೪೬

[ನಲವತ್ತಾರನೆಯ ಅಧ್ಯಾಯ]

ಭಾಗಸೂಚನಾ

ಉದ್ಧವನ ವ್ರಜಯಾತ್ರೆ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ವೃಷ್ಣೀನಾಂ ಪ್ರವರೋ ಮಂತ್ರೀ ಕೃಷ್ಣಸ್ಯ ದಯಿತಃ ಸಖಾ ।
ಶಿಷ್ಯೋ ಬೃಹಸ್ಪತೇಃ ಸಾಕ್ಷಾದುದ್ಧವೋ ಬುದ್ಧಿಸತ್ತಮಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಉದ್ಧವನು ವೃಷ್ಣಿವಂಶೀಯರಲ್ಲಿ ಪ್ರಧಾನ ಪುರುಷನಾಗಿದ್ದನು. ಬೃಹಸ್ಪತಿಯ ಸಾಕ್ಷಾತ್ ಶಿಷ್ಯನಾಗಿದ್ದ ಅವನು ಪರಮ ಬುದ್ಧಿಶಾಲಿಯಾಗಿದ್ದನು. ಮಿಗಿಲಾಗಿ ಶ್ರೀಕೃಷ್ಣನ ಮಂತ್ರಿಯೂ ಪ್ರಿಯಸಖನೂ ಆಗಿದ್ದನು. ॥1॥

(ಶ್ಲೋಕ-2)

ಮೂಲಮ್

ತಮಾಹ ಭಗವಾನ್ ಪ್ರೇಷ್ಠಂ ಭಕ್ತಮೇಕಾಂತಿನಂ ಕ್ವಚಿತ್ ।
ಗೃಹೀತ್ವಾ ಪಾಣಿನಾ ಪಾಣಿಂ ಪ್ರಪನ್ನಾರ್ತಿಹರೋ ಹರಿಃ ॥

ಅನುವಾದ

ಒಂದುದಿನ ಶರಣಾಗತರ ಸಮಸ್ತ ದುಃಖಗಳನ್ನು ಪರಿಹರಿಸುವ ಶ್ರೀಕೃಷ್ಣನು ತನ್ನ ಪ್ರಿಯಭಕ್ತನೂ, ಏಕಾಂತ ಪ್ರೇಮಿಯೂ ಆದ ಉದ್ಧವನ ಕೈಯನ್ನು ಹಿಡಿದುಕೊಂಡು ಈ ಮಾತನ್ನು ಹೇಳಿದನು. ॥2॥

(ಶ್ಲೋಕ-3)

ಮೂಲಮ್

ಗಚ್ಛೋದ್ಧವ ವ್ರಜಂ ಸೌಮ್ಯ ಪಿತ್ರೋರ್ನೌ ಪ್ರೀತಿಮಾವಹ ।
ಗೋಪೀನಾಂ ಮದ್ವಿಯೋಗಾಧಿಂ ಮತ್ಸಂದೇಶೈರ್ವಿಮೋಚಯ ॥

ಅನುವಾದ

ಸೌಮ್ಯಸ್ವಭಾವದ ಉದ್ಧವನೇ! ನೀನೀಗಲೇ ಗೋಕುಲಕ್ಕೆ ಹೋಗು. ಅಲ್ಲಿರುವ ನನ್ನ ತಂದೆ-ತಾಯಿಗಳಾದ ನಂದ-ಯಶೋದೆಯರನ್ನು ನನ್ನ ಸಂಬಂಧವಾದ ಮಾತುಗಳಿಂದ ಆನಂದಗೊಳಿಸು. ಗೋಪಿಯರು ನನ್ನ ವಿರಹವ್ಯಾಧಿಯಿಂದ ದುಃಖಿತರಾಗಿರುವರು. ಅವರಿಗೆ ನನ್ನ ಸಂದೇಶವನ್ನು ಹೇಳಿ ಆ ವೇದನೆಯಿಂದ ಮುಕ್ತಗೊಳಿಸು. ॥3॥

(ಶ್ಲೋಕ-4)

ಮೂಲಮ್

ತಾ ಮನ್ಮನಸ್ಕಾ ಮತ್ಪ್ರಾಣಾ ಮದರ್ಥೇ ತ್ಯಕ್ತದೈಹಿಕಾಃ ।
ಮಾಮೇವ ದಯಿತಂ ಪ್ರೇಷ್ಠಮಾತ್ಮಾನಂ ಮನಸಾ ಗತಾಃ ।
ಯೇ ತ್ಯಕ್ತಲೋಕಧರ್ಮಾಶ್ಚ ಮದರ್ಥೇ ತಾನ್ ಬಿಭರ್ಮ್ಯಹಮ್ ॥

ಅನುವಾದ

ಪ್ರಿಯ ಉದ್ಧವನೇ! ಗೋಪಿಕೆಯರ ಮನಸ್ಸು ನಿತ್ಯ-ನಿರಂತರವಾಗಿ ನನ್ನಲ್ಲೆ ತೊಡಗಿರುತ್ತದೆ. ಅವರ ಪ್ರಾಣ, ಜೀವನ, ಸರ್ವಸ್ವವೂ ನಾನೇ ಆಗಿರುವೆನು. ನನಗಾಗಿ ಅವರು ತಮ್ಮ ಪತಿ-ಪುತ್ರರೇ ಮೊದಲಾದ ಜ್ಞಾತಿ-ಬಂಧುಗಳನ್ನು ತೊರೆದು ಬಿಟ್ಟಿದ್ದಾರೆ. ನನ್ನನ್ನೇ ಅವರು ಪ್ರಿಯತಮನೆಂದೂ, ಸರ್ವಶ್ರೇಷ್ಠನಾದ ತಮ್ಮ ಆತ್ಮ ಸ್ವರೂಪನೆಂದೇ ತಮ್ಮ ಸಂಪೂರ್ಣ ಮನಸ್ಸಿನಿಂದ ಭಾವಿಸಿಕೊಂಡು ಬಿಟ್ಟಿದ್ದಾರೆ. ಯಾರು ನನ್ನ ಸಲುವಾಗಿ ಲೌಕಿಕ ಮತ್ತು ಪಾರಲೌಕಿಕ ಧರ್ಮವನ್ನು ಬಿಟ್ಟುಬಿಟ್ಟಿರುವರೋ ಅವರ ಭರಣ-ಪೋಷಣೆಗಳನ್ನು ನಾನೇ ಮಾಡುತ್ತೇನೆ. ಇದು ನನ್ನ ವ್ರತವಾಗಿದೆ. ॥4॥

(ಶ್ಲೋಕ-5)

ಮೂಲಮ್

ಮಯಿ ತಾಃ ಪ್ರೇಯಸಾಂ ಪ್ರೇಷ್ಠೇ ದೂರಸ್ಥೇ ಗೋಕುಲಸಿಯಃ ।
ಸ್ಮರಂತ್ಯೋಂಗ ವಿಮುಹ್ಯಂತಿ ವಿರಹೌತ್ಕಂಠ್ಯವಿಹ್ವಲಾಃ ॥

ಅನುವಾದ

ಉದ್ಧವನೇ! ನಾನು ಆ ಗೋಪಿಯರ ಪರಮ ಪ್ರಿಯತಮನಾಗಿರುವೆನು. ನಾನು ಇಲ್ಲಿಗೆ ಬಂದನಂತರ ಅವರು ನನ್ನನ್ನು ಬಹಳ ದೂರದಲ್ಲಿರುವನೆಂದು ಭಾವಿಸಿ, ನನ್ನನ್ನು ಯಾವಾಗಲೂ ಸ್ಮರಿಸುತ್ತಾ ವಿಮೋಹಗೊಳ್ಳುತ್ತಾರೆ. ಕೆಲವೊಮ್ಮೆ ಮೂರ್ಛಿತರೂ ಆಗುತ್ತಾರೆ. ವಿರಹವೇದನೆಯಿಂದ ದುಃಖಿತೆಯರಾದ ಅವರು ತಮಗೆ ಇಷ್ಟನಾದ ನನ್ನನ್ನು ಹೊಂದಲು ತವಕಪಡುತ್ತಿರುವರು. ॥5॥

(ಶ್ಲೋಕ-6)

ಮೂಲಮ್

ಧಾರಯಂತ್ಯತಿಕೃಚ್ಛ್ರೇಣ ಪ್ರಾಯಃ ಪ್ರಾಣಾನ್ ಕಥಂಚನ ।
ಪ್ರತ್ಯಾಗಮನಸಂದೇಶೈರ್ಬಲ್ಲವ್ಯೋ ಮೇ ಮದಾತ್ಮಿಕಾಃ ॥

