೩೪

[ಮೂವತ್ತನಾಲ್ಕನೆಯ ಅಧ್ಯಾಯ]

ಭಾಗಸೂಚನಾ

ಸುದರ್ಶನ ಮತ್ತು ಶಂಖಚೂಡರ ಉದ್ಧಾರ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏಕದಾ ದೇವಯಾತ್ರಾಯಾಂ ಗೋಪಾಲಾ ಜಾತಕೌತುಕಾಃ ।
ಅನೋಭಿರನಡುದ್ಯುಕ್ತೈಃ ಪ್ರಯಯುಸ್ತೇಂಬಿಕಾವನಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಒಮ್ಮೆ ನಂದಗೋಪನೇ ಮೊದಲಾದ ಗೋಪಾಲಕರು ಶಿವರಾತ್ರಿಯ ಸಮಯದಲ್ಲಿ ಅತ್ಯುತ್ಸಾಹದಿಂದ, ಆನಂದ ಭರಿತರಾಗಿ ಎತ್ತಿನ ಗಾಡಿಗಳಲ್ಲಿ ಕುಳಿತು ಅಂಬಿಕಾವನಕ್ಕೆ ಯಾತ್ರೆಗೆ ಹೋದರು. ॥1॥

(ಶ್ಲೋಕ-2)

ಮೂಲಮ್

ತತ್ರ ಸ್ನಾತ್ವಾ ಸರಸ್ವತ್ಯಾಂ ದೇವಂ ಪಶುಪತಿಂ ವಿಭುಮ್ ।
ಆನರ್ಚುರರ್ಹಣೈರ್ಭಕ್ತ್ಯಾ ದೇವೀಂ ಚ ನೃಪತೇಂಬಿಕಾಮ್ ॥

ಅನುವಾದ

ರಾಜನೇ! ಅಲ್ಲಿ ಅವರೆಲ್ಲರೂ ಸರಸ್ವತೀ ನದಿಯಲ್ಲಿ ಸ್ನಾನ ಮಾಡಿ ಪಶುಪತಿಯಾದ ಪರಮೇಶ್ವರನನ್ನೂ, ಭಗವತಿ ಅಂಬಿಕೆಯನ್ನು ಅನೇಕ ಪೂಜಾಸಾಮಗ್ರಿಗಳಿಂದ ಭಕ್ತಿಪೂರ್ವಕವಾಗಿ ಪೂಜಿಸಿದರು. ॥2॥

(ಶ್ಲೋಕ-3)

ಮೂಲಮ್

ಗಾವೋ ಹಿರಣ್ಯಂ ವಾಸಾಂಸಿ ಮಧು ಮಧ್ವನ್ನಮಾದೃತಾಃ ।
ಬ್ರಾಹ್ಮಣೇಭ್ಯೋ ದದುಃ ಸರ್ವೇ ದೇವೋ ನಃ ಪ್ರೀಯತಾಮಿತಿ ॥

ಅನುವಾದ

ದೇವಾಧಿದೇವ ಭಗವಾನ್ ಶಂಕರನು ನಮ್ಮ ಮೇಲೆ ಸುಪ್ರೀತನಾಗಲೆಂದು ಅವರು ಬ್ರಾಹ್ಮಣರಿಗೆ ಗೋವುಗಳನ್ನು, ವಸ್ತ್ರಗಳನ್ನು, ಸುವರ್ಣವನ್ನು, ಜೇನು ತುಪ್ಪವನ್ನು ಆದರದಿಂದ ದಾನವಾಗಿ ಕೊಟ್ಟು ಮೃಷ್ಟಾನ್ನವನ್ನು ಭೋಜನ ಮಾಡಿಸಿದರು. ॥3॥

(ಶ್ಲೋಕ-4)

ಮೂಲಮ್

ಊಷುಃ ಸರಸ್ವತೀತೀರೇ ಜಲಂ ಪ್ರಾಶ್ಯ ಧೃತವ್ರತಾಃ ।
ರಜನೀಂ ತಾಂ ಮಹಾಭಾಗಾ ನಂದಸುನಂದಕಾದಯಃ ॥

ಅನುವಾದ

ಅಂದು ಮಹಾಭಾಗ್ಯ ಶಾಲಿಗಳಾದ ನಂದ-ಸುನಂದರೇ ಮೊದಲಾದ ಗೋಪರು ಉಪವಾಸ ವ್ರತವನ್ನು ಕೈಗೊಂಡು ಕೇವಲ ಜಲಾಹಾರದಲ್ಲೇ ಇದ್ದು ಆ ರಾತ್ರಿಯಲ್ಲಿ ಸರಸ್ವತೀನದಿಯ ತೀರದಲ್ಲಿ ನಿಶ್ಚಿಂತರಾಗಿ ಮಲಗಿದರು. ॥4॥

ಮೂಲಮ್

(ಶ್ಲೋಕ-5)
ಕಶ್ಚಿನ್ಮಹಾನಹಿಸ್ತಸ್ಮಿನ್ ವಿಪಿನೇತಿಬುಭುಕ್ಷಿತಃ ।
ಯದೃಚ್ಛಯಾಗತೋ ನಂದಂ ಶಯಾನಮುರಗೋಗ್ರಸೀತ್ ॥

