[ನಲವತ್ತೆರಡನೆಯ ಅಧ್ಯಾಯ]
ಭಾಗಸೂಚನಾ
ಕುಬ್ಜೆಯ ಮೇಲೆ ಕೃಪೆ, ಧರ್ನುಭಂಗ, ಕಂಸನ ತಳಮಳ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಅಥ ವ್ರಜನ್ ರಾಜಪಥೇನ ಮಾಧವಃ
ಸಿಯಂ ಗೃಹೀತಾಂಗವಿಲೇಪಭಾಜನಾಮ್ ।
ವಿಲೋಕ್ಯ ಕುಬ್ಜಾಂ ಯುವತೀಂ ವರಾನನಾಂ
ಪಪ್ರಚ್ಛ ಯಾಂತೀಂ ಪ್ರಹಸನ್ ರಸಪ್ರದಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಅನಂತರ ಭಗವಾನ್ ಶ್ರೀಕೃಷ್ಣನು ತನ್ನ ಸಂಗಡಿಗರೊಂದಿಗೆ ರಾಜಬೀದಿಯಲ್ಲಿ ಬರುತ್ತಿರುವಾಗ ಓರ್ವ ಯುವತಿಯನ್ನು ನೋಡಿದನು. ಆಕೆಯ ಮುಖವು ಸುಂದರವಾಗಿದ್ದರೂ ಶರೀರದಿಂದ ಕುಳ್ಳಾಗಿದ್ದಳು. ಇದರಿಂದ ಅವಳನ್ನು ಕುಬ್ಜೆ ಎಂದೇ ಕರೆಯುತ್ತಿದ್ದರು. ಆಕೆಯು ಕೈಯಲ್ಲಿ ಗಂಧದ ಪಾತ್ರೆಯನ್ನು ಹಿಡಿದುಕೊಂಡಿದ್ದಳು. ಪ್ರೇಮರಸವನ್ನು ದಾನಮಾಡುವುದಕ್ಕಾಗಿ ಭಗವಾನ್ ಶ್ರೀಕೃಷ್ಣನು ಕುಬ್ಜೆಯ ಮೇಲೆ ಕೃಪೆ ತೋರಲು ನಗುತ್ತಾ ಆಕೆಯನ್ನು ಪ್ರಶ್ನಸಿದನು. ॥1॥
(ಶ್ಲೋಕ-2)
ಮೂಲಮ್
ಕಾ ತ್ವಂ ವರೋರ್ವೇತದು ಹಾನುಲೇಪನಂ
ಕಸ್ಯಾಂಗನೇ ವಾ ಕಥಯಸ್ವ ಸಾಧು ನಃ ।
ದೇಹ್ಯಾವಯೋರಂಗವಿಲೇಪಮುತ್ತಮಂ
ಶ್ರೇಯಸ್ತತಸ್ತೇ ನಚಿರಾದ್ಭವಿಷ್ಯತಿ ॥
ಅನುವಾದ
ಎಲೈ ಸುಂದರಿಯೇ! ನೀನು ಯಾರು? ಈ ಗಂಧವನ್ನು ಯಾರಿಗಾಗಿ ಕೊಂಡು ಹೋಗುತ್ತಿರುವೆ? ಕಲ್ಯಾಣಿ! ಎಲ್ಲವನ್ನು ಯಥಾವತ್ತಾಗಿ ಹೇಳು. ಈ ಉತ್ತಮವಾದ ಗಂಧವನ್ನೂ, ಅಂಗರಾಗವನ್ನು ನಮಗೆ ಕೊಟ್ಟು ಬಿಡು. ಇದರಿಂದ ಶೀಘ್ರವಾಗಿ ನಿನಗೆ ಪರಮ ಶ್ರೇಯಸ್ಸು ಉಂಟಾದೀತು. ॥2॥
ಮೂಲಮ್
(ಶ್ಲೋಕ-3)
ಮೂಲಮ್ (ವಾಚನಮ್)
ಸೈರಂಧ್ರ್ಯುವಾಚ
ಮೂಲಮ್
ದಾಸ್ಯಸ್ಮ್ಯಹಂ ಸುಂದರ ಕಂಸಸಮ್ಮತಾ
ತ್ರಿವಕ್ರನಾಮಾ ಹ್ಯನುಲೇಪಕರ್ಮಣಿ ।
ಮದ್ಭಾವಿತಂ ಭೋಜಪತೇರತಿಪ್ರಿಯಂ
ವಿನಾ ಯುವಾಂ ಕೋನ್ಯತಮಸ್ತದರ್ಹತಿ ॥
ಅನುವಾದ
ಸೈರಂಧ್ರಿಯಾದ ಕುಬ್ಜೆಯು ಹೇಳಿದಳು — ಸುಂದರಾಂಗನೇ! ನಾನು ಕಂಸನಿಗೆ ಪ್ರಿಯಳಾದ ದಾಸಿಯು. ಮಹಾರಾಜನು ನನ್ನನ್ನು ಬಹಳವಾಗಿ ಸಮ್ಮಾನಿಸುತ್ತಾನೆ. ತ್ರಿವಕ್ರಾ(ಕುಬ್ಜೆ) ಎಂಬುದು ನನ್ನ ಹೆಸರು. ನಾನು ರಾಜನಲ್ಲಿ ಗಂಧ, ಅಂಗರಾಗವನ್ನು ಹಚ್ಚುವ ಕೆಲಸ ಮಾಡುತ್ತಿದ್ದೇನೆ. ನಾನು ತಯಾರಿಸಿದಗಂಧ ಮತ್ತು ಅಂಗರಾಗವು ಭೋಜರಾಜ ಕಂಸನಿಗೆ ಅತ್ಯಂತ ಪ್ರಿಯವಾಗಿರುತ್ತದೆ. ಆದರೆ ಇಂತಹ ಅಮೋಘವಾದ ಚಂದವನ್ನು ಲೇಪಿಸಿಕೊಳ್ಳಲು ಅರ್ಹರಾದವರು ನಿಮ್ಮಿಬ್ಬರನ್ನುಳಿದು ಬೇರೆ ಯಾರೂ ಇರುವುದಿಲ್ಲ. ॥3॥
