಿದು, ತಾಂಬೂಲವನ್ನು ಸೇವಿಸಿ ಸೌಂದರ್ಯದ ಖನಿಯಂತಾಗಿ ನಾಚಿಕೆಯಿಂದ ಕೂಡಿದ ಮಂದಹಾಸದಿಂದಲೂ, ಹಾವ-ಭಾವಗಳಿಂದಲೂ ಭಗವಂತನನ್ನು ಕಡೆಗಣ್ಣನೋಟದಿಂದ ನೋಡುತ್ತಾ ಅವನ ಬಳಿಗೆ ಸಾರಿದಳು. ॥5॥

(ಶ್ಲೋಕ-6)

ಮೂಲಮ್

ಆಹೂಯ ಕಾಂತಾಂ ನವಸಂಗಮಹ್ರಿಯಾ
ವಿಶಂಕಿತಾಂ ಕಂಕಣಭೂಷಿತೇ ಕರೇ ।
ಪ್ರಗೃಹ್ಯ ಶಯ್ಯಾಮಧಿವೇಶ್ಯ ರಾಮಯಾ
ರೇಮೇನುಲೇಪಾರ್ಪಣಪುಣ್ಯಲೇಶಯಾ ॥

ಅನುವಾದ

ಕುಬ್ಜೆಯು ಹೊಸದಾಗಿ ಸೇರುವಿಕೆಯಿಂದ ನಾಚಿಕೊಂಡಳು. ಸಂಕೋಚದಿಂದ ಹಿಂಜರಿಯುತ್ತಿದ್ದ ಆಕೆಯನ್ನು ಶ್ರೀಕೃಷ್ಣನು ಬಳಿಗೆ ಕರೆದು ಬಳೆಗಳಿಂದ ಭೂಷಿತವಾದ ಅವಳ ಕೈಗಳನ್ನು ಹಿಡಿದುಕೊಂಡು ತನ್ನ ಪಕ್ಕದಲ್ಲಿ ಕುಳ್ಳಿರಿಸಿಕೊಂಡನು. ಪರೀಕ್ಷಿತನೇ! ಕುಬ್ಜೆಯು ಈ ಜನ್ಮದಲ್ಲಿ ಭಗವಂತನಿಗೆ ಕೇವಲ ಅಂಗರಾಗವನ್ನು ಅರ್ಪಿಸಿದ್ದಳು. ಆ ಒಂದೇ ಶುಭಕರ್ಮದಿಂದ ಆಕೆಗೆ ಇಂತಹ ಅನುಪಮವಾದ ಅವಕಾಶದೊರೆಯಿತು. ॥6॥

(ಶ್ಲೋಕ-7)

ಮೂಲಮ್

ಸಾನಂಗತಪ್ತಕುಚಯೋರುರಸಸ್ತಥಾಕ್ಷ್ಣೋ-
ರ್ಜಿಘ್ರಂತ್ಯನಂತಚರಣೇನ ರುಜೋ ಮೃಜಂತೀ ।
ದೋರ್ಭ್ಯಾಂ ಸ್ತನಾಂತರಗತಂ ಪರಿರಭ್ಯ ಕಾಂತ-
ಮಾನಂದಮೂರ್ತಿಮಜಹಾದತಿದೀರ್ಘತಾಪಮ್ ॥

ಅನುವಾದ

ಕುಬ್ಜೆಯು ಭಗವಾನ್ ಶ್ರೀಕೃಷ್ಣನ ಚರಣಾರವಿಂದಗಳನ್ನು ಕಾಮತಪ್ತವಾಗಿದ್ದ ವಕ್ಷಃಸ್ಥಳದ ಮೇಲೆ ಇಟ್ಟುಗೊಂಡು ಕಣ್ಣಿಗೊತ್ತಿಕೊಂಡು ಆ ದಿವ್ಯಚರಣಗಳ ಸುಗಂಧವನ್ನು ಆಘ್ರಾಣಿಸುತ್ತಾ ಹೃದಯದ ಆಧಿ-ವ್ಯಾಧಿಗಳೆಲ್ಲವನ್ನು ನಿವಾರಿಸಿಕೊಂಡಳು. ಹೀಗೆ ಭಗವಂತನ ಸಾನ್ನಿಧ್ಯವನ್ನು ಪಡೆದು ಆನಂದಸಾಗರದಲ್ಲಿ ಮುಳುಗಿಹೋದಳು. ॥7॥

(ಶ್ಲೋಕ-8)

ಮೂಲಮ್

ಸೈವಂ ಕೈವಲ್ಯನಾಥಂ ತಂ ಪ್ರಾಪ್ಯ ದುಷ್ಪ್ರಾಪಮೀಶ್ವರಮ್ ।
ಅಂಗರಾಗಾರ್ಪಣೇನಾಹೋ ದುರ್ಭಗೇದಮಯಾಚತ ॥

ಅನುವಾದ

ಶ್ರೀಕೃಷ್ಣನು ಮೋಕ್ಷಕ್ಕೆ ಸ್ವಾಮಿಯು. ಬೇಡಿದವರಿಗೆ ಮೋಕ್ಷವನ್ನೀಯಲು ಸಮರ್ಥನು. ಸುಲಭವಾಗಿ ಸಿಕ್ಕತಕ್ಕವನಲ್ಲ. ಅಂತಹವನನ್ನು ಕೇವಲ ಅಂಗರಾಗ ಸಮರ್ಪಣದಿಂದ ಕುಬ್ಜೆಯು ಪಡೆದುಕೊಂಡಿದ್ದಳು. ಆದರೆ ಆ ದುರ್ಭಾಗ್ಯಳಾದ ಸೈರಂಧ್ರಿಯು ವ್ರಜದ ಗೋಪಿಕೆಯರಂತೆ ಸೇವೆಯನ್ನು ಬೇಡಿಕೊಳ್ಳದೆ ಹೀಗೆ ಬೇಡಿದಳು. ॥8॥

