೪೪

[ನಲವತ್ತನಾಲ್ಕನೆಯ ಅಧ್ಯಾಯ]

ಭಾಗಸೂಚನಾ

ಚಾಣೂರ, ಮುಷ್ಟಿಕ ಮುಂತಾದ ಮಲ್ಲರ ಹಾಗೂ ಕಂಸನ ವಧೆ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಂ ಚರ್ಚಿತಸಂಕಲ್ಪೋ ಭಗವಾನ್ ಮಧುಸೂದನಃ ।
ಆಸಸಾದಾಥ ಚಾಣೂರಂ ಮುಷ್ಟಿಕಂ ರೋಹಿಣೀಸುತಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಚಾಣೂರನೇ ಮೊದಲಾದವರನ್ನು ಸಂಹರಿಸಲು ನಿಶ್ಚಿತವಾದ ಸಂಕಲ್ಪವನ್ನು ಮಾಡಿದನು. ಶ್ರೀಕೃಷ್ಣನು ಚಾಣೂರನೊಡನೆಯೂ ಬಲರಾಮನು ಮುಷ್ಟಿಕನೊಡನೆಯೂ ಮಲ್ಲಯುದ್ಧವನ್ನು ಪ್ರಾರಂಭಿಸಿದನು. ॥1॥

(ಶ್ಲೋಕ-2)

ಮೂಲಮ್

ಹಸ್ತಾಭ್ಯಾಂ ಹಸ್ತಯೋರ್ಬದ್ಧ್ವಾ ಪದ್ಭ್ಯಾಮೇವ ಚ ಪಾದಯೋಃ ।
ವಿಚಕರ್ಷತುರನ್ಯೋನ್ಯಂ ಪ್ರಸಹ್ಯ ವಿಜಿಗೀಷಯಾ ॥

ಅನುವಾದ

ಒಬ್ಬರು ಮತ್ತೊಬ್ಬರನ್ನು ಗೆಲ್ಲಬೇಕೆಂಬ ಛಲದಿಂದ ಪರಸ್ಪರವಾಗಿ ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದುಕೊಂಡು ತೊಡರುಗಾಲು ಕೊಟ್ಟುಕೊಂಡು ಅಲ್ಲಿಂದಿಲ್ಲಿಗೂ, ಇಲ್ಲಿಂದಲ್ಲಿಗೂ ಎಳೆದಾಡಿದರು. ॥2॥

(ಶ್ಲೋಕ-3)

ಮೂಲಮ್

ಅರತ್ನೀ ದ್ವೇ ಅರತ್ನಿಭ್ಯಾಂ ಜಾನುಭ್ಯಾಂ ಚೈವ ಜಾನುನೀ ।
ಶಿರಃ ಶೀರ್ಷ್ಣೋರಸೋರಸ್ತಾವನ್ಯೋನ್ಯಮಭಿಜಘ್ನತುಃ ॥

ಅನುವಾದ

ಅವರು ಕೈಯಿಂದ ಕೈಯನ್ನೂ, ಮೊಣಕಾಲಿನಿಂದ ಮೊಣಕಾಲನ್ನೂ, ತಲೆಯಿಂದ ತಲೆಯನ್ನೂ, ಉಬ್ಬಿದ ಎದೆಯಿಂದ ಎದೆಯನ್ನು ಪರಸ್ಪರ ಪ್ರಹರಿಸುತ್ತಿದ್ದರು. ॥3॥

(ಶ್ಲೋಕ-4)

ಮೂಲಮ್

ಪರಿಭ್ರಾಮಣವಿಕ್ಷೇಪಪರಿರಂಭಾವಪಾತನೈಃ ।
ಉತ್ಸರ್ಪಣಾಪಸರ್ಪಣೈಶ್ಚಾನ್ಯೋನ್ಯಂ ಪ್ರತ್ಯರುಂಧತಾಮ್ ॥

(ಶ್ಲೋಕ-5)

ಮೂಲಮ್

ಉತ್ಥಾಪನೈರುನ್ನಯನೈಶ್ಚಾಲನೈಃ ಸ್ಥಾಪನೈರಪಿ ।
ಪರಸ್ಪರಂ ಜಿಗೀಷಂತಾವಪಚಕ್ರತುರಾತ್ಮನಃ ॥

ಅನುವಾದ

ಹೀಗೆ ಅನೇಕ ಪಟ್ಟುಗಳನ್ನು ಪ್ರಯೋಗಿಸುತ್ತಾ ಎದುರಾಳಿಯನ್ನು ಹಿಡಿದು ಗರ-ಗರನೆ ತಿರುಗಿಸುತ್ತಾ ದೂರಕ್ಕೆ ತಳ್ಳಿಬಿಡುತ್ತಿದ್ದರು. ತೋಳಿನ ಸಂದಿಯಲ್ಲಿ ಅಮುಕುತ್ತಿದ್ದರು. ನೆಲದ ಮೇಲೆ ಬೀಳಿಸಿ ಉರುಳಿಸುತ್ತಿದ್ದರು. ವೇಗದಿಂದ ಮುನ್ನುಗ್ಗಿಬಂದು ಒಬ್ಬರು ಮತ್ತೊಬ್ಬರ ಮೇಲೆ ಬೀಳುತ್ತಿದ್ದರು. ಸಮಯವರಿತು ಹಿಂದಕ್ಕೂ ಸರಿಯುತ್ತಿದ್ದರು. ಕೆಳಕ್ಕೆ ಬಿದ್ದವನ ಕೈ-ಕಾಲುಗಳನ್ನು ಹಿಡಿದು ದರದರನೆ ಎಳೆದಾಡುತ್ತಿದ್ದರು. ಮುದುರಿ ಮಟ್ಟೆಗಟ್ಟಿ ಎತ್ತಿ ಹಾಕುವರು. ಹೆಕ್ಕತ್ತಿನ ಮೇಲೆ ತೋಳನಿಟ್ಟು, ಬಗ್ಗಿಸುತ್ತಿದ್ದರು. ಎದುರಾಳಿಯು ಹಾಕಿದ ಪಟ್ಟುಗಳಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಹೀಗೆ ವಿಜಯಾಕಾಂಕ್ಷಿಗಳಾದ ಅವರು ಸೆಣಸಾಡುತ್ತಿದ್ದರು. ॥4-5॥

ಮೂಲಮ್

(ಶ್ಲೋಕ-6)
ತದ್ಬಲಾಬಲವದ್ಯುದ್ಧಂ ಸಮೇತಾಃ ಸರ್ವಯೋಷಿತಃ ।
ಊಚುಃ ಪರಸ್ಪರಂ ರಾಜನ್ ಸಾನುಕಂಪಾ ವರೂಥಶಃ ॥

ಅನುವಾದ

ಪರೀಕ್ಷಿತನೇ! ಆ ಮಲ್ಲಯುದ್ಧವನ್ನು ನೋಡಲು ಹಲವಾರು ಸ್ತ್ರೀಯರೂ ಬಂದಿದ್ದರು. ದೊಡ್ಡ-ದೊಡ್ಡ ಜಟ್ಟಿಗಳೊಡನೆ ಬಾಲಕರಾದ ರಾಮ-ಕೃಷ್ಣರು ಸೆಣಸಾಡುತ್ತಿರುವುದನ್ನು ಅವರು ನೋಡಿದರು. ಅವರ ಅನುಕಂಪವು ಸ್ವಾಭಾವಿಕವಾಗಿ ಶ್ರೀಕೃಷ್ಣ-ಬಲರಾಮರ ಮೇಲಿತ್ತು. ಗುಂಪು-ಗುಂಪಾಗಿ ಸೇರಿ ಹೀಗೆ ಮಾತನಾಡಿಕೊಂಡರು. ॥6॥

(ಶ್ಲೋಕ-7)

ಮೂಲಮ್

ಮಹಾನಯಂ ಬತಾಧರ್ಮ ಏಷಾಂ ರಾಜಸಭಾಸದಾಮ್ ।
ಯೇ ಬಲಾಬಲವದ್ಯುದ್ಧಂ ರಾಜ್ಞೋನ್ವಿಚ್ಛಂತಿ ಪಶ್ಯತಃ ॥

ಅನುವಾದ

ನೋಡಿ, ಇಲ್ಲಿ ಕಂಸರಾಜನ ಸಭಾಸದರು ದೊಡ್ಡ ಅನ್ಯಾಯವನ್ನು, ಅಧರ್ಮವನ್ನು ಮಾಡುತ್ತಿದ್ದಾರೆ. ರಾಜನ ಎದುರಿನಲ್ಲೇ ಬಲಿಷ್ಠರಾದ ಜಟ್ಟಿಗಳಿಗೂ, ನಿರ್ಬಲರಾದ ಬಾಲಕರಿಗೂ ಕಾಳಗವಾಗುವುದನ್ನು ಅನುಮೋದಿಸುತ್ತಿದ್ದಾರಲ್ಲ! ಇದು ಎಂತಹ ಖೇದದ ವಿಷಯವಾಗಿದೆ? ॥7॥

