[ಮೂವತ್ತೇಳನೆಯ ಅಧ್ಯಾಯ]
ಭಾಗಸೂಚನಾ
ಕೇಶಿ-ವ್ಯೋಮಾಸುರರ ಉದ್ಧಾರ, ನಾರದರಿಂದ ಭಗವಂತನ ಸ್ತುತಿ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಕೇಶೀ ತು ಕಂಸಪ್ರಹಿತಃ ಖುರೈರ್ಮಹೀಂ
ಮಹಾಹಯೋ ನಿರ್ಜರಯನ್ಮನೋಜವಃ ।
ಸಟಾವಧೂತಾಭ್ರವಿಮಾನಸಂಕುಲಂ
ಕುರ್ವನ್ನಭೋ ಹೇಷಿತಭೀಷಿತಾಖಿಲಃ ॥
(ಶ್ಲೋಕ-2)
ಮೂಲಮ್
ವಿಶಾಲನೇತ್ರೋ ವಿಕಟಾಸ್ಯಕೋಟರೋ
ಬೃಹದ್ಗಲೋ ನೀಲಮಹಾಂಬುದೋಪಮಃ ।
ದುರಾಶಯಃ ಕಂಸಹಿತಂ ಚಿಕೀರ್ಷು-
ರ್ವ್ರಜಂ ಸ ನಂದಸ್ಯ ಜಗಾಮ ಕಂಪಯನ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಕಂಸನು ಕಳಿಸಿದ ಕೇಶಿಯೆಂಬ ದೈತ್ಯನು ಕುದುರೆಯ ರೂಪವನ್ನು ಧರಿಸಿ ದೊಡ್ಡದಾದ ಶರೀರವನ್ನು ಹೊಂದಿ, ಗೊರಸುಗಳಿಂದ ಭೂಮಿಯನ್ನು ಕೆದಕುತ್ತಾ ಮನೋವೇಗದಂತೆ ಓಡುತ್ತಾ ಗೋಕುಲಕ್ಕೆ ಬಂದನು. ಅವನ ಹೆಗಲಮೇಲಿನ ಕೂದಲುಗಳಿಂದ ಆಕಾಶದಲ್ಲಿ ಮೋಡಗಳು, ವಿಮಾನಗಳು ಚದುರಿ ಹೋದುವು. ಅವನ ಭಯಂಕರ ಕೆನೆತದಿಂದ ಸಮಸ್ತರೂ ಭಯಗೊಂಡರು. ಅವನಿಗೆ ದೊಡ್ಡದಾದ ಕಣ್ಣುಗಳಿದ್ದು, ಬಾಯಿಯಾದರೋ ಮರದ ಪೊಟರೆ ಯಂತಿತ್ತು. ಅವನನ್ನು ನೋಡುತ್ತಲೇ ಭಯವುಂಟಾಗುತ್ತಿತ್ತು. ಅವನಿಗೆ ದಪ್ಪವಾದ ಕುತ್ತಿಗೆಯಿತ್ತು. ಕಪ್ಪುಬಣ್ಣದ ವಿಶಾಲವಾದ ಅವನ ದೇಹವು ನೀಲಾಚಲದಂತಿತ್ತು. ಕೃಷ್ಣನನ್ನು ಸಂಹರಿಸಿ ಕಂಸನಿಗೆ ಹಿತವನ್ನುಂಟು ಮಾಡುವುದೇ ಅವನ ಆಶಯವಾಗಿತ್ತು. ಅವನು ನಡೆದಾಗ ಭೂಕಂಪವೇ ಆಗುತ್ತಿತ್ತು. ॥1-2॥
(ಶ್ಲೋಕ-3)
ಮೂಲಮ್
ತಂ ತ್ರಾಸಯಂತಂ ಭಗವಾನ್ ಸ್ವಗೋಕುಲಂ
ತದ್ಧ್ಯೇಷಿತೈರ್ವಾಲವಿಘೂರ್ಣಿತಾಂಬುದಮ್ ।
ಆತ್ಮಾನಮಾಜೌ ಮೃಗಯಂತಮಗ್ರಣೀ-
ರುಪಾಹ್ವಯತ್ಸ ವ್ಯನದನ್ಮೃಗೇಂದ್ರವತ್ ॥
ಅನುವಾದ
ಕೆನೆತಗಳಿಂದ ತನ್ನ ಗೋಕುಲವನ್ನೇ ಭಯಪಡಿಸುತ್ತಿದ್ದ, ಬಾಲದ ಕೂದಲುಗಳಿಂದ ಮೋಡಗಳನ್ನೇ ಚದುರಿಸುತ್ತಿದ್ದ, ಯುದ್ಧಕ್ಕಾಗಿ ತನ್ನನ್ನು ಗೋಕುಲದಲ್ಲಿ ಹುಡುಕುತ್ತಿದ್ದ ಕೇಶಿಯನ್ನು ನೋಡಿ ವೀರಾಗ್ರಣಿಯಾದ ಶ್ರೀಕೃಷ್ಣನು ಸಿಂಹದಂತೆ ಗರ್ಜಿಸುತ್ತಾ ರಾಕ್ಷಸನನ್ನು ಯುದ್ಧಕ್ಕಾಗಿ ಆಹ್ವಾನಿಸಿದನು. ॥3॥
(ಶ್ಲೋಕ-4)
ಮೂಲಮ್
ಸ ತಂ ನಿಶಾಮ್ಯಾಭಿಮುಖೋ ಮುಖೇನ ಖಂ
ಪಿಬನ್ನಿವಾಭ್ಯದ್ರವದತ್ಯಮರ್ಷಣಃ ।
ಜಘಾನ ಪದ್ಭ್ಯಾಮರವಿಂದಲೋಚನಂ
ದುರಾಸದಶ್ಚಂಡಜವೋ ದುರತ್ಯಯಃ ॥
