[ನಲವತ್ತೈದನೆಯ ಅಧ್ಯಾಯ]
ಭಾಗಸೂಚನಾ
ಬಲರಾಮ-ಕೃಷ್ಣರ ಉಪನಯನ ಮತ್ತು ಗುರುಕುಲ ಪ್ರವೇಶ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಪಿತರಾವುಪಲಬ್ಧಾರ್ಥೌ ವಿದಿತ್ವಾ ಪುರುಷೋತ್ತಮಃ ।
ಮಾ ಭೂದಿತಿ ನಿಜಾಂ ಮಾಯಾಂ ತತಾನ ಜನಮೋಹಿನೀಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ತಂದೆ-ತಾಯಿಯರಿಗೆ ನನ್ನ ಐಶ್ವರ್ಯದ, ಭಗವದ್ಭಾವದ ಜ್ಞಾನವುಂಟಾಗಿದೆ ಎಂದು ತಿಳಿದ ಭಗವಾನ್ ಶ್ರೀಕೃಷ್ಣನು ಹೀಗಾಗಬಾರದು, ಇದರಿಂದ ಪುತ್ರ ಸ್ನೇಹವನ್ನು ಪಡೆಯಲಾರದೆಂದು ಯೋಚಿಸಿ ಜನರನ್ನು ವಿಮೋಹಗೊಳಿಸುವ ತನ್ನ ಮಾಯೆಯನ್ನು ಅವರ ಮೇಲೆ ಬೀಸಿದನು. ॥1॥
(ಶ್ಲೋಕ-2)
ಮೂಲಮ್
ಉವಾಚ ಪಿತರಾವೇತ್ಯ ಸಾಗ್ರಜಃ ಸಾತ್ವತರ್ಷಭಃ ।
ಪ್ರಶ್ರಯಾವನತಃ ಪ್ರೀಣನ್ನಂಬ ತಾತೇತಿ ಸಾದರಮ್ ॥
ಅನುವಾದ
ಸಾತ್ವತ ಶ್ರೇಷ್ಠನಾದ ಶ್ರೀಕೃಷ್ಣನು ಬಲರಾಮನೊಡನೆ ತನ್ನ ತಂದೆ-ತಾಯಿಗಳ ಬಳಿಗೆ ಹೋಗಿ ಆದರದಿಂದ ವಿನಯ ಪೂರ್ವಕವಾಗಿ ಅವರಿಗೆ ತಲೆಬಾಗಿ ಅಮ್ಮಾ! ಅಪ್ಪಾ! ಎಂದು ಕರೆಯುತ್ತಾ, ಅವರನ್ನು ಸಂತೋಷಪಡಿಸಿ ಹೀಗೆ ಹೇಳತೊಡಗಿದನು. ॥2॥
(ಶ್ಲೋಕ-3)
ಮೂಲಮ್
ನಾಸ್ಮತ್ತೋ ಯುವಯೋಸ್ತಾತ ನಿತ್ಯೋತ್ಕಂಠಿತಯೋರಪಿ ।
ಬಾಲ್ಯಪೌಗಂಡಕೈಶೋರಾಃ ಪುತ್ರಾಭ್ಯಾಮಭವನ್ ಕ್ವಚಿತ್ ॥
ಅನುವಾದ
ಅಮ್ಮಾ! ಅಪ್ಪಾ! ನಾವಿಬ್ಬರೂ ನಿಮ್ಮ ಮಕ್ಕಳಾಗಿದ್ದೇವೆ. ನೀವು ನಮ್ಮನ್ನು ನೋಡಲು ಸದಾ ಉತ್ಸುಕರಾಗಿದ್ದರೂ ನಮ್ಮ ಬಾಲ್ಯ, ಪೌಗಂಡ, ಕಿಶೋರ ಅವಸ್ಥೆಗಳ ದರ್ಶನಸುಖವನ್ನು ನಾವು ನಿಮಗೆ ಕೊಡಲಾಗಲಿಲ್ಲ. ॥3॥
(ಶ್ಲೋಕ-4)
ಮೂಲಮ್
ನ ಲಬ್ಧೋ ದೈವಹತಯೋರ್ವಾಸೋ ನೌ ಭವದಂತಿಕೇ ।
ಯಾಂ ಬಾಲಾಃ ಪಿತೃಗೇಹಸ್ಥಾ ವಿಂದಂತೇ ಲಾಲಿತಾ ಮುದಮ್ ॥
ಅನುವಾದ
ದುರ್ದೈವವಶದಿಂದ ನಿಮ್ಮ ಜೊತೆಯಲ್ಲಿರುವ ಸೌಭಾಗ್ಯವು ನಮಗೆ ದೊರೆಯಲಿಲ್ಲ. ಈ ಕಾರಣದಿಂದಾಗಿ ಬಾಲಕರು ತಂದೆ-ತಾಯಿಯರ ಬಳಿ ಇರುತ್ತಾ ಅನುಭವಿಸುವ ಲಾಲನೆ-ಪಾಲನೆಯ ಸುಖವು ನಮಗಿಲ್ಲವಾಯಿತು. ॥4॥
(ಶ್ಲೋಕ-5)
ಮೂಲಮ್
ಸರ್ವಾರ್ಥಸಂಭವೋ ದೇಹೋ ಜನಿತಃ ಪೋಷಿತೋ ಯತಃ ।
ನ ತಯೋರ್ಯಾತಿ ನಿರ್ವೇಶಂ ಪಿತ್ರೋರ್ಮರ್ತ್ಯಃ ಶತಾಯುಷಾ ॥
ಅನುವಾದ
ಧರ್ಮಾರ್ಥ-ಕಾಮ ಮೋಕ್ಷಗಳೆಂಬ ಸಕಲ ಪುರುಷಾರ್ಥಗಳಿಗೂ ಸಾಧನಭೂತವಾದ ಈ ದೇಹವು ಯಾರಿಂದ ಹುಟ್ಟಿತೋ ಹಾಗೂ ಪೋಷಿಸಲ್ಪಟ್ಟಿತೋ ಅಂತಹ ತಂದೆ-ತಾಯಿಗಳಿಬ್ಬರ ಋಣವನ್ನು ನೂರು ವರ್ಷಗಳ ಸೇವೆಯಿಂದಲೂ ಮನುಷ್ಯನಾದವನು ತೀರಸಲಾರನು. ॥5॥
(ಶ್ಲೋಕ-6)
ಮೂಲಮ್
ಯಸ್ತಯೋರಾತ್ಮಜಃ ಕಲ್ಪ ಆತ್ಮನಾ ಚ ಧನೇನ ಚ ।
ವೃತ್ತಿಂ ನ ದದ್ಯಾತ್ತಂ ಪ್ರೇತ್ಯ ಸ್ವಮಾಂಸಂ ಖಾದಯಂತಿ ಹಿ ॥
ಅನುವಾದ
ಯಾವ ಪುತ್ರನು ಸಮರ್ಥನಾಗಿದ್ದರೂ ತನ್ನ ತಂದೆ-ತಾಯಿಗಳ ಸೇವೆಯನ್ನು ಶರೀರದಿಂದಾಗಲೀ, ಧನದಿಂದಾಗಲೀ ಮಾಡುವುದಿಲ್ಲವೋ ಅವನು ಸತ್ತಮೇಲೆ ಯಮದೂತರು ಅವನ ಶರೀರದ ಮಾಂಸವನ್ನೇ ಅವನಿಗೆ ತಿನ್ನಿಸುವರು. ॥6॥
(ಶ್ಲೋಕ-7)
ಮೂಲಮ್
ಮಾತರಂ ಪಿತರಂ ವೃದ್ಧಂ ಭಾರ್ಯಾಂ ಸಾಧ್ವೀಂ ಸುತಂ ಶಿಶುಮ್ ।
ಗುರುಂ ವಿಪ್ರಂ ಪ್ರಪನ್ನಂ ಚ ಕಲ್ಪೋಬಿಭ್ರಚ್ಛ್ವಸನ್ ಮೃತಃ ॥
