[ಮೂವತ್ತೆಂಟನೆಯ ಅಧ್ಯಾಯ]
ಭಾಗಸೂಚನಾ
ಅಕ್ರೂರನ ವ್ರಜಯಾತ್ರೆ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಅಕ್ರೂರೋಪಿ ಚ ತಾಂ ರಾತ್ರಿಂ ಮಧುಪುರ್ಯಾಂ ಮಹಾಮತಿಃ ।
ಉಷಿತ್ವಾ ರಥಮಾಸ್ಥಾಯ ಪ್ರಯಯೌ ನಂದಗೋಕುಲಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಮಹಾಮತಿಯಾದ ಅಕ್ರೂರನು ಆ ರಾತ್ರಿಯನ್ನು ಮಥುರಾಪುರಿಯಲ್ಲೇ ಕಳೆದು ಪ್ರಾತಃಕಾಲವಾಗುತ್ತಲೇ ರಥವನ್ನು ಹತ್ತಿಕೊಂಡು ನಂದಗೋಪನ ಗೋಕುಲಕ್ಕೆ ಪ್ರಯಾಣ ಮಾಡಿದನು. ॥1॥
(ಶ್ಲೋಕ-2)
ಮೂಲಮ್
ಗಚ್ಛನ್ಪಥಿ ಮಹಾಭಾಗೋ ಭಗವತ್ಯಂಬುಜೇಕ್ಷಣೇ ।
ಭಕ್ತಿಂ ಪರಾಮುಪಗತ ಏವಮೇತದಚಿಂತಯತ್ ॥
ಅನುವಾದ
ಪರಮ ಭಾಗ್ಯವಂತನಾದ ಅಕ್ರೂರನು ವ್ರಜದ ಯಾತ್ರೆಮಾಡುತ್ತಿದ್ದಾಗ ದಾರಿಯಲ್ಲಿ ಕಮಲನಯನ ಭಗವಾನ್ ಶ್ರೀಕೃಷ್ಣನ ಪರಮ ಪ್ರೇಮಮಯ ಭಕ್ತಿಯಿಂದ ಪರಿಪೂರ್ಣನಾಗಿ ಹೀಗೆ ಯೋಚಿಸುತ್ತಿದ್ದನು. ॥2॥
(ಶ್ಲೋಕ-3)
ಮೂಲಮ್
ಕಿಂ ಮಯಾಚರಿತಂ ಭದ್ರಂ ಕಿಂ ತಪ್ತಂ ಪರಮಂ ತಪಃ ।
ಕಿಂ ವಾಥಾಪ್ಯರ್ಹತೇ ದತ್ತಂ ಯದ್ದ್ರಕ್ಷ್ಯಾಮ್ಯದ್ಯ ಕೇಶವಮ್ ॥
ಅನುವಾದ
ಇಂದು ನಾನು ಭಗವಾನ್ ಶ್ರೀಕೃಷ್ಣನನ್ನು ದರ್ಶಿಸುತ್ತಿರುವೆನಲ್ಲ! ಇದಕ್ಕಾಗಿ ಹಿಂದೆ ನಾನು ಎಂತಹ ಶುಭಕರ್ಮಗಳನ್ನು, ಎಂತಹ ಶ್ರೇಷ್ಠವಾದ ತಪಸ್ಸನ್ನು ಮಾಡಿರುವೆನೋ! ಅಥವಾ ಯಾವ ಸತ್ಪ್ರಾತ್ರಕ್ಕೆ ಎಂತಹ ಮಹತ್ವಪೂರ್ಣವಾದ ದಾನ ಮಾಡಿರುವೆನೋ? ॥3॥
(ಶ್ಲೋಕ-4)
ಮೂಲಮ್
ಮಮೈತದ್ದುರ್ಲಭಂ ಮನ್ಯ ಉತ್ತಮಶ್ಲೋಕದರ್ಶನಮ್ ।
ವಿಷಯಾತ್ಮನೋ ಯಥಾ ಬ್ರಹ್ಮಕೀರ್ತನಂ ಶೂದ್ರಜನ್ಮನಃ ॥
ಅನುವಾದ
ಶೂದ್ರಜನ್ಮವನ್ನು ಪಡೆದವನಿಗೆ ವೇದಾಧ್ಯಯನದ ಅಧಿಕಾರ ವಿರದಂತೆ, ವಿಷಯಾಸಕ್ತನಾದ ನನಗೆ ಉತ್ತಮಶ್ಲೋಕನಾದ ಶ್ರೀಕೃಷ್ಣನ ದರ್ಶನವು ದುರ್ಲಭವೆಂದೇ ಭಾವಿಸುತ್ತೇನೆ. ॥4॥
(ಶ್ಲೋಕ-5)
ಮೂಲಮ್
ಮೈವಂ ಮಮಾಧಮಸ್ಯಾಪಿ ಸ್ಯಾದೇವಾಚ್ಯುತದರ್ಶನಮ್ ।
ಹ್ರಿಯಮಾಣಃ ಕಾಲನದ್ಯಾ ಕ್ವಚಿತ್ತರತಿ ಕಶ್ಚನ ॥
ಅನುವಾದ
ಆದರೆ ಹಾಗೇನಿಲ್ಲ, ಅಧಮನಾದ ನನಗೂ ಕೂಡ ಭಗವಾನ್ ಶ್ರೀಕೃಷ್ಣನ ದರ್ಶನವು ಖಂಡಿತವಾಗಿ ಆಗುವುದು. ಏಕೆಂದರೆ, ನದಿಯಲ್ಲಿ ಹರಿಯುತ್ತಿರುವ ಕಡ್ಡಿಗಳು ಕೆಲವೊಮ್ಮೆ ಈ ದಡದಿಂದ ಆ ದಡಮುಟ್ಟುವುದಿದೆ. ಹಾಗೆಯೇ ಸಮಯದ ಪ್ರವಾಹದಿಂದ ಎಲ್ಲಾದರೂ ಯಾರಾದರೂ ಸಂಸಾರ ಸಾಗರವನ್ನು ದಾಟಬಲ್ಲರು. ॥5॥
(ಶ್ಲೋಕ-6)
ಮೂಲಮ್
ಮಮಾದ್ಯಾಮಂಗಲಂ ನಷ್ಟಂ ಲವಾಂಶ್ಚೈವ ಮೇ ಭವಃ ।
ಯನ್ನಮಸ್ಯೇ ಭಗವತೋ ಯೋಗಿಧ್ಯೇಯಾಂಘ್ರಿಪಂಕಜಮ್ ॥
ಅನುವಾದ
ನಿಶ್ಚಯವಾಗಿಯೂ ಇಂದು ನನ್ನ ಸಮಸ್ತ ಅಶುಭಗಳು ನಾಶಹೊಂದಿದವು. ಇಂದು ನನ್ನ ಜನ್ಮವು ಸಫಲವಾಯಿತು. ಏಕೆಂದರೆ, ಇಂದು ನಾನು ಮಹಾಯೋಗಿ-ಯತಿಗಳಿಗೂ ಕೂಡ ಧ್ಯಾನಕ್ಕೆ ವಿಷಯವಾದ ಭಗವಂತನ ಚರಣಕಮಲಗಳನ್ನು ಸಾಕ್ಷಾತ್ತಾಗಿ ನೋಡಿ ನಮಸ್ಕರಿಸುವೆನು. ॥6॥
(ಶ್ಲೋಕ-7)
ಮೂಲಮ್
ಕಂಸೋ ಬತಾದ್ಯಾಕೃತ ಮೇತ್ಯನುಗ್ರಹಂ
ದ್ರಕ್ಷ್ಯೇಂಘ್ರಿಪದ್ಮಂ ಪ್ರಹಿತೋಮುನಾ ಹರೇಃ ।
ಕೃತಾವತಾರಸ್ಯ ದುರತ್ಯಯಂ ತಮಃ
ಪೂರ್ವೇತರನ್ ಯನ್ನಖಮಂಡಲತ್ವಿಷಾ ॥
ಅನುವಾದ
