[ನಲವತ್ತನೆಯ ಅಧ್ಯಾಯ]
ಭಾಗಸೂಚನಾ
ಅಕ್ರೂರನು ಮಾಡಿದ ಭಗವಾನ್ ಶ್ರೀಕೃಷ್ಣನ ಸ್ತುತಿ
(ಶ್ಲೋಕ-1)
ಮೂಲಮ್ (ವಾಚನಮ್)
ಅಕ್ರೂರ ಉವಾಚ
ಮೂಲಮ್
ನತೋಸ್ಮ್ಯಹಂ ತ್ವಾಖಿಲಹೇತುಹೇತುಂ
ನಾರಾಯಣಂ ಪೂರುಷಮಾದ್ಯಮವ್ಯಯಮ್ ।
ಯನ್ನಾಭಿಜಾತಾದರವಿಂದ ಕೋಶಾದ್
ಬ್ರಹ್ಮಾವಿರಾಸೀದ್ಯತ ಏಷ ಲೋಕಃ ॥
ಅನುವಾದ
ಅಕ್ರೂರನು ಹೇಳಿದನು — ಪ್ರಭುವೇ! ನೀನು ಪ್ರಕೃತಿಯೇ ಮೊದಲಾದ ಸಮಸ್ತ ಕಾರಣಗಳಿಗೆ ಪರಮ ಕಾರಣನಾಗಿರುವೆ. ನೀನೆ ಅವಿನಾಶಿಯಾದ ಪುರುಷೋತ್ತಮ ನಾರಾಯಣನಾಗಿರುವೆ. ನಿನ್ನ ನಾಭಿಕಮಲದಿಂದ ಈ ಚರಾಚರ ಜಗತ್ತನ್ನು ಸೃಷ್ಟಿಸಿದ ಆ ಬ್ರಹ್ಮದೇವರ ಆವಿರ್ಭಾವವಾಗಿರುವುದು. ಅಂತಹ ನಿನ್ನ ಚರಣಗಳಿಗೆ ನಾನು ವಂದಿಸುತ್ತೇನೆ. ॥1॥
(ಶ್ಲೋಕ-2)
ಮೂಲಮ್
ಭೂಸ್ತೋಯಮಗ್ನಿಃ ಪವನಃ ಖಮಾದಿ-
ರ್ಮಹಾನಜಾದಿರ್ಮನ ಇಂದ್ರಿಯಾಣಿ ।
ಸರ್ವೇಂದ್ರಿಯಾರ್ಥಾ ವಿಬುಧಾಶ್ಚ ಸರ್ವೇ
ಯೇ ಹೇತವಸ್ತೇ ಜಗತೋಂಗಭೂತಾಃ ॥
ಅನುವಾದ
ಜಗದೀಶ್ವರನೇ! ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ, ಅಹಂಕಾರ, ಮಹತ್ತತ್ತ್ವ, ಪ್ರಕೃತಿ, ಪುರುಷ, ಮನಸ್ಸು, ಇಂದ್ರಿಯಗಳು, ಇಂದ್ರಿಯಗಳ ವಿಷಯಗಳು, ಇಂದ್ರಿಯಗಳ ಅಧಿಷ್ಠಾತೃ ದೇವತೆಗಳು, ಸಮಸ್ತವಾದ ಚರಾಚರಾಜಗತ್ತು, ಅದರಲ್ಲಿ ನಡೆಯುವ ವ್ಯವಹಾರಗಳು ಇವೆಲ್ಲವೂ ನಿನ್ನ ಅವಯವಗಳೇ ಆಗಿವೆ. ॥2॥
(ಶ್ಲೋಕ-3)
ಮೂಲಮ್
ನೈತೇ ಸ್ವರೂಪಂ ವಿದುರಾತ್ಮನಸ್ತೇ
ಹ್ಯಜಾದಯೋನಾತ್ಮತಯಾ ಗೃಹೀತಾಃ ।
ಅಜೋನುಬದ್ಧಃ ಸ ಗುಣೈರಜಾಯಾ
ಗುಣಾತ್ಪರಂ ವೇದ ನ ತೇ ಸ್ವರೂಪಮ್ ॥
ಅನುವಾದ
ಇವೆಲ್ಲವೂ ನಿನ್ನ ಅವಯವಗಳೇ ಆಗಿದ್ದರೂ ನಿನ್ನ ಆತ್ಮ ಸ್ವರೂಪವನ್ನು ಅವು ತಿಳಿಯುವುದಿಲ್ಲ. ಪ್ರತ್ಯಕ್ಷಾದಿ ಪ್ರಮಾಣಗಳಿಗೆ ಒಳಗಾಗುವುದರಿಂದ ಪ್ರಕೃತಿ ಮತ್ತು ಪ್ರಕೃತಿಯಿಂದ ಉಂಟಾದ ಸಮಸ್ತ ಪದಾರ್ಥಗಳು ಅನಾತ್ಮವೇ ಆಗಿವೆ. ಬ್ರಹ್ಮದೇವರು ನಿನ್ನ ಸ್ವರೂಪವೇ ಆಗಿದ್ದರೂ ಪ್ರಕೃತಿಯ ಗುಣವಾದ ರಜಸ್ಸಿನಿಂದ ಆವಿರ್ಭೂತನಾಗಿದ್ದಾನೆ. ಅದರಿಂದಾಗಿ ಅವನೂ ಕೂಡ ಗುಣಾತೀತನಾದ ನಿನ್ನ ಆತ್ಮ ಸ್ವರೂಪವನ್ನು ತಿಳಿದವನಲ್ಲ. ॥3॥
