೨೭

[ಇಪ್ಪತ್ತೇಳನೆಯ ಅಧ್ಯಾಯ]

ಭಾಗಸೂಚನಾ

ಗೋವಿಂದ ಅಭಿಷೇಕ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಗೋವರ್ಧನೇ ಧೃತೇ ಶೈಲ ಆಸಾರಾದ್ರಕ್ಷಿತೇ ವ್ರಜೇ ।
ಗೋಲೋಕಾದಾವ್ರಜತ್ ಕೃಷ್ಣಂ ಸುರಭಿಃ ಶಕ್ರ ಏವ ಚ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಗಿರಿರಾಜ ಗೋವರ್ಧನವನ್ನು ಎತ್ತಿಹಿಡಿದು ಮುಸಲಧಾರಾವರ್ಷದಿಂದ ವ್ರಜವನ್ನು ಕಾಪಾಡಿದಾಗ ಗೋಲೋಕದಿಂದ ಕಾಮಧೇನವು ಅವನನ್ನು ಅಭಿನಂದಿಸಲಿಕ್ಕಾಗಿ ಮತ್ತು ಸ್ವರ್ಗಲೋಕದಿಂದ ದೇವೇಂದ್ರನು ಕ್ಷಮಾಪಣೆಯನ್ನು ಯಾಚಿಸಲು ಶ್ರೀಕೃಷ್ಣನ ಬಳಿಗೆ ಬಂದರು. ॥1॥

(ಶ್ಲೋಕ-2)

ಮೂಲಮ್

ವಿವಿಕ್ತ ಉಪಸಂಗಮ್ಯ ವ್ರೀಡಿತಃ ಕೃತಹೇಲನಃ ।
ಪಸ್ಪರ್ಶ ಪಾದಯೋರೇನಂ ಕಿರೀಟೇನಾರ್ಕವರ್ಚಸಾ ॥

ಅನುವಾದ

ಭಗವಂತನನ್ನು ತಿರಸ್ಕರಿಸಿದ್ದರಿಂದ ಇಂದ್ರನು ಬಹಳ ಲಜ್ಜಿತನಾಗಿದ್ದನು. ಅದಕ್ಕಾಗಿ ಅವನು ಏಕಾಂತದಲ್ಲಿ ಭಗವಂತನ ಬಳಿಗೆ ಹೋಗಿ, ಸೂರ್ಯನಂತೆ ತೇಜಸ್ವಿಯಾದ ತನ್ನ ಮುಕುಟದಿಂದ ಅವನ ಚರಣಗಳನ್ನು ಸ್ಪರ್ಶಿಸಿದನು. ॥2॥

(ಶ್ಲೋಕ-3)

ಮೂಲಮ್

ದೃಷ್ಟಶ್ರುತಾನುಭಾವೋಸ್ಯ ಕೃಷ್ಣಸ್ಯಾಮಿತತೇಜಸಃ ।
ನಷ್ಟತ್ರಿಲೋಕೇಶಮದ ಇಂದ್ರ ಆಹ ಕೃತಾಂಜಲಿಃ ॥

ಅನುವಾದ

ಪರಮ ತೇಜಸ್ವೀ ಭಗವಾನ್ ಶ್ರೀಕೃಷ್ಣನ ಪ್ರಭಾವವನ್ನು ನೋಡಿ- ಕೇಳಿ ‘ತಾನು ಮೂರು ಲೋಕಗಳಿಗೆ ಒಡೆಯನಾಗಿದ್ದೇನೆ’ ಎಂಬ ಇಂದ್ರನ ಗರ್ವವು ಉಡುಗಿ ಹೋಯಿತು. ಈಗ ಅವನು ಕೈಜೋಡಿಸಿಕೊಂಡು ಅವನನ್ನು ಸ್ತುತಿಸತೊಡಗಿದನು. ॥3॥

(ಶ್ಲೋಕ-4)

ಮೂಲಮ್ (ವಾಚನಮ್)

ಇಂದ್ರ ಉವಾಚ

ಮೂಲಮ್

ವಿಶುದ್ಧಸತ್ತ್ವಂ ತವ ಧಾಮ ಶಾಂತಂ
ತಪೋಮಯಂ ಧ್ವಸ್ತರಜಸ್ತಮಸ್ಕಮ್ ।
ಮಾಯಾಮಯೋಯಂ ಗುಣಸಂಪ್ರವಾಹೋ
ನ ವಿದ್ಯತೇ ತೇಗ್ರಹಣಾನುಬಂಧಃ ॥