ಆಹಾ! ಕಂಸನು ಇಂದು ನನ್ನ ಮೇಲೆ ಮಹತ್ಕೃಪೆಯನ್ನೇ ಮಾಡಿರುವನು. ಅಂತಹ ಕಂಸನಿಂದ ಕಳುಹಲ್ಪಟ್ಟ ನಾನು ಈ ಭೂತಳದಲ್ಲಿ ಅವತರಿಸಿದ ಸಾಕ್ಷಾತ್ ಭಗವಂತನ ಚರಣಕಮಲಗಳ ದರ್ಶನವನ್ನು ಪಡೆಯುವೆನು. ಯಾರ ನಖಮಂಡಲದ ಕಾಂತಿಯನ್ನು ಧ್ಯಾನಿಸುತ್ತಾ ಹಿಂದಿನ ಯುಗದ ಋಷಿ-ಮಹರ್ಷಿಗಳು ಈ ಅಜ್ಞಾನರೂಪವಾದ ಅಪಾರ ತಮಸ್ಸನ್ನು ದಾಟಿಹೋಗಿರುವರೋ, ಅಂತಹ ಸಾಕ್ಷಾತ್ ಭಗವಂತನೇ ಮನುಷ್ಯನಾಗಿ ಈಗ ಅವತರಿಸಿರುವನು. ॥7॥
(ಶ್ಲೋಕ-8)
ಮೂಲಮ್
ಯದರ್ಚಿತಂ ಬ್ರಹ್ಮಭವಾದಿಭಿಃ ಸುರೈಃ
ಶ್ರಿಯಾ ಚ ದೇವ್ಯಾ ಮುನಿಭಿಃ ಸಸಾತ್ವತೈಃ ।
ಗೋಚಾರಣಾಯಾನುಚರೈಶ್ಚರದ್ವನೇ
ಯದ್ಗೋಪಿಕಾನಾಂ ಕುಚಕುಂಕುಮಾಂಕಿತಮ್ ॥
ಅನುವಾದ
ಬ್ರಹ್ಮರುದ್ರೇಂದ್ರಾದಿ ದೇವತೆಗಳು ಯಾವ ಚರಣಕಮಲಗಳನ್ನು ಉಪಾಸನೆ ಮಾಡುತ್ತಾ ಇರುತ್ತಾರೋ, ಸಾಕ್ಷಾತ್ ಲಕ್ಷ್ಮೀದೇವಿಯೂ ಒಂದು ಕ್ಷಣವಾದರೂ ಯಾರ ಸೇವೆಯನ್ನು ತೊರೆಯುವುದಿಲ್ಲವೋ, ಪ್ರೇಮೀ ಭಕ್ತರೊಡನೆ ಮಹಾಜ್ಞಾನಿಗಳೂ ಯಾರ ಆರಾಧನೆಯಲ್ಲಿ ಸಂಲಗ್ನವಾಗಿರುತ್ತಾರೋ, ಅಂತಹ ಭಗವಂತನ ಆ ಚರಣಕಮಲಗಳು ಹಸುಗಳನ್ನು ಮೇಯಿಸಲಿಕ್ಕಾಗಿ ಗೋಪಬಾಲಕರೊಂದಿಗೆ ವನದಲ್ಲಿ ಸಂಚರಿಸುತ್ತವೆ. ಸುರ-ಮುನಿ-ವಂದಿತ ಆ ಚರಣಗಳೇ ಗೋಪಿಯರ ವಕ್ಷಃಸ್ಥಳದಲ್ಲಿನ ಕುಂಕುಮ ಕೇಸರಿಯಿಂದ ಲೇಪಿತವಾಗಿರುತ್ತವೆ. ॥8॥
(ಶ್ಲೋಕ-9)
ಮೂಲಮ್
ದ್ರಕ್ಷ್ಯಾಮಿ ನೂನಂ ಸುಕಪೋಲನಾಸಿಕಂ
ಸ್ಮಿತಾವಲೋಕಾರುಣಕಂಜಲೋಚನಮ್ ।
ಮುಖಂ ಮುಕುಂದಸ್ಯ ಗುಡಾಲಕಾವೃತಂ
ಪ್ರದಕ್ಷಿಣಂ ಮೇ ಪ್ರಚರಂತಿ ವೈ ಮೃಗಾಃ ॥
ಅನುವಾದ
ನಿಶ್ಚಯವಾಗಿಯೂ ನಾನು ಅವನನ್ನು ದರ್ಶಿಸುವೆನು. ಇದೋ ಈ ಮೃಗಗಳು ನನ್ನನ್ನು ಬಲಕ್ಕೆ ಹಾಕಿ ಪ್ರದಕ್ಷಿಣಾಕಾರವಾಗಿ ಹೋಗುತ್ತಾ ಶುಭವನ್ನೇ ಸೂಚಿಸುತ್ತವೆ. ಆದುದರಿಂದ ನಾನಿಂದು ಮನೋಹರವಾದ ಕಪೋಲಗಳಿಂದಲೂ, ಸುಂದರವಾದ ಮೂಗಿನಿಂದಲೂ, ಕಿರುನಗೆಯಿಂದ ಕೂಡಿದ ನೋಟದಿಂದಲೂ, ಕೆಂದಾವರೆಯಂತಿರುವ ಕಣ್ಣುಗಳಿಂದಲೂ, ಗುಂಗುರು ಕೂದಲುಗಳಿಂದಲೂ ಸಮಲಂಕೃತವಾದ ಮುಖಕಮಲದಿಂದ ಶೋಭಿಸುವ ಮುಕುಂದನನ್ನು ನೋಡಿಯೇ ನೋಡುವೆನು. ॥9॥
(ಶ್ಲೋಕ-10)
ಮೂಲಮ್
ಅಪ್ಯದ್ಯ ವಿಷ್ಣೋರ್ಮನುಜತ್ವಮೀಯುಷೋ
ಭಾರಾವತಾರಾಯ ಭುವೋ ನಿಜೇಚ್ಛಯಾ ।
ಲಾವಣ್ಯಧಾಮ್ನೋ ಭವಿತೋಪಲಂಭನಂ
ಮಹ್ಯಂ ನ ನ ಸ್ಯಾತ್ಫಲಮಂಜಸಾ ದೃಶಃ ॥
ಅನುವಾದ
ಭಗವಾನ್ ವಿಷ್ಣುವು ಭೂಭಾರಹರಣಕ್ಕಾಗಿ ಸ್ವೆಚ್ಛೆಯಿಂದ ಮನುಷ್ಯನಾಗಿ ಅವತರಿಸಿದ್ದಾನೆ. ಅವನು ಸೌಂದರ್ಯಕ್ಕೆ ನೆಲೆಯಾಗಿದ್ದಾನೆ. ಸೌಂದರ್ಯದ ಮೂರ್ತಿಮಂತ ನಿಧಿಯಾಗಿದ್ದಾನೆ. ಇಂದು ನನಗೆ ಅವನ ದರ್ಶನವು ಆಗಿಯೇ ತೀರುತ್ತದೆ. ಇಂದು ನನ್ನ ಕಣ್ಣುಗಳು ಸಫಲವಾಗುವುವು. ॥10॥
(ಶ್ಲೋಕ-11)
ಮೂಲಮ್
ಯ ಈಕ್ಷಿತಾಹಂರಹಿತೋಪ್ಯಸತ್ಸತೋಃ
ಸ್ವತೇಜಸಾಪಾಸ್ತತಮೋಭಿದಾಭ್ರಮಃ ।
ಸ್ವಮಾಯಯಾತ್ಮನ್ ರಚಿತೈಸ್ತದೀಕ್ಷಯಾ
ಪ್ರಾಣಾಕ್ಷಧೀಭಿಃ ಸದನೇಷ್ವಭೀಯತೇ ॥
ಅನುವಾದ
ಭಗವಂತನು ಈ ಕಾರ್ಯ-ಕಾರಣ ರೂಪವಾದ ಜಗತ್ತಿಗೆ ದ್ರಷ್ಟಾಮಾತ್ರನಾಗಿದ್ದರೂ ಅಹಂಕಾರ ರಹಿತನಾಗಿದ್ದಾನೆ. ಅಜ್ಞಾನದಿಂದ ಉಂಟಾದ ಭೇದ ಭ್ರಮೆಯು ಅವನ ಚಿನ್ಮಯಶಕ್ತಿಯಿಂದ ಅಜ್ಞಾನ ಸಹಿತವಾಗಿ ನಾಶವಾಗಿ ಹೋಗುತ್ತದೆ. ಅವನು ತನ್ನ ಯೋಗಮಾಯೆಯನ್ನು ಆಶ್ರಯಿಸಿ ಕೇವಲ ವೀಕ್ಷಣಮಾತ್ರದಿಂದ ಸ್ವಪ್ರಕೃತಿಯಿಂದಲೇ ನಿರ್ಮಿತವಾದ ಪ್ರಾಣೇಂದ್ರಿಯಗಳ ಬುದ್ಧಿಗಳಲ್ಲಿ ಪ್ರವೇಶಿಸಿ, ಗೋಪಿಯರ ಮನೆಗಳಲ್ಲಿಯೂ, ವೃಂದಾವನದಲ್ಲಿಯೂ ವ್ಯವಹರಿಸುವನೋ ಅಂತಹ ಪರಬ್ರಹ್ಮ ಪರಮಾತ್ಮ ಸ್ವರೂಪನಾದ ಶ್ರೀಕೃಷ್ಣನನ್ನು ನಾನಿಂದು ಸಂದರ್ಶಿಸುವೆನು. ॥11॥
