೩೬

[ಮೂವತ್ತಾರನೆಯ ಅಧ್ಯಾಯ]

ಭಾಗಸೂಚನಾ

ಅರಿಷ್ಟಾಸುರನ ಉದ್ಧಾರ, ಕಂಸನು ಅಕ್ರೂರನನ್ನು ವ್ರಜಕ್ಕೆ ಕಳುಹಿಸಿಕೊಟ್ಟಿದ್ದು

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಅಥ ತರ್ಹ್ಯಾಗತೋ ಗೋಷ್ಠಮರಿಷ್ಟೋ ವೃಷಭಾಸುರಃ ।
ಮಹೀಂ ಮಹಾಕಕುತ್ಕಾಯಃ ಕಂಪಯನ್ ಖುರವಿಕ್ಷತಾಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಗೋ-ಗೋಪಾಲಕರೊಂದಿಗೆ ವ್ರಜಕ್ಕೆ ಹಿಂದಿರುಗುತ್ತಿರುವಾಗ ಮಹಾಕಾಯನಾದ ಅರಿಷ್ಟಾಸುರನೆಂಬ ದೈತ್ಯನು ಎತ್ತರವಾದ ಹಿಳಲುಗಳುಳ್ಳ ಗೂಳಿಯ ರೂಪವನ್ನು ಧರಿಸಿ ತನ್ನ ಗೊರಸುಗಳಿಂದ ಭೂಮಿಯನ್ನು ಕೆದಕುತ್ತಾ, ನಡುಗಿಸುತ್ತಾ ಗೋಕುಲಕ್ಕೆ ನುಗ್ಗಿದನು. ॥1॥

(ಶ್ಲೋಕ-2)

ಮೂಲಮ್

ರಂಭಮಾಣಃ ಖರತರಂ ಪದಾ ಚ ವಿಲಿಖನ್ಮಹೀಮ್ ।
ಉದ್ಯಮ್ಯ ಪುಚ್ಛಂ ವಪ್ರಾಣಿ ವಿಷಾಣಾಗ್ರೇಣ ಚೋದ್ಧರನ್ ॥

ಅನುವಾದ

ಅವನು ಗಟ್ಟಿಯಾಗಿ ಗರ್ಜಿಸುತ್ತಾ, ಕಾಲುಗಳಿಂದ ಧೂಳನ್ನು ಹಾರಿಸುತ್ತಿದ್ದನು. ಬಾಲವನ್ನೆತ್ತಿಕೊಂಡು, ಕೋಡುಗಳಿಂದ ಹೊಲಗಳ ಬದುಗಳನ್ನು, ಆವಾರದ ಗೋಡೆಗಳನ್ನು ಕೆಡಹುತ್ತಾ ಹೋಗುತ್ತಿದ್ದನು. ॥2॥

(ಶ್ಲೋಕ-3)

ಮೂಲಮ್

ಕಿಂಚಿತ್ಕಿಂಚಚ್ಛಕೃನ್ಮುಂಚನ್ ಮೂತ್ರಯನ್ ಸ್ತಬ್ಧಲೋಚನಃ ।
ಯಸ್ಯ ನಿರ್ಹ್ರಾದಿತೇನಾಂಗ ನಿಷ್ಠುರೇಣ ಗವಾಂ ನೃಣಾಮ್ ॥

(ಶ್ಲೋಕ-4)

ಮೂಲಮ್

ಪತಂತ್ಯಕಾಲತೋ ಗರ್ಭಾಃ ಸ್ರವಂತಿ ಸ್ಮ ಭಯೇನ ವೈ ।
ನಿರ್ವಿಶಂತಿ ಘನಾ ಯಸ್ಯ ಕಕುದ್ಯಚಲಶಂಕಯಾ ॥

ಅನುವಾದ

ಆ ಗೂಳಿಯ ರೂಪದ ರಾಕ್ಷಸನು ಬಾರಿ-ಬಾರಿಗೂ ಸ್ವಲ್ಪ-ಸ್ವಲ್ಪ ಪುರೀಷ-ಮೂತ್ರಗಳನ್ನು ವಿಸರ್ಜನೆ ಮಾಡುತ್ತಿದ್ದನು. ಎವೆಯಿಕ್ಕದೆ ಕಣ್ಣುಗಳಿಂದ ದುರುಗುಟ್ಟಿ ಕೊಂಡು ನೋಡುತ್ತಿದ್ದನು. ಅವನ ನಿಷ್ಠುರವಾದ ಗುಟರಿನಿಂದ ಸ್ತ್ರೀಯರ ಮತ್ತು ಹಸುಗಳ ಗರ್ಭಗಳು ಅಕಾಲದಲ್ಲಿ ಕಳಚಿ ಬೀಳುತ್ತಿದ್ದವು. ಕೆಲವರಿಗೆ ಭಯದಿಂದಲೇ ಗರ್ಭಸ್ರಾವವಾಗುತ್ತಿತ್ತು. ಅರಿಷ್ಟಾಸುರನ ಹಿಳಲಿನ ಮೇಲೆ ಅದು ಪರ್ವತ ವಾಗಿರಬಹುದೆಂದು ಭ್ರಮಿಸಿ ಮೋಡಗಳು ಕುಳಿತು ಕೊಳ್ಳುತ್ತಿದ್ದವು. ॥3-4॥

(ಶ್ಲೋಕ-5)

ಮೂಲಮ್

ತಂ ತೀಕ್ಷ್ಣಶೃಂಗಮುದ್ವೀಕ್ಷ್ಯ ಗೋಪ್ಯೋ ಗೋಪಾಶ್ಚ ತತ್ರಸುಃ ।
ಪಶವೋ ದುದ್ರುವುರ್ಭೀತಾ ರಾಜನ್ ಸಂತ್ಯಜ್ಯ ಗೋಕುಲಮ್ ॥

ಅನುವಾದ

ಪರೀಕ್ಷಿತನೇ! ತೀಕ್ಷ್ಣವಾದ ಕೊಂಬುಗಳುಳ್ಳ ಆ ಗೂಳಿಯನ್ನು ನೋಡಿ ಗೋಪಿಯರು, ಗೋಪಾಲಕರೆಲ್ಲರೂ ಭಯಗೊಂಡರು. ಪಶುಗಳಾದರೋ ಅತ್ಯಂತ ಭಯದಿಂದ ಗೋಕುಲವನ್ನೇ ತೊರೆದು ಓಡಿ ಹೋದವು. ॥5॥

(ಶ್ಲೋಕ-6)

