[ಮೂವತ್ತೆರಡನೆಯ ಅಧ್ಯಾಯ]
ಭಾಗಸೂಚನಾ
ಭಗವಂತನು ಪ್ರಕಟನಾಗಿ ಗೋಪಿಯರನ್ನು ಸಂತೈಸಿದುದು
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತಿ ಗೋಪ್ಯಃ ಪ್ರಗಾಯಂತ್ಯಃ ಪ್ರಲಪಂತ್ಯಶ್ಚ ಚಿತ್ರಧಾ ।
ರುರುದುಃ ಸುಸ್ವರಂ ರಾಜನ್ ಕೃಷ್ಣದರ್ಶನಲಾಲಸಾಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಹೀಗೆ ಶ್ರೀಕೃಷ್ಣನ ದರ್ಶನಾಕಾಂಕ್ಷಿಗಳಾದ ಗೋಪಿಯರು ಕೆಲವುವೇಳೆ ಅವನ ಲೀಲಾಪ್ರಸಂಗಗಳನ್ನು ಹಾಡುತ್ತಾ ಪ್ರಲಾಪಿಸುತ್ತಿದ್ದರೆ, ಕೆಲವು ವೇಳೆ ವಿರಹವೇದನೆಯನ್ನು ತಾಳಲಾರದೆ ಕರುಣಾಜನಕವಾಗಿ ಸುಸ್ವರದಿಂದ ಬಗೆ-ಬಗೆಯಾಗಿ ವಿಲಪಿಸುತ್ತಿದ್ದರು. ॥1॥
(ಶ್ಲೋಕ-2)
ಮೂಲಮ್
ತಾಸಾಮಾವಿರಭೂಚ್ಛೌರಿಃ ಸ್ಮಯಮಾನಮುಖಾಂಬುಜಃ ।
ಪೀತಾಂಬರಧರಃಸ್ರಗ್ವೀ ಸಾಕ್ಷಾನ್ಮನ್ಮಥಮನ್ಮಥಃ ॥
ಅನುವಾದ
ಒಡನೆಯೇ ಅವರ ಮಧ್ಯದಲ್ಲೇ ಭಗವಾನ್ ಶ್ರೀಕೃಷ್ಣನು ಪ್ರಕಟನಾದನು. ಅವನ ಮುಖಾರವಿಂದವು ಮಂದಹಾಸದಿಂದ ಪ್ರಫುಲ್ಲವಾಗಿತ್ತು. ವನಮಾಲೆಯನ್ನು, ಪೀತಾಂಬರವನ್ನು ಧರಿಸಿದ್ದ ಶ್ರೀಹರಿಯು ಸಾಕ್ಷಾತ್ ಮನ್ಮಥನ ಮನಸ್ಸನ್ನು ಸೂರೆಗೊಳ್ಳುವಂತಹ ಸುಂದರ ರೂಪದಿಂದ ಬೆಳಗಿದನು. ॥2॥
(ಶ್ಲೋಕ-3)
ಮೂಲಮ್
ತಂ ವಿಲೋಕ್ಯಾಗತಂ ಪ್ರೇಷ್ಠಂ ಪ್ರೀತ್ಯುತ್ಫುಲ್ಲದೃಶೋಬಲಾಃ ।
ಉತ್ತಸ್ಥುರ್ಯುಗಪತ್ ಸರ್ವಾಸ್ತನ್ವಃ ಪ್ರಾಣಮಿವಾಗತಮ್ ॥
ಅನುವಾದ
ಕೋಟಿ-ಕೋಟಿ ಮನ್ಮಥರಿಗಿಂತಲೂ ಪರಮಮನೋಹರನಾದ ಪ್ರಾಣಪ್ರಿಯ ಶ್ಯಾಮಸುಂದರನನ್ನು ನೋಡಿದ ಗೋಪಿಯರ ಕಣ್ಣುಗಳು ಕಮಲದಂತೆ ಅರಳಿದವು. ಗತಪ್ರಾಣವಾದ ಶರೀರದಲ್ಲಿ ಪುನಃ ದಿವ್ಯಪ್ರಾಣವು ಸಂಚಾರವಾದಾಗ ಇಂದ್ರಿಯಗಳೆಲ್ಲವೂ ಒಮ್ಮೆಗೆ ಕಾರ್ಯೋನ್ಮುಖವಾಗುವಂತೆ ಗೋಪಿಯರೆಲ್ಲರೂ ಒಮ್ಮೆಗೆ ಎದ್ದು ನಿಂತರು. ರೋಮಾಂಚಿತರಾಗಿ ನವಸ್ಫೂರ್ತಿಯಿಂದ ಒಡಗೊಂಡರು. ॥3॥