(ಶ್ಲೋಕ-8)

ಮೂಲಮ್

ಕ್ವ ವಜ್ರಸಾರಸರ್ವಾಂಗೌ ಮಲ್ಲೌ ಶೈಲೇಂದ್ರಸನ್ನಿಭೌ ।
ಕ್ವ ಚಾತಿಸುಕುಮಾರಾಂಗೌ ಕಿಶೋರೌ ನಾಪ್ತಯೌವನೌ ॥

ಅನುವಾದ

ಗೆಳತಿಯರೇ! ಈ ಜಟ್ಟಿಗಳ ಪ್ರತಿಯೊಂದು ಅಂಗಾಂಗಗಳು ವಜ್ರದಂತೆ ಕಠೋರವಾಗಿವೆ. ನೋಡಲು ಇವರು ಪರ್ವತಗಳಂತೆಯೇ ಇದ್ದಾರೆ. ಆದರೆ ಶ್ರೀಕೃಷ್ಣ-ಬಲರಾಮರು ಇನ್ನೂ ಯೌವನಾವಸ್ಥೆಯನ್ನು ಹೊಂದಿರುವುದಿಲ್ಲ. ಕಿಶೋರಾವಸ್ಥೆಯಲ್ಲೇ ಇದ್ದಾರೆ. ಇವರ ಒಂದೊಂದು ಅಗಾಂಗಗಳು ಸುಕೋಮಲವಾಗಿವೆ. ಆ ಬಲಿಷ್ಠರೆಲ್ಲಿ? ಈ ಸುಕೋಮಲರಾದ ಬಾಲಕರೆಲ್ಲಿ? ॥8॥

(ಶ್ಲೋಕ-9)

ಮೂಲಮ್

ಧರ್ಮವ್ಯತಿಕ್ರಮೋ ಹ್ಯಸ್ಯ ಸಮಾಜಸ್ಯ ಧ್ರುವಂ ಭವೇತ್ ।
ಯತ್ರಾಧರ್ಮಃ ಸಮುತ್ತಿಷ್ಠೇನ್ನ ಸ್ಥೇಯಂ ತತ್ರ ಕರ್ಹಿಚಿತ್ ॥

ಅನುವಾದ

ಇಲ್ಲಿ ಸೇರಿದ ಎಲ್ಲರಿಗೂ, ನೋಡಿದವರೆಲ್ಲರಿಗೂ ಧರ್ಮೋಲ್ಲಂಘನೆಯ ಪಾಪ ತಟ್ಟುವುದು ಖಂಡಿತ. ಸಖಿಯರೇ! ಈಗ ನಾವು ಇಲ್ಲಿಂದ ಹೋಗುವುದೇ ಯುಕ್ತವಾಗಿದೆ. ಅಧರ್ಮದ ಪ್ರಧಾನತೆ ಇರುವಲ್ಲಿ ಎಂದೂ ಇರಬಾರದೆಂಬುದು ಶಾಸ್ತ್ರದ ನಿಯಮವಾಗಿದೆ. ॥9॥

(ಶ್ಲೋಕ-10)

ಮೂಲಮ್

ನ ಸಭಾಂ ಪ್ರವಿಶೇತ್ ಪ್ರಾಜ್ಞಃ ಸಭ್ಯದೋಷಾನನುಸ್ಮರನ್ ।
ಅಬ್ರುವನ್ವಿಬ್ರುವನ್ನಜ್ಞೋ ನರಃ ಕಿಲ್ಬಿಷಮಶ್ನುತೇ ॥

ಅನುವಾದ

ನೋಡಿ, ಬುದ್ಧಿವಂತರಾದವರು ಸಭಾಸದರ ದೋಷಗಳನ್ನು ತಿಳಿದು-ತಿಳಿದು ಆ ಸಭೆಯಲ್ಲಿ ಹೋಗಿ ಕುಳಿತಿರಬಾರದು ಎಂದು ಶಾಸ್ತ್ರ ಹೇಳುತ್ತದೆ. ಏಕೆಂದರೆ, ಅಲ್ಲಿಗೆ ಹೋಗಿ ಆ ಅವಗುಣಗಳನ್ನು ಹೇಳುವುದು, ಸುಮ್ಮನೆ ಇರುವುದು, ಅಥವಾ ನಾನು ಬಲ್ಲವನಲ್ಲ ಎಂದು ಹೇಳುವುದು. ಈ ಮೂರು ವಿಷಯಗಳು ಮನುಷ್ಯನನ್ನು ದೋಷಭಾಗಿಯಾಗಿಸುತ್ತವೆ. ॥10॥

(ಶ್ಲೋಕ-11)

ಮೂಲಮ್

ವಲ್ಗತಃ ಶತ್ರುಮಭಿತಃ ಕೃಷ್ಣಸ್ಯ ವದನಾಂಬುಜಮ್ ।
ವೀಕ್ಷ್ಯತಾಂ ಶ್ರಮವಾರ್ಯುಪ್ತಂ ಪದ್ಮಕೋಶಮಿವಾಂಬುಭಿಃ ॥

ಅನುವಾದ

ಸಖಿಯರೇ! ಶತ್ರುವಿನ ಸುತ್ತಲೂ ಸುತ್ತುತ್ತಿರುವ ಶ್ರೀಕೃಷ್ಣನ ಮುಖ ಕಮಲವನ್ನಾದರೂ ನೋಡಿರಿ. ಕಾಳಗದ ಆಯಾಸದಿಂದಾಗಿ ತಾವರೆಯ ಎಲೆಯ ಮೇಲಿನ ನೀರಿನ ಬಿಂದುಗಳಂತೆ ಬೆವರಿನ ಬಿಂದುಗಳು ಅವರ ಮುಖದ ಮೇಲೆ ಕಂಗೊಳಿಸುತ್ತಿವೆ. ॥11॥

(ಶ್ಲೋಕ-12)

ಮೂಲಮ್

ಕಿಂ ನ ಪಶ್ಯತ ರಾಮಸ್ಯ ಮುಖಮಾತಾಮ್ರಲೋಚನಮ್ ।
ಮುಷ್ಟಿಕಂ ಪ್ರತಿ ಸಾಮರ್ಷಂ ಹಾಸಸಂರಂಭಶೋಭಿತಮ್ ॥

ಅನುವಾದ

ಸಖಿಯರೇ! ಬಲರಾಮನ ಮುಖವನ್ನಾದರೂ ನೋಡುತ್ತಿರುವೆಯಲ್ಲ! ಮುಷ್ಟಿಕನ ಮೇಲಿನ ಕೋಪದಿಂದಾಗಿ ಅವನ ಕಣ್ಣುಗಳು ತಾಮ್ರದಂತೆ ಕೆಂಪಾಗಿವೆ. ಹೀಗಿದ್ದರೂ ಅವನ ಹುಸಿನಗೆಯಿಂದಾಗಿ ಅವನ ಮುಖವು ಅತ್ಯಂತ ಶೋಭಾಯಮಾನವಾಗಿ ಕಾಣುತ್ತದೆ. ॥12॥

(ಶ್ಲೋಕ-13)

ಮೂಲಮ್

ಪುಣ್ಯಾ ಬತ ವ್ರಜಭುವೋ ಯದಯಂ ನೃಲಿಂಗ-
ಗೂಢಃ ಪುರಾಣಪುರುಷೋ ವನಚಿತ್ರಮಾಲ್ಯಃ ।
ಗಾಃ ಪಾಲಯನ್ ಸಹಬಲಃ ಕ್ವಣಯಂಶ್ಚ ವೇಣುಂ
ವಿಕ್ರೀಡಯಾಂಚತಿ ಗಿರಿತ್ರರಮಾರ್ಚಿತಾಂಘ್ರಿಃ ॥

ಅನುವಾದ

ಗೆಳತಿಯರೇ! ನಿಜವಾಗಿ ಹೇಳುವುದಾದರೆ ವ್ರಜಭೂಮಿಯು ಪರಮಪವಿತ್ರವೂ, ಧನ್ಯತಮವೂ ಆಗಿದೆ. ಏಕೆಂದರೆ, ಅಲ್ಲಿಯೇ ಈ ಪುರುಷೋತ್ತಮರು ಮನುಷ್ಯ ವೇಷದಲ್ಲಿ ಅಡಗಿಕೊಂಡಿರುವರು. ಸಾಕ್ಷಾತ್ ಭಗವಾನ್ ಶಂಕರ ಮತ್ತು ಲಕ್ಷ್ಮೀದೇವಿಯೂ ಯಾರ ಚರಣಗಳನ್ನು ಪೂಜಿಸುತ್ತಿರುವರೋ ಆ ಪ್ರಭುವೇ ಅಲ್ಲಿ ಚಿತ್ರವಿಚಿತ್ರವಾದ ಕಾಡು ಪುಷ್ಪಗಳ ಮಾಲೆಯನ್ನು ಧರಿಸಿಕೊಂಡು ಬಲರಾಮನೊಂದಿಗೆ ಕೊಳಲನ್ನೂದುತ್ತಾ ಹಸುಗಳನ್ನು ಮೇಯಿಸುತ್ತಾ ಬಗೆ-ಬಗೆಯ ಆಟಗಳನ್ನಾಡುತ್ತಾ ಆನಂದದಿಂದ ವಿಚರಿಸುತ್ತಿದ್ದಾನೆ. ॥13॥