ಮೂಲಮ್

ಕೃಷ್ಣ ಕೃಷ್ಣೇತಿ ತೇ ಸರ್ವೇ ಗೋವಿಂದಂ ಶರಣಂ ಯಯುಃ ।
ಭಗವಾನಪಿ ತದ್ವೀಕ್ಷ್ಯ ಗೋಕುಲಂ ಭಯವಿದ್ರುತಮ್ ॥

ಅನುವಾದ

ಆ ಸಮಯದಲ್ಲಿ ವ್ರಜವಾಸಿಗಳೆಲ್ಲರೂ ‘ಶ್ರೀಕೃಷ್ಣ! ಕೃಷ್ಣಾ! ನಮ್ಮನ್ನು ಕಾಪಾಡು, ಕಾಪಾಡು’ ಎಂದು ಕೂಗುತ್ತಾ ಭಗವಾನ್ ಶ್ರೀಕೃಷ್ಣನಿಗೆ ಶರಣಾದರು. ಗೋಕುಲವು ಅತ್ಯಂತ ಭಯಾತುರವಾಗಿ ಇರುವುದನ್ನು ಭಗವಂತನು ನೋಡಿದನು. ॥6॥

(ಶ್ಲೋಕ-7)

ಮೂಲಮ್

ಮಾ ಭೈಷ್ಟೇತಿ ಗಿರಾಶ್ವಾಸ್ಯ ವೃಷಾಸುರಮುಪಾಹ್ವಯತ್ ।
ಗೋಪಾಲೈಃ ಪಶುಭಿರ್ಮಂದ ತ್ರಾಸಿತೈಃ ಕಿಮಸತ್ತಮ ॥

ಅನುವಾದ

ಆಗ ಅವನು ‘ಹೆದರ ಬೇಡಿರಿ, ಭಯ ಪಡಬೇಡಿ’ ಎಂದು ಹೇಳುತ್ತಾ ಅವರಲ್ಲಿ ಧೈರ್ಯವನ್ನು ತುಂಬಿ, ಮತ್ತೆ ವೃಷಾಸುರನನ್ನು ಸಂಬೋಧಿಸುತ್ತಾ ‘ಎಲೈ ಮೂರ್ಖನೇ! ಮಹಾದುಷ್ಟನೇ! ನೀನು ಈ ಗೋವುಗಳನ್ನು, ಗೋಪಾಲಕರನ್ನು ಏಕೆ ಹೆದರಿಸುತ್ತಿರುವೆ? ॥7॥

(ಶ್ಲೋಕ-8)

ಮೂಲಮ್

ಬಲದರ್ಪಹಾಹಂ ದುಷ್ಟಾನಾಂ ತ್ವದ್ವಿಧಾನಾಂ ದುರಾತ್ಮನಾಮ್ ।
ಇತ್ಯಾಸ್ಫೋಟ್ಯಾಚ್ಯುತೋರಿಷ್ಟಂ ತಲಶಬ್ದೇನ ಕೋಪಯನ್ ॥

(ಶ್ಲೋಕ-9)

ಮೂಲಮ್

ಸಖ್ಯುರಂಸೇ ಭುಜಾಭೋಗಂ ಪ್ರಸಾರ್ಯಾವಸ್ಥಿತೋ ಹರಿಃ ।
ಸೋಪ್ಯೇವಂ ಕೋಪಿತೋರಿಷ್ಟಃ ಖುರೇಣಾವನಿಮುಲ್ಲಿಖನ್ ।
ಉದ್ಯತ್ಪುಚ್ಛಭ್ರಮನ್ಮೇಘಃ ಕ್ರುದ್ಧಃ ಕೃಷ್ಣಮುಪಾದ್ರವತ್ ॥

ಅನುವಾದ

ನೋಡು, ನಿನ್ನಂತಹ ದುರಾತ್ಮರಾದ ದುಷ್ಟರ ಬಲವನ್ನು ಮುರಿಯುವಂತಹ ಕಾಲನೇ ಆಗಿದ್ದೇನೆ ನಾನು.’ ಈ ಪ್ರಕಾರವಾಗಿ ಕೆಣಕುತ್ತಾ ಅವನನ್ನು ಚಪ್ಪಾಳೆತಟ್ಟಿ ಕೋಪವನ್ನು ಕೆರಳಿಸುತ್ತಾ ಅವನು ಓರ್ವ ಸ್ನೇಹಿತನ ಹೆಗಲ ಮೇಲೆ ಕೈಯನ್ನಿಡುತ್ತಾ ನಿಂತುಕೊಂಡನು. ಭಗವಾನ್ ಶ್ರೀಕೃಷ್ಣನ ಈ ಮಾತಿನಿಂದ ಆ ದುಷ್ಟನು ಕ್ರೋಧಾವಿಷ್ಟನಾಗಿ ತನ್ನ ಗೊರಸುಗಳಿಂದ ಭೂಮಿಯನ್ನು ಕೆರೆಯುತ್ತಾ ಶ್ರೀಕೃಷ್ಣನ ಕಡೆಗೆ ನುಗ್ಗಿದನು. ಆಗ ಅವನು ಬಾಲದಿಂದ ಆಕಾಶದಲ್ಲಿನ ಮೋಡಗಳನ್ನು ಚದುರಿಸುತ್ತಿದ್ದನು. ॥8-9॥

(ಶ್ಲೋಕ-10)

ಮೂಲಮ್

ಅಗ್ರನ್ಯಸ್ತವಿಷಾಣಾಗ್ರಃ ಸ್ತಬ್ಧಾಸೃಗ್ಲೋಚನೋಚ್ಯುತಮ್ ।
ಕಟಾಕ್ಷಿಪ್ಯಾದ್ರವತ್ತೂರ್ಣಮಿಂದ್ರಮುಕ್ತೋಶನಿರ್ಯಥಾ ॥

ಅನುವಾದ

ಅವನು ತೀಕ್ಷ್ಣವಾದ ಕೋಡುಗಳನ್ನು ಮುಂದೆ ಚಾಚಿಕೊಂಡು, ಕೆಂಡದಂತಹ ಕಣ್ಣುಗಳಿಂದ ಶ್ರೀಕೃಷ್ಣನನ್ನು ದುರುಗುಟ್ಟಿ ನೋಡುತ್ತಾ ಇಂದ್ರನಿಂದ ಬಿಡಲ್ಪಟ್ಟ ವಜ್ರಾಯುಧದಂತೆ ಅತ್ಯಂತ ವೇಗವಾಗಿ ಅವನ ಮೇಲೆ ಎರಗಿದನು. ॥10॥

(ಶ್ಲೋಕ-11)