(ಶ್ಲೋಕ-9)

ಮೂಲಮ್

ಆಹೋಷ್ಯತಾಮಿಹ ಪ್ರೇಷ್ಠ ದಿನಾನಿ ಕತಿಚಿನ್ಮಯಾ ।
ರಮಸ್ವ ನೋತ್ಸಹೇ ತ್ಯಕ್ತುಂ ಸಂಗಂ ತೇಂಬುರುಹೇಕ್ಷಣ ॥

ಅನುವಾದ

ಪ್ರಿಯತಮನೇ! ನೀನು ಕೆಲವುದಿನ ಇಲ್ಲೇ ಇದ್ದು ನನ್ನೊಡನೆ ರಮಿಸುತ್ತಿರು. ಕಮಲಾಕ್ಷನೇ! ನಿನ್ನ ಸಂಗವನ್ನು ನನ್ನಿಂದ ಬಿಟ್ಟಿರಲಾಗುವುದಿಲ್ಲ. ॥9॥

(ಶ್ಲೋಕ-10)

ಮೂಲಮ್

ತಸ್ಯೈ ಕಾಮವರಂ ದತ್ತ್ವಾ ಮಾನಯಿತ್ವಾ ಚ ಮಾನದಃ ।
ಸಹೋದ್ಧವೇನ ಸರ್ವೇಶಃ ಸ್ವಧಾಮಾಗಮದರ್ಚಿತಮ್ ॥

ಅನುವಾದ

ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಸಮಸ್ತರಿಗೂ ಮಾನದನೂ, ಸರ್ವೇಶ್ವರನೂ ಆಗಿರುವವನು ಆಕೆಯು ಅಪೇಕ್ಷಿಸಿದ ವರವನ್ನಿತ್ತು, ಆಕೆಯಿಂದ ಪೂಜೆಯನ್ನು ಕೈಗೊಂಡು ತನ್ನ ಪ್ರಿಯಭಕ್ತನಾದ ಉದ್ಧವನೊಂದಿಗೆ ತನ್ನ ಅರಮನೆಗೆ ಹಿಂದಿರುಗಿದನು. ॥10॥

(ಶ್ಲೋಕ-11)

ಮೂಲಮ್

ದುರಾರಾಧ್ಯಂ ಸಮಾರಾಧ್ಯ ವಿಷ್ಣುಂ ಸರ್ವೇಶ್ವರೇಶ್ವರಮ್ ।
ಯೋ ವೃಣೀತೇ ಮನೋಗ್ರಾಹ್ಯಮಸತ್ತ್ವಾತ್ ಕುಮನೀಷ್ಯಸೌ ॥

ಅನುವಾದ

ರಾಜನೇ! ಭಗವಂತನು ಬ್ರಹ್ಮೇಂದ್ರಾದಿ ಸಮಸ್ತ ಈಶ್ವರರಿಗೂ ಈಶ್ವರನಾಗಿರುವನು. ಅವನನ್ನು ಒಲಿಸಿಕೊಳ್ಳುವುದು ಜೀವಿಗಳಿಗೆ ಸುಲಭವಲ್ಲ. ಅವನನ್ನು ಒಲಿಸಿಕೊಂಡು ಅವನಲ್ಲಿ ವಿಷಯಸುಖವನ್ನು ಬೇಡಿದರೆ ಅವನು ನಿಶ್ಚಯವಾಗಿಯೂ ದುರ್ಬುದ್ಧಿಯವನೇ ಸರಿ. ಏಕೆಂದರೆ, ವಾಸ್ತವವಾಗಿ ವಿಷಯ-ಸುಖಗಳು ಅತ್ಯಂತ ತುಚ್ಛವಾಗಿದೆ. ಅದಕ್ಕೆ ಯಾವ ಬೆಲೆಯೂ ಇಲ್ಲ. ॥11॥

(ಶ್ಲೋಕ-12)

ಮೂಲಮ್

ಅಕ್ರೂರಭವನಂ ಕೃಷ್ಣಃ ಸಹರಾಮೋದ್ಧವಃ ಪ್ರಭುಃ ।
ಕಿಂಚಿಚ್ಚಿಕೀರ್ಷಯನ್ ಪ್ರಾಗಾದಕ್ರೂರಪ್ರಿಯಕಾಮ್ಯಯಾ ॥

ಅನುವಾದ

ಕೆಲವು ದಿನ ಕಳೆದ ಬಳಿಕ ಒಂದುದಿನ ಪ್ರಭುವಾದ ಶ್ರೀಕೃಷ್ಣನು ಬಲರಾಮ ಮತ್ತು ಉದ್ಧವರೊಂದಿಗೆ ಅಕ್ರೂರನ ಅಭಿಲಾಷೆಯನ್ನು ಪೂರ್ಣಗೊಳಿಸಲು ಹಾಗೂ ಅವನಿಂದ ಒಂದು ಕಾರ್ಯವನ್ನು ಮಾಡಿಸಿಕೊಳ್ಳಲು ಅವನ ಮನೆಗೆ ಹೋದನು. ॥12॥

(ಶ್ಲೋಕ-13)

ಮೂಲಮ್

ಸ ತಾನ್ ನರವರಶ್ರೇಷ್ಠಾನಾರಾದ್ವೀಕ್ಷ್ಯ ಸ್ವಬಾಂಧವಾನ್ ।
ಪ್ರತ್ಯುತ್ಥಾಯ ಪ್ರಮುದಿತಃ ಪರಿಷ್ವಜ್ಯಾಭ್ಯನಂದತ ॥