ಅನುವಾದ
ಸಮರ್ಥನಾಗಿದ್ದರೂ ವೃದ್ಧರಾದ ತಂದೆ-ತಾಯಿಯರನ್ನು, ಸಾಧ್ವಿಯಾದ ಪತ್ನಿಯನ್ನು, ಬಾಲಕರನ್ನು, ಎಳೆ ಮಕ್ಕಳನ್ನು, ಗುರುಗಳನ್ನು, ಬ್ರಾಹ್ಮಣರು ಮತ್ತು ಶರಣಾಗತರನ್ನು ರಕ್ಷಿಸಿ-ಪೋಷಿಸದವನು ಬದುಕಿದ್ದರೂ ಸತ್ತಂತೆಯೇ ಸರಿ. ॥7॥
(ಶ್ಲೋಕ-8)
ಮೂಲಮ್
ತನ್ನಾವಕಲ್ಪಯೋಃ ಕಂಸಾನ್ನಿತ್ಯಮುದ್ವಿಗ್ನಚೇತಸೋಃ ।
ಮೋಘಮೇತೇ ವ್ಯತಿಕ್ರಾಂತಾ ದಿವಸಾ ವಾಮನರ್ಚತೋಃ ॥
ಅನುವಾದ
ಅಪ್ಪಾ! ಕಂಸನ ಭಯದಿಂದ ಉದ್ವಿಗ್ನವಾದ ಮನಸ್ಸಿನಿಂದ ಕೂಡಿದ್ದ ನಾವು ನಿಮ್ಮ ಸೇವೆ ಮಾಡಲು ಸಮರ್ಥರಾಗಲಿಲ್ಲ. ಈ ಕಾರಣದಿಂದಲೇ ಇಷ್ಟು ದಿವಸಗಳೂ ತಮ್ಮ ಸೇವೆಮಾಡದೆ ವ್ಯರ್ಥವಾಗಿ ಕಳೆದುಹೋದುವು. ॥8॥
(ಶ್ಲೋಕ-9)
ಮೂಲಮ್
ತತ್ ಕ್ಷಂತುಮರ್ಹಥಸ್ತಾತ ಮಾತರ್ನೌ ಪರತಂತ್ರಯೋಃ ।
ಅಕುರ್ವತೋರ್ವಾಂ ಶುಶ್ರೂಷಾಂ ಕ್ಲಿಷ್ಟಯೋರ್ದುರ್ಹೃದಾ ಭೃಶಮ್ ॥
ಅನುವಾದ
ಜನನಿ-ಜನಕರೇ! ನೀವಿಬ್ಬರೂ ನಮ್ಮನ್ನು ಕ್ಷಮಿಸಿ ಬಿಡಿರಿ. ಅಯ್ಯೋ! ದುಷ್ಟನಾದ ಕಂಸನು ನಿಮಗೆ ಎಷ್ಟೊಂದು ಕಷ್ಟ ಕೊಟ್ಟನು. ಆದರೆ ಪರತಂತ್ರರಾಗಿದ್ದ ಕಾರಣ ತಮ್ಮ ಸೇವೆಯನ್ನು ನಮ್ಮಿಂದ ಮಾಡಲಾಗಲಿಲ್ಲ. ॥9॥
(ಶ್ಲೋಕ-10)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತಿ ಮಾಯಾಮನುಷ್ಯಸ್ಯ ಹರೇರ್ವಿಶ್ವಾತ್ಮನೋ ಗಿರಾ ।
ಮೋಹಿತಾವಂಕಮಾರೋಪ್ಯ ಪರಿಷ್ವಜ್ಯಾಪತುರ್ಮುದಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ತನ್ನ ಲೀಲೆಯಿಂದ ಮನುಷ್ಯನಾಗಿದ್ದ ವಿಶ್ವಾತ್ಮಾ ಶ್ರೀಹರಿಯಈ ಮಾತುಗಳಿಂದ ಮೋಹಿತರಾದ ವಸುದೇವ-ದೇವಕಿಯರು ಅವರನ್ನು ತೊಡೆಯಲ್ಲೆತ್ತಿಕೊಂಡು ಗಾಢವಾಗಿ ಆಲಿಂಗಿಸಿ ಪರಮಾನಂದವನ್ನು ಪಡೆದರು. ॥10॥
(ಶ್ಲೋಕ-11)
ಮೂಲಮ್
ಸಿಂಚಂತಾವಶ್ರುಧಾರಾಭಿಃ ಸ್ನೇಹಪಾಶೇನ ಚಾವೃತೌ ।
ನ ಕಿಂಚಿದೂಚತೂ ರಾಜನ್ ಬಾಷ್ಪಕಂಠೌ ವಿಮೋಹಿತೌ ॥
ಅನುವಾದ
ರಾಜನೇ! ಸ್ನೇಹಪಾಶದಲ್ಲಿ ಬಂಧಿತರಾದ ವಸುದೇವ-ದೇವಕಿಯರು ಮೋಹಿತರಾಗಿ ಆನಂದ ಬಾಷ್ಪಗಳಿಂದ ಅವರಿಗೆ ಅಭಿಷೇಕ ಮಾಡಿದರು. ಕಣ್ಣೀರು ಸುರಿಯುತ್ತಿದ್ದ ಕಂಠವು ಉಮ್ಮಳಿಸಿ ಬಂದು ಮಾತನಾಡಲು ಸಾಧ್ಯವಾಗಲಿಲ್ಲ. ॥11॥
(ಶ್ಲೋಕ-12)
ಮೂಲಮ್
ಏವಮಾಶ್ವಾಸ್ಯ ಪಿತರೌ ಭಗವಾನ್ ದೇವಕೀಸುತಃ ।
ಮಾತಾಮಹಂ ತೂಗ್ರಸೇನಂ ಯದೂನಾಮಕರೋನ್ನೃಪಮ್ ॥
ಅನುವಾದ
ದೇವಕೀನಂದನನಾದ ಭಗವಾನ್ ಶ್ರೀಕೃಷ್ಣನು ಹೀಗೆ ತಂದೆ ತಾಯಿಯರನ್ನು ಸಂತೈಸಿ, ತನ್ನ ತಾತನಾದ ಉಗ್ರಸೇನನನ್ನು ಯಾದವರಿಗೆ ರಾಜನನ್ನಾಗಿ ಮಾಡಿದನು. ॥12॥
(ಶ್ಲೋಕ-13)
ಮೂಲಮ್
ಆಹ ಚಾಸ್ಮಾನ್ ಮಹಾರಾಜ ಪ್ರಜಾಶ್ಚಾಜ್ಞಪ್ತುಮರ್ಹಸಿ ।
ಯಯಾತಿಶಾಪಾದ್ಯದುಭಿರ್ನಾಸಿತವ್ಯಂ ನೃಪಾಸನೇ ॥
ಅನುವಾದ
ಮತ್ತೆ ಹೇಳಿದನು - ಮಹಾರಾಜ! ನಾವು ನಿಮ್ಮ ಪ್ರಜೆಯಾಗಿದ್ದೇವೆ. ನೀನು ನಮಗೆ ಯಾವ ಕಾರ್ಯಮಾಡಬೇಕೆಂಬುದನ್ನು ಆಜ್ಞಾಪಿಸು. ಯಯಾತಿಯ ಶಾಪದ ಕಾರಣದಿಂದ ಯದುವಂಶೀಯರು ರಾಜಸಿಂಹಾಸನದಲ್ಲಿ ಕುಳಿತುಕೊಳ್ಳಬಾರದು. (ಆದರೂ ನನ್ನ ಇಚ್ಛೆಯಂತೆ ನಿನ್ನನ್ನು ರಾಜನನ್ನಾಗಿಸಿದ್ದೇನೆ. ಇದರಿಂದ ನಿನಗೆ ಯಾವ ದೋಷವೂ ಉಂಟಾಗಲಾರದು) ॥13॥