(ಶ್ಲೋಕ-4)
ಮೂಲಮ್
ಕಾಚಿತ್ ಕರಾಂಬುಜಂ ಶೌರೇರ್ಜಗೃಹೇಂಜಲಿನಾ ಮುದಾ ।
ಕಾಚಿದ್ದಧಾರ ತದ್ಬಾಹುಮಂಸೇ ಚಂದನರೂಷಿತಮ್ ॥
ಅನುವಾದ
ಒಬ್ಬ ಗೋಪಿಯು ಅತ್ಯಂತ ಪ್ರೇಮಾನಂದದಿಂದ ಶ್ರೀಕೃಷ್ಣನ ಕರಕಮಲವನ್ನು ತನ್ನೆರಡೂ ಕೈಗಳಿಂದ ಹಿಡಿದುಕೊಂಡಳು. ಮತ್ತೊಬ್ಬಳು ಚಂದನಲಿಪ್ತವಾದ ಅವನ ಬಾಹುವನ್ನು ತನ್ನ ಹೆಗಲಮೇಲೆ ಇರಿಸಿಕೊಂಡಳು. ॥4॥
(ಶ್ಲೋಕ-5)
ಮೂಲಮ್
ಕಾಚಿದಂಜಲಿನಾಗೃಹ್ಣಾತ್ತನ್ವೀ ತಾಂಬೂಲಚರ್ವಿತಮ್ ।
ಏಕಾ ತದಂಘ್ರಿಕಮಲಂ ಸಂತಪ್ತಾ ಸ್ತನಯೋರಧಾತ್ ॥
ಅನುವಾದ
ಒಬ್ಬಳು ಶ್ರೀಕೃಷ್ಣನು ಅಗಿದಿದ್ದ ತಾಂಬೂಲವನ್ನು ಪ್ರಸಾದರೂಪವಾಗಿ ಬೊಗಸೆಯಲ್ಲಿ ಗ್ರಹಿಸಿದಳು. ಮಗದೊಬ್ಬ ಗೋಪಿಯು ಕುಳಿತುಕೊಂಡು ಶ್ರೀಕೃಷ್ಣನ ಪಾದಕಮಲವನ್ನು ವಿರಹವ್ಯಥೆಯಿಂದ ಉರಿಯುತ್ತಿದ್ದ ತನ್ನ ಎದೆಯ ಮೇಲೆ ಇರಿಸಿಕೊಂಡಳು. ॥5॥
(ಶ್ಲೋಕ-6)
ಮೂಲಮ್
ಏಕಾ ಭ್ರುಕುಟಿಮಾಬಧ್ಯ ಪ್ರೇಮಸಂರಂಭವಿಹ್ವಲಾ ।
ಘ್ನತೀವೈಕ್ಷತ್ ಕಟಾಕ್ಷೇಪೈಃ ಸಂದಷ್ಟದಶನಚ್ಛದಾ ॥
ಅನುವಾದ
ಇನ್ನೊಬ್ಬ ಗೋಪಿಯು ಪ್ರಣಯಕೋಪದಿಂದ ವಿಹ್ವಲಳಾಗಿ ಹುಬ್ಬಗಳನ್ನು ಗಂಟಕ್ಕಿ, ಹಲ್ಲುಗಳಿಂದ ತುಟಿಯನ್ನು ಕಚ್ಚುತ್ತಾ, ಕಟಾಕ್ಷ ಬಾಣಗಳಿಂದ ಶ್ರೀಕೃಷ್ಣನನ್ನು ಪ್ರಹರಿಸುವಳೋ ಎಂಬಂತೆ ದುರುಗುಟ್ಟಿಕೊಂಡು ನೋಡುತ್ತಿದ್ದಳು. ॥6॥
(ಶ್ಲೋಕ-7)
ಮೂಲಮ್
ಅಪರಾನಿಮಿಷದ್ದೃಗ್ಭ್ಯಾಂ ಜುಷಾಣಾ ತನ್ಮುಖಾಂಬುಜಮ್ ।
ಆಪೀತಮಪಿ ನಾತೃಪ್ಯತ್ಸಂತಸ್ತಚ್ಚರಣಂ ಯಥಾ ॥
ಅನುವಾದ
ಒಬ್ಬಳು ಎವೆಯಿಕ್ಕದ ನೋಟದಿಂದ ಶ್ರೀಕೃಷ್ಣನ ಮುಖಾರವಿಂದದ ಮಧುವನ್ನು ಪಾನಮಾಡುತ್ತಲೇ ಇದ್ದಳು. ಸತ್ಪುರಷರು ಭಗವಂತನ ದಿವ್ಯಚರಣಾರವಿಂದಗಳನ್ನು ಎಷ್ಟು ನೋಡಿದರೂ ತೃಪ್ತರಾಗದಿರುವಂತೆ ಆ ಗೋಪಿಯು ನಿರಂತರವಾಗಿ ಮುಖಕಮಲದ ಮಧುವನ್ನು ಪಾನಮಾಡುತ್ತಿದ್ದರೂ ತೃಪ್ತಳಾಗಲೇ ಇಲ್ಲ. ॥7॥