ಅನುವಾದ

ಆ ಅಂಬಿಕಾವನದಲ್ಲಿ ದೊಡ್ಡದಾದೊಂದು ಹೆಬ್ಬಾವಿದ್ದಿತು. ಆ ಸಮಯದಲ್ಲಿ ಅದು ಬಹಳವಾಗಿ ಹಸಿದಿತ್ತು. ಸ್ವೇಚ್ಛೆಯಿಂದ ಸಂಚರಿಸುತ್ತಿದ್ದ ಆ ಸರ್ಪವು ಮಲಗಿದ್ದ ನಂದಗೋಪನನ್ನು ನುಂಗತೊಡಗಿತು. ॥5॥

(ಶ್ಲೋಕ-6)

ಮೂಲಮ್

ಸ ಚುಕ್ರೋಶಾಹಿನಾ ಗ್ರಸ್ತಃ ಕೃಷ್ಣ ಕೃಷ್ಣ ಮಹಾನಯಮ್ ।
ಸರ್ಪೋ ಮಾಂ ಗ್ರಸತೇ ತಾತ ಪ್ರಪನ್ನಂ ಪರಿಮೋಚಯ ॥

ಅನುವಾದ

ಅಜಗರನಿಂದ ನುಂಗಲ್ಪಡುತ್ತಿರುವ ನಂದಗೋಪನು ‘ಮಗು! -ಕೃಷ್ಣಾ! ಕೃಷ್ಣಾ! ಬೇಗ ಓಡಿ ಬಾ. ನೋಡು, ಈ ಹೆಬ್ಬಾವು ನನ್ನನ್ನು ನುಂಗುತ್ತಿದೆ. ಶರಣಾಗತನಾಗಿರುವ ನನ್ನನ್ನು ಈ ಸರ್ಪದಿಂದ ಬಿಡಿಸು’ ಎಂದು ಗಟ್ಟಿಯಾಗಿ ಕೂಗಿಕೊಂಡನು. ॥6॥

(ಶ್ಲೋಕ-7)

ಮೂಲಮ್

ತಸ್ಯ ಚಾಕ್ರಂದಿತಂ ಶ್ರುತ್ವಾ ಗೋಪಾಲಾಃ ಸಹಸೋತ್ಥಿತಾಃ ।
ಗ್ರಸ್ತಂ ಚ ದೃಷ್ಟ್ವಾ ವಿಭ್ರಾಂತಾಃ ಸರ್ಪಂ ವಿವ್ಯಧುರುಲ್ಮುಕೈಃ ॥

ಅನುವಾದ

ನಂದಗೋಪನ ಕೂಗನ್ನು ಕೇಳಿ ಗೋಪರೆಲ್ಲರೂ ಗಡಿಬಿಡಿಯಿಂದ ಎದ್ದು ನೋಡುತ್ತಾರೆ - ನಂದರಾಜನು ಹೆಬ್ಬಾವಿನ ಬಾಯಿಗೆ ಸಿಲುಕಿಕೊಂಡಿರುವನು. ಇದರಿಂದ ಭ್ರಾಂತರಾದ ಅವರು ಕೊಳ್ಳಿಗಳಿಂದ ಆ ಸರ್ಪವನ್ನು ಹೊಡೆಯತೊಡಗಿದರು. ॥7॥

(ಶ್ಲೋಕ-8)

ಮೂಲಮ್

ಅಲಾತೈರ್ದಹ್ಯಮಾನೋಪಿ ನಾಮುಂಚತ್ತಮುರಂಗಮಃ ।
ತಮಸ್ಪೃಶತ್ಪದಾಭ್ಯೇತ್ಯ ಭಗವಾನ್ ಸಾತ್ವತಾಂ ಪತಿಃ ॥

ಅನುವಾದ

ಆದರೆ ಕೊಳ್ಳಿಗಳಿಂದ ಹೊಡೆಯುತ್ತಿದ್ದರೂ, ಬೆಂಕಿಯಿಂದ ಸುಡುತ್ತಿದ್ದರೂ ಆ ಅಜಗರವು ನಂದನನ್ನು ಬಿಡಲೇ ಇಲ್ಲ. ಆಗ ಭಕ್ತವತ್ಸಲನಾದ ಭಗವಾನ್ ಶ್ರೀಕೃಷ್ಣನು ಮುಂದೆ ಬಂದು ತನ್ನ ಕಾಲಿನಿಂದ ಅದನ್ನು ಸ್ಪರ್ಶಿಸಿದನು. ॥8॥

(ಶ್ಲೋಕ-9)

ಮೂಲಮ್

ಸ ವೈ ಭಗವತಃ ಶ್ರೀಮತ್ಪಾದಸ್ಪರ್ಶಹತಾಶುಭಃ ।
ಭೇಜೇ ಸರ್ಪವಪುರ್ಹಿತ್ವಾ ರೂಪಂ ವಿದ್ಯಾಧರಾರ್ಚಿತಮ್ ॥