(ಶ್ಲೋಕ-12)
ಮೂಲಮ್
ಯಸ್ಯಾಖಿಲಾಮೀವಹಭಿಃ ಸುಮಂಗಲೈ-
ರ್ವಾಚೋ ವಿಮಿಶ್ರಾ ಗುಣಕರ್ಮಜನ್ಮಭಿಃ ।
ಪ್ರಾಣಂತಿ ಶುಂಭಂತಿ ಪುನಂತಿ ವೈ ಜಗದ್
ಯಾಸ್ತದ್ವಿರಕ್ತಾಃ ಶವಶೋಭನಾ ಮತಾಃ ॥
ಅನುವಾದ
ಸಮಸ್ತ ಪಾಪಗಳನ್ನು ಹೋಗಲಾಡಿಸಿ ಮಂಗಳವನ್ನುಂಟು ಮಾಡುವ ಶ್ರೀಕೃಷ್ಣನ ಭಕ್ತವಾತ್ಸಲ್ಯಾದಿ ಕಲ್ಯಾಣ ಗುಣಗಳಿಂದಲೂ, ದುಷ್ಟನಿಗ್ರಹ ಶಿಷ್ಟಪರಿಪಾಲನೆ ಮೊದಲಾದ ಕರ್ಮಗಳಿಂದಲೂ ರಾಮ-ಕೃಷ್ಣಾದ್ಯವತಾರಗಳಿಂದಲೂ ಕೂಡಿದ ಮಾತುಗಳು (ಕೀರ್ತನೆಗಳು) ಪ್ರಪಂಚವನ್ನು ಉದ್ಧರಿಸುತ್ತವೆ; ಪಾವನಗೊಳಿಸುತ್ತವೆ. ಆದರೆ ಶ್ರೀಕೃಷ್ಣನ ಲೀಲಾಪ್ರಸಂಗಗಳಿಂದ ರಹಿತವಾದ ಮಾತುಗಳು ಹೆಣದಂತೆ ವ್ಯರ್ಥವಾಗಿದೆ. ॥12॥
(ಶ್ಲೋಕ-13)
ಮೂಲಮ್
ಸ ಚಾವತೀರ್ಣಃ ಕಿಲ ಸಾತ್ವತಾನ್ವಯೇ
ಸ್ವಸೇತುಪಾಲಾಮರವರ್ಯಶರ್ಮಕೃತ್ ।
ಯಶೋ ವಿತನ್ವನ್ ವ್ರಜ ಆಸ್ತ ಈಶ್ವರೋ
ಗಾಯಂತಿ ದೇವಾ ಯದಶೇಷಮಂಗಲಮ್ ॥
ಅನುವಾದ
ಯಾರ ಗುಣಗಾನಕ್ಕೆ ಇಂತಹ ಮಹಾತ್ಮ್ಯವಿರುವುದೋ ಅಂತಹ ಭಗವಂತನು ಸಾಕ್ಷಾತ್ತಾಗಿ ಯದುವಂಶದಲ್ಲಿ ಅವತರಿಸಿರುವನು. ತನ್ನಿಂದಲೇ ಕಲ್ಪಿತವಾದ ಲೋಕಮರ್ಯಾದೆಗಳನ್ನು ಪಾಲಿಸುತ್ತಿರುವ ಶ್ರೇಷ್ಠರಾದ ದೇವತೆಗಳ ಕಲ್ಯಾಣಕ್ಕೋಸ್ಕರವೇ ಅವನ ಅವತಾರವಾಗಿದೆ. ಐಶ್ವರ್ಯಶಾಲಿಯಾದ ಆ ಭಗವಂತನು ತನ್ನ ಮಂಗಳಮಯ ಯಶಸ್ಸನ್ನು ವಿಸ್ತಾರಗೊಳಿಸುತ್ತಾ ಗೋಕುಲದಲ್ಲಿ ವಾಸಿಸುತ್ತಿರುವನು. ದೇವತೆಗಳೂ ಕೂಡ ಅವನ ಮಂಗಳಮಯವಾದ ಯಶಸ್ಸನ್ನು ಯಾವಾಗಲೂ ಗಾನಮಾಡುತ್ತಿರುತ್ತಾರೆ. ॥13॥
(ಶ್ಲೋಕ-14)
ಮೂಲಮ್
ತಂ ತ್ವದ್ಯ ನೂನಂ ಮಹತಾಂ ಗತಿಂ ಗುರುಂ
ತ್ರೈಲೋಕ್ಯಕಾಂತಂ ದೃಶಿಮನ್ಮಹೋತ್ಸವಮ್ ।
ರೂಪಂ ದಧಾನಂ ಶ್ರಿಯ ಈಪ್ಸಿತಾಸ್ಪದಂ
ದ್ರಕ್ಷ್ಯೇ ಮಮಾಸನ್ನುಷಸಃ ಸುದರ್ಶನಾಃ ॥
ಅನುವಾದ
ಇಂದು ನಾನು ಖಂಡಿತವಾಗಿ ಅವನನ್ನು ನೋಡುವೆನು, ಇದರಲ್ಲಿ ಸಂದೇಹವೇ ಇಲ್ಲ. ಅವನು ದೊಡ್ಡ- ದೊಡ್ಡ ಸಂತರಿಗೂ, ಲೋಕಪಾಲರಿಗೂ ಏಕಮಾತ್ರ ಆಶ್ರಯನಾಗಿದ್ದಾನೆ. ಎಲ್ಲರಿಗೂ ಪರಮಗುರುವಾಗಿ ಇದ್ದಾನೆ. ಅವನ ರೂಪ-ಸೌಂದರ್ಯಗಳು ಮೂರು ಲೋಕಗಳನ್ನು ವಿಮೋಹಗೊಳಿಸುವಂತಹುದು. ಕಣ್ಣುಳ್ಳವರಿಗೆ ಅವನನ್ನು ನೋಡುವುದೇ ಹಬ್ಬವಾಗಿದೆ. ಇದರಿಂದ ಸೌಂದರ್ಯದ ಅಧೀಶ್ವರಿಯಾದ ಸಾಕ್ಷಾತ್ ಲಕ್ಷ್ಮೀದೇವಿಯೂ ಕೂಡ ಅವನನ್ನು ಪಡೆಯಲು ಕಾತರಳಾಗಿದ್ದಾಳೆ. ಅಂತಹ ಸುಂದರ ಮೂರ್ತಿಯನ್ನು ನಾನಿಂದು ನೋಡಿಯೇ ನೋಡುವೆನು. ಬೆಳಿಗಿನಿಂದಲೂ ನನಗೆ ಶುಭ ಶಕುನಗಳೇ ಕಾಣಿಸಿಕೊಳ್ಳುತ್ತವೆ. ॥14॥
(ಶ್ಲೋಕ-15)
ಮೂಲಮ್
ಅಥಾವರೂಢಃ ಸಪದೀಶಯೋ ರಥಾತ್
ಪ್ರಧಾನಪುಂಸೋಶ್ಚರಣಂ ಸ್ವಲಬ್ಧಯೇ ।
ಧಿಯಾ ಧೃತಂ ಯೋಗಿಭಿರಪ್ಯಹಂ ಧ್ರುವಂ
ನಮಸ್ಯ ಆಭ್ಯಾಂ ಚ ಸಖೀನ್ ವನೌಕಸಃ ॥
ಅನುವಾದ
ಸರ್ವಶ್ರೇಷ್ಠರಾದ ಬಲರಾಮ-ಕೃಷ್ಣರನ್ನು ನಾನು ನೋಡುತ್ತಲೇ ಅವರ ಚರಣಾರವಿಂದಗಳಲ್ಲಿ ನಮಸ್ಕರಿಸಲು ರಥದಿಂದ ಇಳಿಯುವೆನು. ಅವರ ಪಾದಪದ್ಮಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುವೆನು. ಅವರ ಚರಣಗಳು ಅತ್ಯಂತ ದುರ್ಲಭವಾದವುಗಳು. ಮಹಾ-ಮಹಾಯೋಗಿಗಳು ಆತ್ಮಸಾಕ್ಷಾಕ್ಕಾರಕ್ಕಾಗಿ ಧ್ಯಾನದ ಮೂಲಕ ಭಗವಂತನ ಚರಣ-ಕಮಲಗಳನ್ನು ತಮ್ಮ ಹೃದಯದಲ್ಲಿರಿಸಿಕೊಳ್ಳುತ್ತಾರೆ. ನಾನಾದರೋ ಅಂತಹ ಪರಮ ಪವಿತ್ರವಾದ ಚರಣ ಕಮಲಗಳನ್ನು ಪ್ರತ್ಯಕ್ಷವಾಗಿ ನೋಡಿ ಅವುಗಳ ಮೇಲೆ ಹೊರಳಾಡುವೆನು. ಅವರಿಬ್ಬರೊಡನೆ ಅವರ ವನವಾಸಿ ಮಿತ್ರರಾದ ಗೋಪಾಲಕರ ಪಾದಗಳಿಗೆ ಪ್ರತ್ಯೇಕ-ಪ್ರತ್ಯೇಕವಾಗಿ ವಂದಿಸುವೆನು. ॥15॥