(ಶ್ಲೋಕ-14)

ಮೂಲಮ್

ಗೋಪ್ಯಸ್ತಪಃ ಕಿಮಚರನ್ ಯದಮುಷ್ಯ ರೂಪಂ
ಲಾವಣ್ಯಸಾರಮಸಮೋರ್ಧ್ವಮನನ್ಯಸಿದ್ಧಮ್ ।
ದೃಗ್ಭಿಃ ಪಿಬಂತ್ಯನುಸವಾಭಿನವಂ ದುರಾಪ-
ಮೇಕಾಂತಧಾಮ ಯಶಸಃ ಶ್ರಿಯ ಐಶ್ವರಸ್ಯ ॥

ಅನುವಾದ

ಸಖೀಯರೇ! ಎರಡು ಕಣ್ಣುಗಳಿಂದಲೂ ನಿತ್ಯನಿರಂತರವಾಗಿ ಶ್ರೀಕೃಷ್ಣನ ರೂಪವೆಂಬ ಮಧುವನ್ನು ಪಾನಮಾಡುತ್ತಿರುವ ಆ ಗೋಪಿಯರು ಎಂತಹ ತಪಸ್ಸನ್ನು ಮಾಡಿದ್ದರೋ ತಿಳಿಯದು. ಅವನ ರೂಪವೆಂಬುದು ಲಾವಣ್ಯದ ಸಾರವಾಗಿದೆ. ಪ್ರಪಂಚದಲ್ಲಿ ಅಥವಾ ಇದರ ಹೊರಗೆ ಯಾರ ರೂಪವೂ ಇವನಿಗೆ ಸಮಾನವಾಗಲಾರದು. ಹೀಗಿರುವಾಗ ಹೆಚ್ಚಿಗೆ ಹೇಗಿದ್ದೀತು? ಅವನ ದಿವ್ಯ ರೂಪವು ವಸ್ತ್ರಾಭರಣಗಳಿಂದಾಗಲೀ, ಅಂಗರಾಗಗಳಿಂದಾಗಲೀ ಸಿದ್ಧವಾದುದಲ್ಲ, ಸ್ವಯಂ ಸಿದ್ಧವಾದುದು. ಅಂತಹ ಚೇತೋಹಾರಿಯಾದ ರೂಪವನ್ನು ನೋಡುತ್ತಿದ್ದರೆ ಎಂದಿಗೂ ತೃಪ್ತಿಯೇ ಉಂಟಾಗುವುದಿಲ್ಲ. ಏಕೆಂದರೆ, ಇದು ಪ್ರತಿಕ್ಷಣವೂ ಹೊಸ ದಾಗಿಯೇ ಇರುತ್ತದೆ, ನಿತ್ಯ ನೂತನವಾಗಿದೆ. ಸಮಗ್ರ ಯಶ, ಸೌಂದರ್ಯ ಮತ್ತು ಐಶ್ವರ್ಯ ಇವುಗಳು ಇವನಲ್ಲೇ ಆಶ್ರಿತವಾಗಿರುತ್ತವೆ. ಆದರೆ ಇವನ ದರ್ಶನವಾದರೋ ಇತರರಿಗೆ ದುರ್ಲಭವೇ ಆಗಿದೆ. ಗೋಪಿಯರ ಭಾಗ್ಯದಿಂದಲೇ ಅವರಿಗೆ ಸರ್ವದಾ ಲಭ್ಯವಾಗಿದೆ. ॥14॥

(ಶ್ಲೋಕ-15)

ಮೂಲಮ್

ಯಾ ದೋಹನೇವಹನನೇ ಮಥನೋಪಲೇಪ-
ಪ್ರೇಂಖೇಂಖನಾರ್ಭರುದಿತೋಕ್ಷಣಮಾರ್ಜನಾದೌ ।
ಗಾಯಂತಿ ಚೈನಮನುರಕ್ತಧಿಯೋಶ್ರುಕಂಠ್ಯೋ
ಧನ್ಯಾ ವ್ರಜಸಿಯ ಉರುಕ್ರಮಚಿತ್ತಯಾನಾಃ ॥

ಅನುವಾದ

ಸಖಿಯರೇ! ವ್ರಜದ ಗೋಪಿಯರು ಎಂತಹ ಧನ್ಯರು! ನಿರಂತರವಾಗಿ ಶ್ರೀಕೃಷ್ಣನಲ್ಲಿಯೇ ಚಿತ್ತವು ನೆಟ್ಟುಹೋದ ಕಾರಣ-ಹಸುಗಳನ್ನು ಕರೆಯುವಾಗ ಭತ್ತವನ್ನು ಕುಟ್ಟುವಾಗ, ಮೊಸರು ಕಡೆಯುವಾಗ, ಮನೆಯನ್ನು ಸಾರಿಸುವಾಗ, ತೊಟ್ಟಿಲನ್ನು ತೂಗುವಾಗ, ಅಳುತ್ತಿರುವ ಮಕ್ಕಳನ್ನು ಸಮಾಧಾನಪಡಿಸುವಾಗ, ಮಕ್ಕಳಿಗೆ ನೀರೆರೆಯುವಾಗ, ನೀರನ್ನು ಚುಮುಕಿಸಿ ಗುಡಿಸುವಾಗ - ಹೀಗೆ ಯಾವುದೇ ಕೆಲಸ ಮಾಡುತ್ತಿದ್ದರೂ ಶ್ರೀಕೃಷ್ಣನನ್ನೇ ಹೃತ್ಕಮಲದಲ್ಲಿ ನೆಲೆಗೊಳಿಸಿಕೊಂಡು ಆನಂದಾಶ್ರುವನ್ನು ಸುರಿಸುತ್ತಾ ಅವನ ಲೀಲಾಗುಣಗಳನ್ನು ಗಾನ ಮಾಡುತ್ತಾ ಮೈಮರೆಯುವರು. ॥15॥

(ಶ್ಲೋಕ-16)

ಮೂಲಮ್

ಪ್ರಾತರ್ವ್ರಜಾದ್ವ್ರಜತ ಆವಿಶತಶ್ಚ ಸಾಯಂ
ಗೋಭಿಃ ಸಮಂ ಕ್ವಣಯತೋಸ್ಯ ನಿಶಮ್ಯ ವೇಣುಮ್ ।
ನಿರ್ಗಮ್ಯ ತೂರ್ಣಮಬಲಾಃ ಪಥಿ ಭೂರಿಪುಣ್ಯಾಃ
ಪಶ್ಯಂತಿ ಸಸ್ಮಿತಮುಖಂ ಸದಯಾವಲೋಕಮ್ ॥

ಅನುವಾದ

ಸಖಿಯರೇ! ಶ್ರೀಕೃಷ್ಣನು ಬೆಳಗಾಗುತ್ತಲೇ ಹಸುಗಳನ್ನು ಹೊಡೆದುಕೊಂಡು ಕಾಡಿಗೆ ಹೋಗುವಾಗ, ಸಾಯಂಕಾಲ ವ್ರಜಕ್ಕೆ ಹಿಂದಿರುಗುವಾಗ ಕೊಳಲನ್ನು ನುಡಿಸುತ್ತಾ ಇರುತ್ತಾನೆ. ಶ್ರೀಕೃಷ್ಣನ ಮುರಳಿಯ ಧ್ವನಿಯನ್ನು ಕೇಳುತ್ತಲೇ ಮೈಮರೆಯುವ ಗೋಪಿಯರು ಮಾಡುತ್ತಿದ್ದ ಕೆಲಸವನ್ನು ಅಷ್ಟಕ್ಕೆ ನಿಲ್ಲಿಸಿ, ಮುರಳೀಧರನ ಕಿರುನಗೆಯನ್ನೂ, ಕುಡಿನೋಟವನ್ನೂ ನೋಡುವುದಕ್ಕಾಗಿ ಬೀದಿಗೆ ಓಡುಬರುವರು. ಹಾದಿಯ ಇಕ್ಕೆಡೆಯಲ್ಲೂ ನಿಂತು ಜಗದಾನಂದ ಕಂದನ ಮುಖಾರವಿಂದವನ್ನು ನೋಡಿ ಆನಂದತುಂದಿಲರಾಗುತ್ತಾರೆ. ನಿಶ್ಚಯವಾಗಿಯೂ ಗೋಪಿಯರು ಮಹಾಪುಣ್ಯವತಿಯರೇ ಆಗಿದ್ದಾರೆ. ॥16॥

