[ಮೂವತ್ತೊಂದನೆಯ ಅಧ್ಯಾಯ]
ಭಾಗಸೂಚನಾ
ಗೋಪಿಕಾಗೀತೆ
ಮೂಲಮ್ (ವಾಚನಮ್)
ಗೋಪ್ಯ ಊಚುಃ
(ಶ್ಲೋಕ-1)
ಮೂಲಮ್
ಜಯತಿ ತೇಧಿಕಂ ಜನ್ಮನಾ ವ್ರಜಃ
ಶ್ರಯತ ಇಂದಿರಾ ಶಶ್ವದತ್ರ ಹಿ ।
ದಯಿತ ದೃಶ್ಯತಾಂ ದಿಕ್ಷು ತಾವಕಾ-
ಸ್ತ್ವಯಿ ಧೃತಾಸವಸ್ತ್ವಾಂ ವಿಚಿನ್ವತೇ ॥
ಅನುವಾದ
ಗೋಪಿಯರು ವಿರಹದಿಂದ ಹಾಡುತ್ತಾರೆ — ಪ್ರಿಯಕರನೇ! ಕೃಷ್ಣ! ಮಾಧವ! ನೀನು ಇಲ್ಲಿ ಹುಟ್ಟಿದ ಕಾರಣದಿಂದಲೇ ವೈಕುಂಠಾದಿ ಉತ್ತಮ ಲೋಕಗಳಿಗಿಂತಲೂ ಈ ವ್ರಜದ ಮಹಿಮೆ ಹೆಚ್ಚಾಗಿದೆ. ಅದರಿಂದಲೇ ಸೌಂದರ್ಯದ ನಿಧಿಯಾದ ಸಂಪದ್ಭರಿತಳಾದ ಲಕ್ಷ್ಮೀದೇವಿಯು ವೈಕುಂಠವನ್ನು ಬಿಟ್ಟು ನಿತ್ಯ ನಿರಂತರವಾಗಿ ಇಲ್ಲಿ ವಾಸಮಾಡುತ್ತಿದ್ದಾಳೆ. ಪ್ರಿಯನೇ! ನಿನ್ನ ದಿವ್ಯ ಚರಣಾರವಿಂದಗಳಲ್ಲೇ ಪ್ರಾಣಾರ್ಪಣೆ ಮಾಡಿರುವ ಗೋಪಿಯರಾದ ನಾವು ನಿನ್ನನ್ನು ವನ-ವನಗಳಲ್ಲಿಯೂ ಹುಡುಕುತ್ತಿದ್ದೇವೆ. ದರ್ಶನವಿತ್ತು ಕಾಪಾಡು ಸ್ವಾಮಿ! ॥1॥
(ಶ್ಲೋಕ-2)
ಮೂಲಮ್
ಶರದುದಾಶಯೇ ಸಾಧುಜಾತಸತ್-
ಸರಸಿಜೋದರಶ್ರೀಮುಷಾ ದೃಶಾ ।
ಸುರತನಾಥ ತೇಶುಲ್ಕದಾಸಿಕಾ
ವರದ ನಿಘ್ನತೋ ನೇಹ ಕಿಂ ವಧಃ ॥
ಅನುವಾದ
ನಮ್ಮ ಪ್ರೇಮಪೂರ್ಣ ಹೃದಯದ ಸ್ವಾಮಿಯೇ! ನಾವು ನಿನ್ನ ನಿಃಶುಲ್ಕದಾಸಿಯರಾಗಿದ್ದೇವೆ. ಶರತ್ಕಾಲದಲ್ಲಿ ಸರೋವರಗಳಲ್ಲಿ ಸೊಂಪಾಗಿ ಬೆಳೆದಿರುವ ಕಮಲ ಪುಷ್ಪಗಳ ಕಾಂತಿಯನ್ನು ಅಪಹರಿಸುವ ಕಣ್ಣುಗಳಿಂದ ನೀನು ನಮ್ಮನ್ನು ಕೊಲ್ಲುತ್ತಿರುವೆ. ಓ ವರದನೇ! ನಿನ್ನ ನೋಟದಿಂದಲೇ ಕೊಲ್ಲುವುದು ವಧೆಯಲ್ಲವೇ? ಅಸ್ತ್ರಗಳಿಂದ ಕೊಲ್ಲುವುದು ಮಾತ್ರ ವಧೆಯೇ? ॥2॥
(ಶ್ಲೋಕ-3)
ಮೂಲಮ್
ವಿಷಜಲಾಪ್ಯಯಾದ್ವ್ಯಾಲರಾಕ್ಷಸಾದ್
ವರ್ಷಮಾರುತಾದ್ವೈದ್ಯುತಾನಲಾತ್ ।
ವೃಷಮಯಾತ್ಮಜಾದ್ವಿಶ್ವತೋಭಯಾದ್
ಋಷಭ ತೇ ವಯಂ ರಕ್ಷಿತಾ ಮುಹುಃ ॥
