[ನಲವತ್ತೊಂದನೆಯ ಅಧ್ಯಾಯ]
ಭಾಗಸೂಚನಾ
ಮಥುರೆಗೆ ಶ್ರೀಕೃಷ್ಣನ ಪ್ರವೇಶ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಸ್ತುವತಸ್ತಸ್ಯ ಭಗವಾನ್ ದರ್ಶಯಿತ್ವಾ ಜಲೇ ವಪುಃ ।
ಭೂಯಃ ಸಮಾಹರತ್ ಕೃಷ್ಣೋ ನಟೋ ನಾಟ್ಯಮಿವಾತ್ಮನಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಹೀಗೆ ಅನನ್ಯ ಭಕ್ತಿಯಿಂದ ಸ್ತೋತ್ರಮಾಡುತ್ತಿದ್ದ ಅಕ್ರೂರನಿಗೆ ನೀರಿನಲ್ಲಿ ತನ್ನ ದಿವ್ಯವಾದ ಸ್ವರೂಪವನ್ನು ತೋರಿಸಿ, ಮರು ಕ್ಷಣದಲ್ಲೇ ನಟನು ನಾಟಕವಾಡಿ ತೆರೆಯ ಹಿಂದೆ ಸರಿಯುವಂತೆ ಭಗವಂತನು ಪುನಃ ಶ್ರೀಕೃಷ್ಣನಾಗಿಯೇ ಅಕ್ರೂರನಿಗೆ ಕಾಣಿಸಿಕೊಂಡನು. ॥1॥
(ಶ್ಲೋಕ-2)
ಮೂಲಮ್
ಸೋಪಿ ಚಾಂತರ್ಹಿತಂ ವೀಕ್ಷ್ಯ ಜಲಾದುನ್ಮಜ್ಜ್ಯ ಸತ್ವರಃ ।
ಕೃತ್ವಾ ಚಾವಶ್ಯಕಂ ಸರ್ವಂ ವಿಸ್ಮಿತೋ ರಥಮಾಗಮತ್ ॥
ಅನುವಾದ
ಭಗವಂತನ ಆ ದಿವ್ಯರೂಪವು ಅಂತರ್ಧಾನವಾದುದನ್ನು ಕಂಡ ಅಕ್ರೂರನು ನೀರಿನಿಂದ ಹೊರಬಂದು, ಆವಶ್ಯಕವೆನಿಸಿದ ನಿತ್ಯಕರ್ಮಗಳನ್ನು ಬೇಗ-ಬೇಗನೆ ಪೂರೈಸಿಕೊಂಡು ಶೀಘ್ರವಾಗಿ ರಥದಲ್ಲಿ ಬಂದು ಕುಳಿತನು. ಆಗ ಅವನು ಅತ್ಯಂತ ವಿಸ್ಮಿತನಾಗಿದ್ದನು. ॥2॥
(ಶ್ಲೋಕ-3)
ಮೂಲಮ್
ತಮಪೃಚ್ಛದ್ಧೃಷೀಕೇಶಃ ಕಿಂ ತೇ ದೃಷ್ಟಮಿಹಾದ್ಭುತಮ್ ।
ಭೂವೌ ವಿಯತಿ ತೋಯೇ ವಾ ತಥಾ ತ್ವಾಂ ಲಕ್ಷಯಾಮಹೇ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಅವನಲ್ಲಿ ಕೇಳಿದನು - ಚಿಕ್ಕಪ್ಪ! ನೀನು ಭೂಮಿಯಲ್ಲಾಗಲೀ, ಆಕಾಶದಲ್ಲಾಗಲೀ, ನೀರಿನ ಲ್ಲಾಗಲೀ ಏನಾದರೂ ಅದ್ಭುತವಾದ ವಸ್ತುವನ್ನು ಕಂಡೆಯಾ? ಏಕೆಂದರೆ, ನಿನ್ನ ಮುಖಾವಲೋಕನದಿಂದ ಹಾಗೆ ತಿಳಿಯುತ್ತಾ ಇದೆ. ॥3॥
(ಶ್ಲೋಕ-4)
ಮೂಲಮ್ (ವಾಚನಮ್)
ಅಕ್ರೂರ ಉವಾಚ
ಮೂಲಮ್
ಅದ್ಭುತಾನೀಹ ಯಾವಂತಿ ಭೂವೌ ವಿಯತಿ ವಾ ಜಲೇ ।
ತ್ವಯಿ ವಿಶ್ವಾತ್ಮಕೇ ತಾನಿ ಕಿಂ ಮೇದೃಷ್ಟಂ ವಿಪಶ್ಯತಃ ॥
ಅನುವಾದ
ಅಕ್ರೂರನು ಹೇಳಿದನು — ಸ್ವಾಮಿಯೇ! ಪೃಥಿವಿ, ಆಕಾಶ, ನೀರು ಇವುಗಳಲ್ಲಿ ಮತ್ತು ಇಡೀ ಜಗತ್ತಿಲ್ಲಿ ಇರುವ ಅದ್ಭುತ ವಸ್ತುಗಳೆಲ್ಲವೂ ನಿನ್ನಲ್ಲಿಯೇ ಇದೆ. ಏಕೆಂದರೆ, ನೀನು ವಿಶ್ವರೂಪನಾಗಿರುವೆ. ನಾನು ನಿನ್ನನ್ನು ನೋಡುತ್ತಿರುವಾಗ ನಾನು ನೋಡದಿರುವ ಯಾವ ಅದ್ಭುತವಸ್ತು ತಾನೇ ಉಳಿದೀತು? ॥4॥
(ಶ್ಲೋಕ-5)
ಮೂಲಮ್
ಯತ್ರಾದ್ಭುತಾನಿ ಸರ್ವಾಣಿ ಭೂವೌ ವಿಯತಿ ವಾ ಜಲೇ ।
ತಂ ತ್ವಾನುಪಶ್ಯತೋ ಬ್ರಹ್ಮನ್ ಕಿಂ ಮೇ ದೃಷ್ಟಮಿಹಾದ್ಭುತಮ್ ॥
ಅನುವಾದ
ಭಗವಂತಾ! ಪೃಥಿವಿಯಲ್ಲಾಗಲೀ, ನೀರಿನಲ್ಲಾಗಲೀ, ಆಕಾಶದಲ್ಲಾಗಲೀ ಇರುವ ಅದ್ಭುತ ವಸ್ತುಗಳೆಲ್ಲವೂ ನೆಲೆಸಿರುವ ನಿನ್ನನ್ನೇ ನಾನು ನೋಡುತ್ತಿದ್ದೇನೆ. ಹಾಗಿರುವಾಗ ನಾನು ಬೇರೆಯಾದ ಅದ್ಭುತ ವಸ್ತುವನ್ನು ನೋಡಬೇಕಾಗಿದೆಯೇ? ॥5॥
(ಶ್ಲೋಕ-6)
ಮೂಲಮ್
ಇತ್ಯುಕ್ತ್ವಾ ಚೋದಯಾಮಾಸ ಸ್ಯಂದನಂ ಗಾಂದಿನೀಸುತಃ ।
ಮಥುರಾಮನಯದ್ರಾಮಂ ಕೃಷ್ಣಂ ಚೈವ ದಿನಾತ್ಯಯೇ ॥
ಅನುವಾದ
ಗಾಂದಿನೀ ನಂದನನಾದ ಅಕ್ರೂರನು ಹೀಗೆ ಕೇಳಿ ರಥವನ್ನು ನಡೆಸುತ್ತಾ ಭಗವಾನ್ ಶ್ರೀಕೃಷ್ಣನನ್ನು ಮತ್ತು ಬಲರಾಮರನನ್ನು ಕರೆದುಕೊಂಡು ಸಾಯಂಕಾಲವಾಗುತ್ತಿದ್ದಂತೆ ಮಥುರೆಗೆ ತಲುಪಿದನು. ॥6॥
(ಶ್ಲೋಕ-7)
ಮೂಲಮ್
ಮಾರ್ಗೇ ಗ್ರಾಮಜನಾ ರಾಜನ್ಸ್ತತ್ರ ತತ್ರೋಪಸಂಗತಾಃ ।
ವಸುದೇವಸುತೌ ವೀಕ್ಷ್ಯ ಪ್ರೀತಾ ದೃಷ್ಟಿಂ ನ ಚಾದದುಃ ॥
ಅನುವಾದ