(ಶ್ಲೋಕ-14)
ಮೂಲಮ್
ಮಯಿ ಭೃತ್ಯ ಉಪಾಸೀನೇ ಭವತೋ ವಿಬುಧಾದಯಃ ।
ಬಲಿಂ ಹರಂತ್ಯವನತಾಃ ಕಿಮುತಾನ್ಯೇ ನರಾಧಿಪಾಃ ॥
ಅನುವಾದ
ನಾನು ಸೇವಕನಾಗಿ ನಿಮ್ಮ ಸೇವೆ ಮಾಡುತ್ತಿರುವವರೆಗೆ ದೊಡ್ಡ-ದೊಡ್ಡ ದೇವತೆಗಳೂ ತಲೆತಗ್ಗಿಸಿ ನಿಮಗೆ ಕಪ್ಪ-ಕಾಣಿಕೆಯನ್ನು ಕೊಡುವರು. ಹಾಗಿರುವಾಗ ಬೇರೆ ರಾಜರ ಬಗ್ಗೆ ಹೇಳುವುದೇನಿದೆ? ॥14॥
(ಶ್ಲೋಕ-15)
ಮೂಲಮ್
ಸರ್ವಾನ್ಸ್ವಾನ್ ಜ್ಞಾತಿಸಂಬಂಧಾನ್
ದಿಗ್ಭ್ಯಃ ಕಂಸಭಯಾಕುಲಾಮ್ ।
ಯದುವೃಷ್ಣ್ಯಂಧಕಮಧು-
ದಾಶಾರ್ಹಕುಕುರಾದಿಕಾನ್ ॥
(ಶ್ಲೋಕ-16)
ಮೂಲಮ್
ಸಭಾಜಿತಾನ್ ಸಮಾಶ್ವಾಸ್ಯ ವಿದೇಶಾವಾಸಕರ್ಶಿತಾನ್ ।
ನ್ಯವಾಸಯತ್ಸ್ವಗೇಹೇಷು ವಿತ್ತೈಃ ಸಂತರ್ಪ್ಯ ವಿಶ್ವಕೃತ್ ॥
ಅನುವಾದ
ಸಮಸ್ತ ವಿಶ್ವದ ವಿಧಾತನಾದ ಭಗವಾನ್ ಶ್ರೀಕೃಷ್ಣನು - ಕಂಸನ ಭಯದಿಂದ ವ್ಯಾಕುಲರಾಗಿ ಎಲ್ಲೆಲ್ಲೋ ಓಡಿಹೋಗಿದ್ದ ಯದು, ವೃಷ್ಣಿ, ಅಂಧಕ, ಮಧು, ದಾಶಾರ್ಹ ಮತ್ತು ಕುಕುರ ಮುಂತಾದ ವಂಶೀಯರಾದ ಸಮಸ್ತ ಸ್ವಜಾತೀಯ ಸಂಬಂಧಿಗಳನ್ನು ಹುಡುಕಿ-ಹುಡುಕಿ ಕರೆತಂದನು. ಭಗವಂತನು ಅವರೆಲ್ಲರನ್ನೂ ಸಾಂತ್ವನ ನೀಡಿ, ಸತ್ಕಾರಮಾಡಿ, ಅವರಿಗೆ ಹೇರಳ ಧನ-ಸಂಪತ್ತನ್ನು ಕೊಟ್ಟು ತೃಪ್ತಿಪಡಿಸಿ ತಮ್ಮ-ತಮ್ಮ ಮನೆಗಳಲ್ಲಿ ನೆಲೆಸುವಂತೆ ಮಾಡಿದನು. ॥15-16॥
(ಶ್ಲೋಕ-17)
ಮೂಲಮ್
ಕೃಷ್ಣಸಂಕರ್ಷಣಭುಜೈರ್ಗುಪ್ತಾ ಲಬ್ಧಮನೋರಥಾಃ ।
ಗೃಹೇಷು ರೇಮಿರೇ ಸಿದ್ಧಾಃ ಕೃಷ್ಣರಾಮಗತಜ್ವರಾಃ ॥
ಅನುವಾದ
ಭಗವಾನ್ ಶ್ರೀಕೃಷ್ಣ ಮತ್ತು ಬಲರಾಮರ ಭುಜಬಲದಿಂದ ಸಮಸ್ತ ಯದುವಂಶೀಯರು ಸುರಕ್ಷಿತರಾಗಿದ್ದರು. ಅವನ ಕೃಪೆಯಿಂದ ಅವರಿಗೆ ಯಾವುದೇ ವಿಧದ ವ್ಯಥೆಯಿರಲಿಲ್ಲ, ದುಃಖವಿರಲಿಲ್ಲ. ಅವರೆಲ್ಲರೂ ಕೃತಾರ್ಥರಾಗಿ ತಮ್ಮ ಮನೆಗಳಲ್ಲಿ ಆನಂದದಿಂದ ಇರುತ್ತಿದ್ದರು. ॥17॥
(ಶ್ಲೋಕ-18)
ಮೂಲಮ್
ವೀಕ್ಷಂತೋಹರಹಃ ಪ್ರೀತಾ ಮುಕುಂದವದನಾಂಬುಜಮ್ ।
ನಿತ್ಯಂ ಪ್ರಮುದಿತಂ ಶ್ರೀಮತ್ಸದಯಸ್ಮಿತವೀಕ್ಷಣಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನ ವದನಾರವಿಂದವು ಆನಂದದ ಸದನವಾಗಿತ್ತು. ಅದು ನಿತ್ಯವೂ ಪ್ರುಲ್ಲಿತವಾಗಿದ್ದು ಎಂದೂ ಬಾಡದಿರುವ ಕಮಲವಾಗಿದೆ. ಅದರ ಸೌಂದರ್ಯವು ಅಪಾರವಾಗಿದೆ. ಮಂದಹಾಸ ಮತ್ತು ಕುಡಿನೋಟಗಳು ಮುಕುಂದನ ವದನದಲ್ಲಿ ಸದಾಕಾಲ ಕುಣಿಯುತ್ತಿದ್ದವು. ಯದುವಂಶೀಯರು ಪ್ರತಿ ದಿನವೂ ಅದರ ದರ್ಶನ ಮಾಡುತ್ತಾ ಆನಂದಮಗ್ನರಾಗಿ ಇರುತ್ತಿದ್ದರು. ॥18॥
(ಶ್ಲೋಕ-19)
ಮೂಲಮ್
ತತ್ರ ಪ್ರವಯಸೋಪ್ಯಾಸನ್ ಯುವಾನೋತಿಬಲೌಜಸಃ ।
ಪಿಬಂತೋಕ್ಷೈರ್ಮುಕುಂದಸ್ಯ ಮುಖಾಂಬುಜಸುಧಾಂ ಮುಹುಃ ॥
ಅನುವಾದ
ಮಥುರೆಯ ವೃದ್ಧರೂ ಕೂಡ ಯುವಕರಂತೆ ಅತ್ಯಂತ ಬಲಿಷ್ಠರಾಗಿ ಉತ್ಸಾಹಿಗಳಾಗಿದ್ದರು. ಏಕೆಂದರೆ, ಅವರು ತಮ್ಮ ಕಣ್ಣುಗಳೆಂಬ ದೊನ್ನೆಗಳಿಂದ ಪದೇ-ಪದೇ ಭಗವಂತನ ಮುಖಾರವಿಂದದ ಅಮೃತಮಯ ಮಕರಂದವನ್ನು ಪಾನಮಾಡುತ್ತಾ ಇದ್ದರು. ॥19॥
(ಶ್ಲೋಕ-20)
ಮೂಲಮ್
ಅಥ ನಂದಂ ಸಮಾಸಾದ್ಯ ಭಗವಾನ್ ದೇವಕೀಸುತಃ ।
ಸಂಕರ್ಷಣಶ್ಚ ರಾಜೇಂದ್ರ ಪರಿಷ್ವಜ್ಯೇದಮೂಚತುಃ ॥
ಅನುವಾದ