ಅನುವಾದ
ಪುರುಷ ಶ್ರೇಷ್ಠನೇ! ಯಮುನೆಯ ವಿಷಮಿಶ್ರಿತ ಜಲದಿಂದಾದ ಮೃತ್ಯುವಿನಿಂದಲೂ, ಹೆಬ್ಬಾವಿನ ರೂಪದಿಂದ ಬಂದ ಅಘಾಸುರನಿಂದಲೂ, ಇಂದ್ರನು ಕಳುಹಿಸಿದ್ದ ಪ್ರಚಂಡವಾದ ಗಾಳಿ-ಮಳೆ ಸಿಡಿಲುಗಳಿಂದಲೂ, ದಾವಾನಲದಿಂದಲೂ, ವೃಷಭಾಸುರನಿಂದಲೂ, ಮಾಯಾಸುರನ ಮಗನಾದ ತೃಣಾವರ್ತನಿಂದಲೂ ನಮ್ಮನ್ನು ಪದೇ-ಪದೇ ರಕ್ಷಿಸುವ ನೀನು ನಮ್ಮ ಮೇಲೆ ಏಕೆ ದಯೆತೋರುತ್ತಿಲ್ಲ! ॥3॥
(ಶ್ಲೋಕ-4)
ಮೂಲಮ್
ನ ಖಲು ಗೋಪಿಕಾನಂದನೋ ಭವಾ-
ನಖಿಲದೇಹಿನಾಮಂತರಾತ್ಮದೃಕ್ ।
ವಿಖನಸಾರ್ಥಿತೋ ವಿಶ್ವಗುಪ್ತಯೇ
ಸಖ ಉದೇಯಿವಾನ್ ಸಾತ್ವತಾಂ ಕುಲೇ ॥
ಅನುವಾದ
ನೀನು ಕೇವಲ ಯಶೋದಾನಂದನನೇ ಅಲ್ಲ, ಸಮಸ್ತ ದೇಹಧಾರಿಗಳ ಹೃದಯದಲ್ಲಿ ನೆಲೆಸಿರುವ ಅಂತರ್ಯಾಮಿಯಾಗಿದ್ದು, ಸಾಕ್ಷಿಯಾಗಿರುವೆ. ಓ ಸಖನೇ! ಬ್ರಹ್ಮದೇವರ ಪ್ರಾರ್ಥನೆಯಂತೆ ವಿಶ್ವವನ್ನು ರಕ್ಷಿಸಲಿಕ್ಕಾಗಿ ಸಾತ್ವತವಂಶದಲ್ಲಿ ಅವತರಿಸಿರುವೆ. ॥4॥
(ಶ್ಲೋಕ-5)
ಮೂಲಮ್
ವಿರಚಿತಾಭಯಂ ವೃಷ್ಣಿಧುರ್ಯ ತೇ
ಚರಣಮೀಯುಷಾಂ ಸಂಸೃತೇರ್ಭಯಾತ್ ।
ಕರಸರೋರುಹಂ ಕಾಂತ ಕಾಮದಂ
ಶಿರಸಿ ಧೇಹಿ ನಃ ಶ್ರೀಕರಗ್ರಹಮ್ ॥
ಅನುವಾದ
ಪ್ರಾಣಕಾಂತನೇ! ವೃಷ್ಣಿ ಶ್ರೇಷ್ಠನೇ! ಜನನ-ಮರಣರೂಪವಾದ ಸಂಸಾರಭಯದಿಂದ ಪೀಡಿತರಾದವರು ಸಂಸಾರದಿಂದ ಮುಕ್ತರಾಗಲು ನಿನ್ನ ಚರಣ ಕಮಲಗಳನ್ನು ಆಶ್ರಯಿಸುತ್ತಾರೆ. ಅಂತಹವರಿಗೆ ನೀನು ಅಭಯಹಸ್ತವನ್ನು ನೀಡುವೆ. ಸಮಸ್ತ ಭಕ್ತರ ಅಭಿಲಾಷೆಗಳನ್ನು ಪೂರ್ಣಗೊಳಿಸಿಕೊಡುವ ಲಕ್ಷ್ಮೀದೇವಿಯ ಪಾಣಿಗ್ರಹಣಮಾಡಿದ ಮತ್ತು ಭಕ್ತರ ವಿಷಯದಲ್ಲಿ ಅಭಯಮುದ್ರೆಯನ್ನು ತೋರುವ ನಿನ್ನ ದಿವ್ಯವಾದ ಕರಕಮಲವನ್ನು ನಮ್ಮ ತಲೆಯ ಮೇಲಿರಿಸು. ॥5॥
(ಶ್ಲೋಕ-6)
ಮೂಲಮ್
ವ್ರಜಜನಾರ್ತಿಹನ್ ವೀರ ಯೋಷಿತಾಂ