(ಶ್ಲೋಕ-17)

ಮೂಲಮ್

ಏವಂ ಪ್ರಭಾಷಮಾಣಾಸು ಸೀಷು ಯೋಗೇಶ್ವರೋ ಹರಿಃ ।
ಶತ್ರುಂ ಹಂತುಂ ಮನಶ್ಚಕ್ರೇ ಭಗವಾನ್ ಭರತರ್ಷಭ ॥

ಅನುವಾದ

ಭರತವಂಶ ಶಿರೋಮಣಿಯೇ! ಮಥುರಾಪಟ್ಟಣದ ಸ್ತ್ರೀಯರು ಗುಂಪು-ಗುಂಪಾಗಿ ಹೀಗೆ ಮಾತನಾಡಿಕೊಳ್ಳುತ್ತಿದ್ದಾಗ ಯೋಗೇಶ್ವರನಾದ ಭಗವಾನ್ ಶ್ರೀಕೃಷ್ಣನು ಶತ್ರುವನ್ನು ಸಂಹರಿಸಲು ಮನಮಾಡಿದನು. ॥17॥

(ಶ್ಲೋಕ-18)

ಮೂಲಮ್

ಸಭಯಾಃ ಸೀಗಿರಃ ಶ್ರುತ್ವಾ ಪುತ್ರಸ್ನೇಹಶುಚಾತುರೌ ।
ಪಿತರಾವನ್ವತಪ್ಯೇತಾಂ ಪುತ್ರಯೋರಬುಧೌ ಬಲಮ್ ॥

ಅನುವಾದ

ಸ್ತ್ರೀಯರ ಭಯದಿಂದ ಕೂಡಿದ ಈ ಮಾತುಗಳನ್ನು ಪಕ್ಕದಲ್ಲಿಯೇ ಸೆರೆಮನೆಯಲ್ಲಿದ್ದ ದೇವಕಿ-ವಸುದೇವರೂ ಕೇಳಿಸಿಕೊಂಡರು. ಪುತ್ರಸ್ನೇಹದಿಂದ ಅವರು ಶೋಕದಿಂದ ವಿಹ್ವಲರಾದರು. ಅವರ ಹೃದಯದಲ್ಲಿ ಅತ್ಯಂತ ಪೀಡೆಯುಂಟಾಯಿತು. ಏಕೆಂದರೆ, ಅವರು ತಮ್ಮ ಮಕ್ಕಳಾದ ಬಲರಾಮ-ಶ್ರೀಕೃಷ್ಣರ ಬಲಪರಾಕ್ರಮವನ್ನು ತಿಳಿದವರಾಗಿರಲಿಲ್ಲ. ॥18॥

(ಶ್ಲೋಕ-19)

ಮೂಲಮ್

ತೈಸ್ತೈರ್ನಿಯುದ್ಧವಿಧಿಭಿರ್ವಿವಿಧೈರಚ್ಯುತೇತರೌ ।
ಯುಯುಧಾತೇ ಯಥಾನ್ಯೋನ್ಯಂ ತಥೈವ ಬಲಮುಷ್ಟಿಕೌ ॥

ಅನುವಾದ

ಭಗವಾನ್ ಶ್ರೀಕೃಷ್ಣ ಮತ್ತು ಚಾಣೂರರಿಬ್ಬರೂ ಯಾವ ರೀತಿಯಿಂದ ಮಲ್ಲಯುದ್ಧದ ನಿಯಮಗಳನ್ನು ಅನುಸರಿಸಿ ಕಾದಾಡುತ್ತಿದ್ದರೋ, ಹಾಗೆಯೇ ಬಲರಾಮ ಮುಷ್ಟಿಕರೂ ಕಾಳಗವಾಡುತ್ತಿದ್ದರು. ॥19॥

(ಶ್ಲೋಕ-20)

ಮೂಲಮ್

ಭಗವದ್ಗಾತ್ರನಿಷ್ಪಾತೈರ್ವಜ್ರನಿಷ್ಪೇಷನಿಷ್ಠುರೈಃ ।
ಚಾಣೂರೋ ಭಜ್ಯಮಾನಾಂಗೋ ಮುಹುರ್ಗ್ಲಾನಿಮವಾಪ ಹ ॥

ಅನುವಾದ

ಶ್ರೀಕೃಷ್ಣನ ಅಂಗಾಂಗಗಳೆಲ್ಲವೂ ವಜ್ರಕ್ಕಿಂತಲೂ ಕಠಿಣವಾಗಿದ್ದವು. ಅವುಗಳ ಪ್ರಹಾರದಿಂದ ಚಾಣೂರನ ನರಗಳೆಲ್ಲ ಸಡಿಲವಾದುವು. ಯಾತನೆಯನ್ನು ಸಹಿಸಲಾರದೆ ಶರೀರದ ಸಂದುಗಳೆಲ್ಲ ಕಳಚಿ ಹೋಗುವಂತೆ ಅವನಿಗೆ ಅನಿಸಿತು. ಅವನು ಆಯಾಸಗೊಂಡಿದ್ದನು. ॥20॥

(ಶ್ಲೋಕ-21)

ಮೂಲಮ್

ಸ ಶ್ಯೇನವೇಗ ಉತ್ಪತ್ಯ ಮುಷ್ಟೀಕೃತ್ಯ ಕರಾವುಭೌ ।
ಭಗವಂತಂ ವಾಸುದೇವಂ ಕ್ರುದ್ಧೋ ವಕ್ಷಸ್ಯಬಾಧತ ॥

ಅನುವಾದ

ಆಗ ಅವನು ಅತ್ಯಂತ ಕ್ರುದ್ಧನಾಗಿ ಗಿಡುಗಪಕ್ಷಿಯಂತೆ ಎಗರಿ ಎರಡೂ ಮುಷ್ಟಿಗಳನ್ನು ಬಿಗಿದು ಭಗವಾನ್ ಶ್ರೀಕೃಷ್ಣನ ವಕ್ಷಃಸ್ಥಳದಲ್ಲಿ ಬಲವಾಗಿ ಪ್ರಹರಿಸಿದನು. ॥21॥

(ಶ್ಲೋಕ-22)

ಮೂಲಮ್

ನಾಚಲತ್ತತ್ಪ್ರಹಾರೇಣ ಮಾಲಾಹತ ಇವ ದ್ವಿಪಃ ।
ಬಾಹ್ವೋರ್ನಿಗೃಹ್ಯ ಚಾಣೂರಂ ಬಹುಶೋ ಭ್ರಾಮಯನ್ ಹರಿಃ ॥

(ಶ್ಲೋಕ-23)

ಮೂಲಮ್

ಭೂಪೃಷ್ಠೇ ಪೋಥಯಾಮಾಸ ತರಸಾ ಕ್ಷೀಣಜೀವಿತಮ್ ।
ವಿಸ್ರಸ್ತಾಕಲ್ಪಕೇಶಸ್ರಗಿಂದ್ರಧ್ವಜ ಇವಾಪತತ್ ॥

ಅನುವಾದ

ಆದರೆ ಆ ಪ್ರಹಾರದಿಂದ ಭಗವಂತನು ಸ್ವಲ್ಪವೂ ವಿಚಲಿತನಾಗಲಿಲ್ಲ. ಹೂವಿನ ಹಾರದಿಂದ ಆನೆಯನ್ನು ಹೊಡೆದಂತೆ ಆಯಿತು. ಅವನು ಚಾಣೂರನ ಎರಡೂ ಭುಜಗಳನ್ನು ಹಿಡಿದು, ಅವನನ್ನು ಅಂತರಿಕ್ಷದಲ್ಲಿ ವೇದವಾಗಿ ಗಿರಿ-ಗಿರನೆ ತಿರುಗಿಸಿ ನೆಲಕ್ಕೆ ಅಪ್ಪಳಿಸಿಬಿಟ್ಟನು. ಪರೀಕ್ಷಿತನೆ! ಚಾಣೂರನ ಪ್ರಾಣಗಳಾದರೋ ತಿರುಗಿಸುವಾಗಲೇ ಹೊರಟು ಹೋಗಿದ್ದವು. ಅವನ ವೇಷಭೂಷಣಗಳೆಲ್ಲ ಅಸ್ತವ್ಯಸ್ತವಾಗಿ, ಕೆದರಿದ ಕೂದಲುಗಳಿಂದ ಇಂದ್ರಧ್ವಜ (ಇಂದ್ರನ ಪೂಜೆಗಾಗಿ ನಿಲ್ಲಿಸಿದ್ದ ದೊಡ್ಡ ಬಾವುಟ)ದಂತೆ ಭೂಮಿಗೆ ಬಿದ್ದನು. ॥22-23॥