ಅನುವಾದ

ನನ್ನ ಪ್ರೇಯಸಿಯರಾದ ಗೋಪಿಯರು ಇದುವರೆಗೆ ಬಹಳ ಕಷ್ಟದಿಂದ ಮತ್ತು ಪ್ರಯತ್ನದಿಂದ ತಮ್ಮ ಪ್ರಾಣಗಳನ್ನು ಉಳಿಸಿಕೊಂಡಿರುವರು. ‘ನಾನು ಪುನಃ ನಿಮ್ಮಲ್ಲಿಗೆ ಬರುವೆನು’ ಎಂಬ ನನ್ನ ಇದೊಂದು ಸಂದೇಶವೇ ಅವರಿಗೆ ಜೀವನಾಧಾರವಾಗಿದೆ. ಉದ್ಧವನೇ! ಇನ್ನೇನು ಹೇಳಲಿ? ನಾನು. ನಾನೇ ಅವರ ಆತ್ಮನಾಗಿರುವೆನು. ಅವರು ನಿತ್ಯ-ನಿರಂತರ ನನ್ನಲ್ಲಿಯೆ ತನ್ಮಯರಾಗಿ ಇರುತ್ತಾರೆ. ॥6॥

(ಶ್ಲೋಕ-7)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಯುಕ್ತ ಉದ್ಧವೋ ರಾಜನ್ ಸಂದೇಶಂ ಭರ್ತುರಾದೃತಃ ।
ಆದಾಯ ರಥಮಾರುಹ್ಯ ಪ್ರಯಯೌ ನಂದಗೋಕುಲಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನ ಈ ಮಾತನ್ನು ಕೇಳಿದಾಗ ಉದ್ಧವನು ಅತ್ಯಂತ ಆದರದಿಂದ ತನ್ನ ಸ್ವಾಮಿಯ ಸಂದೇಶವನ್ನು ಹೊತ್ತುಕೊಂಡು ರಥದಲ್ಲಿ ಕುಳಿತು ನಂದಗೋಕುಲದ ಕಡೆಗೆ ಹೊರಟನು. ॥7॥

(ಶ್ಲೋಕ-8)

ಮೂಲಮ್

ಪ್ರಾಪ್ತೋ ನಂದವ್ರಜಂ ಶ್ರೀಮಾನ್ ನಿಮ್ಲೋಚತಿ ವಿಭಾವಸೌ ।
ಛನ್ನಯಾನಃ ಪ್ರವಿಶತಾಂ ಪಶೂನಾಂ ಖುರರೇಣುಭಿಃ ॥

ಅನುವಾದ

ಭಾಗ್ಯಶಾಲಿಯಾದ ಉದ್ಧವನು ಸೂರ್ಯಾಸ್ತಕ್ಕೆ ಸರಿಯಾಗಿ ನಂದ ಗೋಕುಲಕ್ಕೆ ತಲುಪಿದನು. ಆ ಸಮಯದಲ್ಲಿ ಹಸುಗಳು ಕಾಡಿನಿಂದ ಮರಳುತ್ತಿದ್ದವು. ಅವರ ಗೊರಸುಗಳಿಂದ ಎದ್ದ ಧೂಳಿಯು ಉದ್ಧವನ ರಥವನ್ನು ಮುಚ್ಚಿಬಿಟ್ಟಿತು. ॥8॥

(ಶ್ಲೋಕ-9)

ಮೂಲಮ್

ವಾಸಿತಾರ್ಥೇಭಿಯುಧ್ಯದ್ಭಿರ್ನಾದಿತಂ ಶುಷ್ಮಿಭಿರ್ವೃಷೈಃ ।
ಧಾವಂತೀಭಿಶ್ಚ ವಾಸ್ರಾಭಿರೂಧೋಭಾರೈಃ ಸ್ವವತ್ಸಕಾನ್ ॥

ಅನುವಾದ

ಗೋವುಗಳನ್ನು ಸಂಪರ್ಕಿಸಲು ಕೊಬ್ಬಿದ ಹೋರಿಗಳು ತಮ್ಮ-ತಮ್ಮಲ್ಲಿಯೇ ಸ್ಪರ್ಧಿಸುತ್ತಿದ್ದವು. ಅವುಗಳ ಗರ್ಜನೆಯು ವ್ರಜದಲ್ಲೆಲ್ಲ ಪ್ರತಿಧ್ವನಿಸುತ್ತಿತ್ತು. ಸ್ವಲ್ಪ ದಿವಸಗಳ ಹಿಂದೆ ಈಯ್ದ ಹಸುಗಳು ತಮ್ಮ ಕೆಚ್ಚಲುಗಳು ಭಾರವಾಗಿದ್ದರೂ ಲೆಕ್ಕಿಸದೆ ತಮ್ಮ-ತಮ್ಮ ಕರುಗಳ ಕಡೆಗೆ ನಾಗಲೋಟದಿಂದ ಓಡಿ ಹೋಗುತ್ತಿದ್ದವು. ॥9॥

(ಶ್ಲೋಕ-10)

ಮೂಲಮ್

ಇತಸ್ತತೋ ವಿಲಂಘದ್ಭಿರ್ಗೋವತ್ಸೈರ್ಮಂಡಿತಂ ಸಿತೈಃ ।
ಗೋದೋಹಶಬ್ದಾಭಿರವಂ ವೇಣೂನಾಂ ನಿಃಸ್ವನೇನ ಚ ॥

ಅನುವಾದ

ಅತ್ತಲಿತ್ತ ನೆಗೆ-ನೆಗೆದುಕೊಂಡು ಓಡಾಡುತ್ತಿದ್ದ ಬಿಳಿಯ ಕರುಗಳಿಂದ ಗೋಕುಲವು ಸಮಲಂಕೃತವಾಗಿತ್ತು. ವೇಣುನಾದದೊಡನೆ ಹಸುಗಳು ಹಾಲನ್ನು ಕರೆಯುವ ‘ಘರ್-ಘರ್’ ಶಬ್ದವು ಕೇಳಿ ಬರುತ್ತಿದ್ದು ಕಿವಿಗಳಿಗೆ ಆಪ್ಯಾಯಮಾನವಾಗಿದ್ದಿತು. ॥10॥

(ಶ್ಲೋಕ-11)

ಮೂಲಮ್

ಗಾಯಂತೀಭಿಶ್ಚ ಕರ್ಮಾಣಿ ಶುಭಾನಿ ಬಲಕೃಷ್ಣಯೋಃ ।
ಸ್ವಲಂಕೃತಾಭಿರ್ಗೋಪೀಭಿರ್ಗೋಪೈಶ್ಚ ಸುವಿರಾಜಿತಮ್ ॥

ಅನುವಾದ

ವಸ್ತ್ರಾಭರಣಗಳಿಂದ ಸಮಲಂಕೃತರಾಗಿ ಬಲರಾಮ-ಶ್ರೀಕೃಷ್ಣರ ಮಂಗಲಮಯ ಚರಿತ್ರೆಗಳನ್ನು ಹಾಡುತ್ತಿದ್ದ ಗೋಪಿಯರಿಂದ ಮತ್ತು ಗೋಪಾಲಕರಿಂದಲೂ ಗೋಕುಲದ ಶೋಭೆಯು ಇನ್ನೂ ಹೆಚ್ಚಿತ್ತು. ॥10॥

(ಶ್ಲೋಕ-12)

ಮೂಲಮ್

ಅಗ್ನ್ಯರ್ಕಾತಿಥಿಗೋವಿಪ್ರಪಿತೃದೇವಾರ್ಚನಾನ್ವಿತೈಃ ।
ಧೂಪದೀಪೈಶ್ಚ ಮಾಲ್ಯೈಶ್ಚ ಗೋಪಾವಾಸೈರ್ಮನೋರಮಮ್ ॥

ಅನುವಾದ

ಗೋಪಾಲರ ಮನೆಗಳಲ್ಲಿ ಅಗ್ನಿ, ಸೂರ್ಯ, ಅತಿಥಿ, ಗೋವು, ಬ್ರಾಹ್ಮಣ ಮತ್ತು ದೇವತೆ-ಪಿತೃಗಳ ಪೂಜೆಗಳು ಯಥಾವಿಧಿಯಾಗಿ ನಡೆದಿತ್ತು. ಧೂಪಗಳ ಸುವಾಸನೆಯು ಸರ್ವತ್ರ ಹರಡಿತ್ತು. ದೀಪಗಳು ಬೆಳಗುತ್ತಿದ್ದವು. ಅವರ ಮನೆಗಳನ್ನು ಪುಷ್ಪಗಳಿಂದ ಅಲಂಕರಿಸಿದ್ದರು. ಇಂತಹ ಮನೋಹರವಾದ ಮನೆಗಳಿಂದ ಇಡೀ ಗೋಕುಲವು ಇನ್ನೂ ಹೆಚ್ಚಾಗಿಯೇ ಶೋಭಿಸುತ್ತಿತ್ತು. ॥12॥