ಮೂಲಮ್

ಗೃಹೀತ್ವಾ ಶೃಂಗಯೋಸ್ತಂ ವಾ ಅಷ್ಟಾದಶ ಪದಾನಿ ಸಃ ।
ಪ್ರತ್ಯಪೋವಾಹ ಭಗವಾನ್ ಗಜಃ ಪ್ರತಿಗಜಂ ಯಥಾ ॥

ಅನುವಾದ

ಭಗವಾನ್ ಶ್ರೀಕೃಷ್ಣನು ತನ್ನ ಕೈಗಳಿಂದ ಅವನ ಎರಡು ಕೋಡುಗಳನ್ನು ಹಿಡಿದು-ಆನೆಯು ಎದುರಾಳಿಯಾದ ಆನೆಯನ್ನು ಹಿಂದಕ್ಕೆ ತಳ್ಳುವಂತೆ ಅಸುರನನ್ನು ಹಿಂದಕ್ಕೆ ತಳ್ಳಿ ಬೀಳಿಸಿಬಿಟ್ಟನು. ॥11॥

(ಶ್ಲೋಕ-12)

ಮೂಲಮ್

ಸೋಪವಿದ್ಧೋ ಭಗವತಾ ಪುನರುತ್ಥಾಯ ಸತ್ವರಃ ।
ಆಪತತ್ಸ್ವಿನ್ನಸರ್ವಾಂಗೋ ನಿಃಶ್ವಸನ್ ಕ್ರೋಧಮೂರ್ಚ್ಛಿತಃ ॥

ಅನುವಾದ

ಹೀಗೆ ಭಗವಂತನಿಂದ ತಳ್ಳಲ್ಪಟ್ಟು ಕೆಳಕ್ಕೆ ಬಿದ್ದರೂ ಅವನು ಶೀಘ್ರವಾಗಿ ಎದ್ದುನಿಂತನು. ಅವನ ಶಿರವು ಬೆವರುತ್ತಿತ್ತು. ಅವನು ಬಿರುಸಾಗಿ ನಿಟ್ಟುಸಿರು ಬಿಡುತ್ತಾ, ಅತ್ಯಂತ ಕ್ರುದ್ಧನಾಗಿ ಪುನಃ ಶ್ರೀಕೃಷ್ಣನ ಮೇಲೆ ಎರಗಿದನು. ॥12॥

ಮೂಲಮ್

(ಶ್ಲೋಕ-13)
ತಮಾಪಂತತಂ ಸ ನಿಗೃಹ್ಯ ಶೃಂಗಯೋಃ
ಪದಾ ಸಮಾಕ್ರಮ್ಯ ನಿಪಾತ್ಯ ಭೂತಲೇ ।
ನಿಷ್ಪೀಡಯಾಮಾಸ ಯಥಾರ್ದ್ರಮಂಬರಂ
ಕೃತ್ತ್ವಾ ವಿಷಾಣೇನ ಜಘಾನ ಸೋಪತತ್ ॥

ಅನುವಾದ

ದೈತ್ಯನು ತನ್ನ ಮೇಲೆ ಪ್ರಹರಿಸುತ್ತಿರುವನೆಂದು ನೋಡಿದ ಶ್ರೀಕೃಷ್ಣನು ಅವನ ಕೊಂಬುಗಳನ್ನು ಹಿಡಿದು, ಕಾಲಿನಿಂದ ಒದ್ದು ನೆಲಕ್ಕೆ ಬೀಳಿಸಿದನು. ಕಾಲಿನಿಂದ ಒತ್ತಿಹಿಡಿದು ಬಟ್ಟೆಯನ್ನು ಹಿಂಡುವಂತೆ ಅದರ ಕೊಂಬುಗಳನ್ನು ಹಿಗ್ಗಾ-ಮುಗ್ಗಾ ತಿರುಗಿಸುತ್ತಾ, ಆ ಕೊಂಬುಗಳನ್ನು ಕಿತ್ತು ಅದರಿಂದಲೇ ಅರಿಷ್ಟಾಸುರನನ್ನು ಪ್ರಹರಿಸಿದನು. ॥13॥

(ಶ್ಲೋಕ-14)

ಮೂಲಮ್

ಅಸೃಗ್ ವಮನ್ಮೂತ್ರಶಕೃತ್ ಸಮುತ್ಸೃಜನ್
ಕ್ಷಿಪಂಶ್ಚ ಪಾದಾನನವಸ್ಥಿತೇಕ್ಷಣಃ ।
ಜಗಾಮ ಕೃಚ್ಛ್ರಂ ನಿರ್ಋತೇರಥ ಕ್ಷಯಂ
ಪುಷ್ಪೈಃ ಕಿರಂತೋ ಹರಿಮೀಡಿರೇ ಸುರಾಃ ॥

ಅನುವಾದ

ಪರೀಕ್ಷಿತನೇ! ಹೀಗೆ ಆ ದೈತ್ಯನು ಬಾಯಿಂದ ರಕ್ತವನ್ನು ಕಾರುತ್ತಾ ಮೂತ್ರ-ಪುರೀಷಗಳನ್ನು ವಿಸರ್ಜಿಸುತ್ತಾ, ಕಾಲನ್ನು ಬಡಿಯುತ್ತಾ, ಕಣ್ಣುಗಳನ್ನು ತಿರುಗಿಸುತ್ತಾ ಬಹಳ ಕಷ್ಟದಿಂದ ಪ್ರಾಣಗಳನ್ನು ತ್ಯಜಿಸಿದನು. ಆಗ ದೇವತೆಗಳು ಭಗವಂತನ ಮೇಲೆ ಹೂವಿನ ಮಳೆ ಸುರಿಸುತ್ತಾ ಅವನನ್ನು ಸ್ತುತಿಸತೊಡಗಿದರು. ॥14॥

(ಶ್ಲೋಕ-15)

ಮೂಲಮ್

ಏವಂ ಕಕುದ್ಮಿನಂ ಹತ್ವಾ ಸ್ತೂಯಮಾನಃ ಸ್ವಜಾತಿಭಿಃ ।
ವಿವೇಶ ಗೋಷ್ಠಂ ಸಬಲೋ ಗೋಪೀನಾಂ ನಯನೋತ್ಸವಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೀಗೆ ಗೂಳಿಯ ರೂಪದಲ್ಲಿ ಬಂದ ಅರಿಷ್ಟಾಸುರನನ್ನು ಕೊಂದುಹಾಕಿದಾಗ ಎಲ್ಲ ಗೋಪಾಲಕರು ಅವನನ್ನು ಪ್ರಶಂಸಿಸಿದರು. ಅವನು ಬಲರಾಮನೊಂದಿಗೆ ಗೋಕುಲವನ್ನು ಪ್ರವೇಶಿಸಿದುದನ್ನು ನೋಡಿದ ಗೋಪಿಯರ ಕಣ್ಮನಗಳು ಆನಂದದಿಂದ ತುಂಬಿ ಬಂದುವು. ॥15॥

