[ನಲವತ್ತೇಳನೆಯ ಅಧ್ಯಾಯ]
ಭಾಗಸೂಚನಾ
ಉದ್ಧವ-ಗೋಪಿಯರ ಮಾತುಕತೆ-ಭ್ರಮರಗೀತೆ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ತಂ ವೀಕ್ಷ್ಯ ಕೃಷ್ಣಾನುಚರಂ ವ್ರಜಸಿಯಃ
ಪ್ರಲಂಬಬಾಹುಂ ನವಕಂಜಲೋಚನಮ್ ।
ಪೀತಾಂಬರಂ ಪುಷ್ಕರಮಾಲಿನಂ ಲಸ-
ನ್ಮುಖಾರವಿಂದಂ ಮಣಿಮೃಷ್ಟಕುಂಡಲಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಶ್ರೀಕೃಷ್ಣಾನುಚರನಾದ ಉದ್ಧವನ ಆಕೃತಿ, ವೇಷ-ಭೂಷಗಳಿಂದ ಶ್ರೀಕೃಷ್ಣನಂತೆಯೇ ಇರುವುದನ್ನು ಗೋಪಿಯರು ನೋಡಿದರು. ಅವನಿಗೆ ದೀರ್ಘಬಾಹುಗಳಿದ್ದವು. ನೂತನ ಕಮಲದ ಎಸಳಿನಂತೆ ಕೋಮಲ ನೇತ್ರಗಳಿದ್ದವು. ಶರೀರದಲ್ಲಿ ಪೀತಾಂಬರವನ್ನು ಧರಿಸಿದ್ದನು. ಕೊರಳಲ್ಲಿ ಕಮಲಪುಷ್ಪಗಳ ಮಾಲೆಯಿತ್ತು. ಕಿವಿಗಳಲ್ಲಿ ಮಣಿಮಯ ಕುಂಡಲಗಳಿದ್ದು ಮುಖಾರವಿಂದವು ಪ್ರುಲ್ಲಿತವಾಗಿತ್ತು. ॥1॥
(ಶ್ಲೋಕ-2)
ಮೂಲಮ್
ಶುಚಿಸ್ಮಿತಾಃ ಕೋಯಮಪೀಚ್ಯದರ್ಶನಃ
ಕುತಶ್ಚ ಕಸ್ಯಾಚ್ಯುತವೇಷಭೂಷಣಃ ।
ಇತಿ ಸ್ಮ ಸರ್ವಾಃ ಪರಿವವ್ರರುತ್ಸುಕಾ-
ಸ್ತಮುತ್ತಮಶ್ಲೋಕಪದಾಂಬುಜಾಶ್ರಯಮ್ ॥
ಅನುವಾದ
ಮುಗುಳ್ನಗೆಯುಳ್ಳ ಗೋಪಿಯರು ಪರಸ್ಪರ ಮಾತನಾಡಿಕೊಂಡರು. ಈ ಮಹಾನುಭಾವನು ನೋಡಲು ಸುಂದರವಾಗಿದ್ದಾನೆ. ಆದರೆ ಇವನಾರು? ಎಲ್ಲಿಂದ ಬಂದಿರುವನು? ಯಾರ ದೂತನಾಗಿರುವನು? ಇವನು ಶ್ರೀಕೃಷ್ಣನಂತೆಯೇ ವೇಷ-ಭೂಷಣಗಳನ್ನು ಏಕೆ ಧರಿಸಿರುವನು? ಗೋಪಿಯರೆಲ್ಲರೂ ಅವನ ಪರಿಚಯವನ್ನು ಪಡೆಯಲು ಅತ್ಯಂತ ಉತ್ಸುಕರಾಗಿದ್ದರು. ಉತ್ತಮ ಶ್ಲೋಕನಾದ ಶ್ರೀಕೃಷ್ಣನ ಚರಣಕಮಲಗಳನ್ನೇ ಪರಮಾಶ್ರಯವನ್ನಾಗಿ ಹೊಂದಿದ್ದ ಉದ್ಧವನನ್ನು ಸುತ್ತುವರಿದು ನಿಂತುಕೊಂಡರು. ॥2॥
(ಶ್ಲೋಕ-3)
ಮೂಲಮ್
ತಂ ಪ್ರಶ್ರಯೇಣಾವನತಾಃ ಸುಸತ್ಕೃತಂ
ಸವ್ರೀಡಹಾಸೇಕ್ಷಣಸೂನೃತಾದಿಭಿಃ ।
ರಹಸ್ಯಪೃಚ್ಛನ್ನುಪವಿಷ್ಟಮಾಸನೇ
ವಿಜ್ಞಾಯ ಸಂದೇಶಹರಂ ರಮಾಪತೇಃ ॥
ಅನುವಾದ
ಇವನು ರಮಾರಮಣ ಭಗವಾನ್ ಶ್ರೀಕೃಷ್ಣನ ಸಂದೇಶವನ್ನೆತ್ತಿಕೊಂಡು ಬಂದಿರುವನೆಂದು ತಿಳಿದಾಗ, ಅವರು ವಿನಯದಿಂದ ಬಾಗಿ ಲಜ್ಜೆಯಿಂದ ಕೂಡಿದ ಮಂದಹಾಸದಿಂದ, ಕುಡಿನೋಟದಿಂದ ಹಾಗೂ ಸುಮಧುರವಾದ ಮಾತುಗಳಿಂದ ಉದ್ಧವನನ್ನು ಸತ್ಕರಿಸಿ, ಸುಖಾಸನದಲ್ಲಿ ಕುಳ್ಳಿರಿಸಿ ಏಕಾಂತದಲ್ಲಿ ಅವನ ಬಳಿ ಕೇಳಿದರು. ॥3॥
(ಶ್ಲೋಕ-4)
ಮೂಲಮ್
ಜಾನೀಮಸ್ತ್ವಾಂ ಯದುಪತೇಃ ಪಾರ್ಷದಂ ಸಮುಪಾಗತಮ್ ।
ಭರ್ತ್ರೇಹ ಪ್ರೇಷಿತಃ ಪಿತ್ರೋರ್ಭವಾನ್ ಪ್ರಿಯಚಿಕೀರ್ಷಯಾ ॥
ಅನುವಾದ
ಉದ್ಧವನೇ! ನೀನು ಯದುನಾಥನ ಪಾರ್ಷದನೆಂದು ನಾವು ತಿಳಿಯುತ್ತೇವೆ. ಅವನ ಸಂದೇಶವನ್ನೇ ಹೊತ್ತು ನೀನು ಇಲ್ಲಿಗೆ ಆಗಮಿಸಿರುವೆ. ನಿನ್ನ ಸ್ವಾಮಿಯಾದ ಶ್ಯಾಮಸುಂದರನು ತನ್ನ ತಂದೆ-ತಾಯಿಯರನ್ನು ಸಂತೋಷಪಡಿಸಲೆಂದು ನಿಮ್ಮನ್ನು ಕಳಿಸಿರುವನಲ್ಲ? ॥4॥
(ಶ್ಲೋಕ-5)
ಮೂಲಮ್
ಅನ್ಯಥಾ ಗೋವ್ರಜೇ ತಸ್ಯ ಸ್ಮರಣೀಯಂ ನ ಚಕ್ಷ್ಮಹೇ ।
ಸ್ನೇಹಾನುಬಂಧೋ ಬಂಧೂನಾಂ ಮುನೇರಪಿ ಸುದುಸ್ತ್ಯಜಃ ॥
ಅನುವಾದ
ಅದರ ಹೊರತಾಗಿ ಈ ಗೊಲ್ಲರಹಳ್ಳಿಯಲ್ಲಿ ಅವನು ಸ್ಮರಿಸಬೇಕಾದ ಬೇರೆಯಾವ ವಸ್ತುವೂ ಕಾಣುವುದಿಲ್ಲ. ತಂದೆ-ತಾಯಿಯರ, ನೆಂಟರಿಷ್ಟರ ಸ್ನೇಹಸಂಬಂಧವನ್ನು ಕಡಿದುಹಾಕುವುದು ಮಹಾ-ಮಹಾಮುನಿಗಳಿಗೂ ಬಹಳ ಕಷ್ಟವೇ ಸರಿ. ॥5॥
(ಶ್ಲೋಕ-6)
ಮೂಲಮ್
ಅನ್ಯೇಷ್ವರ್ಥಕೃತಾ ಮೈತ್ರೀ ಯಾವದರ್ಥವಿಡಂಬನಮ್ ।
ಪುಂಭಿಃ ಸೀಷು ಕೃತಾ ಯದ್ವತ್ಸುಮನಸ್ಸ್ವಿವ ಷಟ್ಪದೈಃ ॥
ಅನುವಾದ
ಇತರರೊಡನೆ ಮಾಡುವ ಪ್ರೇಮ-ಸಂಬಂಧದ ನಾಟಕವು ಯಾವುದಾದರೂ ಸ್ವಾರ್ಥಕ್ಕಾಗಿಯೇ ಇರುತ್ತದೆ. ಹೂವುಗಳೊಡನೆ ಭ್ರಮರಗಳ ಮತ್ತು ಸ್ತ್ರೀಯರೊಡನೆ ಪುರುಷರ ಪ್ರೇಮ ಸಂಬಂಧವು ಸ್ವಾರ್ಥದಿಂದಲೇ ಇರುತ್ತದೆ. ॥6॥
(ಶ್ಲೋಕ-7)
ಮೂಲಮ್
ನಿಸ್ಸ್ವಂ ತ್ಯಜಂತಿ ಗಣಿಕಾ ಅಕಲ್ಪಂ ನೃಪತಿಂ ಪ್ರಜಾಃ ।
ಅಧೀತವಿದ್ಯಾ ಆಚಾರ್ಯಮೃತ್ವಿಜೋ ದತ್ತದಕ್ಷಿಣಮ್ ॥
ಅನುವಾದ
ತನ್ನ ಬಳಿಗೆ ಬರುವ ವಿಟಪುರುಷರಲ್ಲಿ ಹಣವಿಲ್ಲವೆಂದು ತಿಳಿದಾಗ ವೇಶ್ಯೆಯು ಅವರನ್ನು ತ್ಯಜಿಸಿ ಬಿಡುತ್ತಾಳೆ. ರಾಜನು ತಮ್ಮನ್ನು ರಕ್ಷಿಸಲಾರನೆಂದು ತಿಳಿದಾಗ ಪ್ರಜೆಗಳು ಅವನನ್ನು ತ್ಯಜಿಸುತ್ತಾರೆ. ಅಧ್ಯಯನ ಮುಗಿದಾದ ಬಳಿಕ ಎಷ್ಟು ಜನ ಶಿಷ್ಯರು ಗುರುವಿನ ಸೇವೆ ಮಾಡುತ್ತಾರೆ? ಯಜ್ಞದ ದಕ್ಷಿಣೆ ದೊರೆತಾಕ್ಷಣ ಋತ್ವಿಜರು ಹೊರಟು ಹೋಗುತ್ತಾರೆ. ॥7॥
(ಶ್ಲೋಕ-8)
ಮೂಲಮ್
ಖಗಾ ವೀತಲಂ ವೃಕ್ಷಂ ಭುಕ್ತ್ವಾ ಚಾತಿಥಯೋ ಗೃಹಮ್ ।
ದಗ್ಧಂ ಮೃಗಾಸ್ತಥಾರಣ್ಯಂ ಜಾರೋ ಭುಕ್ತ್ವಾ ರತಾಂ ಸಿಯಮ್ ॥
ಅನುವಾದ
ವೃಕ್ಷದಲ್ಲಿ ಫಲಗಳು ತೀರಿಹೋದಾಗ ಪಕ್ಷಿಗಳು ಹೇಳದೆ ಕೇಳದೆ ಹಾರಿಹೋಗುತ್ತವೆ. ಊಟ ಮಾಡಿದ ಬಳಿಕ ಅತಿಥಿಯು ಗೃಹಸ್ಥನ ಕಡೆಗೆ ನೋಡುತ್ತಾನೆಯೇ? ಕಾಡಿಗೆ ಬೆಂಕಿಬಿದ್ದಾಗ ಮೃಗಗಳು ಓಡಿ ಹೋಗುತ್ತವೆ. ನವಯುವತಿಯಲ್ಲಿ ಎಷ್ಟೇ ಅನುರಾಗವನ್ನು ಹೊಂದಿದ್ದರೂ ಜಾರಪುರುಷರು ಅವಳನ್ನು ಉಪಭೋಗಿಸಿದ ಬಳಿಕ ತಿರುಗಿಯೂ ಅವಳತ್ತ ನೋಡುವುದಿಲ್ಲ. ॥8॥
(ಶ್ಲೋಕ-9)
ಮೂಲಮ್
ಇತಿ ಗೋಪ್ಯೋ ಹಿ ಗೋವಿಂದೇ ಗತವಾಕ್ಕಾಯಮಾನಸಾಃ ।
ಕೃಷ್ಣದೂತೇ ವ್ರಜಂ ಯಾತೇ ಉದ್ಧವೇ ತ್ಯಕ್ತಲೌಕಿಕಾಃ ॥
(ಶ್ಲೋಕ-10)
ಮೂಲಮ್
ಗಾಯಂತ್ಯಃ ಪ್ರಿಯಕರ್ಮಾಣಿ ರುದತ್ಯಶ್ಚ ಗತಹ್ರಿಯಃ ।
ತಸ್ಯ ಸಂಸ್ಮೃತ್ಯ ಸಂಸ್ಮೃತ್ಯ ಯಾನಿ ಕೈಶೋರಬಾಲ್ಯಯೋಃ ॥
ಅನುವಾದ
ಪರೀಕ್ಷಿತನೇ! ಹೀಗೆ ಗೋಪಿಯರು ಕೃಷ್ಣದೂತನಾದ ಉದ್ಧವನು ವ್ರಜಕ್ಕೆ ಬಂದಾಗ, ಕೃಷ್ಣನು ತಮ್ಮನ್ನು ಸ್ಮರಿಸಲಿಲ್ಲವೆಂದೇ ಭಾವಿಸಿ ಹೀಗೆಲ್ಲ ಉದ್ಧವನಲ್ಲಿ ದೂರಿದರು. ಆ ಸಮಯದಲ್ಲಿ ಅವರ ಮಾತು, ಮನಸ್ಸು, ಶರೀರಗಳು ಗೋವಿಂದನಲ್ಲೇ ಲೀನವಾಗಿಬಿಟ್ಟಿದ್ದವು. ಬಾಲಮುಕುಂದನ ಬಾಲ್ಯ ಕಿಶೋರಾವಸ್ಥೆಗಳನ್ನು ಅಡಿಗಡಿಗೆ ಸ್ಮರಿಸುತ್ತಾ, ಅವನ ಅತಿಪ್ರಿಯವಾದ ಲೀಲಾಪ್ರಸಂಗಗಳನ್ನು ಹಾಡುತ್ತಾ, ಯಾವ ವಿಧವಾದ ನಾಚಿಕೆಯೂ ಇಲ್ಲದೆ ಅವರೆಲ್ಲರೂ ಉದ್ಧವನ ಮುಂದೆ ಗಳ-ಗಳನೆ ಅತ್ತುಬಿಟ್ಟರು. ॥9-10॥