ಪರೀಕ್ಷಿತನೇ! ದಾರಿಯಲ್ಲಿ ಅಲ್ಲಲ್ಲಿ ಹಳ್ಳಿಯ ಜನರು ಭಗವಾನ್ ಶ್ರೀಕೃಷ್ಣ-ಬಲರಾಮರನ್ನು ನೋಡಲು ಗುಂಪು-ಗುಂಪಾಗಿ ಬಂದು ಅವನನ್ನು ನೋಡಿ ಆನಂದಿತರಾಗುತ್ತಿದ್ದರು. ಅವರು ನೆಟ್ಟ ನೋಟದಿಂದ ಅವರನ್ನೇ ನೋಡುತ್ತಾ ಧನ್ಯತೆಯನ್ನು ಪಡೆಯುತ್ತಿದ್ದರು. ಶ್ರೀಕೃಷ್ಣನನ್ನು ನೋಡುತ್ತಾ ಅವರು ತಮ್ಮ ದೃಷ್ಟಿಯನ್ನು ಬೇರೆಡೆಗೆ ಕದಲಿಸದೇ ಹೋದರು. ॥7॥
(ಶ್ಲೋಕ-8)
ಮೂಲಮ್
ತಾವದ್ವ್ರಜೌಕಸಸ್ತತ್ರ ನಂದಗೋಪಾದಯೋಗ್ರತಃ ।
ಪುರೋಪವನಮಾಸಾದ್ಯ ಪ್ರತೀಕ್ಷಂತೋವತಸ್ಥಿರೇ ॥
ಅನುವಾದ
ನಂದಗೋಪನೇ ಮೊದಲಾದ ವ್ರಜವಾಸಿಗಳು ಮೊದಲೇ ಮಥುರೆಗೆ ತಲುಪಿ ಊರಿನ ಹೊರಗಿನ ಉದ್ಯಾನದಲ್ಲಿ ಬೀಡು ಬಿಟ್ಟು ರಾಮ-ಕೃಷ್ಣರ ಪ್ರತೀಕ್ಷೆ ಮಾಡುತ್ತಿದ್ದರು. ॥8॥
(ಶ್ಲೋಕ-9)
ಮೂಲಮ್
ತಾನ್ ಸಮೇತ್ಯಾಹ ಭಗವಾನಕ್ರೂರಂ ಜಗದೀಶ್ವರಃ ।
ಗೃಹೀತ್ವಾ ಪಾಣಿನಾ ಪಾಣಿಂ ಪ್ರಶ್ರಿತಂ ಪ್ರಹಸನ್ನಿವ ॥
ಅನುವಾದ
ಅವರ ಬಳಿಗೆ ತಲುಪುತ್ತಲೇ ಜಗದೀಶ್ವರನಾದ ಶ್ರೀಕೃಷ್ಣನು ರಥದಿಂದಿಳಿದು, ನಿಂತಿರುವ ಅಕ್ರೂರನ ಕೈಯನ್ನು ಹಿಡಿದುಕೊಂಡು ಮುಗುಳ್ನಗುತ್ತಾ ಇಂತೆಂದನು. ॥9॥
(ಶ್ಲೋಕ-10)
ಮೂಲಮ್
ಭವಾನ್ ಪ್ರವಿಶತಾಮಗ್ರೇ ಸಹಯಾನಃ ಪುರೀಂ ಗೃಹಮ್ ।
ವಯಂ ತ್ವಿಹಾವಮುಚ್ಯಾಥ ತತೋ ದ್ರಕ್ಷ್ಯಾಮಹೇ ಪುರೀಮ್ ॥
ಅನುವಾದ
ಚಿಕ್ಕಪ್ಪನವರೇ! ನೀವು ರಥದೊಂದಿಗೆ ಮುಂದಾಗಿ ಮಥುರೆಯನ್ನು ಪ್ರವೇಶಿಸಿ ತಮ್ಮ ಮನೆಗೆ ಹೋಗಿರಿ. ನಾವು ಮೊದಲಿಗೆ ಇಲ್ಲಿ ತಂಗಿ, ಮತ್ತೆ ನಗರವನ್ನು ನೋಡಲು ಬರುವೆವು. ॥10॥
(ಶ್ಲೋಕ-11)
ಮೂಲಮ್ (ವಾಚನಮ್)
ಅಕ್ರೂರ ಉವಾಚ
ಮೂಲಮ್
ನಾಹಂ ಭವದ್ಭ್ಯಾಂ ರಹಿತಃ ಪ್ರವೇಕ್ಷ್ಯೇ ಮಥುರಾಂ ಪ್ರಭೋ ।
ತ್ಯಕ್ತುಂ ನಾರ್ಹಸಿ ಮಾಂ ನಾಥ ಭಕ್ತಂ ತೇ ಭಕ್ತವತ್ಸಲ ॥
ಅನುವಾದ
ಅಕ್ರೂರನು ಹೇಳಿದನು — ಪ್ರಭುವೇ! ನಿಮ್ಮಿಬ್ಬರನ್ನು ಬಿಟ್ಟು ನಾನು ಮಥುರೆಯನ್ನು ಪ್ರವೇಶಿಸಲಾರೆನು. ಸ್ವಾಮಿ! ನಾನು ನಿನ್ನ ಭಕ್ತನಾಗಿರುವೆನು. ಭಕ್ತವತ್ಸಲನಾದ ನೀನು ನನ್ನ ಕೈ ಬಿಡಬೇಡ. ॥11॥
(ಶ್ಲೋಕ-12)
ಮೂಲಮ್
ಆಗಚ್ಛ ಯಾಮ ಗೇಹಾನ್ನಃ ಸನಾಥಾನ್ ಕುರ್ವಧೋಕ್ಷಜ ।
ಸಹಾಗ್ರಜಃ ಸಗೋಪಾಲೈಃ ಸುಹೃದ್ಭಿಶ್ಚ ಸುಹೃತ್ತಮ ॥
ಅನುವಾದ
ಭಗವಂತ! ಅಧೋಕ್ಷಜನೇ! ಸುಹೃತ್ತಮನೇ! ನೀನು ನಿನ್ನಣ್ಣ ಬಲರಾಮನೊಡಗೊಂಡು, ನಂದಗೋಪನೇ ಮೊದಲಾದ ಗೋಪಾಲಕರೊಂದಿಗೆ ನಮ್ಮ ಮನೆಗೆ ಬನ್ನಿರಿ. ॥12॥
(ಶ್ಲೋಕ-13)
ಮೂಲಮ್
ಪುನೀಹಿ ಪಾದರಜಸಾ ಗೃಹಾನ್ನೋ ಗೃಹಮೇಧಿನಾಮ್ ।
ಯಚ್ಛೌಚೇನಾನುತೃಪ್ಯಂತಿ ಪಿತರಃ ಸಾಗ್ನಯಃ ಸುರಾಃ ॥
ಅನುವಾದ
ನಾವು ಗೃಹಸ್ಥರು. ನಿನ್ನ ಚರಣ ಕಮಲಗಳ ಧೂಳಿನಿಂದ ನಮ್ಮ ಮನೆಯನ್ನು ಪವಿತ್ರಗೊಳಿಸು. ನಿನ್ನ ದಿವ್ಯವಾದ ಚರಣಗಳನ್ನು ತೊಳೆಯುವುದರಿಂದ ಅಗ್ನಿಗಳೂ, ದೇವತೆಗಳೂ, ಪಿತೃಗಳೂ, ತೃಪ್ತರಾಗುತ್ತಾರೆ. ॥13॥
(ಶ್ಲೋಕ-14)
ಮೂಲಮ್
ಅವನಿಜ್ಯಾಂಘ್ರಿಯುಗಲಮಾಸೀಚ್ಛ್ಲೋಕ್ಯೋ ಬಲಿರ್ಮಹಾನ್ ।
ಐಶ್ವರ್ಯಮತುಲಂ ಲೇಭೇ ಗತಿಂ ಚೈಕಾಂತಿನಾಂ ತು ಯಾ ॥
ಅನುವಾದ
ಪ್ರಭೋ! ಸತ್ಪುರುಷರು ಸದಾಕಾಲ ಕೊಂಡಾಡುತ್ತಿರುವ ನಿನ್ನ ಚರಣಯುಗಳಗಳನ್ನು ತೊಳೆಯುವುದರಿಂದ ಬಲಿಯು ಪುಣ್ಯಶ್ಲೋಕನೆಂಬ ಕೀರ್ತಿಯನ್ನು ಪಡೆದನು. ಕೀರ್ತಿಯೇ ಅಲ್ಲ - ಅನನ್ಯ ಪ್ರೇಮಿ ಭಕ್ತರಿಗೆ ದೊರೆಯುವಂತಹ ಅತುಲನೀಯ ಐಶ್ವರ್ಯವೂ, ಸದ್ಗತಿಯೂ ದೊರೆಯಿತು. ॥14॥
(ಶ್ಲೋಕ-15)
ಮೂಲಮ್
ಆಪಸ್ತೇಂಘ್ರ್ಯವನೇಜನ್ಯಸೀನ್ ಲೋಕಾನ್ ಶುಚಯೋಪುನನ್ ।