ಅನುವಾದ
ಬಳಿಕ ಕೇಶಿಯು ತನಗೆದುರಾಗಿ ಬಂದ ಶ್ರೀಕೃಷ್ಣನನ್ನು ನೋಡಿ ಆಕಾಶವನ್ನೇ ನುಂಗಿಬಿಡುವನೋ ಎಂಬಂತೆ ಬಾಯನ್ನು ಅಗಲಿಸಿಕೊಂಡು ಮುನ್ನುಗ್ಗಿ ಹೋದನು. ಅತ್ಯಂತ ಕೃದ್ಧನಾಗಿದ್ದ, ದುರಾಸದನಾದ, ಭಯಂಕರವಾಗಿ ಶಬ್ದಮಾಡುತ್ತಿದ್ದ, ಎದುರಿಸಲು ಅಸಾಧ್ಯನಾಗಿದ್ದ ಆ ರಾಕ್ಷಸನು ತನ್ನೆರಡು ಹಿಂದಿನ ಕಾಲುಗಳಿಂದ ಅರವಿಂದಾಕ್ಷನಾದ ಶ್ರೀಕೃಷ್ಣನನ್ನು ಒದೆದನು. ॥4॥
(ಶ್ಲೋಕ-5)
ಮೂಲಮ್
ತದ್ವಂಚಯಿತ್ವಾ ತಮಧೋಕ್ಷಜೋ ರುಷಾ
ಪ್ರಗೃಹ್ಯ ದೋರ್ಭ್ಯಾಂ ಪರಿವಿಧ್ಯ ಪಾದಯೋಃ ।
ಸಾವಜ್ಞಮುತ್ಸೃಜ್ಯ ಧನುಃಶತಾಂತರೇ
ಯಥೋರಗಂ ತಾರ್ಕ್ಷ್ಯಸುತೋ ವ್ಯವಸ್ಥಿತಃ ॥
ಅನುವಾದ
ಆದರೆ ಭಗವಂತನು ಉಪಾಯದಿಂದ ಆ ಒದೆಯನ್ನು ತಪ್ಪಿಸಿಕೊಂಡು, ಅತ್ಯಂತ ಕ್ರುದ್ಧನಾಗಿ ಗರುಡನು ಸರ್ಪವನ್ನು ಹಿಡಿಯುವಂತೆ ಅದೇ ಕಾಲುಗಳನ್ನು ಹಿಡಿದು ಗರಗರನೆ ತಿರುಗಿಸುತ್ತಾ ಅನಾಯಾಸವಾಗಿ ನೂರು ಮಾರುಗಳ ದೂರಕ್ಕೆ ಬಿಸಾಡಿ ಸ್ವಸ್ಥವಾಗಿ ನಿಂತು ಕೊಂಡನು. ॥5॥
(ಶ್ಲೋಕ-6)
ಮೂಲಮ್
ಸ ಲಬ್ಧಸಂಜ್ಞಃ ಪುನರುತ್ಥಿತೋ ರುಷಾ
ವ್ಯಾದಾಯ ಕೇಶೀ ತರಸಾಪತದ್ಧರಿಮ್ ।
ಸೋಪ್ಯಸ್ಯ ವಕೇ ಭುಜಮುತ್ತರಂ ಸ್ಮಯನ್
ಪ್ರವೇಶಯಾಮಾಸ ಯಥೋರಗಂ ಬಿಲೇ ॥
ಅನುವಾದ
ಕೇಶಿಯು ಸ್ವಲ್ಪ ಹೊತ್ತಿನಲ್ಲೇ ಚೇತರಿಸಿಕೊಂಡು ಮೇಲೆದ್ದು ಕ್ರುದ್ಧನಾಗಿ ಬಾಯನ್ನು ಅಗಲವಾಗಿ ತೆರೆದುಕೊಂಡು ರಭಸದಿಂದ ಭಗವಂತನೆಡೆಗೆ ನುಗ್ಗಿದನು. ಶ್ರೀಕೃಷ್ಣನು ನಸುನಗುತ್ತಾ - ಸರ್ಪವು ತನ್ನ ಬಿಲದೊಳಗೆ ನುಸುಳಿಹೋಗುವಂತೆ ತನ್ನ ಎಡತೋಳನ್ನು ಕೇಶಿಯ ಅಗಲವಾಗಿದ್ದ ಬಾಯೊಳಗೆ ರಭಸದಿಂದ ತೂರಿಸಿದನು. ॥6॥
(ಶ್ಲೋಕ-7)
ಮೂಲಮ್
ದಂತಾ ನಿಪೇತುರ್ಭಗವದ್ಭುಜಸ್ಪೃಶ-
ಸ್ತೇ ಕೇಶಿನಸ್ತಪ್ತಮಯಃಸ್ಪೃಶೋ ಯಥಾ ।
ಬಾಹುಶ್ಚ ತದ್ದೇಹಗತೋ ಮಹಾತ್ಮನೋ
ಯಥಾಮಯಃ ಸಂವವೃಧೇ ಉಪೇಕ್ಷಿತಃ ॥
ಅನುವಾದ
ಪರೀಕ್ಷಿತನೇ! ಭಗವಂತನ ಅತ್ಯಂತ ಕೋಮಲವಾದ ಬಾಹುವು ಆ ಸಮಯದಲ್ಲಿ ಕಾದ ಕಬ್ಬಿಣದಂತಾಗಿ ಅದರ ಸ್ಪರ್ಶಮಾತ್ರದಿಂದ ಕೇಶಿಯ ಹಲ್ಲುಗಳೆಲ್ಲವೂ ಉದುರಿ ಹೋದುವು. ಚಿಕಿತ್ಸೆಯನ್ನು ಹೊಂದದ ಮಹೋದರ ರೋಗವು ಉಲ್ಬಣಿಸುವಂತೆ ಶ್ರೀಕೃಷ್ಣನ ತೋಳು ಕ್ಷಣ-ಕ್ಷಣಕ್ಕೂ ಅಸುರನ ಬಾಯೊಳಗೆ ವರ್ಧಿಸುತ್ತಿತ್ತು. ॥7॥
(ಶ್ಲೋಕ-8)
ಮೂಲಮ್
ಸಮೇಧಮಾನೇನ ಸ ಕೃಷ್ಣಬಾಹುನಾ