(ಶ್ಲೋಕ-11)
ಮೂಲಮ್
ಕಾಚಿನ್ಮಧುಕರಂ ದೃಷ್ಟ್ವಾ ಧ್ಯಾಯಂತೀ ಕೃಷ್ಣಸಂಗಮಮ್ ।
ಪ್ರಿಯಪ್ರಸ್ಥಾಪಿತಂ ದೂತಂ ಕಲ್ಪಯಿತ್ವೇದಮಬ್ರವೀತ್ ॥
ಅನುವಾದ
ಆ ಸಮಯದಲ್ಲಿ ಶ್ರೀಕೃಷ್ಣನೊಡನೆ ಸೇರುವಿಕೆಯನ್ನೇ ಬಹಳವಾಗಿ ಚಿಂತಿಸುತ್ತಿದ್ದ ಗೋಪಿಯೊಬ್ಬಳು ತನ್ನ ಬಳಿಗೆ ಹಾರಿಕೊಂಡು ಬಂದ ದುಂಬಿಯನ್ನೇ ಕೃಷ್ಣದೂತನೆಂದು ಭಾವಿಸಿಕೊಂಡು ಆ ದುಂಬಿಯೊಡನೆ ಹೇಳತೊಡಗಿದಳು.॥11॥
(ಶ್ಲೋಕ-12)
ಮೂಲಮ್ (ವಾಚನಮ್)
ಗೋಪ್ಯುವಾಚ
ಮೂಲಮ್
ಮಧುಪ ಕಿತವಬಂಧೋ ಮಾ ಸ್ಪೃಶಾಂಘ್ರಿಂ ಸಪತ್ನ್ಯಾಃ
ಕುಚವಿಲುಲಿತಮಾಲಾಕುಂಕುಮಶ್ಮಶ್ರುಭಿರ್ನಃ ।
ವಹತು ಮಧುಪತಿಸ್ತನ್ಮಾನಿನೀನಾಂ ಪ್ರಸಾದಂ
ಯದುಸದಸಿ ವಿಡಂಬ್ಯಂ ಯಸ್ಯ ದೂತಸ್ತ್ವಮೀದೃಕ್ ॥
ಅನುವಾದ
ಗೋಪಿಯು ಹೇಳಿದಳು — ಎಲೈ ಮಧುಪನೇ! ನೀನು ಮಹಾ ಕಪಟಿಯಾದ ಮುಕುಂದನ ಸ್ನೇಹಿತನಾದ್ದರಿಂದ ನೀನೂ ಕಪಟಿಯೇ ಆಗಿರುವೆ. ನೀನು ನಮ್ಮ ಕಾಲುಗಳನ್ನು ಮುಟ್ಟಬೇಡ. ನಿನ್ನ ತೋರಿಕೆಯ ವಿನಯವನ್ನು ತೋರಬೇಡ. ನಮ್ಮ ಸವತಿಯರ ಕುಚಗಳ ಸ್ಪರ್ಶದಿಂದ ಕೆಂಪಾದ ನಮ್ಮ ಇನಿಯನ ವನಮಾಲೆಯಿಂದ ನಿನ್ನ ಮೀಸೆಗಳೂ ಕೆಂಪಾಗಿವೆ. ನೀನೂ ಕೂಡ ಯಾವುದೇ ಹೂವಿನೊಂದಿಗೆ ಪ್ರೇಮವಿರಿಸಿಕೊಳ್ಳುವುದಿಲ್ಲ, ಇಲ್ಲಿಂದ ಅಲ್ಲಿಗೆ ಹಾರಾಡುತ್ತಾ ಇರುವೆ. ನಿನ್ನ ಸ್ವಾಮಿಯಂತೆ ನೀನೂ ಆಗಿದ್ದಿಯೆ. ಯಾದವರ ಸಭೆಯಲ್ಲಿ ಪರಿಹಾಸ್ಯಕ್ಕೆ ಕಾರಣವಾಗುವ, ಮಥುರೆಯ ಮಾನಿನಿಯರ ಕುಂಕುಮಪ್ರಸಾದವನ್ನು ಅವನೇ ಇಟ್ಟುಕೊಳ್ಳಲಿ. ಅದು ನಮಗೆ ಬೇಡ. ನಿನ್ನ ಮೂಲಕವಾಗಿ ಆ ಪ್ರಸಾದವನ್ನು ನಮಗೆ ಕಳಿಸುವುದುಬೇಡ. ॥12॥
(ಶ್ಲೋಕ-13)
ಮೂಲಮ್
ಸಕೃದಧರಸುಧಾಂ ಸ್ವಾಂ ಮೋಹಿನೀಂ ಪಾಯಯಿತ್ವಾ
ಸುಮನಸ ಇವ ಸದ್ಯಸ್ತತ್ಯಜೇಸ್ಮಾನ್ ಭವಾದೃಕ್ ।
ಪರಿಚರತಿ ಕಥಂ ತತ್ಪಾದಪದ್ಮಂ ತು ಪದ್ಮಾ
ಹ್ಯಪಿ ಬತ ಹೃತಚೇತಾ ಉತ್ತಮಶ್ಲೋಕಜಲ್ಪೈಃ ॥
ಅನುವಾದ
ಭ್ರಮರವೇ! ನಿನ್ನಂತೆಯೇ ನಿನ್ನ ಆ ಪ್ರಭುವೂ ಶ್ಯಾಮಲ ವರ್ಣನು. ಪುಷ್ಪರಸವನ್ನು ಹೀರಿಕೊಂಡನಂತರ ನೀನು ಮತ್ತೊಂದು ಪುಷ್ಪಕ್ಕೆ ಹಾರಿ ಹೋಗುವಂತೆ ನಿನ್ನ ಸ್ವಾಮಿಯೂ ಮಾಡುತ್ತಾನೆ. ನಿನ್ನ ಆ ಸ್ವಾಮಿಯೂ ನಮಗೆ ಒಂದೇ ಒಂದು ಬಾರಿಗೆ, ನಿಜವಾಗಿ ಒಂದೇ ಒಂದು ಬಾರಿಗೆ ತನ್ನ ಮನಮೋಹಕವಾದ ಮತ್ತುಬರಿಸುವ ಅಧರಾಮೃತವನ್ನು ಕುಡಿಸಿ, ನಿನ್ನ ಹಾಗೆಯೇ ಹಳ್ಳಿಗರಾದ ನಮ್ಮನ್ನು ಪರಿತ್ಯಜಿಸಿ ಪಟ್ಟಣಕ್ಕೆ ಹೊರಟುಹೋದನು. ಇಂತಹವನ ಪಾದ ಕಮಲಗಳ ಸೇವೆಯನ್ನು ಆ ಲಕ್ಷ್ಮೀದೇವಿಯು ಹೇಗೆ ಮಾಡುವಳೋ ತಿಳಿಯದಾಗಿದೆ. ಅವನ ಕೀರ್ತಿ, ಯಶಸ್ಸು, ಚಾಟು ನುಡಿಗಳಿಗೆ ಮನಸೋತು ಅವಳು ಆ ಧೂರ್ತನ ಸೇವೆಯನ್ನು ಮಾಡುತ್ತಿರಬಹುದು. ॥13॥
(ಶ್ಲೋಕ-14)
ಮೂಲಮ್
ಕಿಮಿಹ ಬಹು ಷಡಂಘ್ರೇ ಗಾಯಸಿ ತ್ವಂ ಯದೂನಾ-
ಮಧಿಪತಿಮಗೃಹಾಣಾಮಗ್ರತೋ ನಃ ಪುರಾಣಮ್ ।
ವಿಜಯಸಖಸಖೀನಾಂ ಗೀಯತಾಂ ತತ್ಪ್ರಸಂಗಃ
ಕ್ಷಪಿತಕುಚರುಜಸ್ತೇ ಕಲ್ಪಯಂತೀಷ್ಟಮಿಷ್ಟಾಃ ॥
ಅನುವಾದ
ಎಲೈ ಷಟ್ಪದವೇ! ನಾವು ವನವಾಸಿಗಳು. ನಮಗೆ ಮನೆಮಠಗಳೂ ಇಲ್ಲ. ಅಂತಹ ನಮ್ಮ ಮುಂದೆ ನೀನು ಯದುಕುಲ ಶಿರೋಮಣಿಯಾದ ಶ್ರೀಕೃಷ್ಣನ ಗುಣಗಾನವನ್ನೇಕೆ ಮಾಡುತ್ತಿರುವೆ? ಇದು ನಮಗೆಲ್ಲ ಹಳೆಯದಾಗಿ ಹೋಗಿದೆ. ಅವನ ಗುಣ-ಗಣಗಳೆಲ್ಲವನ್ನೂ ನಾವು ಬಲ್ಲೆವು. ನಿನ್ನ ಕುತಂತ್ರವು ನಮ್ಮ ಬಳಿ ನಡೆಯದು. ನೀನು ಇಲ್ಲಿಂದ ಹೊರಟುಹೋಗು. ವಿಜಯವು ಸದಾ ಜೊತೆಯಿರುವ ಶ್ರೀಕೃಷ್ಣನ ಗುಣಗಾನವನ್ನು ಮಧುರಾಪುರವಾಸಿನಿಯರಾದ ಸಖಿಯರ ಮುಂದೆ ಹಾಡು. ಅವರು ಹೊಸಬರು. ಅವರಿಗೆ ಅವನ ಲೀಲೆಗಳು ಇನ್ನೂ ಅಷ್ಟಾಗಿ ತಿಳಿಯವು. ಈ ಸಮಯದಲ್ಲಿ ಅವರು ಅವನಿಗೆ ಪ್ರಿಯರಾಗಿದ್ದಾರೆ. ಅವರ ಹೃದಯದ ಪೀಡೆಯನ್ನು ಅವನು ಪರಿಹರಿಸಿರುವನು. ಅವರು ನಿನ್ನ ಪ್ರಾರ್ಥನೆಯನ್ನು ಸ್ವೀಕರಿಸುವರು. ನಿನ್ನ ಚಾತುರ್ಯದಿಂದ ಸಂತೋಷಗೊಂಡು ಅವರು ನಿನಗೆ ಬೇಕಾದ್ದನ್ನು ಕೊಡುವರು. ॥14॥
(ಶ್ಲೋಕ-15)
ಮೂಲಮ್
ದಿವಿ ಭುವಿ ಚ ರಸಾಯಾಂ ಕಾಃ ಸಿಯಸ್ತದ್ದುರಾಪಾಃ
ಕಪಟರುಚಿರಹಾಸಭ್ರೂವಿಜೃಂಭಸ್ಯ ಯಾಃ ಸ್ಯುಃ ।
ಚರಣರಜ ಉಪಾಸ್ತೇ ಯಸ್ಯ ಭೂತಿರ್ವಯಂ ಕಾ
ಅಪಿ ಚ ಕೃಪಣಪಕ್ಷೇ ಹ್ಯುತ್ತಮಶ್ಲೋಕಶಬ್ದಃ ॥
ಅನುವಾದ
ಎಲೈ ಕಪಟಿಯಾದ ದುಂಬಿಯೇ! ಸ್ವರ್ಗದಲ್ಲಾಗಲೀ, ಪಾತಾಳ ಲೋಕದಲ್ಲಾಗಲೀ, ಮನೋಹರವಾದ ನಗೆ, ಹುಬ್ಬು- ಹಾರಿಸುವುದು, ಕಡೆಗಣ್ಣನೋಟ ಇತ್ಯಾದಿಗಳುಳ್ಳ ಮುಕುಂದನಿಗೆ ವಶವಾಗದಿರುವ ಸ್ತ್ರೀಯರು ಯಾರು ತಾನೇ ಇದ್ದಾರೆ? ಮಹಾಲಕ್ಷ್ಮಿಯೇ ಯಾರ ಚರಣಕಮಲಗಳನ್ನು ಸದಾ ಸೇವಿಸುವಳೋ ಅಂತಹ ಶ್ಯಾಮಸುಂದರನಿಗೆ ನಾವು ಎಷ್ಟು ಮಾತ್ರದವರು. ಆದರೆ ದೀನರ ವಿಷಯದಲ್ಲಿ ಅವನಿಗಿರುವ ಪುಣ್ಯಕೀರ್ತಿ ಎಂಬರ್ಥದ ಉತ್ತಮಶ್ಲೋಕ ಶಬ್ದವು ಅನ್ವರ್ಥವಾಗುವುದೇನು? ॥15॥
(ಶ್ಲೋಕ-16)
ಮೂಲಮ್
ವಿಸೃಜ ಶಿರಸಿ ಪಾದಂ ವೇದ್ಮ್ಯಹಂ ಚಾಟುಕಾರೈ-
ರನುನಯವಿದುಷಸ್ತೇಭ್ಯೇತ್ಯ ದೌತ್ಯೈರ್ಮುಕುಂದಾತ್ ।
ಸ್ವಕೃತ ಇಹ ವಿಸೃಷ್ಟಾ ಪತ್ಯಪತ್ಯನ್ಯಲೋಕಾ
ವ್ಯಸೃಜದಕೃತಚೇತಾಃ ಕಿಂ ನು ಸಂಧೇಯಮಸ್ಮಿನ್ ॥
ಅನುವಾದ
ಭ್ರಮರವೇ! ತಲೆಯ ಮೇಲಿಟ್ಟಿರುವ ನಿನ್ನ ಪಾದವನ್ನು ತೆಗಿ; ದೂರಸರಿ. ಚಮತ್ಕಾರದ ಮಾತುಗಳನ್ನಾಡಿ ಸಂಧಾನಮಾಡುವುದರಲ್ಲಿ ನೀನು ನಿಪುಣನೆಂದು ನಾವು ಬಲ್ಲೆವು. ಚಮತ್ಕಾರವಾಗಿ ಮಾತನಾಡುವುದನ್ನು ನೀನು ಶ್ರೀಕೃಷ್ಣನಿಂದಲೇ ಕಲಿತಿರುವೆ ಎಂದೆನಿಸುತ್ತದೆ. ಆದರೆ ನಿನ್ನ ಮಾತುಗಳು ನಮ್ಮಲ್ಲಿ ಪರಿಣಾಮ ಬೀರಲಾವು. ಏಕೆಂದರೆ, ನಿನ್ನ ಪ್ರಭುವಿಗಾಗಿಯೇ ನಾವು ಪತಿ-ಪುತ್ರರನ್ನು, ಬಂಧುಗಳನ್ನು, ಪರಲೋಕಕ್ಕೆ ಸಾಧನವಾದ ಸಮಸ್ತ ಧರ್ಮಗಳನ್ನು ತ್ಯಜಿಸಿದೆವು. ಆದರೆ ಕೃತಜ್ಞತೆಯಿಲ್ಲದ ಅವನು ನಮ್ಮನ್ನು ಬಿಟ್ಟು ಹೊರಟೇಹೋದ. ಅಂತಹವನ ವಿಷಯದಲ್ಲಿ ಮೈತ್ರಿಮಾಡಿಕೊಳ್ಳುವುದೇನಿದೆ? ॥16॥
(ಶ್ಲೋಕ-17)
ಮೂಲಮ್
ಮೃಗಯುರಿವ ಕಪೀಂದ್ರಂ ವಿವ್ಯಧೇ ಲುಬ್ಧಧರ್ಮಾ
