[ಇಪ್ಪತ್ತಾರನೆಯ ಅಧ್ಯಾಯ]
ಭಾಗಸೂಚನಾ
ಶ್ರೀಕೃಷ್ಣನ ಪ್ರಭಾವದ ವಿಷಯವಾಗಿ ನಂದಗೋಪನೇ ಮೊದಲಾದವರ ಜಿಜ್ಞಾಸೆ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏವಂವಿಧಾನಿ ಕರ್ಮಾಣಿ ಗೋಪಾಃ ಕೃಷ್ಣಸ್ಯ ವೀಕ್ಷ್ಯ ತೇ ।
ಅತದ್ವೀರ್ಯವಿದಃ ಪ್ರೋಚುಃ ಸಮಭ್ಯೇತ್ಯ ಸುವಿಸ್ಮಿತಾಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ವ್ರಜದ ಗೋಪಾಲಕರು ಭಗವಾನ್ ಶ್ರೀಕೃಷ್ಣನ ಗೋವರ್ಧನೋದ್ಧರಣದಂತಹ ಅಲೌಕಿಕ ಕರ್ಮಗಳನ್ನು ನೋಡಿ ಅತ್ಯಂತ ಆಶ್ಚರ್ಯಚಕಿತರಾದರು. ಅವರಿಗೆ ಭಗವಂತನ ಅನಂತ ಶಕ್ತಿಯ ಪರಿಚಯವೇ ಇರಲಿಲ್ಲ. ಅವರೆಲ್ಲರೂ ಒಂದೆಡೆ ಸೇರಿ ಪರಸ್ಪರವಾಗಿ ಹೀಗೆ ಮಾತನಾಡಿಕೊಂಡರು. ॥1॥
(ಶ್ಲೋಕ-2)
ಮೂಲಮ್
ಬಾಲಕಸ್ಯ ಯದೇತಾನಿ ಕರ್ಮಾಣ್ಯತ್ಯದ್ಭುತಾನಿ ವೈ ।
ಕಥಮರ್ಹತ್ಯಸೌ ಜನ್ಮ ಗ್ರಾಮ್ಯೇಷ್ಟಾತ್ಮಜುಗುಪ್ಸಿತಮ್ ॥
ಅನುವಾದ
ಈ ಬಾಲಕನ ಕರ್ಮಗಳೆಲ್ಲವೂ ಅತ್ಯದ್ಭುತವಾದವುಗಳು. ಇಂತಹ ಪರಮಾದ್ಭುತ ಬಾಲಕನು ನಮ್ಮಂತಹ ಹಳ್ಳಿಗರ ಮಧ್ಯದಲ್ಲಿ ಜನ್ಮತಾಳಿದ್ದು ಇವನಿಗಾದರೋ ನಿಂದನೀಯವಾದುದು. ಇದು ಹೇಗೆ ಉಚಿತವಾಗಬಲ್ಲದು? ॥2॥
(ಶ್ಲೋಕ-3)
ಮೂಲಮ್
ಯಃ ಸಪ್ತಹಾಯನೋ ಬಾಲಃ ಕರೇಣೈಕೇನ ಲೀಲಯಾ ।
ಕಥಂ ಬಿಭ್ರದ್ಗಿರಿವರಂ ಪುಷ್ಕರಂ ಗಜರಾಡಿವ ॥
ಅನುವಾದ
ಗಜರಾಜನು ಸರೋವರದಲ್ಲಿರುವ ಕಮಲವನ್ನು ಕಿತ್ತು ಮೇಲೆತ್ತಿ ಹಿಡಿಯುವಂತೆ ಏಳು ವರ್ಷದ ಈ ಬಾಲಕನು ಗೋವರ್ಧನಗಿರಿಯನ್ನು ಏಳುದಿನಗಳವರೆಗೆ ನಿರಾಯಾಸವಾಗಿ ಒಂದೇ ಕೈಯಿಂದ ಮೇಲೆತ್ತಿ ಹಿಡಿದು ನಿಂತಿದ್ದನು. ಇದು ಇವನಿಂದ ಹೇಗೆ ಸಾಧ್ಯವಾಯಿತು? ॥3॥
(ಶ್ಲೋಕ-4)
ಮೂಲಮ್