(ಶ್ಲೋಕ-4)
ಮೂಲಮ್
ತ್ವಾಂ ಯೋಗಿನೋ ಯಜಂತ್ಯದ್ಧಾ ಮಹಾಪುರುಷಮೀಶ್ವರಮ್ ।
ಸಾಧ್ಯಾತ್ಮಂ ಸಾಧಿಭೂತಂ ಚ ಸಾಧಿದೈವಂ ಚ ಸಾಧವಃ ॥
ಅನುವಾದ
ಸಾಧುಸತ್ಪುರಷರೂ, ಯೋಗಿಗಳೂ ತಮ್ಮ ಅಂತಃಕರಣದಲ್ಲಿ ನೆಲೆಸಿದ ಅಂತರ್ಯಾಮಿಯ ರೂಪದಲ್ಲಿಯೂ, ಸಮಸ್ತ ಭೂತ-ಭೌತಿಕ ಪದಾರ್ಥಗಳಲ್ಲಿಯೂ ವ್ಯಾಪ್ತನಾದ ಪರಮಾತ್ಮನ ರೂಪದಲ್ಲಿಯೂ, ಸೂರ್ಯ, ಚಂದ್ರ, ಅಗ್ನಿ ಮೊದಲಾದ ದೇವತೆಗಳಲ್ಲಿ ಇಷ್ಟದೇವತೆಯ ರೂಪದಲ್ಲಿಯೂ, ಅವರ ಸಾಕ್ಷಿಯಾದ ಮಹಾಪುರುಷ ಹಾಗೂ ನಿಯಾಮಕ ಈಶ್ವರನ ರೂಪದಲ್ಲಿಯೂ ಸಾಕ್ಷಾತ್ತಾಗಿ ನಿನ್ನನ್ನೇ ಉಪಾಸನೆ ಮಾಡುತ್ತಾರೆ. ॥4॥
(ಶ್ಲೋಕ-5)
ಮೂಲಮ್
ತ್ರಯ್ಯಾ ಚ ವಿದ್ಯಯಾ ಕೇಚಿತ್ ತ್ವಾಂ ವೈ ವೈತಾನಿಕಾ ದ್ವಿಜಾಃ ।
ಯಜಂತೇ ವಿತತೈರ್ಯಜ್ಞೈರ್ನಾನಾರೂಪಾಮರಾಖ್ಯಯಾ ॥
ಅನುವಾದ
ಯಾಜ್ಞಿಕರಾದ ಕೆಲವು ಬ್ರಾಹ್ಮಣರು ಕರ್ಮಕಾಂಡವನ್ನು ಪ್ರತಿಪಾದಿಸುವ ವೇದತ್ರಯಗಳ ಮೂಲಕವಾಗಿ ವಿಸ್ತಾರವಾದ ಯಜ್ಞಗಳಿಂದ ನಾನಾರೂಪಗಳುಳ್ಳ ದೇವತೆಗಳ ಹೆಸರಿನಿಂದ ನಿನ್ನನ್ನೇ ಪೂಜಿಸುತ್ತಾರೆ. ॥5॥
(ಶ್ಲೋಕ-6)
ಮೂಲಮ್
ಏಕೇ ತ್ವಾಖಿಲಕರ್ಮಾಣಿ ಸಂನ್ಯಸ್ಯೋಪಶಮಂ ಗತಾಃ ।
ಜ್ಞಾನಿನೋ ಜ್ಞಾನಯಜ್ಞೇನ ಯಜಂತಿ ಜ್ಞಾನವಿಗ್ರಹಮ್ ॥
ಅನುವಾದ
ಅನೇಕ ಜ್ಞಾನಿಗಳು ತಮ್ಮ ಸಮಸ್ತ ಕರ್ಮಗಳನ್ನು ಸನ್ಯಸ್ತವಾಗಿಸಿ, ಶಾಂತ ಭಾವದಲ್ಲಿ ಸ್ಥಿತರಾಗುತ್ತಾರೆ. ಅವರು ಹೀಗೆ ಜ್ಞಾನಯಜ್ಞದ ಮೂಲಕವಾಗಿ ಜ್ಞಾನಸ್ವರೂಪನಾದ ನಿನ್ನನ್ನೇ ಆರಾಧಿಸುತ್ತಾರೆ.॥6॥
(ಶ್ಲೋಕ-7)
ಮೂಲಮ್
ಅನ್ಯೇ ಚ ಸಂಸ್ಕೃತಾತ್ಮಾನೋ ವಿಧಿನಾಭಿಹಿತೇನ ತೇ ।
ಯಜಂತಿ ತ್ವನ್ಮಯಾಸ್ತ್ವಾಂ ವೈ ಬಹುಮೂರ್ತ್ಯೇಕಮೂರ್ತಿಕಮ್ ॥
ಅನುವಾದ
ಇನ್ನೂ ಅನೇಕರು ಸಂಸ್ಕಾರಗಳಿಂದ ಶುದ್ಧಚಿತ್ತವುಳ್ಳ ವೈಷ್ಣವ ಭಕ್ತರು ನಿನ್ನಿಂದ ಉಪದಿಷ್ಟವಾದ ಪಾಂಚರಾತ್ರ ಮೊದಲಾದ ವಿಧಿಗಳಿಂದ ತನ್ಮಯರಾಗಿ ನಿನ್ನ ಚತುರ್ವ್ಯೆಹಾದಿ ಅನೇಕ ರೂಪಗಳನ್ನು ಮತ್ತು ನಾರಾಯಣ ಸ್ವರೂಪವಾದ ಒಂದೇ ಸ್ವರೂಪವನ್ನು ಪೂಜಿಸುತ್ತಾರೆ. ॥7॥