ಸಿಯಮಕೃತ ವಿರೂಪಾಂ ಸೀಜಿತಃ ಕಾಮಯಾನಾಮ್ ।
ಬಲಿಮಪಿ ಬಲಿಮತ್ತ್ವಾವೇಷ್ಟಯದ್ಧ್ವಾಂಕ್ಷವದ್ಯ-
ಸ್ತದಲಮಸಿತಸಖ್ಯೈರ್ದುಸ್ತ್ಯಜಸ್ತತ್ಕಥಾರ್ಥಃ ॥
ಅನುವಾದ
ಭ್ರಮರವೇ! ನಿನ್ನ ಪ್ರಭುವಿನ ನಿರ್ದಯತೆಯನ್ನು ಎಷ್ಟೊಂದು ವರ್ಣಿಸೋಣ. ಇವನು ಶ್ರೀರಾಮನಾಗಿದ್ದಾಗ ಕಪಿರಾಜನಾದ ವಾಲಿಯನ್ನು ವ್ಯಾಧನಂತೆ ಅಡಗಿಕೊಂಡು ನಿರ್ದಯತೆಯಿಂದ ಕೊಂದುಬಿಟ್ಟಿದ್ದನು. ಅದೇ ಅವತಾರದಲ್ಲಿ ಸ್ತ್ರೀಜಿತನಾದ ಇವನು ಕಾಮಿಸಿಬಂದ ಶೂರ್ಪಣಖಿಯ ಕಿವಿ-ಮೂಗುಗಳನ್ನು ಕತ್ತರಿಸಿ ಅವಳನ್ನು ವಿರೂಪಗೊಳಿಸಿದ್ದನು. ವಾಮನಾವಾತಾರದಲ್ಲಿ ತಾನೇ ಮಾಡಿದ್ದೇನು? ವಟುವಿನ ವೇಷದಿಂದ ಬಂದ ಇವನನ್ನು ಬಲಿಚಕ್ರವರ್ತಿಯು ಯಥೋಚಿತವಾಗಿ ಸತ್ಕರಿಸಿದನು. ಬೇಡಿದ್ದನ್ನು ಕೊಟ್ಟು ಬಿಟ್ಟನು. ಆದರೆ ಇವನು ಆ ಬಲಿಯನ್ನು ವರುಣ ಪಾಶದಿಂದ ಬಂಧಿಸಿ ಪಾತಾಳಕ್ಕಟ್ಟಿದನು. ಬಲಿಯನ್ನು ಭಕ್ಷಿಸಿದ ಕಾಗೆಯು ಬಲಿಯನ್ನಿತ್ತವನನ್ನೇ ಪರಿವಾರದೊಂದಿಗೆ ಮುತ್ತುವಂತೆ ಅಲ್ಲವೇ ಇದು. ಹೋಗಲಿಬಿಡು. ಈ ಕರಿಯನೊಡನೆ ಸ್ನೇಹವೇ ಸಾಕೆನಿಸಿದೆ. ಆದರೂ ಏನು ಮಾಡುವುದು? ಅವನ ಲೀಲಾಪ್ರಸಂಗಗಳನ್ನು ಗಾನಮಾಡದೇ ಇರಲಾಗುವುದಿಲ್ಲ. ॥17॥
(ಶ್ಲೋಕ-18)
ಮೂಲಮ್
ಯದನುಚರಿತಲೀಲಾಕರ್ಣಪೀಯೂಷವಿಪ್ರುಟ್-
ಸಕೃದದನವಿಧೂತದ್ವಂದ್ವಧರ್ಮಾ ವಿನಷ್ಟಾಃ ।
ಸಪದಿ ಗೃಹಕುಟುಂಬಂ ದೀನಮುತ್ಸೃಜ್ಯ ದೀನಾ
ಬಹವ ಇಹ ವಿಹಂಗಾ ಭಿಕ್ಷುಚರ್ಯಾಂ ಚರಂತಿ ॥
ಅನುವಾದ
ಶ್ರೀಕೃಷ್ಣನ ಲೀಲಾರೂಪವಾದ ಕರ್ಣಾಮೃತದ ಒಂದು ತೊಟ್ಟನ್ನು ಪಾನ ಮಾಡಿದವರೂ ಕೂಡ ರಾಗ, ದ್ವೇಷ, ಸುಖ-ದುಃಖವೇ ಮೊದಲಾದ ದ್ವಂದ್ವಗಳಿಂದ ಬಿಡುಗಡೆ ಹೊಂದುವರು. ದಯನೀಯವಾದ ಸಂಸಾರವನ್ನೂ, ಮನೆ-ಮಠಗಳನ್ನು ತೊರೆದು ಅತ್ಯಂತ ದೀನರಾಗಿ ಸಂಗ್ರಹ-ಪರಿಗ್ರಹಗಳನ್ನು ಮಾಡದೆ ಪ್ರಾಣಧಾರಣೆಗೆ ಬೇಕಾದಷ್ಟು ಮಾತ್ರವೇ ಆಹಾರವನ್ನು ಸೇವಿಸುವ ಪಕ್ಷಿಗಳಂತೆ - ಈ ವೃಂದಾವನದಲ್ಲಿ ಬಹುಮಂದಿ ಭಿಕ್ಷಾಟನೆಯಿಂದ ಜೀವಿಸುತ್ತಿದ್ದಾರೆ. ಹೀಗಿದ್ದರೂ ಶ್ರೀಕೃಷ್ಣನ ಲೀಲಾಕಥೆಗಳನ್ನು ಬಿಡಲಿಕ್ಕಾಗುವುದಿಲ್ಲ. ನಮ್ಮ ಅವಸ್ಥೆಯೂ ಹೀಗೆ ಆಗಿದೆ. ॥18॥
(ಶ್ಲೋಕ-19)
ಮೂಲಮ್
ವಯಮೃತಮಿವ ಜಿಹ್ಮವ್ಯಾಹೃತಂ ಶ್ರದ್ದಧಾನಾಃ
ಕುಲಿಕರುತಮಿವಾಜ್ಞಾಃ ಕೃಷ್ಣವಧ್ವೋ ಹರಿಣ್ಯಃ ।
ದದೃಶುರಸಕೃದೇತತ್ತನ್ನಖಸ್ಪರ್ಶತೀವ್ರ-
ಸ್ಮರರುಜ ಉಪಮಂತ್ರಿನ್ ಭಣ್ಯತಾಮನ್ಯವಾರ್ತಾ ॥
ಅನುವಾದ
ಶ್ರೀಕೃಷ್ಣನ ಉಪಮಂತ್ರಿಯೇ! ಕೃಷ್ಣಸಾರಮೃಗದ ಪತ್ನಿಯರಾದ ಹೆಣ್ಣು ಜಿಂಕೆಗಳು ವ್ಯಾಧನ ಸುಮಧುರ ಸಂಗೀತಕ್ಕೆ ಮರುಳಾಗಿ ಅವನು ಬೀಸಿದ ಬಲೆಯಲ್ಲಿ ಬಿದ್ದು ಪ್ರಾಣನೀಗುವಂತೆ ಶ್ರೀಕೃಷ್ಣನ ಪತ್ನಿಯರಾದ ನಾವೂ (ಗೋಪಿಯರೂ) ಕುಟಿಲನಾದ ಕೃಷ್ಣನ ಅಮೃತಮಯವಾದ ಮಾತನ್ನು ಸತ್ಯವೆಂದೇ ಬಗೆದು ಆ ಕೃಷ್ಣನ ನಖಸ್ಪರ್ಶದಿಂದ ಉಂಟಾದ ಕಾಮಬಾಧೆಯನ್ನು ಹಲವಾರು ಬಾರಿ ಅನುಭವಿಸಿದೆವು. ಆದುದರಿಂದ ಅವನ ವಿಷಯದಲ್ಲಿ ಬೇರೆ ಯಾವ ಮಾತನ್ನೂ ಆಡಬೇಡ. ಬೇರೇನಾದರೂ ವಾರ್ತೆಯಿದ್ದರೆ ತಿಳಿಸು. ॥19॥
(ಶ್ಲೋಕ-20)
ಮೂಲಮ್
ಪ್ರಿಯಸಖ ಪುನರಾಗಾಃ ಪ್ರೇಯಸಾ ಪ್ರೇಷಿತಃ ಕಿಂ
ವರಯ ಕಿಮನುರುಂಧೇ ಮಾನನೀಯೋಸಿ ಮೇಂಗ ।
ನಯಸಿ ಕಥಮಿಹಾಸ್ಮಾನ್ ದುಸ್ತ್ಯಜದ್ವಂದ್ವಪಾರ್ಶ್ವಂ
ಸತತಮುರಸಿ ಸೌಮ್ಯ ಶ್ರೀರ್ವಧೂಃ ಸಾಕಮಾಸ್ತೇ ॥
ಅನುವಾದ
ನಮ್ಮ ಪ್ರಿಯತಮನ ಪ್ರಿಯಸಖನೇ! ನೀನು ನಿನ್ನ ಸ್ವಾಮಿಯ ಬಳಿಗೆ ಹೋಗಿ ಪುನಃ ಆಗಮಿಸಿದಂತೆ ಕಾಣುತ್ತದೆ. ನಮ್ಮನ್ನಲ್ಲಿಗೆ ಕರೆದುಕೊಂಡು ಹೋಗಲು ನಮ್ಮ ಪ್ರಿಯತಮನು ಪುನಃ ನಿನ್ನನ್ನು ಕಳಿಸಿರಬೇಕಲ್ಲ? ಪ್ರಿಯಭ್ರಮರವೇ! ನೀನು ನಮಗೆ ಮಾನನೀಯನಾಗಿರುವೆ. ನಿನ್ನ ಇಚ್ಛೆ ಏನೆಂಬುದನ್ನು ಹೇಳು. ನೀನು ಹೇಳಿದಂತೆ ಮಾಡುತ್ತೇವೆ. ನಾವಲ್ಲಿಗೆ ಬರಲು ನೀನು ಅಪೇಕ್ಷಿಸುವೆಯಾ? ಆದರೆ ಅವನ ಬಳಿಗೆ ಹೋದರೂ ಮರಳಬೇಕಾಗುವುದು. ನಾವೂ ಅವನ ಬಳಿಗೆ ಹೋಗಿದ್ದೆವು. ಆದರೆ ನೀನು ನಮ್ಮನ್ನಲ್ಲಿಗೆ ಕರೆದುಕೊಂಡು ಹೋಗಿ ಏನು ಮಾಡುವೆ? ಸೌಮ್ಯನೇ ಅವನ ವಕ್ಷಃಸ್ಥಳದಲ್ಲಾದರೋ ಅವನ ಪ್ರಿಯಪತ್ನೀ ಲಕ್ಷ್ಮಿಯು ಸದಾಕಾಲ ಇರುವಳಲ್ಲ! ಹಾಗಿರುವಾಗ ಅಲ್ಲಿ ನಮ್ಮದೇನು ನಡೆದೀತು? ॥20॥
(ಶ್ಲೋಕ-21)
ಮೂಲಮ್
ಅಪಿ ಬತ ಮಧುಪುರ್ಯಾಮಾರ್ಯಪುತ್ರೋಧುನಾಸ್ತೇ
ಸ್ಮರತಿ ಸ ಪಿತೃಗೇಹಾನ್ ಸೌಮ್ಯ ಬಂಧೂಂಶ್ಚ ಗೋಪಾನ್ ।
ಕ್ವಚಿದಪಿ ಸ ಕಥಾ ನಃ ಕಿಂಕರೀಣಾಂ ಗೃಣೀತೇ
ಭುಜಮಗುರುಸುಗಂಧಂ ಮೂರ್ಧ್ನ್ಯಧಾಸ್ಯತ್ ಕದಾ ನು ॥
ಅನುವಾದ
ನಮ್ಮ ಪ್ರಿಯತಮನ ಪ್ರಿಯಸಖನಾದ ಮಧುಕರನೇ! ಆರ್ಯ ಪುತ್ರನಾದ ಭಗವಾನ್ ಶ್ರೀಕೃಷ್ಣನು ಗುರುಕುಲದಿಂದ ಮರಳಿ ಬಂದು ಈಗ ಮಥುರೆಯಲ್ಲಿ ಸುಖದಿಂದ ಇರುವನಲ್ಲ? ಅವನು ಎಂದಾದರೂ ನಂದ-ಯಶೋದೆಯರನ್ನು, ಇಲ್ಲಿಯ ಮನೆಯನ್ನು, ಸಂಬಂಧಿಗಳನ್ನು ಗೊಲ್ಲಬಾಲಕರನ್ನು ಸ್ಮರಿಸಿಕೊಳ್ಳುವನೇ? ದಾಸಿಯರಾದ ನಮ್ಮ ಸಂಬಂಧವಾಗಿಯೂ ಯಾವಾಗಲಾದರೂ ಮಾತುಗಳನ್ನು ಆಡುತ್ತಿರುವನೇ? ಮುಂದೆ ಎಂದಾದರೂ ಅಗರು ಸುಗಂಧಯುಕ್ತವಾದ ತನ್ನ ತೋಳನ್ನು ನಮ್ಮ ತಲೆಯ ಮೇಲೆ ಇರಿಸುವನೇ? ಹೇಳು? ಭ್ರಮರವೇ! ॥21॥
(ಶ್ಲೋಕ-22)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಅಥೋದ್ಧವೋ ನಿಶಮ್ಯೈವಂ ಕೃಷ್ಣದರ್ಶನಲಾಲಸಾಃ ।
ಸಾಂತ್ವಯನ್ ಪ್ರಿಯಸಂದೇಶೈರ್ಗೋಪೀರಿದಮಭಾಷತ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಶ್ರೀಕೃಷ್ಣನನ್ನು ಸಂದರ್ಶಿಸಲು ಅತ್ಯಂತ ಉತ್ಸುಕರಾಗಿದ್ದ ಗೋಪಿಯರ ಮಾತನ್ನು ಕೇಳಿದ ಉದ್ಧವನು ಶ್ರೀಕೃಷ್ಣನ ಪ್ರಿಯಸಂದೇಶಗಳಿಂದ ಸಂತೈಸುತ್ತಾ ಅವರಲ್ಲಿ ಹೀಗೆ ಹೇಳಿದನು. ॥22॥
ಮೂಲಮ್
(ಶ್ಲೋಕ-23)
ಮೂಲಮ್ (ವಾಚನಮ್)
ಉದ್ಧವ ಉವಾಚ
ಮೂಲಮ್
ಅಹೋ ಯೂಯಂ ಸ್ಮ ಪೂರ್ಣಾರ್ಥಾ ಭವತ್ಯೋ ಲೋಕಪೂಜಿತಾಃ ।
ವಾಸುದೇವೇ ಭಗವತಿಯಾಸಾಮಿತ್ಯರ್ಪಿತಂ ಮನಃ ॥
ಅನುವಾದ