(ಶ್ಲೋಕ-16)
ಮೂಲಮ್
ಅಪ್ಯಂಘ್ರಿಮೂಲೇ ಪತಿತಸ್ಯ ಮೇ ವಿಭುಃ
ಶಿರಸ್ಯಧಾಸ್ಯನ್ನಿಜಹಸ್ತಪಂಕಜಮ್ ।
ದತ್ತಾಭಯಂ ಕಾಲಭುಜಂಗರಂಹಸಾ
ಪ್ರೋದ್ವೇಜಿತಾನಾಂ ಶರಣೈಷಿಣಾಂ ನೃಣಾಮ್ ॥
ಅನುವಾದ
ಹಾಗೆ ಚರಣಾವಿಂದಗಳಿಗೆ ನಮಸ್ಕರಿಸಿದ ನನ್ನ ತಲೆಯ ಮೇಲೆ ತನ್ನ ಕರಕಮಲವನ್ನು ಭಗವಂತನು ಇಡುವನಲ್ಲವೇ! ನಿಶ್ಚಯವಾಗಿಯೂ ಅದು ನನ್ನ ಸೌಭಾಗ್ಯವೇ ಸರಿ. ಕಾಲರೂಪವಾದ ಸರ್ಪಕ್ಕೆ ಭಯಗೊಂಡು ಭಗವಂತನ ಚರಣಾರವಿಂದಗಳನ್ನು ಆಶ್ರಯಿಸುವವರಿಗೆ, ಶರಣಾಗತರಾದವರಿಗೆ ಅವನ ಕರಕಮಲವು ಅಭಯದಾನ ಕೊಟ್ಟಿದೆ. ॥16॥
(ಶ್ಲೋಕ-17)
ಮೂಲಮ್
ಸಮರ್ಹಣಂ ಯತ್ರ ನಿಧಾಯ ಕೌಶಿಕ-
ಸ್ತಥಾ ಬಲಿಶ್ಚಾಪ ಜಗತಯೇಂದ್ರತಾಮ್ ।
ಯದ್ವಾ ವಿಹಾರೇ ವ್ರಜಯೋಷಿತಾಂ ಶ್ರಮಂ
ಸ್ಪರ್ಶೇನ ಸೌಗಂಧಿಕಗಂಧ್ಯಪಾನುದತ್ ॥
ಅನುವಾದ
ಆ ಭಗವಂತನ ಕರಕಮಲಗಳಲ್ಲಿ ಪೂಜಾಂಗವಾದ ಅರ್ಘ್ಯಪ್ರದಾನ ಮಾಡಿದ ಮಾತ್ರದಿಂದಲೇ ಇಂದ್ರ ಮತ್ತು ಬಲಿ ಇವರು ತ್ರೈಲೋಕ್ಯಾಧಿಪತ್ಯವನ್ನು ಪಡೆದುಕೊಂಡರು. ಕಮಲದ ಪರಿಮಳವನ್ನು ಹೊಂದಿದ ಆ ದಿವ್ಯಕರಕಮಲಗಳ ಸ್ಪರ್ಶಮಾತ್ರದಿಂದಲೇ ರಾಸಲೀಲೆಯ ಸಮಯದಲ್ಲಿ ವ್ರಜಯುವತಿಯರ ಆಯಾಸವೆಲ್ಲವೂ ಪರಿಹಾರವಾಯಿತು. ॥17॥
(ಶ್ಲೋಕ-18)
ಮೂಲಮ್
ನ ಮಯ್ಯುಪೈಷ್ಯತ್ಯರಿಬುದ್ಧಿಮಚ್ಯುತಃ
ಕಂಸಸ್ಯ ದೂತಃ ಪ್ರಹಿತೋಪಿ ವಿಶ್ವದೃಕ್ ।
ಯೋಂತರ್ಬಹಿಶ್ಚೇತಸ ಏತದೀಹಿತಂ
ಕ್ಷೇತ್ರಜ್ಞ ಈಕ್ಷತ್ಯಮಲೇನ ಚಕ್ಷುಷಾ ॥
ಅನುವಾದ
ನಾನು ಈಗ ಕಂಸನದೂತನಾಗಿ ಅವನು ಕಳುಹಿಸಿದ್ದರಿಂದಲೆ ಶ್ರೀಕೃಷ್ಣನ ಬಳಿಗೆ ಹೋಗುತ್ತಿದ್ದೇನೆ. ಇದರಿಂದ ಶ್ರೀಕೃಷ್ಣನೇನಾದರೂ ನನ್ನನ್ನು ಶತ್ರುವೆಂದು ಭಾವಿಸಿಯಾನೇ? ಇಲ್ಲ. ಅತನೆಂದಿಗೂ ಹೀಗೆ ತಿಳಿಯಲಾರನು. ಏಕೆಂದರೆ, ಅವನು ನಿರ್ವಿಕಾರನೂ, ಸರ್ವಸಮನೂ, ಅಚ್ಯುತನೂ ಆಗಿರುವನು. ಸಮಸ್ತ ವಿಶ್ವಕ್ಕೆ ಸಾಕ್ಷಿಯೂ, ಸರ್ವಜ್ಞನೂ, ಚಿತ್ತದ ಒಳಗೂ-ಹೊರಗೂ ಇರತಕ್ಕವನು. ಅವನು ಸಮಸ್ತ ಪ್ರಾಣಿಗಳಲ್ಲಿಯೂ ಕ್ಷೇತ್ರಜ್ಞ ರೂಪದಿಂದ ನೆಲೆಸಿ ಅಂತಃಕರಣದ ಪ್ರತಿಯೊಂದು ಚೇಷ್ಟೆಯನ್ನು ತನ್ನ ನಿರ್ಮಲ ಜ್ಞಾನದೃಷ್ಟಿಯಿಂದ ನೋಡುತ್ತಾ ಇರುತ್ತಾನೆ. ॥18॥
(ಶ್ಲೋಕ-19)
ಮೂಲಮ್
ಅಪ್ಯಂಘ್ರಿಮೂಲೇವಹಿತಂ ಕೃತಾಂಜಲಿಂ
ಮಾಮೀಕ್ಷಿತಾ ಸಸ್ಮಿತಮಾರ್ದ್ರಯಾ ದೃಶಾ ।
ಸಪದ್ಯಪಧ್ವಸ್ತಸಮಸ್ತಕಿಲ್ಬಿಷೋ
ವೋಢಾ ಮುದಂ ವೀತವಿಶಂಕ ಊರ್ಜಿತಾಮ್ ॥
ಅನುವಾದ
ಹಾಗಿರುವಾಗ ನನ್ನ ಶಂಕೆಯು ವ್ಯರ್ಥವಾದುದು. ನಾನಾದರೋ ಅವನ ಚರಣಗಳಲ್ಲಿ ಕೈಜೋಡಿಸಿಕೊಂಡು ವಿನೀತನಾಗಿ ನಿಂತುಕೊಳ್ಳುವೆನು. ಅವನು ನಸುನಗುತ್ತಾ ದಯಾಪೂರ್ಣವಾದ ಸ್ನೇಹದೃಷ್ಟಿಯಿಂದ ನನ್ನ ಕಡೆಗೆ ನೋಡುವನು. ಆ ಸಮಯದಲ್ಲಿ ನನ್ನ ಜನ್ಮ-ಜನ್ಮಾಂತರಗಳ ಸಮಸ್ತ ಪಾಪಗಳು ನಾಶವಾಗಿ ಹೊಗುವುವು. ಆಗ ನಾನು ಯಾವ ಸಂದೇಹವೂ ಇಲ್ಲದೆ ನಿತ್ಯನಿರಂತರವಾಗಿ ಪರಮಾನಂದದಲ್ಲಿ ಮುಳುಗಿ ಹೋಗುವೆನು. ॥19॥
(ಶ್ಲೋಕ-20)
ಮೂಲಮ್
ಸುಹೃತ್ತಮಂ ಜ್ಞಾತಿಮನನ್ಯದೈವತಂ