ನಿರುದ್ಧವಾಯುಶ್ಚರಣಾಂಶ್ಚ ವಿಕ್ಷಿಪನ್ ।
ಪ್ರಸ್ವಿನ್ನಗಾತ್ರಃ ಪರಿವೃತ್ತಲೋಚನಃ
ಪಪಾತ ಲೇಂಡಂ ವಿಸೃಜನ್ ಕ್ಷಿತೌ ವ್ಯಸುಃ ॥
ಅನುವಾದ
ಅಚಿಂತ್ಯ ಶಕ್ತಿ ಸಂಪನ್ನನಾದ ಭಗವಾನ್ ಶ್ರೀಕೃಷ್ಣನ ತೋಳು ಕ್ಷಣ-ಕ್ಷಣಕ್ಕೂ ದಪ್ಪವಾಗುತ್ತಾ ಕೇಶಿಯ ಕುತ್ತಿಗೆಗೆ ಹಾಕಿದ ಬಿರಟೆಯಂತಾಗಿ ರಾಕ್ಷಸನ ಉಸಿರುನಿಂತು ಹೋಯಿತು. ಕಾಲುಗಳು ಅದುರತೊಡಗಿದವು. ಶರೀರವು ಬೆವರಿನಿಂದ ಒದ್ದೆಯಾಯಿತು. ಕಣ್ಣುಗುಡ್ಡೆಗಳು ಹೊರ ಬಂದುವು. ಕೇಶಿಯು ಮಲ-ಮೂತ್ರಗಳನ್ನು ಸುರಿಸುತ್ತಾ, ನೆಲದ ಮೇಲೆ ಬಿದ್ದು ಸ್ವಲ್ಪ ಹೊತ್ತಿನಲ್ಲೆ ಪ್ರಾಣಗಳನ್ನು ತೊರೆದನು. ॥8॥
(ಶ್ಲೋಕ-9)
ಮೂಲಮ್
ತದ್ದೇಹತಃ ಕರ್ಕಟಿಕಾಲೋಪಮಾದ್
ವ್ಯಸೋರಪಾಕೃಷ್ಯ ಭುಜಂ ಮಹಾಭುಜಃ ।
ಅವಿಸ್ಮಿತೋಯತ್ನಹತಾರಿರುತ್ಸ್ಮಯೈಃ
ಪ್ರಸೂನವರ್ಷೈರ್ದಿವಿಷದ್ಭಿರೀಡಿತಃ ॥
ಅನುವಾದ
ಪಕ್ವವಾದ ಕೆಕ್ಕೆರಿಕೆ ಹಣ್ಣು ಬಿರಿಯುವಂತೆ ಬಿರಿದು ಹೋದ ರಾಕ್ಷಸನ ಬಾಯಿಂದ ಮಹಾಬಾಹುವಾದ ಶ್ರೀಕೃಷ್ಣನು ತನ್ನ ಎಡದ ಕೈಯನ್ನು ಸೆಳೆದುಕೊಂಡನು. ಇದರಿಂದ ಶ್ರೀಕೃಷ್ಣನಿಗೆ ಆಶ್ಚರ್ಯವುಂಟಾಗಲಿಲ್ಲ. ಹೆಚ್ಚಿನ ಪ್ರಯತ್ನವಿಲ್ಲದೆಯೇ ಶತ್ರುವಿನ ನಾಶವಾಯಿತು. ದೇವತೆಗಳಿಗೆ ಇದನ್ನು ಕಂಡು ಆಶ್ಚರ್ಯವಾಯಿತು. ಅವರೆಲ್ಲರೂ ಅತ್ಯಂತ ಪ್ರಸನ್ನರಾಗಿ ಭಗವಂತನ ಮೇಲೆ ಹೂಮಳೆಗರೆದು, ಅವನನ್ನು ನಾನಾ ರೀತಿಯಿಂದ ಸ್ತೋತ್ರಮಾಡಿದರು. ॥9॥
(ಶ್ಲೋಕ-10)
ಮೂಲಮ್
ದೇವರ್ಷಿರುಪಸಂಗಮ್ಯ ಭಾಗವತಪ್ರವರೋ ನೃಪ ।
ಕೃಷ್ಣಮಕ್ಲಿಷ್ಟಕರ್ಮಾಣಂ ರಹಸ್ಯೇತದಭಾಷತ ॥
ಅನುವಾದ
ಪರೀಕ್ಷಿತನೇ! ಭಾಗವತರಲ್ಲಿ ಶ್ರೇಷ್ಠರಾದ ನಾರದ ಮುನಿಗಳು ಕಂಸನಲ್ಲಿಂದ ಮರಳಿ ಅದ್ಭುತ ಕರ್ಮಿಯಾದ ಭಗವಾನ್ ಶ್ರೀಕೃಷ್ಣನಲ್ಲಿಗೆ ಬಂದು ಏಕಾಂತದಲ್ಲಿ ಅವನನ್ನು ಸಂಧಿಸಿ ಹೀಗೆ ಹೇಳ ತೊಡಗಿದರು. ॥10॥
(ಶ್ಲೋಕ-11)
ಮೂಲಮ್
ಕೃಷ್ಣ ಕೃಷ್ಣಾಪ್ರಮೇಯಾತ್ಮನ್ ಯೋಗೇಶ ಜಗದೀಶ್ವರ ।
ವಾಸುದೇವಾಖಿಲಾವಾಸ ಸಾತ್ವತಾಂ ಪ್ರವರ ಪ್ರಭೋ ॥
ಅನುವಾದ
ಸಚ್ಚಿದಾನಂದ ಸ್ವರೂಪನಾದ ಕೃಷ್ಣನೇ! ನಿನ್ನ ಸ್ವರೂಪವು ಮನ-ವಚನಗಳಿಗೆ ನಿಲುಕುವುದಿಲ್ಲ. ನೀನು ಯೋಗೇಶ್ವರನಾಗಿರುವೆ. ಜಗದೀಶ್ವರನೇ! ವಾಸುದೇವನೇ! ಸಮಸ್ತ ಪ್ರಾಣಿಗಳ ಹೃದಯದಲ್ಲಿ ವಾಸಿಸುವವನೇ! ಸಾತ್ವತ ಶ್ರೇಷ್ಠನೇ! ಪ್ರಭುವೇ! ನಿನಗೆ ನಮಸ್ಕಾರವು. ॥11॥