ಉದ್ಧವನು ಹೇಳುತ್ತಾನೆ — ಗೋಪಿಯರೇ! ನೀವು ಕೃತಕೃತ್ಯರು. ನಿಮ್ಮ ಜೀವನವು ಸಲವಾಗಿದೆ. ನೀವು ಮೂರು ಲೋಕಗಳಲ್ಲಿಯೂ ಪೂಜ್ಯರಾಗಿರುವಿರಿ. ನೀವು ನಿಮ್ಮ ಸರ್ವಸ್ವವನ್ನು ಭಗವಾನ್ ಶ್ರೀಕೃಷ್ಣನಿಗೆ ಅರ್ಪಿಸಿಕೊಂಡು ಬಿಟ್ಟಿರುವಿರಿ. ನೀವೇ ಧನ್ಯರು. ॥23॥
(ಶ್ಲೋಕ-24)
ಮೂಲಮ್
ದಾನವ್ರತತಪೋಹೋಮಜಪಸ್ವಾಧ್ಯಾಯಸಂಯಮೈಃ ।
ಶ್ರೇಯೋಭಿರ್ವಿವಿಧೈಶ್ಚಾನ್ಯೈಃ ಕೃಷ್ಣೇ ಭಕ್ತಿರ್ಹಿ ಸಾಧ್ಯತೇ ॥
ಅನುವಾದ
ದಾನ, ವ್ರತ, ತಪ, ಹೋಮ, ಜಪ, ವೇದಾಧ್ಯಯನ, ಧ್ಯಾನ, ಧಾರಣ, ಸಮಾಧಿ ಮತ್ತು ಶ್ರೇಯಸ್ಕರವಾದ ವಿಧ-ವಿಧವಾದ ಇತರ ಸಾಧನೆಗಳ ಮೂಲಕ ಭಗವಂತನಲ್ಲಿ ಭಕ್ತಿಯು ಹುಟ್ಟಲು ಸಾಧ್ಯವಾಗುತ್ತದೆ. ॥24॥
(ಶ್ಲೋಕ-25)
ಮೂಲಮ್
ಭಗವತ್ಯುತ್ತಮಶ್ಲೋಕೇ ಭವತೀಭಿರನುತ್ತಮಾ ।
ಭಕ್ತಿಃ ಪ್ರವರ್ತಿತಾ ದಿಷ್ಟ್ಯಾ ಮುನೀನಾಮಪಿ ದುರ್ಲಭಾ ॥
ಅನುವಾದ
ಆದರೆ ಉತ್ತಮಕೀರ್ತಿಯುಳ್ಳ ಭಗವಂತನ ಸರ್ವೋತ್ತಮವಾದ ಪ್ರೇಮಭಕ್ತಿಯನ್ನು ನೀವೆಲ್ಲರೂ ಪಡೆದುಕೊಂಡು ಅದರ ಆದರ್ಶವನ್ನು ಸ್ಥಾಪಿಸಿರುವಿರಿ. ಇದು ನಿಶ್ಚಯವಾಗಿಯೂ ಸೌಭಾಗ್ಯವೇ ಸರಿ. ಆ ಭಕ್ತಿಯು ಮಹಾ-ಮಹಾ ಋಷಿ-ಮುನಿಗಳಿಗೂ ಅತ್ಯಂತ ದುರ್ಲಭವಾದುದು. ॥25॥
(ಶ್ಲೋಕ-26)
ಮೂಲಮ್
ದಿಷ್ಟ್ಯಾ ಪುತ್ರಾನ್ ಪತೀನ್ ದೇಹಾನ್ ಸ್ವಜನಾನ್ ಭವನಾನಿ ಚ ।
ಹಿತ್ವಾವೃಣೀತ ಯೂಯಂ ಯತ್ ಕೃಷ್ಣಾಖ್ಯಂ ಪುರುಷಂ ಪರಮ್ ॥
ಅನುವಾದ
ನೀವುಗಳು ನಿಮ್ಮ ಪತಿ-ಪುತ್ರರನ್ನೂ, ದೇಹ ಸ್ವಜನರನ್ನೂ, ಮನೆ-ಮಠಗಳನ್ನು ಬಿಟ್ಟು ಸಮಸ್ತರ ಪರಮಪತಿಯಾದ ಪುರುಷೋತ್ತಮ ಭಗವಾನ್ ಶ್ರೀಕೃಷ್ಣನನ್ನು ಪತಿಯನ್ನಾಗಿ ವರಿಸಿರುವಿರಿ. ನಿಜವಾಗಿಯೂ ಇದು ಸೌಭಾಗ್ಯದ ಮಾತೇ ಸರಿ. ॥26॥
(ಶ್ಲೋಕ-27)
ಮೂಲಮ್
ಸರ್ವಾತ್ಮಭಾವೋಧಿಕೃತೋ ಭವತೀನಾಮಧೋಕ್ಷಜೇ ।
ವಿರಹೇಣ ಮಹಾಭಾಗಾ ಮಹಾನ್ ಮೇನುಗ್ರಹಃ ಕೃತಃ ॥
ಅನುವಾದ
ಮಹಾಭಾಗ್ಯವತಿಯರಾದ ಗೋಪಿಯರೇ! ಭಗವಾನ್ ಶ್ರೀಕೃಷ್ಣನ ವಿಯೋಗದಿಂದ ನೀವು-ಸಮಸ್ತ ವಸ್ತುಗಳ ರೂಪದಲ್ಲಿ ಅವನ ದರ್ಶನವಾಗುವಂತಹ ಇಂದ್ರಿಯಾತೀತ ಪರಮಾತ್ಮನ ಕುರಿತು ಆ ಭಾವವನ್ನು ಪಡೆದುಕೊಂಡಿರುವಿರಿ. ನೀವೆಲ್ಲರೂ ಆ ಭಾವವನ್ನು ನನ್ನ ಮುಂದೆಯೇ ಪ್ರಕಟಿಸಿರುವಿರಿ. ಇದು ನನ್ನ ಮೇಲೆ ದೇವಿಯರಾದ ನೀವು ತೋರಿದ ಮಹತ್ಕೃಪೆಯೇ ಆಗಿದೆ. ॥27॥
(ಶ್ಲೋಕ-28)
ಮೂಲಮ್
ಶ್ರೂಯತಾಂ ಪ್ರಿಯಸಂದೇಶೋ ಭವತೀನಾಂ ಸುಖಾವಹಃ ।
ಯಮಾದಾಯಾಗತೋ ಭದ್ರಾ ಅಹಂ ಭರ್ತೂ ರಹಸ್ಕರಃ ॥
ಅನುವಾದ
ನಾನು ನನ್ನ ಸ್ವಾಮಿಯ ರಹಸ್ಯವಾದ ಕಾರ್ಯಮಾಡುವಂತಹ ದೂತನಾಗಿದ್ದೇನೆ. ನಿಮ್ಮ ಪ್ರಿಯತಮನಾದ ಶ್ರೀಕೃಷ್ಣನು ಪರಮ ಸುಖದಾಯಕವಾದ ಸಂದೇಶವನ್ನು ನಿಮಗೆ ಕಳಿಸಿಕೊಟ್ಟಿರುವನು. ಮಂಗಳಾಂಗಿಯರೇ! ಅದನ್ನು ಹೊತ್ತುಕೊಂಡು ನಾನು ನಿಮ್ಮ ಬಳಿಗೆ ಬಂದಿರುವೆನು. ಈಗ ಅದನ್ನು ಲಾಲಿಸಿರಿ. ॥28॥
(ಶ್ಲೋಕ-29)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಭವತೀನಾಂ ವಿಯೋಗೋ ಮೇ ನ ಹಿ ಸರ್ವಾತ್ಮನಾ ಕ್ವಚಿತ್ ।
ಯಥಾ ಭೂತಾನಿ ಭೂತೇಷು ಖಂ ವಾಯ್ವಗ್ನಿರ್ಜಲಂ ಮಹೀ ।
ತಥಾಹಂ ಚ ಮನಃಪ್ರಾಣಭೂತೇಂದ್ರಿಯಗುಣಾಶ್ರಯಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳಿರುವನು — ನಾನು ಎಲ್ಲಕ್ಕೂ ಮೂಲಕಾರಣನಾದ್ದರಿಂದ ಸರ್ವರಿಗೂ ಆತ್ಮಸ್ವರೂಪನಾಗಿದ್ದೇನೆ. ಎಲ್ಲದರಲ್ಲಿಯೂ ನಾನೇ ಇದ್ದೇನೆ. ಆದುದರಿಂದ ನನಗೆ ನಿಮ್ಮೊಡನೆ ವಿಯೋಗವು ಎಂದಿಗೂ ಉಂಟಾಗಲಾರದು. ಪ್ರಪಂಚದ ಎಲ್ಲ ಭೌತಿಕ ಪದಾರ್ಥಗಳಲ್ಲಿ ಆಕಾಶ, ವಾಯು, ಅಗ್ನಿ, ಜಲ, ಪೃಥಿವಿ ಎಂಬ ಪಂಚಭೂತಗಳೂ ಸೇರಿಕೊಂಡೇ ಇರುತ್ತವೆ. ಇವುಗಳಿಂದಲೇ ಸಮಸ್ತ ವಸ್ತುಗಳು ಉಂಟಾಗಿವೆ. ಇವೇ ಆ ವಸ್ತುಗಳ ರೂಪದಲ್ಲಿವೆ. ಹಾಗೆಯೇ ಮನಸ್ಸು, ಪಂಚಭೂತ ಇಂದ್ರಿಯಗಳು ಮತ್ತು ಅವುಗಳ ವಿಷಯಗಳು - ಇವುಗಳ ಆಶ್ರಯ ನಾನೇ ಆಗಿದ್ದೇನೆ. ಅವು ನನ್ನಲ್ಲಿವೆ, ನಾನು ಅವುಗಳಲ್ಲಿದ್ದೇನೆ. ನಿಜವಾಗಿ ಹೇಳಬೇಕಾದರೆ ನಾನೇ ಅವುಗಳ ರೂಪದಲ್ಲಿ ಪ್ರಕಟನಾಗಿದ್ದೇನೆ. ॥29॥
(ಶ್ಲೋಕ-30)
ಮೂಲಮ್
ಆತ್ಮನ್ಯೇವಾತ್ಮನಾತ್ಮಾನಂ ಸೃಜೇ ಹನ್ಮ್ಯನುಪಾಲಯೇ ।
ಆತ್ಮಮಾಯಾನುಭಾವೇನ ಭೂತೇಂದ್ರಿಯಗುಣಾತ್ಮನಾ ॥
ಅನುವಾದ
ನಾನೇ ನನ್ನ ಮಾಯೆಯ ಮೂಲಕ ಪ್ರಾಣಿಗಳು, ಇಂದ್ರಿಯಗಳು ಮತ್ತು ಅವುಗಳ ವಿಷಯಗಳ ರೂಪನಾಗಿ ಅವುಗಳ ಆಶ್ರಯನಾಗುತ್ತೇನೆ. ಸ್ವಯಂ ನಿಮಿತ್ತನಾಗಿಯೂ ನಾನೇ ನನ್ನನ್ನು ರಚಿಸಿ, ಪಾಲಿಸಿ, ತಿರೋಧಾನನಾಗುತ್ತೇನೆ. ॥30॥
(ಶ್ಲೋಕ-31)
ಮೂಲಮ್
ಆತ್ಮಾ ಜ್ಞಾನಮಯಃ ಶುದ್ಧೋ ವ್ಯತಿರಿಕ್ತೋಗುಣಾನ್ವಯಃ ।
ಸುಷುಪ್ತಿಸ್ವಪ್ನಜಾಗ್ರದ್ಭಿಃಮಾಯಾವೃತ್ತಿಭಿರೀಯತೇ ॥
ಅನುವಾದ
ಆತ್ಮನು ಮಾಯೆ ಮತ್ತು ಮಾಯೆಯ ಕಾರ್ಯಗಳಿಂದ ಪೃಥಕ್ಕಾಗಿರುವನು. ಅವನು ವಿಶುದ್ಧ ಜ್ಞಾನ ಸ್ವರೂಪನಾಗಿದ್ದು, ಜಡ ಪ್ರಕೃತಿ, ಅನಂತ ಜೀವರು ಹಾಗೂ ತನ್ನದೇ ಅವಾಂತರ ಭೇದಗಳಿಂದ ರಹಿತನಾಗಿ ಶುದ್ಧನಾಗಿದ್ದಾನೆ. ಯಾವುದೇ ಗುಣವು ಅವನನ್ನು ಸ್ಪರ್ಶಿಸಲಾರದು. ಸುಷುಪ್ತಿ, ಸ್ವಪ್ನ, ಜಾಗ್ರತ್ ಎಂಬ ಮಾಯೆಯ ಮೂರು ವೃತ್ತಿಗಳಿಂದ ಅತೀತನಾದ ಅಖಂಡ, ಅನಂತ, ಬೋಧಸ್ವರೂಪನಾದ ಆತ್ಮನು ಕೆಲವೊಮ್ಮೆ ಪ್ರಾಜ್ಞನಾಗಿಯೂ, ಕೆಲವೊಮ್ಮೆ ತೈಜಸನಾಗಿಯೂ, ಕೆಲವೊಮ್ಮೆ ವಿಶ್ವನಾಗಿಯೂ ಕಂಡು ಬರುತ್ತಾನೆ. ॥31॥
(ಶ್ಲೋಕ-32)
ಮೂಲಮ್
ಯೇನೇಂದ್ರಿಯಾರ್ಥಾನ್ ಧ್ಯಾಯೇತ ಮೃಷಾ ಸ್ವಪ್ನವದುತ್ಥಿತಃ ।
ತನ್ನಿರುಂಧ್ಯಾದಿಂದ್ರಿಯಾಣಿ ವಿನಿದ್ರಃ ಪ್ರತ್ಯಪದ್ಯತ ॥
ಅನುವಾದ
ಸ್ವಪ್ನದಲ್ಲಿ ಕಂಡುಬರುವ ಪದಾರ್ಥಗಳಂತೆ ಜಾಗ್ರದವಸ್ಥೆಯಲ್ಲಿ ಕಂಡುಬರುವ ಇಂದ್ರಿಯ ವಿಷಯಗಳೂ ಮಿಥ್ಯೆಯೇ ಆಗಿವೆ ಎಂದು ಭಾವಿಸಿಕೊಂಡು ವಿಷಯಗಳ ಕಡೆಗೆ ಹರಿದುಹೋಗುವ ಮನಸ್ಸನ್ನು ಮತ್ತು ಇಂದ್ರಿಗಳನ್ನು ತಡೆಗಟ್ಟಬೇಕು. ಸ್ವಪ್ನದಿಂದ ಎಚ್ಚೆತ್ತ ಬಳಿಕ ಕಂಡ ಸ್ವಪ್ನವು ಸುಳ್ಳೆಂದು ಭಾವಿಸುವಂತೆಯೇ ಜಗತ್ತಿನ ವಿಷಯಗಳೂ ಮಿಥ್ಯೆಯೆಂದು ತ್ಯಜಿಸಿ ನನ್ನ ಸಾಕ್ಷಾತ್ಕಾರವನ್ನು ಪಡೆಯಬೇಕು. ॥32॥