ಅನುವಾದ

ಭಗವಂತನ ಶ್ರೀ ಚರಣಸ್ಪರ್ಶವಾಗುತ್ತಲೇ ಸರ್ಪದ ಸಮಸ್ತ ಪಾಪಗಳು ಸುಟ್ಟು ಬೂದಿಯಾದುವು. ಆ ಕ್ಷಣದಲ್ಲೇ ಅದಕ್ಕೆ ಸರ್ಪರೂಪವು ಹೋಗಿ ವಿದ್ಯಾಧರರಿಂದ ಆರ್ಚಿಸಲ್ಪಡುವ ಸರ್ವಾಂಗಸುಂದರವಾದ ರೂಪವುಂಟಾಯಿತು. ॥9॥

(ಶ್ಲೋಕ-10)

ಮೂಲಮ್

ತಮಪೃಚ್ಛದ್ಧೃಷೀಕೇಶಃ ಪ್ರಣತಂ ಸಮುಪಸ್ಥಿತಮ್ ।
ದೀಪ್ಯಮಾನೇನ ವಪುಷಾ ಪುರುಷಂ ಹೇಮಮಾಲಿನಮ್ ॥

ಅನುವಾದ

ಸುಂದರವಾದ ಶರೀರದಿಂದ ದೇದೀಪ್ಯನಾಗಿ ಕಾಣುತ್ತಿದ್ದ, ಸುವರ್ಣಮಯವಾದ ಹಾರಗಳನ್ನು ಧರಿಸಿದ್ದ ಅವನು ಶ್ರೀಕೃಷ್ಣನಿಗೆ ದೀರ್ಘದಂಡ ನಮಸ್ಕಾರ ಮಾಡಿ ಕೈಜೋಡಿಸಿಕೊಂಡು ನಿಂತನು. ಆ ದಿವ್ಯಪುರುಷನನ್ನು ಹೃಷೀಕೇಶನು ಪ್ರಶ್ನಿಸಿದನು. ॥10॥

(ಶ್ಲೋಕ-11)

ಮೂಲಮ್

ಕೋ ಭವಾನ್ ಪರಯಾ ಲಕ್ಷ್ಮ್ಯಾ ರೋಚತೇದ್ಭುತದರ್ಶನಃ ।
ಕಥಂ ಜುಗುಪ್ಸಿತಾಮೇತಾಂ ಗತಿಂ ವಾ ಪ್ರಾಪಿತೋವಶಃ ॥

ಅನುವಾದ

ದಿವ್ಯಪುರುಷನೇ! ನೀನಾರು? ಶ್ರೇಷ್ಠವಾದ ಕಾಂತಿಯಿಂದ ಅದ್ಭುತರೂಪನಾಗಿ ಕಾಣುತ್ತಿರುವೆ. ನಿನಗೆ ಈ ಅತ್ಯಂತ ನಿಂದನೀಯವಾದ ಅಜಗರ ಯೋನಿಯು ಹೇಗೆ ದೊರೆಯಿತು? ಅನಿವಾರ್ಯವಾಗಿ ಈ ಜನ್ಮವನ್ನು ನೀನು ಹೊಂದಿರಬೇಕು. ॥11॥

(ಶ್ಲೋಕ-12)

ಮೂಲಮ್ (ವಾಚನಮ್)

ಸರ್ಪ ಉವಾಚ

ಮೂಲಮ್

ಅಹಂ ವಿದ್ಯಾಧರಃ ಕಶ್ಚಿತ್ ಸುದರ್ಶನ ಇತಿ ಶ್ರುತಃ ।
ಶ್ರಿಯಾ ಸ್ವರೂಪಸಂಪತ್ತ್ಯಾ ವಿಮಾನೇನಾಚರಂ ದಿಶಃ ॥

ಅನುವಾದ

ಸರ್ಪಶರೀರದಿಂದ ಹೊರಬಂದ ದಿವ್ಯಪುರುಷನು ಹೇಳುತ್ತಾನೆ ಭಗವಂತ! ಹಿಂದೆ ನಾನು ಸುದರ್ಶನನೆಂಬ ವಿಖ್ಯಾತ ವಿದ್ಯಾಧರನಾಗಿದ್ದೆ. ನನ್ನಲ್ಲಿ ರೂಪಸಂಪತ್ತೂ, ಧನ ಸಂಪತ್ತೂ ಅಪಾರವಾಗಿತ್ತು. ಇದರಿಂದ ನಾನು ವಿಮಾನದಲ್ಲಿ ಕುಳಿತು ಎಲ್ಲಡೆಗಳಲ್ಲಿಯೂ ಸ್ವೇಚ್ಛೆಯಿಂದ ಸಂಚರಿಸುತ್ತಿದ್ದೆ. ॥12॥

(ಶ್ಲೋಕ-13)

ಮೂಲಮ್

ಋಷೀನ್ವಿರೂಪಾನಂಗಿರಸಃ ಪ್ರಾಹಸಂ ರೂಪದರ್ಪಿತಃ ।
ತೈರಿಮಾಂ ಪ್ರಾಪಿತೋ ಯೋನಿಂ ಪ್ರಲಬ್ಧೈಃ ಸ್ವೇನ ಪಾಪ್ಮನಾ ॥