ನಿಜಜನಸ್ಮಯಧ್ವಂಸನಸ್ಮಿತ ।
ಭಜ ಸಖೇ ಭವತ್ಕಿಂಕರೀಃ ಸ್ಮ ನೋ
ಜಲರುಹಾನನಂ ಚಾರು ದರ್ಶಯ ॥
ಅನುವಾದ
ವ್ರಜ ವಾಸಿಗಳ ದುಃಖಗಳನ್ನು ದೂರಮಾಡುವ ವೀರ ಶಿರೋಮಣಿ ಶ್ಯಾಮಸುಂದರನೇ! ನಿನ್ನವರಾದ ಗೋಪಿಯರ ಗರ್ವವನ್ನು ಕ್ಷಣಮಾತ್ರದಲ್ಲಿ ಧ್ವಂಸಮಾಡುವ ಕಿರುನಗೆಯುಳ್ಳವನೇ! ಸೇವಕಿಯರಾದ ನಮ್ಮನ್ನು ಅಂಗೀಕರಿಸು. ದೂರೀಕರಿಸ ಬೇಡ. ಅಬಲೆಯರಾದ ನಮಗೆ ನಿನ್ನ ಮುಖಾರವಿಂದವನ್ನು ತೋರಿಸು. ॥6॥
(ಶ್ಲೋಕ-7)
ಮೂಲಮ್
ಪ್ರಣತದೇಹಿನಾಂ ಪಾಪಕರ್ಶನಂ
ತೃಣಚರಾನುಗಂ ಶ್ರೀನಿಕೇತನಮ್ ।
ಣಿಣಾರ್ಪಿತಂ ತೇ ಪದಾಂಬುಜಂ
ಕೃಣು ಕುಚೇಷು ನಃ ಕೃಂಧಿ ಹೃಚ್ಛಯಮ್ ॥
ಅನುವಾದ
ಪ್ರಿಯಕರನೇ! ಶರಣಾಗತರಾದವರ ಪಾಪವನ್ನು ಹೋಗಲಾಡಿಸುವಂತಹ, ಹುಲ್ಲನ್ನು ಹಸುಗಳನ್ನು ಅನುಸರಿಸಿ ಹೋಗುವ, ಶ್ರೀಲಕ್ಷ್ಮೀದೇವಿಗೆ ನಿವಾಸಸ್ಥಾನವಾದ, ಸೌಂದರ್ಯ, ಮಾಧುರ್ಯಗಳಿಗೆ ಆವಾಸವಾಗಿರುವ, ಕಾಳಿಯನ ಹೆಡೆಗಳನ್ನು ಮೆಟ್ಟಿ ಅನುಗ್ರಹಿಸಿದ ದಿವ್ಯವಾದ ನಿನ್ನ ಪಾದಪಂಕಜಗಳನ್ನು ನಮ್ಮ ವಕ್ಷಃ ಸ್ಥಳದ ಮೇಲಿರಿಸಿ ನಮ್ಮ ಹೃದಯತಾಪವನ್ನು ಶಾಂತಗೊಳಿಸು. ॥7॥
(ಶ್ಲೋಕ-8)
ಮೂಲಮ್
ಮಧುರಯಾ ಗಿರಾ ವಲ್ಗುವಾಕ್ಯಯಾ
ಬುಧಮನೋಜ್ಞಯಾ ಪುಷ್ಕರೇಕ್ಷಣ ।
ವಿಧಿಕರೀರಿಮಾ ವೀರ ಮುಹ್ಯತೀ-
ರಧರಸೀಧುನಾಪ್ಯಾಯಯಸ್ವ ನಃ ॥
ಅನುವಾದ
ಕಮಲನಯನ! ನಿನ್ನ ಮಾತು ಅದೆಷ್ಟು ಮಧುರವಾಗಿದೆ. ಮಾತಿನಲ್ಲಿರುವ ಒಂದೊಂದು ಶಬ್ದವೂ, ಒಂದೊಂದು ಅಕ್ಷರವೂ, ಒಂದೊಂದು ವಾಕ್ಯವೂ ಮಧುರಾತಿ ಮಧುರವಾಗಿದೆ. ದೊಡ್ಡ ದೊಡ್ಡ ವಿದ್ವಾಂಸರಿಗೂ ಕೂಡ ಅವು ಮನೋಜ್ಞವಾಗಿವೆ. ಅಂತಹ ನಿನ್ನ ಸುಮಧುರವಾದ ಚೆನ್ನುಡಿಗಳ ರಸಾಸ್ವಾದನೆಯಿಂದ ಮೋಹಗೊಂಡ ನಿನ್ನ ಸೇವಕಿಯರಾದ ನಮಗೆ ನಿನ್ನ ಅಮೃತಕ್ಕಿಂತಲೂ ಮಧುರವಾದ ಅಧರಾಮೃತವನ್ನು ಪಾನಮಾಡಿಸಿ ನಮ್ಮನ್ನು ತೃಪ್ತಿಗೊಳಿಸು. ॥8॥