(ಶ್ಲೋಕ-4)
ಮೂಲಮ್
ರೂಪಪೇಶಲಮಾಧುರ್ಯಹಸಿತಾಲಾಪವೀಕ್ಷಿತೈಃ ।
ಧರ್ಷಿತಾತ್ಮಾ ದದೌ ಸಾಂದ್ರಮುಭಯೋರನುಲೇಪನಮ್ ॥
ಅನುವಾದ
ಭಗವಂತನ ಸೌಂದರ್ಯ, ಸೌಕುಮಾರ್ಯ, ರಸಿಕತೆ, ಮಂದಹಾಸ, ಪ್ರೇಮಾಲಾಪ ಮತ್ತು ಕುಡಿನೋಟದಿಂದ ಕದಡಿ ಹೋದ ಮನಸ್ಸಿನಿಂದ ಕೂಡಿದ್ದ ಕುಬ್ಜೆಯು ರಾಮ-ಕೃಷ್ಣರಿಗೆ ತಾನು ರಾಜನಿಗಾಗಿ ಸಿದ್ಧಪಡಿಸಿದ ಘಮ-ಘಮಿಸುತ್ತಿದ್ದ ಅಂಗರಾಗವನ್ನು ಸಮರ್ಪಿಸಿದಳು. ॥4॥
(ಶ್ಲೋಕ-5)
ಮೂಲಮ್
ತತಸ್ತಾವಂಗರಾಗೇಣ ಸ್ವವರ್ಣೇತರಶೋಭಿನಾ ।
ಸಂಪ್ರಾಪ್ತಪರಭಾಗೇನ ಶುಶುಭಾತೇನುರಂಜಿತೌ ॥
ಅನುವಾದ
ಅದನ್ನು ಸ್ವೀಕರಿಸಿದ ಶ್ರೀಕೃಷ್ಣನು ತನ್ನ ಶ್ಯಾಮಲ ಶರೀರಕ್ಕೆ ಹಳದಿ ಬಣ್ಣದ ಮತ್ತು ಬಲರಾಮನು ಕೆಂಪು ಬಣ್ಣದ ಅಂಗರಾಗವನ್ನು ಹಚ್ಚಿಕೊಂಡರು. ಹೊಕ್ಕುಳಿನಿಂದ ಮೇಲ್ಭಾಗದ ಶರೀರವನ್ನು ಅಲಂಕರಿಸಿಕೊಂಡು ಅತ್ಯಂತ ಶೋಭಾಯಮಾನರಾಗಿ ರಾರಾಜಿಸಿದರು. ॥5॥
(ಶ್ಲೋಕ-6)
ಮೂಲಮ್
ಪ್ರಸನ್ನೋ ಭಗವಾನ್ ಕುಬ್ಜಾಂ ತ್ರಿವಕ್ರಾಂ ರುಚಿರಾನನಾಮ್ ।
ಋಜ್ವೀಂ ಕರ್ತುಂ ಮನಶ್ಚಕ್ರೇ ದರ್ಶಯನ್ ದರ್ಶನೇ ಲಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಆ ಕುಬ್ಜೆಯ ಮೇಲೆ ಪ್ರಸನ್ನನಾಗಿ ತನ್ನ ದರ್ಶನದ ಪ್ರತ್ಯಕ್ಷ ಫಲವನ್ನು ತೋರಿಸಲಿಕ್ಕಾಗಿ ಶರೀರದಲ್ಲಿ ಮೂರುಕಡೆ ಡೊಂಕಾದ ಸುಂದರ ಮುಖವುಳ್ಳ ಆಕೆಯನ್ನು ನೇರವಾಗಿಸಲು ಯೋಚಿಸಿದನು. ॥6॥
(ಶ್ಲೋಕ-7)
ಮೂಲಮ್
ಪದ್ಭ್ಯಾಮಾಕ್ರಮ್ಯ ಪ್ರಪದೇ ದ್ವ್ಯಂಗುಲ್ಯುತ್ತಾನಪಾಣಿನಾ ।
ಪ್ರಗೃಹ್ಯ ಚುಬುಕೇಧ್ಯಾತ್ಮಮುದನೀನಮದಚ್ಯುತಃ ॥
ಅನುವಾದ
ಭಗವಂತನು ತನ್ನ ಕಾಲುಗಳಿಂದ ಕುಬ್ಜೆಯ ಕಾಲುಗಳನ್ನು ಒತ್ತಿ ಹಿಡಿದು, ತನ್ನ ಬಲಗೈಯ್ಯ ಎರಡು ಬೆರಳುಗಳಿಂದ ಆಕೆಯ ಗಲ್ಲವನ್ನು ಹಿಡಿದು ಸ್ವಲ್ಪ ಮೇಲಕ್ಕೆ ಎತ್ತಿದನು. ॥7॥
(ಶ್ಲೋಕ-8)
ಮೂಲಮ್
ಸಾ ತದರ್ಜುಸಮಾನಾಂಗೀ ಬೃಹಚ್ಛ್ರೋಣಿಪಯೋಧರಾ ।
ಮುಕುಂದಸ್ಪರ್ಶನಾತ್ಸದ್ಯೋ ಬಭೂವ ಪ್ರಮದೋತ್ತಮಾ ॥
ಅನುವಾದ
ಕ್ಷಣಮಾತ್ರದಲ್ಲಿ ಆಕೆಯ ಶರೀರವು ನೆಟ್ಟಗಾಗಿ ಬಿಟ್ಟಿತು. ಕುಬ್ಜೆಯಾಗಿದ್ದ ಆಕೆಯು ಭಗವಂತನ ಸ್ಪರ್ಶಮಾತ್ರದಿಂದಲೇ ವಿಶಾಲವಾದ ನಿತಂಬದಿಂದ ಕೂಡಿದವಳೂ, ಪುಷ್ಟಸ್ತನಿಯೂ ಆಗಿ ರೂಪಲಾವಣ್ಯಗಳಿಂದ ಕಂಗೊಳಿಸುವ ಪ್ರಮದೋತ್ತಮೆಯಾದಳು. ॥8॥
(ಶ್ಲೋಕ-9)
ಮೂಲಮ್
ತತೋ ರೂಪಗುಣೌದಾರ್ಯಸಂಪನ್ನಾ ಪ್ರಾಹ ಕೇಶವಮ್ ।