(ಶ್ಲೋಕ-12)
ಮೂಲಮ್
ತ್ವಮಾತ್ಮಾ ಸರ್ವಭೂತಾನಾಮೇಕೋ ಜ್ಯೋತಿರಿವೈಧಸಾಮ್ ।
ಗೂಢೋ ಗುಹಾಶಯಃ ಸಾಕ್ಷೀ ಮಹಾಪುರುಷ ಈಶ್ವರಃ ॥
ಅನುವಾದ
ದೇವದೇವನೇ! ಒಂದೇ ಅಗ್ನಿಯು ಎಲ್ಲ ಕಟ್ಟಿಗೆಗಳಲ್ಲಿಯೂ ವ್ಯಾಪಿಸಿರುವಂತೆ ನೀನೊಬ್ಬನೇ ಸಕಲ ಪ್ರಾಣಿಗಳ ಹೃದಯದಲ್ಲಿ ಆತ್ಮರೂಪದಿಂದ ವ್ಯಾಪಿಸಿಕೊಂಡಿರುವೆ. ಆತ್ಮರೂಪದಲ್ಲಿದ್ದರೂ ನೀನು ನಿಗೂಢನಾಗಿರುವೆ. ಪಂಚಕೋಶಾತ್ಮಕವಾದ ಗುಹೆಯಲ್ಲಿ ಅಡಗಿಕೊಂಡಿರುವೆ. ಈಶ್ವರನೂ, ಸರ್ವಸಾಕ್ಷಿಯೂ, ಪುರುಷೋತ್ತಮನೂ, ಸರ್ವನಿಯಾಮಕನೂ ನೀನೇ ಆಗಿರುವೆ. ಅಂತಹ ನಿನಗೆ ನಮಸ್ಕಾರವು. ॥12॥
(ಶ್ಲೋಕ-13)
ಮೂಲಮ್
ಆತ್ಮನಾತ್ಮಾಶ್ರಯಃ ಪೂರ್ವಂ ಮಾಯಯಾ ಸಸೃಜೇ ಗುಣಾನ್ ।
ತೈರಿದಂ ಸತ್ಯಸಂಕಲ್ಪಃ ಸೃಜಸ್ಯತ್ಸ್ಯವಸೀಶ್ವರಃ ॥
ಅನುವಾದ
ಪ್ರಭುವೇ! ಆತ್ಮ ಸ್ವರೂಪನಾದ ನೀನು ಸರ್ವಕ್ಕೂ ಆಶ್ರಯನಾಗಿರುವೆ. ನೀನು ಯಾರನ್ನೂ ಆಶ್ರಯಿಸತಕ್ಕವನಲ್ಲ. ಸೃಷ್ಟಿಯ ಪ್ರಾರಂಭದಲ್ಲಿ ನಿನ್ನ ಮಾಯೆಯಿಂದ ಗುಣಗಳನ್ನು ಸೃಷ್ಟಿಸಿ, ಆ ಗುಣಗಳನ್ನೇ ಸ್ವೀಕರಿಸಿಕೊಂಡು ನೀನು ಜಗತ್ತಿನ ಸೃಷ್ಟಿ, ಸ್ಥಿತಿ, ಪ್ರಳಯಗಳನ್ನು ಮಾಡುತ್ತಿರುವೆ. ಸರ್ವಶಕ್ತಿ ಸಂಪನ್ನನೂ, ಸತ್ಯಸಂಕಲ್ಪನೂ ಆದ ನಿನಗೆ ವಂದಿಸುತ್ತೇನೆ. ॥13॥
(ಶ್ಲೋಕ-14)
ಮೂಲಮ್
ಸ ತ್ವಂ ಭೂಧರಭೂತಾನಾಂ ದೈತ್ಯಪ್ರಮಥರಕ್ಷಸಾಮ್ ।
ಅವತೀರ್ಣೋ ವಿನಾಶಾಯ ಸೇತೂನಾಂ ರಕ್ಷಣಾಯ ಚ ॥
ಅನುವಾದ
ಅಂತಹ ಸಚ್ಚಿದಾನಂದ ಸ್ವರೂಪನಾದ ನೀನು ಈ ಸಮಯದಲ್ಲಿ ರಾಜರಾಗಿ ಹುಟ್ಟಿರುವ ದೈತ್ಯ-ಪ್ರಮಥ-ರಾಕ್ಷಸರ ವಿನಾಶಕ್ಕಾಗಿ ಮತ್ತು ಧರ್ಮದ ಮರ್ಯಾದೆಯನ್ನು ರಕ್ಷಿಸಲಿಕ್ಕಾಗಿಯೇ ಯದುವಂಶದಲ್ಲಿ ಅವತರಿಸಿರುವೆ. ॥14॥
(ಶ್ಲೋಕ-15)
ಮೂಲಮ್
ದಿಷ್ಟ್ಯಾ ತೇ ನಿಹತೋ ದೈತ್ಯೋ ಲೀಲಯಾಯಂ ಹಯಾಕೃತಿಃ ।
ಯಸ್ಯ ಹೇಷಿತಸಂತ್ರಸ್ತಾಸ್ತ್ಯಜಂತ್ಯನಿಮಿಷಾ ದಿವಮ್ ॥
ಅನುವಾದ
ಮಹಾನುಭಾವನೇ! ಕುದುರೆಯ ರೂಪದಲ್ಲಿದ್ದ ಕೇಶಿ ರಾಕ್ಷಸನನ್ನು ಲೀಲಾಜಾಲವಾಗಿ ಸಂಹರಿಸಿದೆ. ಇದು ಸಂತೋಷದ ಸಂಗತಿಯೇ ಆಗಿದೆ. ಆ ರಾಕ್ಷಸನ ಕೆನೆಯುವಿಕೆಯನ್ನು ಕೇಳುತ್ತಲೇ ದೇವತೆಗಳು ಸ್ವರ್ಗದಿಂದ ಓಡಿ ಹೋಗುತ್ತಿದ್ದರು. ॥15॥
(ಶ್ಲೋಕ-16)
ಮೂಲಮ್
ಚಾಣೂರಂ ಮುಷ್ಟಿಕಂ ಚೈವ ಮಲ್ಲಾನನ್ಯಾಂಶ್ಚ ಹಸ್ತಿನಮ್ ।