(ಶ್ಲೋಕ-16)

ಮೂಲಮ್

ಅರಿಷ್ಟೇ ನಿಹತೇ ದೈತ್ಯೇ ಕೃಷ್ಣೇನಾದ್ಭುತಕರ್ಮಣಾ ।
ಕಂಸಾಯಾಥಾಹ ಭಗವಾನ್ ನಾರದೋ ದೇವದರ್ಶನಃ ॥

ಅನುವಾದ

ಪರೀಕ್ಷಿತ ಮಹಾರಾಜನೇ! ಭಗವಂತನ ಲೀಲೆಯು ಪರಮಾದ್ಭುತವಾದುದು. ಇತ್ತ ಅದ್ಭುತಕರ್ಮನಾದ ಶ್ರೀಕೃಷ್ಣನು ಅರಿಷ್ಟಾಸುರನನ್ನು ಶೀಘ್ರಾತಿಶೀಘ್ರವಾಗಿ ಸಂಹರಿಸಿದಾಗ, ಅತ್ತ ಮಥುರೆಯಲ್ಲಿ ಜನರಿಗೆ ಭಗವದ್ದರ್ಶನ ಮಾಡಿಸುವಂತಹ ಭಗವನ್ಮಯ ನಾರದರು ಕಂಸನ ಬಳಿಗೆ ಬಂದು ಇಂತೆಂದರು. ॥16॥

(ಶ್ಲೋಕ-17)

ಮೂಲಮ್

ಯಶೋದಾಯಾಃ ಸುತಾಂ ಕನ್ಯಾಂ ದೇವಕ್ಯಾಃ ಕೃಷ್ಣಮೇವ ಚ ।
ರಾಮಂ ಚ ರೋಹಿಣೀಪುತ್ರಂ ವಸುದೇವೇನ ಬಿಭ್ಯತಾ ॥

(ಶ್ಲೋಕ-18)

ಮೂಲಮ್

ನ್ಯಸ್ತೌ ಸ್ವಮಿತ್ರೇ ನಂದೇ ವೈ ಯಾಭ್ಯಾಂ ತೇ ಪುರುಷಾ ಹತಾಃ ।
ನಿಶಮ್ಯ ತದ್ಭೋಜಪತಿಃ ಕೋಪಾತ್ ಪ್ರಚಲಿತೇಂದ್ರಿಯಃ ॥

ಅನುವಾದ

ಎಲೈ ಕಂಸನೇ! ನಿನ್ನ ಕೈಯಿಂದ ತಪ್ಪಿಸಿಕೊಂಡು ಆಕಾಶಕ್ಕೆ ನೆಗೆದು ಹೋದ ಕನ್ಯೆಯು ಯಶೋದೆಯ ಪುತ್ರಿಯಾಗಿದ್ದಳು. ವ್ರಜದಲ್ಲಿರುವ ಶ್ರೀಕೃಷ್ಣನು ದೇವಕಿಯ ಪುತ್ರನಾಗಿದ್ದಾನೆ. ಬಲರಾಮನು ರೋಹಿಣಿ ಪುತ್ರನು. ವಸುದೇವನು ನಿನಗೆ ಹೆದರಿ ತನ್ನ ಮಿತ್ರನಾದ ನಂದಗೋಪನ ಬಳಿಯಲ್ಲಿ ಇವರಿಬ್ಬರನ್ನು ಇರಿಸಿರುವನು. ದೇವಕಿಯ ಪುತ್ರನಾದ ಶ್ರೀಕೃಷ್ಣನೇ ನಿನ್ನ ಅನುಚರರಾದ ದೈತ್ಯರನ್ನು ವಧಿಸಿದವನು. ನಾರದರ ಈ ಮಾತನ್ನು ಕೇಳಿದ ಕಂಸನ ಇಂದ್ರಿಯಗಳು ಕ್ರೋಧದಿಂದ ನಡುಗತೊಡಗಿದವು. ॥17-18॥

(ಶ್ಲೋಕ-19)

ಮೂಲಮ್

ನಿಶಾತಮಸಿಮಾದತ್ತ ವಸುದೇವಜಿಘಾಂಸಯಾ ।
ನಿವಾರಿತೋ ನಾರದೇನ ತತ್ಸುತೌ ಮೃತ್ಯುಮಾತ್ಮನಃ ॥

(ಶ್ಲೋಕ-20)

ಮೂಲಮ್

ಜ್ಞಾತ್ವಾ ಲೋಹಮಯೈಃ ಪಾಶೈರ್ಬಬಂಧ ಸಹ ಭಾರ್ಯಯಾ ।
ಪ್ರತಿಯಾತೇ ತು ದೇವರ್ಷೌ ಕಂಸ ಆಭಾಷ್ಯ ಕೇಶಿನಮ್ ॥

(ಶ್ಲೋಕ-21)

ಮೂಲಮ್

ಪ್ರೇಷಯಾಮಾಸ ಹನ್ಯೇತಾಂ ಭವತಾ ರಾಮಕೇಶವೌ ।
ತತೋ ಮುಷ್ಟಿಕಚಾಣೂರಶಲತೋಶಲಕಾದಿಕಾನ್ ॥

(ಶ್ಲೋಕ-22)

ಮೂಲಮ್

ಅಮಾತ್ಯಾನ್ ಹಸ್ತಿಪಾಂಶ್ಚೈವ ಸಮಾಹೂಯಾಹ ಭೋಜರಾಟ್ ।
ಭೋ ಭೋ ನಿಶಮ್ಯ ತಾಮೇತದ್ವೀರಚಾಣೂರಮುಷ್ಟಿಕೌ ॥