ಅನುವಾದ

ತನ್ನ ಬಂಧುಗಳಾದ ಮನುಷ್ಯ ಶ್ರೇಷ್ಠರಾದ ಬಲರಾಮ ಶ್ರೀಕೃಷ್ಣರು ಉದ್ಧವನೊಂದಿಗೆ ಬರುತ್ತಿರುವುದನ್ನು ದೂರದಿಂದಲೇ ನೋಡಿದ ಅಕ್ರೂರನು ತತ್ಕ್ಷಣ ಎದ್ದು ಮುಂದೆ ಬಂದು ಆನಂದತುಂದಿಲನಾಗಿ ಅಭಿನಂದಿಸುತ್ತಾ ಒಬ್ಬೊಬ್ಬರನ್ನು ಆಲಿಂಗಿಸಿಕೊಂಡನು. ॥13॥

(ಶ್ಲೋಕ-14)

ಮೂಲಮ್

ನನಾಮ ಕೃಷ್ಣಂ ರಾಮಂ ಚ ಸ ತೈರಪ್ಯಭಿವಾದಿತಃ ।
ಪೂಜಯಾಮಾಸ ವಿಧಿವತ್ ಕೃತಾಸನಪರಿಗ್ರಹಾನ್ ॥

ಅನುವಾದ

ಅಕ್ರೂರನು ಭಗವಾನ್ ಶ್ರೀಕೃಷ್ಣ-ಬಲರಾಮರಿಗೆ ನಮಸ್ಕರಿಸಿದನು. ಉದ್ಧವನೊಂದಿಗೆ ಬಲರಾಮ-ಶ್ರೀಕೃಷ್ಣರೂ ಅಕ್ರೂರನಿಗೆ ವಂದಿಸಿದರು. ಎಲ್ಲರೂ ಸುಖಾಸೀನರಾದಾಗ ಅಕ್ರೂರನು ಎಲ್ಲರನ್ನೂ ವಿಧಿವತ್ತಾಗಿ ಪೂಜಿಸಿದನು. ॥14॥

(ಶ್ಲೋಕ-15)

ಮೂಲಮ್

ಪಾದಾವನೇಜನೀರಾಪೋ ಧಾರಯನ್ ಶಿರಸಾ ನೃಪ ।
ಅರ್ಹಣೇನಾಂಬರೈರ್ದಿವ್ಯೈರ್ಗಂಧಸ್ರಗ್ಭೂಷಣೋತ್ತಮೈಃ ॥

(ಶ್ಲೋಕ-16)

ಮೂಲಮ್

ಅರ್ಚಿತ್ವಾ ಶಿರಸಾನಮ್ಯ ಪಾದಾವಂಕಗತೌ ಮೃಜನ್ ।
ಪ್ರಶ್ರಯಾವನತೋಕ್ರೂರಃ ಕೃಷ್ಣರಾಮಾವಭಾಷತ ॥

ಅನುವಾದ

ಪರೀಕ್ಷಿತನೇ! ಅವನು ಭಗವಂತನ ಚರಣಗಳನ್ನು ತೊಳೆದು ಪಾದೋದಕವನ್ನು ಶಿರದಲ್ಲಿ ಧರಿಸಿದನು. ಬಳಿಕ ಅನೇಕ ವಿಧದ ದಿವ್ಯ ವಸ್ತ್ರ, ಗಂಧ, ಮಾಲೆ, ಆಭೂಷಣಗಳೇ ಮುಂತಾದ ಪೂಜಾಸಾಮಗ್ರಿಗಳಿಂದ ಅವನನ್ನು ಅರ್ಚಿಸತೊಡಗಿದನು. ಶಿರಬಾಗಿ ನಮಸ್ಕರಿಸಿ, ಭಗವಂತನ ಚರಣಗಳನ್ನು ತನ್ನ ತೊಡೆಯಲ್ಲಿಟ್ಟುಕೊಂಡು ಒತ್ತತೊಡಗಿದನು. ಆಗ ವಿನಯದಿಂದ ಶ್ರೀಕೃಷ್ಣ-ಬಲರಾಮರಲ್ಲಿ ಕೇಳಿದನು. ॥15-16॥

(ಶ್ಲೋಕ-17)

ಮೂಲಮ್

ದಿಷ್ಟ್ಯಾ ಪಾಪೋ ಹತಃ ಕಂಸಃ ಸಾನುಗೋ ವಾಮಿದಂ ಕುಲಮ್ ।
ಭವದ್ಭ್ಯಾಮುದ್ಧೃತಂ ಕೃಚ್ಛ್ರಾದ್ದುರಂತಾಚ್ಚ ಸಮೇಧಿತಮ್ ॥

ಅನುವಾದ

ಪ್ರಭುಗಳೇ! ಪಾಪಿಯಾದ ಕಂಸನು ತನ್ನ ಅನುಯಾಯಿಗಳೊಂದಿಗೆ ಸತ್ತುಹೊದುದು ಅತ್ಯಂತ ಆನಂದದ ಮತ್ತು ಸೌಭಾಗ್ಯದ ಮಾತಾಗಿದೆ. ಅವನನ್ನು ಕೊಂದು ನೀವಿಬ್ಬರೂ ಯದುವಂಶವನ್ನು ಭಾರೀ ದೊಡ್ಡ ಸಂಕಟದಿಂದ ಪಾರು ಮಾಡಿದಿರಿ ಮತ್ತು ಅದನ್ನು ಸಮೃದ್ಧಗೊಳಿಸಿ ಔನ್ನತ್ಯಕ್ಕೇರಿಸಿದಿರಿ. ॥17॥

(ಶ್ಲೋಕ-18)