ದೋರ್ಭ್ಯಾಂ ಬೃಹದ್ಭ್ಯಾಂ ಪರಿರಪ್ಸ್ಯತೇಥ ಮಾಮ್ ।
ಆತ್ಮಾ ಹಿ ತೀರ್ಥೀಕ್ರಿಯತೇ ತದೈವ ಮೇ
ಬಂಧಶ್ಚ ಕರ್ಮಾತ್ಮಕ ಉಚ್ಛ್ವಸಿತ್ಯತಃ ॥
ಅನುವಾದ
ನಾನು ಅವನ ಕುಟುಂಬಿಯೇ ಅಲ್ಲವೇ! ಯಾವಾಗಲೂ ಅವನ ಹಿತವನ್ನೇ ಬಯಸುವವನು. ಅವನಲ್ಲದೆ ಬೇರೆ ಯಾರೂ ನನಗೆ ಆರಾಧ್ಯದೇವರಿಲ್ಲ. ಇಂತಹ ಸ್ಥಿತಿಯಲ್ಲಿ ಅವನು ತನ್ನ ದೀರ್ಘವಾದ ಬಾಹುಗಳಿಂದ ಬರಸೆಳೆದು ನನ್ನನ್ನು ನಿಶ್ಚಯವಾಗಿ ಆಲಿಂಗಿಸಿಕೊಳ್ಳುವನು. ಆಹಾ! ಆ ಸಮಯದಲ್ಲಿ ನನ್ನ ದೇಹವು ಪವಿತ್ರವಾಗುವುದಲ್ಲದೆ ಬೇರೆಯವರನ್ನು ಪವಿತ್ರವಾಗಿಸುವಂತಹುದಾಗಬಹುದು. ಅವನ ಆಲಿಂಗನವು ದೊರೆತಾಕ್ಷಣವೇ ಅನಾದಿಕಾಲದಿಂದ ಅಲೆಯುತ್ತಿರಲು ಕಾರಣವಾದ ನನ್ನ ಕರ್ಮಬಂಧನಗಳು ಕಡಿದು ಹೋಗುವವು. ॥20॥
(ಶ್ಲೋಕ-21)
ಮೂಲಮ್
ಲಬ್ಧಾಂಗಸಂಗಂ ಪ್ರಣತಂ ಕೃತಾಂಜಲಿಂ
ಮಾಂ ವಕ್ಷ್ಯತೇಕ್ರೂರ ತತೇತ್ಯುರುಶ್ರವಾಃ ।
ತದಾ ವಯಂ ಜನ್ಮಭೃತೋ ಮಹೀಯಸಾ
ನೈವಾದೃತೋ ಯೋ ಧಿಗಮುಷ್ಯ ಜನ್ಮ ತತ್ ॥
ಅನುವಾದ
ಶ್ರೀಕೃಷ್ಣನು ನನ್ನನ್ನು ಅಪ್ಪಿಕೊಂಡಾಗ ನಾನು ಕೈಜೊಡಿಸಿಕೊಂಡು ತಲೆಯನ್ನು ತಗ್ಗಿಸಿ ನಿಂತುಕೊಂಡಾಗ ಅವನು ನನ್ನನ್ನು - ಅಕ್ರೂರ ಚಿಕ್ಕಪ್ಪ! ಎಂದು ಸಂಬೋಧಿಸುವನು. ಪವಿತ್ರ ಹಾಗೂ ಮಧುರ ಕೀರ್ತಿಯನ್ನು ವಿಸ್ತಾರಮಾಡಲಿಕ್ಕಾಗಿಯೇ ಅವನು ಲೀಲೆಯನ್ನು ಮಾಡುತ್ತಿದ್ದಾನಲ್ಲ! ಆಗ ನನ್ನ ಜೀವನವು ಸಫಲವಾಗಿ ಹೋಗುವುದು. ಶ್ರೀಕೃಷ್ಣನು ತನ್ನವರನ್ನಾಗಿಸಿಕೊಳ್ಳದವರ ಜನ್ಮವು ವ್ಯರ್ಥ, ಅವರ ಜೀವನಕ್ಕೆ ಧಿಕ್ಕಾರವಿರಲಿ. ॥21॥
(ಶ್ಲೋಕ-22)
ಮೂಲಮ್
ನ ತಸ್ಯ ಕಶ್ಚಿದ್ದಯಿತಃ ಸುಹೃತ್ತಮೋ
ನ ಚಾಪ್ರಿಯೋ ದ್ವೇಷ್ಯ ಉಪೇಕ್ಷ್ಯ ಏವ ವಾ ।
ತಥಾಪಿ ಭಕ್ತಾನ್ಭಜತೇ ಯಥಾ ತಥಾ
ಸುರದ್ರುಮೋ ಯದ್ವದುಪಾಶ್ರಿತೋರ್ಥದಃ ॥
ಅನುವಾದ
ಆದರೆ ಭಗವಂತನಿಗೆ ಪ್ರಿಯರಾದವರಿರಲೀ, ಅಪ್ರಿಯರಾದವರಿರಲಿ ಯಾರೂ ಇಲ್ಲ. ಆತ್ಮೀಯ ಮಿತ್ರನೂ ಇಲ್ಲ, ಶತ್ರುವೂ ಇಲ್ಲ. ಅವನು ಯಾರನ್ನೂ ಉಪೇಕ್ಷಿಸುವುದೂ ಇಲ್ಲ. ಕಲ್ಪವೃಕ್ಷವು ತನ್ನನ್ನು ಆಶ್ರಯಿಸಿ ಬೇಡಿದವರಿಗೆ ಬೇಕಾದ ವಸ್ತುಗಳನ್ನು ನೀಡುವಂತೆಯೇ ಭಗವಾನ್ ಶ್ರೀಕೃಷ್ಣನೂ ಯಾರು ಅವನನ್ನು ಹೇಗೆ ಭಜಿಸುತ್ತಾನೋ ಹಾಗೆಯೇ ಅವನನ್ನು ಪ್ರೀತಿಸುತ್ತಾನೆ. ॥22॥
(ಶ್ಲೋಕ-23)
ಮೂಲಮ್
ಕಿಂಚಾಗ್ರಜೋ ಮಾವನತಂ ಯದೂತ್ತಮಃ
ಸ್ಮಯನ್ಪರಿಷ್ವಜ್ಯ ಗೃಹೀತಮಂಜಲೌ ।
ಗೃಹಂ ಪ್ರವೇಶ್ಯಾಪ್ತಸಮಸ್ತಸತ್ಕೃತಂ
ಸಂಪ್ರಕ್ಷ್ಯತೇ ಕಂಸಕೃತಂ ಸ್ವಬಂಧುಷು ॥
ಅನುವಾದ
ನಾನು ಅವರ ಮುಂದೆ ವಿನೀತಭಾವದಿಂದ ಕೈಜೋಡಿಸಿಕೊಂಡು ನಿಂತುಕೊಂಡಾಗ ಬಲರಾಮನು ನಸುನಗುತ್ತಾ ನನ್ನನ್ನು ಅಪ್ಪಿಕೊಳ್ಳುವನು ಹಾಗೂ ನನ್ನ ಎರಡೂ ಕೈಗಳನ್ನೂ ಹಿಡಿದುಕೊಂಡು ಮನೆಯೊಳಗೆ ಕರಕೊಂಡು ಹೋಗುವನು. ಅಲ್ಲಿ ಎಲ್ಲ ರೀತಿಯಿಂದ ನನ್ನ ಸತ್ಕಾರವಾಗುವುದು. ಅದಾದ ಬಳಿಕ ‘ಅಕ್ರೂರ! ಕಂಸನು ನಮ್ಮ ಬಂಧುಗಳೊಡನೆ ಹೇಗೆ ವ್ಯವಹರಿಸುವನು?’ ಎಂದು ಪ್ರಶ್ನಿಸುವನು. ॥23॥
(ಶ್ಲೋಕ-24)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತಿ ಸಂಚಿಂತಯನ್ ಕೃಷ್ಣಂ ಶ್ವಲ್ಕತನಯೋಧ್ವನಿ ।
ರಥೇನ ಗೋಕುಲಂ ಪ್ರಾಪ್ತಃ ಸೂರ್ಯಶ್ಚಾಸ್ತಗಿರಿಂ ನೃಪ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಶ್ವಲ್ಕನಂದನ ಅಕ್ರೂರನು ದಾರಿಯಲ್ಲಿ ಹೀಗೆ ಯೋಚಿಸುತ್ತಾ ಇರುವಾಗಲೇ ಅವನ ರಥವು ನಂದಗೋಕುಲಕ್ಕೆ ತಲುಪಿತು. ಆಗ ಸೂರ್ಯನು ಅಸ್ತಾಚಾಲವನ್ನು ಸೇರಿದ್ದನು. ॥24॥