ಪರೀಕ್ಷಿದ್ರಾಜನೇ! ದೇವಕೀನಂದನ ಭಗವಾನ್ ಶ್ರೀಕೃಷ್ಣನು ಮತ್ತು ಬಲರಾಮರಿಬ್ಬರೂ ನಂದರಾಜನ ಬಳಿಗೆ ಬಂದು ಅವರನ್ನು ಅಪ್ಪಿಕೊಂಡು ಅವರಲ್ಲಿ ಹೀಗೆಂದರು. ॥20॥
(ಶ್ಲೋಕ-21)
ಮೂಲಮ್
ಪಿತರ್ಯುವಾಭ್ಯಾಂ ಸ್ನಿಗ್ಧಾಭ್ಯಾಂ ಪೋಷಿತೌ ಲಾಲಿತೌ ಭೃಶಮ್ ।
ಪಿತ್ರೋರಭ್ಯಧಿಕಾ ಪ್ರೀತಿರಾತ್ಮಜೇಷ್ವಾತ್ಮನೋಪಿ ಹಿ ॥
ಅನುವಾದ
ಮಾತಾ ಪಿತೃಗಳೇ! ಪ್ರೇಮ ಹೃದಯರಾದ ನೀವಿಬ್ಬರೂ ನಮ್ಮನ್ನು ಅಕ್ಕರೆಯಿಂದ ಲಾಲಿಸಿ ಪೋಷಿಸಿರುವಿರಿ. ತಂದೆ-ತಾಯಿಗಳಿಗೆ ತಮ್ಮ ಪ್ರಾಣಗಳಿಗಿಂತಲೂ ಅಧಿಕವಾಗಿ ತಮ್ಮ ಮಕ್ಕಳಲ್ಲಿ ಪ್ರೀತಿ ಇರುತ್ತದೆ. ॥21॥
(ಶ್ಲೋಕ-22)
ಮೂಲಮ್
ಸ ಪಿತಾ ಸಾ ಚ ಜನನೀ ಯೌ ಪುಷ್ಣೀತಾಂ ಸ್ವಪುತ್ರವತ್ ।
ಶಿಶೂನ್ ಬಂಧುಭಿರುತ್ಸೃಷ್ಟಾನಕಲ್ಪೈಃ ಪೋಷರಕ್ಷಣೇ ॥
ಅನುವಾದ
ಪಾಲನೆ ರಕ್ಷಣೆಗಳಲ್ಲಿ ಅಸಮರ್ಥರಾದ ಬಂಧುಗಳಿಂದ ಪರಿತ್ಯಜಿಸಲ್ಪಟ್ಟ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಭಾವಿಸಿ ರಕ್ಷಿಸುವವರೇ ನಿಜವಾದ ತಾಯಿ-ತಂದೆಯರು. ॥22॥
(ಶ್ಲೋಕ-23)
ಮೂಲಮ್
ಯಾತ ಯೂಯಂ ವ್ರಜಂ ತಾತ
ವಯಂ ಚ ಸ್ನೇಹದುಃಖಿತಾನ್ ।
ಜ್ಞಾತೀನ್ ವೋ ದ್ರಷ್ಟುಮೇಷ್ಯಾಮೋ
ವಿಧಾಯ ಸುಹೃದಾಂ ಸುಖಮ್ ॥
ಅನುವಾದ
ಅಪ್ಪಾ! ಈಗ ನೀವೆಲ್ಲರೂ ಗೋಕುಲಕ್ಕೆ ಹೋಗಿರಿ. ನಾವಿಲ್ಲದೆ ವಾತ್ಸಲ್ಯದಿಂದಾಗಿ ನಿಮಗೆ ಬಹಳ ದುಃಖವಾಗುವುದರಲ್ಲಿ ಸಂದೇಹವೇ ಇಲ್ಲ. ಇಲ್ಲಿಯ ಸುಹೃದ್-ಸಂಬಂಧಿಗಳನ್ನು ಸುಖವಾಗಿರುವಂತೆ ಮಾಡಿ, ನಾವು ನಿಮ್ಮನ್ನು ಭೆಟ್ಟಿಯಾಗಲು ಆದಷ್ಟು ಬೇಗನೇ ಬರುವೆವು. ॥23॥
(ಶ್ಲೋಕ-24)
ಮೂಲಮ್
ಏವಂ ಸಾಂತ್ವಯ್ಯ ಭಗವಾನ್ ನಂದಂ ಸವ್ರಜಮಚ್ಯುತಃ ।
ವಾಸೋಲಂಕಾರಕುಪ್ಯಾದ್ಯೈರರ್ಹಯಾಮಾಸ ಸಾದರಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ನಂದಗೋಪನೇ ಮೊದಲಾದ ವ್ರಜವಾಸಿಗಳನ್ನು ಹೀಗೆ ಸಾಂತ್ವನಗೊಳಿಸಿ, ಬಹಳ ಆದರದಿಂದ ವಸ್ತ್ರಾಭೂಷಣಗಳನ್ನು, ಅನೇಕ ಪಾತ್ರೆ-ಪಗಡಿಗಳನ್ನು ಕೊಟ್ಟು ಅವರನ್ನು ಸತ್ಕರಿಸಿದನು. ॥24॥
(ಶ್ಲೋಕ-25)
ಮೂಲಮ್
ಇತ್ಯುಕ್ತಸ್ತೌ ಪರಿಷ್ವಜ್ಯ ನಂದಃ ಪ್ರಣಯವಿಹ್ವಲಃ ।
ಪೂರಯನ್ನಶ್ರುಭಿರ್ನೇತ್ರೇ ಸಹ ಗೋಪೈರ್ವ್ರಜಂ ಯಯೌ ॥
ಅನುವಾದ
ಭಗವಂತನ ಮಾತನ್ನು ಕೇಳಿ ನಂದರಾಜನು ಪ್ರೇಮದಿಂದ ವಿಹ್ವಲನಾಗಿ ಇಬ್ಬರೂ ಸಹೋದರರನ್ನು ಅಪ್ಪಿಕೊಂಡು, ಕಣ್ಣುಗಳಿಂದ ನೀರನ್ನು ಸುರಿಸುತ್ತಾ ಗೋಪಾಲಕರೊಂದಿಗೆ ವ್ರಜಕ್ಕೆ ಪ್ರಯಾಣಮಾಡಿದನು. ॥25॥
(ಶ್ಲೋಕ-26)
ಮೂಲಮ್
ಅಥ ಶೂರಸುತೋ ರಾಜನ್ ಪುತ್ರಯೋಃ ಸಮಕಾರಯತ್ ।
ಪುರೋಧಸಾ ಬ್ರಾಹ್ಮಣೈಶ್ಚ ಯಥಾವದ್ವಜಸಂಸ್ಕೃತಿಮ್ ॥
ಅನುವಾದ
ಎಲೈ ರಾಜೇಂದ್ರನೇ! ಇದಾದ ಬಳಿಕ ವಸುದೇವನು ಕುಲಪುರೋಹಿತರಾದ ಗರ್ಗಾಚಾರ್ಯರಿಂದ ಹಾಗೂ ಇತರ ಬ್ರಾಹ್ಮಣರಿಂದ ಇಬ್ಬರೂ ಪುತ್ರರಿಗೆ ವಿಧಿವತ್ತಾಗಿ ದ್ವಿಜಾತಿಗೆ ಸಮುಚಿತವಾದ ಉಪನಯನ ಸಂಸ್ಕಾರವನ್ನು ಮಾಡಿಸಿದನು. ॥26॥
(ಶ್ಲೋಕ-27)
ಮೂಲಮ್
ತೇಭ್ಯೋದಾದ್ದಕ್ಷಿಣಾ ಗಾವೋ ರುಕ್ಮಮಾಲಾಃ ಸ್ವಲಂಕೃತಾಃ ।
ಸ್ವಲಂಕೃತೇಭ್ಯಃ ಸಂಪೂಜ್ಯ ಸವತ್ಸಾಃ ಕ್ಷೌಮಮಾಲಿನೀಃ ॥
ಅನುವಾದ