(ಶ್ಲೋಕ-13)

ಮೂಲಮ್

ಸರ್ವತಃ ಪುಷ್ಪಿತವನಂ ದ್ವಿಜಾಲಿಕುಲನಾದಿತಮ್ ।
ಹಂಸಕಾರಂಡವಾಕೀರ್ಣೈಃ ಪದ್ಮಷಂಡೈಶ್ಚ ಮಂಡಿತಮ್ ॥

ಅನುವಾದ

ಗೋಕುಲದ ನಾಲ್ಕು ಕಡೆಗಳಲ್ಲಿಯೂ ದುಂಬಿಗಳಿಂದ ಝೇಂಕರಿಸಲ್ಪಟ್ಟ ಹೂದೋಟಗಳಿದ್ದು, ಅಲ್ಲಿ ಹಕ್ಕಿಗಳು ಚಿಲಿಪಿಲಿ ಗುಟ್ಟುತ್ತಿದ್ದವು. ಕಮಲದ ದಂಟುಗಳಿಂದ ಸಮಲಂಕೃತವಾದ ಹಾಗೂ ಹಂಸ-ಕಾರಂಡವ ಪಕ್ಷಿಗಳಿಂದ ವ್ಯಾಪ್ತವಾದ ಸುಂದರ ಸರೋವರಗಳಿಂದಲೂ ಕೂಡಿದ್ದು, ಗೋಕುಲವು ಅತ್ಯಂತ ಶೋಭಾಯಮಾನವಾಗಿತ್ತು.॥13॥

(ಶ್ಲೋಕ-14)

ಮೂಲಮ್

ತಮಾಗತಂ ಸಮಾಗಮ್ಯ ಕೃಷ್ಣಸ್ಯಾನುಚರಂ ಪ್ರಿಯಮ್ ।
ನಂದಃ ಪ್ರೀತಃ ಪರಿಷ್ವಜ್ಯ ವಾಸುದೇವಧಿಯಾರ್ಚಯತ್ ॥

ಅನುವಾದ

ಶ್ರೀಕೃಷ್ಣನ ಅನುಚರನೂ, ಅವನಿಗೆ ಅತ್ಯಂತ ಪ್ರಿಯನೂ ಆದ ಉದ್ಧವನು ಗೋಕುಲಕ್ಕೆ ಬಂದೊಡನೆ ನಂದಗೋಪನು ಮುಂದಾಗಿ ಹೋಗಿ ಅವನನ್ನು ವಾಸುದೇವನೇ ಬಂದಿರುವನೆಂದು ಭಾವಿಸಿ ಅತ್ಯಂತ ಪ್ರೀತಿಯಿಂದ ಆಲಿಂಗಿಸಿಕೊಂಡು ಸುಮ್ಮಾನಿಸಿದನು. ॥14॥

(ಶ್ಲೋಕ-15)

ಮೂಲಮ್

ಭೋಜಿತಂ ಪರಮಾನ್ನೇನ ಸಂವಿಷ್ಟಂ ಕಶಿಪೌ ಸುಖಮ್ ।
ಗತಶ್ರಮಂ ಪರ್ಯಪೃಚ್ಛತ್ ಪಾದಸಂವಾಹನಾದಿಭಿಃ ॥

ಅನುವಾದ

ಪಾಯಸಾದಿಗಳಿಂದ ಕೂಡಿದ ಭೋಜನವನ್ನು ಮಾಡಿಸಿದನು. ಬಳಿಕ ಉದ್ಧವನು ಮೆತ್ತೆಯಮೇಲೆ ಕುಳಿತುಕೊಂಡಾಗ ಸೇವಕರು ಕೈಕಾಲುಗಳನ್ನು ಒತ್ತಿ, ಗಾಳಿಯನ್ನು ಬೀಸಿ ಆಯಾಸವನ್ನು ಪರಿಹರಿಸಿದರು. ॥15॥

(ಶ್ಲೋಕ-16)

ಮೂಲಮ್

ಕಚ್ಚಿದಂಗ ಮಹಾಭಾಗ ಸಖಾ ನಃ ಶೂರನಂದನಃ ।
ಆಸ್ತೇ ಕುಶಲ್ಯಪತ್ಯಾದ್ಯೈರ್ಯುಕ್ತೋ ಮುಕ್ತಃ ಸುಹೃದ್ವ ತಃ ॥

ಅನುವಾದ

ಆಗ ನಂದಗೋಪನು ಅವನನ್ನು ಪ್ರಶ್ನಿಸಿದನು - ಪರಮಭಾಗ್ಯಶಾಲಿಯಾದ ಉದ್ಧವನೇ! ನನಗೆ ಗೆಳೆಯನಾದ ವಸುದೇವನು ಸೆರೆಮನೆಯಿಂದ ಬಿಡುಗಡೆ ಹೊಂದಿ, ತನ್ನ ಆತ್ಮೀಯರಾದ ಸ್ವಜನರಿಂದಲೂ ಭಾರ್ಯಾಪುತ್ರರಿಂದಲೂ ಕೂಡಿ ಕುಶಲಿಯಾಗಿರುವನಲ್ಲವೇ? ॥16॥

(ಶ್ಲೋಕ-17)

ಮೂಲಮ್

ದಿಷ್ಟ್ಯಾ ಕಂಸೋ ಹತಃ ಪಾಪಃ ಸಾನುಗಃ ಸ್ವೇನ ಪಾಪ್ಮನಾ ।
ಸಾಧೂನಾಂ ಧರ್ಮಶೀಲಾನಾಂ ಯದೂನಾಂ ದ್ವೇಷ್ಟಿ ಯಃ ಸದಾ ॥

ಅನುವಾದ

ಪಾಪಿಯಾದ ಕಂಸನು ತನ್ನ ಪಾಪದ ಫಲಸ್ವರೂಪವಾಗಿ ಅನುಯಾಯಿಗಳೊಂದಿಗೆ ಮರಣಹೊಂದಿದನು. ಇದು ಮಹಾಸೌಭಾಗ್ಯದ ವಿಷಯವೇ ಆಗಿದೆ. ಏಕೆಂದರೆ, ಸ್ವಭಾವದಿಂದಲೇ ಧಾರ್ಮಿಕರೂ ಸಾಧುಗಳೂ ಆದ ಯದುವಂಶಿಯರನ್ನು ಅವನು ಸದಾ ದ್ವೇಷಿಸುತ್ತಿದ್ದನು. ॥17॥

(ಶ್ಲೋಕ-18)

ಮೂಲಮ್

ಅಪಿ ಸ್ಮರತಿ ನಃ ಕೃಷ್ಣೋ ಮಾತರಂ ಸುಹೃದಃ ಸಖೀನ್ ।
ಗೋಪಾನ್ ವ್ರಜಂ ಚಾತ್ಮನಾಥಂ ಗಾವೋ ವೃಂದಾವನಂ ಗಿರಿಮ್ ॥

ಅನುವಾದ

ಅದಿರಲಿ, ಉದ್ಧವನೇ! ಶ್ರೀಕೃಷ್ಣನು ಎಂದಾದರೂ ನಮ್ಮಗಳನ್ನು ನೆನೆದುಕೊಳ್ಳುವನೇ? ಇವಳು ಅವನ ತಾಯಿಯಾಗಿದ್ದಾಳೆ. ಇವರು ಸ್ವಜನ-ಸಂಬಂಧಿಗಳು, ಸ್ನೇಹಿತರಾದ ಗೋಪರಿದ್ದಾರೆ. ಅವನನ್ನೇ ತನ್ನ ಸ್ವಾಮಿಯೆಂದೂ, ಸರ್ವಸ್ವವೆಂದೂ ಭಾವಿಸುವ ಈ ವ್ರಜವಿದೆ, ಅವನು ಪ್ರೀತಿಸುತ್ತಿದ್ದ ಗೋವುಗಳಿವೆ. ಅವನು ವಿಹರಿಸಿದ ವೃಂದಾವನ ಮತ್ತು ಈ ಗೋವರ್ಧನವಿದೆ. ಇವುಗಳನ್ನು ಎಂದಾದರೂ ಸ್ಮರಿಸುತ್ತಿರುವನೇ? ॥18॥

(ಶ್ಲೋಕ-19)

ಮೂಲಮ್

ಅಪ್ಯಾಯಾಸ್ಯತಿ ಗೋವಿಂದಃ ಸ್ವಜನಾನ್ ಸಕೃದೀಕ್ಷಿತುಮ್ ।
ತರ್ಹಿ ದ್ರಕ್ಷ್ಯಾಮ ತದ್ವಕಂ ಸುನಸಂ ಸುಸ್ಮಿತೇಕ್ಷಣಮ್ ॥