(ಶ್ಲೋಕ-8)
ಮೂಲಮ್
ತಂ ಕಾಚಿನ್ನೇತ್ರರಂಧ್ರೇಣ ಹೃದಿಕೃತ್ಯ ನಿಮೀಲ್ಯ ಚ ।
ಪುಲಕಾಂಗ್ಯುಪಗುಹ್ಯಾಸ್ತೇ ಯೋಗೀವಾನಂದಸಂಪ್ಲುತಾ ॥
ಅನುವಾದ
ಇನ್ನೋರ್ವ ಗೋಪಿಯು ಕಂಗಳೆಂಬ ಮಾರ್ಗದಿಂದ ಭಗವಂತನನ್ನು ಹೃದಯಕಮಲಕ್ಕೊಯ್ದು ದ್ವಾರರೂಪದಿಂದಿದ್ದ ರೆಪ್ಪೆಗಳನ್ನು ಮುಚ್ಚಿಕೊಂಡಳು. ಹೃದಯ ಗಹ್ವರದಲ್ಲಿ ಪ್ರಕಾಶಮಾನವಾದ ಶ್ರೀಕೃಷ್ಣನನ್ನು ಆಲಿಂಗಿಸಿಕೊಂಡು ರೋಮಾಂಚಿತಳಾಗಿ ಪರಮಾನಂದದಲ್ಲಿ ಮುಳುಗಿ ಹೋದಳು. ॥8॥
(ಶ್ಲೋಕ-9)
ಮೂಲಮ್
ಸರ್ವಾಸ್ತಾಃ ಕೇಶವಾಲೋಕಪರಮೋತ್ಸವನಿರ್ವೃತಾಃ ।
ಜಹುರ್ವಿರಹಜಂ ತಾಪಂ ಪ್ರಾಜ್ಞಂ ಪ್ರಾಪ್ಯ ಯಥಾ ಜನಾಃ ॥
ಅನುವಾದ
ಪರೀಕ್ಷಿತನೇ! ಮುಮುಕ್ಷುಗಳಾದ ಜನರು ಪ್ರಾಜ್ಞ ಸತ್ಪುರುಷನನ್ನು ಸಂದರ್ಶಿಸಿ ಸಂಸಾರದ ಜಂಜಾಟದಿಂದ ಮುಕ್ತರಾಗುವಂತೆಯೇ ಗೋಪಿಯರೆಲ್ಲರೂ ಭಗವಾನ್ ಶ್ರೀಕೃಷ್ಣನ ದರ್ಶನೋತ್ಸವದಿಂದ ಆನಂದಭರಿತರಾಗಿ ವಿರಹ ತಾಪದಿಂದ ಮುಕ್ತರಾದರು. ॥9॥
(ಶ್ಲೋಕ-10)
ಮೂಲಮ್
ತಾಭಿರ್ವಿಧೂತಶೋಕಾಭಿರ್ಭಗವಾನಚ್ಯುತೋ ವೃತಃ ।
ವ್ಯರೋಚತಾಧಿಕಂ ತಾತ ಪುರುಷಃ ಶಕ್ತಿಭಿರ್ಯಥಾ ॥
ಅನುವಾದ
ಭಗವಂತನಾದ ಅಚ್ಯುತನು ವಿರಹಶೋಕದಿಂದ ಮುಕ್ತರಾದ ಗೋಪಿಯರೊಡನೆ ಸುತ್ತುವರಿಯಲ್ಪಟ್ಟು, ಜ್ಞಾನ, ಬಲಮೊದಲಾದ ಶಕ್ತಿಗಳಿಂದ ಪರಿಪೂರ್ಣನಾದ ಈಶ್ವರನಂತೆಯೇ ಅತ್ಯಂತ ಶೋಭಾಯಮಾನವಾಗಿ ಪ್ರಕಾಶಿಸಿದನು. ॥10॥
(ಶ್ಲೋಕ-11)
ಮೂಲಮ್
ತಾಃ ಸಮಾದಾಯ ಕಾಲಿಂದ್ಯಾ ನಿರ್ವಿಶ್ಯ ಪುಲಿನಂ ವಿಭುಃ ।
ವಿಕಸತ್ಕುಂದಮಂದಾರಸುರಭ್ಯನಿಲಷಟ್ಪದಮ್ ॥
(ಶ್ಲೋಕ-12)
ಮೂಲಮ್
ಶರಚ್ಚಂದ್ರಾಂಶುಸಂದೋಹಧ್ವಸ್ತದೋಷಾತಮಃ ಶಿವಮ್ ।