ಕಂಸಂ ಚ ನಿಹತಂ ದ್ರಕ್ಷ್ಯೇ ಪರಶ್ವೋಹನಿ ತೇ ವಿಭೋ ॥
ಅನುವಾದ
ಪ್ರಭುವೇ! ಮುಂದಿನ ಎರಡು ದಿವಸಗಳಲ್ಲಿಯೇ ಚಾಣೂರ ಮುಷ್ಟಿಕರನ್ನೂ, ಕುವಲಯಾಪೀಡವೆಂಬ ಮತ್ತ ಗಜವನ್ನೂ, ಇತರ ಹಲವಾರು ಜಟ್ಟಿಗಳನ್ನೂ, ಕಂಸನನ್ನೂ ನೀನು ಸಂಹರಿಸುವ ಅದ್ಭುತ ದೃಶ್ಯವನ್ನು ನಾನು ಕಾಣಲಿದ್ದೇನೆ. ॥16॥
(ಶ್ಲೋಕ-17)
ಮೂಲಮ್
ತಸ್ಯಾನುಶಂಖಯವನಮುರಾಣಾಂ ನರಕಸ್ಯ ಚ ।
ಪಾರಿಜಾತಾಪಹರಣಮಿಂದ್ರಸ್ಯ ಚ ಪರಾಜಯಮ್ ॥
ಅನುವಾದ
ಅನಂತರ ಶಂಖಾಸುರ, ಕಾಲಯವನ, ಮುರ, ನರಕಾಸುರರ ವಧೆಯನ್ನು ನೋಡುವೆ. ಇಂದ್ರನ ಪರಾಜಯವನ್ನು, ಸ್ವರ್ಗದಿಂದ ಪಾರಿಜಾತಾಪಹರಣ ವನ್ನು ನಾನು ಕಾಣಲಿರುವೆನು. ॥17॥
(ಶ್ಲೋಕ-18)
ಮೂಲಮ್
ಉದ್ವಾಹಂ ವೀರಕನ್ಯಾನಾಂ ವೀರ್ಯಶುಲ್ಕಾದಿಲಕ್ಷಣಮ್ ।
ನೃಗಸ್ಯ ಮೋಕ್ಷಣಂ ಶಾಪಾದ್ದ್ವಾರಕಾಯಾಂ ಜಗತ್ಪತೇ ॥
ಅನುವಾದ
ವೀರ್ಯಪರಾ ಕ್ರಮಗಳೇ ಕನ್ಯಾಶುಲ್ಕವಾಗಿ ಉಳ್ಳ ವೀರಕನ್ಯೆಯರೊಡನೆ ನಿನ್ನ ಶುಭವಿವಾಹಗಳಾಗುವುದನ್ನು ನಾನು ನೋಡುವೆನು. ಜಗತ್ಪತಿಯೇ! ನೀನು ದ್ವಾರಕೆಯಲ್ಲಿಯೇ ಇರುತ್ತಾ ನೃಗರಾಜನನ್ನು ಶಾಪದಿಂದ ಮುಕ್ತಗೊಳಿಸುವೆ. ॥18॥
(ಶ್ಲೋಕ-19)
ಮೂಲಮ್
ಸ್ಯಮಂತಕಸ್ಯ ಚ ಮಣೇರಾದಾನಂ ಸಹ ಭಾರ್ಯಯಾ ।
ಮೃತಪುತ್ರಪ್ರದಾನಂ ಚ ಬ್ರಾಹ್ಮಣಸ್ಯ ಸ್ವಧಾಮತಃ ॥
ಅನುವಾದ
ಸ್ಯಮಂತಕ ಮಣಿಯನ್ನು, ಜಾಂಬವತಿಯನ್ನು ಜಾಂಬವಂತನಿಂದ ಪಡೆದುಕೊಳ್ಳುವೆ. ಬ್ರಾಹ್ಮಣನ ಮೃತಪುತ್ರನನ್ನು ತನ್ನ ಧಾಮದಿಂದ ತಂದು ಕೊಡುವೆ. ॥19॥
(ಶ್ಲೋಕ-20)
ಮೂಲಮ್
ಪೌಂಡ್ರಕಸ್ಯ ವಧಂ ಪಶ್ಚಾತ್ ಕಾಶೀಪುರ್ಯಾಶ್ಚ ದೀಪನಮ್ ।
ದಂತವಕಸ್ಯ ನಿಧನಂ ಚೈದ್ಯಸ್ಯ ಚ ಮಹಾಕ್ರತೌ ॥
ಅನುವಾದ
ಇದಾದ ಬಳಿಕ ನೀನು ಪೌಂಡ್ರಕ ವಾಸುದೇವನನ್ನು ಸಂಹರಿಸುವೆ. ಕಾಶೀಪುರಿಯನ್ನು ಸುಟ್ಟುಹಾಕುವೆ. ಯುಧಿಷ್ಠಿರನ ರಾಜಸೂಯ ಯಾಗದಲ್ಲಿ ಚೇದಿರಾಜನಾದ ಶಿಶುಪಾಲನನ್ನು ಸಂಹರಿಸುವೆ. ಅಲ್ಲಿಂದ ಹಿಂದಿರುಗುವಾಗ ಅವನ ತಮ್ಮನಾದ ದಂತವಕನನ್ನೂ ನಾಶಮಾಡುವೆ. ॥20॥
(ಶ್ಲೋಕ-21)
ಮೂಲಮ್
ಯಾನಿ ಚಾನ್ಯಾನಿ ವೀರ್ಯಾಣಿ ದ್ವಾರಕಾಮಾವಸನ್ ಭವಾನ್ ।
ಕರ್ತಾ ದ್ರಕ್ಷ್ಯಾಮ್ಯಹಂ ತಾನಿ ಗೇಯಾನಿ ಕವಿಭಿರ್ಭುವಿ ॥
ಅನುವಾದ