ಅನುವಾದ

ಅವನು ವಸುದೇವನನ್ನು ಕೊಂದು ಹಾಕಲು ಖಡ್ಗವನ್ನು ಹಿರಿದನು. ಆದರೆ ನಾರದರು ಅವನನ್ನು ತಡೆದು ನಿಲ್ಲಿಸುತ್ತಾ, ಅವನ ಮಕ್ಕಳು ಮಾತ್ರವೇ ನಿನಗೆ ಮೃತ್ಯುರೂಪರಾಗಿರುವರು. ವಸುದೇವ ನಲ್ಲವಲ್ಲ. ಆಗ ಕಂಸನು ವಸುದೇವ-ದೇವಕಿಯರಿಬ್ಬರಿಗೂ ಕೈಗಳಿಗೆ ಕೋಳವನ್ನು ತೊಡಿಸಿ ಕಾರಾಗೃಹದಲ್ಲಿರಿಸಿದನು. ನಾರದ ಮಹರ್ಷಿಗಳು ಹೊರಟು ಹೋದ ಬಳಿಕ ಕಂಸನು ಕೇಶಿಯೆಂಬ ರಾಕ್ಷಸನನ್ನು ಕರೆದು ಹೇಳಿದನು - ‘ನೀನು ಗೋಕುಲಕ್ಕೆ ಹೋಗಿ ಅಲ್ಲಿರುವ ಬಲರಾಮ-ಕೃಷ್ಣರನ್ನು ಕೊಂದುಬಿಡು. ‘ಕೇಶಿಯು ಹಾಗೆಯೇ ಆಗಲೆಂದು ಹೇಳಿ ಹೊರಟುಹೋದನು. ಕೇಶಿಯು ಹೊರಟು ಹೋಗುತ್ತಲೇ ಕಂಸನು ಮುಷ್ಟಿಕ, ಚಾಣೂರ, ಶಲ, ತೋಶಲ ಮೊದಲಾದ ಜಟ್ಟಿಗಳನ್ನು ಮಂತ್ರಿಗಳನ್ನೂ ಮತ್ತು ಮಾವಟಿಗರನ್ನು ಕರೆಸಿ ಹೇಳಿದನು - ವೀರರಾದ ಚಾಣೂರ-ಮುಷ್ಟಿಕರೇ! ನೀವೆಲ್ಲರೂ ನನ್ನ ಮಾತನ್ನು ಗಮನವಿಟ್ಟು ಕೇಳಿರಿ. ॥19-22॥

(ಶ್ಲೋಕ-23)

ಮೂಲಮ್

ನಂದವ್ರಜೇ ಕಿಲಾಸಾತೇ ಸುತಾವಾನಕದುಂದುಭೇಃ ।
ರಾಮಕೃಷ್ಣೌ ತತೋ ಮಹ್ಯಂ ಮೃತ್ಯುಃ ಕಿಲ ನಿದರ್ಶಿತಃ ॥

ಅನುವಾದ

ವಸುದೇವನ ಇಬ್ಬರು ಪುತ್ರರು ನಂದಗೋಪನ ವ್ರಜದಲ್ಲಿ ಇರುತ್ತಾರೆ. ಅವರ ಕೈಯಿಂದಲೇ ನನ್ನ ಮೃತ್ಯುವೆಂದು ಹಿಂದೆಯೇ ತಿಳಿಸಲಾಗಿದೆ. ॥23॥

(ಶ್ಲೋಕ-24)

ಮೂಲಮ್

ಭವದ್ಭ್ಯಾಮಿಹ ಸಂಪ್ರಾಪ್ತೌ ಹನ್ಯೇತಾಂ ಮಲ್ಲಲೀಲಯಾ ।
ಮಂಚಾಃ ಕ್ರಿಯಂತಾಂ ವಿವಿಧಾ ಮಲ್ಲರಂಗ ಪರಿಶ್ರಿತಾಃ ।
ಪೌರಾ ಜಾನಪದಾಃ ಸರ್ವೇ ಪಶ್ಯಂತು ಸ್ವೈರಸಂಯುಗಮ್ ॥

ಅನುವಾದ

ಆದ್ದರಿಂದ ಅವರು ಇಲ್ಲಿಗೆ ಬಂದಾಗ ನೀವುಗಳು ಮಲ್ಲಯುದ್ಧದ ಮೂಲಕವಾಗಿ ನಾನಾ ಪ್ರಕಾರದ ವರಸೆಗಳನ್ನು ತೋರುತ್ತಾ ಅವರನ್ನು ಕೊಂದುಹಾಕಿರಿ. ಮಲ್ಲಯುದ್ಧಕ್ಕಾಗಿ ರಂಗವನ್ನು ಕಲ್ಪಿಸಿರಿ. ರಂಗದ ಸುತ್ತಲೂ ಬಗೆ-ಬಗೆಯಾದ ಎತ್ತರದ ಆಸನಗಳನ್ನು ಕಲ್ಪಿಸಿರಿ. ಪಟ್ಟಣಿಗರೂ ದೇಶೀಯ ಜನರೂ ಸ್ವೇಚ್ಛೆಯಿಂದ ಮಲ್ಲಯುದ್ಧವನ್ನು ನೋಡಲಿ. ॥24॥

(ಶ್ಲೋಕ-25)

ಮೂಲಮ್

ಮಹಾಮಾತ್ರ ತ್ವಯಾ ಭದ್ರರಂಗದ್ವಾರ್ಯುಪನೀಯತಾಮ್ ।
ದ್ವಿಪಃ ಕುವಲಯಾಪೀಡೋ ಜಹಿ ತೇನ ಮಮಾಹಿತೌ ॥

ಅನುವಾದ

ಮಾವಟಿಗನೇ! ನೀನು ತುಂಬಾ ಚತುರನಾಗಿರುವೆ. ನೋಡು, ನೀನು ರಂಗಸ್ಥಳದ ಮಹಾದ್ವಾರದಲ್ಲೇ ನಮ್ಮ ಕುವಲಯಾಪೀಡ ಸಲಗವನ್ನು ನಿಲ್ಲಿಸಿಕೊಂಡಿರಬೇಕು. ನನ್ನ ಶತ್ರುಗಳು ಆ ದಾರಿಯಿಂದ ಬರುತ್ತಲೇ ಆ ಆನೆಯಿಂದ ಅವರನ್ನು ಕೊಲ್ಲಿಸಿಬಿಡು. ॥25॥

(ಶ್ಲೋಕ-26)

ಮೂಲಮ್

ಆರಭ್ಯತಾಂ ಧನುರ್ಯಾಗಶ್ಚತುರ್ದಶ್ಯಾಂ ಯಥಾವಿಧಿ ।
ವಿಶಸಂತು ಪಶೂನ್ ಮೇಧ್ಯಾನ್ ಭೂತರಾಜಾಯ ಮೀಢುಷೇ ॥