ಅನುವಾದ

ಇಂದ್ರನು ಹೇಳಿದನು — ‘‘ಓ ಭಗವಂತಾ! ನಿನ್ನ ಸ್ವರೂಪವು ಪರಮಶಾಂತವೂ, ಜ್ಞಾನಮಯವೂ, ರಜೋಗುಣ- ತಮೋಗುಣಗಳಿಂದ ರಹಿತವೂ, ವಿಶುದ್ಧವೂ, ಅಪ್ರಾಕೃತವೂ, ಸತ್ತ್ವಮಯವೂ ಆಗಿದೆ. ಗುಣಗಳ ಪ್ರವಾಹರೂಪವಾಗಿ ಕಂಡುಬರುವ ಈ ಪ್ರಪಂಚವು ಕೇವಲ ಮಾಯಾಮಯವಾಗಿದೆ. ಏಕೆಂದರೆ, ನಿನ್ನ ಸ್ವರೂಪವನ್ನು ತಿಳಿಯದ ಕಾರಣದಿಂದಲೇ ನಿನ್ನಲ್ಲಿ ಇದು ಕಂಡು ಬರುತ್ತಿದೆ. ॥4॥

(ಶ್ಲೋಕ-5)

ಮೂಲಮ್

ಕುತೋ ನು ತದ್ಧೇತವ ಈಶ ತತ್ಕೃತಾ
ಲೋಭಾದಯೋ ಯೇಬುಧಲಿಂಗಭಾವಾಃ ।
ತಥಾಪಿ ದಂಡಂ ಭಗವಾನ್ ಬಿಭರ್ತಿ
ಧರ್ಮಸ್ಯ ಗುಪ್ತ್ಯೆ ಖಲನಿಗ್ರಹಾಯ ॥

ಅನುವಾದ

ಅವಿದ್ಯಾ ಪ್ರಚುರವಾದ ಮಾಯಾಮಯ ಸಂಸಾರವೇ ನಿನಗಿಲ್ಲವೆಂದ ಮೇಲೆ ದೇಹಸಂಬಂಧದಿಂದ ಉಂಟಾಗುವ ಜನ್ಮಾಂತರಗಳು ಹೇಗೆ ತಾನೇ ನಿನಗೆ ಉಂಟಾಗಬಲ್ಲವು? ಹಾಗೆಯೇ ಅಜ್ಞಾನಿಗಳ ಲಕ್ಷಣವಾದ ಲೋಭ-ಮೋಹಗಳೂ ನಿನಗಿಲ್ಲ ಆದರೂ ಮಹಾಮಹಿಮನಾದ ನೀನು ಅವತಾರಗಳನ್ನು ಮಾಡಿ ಧರ್ಮದ ರಕ್ಷಣೆಗಾಗಿಯೂ, ದುಷ್ಟನಿಗ್ರಹಕ್ಕಾಗಿಯೂ ದಂಡವನ್ನು ಧರಿಸುವೆ. ॥5॥

(ಶ್ಲೋಕ-6)

ಮೂಲಮ್

ಪಿತಾ ಗುರುಸ್ತ್ವಂ ಜಗತಾಮಧೀಶೋ
ದುರತ್ಯಯಃ ಕಾಲ ಉಪಾತ್ತದಂಡಃ ।
ಹಿತಾಯ ಸ್ವೇಚ್ಛಾತನುಭಿಃ ಸಮೀಹಸೇ
ಮಾನಂ ವಿಧುನ್ವನ್ಜಗದೀಶಮಾನಿನಾಮ್ ॥

ಅನುವಾದ

ನೀನು ಜಗತ್ತಿಗೆ ತಂದೆಯೂ, ಗುರುವೂ, ಒಡೆಯನೂ ಆಗಿರುವೆ. ನೀನು ಜಗತ್ತನ್ನು ನಿಯಂತ್ರಿಸಲು ದಂಡವನ್ನು ಧರಿಸಿದ ದುಸ್ತರವಾದ ಕಾಲರೂಪಿಯೂ ಆಗಿರುವೆ. ನೀನು ನಿನ್ನ ಭಕ್ತರ ಆಸೆಗಳನ್ನು ಈಡೇರಿಸಲು ಸ್ವೇಚ್ಛೆಯಿಂದ ಲೀಲಾಶರೀರವನ್ನು ಪ್ರಕಟಗೊಳಿಸುವೆ. ತ್ರೈಲೋಕ್ಯಾಧಿಪತಿಯೆಂಬ ಅಹಂಕಾರದಿಂದ ಕೂಡಿರುವ ನನ್ನಂಥವರ ಅಭಿಮಾನವನ್ನು ಮುರಿದು ನಮ್ಮಗಳಿಗೆ ಹಿತವನ್ನೇ ಉಂಟು ಮಾಡುವೆ. ॥6॥

(ಶ್ಲೋಕ-7)

ಮೂಲಮ್

ಯೇ ಮದ್ವಿಧಾಜ್ಞಾ ಜಗದೀಶಮಾನಿನಃ
ತ್ವಾಂ ವೀಕ್ಷ್ಯ ಕಾಲೇಭಯಮಾಶು ತನ್ಮದಮ್ ।
ಹಿತ್ವಾರ್ಯಮಾರ್ಗಂ ಪ್ರಭಜಂತ್ಯಪಸ್ಮಯಾ
ಈಹಾ ಖಲಾನಾಮಪಿ ತೇನುಶಾಸನಮ್ ॥