(ಶ್ಲೋಕ-25)
ಮೂಲಮ್
ಪದಾನಿ ತಸ್ಯಾಖಿಲಲೋಕಪಾಲ-
ಕಿರೀಟಜುಷ್ಟಾಮಲಪಾದರೇಣೋಃ ।
ದದರ್ಶ ಗೋಷ್ಠೇ ಕ್ಷಿತಿಕೌತುಕಾನಿ
ವಿಲಕ್ಷಿತಾನ್ಯಬ್ಜಯವಾಂಕುಶಾದ್ಯೈಃ ॥
ಅನುವಾದ
ಯಾವ ಚರಣಕಮಲಗಳ ಧೂಳಿಯನ್ನು ಲೋಕಪಾಲರೆಲ್ಲರೂ ತಮ್ಮ ಕಿರೀಟಗಳಲ್ಲಿ ಧರಿಸಿಕೊಳ್ಳುವರೋ (ತಲೆಯಲ್ಲಿ ಧರಿಸುವರೋ) ಅಂತಹ ಭಗವಂತನ ಚರಣ ಚಿಹ್ನೆಗಳನ್ನು ಅಕ್ರೂರನು ಆ ವ್ರಜದಲ್ಲಿ ದರ್ಶಿಸಿದನು. ಕಮಲ, ಯವ, ಅಂಕುಶ ಮೊದಲಾದ ಅಸಾಧಾರಣ ಚಿಹ್ನೆಗಳಿಂದ ಭೂದೇವಿಯ ಶೋಭೆಯನ್ನು ಹೆಚ್ಚಿಸುತ್ತಿದ್ದ ಭಗವಂತನ ಪಾದ ಚಿಹ್ನೆಗಳೆಂದೇ ಅರಿವಾಗುತ್ತಿತ್ತು. ॥25॥
(ಶ್ಲೋಕ-26)
ಮೂಲಮ್
ತದ್ದರ್ಶನಾಹ್ಲಾದವಿವೃದ್ಧಸಂಭ್ರಮಃ
ಪ್ರೇಮ್ಣೋರ್ಧ್ವರೋಮಾಶ್ರುಕಲಾಕುಲೇಕ್ಷಣಃ ।
ರಥಾದವಸ್ಕಂದ್ಯ ಸ ತೇಷ್ವಚೇಷ್ಟತ
ಪ್ರಭೋರಮೂನ್ಯಂಘ್ರಿರಜಾಂಸ್ಯಹೋ ಇತಿ ॥
ಅನುವಾದ
ಆ ಚರಣಚಿಹ್ನೆಗಳನ್ನು ಕಂಡೊಡನೆಯೇ ಅಕ್ರೂರನ ಹೃದಯ ಆನಂದದಿಂದ ತುಂಬಿಹೋಯಿತು. ಶ್ರೀಕೃಷ್ಣನನ್ನು ನೋಡಿದಷ್ಟೇ ಸಂಭ್ರಮಗೊಂಡಿತು. ಪ್ರೇಮಾಧಿಕ್ಯದಿಂದ ರೋಮರಾಜಿಗಳು ನಿಮಿರಿ ನಿಂತವು, ಕಣ್ಣುಗಳಲ್ಲಿ ಆನಂದಾಶ್ರುಗಳು ತುಂಬಿ ಬಂದುವು. ಅವನು ರಥದಿಂದ ಧುಮ್ಮಿಕ್ಕಿ ಆ ಪ್ರಭುವಿನಪಾದ ಧೂಳಿನಲ್ಲಿ ಹೊರಳಾಡಿದನು. ನನ್ನ ಪ್ರಭುವಿನ ಪವಿತ್ರವಾದ ಚರಣ ಧೂಳಿಯು ಇದಾಗಿದೆ ಎಂದು ಉದ್ಗರಿಸಿದನು. ॥26॥
(ಶ್ಲೋಕ-27)
ಮೂಲಮ್
ದೇಹಂಭೃತಾಮಿಯಾನರ್ಥೋ ಹಿತ್ವಾ ದಂಭಂ ಭಿಯಂ ಶುಚಮ್ ।
ಸಂದೇಶಾದ್ಯೋ ಹರೇರ್ಲಿಂಗದರ್ಶನಶ್ರವಣಾದಿಭಿಃ ॥
ಅನುವಾದ
ಪರೀಕ್ಷಿತನೇ! ಕಂಸನ ಸಂದೇಶವನ್ನು ಹೊತ್ತು ತಂದ ಅಕ್ರೂರನ ಇಷ್ಟರವರೆಗಿನ ಭಾವ-ಸ್ಥಿತಿಯೇ ಜೀವಿಗಳು ದೇವಹವನ್ನು ಧರಿಸಿದುದಕ್ಕೆ ಪರಮಲಾಭವು. ಅದಕ್ಕಾಗಿ ದಂಭ, ಭಯ, ಶೋಕ ಇವುಗಳನ್ನು ತ್ಯಜಿಸಿ ಭಗವಂತನ ಮೂರ್ತಿ ಚಿಹ್ನೆ, ಲೀಲೆ, ಸ್ಥಾನ ಮತ್ತು ಗುಣಗಳನ್ನು ದರ್ಶನ-ಶ್ರವಣದ ಮೂಲಕ ಇಂತಹ ಭಾವವನ್ನು ಸಂಪಾದಿಸುವುದೇ ಜೀವಮಾತ್ರರ ಪರಮ ಕರ್ತವ್ಯವಾಗಿದೆ. ॥27॥
(ಶ್ಲೋಕ-28)
ಮೂಲಮ್
ದದರ್ಶ ಕೃಷ್ಣಂ ರಾಮಂ ಚ ವ್ರಜೇ ಗೋದೋಹನಂ ಗತೌ ।
ಪೀತನೀಲಾಂಬರಧರೌ ಶರದಂಬುರುಹೇಕ್ಷಣೌ ॥
ಅನುವಾದ
ವ್ರಜದಲ್ಲಿ ತಲುಪುತ್ತಲೇ ಅಕ್ರೂರನು ಬಲರಾಮ-ಶ್ರೀಕೃಷ್ಣರಿಬ್ಬರೂ ಹಸುಗಳ ಹಾಲುಕರೆಯುವಲ್ಲಿ ವಿರಾಜಿಸುತ್ತಿರುವುದನ್ನು ನೋಡಿದನು. ಶ್ಯಾಮಸುಂದರ ಶ್ರೀಕೃಷ್ಣನು ಪೀತಾಂಬರವನ್ನು ಮತ್ತು ಗೌರಾಂಗನಾದ ಬಲರಾಮನು ನೀಲಾಂಬರವನ್ನು ಉಟ್ಟಿದ್ದರು. ಶರತ್ಕಾಲದ ಕಮಲದಂತೆ ಅವರ ಕಣ್ಣುಗಳು ಅರಳಿದ್ದವು. ॥28॥
(ಶ್ಲೋಕ-29)
ಮೂಲಮ್
ಕಿಶೋರೌ ಶ್ಯಾಮಲಶ್ವೇತೌ ಶ್ರೀನಿಕೇತೌ ಬೃಹದ್ಭುಜೌ ।
ಸುಮುಖೌ ಸುಂದರವರೌ ಬಾಲದ್ವಿರದವಿಕ್ರವೌ ॥
ಅನುವಾದ
ಈಗ ತಾನೇ ಅವರು ಕಿಶೋರಾವಸ್ಥೆಯನ್ನು ಪ್ರವೇಶಿಸಿದ್ದರು. ಗೌರ ಶ್ಯಾಮಲ ವರ್ಣದಿಂದ ಶೋಭಿಸುತ್ತಿದ್ದ ಅವರಿಬ್ಬರೂ ಸೌಂದರ್ಯಗಣಿಗಳಂತಿದ್ದರು. ಆಜಾನು ಬಾಹುಗಳಾಗಿದ್ದರು. ಸುಂದರವಾದ ಮುಖಾರವಿಂದದಿಂದ ಕೂಡಿದ್ದು ಅತ್ಯಂತ ಮನೋಹರರಾಗಿ ಇದ್ದರು. ಮರಿಯಾನೆಯಂತೆ ಅವರ ನಡಿಗೆ ಗಂಭೀರವಾಗಿ ಇತ್ತು. ॥29॥