(ಶ್ಲೋಕ-24)

ಮೂಲಮ್

ತಥೈವ ಮುಷ್ಟಿಕಃ ಪೂರ್ವಂ ಸ್ವಮುಷ್ಟ್ಯಾಭಿಹತೇನ ವೈ ।
ಬಲಭದ್ರೇಣ ಬಲಿನಾ ತಲೇನಾಭಿಹತೋ ಭೃಶಮ್ ॥

ಅನುವಾದ

ಹೀಗೆಯೇ ಮುಷ್ಟಿಕನೂ ಬಲರಾಮನಿಗೆ ಒಂದು ಗುದ್ದು ಗುದ್ದಿದನು. ಆಗ ಮಹಾಬಲಿಯಾದ ಬಲರಾಮನು ಅವನಿಗೆ ಜೋರಾಗಿ ಒಂದು ಏಟನ್ನು ಕೊಟ್ಟನು. ॥24॥

(ಶ್ಲೋಕ-25)

ಮೂಲಮ್

ಪ್ರವೇಪಿತಃ ಸ ರುಧಿರಮುದ್ವಮನ್ ಮುಖತೋರ್ದಿತಃ ।
ವ್ಯಸುಃ ಪಪಾತೋರ್ವ್ಯಪಸ್ಥೇ ವಾತಾಹತ ಇವಾಂಘ್ರಿಪಃ ॥

ಅನುವಾದ

ಆ ಏಟಿನಿಂದ ಮುಷ್ಟಿಕನು ನಡುಗುತ್ತಾ ಬಿರುಗಾಳಿಗೆ ಉರುಳುವ ಮರದಂತೆ ಅತ್ಯಂತ ಪೀಡಿತನಾಗಿ ರಕ್ತವನ್ನು ಕಾರುತ್ತಾ, ಪ್ರಾಣಹೀನನಾಗಿ ನೆಲಕ್ಕೆ ಕುಸಿದು ಬಿದ್ದನು. ॥25॥

(ಶ್ಲೋಕ-26)

ಮೂಲಮ್

ತತಃ ಕೂಟಮನುಪ್ರಾಪ್ತಂ ರಾಮಃ ಪ್ರಹರತಾಂ ವರಃ ।
ಅವಧೀಲ್ಲೀಲಯಾ ರಾಜನ್ ಸಾವಜ್ಞಂ ವಾಮಮುಷ್ಟಿನಾ ॥

ಅನುವಾದ

ಎಲೈ ರಾಜನೇ! ಅನಂತರ ಕೂಟನೆಂಬ ಜಟ್ಟಿಯು ಯೋಧರಲ್ಲಿ ಶ್ರೇಷ್ಠನಾದ ಭಗವಾನ್ ಬಲರಾಮನನ್ನು ಇದಿರಿಸಲೋಸುಗ ಬರುತ್ತಲೇ ಕೇವಲ ವಿನೋದದಿಂದಲೇ ಬಲರಾಮನು ನಿರ್ಲಕ್ಷಪೂರ್ವಕವಾಗಿ ಎಡಗೈಯ ಮುಷ್ಟಿಯಿಂದ ಅವನನ್ನು ಕೊಂದು ಹಾಕಿದನು. ॥26॥

(ಶ್ಲೋಕ-27)

ಮೂಲಮ್

ತರ್ಹ್ಯೇವ ಹಿ ಶಲಃ ಕೃಷ್ಣಪದಾಪಹತಶೀರ್ಷಕಃ ।
ದ್ವಿಧಾ ವಿದೀರ್ಣಸ್ತೋಶಲಕ ಉಭಾವಪಿ ನಿಪೇತತುಃ ॥

ಅನುವಾದ

ಆದೇ ಸಮಯದಲ್ಲಿ ಭಗವಾನ್ ಶ್ರೀಕೃಷ್ಣನು ಕಾಲಿನ ಒದೆಯಿಂದಲೇ ಶಲನೆಂಬ ಜಟ್ಟಿಯ ರುಂಡ-ಮುಂಡಗಳನ್ನು ಬೇರ್ಪಡಿಸಿದನು. ತೋಶಲನೆಂಬ ಜಟ್ಟಿಯನ್ನು ಹುಲ್ಲನ್ನು ಸಿಗಿದು ಹಾಕುವಂತೆ ಸೀಳಿ ಎರಡು ತುಂಡುಗಳಾಗಿಸಿದನು. ಹೀಗೆ ಇಬ್ಬರೂ ಮಲ್ಲರೂ ಧರಾಶಾಯಿಯಾದರು. ॥27॥

(ಶ್ಲೋಕ-28)

ಮೂಲಮ್

ಚಾಣೂರೇ ಮುಷ್ಟಿಕೇ ಕೂಟೇ ಶಲೇ ತೋಶಲಕೇ ಹತೇ ।
ಶೇಷಾಃ ಪ್ರದುದ್ರುವುರ್ಮಲ್ಲಾಃ ಸರ್ವೇ ಪ್ರಾಣಪರೀಪ್ಸವಃ ॥

ಅನುವಾದ

ಚಾಣೂರ, ಮುಷ್ಟಿಕ, ಕೂಟ, ಶಲ, ತೋಶಲ ಎಂಬ ಐದುಮಂದಿ ಜಟ್ಟಿಗಳು ಸತ್ತುಹೋದಾಗ ಉಳಿದ ಜಟ್ಟಿಗಳು ಪ್ರಾಣಗಳನ್ನು ಉಳಿಸಿ ಕೊಳ್ಳಲೋಸುಗ ಕಾಲಿಗೆ ಬುದ್ಧಿ ಹೇಳಿದರು. ॥28॥

(ಶ್ಲೋಕ-29)

ಮೂಲಮ್

ಗೋಪಾನ್ ವಯಸ್ಯಾನಾಕೃಷ್ಯ ತೈಃ ಸಂಸೃಜ್ಯ ವಿಜಹ್ರತುಃ ।
ವಾದ್ಯಮಾನೇಷು ತೂರ್ಯೇಷು ವಲ್ಗಂತೌ ರುತನೂಪುರೌ ॥

ಅನುವಾದ

ಅವರೆಲ್ಲರೂ ಓಡಿಹೋದ ಬಳಿಕ ಭಗವಾನ್ ಶ್ರೀಕೃಷ್ಣ ಮತ್ತು ಬಲರಾಮರು ತಮ್ಮ ಸಮವಯಸ್ಕ, ಗೊಲ್ಲಬಾಲಕರನ್ನು ಎಳೆದೆಳದು ತಂದು ಅವರೊಂದಿಗೆ ಕುಸ್ತಿಯಾಡುತ್ತಾ, ಕುಣಿ-ಕುಣಿದು ಭೇರಿ-ನಗಾರಿಗಳ ಧ್ವನಿಯೊಂದಿಗೆ ನೂಪುರಗಳ ನಿನಾದವನ್ನು ಸೇರಿಸುತ್ತಾ ಮಲ್ಲ-ಕ್ರೀಡೆ ಯಾಡತೊಡಗಿದರು. ॥29॥

(ಶ್ಲೋಕ-30)

ಮೂಲಮ್

ಜನಾಃ ಪ್ರಜಹೃಷುಃ ಸರ್ವೇ ಕರ್ಮಣಾ ರಾಮಕೃಷ್ಣಯೋಃ ।
ಋತೇ ಕಂಸಂ ವಿಪ್ರಮುಖ್ಯಾಃ ಸಾಧವಃ ಸಾಧು ಸಾಧ್ವಿತಿ ॥

ಅನುವಾದ

ಭಗವಾನ್ ಶ್ರೀಕೃಷ್ಣ ಮತ್ತು ಬಲರಾಮರ ಈ ಅದ್ಭುತ ಲೀಲೆಯನ್ನು ನೋಡಿದ ಪ್ರೇಕ್ಷರಿಗೆಲ್ಲ ಅತ್ಯಂತ ಆನಂದವಾಯಿತು. ಶ್ರೇಷ್ಠ ಬ್ರಾಹ್ಮಣರೂ, ಸತ್ಪುರಷರೂ ಸಾಧು! ಸಾಧು! ಭಲೇ! ಎಂದು ಹೇಳುತ್ತಾ ಪ್ರಶಂಸಿಸ ತೊಡಗಿದರು. ಆದರೆ ಕಂಸನಿಗೆ ಮಾತ್ರ ಇದರಿಂದ ಅತೀವ ದುಃಖವಾಗಿ ಕೆರಳಿ ಹೋದನು. ॥30॥

(ಶ್ಲೋಕ-31)