ಮೂಲಮ್
(ಶ್ಲೋಕ-8)
ತ್ವಾಮೇವಾನ್ಯೇ ಶಿವೋಕ್ತೇನ ಮಾರ್ಗೇಣ ಶಿವರೂಪಿಣಮ್ ।
ಬಹ್ವಾಚಾರ್ಯವಿಭೇದೇನ ಭಗವನ್ ಸಮುಪಾಸತೇ ॥
ಅನುವಾದ
ಭಗವಂತನೇ! ಮತ್ತೆ ಕೆಲವರು ಶಿವನಿಂದ ಹೇಳಲ್ಪಟ್ಟಿರುವ ಶೈವಾಗಮದ ವಿಧಾನದಿಂದ ಹಲವಾರು ಭೇದಗಳುಳ್ಳ ಶೈವ ಪಾಶುಪತಾದಿ ಶಿವಸ್ವರೂಪವಾದ ನಿನ್ನನ್ನೇ ಪೂಜಿಸುತ್ತಾರೆ. ॥8॥
(ಶ್ಲೋಕ-9)
ಮೂಲಮ್
ಸರ್ವ ಏವ ಯಜಂತಿ ತ್ವಾಂ ಸರ್ವದೇವಮಯೇಶ್ವರಮ್ ।
ಯೇಪ್ಯನ್ಯದೇವತಾಭಕ್ತಾ ಯದ್ಯಪ್ಯನ್ಯಧಿಯಃ ಪ್ರಭೋ ॥
ಅನುವಾದ
ಸ್ವಾಮಿ! ನಿನ್ನಿಂದ ಭಿನ್ನರೆಂದು ಭಾವಿಸಿ ಹಲವಾರು ದೇವತೆಗಳನ್ನು ಪೂಜಿಸುವ ಅನ್ಯದೇವತಾ ಭಕ್ತರೂ ಕೂಡ ವಾಸ್ತವವಾಗಿ ನಿನ್ನನ್ನೇ ಆರಾಧಿಸುತ್ತಾರೆ. ಏಕೆಂದರೆ, ನೀನೇ ಸಮಸ್ತ ದೇವತೆಗಳ ರೂಪದಲ್ಲಿರುವ ಸರ್ವೇಶ್ವರನಾಗಿರುವೆ. ॥9॥
(ಶ್ಲೋಕ-10)
ಮೂಲಮ್
ಯಥಾದ್ರಿಪ್ರಭವಾ ನದ್ಯಃ ಪರ್ಜನ್ಯಾಪೂರಿತಾಃ ಪ್ರಭೋ ।
ವಿಶಂತಿ ಸರ್ವತಃ ಸಿಂಧುಂ ತದ್ವತ್ತ್ವಾಂ ಗತಯೋಂತತಃ ॥
ಅನುವಾದ
ಪ್ರಭುವೇ! ಪರ್ವತದಲ್ಲಿ ಹುಟ್ಟಿದ ನದಿಗಳು ಮಳೆಯ ನೀರಿನಿಂದ ತುಂಬಿ ಹರಿಯುತ್ತಾ ಕೊನೆಗೆ ಸಮುದ್ರವನ್ನೇ ಸೇರುವಂತೆಯೇ ಶ್ರುತಿ ಸ್ಮೃತಿ-ಪುರಾಣಗಳಲ್ಲಿ ಹೇಳಿರುವ ಎಲ್ಲ ಉಪಾಸನಾ ಮಾರ್ಗಗಳು ನಿನ್ನಲ್ಲಿಯೇ ಬಂದು ಸೇರುವುವು. ॥10॥
(ಶ್ಲೋಕ-11)
ಮೂಲಮ್
ಸತ್ತ್ವಂ ರಜಸ್ತಮ ಇತಿ ಭವತಃ ಪ್ರಕೃತೇರ್ಗುಣಾಃ ।
ತೇಷು ಹಿ ಪ್ರಾಕೃತಾಃ ಪ್ರೋತಾ ಆಬ್ರಹ್ಮಸ್ಥಾವರಾದಯಃ ॥
ಅನುವಾದ
ದೇವದೇವನೇ! ಸತ್ತ್ವ-ರಜಸ್ತಮಗಳೆಂಬುವು ನಿನ್ನ ಪ್ರಕೃತಿಯ ಗುಣಗಳಾಗಿವೆ. ಬ್ರಹ್ಮನಿಂದ ಹಿಡಿದು ಸಕಲ ಚರಾಚರ ಪ್ರಾಣಿಗಳೂ ಕೂಡ ಬಟ್ಟೆಯಲ್ಲಿ ನೂಲು ಹಾಸುಹೊಕ್ಕಾಗಿರುವಂತೆ ತ್ರಿಗುಣಗಳಲ್ಲಿ ಓತಪ್ರೋತವಾಗಿವೆ. ॥11॥
(ಶ್ಲೋಕ-12)
ಮೂಲಮ್
ತುಭ್ಯಂ ನಮಸ್ತೇಸ್ತ್ವವಿಷಕ್ತದೃಷ್ಟಯೇ
ಸರ್ವಾತ್ಮನೇ ಸರ್ವಧಿಯಾಂ ಚ ಸಾಕ್ಷಿಣೇ ।