(ಶ್ಲೋಕ-30)
ಮೂಲಮ್
ಧ್ವಜವಜ್ರಾಂಕುಶಾಂಭೋಜೈಶ್ಚಿಹ್ನಿತೈರಂಘ್ರಿಭಿರ್ವ್ರಜಮ್ ।
ಶೋಭಯಂತೌ ಮಹಾತ್ಮಾನಾವನುಕ್ರೋಶಸ್ಮಿತೇಕ್ಷಣೌ ॥
ಅನುವಾದ
ಅವರ ಚರಣಗಳಲ್ಲಿ ಧ್ವಜ, ವಜ್ರ, ಅಂಕುಶ, ಕಮಲ ಇವುಗಳ ಚಿಹ್ನೆಯಿದ್ದಿತು. ಅವರು ನಡೆವಾಗ ಪೃಥಿವಿಯು ಈ ಚಿಹ್ನೆಗಳಿಂದ ಅಂಕಿತವಾಗಿ ಶೋಭಾಯಮಾನವಾಗುತ್ತಿತ್ತು. ದಯಾರಸವೇ ಒಸರುತ್ತಿದೆಯೋ ಎಂಬಂತೆ ಅವರ ಮುಗುಳ್ನಗು ಇತ್ತು. ಅವರು ಉದಾರತೆಯ ಮೂರ್ತಿಮಂತ ಸ್ವರೂಪರೇ ಆಗಿದ್ದರು. ॥30॥
(ಶ್ಲೋಕ-31)
ಮೂಲಮ್
ಉದಾರರುಚಿರಕ್ರೀಡೌ ಸ್ರಗ್ವಿಣೌ ವನಮಾಲಿನೌ ।
ಪುಣ್ಯಗಂಧಾನುಲಿಪ್ತಾಂಗೌ ಸ್ನಾತೌ ವಿರಜವಾಸಸೌ ॥
ಅನುವಾದ
ಅವರ ಒಂದೊಂದು ಲೀಲೆಯೂ ಉದಾರತೆಯಿಂದಲೂ, ಸುಂದರ ಕಲೆಯಿಂದಲೂ ಕೂಡಿತ್ತು. ಕೊರಳಿನಲ್ಲಿ ವನಮಾಲೆಯನ್ನು, ಮಣಿಮಾಲೆಗಳನ್ನು ಧರಿಸಿದ್ದರು. ಅವರು ಆಗತಾನೇ ಸ್ನಾನಮಾಡಿ ನಿರ್ಮಲವಾದ ವಸಗಳನ್ನುಟ್ಟಿದ್ದರು. ಶರೀರಕ್ಕೆ ಪವಿತ್ರವಾದ ಸುಗಂಧಿತ ಅಂಗರಾಗವನ್ನು, ಚಂದನವನ್ನು ಹಚ್ಚಿಕೊಂಡಿದ್ದರು. ॥31॥
(ಶ್ಲೋಕ-32)
ಮೂಲಮ್
ಪ್ರಧಾನಪುರುಷಾವಾದ್ಯೌ ಜಗದ್ಧೇತೂ ಜಗತ್ಪತೀ ।
ಅವತೀರ್ಣೌ ಜಗತ್ಯರ್ಥೇ ಸ್ವಾಂಶೇನ ಬಲಕೇಶವೌ ॥
(ಶ್ಲೋಕ-33)
ಮೂಲಮ್
ದಿಶೋ ವಿತಿಮಿರಾ ರಾಜನ್ ಕುರ್ವಾಣೌ ಪ್ರಭಯಾ ಸ್ವಯಾ ।
ಯಥಾ ಮಾರಕತಃ ಶೈಲೋ ರೌಪ್ಯಶ್ಚ ಕನಕಾಚಿತೌ ॥
ಅನುವಾದ
ಪರೀಕ್ಷಿತನೇ! ಜಗತ್ತಿನ ಆದಿ ಕಾರಣನೂ, ಜಗತ್ಪತಿಯೂ ಆದ ಪುರುಷೋತ್ತಮನೇ ಪ್ರಪಂಚದ ರಕ್ಷಣೆಗಾಗಿ ತನ್ನ ಪೂರ್ಣಾಂಶದಿಂದ ಬಲರಾಮ-ಶ್ರೀಕೃಷ್ಣರಾಗಿ ಅವತರಿಸಿ, ತಮ್ಮ ಅಂಗಕಾಂತಿಯಿಂದ ಹತ್ತು ದಿಕ್ಕುಗಳ ಅಂಧಕಾರವನ್ನೂ ತೊಡೆದು ಹಾಕುತ್ತಿರುವುದನ್ನು ಅಕ್ರೂರನು ನೋಡಿದನು. ಬಂಗಾರದ ಮೆರಗು ಕೊಟ್ಟ ಬೆಳ್ಳಿಯ ಮತ್ತು ಮರಕತ ಪರ್ವತಗಳಂತೆ ಕಂಗೊಳಿಸುತ್ತಿದ್ದರು. ॥32-33॥
(ಶ್ಲೋಕ-34)
ಮೂಲಮ್
ರಥಾತ್ತೂರ್ಣಮವಪ್ಲುತ್ಯ ಸೋಕ್ರೂರಃ ಸ್ನೇಹವಿಹ್ವಲಃ ।
ಪಪಾತ ಚರಣೋಪಾಂತೇ ದಂಡವದ್ರಾಮಕೃಷ್ಣಯೋಃ ॥
ಅನುವಾದ
ಅವರನ್ನು ನೋಡುತ್ತಲೇ ಅಕ್ರೂರನು ಪ್ರೇಮಾಧಿಕ್ಯದಿಂದ ವಿಹ್ವಲನಾಗಿ ರಥದಿಂದ ಕೆಳಗೆ ಧುಮುಕಿ ಭಗವಾನ್ ಶ್ರೀಕೃಷ್ಣ ಬಲರಾಮರ ಚರಣಗಳ ಬಳಿಸಾರಿ ಸಾಷ್ಟಾಂಗ ನಮಸ್ಕಾರ ಮಾಡಿದನು. ॥34॥
(ಶ್ಲೋಕ-35)
ಮೂಲಮ್
ಭಗವದ್ದರ್ಶನಾಹ್ಲಾದಬಾಷ್ಪಪರ್ಯಾಕುಲೇಕ್ಷಣಃ ।
ಪುಲಕಾಚಿತಾಂಗ ಔತ್ಕಂಠ್ಯಾತ್ ಸ್ವಾಖ್ಯಾನೇ ನಾಶಕನ್ನೃಪ ॥
ಅನುವಾದ
ಪರೀಕ್ಷಿತನೇ! ಭಗವಂತನ ದರ್ಶನದಿಂದ ಅವನ ಕಣ್ಣುಗಳಲ್ಲಿ ಆನಂದಬಾಷ್ಪಗಳು ತುಂಬಿಹೋದವು. ಶರೀರವೆಲ್ಲವೂ ಪುಳಕಗೊಂಡಿತು. ಉತ್ಕಂಠತೆಯಿಂದ ಕೊರಳು ಬಿಗಿದು ತನ್ನ ಹೆಸರನ್ನು ಉಚ್ಚರಿಸಲಾರದಷ್ಟು ಆಹ್ಲಾದಿತನಾದನು. ॥35॥
(ಶ್ಲೋಕ-36)
ಮೂಲಮ್
ಭಗವಾಂಸ್ತಮಭಿಪ್ರೇತ್ಯ ರಥಾಂಗಾಂಕಿತಪಾಣಿನಾ ।
ಪರಿರೇಭೇಭ್ಯುಪಾಕೃಷ್ಯ ಪ್ರೀತಃ ಪ್ರಣತವತ್ಸಲಃ ॥
ಅನುವಾದ
ಶರಣಾಗತವತ್ಸಲ ಶ್ರೀಕೃಷ್ಣನು ಅವನ ಮನಸ್ಸಿನ ಭಾವವನ್ನರಿತು ಅತ್ಯಂತ ಪ್ರಸನ್ನತೆಯಿಂದ ತನ್ನ ಚಕ್ರಾಂಕಿತ ಕೈಗಳಿಂದ ಅವನನ್ನು ಬರಸೆಳೆದು ಆಲಿಂಗಿಸಿಕೊಂಡನು. ॥36॥
(ಶ್ಲೋಕ-37)
ಮೂಲಮ್
ಸಂಕರ್ಷಣಶ್ಚ ಪ್ರಣತಮುಪಗುಹ್ಯ ಮಹಾಮನಾಃ ।
ಗೃಹೀತ್ವಾ ಪಾಣಿನಾ ಪಾಣೀ ಅನಯತ್ಸಾನುಜೋ ಗೃಹಮ್ ॥
ಅನುವಾದ