ಉತ್ತರೀಯಾಂತಮಾಕೃಷ್ಯ ಸ್ಮಯಂತೀ ಜಾತಹೃಚ್ಛಯಾ ॥
ಅನುವಾದ
ಆ ಕ್ಷಣದಿಂದಲೇ ಕುಬ್ಜೆಯು ರೂಪ, ಗುಣ, ಔದಾರ್ಯಗಳಿಂದ ಸಂಪನ್ನಳಾಗಿ ಆಕೆಯ ಮನಸ್ಸಿನಲ್ಲಿ ಭಗವಂತನನ್ನು ಸೇರುವ ಕಾಮನೆ ಉಂಟಾಯಿತು. ಆಕೆಯು ಶ್ರೀಕೃಷ್ಣನ ಉತ್ತರೀಯವನ್ನು ಹಿಡಿದುಕೊಂಡು ಮುಗುಳ್ನಗುತ್ತಾ ಇಂತೆಂದಳು. ॥9॥
(ಶ್ಲೋಕ-10)
ಮೂಲಮ್
ಏಹಿ ವೀರ ಗೃಹಂ ಯಾಮೋ ನ ತ್ವಾಂ ತ್ಯಕ್ತುಮಿಹೋತ್ಸಹೇ ।
ತ್ವಯೋನ್ಮಥಿತಚಿತ್ತಾಯಾಃ ಪ್ರಸೀದ ಪುರುಷರ್ಷಭ ॥
ಅನುವಾದ
ವೀರ ಶಿರೋಮಣಿಯೇ! ಬಾ, ನಮ್ಮ ಮನೆಗೆ ಹೋಗೋಣ, ಈಗ ನಾನು ನಿನ್ನನ್ನು ಇಲ್ಲಿ ಬಿಟ್ಟಿರಲಾರೆ. ಏಕೆಂದರೆ, ನನ್ನ ಚಿತ್ತವನ್ನು ನೀನು ಕದಡಿ ಬಿಟ್ಟಿರುವೆ. ಪುರುಷೋತ್ತಮನೇ! ದಾಸಿಯಾದ ನನ್ನ ಮೆಲೆ ಪ್ರಸನ್ನನಾಗು ॥10॥
(ಶ್ಲೋಕ-11)
ಮೂಲಮ್
ಏವಂ ಸಿಯಾ ಯಾಚ್ಯಮಾನಃ ಕೃಷ್ಣೋ ರಾಮಸ್ಯ ಪಶ್ಯತಃ ।
ಮುಖಂ ವೀಕ್ಷ್ಯಾನುಗಾನಾಂ ಚ ಪ್ರಹಸಂಸ್ತಾಮುವಾಚ ಹ ॥
ಅನುವಾದ
ಬಲರಾಮನ ಎದುರಿಗೆ ಕುಬ್ಜೆಯು ಹೀಗೆ ಪ್ರಾರ್ಥಿಸಿದಾಗ ಭಗವಾನ್ ಶ್ರೀಕೃಷ್ಣನು ತನ್ನ ಸಂಗಡಿಗರಾದ ಗೋಪಬಾಲಕರ ಕಡೆಗೆ ನೋಡಿ ನಸು ನಗುತ್ತಾ ಆಕೆಯಲ್ಲಿ ಹೀಗೆಂದನು. ॥11॥
(ಶ್ಲೋಕ-12)
ಮೂಲಮ್
ಏಷ್ಯಾಮಿ ತೇ ಗೃಹಂ ಸುಭ್ರೂಃ ಪುಂಸಾಮಾಧಿವಿಕರ್ಶನಮ್ ।
ಸಾಧಿತಾರ್ಥೋಗೃಹಾಣಾಂ ನಃ ಪಾಂಥಾನಾಂ ತ್ವಂ ಪರಾಯಣಮ್ ॥
ಅನುವಾದ
ಸುಂದರೀ! ನಿನ್ನ ಮನೆಯು ಸಂಸಾರೀ ಜನರಿಗೆ ತಮ್ಮ ಮಾನಸಿಕ ವ್ಯಾಧಿಯನ್ನು ಕಳೆದುಕೊಳ್ಳುವ ಸಾಧನೆಯಾಗಿದೆ. ನಾನು ನನ್ನ ಕಾರ್ಯವನ್ನು ಪೂರ್ಣಗೊಳಿಸಿದ ಬಳಿಕ ಅವಶ್ಯಕವಾಗಿ ನಿನ್ನಲ್ಲಿಗೆ ಬರುವೆನು. ಮನೆ-ಮಠಗಳಿಲ್ಲದ ನಮ್ಮಂತಹ ದಾರಿಹೋಕರಿಗೆ ನಿಮ್ಮಂತಹವರ ಮನೆಯೇ ಆಸರೆಯಾಗಿದೆ. ॥12॥
(ಶ್ಲೋಕ-13)
ಮೂಲಮ್
ವಿಸೃಜ್ಯ ಮಾಧ್ವ್ಯಾ ವಾಣ್ಯಾ ತಾಂ ವ್ರಜನ್ ಮಾರ್ಗೇ ವಣಿಕ್ಪಥೈಃ ।
ನಾನೋಪಾಯನತಾಂಬೂಲಸ್ರಗ್ಗಂಧೈಃ ಸಾಗ್ರಜೋರ್ಚಿತಃ ॥
ಅನುವಾದ
ಹೀಗೆ ಸವಿಯಾದ ಮಾತುಗಳನ್ನಾಡಿ ಶ್ರೀಕೃಷ್ಣನು ಆಕೆಯನ್ನು ಬೀಳ್ಕೊಟ್ಟನು. ಬಳಿಕ ಅವರು ಸಂತೆಬೀದಿಯಲ್ಲಿ ಬರುತ್ತಿರುವಾಗ ಅಲ್ಲಿಯ ವ್ಯಾಪಾರಿಗಳೆಲ್ಲರೂ ಒಟ್ಟಾಗಿ ಬಂದು ಬಲರಾಮ-ಕೃಷ್ಣರನ್ನು ಹೂವಿನ ಹಾರ, ತಾಂಬೂಲ, ಚಂದನಾದಿಗಳಿಂದ ಪೂಜಿಸಿ, ಬಗೆ-ಬಗೆಯ ಕಾಣಿಕೆಗಳನ್ನು ಅರ್ಪಿಸಿದರು. ॥13॥
(ಶ್ಲೋಕ-14)
ಮೂಲಮ್
ತದ್ದರ್ಶನಸ್ಮರಕ್ಷೋಭಾದಾತ್ಮಾನಂ ನಾವಿದನ್ ಸೀಯಃ ।