ತೋಕೇನಾಮೀಲಿತಾಕ್ಷೇಣ ಪೂತನಾಯಾ ಮಹೌಜಸಃ ।
ಪೀತಃ ಸ್ತನಃ ಸಹ ಪ್ರಾಣೈಃ ಕಾಲೇನೇವ ವಯಸ್ತನೋಃ ॥
ಅನುವಾದ
ಇವನು ಹಸುಳೆಯಾಗಿದ್ದಾಗಲೇ ಭಯಂಕರಳಾದ ಪೂತನೆಯು ವಿಷದ ಹಾಲನ್ನುಣಿಸಲು ಬಂದಿದ್ದಳು. ಕಣ್ಣುಮುಚ್ಚಿಕೊಂಡು ಸ್ತನ್ಯಪಾನ ಮಾಡಿದ ಇವನು ಸ್ತನ್ಯದೊಡನೆ - ಕಾಲನು ಶರೀರದಿಂದ ಆಯುಸ್ಸನ್ನು ಅಪಹರಿಸುವಂತೆ ಪೂತನೆಯ ಪ್ರಾಣಗಳನ್ನೇ ಅಪಹರಿಸಿಬಿಟ್ಟನು. ಎಂತಹ ಅದ್ಭುತವಿದು? ॥4॥
(ಶ್ಲೋಕ-5)
ಮೂಲಮ್
ಹಿನ್ವತೋಧಃ ಶಯಾನಸ್ಯ ಮಾಸ್ಯಸ್ಯ ಚರಣಾವುದಕ್ ।
ಅನೋಪತದ್ವಿಪರ್ಯಸ್ತಂ ರುದತಃ ಪ್ರಪದಾಹತಮ್ ॥
ಅನುವಾದ
ಇವನಿನ್ನ್ನೂ ಮೂರುತಿಂಗಳ ಮಗುವಿದ್ದಾಗ ಗಾಡಿಯ ಕೆಳಗೆ ಅಳುತ್ತಾ ಮಲಗಿದ್ದನು. ಅಳುತ್ತಳುತ್ತಾ ಕೈ-ಕಾಲುಗಳನ್ನು ಒದರುತ್ತಿದ್ದಾಗ ಒಮ್ಮೆ ಅವನ ಪುಟ್ಟ ಕಾಲುಗಾಡಿಗೆ ತಗುಲಿ ಸಾಮಗ್ರಿಗಳಿಂದ ಕೂಡಿದ ಆ ಗಾಡಿಯು ತಲೆಕೆಳಕಾಗಿ ಬಿಟ್ಟಿತು. ಇದು ಹೇಗಾಯಿತು ಎಂಬುದು ನಮ್ಮಿಂದ ಯೋಚಿಸಲೂ ಸಾಧ್ಯವಾಗುತ್ತಿಲ್ಲ. ॥5॥
(ಶ್ಲೋಕ-6)
ಮೂಲಮ್
ಏಕಹಾಯನ ಆಸೀನೋ ಹ್ರಿಯಮಾಣೋ ವಿಹಾಯಸಾ ।
ದೈತ್ಯೇನ ಯಸ್ತೃಣಾವರ್ತಮಹನ್ಕಂಠಗ್ರಹಾತುರಮ್ ॥
ಅನುವಾದ
ಈ ನಮ್ಮ ಮುದ್ದುಕೃಷ್ಣನಿಗೆ ಆಗ ಒಂದುವರ್ಷ ತುಂಬಿತ್ತು. ತೃಣಾವರ್ತನೆಂಬ ದೈತ್ಯನು ಬಿರುಗಾಳಿಯ ರೂಪದಿಂದ ಬಂದು ಇವನನ್ನು ಆಕಾಶಕ್ಕೆ ಹಾರಿಸಿಕೊಂಡು ಹೋದನು. ಆದರೆ ಈ ಅದ್ಭುತ ಬಾಲಕನು ರಾಕ್ಷಸನ ಕುತ್ತಿಗೆಯನ್ನು ಬಲವಾಗಿ ಹಿಡಿದು ಸಂಹರಿಸಿ ಬಿಟ್ಟನು. ॥6॥
(ಶ್ಲೋಕ-7)
ಮೂಲಮ್
ಕ್ವಚಿದ್ ಹೈಯಂಗವಸ್ತೈನ್ಯೇ ಮಾತ್ರಾ ಬದ್ಧಉಲೂಖಲೇ ।
ಗಚ್ಛನ್ನರ್ಜುನಯೋರ್ಮಧ್ಯೇ ಬಾಹುಭ್ಯಾಂ ತಾವಪಾತಯತ್ ॥
ಅನುವಾದ