ಮೂಲಮ್

ಯುವಾಂ ಪ್ರಧಾನಪುರುಷೌ ಜಗದ್ಧೇತೂ ಜಗನ್ಮಯೌ ।
ಭವದ್ಭ್ಯಾಂ ನ ವಿನಾ ಕಿಂಚಿತ್ ಪರಮಸ್ತಿ ನ ಚಾಪರಮ್ ॥

ಅನುವಾದ

ನೀವಿಬ್ಬರೂ ಜಗತ್ತಿಗೆ ಕಾರಣ ಭೂತರೂ, ಜಗದ್ರೂಪರೂ, ಆದಿಪುರುಷರೂ ಆಗಿರುವಿರಿ. ನಿಮಗಿಂತ ಬೇರೆಯಾದ ಯಾವ ವಸ್ತುವೂ ಇಲ್ಲ. ಕಾರ್ಯವೂ ಇಲ್ಲ, ಕಾರಣವೂ ಇಲ್ಲ. ॥18॥

(ಶ್ಲೋಕ-19)

ಮೂಲಮ್

ಆತ್ಮಸೃಷ್ಟಮಿದಂ ವಿಶ್ವಮನ್ವಾವಿಶ್ಯ ಸ್ವಶಕ್ತಿಭಿಃ ।
ಈಯತೇ ಬಹುಧಾ ಬ್ರಹ್ಮನ್ ಶ್ರುತ20ಪ್ರತ್ಯಕ್ಷಗೋಚರಮ್ ॥

ಅನುವಾದ

ಪರಮಾತ್ಮಾ! ನೀನೇ ನಿನ್ನ ಶಕ್ತಿಯಿಂದ ಈ ವಿಶ್ವವನ್ನು ಸೃಷ್ಟಿಸಿರುವೆ. ಕಾಲ-ಮಾಯೆ ಮುಂತಾದ ಶಕ್ತಿಗಳೊಡನೆ ನೀನೇ ಸೃಷ್ಟಿಸಿದ ಜಗತ್ತಿನಲ್ಲಿ ಪ್ರವಿಷ್ಟನಾಗಿ, ಕಂಡುಬರುವ, ಕೇಳಿಬರುವ ಎಲ್ಲ ವಸ್ತುಗಳ ರೂಪದಲ್ಲಿ ಕಂಡುಬರುತ್ತಿರುವೆ. ॥19॥

(ಶ್ಲೋಕ-20)

ಮೂಲಮ್

ಯಥಾ ಹಿ ಭೂತೇಷು ಚರಾಚರೇಷು ಮಹ್ಯಾದಯೋ ಯೋನಿಷು ಭಾಂತಿ ನಾನಾ ।
ಏವಂ ಭವಾನ್ ಕೇವಲ ಆತ್ಮಯೋನಿಷ್ವಾತ್ಮಾತ್ಮತಂತ್ರೋ ಬಹುಧಾ ವಿಭಾತಿ ॥

ಅನುವಾದ

ಪೃಥಿವಿಯೇ ಮೊದಲಾದ ಪಂಚಭೂತಗಳು ಅವುಗಳಿಂದಲೇ ಉಂಟಾದ ಚರಾಚರ ಜಗತ್ತಿನಲ್ಲಿ ನಾನಾರೂಪವಾಗಿ ಸೇರಿಕೊಂಡಿರುವಂತೆಯೇ, ಸರ್ವತಂತ್ರ ಸ್ವತಂತ್ರನಾದ ನೀನೂ ಕೂಡ ಆತ್ಮನಿರ್ಮಿತವಾದ ಕಾರ್ಯ ರೂಪವಾದ ಈ ಬ್ರಹ್ಮಾಂಡದಲ್ಲಿ ಅಂತರಾತ್ಮನಾಗಿ ಬಹುರೂಪದಿಂದ ತೋರುತ್ತಿರುವೆ. ಇದೂ ಒಂದು ನಿನ್ನ ಲೀಲೆಯೇ ಆಗಿದೆ. ॥20॥

(ಶ್ಲೋಕ-21)

ಮೂಲಮ್

ಸೃಜಸ್ಯಥೋ ಲುಂಪಸಿ ಪಾಸಿ ವಿಶ್ವಂ
ರಜಸ್ತಮಃಸತ್ತ್ವಗುಣೈಃ ಸ್ವಶಕ್ತಿಭಿಃ ।
ನ ಬಧ್ಯಸೇ ತದ್ಗುಣಕರ್ಮಭಿರ್ವಾ
ಜ್ಞಾನಾತ್ಮನಸ್ತೇ ಕ್ವ ಚ ಬಂಧಹೇತುಃ ॥

ಅನುವಾದ

ಪ್ರಭುವೇ! ನೀನು ರಜೋಗುಣ-ಸತ್ವಗುಣ-ತಮೋಗುಣಗಳ ರೂಪವಾದ ನಿನ್ನ ಮಾಯಾಶಕ್ತಿಯಿಂದ ಕ್ರಮವಾಗಿ ಜಗತ್ತನ್ನು ಸೃಷ್ಟಿಸುವೆ, ಪಾಲಿಸುವೆ ಮತ್ತು ಸಂಹರಿಸುವೆ. ಅದರೆ ನೀನು ಈ ಗುಣಗಳಿಂದಾಗಲೀ, ಗುಣಗಳಿಂದಾಗುವ ಕರ್ಮಗಳಿಂದಾಗಲೀ ಬಂಧಿತನಾಗುವುದಿಲ್ಲ. ಏಕೆಂದರೆ, ಶುದ್ಧಜ್ಞಾನ ಸ್ವರೂಪನಾದ ನಿನಗೆ ಬಂಧನದ ಕಾರಣವಾದರೂ ಏನಿರಬಲ್ಲದು? ॥21॥

(ಶ್ಲೋಕ-22)