ಅನುವಾದ

ಹೀಗೆ ಸಂಚರಿಸುತ್ತಿದ್ದಾಗ ಒಮ್ಮೆ ನಾನು ಅಂಗಿರಸ ಗೋತ್ರದ ಅತ್ಯಂತ ಕುರೂಪಿಗಳಾದ ಋಷಿಗಳನ್ನು ನೋಡಿದೆನು. ಸೌಂದರ್ಯಮದದಿಂದ ನಾನು ಆ ಮಹರ್ಷಿಗಳನ್ನು ನೋಡಿ ಅಪಹಾಸ್ಯಮಾಡಿದೆ. ನನ್ನ ಈ ಅಪರಾಧದಿಂದ ಕುಪಿತರಾದ ಮಹರ್ಷಿಗಳು ಅಜಗರ ಸರ್ಪದ ಯೋನಿಯಲ್ಲಿ ಹುಟ್ಟುವಂತೆ ಶಪಿಸಿದರು. ಅದು ನನ್ನ ಪಾಪದ ಫಲವೇ ಆಗಿತ್ತು. ॥13॥

(ಶ್ಲೋಕ-14)

ಮೂಲಮ್

ಶಾಪೋ ಮೇನುಗ್ರಹಾಯೈವ ಕೃತಸ್ತೈಃ ಕರುಣಾತ್ಮಭಿಃ ।
ಯದಹಂ ಲೋಕಗುರುಣಾ ಪದಾ ಸ್ಪೃಷ್ಟೋ ಹತಾಶುಭಃ ॥

ಅನುವಾದ

ನಿಜವಾಗಿ ಹೇಳುವುದಾದರೆ ದಯಾಳುಗಳಾದ ಆ ಋಷಿಗಳು ನನ್ನನ್ನು ಅನುಗ್ರಹಿಸಲೆಂದೇ ಆ ಶಾಪವನ್ನಿತ್ತರು. ಅದರಿಂದ ಇಂದು ನಾನು ಲೋಕಗುರುವಾದ ನಿನ್ನ ದಿವ್ಯ ಪಾದಸ್ಪರ್ಶವನ್ನು ಪಡೆದು ಸಮಸ್ತ ಪಾಪಗಳಿಂದ ಮುಕ್ತನಾದೆನಲ್ಲ! ॥14॥

ಮೂಲಮ್

(ಶ್ಲೋಕ-15)
ತಂ ತ್ವಾಹಂ ಭವಭೀತಾನಾಂ ಪ್ರಪನ್ನಾನಾಂ ಭಯಾಪಹಮ್ ।
ಆಪೃಚ್ಛೇ ಶಾಪನಿರ್ಮುಕ್ತಃ ಪಾದಸ್ಪರ್ಶಾದಮೀವಹನ್ ॥

ಅನುವಾದ

ಸಮಸ್ತ ಪಾಪಗಳನ್ನು ನಾಶಮಾಡುವಂತಹ ಸ್ವಾಮಿಯೇ! ಹುಟ್ಟು ಸಾವುಗಳ ರೂಪವಾದ ಸಂಸಾರಕ್ಕೆ ಭಯಗೊಂಡು ನಿನ್ನಲ್ಲಿ ಶರಣಾಗತರಾದರೆ ನೀನು ಎಲ್ಲ ಭಯಗಳಿಂದ ಪಾರುಮಾಡುವೆ. ಈಗ ನಾನು ನಿನ್ನ ಚರಣಸ್ಪರ್ಶದಿಂದಲೆ ಶಾಪಮುಕ್ತನಾಗಿರುವೆನು. ॥15॥

(ಶ್ಲೋಕ-16)

ಮೂಲಮ್

ಪ್ರಪನ್ನೋಸ್ಮಿ ಮಹಾಯೋಗಿನ್ ಮಹಾಪುರುಷ ಸತ್ಪತೇ ।
ಅನುಜಾನೀಹಿ ಮಾಂ ದೇವ ಸರ್ವಲೋಕೇಶ್ವರೇಶ್ವರ ॥

ಅನುವಾದ

ಭಕ್ತವತ್ಸಲನೇ! ಮಹಾಯೋಗೇಶ್ವರ ಪುರುಷೋತ್ತಮನೇ! ನಾನು ನಿನಗೆ ಶರಣಾಗಿದ್ದೇನೆ. ಇಂದ್ರಾದಿ ಸಮಸ್ತ ಲೋಕೇಶ್ವರರಿಗೂ ಪರಮೇಶ್ವರನಾದವನೇ! ಸ್ವಯಂ ಪ್ರಕಾಶನಾದ ಪರಮಾತ್ಮನೇ! ನನಗೆ ನನ್ನ ಲೋಕಕ್ಕೆ ಹೋಗಲು ಅನುಮತಿಯನ್ನು ದಯಪಾಲಿಸು. ॥16॥

(ಶ್ಲೋಕ-17)

ಮೂಲಮ್

ಬ್ರಹ್ಮದಂಡಾದ್ವಿಮುಕ್ತೋಹಂ ಸದ್ಯಸ್ತೇಚ್ಯುತ ದರ್ಶನಾತ್ ।
ಯನ್ನಾಮ ಗೃಹ್ಣನ್ನಖಿಲಾನ್ ಶ್ರೋತೃನಾತ್ಮಾನಮೇವ ಚ ।
ಸದ್ಯಃ ಪುನಾತಿ ಕಿಂ ಭೂಯಸ್ತಸ್ಯ ಸ್ಪೃಷ್ಟಃ ಪದಾ ಹಿ ತೇ ॥