ಶಿರಸಾಧತ್ತ ಯಾಃ ಶರ್ವಃ ಸ್ವರ್ಯಾತಾಃ ಸಗರಾತ್ಮಜಾಃ ॥
ಅನುವಾದ
ನಿನ್ನ ಚರಣೋದಕವಾದ ಗಂಗೆಯು ಮೂರು ಲೋಕಗಳನ್ನೇ ಪವಿತ್ರ ಗೊಳಿಸಿರುವಳು. ನಿಜವಾಗಿಯೂ ಅದು ಪವಿತ್ರತೆಯ ಮೂರ್ತಿಮಂತ ಸ್ವರೂಪನೇ ಆಗಿದೆ. ಅದರ ಸ್ಪರ್ಶದಿಂದಲೆ ಸಗರನ ಪುತ್ರರಿಗೆ ಸದ್ಗತಿ ಪ್ರಾಪ್ತವಾಯಿತು. ಅದೇ ಜಲವನ್ನು ಸಾಕ್ಷಾತ್ ಶಂಕರನು ತನ್ನ ಶಿರದಲ್ಲಿ ಧರಿಸಿರುವನು. ॥15॥
(ಶ್ಲೋಕ-16)
ಮೂಲಮ್
ದೇವದೇವ ಜಗನ್ನಾಥ ಪುಣ್ಯಶ್ರವಣಕೀರ್ತನ ।
ಯದೂತ್ತಮೋತ್ತಮಶ್ಲೋಕ ನಾರಾಯಣ ನಮೋಸ್ತು ತೇ ॥
ಅನುವಾದ
ಜಗನ್ನಾಥನೇ! ದೇವ ದೇವನೇ! ನಿನ್ನ ಗುಣ-ಲೀಲೆಗಳ ಶ್ರವಣ-ಕೀರ್ತನೆಯು ಪರಮ ಮಂಗಳಪ್ರದವಾಗಿದೆ. ಸ್ವೋತ್ತಮರು ನಿನ್ನ ಗುಣಗಳನ್ನು ಕೀರ್ತಿಸುತ್ತಾ ಇರುತ್ತಾರೆ. ನಾರಾಯಣನೇ! ನಾನು ನಿನಗೆ ನಮಸ್ಕರಿಸುತ್ತೇನೆ.॥16॥
(ಶ್ಲೋಕ-17)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಆಯಾಸ್ಯೇ ಭವತೋ ಗೇಹಮಹಮಾರ್ಯಸಮನ್ವಿತಃ ।
ಯದುಚಕ್ರದ್ರುಹಂ ಹತ್ವಾ ವಿತರಿಷ್ಯೇ ಸುಹೃತ್ಪ್ರಿಯಮ್ ॥
ಅನುವಾದ
ಶ್ರೀಭಗವಂತನು ಹೇಳಿದನು — ಅಕ್ರೂರನೇ! ಮೊದಲಿಗೆ ಯದುವಂಶೀಯರಿಗೆ ದ್ರೋಹವೆಸಗಿರುವ ಕಂಸನನ್ನು ಸಂಹರಿಸಿ ಸುಹೃದ್-ಜನರೆಲ್ಲರಿಗೆ ಸಂತೋಷವನ್ನುಂಟು ಮಾಡಿದ ಬಳಿಕ ಬಲರಾಮ, ನಂದರಾಜರೇ ಮೊದಲಾದವರೊಡನೆ ನಿನ್ನ ಮನೆಗೆ ಬರುತ್ತೇನೆ. ನೀನು ನಿರಾತಂಕವಾಗಿ ಮಥುರೆಯನ್ನು ಪ್ರವೇಶಿಸು. ॥17॥
(ಶ್ಲೋಕ-18)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏವಮುಕ್ತೋ ಭಗವತಾ ಸೋಕ್ರೂರೋ ವಿಮನಾ ಇವ ।
ಪುರೀಂ ಪ್ರವಿಷ್ಟಃ ಕಂಸಾಯ ಕರ್ಮಾವೇದ್ಯ ಗೃಹಂ ಯಯೌ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಂತನು ಹೀಗೆ ಹೇಳಿದಾಗ ಅಕ್ರೂರನು ಮನಸ್ಸಿಲ್ಲದ ಮನಸ್ಸಿನಿಂದ ಮಥುರೆಯನ್ನು ಪ್ರವೇಶಿಸಿ, ಕಂಸನಲ್ಲಿ ಬಲ ರಾಮ-ಕೃಷ್ಣರು ಬಂದಿರುವ ಸಮಾಚಾರವನ್ನು ತಿಳಿಸಿ, ತನ್ನ ಮನೆಗೆ ತೆರಳಿದನು. ॥18॥
(ಶ್ಲೋಕ-19)
ಮೂಲಮ್
ಅಥಾಪರಾಹ್ಣೇ ಭಗವಾನ್ ಕೃಷ್ಣಃ ಸಂಕರ್ಷಣಾನ್ವಿತಃ ।
ಮಥುರಾಂ ಪ್ರಾವಿಶದ್ಗೋಪೈರ್ದಿದೃಕ್ಷುಃ ಪರಿವಾರಿತಃ ॥
ಅನುವಾದ
ಮರುದಿನ ಅಪರಾಹ್ನ ಸಮಯದಲ್ಲಿ ಶ್ರೀಕೃಷ್ಣನು ಬಲರಾಮ ಮತ್ತು ಗೋಪಬಾಲಕರೊಂದಿಗೆ ಮಥುರಾ ಪಟ್ಟಣವನ್ನು ನೋಡಲು ನಗರವನ್ನು ಪ್ರವೇಶಿಸಿದನು. ॥19॥
(ಶ್ಲೋಕ-20)
ಮೂಲಮ್
ದದರ್ಶ ತಾಂ ಸ್ಫಾಟಿಕತುಂಗಗೋಪುರ-
ದ್ವಾರಾಂ ಬೃಹದ್ಧೇಮಕಪಾಟತೋರಣಾಮ್ ।
ತಾಮ್ರಾರಕೋಷ್ಠಾಂ ಪರಿಖಾದುರಾಸದಾ-
ಮುದ್ಯಾನರಮ್ಯೋಪವನೋಪಶೋಭಿತಾಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ನೋಡುತ್ತಾನೆ-ಸ್ಫಟಿಕಶಿಲಾಮಯವಾದ ಹೆಬ್ಬಾಗಿಲಿನಿಂದಲೂ, ಎತ್ತರವಾದ ಗೋಪುರಗಳಿಂದಲೂ, ದೊಡ್ಡದಾದ ಬಾಗಿಲುಗಳಿಂದಲೂ ಕೂಡಿತ್ತು ಆ ನಗರವು. ಅಲ್ಲಿಯ ಕಿಡಕಿಗಳು ಚಿನ್ನದಿಂದ ಮಾಡಿದ್ದು, ಹೆಬ್ಬಾಗಿಲುಗಳಿಗೆ ಚಿನ್ನದ ತೋರಣಗಳಿದ್ದವು. ನಗರದ ಸುತ್ತಲೂ ತಾಮ್ರ ಮತ್ತು ಹಿತ್ತಾಳೆಯ ಪ್ರಾಕಾರಗಳಿದ್ದು, ಸುತ್ತಲಿದ್ದ ಕಂದಕಗಳಿಂದಾಗಿ ನಗರವನ್ನು ಸುಲಭವಾಗಿ ಪ್ರವೇಶಿಸಲಾಗುತ್ತಿರಲಿಲ್ಲ. ಅಲ್ಲಲ್ಲಿ ಸುಂದರವಾದ ಉದ್ಯಾನವನಗಳು, ರಮಣೀಯ ಉಪವನಗಳೂ ಶೋಭಿಸುತ್ತಿದ್ದವು. ॥20॥
(ಶ್ಲೋಕ-21)
ಮೂಲಮ್
ಸೌವರ್ಣಶೃಂಗಾಟಕಹರ್ಮ್ಯನಿಷ್ಕುಟೈಃ
ಶ್ರೇಣೀಸಭಾಭಿರ್ಭವನೈರುಪಸ್ಕೃತಾಮ್ ।
ವೈದೂರ್ಯವಜ್ರಾಮಲನೀಲವಿದ್ರುಮೈ-