ಈ ಕಳ್ಳ ಕೃಷ್ಣನು ಬೆಣ್ಣೆಯನ್ನು ಕದಿಯುತ್ತಿದ್ದಾಗ ಇವನ ತಾಯಿ ಯಶೋದೆಯು ಇವನನ್ನು ಒರಳಿಗೆ ಕಟ್ಟಿಹಾಕಿದಳು. ಇವನು ಅಂಬೆಗಾಲು ಹಾಕುತ್ತಾ ಒರಳಿನೊಡನೆಯೇ ಮತ್ತಿಮರಗಳ ಮಧ್ಯದಲ್ಲಿ ನುಸುಳಿ ಅದ್ಭುತವಾಗಿದ್ದ ಆ ವೃಕ್ಷಗಳನ್ನೇ ಬುಡಮೇಲಾಗಿಸಿದನು. ಇದೇನು ನಂಬಲು ಸಾಧ್ಯವಾದ ಪ್ರಸಂಗವೇ? ॥7॥
(ಶ್ಲೋಕ-8)
ಮೂಲಮ್
ವನೇ ಸಂಚಾರಯನ್ ವತ್ಸಾನ್ ಸರಾಮೋ ಬಾಲಕೈರ್ವೃತಃ ।
ಹಂತುಕಾಮಂ ಬಕಂ ದೋರ್ಭ್ಯಾಂ ಮುಖತೋರಿಮಪಾಟಯತ್ ॥
ಅನುವಾದ
ಮತ್ತೊಂದು ಪ್ರಸಂಗದಲ್ಲಿ ಶ್ರೀಕೃಷ್ಣನು ಬಲರಾಮನೊಂದಿಗೂ, ಗೋಪಾಲ ಬಾಲಕರೊಂದಿಗೂ ಕರುಗಳನ್ನು ಮೇಯಿಸುತ್ತಿದ್ದಾಗ ಇವನನ್ನು ಕೊಲ್ಲುವ ಸಲುವಾಗಿಯೇ ದೈತ್ಯನೊಬ್ಬನು ಬಕಪಕ್ಷಿಯ ರೂಪದಲ್ಲಿ ಬಂದಿದ್ದನು. ಅದು ರಾಕ್ಷಸನೆಂದರಿತ ಇವನು ಅದರ ಕೊಕ್ಕನ್ನು ಹಿಡಿದು ಹುಲ್ಲಿನ ಕಡ್ಡಿಯನ್ನು ಸೀಳುವಂತೆ ಅವನನ್ನು ಸೀಳಿ ಹಾಕಿದನು. ॥8॥
(ಶ್ಲೋಕ-9)
ಮೂಲಮ್
ವತ್ಸೇಷು ವತ್ಸರೂಪೇಣ ಪ್ರವಿಶಂತಂ ಜಿಘಾಂಸಯಾ ।
ಹತ್ವಾ ನ್ಯಪಾತಯತ್ತೇನ ಕಪಿತ್ಥಾನಿ ಚ ಲೀಲಯಾ ॥
ಅನುವಾದ
ಇನ್ನೊಮ್ಮೆ ಶ್ರೀಕೃಷ್ಣನನ್ನು ಸಂಹರಿಸುವ ಆಶಯದಿಂದ ಮತ್ತೊಬ್ಬ ದೈತ್ಯನು ಕರುವಿನ ವೇಷವನ್ನು ಧರಿಸಿ ಕರುಗಳ ನಡುವೆಯೇ ಸೇರಿಕೊಂಡನು. ಇದನ್ನರಿತ ಶ್ರೀಕೃಷ್ಣನು ಆ ವತ್ಸಾಸುರನನ್ನು ಆಡುತ್ತಾಡುತ್ತಲೇ ಕೊಂದು ಅವನನ್ನು ಬೇಲದ ಮರದ ಮೇಲಕ್ಕೆಸೆದು ನೂರಾರು ಹಣ್ಣುಗಳನ್ನು ಉದುರಿಸಿದನು. ॥9॥
(ಶ್ಲೋಕ-10)
ಮೂಲಮ್
ಹತ್ವಾ ರಾಸಭದೈತೇಯಂ ತದ್ಬಂಧೂಂಶ್ಚ ಬಲಾನ್ವಿತಃ ।
ಚಕ್ರೇ ತಾಲವನಂ ಕ್ಷೇಮಂ ಪರಿಪಕ್ವಲಾನ್ವಿತಮ್ ॥
ಅನುವಾದ