ಮೂಲಮ್

ದೇಹಾದ್ಯುಪಾಧೇರನಿರೂಪಿತತ್ವಾದ್
ಭವೋ ನ ಸಾಕ್ಷಾನ್ನ ಭಿದಾತ್ಮನಃ ಸ್ಯಾತ್ ।
ಅತೋ ನ ಬಂಧಸ್ತವ ನೈವ ಮೋಕ್ಷಃ
ಸ್ಯಾತಾಂ ನಿಕಾಮಸ್ತ್ವಯಿ ನೋವಿವೇಕಃ ॥

ಅನುವಾದ

ಪ್ರಭುವೇ! ಸ್ವಯಂ ಆತ್ಮವಸ್ತುವಿಗೆ ಸ್ಥೂಲ-ಸೂಕ್ಷ್ಮ ದೇಹಗಳೇ ಮುಂತಾದ ಉಪಾಧಿಗಳು ಇಲ್ಲದ ಕಾರಣ ಅದಕ್ಕೆ ಹುಟ್ಟು-ಸಾವುಗಳಿಲ್ಲ. ಅದರಲ್ಲಿ ಯಾವ ವಿಧವಾದ ಭೇದ-ಭಾವಗಳೂ ಇಲ್ಲ. ಈ ಕಾರಣದಿಂದಲೇ ನಿನಗೆ ಬಂಧನವಾಗಲೀ, ಮೋಕ್ಷವಾಗಲೀ ಇರುವುದಿಲ್ಲ. ನಿನ್ನ ತತ್ತ್ವ ವನ್ನರಿಯದ ಅವಿವೇಕಿಗಳಾದ ನಾವು ನಿನ್ನಲ್ಲಿ ಬಂಧ- ಮೋಕ್ಷವನ್ನು ಆರೋಪಿಸುವುದೇ ಹೊರತಾಗಿ, ವಾಸ್ತವವಾಗಿ ನಿನಗೆ ಬಂಧನವೂ ಇಲ್ಲ; ಮೋಕ್ಷವೂ ಇಲ್ಲ. ॥22॥

(ಶ್ಲೋಕ-23)

ಮೂಲಮ್

ತ್ವಯೋದಿತೋಯಂ ಜಗತೋ ಹಿತಾಯ
ಯದಾ ಯದಾ ವೇದಪಥಃ ಪುರಾಣಃ ।
ಬಾಧ್ಯೇತ ಪಾಷಂಡಪಥೈರಸದ್ಭಿ-
ಸ್ತದಾ ಭವಾನ್ ಸತ್ತ್ವಗುಣಂ ಬಿಭರ್ತಿ ॥

ಅನುವಾದ

ನೀನೇ ಜಗತ್ತಿನ ಕಲ್ಯಾಣಕ್ಕಾಗಿ ಸನಾತನವಾದ ವೇದಮಾರ್ಗವನ್ನು ಪ್ರಕಟಿಸಿರುವೆ. ಪಾಖಂಡ ಮತಾವಲಂಬಿಗಳಾದ ದುಷ್ಟರಿಂದ ಪ್ರಪಂಚವು ಬಾಧಿಸಲ್ಪಟ್ಟಾಗ ನೀನು ಶುದ್ಧ ಸತ್ತ್ವಮಯವಾದ ಶರೀರದೊಡನೆ ಅವತರಿಸುವೆ. ॥23॥

(ಶ್ಲೋಕ-24)

ಮೂಲಮ್

ಸ ತ್ವಂ ಪ್ರಭೋದ್ಯ ವಸುದೇವಗೃಹೇವತೀರ್ಣಃ
ಸ್ವಾಂಶೇನ ಭಾರಮಪನೇತುಮಿಹಾಸಿ ಭೂಮೇಃ ।
ಅಕ್ಷೌಹಿಣೀಶತವಧೇನ ಸುರೇತರಾಂಶ-
ರಾಜ್ಞಾಮಮುಷ್ಯ ಚ ಕುಲಸ್ಯ ಯಶೋ ವಿತನ್ವನ್ ॥

ಅನುವಾದ

ಸ್ವಾಮಿಯೇ! ಈ ಸಮಯದಲ್ಲಿ ನೀನು ನಿನ್ನ ಅಂಶಸಂಭೂತನಾದ ಬಲರಾಮನೊಡನೆ ಭೂಭಾರವನ್ನು ಕಳೆಯುವ ಸಲುವಾಗಿ ವಸುದೇವನ ಮನೆಯಲ್ಲಿ ಅವತರಿಸಿರುವೆ. ರಾಕ್ಷಸಾಂಶಸಂಭೂತರಾದ ರಾಜರ ನೂರಾರು ಅಕ್ಷೌಹಿಣೀ ಸೈನಿಕರನ್ನು ಸಂಹರಿಸಿ ಭೂಭಾರವನ್ನು ಕಳೆಯುವೆ ಮತ್ತು ನಿನ್ನ ವಂಶದ ಕೀರ್ತಿಯನ್ನು ವಿಸ್ತರಿಸುವೆ. ॥24॥

(ಶ್ಲೋಕ-25)

ಮೂಲಮ್

ಅದ್ಯೇಶ ನೋ ವಸತಯಃ ಖಲು ಭೂರಿಭಾಗಾ
ಯಃ ಸರ್ವದೇವಪಿತೃಭೂತನೃದೇವಮೂರ್ತಿಃ ।
ಯತ್ಪಾದಶೌಚಸಲಿಲಂ ತ್ರಿಜಗತ್ಪುನಾತಿ
ಸ ತ್ವಂ ಜಗದ್ಗುರುರಧೋಕ್ಷಜ ಯಾಃ ಪ್ರವಿಷ್ಟಃ ॥