(ಶ್ಲೋಕ-33)
ಮೂಲಮ್
ಏತದಂತಃ ಸಮಾಮ್ನಾಯೋ ಯೋಗಃ ಸಾಂಖ್ಯಂ ಮನೀಷಿಣಾಮ್ ।
ತ್ಯಾಗಸ್ತಪೋ ದಮಃ ಸತ್ಯಂ ಸಮುದ್ರಾಂತಾ ಇವಾಪಗಾಃ ॥
ಅನುವಾದ
ಎಲ್ಲ ನದಿಗಳೂ ಹರಿದುಕೊಂಡು ಕೊನೆಗೆ ಸಮುದ್ರವನ್ನೇ ಸೇರುವಂತೆಯೇ ಮಹಾತ್ಮರು ಮಾಡುವ ವೇದಾಭ್ಯಾಸ, ಯೋಗ-ಸಾಧನೆ, ಆತ್ಮಾನಾತ್ಮ ವಿವೇಕ, ತ್ಯಾಗ, ತಪಸ್ಸು, ಇಂದ್ರಿಯ ಸಂಯಮ, ಸತ್ಯ ಮುಂತಾದ ಸಮಸ್ತ ಧರ್ಮಗಳು ನನ್ನ ಪ್ರಾಪ್ತಿಯಲ್ಲೇ ಪರಿ ಸಮಾಪ್ತವಾಗುತ್ತವೆ. ಎಲ್ಲದರ ನಿಜವಾದ ಫಲವು ನನ್ನ ಸಾಕ್ಷಾತ್ಕಾರವೇ ಆಗಿದೆ. ಏಕೆಂದರೆ, ಅವೆಲ್ಲವೂ ಮನಸ್ಸನ್ನು ನಿಗ್ರಹಿಸಿ ನನ್ನ ಕಡೆಗೆ ಒಯ್ಯುತ್ತವೆ. ॥33॥
(ಶ್ಲೋಕ-34)
ಮೂಲಮ್
ಯತ್ತ್ವಹಂ ಭವತೀನಾಂ ವೈ ದೂರೇ ವರ್ತೇ ಪ್ರಿಯೋ ದೃಶಾಮ್ ।
ಮನಸಃ ಸನ್ನಿಕರ್ಷಾರ್ಥಂ ಮದನುಧ್ಯಾನಕಾಮ್ಯಯಾ ॥
ಅನುವಾದ
ಗೋಪಿಯರೇ! ನಾನು ನಿಮ್ಮ ಕಣ್ಣುಗಳ ಧ್ರುವತಾರೆಯಾಗಿದ್ದೇನೆ. ನಿಮ್ಮ ಜೀವನ ಸರ್ವಸ್ವನಾಗಿರುವೆನು ಎಂಬುದರಲ್ಲಿ ಸಂದೇಹವೇ ಇಲ್ಲ. ನಾನು ಇಷ್ಟು ದೂರವಿದ್ದರೂ ನೀವು ನಿರಂತರವಾಗಿ ನನ್ನ ಧ್ಯಾನವನ್ನು ಮಾಡುತ್ತಿರುವಿರಿ. ನೀವು ಶರೀರದಿಂದ ದೂರವಿದ್ದರೂ ಮನಸ್ಸಿನಿಂದ ನನ್ನ ಸನ್ನಿಧಾನವನ್ನು ಅನುಭವಿಸುತ್ತಿರಿ. ನಿಮ್ಮ ಮನಸ್ಸನ್ನು ನನ್ನ ಬಳಿಯೇ ಇರಿಸಿರುವಿರಿ - ಇದೇ ನನ್ನ ಆಶಯವೂ ಆಗಿದೆ. ॥34॥
(ಶ್ಲೋಕ-35)
ಮೂಲಮ್
ಯಥಾ ದೂರಚರೇ ಪ್ರೇಷ್ಠೇ ಮನ ಆವಿಶ್ಯ ವರ್ತತೇ ।
ಸೀಣಾಂ ಚ ನ ತಥಾ ಚೇತಃ ಸನ್ನಿಕೃಷ್ಟೇಕ್ಷಿಗೋಚರೇ ॥
ಅನುವಾದ
ಸ್ತ್ರೀಯರ ಮತ್ತು ಬೇರೆ ಪ್ರೇಮಿಯರ ಮನಸ್ಸು ದೂರದಲ್ಲಿ ಇರುವ ಪ್ರಿಯತಮನ ಮೇಲೆ ನೆಲೆಸಿರುವಂತೆ, ಹತ್ತಿರವೇ ಯಾವಾಗಲೂ ಕಣ್ಣೆದುರಿಗೆ ಇರುವ ಪ್ರಿಯತಮನಲ್ಲಿ ನೆಲೆಸಿರುವುದಿಲ್ಲ. ॥35॥
(ಶ್ಲೋಕ-36)
ಮೂಲಮ್
ಮಯ್ಯಾವೇಶ್ಯ ಮನಃ ಕೃತ್ಸ್ನಂ ವಿಮುಕ್ತಾಶೇಷವೃತ್ತಿ ಯತ್ ।
ಅನುಸ್ಮರಂತ್ಯೋ ಮಾಂ ನಿತ್ಯಮಚಿರಾನ್ಮಾಮುಪೈಷ್ಯಥ ॥
ಅನುವಾದ
ನನ್ನಲ್ಲಿಯೇ ಮನಸ್ಸನ್ನು ನೆಲೆಗೊಳಿಸಿ, ಇತರ ಸಮಸ್ತ ವ್ಯವಹಾರಗಳಿಂದ ನಿವೃತ್ತರಾಗಿ ನಿತ್ಯನಿರಂತರವಾಗಿ ನನ್ನನ್ನು ಧ್ಯಾನಿಸುತ್ತಿದ್ದರೆ ಬಹಳ ಬೇಗನೇ ನನ್ನನ್ನು ಹೊಂದುವಿರಿ. ॥36॥
(ಶ್ಲೋಕ-37)
ಮೂಲಮ್
ಯಾ ಮಯಾ ಕ್ರೀಡತಾ ರಾತ್ರ್ಯಾಂ ವನೇಸ್ಮಿನ್ ವ್ರಜ ಆಸ್ಥಿತಾಃ ।
ಅಲಬ್ಧರಾಸಾಃ ಕಲ್ಯಾಣ್ಯೋ ಮಾಪುರ್ಮದ್ವೀರ್ಯಚಿಂತಯಾ ॥
ಅನುವಾದ
ಕಲ್ಯಾಣಿಯರೇ! ಶರತ್ಕಾಲದ ಹುಣ್ಣಿಮೆಯ ರಾತ್ರಿಯಲ್ಲಿ ನಾನು ನಿಮ್ಮೊಡನೆ ರಾಸಕ್ರೀಡೆಯನ್ನಾಡಿದೆನು. ಆ ಸಮಯದಲ್ಲಿ ಸ್ವಜನರಿಂದ ತಡೆಯಲ್ಪಟ್ಟು, ನನ್ನೊಡನೆ ರಾಸ-ವಿಹಾರದಲ್ಲಿ ಸಮ್ಮಿಳಿತವಾಗಲು ಸಾಧ್ಯವಾಗದಿರುವ ಗೋಪಿಯರು ಮನೆಯಲ್ಲೇ ಉಳಿದು ನನ್ನ ಲೀಲೆಗಳನ್ನು ಸ್ಮರಿಸುತ್ತಾ ನನ್ನನ್ನೇ ಸೇರಿಹೋದರು. ನಿಮಗೂ ನಾನು ಅವಶ್ಯವಾಗಿ ದೊರೆಯುವೆನು. ನಿರಾಶರಾಗುವ ಮಾತೇ ಇಲ್ಲ. ॥37॥
(ಶ್ಲೋಕ-38)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏವಂ ಪ್ರಿಯತಮಾದಿಷ್ಟಮಾಕರ್ಣ್ಯ ವ್ರಜಯೋಷಿತಃ ।
ತಾ ಊಚುರುದ್ಧವಂ ಪ್ರೀತಾಸ್ತತ್ಸಂದೇಶಾಗತಸ್ಮೃತೀಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ತಮ್ಮ ಪ್ರಿಯತಮನಾದ ಶ್ರೀಕೃಷ್ಣನ ಈ ಸಂದೇಶವನ್ನು ಕೇಳಿ ಗೋಪಿಯರಿಗೆ ಮಹದಾನಂದವಾಯಿತು. ಅವನ ಸಂದೇಶದಿಂದ ಅವರು ಶ್ರೀಕೃಷ್ಣನ ಸ್ವರೂಪವನ್ನು ಮತ್ತು ಒಂದೊಂದೇ ಲೀಲೆಗಳನ್ನು ಸ್ಮರಿಸಿಕೊಂಡು ಪ್ರೇಮಮಗ್ನರಾಗಿ ಉದ್ಧವನಲ್ಲಿ ಇಂತೆಂದರು. ॥38॥
(ಶ್ಲೋಕ-39)
ಮೂಲಮ್ (ವಾಚನಮ್)
ಗೋಪ್ಯ ಊಚುಃ
ಮೂಲಮ್
ದಿಷ್ಟ್ಯಾಹಿತೋ ಹತಃ ಕಂಸೋ ಯದೂನಾಂ ಸಾನುಗೋಘಕೃತ್ ।
ದಿಷ್ಟ್ಯಾಪ್ತೈರ್ಲಬ್ಧಸರ್ವಾರ್ಥೈಃ ಕುಶಲ್ಯಾಸ್ತೇಚ್ಯುತೋಧುನಾ ॥
ಅನುವಾದ
ಗೋಪಿಯರು ಹೇಳುತ್ತಾರೆ — ಓ ಉದ್ಧವನೇ! ಯದುವಂಶೀಯರಿಗೆ ಉಪಟಳವನ್ನು ಕೊಡುತ್ತಿದ್ದ ಪಾಪಿಯಾದ ಕಂಸನು ತನ್ನ ಅನುಯಾಯಿಗಳೊಂದಿಗೆ ಸತ್ತು ಹೋದುದು ಸೌಭಾಗ್ಯದ ಮತ್ತು ಆನಂದದ ವಿಷಯವಾಗಿದೆ. ಶ್ರೀಕೃಷ್ಣನ ನೆಂಟರಿಷ್ಟರ ಗುರುಹಿರಿಯರ ಮನೋರಥಗಳೆಲ್ಲ ಪೂರ್ಣಗೊಂಡು, ನಮ್ಮ ಪ್ರಿಯತಮ ಶ್ಯಾಮಸುಂದರನು ಅವರೊಂದಿಗೆ ಕುಶಲನಾಗಿದ್ದಾನೆ ಎಂಬುದನ್ನು ಕೇಳಿ ನಾವು ಸಂತೋಷಗೊಂಡಿದ್ದೇವೆ. ॥39॥
(ಶ್ಲೋಕ-40)
ಮೂಲಮ್
ಕಚ್ಚಿದ್ಗದಾಗ್ರಜಃ ಸೌಮ್ಯ ಕರೋತಿ ಪುರಯೋಷಿತಾಮ್ ।
ಪ್ರೀತಿಂ ನಃ ಸ್ನಿಗ್ಧಸವ್ರೀಡಹಾಸೋದಾರೇಕ್ಷಣಾರ್ಚಿತಃ ॥
ಅನುವಾದ
ಆದರೆ ಉದ್ಧವನೇ! ಅವನ ಕುರಿತಾದ ಒಂದು ಮಾತನ್ನು ಕೇಳಬಯಸುತ್ತೇವೆ. ನಾವು ಸ್ನೇಹಪೂರ್ಣವಾದ ನಾಚಿಕೆಯಿಂದ ಕೂಡಿದ ಮಂದಹಾಸದಿಂದಲೂ, ಉದಾರವಾದ ನೋಟದಿಂದಲೂ ಅವನ ಸೇವೆಯನ್ನು ಮಾಡುತ್ತಿದ್ದೆವು. ಅವನೂ ನಮ್ಮನ್ನು ಹಾಗೆಯೇ ಪ್ರೇಮಿಸುತ್ತಿದ್ದನು. ಇದೇ ರೀತಿಯಾಗಿ ಮಥುರೆಯ ಸ್ತ್ರೀಯರನ್ನು ಅವನು ಪ್ರೇಮಿಸುತ್ತಿರುವನೋ, ಇಲ್ಲವೋ? ॥40॥
(ಶ್ಲೋಕ-41)
ಮೂಲಮ್
ಕಥಂ ರತಿವಿಶೇಷಜ್ಞಃ ಪ್ರಿಯಶ್ಚ ವರಯೋಷಿತಾಮ್ ।
ನಾನುಬಧ್ಯೇತ ತದ್ವಾಕ್ಯೈರ್ವಿಭ್ರಮೈಶ್ಚಾನುಭಾಜಿತಃ ॥
ಅನುವಾದ
ಮತ್ತೊಬ್ಬ ಗೋಪಿಯು ಹೇಳುತ್ತಾಳೆ - ಗೆಳತಿಯರೇ! ನಮ್ಮ ಪ್ರಿಯತಮನಾದ ಶ್ಯಾಮಸುಂದರನು ಪ್ರೇಮದ ಕಲೆಯಲ್ಲಿ ವಿಶೇಷಜ್ಞನಾಗಿದ್ದಾನೆ. ಶ್ರೇಷ್ಠರಾದ ಸ್ತ್ರೀಯರೆಲ್ಲರೂ ಅವನನ್ನು ಪ್ರೀತಿಸುತ್ತಾರೆ. ಹೀಗಿರುವಾಗ ನಗರದ ಸ್ತ್ರೀಯರಾಡುವ ಮಧು ಮಧುರವಾದ ಮಾತುಗಳಿಂದಲೂ, ಹಾವ-ಭಾವಗಳಿಂದಲೂ ಅವನ ಕಡೆಗೆ ನೋಡುವಾಗ ಅವನು ಪ್ರೇಮಪಾಶದಲ್ಲಿ ಬಂಧಿಸದೆ ಇರುವನೇ? ॥41॥
(ಶ್ಲೋಕ-42)
ಮೂಲಮ್
ಅಪಿ ಸ್ಮರತಿ ನಃ ಸಾಧೋ ಗೋವಿಂದಃ ಪ್ರಸ್ತುತೇ ಕ್ವಚಿತ್ ।
ಗೋಷ್ಠೀ ಮಧ್ಯೇ ಪುರಸೀಣಾಂ ಗ್ರಾಮ್ಯಾಃ ಸ್ವೈರಕಥಾಂತರೇ ॥
ಅನುವಾದ