ಅನುವಾದ

ಅಚ್ಯುತನೇ! ನಿನ್ನ ದರ್ಶನ ಮಾತ್ರದಿಂದಲೇ ನಾನು ಬ್ರಾಹ್ಮಣರ ಶಾಪದಿಂದ ಮುಕ್ತನಾದೆನು. ಇದು ಆಶ್ಚರ್ಯದ ಸಂಗತಿಯೇನಲ್ಲ. ಏಕೆಂದರೆ, ನಿನ್ನ ನಾಮೋಚ್ಚಾರಗೈದವನು ತನ್ನನ್ನು ಮತ್ತು ಶ್ರೋತೃಗಳನ್ನು ಪವಿತ್ರರಾಗಿಸುತ್ತಾನೆ. ಹಾಗಿರುವಾಗ ನನಗಾದರೋ ನೀನು ಸಾಕ್ಷಾತ್ ನಿನ್ನ ಚರಣ ಕಮಲಗಳಿಂದ ಸ್ಪರ್ಶಿಸಿರುವೆ. ಎಂದಾಗ ನನ್ನ ಮುಕ್ತಿಯಲ್ಲಿ ಸಂದೇಹವಿದೆಯೇ? ॥17॥

(ಶ್ಲೋಕ-18)

ಮೂಲಮ್

ಇತ್ಯನುಜ್ಞಾಪ್ಯ ದಾಶಾರ್ಹಂ ಪರಿಕ್ರಮ್ಯಾಭಿವಂದ್ಯ ಚ ।
ಸುದರ್ಶನೋ ದಿವಂ ಯಾತಃ ಕೃಚ್ಛ್ರಾನ್ನಂದಶ್ಚ ಮೋಚಿತಃ ॥

ಅನುವಾದ

ಹೀಗೆ ಸುದರ್ಶನನು ಭಗವಾನ್ ಶ್ರೀಕೃಷ್ಣನನ್ನು ಸ್ತುತಿಸುತ್ತಾ, ಪ್ರದಕ್ಷಿಣೆ ಬಂದು ಸಾಷ್ಟಾಂಗ ನಮಸ್ಕಾರ ಮಾಡಿದನು. ಮತ್ತೆ ಅವನಿಂದ ಬೀಳ್ಕೊಂಡು ತನ್ನ ಲೋಕಕ್ಕೆ ಹೊರಟು ಹೋದನು. ಇತ್ತ ನಂದಗೋಪನೂ ದೊಡ್ಡದಾದ ಆಪತ್ತಿನಿಂದ ಪಾರಾದನು. ॥18॥

(ಶ್ಲೋಕ-19)

ಮೂಲಮ್

ನಿಶಾಮ್ಯ ಕೃಷ್ಣಸ್ಯ ತದಾತ್ಮವೈಭವಂ
ವ್ರಜೌಕಸೋ ವಿಸ್ಮಿತಚೇತಸಸ್ತತಃ ।
ಸಮಾಪ್ಯ ತಸ್ಮಿನ್ನಿಯಮಂ ಪುನರ್ವ್ರಜಂ
ನೃಪಾಯಯುಸ್ತತ್ಕಥಯಂತ ಆದೃತಾಃ ॥

ಅನುವಾದ

ರಾಜೇಂದ್ರ! ವ್ರಜವಾಸಿಗಳೆಲ್ಲರೂ ಭಗವಾನ್ ಶ್ರೀಕೃಷ್ಣನ ಇಂತಹ ಅದ್ಭುತ ಮಹಿಮೆಯನ್ನು ನೋಡಿದಾಗ ಅವರು ಭಾರೀ ವಿಸ್ಮಯಗೊಂಡರು. ಆ ಕ್ಷೇತ್ರದಲ್ಲಿ ಕೈಗೊಂಡ ವ್ರತ-ನಿಯಮವನ್ನು ಪೂರ್ಣಗೊಳಿಸಿ ಅವರೆಲ್ಲರೂ ಪ್ರೇಮಾದರಗಳಿಂದ ಶ್ರೀಕೃಷ್ಣನ ಆ ಲೀಲೆಯನ್ನು ಕೊಂಡಾಡುತ್ತಾ ಮತ್ತೆ ವ್ರಜಕ್ಕೆ ಮರಳಿದರು. ॥19॥

(ಶ್ಲೋಕ-20)

ಮೂಲಮ್

ಕದಾಚಿದಥ ಗೋವಿಂದೋ ರಾಮಶ್ಚಾದ್ಭುತವಿಕ್ರಮಃ ।
ವಿಜಹ್ರತುರ್ವನೇ ರಾತ್ರ್ಯಾಂ ಮಧ್ಯಗೌ ವ್ರಜಯೋಷಿತಾಮ್ ॥

ಅನುವಾದ

ಪರೀಕ್ಷಿತ ಮಹಾರಾಜ! ಒಂದು ದಿನ ಅದ್ಭುತ ವಿಕ್ರಮನಾದ ಭಗವಾನ್ ಶ್ರೀಕೃಷ್ಣನೂ, ಬಲರಾಮನೂ ಸೇರಿ ರಾತ್ರಿಯಲ್ಲಿ ಗೋಪಿಕೆಯರೊಂದಿಗೆ ವೃಂದಾವನದಲ್ಲಿ ವಿಹರಿಸುತ್ತಿದ್ದರು. ॥20॥