ಅನುವಾದ

ಉದ್ಧವಾ! ತನ್ನ ಸುಹೃದ್-ಬಂಧುಗಳನ್ನು ನೋಡಲು ನಮ್ಮ ಗೋವಿಂದನು ಒಮ್ಮೆಯಾದರೂ ಬರುವನೇ? ಎಂಬುದನ್ನಾದರೂ ಹೇಳು. ಅವನು ಇಲ್ಲಿಗೆ ಬಂದರೆ ನಾವು ಅವನ ನೀಳವಾದ ಮೂಗು, ಮಧುರವಾದ ಹಾಸ್ಯ ಮತ್ತು ಕುಡಿನೋಟದಿಂದ ಕೂಡಿದ ಮುಖಕಮಲವನ್ನಾದರೂ ನೋಡುವೆವು. ॥19॥

(ಶ್ಲೋಕ-20)

ಮೂಲಮ್

ದಾವಾಗ್ನೇರ್ವಾತವರ್ಷಾಚ್ಚ ವೃಷಸರ್ಪಾಚ್ಚ ರಕ್ಷಿತಾಃ ।
ದುರತ್ಯಯೇಭ್ಯೋ ಮೃತ್ಯುಭ್ಯಃ ಕೃಷ್ಣೇನ ಸುಮಹಾತ್ಮನಾ ॥

ಅನುವಾದ

ಉದ್ಧವನೇ! ಶ್ರೀಕೃಷ್ಣನ ಹೃದಯ ಉದಾರವಾಗಿದೆ. ಅವನ ಶಕ್ತಿ ಅನಂತವಾಗಿದೆ. ಅವನು ದಾವಾಗ್ನಿಯಿಂದ, ಬಿರುಗಾಳಿ-ಮಳೆಯಿಂದ, ವೃಷಾಸುರ ಮತ್ತು ಅಜಗರಾದಿ ನಿವಾರಿಸಲು ಸಾಧ್ಯವಲ್ಲದ ಮೃತ್ಯುವಿನ ನಿಮಿತ್ತಗಳಿಂದ ನಮ್ಮನ್ನು ಒಮ್ಮೆಯಲ್ಲ, ಅನೇಕ ಬಾರಿ ರಕ್ಷಿಸಿರುವನು. ॥20॥

(ಶ್ಲೋಕ-21)

ಮೂಲಮ್

ಸ್ಮರತಾಂ ಕೃಷ್ಣವೀರ್ಯಾಣಿ ಲೀಲಾಪಾಂಗನಿರೀಕ್ಷಿತಮ್ ।
ಹಸಿತಂ ಭಾಷಿತಂ ಚಾಂಗ ಸರ್ವಾ ನಃ ಶಿಥಿಲಾಃ ಕ್ರಿಯಾಃ ॥

ಅನುವಾದ

ಉದ್ಧವಾ! ನಾವು ಶ್ರೀಕೃಷ್ಣನ ವಿಚಿತ್ರ ಚರಿತ್ರಗಳನ್ನು, ಅವನ ವಿಲಾಸಪೂರ್ಣವಾದ ಕುಡಿನೋಟವನ್ನು, ಉನ್ಮುಕ್ತವಾದ ನಗುವನ್ನು, ಮಧುರವಾದ ಮಾತುಗಳನ್ನು ಸ್ಮರಿಸುತ್ತಾ ಇರುತ್ತೇವೆ. ಈಗ ನಮ್ಮಿಂದ ಯಾವುದೇ ಕೆಲಸ ಕಾರ್ಯಗಳು ನಡೆಯದಷ್ಟು ಅವನ ಸ್ಮರಣೆಯಲ್ಲೇ ತನ್ಮಯರಾಗಿರುತ್ತೇವೆ. ॥21॥

(ಶ್ಲೋಕ-22)

ಮೂಲಮ್

ಸರಿಚ್ಛೈಲವನೋದ್ದೇಶಾನ್ ಮುಕುಂದಪದಭೂಷಿತಾನ್ ।
ಆಕ್ರೀಡಾನೀಕ್ಷಮಾಣಾನಾಂ ಮನೋ ಯಾತಿ ತದಾತ್ಮತಾಮ್ ॥

ಅನುವಾದ

ಶ್ರೀಕೃಷ್ಣನು ಜಲಕ್ರೀಡೆಯಾಡಿದ ಈ ನದಿಯನ್ನು ನೋಡುವಾಗ, ತನ್ನ ಒಂದೇ ಕೈಯಿಂದ ಎತ್ತಿದ ಗಿರಿರಾಜ ಗೋವರ್ಧನವನ್ನೂ, ಅವನು ಗೋವುಗಳನ್ನು ಮೇಯಿಸುತ್ತಾ, ಕೊಳಲನ್ನು ನುಡಿಸುತ್ತಾ ವಿಹರಿಸಿದ ಈ ವೃಂದಾವನವನ್ನು, ಅವನು ತನ್ನ ಸ್ನೇಹಿತರೊಂದಿಗೆ ಅನೇಕ ವಿಧದ ಆಟವಾಡುತ್ತಿದ್ದ ಸ್ಥಳಗಳನ್ನು ನೋಡುವಾಗ, ಇನ್ನೂ ಅಳಿಯದೇ ಇರುವ ಅವನ ಪದಚಿಹ್ನೆಯನ್ನು ನೋಡಿದಾಗ ನಮ್ಮ ಮನಸ್ಸು ಶ್ರೀಕೃಷ್ಣಮಯವಾಗಿ ಹೋಗುತ್ತದೆ. ॥22॥

(ಶ್ಲೋಕ-23)

ಮೂಲಮ್

ಮನ್ಯೇ ಕೃಷ್ಣಂ ಚ ರಾಮಂ ಚ ಪ್ರಾಪ್ತಾವಿಹ ಸುರೋತ್ತವೌ ।
ಸುರಾಣಾಂ ಮಹದರ್ಥಾಯ ಗರ್ಗಸ್ಯ ವಚನಂ ಯಥಾ ॥

ಅನುವಾದ

ದೇವ ಶ್ರೇಷ್ಠರಾದ ಶ್ರೀಕೃಷ್ಣ-ಬಲರಾಮರು ದೇವತೆಗಳ ಪ್ರಯೋಜನ ಸಿದ್ಧಿಗಾಗಿ ಇಲ್ಲಿ ಅವತರಿಸಿರುವರೆಂದು ನಾನು ಭಾವಿಸುತ್ತೇನೆ. ಗರ್ಗಾಚಾರ್ಯರೂ ಇದನ್ನು ನಮಗೆ ಹೀಗೆಯೇ ಹೇಳಿದ್ದರು. ॥23॥

(ಶ್ಲೋಕ-24)

ಮೂಲಮ್

ಕಂಸಂ ನಾಗಾಯುತಪ್ರಾಣಂ ಮಲ್ಲೌ ಗಜಪತಿಂ ತಥಾ ।
ಅವಧಿಷ್ಟಾಂ ಲೀಲಯೈವ ಪಶೂನಿವ ಮೃಗಾಧಿಪಃ ॥

ಅನುವಾದ

ಹತ್ತು ಸಾವಿರ ಆನೆಗಳ ಬಲವುಳ್ಳ ಕಂಸನನ್ನು, ಅಜೇಯರೆನಿಸಿದ್ದ ಮುಷ್ಟಿಕ-ಚಾಣೂರ ಮಲ್ಲರನ್ನು, ಕುವಲಯಾಪೀಡಗಜವನ್ನು ಇವರಿಬ್ಬರೂ ಸೇರಿ ಸಿಂಹವು ಕ್ಷುದ್ರಪಶುಗಳನ್ನು ಕೊಲ್ಲುವಂತೆ ಆಟವಾಡುತ್ತಲೇ ಸಂಹರಿಸಿದರು. ॥24॥

ಮೂಲಮ್

(ಶ್ಲೋಕ-25)
ತಾಲತ್ರಯಂ ಮಹಾಸಾರಂ ಧನುರ್ಯಷ್ಟಿಮಿವೇಭರಾಟ್ ।
ಬಭಂಜೈಕೇನ ಹಸ್ತೇನ ಸಪ್ತಾಹಮದಧಾದ್ಗಿರಿಮ್ ॥