ಗುಣಪ್ರವಾಹೋಯಮವಿದ್ಯಯಾ ಕೃತಃ
ಪ್ರವರ್ತತೇ ದೇವನೃತಿರ್ಯಗಾತ್ಮಸು ॥
ಅನುವಾದ
ನೀನು ಸರ್ವ ಸ್ವರೂಪನಾಗಿದ್ದರೂ ಅವುಗಳಲ್ಲಿ ಲಿಪ್ತನಾಗಿಲ್ಲ. ನೀನು ನಿರ್ಲಿಪ್ತನು. ನೀನು ಸಮಸ್ತರ ಬುದ್ಧಿಗಳಲ್ಲಿಯೂ ಸಾಕ್ಷಿ-ಸ್ವರೂಪನಾಗಿರುವೆ. ಗುಣಗಳ ಪ್ರವಾಹದಿಂದ ಉಂಟಾದ ಈ ಸೃಷ್ಟಿಯು ಅಜ್ಞಾನಮೂಲಕವೇ ಆಗಿದೆ ಮತ್ತು ದೇವ-ಮನುಷ್ಯ-ತಿರ್ಯಕ್ ಪ್ರಾಣಿಗಳಲ್ಲಿಯೂ ವ್ಯಾಪ್ತವಾಗಿದೆ. ಆದರೆ ನೀನು ಮಾತ್ರ ಇವೆಲ್ಲದರಿಂದ ಬೇರೆಯೆ ಆಗಿರುವೆ. ಗುಣಾತೀತನಾಗಿರುವೆ. ಅಂತಹ ನಿನಗೆ ನಮಸ್ಕರಿಸುತ್ತೇನೆ. ॥12॥
(ಶ್ಲೋಕ-13)
ಮೂಲಮ್
ಅಗ್ನಿರ್ಮುಖಂ ತೇವನಿರಂಘ್ರಿರೀಕ್ಷಣಂ
ಸೂರ್ಯೋ ನಭೋ ನಾಭಿರಥೋ ದಿಶಃ ಶ್ರುತಿಃ ।
ದ್ಯೌಃ ಕಂ ಸುರೇಂದ್ರಾಸ್ತವ ಬಾಹವೋರ್ಣವಾಃ
ಕುಕ್ಷಿರ್ಮರುತ್ ಪ್ರಾಣಬಲಂ ಪ್ರಕಲ್ಪಿತಮ್ ॥
ಅನುವಾದ
ಅಗ್ನಿಯು ನಿನ್ನ ಮುಖವಾಗಿದೆ. ಪೃಥ್ವಿಯು ಚರಣವಾಗಿದೆ. ಸೂರ್ಯ-ಚಂದ್ರರು ಕಣ್ಣುಗಳಾಗಿವೆ. ಆಕಾಶವೇ ನಾಭಿಯಾಗಿದೆ. ದಿಕ್ಕುಗಳು ಕಿವಿಗಳಾಗಿವೆ. ಸ್ವರ್ಗವೇ ಶಿರವಾಗಿದೆ. ದೇವೇಂದ್ರ ಗಣಗಳು ನಿನ್ನ ಭುಜಗಳಾಗಿವೆ. ಸಮುದ್ರವು ಹೊಟ್ಟೆಯಾಗಿದೆ. ವಾಯುವು ನಿನ್ನ ಪ್ರಾಣಶಕ್ತಿಯ ರೂಪದಲ್ಲಿ ಉಪಾಸನೆಗಾಗಿ ಕಲ್ಪಿತವಾಗಿದೆ. ॥13॥
(ಶ್ಲೋಕ-14)
ಮೂಲಮ್
ರೋಮಾಣಿ ವೃಕ್ಷೌಷಧಯಃ ಶಿರೋರುಹಾ
ಮೇಘಾಃಪರಸ್ಯಾಸ್ಥಿನಖಾನಿ ತೇದ್ರಯಃ ।
ನಿಮೇಷಣಂ ರಾತ್ರ್ಯಹನೀ ಪ್ರಜಾಪತಿ-
ರ್ಮೇಢ್ರಸ್ತು ವೃಷ್ಟಿಸ್ತವ ವೀರ್ಯಮಿಷ್ಯತೇ ॥
ಅನುವಾದ
ವೃಕ್ಷಗಳು ಮತ್ತು ಔಷಧಿಗಳು ನಿನ್ನ ರೋಮಗಳಾಗಿವೆ. ಮೇಘಗಳು ತಲೆಕೂದಲುಗಳಾಗಿವೆ. ಪರ್ವತಗಳು ನಿನ್ನ ಮೂಳೆಗಳೂ, ಉಗುರುಗಳೂ ಆಗಿವೆ. ಹಗಲು-ರಾತ್ರಿಗಳು ರೆಪ್ಪೆಗಳನ್ನು ಮುಚ್ಚಿ ತೆರೆಯುವುದಾಗಿದೆ. ಪ್ರಜಾಪತಿಯೆ ಜನನೇಂದ್ರಿಯವಾಗಿದ್ದು, ಮಳೆಯೇ ವೀರ್ಯವಾಗಿದೆ. ॥14॥
(ಶ್ಲೋಕ-15)
ಮೂಲಮ್
ತ್ವಯ್ಯವ್ಯಯಾತ್ಮನ್ ಪುರುಷೇ ಪ್ರಕಲ್ಪಿತಾ
ಲೋಕಾಃ ಸಪಾಲಾ ಬಹುಜೀವಸಂಕುಲಾಃ ।
ಯಥಾ ಜಲೇ ಸಂಜಿಹತೇ ಜಲೌಕಸೋ-