ಕೃಷ್ಣಾಯಾ ಹಸ್ತತರಲಾಚಿತಕೋಮಲವಾಲುಕಮ್ ॥
ಅನುವಾದ
ಬಳಿಕ ಭಗವಾನ್ ಶ್ರೀಕೃಷ್ಣನು ಆ ವ್ರಜದ ಗೋಪಿಯರನ್ನು ಕರೆದುಕೊಂಡು ಯಮುನಾನದಿಯ ಮರಳು ಗುಡ್ಡೆಗಳ ಬಳಿಗೆ ಹೋದನು. ಆ ಸಮಯದಲ್ಲಿ ಅರಳಿದ ಮಲ್ಲಿಗೆ, ಮಂದಾರ ಮುಂತಾದ ಪುಷ್ಪಗಳಿಂದ ಸುಗಂಧವನ್ನು ಹೊತ್ತು ಶೀತಲವಾದ ಮಂದಾನಿಲವು ಬೀಸುತ್ತಿತ್ತು. ಸುಗಂಧದಿಂದ ಆಕರ್ಷಿತವಾದ ಮತ್ತ ಭೃಂಗಗಳು ಅತ್ತಲಿತ್ತ ಹಾರಾಡುತ್ತಿದ್ದವು. ಶರತ್ಕಾಲದ ಹುಣ್ಣಿಮೆಯ ಚಂದ್ರನು ಕಿರಣಗಳಿಂದ ಮೂಡಿಬಂದ ಹೃದಯಾನಂದಕರವಾದ ಬೆಳದಿಂಗಳಿನಿಂದ ರಾತ್ರಿಯ ಕತ್ತಲೆಯು ತೊಲಗಿಹೋದದ್ದಲ್ಲದೆ ಗೋಪಿಯರಿಗೆ ಆ ರಾತ್ರಿಯು ಅತ್ಯಂತ ಮಂಗಳಕರವೂ ಆಯಿತು. ಯಮುನೆಯ ಚಂಚಲವಾದ ತೆರೆಗಳ ರೂಪವಾದ ಕೈಗಳಿಂದ ಎರಚಲ್ಪಟ್ಟ ಕೋಮಲ ಮರಳಿನಿಂದ ಭಗವಂತನ ಲೀಲೆಗಳಿಗಾಗಿ ದಿವ್ಯವೇದಿಕೆಯನ್ನೇ ನಿರ್ಮಿಸಿತ್ತು. ॥11-12॥
(ಶ್ಲೋಕ-13)
ಮೂಲಮ್
ತದ್ದರ್ಶನಾಹ್ಲಾದವಿಧೂತಹೃದ್ರುಜೋ
ಮನೋರಥಾಂತಂ ಶ್ರುತಯೋ ಯಥಾ ಯಯುಃ ।
ಸ್ವೈರುತ್ತರೀಯೈಃ ಕುಚಕುಂಕುಮಾಂಕಿತೈ-
ರಚೀಕ್ಲೃಪನ್ನಾಸನಮಾತ್ಮಬಂಧವೇ ॥
ಅನುವಾದ
ಶ್ರುತಿಗಳು ಕರ್ಮಕಾಂಡದ ಮೂಲಕ ಪಾಪವನ್ನು ಪರಿಹರಿಸಿ, ಜ್ಞಾನಕಾಂಡದ ಮೂಲಕ ಆತ್ಮಸಾಕ್ಷಾತ್ಕಾರದ ಮನೋರಥವನ್ನು ಈಡೇರಿಸಿಕೊಡುವಂತೆ ಶ್ರೀಕೃಷ್ಣನ ದರ್ಶನದಿಂದ ಗೋಪಿಯರು ತಮ್ಮ ಮನಸ್ಸಿನ ಆಧಿ-ವ್ಯಾಧಿಗಳನ್ನು ಕಳಕೊಂಡು ಆನಂದ ಸಾಗರದಲ್ಲಿ ಮುಳುಗಿ ಹೋದರು. ಮರಳದಿಣ್ಣೆಗೆ ಬಂದ ಗೋಪಿಯರು ವಕ್ಷಃಸ್ಥಳದಲ್ಲಿದ್ದ ಕುಂಕುಮ ಕೇಸರಿಯಿಂದ ಅಂಕಿತವಾಗಿದ್ದ ತಮ್ಮ ಉತ್ತರಿಗಳನ್ನು ಹಾಸಿ ಆತ್ಮಬಂಧುವಾದ ಶ್ರೀಕೃಷ್ಣನಿಗೆ ಆಸನವನ್ನು ಕಲ್ಪಿಸಿಕೊಟ್ಟರು. ॥13॥
(ಶ್ಲೋಕ-14)
ಮೂಲಮ್
ತತ್ರೋಪವಿಷ್ಟೋ ಭಗವಾನ್ ಸ ಈಶ್ವರೋ