(ಶ್ಲೋಕ-9)
ಮೂಲಮ್
ತವ ಕಥಾಮೃತಂ ತಪ್ತಜೀವನಂ
ಕವಿಭಿರೀಡಿತಂ ಕಲ್ಮಷಾಪಹಮ್ ।
ಶ್ರವಣಮಂಗಲಂ ಶ್ರೀಮದಾತತಂ
ಭುವಿ ಗೃಣಂತಿ ತೇ ಭೂರಿದಾ ಜನಾಃ ॥
ಅನುವಾದ
ಪ್ರಭುವೇ! ನಿನ್ನ ಲೀಲೆಯ ಕಥಾಪ್ರಸಂಗಗಳೂ ಅಮೃತ ಸ್ವರೂಪವೇ ಆಗಿವೆ. ವಿರಹದಿಂದ ಪರಿತಪಿಸುತ್ತಿರುವವರಿಗೆ ಅವು ಜೀವನ ಸರ್ವಸ್ವವೇ ಆಗಿವೆ. ದೊಡ್ಡ-ದೊಡ್ಡ ಜ್ಞಾನಿಗಳೂ ಮಹಾಭಕ್ತಕವಿಗಳು ನಿನ್ನ ಚರಿತಾಮೃತವನ್ನು ಹಾಡಿ ಹೊಗಳಿದ್ದಾರೆ. ಚರಿತಾಮೃತದ ಶ್ರವಣಮಾತ್ರದಿಂದಲೇ ಪಾಪವು ಪರಿಹಾರವಾಗುತ್ತದೆ. ಸುಖ-ಸಂಪತ್ತುಗಳು ಪ್ರಾಪ್ತವಾಗುತ್ತವೆ. ನಿನ್ನ ಕಥಾಮೃತವನ್ನು ಲೋಕದಲ್ಲಿ ಪಾನಮಾಡುವಂತಹವರು ಹಿಂದಿನ ಜನ್ಮದಲ್ಲಿ ಬಹಳ ದಾನಗಳನ್ನು ಮಾಡಿದವರಾಗಿರುತ್ತಾರೆ. ಆ ಪುಣ್ಯದಿಂದ ಅವರಿಗೆ ನಿನ್ನ ಕಥಾಮೃತವನ್ನು ಈಗ ಸವಿಯುವ ಯೋಗವುಂಟಾಗಿದೆ. ॥9॥
(ಶ್ಲೋಕ-10)
ಮೂಲಮ್
ಪ್ರಹಸಿತಂ ಪ್ರಿಯ ಪ್ರೇಮವೀಕ್ಷಣಂ
ವಿಹರಣಂ ಚ ತೇ ಧ್ಯಾನಮಂಗಲಮ್ ।
ರಹಸಿ ಸಂವಿದೋ ಯಾ ಹೃದಿಸ್ಪೃಶಃ
ಕುಹಕ ನೋ ಮನಃ ಕ್ಷೋಭಯಂತಿ ಹಿ ॥
ಅನುವಾದ
ಮಾಯಾಪತಿಯೇ! ಪ್ರಾಣ ಪ್ರಿಯನೇ! ನಿನ್ನ ಪ್ರೇಮಪೂರ್ಣವಾದ ನಗು, ಪ್ರೇಮಪೂರ್ಣವಾದ ನೋಟ, ನಾನಾ ಬಗೆಯ ಕ್ರೀಡೆಗಳು - ಇವೆಲ್ಲವನ್ನು ಸ್ಮರಿಸಿಕೊಂಡು ನಾವು ಆನಂದಪಡುತ್ತಿದ್ದೆವು. ನಿನ್ನನ್ನು ಧ್ಯಾನಿಸುವುದೇ ಮಂಗಳದಾಯಕವಾದುದು. ಅದರ ಫಲವಾಗಿ ನೀನೇ ನಮ್ಮ ಬಳಿಗೆ ಬಂದೆ. ಏಕಾಂತದಲ್ಲಿ ನಮ್ಮೊಡನೆ ಹೃದಯಸ್ಪರ್ಶಿಯಾದ ವಿನೋದದ ಮಾತುಗಳನ್ನಾಡಿದೆ. ಅದೆಲ್ಲವನ್ನು ಈಗ ನೆನೆಸಿಕೊಂಡರೆ ನಮ್ಮ ಮನಸ್ಸು ಕ್ಷೋಭೆಗೊಳ್ಳುತ್ತದೆ. ॥10॥
(ಶ್ಲೋಕ-11)
ಮೂಲಮ್
ಚಲಸಿ ಯದ್ವ್ರಜಾಚ್ಚಾರಯನ್ಪಶೂನ್