ಅನುವಾದ

ನನ್ನಂತಹವರು ಮತ್ತು ತನ್ನನ್ನೇ ಜಗತ್ತಿನ ಸ್ವಾಮಿಯೆಂದು ಭಾವಿಸುವವರನ್ನು ನೋಡಿಯೂ, ಮಹಾಭಯದ ಅವಕಾಶದಲ್ಲಿಯೂ ನೀನು ನಿಭರ್ಯನಾಗಿರುವೆ. ಆಗ ಅವರು ಉದ್ಧಟತನವನ್ನು ಬಿಟ್ಟು ಗರ್ವರಹಿತರಾಗಿ ಸತ್ಪುರಷರಿಂದ ಸೇವಿಸಲ್ಪಟ್ಟ ಭಕ್ತಿಮಾರ್ಗವನ್ನು ಆಶ್ರಯಿಸಿ ನಿನ್ನನ್ನು ಭಜಿಸುತ್ತಾರೆ. ಪ್ರಭೋ! ನಿನ್ನ ಒಂದೊಂದು ಚೇಷ್ಟೆಯೂ ದುಷ್ಟರ ದಂಡನೆಗಾಗಿಯೇ ಇದೆ. ॥7॥

ಮೂಲಮ್

(ಶ್ಲೋಕ-8)
ಸ ತ್ವಂ ಮಮೈಶ್ವರ್ಯಮದಪ್ಲುತಸ್ಯ
ಕೃತಾಗಸಸ್ತೇವಿದುಷಃ ಪ್ರಭಾವಮ್ ।
ಕ್ಷಂತುಂ ಪ್ರಭೋಥಾರ್ಹಸಿ ಮೂಢಚೇತಸೋ
ಮೈವಂ ಪುನರ್ಭೂನ್ಮತಿರೀಶ ಮೇಸತೀ ॥

ಅನುವಾದ

ಸ್ವಾಮಿ! ನಾನು ಐಶ್ವರ್ಯಮದದಿಂದ ಉನ್ಮತ್ತನಾಗಿ ನಿನಗೆ ಅಪರಾಧವನ್ನು ಎಸಗಿರುವೆನು. ಏಕೆಂದರೆ, ನಾನು ನಿನ್ನ ಶಕ್ತಿ ಮತ್ತು ಪ್ರಭಾವದ ಕುರಿತು ಪೂರ್ಣವಾಗಿ ಅಜ್ಞಾನಿಯಾಗಿದ್ದೆ. ಪರಮ ಈಶ್ವರನೇ! ನೀನು ದಯಮಾಡಿ ಮೂರ್ಖನಾದ ನನ್ನ ಅಪರಾಧವನ್ನು ಕ್ಷಮಿಸಿ, ಮುಂದೆ ನಾನು ಎಂದೆಂದಿಗೂ ಅಜ್ಞಾನಕ್ಕೆ ವಶನಾಗದಂತೆ ಕೃಪೆ ಮಾಡು. ॥8॥

(ಶ್ಲೋಕ-9)

ಮೂಲಮ್

ತವಾವತಾರೋಯಮಧೋಕ್ಷಜೇಹ
ಸ್ವಯಂಭರಾಣಾಮುರುಭಾರಜನ್ಮನಾಮ್ ।
ಚಮೂಪತೀನಾಮಭವಾಯ ದೇವ
ಭವಾಯ ಯುಷ್ಮಚ್ಚರಣಾನುವರ್ತಿನಾಮ್ ॥

ಅನುವಾದ

ಸ್ವಯಂ ಪ್ರಕಾಶನಾದ ಇಂದ್ರಿಯಾತೀತ ಪರಮಾತ್ಮನೇ! ಅಸುರರಾದ ಸೇನಾಪತಿಗಳು ಕೇವಲ ತಮ್ಮ ಹೊಟ್ಟೆಯನ್ನು ಹೊರೆಯುವುದರಲ್ಲೇ ಮಗ್ನರಾಗಿ ಇರುತ್ತಾರೆ. ಭೂಭಾರಕ್ಕೆ ಕಾರಣರಾದವರನ್ನು ವಧಿಸಿ ಅವರಿಗೆ ಮೋಕ್ಷವನ್ನು ದಯಪಾಲಿಸುವೆ. ನಿನ್ನ ಚರಣ ಸೇವಕರಾಗಿ ನಿನ್ನ ಆಜ್ಞೆಯನ್ನು ಪಾಲಿಸುವ ಭಕ್ತಜನರಿಗೆ ಅಭ್ಯುದಯವನ್ನು ಕರುಣಿಸಲು, ಅವರನ್ನು ರಕ್ಷಿಸಲಿಕ್ಕಾಗಿಯೇ ನಿನ್ನ ಈ ಅವತಾರವಾಗಿದೆ. ॥9॥

(ಶ್ಲೋಕ-10)