ಅನುವಾದ

ಮೂರು ತಾಳೆಮರಗಳಷ್ಟು ಉದ್ದವಾದ, ಅತ್ಯಂತ ದೃಢವಾಗಿದ್ದ ಮಹಾಧನುಸ್ಸನ್ನು ಗಜರಾಜನು ಕೋಲನ್ನು ಅಥವಾ ಕಬ್ಬಿನ ಜಲ್ಲೆಯನ್ನು ಮುರಿದು ಹಾಕುವಂತೆ ಶ್ರೀಕೃಷ್ಣನು ಮುರಿದು ಹಾಕಿದನು. ಒಂದೇ ಕೈಯಲ್ಲಿ ಗೋವರ್ಧನ ಪರ್ವತವನ್ನು ಏಳು ದಿವಸಗಳವರೆಗೆ ಹಿಡಿದೆತ್ತಿ ನಿಂತಿದ್ದನು. ॥25॥

(ಶ್ಲೋಕ-26)

ಮೂಲಮ್

ಪ್ರಲಂಬೋ ಧೇನುಕೋರಿಷ್ಟಸ್ತೃಣಾವರ್ತೋ ಬಕಾದಯಃ ।
ದೈತ್ಯಾಃ ಸುರಾಸುರಜಿತೋ ಹತಾ ಯೇನೇಹ ಲೀಲಯಾ ॥

ಅನುವಾದ

ಸಮಸ್ತ ದೇವತೆಗಳನ್ನೂ, ಅಸುರರನ್ನೂ ಜಯಿಸಿದ ಪ್ರಲಂಬ, ಧೇನುಕ, ಅರಿಷ್ಟಾಸುರ, ತೃಣಾವರ್ತ, ಬಕ ಮುಂತಾದ ದೊಡ್ಡ ದೊಡ್ಡ ದೈತ್ಯರನ್ನು ನಮ್ಮೆಲ್ಲರ ಸಮಕ್ಷಮದಲ್ಲಿ ಆಡುತ್ತಾಡುತ್ತಲೇ ಶ್ರೀಕೃಷ್ಣನು ಸಂಹರಿಸಿಬಿಟ್ಟಿದ್ದನು. ॥26॥

(ಶ್ಲೋಕ-27)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತಿ ಸಂಸ್ಮೃತ್ಯ ಸಂಸ್ಮೃತ್ಯ ನಂದಃ ಕೃಷ್ಣಾನುರಕ್ತಧೀಃ ।
ಅತ್ಯುತ್ಕಂಠೋಭವತ್ತೂಷ್ಣೀಂ ಪ್ರೇಮಪ್ರಸರವಿಹ್ವಲಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಶ್ರೀಕೃಷ್ಣನಲ್ಲಿಯೇ ಅನುರಕ್ತವಾದ ಮನಸ್ಸಿನಿಂದ ಕೂಡಿದ್ದ ನಂದಗೋಪನು ಹೀಗೆ ಶ್ರೀಕೃಷ್ಣನ ಬಾಲಲೀಲೆಗಳೆಲ್ಲವನ್ನು ಒಂದಾದ ಮೇಲೊಂದರಂತೆ ಸ್ಮರಿಸುತ್ತಾ ಪ್ರೇಮಾವೇಶದಿಂದ ಗದ್ಗದನಾಗಿ ಮುಂದೆ ಮಾತನಾಡಲಾಗದೆ ಸುಮ್ಮನಾದನು. ಅವನಿಗೆ ಶ್ರೀಕೃಷ್ಣನನ್ನು ನೋಡಬೇಕೆಂಬ ಕಾತುರವು ಹೆಚ್ಚಾಗಿ ಬಿಟ್ಟಿತು. ॥27॥

(ಶ್ಲೋಕ-28)

ಮೂಲಮ್

ಯಶೋದಾ ವರ್ಣ್ಯಮಾನಾನಿ ಪುತ್ರಸ್ಯ ಚರಿತಾನಿ ಚ ।
ಶೃಣ್ವಂತ್ಯಶ್ರೂಣ್ಯವಾಸ್ರಾಕ್ಷೀತ್ಸ್ನೇಹಸ್ನುತಪಯೋಧರಾ ॥

ಅನುವಾದ

ಯಶೋದಾದೇವಿಯೂ ನಂದನು ವರ್ಣಿಸುತ್ತಿದ್ದ ತನ್ನ ಬಾಲ ಮುಕುಂದನ ಚರಿತ್ರೆಗಳನ್ನು ಕೇಳುತ್ತಾ ಆನಂದಬಾಷ್ಟಗಳನ್ನು ಧಾರಾಕಾರವಾಗಿ ಸುರಿಸುತ್ತಿದ್ದಳು. ಪುತ್ರ ಸ್ನೇಹದ ಸ್ಮರಣೆಯಿಂದಾಗಿ ಅವಳ ಸ್ತನಗಳಿಂದ ಹಾಲು ಸ್ರವಿಸತೊಡಗಿತು.॥28॥

(ಶ್ಲೋಕ-29)

ಮೂಲಮ್

ತಯೋರಿತ್ಥಂ ಭಗವತಿ ಕೃಷ್ಣೇ ನಂದಯಶೋದಯೋಃ ।
ವೀಕ್ಷ್ಯಾನುರಾಗಂ ಪರಮಂ ನಂದಮಾಹೋದ್ಧವೋ ಮುದಾ ॥

ಅನುವಾದ

ನಂದ-ಯಶೋದೆಯರ ಹೃದಯದಲ್ಲಿ ಶ್ರೀಕೃಷ್ಣನ ಕುರಿತಾದ ಇರುವ ಅಗಾಧ ಅನುರಾಗವನ್ನು ನೋಡಿ ಉದ್ಧವನು ಆನಂದ ಮಗ್ನನಾದನು ಹಾಗೂ ಅವರಲ್ಲಿ ಹೇಳತೊಡಗಿದನು. ॥29॥

(ಶ್ಲೋಕ-30)

ಮೂಲಮ್ (ವಾಚನಮ್)

ಉದ್ಧವ ಉವಾಚ

ಮೂಲಮ್

ಯುವಾಂ ಶ್ಲಾಘ್ಯತವೌ ನೂನಂ ದೇಹಿನಾಮಿಹ ಮಾನದ ।
ನಾರಾಯಣೇಖಿಲಗುರೌ ಯತ್ಕೃತಾ ಮತಿರೀದೃಶೀ ॥

ಅನುವಾದ

ಉದ್ಧವನು ಹೇಳುತ್ತಾನೆ — ಸನ್ಮಾನ್ಯ ನಂದಗೋಪನೇ! ನೀವಿಬ್ಬರೂ ದೇಹಧಾರಿಗಳಲ್ಲೆ ಅತ್ಯಂತ ಶ್ಲಾಘ್ಯತಮರಾಗಿರುವಿರಿ. ಅಖಿಲಲೋಕಗುರುವಾದ ಶ್ರೀಮನ್ನಾರಾಯಣನಲ್ಲಿ ನಿಮಗೆ ಈ ವಿಧವಾದ ಪುತ್ರವಾತ್ಸಲ್ಯವಿರುವುದಲ್ಲವೇ? ॥30॥

(ಶ್ಲೋಕ-31)

ಮೂಲಮ್

ಏತೌ ಹಿ ವಿಶ್ವಸ್ಯ ಚ ಬೀಜಯೋನೀ
ರಾಮೋ ಮುಕುಂದಃ ಪುರುಷಃ ಪ್ರಧಾನಮ್ ।
ಅನ್ವೀಯ ಭೂತೇಷು ವಿಲಕ್ಷಣಸ್ಯ
ಜ್ಞಾನಸ್ಯ ಚೇಶಾತ ಇವೌ ಪುರಾಣೌ ॥

ಅನುವಾದ

ನಂದರಾಜಾ! ನಿನ್ನ ಮಕ್ಕಳಾದ ಬಲರಾಮ-ಶ್ರೀಕೃಷ್ಣರು ಸಾಮಾನ್ಯರಲ್ಲ. ಪುರಾಣ ಪುರುಷರು. ಅವರು ಈ ಅಖಂಡ ವಿಶ್ವಕ್ಕೆ ಉಪಾದಾನ ಕಾರಣರೂ, ನಿಮಿತ್ತಕಾರಣರೂ ಆಗಿರುತ್ತಾರೆ. ಭಗವಾನ್ ಶ್ರೀಕೃಷ್ಣನು ಪುರುಷನಾದರೆ ಬಲರಾಮನು ಪ್ರಧಾನ (ಪ್ರಕೃತಿ) ನಾಗಿದ್ದಾನೆ. ಇವರಿಬ್ಬರೇ ಸಮಸ್ತ ಪ್ರಾಣಿಗಳಲ್ಲಿ ಪ್ರವೇಶಿಸಿ ಅವರಿಗೆ ಜೀವನದಾನವನ್ನು ಕೊಟ್ಟು, ಅವರಲ್ಲಿರುವ ಅತ್ಯಂತ ವಿಲಕ್ಷಣವಾದ ಜ್ಞಾನಸ್ವರೂಪ ಜೀವನನ್ನು ನಿಯಂತ್ರಿಸುತ್ತಾರೆ.॥31॥