ನಲಿನಸುಂದರಂ ನಾಥ ತೇ ಪದಮ್ ।
ಶಿಲತೃಣಾಂಕುರೈಃ ಸೀದತೀತಿ ನಃ
ಕಲಿಲತಾಂ ಮನಃ ಕಾಂತ ಗಚ್ಛತಿ ॥
ಅನುವಾದ
ಪ್ರಾಣನಾಥನೇ! ನಿನ್ನ ಚರಣಕಮಲಗಳು ಕಮಲಕ್ಕಿಂತಲೂ ಸುಂದರವಾಗಿಯೂ, ಸುಕೋಮಲವಾಗಿಯೂ ಇವೆ. ನೀನು ಹಸುಗಳನ್ನು ಹೊಡೆದುಕೊಂಡು ವ್ರಜದಿಂದ ಹೊರಟೊಡನೆಯೇ ನಮಗೆ ನಿನ್ನ ಮೃದುವಾದ ಕಾಲುಗಳದೇ ಯೋಚನೆ. ಹಾದಿಯಲ್ಲಿರುವ ನೊರಜುಕಲ್ಲುಗಳಿಂದಲೂ, ಹುಲ್ಲಿನ ಕೂಳೆಗಳಿಂದಲೂ ನಿನ್ನ ಮೃದುವಾದ ಕಾಲುಗಳಿಗೆ ಎಷ್ಟು ನೋವಾಗುವುದೋ ಎಂದು ನಾವು ಪರಿತಪಿಸುತ್ತೇವೆ. ನಮ್ಮ ಮನಸ್ಸು ಬಹಳವಾಗಿ ಕಳವಳಿಸುತ್ತದೆ. ॥11॥
(ಶ್ಲೋಕ-12)
ಮೂಲಮ್
ದಿನಪರಿಕ್ಷಯೇ ನೀಲಕುಂತಲೈ-
ರ್ವನರುಹಾನನಂ ಬಿಭ್ರದಾವೃತಮ್ ।
ಘನರಜಸ್ವಲಂ ದರ್ಶಯನ್ಮುಹು-
ರ್ಮನಸಿ ನಃ ಸ್ಮರಂ ವೀರ ಯಚ್ಛಸಿ ॥
ಅನುವಾದ
ವೀರಪ್ರಿಯತಮನೇ! ಸಾಯಂಕಾಲವಾಗುತ್ತಲೇ ನೀನು ಹಸುಗಳೊಡನೆ ವ್ರಜಕ್ಕೆ ಹಿಂದಿರುಗುವಾಗ ನಿನ್ನ ಸುಂದರವಾದ ಮುಖಕಮಲವು ಕಪ್ಪಾದ ಗುಂಗುರು ಕೂದಲುಗಳಿಂದಲೂ, ಗೋಧೂಳಿಯಿಂದಲೂ ವ್ಯಾಪ್ತವಾಗಿ ಅತ್ಯಂತ ಶೋಭಾಯಮಾನವಾಗಿ ಕಾಣುತ್ತದೆ. ಅಂತಹ ಸುಂದರವಾದ ಮುಖಾರವಿಂದವನ್ನು ತೋರುತ್ತಾ ನೀನು ನಮ್ಮ ಹೃದಯದಲ್ಲಿ - ನಿನ್ನನ್ನು ಸೇರಬೇಕೆಂಬ ಆಕಾಂಕ್ಷೆಯನ್ನು ಉಂಟು ಮಾಡುತ್ತಿರುವೆ. ॥12॥
ಮೂಲಮ್
(ಶ್ಲೋಕ-13)
ಪ್ರಣತಕಾಮದಂ ಪದ್ಮಜಾರ್ಚಿತಂ
ಧರಣಿಮಂಡನಂ ಧ್ಯೇಯಮಾಪದಿ ।
ಚರಣಪಂಕಜಂ ಶಂತಮಂ ಚ ತೇ
ರಮಣ ನಃ ಸ್ತನೇಷ್ವರ್ಪಯಾಧಿಹನ್ ॥
ಅನುವಾದ
ಪ್ರಿಯತಮನೇ! ನೀನೊಬ್ಬನೇ ನಮ್ಮ ಸಮಸ್ತವಾದ ಪೀಡೆಗಳನ್ನೂ ಪರಿಹರಿಸಲು ಸಮರ್ಥನಾಗಿರುವೆ. ನಿನ್ನ ಚರಣಕಮಲಗಳು ಶರಣಾಗತ ಭಕ್ತರ ಸಮಸ್ತ ಅಭಿಲಾಷೆಗಳನ್ನು ಈಡೇರಿಸುವಂತಹವುಗಳು. ಸಾಕ್ಷಾತ್ ಲಕ್ಷ್ಮೀಯೇ ಅವುಗಳನ್ನು