(ಶ್ಲೋಕ-21)

ಮೂಲಮ್

ಉಪಗೀಯಮಾನೌ ಲಲಿತಂ ಸೀಜನೈರ್ಬದ್ಧಸೌಹೃದೈಃ ।
ಸ್ವಲಂಕೃತಾನುಲಿಪ್ತಾಂಗೌ ಸ್ರಗ್ವಿಣೌ ವಿರಜೋಂಬರೌ ॥

ಅನುವಾದ

ಭಗವಾನ್ ಶ್ರೀಕೃಷ್ಣನು ನಿರ್ಮಲವಾದ ಪೀತಾಂಬರವನ್ನೂ, ಬಲರಾಮನು ನೀಲಾಂಬರವನ್ನು ಧರಿಸಿದ್ದರು. ಇಬ್ಬರ ಕೊರಳಲ್ಲಿಯೂ ಹೂವುಗಳ ಸುಂದರ ಮಾಲೆಗಳಿದ್ದು, ಶರೀರಕ್ಕೆ ಅಂಗರಾಗವನ್ನು, ಸುಂಗಧಿತ ಚಂದನವನ್ನೂ ಹಚ್ಚಿಕೊಂಡು, ಅಂದವಾದ ಆಭರಣಗಳನ್ನು ತೊಟ್ಟಿದ್ದರು. ಗೋಪಿಯರು ಪ್ರೇಮಾನಂದದಿಂದ ಮಧುರವಾದ ಸ್ವರಗಳಿಂದ ಬಲರಾಮ-ಶ್ರೀಕೃಷ್ಣರ ಗುಣಗಳನ್ನು ಗಾನಮಾಡುತ್ತಿದ್ದರು. ॥21॥

(ಶ್ಲೋಕ-22)

ಮೂಲಮ್

ನಿಶಾಮುಖಂ ಮಾನಯಂತಾವುದಿತೋಡುಪತಾರಕಮ್ ।
ಮಲ್ಲಿಕಾಗಂಧಮತ್ತಾಲಿಜುಷ್ಟಂ ಕುಮುದವಾಯುನಾ ॥

(ಶ್ಲೋಕ-23)

ಮೂಲಮ್

ಜಗತುಃ ಸರ್ವಭೂತಾನಾಂ ಮನಃಶ್ರವಣಮಂಗಲಮ್ ।
ತೌ ಕಲ್ಪಯಂತೌ ಯುಗಪತ್ ಸ್ವರಮಂಡಲಮೂರ್ಚ್ಛಿತಮ್ ॥

ಅನುವಾದ

ಆಗತಾನೇ ಸಾಯಂಕಾಲವಾಗಿತ್ತು. ಆಕಾಶದಲ್ಲಿ ಚಂದ್ರ-ತಾರೆಗಳು ಪ್ರಕಾಶಿಸ ತೊಡಗಿದವು. ಮಲ್ಲಿಗೆಯ ಸುಗಂಧದಿಂದ ಮದಿಸಿದ ದುಂಬಿಗಳು ಝೇಂಕರಿಸುತ್ತಿದ್ದವು. ಜಲಾಶಯಗಳಲ್ಲಿದ್ದ ಕುಮುದಪುಷ್ಪಗಳ ಸುಗಂಧವನ್ನು ಹೊತ್ತುಕೊಂಡು ತಂಗಾಳಿಯು ಮಂದಮಂದವಾಗಿ ಬೀಸುತ್ತಾ ಇದೆ. ಅಂತಹ ವಾತಾವರಣವನ್ನು ಶ್ಲಾಘಿಸುತ್ತಾ ಶ್ರೀಕೃಷ್ಣ-ಬಲರಾಮರು ಜೊತೆಗೂಡಿ ಆರೋಹಣ ಅವರೋಹಣ ಕ್ರಮದಲ್ಲಿ ರಾಗಾಲಾಪನೆ ಮಾಡತೊಡಗಿದರು. ಅವರ ದೈವಗಾನವು ಜಗತ್ತಿನ ಸಮಸ್ತ ಪ್ರಜೆಗಳಿಗೂ ಆನಂದ ದಾಯಕವಾಗಿತ್ತು. ॥22-23॥

(ಶ್ಲೋಕ-24)

ಮೂಲಮ್

ಗೋಪ್ಯಸ್ತದ್ಗೀತಮಾಕರ್ಣ್ಯ ಮೂರ್ಚ್ಛಿತಾ ನಾವಿದನ್ನೃಪ ।
ಸ್ರಂಸದ್ದುಕೂಲಮಾತ್ಮಾನಂ ಸ್ರಸ್ತಕೇಶಸ್ರಜಂ ತತಃ ॥

ಅನುವಾದ

ಅವರ ದಿವ್ಯಗಾನವನ್ನು ಕೇಳಿ ಗೋಪಿಕೆಯರು ಮೈಮರೆತು ಹೋದರು. ಅವರಿಗೆ ಉಟ್ಟ ಸೀರೆಯು ಜಾರಿ ಹೋಗುತ್ತಿರುವುದರ ಕಡೆಗೆ, ಮುಡಿಯು ಬಿಚ್ಚಿಹೋಗಿ, ಪುಷ್ಪಮಾಲೆಗಳು ಹರಿದು ಬೀಳುವುದರ ಕಡೆಗೆ ಪರಿವೆಯೇ ಇರಲಿಲ್ಲ. ॥24॥