ಇವನು ಬಲರಾಮನೊಂದಿಗೆ ಸೇರಿ ಕತ್ತೆಯ ರೂಪದಲ್ಲಿ ಇದ್ದ ಧೇನುಕಾಸುರನನ್ನು ಹಾಗೂ ಅವರ ಸಹೋದರರೆಲ್ಲರನ್ನು ಕೊಂದು ಹಾಕಿದನು. ಪಕ್ವವಾದ ತಾಳೆಹಣ್ಣುಗಳಿಂದ ಕೂಡಿದ ತಾಲವನವನ್ನು ಎಲ್ಲರ ಉಪಯೋಗಕ್ಕಾಗಿ ಮಂಗಲಮಯವಾಗಿಸಿದನು. ॥10॥
(ಶ್ಲೋಕ-11)
ಮೂಲಮ್
ಪ್ರಲಂಬಂ ಘಾತಯಿತ್ವೋಗ್ರಂ ಬಲೇನ ಬಲಶಾಲಿನಾ ।
ಅಮೋಚಯದ್ವ್ರಜಪಶೂನ್ಗೋಪಾಂಶ್ಚಾರಣ್ಯವಹ್ನಿತಃ ॥
ಅನುವಾದ
ಇನ್ನೊಂದು ಪ್ರಸಂಗದಲ್ಲಿ ಇವನು ಬಲಶಾಲಿಯಾದ ಬಲರಾಮನ ಮೂಲಕ ಕ್ರೂರನಾದ ಪ್ರಲಂಬಾಸುರನನ್ನು ಸಂಹಾರ ಮಾಡಿಸಿದನು. ಮತ್ತೊಮ್ಮೆ ಗೋವುಗಳನ್ನು, ಗೋಪಾಲರನ್ನು ಕಾಡುಗಿಚ್ಚಿನಿಂದ ರಕ್ಷಿಸಿದನು. ॥11॥
(ಶ್ಲೋಕ-12)
ಮೂಲಮ್
ಆಶೀವಿಷತಮಾಹೀಂದ್ರಂ ದಮಿತ್ವಾವಿಮದಂ ಹ್ರದಾತ್ ।
ಪ್ರಸಹ್ಯೋದ್ವಾಸ್ಯ ಯಮುನಾಂ ಚಕ್ರೇಸೌ ನಿರ್ವಿಷೋದಕಾಮ್ ॥
ಅನುವಾದ
ಯಮುನಾನದಿಯಲ್ಲಿದ್ದ ವಿಷದ ಬಲ ಮದದಿಂದ ಉನ್ಮತ್ತನಾಗಿದ್ದ ಕಾಳಿಯನ ಗರ್ವವನ್ನು ಮುರಿದು ಬಲವಂತವಾಗಿ ಅವನನ್ನು ಮಡುವಿನಿಂದ ಹೊರದೂಡಿ ಯಮುನೆಯ ನೀರನ್ನು ವಿಷರಹಿತವನ್ನಾಗಿಸಿ, ಅಮೃತಮಯವಾಗಿಸಿದನು. ॥12॥
(ಶ್ಲೋಕ-13)
ಮೂಲಮ್
ದುಸ್ತ್ಯಜಶ್ಚಾನುರಾಗೋಸ್ಮಿನ್ಸರ್ವೇಷಾಂ ನೋ ವ್ರಜೌಕಸಾಮ್ ।
ನಂದ ತೇ ತನಯೇಸ್ಮಾಸು ತಸ್ಯಾಪ್ಯೌತ್ಪತ್ತಿಕಃ ಕಥಮ್ ॥
ಅನುವಾದ
ನಂದರಾಜನೇ! ಈ ವ್ರಜದಲ್ಲಿ ವಾಸಿಸುವ ನಮಗೆ ನಿನ್ನ ಮಗನಲ್ಲಿ ಅನಿರ್ವಾಚ್ಯವಾದ ಪ್ರೀತಿಯಿರುವುದು ನಿಶ್ಚಯ. ಈ ಬಾಲಕನಿಗೂ ನಮ್ಮ ಮೇಲೆ ಅಷ್ಟೇ ಸ್ವಾಭಾವಿಕವಾದ ಪ್ರೀತಿಯಿದೆ. ಇದರ ಕಾರಣವೇನಿರಬಹುದು? ನೀವು ಹೇಳಬಲ್ಲಿರಾ? ॥13॥
(ಶ್ಲೋಕ-14)
ಮೂಲಮ್
ಕ್ವ ಸಪ್ತಹಾಯನೋ ಬಾಲಃ ಕ್ವ ಮಹಾದ್ರಿವಿಧಾರಣಮ್ ।
ತತೋ ನೋ ಜಾಯತೇ ಶಂಕಾ ವ್ರಜನಾಥ ತವಾತ್ಮಜೇ ॥