ರ್ಮುಕ್ತಾಹರಿದ್ಭಿರ್ವಲಭೀಷು ವೇದಿಷು ॥
(ಶ್ಲೋಕ-22)
ಮೂಲಮ್
ಜುಷ್ಟೇಷು ಜಾಲಾಮುಖರಂಧ್ರಕುಟ್ಟಿಮೇ-
ಷ್ವಾವಿಷ್ಟಪಾರಾವತಬರ್ಹಿನಾದಿತಾಮ್ ।
ಸಂಸಿಕ್ತರಥ್ಯಾಪಣಮಾರ್ಗಚತ್ವರಾಂ
ಪ್ರಕೀರ್ಣಮಾಲ್ಯಾಂಕುರಲಾಜತಂಡುಲಾಮ್ ॥
ಅನುವಾದ
ಅಲ್ಲಿ ಸುವರ್ಣದಿಂದ ಅಲಂಕೃತವಾದ ಚೌಕಗಳಿದ್ದು, ಧನಿಕರ ಸೌಧಗಳು ಇದ್ದವು. ಜೊತೆಗೆ ಹೂದೋಟಗಳೂ, ಪ್ರಜಾವರ್ಗದ ಸಭಾಭವನಗಳೂ, ಸಾಮಾನ್ಯ ಜನರು ವಾಸಿಸುವ ಭವನಗಳಿಂದಲೂ ಸಮಲಂಕೃತವಾಗಿತ್ತು. ವಜ್ರ, ವೈಡೂರ್ಯ, ನೀಲ, ಹವಳ, ಪಚ್ಚೆ ಮುಂತಾದವುಗಳಿಂದ ಸಮಲಂಕೃತವಾದ ಚಾವಣಿಗಳೂ, ಜಗುಲಿಗಳೂ ಇದ್ದವು. ರತ್ನ ಖಚಿತವಾದ ಕಿಟಕಿಗಳಲ್ಲಿಯೂ ಜಗುಲಿಗಳಲ್ಲಿಯೂ ಕುಳಿತು ಕಪೋತ ಪಾರಿವಾಳ ಪಕ್ಷಿಗಳೂ, ನವಿಲುಗಳೂ ಧ್ವನಿಮಾಡುತ್ತಿದ್ದವು. ರಸ್ತೆಗಳನ್ನೂ, ಅಂಗಡಿ ಬೀದಿಗಳನ್ನು, ರಾಜಮಾರ್ಗಗಳನ್ನು, ಚೌಕಗಳನ್ನು ಚೆನ್ನಾಗಿ ಗುಡಿಸಿ ಸಾರಿಸಿದ್ದರು. ಅಲ್ಲಲ್ಲಿ ಹೂವಿನ ಹಾರಗಳಿಂದಲೂ ಮೊಳಕೆ ಧಾನ್ಯಗಳಿಂದಲೂ, ಅರಳು-ಅಕ್ಷತೆಗಳಿಂದಲೂ ಅಲಂಕರಿಸಿದ್ದರು. ॥21-22॥
(ಶ್ಲೋಕ-23)
ಮೂಲಮ್
ಆಪೂರ್ಣಕುಂಭೈರ್ದಧಿಚಂದನೋಕ್ಷಿತೈಃ
ಪ್ರಸೂನದೀಪಾವಲಿಭಿಃ ಸಪಲ್ಲವೈಃ ।
ಸವೃಂದರಂಭಾಕ್ರಮುಕೈಃ ಸಕೇತುಭಿಃ
ಸ್ವಲಂಕೃತದ್ವಾರಗೃಹಾಂ ಸಪಟ್ಟಿಕೈಃ ॥
ಅನುವಾದ
ಮನೆಗಳ ಬಾಗಿಲಲ್ಲಿ ಮೊಸರು, ಚಂದನಾದಿಗಳಿಂದ ಅಲಂಕರಿಸಿದ ನೀರಿನ ಕಲಶಗಳನ್ನು ಇಟ್ಟಿದ್ದರು. ಅವನ್ನು ಹೂವುಗಳಿಂದ, ದೀಪ, ಚಿಗುರುಗಳಿಂದ, ಗೊನೆಸಹಿತ ಬಾಳೆಯ ಕಂಬಗಳಿಂದ, ಅಡಿಕೆ ಮರಗಳ ಹೊಂಬಾಳೆಗಳಿಂದಲೂ, ಗಿಡಗಳಿಂದಲೂ, ರೇಷ್ಮೆ ವಸ್ತ್ರಗಳಿಂದಲೂ ಚೆನ್ನಾಗಿ ಅಲಂಕರಿಸಿದ್ದರು. ॥23॥
(ಶ್ಲೋಕ-24)
ಮೂಲಮ್
ತಾಂ ಸಂಪ್ರವಿಷ್ಟೌ ವಸುದೇವನಂದನೌ
ವೃತೌ ವಯಸ್ಯೈರ್ನರದೇವವರ್ತ್ಮನಾ ।
ದ್ರಷ್ಟುಂ ಸಮೀಯುಸ್ತ್ವರಿತಾಃ ಪುರಸಿಯೋ
ಹರ್ಮ್ಯಾಣಿ ಚೈವಾರುರುಹುರ್ನೃಪೋತ್ಸುಕಾಃ ॥
ಅನುವಾದ
ಪರೀಕ್ಷಿತನೇ! ವಸುದೇವನಂದನ ಭಗವಾನ್ ಶ್ರೀಕೃಷ್ಣನು ಬಲರಾಮ ಗೋಪಬಾಲಕರೊಂದಿಗೆ ಮಥುರೆಯ ರಾಜ ಬೀದಿಯ ಮೂಲಕ ನಗರವನ್ನು ಪ್ರವೇಶಿಸಿದನು. ಆ ಸಮಯದಲ್ಲಿ ನಗರದ ನಾರಿಯರು ಅತ್ಯಂತ ಉತ್ಸುಕತೆಯಿಂದ ಅವಸರ-ಅವಸರವಾಗಿ ಮಹಡಿಯನ್ನೇರಿ ನೋಡುತ್ತಾ ನಿಂತರು. ॥24॥
(ಶ್ಲೋಕ-25)
ಮೂಲಮ್
ಕಾಶ್ಚಿದ್ವಿಪರ್ಯಗ್ಧೃತವಸಭೂಷಣಾ
ವಿಸ್ಮೃತ್ಯ ಚೈಕಂ ಯುಗಲೇಷ್ವಥಾಪರಾಃ ।
ಕೃತೈಕಪತ್ರಶ್ರವಣೈಕನೂಪುರಾ
ನಾಂಕ್ತ್ವಾ ದ್ವಿತೀಯಂ ತ್ವಪರಾಶ್ಚ ಲೋಚನಮ್ ॥
ಅನುವಾದ
ಕೃಷ್ಣ-ಬಲರಾಮರನ್ನು ನೋಡಬೇಕೆಂದು ಧಾವಿಸಿ ಬಂದವರಲ್ಲಿ ಕೆಲವರು ಅವಸರದಿಂದಾಗಿ ವಸಗಳನ್ನು, ಆಭರಣಗಳನ್ನು ಹಿಂದು ಮುಂದಾಗಿ ಧರಿಸಿದ್ದರು. ಕೆಲವರು ಜೋಡಿಯಾಗಿ ತೊಡಬೇಕಾದ ಕಂಕಣ ಕುಂಡಲಗಳನ್ನು ಒಂಟಿಯಾಗಿಯೇ ತೊಟ್ಟಿದ್ದರು. ಯಾರೋ ಒಬ್ಬಳು ಕಿವಿಗೆ ಕರ್ಣಪುಷ್ಪವನ್ನು ಧರಿಸಿದರೆ, ಮತ್ತೊಬ್ಬಳು ಒಂದೇ ಕಾಲಿಗೆ ನೂಪುರವನ್ನು ಧರಿಸಿದ್ದಳು. ಕೆಲವರು ಒಂದೆ ಕಣ್ಣಿಗೆ ಕಾಡಿಗೆ ಹಚ್ಚಿಕೊಂಡಿದ್ದರೆ, ಮತ್ತೊಬ್ಬಳು ಕಾಡಿಗೆ ಹಚ್ಚಿಕೊಳ್ಳಲೇ ಇಲ್ಲ. ॥25॥
(ಶ್ಲೋಕ-26)
ಮೂಲಮ್
ಅಶ್ನಂತ್ಯ ಏಕಾಸ್ತದಪಾಸ್ಯ ಸೋತ್ಸವಾ
ಅಭ್ಯಜ್ಯಮಾನಾ ಅಕೃತೋಪಮಜ್ಜನಾಃ ।
ಸ್ವಪಂತ್ಯ ಉತ್ಥಾಯ ನಿಶಮ್ಯ ನಿಃಸ್ವನಂ
ಪ್ರಪಾಯಯಂತ್ಯೋರ್ಭಮಪೋಹ್ಯ ಮಾತರಃ ॥
ಅನುವಾದ