ಪ್ಯುದುಂಬರೇ ವಾ ಮಶಕಾ ಮನೋಮಯೇ ॥
ಅನುವಾದ
ಅವಿನಾಶಿಯಾದ ಪರಮಾತ್ಮನೇ! ನೀರಿನಲ್ಲಿ ಕೋಟಿ-ಕೋಟಿ ಜಲಚರಗಳಿರುವಂತೆ, ಅತ್ತಿಯ ಹಣ್ಣಿನಲ್ಲಿ ನೂರಾರು ಸಣ್ಣ ಸಣ್ಣ ಜೀವಿಗಳಿರುವಂತೆ ಉಪಾಸನೆಗಾಗಿ ಸ್ವೀಕರಿಸಿಕೊಂಡ ನಿನ್ನ ಮನೋಮಯ ಪುರುಷರೂಪದಲ್ಲಿ ಅನೇಕ ಪ್ರಕಾರದ ಜೀವ-ಜಂತುಗಳಿಂದ ತುಂಬಿದ ಲೋಕಗಳು ಮತ್ತು ಲೋಕ ಪಾಲಕರು ಕಲ್ಪಿತವಾಗಿವೆ. ॥15॥
(ಶ್ಲೋಕ-16)
ಮೂಲಮ್
ಯಾನಿ ಯಾನೀಹ ರೂಪಾಣಿ ಕ್ರೀಡನಾರ್ಥಂ ಬಿಭರ್ಷಿ ಹಿ ।
ತೈರಾಮೃಷ್ಟಶುಚೋ ಲೋಕಾ ಮುದಾ ಗಾಯಂತಿ ತೇ ಯಶಃ ॥
ಅನುವಾದ
ನೀನು ಲೀಲೆಗಾಗಿ ಈ ಲೋಕದಲ್ಲಿ ಯಾವ ಯಾವ ರೂಪಗಳನ್ನು ಧರಿಸುವೆಯೋ, ಆ ಅವತಾರಗಳೆಲ್ಲ ಜನರ ಶೋಕ-ಮೋಹಗಳನ್ನು ನಾಶವಾಗಿಸುವುವು. ಅವರೆಲ್ಲರೂ ಅತಿ ಆನಂದದಿಂದ ನಿನ್ನ ನಿರ್ಮಲ ಕೀರ್ತಿಯನ್ನು ಕೊಂಡಾಡುವರು. ॥16॥
(ಶ್ಲೋಕ-17)
ಮೂಲಮ್
ನಮಃ ಕಾರಣಮತ್ಸ್ಯಾಯ ಪ್ರಲಯಾಬ್ಧಿಚರಾಯ ಚ ।
ಹಯಶೀರ್ಷ್ಣೇ ನಮಸ್ತುಭ್ಯಂ ಮಧುಕೈಟಭಮೃತ್ಯವೇ ॥
ಅನುವಾದ
ಪ್ರಭುವೇ! ಪ್ರಳಯಕಾಲದಲ್ಲಿ ಏಕಾರ್ಣವವಾಗಿದ್ದ ಸಮುದ್ರದಲ್ಲಿ ಓಡುತ್ತಿದ್ದ ಜಗತ್ಕಾರಣವಾದ ಮತ್ಸ್ಯಮೂರ್ತಿಗೆ ನಮಸ್ಕರಿಸುತ್ತೇನೆ. ಹಯಗ್ರೀವರೂಪಿಯಾಗಿ ಮಧುಕೈಟಭರಿಗೆ ಮೃತ್ಯುವಾದ ನಿನಗೆ ನಮಸ್ಕರಿಸುತ್ತೇನೆ. ॥17॥
(ಶ್ಲೋಕ-18)
ಮೂಲಮ್
ಅಕೂಪಾರಾಯ ಬೃಹತೇ ನಮೋ ಮಂದರಧಾರಿಣೇ ।
ಕ್ಷಿತ್ಯುದ್ಧಾರವಿಹಾರಾಯ ನಮಃ ಸೂಕರಮೂರ್ತಯೇ ॥
ಅನುವಾದ
ಭಗವಂತನೇ! ನೀನೇ ವಿಶಾಲವಾದ ಕೂರ್ಮರೂಪವನ್ನು ಧರಿಸಿ ಮಂದರ ಪರ್ವತವನ್ನು ಬೆನ್ನ ಮೇಲೆ ಹೊತ್ತಿರುವ ನಿನಗೆ ನಮಸ್ಕರಿಸುತ್ತೇನೆ. ನೀನೇ ಭೂದೇವಿಯನ್ನು ಉದ್ಧರಿಸಲು ವರಾಹನಾಗಿ ಅವತರಿಸಿದ ನಿನಗೆ ನಮಸ್ಕರಿಸುತ್ತೇನೆ. ॥18॥
(ಶ್ಲೋಕ-19)
ಮೂಲಮ್
ನಮಸ್ತೇದ್ಭುತಸಿಂಹಾಯ ಸಾಧುಲೋಕಭಯಾಪಹ ।
ವಾಮನಾಯ ನಮಸ್ತುಭ್ಯಂ ಕ್ರಾಂತತ್ರಿಭುವನಾಯ ಚ ॥
ಅನುವಾದ
ಸತ್ಪುರುಷರ ಭಯವನ್ನು ಹೋಗಲಾಡಿಸುವ ಪ್ರಭುವೇ! ನಿನ್ನ ಆ ಅಲೌಕಿಕ ನರಸಿಂಹರೂಪಕ್ಕೆ ನಮೋ ನಮಃ. ವಾಮನರೂಪವನ್ನು ಧರಿಸಿ ಮೂರು ಹೆಜ್ಜೆಗಳಿಂದ ಮೂರು ಲೋಕಗಳನ್ನು ಅಳೆದಂತಹ ನಿನಗೆ ನಮಸ್ಕಾರವು. ॥19॥