ಮೂಲಮ್

ನಮಸ್ತುಭ್ಯಂ ಭಗವತೇ ಪುರುಷಾಯ ಮಹಾತ್ಮನೇ ।
ವಾಸುದೇವಾಯ ಕೃಷ್ಣಾಯ ಸಾತ್ವತಾಂ ಪತಯೇ ನಮಃ ॥

ಅನುವಾದ

ಭಗವಂತನೇ! ನಾನು ನಿನಗೆ ನಮಸ್ಕರಿಸುತ್ತೇನೆ. ನೀನು ಸರ್ವಾಂತರ್ಯಾಮಿ ಪುರುಷೋತ್ತಮನೂ, ಸರ್ವಾತ್ಮಾ ವಾಸುದೇವನೂ ಆಗಿರುವೆ. ನೀನು ಯದುವಂಶಿಯರ ಏಕಮಾತ್ರ ಸ್ವಾಮಿಯಾಗಿರುವೆ. ಭಕ್ತವತ್ಸಲನೂ, ಸರ್ವರ ಚಿತ್ತಗಳನ್ನು ಆಕರ್ಷಿಸುವವ ನಾಗಿರುವೆ. ಅಂತಹ ನಿನಗೆ ನಾನು ಪದೇ ಪದೇ ವಂದಿಸುತ್ತೇನೆ. ॥10॥

(ಶ್ಲೋಕ-11)

ಮೂಲಮ್

ಸ್ವಚ್ಛಂದೋಪಾತ್ತದೇಹಾಯ ವಿಶುದ್ಧಜ್ಞಾನಮೂರ್ತಯೇ ।
ಸರ್ವಸ್ಮೈ ಸರ್ವಬೀಜಾಯ ಸರ್ವಭೂತಾತ್ಮನೇ ನಮಃ ॥

ಅನುವಾದ

ಜೀವರಂತೆ ನೀನು ಕರ್ಮವಶನಲ್ಲದಿದ್ದರೂ ಭಕ್ತರ ಹಾಗೂ ನಿನ್ನ ಇಚ್ಛೆಯಿಂದ ಬೇಕು-ಬೇಕಾದ ಶರೀರಗಳನ್ನು ಧರಿಸುವೆ. ನಿನ್ನ ಈ ಶರೀರವು ವಿಶುದ್ಧ ಜ್ಞಾನಸ್ವರೂಪವಾಗಿದೆ. ಸರ್ವಸ್ವವೂ ನೀನೇ. ಸಮಸ್ತಕ್ಕೂ ಕಾರಣನೂ, ಎಲ್ಲರ ಆತ್ಮಸ್ವರೂಪನೂ ಆಗಿರುವೆ. ಅಂತಹ ನಿನಗೆ ನಮಸ್ಕರಿಸುತ್ತೇನೆ. ॥11॥

(ಶ್ಲೋಕ-12)

ಮೂಲಮ್

ಮಯೇದಂ ಭಗವನ್ ಗೋಷ್ಠನಾಶಾಯಾಸಾರವಾಯುಭಿಃ ।
ಚೇಷ್ಟಿತಂ ವಿಹತೇ ಯಜ್ಞೇ ಮಾನಿನಾ ತೀವ್ರಮನ್ಯುನಾ ॥

ಅನುವಾದ

ಭಗವಂತನೇ! ನಾನು ಮಹಾಮಾನಿಷ್ಠನು, ಅತ್ಯಂತ ಕೋಪಿಷ್ಠನು. ನನ್ನ ಸಲುವಾಗಿ ಮಾಡುತ್ತಿದ್ದ ಯಜ್ಞವು ನಿಂತು ಹೋಯಿತೆಂದು ತಿಳಿದಾಗ ನಾನು ಮುಸಲಧಾರೆಯಿಂದ ಕೂಡಿದ ಮಳೆಯಿಂದಲೂ, ಬಿರುಗಾಳಿಯಿಂದಲೂ ವ್ರಜಭೂಮಿಯನ್ನೇ ಪೂರ್ಣವಾಗಿ ನಾಶಮಾಡಲು ಪ್ರಯತ್ನಿಸಿದೆ. ॥12॥

(ಶ್ಲೋಕ-13)

ಮೂಲಮ್

ತ್ವಯೇಶಾನುಗೃಹೀತೋಸ್ಮಿ ಧ್ವಸ್ತಸ್ತಂಭೋ ವೃಥೋದ್ಯಮಃ ।
ಈಶ್ವರಂ ಗುರುಮಾತ್ಮಾನಂ ತ್ವಾಮಹಂ ಶರಣಂ ಗತಃ ॥