ಪ್ರಭುವೇ! ದ್ವಾರಕೆಯಲ್ಲಿ ವಾಸಿಸುತ್ತಿರುವಾಗ ನೀನು ಪ್ರಕಟಿಸಲಿರುವ ಇನ್ನೂ ಹಲವಾರು ಪ್ರಸಂಗಗಳನ್ನು ಪ್ರಭಾವಶಾಲಿಗಳಾದ ಜ್ಞಾನೀ ಕವಿಗಳು ಭೂಲೋಕದಲ್ಲಿ ಹಾಡುವರು. ಇವೆಲ್ಲವನ್ನು ನಾನು ಪ್ರತ್ಯಕ್ಷವಾಗಿ ಕಾಣಲಿದ್ದೇನೆ. ॥21॥
(ಶ್ಲೋಕ-22)
ಮೂಲಮ್
ಅಥ ತೇ ಕಾಲರೂಪಸ್ಯ ಕ್ಷಪಯಿಷ್ಣೋರಮುಷ್ಯ ವೈ ।
ಅಕ್ಷೌಹಿಣೀನಾಂ ನಿಧನಂ ದ್ರಕ್ಷ್ಯಾಮ್ಯರ್ಜುನಸಾರಥೇಃ ॥
ಅನುವಾದ
ಅನಂತರ ಭೂಭಾರಹರಣಕ್ಕಾಗಿ ಕಾಲಸ್ವರೂಪನಾದ ನೀನು ಅರ್ಜುನನಿಗೆ ಸಾರಥಿಯಾಗಿ ಅನೇಕ ಅಕ್ಷೌಹಿಣೀ ಸೈನ್ಯವನ್ನು ಸಂಹರಿಸುವೆ. ಇವೆಲ್ಲವನ್ನೂ ನಾನು ಕಣ್ಣಾರೆ ಕಾಣಲಿದ್ದೇನೆ. ॥22॥
(ಶ್ಲೋಕ-23)
ಮೂಲಮ್
ವಿಶುದ್ಧವಿಜ್ಞಾನಘನಂ ಸ್ವಸಂಸ್ಥಯಾ
ಸಮಾಪ್ತ ಸರ್ವಾರ್ಥಮಮೋಘವಾಂಛಿತಮ್ ।
ಸ್ವತೇಜಸಾ ನಿತ್ಯನಿವೃತ್ತಮಾಯಾ
ಗುಣಪ್ರವಾಹಂ ಭಗವಂತಮೀಮಹಿ ॥
ಅನುವಾದ
ಸ್ವಾಮಿಯೇ! ನೀನು ವಿಶುದ್ಧವಿಜ್ಞಾನ ಘನಸ್ವರೂಪನು. ಕೇವಲ ಜ್ಞಾನಮೂರ್ತಿಯು. ಬ್ರಹ್ಮಾನಂದವೆಂಬ ನಿಜ ಸ್ವರೂಪ ಸ್ಥಿತಿಯಿಂದ ಸರ್ವಾರ್ಥಗಳನ್ನು ಪಡೆದು ಕೊಂಡಿರುವವನು. ಆಪ್ತಕಾಮನು, ಸಫಲವಾದ ಇಷ್ಟಾರ್ಥವುಳ್ಳವನು. ಸತ್ಯಸಂಕಲ್ಪನು, ಚಿನ್ಮಯಶಕ್ತಿಯ ತೇಜಸ್ಸಿನಿಂದ ಸತ್ತ್ವಾದಿಮಾಯಾಗುಣಗಳ ಪ್ರವಾಹವನ್ನು ನಿತ್ಯನಿರಂತರವಾಗಿ ನಿರಾಕರಿಸತಕ್ಕವನು. ಅಂತಹ ಸರ್ವಶಕ್ತನಾದ ಭಗವಂತನನ್ನು ಶರಣುಹೊಂದುತ್ತೇನೆ. ॥23॥
(ಶ್ಲೋಕ-24)
ಮೂಲಮ್
ತ್ವಾಮೀಶ್ವರಂ ಸ್ವಾಶ್ರಯಮಾತ್ಮಮಾಯಯಾ
ವಿನಿರ್ಮಿತಾಶೇಷವಿಶೇಷಕಲ್ಪನಮ್ ।
ಕ್ರೀಡಾರ್ಥಮದ್ಯಾತ್ತಮನುಷ್ಯವಿಗ್ರಹಂ
ನತೋಸ್ಮಿ ಧುರ್ಯಂ ಯದುವೃಷ್ಣಿ ಸಾತ್ವತಾಮ್ ॥
ಅನುವಾದ
ನೀನು ಸಮಸ್ತರ ಅಂತರ್ಯಾಮಿಯಾಗಿದ್ದು, ಎಲ್ಲರನ್ನೂ ನಿಯಂತ್ರಿಸುವೆ. ತಾನೇ-ತನ್ನಲ್ಲಿ ಸ್ಥಿತನಾದ ಪರಮ ಸ್ವತಂತ್ರನು. ಜಗತ್ತು ಮತ್ತು ಅದರ ಅಶೇಷ ವಿಶೇಷಗಳನ್ನು-ಭಾವ - ಅಭಾವ ರೂಪವಾದ ಎಲ್ಲ ಭೇದ ವಿಭೇದಗಳ ಕಲ್ಪನೆ ಕೇವಲ ನಿನ್ನ ಮಾಯೆಯಿಂದಲೇ ಉಂಟಾಗಿದೆ. ಈ ಸಮಯದಲ್ಲಿ ನೀನು ನಿನ್ನ ಲೀಲೆಗಳನ್ನು ಪ್ರಕಟಿಸಲಿಕ್ಕಾಗಿ ಮನುಷ್ಯನಂತೆ ಶ್ರೀವಿಗ್ರಹದಿಂದ ಪ್ರಕಟನಾಗಿರುವೆ. ನೀನು ಯದು, ವೃಷ್ಣಿ, ಸಾತ್ವತ ವಂಶೀಯರ ಶಿರೋಮಣಿಯಾಗಿರುವೆ. ಪ್ರಭೋ! ನಾನು ನಿನಗೆ ನಮಸ್ಕರಿಸುತ್ತಿದ್ದೇನೆ. ॥24॥
(ಶ್ಲೋಕ-25)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏವಂ ಯದುಪತಿಂ ಕೃಷ್ಣಂ ಭಾಗವತಪ್ರವರೋ ಮುನಿಃ ।