ಯೋಗೇಶ್ವರಾಂತರ್ಹೃದಿ ಕಲ್ಪಿತಾಸನಃ ।
ಚಕಾಸ ಗೋಪೀಪರಿಷದ್ಗತೋರ್ಚಿತ-
ಸೈಲೋಕ್ಯಲಕ್ಷ್ಮ್ಯೇಕಪದಂ ವಪುರ್ದಧತ್ ॥
ಅನುವಾದ
ಮಹಾ-ಮಹಾಯೋಗಿಗಳು ತಮ್ಮ-ತಮ್ಮ ಹೃನ್ಮಂದಿರಗಳಲ್ಲಿ ಕಲ್ಪಿಸಿಕೊಂಡ ಆಸನಗಳಲ್ಲಿ ಕುಳಿತು ವಿರಾಜಿಸುವ ಸರ್ವೇಶ್ವರನಾದ ಭಗವಂತನು ತನ್ನ ಪರಮಭಕ್ತೆಯರಾದ ಗೋಪಿಯರು ಕಲ್ಪಿಸಿಕೊಟ್ಟ ಚೀರಾಸನದಲ್ಲಿ ಕುಳಿತನು. ಮೂರು ಲೋಕಗಳ ಲಾವಣ್ಯಕ್ಕೂ ಸಾರಭೂತವಾದ, ಅತ್ಯಂತ ಸೌಂದರ್ಯದಿಂದ ಕೂಡಿದ ಶರೀರವನ್ನು ಧರಿಸಿದ ಶ್ರೀಕೃಷ್ಣನು ಗೋಪಿಕಾ ಸ್ತ್ರೀಯರ ಸಮೂಹದಿಂದ ಅರ್ಚಿಸಲ್ಪಡುತ್ತಾ ಪ್ರಕಾಶಿಸಿದನು. ॥14॥
(ಶ್ಲೋಕ-15)
ಮೂಲಮ್
ಸಭಾಜಯಿತ್ವಾ ತಮನಂಗದೀಪನಂ
ಸಹಾಸಲೀಲೇಕ್ಷಣವಿಭ್ರಮಭ್ರುವಾ ।
ಸಂಸ್ಪರ್ಶನೇನಾಂಕಕೃತಾಂಘ್ರಿಹಸ್ತಯೋಃ
ಸಂಸ್ತುತ್ಯ ಈಷತ್ಕುಪಿತಾ ಬಭಾಷಿರೇ ॥
ಅನುವಾದ
ಭಗವಾನ್ ಶ್ರೀಕೃಷ್ಣನು ತನ್ನ ಅಲೌಕಿಕವಾದ ಸೌಂದರ್ಯದಿಂದ ಗೋಪಿಯರ ಮನಸ್ಸನ್ನು ಕೆರಳಿಸುತ್ತಿದ್ದನು. ಅವನನ್ನು ಸೇರಬೇಕೆಂಬ, ಅವನೊಡನೆ ಕ್ರೀಡಿಸಬೇಕೆಂಬ ಆಕಾಂಕ್ಷೆಯು ಅವರಲ್ಲಿ ಕ್ಷಣ-ಕ್ಷಣಕ್ಕೂ ವರ್ಧಿಸುತ್ತಿತ್ತು. ಅವರು ಮಂದಹಾಸದ ಮೂಲಕವಾಗಿ, ಕಡೆಗಣ್ಣ ನೋಟಗಳ ಮೂಲಕವಾಗಿ, ಹುಬ್ಬು ಹಾರಿಸುವುದರ ಮೂಲಕವಾಗಿ ಅವನನ್ನು ಸೇವಿಸುತ್ತಿದ್ದರು. ಮತ್ತೆ ಕೆಲವರು ಅವನ ಪಾದಾರವಿಂದಗಳನ್ನು ತೊಡೆಯಲ್ಲಿಟ್ಟುಕೊಂಡು ಒತ್ತುತ್ತಿದ್ದರು. ಕೆಲವರು ಅವನ ದುಂಡಾದ ತೋಳುಗಳನ್ನು ಹಿಡಿದು ಒತ್ತುವರು. ಅವರ ಸೇವೆಗೆ ಅವನು ಪ್ರತಿಕ್ರಿಯೆಯನ್ನೇ ತೋರದಿರಲು ಸ್ವಲ್ಪ ಕೋಪಗೊಂಡು ಗೋಪಿಯರು ತಮ್ಮ ಪ್ರಿಯಕರನಿಗೆ ಹೇಳಿದರು. ॥15॥
(ಶ್ಲೋಕ-16)
ಮೂಲಮ್ (ವಾಚನಮ್)
ಗೋಪ್ಯ ಊಚುಃ
ಮೂಲಮ್
ಭಜತೋನುಭಜಂತ್ಯೇಕ ಏಕ ಏತದ್ವಿಪರ್ಯಯಮ್ ।