ಸೇವಿಸುತ್ತಾಳೆ ಮತ್ತು ಭೂಮಂಡಲಕ್ಕೆ ಅಲಂಕಾರ ಪ್ರಾಯವಾಗಿವೆ. ಆಪತ್ತಿನ ಸಮಯದಲ್ಲಿ ನಿನ್ನ ಪಾದಾರವಿಂದಗಳನ್ನು ಧ್ಯಾನಿಸಿದರೆ ಸಮಸ್ತವಾದ ಆಪತ್ತುಗಳೂ ದೂರವಾಗುತ್ತವೆ. ಇಂತಹ ಕಲ್ಯಾಣಸ್ವರೂಪವಾದ ನಿನ್ನ ಚರಣಕಮಲಗಳನ್ನು ನಮ್ಮ ವಕ್ಷಃಸ್ಥಳದಲ್ಲಿರಿಸಿ ಹೃದಯದ ವ್ಯಥೆಯನ್ನು ಶಾಂತಗೊಳಿಸು. ॥13॥
(ಶ್ಲೋಕ-14)
ಮೂಲಮ್
ಸುರತವರ್ಧನಂ ಶೋಕನಾಶನಂ
ಸ್ವರಿತವೇಣುನಾ ಸುಷ್ಠು ಚುಂಬಿತಮ್ ।
ಇತರರಾಗವಿಸ್ಮಾರಣಂ ನೃಣಾಂ
ವಿತರ ವೀರ ನಸ್ತೇಧರಾಮೃತಮ್ ॥
ಅನುವಾದ
ವೀರಶಿರೋಮಣಿಯೇ! ನಿನ್ನ ಅಧರಾಮೃತವು ನಿನ್ನನ್ನು ಸೇರುವ ಆಕಾಂಕ್ಷೆಯನ್ನು ಹೆಚ್ಚಿಸುವಂತಹುದು. ಅದು ವಿರಹಜನ್ಯ ಸಮಸ್ತ ಶೋಕ-ಸಂತಾಪಗಳನ್ನು ನಾಶಮಾಡಿಬಿಡುತ್ತದೆ. ಆ ಮುರಳಿಯು ಅದನ್ನು ಚೆನ್ನಾಗಿ ಪಾನ ಮಾಡುತ್ತಾ ಇರುತ್ತದೆ. ಒಮ್ಮೆ ಅದನ್ನು ಕುಡಿದ ಜನರಿಗೆ ಬೇರಾವ ಆಸಕ್ತಿಯೂ ನೆನಪೇ ಇರುವುದಿಲ್ಲ. ಅಂತಹ ನಿನ್ನ ಅಧರಾಮೃತವನ್ನು ನಮಗೆ ದಯಪಾಲಿಸು. ॥14॥
(ಶ್ಲೋಕ-15)
ಮೂಲಮ್
ಅಟತಿ ಯದ್ಭವಾನಹ್ನಿ ಕಾನನಂ
ತ್ರುಟಿರ್ಯುಗಾಯತೇ ತ್ವಾಮಪಶ್ಯತಾಮ್ ।
ಕುಟಿಲಕುಂತಲಂ ಶ್ರೀಮುಖಂ ಚ ತೇ
ಜಡ ಉದೀಕ್ಷತಾಂ ಪಕ್ಷ್ಮಕೃದ್ದೃಶಾಮ್ ॥
ಅನುವಾದ
ಪ್ರಾಣಪ್ರಿಯನೆ! ಹಗಲಿನಲ್ಲಿ ನೀನು ಹಸುಗಳನ್ನು ಮೇಯಿಸಲು ವನಕ್ಕೆ ಹೋದಾಗ, ನಿನ್ನನ್ನು ನೋಡದೆ ನಮಗೆ ಒಂದೊಂದು ಕ್ಷಣವು ಯುಗದಂತೆ ಕಾಣುತ್ತದೆ. ಸಾಯಂಕಾಲವಾಗುತ್ತಲೇ ಮರಳಿದಾಗ, ಗುಂಗುರು ಕೂದಲುಗಳಿಂದ ಕೂಡಿದ ನಿನ್ನ ಪರಮ ಸುಂದರ ಮುಖಾರವಿಂದವನ್ನು ನೋಡುತ್ತಾ ಇರುವಾಗ ರೆಪ್ಪೆಗಳು ಮುಚ್ಚಿಕೊಳ್ಳುವುದು ನಮಗೆ ತುಂಬಾ ಮುಜುಗರವಾಗುತ್ತದೆ. ಈ ಕಣ್ಣುಗಳ ರೆಪ್ಪೆಗಳನ್ನು ನಿರ್ಮಿಸಿದ ಬ್ರಹ್ಮನು ಮೂರ್ಖನೇ ಆಗಿದ್ದಾನೆ ಎಂದೆನಿಸುತ್ತದೆ. ॥15॥