ಅನುವಾದ

ಇದೇ ಚತುರ್ದಶಿಗೆ ವಿಧಿವತ್ತಾಗಿ ಧನುರ್ಯಜ್ಞವನ್ನು ಪ್ರಾರಂಭಿಸಿರಿ. ಅದರ ಸಫಲತೆಗಾಗಿ ವರದನಾದ ಭೂತಪತಿಯಾದ ರುದ್ರನ ಪ್ರೀತ್ಯರ್ಥವಾಗಿ ಪರಿಶುದ್ಧ ಪಶುಗಳನ್ನು ಬಲಿಕೊಡಿರಿ. ॥26॥

(ಶ್ಲೋಕ-27)

ಮೂಲಮ್

ಇತ್ಯಾಜ್ಞಾಪ್ಯಾರ್ಥತಂತ್ರಜ್ಞ ಆಹೂಯ ಯದುಪುಂಗವಮ್ ।
ಗೃಹೀತ್ವಾ ಪಾಣಿನಾ ಪಾಣಿಂ ತತೋಕ್ರೂರಮುವಾಚ ಹ ॥

ಅನುವಾದ

ಪರೀಕ್ಷಿತನೇ! ಹೀಗೆ ಮಂತ್ರಿಗಳಿಗೆ, ಜಟ್ಟಿಗಳಿಗೆ, ಮಾವಟಿಗನಿಗೆ ಆಜ್ಞಾಪಿಸಿ ತಂತ್ರಜ್ಞನಾದ ಆ ಕಂಸನು ಯದುಶ್ರೇಷ್ಠನಾದ ಅಕ್ರೂರನನ್ನು ಕರೆಸಿ, ಅವನ ಕೈಗಳನ್ನು ಹಿಡಿದುಕೊಂಡು ಅವನಿಗೆ ಹೇಳಿದನು. ॥27॥

(ಶ್ಲೋಕ-28)

ಮೂಲಮ್

ಭೋ ಭೋದಾನಪತೇ ಮಹ್ಯಂ ಕ್ರಿಯತಾಂ ಮೈತ್ರಮಾದೃತಃ ।
ನಾನ್ಯಸ್ತ್ವತ್ತೋ ಹಿತತಮೋ ವಿದ್ಯತೇ ಭೋಜವೃಷ್ಣಿಷು ॥

ಅನುವಾದ

ಅಕ್ರೂರನೇ! ನೀನು ಉದಾರವಾದ ಮಹಾದಾನಿಯಾಗಿರುವೆ. ಎಲ್ಲ ರೀತಿಯಿಂದಲೂ ನೀನು ನನಗೆ ಆದರಣೀಯನಾಗಿರುವೆ. ಇಂದು ನೀನು ನನಗೆ ಮಿತ್ರೋಚಿತವಾದ ಒಂದು ಕಾರ್ಯವನ್ನು ನಡೆಸಿಕೊಡಬೇಕಾಗಿದೆ. ಏಕೆಂದರೆ, ಭೋಜವಂಶೀಯರಲ್ಲಿ, ವೃಷ್ಣಿವಂಶೀಯರಲ್ಲಿ, ಯಾದವರಲ್ಲಿ ನಿನಗಿಂತ ಹೆಚ್ಚಾಗಿ ನನ್ನ ಒಳಿತನ್ನು ಮಾಡುವವರು ಬೇರೆ ಯಾರು ಇಲ್ಲ. ॥28॥

(ಶ್ಲೋಕ-29)

ಮೂಲಮ್

ಅತಸ್ತ್ವಾಮಾಶ್ರಿತಃ ಸೌಮ್ಯ ಕಾರ್ಯಗೌರವಸಾಧನಮ್ ।
ಯಥೇಂದ್ರೋ ವಿಷ್ಣುಮಾಶ್ರಿತ್ಯ ಸ್ವಾರ್ಥಮಧ್ಯಗಮದ್ವಿಭುಃ ॥

ಅನುವಾದ

ನಾನು ಹೇಳಲಿರುವ ಕಾರ್ಯವು ಅತ್ಯಂತ ಮಹತ್ವಪೂರ್ಣವಾಗಿದೆ. ದೇವೇಂದ್ರನು ಸ್ವತಃ ಸಮರ್ಥನಾಗಿದ್ದರೂ ಮಹಾವಿಷ್ಣುವನ್ನು ಆಶ್ರಯಿಸಿ ತನ್ನ ಕಾರ್ಯವನ್ನು ಸಾಧಿಸಿಕೊಳ್ಳುವಂತೆ ನಾನು ನಿನ್ನನ್ನು ಆಶ್ರಯಿಸಿದ್ದೇನೆ. ॥29॥

(ಶ್ಲೋಕ-30)

ಮೂಲಮ್

ಗಚ್ಛ ನಂದವ್ರಜಂ ತತ್ರ ಸುತಾವಾನಕದುಂದುಭೇಃ ।
ಆಸಾತೇ ತಾವಿಹಾನೇನ ರಥೇನಾನಯ ಮಾ ಚಿರಮ್ ॥

ಅನುವಾದ

ಅಕ್ರೂರನೇ! ನೀನು ನಂದಗೋಪನ ವ್ರಜಕ್ಕೆ ಹೋಗಬೇಕು. ಅಲ್ಲಿ ವಸುದೇವನ ಇಬ್ಬರು ಪುತ್ರರಿದ್ದಾರೆ. ಅವರನ್ನು ಇದೇ ರಥದಲ್ಲಿ ಕುಳ್ಳಿರಿಸಿಕೊಂಡು ಇಲ್ಲಿಗೆ ಕರಕೊಂಡು ಬರಬೇಕು. ಇನ್ನು ಇದರಲ್ಲಿ ತಡಮಾಡಬಾರದು. ॥30॥

(ಶ್ಲೋಕ-31)

ಮೂಲಮ್

ನಿಸೃಷ್ಟಃ ಕಿಲ ಮೇ ಮೃತ್ಯುರ್ದೇವೈರ್ವೈಕುಂಠಸಂಶ್ರಯೈಃ ।
ತಾವಾನಯ ಸಮಂ ಗೋಪೈರ್ನಂದಾದ್ಯೈಃ ಸಾಭ್ಯುಪಾಯನೈಃ ॥

ಅನುವಾದ

ವಿಷ್ಣುವಿನ ಮೇಲೆ ಭರವಸೆಯನ್ನಿಟ್ಟಿರುವ ದೇವತೆಗಳು ಇವರಿಬ್ಬರನ್ನು ನನ್ನ ಮೃತ್ಯವಿಗೆ ಕಾರಣವೆಂದು ನಿಶ್ಚಯಿಸಿರುವರೆಂದು ಕೇಳಿದ್ದೇನೆ. ಅದಕ್ಕಾಗಿ ಅವರಿಬ್ಬರನ್ನು ಕರೆದುಕೊಂಡು ಬಾ. ಜೊತೆಗೆ ನಂದಗೋಪನೇ ಮೊದಲಾದ ಗೋಪಾಲಕರು ಅಪಾರವಾದ ಕಾಣಿಕೆಗಳೊಂದಿಗೆ ಇಲ್ಲಿಗೆ ಬರುವಂತೆ ಮಾಡು. ॥31॥