ಅನುವಾದ

ಇಂದ್ರಿಯಾತೀತನಾದ ಪರಮಾತ್ಮನೇ! ಸಮಸ್ತ ದೇವತೆಗಳೂ, ಪಿತೃಗಳೂ, ಭೂತಗಣಗಳೂ, ರಾಜರೂ ನಿನ್ನ ಸ್ವರೂಪರೇ ಆಗಿದ್ದಾರೆ. ನಿನ್ನ ದಿವ್ಯ ಚರಣಾರವಿಂದಗಳನ್ನು ತೊಳೆದ ಗಂಗೆಯು ಮೂರು ಲೋಕಗಳನ್ನು ಪವಿತ್ರಗೊಳಿಸುತ್ತಾಳೆ. ಸಮಸ್ತ ಜಗತ್ತಿಗೂ ಸದ್ಗುರುವಾದ ನೀನು ಅದೃಷ್ಟವಶದಿಂದ ನಮ್ಮ ಮನೆಗೆ ಆಗಮಿಸಿರುವೆ. ನಿಶ್ಚಯವಾಗಿಯೂ ಇಂದು ನಮ್ಮ ಮನೆಗಳು ಧನ್ಯವಾದವು. ಅವುಗಳ ಸೌಭಾಗ್ಯದ ಸೀಮೆಯೇ ಉಳಿಯಲಿಲ್ಲ. ॥25॥

(ಶ್ಲೋಕ-26)

ಮೂಲಮ್

ಕಃ ಪಂಡಿತಸ್ತ್ವದಪರಂ ಶರಣಂ ಸಮೀಯಾದ್
ಭಕ್ತಪ್ರಿಯಾದೃತಗಿರಃ ಸುಹೃದಃ ಕೃತಜ್ಞಾತ್ ।
ಸರ್ವಾಂದದಾತಿ ಸುಹೃದೋ ಭಜತೋಭಿಕಾಮಾ-
ನಾತ್ಮಾನಮಪ್ಯುಪಚಯಾಪಚಯೌ ನ ಯಸ್ಯ ॥

ಅನುವಾದ

ಪ್ರಭೋ! ನೀನು ಪ್ರೇಮೀಭಕ್ತರ ಪರಮ ಪ್ರಿಯತಮನೂ, ಸತ್ಯವಾದಿಯೂ, ಅಕಾರಣ ಹಿತೈಷಿಯೂ, ಕೃತಜ್ಞನೂ ಆಗಿರುವೆ. ಮಾಡಿದ ಅತ್ಯಲ್ಪ ಉಪಕಾರವನ್ನು ಸ್ಮರಿಸುತ್ತಿರುವೆ. ನೀನು ನಿನ್ನನ್ನು ಭಜಿಸುವ ಪ್ರೇಮಿಭಕ್ತರ ಸಮಸ್ತ ಅಭಿಲಾಷೆಗಳನ್ನು ಪೂರ್ಣಗೊಳಿಸುವೆ. ನಿನ್ನಲ್ಲಿ ಶರಣಾಗಿ ಪ್ರಾರ್ಥಿಸುವ ಏಕಾಂತ ಭಕ್ತರಿಗೆ ನಿನ್ನನ್ನೇ ಕೊಟ್ಟುಕೊಳ್ಳುವೆ. ಕ್ಷಯ-ವೃದ್ಧಿರಹಿತನಾದ ಪರಮಪುರುಷ ಪರಮಾತ್ಮನಾದ ನಿನ್ನನ್ನು ಬಿಟ್ಟು ಪಂಡಿತನಾದವನು ಯಾರು ತಾನೇ ಇತರರನ್ನು ಆಶ್ರಯಿಸುವನು? ॥26॥

(ಶ್ಲೋಕ-27)

ಮೂಲಮ್

ದಿಷ್ಟ್ಯಾ ಜನಾರ್ದನ ಭವಾನಿಹ ನಃ ಪ್ರತೀತೋ
ಯೋಗೇಶ್ವರೈರಪಿ ದುರಾಪಗತಿಃ ಸುರೇಶೈಃ ।
ಛಿಂಧ್ಯಾಶು ನಃ ಸುತಕಲತ್ರಧನಾಪ್ತಗೇಹ-
ದೇಹಾದಿಮೋಹರಶನಾಂ ಭವದೀಯಮಾಯಾಮ್ ॥

ಅನುವಾದ

ಜನಾರ್ದನನೇ! ಯೋಗೇಶ್ವರರಿಂದಲೂ, ಸುರೇಶ್ವರರಿಂದಲೂ ತಿಳಿಯಲು ಆಶಕ್ಯವಾದ ಮಹಿಮೆಯುಳ್ಳ ನೀನು ಅದೃಷ್ಟವಶದಿಂದ ನಮಗೆ ಪ್ರತ್ಯಕ್ಷವಾಗಿ ನಮ್ಮ ಮನೆಯಲ್ಲೇ ದರ್ಶನ ವಿತ್ತಿಹೆ. ಸ್ವಾಮಿ! ನಾನು ಪತ್ನೀ-ಪುತ್ರ-ಸ್ವಜನ-ಧನ-ಮನೆ ಮಠಗಳು ಇವೇ ಮುಂತಾದ ಮೋಹಕವಾದ ಪಾಶಗಳಿಂದ ಬಂಧಿಸಲ್ಪಟ್ಟಿರುವೆನು. ನಿನ್ನ ಅನುಗ್ರಹ ರೂಪವಾಗಿ ನಿನ್ನದೇ ಆಗಿರುವ ಈ ಮಾಯಾಜಾಲವನ್ನು ಕತ್ತರಿಸಿ ನನ್ನನ್ನು ಉದ್ಧರಿಸು. ॥27॥