ಅನುವಾದ
ಏಳುವರ್ಷಗಳ ಬಾಲಕನೆಂದರೇನು? ಮಹಾಪರ್ವತವನ್ನು ಧರಿಸುವುದೆಂದರೇನು? ಇದು ನಡೆದದ್ದಂತೂ ನಿಜ. ವ್ರಜನಾಥನೇ! ನಿನ್ನ ಮಗನು ಯಾರಾಗಿರಬಹುದೆಂಬ ವಿಷಯದಲ್ಲಿ ನಮಗೆ ಸಂದೇಹವುಂಟಾಗಿದೆ. ॥14॥
(ಶ್ಲೋಕ-15)
ಮೂಲಮ್ (ವಾಚನಮ್)
ನಂದ ಉವಾಚ
ಮೂಲಮ್
ಶ್ರೂಯತಾಂ ಮೇ ವಚೋ ಗೋಪಾ ವ್ಯೇತು ಶಂಕಾ ಚ ವೋರ್ಭಕೇ ।
ಏನಂ ಕುಮಾರಮುದ್ದಿಶ್ಯ ಗರ್ಗೋ ಮೇ ಯದುವಾಚ ಹ ॥
ಅನುವಾದ
ನಂದಗೋಪನು ಹೇಳಿದನು — ಗೋಪಾಲಕರೇ! ನೀವು ನನ್ನ ಮಾತನ್ನು ಸಾವಧಾನವಾಗಿ ಕೇಳಿರಿ. ಇದರಿಂದ ನನ್ನ ಮಗನ ವಿಷಯದಲ್ಲಿದ್ದ ನಿಮ್ಮ ಸಂದೇಹವು ನಿವಾರಣೆಯಾದೀತು. ಮಹರ್ಷಿಗಳಾದ ಗರ್ಗರು ನಾಮಕರಣೋತ್ಸವದ ಸಂದರ್ಭದಲ್ಲಿ ಈ ಬಾಲಕನನ್ನು ನೋಡಿ ಇವನ ಕುರಿತು ಹೀಗೆ ಹೇಳಿದ್ದರು - ॥15॥
(ಶ್ಲೋಕ-16)
ಮೂಲಮ್
ವರ್ಣಾಸಯಃ ಕಿಲಾಸ್ಯಾಸನ್ಗೃಹ್ಣತೋನುಯುಗಂ ತನೂಃ ।
ಶುಕ್ಲೋ ರಕ್ತಸ್ತಥಾ ಪೀತ ಇದಾನೀಂ ಕೃಷ್ಣತಾಂ ಗತಃ ॥
ಅನುವಾದ
‘‘ನಂದಗೋಪನೇ! ನಿನ್ನ ಈ ಬಾಲಕನು ಪ್ರತಿಯೊಂದು ಯುಗದಲ್ಲಿಯೂ ಶರೀರವನ್ನು ಧರಿಸುವನು. ಬೇರೆ-ಬೇರೆ ಯುಗಗಳಲ್ಲಿ ಇವನಿಗೆ ಶ್ವೇತ, ರಕ್ತ, ಪೀತ ಮುಂತಾದ ಬೇರೆ-ಬೇರೆ ಬಣ್ಣಗಳನ್ನು ಇವನು ಸ್ವೀಕರಿಸಿದ್ದನು. ಈ ಸಲ ಇವನು ಕೃಷ್ಣವರ್ಣದವನಾಗಿರುವನು. ॥16॥
(ಶ್ಲೋಕ-17)
ಮೂಲಮ್
ಪ್ರಾಗಯಂ ವಸುದೇವಸ್ಯ ಕ್ವಚಿಜ್ಜಾತಸ್ತವಾತ್ಮಜಃ ।
ವಾಸುದೇವ ಇತಿ ಶ್ರೀಮಾನಭಿಜ್ಞಾಃ ಸಂಪ್ರಚಕ್ಷತೇ ॥
ಅನುವಾದ
ನಂದನೇ! ನಿನ್ನ ಪುತ್ರನಾದ ಇವನು ಮೊದಲು ಎಲ್ಲೊ ವಸುದೇವನ ಮನೆಯಲ್ಲಿ ಹುಟ್ಟಿದ್ದನು. ಅದಕ್ಕಾಗಿ ಈ ರಹಸ್ಯವನ್ನು ಅರಿತಿರುವವರು ಇವನ ಹೆಸರು ‘ಶ್ರೀಮಾನ್ ವಾಸುದೇವ’ ಎಂದು ಹೇಳುತ್ತಾರೆ. ॥17॥