ಕೆಲವು ಹೆಂಗಳೆಯರು ಊಟಮಾಡುತ್ತಿದ್ದರು. ಸುದ್ದಿ ತಿಳಿದಾಗ ಊಟವನ್ನು ಹಾಗೇ ಬಿಟ್ಟು ಕೈತೊಳೆಯದೆಯೇ ಓಡಿ ಬಂದಿದ್ದರು. ಎಲ್ಲರ ಮನಸ್ಸು ಆನಂದೋತ್ಸಾಹದಿಂದ ತುಂಬಿ ಹೋಗಿತ್ತು. ಕೆಲವರು ಅಂಗರಾಗವನ್ನು ಹಚ್ಚಿಕೊಳ್ಳುತ್ತಿದ್ದವರು ಸ್ನಾನ ಮಾಡದೇ ಹಾಗೇ ಬಂದಿದ್ದರು. ಮಲಗಿದ್ದ ಕೆಲವರು ಗದ್ದಲವನ್ನು ಕೇಳಿ ಹಾಗೆಯೇ ಬಂದಿದ್ದರು. ಮಕ್ಕಳಿಗೆ ಹಾಲು ಕುಡಿಸುತ್ತಿದ್ದ ಕೆಲವರು ಮಗುವನ್ನು ಅಲ್ಲೆ ಬಿಟ್ಟು ಶ್ರೀಕೃಷ್ಣನನ್ನು ನೋಡಲು ಆಗಮಿಸಿದ್ದರು. ॥26॥
(ಶ್ಲೋಕ-27)
ಮೂಲಮ್
ಮನಾಂಸಿ ತಾಸಾಮರವಿಂದಲೋಚನಃ
ಪ್ರಗಲ್ಭಲೀಲಾಹಸಿತಾವಲೋಕನೈಃ ।
ಜಹಾರ ಮತ್ತದ್ವಿರದೇಂದ್ರವಿಕ್ರಮೋ
ದೃಶಾಂ ದದಚ್ಛ್ರೀರಮಣಾತ್ಮನೋತ್ಸವಮ್ ॥
ಅನುವಾದ
ಕಮಲನಯನ ಶ್ರೀಕೃಷ್ಣನು ಮತ್ತಗಜದಂತೆ ಠೀವಿಯಿಂದ ನಡೆದು ಬರುತ್ತಿದ್ದನು. ಮಹಾಲಕ್ಷ್ಮಿಗೂ ಆನಂದವನ್ನುಂಟು ಮಾಡುವ ತನ್ನ ವಿಗ್ರಹದಿಂದ ಮಥುರೆಯ ಸ್ತ್ರೀಯರ ಕಣ್ಣುಗಳಿಗೆ ಆನಂದೋತ್ಸವವನ್ನು ಉಂಟುಮಾಡುತ್ತಿದ್ದನು. ಪ್ರೌಢವಾದ ಹಾವ-ಭಾವಗಳಿಂದಲೂ, ಮುಗುಳ್ನಗೆಯಿಂದಲೂ, ಚೇತೋಹಾರಿಯಾದ ಕಡೆಗಣ್ಣ ನೋಟದಿಂದಲೂ ಅವರ ಮನಸ್ಸನ್ನು ಅಪಹರಿಸಿ ಬಿಟ್ಟಿದ್ದನು. ॥27॥
(ಶ್ಲೋಕ-28)
ಮೂಲಮ್
ದೃಷ್ಟ್ವಾ ಮುಹುಃಶ್ರುತಮನುದ್ರುತಚೇತಸಸ್ತಂ
ತತ್ಪ್ರೇಕ್ಷಣೋತ್ಸ್ಮಿತಸುಧೋಕ್ಷಣಲಬ್ಧಮಾನಾಃ ।
ಆನಂದಮೂರ್ತಿಮುಪಗುಹ್ಯ ದೃಶಾತ್ಮಲಬ್ಧಂ
ಹೃಷ್ಯತ್ತ್ವಚೋ ಜಹುರನಂತಮರಿಂದಮಾಧಿಮ್ ॥
ಅನುವಾದ
ಮಥುರಾನಗರದ ಸ್ತ್ರೀಯರು ಅನೇಕ ದಿನಗಳಿಂದ ಭಗವಾನ್ ಶ್ರೀಕೃಷ್ಣನ ಅದ್ಭುತ ಲೀಲೆಗಳನ್ನು ಕೇಳುತ್ತಾ ಬಂದಿದ್ದರು. ಅವರ ಚಿತ್ತವು ಬಹಳ ಕಾಲದಿಂದ ಶ್ರೀಕೃಷ್ಣದರ್ಶನಕ್ಕಾಗಿ ಚಂಚಲವಾಗಿದ್ದು, ವ್ಯಾಕುಲವಾಗಿತ್ತು. ಇಂದು ಅವನನ್ನು ನೋಡಿದರು. ಶ್ರೀಕೃಷ್ಣನೂ ಕೂಡ ತನ್ನ ಪ್ರೇಮಪೂರ್ಣ ಓರೆನೋಟದಿಂದ ನಸುನಗೆಯ ಅಮೃತ ಸಿಂಚನದಿಂದ ಅವರನ್ನು ಸಮ್ಮಾನಿಸಿದನು. ಪರೀಕ್ಷಿತನೇ! ಆ ಸ್ತ್ರೀಯರು ಕಣ್ಣುಗಳ ಮೂಲಕ ಭಗವಂತನನ್ನು ತಮ್ಮ ಹೃದಯದಲ್ಲಿ ಇಟ್ಟುಕೊಂಡು ಆನಂದಮಯ ಸ್ವರೂಪವನ್ನು ಆಲಿಂಗಿಸಿಕೊಂಡರು. ಅವರೆಲ್ಲರ ಶರೀರ ಪುಳಕಗೊಂಡಿತು ಹಾಗೂ ಬಹಳ ದಿನಗಳಿಂದಿದ್ದ ವಿರಹ ವ್ಯಥೆಯು ಶಾಂತವಾಯಿತು. ॥28॥
(ಶ್ಲೋಕ-29)
ಮೂಲಮ್
ಪ್ರಾಸಾದಶಿಖರಾರೂಢಾಃ ಪ್ರೀತ್ಯುತ್ಫುಲ್ಲಮುಖಾಂಬುಜಾಃ ।
ಅಭ್ಯವರ್ಷನ್ ಸೌಮನಸ್ಯೈಃ ಪ್ರಮದಾ ಬಲಕೇಶವೌ ॥
ಅನುವಾದ
ಮಥುರೆಯ ನಾರಿಯರು ತಮ್ಮ-ತಮ್ಮ ಮನೆಗಳ ಮಹಡಿಗಳನ್ನು ಹತ್ತಿ ಬಲರಾಮ-ಶ್ರೀಕೃಷ್ಣರ ಮೇಲೆ ಹೂವಿನ ಮಳೆಗರೆದರು. ಆಗ ಆ ಸ್ತ್ರೀಯರ ಮುಖಕಮಲಗಳು ಪ್ರೇಮಾವೇಗದಿಂದ ಅರಳಿದ್ದವು. ॥29॥
(ಶ್ಲೋಕ-30)
ಮೂಲಮ್
ದಧ್ಯಕ್ಷತೈಃ ಸೋದಪಾತ್ರೈಃ ಸ್ರಗ್ಗಂಧೈರಭ್ಯುಪಾಯನೈಃ ।
ತಾವಾನರ್ಚುಃ ಪ್ರಮುದಿತಾಸ್ತತ್ರ ತತ್ರ ದ್ವಿಜಾತಯಃ ॥
ಅನುವಾದ
ಬ್ರಾಹ್ಮಣ, ಕ್ಷತ್ರಿಯ, ವೈಶ್ಯರೆಲ್ಲರೂ ಅಲ್ಲಲ್ಲಿ ಮೊಸರು, ಅಕ್ಷತೆ, ನೀರು ತುಂಬಿದ ಕಲಶಗಳಿಂದ ಪುಷ್ಪಹಾರಗಳಿಂದ, ಚಂದನಾದಿ ಕಾಣಿಕೆ ಸಾಮಗ್ರಿಗಳಿಂದ ಭಗವಾನ್ ಶ್ರೀಕೃಷ್ಣ ಬಲರಾಮರನ್ನು ಆನಂದಮಗ್ನರಾಗಿ ಪೂಜಿಸಿದರು.॥30॥
(ಶ್ಲೋಕ-31)
ಮೂಲಮ್
ಊಚುಃ ಪೌರಾ ಅಹೋ ಗೋಪ್ಯಸ್ತಪಃ ಕಿಮಚರನ್ ಮಹತ್ ।
ಯಾ ಹ್ಯೇತಾವನುಪಶ್ಯಂತಿ ನರಲೋಕಮಹೋತ್ಸವೌ ॥
ಅನುವಾದ
ಭಗವಂತನನ್ನು ನೋಡಿದ ಪುರವಾಸಿಗಳೆಲ್ಲರೂ-‘ಧನ್ಯ! ಧನ್ಯ!! ಸಕಲ ಮನುಷ್ಯರಿಗೆ ಪರಮಾನಂದವನ್ನೀಯುವ ಇವರಿಬ್ಬರನ್ನು ನೋಡುತ್ತಿದ್ದ ಗೋಪಿಯರು ಯಾವ ಮಹಾನ್ ತಪಸ್ಸು ಮಾಡಿದ್ದರೋ!’ ಎಂದು ಪರಸ್ಪರ ಮಾತನಾಡಿಕೊಂಡರು. ॥31॥