(ಶ್ಲೋಕ-32)

ಮೂಲಮ್

ಯಸ್ಮಿಂಜನಃ ಪ್ರಾಣವಿಯೋಗಕಾಲೇ
ಕ್ಷಣಂ ಸಮಾವೇಶ್ಯ ಮನೋವಿಶುದ್ಧಮ್ ।
ನಿರ್ಹೃತ್ಯ ಕರ್ಮಾಶಯಮಾಶು ಯಾತಿ
ಪರಾಂ ಗತಿಂ ಬ್ರಹ್ಮಮಯೋರ್ಕವರ್ಣಃ ॥

ಅನುವಾದ

ಮರಣಕಾಲದಲ್ಲಿ ತನ್ನ ಶುದ್ಧ ಮನಸ್ಸನ್ನು ಒಂದು ಕ್ಷಣವಾದರೂ ಭಗವಂತನಲ್ಲಿ ತೊಡಗಿಸುವ ಜೀವನು ಸಮಸ್ತ ಕರ್ಮವಾಸನೆಗಳನ್ನು ಕಳೆದುಕೊಂಡು ಸೂರ್ಯನಂತೆ ತೇಜಸ್ವಿಯಾಗಿ, ಬ್ರಹ್ಮಮಯನೂ ಆಗಿ ಪರಮಗತಿಯನ್ನು ಹೊಂದುತ್ತಾನೆ. ॥32॥

(ಶ್ಲೋಕ-33)

ಮೂಲಮ್

ತಸ್ಮಿನ್ ಭವಂತಾವಖಿಲಾತ್ಮಹೇತೌ
ನಾರಾಯಣೇ ಕಾರಣಮರ್ತ್ಯಮೂರ್ತೌ ।
ಭಾವಂ ವಿಧತ್ತಾಂ ನಿತರಾಂ ಮಹಾತ್ಮನ್
ಕಿಂ ವಾವಶಿಷ್ಟಂ ಯುವಯೋಃ ಸುಕೃತ್ಯಮ್ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಎಲ್ಲರ ಆತ್ಮನೂ, ಪರಮ ಕಾರಣನೂ ಆಗಿದ್ದಾನೆ. ಭಕ್ತರ ಅಭಿಲಾಷೆಗಳನ್ನು ಪೂರ್ಣಗೊಳಿಸಲಿಕ್ಕಾಗಿಯೂ, ಭೂಭಾರವನ್ನು ಇಳಿಸುವುದಕ್ಕಾಗಿಯೂ ಮನುಷ್ಯ ಶರೀರದಿಂದ ಅವತರಿಸಿರುವನು. ಮಹಾತ್ಮರಾದ ದಂಪತಿಗಳೇ! ಆ ಪರಮಾತ್ಮನಲ್ಲಿ ನೀವು ನಿರತಿಶಯವಾದ ಪುತ್ರವಾತ್ಸಲ್ಯವನ್ನು ಹೊಂದಿರುವಿರಿ. ಕೃತ-ಕೃತ್ಯರಾದ ನಿಮ್ಮಿಬ್ಬರಿಗೆ ಇದಲ್ಲದೆ ಬೇರೆಯಾದ ಶುಭಕರ್ಮವು ಯಾವುದು ಬಾಕಿ ಉಳಿದಿರುವುದು? ॥33॥

(ಶ್ಲೋಕ-34)

ಮೂಲಮ್

ಆಗಮಿಷ್ಯತ್ಯದೀರ್ಘೇಣ ಕಾಲೇನ ವ್ರಜಮಚ್ಯುತಃ ।
ಪ್ರಿಯಂ ವಿಧಾಸ್ಯತೇ ಪಿತ್ರೋರ್ಭಗವಾನ್ ಸಾತ್ವತಾಂ ಪತಿಃ ॥

ಅನುವಾದ

ಭಕ್ತವತ್ಸಲನಾದ ಯದುವಂಶ ಶಿರೋಮಣಿ ಭಗವಾನ್ ಶ್ರೀಕೃಷ್ಣನು ಕೆಲವೇ ದಿವಸಗಳಲ್ಲಿ ವ್ರಜಕ್ಕೆ ಬಂದು, ಮಾತಾ-ಪಿತೃಗಳಾದ ನಿಮ್ಮಿಬ್ಬರನ್ನು ಆನಂದಗೊಳಿಸುವನು. ॥34॥

(ಶ್ಲೋಕ-35)

ಮೂಲಮ್

ಹತ್ವಾ ಕಂಸಂ ರಂಗಮಧ್ಯೇ ಪ್ರತೀಪಂ ಸರ್ವಸಾತ್ವತಾಮ್ ।
ಯದಾಹ ವಃ ಸಮಾಗತ್ಯ ಕೃಷ್ಣಃ ಸತ್ಯಂ ಕರೋತಿ ತತ್ ॥

ಅನುವಾದ

ಸಮಸ್ತ ಯದುವಂಶೀಯರ ದ್ರೋಹಿಯಾದ ಕಂಸನನ್ನು ರಂಗಸ್ಥಳದಲ್ಲಿ ಕೊಂದು ನಿಮ್ಮ ಬಳಿಗೆ ಬಂದು - ‘ನಾನು ವ್ರಜಕ್ಕೆ ಬರುವೆನು’ ಎಂದು ಹೇಳಿದುದನ್ನು ಶ್ರೀಕೃಷ್ಣನು ಸತ್ಯವಾಗಿಸುವನು. ॥35॥

(ಶ್ಲೋಕ-36)

ಮೂಲಮ್

ಮಾ ಖಿದ್ಯತಂ ಮಹಾಭಾಗೌ ದ್ರಕ್ಷ್ಯಥಃ ಕೃಷ್ಣಮಂತಿಕೇ ।
ಅಂತರ್ಹೃದಿ ಸ ಭೂತಾನಾಮಾಸ್ತೇ ಜ್ಯೋತಿರಿವೈಧಸಿ ॥

ಅನುವಾದ

ಮಹಾಭಾಗ್ಯಶಾಲಿಗಳಾದ ನಂದ ಯಶೋದೆಯರೇ! ದುಃಖಿಸಬೇಡಿರಿ. ಕಟ್ಟಿಗೆಯೊಳಗೆ ಬೆಂಕಿಯಿರುವಂತೆ ಸಮಸ್ತ ಪ್ರಾಣಿಗಳ ಹೃದಯದಲ್ಲಿಯೂ ಇರುವ ಜಗದಾನಂದಕರನಾದ ಶ್ರೀಕೃಷ್ಣನನ್ನು ನೀವು ನಿಮ್ಮ ಸಮೀಪದಲ್ಲಿಯೇ ಕಾಣುವಿರಿ. ॥36॥

(ಶ್ಲೋಕ-37)

ಮೂಲಮ್

ನ ಹ್ಯಸ್ಯಾಸ್ತಿ ಪ್ರಿಯಃ ಕಶ್ಚಿನ್ನಾಪ್ರಿಯೋ ವಾಸ್ತ್ಯಮಾನಿನಃ ।
ನೋತ್ತಮೋ ನಾಧಮೋ ನಾಪಿ ಸಮಾನಸ್ಯಾಸಮೋಪಿ ವಾ ॥

ಅನುವಾದ

ಅಹಂಕಾರಾದಿ ಮಾಯಾಗುಣಗಳಿಲ್ಲದ ಅವನಿಗೆ ಈ ಲೋಕದಲ್ಲಿ ಪ್ರಿಯನಾದವನೂ, ಅಪ್ರಿಯನಾದವನೂ ಯಾರೂ ಇಲ್ಲ. ಸರ್ವರಲ್ಲಿ ಸಮದೃಷ್ಟಿಯುಳ್ಳ ಅವನಿಗೆ (ಅವನ ದೃಷ್ಟಿಯಲ್ಲಿ) ಉತ್ತಮನೆಂಬುವವನೂ ಇಲ್ಲ; ಅಧಮನೆಂಬುವವನೂ ಇಲ್ಲ ; ಅಸಮಾನನೆಂಬುವವನೂ ಇಲ್ಲ. ॥37॥

(ಶ್ಲೋಕ-38)

ಮೂಲಮ್

ನ ಮಾತಾ ನ ಪಿತಾ ತಸ್ಯ ನ ಭಾರ್ಯಾ ನ ಸುತಾದಯಃ ।
ನಾತ್ಮೀಯೋ ನ ಪರಶ್ಚಾಪಿ ನ ದೇಹೋ ಜನ್ಮ ಏವ ಚ ॥

ಅನುವಾದ

ಪರಮ ಪುರುಷನಾದ ಶ್ರೀಕೃಷ್ಣನಿಗೆ ತಂದೆ-ತಾಯಿಯಾಗಲೀ, ಪತ್ನೀ-ಪುತ್ರರಾಗಲೀ, ಆತ್ಮೀಯ-ಪರಕೀಯನಾಗಲೀ ಯಾರೂ ಇಲ್ಲ. ಅಷ್ಟೇ ಅಲ್ಲ ಅವನಿಗೆ ದೇಹವೂ ಇಲ್ಲ, ಜನ್ಮವೂ ಇಲ್ಲ. ॥38॥