(ಶ್ಲೋಕ-20)
ಮೂಲಮ್
ನಮೋ ಭೃಗೂಣಾಂ ಪತಯೇ ದೃಪ್ತಕ್ಷತವನಚ್ಛಿದೇ ।
ನಮಸ್ತೇ ರಘುವರ್ಯಾಯ ರಾವಣಾಂತಕರಾಯ ಚ ॥
ಅನುವಾದ
ದುರಹಂಕಾರಿಗಳಾದ ಕ್ಷತ್ರಿಯರೆಂಬ ಅರಣ್ಯವನ್ನೇ ಕತ್ತರಿಸಿ ಹಾಕಿದ ಭೃಗುಶ್ರೇಷ್ಠನಾದ ಪರಶುರಾಮನಿಗೆ ನಮಸ್ಕರಿಸುತ್ತೇನೆ. ರಘುವಂಶದಲ್ಲಿ ಶ್ರೀರಾಮನಾಗಿ ಅವತರಿಸಿದ ನಿನಗೆ ನಮಸ್ಕರಿಸುತ್ತೇನೆ. ॥20॥
(ಶ್ಲೋಕ-21)
ಮೂಲಮ್
ನಮಸ್ತೇ ವಾಸುದೇವಾಯ ನಮಃ ಸಂಕರ್ಷಣಾಯ ಚ ।
ಪ್ರದ್ಯುಮ್ನಾಯಾನಿರುದ್ಧಾಯ ಸಾತ್ವತಾಂ ಪತಯೇ ನಮಃ ॥
ಅನುವಾದ
ವಾಸುದೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧರೆಂಬ ಚತುರ್ವ್ಯೆಹ ಸ್ವರೂಪನಾಗಿರುವ ಹಾಗೂ ಯದುವಂಶೀಯರಿಗೆ ಒಡೆಯನಾದ ನಿನಗೆ ನಮಸ್ಕರಿಸುತ್ತೇನೆ. ॥21॥
(ಶ್ಲೋಕ-22)
ಮೂಲಮ್
ನಮೋ ಬುದ್ಧಾಯ ಶುದ್ಧಾಯ ದೈತ್ಯದಾನವಮೋಹಿನೇ ।
ಮ್ಲೇಚ್ಛಪ್ರಾಯಕ್ಷತ್ರಹಂತ್ರೇ ನಮಸ್ತೇ ಕಲ್ಕಿರೂಪಿಣೇ ॥
ಅನುವಾದ
ದೈತ್ಯ-ದಾನವರನ್ನು ವಿಮೋಹಗೊಳಿಸಲು ನೀನು ಶುದ್ದ ಅಹಿಂಸಾ ಮಾರ್ಗದ ಪ್ರವರ್ತಕನಾದ ಬುದ್ಧ ರೂಪವನ್ನು ಸ್ವೀಕರಿಸುವೆ. ಅಂತಹ ನಿನಗೆ ನಮಸ್ಕಾರವು. ಪೃಥ್ವಿಯಲ್ಲಿ ಕ್ಷತ್ರಿಯರು ಮ್ಲೇಚ್ಛಪ್ರಾಯರಾದಾಗ ಅವರನ್ನು ನಾಶಪಡಿಸಲು ನೀನೇ ಕಲ್ಕಿಯ ರೂಪದಿಂದ ಅವತರಿಸುವೆ. ಅಂತಹ ನಿನಗೆ ನಾನು ನಮಸ್ಕರಿಸುತ್ತೇನೆ. ॥22॥
(ಶ್ಲೋಕ-23)
ಮೂಲಮ್
ಭಗವನ್ಜೀವಲೋಕೋಯಂ ಮೋಹಿತಸ್ತವ ಮಾಯಯಾ ।
ಅಹಂಮಮೇತ್ಯಸದ್ಗ್ರಾಹೋ ಭ್ರಾಮ್ಯತೇ ಕರ್ಮವರ್ತ್ಮಸು ॥
ಅನುವಾದ
ಭಗವಂತನೇ! ಈ ಸಮಸ್ತ ಜೀವಿಗಳು ನಿನ್ನ ಮಾಯೆಯಿಂದ ಮೋಹಿತರಾಗಿದ್ದಾರೆ. ಈ ಮೋಹದಿಂದಲೇ ನಾನು-ನನ್ನದೆಂಬ ದುರಾಗ್ರಹಕ್ಕೆ ಒಳಗಾಗಿ ಕರ್ಮಮಾರ್ಗದಲ್ಲಿ ಅಲೆಯುತ್ತಿದ್ದಾರೆ. ॥23॥
(ಶ್ಲೋಕ-24)
ಮೂಲಮ್
ಅಹಂ ಚಾತ್ಮಾತ್ಮಜಾಗಾರದಾರಾರ್ಥಸ್ವಜನಾದಿಷು ।
ಭ್ರಮಾಮಿ ಸ್ವಪ್ನಕಲ್ಪೇಷು ಮೂಢಃ ಸತ್ಯಧಿಯಾ ವಿಭೋ ॥