ಇನ್ನೊಬ್ಬ ಗೋಪಿಯು ಹೇಳಿದಳು-ಸಾಧು ಪುರುಷನೇ! ನಗರದ ನಾರಿಯರು ಗುಂಪು ಕಟ್ಟಿಕೊಂಡು ಮಾತನಾಡಿ ಕೊಂಡಿರುವಾಗ ನಮ್ಮ ಪ್ರಿಯತಮನು ಸ್ವಚ್ಛಂದವಾಗಿ ಕಾಮಿನಿಯರ ಮನಸ್ಸನ್ನು ತಣಿಸುವ ಮಾತನ್ನಾಡುವಾಗ ಗೋಕುಲದ ಗೊಲ್ಲತಿಯರಾದ ನಮ್ಮನ್ನು ಎಂದಾದರೂ ಸ್ಮರಿಸುವನೇ? ॥42॥
(ಶ್ಲೋಕ-43)
ಮೂಲಮ್
ತಾಃ ಕಿಂ ನಿಶಾಃ ಸ್ಮರತಿ ಯಾಸು ತದಾ ಪ್ರಿಯಾಭಿ-
ರ್ವೃಂದಾವನೇ ಕುಮುದಕುಂದ ಶಶಾಂಕರಮ್ಯೇ ।
ರೇಮೇ ಕ್ವಣಚ್ಚರಣನೂಪುರರಾಸಗೋಷ್ಠ್ಯಾ-
ಮಸ್ಮಾಭಿರೀಡಿತಮನೋಜ್ಞಕಥಃ ಕದಾಚಿತ್ ॥
ಅನುವಾದ
ಮಗದೊಬ್ಬ ಗೋಪಿಯು ಕೇಳುತ್ತಾಳೆ - ಉದ್ಧವನೇ! ಶ್ರೀಕೃಷ್ಣನು ಎಂದಾದರೂ ಆ ದಿವ್ಯರಾತ್ರಿಗಳನ್ನು ಸ್ಮರಿಸುವನೋ? ವಿಕಸಿತವಾದ ಬಿಳಿಯ ನೈದಿಲೆಗಳಿಂದಲೂ, ಮಲ್ಲಿಗೆ ಹೂವುಗಳಿಂದಲೂ, ಶರತ್ಕಾಲದ ಬೆಳದಿಂಗಳಿಂದಲೂ ವ್ಯಾಪ್ತವಾದ ವೃಂದಾವನದಲ್ಲಿ ಆ ರಾತ್ರಿಗಳಲ್ಲಿ ನಮ್ಮ ಪ್ರಿಯತಮನು ರಾಸಮಂಡಲದಲ್ಲಿ ನಮ್ಮೊಡನೆ ನೃತ್ಯವಾಡುತ್ತಿದ್ದನು. ನಿಶ್ಚಯವಾಗಿಯೂ ಎಷ್ಟು ಸುಂದರವಾದದ್ದು ಆ ರಾಸಲೀಲೆ! ನಂದಕಿಶೋರನ ಜೊತೆಯಲ್ಲಿ ನಾವು ನೃತ್ಯವಾಡುವಾಗ ನಮ್ಮ ಕಾಲಂದುಗೆಗಳು ಝಣ-ಝಣಿಸುತ್ತಿದ್ದವು. ನಾವೆಲ್ಲರೂ ಸೇರಿ ಅವನ ಲೀಲಾಪ್ರಸಂಗಗಳನ್ನು ಹಾಡುತ್ತಿದ್ದೆವು. ಹೀಗೆ ಅವನು ನಮ್ಮೊಡನೆ ನಾನಾ ಪ್ರಕಾರದಿಂದ ವಿಹರಿಸುತ್ತಿದ್ದನು. ಅಂತಹ ರಾತ್ರಿಗಳನ್ನು ನಾವು ಮರೆಯಲಾರೆವು. ಅವನಿಗೆ ಅದರ ಸ್ಮರಣೆ ಇದೆಯೇ? ॥43॥
(ಶ್ಲೋಕ-44)
ಮೂಲಮ್
ಅಪ್ಯೇಷ್ಯತೀಹ ದಾಶಾರ್ಹಸ್ತಪ್ತಾಃ ಸ್ವಕೃತಯಾ ಶುಚಾ ।
ಸಂಜೀವಯನ್ನು ನೋ ಗಾತ್ರೈರ್ಯಥೇಂದ್ರೋ ವನಮಂಬುದೈಃ ॥
ಅನುವಾದ
ಇನ್ನೊಬ್ಬ ಗೋಪಿಯು ಕೇಳಿದಳು-ಉದ್ಧವನೇ! ನಾವೆಲ್ಲರೂ ಅವನ ವಿರಹಾಗ್ನಿಯಿಂದ ಬೇಯುತ್ತಿದ್ದೇವೆ. ದೇವೆಂದ್ರನು ಮಳೆಯನ್ನು ಸುರಿಸಿ ವನವನ್ನು ಹಚ್ಚ-ಹಸಿರಾಗಿಸುವಂತೆ ಶ್ರೀಕೃಷ್ಣನು ಎಂದಾದರೂ ತನ್ನ ಕರಸ್ಪರ್ಶಾದಿಗಳಿಂದ ನಮಗೂ ಜೀವನದಾನ ಮಾಡಲು ಇಲ್ಲಿಗೆ ಬರುವನೇ? ॥44॥
(ಶ್ಲೋಕ-45)
ಮೂಲಮ್
ಕಸ್ಮಾತ್ ಕೃಷ್ಣ ಇಹಾಯಾತಿ ಪ್ರಾಪ್ತರಾಜ್ಯೋ ಹತಾಹಿತಃ ।
ನರೇಂದ್ರಕನ್ಯಾ ಉದ್ವಾಹ್ಯ ಪ್ರೀತಃ ಸರ್ವಸುಹೃದ್ವ ತಃ ॥
ಅನುವಾದ
ಅಷ್ಟೊತ್ತಿಗೆ ಓರ್ವ ಗೋಪಿಯು ಹೇಳಿದಳು - ಎಲೈ ಸಖಿಯರೇ! ಈಗಲಾದರೋ ಅವನು ಶತ್ರುಗಳನ್ನು ಸಂಹರಿಸಿ ರಾಜ್ಯವನ್ನು ಪಡೆದಿರುವನು. ರಾಜಕುಮಾರಿಯನ್ನು ವಿವಾಹವಾಗಿ, ಸಮಸ್ತ ಸಹೃದಯರಿಂದಲೂ ಪರಿವೃತನಾಗಿ ನಮ್ಮ ಪ್ರಿಯತಮನು ಆನಂದದಿಂದ ಇರುವನು. ನಮ್ಮಂತಹ ಗೊಲ್ಲತಿಯರ ಬಳಿಗೆ ಅವನೇಕೆ ಬರುವನು? ॥45॥
(ಶ್ಲೋಕ-46)
ಮೂಲಮ್
ಕಿಮಸ್ಮಾಭಿರ್ವನೌಕೋಭಿರನ್ಯಾಭಿರ್ವಾ ಮಹಾತ್ಮನಃ ।
ಶ್ರೀಪತೇರಾಪ್ತಕಾಮಸ್ಯ ಕ್ರಿಯೇತಾರ್ಥಃ ಕೃತಾತ್ಮನಃ ॥
ಅನುವಾದ
ಮತ್ತೊಬ್ಬಳು ಹೇಳಿದಳು-ಸಖಿಯರೇ! ಹಾಗೇನಿಲ್ಲ. ಮಹಾತ್ಮನಾದ ಶ್ರೀಕೃಷ್ಣನು ಸಾಕ್ಷಾತ್ ಲಕ್ಷ್ಮೀಪತಿಯಾಗಿದ್ದಾನೆ. ಆಪ್ತಕಾಮನವನು. ಕೃತ್ಯಕೃತ್ಯನು. ಗೋಕುಲದ ಗೊಲ್ಲತಿಯರಾದ ನಮ್ಮಿಂದ ಅಥವಾ ಇತರ ರಾಜಕುಮಾರಿಯರಿಂದ ಅವನಿಗೇನು ಆಗಬೇಕು? ನಾವಿಲ್ಲದೆ ಅವನ ಯಾವ ಕಾರ್ಯ ಉಳಿದಿದೆ? ॥46॥
(ಶ್ಲೋಕ-47)
ಮೂಲಮ್
ಪರಂ ಸೌಖ್ಯಂ ಹಿ ನೈರಾಶ್ಯಂ ಸ್ವೈರಿಣ್ಯಪ್ಯಾಹ ಪಿಂಗಲಾ ।
ತಜ್ಜಾನತೀನಾಂ ನಃ ಕೃಷ್ಣೇ ತಥಾಪ್ಯಾಶಾ ದುರತ್ಯಯಾ ॥
ಅನುವಾದ
ನೋಡಿರಿ! ಪಿಂಗಳೆ ಎಂಬ ವೇಶ್ಯೆಯು - ‘ಪ್ರಪಂಚದಲ್ಲಿ ಯಾವುದರ ಮೇಲೆಯೂ ಆಶೆಯನ್ನು ಇಟ್ಟುಕೊಳ್ಳದಿರುವುದೇ ಪರಮ ಸುಖವಾದುದು ಎಂದು ಎಷ್ಟು ಸರಿಯಾಗಿ ಹೇಳಿರುವಳು. ಇದನ್ನು ನಾವು ತಿಳಿದಿದ್ದರೂ ಭಗವಾನ್ ಶ್ರೀಕೃಷ್ಣನು ಮರಳಿ ಬರುವ ಆಸೆಯನ್ನು ಬಿಡುವುದರಲ್ಲಿ ಅಸಮರ್ಥರಾಗಿದ್ದೇವೆ. ಅವನ ಶುಭಾಗಮನದ ಆಸೆಯಿಂದಲೇ ನಾವು ಬದುಕಿದ್ದೇವಲ್ಲ ॥47॥
(ಶ್ಲೋಕ-48)
ಮೂಲಮ್
ಕ ಉತ್ಸಹೇತ ಸಂತ್ಯಕ್ತುಮುತ್ತಮಶ್ಲೋಕಸಂವಿದಮ್ ।
ಅನಿಚ್ಛತೋಪಿ ಯಸ್ಯ ಶ್ರೀರಂಗಾನ್ನ ಚ್ಯವತೇ ಕ್ವಚಿತ್ ॥
ಅನುವಾದ
ದೊಡ್ಡ-ದೊಡ್ಡ ಮಹಾತ್ಮರು ಸದಾಕಾಲ ಕೀರ್ತಿಸುವಂತಹ ನಮ್ಮ ಪ್ರಿಯಕರ ಶ್ಯಾಮಸುಂದರನು ನಮ್ಮೊಂದಿಗೆ ಏಕಾಂತದಲ್ಲಿ ಎಂತೆಂತಹ ಮಧುರವಾದ ಪ್ರೇಮದ ಮಾತುಗಳನ್ನಾಡಿರುವನು. ಅವನ್ನು ಹೇಗೆ ತಾನೆ ಮರೆಯಲು ಸಾಧ್ಯ? ಅವನಿಗೆ ಇಚ್ಛೆಯಿಲ್ಲದಿದ್ದರೂ ಲಕ್ಷ್ಮೀದೇವಿಯು ಸದಾಕಾಲ ಅವರ ಚರಣಕಮಲಗಳಿಗೆ ಅಂಟಿಕೊಂಡಂತೆ ಇರುತ್ತಾಳೆ. ಅವನ ವಕ್ಷಃಸ್ಥಳವನ್ನು ಕ್ಷಣಕಾಲವೂ ಬಿಟ್ಟಗಲುವುದೇ ಇಲ್ಲ. ॥48॥
(ಶ್ಲೋಕ-49)
ಮೂಲಮ್
ಸರಿಚ್ಛೈಲವನೋದ್ದೇಶಾ ಗಾವೋ ವೇಣುರವಾ ಇಮೇ ।
ಸಂಕರ್ಷಣಸಹಾಯೇನ ಕೃಷ್ಣೇನಾಚರಿತಾಃ ಪ್ರಭೋ ॥
ಅನುವಾದ
ಉದ್ಧವನೇ! ಅವನು ಜಲಕ್ರೀಡೆಯಾಡಿದ ಅದೋ ಈ ಯಮುನೆಯನ್ನು ನೋಡು. ಈ ಪರ್ವತವನ್ನು ನೋಡು, ಅದರ ಶಿಖರವನ್ನೇರಿ ಅವನು ಕೊಳಲನ್ನು ನುಡಿಸುತ್ತಿದ್ದನು. ಇದೇ ವನದಲ್ಲಿ ಅವನು ರಾತ್ರಿಯಲ್ಲಿ ರಾಸಕ್ರೀಡೆಯಾಡಿದುದು. ಅವನು ಮೇಯಿಸುತ್ತಿದ್ದ ಬೆಳಿಗ್ಗೆ ಸಾಯಂಕಾಲ ನಾವು ನೋಡುತ್ತಾ ಇರುವ ಈ ಗೋವುಗಳನ್ನು ನೋಡು. ಅವನು ತನ್ನ ಅಧರಕ್ಕೆ ಅಂಟಿಸಿಕೊಂಡು ನುಡಿಸುತ್ತಿದ್ದ ಆ ಮುರಳಿಯ ಮಧುರ ಗಾನವು ಇನ್ನೂ ನಮ್ಮ ಕಿವಿಗಳಲ್ಲಿ ಪ್ರತಿಧ್ವನಿಸುತ್ತಿದೆ. ಬಲರಾಮನೊಂದಿಗೆ ಇವೆಲ್ಲವನ್ನೂ ಅವನು ಸೇವಿಸುತ್ತಿದ್ದನು. ॥49॥
ಮೂಲಮ್
(ಶ್ಲೋಕ-50)
ಪುನಃ ಪುನಃ ಸ್ಮಾರಯಂತಿ ನಂದಗೋಪಸುತಂ ಬತ ।
ಶ್ರೀನಿಕೇತೈಸ್ತತ್ಪದಕೈರ್ವಿಸ್ಮರ್ತುಂ ನೈವ ಶಕ್ನುಮಃ ॥
ಅನುವಾದ
ಉದ್ಧವನೇ! ಎಷ್ಟೊಂದು ಹೇಳಲಿ? ಇಲ್ಲಿಯ ಪ್ರತಿಯೊಂದು ಪ್ರದೇಶವೂ, ಪ್ರತಿಯೊಂದು ಧೂಳಿನ ಕಣವು ಲಕ್ಷ್ಮೀದೇವಿಗೆ ನೆಲೆಮನೆಯಾದ ಅವನ ಪರಮ ಸುಂದರ ಚರಣ ಚಿಹ್ನೆಗಳಿಂದ ಅಂಕಿತವಾಗಿವೆ. ಇವನ್ನು ನೋಡಿದಾಗಲೆಲ್ಲ, ಕೇಳಿದಾಗಲೆಲ್ಲ ಇವು ನಮ್ಮ ಪ್ರಿಯಕರ ಶ್ಯಾಮಸುಂದರ ನಂದನಂದನನನ್ನು ನಮ್ಮ ಕಣ್ಮುಂದೆ ತಂದು ನಿಲ್ಲಿಸುವುದು. ಉದ್ಧವಾ! ನಾವು ಇದನ್ನು ಹೇಗೆ ಮರೆಯಬಲ್ಲೆವು? ಸತ್ತರೂ ಮರೆಯಲಾರೆವು. ॥50॥
(ಶ್ಲೋಕ-51)
ಮೂಲಮ್
ಗತ್ಯಾ ಲಲಿತಯೋದಾರಹಾಸಲೀಲಾವಲೋಕನೈಃ ।