ಮೂಲಮ್

ಹತೇಷು ಮಲ್ಲವರ್ಯೇಷು ವಿದ್ರುತೇಷು ಚ ಭೋಜರಾಟ್ ।
ನ್ಯವಾರಯತ್ಸ್ವತೂರ್ಯಾಣಿ ವಾಕ್ಯಂ ಚೇದಮುವಾಚ ಹ ॥

ಅನುವಾದ

ಅವನ ಮುಖ್ಯ-ಮುಖ್ಯರಾದ ಮಲ್ಲರು ಸತ್ತುಹೋಗಿ, ಉಳಿದವರೆಲ್ಲರೂ ಓಡಿಹೋದಾಗ ಭೋಜರಾಜನಾದ ಕಂಸನು ವಾದ್ಯವಾದನಗಳನ್ನು ನಿಲ್ಲಿಸಿಬಿಟ್ಟನು. ಕೋಪೋದ್ರಿಕ್ತನಾಗಿ ತನ್ನ ಸೇವಕರಿಗೆ ಹೀಗೆ ಆಜ್ಞಾಪಿಸಿದನು. ॥31॥

(ಶ್ಲೋಕ-32)

ಮೂಲಮ್

ನಿಃಸಾರಯತ ದುರ್ವೃತ್ತೌ ವಸುದೇವಾತ್ಮಜೌ ಪುರಾತ್ ।
ಧನಂ ಹರತ ಗೋಪಾನಾಂ ನಂದಂ ಬಧ್ನೀತ ದುರ್ಮತಿಮ್ ॥

ಅನುವಾದ

ಕೆಟ್ಟ ನಡತೆಯುಳ್ಳ ವಸುದೇವನ ಈ ಇಬ್ಬರೂ ಮಕ್ಕಳನ್ನು ನಗರದಿಂದ ಹೊರಗಟ್ಟಿರಿ. ಈ ಗೋಪರಲ್ಲಿ ಇರುವ ಹಣವೆಲ್ಲವನ್ನೂ ಕಸಿದುಕೊಳ್ಳಿರಿ. ದುರ್ಬುದ್ಧಿಯಾದ ನಂದನನ್ನು ಸೆರೆಹಿಡಿಯಿರಿ. ॥32॥

(ಶ್ಲೋಕ-33)

ಮೂಲಮ್

ವಸುದೇವಸ್ತು ದುರ್ಮೇಧಾ ಹನ್ಯತಾಮಾಶ್ವಸತ್ತಮಃ ।
ಉಗ್ರಸೇನಃ ಪಿತಾ ಚಾಪಿ ಸಾನುಗಃ ಪರಪಕ್ಷಗಃ ॥

ಅನುವಾದ

ಬಹಳ ಅಯೋಗ್ಯನಾದ ಕೆಟ್ಟಬುದ್ಧಿಯುಳ್ಳ ವಸುದೇವನನ್ನು ಈಗಲೇ ಶೀಘ್ರವಾಗಿ ಕೊಂದುಹಾಕಿರಿ. ನಮ್ಮ ತಂದೆಯಾದರೂ ಶತ್ರುಪಕ್ಷಕ್ಕೆ ಸೇರಿದವನಾದ್ದರಿಂದ ಅನುಯಾಯಿಗಳ ಸಹಿತ ಉಗ್ರಸೇನನನ್ನು ಮುಗಿಸಿಬಿಡಿರಿ. ॥33॥

(ಶ್ಲೋಕ-34)

ಮೂಲಮ್

ಏವಂ ವಿಕತ್ಥಮಾನೇ ವೈ ಕಂಸೇ ಪ್ರಕುಪಿತೋವ್ಯಯಃ ।
ಲಘಿಮ್ನೋತ್ಪತ್ಯ ತರಸಾ ಮಂಚ ಮುತ್ತುಂಗಮಾರುಹತ್ ॥

ಅನುವಾದ

ಕಂಸನು ಹೀಗೆ ಬಡ-ಬಡಿಸುತ್ತಿರುವಾಗ ಅವಿನಾಶಿಯಾದ ಶ್ರೀಕೃಷ್ಣನು ಕುಪಿತನಾಗಿ ಅತ್ಯಂತ ವೇಗದಿಂದ ಛಂಗನೆ ಹಾರಿ ಕಂಸನು ಕುಳಿತಿದ್ದ ಎತ್ತರವಾದ ವೇದಿಕೆಯ ಮೇಲೆ ನಿಂತುಕೊಂಡನು. ॥34॥

ಮೂಲಮ್

(ಶ್ಲೋಕ-35)
ತಮಾವಿಶಂತಮಾಲೋಕ್ಯ ಮೃತ್ಯುಮಾತ್ಮನ ಆಸನಾತ್ ।
ಮನಸ್ವೀ ಸಹಸೋತ್ಥಾಯ ಜಗೃಹೇ ಸೋಸಿಚರ್ಮಣೀ ॥

ಅನುವಾದ

ತನ್ನ ಮೃತ್ಯುರೂಪನಾದ ಶ್ರೀಕೃಷ್ಣನು ತನ್ನ ಬಳಿಗೆ ಬಂದಿರುವುದನ್ನು ನೋಡಿದ ಮನಸ್ವೀಯಾದ ಕಂಸನು ಥಟ್ಟನೇ ಸಿಂಹಾಸನದಿಂದ ಎದ್ದು ಕತ್ತಿ ಗುರಾಣಿಗಳನ್ನು ಎತ್ತಿಕೊಂಡನು. ॥35॥

(ಶ್ಲೋಕ-36)

ಮೂಲಮ್

ತಂ ಖಡ್ಗಪಾಣಿಂ ವಿಚರಂತಮಾಶು
ಶ್ಯೇನಂ ಯಥಾ ದಕ್ಷಿಣಸವ್ಯಮಂಬರೇ ।
ಸಮಗ್ರಹೀದ್ದುರ್ವಿಷಹೋಗ್ರತೇಜಾ
ಯಥೋರಗಂ ತಾರ್ಕ್ಷ್ಯಸುತಃ ಪ್ರಸಹ್ಯ ॥

ಅನುವಾದ

ಕತ್ತಿಗುರಾಣಿಗಳನ್ನು ಹಿಡಿದಿದ್ದ ಕಂಸನು ಶ್ರೀಕೃಷ್ಣನನ್ನು ಪ್ರಹರಿಸಲು ವರಸೆಗಳಿಂದ ಖಡ್ಗವನ್ನು ಝಳಪಿಸುತ್ತಾ ಆಕಾಶದಲ್ಲಿ ಹಾರುವ ಗಿಡುಗನಂತೆ ಎಡಕ್ಕೂ ಬಲಕ್ಕೂ ನೆಗೆಯುತ್ತಿದ್ದನು. ಆದರೆ ಯಾರಿಂದಲೂ ಸಹಿಸಲಶಕ್ಯವಾದ ಭಯಂಕರವಾದ ತೇಜಸ್ಸಿನಿಂದ ಪ್ರಜ್ವಲಿಸುತ್ತಿದ್ದ ಶ್ರೀಕೃಷ್ಣನು ಗರುಡನು ಹಾವನ್ನು ಹಿಡಿಯುವಂತೆ ಖಡ್ಗಪಾಣಿಯಾದ ಕಂಸನನ್ನು ಬಲಪೂರ್ವಕಾಗಿ ಹಿಡಿದುಕೊಂಡನು. ॥36॥

(ಶ್ಲೋಕ-37)

ಮೂಲಮ್

ಪ್ರಗೃಹ್ಯ ಕೇಶೇಷು ಚಲತ್ಕಿರೀಟಂ
ನಿಪಾತ್ಯ ರಂಗೋಪರಿ ತುಂಗಮಂಚಾತ್ ।
ತಸ್ಯೋಪರಿಷ್ಟಾತ್ ಸ್ವಯಮಬ್ಜನಾಭಃ
ಪಪಾತ ವಿಶ್ವಾಶ್ರಯ ಆತ್ಮತಂತ್ರಃ ॥

ಅನುವಾದ

ಹಿಡಿದಾಗಲೇ ಕಂಸನ ಕಿರೀಟವು ಬಿದ್ದುಹೋಯಿತು. ಶ್ರೀಕೃಷ್ಣನು ಅವನ ಮುಡಿಯನ್ನು ಹಿಡಿದೆಳೆದು ಎತ್ತರವಾದ ಮಂಚದಿಂದ ರಂಗಭೂಮಿಯ ಮೇಲೆ ಬೀಳಿಸಿದನು. ಮರುಕ್ಷಣದಲ್ಲೇ ವಿಶ್ವಕ್ಕೆ ಪರಮಾಶ್ರಯನಾದ, ಸರ್ವತಂತ್ರ ಸ್ವತಂತ್ರನಾದ ಭಗವಾನ್ ಶ್ರೀಕೃಷ್ಣನು ಅವನ ಮೇಲೆ ಛಂಗನೆ ಹಾರಿದನು. ॥37॥

(ಶ್ಲೋಕ-38)