ವಿಸ್ರಸ್ತವಾಸಃಕಬರವಲಯಾಲೇಖ್ಯಮೂರ್ತಯಃ ॥
ಅನುವಾದ
ಅವರಿಬ್ಬರ ದರ್ಶನದಿಂದ ಸೀಯರ ಹೃದಯದಲ್ಲಿ ಪ್ರೇಮಾವೇಗ ಮತ್ತು ಸೇರುವ ಬಯಕೆ ಜಾಗ್ರತವಾಗುತ್ತಿತ್ತು. ಇದರಿಂದ ಅವರಿಗೆ ಶರೀರದ ಜ್ಞಾನವೇ ಇರುತ್ತಿರಲಿಲ್ಲ. ಅವರಿಗೆ ವಸ್ತ್ರ, ಮುಡಿ, ಬಳೆ ಇವುಗಳು ಜಾರಿ ಹೋಗುತ್ತಿದ್ದರೂ ಅದರ ಪರಿವೆಯೇ ಇಲ್ಲದೆ ಚಿತ್ತಾರದಂತೆ ನಿಂತು ಬಿಡುತ್ತಿದ್ದರು. ॥14॥
(ಶ್ಲೋಕ-15)
ಮೂಲಮ್
ತತಃ ಪೌರಾನ್ ಪೃಚ್ಛಮಾನೋ ಧನುಷಃ ಸ್ಥಾನಮಚ್ಯುತಃ ।
ತಸ್ಮಿನ್ ಪ್ರವಿಷ್ಟೋ ದದೃಶೇ ಧನುರೈಂದ್ರಮಿವಾದ್ಭುತಮ್ ॥
ಅನುವಾದ
ಅನಂತರ ಭಗವಾನ್ ಶ್ರೀಕೃಷ್ಣನು ಬಲರಾಮನೊಂದಿಗೆ ಮುಂದೆ ಹೋಗುತ್ತಾ ಧನುರ್ಯಜ್ಞವು ನಡೆಯುವ ಸ್ಥಳವನ್ನು ಕೇಳುತ್ತಾ ರಂಗಶಾಲೆಗೆ ಬಂದು ತಲುಪಿದರು. ಅಲ್ಲಿ ಇಂದ್ರನ ಧನುಸ್ಸಿಗೆ ಸಮಾನವಾದ ಒಂದು ಅದ್ಭುತವಾದ ಬಿಲ್ಲನ್ನು ನೋಡಿದರು. ॥15॥
(ಶ್ಲೋಕ-16)
ಮೂಲಮ್
ಪುರುಷೈರ್ಬಹುಭಿರ್ಗುಪ್ತಮರ್ಚಿತಂ ಪರಮರ್ದ್ಧಿಮತ್ ।
ವಾರ್ಯಮಾಣೋ ನೃಭಿಃ ಕೃಷ್ಣಃ ಪ್ರಸಹ್ಯ ಧನುರಾದದೇ ॥
ಅನುವಾದ
ಪರಮ ವೈಭವದಿಂದ ಪ್ರತಿಷ್ಠಾಪಿತವಾದ ಅನುದಿನವೂ ಪೂಜಿಸಲ್ಪಟ್ಟು ಹಲವಾರು ಸೈನಿಕರಿಂದ ರಕ್ಷಿತವಾದ ಆ ಮಹಾಧನುಸ್ಸನ್ನೆತ್ತಿಕೊಳ್ಳಲು ಮುಂದಾದಾಗ ರಕ್ಷಕರು ತಡೆಯುತ್ತಿದ್ದರೂ ಶ್ರೀಕೃಷ್ಣನು ರಕ್ಷಕರನ್ನು ಹಿಂದಕ್ಕೆ ತಳ್ಳಿ ಆ ಬಿಲ್ಲನ್ನು ಬಲವಂತವಾಗಿ ಎತ್ತಿಕೊಂಡನು. ॥16॥
(ಶ್ಲೋಕ-17)
ಮೂಲಮ್
ಕರೇಣ ವಾಮೇನ ಸಲೀಲಮುದ್ಧೃತಂ
ಸಜ್ಯಂ ಚ ಕೃತ್ವಾ ನಿಮಿಷೇಣ ಪಶ್ಯತಾಮ್ ।
ನೃಣಾಂ ವಿಕೃಷ್ಯ ಪ್ರಬಭಂಜ ಮಧ್ಯತೋ
ಯಥೇಕ್ಷುದಂಡಂ ಮದಕರ್ಯುರುಕ್ರಮಃ ॥
ಅನುವಾದ
ಎಲ್ಲರೂ ನೋಡುತ್ತಿರುವಂತೆಯೇ ಆ ಬಿಲ್ಲನ್ನು ಎಡಗೈಯಿಂದ ಮೇಲೆತ್ತಿ, ಅದಕ್ಕೆ ನಾಣನ್ನು ಬಿಗಿದು ಮದಿಸಿದ ಆನೆಯು ಕಬ್ಬಿನ ಜಲ್ಲೆಯನ್ನು ಮುರಿದು ಬಿಡುವಂತೆ ಕ್ಷಣಾರ್ಧದಲ್ಲಿ ಶ್ರೀಕೃಷ್ಣನು ಅದನ್ನು ಮಧ್ಯದಲ್ಲಿ ಮುರಿದು ಹಾಕಿದನು. ॥17॥
(ಶ್ಲೋಕ-18)
ಮೂಲಮ್
ಧನುಷೋ ಭಜ್ಯಮಾನಸ್ಯ ಶಬ್ದಃ ಖಂ ರೋದಸೀ ದಿಶಃ ।
ಪೂರಯಾಮಾಸ ಯಂ ಶ್ರುತ್ವಾ ಕಂಸಸಾಸಮುಪಾಗಮತ್ ॥
ಅನುವಾದ
ಧನುಸ್ಸು ಮುರಿದಾಗ ಅದರ ಶಬ್ದವು ಭೂಮ್ಯಾಕಾಶಗಳಲ್ಲಿಯೂ, ದಶದಿಕ್ಕುಗಳಲ್ಲಿಯೂ ತುಂಬಿ ಹೋಯಿತು. ಅದನ್ನು ಕೇಳಿದ ಕಂಸನು ಭಯದಿಂದ ನಡುಗಿ ಹೋದನು. ॥18॥
(ಶ್ಲೋಕ-19)
ಮೂಲಮ್
ತದ್ರಕ್ಷಿಣಃ ಸಾನುಚರಾಃ ಕುಪಿತಾ ಆತತಾಯಿನಃ ।