(ಶ್ಲೋಕ-32)

ಮೂಲಮ್

ಘಾತಯಿಷ್ಯ ಇಹಾನೀತೌ ಕಾಲಕಲ್ಪೇನ ಹಸ್ತಿನಾ ।
ಯದಿ ಮುಕ್ತೌ ತತೋ ಮಲ್ಲೈರ್ಘಾತಯೇ ವೈದ್ಯುತೋಪಮೈಃ ॥

ಅನುವಾದ

ಇಲ್ಲಿಗೆ ಬರುತ್ತಲೇ ನಾನು ಅವರನ್ನು ಕಾಲಸದೃಶವಾದ ಕುವಲಯಾಪೀಡವೆಂಬ ಆನೆಯಿಂದ ಕೊಲ್ಲಿಸಿಬಿಡುವೆನು. ಒಂದು ವೇಳೆ ಆ ಆನೆಯಿಂದ ಅವರು ಬದುಕುಳಿದರೆ, ವಜ್ರದಂತಿರುವ ಮಹಾಬಲಿಷ್ಠರಾದ ಮುಷ್ಟಿಕ, ಚಾಣೂರರೆ ಮೊದಲಾದ ಮಲ್ಲರಿಂದ ಕೊಲ್ಲಿಸಿ ಬಿಡುವೆನು. ॥32॥

(ಶ್ಲೋಕ-33)

ಮೂಲಮ್

ತಯೋರ್ನಿಹತಯೋಸ್ತಪ್ತಾನ್ ವಸುದೇವಪುರೋಗಮಾನ್ ।
ತದ್ಬಂಧೂನ್ ನಿಹನಿಷ್ಯಾಮಿ ವೃಷ್ಣಿಭೋಜದಶಾರ್ಹಕಾನ್ ॥

ಅನುವಾದ

ಬಲರಾಮ-ಕೃಷ್ಣರು ಸತ್ತುಹೋದ ಮೇಲೆ ವಸುದೇವನೇ ಮೊದಲಾದ ವೃಷ್ಣಿವಂಶೀಯರು, ಭೋಜ ಮತ್ತು ದಾಶಾರ್ಹ ವಂಶೀಯರಾದ ಅವರ ಬಂಧುಗಳು ಶೋಕಾಕುಲರಾಗುವರು. ನಾನೇ ಅವರೆಲ್ಲರನ್ನೂ ನನ್ನ ಕೈಯ್ಯಾರೆ ಕೊಂದುಬಿಡುವೆನು.॥33॥

(ಶ್ಲೋಕ-34)

ಮೂಲಮ್

ಉಗ್ರಸೇನಂ ಚ ಪಿತರಂ ಸ್ಥವಿರಂ ರಾಜ್ಯಕಾಮುಕಮ್ ।
ತದ್ಭ್ರಾತರಂ ದೇವಕಂ ಚ ಯೇ ಚಾನ್ಯೇ ವಿದ್ವಿಷೋ ಮಮ ॥

ಅನುವಾದ

ನನ್ನ ತಂದೆಯಾದರೋ ಮುದುಕನಾಗಿದ್ದಾನೆ. ಆದರೂ ಅವನಿಗೆ ರಾಜ್ಯಲೋಭ ಇನ್ನೂ ಇದೆ. ಇದೆಲ್ಲ ಮಾಡಿದ ಮೇಲೆ ಅವನನ್ನೂ, ಅವನ ತಮ್ಮನಾದ ದೇವಕನನ್ನು ಹಾಗೂ ನನ್ನನ್ನು ದ್ವೇಷಿಸುವವರೆಲ್ಲರನ್ನು ಖಡ್ಗದಿಂದ ನಾನೇ ಸಾಯಿಸಿ ಬಿಡುವೆನು. ॥34॥

(ಶ್ಲೋಕ-35)

ಮೂಲಮ್

ತತಶ್ಚೈಷಾ ಮಹೀ ಮಿತ್ರ ಭವಿತ್ರೀ ನಷ್ಟಕಂಟಕಾ ।
ಜರಾಸಂಧೋ ಮಮ ಗುರುರ್ದ್ವಿವಿದೋ ದಯಿತಃ ಸಖಾ ॥

ಅನುವಾದ

ಪ್ರಾಣಸಖನೇ! ಅನಂತರವೇ ಈ ಭೂ ಮಂಡಲವು ನನಗೆ ಕಂಟಕರಹಿತವಾಗುತ್ತದೆ. ಜರಾಸಂಧನೇ ನನಗೆ ಪರಮಗುರು ಮತ್ತು ಮಾವನಾಗಿದ್ದಾನೆ. ವಾನರರಾಜ ದ್ವಿವಿದನೇ ನನ್ನ ಪ್ರಿಯಸಖನು. ॥35॥

(ಶ್ಲೋಕ-36)

ಮೂಲಮ್

ಶಂಬರೋ ನರಕೋ ಬಾಣೋ ಮಯ್ಯೇವ ಕೃತಸೌಹೃದಾಃ ।
ತೈರಹಂ ಸುರಪಕ್ಷೀಯಾನ್ ಹತ್ವಾ ಭೋಕ್ಷ್ಯೇ ಮಹೀಂ ನೃಪಾನ್ ॥

ಅನುವಾದ

ಶಂಬರಾಸುರ, ನರಕಾಸುರ, ಬಾಣಸುರ ಇವರು ನನ್ನೊಡನೆ ಮೈತ್ರಿಯನ್ನು ಬೆಳೆಸಿದ್ದಾರೆ. ಇವರೆಲ್ಲರ ಸಹಾಯದಿಂದ ದೇವಪಕ್ಷಪಾತಿಯಾದ ರಾಜರೆಲ್ಲರನ್ನೂ ಕೊಂದು ಪೃಥ್ವಿಯ ನಿಷ್ಕಂಟಕವಾದ ರಾಜ್ಯವನ್ನು ನಾನು ಅನುಭವಿಸುತ್ತೇನೆ. ॥36॥

(ಶ್ಲೋಕ-37)