ಮಾಧ್ವ್ಯಾ ಗಿರಾ ಹೃತಧಿಯಃ ಕಥಂ ತಂ ವಿಸ್ಮರಾಮಹೇ ॥
ಅನುವಾದ
ಉದ್ಧವನೇ! ನಮ್ಮ ಇನಿಯನ ಹಂಸದ ನಡಿಗೆಯಂತಹ ಸುಂದರ ನಡಿಗೆ, ಮನೋಹರವಾದ ಕಿರುನಗೆ, ಚೇತೋಹಾರಿಯಾದ ಕುಡಿನೋಟ, ಮಧುರಮಯ ಮಾತುಗಳು, ಎಲ್ಲಕ್ಕಿಂತ ಹೆಚ್ಚಾಗಿ ಕೊಳಲಿನ ಕರೆ-ಇವುಗಳಿಂದ ನಮ್ಮ ಮನಸ್ಸನ್ನೇ ಅಪಹರಿಸಿಬಿಟ್ಟಿರುವನು. ನಮ್ಮ ಮನಸ್ಸು ನಮ್ಮವಶದಲ್ಲಿಲ್ಲ; ಅವನಲ್ಲೇ ಸೇರಿಹೋಗಿದೆ. ಹಾಗಿರುವಾಗ ಅವನನ್ನು ಮರೆಯಲು ಸಾಧ್ಯವೇ? ॥51॥
(ಶ್ಲೋಕ-52)
ಮೂಲಮ್
ಹೇ ನಾಥ ಹೇ ರಮಾನಾಥ ವ್ರಜನಾಥಾರ್ತಿನಾಶನ ।
ಮಗ್ನಮುದ್ಧರ ಗೋವಿಂದ ಗೋಕುಲಂ ವೃಜಿನಾರ್ಣವಾತ್ ॥
ಅನುವಾದ
ನಮ್ಮೆಲ್ಲರಿಗೂ ಏಕೈಕಸ್ವಾಮಿಯಾಗಿರತಕ್ಕವನೇ! ಪ್ರಾಣನಾಥನೆ! ಲಕ್ಷ್ಮೀರಮಣನೇ! ಗೋಕುಲನಾಥನೇ! ತಂದೆ-ತಾಯಿಯರಿಂದಲೂ, ಸುಹೃದಯರಿಂದಲೂ, ನಮ್ಮಂತಹ ವಿರಹಿಣಿಯರಿಂದಲೂ, ನಿನಗೆ ಅತಿ ಪ್ರಿಯವಾದ ಗೋವುಗಳಿಂದಲೂ ಕೂಡಿದ ಗೋಕುಲವು ಈಗ ನಿನ್ನನ್ನು ಕಾಣದೆ ದುಃಖಸಾಗರದಲ್ಲಿ ಮುಳುಗಿದೆ. ಅದನ್ನು ರಕ್ಷಿಸು. ನಮ್ಮನ್ನು ಕಾಪಾಡು. ॥52॥
(ಶ್ಲೋಕ-53)
ಮೂಲಮ್
ಶ್ರೀಶುಕ ಉವಾಚ
ತತಸ್ತಾಃ ಕೃಷ್ಣಸಂದೇಶೈರ್ವ್ಯಪೇತವಿರಹಜ್ವರಾಃ ।
ಉದ್ಧವಂ ಪೂಜಯಾಂಚಕ್ರುರ್ಜ್ಞಾತ್ವಾತ್ಮಾನಮಧೋಕ್ಷಜಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಭಗವಾನ್ ಶ್ರೀಕೃಷ್ಣನ ಪ್ರಿಯಸಂದೇಶವನ್ನು ಕೇಳಿದ ಗೋಪಿಯರ ವಿರಹವ್ಯಥೆಯು ಶಾಂತವಾಯಿತು. ಅವರು ಇಂದ್ರಿಯಾತೀತ ಭಗವಾನ್ ಶ್ರೀಕೃಷ್ಣನನ್ನು ತಮ್ಮ ಆತ್ಮಸ್ವರೂಪನೆಂದು ತಿಳಿದುಕೊಂಡರು. ಅತ್ಯಂತ ಪ್ರೇಮಾದರಗಳಿಂದ ಉದ್ಧವನನ್ನು ಸತ್ಕರಿಸತೊಡಗಿದರು. ॥53॥
(ಶ್ಲೋಕ-54)
ಮೂಲಮ್
ಉವಾಸ ಕತಿಚಿನ್ಮಾಸಾನ್ ಗೋಪೀನಾಂ ವಿನುದನ್ ಶುಚಃ ।
ಕೃಷ್ಣಲೀಲಾಕಥಾಂ ಗಾಯನ್ ರಮಯಾಮಾಸ ಗೋಕುಲಮ್ ॥
ಅನುವಾದ
ಉದ್ಧವನು ಗೋಪಿಯರ ವಿರಹ ವ್ಯಥೆಯನ್ನು ಕಳೆಯಲು ಕೆಲವು ತಿಂಗಳು ಗೋಕುಲದಲ್ಲೇ ಇದ್ದುಬಿಟ್ಟನು. ಅವನು ಭಗವಂತನ ಅನಂತ ಲೀಲೆಗಳನ್ನು ಮತ್ತು ಅವನ ಮಾತುಗಳನ್ನು ತಿಳಿಸುತ್ತಾ ವ್ರಜವಾಸಿಗಳನ್ನು ಆನಂದಪಡಿಸುತ್ತಿದ್ದನು. ॥54॥
(ಶ್ಲೋಕ-55)
ಮೂಲಮ್
ಯಾವಂತ್ಯಹಾನಿ ನಂದಸ್ಯ ವ್ರಜೇವಾತ್ಸೀತ್ಸ ಉದ್ಧವಃ ।
ವ್ರಜೌಕಸಾಂ ಕ್ಷಣಪ್ರಾಯಾಣ್ಯಾಸನ್ ಕೃಷ್ಣಸ್ಯ ವಾರ್ತಯಾ ॥
ಅನುವಾದ
ನಂದಗೋಕುಲದಲ್ಲಿ ಉದ್ಧವನು ಇರುವಷ್ಟು ದಿನವೂ ಭಗವಾನ್ ಶ್ರೀಕೃಷ್ಣನ ಲೀಲಾವಿನೋದದ ಚರ್ಚೆಯೇ ನಡೆಯುತ್ತಿದ್ದು, ವ್ರಜವಾಸಿಗಳಿಗೆ ತಿಂಗಳುಗಳು ಒಂದು ಕ್ಷಣದಂತೆ ಭಾಸವಾಯಿತು. ॥55॥
(ಶ್ಲೋಕ-56)
ಮೂಲಮ್
ಸರಿದ್ವನಗಿರಿದ್ರೋಣೀರ್ವೀಕ್ಷನ್ ಕುಸುಮಿತಾನ್ ದ್ರುಮಾನ್ ।
ಕೃಷ್ಣಂ ಸಂಸ್ಮಾರಯನ್ ರೇಮೇ ಹರಿದಾಸೋ ವ್ರಜೌಕಸಾಮ್ ॥
ಅನುವಾದ
ಭಗವಂತನ ಪರಮಪ್ರೇಮಿ ಉದ್ಧವನು ಕೆಲವೊಮ್ಮೆ ಯಮುನಾತೀರಕ್ಕೆ ಹೋಗುತ್ತಾನೆ, ಕೆಲವೊಮ್ಮೆ ವೃಂದಾವನದಲ್ಲಿ ಸಂಚರಿಸುತ್ತಾನೆ, ಕೆಲವೊಮ್ಮೆ ಗೋವರ್ಧನದ ತಪ್ಪಲಿನಲ್ಲಿ ಒಡಾಡುವನು. ಕೆಲವೊಮ್ಮೆ ಬಣ್ಣ-ಬಣ್ಣದ ಹೂವುಗಳಿಂದ ಕಂಗೊಳಿಸುವ ವೃಕ್ಷಗಳನ್ನು ನೋಡಿ ಮೈಮರೆಯುವನು. ಆಯಾ ಸ್ಥಳಗಳನ್ನು ತೋರಿಸುತ್ತಾ ಇಲ್ಲಿ ಶ್ರೀಕೃಷ್ಣನು ಯಾವ ಲೀಲೆಯನ್ನಾಡಿದನು? ಎಂದು ವ್ರಜವಾಸಿಗಳಲ್ಲಿ ಕೇಳುತ್ತಾ ಭಗವಂತನ ಲೀಲೆಗಳಲ್ಲಿ ಅವರನ್ನು ತನ್ಮಯಗೊಳಿಸುತ್ತಿದ್ದನು. ॥56॥
(ಶ್ಲೋಕ-57)
ಮೂಲಮ್
ದೃಷ್ಟ್ವೈವಮಾದಿ ಗೋಪೀನಾಂ ಕೃಷ್ಣಾವೇಶಾತ್ಮವಿಕ್ಲವಮ್ ।
ಉದ್ಧವಃ ಪರಮಪ್ರೀತಸ್ತಾ ನಮಸ್ಯನ್ನಿದಂ ಜಗೌ ॥
ಅನುವಾದ
ಉದ್ಧವನು ವ್ರಜದಲ್ಲಿ ಇರುತ್ತಾ ಗೋಪಿಯರ ಇಂತಹ ಪ್ರೇಮ ವಿಹ್ವಲತೆಯನ್ನು ಹಾಗೂ ಬಹಳಷ್ಟು ಪ್ರೇಮ ಚೇಷ್ಟೆಗಳನ್ನು ನೋಡಿದನು. ಅವರಿಗೆ ಶ್ರೀಕೃಷ್ಣನಲ್ಲಿ ಇರುವ ಈ ಪ್ರಕಾರದ ತನ್ಮಯತೆಯನ್ನು ನೋಡಿ ಅವನು ಪ್ರೇಮಾನಂದದಲ್ಲಿ ಮುಳುಗಿಹೋಗಿ ಪ್ರೇಮಮೂರ್ತಿಗಳಾದ ಗೋಪಿಯರನ್ನು ನಮಸ್ಕರಿಸಿ ಈ ಪ್ರಕಾರ ಹಾಡತೊಡಗಿದನು. ॥57॥
(ಶ್ಲೋಕ-58)
ಮೂಲಮ್
ಏತಾಃ ಪರಂ ತನುಭೃತೋ ಭುವಿ ಗೋಪವಧ್ವೋ
ಗೋವಿಂದ ಏವ ನಿಖಿಲಾತ್ಮನಿ ರೂಢಭಾವಾಃ ।
ವಾಂಛಂತಿ ಯದ್ಭವಭಿಯೋ ಮುನಯೋ ವಯಂ ಚ
ಕಿಂ ಬ್ರಹ್ಮಜನ್ಮಭಿರನಂತ ಕಥಾರಸಸ್ಯ ॥
ಅನುವಾದ
ಆಹಾ! ‘‘ಈ ಭೂಮಿಯಲ್ಲಿ ಕೇವಲ ಈ ಗೋಪಿಯರ ಶರೀರಧಾರಣೆಯೇ ಸಾರ್ಥಕ್ಯವನ್ನು ಹೊಂದಿದೆ. ಏಕೆಂದರೆ ಇವರು ಸರ್ವಾತ್ಮನಾದ ಭಗವಾನ್ ಶ್ರೀಕೃಷ್ಣನ ಪರಮಪ್ರೇಮಮಯ ದಿವ್ಯಭಾವದಲ್ಲಿ ನೆಲೆಸಿದ್ದಾರೆ. ಸಂಸಾರಕ್ಕೆ ಭಯಪಡುವ ಮುನಿಗಳು ಹಾಗೂ ಭಕ್ತರಾದ ನಾವು ಇದೇ ಸ್ಥಿತಿಯನ್ನು ಬಯಸುತ್ತೇವೆ. ಆದರೆ ಅಂತಹ ಅನುಪಮವಾದ ಮತ್ತು ರೂಢಮೂಲವಾದ ಪ್ರೇಮವು ಭಗವಂತನಲ್ಲಿ ನಮಗಿನ್ನೂ ಉಂಟಾಗಲಿಲ್ಲ. ಅನಂತನ ಕಥಾರಸವನ್ನು ನಿರಂತರವಾಗಿ ಪಾನಮಾಡುವ ಪ್ರೇಮಿ ಭಕ್ತರಿಗೆ ಬ್ರಾಹ್ಮಣರ ಜನ್ಮದಿಂದಾಲೀ, ಬ್ರಹ್ಮನ ಜನ್ಮದಿಂದಾಗಲೀ, ಏನಾಗಬೇಕಾಗಿದೆ? ॥58॥
(ಶ್ಲೋಕ-59)
ಮೂಲಮ್
ಕ್ವೇಮಾಃ ಸಿಯೋ ವನಚರೀರ್ವ್ಯಭಿಚಾರದುಷ್ಟಾಃ
ಕೃಷ್ಣೇ ಕ್ವ ಚೈಷ ಪರಮಾತ್ಮನಿ ರೂಢಭಾವಃ ।
ನನ್ವೀಶ್ವರೋನುಭಜತೋವಿದುಷೋಪಿ ಸಾಕ್ಷಾ-
ಚ್ಛ್ರೇಯಸ್ತನೋತ್ಯಗದರಾಜ ಇವೋಪಯುಕ್ತಃ ॥
ಅನುವಾದ
ವನಚರಿಯರೂ, ಆಚಾರ, ಜ್ಞಾನಹೀನರೂ ಮತ್ತು ಜಾತಿಯಿಂದ ಹೀನರೂ ಆದ ಈ ಗೊಲ್ಲತಿಯರೆಲ್ಲಿ! ಪರಮಾತ್ಮನಾದ ಶ್ರೀಕೃಷ್ಣನಲ್ಲಿ ಅವರಿಗಿರುವ ಗಾಢವಾದ ಪ್ರೇಮಭಾವವೆಲ್ಲಿ! ಆಹಾ! ಧನ್ಯ! ಧನ್ಯ! ಅಮೃತವನ್ನು ತಿಳಿಯದೆ ಕುಡಿದರೂ ಅದು ಅಮರನನ್ನಾಗಿಸುವಂತೆ, ದಯಾಮಯನಾದ ಭಗವಂತನು ತನ್ನನ್ನೇ ಅನನ್ಯ ಶರಣಾಗಿ ಭಜಿಸುವ ಮೂಢಜನರಿಗೂ ಶ್ರೇಯಸ್ಸನ್ನುಂಟು ಮಾಡುವನು. ॥59॥
(ಶ್ಲೋಕ-60)
ಮೂಲಮ್
ನಾಯಂ ಶ್ರಿಯೋಂಗ ಉ ನಿತಾಂತರತೇಃ ಪ್ರಸಾದಃ
ಸ್ವರ್ಯೋೀಷಿತಾಂ ನಲಿನಗಂಧರುಚಾಂ ಕುತೋನ್ಯಾಃ ।
ರಾಸೋತ್ಸವೇಸ್ಯ ಭುಜದಂಡಗೃಹೀತಕಂಠ-