(ಶ್ಲೋಕ-39)

ಮೂಲಮ್

ನ ಚಾಸ್ಯ ಕರ್ಮ ವಾ ಲೋಕೇ ಸದಸನ್ಮಿಶ್ರಯೋನಿಷು ।
ಕ್ರೀಡಾರ್ಥಃ ಸೋಪಿ ಸಾಧೂನಾಂ ಪರಿತ್ರಾಣಾಯ ಕಲ್ಪತೇ ॥

ಅನುವಾದ

ಅವನಿಗೆ ಈ ಲೋಕದಲ್ಲಿ ಮಾಡಬೇಕಾದ ಯಾವುದೇ ಕರ್ಮವು ಇಲ್ಲ. ಹೀಗಿದ್ದರೂ ಅವನು ಸಾಧುಗಳ ರಕ್ಷಣೆಗಾಗಿಯೂ, ಲೀಲಾವಿನೋದಗಳನ್ನು ಭಕ್ತರಿಗೆ ತೋರಿಸುವ ಸಲುವಾಗಿಯೂ, ದೇವತೆಯೇ ಮೊದಲಾದ ಸಾತ್ವಿಕ, ಮತ್ಸ್ಯಾದಿ ತಾಮಸ, ಮನುಷ್ಯರೇ ಆದಿ ಮಿಶ್ರಯೋನಿಗಳಲ್ಲಿ ಅವತರಿಸುತ್ತಾನೆ. ॥39॥

(ಶ್ಲೋಕ-40)

ಮೂಲಮ್

ಸತ್ತ್ವಂ ರಜಸ್ತಮ ಇತಿ ಭಜತೇ ನಿರ್ಗುಣೋ ಗುಣಾನ್ ।
ಕ್ರೀಡನ್ನತೀತೋತ್ರ ಗುಣೈಃ ಸೃಜತ್ಯವತಿ ಹಂತ್ಯಜಃ ॥

ಅನುವಾದ

ನಂದರಾಜಾ! ಭಗವಂತನು ಅಪ್ರಾಕೃತನು. ಅವನಲ್ಲಿ ಸತ್ವ, ರಜ, ತಮಗಳೆಂಬ ಪ್ರಾಕೃತ ಒಂದು ಗುಣವೂ ಇಲ್ಲ. ಹೀಗೆ ಪ್ರಾಕೃತಗುಣರಹಿತನಾಗಿದ್ದರೂ ಕೂಡ ಲೀಲೆಗಾಗಿ ಕ್ರೀಡೆಯನ್ನಾಡುತ್ತಾ, ಸತ್ವ, ರಜ, ತಮಗಳೆಂಬ ಮೂರು ಗುಣಗಳನ್ನು ಸ್ವೀಕರಿಸಿ ಈ ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳನ್ನು ಮಾಡುತ್ತಾ ಇರುತ್ತಾನೆ. ॥40॥

(ಶ್ಲೋಕ-41)

ಮೂಲಮ್

ಯಥಾ ಭ್ರಮರಿಕಾದೃಷ್ಟ್ಯಾ ಭ್ರಾಮ್ಯತೀವ ಮಹೀಯತೇ ।
ಚಿತ್ತೇ ಕರ್ತರಿ ತತ್ರಾತ್ಮಾ ಕರ್ತೇವಾಹಂಧಿಯಾ ಸ್ಮೃತಃ ॥

ಅನುವಾದ

ಹುಡುಗರು ಅಪ್ಪಾಲೆ- ತಿಪ್ಪಾಲೆಯಾಡುವಾಗ ಅವರ ಸುತ್ತಲೂ ಇರುವ ಪದಾರ್ಥಗಳು ತಿರುಗುತ್ತಿರುವಂತೆ ಕಂಡುಬರುತ್ತದೆ. ಆದರೆ ಆ ವಸ್ತುಗಳು ತಿರುಗುತ್ತಿರುವುದಿಲ್ಲ. ಅಂತೆಯೇ ಚಿತ್ತವೇ ಎಲ್ಲವನ್ನೂ ಮಾಡುತ್ತಿರುತ್ತದೆ. ಆದರೆ ಆ ಶುದ್ಧ ಚೈತನ್ಯದಲ್ಲಿ ಅಹಂ ಬುದ್ಧಿಯು ಉಂಟಾದ ಕಾರಣ ಭ್ರಮೆಯಿಂದ ಆತ್ಮನು ಕರ್ತೃವಿನಂತೆ ತಿಳಿದುಕೊಳ್ಳುತ್ತಾನೆ. ॥41॥

(ಶ್ಲೋಕ-42)

ಮೂಲಮ್

ಯುವಯೋರೇವ ನೈವಾಯಮಾತ್ಮಜೋ ಭಗವಾನ್ ಹರಿಃ ।
ಸರ್ವೇಷಾಮಾತ್ಮಜೋ ಹ್ಯಾತ್ಮಾ ಪಿತಾ ಮಾತಾ ಸ ಈಶ್ವರಃ ॥

ಅನುವಾದ

ನಂದ! ಭಗವಾನ್ ಶ್ರೀಕೃಷ್ಣನು ಕೇವಲ ನಿಮ್ಮಬ್ಬರಿಗೆ ಮಾತ್ರವೇ ಪುತ್ರನಾಗಿಲ್ಲ. ಸಮಸ್ತ ಪ್ರಾಣಿಗಳಿಗೂ ಆತ್ಮಸ್ವರೂಪನೂ, ಪುತ್ರನೂ, ತಂದೆ-ತಾಯಿ ಹೀಗೆ ಎಲ್ಲವೂ ಆಗಿದ್ದಾನೆ. ॥42॥

(ಶ್ಲೋಕ-43)

ಮೂಲಮ್

ದೃಷ್ಟಂ ಶ್ರುತಂ ಭೂತಭವದ್ಭವಿಷ್ಯತ್
ಸ್ಥಾಸ್ನುಶ್ಚರಿಷ್ಣುರ್ಮಹದಲ್ಪಕಂ ಚ ।
ವಿನಾಚ್ಯುತಾದ್ವಸ್ತು ತರಾಂ ನ ವಾಚ್ಯಂ
ಸ ಏವ ಸರ್ವಂ ಪರಮಾರ್ಥಭೂತಃ ॥

ಅನುವಾದ

ನಂದಗೋಪನೇ! ಲೋಕದಲ್ಲಿ ನೋಡುವ, ಕೇಳುವ ವಸ್ತುಗಳಲ್ಲಿ ಭೂತ, ಭವಿಷ್ಯ, ವರ್ತಮಾನಕ್ಕೆ ಸಂಬಂಧಿಸಿರಲಿ, ಸ್ಥಾವರ-ಜಂಗಮವಾಗಿರಲಿ, ಅಲ್ಪವಾಗಿರಲೀ, ಮಹತ್ತಾಗಿರಲೀ, ಅದೆಲ್ಲ ವಸ್ತುಗಳು ಭಗವಾನ್ ಶ್ರೀಕೃಷ್ಣನಿಂದ ಬೇರೆಯಾಗಿವೆ ಎಂದು ಹೇಳಬಾರದು, ನಂದರಾಜ! ಎಲ್ಲ ವಸ್ತುಗಳಲ್ಲಿಯೂ ಅಚ್ಯುತನಿದ್ದಾನೆ. ಪರಮಾರ್ಥದಲ್ಲಿ ಸರ್ವಸ್ವವೂ ಅವನೇ ಆಗಿದ್ದಾನೆ. ॥43॥

(ಶ್ಲೋಕ-44)

ಮೂಲಮ್

ಏವಂ ನಿಶಾ ಸಾ ಬ್ರುವತೋರ್ವ್ಯತೀತಾ
ನಂದಸ್ಯ ಕೃಷ್ಣಾನುಚರಸ್ಯ ರಾಜನ್ ।
ಗೋಪ್ಯಃ ಸಮುತ್ಥಾಯ ನಿರೂಪ್ಯ ದೀಪಾನ್
ವಾಸ್ತೂನ್ ಸಮಭ್ಯರ್ಚ್ಯ ದಧೀನ್ಯಮಂಥನ್ ॥