(ಶ್ಲೋಕ-16)
ಮೂಲಮ್
ಪತಿಸುತಾನ್ವಯಭ್ರಾತೃಬಾಂಧವಾ-
ನತಿವಿಲಂಘ್ಯ ತೇಂತ್ಯಚ್ಯುತಾಗತಾಃ ।
ಗತಿವಿದಸ್ತವೋದ್ಗೀತಮೋಹಿತಾಃ
ಕಿತವ ಯೋಷಿತಃ ಕಸ್ತ್ಯಜೇನ್ನಿಶಿ ॥
ಅನುವಾದ
ಕಪಟಿಯಾದ ಅಚ್ಯುತನೇ! ಕಪಟನಾಟಕ ಸೂತ್ರಧಾರಿಯೇ! ನಾವು ನಮ್ಮ ಪತಿ-ಪುತ್ರರನ್ನೂ, ಸಹೋದರರನ್ನು, ಬಂಧುಗಳನ್ನು, ಕುಲ ಪರಿವಾರವನ್ನು ತ್ಯಜಿಸಿ, ಅವರ ಆಜ್ಞೆಯನ್ನು ಉಲ್ಲಂಘಿಸಿ ನಿನ್ನ ವೇಣುಗಾನದಿಂದ ಆಕರ್ಷಿಸಲ್ಪಟ್ಟವರಾಗಿ, ಕೊಳಲಿನ ಧ್ವನಿಯಿಂದಲೇ ನೀನಿಲ್ಲಿರುವೆ ಎಂಬುದನ್ನು ತಿಳಿದುಕೊಂಡು ಆ ಧ್ವನಿಯನ್ನೇ ಅನುಸರಿಸಿ ನಿನ್ನ ಬಳಿಗೆ ಬಂದೆವು. ಹೀಗೆ ರಾತ್ರಿಯ ಸಮಯದಲ್ಲಿ ಬಂದಿರುವ ಯುವತಿಯರನ್ನು ನೀನಲ್ಲದೆ ಬೇರೆ ಯಾರು ತ್ಯಜಿಸಿಹೋಗುತ್ತಾರೆ? ॥16॥
(ಶ್ಲೋಕ-17)
ಮೂಲಮ್
ರಹಸಿ ಸಂವಿದಂ ಹೃಚ್ಛಯೋದಯಂ
ಪ್ರಹಸಿತಾನನಂ ಪ್ರೇಮವೀಕ್ಷಣಮ್ ।
ಬೃಹದುರಃ ಶ್ರಿಯೋ ವೀಕ್ಷ್ಯ ಧಾಮ ತೇ
ಮುಹುರತಿಸ್ಪೃಹಾ ಮುಹ್ಯತೇ ಮನಃ ॥
ಅನುವಾದ
ಪ್ರಿಯಕರನೇ! ನೀನು ಏಕಾಂತದಲ್ಲಿ ನಮ್ಮೊಡನೆ ಆಡುತ್ತಿದ್ದ ಪ್ರೇಮಪ್ರಚೋದಕವಾದ ಸರಸ-ಸಲ್ಲಾಪದ ಮಾತುಗಳನ್ನು, ಪ್ರೇಮಪೂರ್ವಕವಾದ ನಿನ್ನ ವೀಕ್ಷಣವನ್ನು, ಮಂದಹಾಸದಿಂದ ಕೂಡಿದ ನಿನ್ನ ಸುಂದರವಾದ ಮುಖಾರವಿಂದವನ್ನು, ಲಕ್ಷ್ಮಿಗೆ ನಿವಾಸಸ್ಥಾನವಾದ ನಿನ್ನ ವಿಶಾಲವಾದ ವಕ್ಷಃಸ್ಥಳವನ್ನು ಸ್ಮರಿಸಿಕೊಂಡು ಮುಗ್ಧವಾದ ನಮ್ಮ ಮನಸ್ಸು ನಿನ್ನನ್ನು ಪುನಃ ಸೇರಲೇಬೇಕೆಂದು ಬಹಳವಾಗಿ ತವಕಿಸುತ್ತಿದೆ. ॥17॥
(ಶ್ಲೋಕ-18)
ಮೂಲಮ್
ವ್ರಜವನೌಕಸಾಂ ವ್ಯಕ್ತಿರಂಗ ತೇ
ವೃಜಿನಹಂತ್ರ್ಯಲಂ ವಿಶ್ವಮಂಗಲಮ್ ।
ತ್ಯಜ ಮನಾಕ್ಚ ನಸ್ತ್ವಸ್ತ್ಪ ೃಹಾತ್ಮನಾಂ
ಸ್ವಜನಹೃದ್ರುಜಾಂ ಯನ್ನಿಷೂದನಮ್ ॥
ಅನುವಾದ