ಲಬ್ಧಾಶಿಷಾಂ ಯ ಉದಗಾದ್ವ್ರಜವಲ್ಲವೀನಾಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ರಾಸೋತ್ಸವದ ಸಂದರ್ಭದಲ್ಲಿ ಗೋಕುಲದ ಗೊಲ್ಲತಿಯರ ಕಂಬುಕಂಠವನ್ನು ನೀಳವಾದ ತೋಳುಗಳಿಂದ ಅಪ್ಪಿಕೊಂಡು ಗೋಪಿಯರಿಗೆ ಪರಮಾನುಗ್ರಹವನ್ನು ಕರುಣಿಸಿದ ಭಗವಂತನ ಇಂತಹ ದಿವ್ಯಾಲಿಂಗನದ ವರಪ್ರಸಾದವು ಅವನ ವಕ್ಷಃಸ್ಥಳದಲ್ಲಿಯೇ ನಿರಂತರವಾಗಿ ವಾಸಿಸುತ್ತಿರುವ ಏಕಾಂತ ಪ್ರೇಮಿಯಾದ ಲಕ್ಷ್ಮೀದೇವಿಗಾಗಲೀ, ಪದ್ಮಗಂಧೆಯರೂ, ಪದ್ಮವರ್ಣಿಯರೂ ಆದ ದೇವಾಂಗನೆಯರಿಗೂ ಲಭಿಸಲಿಲ್ಲ. ಹೀಗಿರುವಾಗ ಉಳಿದ ಸಾಧಾರಣ ಸ್ತ್ರೀಯರಿಗೆ ಇಂತಹ ಪರಮಾನುಗ್ರಹವು ಹೇಗೆ ತಾನೇ ಲಭಿಸೀತು? ॥60॥
(ಶ್ಲೋಕ-61)
ಮೂಲಮ್
ಆಸಾಮಹೋ ಚರಣರೇಣುಜುಷಾಮಹಂ ಸ್ಯಾಂ
ವೃಂದಾವನೇ ಕಿಮಪಿ ಗುಲ್ಮಲತೌಷಧೀನಾಮ್ ।
ಯಾ ದುಸ್ತ್ಯಜಂ ಸ್ವಜನಮಾರ್ಯಪಥಂ ಚ ಹಿತ್ವಾ
ಭೇಜುರ್ಮುಕುಂದಪದವೀಂ ಶ್ರುತಿಭಿರ್ವಿಮೃಗ್ಯಾಮ್ ॥
ಅನುವಾದ
ಪರಿತ್ಯಜಿಸಲಾಗದ ಪತಿ-ಸುತ-ಬಂಧುಗಳನ್ನು, ಪಾತಿವ್ರತ್ಯವೇ ಮೊದಲಾದ ಆರ್ಯಧರ್ಮಗಳನ್ನು ಪರಿತ್ಯಜಿಸಿ, ಶ್ರುತಿ-ಸ್ಮೃತಿಗಳಿಂದ ಹುಡುಕಲ್ಪಡುವ ಮುಕುಂದನ ಪರಮಪದವನ್ನು ಸೇರಿಬಿಟ್ಟಿರುವ ಗೋಪಿಯರ ಪಾದಧೂಳಿಯನ್ನು ಸತತವಾಗಿ ಸೇವಿಸುವ ವೃಂದಾವನದ ಯಾವುದಾದರೂ ಪೊದೆಗಳ ಅಥವಾ ಮರ-ಗಿಡ-ಬಳ್ಳಿಗಳ ರೂಪದಲ್ಲಿ ನಾನು ಹುಟ್ಟುವಂತಾಗಲೀ. ಭಗವಂತನ ಪರಮಭಕ್ತೆಯರಾದ ಗೋಪಿಯರ ಪಾದಧೂಳಿಯ ಸತತ ಸೇವನೆಯಿಂದಲಾದರೂ ನಾನು ಧನ್ಯನಾಗಿ ಹೋಗುವೆನು. ॥61॥
(ಶ್ಲೋಕ-62)
ಮೂಲಮ್
ಯಾ ವೈ ಶ್ರಿಯಾರ್ಚಿತಮಜಾದಿಭಿರಾಪ್ತಕಾಮೈರ್ಯೋಗೇಶ್ವರೈರಪಿ ಯದಾತ್ಮನಿ ರಾಸಗೋಷ್ಠ್ಯಾಮ್ ।
ಕೃಷ್ಣಸ್ಯ ತದ್ಭಗವತಶ್ಚರಣಾರವಿಂದಂ ನ್ಯಸ್ತಂ ಸ್ತನೇಷು ವಿಜಹುಃ ಪರಿರಭ್ಯ ತಾಪಮ್ ॥
ಅನುವಾದ
ಭಗವತಿಯಾದ ಲಕ್ಷ್ಮಿಯಿಂದ ಅರ್ಚಿಸಲ್ಪಡುವ ಯಾವ ಪಾದಾರವಿಂದಗಳನ್ನು ಪೂರ್ಣಕಾಮರಾದ ಬ್ರಹ್ಮಾದಿಗಳೂ ಮತ್ತು ಯೋಗೇಶ್ವರರೂ ಕೇವಲ ತಮ್ಮ ಹೃದಯದಲ್ಲಿ ಧ್ಯಾನಮಾಡುವರೋ - ಅಂತಹ ದಿವ್ಯವಾದ ಚರಣಾರವಿಂದಗಳನ್ನು ರಾಸಕ್ರೀಡೆಯ ಸಮಯದಲ್ಲಿ ಗೋಪಿಯರು ತಮ್ಮ ವಕ್ಷಃಸ್ಥಳದಲ್ಲಿರಿಸಿಕೊಂಡು, ಅದನ್ನೇ ಆಲಿಂಗಿಸಿಕೊಂಡು ವಿರಹತಾಪವನ್ನು ಕಳೆದುಕೊಂಡರು. ॥62॥
(ಶ್ಲೋಕ-63)
ಮೂಲಮ್
ವಂದೇ ನಂದವ್ರಜಸೀಣಾಂ ಪಾದರೇಣುಮಭೀಕ್ಷ್ಣಶಃ ।
ಯಾಸಾಂ ಹರಿಕಥೋದ್ಗೀತಂ ಪುನಾತಿ ಭುವನತ್ರಯಮ್ ॥
ಅನುವಾದ
ನಂದಗೋಕುಲದಲ್ಲಿರುವ ಗೋಪಿಯರ ಪಾದಧೂಳಿಗೆ ನಾನು ಪುನಃ ಪುನಃ ನಮಸ್ಕರಿಸುತ್ತೇನೆ. ಅದನ್ನು ಶಿರದಲ್ಲಿ ಧರಿಸಿಕೊಳ್ಳುತ್ತೇನೆ. ಆ ಗೋಪಿಯರು ತನ್ಮಯರಾಗಿ ಹಾಡುವ ಶ್ರೀಕೃಷ್ಣನ ಲೀಲಾಪ್ರಸಂಗದ ಗೀತೆಗಳು ಮೂರು ಲೋಕಗಳನ್ನು ಪಾವನಗೊಳಿಸುವಂತಹುದು. ॥63॥
(ಶ್ಲೋಕ-64)
ಮೂಲಮ್
ಶ್ರೀಶುಕ ಉವಾಚ
ಅಥ ಗೋಪೀರನುಜ್ಞಾಪ್ಯ ಯಶೋದಾಂ ನಂದಮೇವ ಚ ।
ಗೋಪಾನಾಮಂತ್ರ್ಯ ದಾಶಾರ್ಹೋ ಯಾಸ್ಯನ್ನಾರುರುಹೇ ರಥಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಹೀಗೆ ಉದ್ಧವನು ನಂದಗೋಕುಲದಲ್ಲಿ ಅನೇಕ ತಿಂಗಳಿದ್ದು ಮಥುರೆಗೆ ಹೋಗಲು ನಂದ-ಯಶೋದೆಯರ, ಗೋಪಿಯರ, ಗೋಪಾಲಕರ ಅನುಜ್ಞೆಯನ್ನು ಪಡೆದು ರಥವನ್ನೇರಿದನು. ॥64॥
(ಶ್ಲೋಕ-65)
ಮೂಲಮ್
ತಂ ನಿರ್ಗತಂ ಸಮಾಸಾದ್ಯ ನಾನೋಪಾಯನಪಾಣಯಃ ।
ನಂದಾದಯೋನುರಾಗೇಣ ಪ್ರಾವೋಚನ್ನಶ್ರುಲೋಚನಾಃ ॥
ಅನುವಾದ
ಪ್ರಯಾಣ ಹೊರಟ ಉದ್ಧವನ ರಥದ ಬಳಿಗೆ ನಂದಗೋಪನೇ ಮೊದಲಾದ ಗೋಪಾಲರು ಹಲವಾರು ಬಗೆಯ ಉಪಾಯನಗಳನ್ನು (ಕಾಣಿಕೆಗಳನ್ನು) ತೆಗೆದುಕೊಂಡು ಬಂದರು. ಕಣ್ಣುಗಳಲ್ಲಿ ಆನಂದಬಾಷ್ಪಗಳನ್ನು ತುಂಬಿಕೊಂಡು ಪ್ರೇಮಪುರಸ್ಸರವಾಗಿ ಹೀಗೆ ಹೇಳಿದರು. ॥65॥
(ಶ್ಲೋಕ-66)
ಮೂಲಮ್
ಮನಸೋ ವೃತ್ತಯೋ ನಃ ಸ್ಯುಃ ಕೃಷ್ಣಪಾದಾಂಬುಜಾಶ್ರಯಾಃ ।
ವಾಚೋಭಿಧಾಯಿನೀರ್ನಾಮ್ನಾಂ ಕಾಯಸ್ತತ್ಪ್ರಹ್ವಣಾದಿಷು ॥
ಅನುವಾದ
ಉದ್ಧವನೇ! ನಮ್ಮ ಮನಸ್ಸಿನ ಸಕಲ ವೃತ್ತಿಗಳು, ಪ್ರತಿಯೊಂದು ಸಂಕಲ್ಪವೂ ಶ್ರೀಕೃಷ್ಣನ ಚರಣಗಳನ್ನೇ ಆಶ್ರಯಿಸಿರಲಿ. ನಮ್ಮ ವಾಣಿಯು ನಿತ್ಯ ನಿರಂತರವಾಗಿ ಅವನ ಶುಭನಾಮಗಳನ್ನು ಹಾಡುತ್ತಿರಲಿ. ನಮ್ಮ ಶರೀರವು ಅವನಿಗೆ ನಮಸ್ಕರಿಸಲು ಮತ್ತು ಅವನ ಸೇವೆ ಮಾಡುವುದಕ್ಕೆ ಮೀಸಲಾಗಿ ಇರಲಿ. ॥66॥
(ಶ್ಲೋಕ-67)
ಮೂಲಮ್
ಕರ್ಮಭಿರ್ಭ್ರಾಮ್ಯಮಾಣಾನಾಂ ಯತ್ರ ಕ್ವಾಪೀಶ್ವರೇಚ್ಛಯಾ ।
ಮಂಗಲಾಚರಿತೈರ್ದಾನೈ ರತಿರ್ನಃ ಕೃಷ್ಣ ಈಶ್ವರೇ ॥
ಅನುವಾದ
ಪಾಪ-ಪುಣ್ಯಗಳ ಫಲವಾಗಿ ಪರಮಾತ್ಮನ ಇಚ್ಛೆಯಿಂದ ನಾವು ಯಾವುದೇ ಯೋನಿಯಲ್ಲಿ ಜನಿಸಿದ್ದರೂ ನಾವು ಶುಭ ಆಚರಣೆಯನ್ನೇ ಮಾಡುತ್ತಾ, ದಾನಾದಿಗಳನ್ನು ಮಾಡುತ್ತಾ ಇರುವಂತಾಗಲಿ. ಅದರ ಫಲವಾಗಿ ಸರ್ವೇಶ್ವರನಾದ ಶ್ರೀಕೃಷ್ಣನಲ್ಲಿಯೇ ನಮಗೆ ಅಚಲವಾದ ಭಕ್ತಿಯುಂಟಾಗಲಿ. ॥67॥
(ಶ್ಲೋಕ-68)
ಮೂಲಮ್
ಏವಂ ಸಭಾಜಿತೋ ಗೋಪೈಃ ಕೃಷ್ಣಭಕ್ತ್ಯಾ ನರಾಧಿಪ ।
ಉದ್ಧವಃ ಪುನರಾಗಚ್ಛನ್ಮಥುರಾಂ ಕೃಷ್ಣಪಾಲಿತಾಮ್ ॥
ಅನುವಾದ
ಪರೀಕ್ಷಿತನೇ! ಹೀಗೆ ಉದ್ಧವನು ಶ್ರೀಕೃಷ್ಣನ ಪರಮಭಕ್ತನೆಂಬ ಕಾರಣದಿಂದ ನಂದನಿಂದಲೂ, ಗೋಪಾಲರಿಂದಲೂ ಸಮ್ಮಾನಿತನಾಗಿ ಶ್ರೀಕೃಷ್ಣನಿಂದ ಪರಿಪಾಲಿಸುತ್ತಿರುವ ಮಥುರಾಪಟ್ಟಣಕ್ಕೆ ಹಿಂದಿರುಗಿದನು. ॥68॥
(ಶ್ಲೋಕ-69)
ಮೂಲಮ್
ಕೃಷ್ಣಾಯ ಪ್ರಣಿಪತ್ಯಾಹ ಭಕ್ತ್ಯುದ್ರೇಕಂ ವ್ರಜೌಕಸಾಮ್ ।
ವಸುದೇವಾಯ ರಾಮಾಯ ರಾಜ್ಞೇ ಚೋಪಾಯನಾನ್ಯದಾತ್ ॥
ಅನುವಾದ
ಮಥುರೆಗೆ ಸೇರಿದ ಬಳಿಕ ಅವನು ಭಗವಾನ್ ಶ್ರೀಕೃಷ್ಣನನ್ನು ಕಂಡು, ನಮಸ್ಕರಿಸಿಕೊಂಡು ಗೋಕುಲ ವಾಸಿಗಳ ಅತಿಶಯವಾದ ಭಕ್ತಿಯನ್ನು ತಾನು ನೋಡಿದಂತೆ ವಿವರಿಸಿ ಹೇಳಿದನು. ನಂದರಾಜನೂ, ಗೋಪಾಲಕರೂ ಕಳಿಸಿದ ಕಾಣಿಕೆಗಳನ್ನು ವಸುದೇವನಿಗೂ, ಶ್ರೀಕೃಷ್ಣ-ಬಲರಾಮರಿಗೂ ಮತ್ತು ರಾಜನಾದ ಉಗ್ರಸೇನನಿಗೂ ಸಮರ್ಪಿಸಿದನು. ॥69॥
ಅನುವಾದ (ಸಮಾಪ್ತಿಃ)
ನಲವತ್ತೇಳನೆಯ ಅಧ್ಯಾಯವು ಮುಗಿಯಿತು. ॥47॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ
ಉದ್ಧವಪ್ರತಿಯಾನೇ ಸಪ್ತಚತ್ವಾರಿಂಶೋಽಧ್ಯಾಯಃ ॥47॥