ನೋಭಯಾಂಶ್ಚ ಭಜಂತ್ಯೇಕ ಏತನ್ನೋ ಬ್ರೂಹಿ ಸಾಧು ಭೋಃ ॥
ಅನುವಾದ
ಗೋಪಿಯರು ಹೇಳುತ್ತಾರೆ — ಪ್ರಾಣನಾಥನೇ! ಲೋಕದಲ್ಲಿ ಕೆಲವರು ತಮ್ಮನ್ನು ಪ್ರೀತಿಸುವವರನ್ನು ಪ್ರೀತಿಸುವರು. ಮತ್ತೆ ಕೆಲವರು ತಮ್ಮನ್ನು ಪ್ರೀತಿಸದವರನ್ನೂ ಪ್ರೀತಿಸುತ್ತಾರೆ. ಮತ್ತೆ ಕೆಲವರು ಇಬ್ಬರನ್ನೂ ಪ್ರೀತಿಸುವುದಿಲ್ಲ. ಈ ಮೂವರಲ್ಲಿ ನಿನಗೆ ಯಾರು ಒಳ್ಳೆಯರಾಗಿ ಕಾಣುತ್ತಾರೆ? ॥16॥
(ಶ್ಲೋಕ-17)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಮಿಥೋ ಭಜಂತಿ ಯೇ ಸಖ್ಯಃ ಸ್ವಾರ್ಥೈಕಾಂತೋದ್ಯಮಾ ಹಿ ತೇ ।
ನ ತತ್ರ ಸೌಹೃದಂ ಧರ್ಮಃ ಸ್ವಾರ್ಥಾರ್ಥಂ ತದ್ಧಿ ನಾನ್ಯಥಾ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳಿದನು — ನನ್ನ ಪ್ರಿಯ ಗೆಳತಿಯರೇ! ತಮ್ಮನ್ನು ಪ್ರೀತಿಸಿದವರನ್ನು ಪ್ರೀತಿಸುವವರ ಉದ್ಯೋಗವು ಕೇವಲ ಸ್ವಾರ್ಥ ಸಾಧನೆಯಾಗಿದೆ. ಕೊಟ್ಟು-ಕೊಳ್ಳುವ ವ್ಯವಹಾರವಾಗಿದೆ. ಅದರಲ್ಲಿ ಸೌಹಾರ್ದವಾಗಲೀ, ಧರ್ಮವಾಗಲೀ ಇರುವುದಿಲ್ಲ. ಅವರ ಪ್ರೀತಿ ಕೇವಲ ಸ್ವಾರ್ಥಕ್ಕಾಗಿಯೇ ಇದೆ; ಇದಲ್ಲದೆ ಬೇರೆ ಏನೂ ಇಲ್ಲ. ॥17॥
(ಶ್ಲೋಕ-18)
ಮೂಲಮ್
ಭಜಂತ್ಯಭಜತೋ ಯೇ ವೈ ಕರುಣಾಃ ಪಿತರೋ ಯಥಾ ।
ಧರ್ಮೋ ನಿರಪವಾದೋತ್ರ ಸೌಹೃದಂ ಚ ಸುಮಧ್ಯಮಾಃ ॥
ಅನುವಾದ
ಸುಂದರಿಯರೇ! ಪ್ರೀತಿಸದೆ ಇರುವವನ್ನು ಪ್ರೀತಿಸುವವರು ಕರಣಾಳುಗಳು. ತಂದೆ-ತಾಯಿಗಳಂತಿರುವವರು. ಅವರ ಪ್ರೇಮವು ನಿರ್ದುಷ್ಟವೂ ನಿಷ್ಕಳಂಕವೂ ಆಗಿದೆ. ಅವರ ಪ್ರೇಮದಲ್ಲಿ ಪುಣ್ಯವೂ, ಧರ್ಮವೂ, ಸೌಹಾರ್ದವು ಇರುತ್ತದೆ. ॥18॥
(ಶ್ಲೋಕ-19)
ಮೂಲಮ್
ಭಜತೋಪಿ ನ ವೈ ಕೇಚಿದ್ಭಜಂತ್ಯಭಜತಃ ಕುತಃ ।
ಆತ್ಮಾರಾಮಾ ಹ್ಯಾಪ್ತಕಾಮಾ ಅಕೃತಜ್ಞಾ ಗುರುದ್ರುಹಃ ॥
ಅನುವಾದ