(ಶ್ಲೋಕ-32)
ಮೂಲಮ್
ರಜಕಂ ಕಂಚಿದಾಯಾಂತಂ ರಂಗಕಾರಂ ಗದಾಗ್ರಜಃ ।
ದೃಷ್ಟ್ವಾಯಾಚತ ವಾಸಾಂಸಿ ಧೌತಾನ್ಯತ್ಯುತ್ತಮಾನಿ ಚ ॥
ಅನುವಾದ
ಅದೇ ಸಮಯದಲ್ಲಿ ಬಟ್ಟೆಗಳಿಗೆ ಬಣ್ಣ ಹಾಕುವ ಕೆಲಸವನ್ನು ಮಾಡುತ್ತಿದ್ದ ಒಬ್ಬ ಅಗಸರವನು ತಮ್ಮ ಕಡೆಗೆ ಬರುತ್ತಿರುವುದನ್ನು ಭಗವಾನ್ ಶ್ರೀಕೃಷ್ಣನು ನೋಡಿದನು. ಕೃಷ್ಣನು ಅವನ ಬಳಿ ಮಡಿ ಮಾಡಿದ ಒಳ್ಳೆಯ ಬಟ್ಟೆಗಳನ್ನು ಉಡಲು ಕೇಳಿದನು.॥32॥
(ಶ್ಲೋಕ-33)
ಮೂಲಮ್
ದೇಹ್ಯಾವಯೋಃ ಸಮುಚಿತಾನ್ಯಂಗ ವಾಸಾಂಸಿ ಚಾರ್ಹತೋಃ ।
ಭವಿಷ್ಯತಿ ಪರಂ ಶ್ರೇಯೋ ದಾತುಸ್ತೇ ನಾತ್ರ ಸಂಶಯಃ ॥
ಅನುವಾದ
ಅಯ್ಯಾ! ನಮ್ಮಿಬ್ಬರಿಗೂ ತೊಡಲು ಯೋಗ್ಯವಾದ ಬಟ್ಟೆಗಳನ್ನು ಕೊಡು. ರಾಜಯೋಗ್ಯವಾದ ಈ ಬಟ್ಟೆಗಳನ್ನು ತೊಟ್ಟುಕೊಳ್ಳಲು ನಾವು ಅರ್ಹರಾಗಿದ್ದೇವೆ. ನೀನು ನಮಗೆ ಈ ವಸ್ತ್ರಗಳನ್ನು ಕೊಟ್ಟರೆ ನಿನಗೆ ಬಹಳ ಶ್ರೇಯಸ್ಸು ಉಂಟಾದೀತು. ಇದರಲ್ಲಿ ಸಂಶಯವೇ ಇಲ್ಲ. ॥33॥
(ಶ್ಲೋಕ-34)
ಮೂಲಮ್
ಸ ಯಾಚಿತೋ ಭಗವತಾ ಪರಿಪೂರ್ಣೇನ ಸರ್ವತಃ ।
ಸಾಕ್ಷೇಪಂ ರುಷಿತಃ ಪ್ರಾಹ ಭೃತ್ಯೋ ರಾಜ್ಞಃ ಸುದುರ್ಮದಃ ॥
ಅನುವಾದ
ಪರೀಕ್ಷಿತನೇ! ಭಗವಂತನು ಸರ್ವತ್ರ ಪರಿಪೂರ್ಣನಾಗಿದ್ದಾನೆ. ಎಲ್ಲವೂ ಅವನದ್ದೇ ಆಗಿದೆ. ಹೀಗಿದ್ದರೂ ಅವನು ಹೀಗೆ ಯಾಚಿಸುವ ಲೀಲೆಯನ್ನು ತೋರಿದನು. ಆದರೆ ಅವನು ಮೂರ್ಖರಾಜನಾದ ಕಂಸನ ಸೇವಕನಾಗಿದ್ದು, ಸೊಕ್ಕಿ ಹೋಗಿದ್ದನು. ಭಗವಂತನಿಗೆ ಕೊಡುವುದು ಹಾಗಿರಲಿ, ಅವನು ಸಿಟ್ಟಿನಿಂದ ಆಕ್ಷೇಪಿಸುತ್ತಾ ಹೇಳುತ್ತಾನೆ. ॥34॥
(ಶ್ಲೋಕ-35)
ಮೂಲಮ್
ಈದೃಶಾನ್ಯೇವ ವಾಸಾಂಸಿ ನಿತ್ಯಂ ಗಿರಿವನೇಚರಾಃ ।
ಪರಿಧತ್ತ ಕಿಮುದ್ವತ್ತಾ ರಾಜದ್ರವ್ಯಾಣ್ಯಭೀಪ್ಸಥ ॥
ಅನುವಾದ
ಕಾಡು-ಮೇಡುಗಳಲ್ಲಿ ಸದಾ ಸಂಚರಿಸುವ ನೀವುಗಳು ಪ್ರತಿದಿನವೂ ಇಂತಹ ಬಟ್ಟೆಗಳನ್ನು ಉಡುವಿರಾ? ಉದ್ಧಟರಾಗಿರುವ ನೀವು ಈ ರೀತಿ ಬಾಯಿಗೆ ಬಂದ ಹಾಗೆ ಗಳಹುತ್ತಿರುವಿ. ರಾಜನ ವಸ್ತ್ರಗಳನ್ನು ಅಪಹರಿಸುವ ಅಪೇಕ್ಷೆಯೇ? ॥35॥
(ಶ್ಲೋಕ-36)
ಮೂಲಮ್
ಯಾತಾಶು ಬಾಲಿಶಾ ಮೈವಂ ಪ್ರಾರ್ಥ್ಯಂ ಯದಿ ಜಿಜೀವಿಷಾ ।
ಬಧ್ನಂತಿ ಘ್ನಂತಿ ಲುಂಪಂತಿ ದೃಪ್ತಂ ರಾಜಕುಲಾನಿ ವೈ ॥
ಅನುವಾದ
ಎಲೈ ಮೂರ್ಖರೇ! ಹೋಗಿ, ಓಡಿ ಹೋಗಿ! ಕೆಲವು ದಿನ ಬದುಕುಳಿಯಬೇಕಿದ್ದರೆ ಹೀಗೆ ಕೇಳಬೇಡಿರಿ. ರಾಜಭಟರು ನಿಮ್ಮಂತಹ ಕೊಬ್ಬಿರುವವರನ್ನು ಬಂಧಿಸುತ್ತಾರೆ, ಕೊಂದು ಹಾಕುತ್ತಾರೆ. ಅವರಲ್ಲಿರುವ ಸರ್ವಸ್ವವನ್ನು ಕಿತ್ತುಕೊಳ್ಳುವರು.॥36॥
(ಶ್ಲೋಕ-37)
ಮೂಲಮ್
ಏವಂ ವಿಕತ್ಥಮಾನಸ್ಯ ಕುಪಿತೋ ದೇವಕೀಸುತಃ ।
ರಜಕಸ್ಯ ಕರಾಗ್ರೇಣ ಶಿರಃ ಕಾಯಾದಪಾತಯತ್ ॥
ಅನುವಾದ
ಆ ಮಡಿವಾಳನ ಮಿತಿಮೀರಿದ ತಲೆ ಹರಟೆಯ ಮಾತನ್ನು ಕೇಳಿದಾಗ ಭಗವಾನ್ ಶ್ರೀಕೃಷ್ಣನು ಕೊಂಚ ಕುಪಿತನಾಗಿ ಕೈಯಿಂದ ಒಂದು ಏಟು ಹೊಡೆದು ತಲೆಯನ್ನು ದೇಹದಿಂದ ಬೇರ್ಪಡಿಸಿದನು. ॥37॥
(ಶ್ಲೋಕ-38)
ಮೂಲಮ್
ತಸ್ಯಾನುಜೀವಿನಃ ಸರ್ವೇ ವಾಸಃ ಕೋಶಾನ್ ವಿಸೃಜ್ಯ ವೈ ।
ದುದ್ರುವುಃ ಸರ್ವತೋ ಮಾರ್ಗಂ ವಾಸಾಂಸಿ ಜಗೃಹೇಚ್ಯುತಃ ॥
ಅನುವಾದ
ಇದನ್ನು ನೋಡಿದ ಆ ಅಗಸನ ಅನುಯಾಯಿಗಳು ಬಟ್ಟೆಗಳ ಮೂಟೆಯನ್ನು ಅಲ್ಲೆ ಬಿಸುಟು ದಿಕ್ಕಾಪಾಲಾಗಿ ಓಡಿ ಹೋದರು. ಭಗವಂತನು ಆ ವಸ್ತ್ರಗಳನ್ನು ಎತ್ತಿಕೊಂಡನು. ॥38॥
(ಶ್ಲೋಕ-39)
ಮೂಲಮ್
ವಸಿತ್ವಾತ್ಮಪ್ರಿಯೇ ವಸೇ ಕೃಷ್ಣಃ ಸಂಕರ್ಷಣಸ್ತಥಾ ।