ವಸುದೇವನು ವಿವಿಧ ಪ್ರಕಾರವಾಗಿ ವಸ್ತ್ರಾಭೂಷಣಗಳಿಂದ ಬ್ರಾಹ್ಮಣರನ್ನು ಸತ್ಕರಿಸಿ, ಅವರಿಗೆ ಬಹಳ ದಕ್ಷಿಣೆಯೊಂದಿಗೆ ಸುವರ್ಣ ಮಾಲೆಗಳಿಂದ ಸಮಲಂಕೃತವಾದ, ಅನೇಕ ಭೂಷಣಗಳಿಂದ ಮತ್ತು ರೇಷ್ಮೆ ವಸ್ತ್ರಗಳಿಂದ ಅಲಂಕರಿಸಿದ ಅನೇಕ ಸವತ್ಸಗೋವುಗಳನ್ನು ದಾನಮಾಡಿದನು. ॥27॥
(ಶ್ಲೋಕ-28)
ಮೂಲಮ್
ಯಾಃ ಕೃಷ್ಣರಾಮಜನ್ಮರ್ಕ್ಷೇ ಮನೋದತ್ತಾ ಮಹಾಮತಿಃ ।
ತಾಶ್ಚಾದದಾದನುಸ್ಮೃತ್ಯ ಕಂಸೇನಾಧರ್ಮತೋ ಹೃತಾಃ ॥
ಅನುವಾದ
ಮಹಾಮತಿಯಾದ ವಸುದೇವನು ಭಗವಾನ್ ಶ್ರೀಕೃಷ್ಣ - ಬಲರಾಮರ ಜನ್ಮ ನಕ್ಷತ್ರದಂದು - ಮೊದಲು ಕಂಸನಿಂದ ಅನ್ಯಾಯದಿಂದ ಕಸಿದುಕೊಳ್ಳಲ್ಪಟ್ಟ, ಮೊದಲೇ ಮಾನಸಿಕವಾಗಿ ದಾನ ಮಾಡಿದ್ದ ಗೋವುಗಳನ್ನು ಈಗ ಬ್ರಾಹ್ಮಣರಿಗೆ ಪ್ರತ್ಯಕ್ಷವಾಗಿ ದಾನ ಮಾಡಿದನು. ॥28॥
(ಶ್ಲೋಕ-29)
ಮೂಲಮ್
ತತಶ್ಚ ಲಬ್ಧಸಂಸ್ಕಾರೌ ದ್ವಿಜತ್ವಂ ಪ್ರಾಪ್ಯ ಸುವ್ರತೌ ।
ಗರ್ಗಾದ್ಯದುಕುಲಾಚಾರ್ಯಾದ್ಗಾಯತ್ರಂ ವ್ರತಮಾಸ್ಥಿತೌ ॥
ಅನುವಾದ
ಈ ಪ್ರಕಾರ ಯದುವಂಶದ ಪುರೋಹಿತರಾದ ಗರ್ಗಾಚಾರ್ಯರು ಸಂಸ್ಕಾರವನ್ನು ಮಾಡಿಸಿ ಬಲರಾಮ ಶ್ರೀಕೃಷ್ಣರು ದ್ವಿಜರಾದರು. ಅವರ ಬ್ರಹ್ಮಚರ್ಯವ್ರತವಾದರೋ ಅಖಂಡವಾಗಿಯೇ ಇತ್ತು. ಈಗ ಅವರು ಗಾಯತ್ರಿ ಪೂರ್ವಕ ಅಧ್ಯಯನ ಮಾಡಲು ಅದನ್ನು ನಿಯಮಿತವಾಗಿ ಸ್ವೀಕರಿಸಿದರು. ॥29॥
(ಶ್ಲೋಕ-30)
ಮೂಲಮ್
ಪ್ರಭವೌ ಸರ್ವವಿದ್ಯಾನಾಂ ಸರ್ವಜ್ಞೌ ಜಗದೀಶ್ವರೌ ।
ನಾನ್ಯಸಿದ್ಧಾಮಲಜ್ಞಾನಂ ಗೂಹಮಾನೌ ನರೇಹಿತೈಃ ॥
ಅನುವಾದ
ಜಗತ್ತಿನ ಏಕಮಾತ್ರ ಸ್ವಾಮಿಗಳೂ, ಸರ್ವಜ್ಞರೂ ಆದ ಶ್ರೀಕೃಷ್ಣ-ಬಲರಾಮರಿಂದಲೇ ಎಲ್ಲ ವಿದ್ಯೆಗಳು ಉದ್ಭವಿಸಿವೆ. ಅವರ ನಿರ್ಮಲಜ್ಞಾನವು ಸ್ವತಃಸಿದ್ಧವಾದುದು. ಹೀಗಿದ್ದರೂ ಅವರು ಮನುಷ್ಯರಂತೆ ಲೀಲೆಯನ್ನು ತೋರಿ ಅದನ್ನು ಅಡಗಿಸಿ ಇಟ್ಟಿದ್ದರು. ॥30॥
(ಶ್ಲೋಕ-31)
ಮೂಲಮ್
ಅಥೋ ಗುರುಕುಲೇ ವಾಸಮಿಚ್ಛಂತಾವುಪಜಗ್ಮತುಃ ।
ಕಾಶ್ಯಂ ಸಾಂದೀಪನಿಂ ನಾಮ ಹ್ಯವಂತೀಪುರವಾಸಿನಮ್ ॥
ಅನುವಾದ
ಈಗ ಅವರಿಬ್ಬರೂ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಬೇಕೆಂಬ ಇಚ್ಛೆಯಿಂದ ಅವಂತೀಪುರ(ಉಜ್ಜಯಿನಿ)ದಲ್ಲಿ ವಾಸಿಸುತ್ತಿದ್ದ ಕಾಶ್ಯಪಗೋತ್ರಿಯನಾದ ಸಾಂದೀಪನೀಮುನಿಯ ಬಳಿಗೆ ಹೋದರು. ॥31॥
(ಶ್ಲೋಕ-32)
ಮೂಲಮ್
ಯಥೋಪಸಾದ್ಯ ತೌ ದಾಂತೌ ಗುರೌ ವೃತ್ತಿಮನಿಂದಿತಾಮ್ ।
ಗ್ರಾಹಯಂತಾವುಪೇತೌ ಸ್ಮ ಭಕ್ತ್ಯಾ ದೇವಮಿವಾದೃತೌ ॥
ಅನುವಾದ
ಸೋದರರಿಬ್ಬರೂ ವಿಧಿಪೂರ್ವಕವಾಗಿ ಗುರುಗಳ ಬಳಿಯಲ್ಲಿ ವಾಸಿಸ ತೊಡಗಿದರು. ಆಗ ಅವರು ಬಹಿರಿಂದ್ರಿಯಗಳನ್ನು ನಿಗ್ರಹಿಸಿದ್ದರು. ಗುರುಗಳ ವಿಷಯದಲ್ಲಿ ನಿರ್ದುಷ್ಟವಾದ ವ್ಯವಹಾರವುಳ್ಳವರಾಗಿದ್ದರು. ಭಗವಾನ್ ಶ್ರೀಕೃಷ್ಣ ಬಲರಾಮರು ಗುರುಗಳ ಸೇವೆ ಹೇಗೆ ಮಾಡಬೇಕೆಂಬ ಆದರ್ಶವನ್ನು ಜನರ ಮುಂದಿಡುತ್ತಾ ಅತ್ಯಂತ ಭಕ್ತಿಯಿಂದ ಇಷ್ಟದೇವರಂತೆ ಗುರುಗಳ ಸೇವೆ ಮಾಡತೊಡಗಿದರು. ॥32॥
(ಶ್ಲೋಕ-33)
ಮೂಲಮ್
ತಯೋರ್ದ್ವಿಜವರಸ್ತುಷ್ಟಃ ಶುದ್ಧಭಾವಾನುವೃತ್ತಿಭಿಃ ।
ಪ್ರೋವಾಚ ವೇದಾನಖಿಲಾನ್ ಸಾಂಗೋಪನಿಷದೋ ಗುರುಃ ॥
ಅನುವಾದ