(ಶ್ಲೋಕ-18)
ಮೂಲಮ್
ಬಹೂನಿ ಸಂತಿ ನಾಮಾನಿ ರೂಪಾಣಿ ಚ ಸುತಸ್ಯ ತೇ ।
ಗುಣಕರ್ಮಾನುರೂಪಾಣಿ ತಾನ್ಯಹಂ ವೇದ ನೋ ಜನಾಃ ॥
ಅನುವಾದ
ನಿನ್ನ ಪುತ್ರನಿಗೆ ಗುಣ ಮತ್ತು ಕರ್ಮಗಳನುಸಾರವಾಗಿ ಬಹಳಷ್ಟು ಹೆಸರುಗಳಿವೆ ಹಾಗೂ ಅನೇಕ ರೂಪಗಳೂ ಇವೆ. ನಾನಾದರೋ ಆ ನಾಮಗಳನ್ನು ಬಲ್ಲೆನು, ಆದರೆ ಪ್ರಪಂಚದ ಸಾಮಾನ್ಯ ಜನರು ತಿಳಿಯಲಾರರು. ॥18॥
(ಶ್ಲೋಕ-19)
ಮೂಲಮ್
ಏಷ ವಃ ಶ್ರೇಯ ಆಧಾಸ್ಯದ್ಗೋಪಗೋಕುಲನಂದನಃ ।
ಅನೇನ ಸರ್ವದುರ್ಗಾಣಿ ಯೂಯಮಂಜಸ್ತರಿಷ್ಯಥ ॥
ಅನುವಾದ
ಸಮಸ್ತ ಗೋಪಾಲಕರಿಗೂ, ಗೋವುಗಳಿಗೂ ಆನಂದವನ್ನುಂಟುಮಾಡುವ ಈ ನಿನ್ನ ಮಗನು ನಿಮಗೆ ಪರಮ ಕಲ್ಯಾಣಕರನಾಗುತ್ತಾನೆ. ಇವನ ಸಹಾಯದಿಂದ ನೀವು ದೊಡ್ಡ-ದೊಡ್ಡ ವಿಪತ್ತುಗಳಿಂದ ಬಹಳ ಸುಲಭವಾಗಿ ಪಾರಾಗುವಿರಿ. ॥19॥
(ಶ್ಲೋಕ-20)
ಮೂಲಮ್
ಪುರಾನೇನ ವ್ರಜಪತೇ ಸಾಧವೋ ದಸ್ಯುಪೀಡಿತಾಃ ।
ಅರಾಜಕೇ ರಕ್ಷ್ಯಮಾಣಾ ಜಿಗ್ಯುರ್ದಸ್ಯೂನ್ ಸಮೇಧಿತಾಃ ॥
ಅನುವಾದ
ವ್ರಜರಾಜನೇ! ಹಿಂದೊಮ್ಮೆ ಭೂಮಂಡಲದಲ್ಲಿ ಯಾವ ರಾಜನು ಇರಲಿಲ್ಲ. ದರೋಡೆಕೋರರ ಉಪಟಳವು ಎಲ್ಲೆಡೆ ಹೆಚ್ಚಾಗಿತ್ತು. ಸತ್ಪುರುಷರನ್ನು ಬಹಳವಾಗಿ ಪೀಡಿಸುತ್ತಿದ್ದರು. ಆಗ ನಿನ್ನ ಈ ಪುತ್ರನೇ ಸಜ್ಜನರನ್ನು ಕಾಪಾಡಿದನು ಮತ್ತು ಅವನಿಂದ ಬಲವನ್ನು ಪಡೆದು ಜನರು ದರೋಡೆಕೋರರ ಮೇಲೆ ವಿಜಯವನ್ನು ಪಡೆದರು. ॥20॥
(ಶ್ಲೋಕ-21)
ಮೂಲಮ್
ಯ ಏತಸ್ಮಿನ್ಮಹಾಭಾಗಾಃ ಪ್ರೀತಿಂ ಕುರ್ವಂತಿ ಮಾನವಾಃ ।
ನಾರಯೋಭಿಭವಂತ್ಯೇತಾನ್ ವಿಷ್ಣುಪಕ್ಷಾನಿವಾಸುರಾಃ ॥
ಅನುವಾದ