(ಶ್ಲೋಕ-25)

ಮೂಲಮ್

ಏವಂ ವಿಕ್ರೀಡತೋಃ ಸ್ವೈರಂ ಗಾಯತೋಃ ಸಂಪ್ರಮತ್ತವತ್ ।
ಶಂಖಚೂಡ ಇತಿ ಖ್ಯಾತೋ ಧನದಾನುಚರೋಭ್ಯಗಾತ್ ॥

ಅನುವಾದ

ಹೀಗೆ ಬಲರಾಮ-ಶ್ರೀಕೃಷ್ಣರು ಸ್ವೆಚ್ಛೆಯಿಂದ ಉನ್ಮತ್ತರಂತೆ ಕರ್ಣಾನಂದಕರವಾಗಿ ಹಾಡುತ್ತಿದ್ದಾಗ ಶಂಖಚೂಡನೆಂಬ ಹೆಸರಿನ ಕುಬೇರನ ಅನುಚರನಾದ ಯಕ್ಷನೊಬ್ಬನು ಅಲ್ಲಿಗೆ ಬಂದನು. ॥25॥

(ಶ್ಲೋಕ-26)

ಮೂಲಮ್

ತಯೋರ್ನಿರೀಕ್ಷತೋ ರಾಜಂಸ್ತನ್ನಾಥಂ ಪ್ರಮದಾಜನಮ್ ।
ಕ್ರೋಶಂತಂ ಕಾಲಯಾಮಾಸ ದಿಶ್ಯುದೀಚ್ಯಾಮಶಂಕಿತಃ ॥

ಅನುವಾದ

ಪರೀಕ್ಷಿತನೇ! ರಾಮ-ಕೃಷ್ಣರಿಬ್ಬರೂ ನೋಡುತ್ತಿರುವಂತೆಯೇ ಆ ಶಂಖಚೂಡ ಯಕ್ಷನು - ಶ್ರೀಕೃಷ್ಣನನ್ನೇ ಏಕಮಾತ್ರ ಸ್ವಾಮಿಯೆಂದು ಭಾವಿಸಿದ್ದ ಗೋಪಿಯರನ್ನು ಎತ್ತಿಕೊಂಡು ನಿಃಶಂಕನಾಗಿ ಉತ್ತರ ದಿಕ್ಕಿನ ಕಡೆಗೆ ಓಡಿಹೋದನು. ಆ ಗೋಪಿಯರು ಅಳುತ್ತಾ ಕೂಗುತ್ತಿದ್ದರು. ॥26॥

(ಶ್ಲೋಕ-27)

ಮೂಲಮ್

ಕ್ರೋಶಂತಂ ಕೃಷ್ಣ ರಾಮೇತಿ ವಿಲೋಕ್ಯ ಸ್ವಪರಿಗ್ರಹಮ್ ।
ಯಥಾ ಗಾ ದಸ್ಯುನಾ ಗ್ರಸ್ತಾ ಭ್ರಾತರಾವನ್ವಧಾವತಾಮ್ ॥

ಅನುವಾದ

ಗೋವುಗಳನ್ನು ಕಳ್ಳರು ಅಪಹರಿಸಿಕೊಂಡು ಹೋಗುವಂತೆಯೇ ಆ ಯಕ್ಷನು ತಮ್ಮ ಪ್ರೇಯಸಿಯರನ್ನು ಕದ್ದುಕೊಂಡು ಹೋಗುತ್ತಿದ್ದಾನೆ ಮತ್ತು ಅವರು ಹಾ ಕೃಷ್ಣ! ಬಲರಾಮ! ರಕ್ಷಿಸು, ರಕ್ಷಿಸು ಎಂದು ಕೂಗುತ್ತಿರುವುದನ್ನು ನೋಡಿದ ಸಹೋದರರಿಬ್ಬರೂ ಅವನೆಡೆಗೆ ಓಡಿದರು. ॥27॥

(ಶ್ಲೋಕ-28)

ಮೂಲಮ್

ಮಾ ಭ್ಯೇಷ್ಟೇತ್ಯಭಯಾರಾವೌ ಶಾಲಹಸ್ತೌ ತರಸ್ವಿನೌ ।
ಆಸೇದತುಸ್ತಂ ತರಸಾ ತ್ವರಿತಂ ಗುಹ್ಯಕಾಧಮಮ್ ॥

ಅನುವಾದ

ಹೆದರ ಬೇಡಿರಿ, ಹೆದರ ಬೇಡಿರಿ ಎಂದು ಅಭಯ ಮಾತನ್ನು ಹೇಳುತ್ತಾ ಕೈಯಲ್ಲಿ ಸಾಲವೃಕ್ಷಗಳನ್ನೆತ್ತಿಕೊಂಡು ವೇಗವಾಗಿ ಕ್ಷಣಾರ್ಧದಲ್ಲಿ ಆ ನೀಚನಾದ ಯಕ್ಷನ ಬಳಿಗೆ ತಲುಪಿದರು. ॥28॥