ಅನಂತರ ಕೈ ಜೋಡಿಸಿಕೊಂಡು ವಿನೀತನಾಗಿ ಮಹಾತ್ಮನಾದ ಬಲರಾಮನ ಮುಂದೆ ನಿಂತುಕೊಂಡಾಗ ಅವನೂ ಅಕ್ರೂರನನ್ನು ಅಪ್ಪಿಕೊಂಡನು. ಅವನ ಒಂದು ಕೈಯನ್ನು ಶ್ರೀಕೃಷ್ಣನೂ, ಮತ್ತೊಂದನ್ನು ಬಲರಾಮನು ಹಿಡಿದುಕೊಂಡು ಮನೆಯೊಳಗೆ ಕರೆದೊಯ್ದರು. ॥37॥
(ಶ್ಲೋಕ-38)
ಮೂಲಮ್
ಪೃಷ್ಟ್ವಾಥ ಸ್ವಾಗತಂ ತಸ್ಮೈ ನಿವೇದ್ಯ ಚ ವರಾಸನಮ್ ।
ಪ್ರಕ್ಷಾಲ್ಯ ವಿಧಿವತ್ಪಾದೌ ಮಧುಪರ್ಕಾರ್ಹಣಮಾಹರತ್ ॥
ಅನುವಾದ
ಮನೆಯೊಳಗೆ ಕರೆತಂದು ಭಗವಂತನು ಅಕ್ರೂರನ ಸ್ವಾಗತ ಸತ್ಕಾರವನ್ನು ಮಾಡಿ, ಕುಶಲ ಪ್ರಶ್ನೆಗಳಾದ ಬಳಿಕ, ಆಸನದಲ್ಲಿ ಕುಳ್ಳಿರಿಸಿ ವಿಧಿವತ್ತಾಗಿ ಅವನ ಕಾಲುಗಳನ್ನು ತೊಳೆದು ಮಧುಪರ್ಕಾದಿ ಉಪಚಾರಗಳನ್ನು ಅರ್ಪಿಸಿದನು. ॥38॥
(ಶ್ಲೋಕ-39)
ಮೂಲಮ್
ನಿವೇದ್ಯ ಗಾಂ ಚಾತಿಥಯೇ ಸಂವಾಹ್ಯ ಶ್ರಾಂತಮಾದೃತಃ ।
ಅನ್ನಂ ಬಹುಗುಣಂ ಮೇಧ್ಯಂ ಶ್ರದ್ಧಯೋಪಾಹರದ್ವಿಭುಃ ॥
ಅನುವಾದ
ಅನಂತರ ಶ್ರೀಕೃಷ್ಣನು ಅತಿಥಿಯಾದ ಅಕ್ರೂರನಿಗೆ ಹಸುವೊಂದನ್ನು ಕೊಟ್ಟು, ಅವನ ಕಾಲನ್ನೊತ್ತಿ ಮಾರ್ಗಾಯಾಸವನ್ನು ಪರಿಹರಿಸಿದನು. ಬಳಿಕ ಶ್ರದ್ಧಾದರಗಳಿಂದ ಅವನಿಗೆ ಪವಿತ್ರವೂ, ಅನೇಕಗುಣಗಳಿಂದ ಕೂಡಿದ ಮೃಷ್ಟಾನ್ನವನ್ನು ಭೋಜನ ಮಾಡಿಸಿದನು. ॥39॥
(ಶ್ಲೋಕ-40)
ಮೂಲಮ್
ತಸ್ಮೈ ಭುಕ್ತವತೇ ಪ್ರೀತ್ಯಾ ರಾಮಃ ಪರಮಧರ್ಮವಿತ್ ।
ಮುಖವಾಸೈರ್ಗಂಧಮಾಲ್ಯೈಃ ಪರಾಂ ಪ್ರೀತಿಂ ವ್ಯಧಾತ್ಪುನಃ ॥
ಅನುವಾದ
ಅಕ್ರೂರನು ಭೋಜನವನ್ನು ಪೂರೈಸಿದ ಬಳಿಕ ಧರ್ಮದ ಮರ್ಮಜ್ಞನಾದ ಭಗವಾನ್ ಬಲರಾಮನೂ ಅತ್ಯಂತ ಪ್ರೇಮದಿಂದ ಸುವಾಸನೆಯನ್ನುಂಟುಮಾಡುವ ತಾಂಬೂಲವನ್ನೂ, ಸುಗಂಧಿತ ಪುಷ್ಪಹಾರವನ್ನೂ ಕೊಟ್ಟು ಅಕ್ರೂರನನ್ನು ಆನಂದಗೊಳಿಸಿದನು. ॥40॥
(ಶ್ಲೋಕ-41)
ಮೂಲಮ್
ಪಪ್ರಚ್ಛ ಸತ್ಕೃತಂ ನಂದಃ ಕಥಂ ಸ್ಥ ನಿರನುಗ್ರಹೇ ।
ಕಂಸೇ ಜೀವತಿ ದಾಶಾರ್ಹ ಸೌನಪಾಲಾ ಇವಾವಯಃ ॥
ಅನುವಾದ
ಹೀಗೆ ಆತಿಥ್ಯ-ಸತ್ಕಾರಗಳಾದ ಬಳಿಕ ನಂದಗೋಪನು ಅಕ್ರೂರನ ಬಳಿಗೆ ಬಂದು ಕೇಳಿದನು - ಅಕ್ರೂರಮಹಾಶಯನೇ! ನಿರ್ದಯಿಯಾದ ಕಂಸನು ಬದುಕಿರುವಾಗ ಕಟುಕನ ಬಳಿಯಲ್ಲಿರುವ ಕುರಿಗಳಂತೆ ನೀವೆಲ್ಲರೂ ಹೇಗೆ ತಾನೇ ಜೀವಿಸಿರುವಿರಿ? ॥41॥
(ಶ್ಲೋಕ-42)
ಮೂಲಮ್
ಯೋವಧೀತ್ಸ್ವಸ್ವಸುಸ್ತೋಕಾನ್ ಕ್ರೋಶಂತ್ಯಾ ಅಸುತೃಪ್ಖಲಃ ।
ಕಿಂ ನು ಸ್ವಿತ್ತತ್ಪ್ರಜಾನಾಂ ವಃ ಕುಶಲಂ ವಿಮೃಶಾಮಹೇ ॥
ಅನುವಾದ
ಪ್ರಾಣಘಾತಕನಾದ, ನೀಚನಾದ ಕಂಸನು ಗೋಳಾಡುತ್ತಿದ್ದ ತನ್ನ ತಂಗಿಯ ಹಸುಕೂಸುಗಳನ್ನು ಕೊಂದು ಬಿಟ್ಟಿರುವನು. ಅಂತಹವನ ಆಡಳಿತಕ್ಕೆ ಒಳಪಟ್ಟಿರುವ ಪ್ರಜೆಗಳ ಕುಶಲವನ್ನು ವಿಚಾರಿಸುವುದರಲ್ಲಿ ಪ್ರಯೋಜನವೇನಿದೆ? ॥42॥
(ಶ್ಲೋಕ-43)
ಮೂಲಮ್
ಇತ್ಥಂ ಸೂನೃತಯಾ ವಾಚಾ ನಂದೇನ ಸುಸಭಾಜಿತಃ ।
ಅಕ್ರೂರಃ ಪರಿಪೃಷ್ಟೇನ ಜಹಾವಧ್ವಪರಿಶ್ರಮಮ್ ॥
ಅನುವಾದ
ಅಕ್ರೂರನೂ ನಂದಗೋಪನಲ್ಲಿ ಮೊದಲೇ ಕುಶಲವನ್ನು ಕೇಳಿದ್ದನು. ಈಗ ಹೀಗೆ ನಂದರಾಜನು ಮಧುರವಾಗಿ ಅಕ್ರೂರನಲ್ಲಿ ಕುಶಲವನ್ನು ಕೇಳಿ ಅವನನ್ನು ಸಮ್ಮಾನಿಸಿದಾಗ ಅವನ ಮಾರ್ಗಾಯಾಸವೆಲ್ಲ ದೂರವಾಯಿತು. ॥43॥
ಅನುವಾದ (ಸಮಾಪ್ತಿಃ)
ಮೂವತ್ತೆಂಟನೆಯ ಅಧ್ಯಾಯವು ಮುಗಿಯಿತು. ॥38॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ
ಅಕ್ರೂರಾಗಮನಂ ನಾಮ ಅಷ್ಟತ್ರಿಂಶೋಽಧ್ಯಾಯಃ ॥38॥