ಅನುವಾದ
ವಿಭುವೇ! ಸ್ವಪ್ನದಲ್ಲಿ ಕಾಣುವ ಪದಾರ್ಥಗಳಂತಿರುವ ದೇಹ-ಗೇಹ, ಪತ್ನೀ-ಪುತ್ರರು, ಧನ-ಸ್ವಜನ ಇವೆಲ್ಲವನ್ನು ಮೂಢನಾದ ನಾನೂ ಕೂಡ ಸತ್ಯವೆಂದೇ ತಿಳಿದು ಭ್ರಮಿಸಿ ವಿಮೋಹಿತನಾಗಿದ್ದೇನೆ. ॥24॥
(ಶ್ಲೋಕ-25)
ಮೂಲಮ್
ಅನಿತ್ಯಾನಾತ್ಮದುಃಖೇಷು ವಿಪರ್ಯಯಮತಿರ್ಹ್ಯಹಮ್ ।
ದ್ವಂದ್ವಾರಾಮಸ್ತಮೋವಿಷ್ಟೋ ನ ಜಾನೇ ತ್ವಾತ್ಮನಃ ಪ್ರಿಯಮ್ ॥
ಅನುವಾದ
ನನ್ನ ಮೂರ್ಖತೆಯನ್ನಾದರೂ ನೋಡು. ಪ್ರಭುವೇ! ಅನಿತ್ಯ ವಸ್ತುಗಳನ್ನು ನಿತ್ಯವೆಂದೂ, ಅನಾತ್ಮವನ್ನು ಆತ್ಮನೆಂದೂ, ದುಃಖವನ್ನು ಸುಖವೆಂದೂ ನಾನು ಭಾವಿಸಿದ್ದೇನೆ. ಅಜ್ಞಾನವಶದಿಂದ ಸಾಂಸಾರಿಕ ಸುಖ-ದುಃಖಗಳೇ ಮೊದಲಾದ ದ್ವಂದ್ವಗಳಲ್ಲಿ ಬಿದ್ದ ನಾನು ನಿಜವಾಗಿ ಪ್ರಿಯನಾಗಿರುವ ನಿನ್ನನ್ನೇ ಮರೆತಿದ್ದೇನೆ. ॥25॥
(ಶ್ಲೋಕ-26)
ಮೂಲಮ್
ಯಥಾಬುಧೋ ಜಲಂ ಹಿತ್ವಾ ಪ್ರತಿಚ್ಛನ್ನಂ ತದುದ್ಭವೈಃ ।
ಅಭ್ಯೇತಿ ಮೃಗತೃಷ್ಣಾಂ ವೈ ತದ್ವತ್ತ್ವಾಹಂ ಪರಾಙ್ಮುಖಃ ॥
ಅನುವಾದ
ಅಜ್ಞಾನಿಯಾದವನೊಬ್ಬನು ಸರೋವರದಲ್ಲಿ ನೀರಿನಿಂದಲೇ ಹುಟ್ಟಿದ ಪಾಚಿಯಿಂದ ಮರೆಯಾದ ನೀರನ್ನು ಗುರುತಿಸಲಾರದೆ, ಬಿಸಿಲ್ಗುದುರೆಯಿಂದ ದೂರದಲ್ಲಿ ನೀರಿನಂತೆ ಕಾಣುವ ಮರೀಚಿಕೆಯನ್ನು ಅರಸಿ ಹೋಗುವಂತೆಯೇ, ನಾನು ನಿನ್ನ ಮಾಯೆಯಿಂದ ಆವೃತನಾಗಿ ಹತ್ತಿರದಲ್ಲಿರುವ ಆನಂದಕಂದನಾದ ನಿನ್ನನ್ನು ಗುರುತಿಸಲಾರದೆ ನಿನ್ನಿಂದ ಪರಾಙ್ಮುಖನಾಗಿದ್ದೇನೆ. ॥26॥
(ಶ್ಲೋಕ-27)
ಮೂಲಮ್
ನೋತ್ಸಹೇಹಂ ಕೃಪಣಧೀಃ ಕಾಮಕರ್ಮಹತಂ ಮನಃ ।
ರೋದ್ಧುಂ ಪ್ರಮಾಥಿಭಿಶ್ಚಾಕ್ಷೈರ್ಹ್ರಿಯಮಾಣಮಿತಸ್ತತಃ ॥
ಅನುವಾದ
ಅತ್ಯಂತ ದುರ್ಬಲವಾದ ಬುದ್ಧಿಯುಳ್ಳ ನಾನು ಅತ್ಯಂತ ಬಲವತ್ತರವಾದ ಇಂದ್ರಿಯಗಳಿಂದ ಯದ್ವಾ-ತದ್ವಾ ಸೆಳೆಯಲ್ಪಡುತ್ತಿರುವ, ಕಾಮ ಕರ್ಮಗಳಿಂದ ಕೆಡಿಸಲ್ಪಟ್ಟಿರುವ ಮನಸ್ಸನ್ನು ತಡೆಗಟ್ಟಲು ಅಸಮರ್ಥನಾಗಿದ್ದೇನೆ. ॥27॥
(ಶ್ಲೋಕ-28)
ಮೂಲಮ್
ಸೋಹಂ ತವಾಂಘ್ರ್ಯುಪಗತೋಸ್ಮ್ಯಸತಾಂ ದುರಾಪಂ
ತಚ್ಚಾಪ್ಯಹಂ ಭವದನುಗ್ರಹ ಈಶ ಮನ್ಯೇ ।