(ಶ್ಲೋಕ-29)

ಮೂಲಮ್

ಸ ವೀಕ್ಷ್ಯ ತಾವನುಪ್ರಾಪ್ತೌಕಾಲಮೃತ್ಯೂ ಇವೋದ್ವಿಜನ್ ।
ವಿಸೃಜ್ಯ ಸೀಜನಂ ಮೂಢಃ ಪ್ರಾದ್ರವಜ್ಜೀವಿತೇಚ್ಛಯಾ ॥

ಅನುವಾದ

ರಾಮ-ಕೃಷ್ಣರಿಬ್ಬರೂ ಕಾಲ ಮತ್ತು ಮೃತ್ಯುವಿನಂತೆ ತನ್ನ ಬಳಿಗೆ ಬಂದಿರುವುದನ್ನು ನೋಡಿದ ಮೂಢನಾದ ಶಂಖಚೂಡನು ಭಯಗೊಂಡನು. ಅವನು ಗೋಪಿಯರನ್ನು ಅಲ್ಲೇ ಬಿಟ್ಟು ಪ್ರಾಣಗಳನ್ನು ಉಳಿಸಿಕೊಳ್ಳಲು ಅಲ್ಲಿಂದ ಓಡಿ ಹೋದನು. ॥29॥

(ಶ್ಲೋಕ-30)

ಮೂಲಮ್

ತಮನ್ವಧಾವದ್ಗೋವಿಂದೋ ಯತ್ರ ಯತ್ರ ಸ ಧಾವತಿ ।
ಜಿಹೀರ್ಷುಸ್ತಚ್ಛಿರೋರತ್ನಂ ತಸ್ಥೌ ರಕ್ಷನ್ ಸಿಯೋ ಬಲಃ ॥

ಅನುವಾದ

ಆಗ ಗೋಪಿಕಾಸ್ತ್ರೀಯರನ್ನು ರಕ್ಷಿಸಲಿಕ್ಕಾಗಿ ಬಲರಾಮನು ಅಲ್ಲೇ ನಿಂತನು. ಆದರೆ ಭಗವಾನ್ ಶ್ರೀಕೃಷ್ಣನು ಶಂಖಚೂಡನು ಓಡಿದಲ್ಲಿಗೆ ಓಡುತ್ತಾ ಹೋಗಿ ಅವನ ಶಿರದಲ್ಲಿದ್ದ ಚೂಡಾಮಣಿಯನ್ನು ಕಿತ್ತುಕೊಳ್ಳಲು ಬಯಸಿದನು. ॥30॥

(ಶ್ಲೋಕ-31)

ಮೂಲಮ್

ಅವಿದೂರ ಇವಾಭ್ಯೇತ್ಯ ಶಿರಸ್ತಸ್ಯ ದುರಾತ್ಮನಃ ।
ಜಹಾರ ಮುಷ್ಟಿನೈವಾಂಗ ಸಹಚೂಡಾಮಣಿಂ ವಿಭುಃ ॥

ಅನುವಾದ

ಸ್ವಲ್ಪ ದೂರಹೋಗುತ್ತಲೇ ಭಗವಂತನು ಅವನನ್ನು ಹಿಡಿದುಕೊಂಡು ಆ ದುಷ್ಟನ ಶಿರದ ಮೇಲೆ ಬಲವಾಗಿ ಒಂದು ಗುದ್ದಿದನು ಮತ್ತು ಚೂಡಾಮಣಿಯೊಂದಿಗೆ ಅವನ ರುಂಡ-ಮುಂಡಗಳನ್ನು ಬೇರ್ಪಡಿಸಿದನು. ॥31॥

(ಶ್ಲೋಕ-32)

ಮೂಲಮ್

ಶಂಖಚೂಡಂ ನಿಹತ್ಯೈವಂ ಮಣಿಮಾದಾಯ ಭಾಸ್ವರಮ್ ।
ಅಗ್ರಜಾಯಾದದಾತ್ ಪ್ರೀತ್ಯಾ ಪಶ್ಯಂತೀನಾಂ ಚ ಯೋಷಿತಾಮ್ ॥

ಅನುವಾದ

ಹೀಗೆ ಭಗವಾನ್ ಶ್ರೀಕೃಷ್ಣನು ಶಂಖಚೂಡನನ್ನು ಕೊಂದು, ಆ ಹೊಳೆಯುವ ಚೂಡಾಮಣಿಯನ್ನು ಎತ್ತಿಕೊಂಡು ಮರಳಿದನು. ಎಲ್ಲ ಗೋಪಿಕೆಯರೂ ನೋಡುತ್ತಿರುವಂತೆಯೇ ಆ ಮಣಿಯನ್ನು ಅಣ್ಣನಾದ ಬಲರಾಮನಿಗೆ ಒಪ್ಪಿಸಿದನು. ॥32॥

ಅನುವಾದ (ಸಮಾಪ್ತಿಃ)

ಮೂವತ್ತನಾಲ್ಕನೆಯ ಅಧ್ಯಾಯವು ಮುಗಿಯಿತು. ॥34॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ
ಶಂಖಚೂಡವಧೋ ನಾಮ ಚತುಸಿಂಶೋಧ್ಯಾಯಃ ॥34॥