ಪ್ರಣಿಪತ್ಯಾಭ್ಯನುಜ್ಞಾತೋ ಯಯೌ ತದ್ದರ್ಶನೋತ್ಸವಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಭಾಗವತ ಶ್ರೇಷ್ಠರಾದ ನಾರದ ಮಹರ್ಷಿಗಳು ಹೀಗೆ ಭಗವಂತನನ್ನು ಸ್ತುತಿಸಿ, ನಮಸ್ಕರಿಸಿದರು. ಭಗವಂತನ ದರ್ಶನದಿಂದ ಉತ್ಸಾಹಗೊಂಡು ಶ್ರೀಕೃಷ್ಣನ ಅನುಮತಿಯನ್ನು ಪಡೆದು ಹೊರಟು ಹೋದರು. ॥25॥
(ಶ್ಲೋಕ-26)
ಮೂಲಮ್
ಭಗವಾನಪಿ ಗೋವಿಂದೋ ಹತ್ವಾ ಕೇಶಿನಮಾಹವೇ ।
ಪಶೂನಪಾಲಯತ್ಪಾಲೈಃ ಪ್ರೀತೈರ್ವ್ರಜಸುಖಾವಹಃ ॥
ಅನುವಾದ
ಇತ್ತ ಭಗವಾನ್ ಶ್ರೀಕೃಷ್ಣನು ಯುದ್ಧದಲ್ಲಿ ಕೇಶಿಯನ್ನು ಕೊಂದು ಮತ್ತೆ ತನ್ನ ಪ್ರಿಯರಾದ ಮತ್ತು ಪ್ರಸನ್ನಚಿತ್ತರಾದ ಗೋಪಾಲಕರೊಡನೆ ಮೊದಲಿನಂತೆ ಪಶುಪಾಲನೆಯಲ್ಲಿ ತೊಡಗಿ ವ್ರಜವಾಸಿಗಳಿಗೆ ಪರಮಾನಂದವನ್ನು ಉಂಟುಮಾಡುತ್ತಿದ್ದನು. ॥26॥
(ಶ್ಲೋಕ-27)
ಮೂಲಮ್
ಏಕದಾ ತೇ ಪಶೂನ್ ಪಾಲಾಶ್ಚಾರಯಂತೋದ್ರಿಸಾನುಷು ।
ಚಕ್ರುರ್ನಿಲಾಯನಕ್ರೀಡಾಶ್ಚೋರಪಾಲಾಪದೇಶತಃ ॥
ಅನುವಾದ
ಒಮ್ಮೆ ಗೋಪಾಲಕರು ಪರ್ವತದ ತಪ್ಪಲಿನಲ್ಲಿ ಹಸುವೇ ಮೊದಲಾದ ಪಶುಗಳನ್ನು ಮೇಯಿಸುತ್ತಾ ಕೆಲವರು ಕಳ್ಳರೂ, ಕೆಲವರು ಕುರುಬರೂ, ಕೆಲವರು ಕುರಿಗಳೂ ಆಗಿ ಆಟವಾಡತೊಡಗಿದರು. ॥27॥
(ಶ್ಲೋಕ-28)
ಮೂಲಮ್
ತತ್ರಾಸನ್ಕತಿಚಿಚ್ಚೋರಾಃ ಪಾಲಾಶ್ಚ ಕತಿಚಿನ್ನೃಪ ।
ಮೇಷಾಯಿತಾಶ್ಚ ತತ್ರೈಕೇ ವಿಜಹ್ರುರಕುತೋಭಯಾಃ ॥
ಅನುವಾದ
ರಾಜೇಂದ್ರ! ಅವರಲ್ಲಿ ಕೆಲವರು ಕಳ್ಳರು, ಕೆಲವರು ರಕ್ಷಕರು, ಕೆಲವರು ಕುರಿಗಳೂ ಆಗಿದ್ದರು. ಹೀಗೆ ನಿರ್ಭಯರಾಗಿ ಆಟದಲ್ಲಿ ತನ್ಮಯರಾದರು. ॥28॥
(ಶ್ಲೋಕ-29)
ಮೂಲಮ್
ಮಯಪುತ್ರೋ ಮಹಾಮಾಯೋ
ವ್ಯೋಮೋ ಗೋಪಾಲವೇಷಧೃಕ್ ।
ಮೇಷಾಯಿತಾನಪೋವಾಹ
ಪ್ರಾಯಶ್ಚೋರಾಯಿತೋ ಬಹೂನ್ ॥
ಅನುವಾದ
ಅದೇ ಸಮಯದಲ್ಲಿ ಗೊಲ್ಲನ ವೇಷವನ್ನು ಧರಿಸಿ ವ್ಯೋಮಾಸುರನೆಂಬ ರಕ್ಕಸನು ಅಲ್ಲಿಗೆ ಬಂದನು. ಅವನು ಮಾಯಾವಿಗಳ ಆಚಾರ್ಯ ಮಯಾಸುರನ ಪುತ್ರನಾಗಿದ್ದನು ಹಾಗೂ ಸ್ವತಃ ಮಹಾ ಮಾಯಾವಿಯಾಗಿದ್ದನು. ಅವನು ಆಟದಲ್ಲಿ ಕಳ್ಳನಾಗಿ ಕುರಿಗಳಾಗಿದ್ದ ಹುಡುಗರನ್ನು ಕದ್ದುಕೊಂಡು ಹೊಗಿ ಅಡಗಿಸುತ್ತಿದ್ದನು. ॥29॥
(ಶ್ಲೋಕ-30)
ಮೂಲಮ್
ಗಿರಿದರ್ಯಾಂ ವಿನಿಕ್ಷಿಪ್ಯ ನೀತಂ ನೀತಂ ಮಹಾಸುರಃ ।
ಶಿಲಯಾ ಪಿದಧೇ ದ್ವಾರಂ ಚತುಃಪಂಚಾವಶೇಷಿತಾಃ ॥