ಅನುವಾದ

ಸ್ವಾಮಿಯೇ! ನೀನು ನನ್ನ ಮೇಲೆ ಪರಮಾನುಗ್ರಹವನ್ನು ತೋರಿಸಿರುವೆ. ನನ್ನ ಕಾರ್ಯವನ್ನು ವ್ಯರ್ಥಗೊಳಿಸಿ ನನ್ನ ಅಹಂಕಾರವನ್ನು ಮುರಿದಿರುವೆ. ನನ್ನ ಅಜ್ಞಾನವನ್ನು ಹೋಗಲಾಡಿಸಿರುವೆ. ಆದುದರಿಂದ ನೀನೇ ಸ್ವಾಮಿಯೂ, ಗುರುವೂ, ಆತ್ಮನೂ ಆಗಿರುವೆ. ನಿನಗೆ ನಾನು ಶರಣಾಗಿದ್ದೇನೆ.’’ ॥13॥

(ಶ್ಲೋಕ-14)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಂ ಸಂಕೀರ್ತಿತಃ ಕೃಷ್ಣೋ ಮಘೋನಾ ಭಗವಾನಮುಮ್ ।
ಮೇಘಗಂಭೀರಯಾ ವಾಚಾ ಪ್ರಹಸನ್ನಿದಮಬ್ರವೀತ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ದೇವೇಂದ್ರನು ಭಗವಾನ್ ಶ್ರೀಕೃಷ್ಣನನ್ನು ಹೀಗೆ ಸ್ತುತಿಸಿದಾಗ ಅವನು ಮುಗುಳ್ನಕ್ಕು ಮೇಘಗಂಭೀರ ಧ್ವನಿಯಿಂದ ಇಂದ್ರನನ್ನು ಸಂಬೋಧಿಸಿ ಇಂತೆಂದನು - ॥14॥

(ಶ್ಲೋಕ-15)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಮಯಾ ತೇಕಾರಿ ಮಘವನ್ ಮಖಭಂಗೋನುಗೃಹ್ಣತಾ ।
ಮದನುಸ್ಮೃತಯೇ ನಿತ್ಯಂ ಮತ್ತಸ್ಯೇಂದ್ರಶ್ರಿಯಾ ಭೃಶಮ್ ॥

ಅನುವಾದ

ಶ್ರೀಭಗವಂತನು ಹೇಳಿದನು — ಇಂದ್ರನೇ! ನೀನು ಐಶ್ವರ್ಯ-ಧನಸಂಪತ್ತಿನ ಮದದಿಂದ ಉನ್ಮತ್ತನಾಗಿದ್ದೆ. ಅದಕ್ಕಾಗಿಯೇ ನಿನ್ನ ಮೇಲೆ ಅನುಗ್ರಹವನ್ನು ಮಾಡಲೆಂದೇ ನಿನ್ನ ಯಜ್ಞವನ್ನು ಭಂಗಗೊಳಿಸಿದೆ. ಏಕೆಂದರೆ, ಇನ್ನು ನೀನು ನನ್ನನ್ನು ನಿತ್ಯ ನಿರಂತರ ಸ್ಮರಿಸುವಂತಾಗಲಿ. ॥15॥

(ಶ್ಲೋಕ-16)

ಮೂಲಮ್

ಮಾಮೈಶ್ವರ್ಯಶ್ರೀಮದಾಂಧೋ ದಂಡಪಾಣಿಂ ನ ಪಶ್ಯತಿ ।
ತಂ ಭ್ರಂಶಯಾಮಿ ಸಂಪದ್ಭ್ಯೋ ಯಸ್ಯ ಚೇಚ್ಛಾಮ್ಯನುಗ್ರಹಮ್ ॥

ಅನುವಾದ

ಐಶ್ವರ್ಯ ಮತ್ತು ಧನ ಮದದಿಂದ ಕುರುಡಾದವನು - ಕಾಲ ರೂಪಿಯಾದ ಪರಮೇಶ್ವರನಾದ ನಾನು ಕೈಯಲ್ಲಿ ದಂಡವನ್ನು ಧರಿಸಿ ಅವನ ತಲೆಯ ಮೇಲೆ ಕುಳಿತಿರುವೆನೆಂಬುದನ್ನು ತಿಳಿಯುವುದಿಲ್ಲ. ನಾನು ಯಾರ ಮೇಲೆ ಅನುಗ್ರಹ ತೋರಬೇಕೆಂದು ಬಯಸುವೆನೋ ಅವನನ್ನು ಐಶ್ವರ್ಯ ಭ್ರಷ್ಟನನ್ನಾಗಿ ಮಾಡಿಬಿಡುತ್ತೇನೆ. ॥16॥

(ಶ್ಲೋಕ-17)

ಮೂಲಮ್

ಗಮ್ಯತಾಂ ಶಕ್ರ ಭದ್ರಂ ವಃ ಕ್ರಿಯತಾಂ ಮೇನುಶಾಸನಮ್ ।
ಸ್ಥೀಯತಾಂ ಸ್ವಾಧಿಕಾರೇಷು ಯುಕ್ತೈರ್ವಃ ಸ್ತಂಭವರ್ಜಿತೈಃ ॥