ಶಿಷ್ಯರ ಶುದ್ಧ ಭಾವದಿಂದ ಕೂಡಿದ ಸೇವೆಯಿಂದ ಸಂತೃಪ್ತರಾದ ಬ್ರಾಹ್ಮಣ ಶ್ರೇಷ್ಠರಾದ ಸಾಂದೀಪನೀ ಗುರುಗಳು ಇಬ್ಬರೂ ಸೋದರರಿಗೆ ಶಿಕ್ಷಾ, ವ್ಯಾಕರಣಾದಿ ಆರು ಅಂಗಗಳೂ, ಉಪನಿಷತ್ತು ಸೇರಿ ನಾಲ್ಕೂ ವೇದಗಳನ್ನು ಉಪದೇಶಿಸಿದರು. ॥33॥
(ಶ್ಲೋಕ-34)
ಮೂಲಮ್
ಸರಹಸ್ಯಂ ಧನುರ್ವೇದಂ ಧರ್ಮಾನ್ ನ್ಯಾಯಪಥಾಂಸ್ತಥಾ ।
ತಥಾ ಚಾನ್ವೀಕ್ಷಿಕೀಂ ವಿದ್ಯಾಂ ರಾಜನೀತಿಂ ಚ ಷಡ್ವಿಧಾಮ್ ॥
ಅನುವಾದ
ಇಷ್ಟು ಮಾತ್ರವಲ್ಲದೆ ಮಂತ್ರಗಳ ರಹಸ್ಯದಿಂದ ಕೂಡಿದ ಧನುರ್ವೇದವನ್ನೂ, ಮನುಸ್ಮೃತಿಯೇ ಮೊದಲಾದ ಧರ್ಮಶಾಸ್ತ್ರಗಳನ್ನೂ, ವೇದಾರ್ಥಗಳನ್ನು ನಿರೂಪಿಸುವ ಮೀಮಾಂಸವೇ ಮೊದಲಾದ ಶಾಸ್ತ್ರಗಳನ್ನು, ನ್ಯಾಯ (ತರ್ಕ) ಶಾಸ್ತ್ರವನ್ನು ಉಪದೇಶಿಸಿದರು. ಸಂಧಿ, ವಿಗ್ರಹ, ಯಾನ, ಆಸನ, ದ್ವೈಧ ಮತ್ತು ಆಶ್ರಯಗಳೆಂಬ ಆರು ವಿಧವಾದ ರಾಜನೀತಿಯನ್ನು ಕಲಿಸಿಕೊಟ್ಟರು. ॥34॥
(ಶ್ಲೋಕ-35)
ಮೂಲಮ್
ಸರ್ವಂ ನರವರಶ್ರೇಷ್ಠೌ ಸರ್ವವಿದ್ಯಾಪ್ರವರ್ತಕೌ ।
ಸಕೃನ್ನಿಗದಮಾತ್ರೇಣ ತೌ ಸಂಜಗೃಹತುರ್ನೃಪ ॥
ಅನುವಾದ
ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣ-ಬಲರಾಮರೇ ಸಮಸ್ತ ವಿದ್ಯೆಗಳ ಪ್ರವರ್ತಕರು. ಆದ್ದರಿಂದ ಅವರು ಬೇರೆಯವರಿಂದ ಕಲಿಯ ಬೇಕಾದುದೇನೂ ಇರಲಿಲ್ಲ. ಆದರೂ ಮನುಷ್ಯರಂತೆ ವ್ಯವಹರಿಸುತ್ತಿದ್ದ ಅವರು ಏಕಸಂಧಿಗ್ರಾಹಿಗಳಾಗಿ ಸಮಸ್ತ ವಿದ್ಯೆಗಳನ್ನು ಕಲಿತುಕೊಂಡರು. ॥35॥
(ಶ್ಲೋಕ-36)
ಮೂಲಮ್
ಅಹೋರಾತ್ರೈಶ್ಚತುಃಷಷ್ಟ್ಯಾ ಸಂಯತ್ತೌ ತಾವತೀಃ ಕಲಾಃ ।
ಗುರುದಕ್ಷಿಣಯಾಚಾರ್ಯಂ ಛಂದಯಾಮಾಸತುರ್ನೃಪ ॥
ಅನುವಾದ
ಪ್ರಯತ್ನಶೀಲರಾದ ರಾಮಕೃಷ್ಣರು ಅರವತ್ತುನಾಲ್ಕು ಕಲೆಗಳನ್ನು ಕೇವಲ ಅರವತ್ತನಾಲ್ಕು ದಿವಸಗಳಲ್ಲಿ ಕಲಿತುಕೊಂಡರು. ಹೀಗೆ ಅಧ್ಯಯನವು ಮುಗಿದಾಗ ಅವರು ಸಾಂದೀಪನೀ ಗುರುಗಳಲ್ಲಿ - ‘ತಾವು ಇಚ್ಛಿಸುವ ಗುರುದಕ್ಷಿಣೆಯನ್ನು ನಮ್ಮಿಂದ ಪಡೆಯಿರಿ’ ಎಂದು ಪ್ರಾರ್ಥಿಸಿಕೊಂಡರು. ॥36॥
(ಶ್ಲೋಕ-37)
ಮೂಲಮ್
ದ್ವಿಜಸ್ತಯೋಸ್ತಂ ಮಹಿಮಾನಮದ್ಭುತಂ
ಸಂಲಕ್ಷ್ಯ ರಾಜನ್ನತಿಮಾನುಷೀಂ ಮತಿಮ್ ।
ಸಂಮಂತ್ರ್ಯ ಪತ್ನ್ಯಾ ಸ ಮಹಾರ್ಣವೇ ಮೃತಂ
ಬಾಲಂ ಪ್ರಭಾಸೇ ವರಯಾಂಬಭೂವ ಹ ॥
ಅನುವಾದ
ಪರೀಕ್ಷಿತನೇ! ಸಾಂದೀಪನೀ ಮುನಿಗಳು ಶ್ರೀಕೃಷ್ಣ-ಬಲರಾಮರ ಅದ್ಭುತ ಮಹಿಮೆಯನ್ನೂ, ಅಲೌಕಿಕ ಬುದ್ಧಿ ಮತ್ತೆಯನ್ನೂ ಆಗಲೇ ತಿಳಿದುಕೊಂಡಿದ್ದರು. ಅವರು ತಮ್ಮ ಪತ್ನಿಯಲ್ಲಿ ಸಮಾಲೋಚನೆಮಾಡಿ, ಶಿಷ್ಯರಲ್ಲಿ - ‘ಪ್ರಭಾಸ ಕ್ಷೇತ್ರದಲ್ಲಿ ನಮ್ಮ ಏಕಮಾತ್ರ ಪುತ್ರನು ಸಮುದ್ರದಲ್ಲಿ ಮುಳುಗಿ ಸತ್ತುಹೋಗಿದ್ದನು. ಅವನನ್ನು ನೀವು ತಂದು ಕೊಡಬೇಕು’ ಅದೇ ಗುರುದಕ್ಷಿಣೆಯಾಗುವುದು ಎಂದು ನುಡಿದರು. ॥37॥
(ಶ್ಲೋಕ-38)
ಮೂಲಮ್
ತಥೇತ್ಯಥಾರುಹ್ಯ ಮಹಾರಥೌ ರಥಂ
ಪ್ರಭಾಸಮಾಸಾದ್ಯ ದುರಂತವಿಕ್ರವೌ ।
ವೇಲಾಮುಪವ್ರಜ್ಯ ನಿಷೀದತುಃ ಕ್ಷಣಂ
ಸಿಂಧುರ್ವಿದಿತ್ವಾರ್ಹಣಮಾಹರತ್ತಯೋಃ ॥
ಅನುವಾದ