ನಂದರಾಜನೇ! ನಿನ್ನ ಈ ಶ್ಯಾಮಲ ಮುದ್ದುಮಗನನ್ನು ಪ್ರೇಮಿಸುವವರು ಮಹಾಭಾಗ್ಯಶಾಲಿಗಳೇ ಸರಿ. ಭಗವಾನ್ ಮಹಾವಿಷ್ಣುವಿನ ಕರಕಮಲಗಳ ಛತ್ರಛಾಯೆಯಲ್ಲಿರುವ ದೇವತೆಗಳನ್ನು ಅಸುರರು ಗೆಲ್ಲಲಾರದೆ ಹೋದರು. ಹಾಗೆಯೇ ಇವನನ್ನು ಪ್ರೇಮಿಸುವವರನ್ನು ಒಳಗಿನ-ಹೊರಗಿನ ಯಾವ ಶತ್ರುಗಳು ಗೆಲ್ಲಲಾರವು. ॥21॥
(ಶ್ಲೋಕ-22)
ಮೂಲಮ್
ತಸ್ಮಾನ್ನಂದ ಕುಮಾರೋಯಂ ನಾರಾಯಣಸಮೋ ಗುಣೈಃ ।
ಶ್ರಿಯಾ ಕೀರ್ತ್ಯಾನುಭಾವೇನ ತತ್ಕರ್ಮಸು ನ ವಿಸ್ಮಯಃ ॥
ಅನುವಾದ
ನಂದಗೋಪನೇ! ಯಾವುದೇ ದೃಷ್ಟಿಯಿಂದ ನೋಡಿದರೂ ನಿಮ್ಮ ಮಗನು ಗುಣಗಳಿಂದ, ಐಶ್ವರ್ಯದಿಂದ, ಸೌಂದರ್ಯದಿಂದ, ಕೀರ್ತಿ ಮತ್ತು ಪ್ರಭಾವದಿಂದ ಸಾಕ್ಷಾತ್ ನಾರಾಯಣನಿಗೇ ಸಮನಾಗಿದ್ದಾನೆ. ಆದ್ದರಿಂದ ಈ ಬಾಲಕನ ಅಲೌಕಿಕ ಕಾರ್ಯಗಳನ್ನು ನೋಡಿ ಆಶ್ಚರ್ಯಪಡಬಾರದು.’’ ॥22॥
(ಶ್ಲೋಕ-23)
ಮೂಲಮ್
ಇತ್ಯದ್ಧಾ ಮಾಂ ಸಮಾದಿಶ್ಯ ಗರ್ಗೇ ಚ ಸ್ವಗೃಹಂ ಗತೇ ।
ಮನ್ಯೇ ನಾರಾಯಣಸ್ಯಾಂಶಂ ಕೃಷ್ಣಮಕ್ಲಿಷ್ಟಕಾರಿಣಮ್ ॥
ಅನುವಾದ
ಗೋಪಾಲಕರೇ! ಸ್ವತಃ ಗರ್ಗಾಚಾರ್ಯರೇ ನನಗೆ ಹೀಗೆ ಆದೇಶವನ್ನಿತ್ತು ಹೊರಟುಹೋದರು. ಅಂದಿನಿಂದ ನಾನು ಅಲೌಕಿಕ ಮತ್ತು ಪರಮ ಸುಖಮಯ ಕರ್ಮಗಳನ್ನು ಮಾಡುವ ಈ ಬಾಲಕನನ್ನು ಭಗವಾನ್ ನಾರಾಯಣನ ಅಂಶವೆಂದೇ ಭಾವಿಸುತ್ತಿರುವೆನು. ॥23॥
(ಶ್ಲೋಕ-24)
ಮೂಲಮ್
ಇತಿ ನಂದವಚಃ ಶ್ರುತ್ವಾ ಗರ್ಗಗೀತಂ ವ್ರಜೌಕಸಃ ।
ದೃಷ್ಟಶ್ರುತಾನುಭಾವಾಸ್ತೇ ಕೃಷ್ಣಸ್ಯಾಮಿತತೇಜಸಃ ।
ಮುದಿತಾ ನಂದಮಾನರ್ಚುಃ ಕೃಷ್ಣಂ ಚ ಗತವಿಸ್ಮಯಾಃ ॥
ಅನುವಾದ
ವ್ರಜವಾಸಿಗಳು ನಂದಗೋಪನ ಬಾಯಿಂದ ಗರ್ಗಾಚಾರ್ಯರ ಮಾತನ್ನು ಕೇಳಿದಾಗ ಅವರ ವಿಸ್ಮಯವು ಉಳಿಯಲಿಲ್ಲ. ಏಕೆಂದರೆ, ಈಗ ಅವರು ಅಮಿತ ತೇಜಸ್ವಿಯಾದ ಶ್ರೀಕೃಷ್ಣನ ಪ್ರಭಾವವನ್ನು ನೋಡಿ, ಕೇಳಿಬಿಟ್ಟಿದ್ದರು. ಆನಂದತುಂದಿಲರಾಗಿ ಅವರು ನಂದಗೋಪನನ್ನು ಮತ್ತು ಶ್ರೀಕೃಷ್ಣನನ್ನು ಬಹಳವಾಗಿ ಪ್ರಶಂಸಿಸಿದರು. ॥24॥