ಪುಂಸೋ ಭವೇದ್ಯರ್ಹಿ ಸಂಸರಣಾಪವರ್ಗ-
ಸ್ತ್ವಯ್ಯಬ್ಜನಾಭ ಸದುಪಾಸನಯಾ ಮತಿಃ ಸ್ಯಾತ್ ॥
ಅನುವಾದ
ಹೀಗೆ ಅಲೆಯುತ್ತಿರುವ ನಾನು-ದುಷ್ಟರಿಗೆ ದುರ್ಲಭವಾದ ನಿನ್ನ ಚರಣಕಮಲಗಳ ಛತ್ರಛಾಯೆಯನ್ನು ಪಡೆದಿದ್ದೇನೆ. ಸ್ವಾಮಿಯೇ! ಇದನ್ನು ನಿನ್ನ ಕೃಪಾಪ್ರಸಾದವೆಂದೇ ತಿಳಿಯುತ್ತೇನೆ. ಏಕೆಂದರೆ, ಪದ್ಮನಾಭನೇ! ಜೀವನಿಗೆ ಸಂಸಾರದಿಂದ ಮುಕ್ತನಾಗುವ ಸಮಯ ಒದಗಿದಾಗ ಸತ್ಪುರುಷರ ಉಪಾಸನೆಯಿಂದ ಚಿತ್ತವೃತ್ತಿಯು ನಿನ್ನಲ್ಲಿ ತೊಡಗುವುದು. ॥28॥
(ಶ್ಲೋಕ-29)
ಮೂಲಮ್
ನಮೋ ವಿಜ್ಞಾನಮಾತ್ರಾಯ ಸರ್ವಪ್ರತ್ಯಯಹೇತವೇ ।
ಪುರುಷೇಶಪ್ರಧಾನಾಯ ಬ್ರಹ್ಮಣೇನಂತಶಕ್ತಯೇ ॥
ಅನುವಾದ
ಪ್ರಭೋ! ನೀನು ಕೇವಲ ವಿಜ್ಞಾನ ಸ್ವರೂಪನೂ, ವಿಜ್ಞಾನಘನನೂ ಆಗಿರುವೆ. ಕಂಡು ಬರುವ ವೃತ್ತಿಗಳಿಗೆಲ್ಲ ನೀನೆ ಕಾರಣನೂ, ಅಧಿಷ್ಠಾನನೂ ಆಗಿರುವೆ. ಜೀವಿಯ ಸ್ವರೂಪದಲ್ಲಿ ಮತ್ತು ಜೀವಿಗಳ ಸುಖ-ದುಃಖಾದಿಗಳ ನಿಮಿತ್ತ, ಕಾಲ, ಕರ್ಮ, ಸ್ವಭಾವ ಹಾಗೂ ಪ್ರಕೃತಿಯ ರೂಪದಲ್ಲಿಯೂ ನೀನೇ ಇರುವೆ. ಅವುಗಳ ನಿಯಾಮಕನೂ ನೀನೇ ಆಗಿರುವೆ. ಅನಂತ ಶಕ್ತಿಯುಳ್ಳ ನೀನು ಸಾಕ್ಷಾತ್ ಬ್ರಹ್ಮವೇ ಆಗಿರುವೆ. ಅಂತಹ ನಿನಗೆ ನಾನು ನಮಸ್ಕರಿಸುತ್ತೇನೆ. ॥29॥
(ಶ್ಲೋಕ-30)
ಮೂಲಮ್
ನಮಸ್ತೇ ವಾಸುದೇವಾಯ ಸರ್ವಭೂತಕ್ಷಯಾಯ ಚ ।
ಹೃಷೀಕೇಶ ನಮಸ್ತುಭ್ಯಂ ಪ್ರಪನ್ನಂ ಪಾಹಿ ಮಾಂ ಪ್ರಭೋ ॥
ಅನುವಾದ
ಪ್ರಭೋ! ನೀನೇ ವಾಸುದೇವನು. ಸಮಸ್ತ ಜೀವರ ಆಶ್ರಯನಾದ ಸಂಕರ್ಷಣನು ನೀನೇ. ಬುದ್ಧಿ ಮತ್ತು ಮನಸ್ಸಿನ ಅಧಿಷ್ಠಾತೃ ದೇವತೆ ಹೃಷಿಕೇಶನೂ (ಪ್ರದ್ಯುಮ್ನ ಮತ್ತು ಅನಿರುದ್ಧ) ನೀನೇ. ನಾನು ಬಾರಿ-ಬಾರಿಗೂ ನಿನಗೆ ನಮಸ್ಕರಿಸುತ್ತೇನೆ. ಪ್ರಭುವೇ! ಶರಣಾಗತನಾದ ನನ್ನನ್ನು ರಕ್ಷಿಸು. ॥30॥
ಅನುವಾದ (ಸಮಾಪ್ತಿಃ)
ನಲವತ್ತನೆಯ ಅಧ್ಯಾಯವು ಮುಗಿಯಿತು. ॥40॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ಅಕ್ರೂರಸ್ತುತಿರ್ನಾಮ ಚತ್ವಾರಿಂಶೋಽಧ್ಯಾಯಃ ॥40॥