ಅನುವಾದ

ಇಂದ್ರನೇ! ನಿನಗೆ ಮಂಗಳವಾಗಲಿ. ಇನ್ನು ನೀನು ನಿನ್ನ ರಾಜಧಾನಿ ಅಮರಾವತಿಗೆ ಹೋಗಿ ನನ್ನ ಆಜ್ಞೆಯನ್ನು ಪಾಲಿಸುತ್ತಾ ಇರು. ಮುಂದೆ ಎಂದೂ ಗರ್ವಪಡಬೇಡ. ನಿನ್ನ ಅಧಿಕಾರಕ್ಕೆ ಅನುಸಾರವಾಗಿ ಉಚಿತವಾದ ರೀತಿಯಲ್ಲಿ ಮರ್ಯಾದೆಯನ್ನು ಮೀರದೇ, ನನ್ನ ಸನ್ನಿಧಿಯನ್ನು, ನನ್ನ ಸಂಯೋಗವನ್ನು ಅನುಭವಿಸುತ್ತಾ ಮೂರು ಲೋಕಗಳನ್ನು ಪಾಲಿಸುತ್ತಾ ಇರು. ॥17॥

(ಶ್ಲೋಕ-18)

ಮೂಲಮ್

ಅಥಾಹ ಸುರಭಿಃ ಕೃಷ್ಣಮಭಿವಂದ್ಯ ಮನಸ್ವಿನೀ ।
ಸ್ವಸಂತಾನೈರುಪಾಮಂತ್ರ್ಯ ಗೋಪರೂಪಿಣಮೀಶ್ವರಮ್ ॥

ಅನುವಾದ

ಪರೀಕ್ಷಿತನೇ! ಭಗವಂತನು ಹೀಗೆ ಆಜ್ಞೆಕೊಡುತ್ತಿರುವಾಗಲೇ ಪ್ರಶಸ್ತವಾದ ಮನಸ್ಸುಳ್ಳ ಕಾಮಧೇನುವು ತನ್ನ ಸಂತಾನದೊಡನೆ ಗೋಪವೇಷಧಾರಿಯಾದ ಪರಮೇಶ್ವರ ಶ್ರೀಕೃಷ್ಣನ ಬಳಿಗೆ ಬಂದು ಅವನಿಗೆ ತಲೆಬಾಗಿ ನಮಸ್ಕರಿಸಿ ಹೇಳಿದಳು. ॥18॥

(ಶ್ಲೋಕ-19)

ಮೂಲಮ್ (ವಾಚನಮ್)

ಸುರಭಿರುವಾಚ

ಮೂಲಮ್

ಕೃಷ್ಣ ಕೃಷ್ಣ ಮಹಾಯೋಗಿನ್ ವಿಶ್ವಾತ್ಮನ್ ವಿಶ್ವಸಂಭವ ।
ಭವತಾ ಲೋಕನಾಥೇನ ಸನಾಥಾ ವಯಮಚ್ಯುತ ॥

ಅನುವಾದ

ಕಾಮಧೇನುವು ಹೇಳಿತು — ಸಚ್ಚಿದಾನಂದ ಸ್ವರೂಪನಾದ ಶ್ರೀಕೃಷ್ಣನೇ! ನೀನು ಮಹಾಯೋಗೇಶ್ವರನಾಗಿರುವೆ. ಸಾಕ್ಷಾತ್ ವಿಶ್ವವೇ ಆಗಿರುವೆ. ವಿಶ್ವದ ಪರಮ ಕಾರಣನೂ, ಅಚ್ಯುತನೂ ಆಗಿರುವೆ. ಸಮಸ್ತ ವಿಶ್ವಕ್ಕೆ ಸ್ವಾಮಿಯಾಗಿರುವ ನಿನ್ನನ್ನು ನಾಥನನ್ನಾಗಿ ಪಡೆದು ನಾವು ಸನಾಥರಾಗಿದ್ದೇವೆ. ॥19॥

(ಶ್ಲೋಕ-20)

ಮೂಲಮ್

ತ್ವಂ ನಃ ಪರಮಕಂ ದೈವಂ ತ್ವಂ ನ ಇಂದ್ರೋ ಜಗತ್ಪತೇ ।
ಭವಾಯ ಭವ ಗೋವಿಪ್ರದೇವಾನಾಂ ಯೇ ಚ ಸಾಧವಃ ॥

ಅನುವಾದ

ನೀನು ಜಗತ್ತಿನ ಸ್ವಾಮಿಯಾಗಿರುವೆ. ಆದರೆ ನಮಗಾದರೋ ಪರಮಪೂಜ್ಯ ಆರಾಧ್ಯಸ್ವಾಮಿಯಾಗಿರುವೆ. ಪ್ರಭೋ! ದೇವೇಂದ್ರನು ಮೂರು ಲೋಕಗಳಿಗೆ ಇಂದ್ರನಿರಬಹುದು, ಆದರೆ ನಮಗೆ ಇಂದ್ರನು ನೀನೇ ಆಗಿರುವೆ. ಆದ್ದರಿಂದ ನೀನೇ ಗೋವು, ಬ್ರಾಹ್ಮಣರು, ದೇವತೆಗಳು, ಸಾಧುಜನರು- ಇವರ ರಕ್ಷಣೆಗಾಗಿ ನಮ್ಮ ಇಂದ್ರನಾಗು. ॥20॥