ಪ್ರೀತಿಸದವರನ್ನೇ ಪ್ರೀತಿಸುವುದಿಲ್ಲವೆಂದ ಮೇಲೆ ಪ್ರೀತಿಸದವರ ವಿಷಯದಲ್ಲಿ ಹೇಳಬೇಕಾಗಿಯೇ ಇಲ್ಲ. ಪ್ರೀತಿಸಿದವರನ್ನು ಪ್ರೀತಿಸಿದವರು ನಾಲ್ಕು ಬಗೆಯವರಾಗಿದ್ದಾರೆ. 1) ಆತ್ಮಾರಾಮರು - ಬ್ರಹ್ಮಜ್ಞಾನಕ್ಕಾಗಿ ಧ್ಯಾನಾಸಕ್ತರಾದ ಯೋಗಿಗಳು ಅಥವಾ ಬ್ರಹ್ಮಭಾವದಿಂದ ಆನಂದಪಡುತ್ತಿರುವವರು. 2) ಆಪ್ತ ಕಾಮರು - ಪ್ರಾಪಂಚಿಕ ಸೌಖ್ಯವನ್ನು ತ್ಯಜಿಸಿದ, ಪ್ರಪಂಚದ ಸಂಬಂಧವನ್ನು ಬಿಟ್ಟಿರುವ, ಇಷ್ಟಾರ್ಥಗಳನ್ನು ಪಡೆದ ಜೀವನ್ಮುಕ್ತರು. 3) ಅಕೃತಜ್ಞಾಃ - ಮಾಡಿದ ಉಪಕಾರವನ್ನು ಸ್ಮರಿಸದ ಕೃತಘ್ನರು. 4) ಗುರುದ್ರಹಃ - ಗುರು ಹಿರಿಯರಿಗೂ ದ್ರೋಹಮಾಡುವವರು. ಈ ನಾಲ್ಕು ಬಗೆಯ ಮನುಷ್ಯರು ಪ್ರೀತಿಸಿದವರನ್ನು ಪ್ರೀತಿಸುವುದಿಲ್ಲ. ॥19॥
(ಶ್ಲೋಕ-20)
ಮೂಲಮ್
ನಾಹಂ ತು ಸಖ್ಯೋ ಭಜತೋಪಿ ಜಂತೂನ್
ಭಜಾಮ್ಯಮೀಷಾಮನುವೃತ್ತಿವೃತ್ತಯೇ ।
ಯಥಾಧನೋ ಲಬ್ಧಧನೇ ವಿನಷ್ಟೇ
ತಚ್ಚಿಂತಯಾನ್ಯನ್ನಿಭೃತೋ ನ ವೇದ ॥
ಅನುವಾದ
ಗೋಪಿಯರೇ! ನಾನಾದರೋ ಪ್ರೇಮಿಸುವವರೊಂದಿಗೆ ಹೇಗೆ ವ್ಯವಹರಿಸಬೇಕೋ ಹಾಗೆ ಮಾಡುವುದಿಲ್ಲ. ಇದಕ್ಕೆ ಕಾರಣವೇನೆಂದರೆ ಅವರ ಚಿತ್ತವೃತ್ತಿಯು ನಿರಂತರವಾಗಿ ನನ್ನಲ್ಲೇ ತೊಡಗಿರಬೇಕೆಂಬುದೇ ನನ್ನ ಇಷ್ಟವಾಗಿದೆ. ದರಿದ್ರನಾದವನಿಗೆ ಎಂದೋ ಬಹಳಷ್ಟು ಹಣ ದೊರೆಯಿತು. ಮತ್ತೆ ಕಳೆದುಹೋದರೆ ಅವನು ಕಳೆದುಹೋದ ಧನವನ್ನೇ ಚಿಂತಿಸುತ್ತಾ ಇರುತ್ತಾನೆ. ಹಾಗೆಯೇ ನಾನು ಸಿಕ್ಕಿಯೂ ಸಿಕ್ಕದವನಂತೆ ಇರುತ್ತೇನೆ. ॥20॥
(ಶ್ಲೋಕ-21)
ಮೂಲಮ್
ಏವಂ ಮದರ್ಥೋಜ್ಝಿತಲೋಕವೇದ-
ಸ್ವಾನಾಂ ಹಿ ವೋ ಮಯ್ಯನುವೃತ್ತಯೇಬಲಾಃ ।
ಮಯಾ ಪರೋಕ್ಷಂ ಭಜತಾ ತಿರೋಹಿತಂ
ಮಾಸೂಯಿತುಂ ಮಾರ್ಹಥ ತತ್ಪ್ರಿಯಂ ಪ್ರಿಯಾಃ ॥
ಅನುವಾದ