ಮೂಲಮ್

ಏತಜ್ಜ್ಞಾತ್ವಾನಯ ಕ್ಷಿಪ್ರಂ ರಾಮಕೃಷ್ಣಾವಿಹಾರ್ಭಕೌ ।
ಧನುರ್ಮಖನಿರೀಕ್ಷಾರ್ಥಂ ದ್ರಷ್ಟುಂ ಯದುಪುರಶ್ರಿಯಮ್ ॥

ಅನುವಾದ

ಅಕ್ರೂರ! ಇದೆಲ್ಲ ರಹಸ್ಯದ ಮಾತುಗಳನ್ನು ನಾನು ನಿನಗೆ ಹೇಳಿರುವೆನು. ಈಗ ನೀನು ಅತಿಶೀಘ್ರವಾಗಿ ಬಲರಾಮ-ಕೃಷ್ಣರನ್ನು ಇಲ್ಲಿಗೆ ಕರೆದುಕೊಂಡು ಬಾ, ಅವರಿನ್ನೂ ಮಕ್ಕಳಾಗಿರುವುದರಿಂದ ಸುಲಭವಾಗಿ ಅವರನ್ನು ಮುಗಿಸಿ ಬಿಡಬಹುದು. ಧನುರ್ಯಜ್ಞವನ್ನು ಸಂದರ್ಶಿಸಲು ಮತ್ತು ರಾಜಧಾನಿಯಾದ ಮಥುರಾ ಪಟ್ಟಣದ ಸೊಬಗನ್ನು ವೀಕ್ಷಿಸಲು ಬರಬೇಕೆಂದು ಅವರಿಗೆ ತಿಳಿಸಬೇಕು. ॥37॥

(ಶ್ಲೋಕ-38)

ಮೂಲಮ್ (ವಾಚನಮ್)

ಅಕ್ರೂರ ಉವಾಚ

ಮೂಲಮ್

ರಾಜನ್ಮನೀಷಿತಂ ಸಮ್ಯಕ್ ತವ ಸ್ವಾವದ್ಯಮಾರ್ಜನಮ್ ।
ಸಿದ್ಧ್ಯಸಿದ್ಧ್ಯೋಃ ಸಮಂ ಕುರ್ಯಾದ್ದೈವಂ ಹಿ ಲಸಾಧನಮ್ ॥

ಅನುವಾದ

ಅಕ್ರೂರನು ಹೇಳಿದನು — ಮಹಾರಾಜ! ನೀನು ನಿನ್ನ ಮೃತ್ಯುವನ್ನು, ಅರಿಷ್ಟವನ್ನು ತೊಡೆದು ಹಾಕುವುದಕ್ಕಾಗಿ ಹೀಗೆ ಯೋಚಿಸುವುದು ಸಾಧುವೇ ಆಗಿದೆ. ಕಾರ್ಯವು ಸಿದ್ಧಿಸಲಿ, ಸಿದ್ಧಿಸದೆ ಹೋಗಲಿ ಎರಡರಲ್ಲಿಯೂ ಸಮಭಾವ ವನ್ನಿಟ್ಟುಕೊಂಡು ಕಾರ್ಯ ಮಾಡುವುದು ಯುಕ್ತವಾಗಿದೆ. ಮನುಷ್ಯನಿಗೆ ಫಲವಾದರೋ ಪ್ರಯತ್ನದಿಂದ ದೊರೆಯದೆ ದೈವಪ್ರೇರಣೆಯಿಂದ ದೊರೆಯುತ್ತದೆ. ॥38॥

(ಶ್ಲೋಕ-39)

ಮೂಲಮ್

ಮನೋರಥಾನ್ಕರೋತ್ಯುಚ್ಚೈರ್ಜನೋ ದೈವಹತಾನಪಿ ।
ಯುಜ್ಯತೇ ಹರ್ಷಶೋಕಾಭ್ಯಾಂ ತಥಾಪ್ಯಾಜ್ಞಾಂ ಕರೋಮಿ ತೇ ॥

ಅನುವಾದ

ಮನುಷ್ಯನು ದೊಡ್ಡ-ದೊಡ್ಡ ಮನೋರಥಗಳನ್ನು ಹೆಣೆಯುತ್ತಾನೆ. ಆದರೆ ಅವನ್ನು ದೈವವು, ಪ್ರಾರಬ್ಧವು ಮೊದಲೇ ನಾಶ ಮಾಡಿಬಿಟ್ಟಿದೆ ಎಂಬುದನ್ನು ಆತನು ತಿಳಿಯುವುದಿಲ್ಲ. ಇದೇ ಕಾರಣದಿಂದ ಕೆಲವೊಮ್ಮೆ ಪ್ರಾರಬ್ಧಕ್ಕನುಕೂಲವಾಗಿ ಪ್ರಯತ್ನವು ಸಫಲವಾದರೆ ಹರ್ಷದಿಂದ ಹಿಗ್ಗುವನು. ಪ್ರತಿಕೂಲವಾಗಿ ವಿಫಲವಾದರೆ ಶೋಕಗ್ರಸ್ತನಾಗುತ್ತಾನೆ. ಹೀಗಿದ್ದರೂ ನಾನು ನಿನ್ನ ಆಜ್ಞೆಯನ್ನು ಪಾಲಿಸಿಯೇ ತೀರುತ್ತೇನೆ. ॥39॥

(ಶ್ಲೋಕ-40)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಮಾದಿಶ್ಯ ಚಾಕ್ರೂರಂ ಮಂತ್ರಿಣಶ್ಚ ವಿಸೃಜ್ಯ ಸಃ ।
ಪ್ರವಿವೇಶ ಗೃಹಂ ಕಂಸಸ್ತಥಾಕ್ರೂರಃ ಸ್ವಮಾಲಯಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಕಂಸನು ಮಂತ್ರಿಗಳಿಗೆ ಮತ್ತು ಅಕ್ರೂರನಿಗೆ ಹೀಗೆ ಅಪ್ಪಣೆಯನ್ನು ಕೊಟ್ಟು ಎಲ್ಲರನ್ನು ಬೀಳ್ಕೊಟ್ಟನು. ಬಳಿಕ ಅವನು ತನ್ನರ ಮನೆಗೆ ಹೊರಟು ಹೋದನು. ಅಕ್ರೂರನು ತನ್ನ ಮನೆಗೆ ಮರಳಿದನು.॥40॥

ಅನುವಾದ (ಸಮಾಪ್ತಿಃ)

ಮೂವತ್ತಾರನೆಯ ಅಧ್ಯಾಯವು ಮುಗಿಯಿತು. ॥36॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ
ಅಕ್ರೂರ ಪ್ರೇಷಣಂ ನಾಮ ಷಟ್ತ್ರಿಂಶೋಽಧ್ಯಾಯಃ ॥36॥