(ಶ್ಲೋಕ-21)

ಮೂಲಮ್

ಇಂದ್ರಂ ನಸ್ತ್ವಾಭಿಷೇಕ್ಷ್ಯಾಮೋ ಬ್ರಹ್ಮಣಾ ನೋದಿತಾ ವಯಮ್ ।
ಅವತೀರ್ಣೋಸಿ ವಿಶ್ವಾತ್ಮನ್ ಭೂಮೇರ್ಭಾರಾಪನುತ್ತಯೇ ॥

ಅನುವಾದ

ಗೋವುಗಳಾದ ನಾವು ಬ್ರಹ್ಮದೇವರ ಪ್ರೇರಣೆಯಿಂದ ನಿನ್ನನ್ನು ನಮ್ಮ ಇಂದ್ರನೆಂದು ಭಾವಿಸಿ ಅಭಿಷೇಕ ಮಾಡುವೆವು. ವಿಶ್ವಾತ್ಮನೇ! ನೀನು ಭೂಭಾರವನ್ನು ಇಳುಹಲೆಂದೇ ಅವತರಿಸಿರುವೆ. ॥21॥

(ಶ್ಲೋಕ-22)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಂ ಕೃಷ್ಣಮುಪಾಮಂತ್ರ್ಯ ಸುರಭಿಃ ಪಯಸಾತ್ಮನಃ ।
ಜಲೈರಾಕಾಶಗಂಗಾಯಾ ಐರಾವತಕರೋದ್ಧೃತೈಃ ॥

(ಶ್ಲೋಕ-23)

ಮೂಲಮ್

ಇಂದ್ರಃ ಸುರರ್ಷಿಭಿಃ ಸಾಕಂ ನೋದಿತೋ ದೇವಮಾತೃಭಿಃ ।
ಅಭ್ಯಷಿಂಚಿತ ದಾಶಾರ್ಹಂ ಗೋವಿಂದ ಇತಿ ಚಾಭ್ಯಧಾತ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನಲ್ಲಿ ಹೀಗೆ ಹೇಳಿ ಕಾಮಧೇನುವು ತನ್ನ ಹಾಲಿನಿಂದಲೆ ಅವನಿಗೆ ಅಭಿಷೇಕ ಮಾಡಿತು. ದೇವತೆಗಳ ಪ್ರೇರಣೆಯಿಂದ ದೇವೇಂದ್ರನು ಐರಾವತವು ತನ್ನ ಸೊಂಡಿಲಿನಿಂದ ತಂದಿರುವ ಆಕಾಶಗಂಗೆಯ ಜಲದಿಂದ ದೇವರ್ಷಿಗಳೊಡನೆ ಯದುನಾಥನಾದ ಶ್ರೀಕೃಷ್ಣನಿಗೆ ಅಭಿಷೇಕ ಮಾಡಿ, ಅವನನ್ನು ‘ಗೋವಿಂದ’ನೆಂದು ಸಂಬೋಧಿಸಿದನು. ॥22-23॥

(ಶ್ಲೋಕ-24)

ಮೂಲಮ್

ತತ್ರಾಗತಾಸ್ತುಂಬುರುನಾರದಾದಯೋ
ಗಂಧರ್ವವಿದ್ಯಾಧರಸಿದ್ಧಚಾರಣಾಃ ।
ಜಗುರ್ಯಶೋ ಲೋಕಮಲಾಪಹಂ ಹರೇಃ
ಸುರಾಂಗನಾಃ ಸಂನನೃತುರ್ಮುದಾನ್ವಿತಾಃ ॥

ಅನುವಾದ

ಆ ಸಮಯದಲ್ಲಿ ನಾರದ, ತುಂಬುರು ಮೊದಲಾದ ಗಂಧರ್ವರು, ವಿದ್ಯಾಧರರು, ಸಿದ್ಧರು, ಚಾರಣರು ಮೊದಲೇ ಅಲ್ಲಿಗೆ ಬಂದಿದ್ದರು. ಅವರೆಲ್ಲರೂ ಪ್ರಪಂಚದ ತಾಪ-ಪಾಪಗಳನ್ನು ಹೋಗಲಾಡಿಸುವ ಶ್ರೀಕೃಷ್ಣನ ಯಶಸ್ಸನ್ನು ಕೀರ್ತಿಸತೊಡಗಿದರು. ಅಪ್ಸರೆಯರು ಆನಂದತುಂಬಿ ನೃತ್ಯಮಾಡತೊಡಗಿದರು. ॥24॥

(ಶ್ಲೋಕ-25)