ಅನಂತ ಪರಾಕ್ರಮ ಶಾಲಿಗಳು, ಮಹಾರಥಿಕರೂ ಆದ ಶ್ರೀಕೃಷ್ಣ-ಬಲರಾಮರು ‘ಹಾಗೆಯೇ ಆಗಲಿ’ ಎಂದು ಗುರುಗಳ ಆಜ್ಞೆಯನ್ನು ಶಿರಸಾವಹಿಸಿ ರಥವನ್ನು ಹತ್ತಿ ಪ್ರಭಾಸಕ್ಷೇತ್ರಕ್ಕೆ ಹೋದರು. ಅವರು ಸಮುದ್ರ ತೀರಕ್ಕೆ ಹೋಗಿ ಕ್ಷಣಕಾಲ ಕುಳಿತುಕೊಂಡರು. ಇವರು ಸಾಕ್ಷಾತ್ ಪರಮೇಶ್ವರರಾಗಿದ್ದಾರೆ ಎಂದು ಅರಿತ ಸಮುದ್ರ ರಾಜನು ಅನೇಕ ವಿಧದ ಪೂಜಾಸಾಮಗ್ರಿಗಳನ್ನೆತ್ತಿಕೊಂಡು ಮನುಷ್ಯರೂಪದಿಂದ ಅವರ ಬಳಿಗೆ ಆಮಿಸಿದನು. ॥38॥
(ಶ್ಲೋಕ-39)
ಮೂಲಮ್
ತಮಾಹ ಭಗವಾನಾಶು ಗುರುಪುತ್ರಃ ಪ್ರದೀಯತಾಮ್ ।
ಯೋಸಾವಿಹ ತ್ವಯಾ ಗ್ರಸ್ತೋ ಬಾಲಕೋ ಮಹತೋರ್ಮಿಣಾ ॥
ಅನುವಾದ
ಭಗವಂತನು ಸಮುದ್ರದ ಬಳಿ ಇಂತೆಂದನು - ಓ ಸಮುದ್ರರಾಜನೇ! ಈ ಹಿಂದೆ ನೀನು ನಿನ್ನ ದೊಡ್ಡ-ದೊಡ್ಡ ತೆರೆಗಳ ಮೂಲಕ ನುಂಗಿಬಿಟ್ಟಿರುವ ನಮ್ಮ ಗುರು ಪುತ್ರನನ್ನು ಶೀಘ್ರವಾಗಿ ತಂದೊಪ್ಪಿಸಿಬಿಡು. ॥39॥
(ಶ್ಲೋಕ-40)
ಮೂಲಮ್ (ವಾಚನಮ್)
ಸಮುದ್ರ ಉವಾಚ
ಮೂಲಮ್
ನೈವಾಹಾರ್ಷಮಹಂ ದೇವ ದೈತ್ಯಃ ಪಂಚಜನೋ ಮಹಾನ್ ।
ಅಂತರ್ಜಲಚರಃ ಕೃಷ್ಣ ಶಂಖರೂಪಧರೋಸುರಃ ॥
ಅನುವಾದ
ಸಮುದ್ರರಾಜನು ಹೇಳುತ್ತಾನೆ — ದೇವಾಧಿದೇವನಾದ ಶ್ರೀಕೃಷ್ಣಸ್ವಾಮಿಯೇ! ನಾನು ಆ ಬಾಲಕನನ್ನು ಸೆಳೆದು ಕೊಂಡು ಹೋಗಿಲ್ಲ. ನನ್ನ ಜಲದಲ್ಲಿ ಪಂಚಜನನೆಂಬ ಒಬ್ಬ ದೈತ್ಯಜಾತಿಯ ಮಹಾಸುರನು ಶಂಖರೂಪದಿಂದ ಇರುವನು. ಖಂಡಿತವಾಗಿ ಅವನೇ ಆ ಬಾಲಕನನ್ನು ಕದ್ದುಕೊಂಡು ಹೋಗಿರಬೇಕು. ॥40॥
(ಶ್ಲೋಕ-41)
ಮೂಲಮ್
ಆಸ್ತೇ ತೇನಾಹೃತೋ ನೂನಂ ತಚ್ಛ್ರುತ್ವಾ ಸತ್ವರಂ ಪ್ರಭುಃ ।
ಜಲಮಾವಿಶ್ಯ ತಂ ಹತ್ವಾ ನಾಪಶ್ಯದುದರೇರ್ಭಕಮ್ ॥
ಅನುವಾದ
ಸಮುದ್ರರಾಜನ ಮಾತನ್ನು ಕೇಳುತ್ತಲೇ ಭಗವಂತನು ಸಮುದ್ರವನ್ನು ಹೊಕ್ಕು ಶಂಖಾಸುರನನ್ನು ಸಂಹರಿಸಿದನು. ಆದರೆ ಗುರುಪುತ್ರನು ಅವನ ಹೊಟ್ಟೆಯಲ್ಲಿ ಇರಲೇ ಇಲ್ಲ. ॥41॥
(ಶ್ಲೋಕ-42)
ಮೂಲಮ್
ತದಂಗಪ್ರಭವಂ ಶಂಖಮಾದಾಯ ರಥಮಾಗಮತ್ ।
ತತಃ ಸಂಯಮನೀಂ ನಾಮ ಯಮಸ್ಯ ದಯಿತಾಂ ಪುರೀಮ್ ॥
(ಶ್ಲೋಕ-43)
ಮೂಲಮ್
ಗತ್ವಾ ಜನಾರ್ದನಃ ಶಂಖಂ ಪ್ರದಧ್ಮೌ ಸಹಲಾಯುಧಃ ।
ಶಂಖನಿರ್ಹ್ರಾದಮಾಕರ್ಣ್ಯ ಪ್ರಜಾಸಂಯಮನೋ ಯಮಃ ॥
(ಶ್ಲೋಕ-44)
ಮೂಲಮ್
ತಯೋಃ ಸಪರ್ಯಾಂ ಮಹತೀಂ ಚಕ್ರೇ ಭಕ್ತ್ಯುಪಬೃಂಹಿತಾಮ್ ।
ಉವಾಚಾವನತಃ ಕೃಷ್ಣಂ ಸರ್ವಭೂತಾಶಯಾಲಯಮ್ ।
ಲೀಲಾಮನುಷ್ಯ ಹೇ ವಿಷ್ಣೋ ಯುವಯೋಃ ಕರವಾಮ ಕಿಮ್ ॥
ಅನುವಾದ
ಆಗ ಅವನ ಶರೀರದಲ್ಲಿದ್ದ ಶಂಖವನ್ನು ಎತ್ತಿಕೊಂಡು ಬಂದು ಭಗವಂತನು ಬಲರಾಮನೊಡನೆ ಯಮರಾಜನ ಪರಮ ಪ್ರಿಯವಾದ ಸಂಯಮನೀಪುರಕ್ಕೆ ಹೋಗಿ ತನ್ನ ಶಂಖವನ್ನು ಊದಿದನು. ಶಂಖಧ್ವನಿಯನ್ನು ಕೇಳುತ್ತಲೇ ಸಮಸ್ತ ಪ್ರಜೆಗಳ ಶಾಸಕನಾದ ಯಮಧರ್ಮನು ಅವರನ್ನು ಆದರದಿಂದ ಸ್ವಾಗತಿಸಿ, ಭಕ್ತಿಭಾವದಿಂದ ವಿಧಿವತ್ತಾಗಿ ಅವರ ಮಹಾಪೂಜೆಯನ್ನು ಮಾಡಿದನು. ಅವನು ವಿನಮ್ರನಾಗಿ ತಲೆಯನ್ನು ತಗ್ಗಿಸಿ ಸಮಸ್ತ ಪ್ರಾಣಿಗಳ ಹೃದಯಗಳಲ್ಲಿ ವಿರಾಜಿಸುತ್ತಿರುವ ಸಚ್ಚಿದಾನಂದ ಸ್ವರೂಪನಾದ ಭಗವಾನ್ ಶ್ರೀಕೃಷ್ಣನಲ್ಲಿ ಪ್ರಾರ್ಥಿಸಿಕೊಂಡನು - ಲೀಲಾಮಾನುಷ ವಿಗ್ರಹರಾದ ಸರ್ವವ್ಯಾಪಕ ಪರಮೇಶ್ವರರೇ! ನಾನು ನಿಮ್ಮಿಬ್ಬರ ಯಾವ ಸೇವೆಯನ್ನು ಮಾಡಲಿ? ॥42-44॥
(ಶ್ಲೋಕ-45)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಗುರುಪುತ್ರಮಿಹಾನೀತಂ ನಿಜಕರ್ಮನಿಬಂಧನಮ್ ।