ಗೃಹೀತುಕಾಮಾ ಆವವ್ರರ್ಗೃಹ್ಯತಾಂ ಬಧ್ಯತಾಮಿತಿ ॥
ಅನುವಾದ
ಧನುಸ್ಸನ್ನು ರಕ್ಷಿಸುತ್ತಿದ್ದ ಆತತಾಯಿಗಳಾದ ಅಸುರರು ಅತ್ಯಂತ ಕುಪಿತರಾದರು. ಶ್ರೀಕೃಷ್ಣನನ್ನು ಹಿಡಿಯುವ ಇಚ್ಛೆಯಿಂದ ಅವನ ಸುತ್ತಲೂ ನಿಂತು ‘ಹಿಡಿಯಿರಿ, ಬಂಧಿಸಿರಿ, ತಪ್ಪಿಸಿಕೊಂಡು ಹೋಗಲು ಬಿಡಬೇಡಿರಿ’ ಎಂದು ಕೂಗಾಡ ತೊಡಗಿದರು. ॥19॥
(ಶ್ಲೋಕ-20)
ಮೂಲಮ್
ಅಥ ತಾನ್ ದುರಭಿಪ್ರಾಯಾನ್ ವಿಲೋಕ್ಯ ಬಲಕೇಶವೌ ।
ಕ್ರುದ್ಧೌ ಧನ್ವನ ಆದಾಯ ಶಕಲೇ ತಾಂಶ್ಚ ಜಘ್ನತುಃ ॥
ಅನುವಾದ
ಆ ರಾಕ್ಷಸರ ದುರಭಿಪ್ರಾಯವನ್ನು ತಿಳಿದು ಬಲರಾಮ-ಶ್ರೀಕೃಷ್ಣರು ಕ್ರುದ್ಧರಾಗಿ ಮುರಿದು ಬಿದ್ದ ಧನುಸ್ಸಿನ ತುಂಡುಗಳನ್ನೆತ್ತಿಕೊಂಡು ಅದರಿಂದಲೇ ರಕ್ಕಸರೆಲ್ಲರನ್ನು ಧ್ವಂಸಮಾಡಿಬಿಟ್ಟರು. ॥20॥
(ಶ್ಲೋಕ-21)
ಮೂಲಮ್
ಬಲಂ ಚ ಕಂಸಪ್ರಹಿತಂ ಹತ್ವಾ ಶಾಲಾಮುಖಾತ್ತತಃ ।
ನಿಷ್ಕ್ರಮ್ಯ ಚೇರತುರ್ಹೃಷ್ಟೌ ನಿರೀಕ್ಷ್ಯ ಪುರಸಂಪದಃ ॥
ಅನುವಾದ
ಅವರ ಸಹಾಯಕ್ಕೆ ಬಂದ ಕಂಸನ ಸೈನಿಕರೆಲ್ಲರನ್ನೂ ಅದೇ ತುಂಡುಗಳಿಂದ ಕ್ಷಣಮಾತ್ರದಲ್ಲಿ ಸಂಹರಿಸಿಬಿಟ್ಟರು. ಬಳಿಕ ಅವರು ಯಜ್ಞಮಂಟಪದ ಮುಖ್ಯದ್ವಾರದಿಂದ ಹೊರಬಿದ್ದು, ಮಥುರಾಪಟ್ಟಣದ ಸೊಬಗನ್ನು ವೀಕ್ಷಿಸುತ್ತಾ ಆನಂದವಾಗಿ ಸಂಚರಿಸುತ್ತಿದ್ದರು. ॥21॥
(ಶ್ಲೋಕ-22)
ಮೂಲಮ್
ತಯೋಸ್ತದದ್ಭುತಂ ವೀರ್ಯಂ ನಿಶಾಮ್ಯ ಪುರವಾಸಿನಃ ।
ತೇಜಃ ಪ್ರಾಗಲ್ಭ್ಯಂ ರೂಪಂ ಚ ಮೇನಿರೇ ವಿಬುಧೋತ್ತವೌ ॥
ಅನುವಾದ
ನಗರವಾಸಿಗಳು ರಾಮ-ಕೇಶವರ ಅದ್ಭುತವಾದ ವೀರ್ಯಪರಾಕ್ರಮಗಳನ್ನು, ಮಹಾತೇಜಸ್ಸನ್ನೂ, ಪ್ರೌಢಿಮೆಯನ್ನೂ ರೂಪವನ್ನೂ ನೋಡಿ ಇವರಿಬ್ಬರೂ ಶ್ರೇಷ್ಠವಾದ ದೇವತೆಗಳೇ ಇರಬಹುದೆಂದು ನಿಶ್ಚಯಿಸಿಕೊಂಡರು. ॥22॥
(ಶ್ಲೋಕ-23)
ಮೂಲಮ್
ತಯೋರ್ವಿಚರತೋಃ ಸ್ವೈರಮಾದಿತ್ಯೋಸ್ತಮುಪೇಯಿವಾನ್ ।
ಕೃಷ್ಣರಾವೌ ವೃತೌ ಗೋಪೈಃ ಪುರಾಚ್ಛಕಟಮೀಯತುಃ ॥
ಅನುವಾದ
ಹೀಗೆ ಭಗವಾನ್ ಶ್ರೀಕೃಷ್ಣ-ಬಲರಾಮರು ಮಥುರೆಯಲ್ಲಿ ಸ್ವೇಚ್ಛೆಯಿಂದ ಸಂಚರಿಸುತ್ತಿರುವಾಗ ಸಾಯಂಕಾಲವಾಯಿತು. ಆಗ ಅವರಿಬ್ಬರೂ ತಮ್ಮ ಸಂಗಡಿಗರೊಡನೆ ನಗರದ ಹೊರಭಾಗದಲ್ಲಿ ಬಂಡಿಗಳನ್ನು ನಿಲ್ಲಿಸಿದ್ದ ತಮ್ಮ ಬಿಡದಿಗೆ ಮರಳಿದರು. ॥23॥
(ಶ್ಲೋಕ-24)
ಮೂಲಮ್
ಗೋಪ್ಯೋ ಮುಕುಂದವಿಗಮೇ ವಿರಹಾತುರಾ ಯಾ
ಆಶಾಸತಾಶಿಷ ಋತಾ ಮಧುಪುರ್ಯಭೂವನ್ ।
ಸಂಪಶ್ಯತಾಂ ಪುರುಷಭೂಷಣಗಾತ್ರಲಕ್ಷ್ಮೀಂ
ಹಿತ್ವೇತರಾನ್ ನು ಭಜತಶ್ಚಕಮೇಯನಂ ಶ್ರೀಃ ॥