ಮೂಲಮ್

ತಂ ಸಂಪರೇತಂ ವಿಚಕರ್ಷ ಭೂವೌ
ಹರಿರ್ಯಥೇಭಂ ಜಗತೋ ವಿಪಶ್ಯತಃ ।
ಹಾಹೇತಿ ಶಬ್ದಃ ಸುಮಹಾಂಸ್ತದಾಭೂ-
ದುದೀರಿತಃ ಸರ್ವಜನೈರ್ನರೇಂದ್ರ ॥

ಅನುವಾದ

ಶ್ರೀಕೃಷ್ಣನು ಕಂಸನ ಮೇಲೆ ಬೀಳುತ್ತಲೇ ಅವನ ಪ್ರಾಣಪಕ್ಷಿಯು ಹಾರಿಹೋಯಿತು. ಸಿಂಹವು ಆನೆಯನ್ನು ಸೆಳೆದಾಡುವಂತೆ ಎಲ್ಲರೂ ನೋಡುತ್ತಿರುವಂತೆ ಶ್ರೀಕೃಷ್ಣನು ಕಂಸನ ಮೃತಶರೀರವನ್ನು ಸೆಳೆದಾಡಿದನು. ರಾಜೇಂದ್ರ! ಆ ಸಮಯದಲ್ಲಿ ಎಲ್ಲರ ಬಾಯಿಂದ ಅಯ್ಯೋ! ಅಯ್ಯೋ! ಎಂಬ ಗಟ್ಟಿಯಾದ ಧ್ವನಿಗಳು ಕೇಳಿಬರುತ್ತಿದ್ದವು. ॥38॥

(ಶ್ಲೋಕ-39)

ಮೂಲಮ್

ಸ ನಿತ್ಯದೋದ್ವಿಗ್ನಧಿಯಾ ತಮೀಶ್ವರಂ
ಪಿಬನ್ ವದನ್ ವಾ ವಿಚರನ್ ಸ್ವಪನ್ ಶ್ವಸನ್ ।
ದದರ್ಶ ಚಕ್ರಾಯುಧಮಗ್ರತೋ ಯ-
ಸ್ತದೇವ ರೂಪಂ ದುರವಾಪಮಾಪ ॥

ಅನುವಾದ

ಕಂಸನು ನಿರಂತರವಾಗಿ ಉದ್ವಿಗ್ನನಾಗಿ ಭಯದಿಂದ ಶ್ರೀಕೃಷ್ಣನನ್ನೇ ಚಿಂತಿಸುತ್ತಿದ್ದನು. ಅವನು ಉಂಬಾಗ ತಿಂಬಾಗ, ನಡೆದಾಡುವಾಗ, ಮಾತನಾಡುವಾಗ, ಉಸಿರಾಡುವಾಗಲೂ ತನ್ನೆದುರಿಗೆ ಚಕ್ರಧಾರಿಯಾದ ಶ್ರೀಕೃಷ್ಣನನ್ನೇ ನೋಡುತ್ತಿದ್ದನು. ಈ ನಿತ್ಯನಿರಂತರ ಚಿಂತನೆಯ ಫಲವಾಗಿ ದೊಡ್ಡ-ದೊಡ್ಡ ತಪಸ್ವಿಗಳಾದ ಯೋಗಿಗಳಿಗೂ ಕಠಿಣವಾದ ಭಗವಂತನ ಸಾರೂಪ್ಯ ಮುಕ್ತಿಯು ಅವನಿಗೆ ಲಭಿಸಿತು. ॥39॥

(ಶ್ಲೋಕ-40)

ಮೂಲಮ್

ತಸ್ಯಾನುಜಾ ಭ್ರಾತರೋಷ್ಟೌ ಕಂಕನ್ಯಗ್ರೋಧಕಾದಯಃ ।
ಅಭ್ಯಧಾವನ್ನಭಿಕ್ರುದ್ಧಾ ಭ್ರಾತುರ್ನಿರ್ವೇಶಕಾರಿಣಃ ॥

ಅನುವಾದ

ಕಂಸನು ಅಸುನೀಗುತ್ತಲೇ ಅವನ ತಮ್ಮಂದಿರಾದ ಕಂಕ, ನ್ಯಗ್ರೋಧ ಮೊದಲಾದ ಎಂಟು ಜನರು ತಮ್ಮ ಅಣ್ಣನನ್ನು ಕೊಂದ ಸೇಡುತೀರಿಸಿಕೊಳ್ಳಲು ಕ್ರೋಧೋನ್ಮತ್ತರಾಗಿ ಶ್ರೀಕೃಷ್ಣ ಬಲರಾಮರ ಕಡೆಗೆ ನುಗ್ಗಿ ಬಂದರು. ॥40॥

(ಶ್ಲೋಕ-41)

ಮೂಲಮ್

ತಥಾತಿರಭಸಾಂಸ್ತಾಂಸ್ತು ಸಂಯತ್ತಾನ್ ರೋಹಿಣೀಸುತಃ ।
ಅಹನ್ ಪರಿಘಮುದ್ಯಮ್ಯ ಪಶೂನಿವ ಮೃಗಾಧಿಪಃ ॥

ಅನುವಾದ

ಕಂಸನ ಸೋದರರು ಅತ್ಯಂತ ವೇಗವಾಗಿ ಯುದ್ಧಕ್ಕೆ ಸಿದ್ಧರಾಗಿ ಓಡಿ ಬರುತ್ತಿರುವುದನ್ನು ನೋಡಿದ ಬಲರಾಮನು ಪರಿಘವನ್ನೆತ್ತಿಕೊಂಡು ಸಿಂಹವು ಪಶುಗಳನ್ನು ಕೊಂದುಹಾಕುವಂತೆ ಕ್ಷಣಮಾತ್ರದಲ್ಲಿ ಅವರನ್ನು ಸಂಹರಿಸಿ ಬಿಟ್ಟನು. ॥41॥

(ಶ್ಲೋಕ-42)

ಮೂಲಮ್

ನೇದುರ್ದುಂದುಭಯೋ ವ್ಯೋಮ್ನಿ ಬ್ರಹ್ಮೇಶಾದ್ಯಾ ವಿಭೂತಯಃ ।
ಪುಷ್ಪೈಃ ಕಿರಂತಸ್ತಂ ಪ್ರೀತಾಃ ಶಶಂಸುರ್ನನೃತುಃ ಸಿಯಃ ॥

ಅನುವಾದ

ಆ ಸಮಯದಲ್ಲಿ ಆಕಾಶದಲ್ಲಿ ದುಂದುಭಿಗಳು ಮೊಳಗಿದವು. ಭಗವದ್ವಿಭೂತಿಗಳಾದ ಬ್ರಹ್ಮರುದ್ರರೇ ಮೊದಲಾದ ದೇವತೆಗಳು ಆನಂದತುಂದಿಲರಾಗಿ ರಾಮ-ಕೃಷ್ಣರ ಮೇಲೆ ಹೂಗಳ ಮಳೆಗರೆಯುತ್ತಾ ಸ್ತುತಿಸತೊಡಗಿದರು. ಅಪ್ಸರೆಯರು ನೃತ್ಯವಾಡ ತೊಡಗಿದರು. ॥42॥

(ಶ್ಲೋಕ-43)

ಮೂಲಮ್

ತೇಷಾಂ ಸಿಯೋ ಮಹಾರಾಜ ಸುಹೃನ್ಮರಣದುಃಖಿತಾಃ ।
ತತ್ರಾಭೀಯುರ್ವಿನಿಘ್ನಂತ್ಯಃ ಶೀರ್ಷಾಣ್ಯಶ್ರುವಿಲೋಚನಾಃ ॥

ಅನುವಾದ

ಪರೀಕ್ಷಿತಮಹಾರಾಜ! ಕಂಸನ ಮತ್ತು ಅವನ ಸಹೋದರರ ಮಡದಿಯರು ಮತ್ತು ಅವರ ನಿಕಟ ಸಂಬಂಧಿಗಳು ಕಂಸನ ಹಾಗೂ ಆತನ ಸಹೋದರರ ಮೃತ್ಯುವಿನಿಂದಾಗಿ ಅತ್ಯಂತ ದುಃಖಿತರಾದರು. ಅವರೆಲ್ಲರೂ ತಲೆಗಳನ್ನು ಚಚ್ಚಿಕೊಂಡು, ಕಣ್ಣೀರು ಸುರಿಸುತ್ತಾ ಅಲ್ಲಿಗೆ ಬಂದರು. ॥43॥

(ಶ್ಲೋಕ-44)

ಮೂಲಮ್

ಶಯಾನಾನ್ ವೀರಶಯ್ಯಾಯಾಂ ಪತೀನಾಲಿಂಗ್ಯ ಶೋಚತೀಃ ।
ವಿಲೇಪುಃ ಸುಸ್ವರಂ ನಾರ್ಯೋ ವಿಸೃಜಂತ್ಯೋ ಮುಹುಃ ಶುಚಃ ॥