ಶೇಷಾಣ್ಯಾದತ್ತ ಗೋಪೇಭ್ಯೋ ವಿಸೃಜ್ಯ ಭುವಿ ಕಾನಿಚಿತ್ ॥
ಅನುವಾದ
ಶ್ರೀಕೃಷ್ಣ-ಬಲರಾಮರು ತಮಗೆ ಪ್ರಿಯವೆನಿಸಿದ ವಸ್ತ್ರಗಳನ್ನು ಉಟ್ಟುಕೊಂಡರು. ಉಳಿದ ಬಟ್ಟೆಗಳನ್ನು ಜೊತೆಯವರಾದ ಗೋಪಬಾಲಕರಿಗೆ ಹಂಚಿದರು ಹಾಗೂ ಉಳಿದವುಗಳನ್ನು ಅಲ್ಲೇ ಬಿಟ್ಟು ಮುಂದಕ್ಕೆ ನಡೆದರು. ॥39॥
(ಶ್ಲೋಕ-40)
ಮೂಲಮ್
ತತಸ್ತು ವಾಯಕಃ ಪ್ರೀತಸ್ತಯೋರ್ವೇಷಮಕಲ್ಪಯತ್ ।
ವಿಚಿತ್ರವರ್ಣೈಶ್ಚೈಲೇಯೈರಾಕಲ್ಪೈರನುರೂಪತಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಮತ್ತು ಬಲರಾಮರು ರಾಜ ಬೀದಿಯಲ್ಲಿ ಸ್ವಲ್ಪದೂರ ಹೋಗುತ್ತಲೇ ಅವರಿಗೆ ಓರ್ವದರ್ಜಿ ಭೆಟ್ಟಿಯಾದನು. ಭಗವಂತನ ಅನುಪಮ ಸೌಂದರ್ಯವನ್ನು ನೋಡಿ ಅವನಿಗೆ ತುಂಬಾ ಸಂತೋಷವಾಯಿತು. ಅವನು ಆ ಬಣ್ಣ-ಬಣ್ಣದ ಸುಂದರ ವಸ್ತ್ರಗಳನ್ನು ಅವರವರ ಶರೀರಕ್ಕೆ ಹೊಂದುವಂತೆ ಸರಿಪಡಿಸಿ ಸಿಂಗರಿಸಿದನು. ॥40॥
(ಶ್ಲೋಕ-41)
ಮೂಲಮ್
ನಾನಾಲಕ್ಷಣವೇಷಾಭ್ಯಾಂ ಕೃಷ್ಣರಾವೌ ವಿರೇಜತುಃ ।
ಸ್ವಲಂಕೃತೌ ಬಾಲಗಜೌ ಪರ್ವಣೀವ ಸಿತೇತರೌ ॥
ಅನುವಾದ
ವಿಧ-ವಿಧವಾದ ವಸ್ತ್ರಗಳಿಂದ ವಿಭೂಷಿತರಾದ ಸಹೋದರರಿಬ್ಬರೂ ಇನ್ನೂ ಹೆಚ್ಚು ಶೋಭಿಸತೊಡಗಿದರು. ಉತ್ಸವದ ಸಮಯದಲ್ಲಿ ಸಿಂಗರಿಸಲ್ಪಟ್ಟ ಕರಿಯ ಮತ್ತು ಬಿಳಿಯ ಆನೆಯ ಮರಿಗಳಂತೆ ಅವರು ಕಂಡು ಬರುತ್ತಿದ್ದರು. ॥41॥
(ಶ್ಲೋಕ-42)
ಮೂಲಮ್
ತಸ್ಯ ಪ್ರಸನ್ನೋ ಭಗವಾನ್ ಪ್ರಾದಾತ್ ಸಾರೂಪ್ಯಮಾತ್ಮನಃ ।
ಶ್ರಿಯಂ ಚ ಪರಮಾಂ ಲೋಕೇ ಬಲೈಶ್ವರ್ಯಸ್ಮೃತೀಂದ್ರಿಯಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಆ ದರ್ಜಿಯ ಮೇಲೆ ಅತ್ಯಂತ ಪ್ರಸನ್ನನಾದನು. ಅವನು ಅವನಿಗೆ ಇಹದಲ್ಲಿ ಐಶ್ವರ್ಯವನ್ನು, ಬಲವನ್ನೂ, ಅಧಿಕಾರವನ್ನೂ, ಸ್ಮರಣ ಶಕ್ತಿಯನ್ನೂ, ಇಂದ್ರಿಯ ಪಟುತ್ವವನ್ನು ಅನುಗ್ರಹಿಸಿ, ಅವಸಾನಾನಂತರ ತನ್ನ ಸಾರೂಪ್ಯಮುಕ್ತಿಯನ್ನು ಕರುಣಿಸಿದನು. ॥42॥
ಮೂಲಮ್
(ಶ್ಲೋಕ-43)
ತತಃ ಸುದಾಮ್ನೋ ಭವನಂ ಮಾಲಾಕಾರಸ್ಯ ಜಗ್ಮತುಃ ।
ತೌ ದೃಷ್ಟ್ವಾ ಸ ಸಮುತ್ಥಾಯ ನನಾಮ ಶಿರಸಾ ಭುವಿ ॥
ಅನುವಾದ
ಬಳಿಕ ಭಗವಾನ್ ಶ್ರೀಕೃಷ್ಣನು ಸುದಾಮನೆಂಬ ಹೂವಾಡಿಗನ ಮನೆಗೆ ಹೋದನು. ಜಗದಾನಂದಕರರಾದ ಸಹೋದರರಿಬ್ಬರನ್ನು ನೋಡುತ್ತಲೇ ಸುದಾಮನು ಎದ್ದ ನಿಂತು ತಲೆಬಾಗಿ ಸಾಷ್ಟಾಂಗ ನಮಸ್ಕಾರ ಮಾಡಿದನು. ॥43॥
(ಶ್ಲೋಕ-44)
ಮೂಲಮ್
ತಯೋರಾಸನಮಾನೀಯ ಪಾದ್ಯಂ ಚಾರ್ಘ್ಯಾರ್ಹಣಾದಿಭಿಃ ।
ಪೂಜಾಂ ಸಾನುಗಯೋಶ್ಚಕ್ರೇ ಸ್ರಕ್ ತಾಂಬೂಲಾನುಲೇಪನೈಃ ॥
ಅನುವಾದ
ಮತ್ತೆ ಅವರನ್ನು ಆಸನದಲ್ಲಿ ಕುಳ್ಳಿರಿಸಿ ಅವರ ಕೈ-ಕಾಲು ತೊಳೆದು ಗೋಪಬಾಲಕರು ಸೇರಿ ಎಲ್ಲರನ್ನು ಹೂವಿನಹಾರ, ತಾಂಬೂಲ-ಚಂದನಾದಿಗಳಿಂದ ಯಥೋಚಿತವಾಗಿ ಪೂಜಿಸಿದನು. ॥44॥
(ಶ್ಲೋಕ-45)
ಮೂಲಮ್
ಪ್ರಾಹ ನಃ ಸಾರ್ಥಕಂ ಜನ್ಮ ಪಾವಿತಂ ಚ ಕುಲಂ ಪ್ರಭೋ ।
ಪಿತೃದೇವರ್ಷಯೋ ಮಹ್ಯಂ ತುಷ್ಟಾ ಹ್ಯಾಗಮನೇನ ವಾಮ್ ॥
ಅನುವಾದ
ಬಳಿಕ ಎರಡೂ ಕೈಗಳನ್ನು ಜೋಡಿಸಿಕೊಂಡು ಪ್ರಾರ್ಥಿಸಿದನು - ಸ್ವಾಮಿ! ನಿಮ್ಮಿಬ್ಬರ ಶುಭಾಗಮನದಿಂದ ನಮ್ಮ ಜನ್ಮ ಪಾವನವಾಯಿತು. ನಮ್ಮ ಕುಲಪವಿತ್ರವಾಯಿತು. ಇಂದು ನಾನು ದೇವ-ಋಷಿ-ಪಿತೃ ಇವರ ಋಣದಿಂದ ಮುಕ್ತನಾದೆನು. ಅವರು ನಮ್ಮ ಮೇಲೆ ಸಂತುಷ್ಟರಾದರು. ॥45॥
(ಶ್ಲೋಕ-46)
ಮೂಲಮ್
ಭವಂತೌ ಕಿಲ ವಿಶ್ವಸ್ಯ ಜಗತಃ ಕಾರಣಂ ಪರಮ್ ।
ಅವತೀರ್ಣಾವಿಹಾಂಶೇನ ಕ್ಷೇಮಾಯ ಚ ಭವಾಯ ಚ ॥
ಅನುವಾದ