ಅನುವಾದ
ಗೋಕುಲದಲ್ಲಿದ್ದ ಗೋಪಿಕೆಯರು ಶ್ರೀಕೃಷ್ಣನ ಅಗಲುವಿಕೆಯ ಸಮಯದಲ್ಲಿ ವಿರಹವೇದನೆಯಿಂದ ಹೇಳಿದಂತೆಯೇ ಇಲ್ಲಿ ಮಥುರೆಯಲ್ಲಿ ಅಕ್ಷರಶಃ ಪರಿಣಮಿಸಿತು. ಗೋಪಿಯರಂತೆಯೇ ಮಥುರೆಯ ಸ್ತ್ರೀಯರೂ ಕೂಡ ಶ್ರೀಕೃಷ್ಣನ ಅತುಲ ಸೌಂದರ್ಯವನ್ನು ನೋಡಿ ಮೈಮರೆತು ಹೋದರು. ಲಕ್ಷ್ಮಿಯನ್ನು ಅನೇಕರು ಬಯಸುತ್ತಾ ಅವಳನ್ನು ಪಡೆಯಲು ದೊಡ್ಡ-ದೊಡ್ಡ ದೇವತೆಗಳೂ ಕಾತರರಾಗಿದ್ದರು. ಆದರೆ ಆಕೆಯು ತನ್ನನ್ನು ಬಯಸದೇ ಇರುವ ಭಗವಂತನನ್ನು ವರಿಸಿಕೊಂಡು, ಅವನ ವಕ್ಷಃಸ್ಥಳವನ್ನೇ ತನ್ನ ನಿವಾಸ ಸ್ಥಾನವನ್ನಾಗಿಸಿಕೊಂಡಳು. ಅಂತಹ ಪರುಷೋತ್ತಮನ ಶರೀರದ ದಿವ್ಯಕಾಂತಿಯನ್ನು ನೋಡುತ್ತಾ ಮಥುರೆಯ ಸ್ತ್ರೀಯರು ಆನಂದ ತುಂದಿಲರಾದರು. ॥24॥
(ಶ್ಲೋಕ-25)
ಮೂಲಮ್
ಅವನಿಕ್ತಾಂಘ್ರಿಯುಗಲೌ ಭುಕ್ತ್ವಾ ಕ್ಷೀರೋಪಸೇಚನಮ್ ।
ಊಷತುಸ್ತಾಂ ಸುಖಂ ರಾತ್ರಿಂ ಜ್ಞಾತ್ವಾ ಕಂಸಚಿಕೀರ್ಷಿತಮ್ ॥
ಅನುವಾದ
ಬಲರಾಮ ಶ್ರೀಕೃಷ್ಣರು ತಮ್ಮ ಸಂಗಡಿಗರೊಂದಿಗೆ ಬಿಡದಿಗೆ ಬಂದು, ಕೈ-ಕಾಲು ತೊಳೆದು ಹಾಲಿನಿಂದ ಮಾಡಿದ ಪಾಯಸ ಮುಂತಾದ ಪದಾರ್ಥಗಳನ್ನು ಭುಂಜಿಸಿ, ಕಂಸನು ಮುಂದೆ ಏನು ಮಾಡಲಿರುವನು ಎಂಬುದನ್ನು ಅರಿತುಕೊಂಡು ಆ ರಾತ್ರಿಯನ್ನು ಸುಖವಾಗಿ ಅಲ್ಲೇ ಕಳೆದರು. ॥25॥
(ಶ್ಲೋಕ-26)
ಮೂಲಮ್
ಕಂಸಸ್ತು ಧನುಷೋ ಭಂಗಂ ರಕ್ಷಿಣಾಂ ಸ್ವಬಲಸ್ಯ ಚ ।
ವಧಂ ನಿಶಮ್ಯ ಗೋವಿಂದರಾಮವಿಕ್ರೀಡಿತಂ ಪರಮ್ ॥
ಅನುವಾದ
ಶ್ರೀಕೃಷ್ಣ-ಬಲರಾಮರು ಮಕ್ಕಳ ಆಟಿಕೆಯಂತೆ, ಯಾವಶ್ರಮವೂ ಇಲ್ಲದೆ ಧನುಸ್ಸನ್ನು ಮುರಿದುದನ್ನು ಕಾವಲುಗಾರರನ್ನೂ ಅವರ ಸಹಾಯಕ್ಕೆ ಕಳಿಸಿದ ಸೈನ್ಯವನ್ನು ಸಂಹರಿಸಿದುದನ್ನು ಕಂಸನು ಕೇಳಿದನು. ॥26॥
(ಶ್ಲೋಕ-27)
ಮೂಲಮ್
ದೀರ್ಘಪ್ರಜಾಗರೋ ಭೀತೋ ದುರ್ನಿಮಿತ್ತಾನಿ ದುರ್ಮತಿಃ ।
ಬಹೂನ್ಯಚಷ್ಟೋಭಯಥಾ ಮೃತ್ಯೋರ್ದೌತ್ಯಕರಾಣಿ ಚ ॥
ಅನುವಾದ
ಇದನ್ನು ಕೇಳಿದಾಗ ಅವನು ಬಹಳವಾಗಿ ಗಾಬರಿಗೊಂಡನು. ಆ ದುರ್ಬುದ್ಧಿಗೆ ಬಹಳ ಹೊತ್ತು ನಿದ್ದೆಯೇ ಬರಲಿಲ್ಲ. ಜಾಗ್ರದಾವಸ್ಥೆಯಲ್ಲೂ, ಸ್ವಪ್ನದಲ್ಲಿಯೂ ಕಂಸನು ಮೃತ್ಯು ಸೂಚಕವಾದ ಅನೇಕ ದೃಶ್ಯಗಳನ್ನು ನೋಡಿದನು. ॥27॥
(ಶ್ಲೋಕ-28)
ಮೂಲಮ್
ಅದರ್ಶನಂ ಸ್ವಶಿರಸಃ ಪ್ರತಿರೂಪೇ ಚ ಸತ್ಯಪಿ ।
ಅಸತ್ಯಪಿ ದ್ವಿತೀಯೇ ಚ ದ್ವೈರೂಪ್ಯಂ ಜ್ಯೋತಿಷಾಂ ತಥಾ ॥
ಅನುವಾದ