ಅನುವಾದ

ವೀರಶಯ್ಯೆಯಲ್ಲಿ ಮಲಗಿದ್ದ ತಮ್ಮ ಪತಿಗಳನ್ನು ಅಪ್ಪಿಕೊಂಡು ಅವರು ಶೋಕಗ್ರಸ್ತರಾಗಿ ಪದೇ ಪದೇ ಕಣ್ಣೀರು ಸುರಿಸುತ್ತಾ, ಗಟ್ಟಿಯಾಗಿ ವಿಲಾಪಿಸತೊಡಗಿದರು. ॥44॥

(ಶ್ಲೋಕ-45)

ಮೂಲಮ್

ಹಾ ನಾಥ ಪ್ರಿಯ ಧರ್ಮಜ್ಞ ಕರುಣಾನಾಥವತ್ಸಲ ।
ತ್ವಯಾ ಹತೇನ ನಿಹತಾ ವಯಂ ತೇ ಸಗೃಹಪ್ರಜಾಃ ॥

ಅನುವಾದ

ಹೇ ನಾಥನೇ! ಪ್ರಿಯನೇ! ಧರ್ಮಜ್ಞನೇ! ಕರುಣಾಮಯನೇ! ಅನಾಥವತ್ಸಲನೇ! ನಿನ್ನ ಮೃತ್ಯುವಿನಿಂದಾಗಿ ನಾವೆಲ್ಲರೂ ಸತ್ತಂತೆಯೇ ಆದೆವು. ನಮ್ಮ ಮನೆಗಳು ಹಾಳಾಗಿ ಹೋದುವು. ನಮ್ಮ ಸಂತಾನಗಳು ಅನಾಥವಾದುವು. ॥45॥

(ಶ್ಲೋಕ-46)

ಮೂಲಮ್

ತ್ವಯಾ ವಿರಹಿತಾ ಪತ್ಯಾ ಪುರೀಯಂ ಪುರುಷರ್ಷಭ ।
ನ ಶೋಭತೇ ವಯಮಿವ ನಿವೃತ್ತೋತ್ಸವಮಂಗಲಾ ॥

ಅನುವಾದ

ಪುರುಷಶ್ರೇಷ್ಠನೇ! ಈ ಪಟ್ಟಣಕ್ಕೆ ನೀನೇ ಒಡೆಯನಾಗಿದ್ದೆ. ನಿನ್ನ ಅಗಲುವಿಕೆಯಿಂದ ನಮ್ಮಂತೆಯೇ ಈ ಪಟ್ಟಣವು ಶೋಭಿಸುತ್ತಿಲ್ಲ. ಇಲ್ಲಿ ಉತ್ಸವಗಳೂ, ಮಂಗಳ ಕಾರ್ಯಗಳೂ ನಿಂತುಹೋಗಿವೆ. ॥46॥

(ಶ್ಲೋಕ-47)

ಮೂಲಮ್

ಅನಾಗಸಾಂ ತ್ವಂ ಭೂತಾನಾಂ
ಕೃತವಾನ್ ದ್ರೋಹಮುಲ್ಬಣಮ್ ।
ತೇನೇಮಾಂ ಭೋ ದಶಾಂ ನೀತೋ
ಭೂತಧ್ರುಕ್ ಕೋ ಲಭೇತ ಶಮ್ ॥

ಅನುವಾದ

ಸ್ವಾಮಿಯೇ! ನೀನು ನಿರಪರಾಧಿಯಾದ ಪ್ರಾಣಿಗಳಿಗೆ ಘೋರವಾದ ದ್ರೋಹವನ್ನೆಸಗಿದೆ. ಆದುದರಿಂದಲೆ ನಿನಗೆ ಇಂತಹ ದುರವಸ್ಥೆಯು ಪ್ರಾಪ್ತವಾಯಿತು. ಪ್ರಾಣಿಗಳಿಗೆ ದ್ರೋಹವನ್ನೆಸಗಿದ ಯಾರು ತಾನೇ ಸುಖವನ್ನು ಹೊಂದುವನು? ॥47॥

(ಶ್ಲೋಕ-48)

ಮೂಲಮ್

ಸರ್ವೇಷಾಮಿಹ ಭೂತಾನಾಮೇಷ ಹಿ ಪ್ರಭವಾಪ್ಯಯಃ ।
ಗೋಪ್ತಾ ಚ ತದವಧ್ಯಾಯೀ ನ ಕ್ವಚಿತ್ ಸುಖಮೇಧತೇ ॥

ಅನುವಾದ

ಈ ಭಗವಾನ್ ಶ್ರೀಕೃಷ್ಣನು ಜಗತ್ತಿನ ಸಮಸ್ತ ಪ್ರಾಣಿಗಳ ಉತ್ಪತ್ತಿ ಪ್ರಳಯಕ್ಕೆ ಆಧಾರನಾಗಿದ್ದಾನೆ. ರಕ್ಷಕನೂ ಆಗಿರುವನು. ಇವನಿಗೆ ಕೆಡುಕನ್ನು ಬಯಸುವವನು, ತಿರಸ್ಕರಿಸುವವನು ಎಂದಿಗೂ ಸುಖವಾಗಿರಲಾರನು. ॥48॥

(ಶ್ಲೋಕ-49)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ರಾಜಯೋಷಿತ ಆಶ್ವಾಸ್ಯ ಭಗವಾನ್ಲೋಕಭಾವನಃ ।
ಯಾಮಾಹುರ್ಲೌಕಿಕೀಂ ಸಂಸ್ಥಾಂ ಹತಾನಾಂ ಸಮಕಾರಯತ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಸಮಸ್ತ ಲೋಕಗಳಿಗೂ ಜೀವನದಾತೃನಾದ ಭಗವಂತನು ರಾಜಮಹಿಷಿಯರಿಗೆ ಧೈರ್ಯತುಂಬಿ, ಸಾಂತ್ವನ ನೀಡಿದನು. ಮತ್ತೆ ಲೋಕರೀತಿಯಂತೆ ಮರಣಹೊಂದಿದವರಿಗೆ ಮಾಡಬೇಕಾದ ಕ್ರಿಯಾ-ಕರ್ಮಗಳನ್ನು ಮಾಡಿಸಿದನು. ॥49॥

(ಶ್ಲೋಕ-50)

ಮೂಲಮ್

ಮಾತರಂ ಪಿತರಂ ಚೈವ ಮೋಚಯಿತ್ವಾಥ ಬಂಧನಾತ್ ।
ಕೃಷ್ಣರಾವೌ ವವಂದಾತೇ ಶಿರಸಾಸ್ಪೃಶ್ಯ ಪಾದಯೋಃ ॥

ಅನುವಾದ

ಅನಂತರ ಭಗವಾನ್ ಶ್ರೀಕೃಷ್ಣ-ಬಲರಾಮರು ಸೆರೆಮನೆಗೆ ಹೋಗಿ ತಮ್ಮ ತಂದೆ-ತಾಯಿಯರನ್ನು ಬಂಧನದಿಂದ ಬಿಡುಗಡೆ ಮಾಡಿದರು ಹಾಗೂ ಅವರ ಪಾದಗಳಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿದರು. ॥50॥

(ಶ್ಲೋಕ-51)

ಮೂಲಮ್

ದೇವಕೀ ವಸುದೇವಶ್ಚ ವಿಜ್ಞಾಯ ಜಗದೀಶ್ವರೌ ।
ಕೃತಸಂವಂದನೌ ಪುತ್ರೌ ಸಸ್ವಜಾತೇ ನ ಶಂಕಿತೌ ॥

ಅನುವಾದ

ಆದರೆ ತಮ್ಮ ಪುತ್ರರು ನಮಸ್ಕರಿಸಿದರೂ ವಸುದೇವ-ದೇವಕಿ ಯರು ಅವರನ್ನು ಜಗದೀಶ್ವರರೇ ಎಂದು ತಿಳಿದು ಅವರನ್ನು ಆಲಿಂಗಿಸಿಕೊಳ್ಳಲಿಲ್ಲ. ಈ ಜಗದೀಶ್ವರರನ್ನು ನಾವು ಪುತ್ರರೆಂದು ಹೇಗೆ ತಿಳಿಯಲಿ ಎಂಬ ಸಂದೇಹ ಉಂಟಾಯಿತು. ॥51॥

ಅನುವಾದ (ಸಮಾಪ್ತಿಃ)

ನಲವತ್ತನಾಲ್ಕನೆಯ ಅಧ್ಯಾಯವು ಮುಗಿಯಿತು. ॥44॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ಕಂಸವಧೋ ನಾಮ ಚತುಶ್ಚತ್ವಾರಿಂಶೋಽಧ್ಯಾಯಃ ॥44॥