(ಶ್ಲೋಕ-25)
ಮೂಲಮ್
ದೇವೇ ವರ್ಷತಿ ಯಜ್ಞವಿಪ್ಲವರುಷಾ ವಜ್ರಾಶ್ಮಪರ್ಷಾನಿಲೈಃ
ಸೀದತ್ಪಾಲಪಶುಸಿ ಆತ್ಮಶರಣಂ ದೃಷ್ಟ್ವಾನುಕಂಪ್ಯುತ್ಸ್ಮಯನ್ ।
ಉತ್ಪಾಟ್ಯೈಕಕರೇಣ ಶೈಲಮಬಲೋ ಲೀಲೋಚ್ಛಿಲೀಂಧ್ರಂ ಯಥಾ
ಬಿಭ್ರದ್ಗೋಷ್ಠಮಪಾನ್ಮಹೇಂದ್ರಮದಭಿತ್ ಪ್ರೀಯಾನ್ನ ಇಂದ್ರೋ ಗವಾಮ್ ॥
ಅನುವಾದ
ತನ್ನ ಸಲುವಾಗಿ ಮಾಡಬೇಕಾಗಿದ್ದ ಯಜ್ಞವು ಭಂಗವಾಯಿತು ಎಂದು ತಿಳಿದೊಡನೆಯೇ ಇಂದ್ರನು ಕೋಪದಿಂದ ಕಿಡಿ-ಕಿಡಿಯಾದನು. ಆ ಗೋವಳರಿಗೆ ಪ್ರತೀಕಾರವನ್ನು ಮಾಡಬೇಕೆಂದು ಒನಕೆ ಗಾತ್ರದ ಧಾರೆಯಿಂದ ಮಳೆಯನ್ನು ಸುರಿಸತೊಡಗಿದನು. ಜೊತೆಯಲ್ಲಿ ಬಿರುಗಾಳಿಯೂ, ಕಲ್ಲು ಮಳೆಯೂ, ಸಿಡಿಲು ಗುಡುಗುಗಳೂ ಬಂದು ವ್ರಜವಾಸಿಗಳನ್ನು ಪೀಡಿಸತೊಡಗಿದವು. ಆಗ ಶರಣಾಗತರಾಗಿ ಬಂದ ಗೋಪ-ಗೋಪಿಯರನ್ನು ನೋಡಿ ಶ್ರೀಕೃಷ್ಣನ ಹೃದಯವು ಕರುಣಾರಸದಿಂದ ತುಂಬಿ ಹೋಯಿತು. ಆತನು ನೂತನವಾದೊಂದು ಲೀಲೆಯನ್ನು ತೋರಿಸಲು ನಿಶ್ಚಯಿಸಿ ನಸುನಕ್ಕನು. ಬಲಹೀನನಾದ ಬಾಲಕನೊಬ್ಬನು ನಾಯಿಕೊಡೆಯನ್ನು ಎತ್ತಿಹಿಡಿಯುವಷ್ಟು ಸುಲಭವಾಗಿ ಭಗವಾನ್ ಶ್ರೀಕೃಷ್ಣನು ಗೋವರ್ಧನ ಗಿರಿಯನ್ನೆತ್ತಿ ಹಿಡಿದು ಗೋಕುಲವನ್ನು ಕಾಪಾಡಿದನು. ಜೊತೆಯಲ್ಲೇ ಇಂದ್ರನ ಗರ್ವಭಂಗವೂ ಆಯಿತು. ಅಂತಹ ಪರಾತ್ಪರನಾದ, ಕರುಣಾಮಯನಾದ, ಗೋವಿಂದನು ಸುಪ್ರೀತನಾಗಲೀ. ॥25॥
ಅನುವಾದ (ಸಮಾಪ್ತಿಃ)
ಇಪ್ಪತ್ತಾರನೆಯ ಅಧ್ಯಾಯವು ಮುಗಿಯಿತು. ॥26॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ಷಡ್ವಿಂಶೋಽಧ್ಯಾಯಃ ॥26॥