ಜಾಗ್ರ ದವಸ್ಥೆಯಲ್ಲಿ ಅವನಿಗೆ ನೀರಿನಲ್ಲಿ ಕನ್ನಡಿಯಲ್ಲಿ ಶರೀರದ ಪ್ರತಿಬಿಂಬ ಕಂಡರೂ ತಲೆಯೇ ಕಾಣುತ್ತಿರಲಿಲ್ಲ. ಬೆರಳುಗಳೇ ಆದಿ ಕಣ್ಣಿಗೆ ಅಡ್ಡವಾಗದಿದ್ದರೂ ಸೂರ್ಯ-ನಕ್ಷತ್ರಗಳು, ದೀಪ ಹೀಗೆ ಎರಡೆರಡಾಗಿ ಕಂಡುಬರುತ್ತಿತ್ತು. ॥28॥
(ಶ್ಲೋಕ-29)
ಮೂಲಮ್
ಛಿದ್ರಪ್ರತೀತಿಶ್ಛಾಯಾಯಾಂ ಪ್ರಾಣಘೋಷಾನುಪಶ್ರುತಿಃ ।
ಸ್ವರ್ಣಪ್ರತೀತಿರ್ವೃಕ್ಷೇಷು ಸ್ವಪದಾನಾಮದರ್ಶನಮ್ ॥
ಅನುವಾದ
ತನ್ನ ನೆರಳಿನಲ್ಲೇ ರಂಧ್ರಗಳಿರುವಂತೆ ಕಾಣುತ್ತಿತ್ತು. ಕಿವಿಗಳನ್ನು ಮುಚ್ಚಿಕೊಂಡರೆ ಪ್ರಾಣಧ್ವನಿಯು ಕೇಳಿ ಬರುತ್ತಿರಲಿಲ್ಲ. ವೃಕ್ಷಗಳು ಸ್ವರ್ಣಮಯವಾಗಿ ಕಾಣುತ್ತಿದ್ದವು. ನಡೆಯುವಾಗ ಹೆಜ್ಜೆಗಳ ಗುರುತುಗಳು ಕಾಣುತ್ತಿರಲಿಲ್ಲ. ॥29॥
(ಶ್ಲೋಕ-30)
ಮೂಲಮ್
ಸ್ವಪ್ನೇ ಪ್ರೇತಪರಿಷ್ವಂಗಃ ಖರಯಾನಂ ವಿಷಾದನಮ್ ।
ಯಾಯಾನ್ನಲದಮಾಲ್ಯೇಕಸ್ತೈಲಾಭ್ಯಕ್ತೋ ದಿಗಂಬರಃ ॥
ಅನುವಾದ
ಸ್ವಪ್ನಾವಸ್ಥೆಯಲ್ಲಿ ಕಂಸನು ಪ್ರೇತಗಳನ್ನು ತಬ್ಬಿಕೊಂಡಂತೆ ಕಂಡನು. ಕತ್ತೆಯನ್ನೇರಿ ಹೋಗುತ್ತಾ ವಿಷತಿಂದಂತೆ ಕಂಡನು. ಇಡೀ ಶರೀರಕ್ಕೆ ಎಣ್ಣೆಯನ್ನು ಮೆತ್ತಿಕೊಂಡು, ದಾಸವಾಳ ಹೂವಿನ ಮಾಲೆಯನ್ನು ಧರಿಸಿ ದಿಗಂಬರನಾಗಿ ಎಲ್ಲಿಗೋ ಹೋಗುತ್ತಿರುವಂತೆ ಕಂಡನು. ॥30॥
(ಶ್ಲೋಕ-31)
ಮೂಲಮ್
ಅನ್ಯಾನಿ ಚೇತ್ಥಂಭೂತಾನಿ ಸ್ವಪ್ನಜಾಗರಿತಾನಿ ಚ ।
ಪಶ್ಯನ್ ಮರಣಸಂತ್ರಸ್ತೋ ನಿದ್ರಾಂ ಲೇಭೇ ನ ಚಿಂತಯಾ ॥
ಅನುವಾದ
ಸ್ವಪ್ನ ಮತ್ತು ಎಚ್ಚರದಲ್ಲಿ ಅವನು ಇಂತಹುದೇ ಅನೇಕ ಅಪಶಕುನಗಳನ್ನು ನೋಡುತ್ತಿದ್ದನು. ಇದರಿಂದ ಅತೀವ ಚಿಂತಿತನಾಗಿ, ಮೃತ್ಯುವು ಸಮೀಪಿಸಿದೆ ಎಂದು ಹೆದರಿ ಅವನಿಗೆ ನಿದ್ದೆಯೇ ಬರಲಿಲ್ಲ. ॥31॥
(ಶ್ಲೋಕ-32)
ಮೂಲಮ್
ವ್ಯಷ್ಟಾಯಾಂ ನಿಶಿ ಕೌರವ್ಯ ಸೂರ್ಯೇ ಚಾದ್ಭ್ಯಃ ಸಮುತ್ಥಿತೇ ।
ಕಾರಯಾಮಾಸ ವೈ ಕಂಸೋ ಮಲ್ಲಕ್ರೀಡಾಮಹೋತ್ಸವಮ್ ॥
ಅನುವಾದ
ಪರೀಕ್ಷಿತನೇ! ರಾತ್ರಿಯು ಕಳೆದು ಸೂರ್ಯನಾರಾಯಣನು ಪೂರ್ವಸಮುದ್ರದಿಂದ ಮೇಲೆರಿದಾಗ ಕಂಸನು ಮಲ್ಲಕ್ರೀಡಾ ಮಹೋತ್ಸವವನ್ನು ಉದ್ಘಾಟಿಸಿದನು. ॥32॥
(ಶ್ಲೋಕ-33)
ಮೂಲಮ್
ಆನರ್ಚುಃ ಪುರುಷಾ ರಂಗಂ ತೂರ್ಯಭೇರ್ಯಶ್ಚ ಜಘ್ನಿರೇ ।
ಮಂಚಾಶ್ಚಾಲಂಕೃತಾಃ ಸ್ರಗ್ಭಿಃ ಪತಾಕಾಚೈಲತೋರಣೈಃ ॥
ಅನುವಾದ
ರಾಜಭಟರು ರಂಗಮಂಟಪವನ್ನು ಚೆನ್ನಾಗಿ ಅಲಂಕರಿಸಿದ್ದರು. ಭೇರಿ, ತುತ್ತೂರಿ, ಢಕ್ಕೆ-ಮೃದಂಗ ಮುಂತಾದ ವಾದ್ಯಗಳು ಮೊಳಗತೊಡಗಿದವು. ಪ್ರೇಕ್ಷಕರು ಕುಳಿತುಕೊಳ್ಳುವ ಮಂಚಗಳು, ಹೂವಿನ ಮಾಲೆಗಳಿಂದಲೂ, ಬಾವುಟಗಳಿಂದಲೂ, ಮೇಲ್ಕಟ್ಟುಗಳಿಂದಲೂ, ತೋರಣಗಳಿಂದಲೂ ಸಿಂಗರಿಸಲ್ಪಟ್ಟಿತ್ತು. ॥33॥