(ಶ್ಲೋಕ-28)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಯರ್ಚಿತಃ ಸಂಸ್ತುತಶ್ಚ ಭಕ್ತೇನ ಭಗವಾನ್ ಹರಿಃ ।
ಅಕ್ರೂರಂ ಸಸ್ಮಿತಂ ಪ್ರಾಹ ಗೀರ್ಭಿಃ ಸಂಮೋಹಯನ್ನಿವ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಹೀಗೆ ಭಕ್ತನಾದ ಅಕ್ರೂರನು ಭಗವಾನ್ ಶ್ರೀಕೃಷ್ಣನನ್ನು ಪೂಜಿಸಿ, ಸ್ತುತಿಸಿದನು. ಅನಂತರ ಶ್ರೀಕೃಷ್ಣನು ಮುಗುಳ್ನಗುತ್ತಾ ಮೃದು ಮಧುರವಾಣಿಯಿಂದ ಅಕ್ರೂರನನ್ನು ವಿಮೋಹಗೊಳಿಸುತ್ತಾ ಇಂತೆಂದನು. ॥28॥

(ಶ್ಲೋಕ-29)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ತ್ವಂ ನೋ ಗುರುಃ ಪಿತೃವ್ಯಶ್ಚ ಶ್ಲಾಘ್ಯೋ ಬಂಧುಶ್ಚ ನಿತ್ಯದಾ ।
ವಯಂ ತು ರಕ್ಷ್ಯಾಃ ಪೋಷ್ಯಾಶ್ಚ ಅನುಕಂಪ್ಯಾಃ ಪ್ರಜಾ ಹಿ ವಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ಅಯ್ಯಾ! ನೀನು ನಮ್ಮ ಗುರುವೂ ಹೀತೋಪದೇಶಕನೂ, ಚಿಕ್ಕಪ್ಪನೂ ಆಗಿರುವೆ. ನಮ್ಮ ವಂಶದಲ್ಲಿ ಅತ್ಯಂತ ಪ್ರಶಂಸನೀಯನೂ, ಹಿತೈಷಿಯೂ ಆಗಿರುವೆ. ನಾವಾದರೋ ನಿಮ್ಮ ಬಾಲಕರೇ ಆಗಿದ್ದೇವೆ. ಸದಾಕಾಲವೂ ನಿಮ್ಮಿಂದ ರಕ್ಷಿಸಲ್ಪಡುವವರೂ, ಕೃಪಾಪಾತ್ರರೂ ಆಗಿದ್ದೇವೆ. ॥29॥

(ಶ್ಲೋಕ-30)

ಮೂಲಮ್

ಭವದ್ವಿಧಾ ಮಹಾಭಾಗಾ ನಿಷೇವ್ಯಾ ಅರ್ಹಸತ್ತಮಾಃ ।
ಶ್ರೇಯಸ್ಕಾಮೈರ್ನೃಭಿರ್ನಿತ್ಯಂ ದೇವಾಃ ಸ್ವಾರ್ಥಾ ನ ಸಾಧವಃ ॥

ಅನುವಾದ

ತನ್ನ ಪರಮ ಶ್ರೇಯಸ್ಸನ್ನು ಬಯಸುವವನು ನಿಮ್ಮಂತಹ ಪರಮ ಪೂಜನೀಯರೂ, ಭಾಗ್ಯವಂತರೂ ಆದ ಸಂತರನ್ನು ಸದಾ ಸೇವಿಸಬೇಕು. ನಿಮ್ಮಂತಹ ಸಂತರು ದೇವತೆಗಳಿಗಿಂತಲೂ ಹೆಚ್ಚಿನವರು. ಏಕೆಂದರೆ, ದೇವತೆಗಳಲ್ಲಿಯೂ ಸ್ವಾರ್ಥವಿರುತ್ತದೆ, ಆದರೆ ಸಂತರಲ್ಲಿ ಇರುವುದಿಲ್ಲ. ॥30॥

(ಶ್ಲೋಕ-31)

ಮೂಲಮ್

ನ ಹ್ಯಮ್ಮಯಾನಿ ತೀರ್ಥಾನಿ ನ ದೇವಾ ಮೃಚ್ಛಿಲಾಮಯಾಃ ।
ತೇ ಪುನಂತ್ಯುರುಕಾಲೇನ ದರ್ಶನಾದೇವ ಸಾಧವಃ ॥

ಅನುವಾದ

ಕೇವಲ ನೀರಿನ ಸರೋವರ, ನದಿಗಳು ತೀರ್ಥವಾಗುವುದಿಲ್ಲ. ಕೇವಲ ಮೃತ್ತಿಕೆ, ಶಿಲೆ ಮುಂತಾದವುಗಳಿಂದಾದ ವಿಗ್ರಹಗಳು ದೇವರಾಗುವುದಿಲ್ಲ. ಚಿಕ್ಕಪ್ಪ! ಬಹಳ ದಿನಗಳವರೆಗೆ ಶ್ರದ್ಧೆಯಿಂದ ಸೇವೆಮಾಡಿದಾಗಲೇ ಅವುಗಳು ಪವಿತ್ರವಾಗಿಸಬಲ್ಲವು. ಆದರೆ ಸತ್ಪುರುಷರು ತಮ್ಮ ದರ್ಶನ ಮಾತ್ರದಿಂದಲೇ ಪವಿತ್ರರಾಗಿಸಿಬಿಡುತ್ತಾರೆ. ॥31॥

(ಶ್ಲೋಕ-32)

ಮೂಲಮ್

ಸ ಭವಾನ್ ಸುಹೃದಾಂ ವೈ ನಃ ಶ್ರೇಯಾನ್ಶ್ರೇಯಶ್ಚಿಕೀರ್ಷಯಾ ।
ಜಿಜ್ಞಾಸಾರ್ಥಂ ಪಾಂಡವಾನಾಂ ಗಚ್ಛಸ್ವ ತ್ವಂ ಗಜಾಹ್ವಯಮ್ ॥