ಅನುವಾದ
ಆ ಮಹಾಸುರನು ಪದೇ-ಪದೇ ಹುಡುಗರನ್ನು ಎತ್ತಿಕೊಂಡು ಹೋಗಿ ಪರ್ವತದ ಗುಹೆಯೊಂದರಲ್ಲಿ ಇಟ್ಟು, ಬಾಗಿಲಿಗೆ ಒಂದು ದೊಡ್ಡ ಬಂಡೆಯನ್ನು ಮುಚ್ಚಿಡುತ್ತಿದ್ದನು. ಹೀಗೆ ಆಡುತ್ತಿದ್ದ ಗೊಲ್ಲಬಾಲಕರಲ್ಲಿ ಕೇವಲ ನಾಲ್ಕೈದು ಬಾಲಕರು ಮಾತ್ರ ಉಳಿದರು. ॥30॥
(ಶ್ಲೋಕ-31)
ಮೂಲಮ್
ತಸ್ಯ ತತ್ಕರ್ಮ ವಿಜ್ಞಾಯ ಕೃಷ್ಣಃ ಶರಣದಃ ಸತಾಮ್ ।
ಗೋಪಾನ್ ನಯಂತಂ ಜಗ್ರಾಹ ವೃಕಂ ಹರಿರಿವೌಜಸಾ ॥
ಅನುವಾದ
ಭಕ್ತವತ್ಸಲನಾದ ಭಗವಂತನು ಆ ರಾಕ್ಷಸನ ದುಷ್ಟಕಾರ್ಯವನ್ನು ಅರಿತುಕೊಂಡು, ಅವನು ಬಾಲಕನನ್ನು ಎತ್ತಿಕೊಂಡು ಹೋಗುತ್ತಿರುವಾಗ ತೋಳವನ್ನು ಸಿಂಹವು ಹಿಡಿಯುವಂತೆ ಅವನನ್ನು ಹಿಡಿದುಕೊಂಡನು. ॥31॥
(ಶ್ಲೋಕ-32)
ಮೂಲಮ್
ಸ ನಿಜಂ ರೂಪಮಾಸ್ಥಾಯ ಗಿರೀಂದ್ರಸದೃಶಂ ಬಲೀ ।
ಇಚ್ಛನ್ವಿಮೋಕ್ತುಮಾತ್ಮಾನಂ ನಾಶಕ್ನೋದ್ಗ್ರಹಣಾತುರಃ ॥
ಅನುವಾದ
ಮಹಾಬಲಿಯಾದ ವ್ಯೋಮಾಸುರನು ಪರ್ವತದಂತಿರುವ ತನ್ನ ನಿಜರೂಪವನ್ನು ಪ್ರಕಟಿಸಿ ಶ್ರೀಕೃಷ್ಣನಿಂದ ತನ್ನನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದನು. ಆದರೆ ಶ್ರೀಕೃಷ್ಣನ ಹಿಡಿತದಲ್ಲಿ ಸಿಲುಕಿದ ಅವನಿಂದ ಬಿಡಿಸಿಕೊಳ್ಳಲಾಗಲಿಲ್ಲ. ॥32॥
(ಶ್ಲೋಕ-33)
ಮೂಲಮ್
ತಂ ನಿಗೃಹ್ಯಾಚ್ಯುತೋ ದೋರ್ಭ್ಯಾಂ ಪಾತಯಿತ್ವಾ ಮಹೀತಲೇ ।
ಪಶ್ಯತಾಂ ದಿವಿ ದೇವಾನಾಂ ಪಶುಮಾರಮಮಾರಯತ್ ॥
(ಶ್ಲೋಕ-34)
ಮೂಲಮ್
ಗುಹಾಪಿಧಾನಂ ನಿರ್ಭಿದ್ಯ ಗೋಪಾನ್ನಿಃಸಾರ್ಯ ಕೃಚ್ಛ್ರತಃ ।
ಸ್ತೂಯಾಮಾನಃ ಸುರೈರ್ಗೋಪೈಃ ಪ್ರವಿವೇಶ ಸ್ವಗೋಕುಲಮ್ ॥
ಅನುವಾದ
ಆಗ ಭಗವಾನ್ ಶ್ರೀಕೃಷ್ಣನು ತನ್ನೆರಡೂ ಕೈಗಳಿಂದ ಅದುಮಿ ಹಿಡಿದು ಯಜ್ಞಪಶುವನ್ನು ಕೊಲ್ಲುವಂತೆ ಕತ್ತುಹಿಸುಕಿ ಕೊಂದುಬಿಟ್ಟನು. ಆಗ ದೇವತೆಗಳು, ಗೊಲ್ಲ ಬಾಲಕರು ಭಗವಂತನನ್ನು ಸ್ತುತಿಸಿದರು. ಅನಂತರ ಪರಮ ದಯಾಳುವಾದ ಶ್ರೀಕೃಷ್ಣನು ಗುಹೆಯ ದ್ವಾರಕ್ಕೆ ಮುಚ್ಚಿದ ಬಂಡೆಯನ್ನು ಜರುಗಿಸಿ ಒಳಗೆ ಕೂಡಿ ಹಾಕಿದ್ದ ಗೊಲ್ಲ ಬಾಲಕರೊಂದಿಗೆ ವ್ರಜವನ್ನು ಪ್ರವೇಶಿಸಿದನು. ॥33-34॥
ಅನುವಾದ (ಸಮಾಪ್ತಿಃ)
ಮೂವತ್ತೇಳನೆಯ ಅಧ್ಯಾಯವು ಮುಗಿಯಿತು. ॥37॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ
ವ್ಯೋಮಾಸುರವಧೋ ನಾಮ ಸಪ್ತತ್ರಿಂಶೋಽಧ್ಯಾಯಃ ॥37॥