ಮೂಲಮ್

ತಂ ತುಷ್ಟುವುರ್ದೇವನಿಕಾಯಕೇತವೋ
ವ್ಯವಾಕಿರಂಶ್ಚಾದ್ಭುತಪುಷ್ಪವೃಷ್ಟಿಭಿಃ ।
ಲೋಕಾಃ ಪರಾಂ ನಿರ್ವೃತಿಮಾಪ್ನುವಂಸಯೋ
ಗಾವಸ್ತದಾ ಗಾಮನಯನ್ ಪಯೋದ್ರುತಾಮ್ ॥

ಅನುವಾದ

ಪ್ರಧಾನ ದೇವತೆಗಳು ಭಗವಂತನನ್ನು ಸ್ತುತಿಸುತ್ತಾ ಅವನ ಮೇಲೆ ನಂದನವನದ ದಿವ್ಯ ಪುಷ್ಪಗಳ ಮಳೆಗರೆಯ ತೊಡಗಿದರು. ಮೂರು ಲೋಕಗಳೂ ಪರಮಾನಂದದಲ್ಲಿ ಮುಳುಗಿ ಹೋದುವು. ಗೋವುಗಳ ಕೆಚ್ಚಲುಗಳಿಂದ ತಾನಾಗಿಯೇ ಹಾಲು ಸುರಿದು ಪೃಥ್ವಿಯು ನೆನೆದು ಹೋಯಿತು. ॥25॥

(ಶ್ಲೋಕ-26)

ಮೂಲಮ್

ನಾನಾರಸೌಘಾಃ ಸರಿತೋ ವೃಕ್ಷಾ ಆಸನ್ ಮಧುಸ್ರವಾಃ ।
ಅಕೃಷ್ಟಪಚ್ಯೌಷಧಯೋ ಗಿರಯೋಬಿಭ್ರದುನ್ಮಣೀನ್ ॥

ಅನುವಾದ

ನದಿಗಳು ನಾನಾವಿಧದ ರಸಗಳಿಂದ ತುಂಬಿ ಹರಿಯತೊಡಗಿದವು. ಮರ ಗಿಡ-ಬಳ್ಳಿಗಳಿಂದ, ಪುಷ್ಪಗಳಿಂದ ಮಧುವು ಸುರಿಯುತ್ತಿತ್ತು. ಊಳದೆಯೇ ಪೃಥ್ವಿಯು ಅನೇಕ ವಿಧವಾದ ಔಷಧಿಗಳನ್ನು, ಅನ್ನವನ್ನು ನೀಡುತ್ತಿತ್ತು. ಪರ್ವತಗಳಲ್ಲಿ ಅಡಗಿದ್ದ ನವರತ್ನಗಳು ತಾನಾಗಿ ಹೊರಗೆ ಕಾಣಿಸಿಕೊಂಡವು. ॥26॥

(ಶ್ಲೋಕ-27)

ಮೂಲಮ್

ಕೃಷ್ಣೇಭಿಷಿಕ್ತ ಏತಾನಿ ಸತ್ತ್ವಾನಿ ಕುರುನಂದನ ।
ನಿರ್ವೈರಾಣ್ಯಭವಂಸ್ತಾತ ಕ್ರೂರಾಣ್ಯಪಿ ನಿಸರ್ಗತಃ ॥

ಅನುವಾದ

ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನ ಅಭಿಷೇಕವಾದ ಮೇಲೆ ಸ್ವಭಾವತಃ ಕ್ರೂರವಾಗಿದ್ದ ಜೀವಿಗಳೂ ಕೂಡ ವೈರಹೀನವಾದುವು. ಅವುಗಳು ಪರಸ್ಪರ ಮೈತ್ರಿಯಿಂದ ಇರತೊಡಗಿದವು. ॥27॥

(ಶ್ಲೋಕ-28)

ಮೂಲಮ್

ಇತಿ ಗೋಗೋಕುಲಪತಿಂ ಗೋವಿಂದಮಭಿಷಿಚ್ಯ ಸಃ ।
ಅನುಜ್ಞಾತೋ ಯಯೌ ಶಕ್ರೋ ವೃತೋ ದೇವಾದಿಭಿರ್ದಿವಮ್ ॥

ಅನುವಾದ

ಇಂದ್ರನು ಈ ಪ್ರಕಾರವಾಗಿ ಗೋವುಗಳ ಮತ್ತು ಗೋಕುಲದ ಸ್ವಾಮಿಯಾದ ಗೋವಿಂದನಿಗೆ ಅಭಿಷೇಕ ಮಾಡಿ, ಅವನಿಂದ ಬೀಳ್ಕೊಂಡು ಗಂಧರ್ವರು, ದೇವತೆಗಳೊಂದಿಗೆ ಅಮರಾವತಿಗೆ ತೆರಳಿದನು. ॥28॥

ಅನುವಾದ (ಸಮಾಪ್ತಿಃ)

ಇಪ್ಪತ್ತೇಳನೆಯ ಅಧ್ಯಾಯವು ಮುಗಿಯಿತು. ॥27॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ
ಇಂದ್ರಸ್ತುತಿರ್ನಾಮ ಸಪ್ತವಿಂಶೋಽಧ್ಯಾಯಃ ॥27॥