(ಶ್ಲೋಕ-34)
ಮೂಲಮ್
ತೇಷು ಪೌರಾ ಜಾನಪದಾ ಬ್ರಹ್ಮಕ್ಷತ್ರಪುರೋಗಮಾಃ ।
ಯಥೋಪಜೋಷಂ ವಿವಿಶೂ ರಾಜಾನಶ್ಚ ಕೃತಾಸನಾಃ ॥
ಅನುವಾದ
ಆ ಮಂಚಗಳಲ್ಲಿ ಬ್ರಾಹ್ಮಣ, ಕ್ಷತ್ರಿಯರೇ, ಮೊದಲಾದ ನಾಗರೀಕರೂ, ಗ್ರಾಮವಾಸಿಗಳೂ, ಎಲ್ಲರೂ ಯಥಾಸ್ಥಾನದಲ್ಲಿ ಕುಳಿತು. ರಾಜ ಮಹಾರಾಜರೂ ತಮ-ತಮಗೆ ನಿಶ್ಚಿತವಾದ ಆಸನಗಳಲ್ಲಿ ಕುಳಿತಿದ್ದರು. ॥34॥
(ಶ್ಲೋಕ-35)
ಮೂಲಮ್
ಕಂಸಃ ಪರಿವೃತೋಮಾತ್ಯೈ ರಾಜಮಂಚ ಉಪಾವಿಶತ್ ।
ಮಂಡಲೇಶ್ವರಮಧ್ಯಸ್ಥೋ ಹೃದಯೇನ ವಿದೂಯತಾ ॥
ಅನುವಾದ
ಕಂಸ ರಾಜನು ಅಮಾತ್ಯರಿಂದ ಪರಿವೃತನಾಗಿ ಮಾಂಡಲಿಕರ ಮಧ್ಯಭಾಗದಲ್ಲಿ ಸರ್ವಶ್ರೇಷ್ಠವಾದ ಸಿಂಹಾಸನದಲ್ಲಿ ಕುಳಿತನು. ಆದರೆ ಅವನ ಮನಸ್ಸು ಅಪಶಕುನಗಳಿಂದಾಗಿ ತಳಮಳಿಸುತ್ತಿತ್ತು. ॥35॥
(ಶ್ಲೋಕ-36)
ಮೂಲಮ್
ವಾದ್ಯಮಾನೇಷು ತೂರ್ಯೇಷು ಮಲ್ಲತಾಲೋತ್ತರೇಷು ಚ ।
ಮಲ್ಲಾಃ ಸ್ವಲಂಕೃತಾ ದೃಪ್ತಾಃ ಸೋಪಾಧ್ಯಾಯಾಃ ಸಮಾವಿಶನ್ ॥
ಅನುವಾದ
ನಾನಾಬಗೆಯ ವಾದ್ಯಗಳು ಮೊಳಗುತ್ತಿರಲು, ಜಟ್ಟಿಗಳ ಕೈಚಪ್ಪಾಳೆಯ ಶಬ್ದಗಳೂ ಕೇಳಿ ಬರುತ್ತಿದ್ದವು. ಗರ್ವಿಷ್ಠರಾದ ಮಲ್ಲರು ಯಥೋಚಿತವಾಗಿ ಅಲಂಕರಿಸಿಕೊಂಡು ತಮ್ಮ ಗುರುಗಳೊಡನೆ ರಂಗಸ್ಥಳಕ್ಕೆ ಇಳಿದರು. ॥36॥
(ಶ್ಲೋಕ-37)
ಮೂಲಮ್
ಚಾಣೂರೋ ಮುಷ್ಟಿಕಃ ಕೂಟಃ ಶಲಸ್ತೋಶಲ ಏವ ಚ ।
ತ ಆಸೇದುರುಪಸ್ಥಾನಂ ವಲ್ಗುವಾದ್ಯಪ್ರಹರ್ಷಿತಾಃ ॥
ಅನುವಾದ
ಚಾಣೂರ, ಮುಷ್ಟಿಕ, ಕೂಟ, ಶಲ, ತೋಶಲ ಮುಂತಾದ ಮುಖ್ಯ-ಮುಖ್ಯ ಜಟ್ಟಿಗಳು ವಾದ್ಯಗಳ ಸಮಧುರವಾದ ಧ್ವನಿಯಿಂದ ಉತ್ಸಾಹಗೊಂಡು ರಂಗಮಂಟಪದಲ್ಲಿ ಬಂದು ಕುಳಿತರು. ॥37॥
(ಶ್ಲೋಕ-38)
ಮೂಲಮ್
ನಂದಗೋಪಾದಯೋ ಗೋಪಾ ಭೋಜರಾಜಸಮಾಹುತಾಃ ।
ನಿವೇದಿತೋಪಾಯನಾಸ್ತೇ ಏಕಸ್ಮಿನ್ ಮಂಚ ಆವಿಶನ್ ॥
ಅನುವಾದ
ಆ ಸಮಯದಲ್ಲಿ ಭೋಜರಾಜನಿಂದ ಆಹ್ವಾನಿತರಾಗಿದ್ದ ನಂದಗೋಪನೇ ಮೊದಲಾದ ಗೋಪಾಲಕರು ತಾವು ತಂದಿದ್ದ ಕಪ್ಪ-ಕಾಣಿಕೆಗಳನ್ನು ಕಂಸನಿಗೆ ಅರ್ಪಿಸಿ, ಅವನ ಅನುಮತಿಯನ್ನು ಪಡೆದು ಒಂದುಕಡೆ ಮಂಚವೊಂದರಲ್ಲಿ ಕುಳಿತುಕೊಂಡರು. ॥38॥
ಅನುವಾದ (ಸಮಾಪ್ತಿಃ)
ನಲವತ್ತೆರಡನೆಯ ಅಧ್ಯಾಯವು ಮುಗಿಯಿತು. ॥42॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ
ಮಲ್ಲರಂಗೋಪವರ್ಣನಂ ನಾಮ ದ್ವಿಚತ್ವಾರಿಂಶೋಽಧ್ಯಾಯಃ ॥42॥