ನೀವಿಬ್ಬರೂ ಜಗತ್ತಿನ ಪರಮಕಾರಣರಾಗಿದ್ದೀರಿ. ನೀವು ಪ್ರಪಂಚದ ಅಭ್ಯುದಯ (ಉನ್ನತಿ) ಮತ್ತು ನಿಃಶ್ರೇಯಸ (ಮೋಕ್ಷ)ಗಳಿಗೆ ಈ ಭೂಮಿಯಲ್ಲಿ ತಮ್ಮ ಜ್ಞಾನ, ಬಲ ಮೊದಲಾದ ಅಂಶಗಳಿಂದ ಅವತರಿಸಿರುವಿರಿ. ॥46॥
(ಶ್ಲೋಕ-47)
ಮೂಲಮ್
ನ ಹಿ ವಾಂ ವಿಷಮಾ ದೃಷ್ಟಿಃ ಸುಹೃದೋರ್ಜಗದಾತ್ಮನೋಃ ।
ಸಮಯೋಃ ಸರ್ವಭೂತೇಷು ಭಜಂತಂ ಭಜತೋರಪಿ ॥
ಅನುವಾದ
ನೀವು ಪ್ರೇಮಿಸುವವರನ್ನು ಪ್ರೇಮಿಸುವವರೂ, ಭಜಿಸುವವರನ್ನು ಭಜಿಸುವವರೂ ಆಗಿದ್ದರೂ ನಿಮ್ಮ ದೃಷ್ಟಿಯಲ್ಲಿ ವಿಷಮತೆ ಇಲ್ಲ. ಏಕೆಂದರೆ, ನೀವು ಸಮಸ್ತ ಜಗತ್ತಿನ ಪರಮ ಸುಹೃದರೂ, ಆತ್ಮವೂ ಆಗಿರುವಿರಿ. ನೀವು ಸಮಸ್ತ ಪ್ರಾಣಿ-ಪದಾರ್ಥಗಳಲ್ಲಿ ಸಮರೂಪದಿಂದ ನೆಲೆಸಿರುವಿರಿ. ॥47॥
(ಶ್ಲೋಕ-48)
ಮೂಲಮ್
ತಾವಾಜ್ಞಾಪಯತಂ ಭೃತ್ಯಂ ಕಿಮಹಂ ಕರವಾಣಿ ವಾಮ್ ।
ಪುಂಸೋತ್ಯನುಗ್ರಹೋ ಹ್ಯೇಷ ಭವದ್ಭಿರ್ಯನ್ನಿಯುಜ್ಯತೇ ॥
ಅನುವಾದ
ನಾನು ನಿಮ್ಮ ದಾಸನಾಗಿದ್ದೇನೆ. ನಾನು ನಿಮ್ಮಗಳ ಯಾವ ಸೇವೆಮಾಡಲಿ ಎಂಬುದನ್ನು ಆಜ್ಞಾಪಿಸಿರಿ. ಭಗವಂತ! ನೀನು ಜೀವಿಗಳಿಗೆ ಆಜ್ಞೆಯನ್ನಿತ್ತು, ಕಾರ್ಯದಲ್ಲಿ ತೊಡಗಿಸುವುದು ನಿನ್ನ ಮಹದನುಗ್ರಹವಾಗಿದೆ, ಪೂರ್ಣ ಕೃಪಾಪ್ರಸಾದವಾಗಿದೆ. ॥48॥
(ಶ್ಲೋಕ-49)
ಮೂಲಮ್
ಇತ್ಯಭಿಪ್ರೇತ್ಯ ರಾಜೇಂದ್ರ ಸುದಾಮಾ ಪ್ರೀತಮಾನಸಃ ।
ಶಸ್ತೈಃ ಸುಗಂಧೈಃ ಕುಸುಮೈರ್ಮಾಲಾ ವಿರಚಿತಾ ದದೌ ॥
ಅನುವಾದ
ರಾಜೇಂದ್ರ! ಸುದಾಮ ಹೂವಾಡಿಗನು ಹೀಗೆ ಪ್ರಾರ್ಥನೆಗೈದು ಭಗವಂತನ ಅಭಿಪ್ರಾಯವನ್ನು ತಿಳಿದು, ಅತ್ಯಂತ ಪ್ರೇಮಾನಂದದಿಂದ ಸುಂದರವಾದ ಹಾಗೂ ಸುಂಗಧಿತವಾದ ಪುಷ್ಪಗಳ ಹಾರಗಳನ್ನು ಅವರಿಗೆ ತೊಡಿಸಿದನು. ॥49॥
(ಶ್ಲೋಕ-50)
ಮೂಲಮ್
ತಾಭಿಃ ಸ್ವಲಂಕೃತೌ ಪ್ರೀತೌ ಕೃಷ್ಣರಾವೌ ಸಹಾನುಗೌ ।
ಪ್ರಣತಾಯ ಪ್ರಪನ್ನಾಯ ದದತುರ್ವರದೌ ವರಾನ್ ॥
ಅನುವಾದ
ಗೋಪಾಲಬಾಲಕರು ಹಾಗೂ ಬಲರಾಮನೊಂದಿಗೆ ಭಗವಾನ್ ಶ್ರೀಕೃಷ್ಣನು ಆ ಸುಂದರವಾದ ಮಾಲೆಗಳಿಂದ ಅಲಂಕೃತನಾಗಿ, ವರದಾಯಕನಾದ ಪ್ರಭುವು ಪ್ರಸನ್ನನಾಗಿ ಶರಣಾಗತನೂ, ವಿನೀತನೂ ಆದ ಸುದಾಮನಿಗೆ ಶ್ರೇಷ್ಠವಾದ ವರವನ್ನು ಕರುಣಿಸಿದನು. ॥50॥
(ಶ್ಲೋಕ-51)
ಮೂಲಮ್
ಸೋಪಿ ವವ್ರೇಚಲಾಂ ಭಕ್ತಿಂ ತಸ್ಮಿನ್ನೇವಾಖಿಲಾತ್ಮನಿ ।
ತದ್ಭಕ್ತೇಷು ಚ ಸೌಹಾರ್ದಂ ಭೂತೇಷು ಚ ದಯಾಂ ಪರಾಮ್ ॥
ಅನುವಾದ
ಸುದಾಮ ಹೂವಾಡಿಗನು ‘ನನಗೆ ಅವಿಚಲ ಭಕ್ತಿಯುಂಟಾಗಲಿ. ನಿನ್ನ ಭಕ್ತರೊಂದಿಗೆ ನನಗೆ ಸೌಹಾರ್ದ್ರ ಮಿತ್ರತೆಯ ಸಂಬಂಧ ಉಂಟಾಗಲಿ ಮತ್ತು ಸಮಸ್ತ ಪ್ರಾಣಿಗಳ ಕುರಿತು ಅಹೈತುಕವಾದ ದಯಾಭಾವವು ಇರಲಿ’ ಎಂಬ ವರವನ್ನು ಬೇಡಿದನು. ॥51॥
(ಶ್ಲೋಕ-52)
ಮೂಲಮ್
ಇತಿ ತಸ್ಮೈ ವರಂ ದತ್ತ್ವಾ ಶ್ರಿಯಂ ಚಾನ್ವಯವರ್ಧಿನೀಮ್ ।
ಬಲಮಾಯುರ್ಯಶಃ ಕಾಂತಿಂ ನಿರ್ಜಗಾಮ ಸಹಾಗ್ರಜಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಸುದಾಮನು ಬೇಡಿದ ವರವನ್ನು ಕೊಡುವುದರ ಜೊತೆಗೆ ವಂಶ ಪಾರಂಪರ್ಯದೊಂದಿಗೆ ಹೆಚ್ಚುತ್ತಿರುವ ಅತುಲ ಸಂಪತ್ತನ್ನೂ ಹಾಗೂ ಬಲ, ಆಯುಸ್ಸು, ಕೀರ್ತಿ, ಕಾಂತಿ ಇವುಗಳನ್ನು ಕರುಣಿಸಿದನು. ಬಳಿಕ ಭಗವಾನ್ ಶ್ರೀಕೃಷ್ಣನು ಬಲರಾಮನೊಂದಿಗೆ ಅಲ್ಲಿಂದ ಬೀಳ್ಕೊಂಡನು. ॥52॥
ಅನುವಾದ (ಸಮಾಪ್ತಿಃ)
ನಲವತ್ತೊಂದನೆಯ ಅಧ್ಯಾಯವು ಮುಗಿಯಿತು. ॥41॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ಪುರಪ್ರವೇಶೋ ನಾಮ ಏಕಚತ್ವಾರಿಂಶೋಽಧ್ಯಾಯಃ ॥41॥