ಪ್ರಿಯಕರನೇ! ನಿನ್ನ ಈ ಅವತಾರವು ಗೋಕುಲ ವಾಸಿಗಳ ದುಃಖವನ್ನೂ, ತಾಪವನ್ನೂ ವಿನಾಶಗೊಳಿಸಲು ಮತ್ತು ವಿಶ್ವಕ್ಕೆ ಮಂಗಳವನ್ನುಂಟು ಮಾಡುವುದಕ್ಕಾಗಿಯೇ ಆಗಿದೆ. ನಮ್ಮ ಹೃದಯವು ನಿನ್ನ ಕುರಿತಾದ ಲಾಲಸೆಯಿಂದ ತುಂಬಿ ಹೋಗಿದೆ. ನಿನ್ನ ಸ್ವಜನರಾದ ನಮ್ಮಗಳ ಹೃದ್ರೋಗವನ್ನು ಪೂರ್ಣವಾಗಿ ನಾಶ ಮಾಡುವಂತಹ ಯಾವುದಾದರೂ ಔಷಧವನ್ನು ಕೊಟ್ಟು ಕಾಪಾಡು. ॥18॥
(ಶ್ಲೋಕ-19)
ಮೂಲಮ್
ಯತ್ತೇ ಸುಜಾತಚರಣಾಂಬುರುಹಂ ಸ್ತನೇಷು
ಭೀತಾಃ ಶನೈಃ ಪ್ರಿಯ ದಧೀಮಹಿ ಕರ್ಕಶೇಷು ।
ತೇನಾಟವೀಮಟಸಿ ತದ್ವ್ಯಥತೇ ನ ಕಿಂಸ್ವಿತ್
ಕೂರ್ಪಾದಿಭಿರ್ಭ್ರಮತಿ ಧೀರ್ಭವದಾಯುಷಾಂ ನಃ ॥
ಅನುವಾದ
ಪ್ರಾಣಕಾಂತನೇ! ನಿನ್ನ ಚರಣಗಳು ಕಮಲಕ್ಕಿಂತಲೂ ಕೋಮಲವಾದುದು. ಅವನ್ನು ನಮ್ಮ ಕಠೋರವಾದ ಸ್ತನಗಳ ಮೇಲಿರಿಸಿಕೊಳ್ಳುವಾಗಲೂ ಎಲ್ಲಿಯಾದರೂ ಅವಕ್ಕೆ ನೋವಾಗಬಹುದೆಂದು ಹೆದರಿಕೊಂಡೇ ಇಟ್ಟು ಕೊಳ್ಳುವೆವು. ಅಂತಹ ಚರಣಗಳಿಂದ ನೀನು ರಾತ್ರಿಯಲ್ಲಿ ಘೋರವಾದ ಅರಣ್ಯದಲ್ಲಿ ಅಡಗಿಕೊಂಡೇ ಅಲೆಯುತ್ತಿರುವೆಯಲ್ಲ! ಕಲ್ಲು, ಮುಳ್ಳುಗಳಿಂದ ನಿನ್ನ ಸುಕೋಮಲವಾದ ಪಾದಗಳಿಗೆ ನೋವಾಗುತ್ತಿಲ್ಲವೆ? ಇದನ್ನು ನೆನೆದಾಗಲೇ ನಿನ್ನಲ್ಲಿಯೇ ಪ್ರಾಣಗಳನ್ನಿಟ್ಟುಕೊಂಡಿರುವ ನಮಗೆ ಬುದ್ಧಿ ಭ್ರಮಣೆಯುಂಟಾಗುತ್ತದೆ. ಶ್ಯಾಮಸುಂದರ ಶ್ರೀಕೃಷ್ಣ! ನಮ್ಮ ಜೀವನವು ನಿನಗಾಗಿಯೇ ಮುಡುಪಾಗಿಟ್ಟಿದೆ. ನಿನ್ನ ಸೇವೆಗಾಗಿಯೇ ನಮ್ಮನ್ನು ಅರ್ಪಿಸಿಕೊಂಡುಬಿಟ್ಟಿದ್ದೇವೆ. ದರ್ಶನವಿತ್ತು ಕಾಪಾಡು. ॥19॥
ಅನುವಾದ (ಸಮಾಪ್ತಿಃ)
ಮೂವತ್ತೊಂದನೆಯ ಅಧ್ಯಾಯವು ಮುಗಿಯಿತು. ॥31॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ
ರಾಸಕ್ರೀಡಾಯಾಂ ಗೋಪಿಕಾಗೀತಂ ನಾಮೈಕತ್ರಿಂಶೋಽಧ್ಯಾಯಃ ॥31॥