ಅನುವಾದ

ಅಕ್ರೂರನೇ! ನೀವು ನಮ್ಮ ಹಿತೈಷಿ, ಸುಹೃದರಲ್ಲಿ ಸರ್ವಶ್ರೇಷ್ಠರಾಗಿರುವಿರಿ. ಆದುದರಿಂದ ಪಾಂಡವರ ಹಿತವನ್ನು ಮಾಡಲು, ಅವರ ಕ್ಷೇಮ-ಸಮಾಚಾರವನ್ನು ತಿಳಿಯಲು ನೀವು ಹಸ್ತಿನಾಪುರಕ್ಕೆ ಹೋಗಬೇಕಾಗಿದೆ. ॥32॥

(ಶ್ಲೋಕ-33)

ಮೂಲಮ್

ಪಿತರ್ಯುಪರತೇ ಬಾಲಾಃ ಸಹ ಮಾತ್ರಾ ಸುದುಃಖಿತಾಃ ।
ಆನೀತಾಃ ಸ್ವಪುರಂ ರಾಜ್ಞಾ ವಸಂತ ಇತಿ ಶುಶ್ರುಮ ॥

ಅನುವಾದ

ಪಾಂಡುರಾಜನು ಸತ್ತುಹೋದ ಬಳಿಕ ತಾಯಿ ಕುಂತೀ ದೇವಿಯರೊಂದಿಗೆ ಯುಧಿಷ್ಠಿರಾದಿ ಪಾಂಡವರು ಬಹಳ ದುಃಖಿತರಾಗಿದ್ದರೆಂದೂ, ಈಗ ಧೃತರಾಷ್ಟ್ರರಾಜನು ಅವರನ್ನು ಹಸ್ತಿನಾಪುರಕ್ಕೆ ಕರೆಸಿಕೊಂಡು, ಅವರು ಅಲ್ಲೇ ಇರುವರೆಂದೂ ಕೇಳಿದ್ದೇವೆ. ॥33॥

(ಶ್ಲೋಕ-34)

ಮೂಲಮ್

ತೇಷು ರಾಜಾಂಬಿಕಾಪುತ್ರೋ ಭ್ರಾತೃಪುತ್ರೇಷು ದೀನಧೀಃ ।
ಸಮೋ ನ ವರ್ತತೇ ನೂನಂ ದುಷ್ಪುತ್ರವಶಗೋಂಧದೃಕ್ ॥

ಅನುವಾದ

ರಾಜಾ ಧೃತರಾಷ್ಟ್ರನು ಕುರುಡನಾಗಿದ್ದು ದುರ್ಬಲ ಬುದ್ಧಿಯವನೆಂದು ನೀನು ತಿಳಿದೇ ಇರುವೆ. ಪುತ್ರನಾದ ದುಷ್ಟ ದುರ್ಯೋಧನನ ಅಧೀನನಾಗಿ ಅವನು ಪಾಂಡವರೊಡನೆ ತನ್ನ ಪುತ್ರರಂತೆ ಸಮಾನವಾಗಿ ವ್ಯವಹರಿಸುತ್ತಿಲ್ಲ. ॥34॥

(ಶ್ಲೋಕ-35)

ಮೂಲಮ್

ಗಚ್ಛ ಜಾನೀಹಿ ತದ್ವ ತ್ತಮಧುನಾ ಸಾಧ್ವಸಾಧು ವಾ ।
ವಿಜ್ಞಾಯ ತದ್ವಿಧಾಸ್ಯಾಮೋ ಯಥಾ ಶಂ ಸುಹೃದಾಂ ಭವೇತ್ ॥

ಅನುವಾದ

ಅದಕ್ಕಾಗಿ ನೀವು ಅಲ್ಲಿಗೆ ಹೋಗಿ ಪಾಂಡವರ ಸ್ಥಿತಿ-ಗತಿಯನ್ನು ತಿಳಿದುಕೊಂಡು ಬನ್ನಿರಿ. ಅವರ ಸಮಾಚಾರ ನಿಮ್ಮಿಂದ ತಿಳಿದ ಬಳಿಕ ಆ ಸುಹೃದರಿಗೆ ಸುಖಸಿಗುವಂತೆ ನಾನು ಉಪಾಯವನ್ನು ಮಾಡುವೆನು. ॥35॥

(ಶ್ಲೋಕ-36)

ಮೂಲಮ್

ಇತ್ಯಕ್ರೂರಂ ಸಮಾದಿಶ್ಯ ಭಗವಾನ್ ಹರಿರೀಶ್ವರಃ ।
ಸಂಕರ್ಷಣೋದ್ಧವಾಭ್ಯಾಂ ವೈ ತತಃ ಸ್ವಭವನಂ ಯಯೌ ॥

ಅನುವಾದ

ಸರ್ವಶಕ್ತನಾದ ಭಗವಾನ್ ಶ್ರೀಕೃಷ್ಣನು ಅಕ್ರೂರನಿಗೆ ಹೀಗೆ ಆದೇಶವನ್ನಿತ್ತು ಬಲರಾಮ-ಉದ್ಧವರೊಂದಿಗೆ ಅಲ್ಲಿಂದ ಹೊರಟು ತಮ್ಮ ಅರಮನೆಗೆ ಮರಳಿದನು. ॥36॥

ಅನುವಾದ (ಸಮಾಪ್ತಿಃ)

ನಲವತ್ತೆಂಟನೆಯ ಅಧ್ಯಾಯವು ಮುಗಿಯಿತು. ॥48॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ಅಷ್ಟಚತ್ವಾರಿಂಶೋಽಧ್ಯಾಯಃ ॥48॥