ಅನುವಾದ

ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನ ಸಖನಾದ ಉದ್ಧವನೂ ನಂದಗೋಪನೂ ಹೀಗೆ ಪರಸ್ಪರ ಮಾತನಾಡಿಕೊಳ್ಳುತ್ತಾ ರಾತ್ರಿಯೇ ಕಳೆದುಹೋಯಿತು. ರಾತ್ರಿಯು ಕಳೆದು ಹೋಗುತ್ತಿರುವಾಗಲೇ ಗೋಪಿಯರು ಎದ್ದು, ದೀಪವನ್ನು ಹಚ್ಚಿ, ವಾಸ್ತುಪುರುಷನನ್ನು ಪೂಜಿಸಿ, ಮನೆಯನ್ನು ಗುಡಿಸಿ, ಸಾರಿಸಿ ಶುದ್ಧಗೊಳಿಸಿ ಮತ್ತೆ ಮೊಸರು ಕಡೆಯಲು ಪ್ರಾರಂಭಿಸಿದರು. ॥44॥

(ಶ್ಲೋಕ-45)

ಮೂಲಮ್

ತಾ ದೀಪದೀಪ್ತೈರ್ಮಣಿಭಿರ್ವಿರೇಜೂ
ರಜ್ಜೂರ್ವಿಕರ್ಷದ್ಭುಜಕಂಕಣಸ್ರಜಃ ।
ಚಲನ್ನಿತಂಬಸ್ತನಹಾರಕುಂಡಲ-
ತ್ವಿಷತ್ಕಪೋಲಾರುಣಕುಂಕುಮಾನನಾಃ ॥

ಅನುವಾದ

ಗೋಪಿಕೆಯರು ಧರಿಸಿದ್ದ ಬಳೆಗಳು ಮೊಸರು ಕಡೆಯುವಾಗ ಮೇಲೆ-ಕೆಳಗೆ ಸರಿಯುತ್ತಾ ಸುಂದರವಾಗಿ ಕಾಣುತ್ತಿದ್ದವು. ಅವರ ನಿತಂಬ, ಸ್ತನಗಳು ಮತ್ತು ಕೊರಳಲ್ಲಿನ ಹಾರಗಳು ಕಂಪಿಸುತ್ತಿದ್ದವು. ಕಿವಿಗಳ ಕುಂಡಲಗಳು ಓಲಾಡುತ್ತಾ ಕುಂಕುಮಲೇಪಿತ ಕಪೋಲಗಳ ನಸುಗೆಂಪು ಹೆಚ್ಚಿಸಿದ್ದವು. ಅವರು ಧರಿಸಿದ್ದ ಆಭೂಷಣಗಳ ರತ್ನಗಳು ದೀಪದ ಬೆಳಕಿನಲ್ಲಿ ಹೊಳೆಯುತ್ತಿದ್ದವು. ಹೀಗೆ ಅತ್ಯಂತ ಶೋಭಿತರಾದ ಗೋಪಿಯರು ಮೊಸರನ್ನು ಕಡೆಯುತ್ತಿದ್ದರು. ॥45॥

(ಶ್ಲೋಕ-46)

ಮೂಲಮ್

ಉದ್ಗಾಯತೀನಾಮರವಿಂದಲೋಚನಂ
ವ್ರಜಾಂಗನಾನಾಂ ದಿವಮಸ್ಪೃಶದ್ಧ್ವನಿಃ ।
ದಧ್ನಶ್ಚ ನಿರ್ಮಂಥನಶಬ್ದಮಿಶ್ರಿತೋ
ನಿರಸ್ಯತೇ ಯೇ ನ ದಿಶಾಮಮಂಗಲಮ್ ॥

ಅನುವಾದ

ಆ ಸಮಯದಲ್ಲಿ ಗೋಪಿಯರು ಕಮಲನಯನ ಶ್ರೀಕೃಷ್ಣನ ಮಂಗಲಮಯ ಚರಿತ್ರೆಗಳನ್ನು ಹಾಡುತ್ತಿದ್ದರು. ಅವರ ಆ ಸಂಗೀತವು ಕಡೆಯುವ ಘರ್-ಘರ್ ಶಬ್ದದೊಡನೆ ಬೆರೆತು ಇನ್ನೂ ಅದ್ಭುತವಾಗಿ ಸ್ವರ್ಗಲೋಕದವರೆಗೆ ಮುಟ್ಟಿತು. ಅವರ ಗಾಯನವು ದಶದಿಕ್ಕುಗಳಲ್ಲಿಯೂ ಹರಡಿಕೊಂಡು ಎಲ್ಲ ಅಮಂಗಳಗಳೂ ತೊಡೆದುಹಾಕುತ್ತಿತ್ತು. ॥46॥

(ಶ್ಲೋಕ-47)

ಮೂಲಮ್

ಭಗವತ್ಯುದಿತೇ ಸೂರ್ಯೇ ನಂದದ್ವಾರಿ ವ್ರಜೌಕಸಃ ।
ದೃಷ್ಟ್ವಾ ರಥಂ ಶಾತಕೌಂಭಂ ಕಸ್ಯಾಯಮಿತಿ ಚಾಬ್ರುವನ್ ॥

ಅನುವಾದ

ಭಗವಾನ್ ಸೂರ್ಯನಾರಾಯಣನು ಉದಯಾಚಲಕ್ಕೆ ಬಂದಾಗ ಮನೆಯಿಂದ ಹೊರಗೆ ಬಂದ ವ್ರಜಾಂಗನೆಯರು ನಂದಗೋಪನ ಮನೆಯ ಬಾಗಿಲಲ್ಲಿ ನಿಂತಿದ್ದ ಒಂದು ಸ್ವರ್ಣರಥವನ್ನು ನೋಡಿದರು. ‘ಇದು ಯಾರ ರಥವಾಗಿರಬಹುದು?’ ಎಂದು ತಮ್ಮ-ತಮ್ಮಲ್ಲಿಯೇ ಪ್ರಶ್ನಿಸತೊಡಗಿದರು. ॥47॥

(ಶ್ಲೋಕ-48)

ಮೂಲಮ್

ಅಕ್ರೂರ ಆಗತಃ ಕಿಂ ವಾ ಯಃ ಕಂಸಸ್ಯಾರ್ಥಸಾಧಕಃ ।
ಯೇನ ನೀತೋ ಮಧುಪುರೀಂ ಕೃಷ್ಣಃ ಕಮಲಲೋಚನಃ ॥

ಅನುವಾದ

ಒಬ್ಬಳು ಕೇಳಿದಳು - ಕಮಲಲೋಚನನಾದ ಶ್ಯಾಮಸುಂದರನನ್ನು ಮಧುರೆಗೆ ಕರೆದುಕೊಂಡು ಹೋಗಿದ್ದ ಕಂಸನ ಕಾರ್ಯ ಸಾಧಕನಾದ ಅಕ್ರೂರನೇನಾದರೂ ಪುನಃ ಬಂದಿರುವನೇ! ॥48॥

(ಶ್ಲೋಕ-49)

ಮೂಲಮ್

ಕಿಂ ಸಾಧಯಿಷ್ಯತ್ಯಸ್ಮಾಭಿರ್ಭರ್ತುಃ ಪ್ರೇತಸ್ಯ ನಿಷ್ಕೃತಿಮ್ ।
ಇತಿ ಸೀಣಾಂ ವದಂತೀನಾಮುದ್ಧವೋಗಾತ್ ಕೃತಾಹ್ನಿಕಃ ॥

ಅನುವಾದ

ಇನ್ನೊಬ್ಬಳು ಕೇಳಿದಳು-ತನ್ನ ಒಡೆಯನಾದ ಕಂಸನ ಪ್ರೇತಕ್ಕೆ ನಮ್ಮಿಂದ ಪಿಂಡಹಾಕಿಸಲೇನಾದರೂ ಬಂದಿರುವನೇ? ಇದಲ್ಲದೆ ಬೇರೆ ಪ್ರಯೋಜನ ಏನಿದ್ದೀತು? ಹೀಗೆ ವ್ರಜವಾಸಿಯರಾದ ಸ್ತ್ರೀಯರು ಮಾತನಾಡಿಕೊಂಡಿರುವಾಗ ಉದ್ಧವನು ತನ್ನ ನಿತ್ಯ ಕರ್ಮಗಳನ್ನು ಮುಗಿಸಿ ಅಲ್ಲಿಗೆ ಆಗಮಿಸಿದನು. ॥49॥

ಅನುವಾದ (ಸಮಾಪ್ತಿಃ)

ನಲವತ್ತಾರನೆಯ ಅಧ್ಯಾಯವು ಮುಗಿಯಿತು. ॥46॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ
ನಂದಶೋಕಾಪನಯನಂ ನಾಮ ಷಟ್ಚತ್ವಾರಿಂಶೋಽಧ್ಯಾಯಃ ॥46॥