ಆನಯಸ್ವ ಮಹಾರಾಜ ಮಚ್ಛಾಸನಪುರಸ್ಕೃತಃ ॥
ಅನುವಾದ
ಶ್ರೀಭಗವಂತನು ಹೇಳಿದನು — ಯಮಧರ್ಮನೇ! ಅವನ ಕರ್ಮಬಂಧಕ್ಕೆ ಅನುಸಾರವಾಗಿ ನಮ್ಮ ಗುರು ಪುತ್ರನು ಇಲ್ಲಿಗೆ ತರಲ್ಪಟ್ಟಿದ್ದಾನೆ. ಈಗ ನೀನು ಅವನ ಕರ್ಮದ ಕಡೆಗೆ ಲಕ್ಷ್ಯಕೊಡದೆ ನನ್ನ ಆಜ್ಞೆಯನ್ನು ಪುರಸ್ಕರಿಸಿ ಅವನನ್ನು ನನ್ನ ಬಳಿಗೆ ಕರೆದುಕೊಂಡು ಬಾ. ॥45॥
(ಶ್ಲೋಕ-46)
ಮೂಲಮ್
ತಥೇತಿ ತೇನೋಪಾನೀತಂ ಗುರುಪುತ್ರಂ ಯದೂತ್ತವೌ ।
ದತ್ತ್ವಾ ಸ್ವಗುರವೇ ಭೂಯೋ ವೃಣೀಷ್ವೇತಿ ತಮೂಚತುಃ ॥
ಅನುವಾದ
ಯಮರಾಜನು ‘ಹಾಗೆಯೇ ಆಗಲಿ’ ಎಂದು ಹೇಳಿ ಭಗವಂತನ ಆದೇಶದಂತೆ ಅವನ ಗುರುಪುತ್ರನನ್ನು ತಂದು ಕೊಟ್ಟನು. ಆಗ ಯದುವಂಶ ಶಿರೋಮಣಿ ಶ್ರೀಕೃಷ್ಣನು ಮತ್ತು ಬಲರಾಮನು ಆ ಬಾಲಕನನ್ನು ಕರೆದುಕೊಂಡು ಉಜ್ಜಯಿನಿಗೆ ಹಿಂದಿರುಗಿ ತಮ್ಮ ಗುರುಗಳಿಗೆ ಅವನನ್ನು ಒಪ್ಪಿಸಿ - ‘ಇನ್ನೇನಾದರೂ ತಾವು ಬಯಸುವಿರಾದರೆ ಕೇಳಿ ಕೊಳ್ಳಿರಿ’ ಎಂದು ವಿನಂತಿಸಿಕೊಂಡರು. ॥46॥
(ಶ್ಲೋಕ-47)
ಮೂಲಮ್ (ವಾಚನಮ್)
ಗುರುರುವಾಚ
ಮೂಲಮ್
ಸಮ್ಯಕ್ ಸಂಪಾದಿತೋ ವತ್ಸ ಭವದ್ಭ್ಯಾಂ ಗುರುನಿಷ್ಕ್ರಯಃ ।
ಕೋ ನು ಯುಷ್ಮದ್ವಿಧಗುರೋಃ ಕಾಮಾನಾಮವಶಿಷ್ಯತೇ ॥
ಅನುವಾದ
ಗುರುಗಳೆಂದರು — ವತ್ಸರಿರಾ! ನೀವಿಬ್ಬರೂ ಅನುಪಮವಾದ ಗುರುದಕ್ಷಿಣೆಯನ್ನೇ ಕೊಟ್ಟಿರುವಿರಿ. ಮತ್ತೇನನ್ನು ನಾನು ಕೇಳಲಿ? ನಿಮ್ಮಂತಹ ಪುರುಷೋತ್ತಮರನ್ನು ಶಿಷ್ಯರಾಗಿ ಹೊಂದಿರುವಾಗ ಈಡೇರಲಾಗದ ಮನೋರಥವು ಯಾವುದು ತಾನೇ ಉಳಿದೀತು? ॥47॥
(ಶ್ಲೋಕ-48)
ಮೂಲಮ್
ಗಚ್ಛತಂ ಸ್ವಗೃಹಂ ವೀರೌ ಕೀರ್ತಿರ್ವಾಮಸ್ತು ಪಾವನೀ ।
ಛಂದಾಂಸ್ಯಯಾತಯಾಮಾನಿ ಭವಂತ್ವಿಹ ಪರತ್ರ ಚ ॥
ಅನುವಾದ
ವೀರರೇ! ಈಗ ನೀವಿಬ್ಬರೂ ಮನೆಗೆ ಹೋಗಿರಿ. ಲೋಕಗಳನ್ನೇ ಪಾವನಗೊಳಿಸುವ ಕೀರ್ತಿಯು ನಿಮಗುಂಟಾಗಲಿ. ನೀವು ಇಲ್ಲಿ ಕಲಿತಿರುವ ವಿದ್ಯೆಯು ಇಹಲೋಕದಲ್ಲಿಯೂ, ಪರಲೋಕದಲ್ಲಿಯೂ ನಿತ್ಯನೂತನವಾಗಿದ್ದು, ಎಂದಿಗೂ ವಿಸ್ಮೃತಿಯಾಗದಿರಲಿ. ॥48॥
(ಶ್ಲೋಕ-49)
ಮೂಲಮ್
ಗುರುಣೈವಮನುಜ್ಞಾತೌ ರಥೇನಾನಿಲರಂಹಸಾ ।
ಆಯಾತೌ ಸ್ವಪುರಂ ತಾತ ಪರ್ಜನ್ಯನಿನದೇನ ವೈ ॥
ಅನುವಾದ
ಪ್ರಿಯ ಪರೀಕ್ಷಿತ! ಮತ್ತೆ ಗುರುಗಳಿಂದ ಅನುಮತಿಯನ್ನು ಪಡೆದು, ವಾಯುವೇಗದಿಂದ ಚಲಿಸುವ, ಮೇಘದಂತಹ ಶಬ್ದವುಳ್ಳ ರಥದಲ್ಲಿ ಕುಳಿತುಕೊಂಡು ಸೋದರರಿಬ್ಬರೂ ಮಥುರೆಗೆ ಮರಳಿದರು. ॥49॥
(ಶ್ಲೋಕ-50)
ಮೂಲಮ್
ಸಮನಂದನ್ ಪ್ರಜಾಃ ಸರ್ವಾ ದೃಷ್ಟ್ವಾ ರಾಮಜನಾರ್ದನೌ ।
ಅಪಶ್ಯಂತ್ಯೋ ಬಹ್ವಹಾನಿ ನಷ್ಟಲಬ್ಧಧನಾ ಇವ ॥
ಅನುವಾದ
ಶ್ರೀಕೃಷ್ಣ-ಬಲರಾಮರನ್ನು ಅನೇಕ ದಿವಸಗಳಿಂದ ಕಾಣದೇ ಇರುವ ಮಥುರಾಪಟ್ಟಣದ ಪ್ರಜೆಗಳು ಅತ್ಯಂತ ದುಃಖಿತರಾಗಿದ್ದರು. ಬಲರಾಮ-ಶ್ರೀಕೃಷ್ಣರು ಬಂದಿರುವುದನ್ನು ನೋಡಿದ ಅವರೆಲ್ಲರೂ ಕಳೆದುಹೋದ ಧನವು ಮರಳಿದೊರಕಿದಂತೆ ಪರಮಾನಂದದಲ್ಲಿ ಮುಳುಗಿ ಹೋದರು. ॥50॥
ಅನುವಾದ (ಸಮಾಪ್ತಿಃ)
ನಲವತ್ತೈದನೆಯ ಅಧ್ಯಾಯವು ಮುಗಿಯಿತು. ॥45॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ಗುರುಪುತ್ರಾನಯನಂ ನಾಮ ಪಂಚಚತ್ವಾರಿಂಶೋಽಧ್ಯಾಯಃ ॥45॥