ಗೋಪಿಯರೇ! ನೀವೆಲ್ಲ ನನಗಾಗಿ ಲೋಕಮರ್ಯಾದೆಯನ್ನು, ಶಾಸ್ತ್ರಮರ್ಯಾದೆಯನ್ನು, ಸ್ವಜನರನ್ನು ಪರಿತ್ಯಜಿಸಿ, ನನ್ನಲ್ಲೇ ಅನುರಕ್ತರಾಗಿ ನನ್ನ ಬಳಿಗೆ ಬಂದಿರಿ. ನಿಮಗೆ ನನ್ನಲ್ಲಿ ಇನ್ನೂ ಹೆಚ್ಚಿನ ಪ್ರೇಮವುಂಟಾಗಲು ಮತ್ತು ನನ್ನನ್ನೇ ಅನುವರ್ತಿಸುವಂತೆ ಮಾಡಲು ನಿಮಗೆ ಕಾಣದಂತೆ ಮರೆಯಾಗಿದ್ದು ಕೊಂಡು ನಿಮ್ಮನ್ನೇ ಪರೋಕ್ಷವಾಗಿ ಧ್ಯಾನಿಸುತ್ತಿದ್ದೆ. ಆದುದರಿಂದ ಪ್ರಿಯತಮೆಯರಾದ ನೀವು ನನ್ನಲ್ಲಿ ದೋಷವೆಣಿಸ ಬೇಡಿರಿ. ನೀವೆಲ್ಲರೂ ನನಗೆ ಪ್ರಿಯರಾಗಿರುವಿರಿ ಮತ್ತು ನಾನು ನಿಮಗೆ ಪ್ರಿಯನಾಗಿದ್ದೇನೆ. ॥21॥
(ಶ್ಲೋಕ-22)
ಮೂಲಮ್
ನ ಪಾರಯೇಹಂ ನಿರವದ್ಯಸಂಯುಜಾಂ
ಸ್ವಸಾಧುಕೃತ್ಯಂ ವಿಬುಧಾಯುಷಾಪಿ ವಃ ।
ಯಾ ಮಾಭಜನ್ ದುರ್ಜರಗೇಹಶೃಂಖಲಾಃ
ಸಂವೃಶ್ಚ್ಯ ತದ್ವಃ ಪ್ರತಿಯಾತು ಸಾಧುನಾ ॥
ಅನುವಾದ
ಪ್ರಿಯ ಗೋಪಿಯರೇ! ಋಷಿ-ಮುನಿಗಳಿಂದಲೂ ಪರಿತ್ಯಜಿಸಲು ಸಾಧ್ಯವಾಗದ ನಾನು-ನನ್ನದೆಂಬ ಸಂಸಾರದ ಸಂಕೋಲೆಗಳನ್ನು ಕಿತ್ತೊಗೆದು ನನ್ನ ಬಳಿಗೆ ಬಂದಿರುವಿರಿ. ನನ್ನೊಡನೆ ನಿರ್ದುಷ್ಟವಾದ ಭಕ್ತಿಯ ಸಂಬಂಧವನ್ನು ಹೊಂದಿರುವ ನಿಮಗೆ ಸರಿಯಾದ ಪ್ರತ್ಯುಪಕಾರವನ್ನು ಮಾಡಲು ದೇವತೆಗಳ ಆಯುರ್ಮಾನವನ್ನು ಹೊಂದಿದರೂ ನನ್ನಿಂದ ಸಾಧ್ಯವಾಗಲಾರದು. ಅರ್ಥಾತ್ ನಾನು ನಿಮಗೆ ಜನ್ಮ ಜನ್ಮಾಂತರದಲ್ಲಿ ಋಣಿಯಾಗಿರುವೆ. ಆದುದರಿಂದ ನೀವು ಮಾಡುವ ಸತ್ಕಾರವನ್ನು ಸ್ವೀಕರಿಸುವುದೇ ನಿಮಗೆ ನಾನು ಮಾಡುವ ಪ್ರತ್ಯುಪಕಾರವೆಂದು ಭಾವಿಸಿರಿ. ಇದರಿಂದ ನಿಮ್ಮ ಮನೋರಥವು ಈಡೇರಲಿ. ॥22॥
ಅನುವಾದ (ಸಮಾಪ್ತಿಃ)
ಮೂವತ್ತೆರಡನೆಯ ಅಧ್ಯಾಯವು ಮುಗಿಯಿತು. ॥32॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ
ರಾಸಕ್ರೀಡಾಯಾಂ ಗೋಪೀಸಾಂತ್ವನಂ ನಾಮ ದ್ವಾತ್ರಿಂಶೋಧ್ಯಾಯಃ ॥32॥